ವಾರದ ವಿವೇಕ

20 ಆಗಸ್ಟ್

ಪರನಿಂದೆಯಲಿ ಪರಮಸುಖ ಅರಸುವ ಪಡಪೋಶಿ ಎಂಬ ಕುಶಾಲಿನ ಪಟ್ಟ ಬೇಕೆ? ನಿಮ್ಮ ಹೆಸರು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕೆ?

ಹಾಗಿದ್ದರೆ ನಿಮ್ಮ ಕುಶಾಲು ಹರಟೆಯಲ್ಲಿ ,ಅನ್ನಿಸಿದ್ದನ್ನು ಎಗ್ಗಿಲ್ಲದೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ, ದೊಡ್ಡವರ ದಡ್ಡತನದ ಬಗ್ಗೆ ಉಡಾಫೆ ಮಾಡುವಾಗ ತುಸು ದೊಡ್ಡ ದನಿಯಲ್ಲಿ ಕನ್ನಡ ಪ್ರಭ ಸಂಪಾದಕರನ್ನು ಬೈದು ಬಿಡಿ.

– ನಗೆ ಸಾಮ್ರಾಟ್

ಸಾಮ್ರಾಟರಿಗೊಂದು ಓಲೆ :‌೨೧ ಕುಶಾಲ ಅನಾದಿ ತಾಳಗಳು

20 ಆಗಸ್ಟ್

ನಲ್ಮೆಯ ನಗೆಸಾಮ್ರಾಟ್,

“ಭಾಗ್ಯದೊಡನೆ ಭೇಟಿ” ನಿಮ್ಮ ಸಾಮ್ರಾಜ್ಯದ ಮುಖಪುಟ ಮರ್ಯಾದೆಗೆ ಪಾತ್ರವಾಗಿರುವುದನ್ನು ಕಂಡು ಆಶ್ಚರ್ಯಾನಂದವಾಯಿತು. ಈ ಲೇಖನಕ್ಕೆ ನಿಮ್ಮ ಹಾಸ್ಯಪ್ರಜ್ಞಾವಂತ ಓದುಗರ ಹರ್ಷಚಿತ್ತವನ್ನು ಭೇಟಿ ಮಾಡುವ ಭಾಗ್ಯವನ್ನು ದೊರಕಿಸಿಕೊಟ್ಟದಕ್ಕಾಗಿ ನನ್ನ *ನಗಾರಖಾನೆಯಿಂದ ನಿಮಗೆ ೨೧ ಕುಶಾಲ ಅನಾದಿತಾಳಗಳು!

-ಎಸ್. ಜಿ. ಸೀತಾರಾಮ್, ಮೈಸೂರು.

*ನಗಾರಖಾನೆ:ನಗಾರಿ ಮತ್ತಿತರ ಬ್ಯಾಂಡ್ ವಾದ್ಯಗಳನ್ನಿಡುವ ಮತ್ತು “ಬಾರಿಸುವ” ಜಾಗ. ಗೌರವ, ಮರ್ಯಾದೆ, ಸಂತೋಷಗಳ ಸೂಚನೆಗಾಗಿ ೨೧ ಕುಶಾಲ ತೋಪುಗಳನ್ನು (gun salute) ನೀಡುವ ಒಂದು ಸಂಪ್ರದಾಯವು ಮೈಸೂರಿನ ಅರಮನೆಯಲ್ಲಿತ್ತು.ಹೆಮ್ಮೆಯ ಎಮ್ಮೆಪುರ (ಮೈಸೂರು = ಮಹಿಷೂರು = Buffaloshire) ಪುತ್ರನಾಗಿ, ಅದೇ ಭವ್ಯ ಭಾವನೆಗಳನ್ನು ನಾನಿಲ್ಲಿ ೨೧ ನಗಾರಿ ತಾಳಗಳ ಮೂಲಕ ಸೂಚಿಸುತ್ತಿದ್ದೇನೆ.

ಭಾಗ್ಯದೊಡನೆ ಭೇಟಿ ಬರಹವನ್ನು ಇಲ್ಲಿ ಓದಬಹುದು.

ಚಿತ್ರಕ್ಕೊಂದು ಶೀರ್ಷಿಕೆ

20 ಆಗಸ್ಟ್

ನಗೆಚಿತ್ರ ನಗೆನಗಾರಿಯ ಅತ್ಯಂತ ಜನಪ್ರಿಯವಾದ ಸರಣಿ . ಹಾಸ್ಯಮಯವಾದ ಚಿತ್ರಗಳನ್ನು ಪ್ರಕಟಿಸಿ ಅದಕ್ಕೆ ಸಾಮ್ರಾಟರು ಚುರುಕಾದ ಟಿಪ್ಪಣಿಗಳನ್ನು ಬರೆಯುತ್ತಿದ್ದರು.

ತಮ್ಮ ಹೊಸ ಅವತಾರದಲ್ಲಿ ಸಾಮ್ರಾಟರು ತಮ್ಮ ಸಾರ್ವಭೌಮತೆಯ ಅಟ್ಟಹಾಸವನ್ನು ತುಸು ತಗ್ಗಿಸಿ ಪ್ರಜೆಗಳ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಅಂಗವಾಗಿ ಚಿತ್ರಗಳಿಗೆ ಟಿಪ್ಪಣಿ ನೀಡುವ ಹಕ್ಕನ್ನು ಪ್ರಜಗೆಳಿಗೆ ನೀಡಿದ್ದಾರೆ.

– ಕುಚೇಲ  

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನಿನ್ನ ಸೀಟ್ ಬಿಟ್ ಕೊಡದಿರು!

ಸಾಮ್ರಾಟರ ಶೀರ್ಷಿಕೆಗಿಂತ ಚರುಕಾದ ಶೀರ್ಷಿಕೆ ಹೊಳೆಯಿತೇ? ಹಾಗಾದರೆ ಅದನ್ನಿಲ್ಲಿ ಪ್ರಕಟಿಸಿ.

ನಿಮ್ಮ ಬಳಿ ಇರುವ ಚಿತ್ರಕ್ಕೆ ಸಾಮ್ರಾಟರು ಎಂಥಾ ಶೀರ್ಷಿಕೆ ಕೊಡಬಹುದು ಎಂಬ ಕುತೂಹಲವೇ? ಹಾಗಿದ್ದರೆ ಅವನ್ನು ಸಾಮ್ರಾಟರಿಗೆ ಕಳುಹಿಸಿ ಕೊಡಿ. ಸಾಮ್ರಾಟರ ವಿಳಾಸ :‌ nagesamrat@gmail.com

ವಿಡಂಬನೆ: ಭಾಗ್ಯದೊಡನೆ ಭೇಟಿ ಅಂತಿಮ ಭಾಗ

20 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಕಡೆಯ ಕಂತು.

– ನಗೆ ಸಾಮ್ರಾಟ್

ಮೊದಲ ಕಂತು ಇಲ್ಲಿ ಓದಿ
ಎರಡನೆಯ ಕಂತು ಇಲ್ಲಿ ಓದಿ  

ಅಂದು, ಮುಗಿಲು ಮುಚ್ಚುವ ಮಹೋನ್ನತ ಮಹಲುಗಳು; ನಾಗಾಲೋಟವನ್ನೋಡುವ ನಾಗಾಲಿಗಳು (ಚತುಶ್ಚಕ್ರಿ, ಯಂತ್ರಾಶ್ವ ಅಥವಾ ‘ಕಾರ್’); ವಾಕ್-&-ಟಾಕ್ ಸ್ವಾತಂತ್ರ್ಯವನ್ನು ಒಮ್ಮೆಲೇ ಚಿಮ್ಮಿಸುವ, ಬೈಲುಬೈಲುಗಳಲ್ಲಿ ರಿಂಗಣಗುಣಿಸುವ ಮೋಬೈಲ್‍ಗಳು; ಯುವತೆಯನ್ನು ಪಾಡಿತೂಗುವ ಐ-ಪಾಡ್‍ಗಳು ಮತ್ತು ಯಂತ್ರಮುಗ್ಧರನ್ನಾಗಿಟ್ಟುಕೊಂಡಿರುವ ತೊಡೆಪಿಡಿಗಳು (ಲ್ಯಾಪ್‍ಟಾಪ್); ಮನೆಮನೆಗಳಲ್ಲಿ ಬಗೆಬಗೆಯ ವಾಹಿನಿಗಳ ಮೂಲಕ ‘ದಿನಕ್ಕಿಪ್ಪತ್ತೈದು’ ಗಂಟೆಕಾಲ ಕಣ್ಣಿಗೆ ಚ್ಯೂಯಿಂಗ್ ಗಮ್ ಜಗಿಸಿ ಜಗಮಗಿಸುವ ಜಂಬೋ ಟಿ.ವಿ.ಗಳು; ಹೆಜ್ಜೆಗೊಂದು ಹಾದುಬರುವ ಯಾಂತ್ರಿಕ-ತಾಂತ್ರಿಕ ಸಕಲವಿದ್ಯಾಲಯಗಳು; ಅತಿತಾಂತ್ರಿಕ ರೋಗೋಪಚಾರ ರಾಜಗೃಹಗಳು; ಇಂದ್ರಲೋಕದ ಇಂದ್ರಿಯಸುಖೋಪಭೋಗವನ್ನೂ ಮಂಕಾಗಿಸುವ ಚಂದ್ರಚುಂಬಿತ, ಬಹುತಾರಾ ಹೋಟೆಲ್‍ಗಳು-ರಿಸಾರ್ಟ್‍ಗಳು; ಅತ್ಯಾಧುನಿಕಾಧ್ಯಾತ್ಮಿಕ ಆಶ್ರಮಾಂತ:ಪುರಗಳು; ಬಹುಕೀರ್ತಿತ ಬಹುರಾಷ್ಟ್ರಕ ಬೃಹದೋದ್ಯಮಗಳು; ಮಾಲೆಮಾಲೆಗಳಲ್ಲಿ ಮಾಲುಗಳನ್ನೆಸೆದು ‘ಕಮಾಲ್’ ಮಾಡುವ ಮಾಲ್‍ಗಳು; ಒಂದು ಮಹಾಪದ್ಮ (ಟ್ರಿಲಿಯನ್) ಡಾಲರ್ ಸಮಗಟ್ಟುವ ಅರ್ಥವ್ಯವಸ್ಥೆ … ಈ ‘ಮೆಗಾ’ಬೆಳವಣಿಗೆಯ ಮಹಾಮೆರವಣಿಗೆಯು ಅಂದಿನ್ನೂ ಗಾಳಿಗೋಪುರಗಳ ಗರ್ಭದಲ್ಲಿತ್ತಷ್ಟೆ.

ಇಂದು, ಸುಮಾರು ಏಳು ದಶಕಗಳ ಈ ಏಳಿಗೆಯಿಂದ ಏಮಾರಿಸಲ್ಪಡುತ್ತಿರುವವರಿಗೆ, ಮಾಳಿಗೆಯನ್ನೇರಿ ಹೋಳಿಗೆ ಮೆಲ್ಲುತ್ತಿರುವ ಪೀಳಿಗೆಯು ಕಣ್ಗೊಳಿಸುತ್ತಿದೆಯೇ ಹೊರತು, ಉಳಿದ ಜನಕೋಟಿಗಳು ಕೂಳಿಗೆ-ಕಾಳಿಗೆ-ಕೂಲಿಗೆ ಹೆಣಗಿ ಹೆಣವಾಗುತ್ತಿರುವುದು; ಉಳ್ಳವರು ಊದುತ್ತಿದ್ದಂತೆಯೇ ಊಳಿಗದವರು ಉರುಳುತ್ತಿರುವುದು, ಕಣ್ಣೆವೆಗೂ ತಾಕಿಲ್ಲ. ಆಯ್ದ ಕೆಲವು “ಮುದ್ದಿನ ಮಕ್ಕಳಿಗೆ,” ಲಕ್ಷಗಳಿಗೆ ಲಕ್ಷ್ಯವೇ ಇಲ್ಲವೆಂಬಂತೆ ಸಂಬಳ-ಸಾರಿಗೆ-ಸವಲತ್ತುಗಳನ್ನು ಎರಚಾಡಿ ಅತುಲೈಷಾರಾಮಕ್ಕೆಡೆಗೊಟ್ಟಿರುವ; ಅದೇ ಸಮಯ, ಸುಸ್ಥಾಪಿತ “ಸುಶೋಷಿತ”ರನ್ನು ನಿಗೂಢವಾಗಿ ನಿರ್ಧನರನ್ನಾಗಿಸಿ, ನಿಧನರನ್ನಾಗಿಸುತ್ತಿರುವ, ಸಾಮಾನ್ಯರನ್ನು ಅಮಾನ್ಯರನ್ನಾಗಿಸುತ್ತಿರುವ, ಕೃತ್ರಿಮ ಆರ್ಥಿಕ ಭಯೋತ್ಪಾದಕತೆಯು ಇಂದು ಯಾರಲ್ಲೂ ಆತಂಕವನ್ನುಂಟುಮಾಡುತ್ತಿಲ್ಲ; ಯಾರ ‘ಅಜೆಂಡಾ’ವನ್ನೂ ಅಲಂಕರಿಸಿಲ್ಲ. ಕೋಟಿಕೋಟಿ ರೂಪಾಯಿ ವ್ಯವಹಾರಗಳ ನಡುವೆ, ಕೋಟ್ಯಂತರ ಚಿಣ್ಣರು ರಾತ್ರಿಯೂಟದಿಂದ ವಂಚಿತರಾಗಿ ಹಸಿವಿನಲ್ಲೇ ಹಾಸಿಗೆಗೊರಗುತ್ತಿರುವುದು, ಉಗ್ರ.ಉದಾರವಾದಿ, ಉದರಸುಖಿ ಉದ್ಧಾರಕರನ್ನು ಉದ್ವೇಗಗೊಳಿಸುತ್ತಿಲ್ಲ.  ಕೊಳೆಯುತ್ತಿರುವ ಕೋಟ್ಯಂತರ ಟನ್ ಧಾನ್ಯರಾಶಿಗಳ ಮುಂದೆ ಧ್ಯಾನಲೀನರಾಗಿರುವ ಅಧಿಕಾರಿಗಳಲ್ಲಿ, ಎದುರಿನಲ್ಲೇ ಹಸುಳೆಗಳು ಹಸಿವಿನಿಂದ ಅಸು ನೀಗುತ್ತಿರುವುದು ತುಸು ಮರುಕವನ್ನೂ ಉತ್ಪಾದಿಸಿಲ್ಲ. ರೈತರ ಸರಣಿ-ಆತ್ಮಹತ್ಯೆಯಿಂದ (ಸಾಯುವ ಸ್ವಾತಂತ್ರ್ಯ?) ವಿದರ್ಭದ ಹತ್ತಿಯ ನೆಲವು ಹತ್ತಿಕೊಂಡು ಸುಡುಗಾಡಾಗುತ್ತಿರುವುದು; 13 ಕೋಟಿ ಬಾಲಕೂಲಿಗಳು ಇಂದಿಗೂ ಅಮಾನವೀಯ ಆವರಣಗಳಲ್ಲಿ ಜೀವ ತೇಯುತ್ತಿರುವುದು, ಮತ್ತು 14 ಕೋಟಿ ಬಾಲಭಾರತರು ಶಾಲೆಯಿಂದ ಉದುರಿಹೋಗಿರುವುದು; ಪಂಜಾಬ್‍ನಂಥ ಪುರೋಗಾಮಿ ಪ್ರಾಂತ್ಯದಲ್ಲಿ, ಕೀಟನಾಶಕದ ನಂಜಿನಿಂದಾಗಿ ಕ್ಯಾನ್ಸರ್‍ಗ್ರಸ್ತರಾದ ಬಡರೋಗಿಜಂಗುಳಿಗಳು ತಮ್ಮದೇ ರಾಜ್ಯದಲ್ಲಿ ಸೌಲಭ್ಯವಂಚಿತರಾಗಿ, ಪ್ರತಿರಾತ್ರಿ ನೂರಾರು ಸಂಖ್ಯೆಯಲ್ಲಿ “ಕ್ಯಾನ್ಸರ್ ರೈಲು” ಹತ್ತಿ ದೂರದ ಬಿಕನೇರ್‍ನ ಕ್ಯಾನ್ಸರ್ ಆಸ್ಪತ್ರೆಗೆ ದೌಡಾಯಿಸುವಂತಾಗಿರುವುದು …

ಇವೆಲ್ಲವೂ ಯಾರ ಅಂತ:ಕರಣಕ್ಕೂ ಆಘಾತಕಾರಿಯಾಗಿಲ್ಲ. ಪ್ರತಿಶತ 75 ಪ್ರಜೆಗಳಿಗೆ “ಎಲ್ಲಿ ಪ್ರಕೃತಿ ಕರೆವುದೋ ಅಲ್ಲೇ ಶೌಚಾಲಯ” ಎಂಬ ಅವಸ್ಥೆಯುಂಟಾಗಿರುವುದು;  ಕೊಳೆಯುತ್ತಿರುವ ಧಾನ್ಯಗಳನ್ನು ಸಂರಕ್ಷಿಸಲು ಸಿಗದ ವಿದ್ಯುತ್ತು, ಮಾಲ್‍ಗಳಲ್ಲಿ ಪಾದುಕೆಗಳ ಹವಾನಿಯಂತ್ರಿತ ಪಾಲನೆಗೆ ಎಣೆಯಿಲ್ಲದೆ ಸಿಗುತ್ತಿರುವುದು; ಬೆಳೆ ತೆಗೆಯಲು ಇಲ್ಲವಾದ ಭೂಮಿ, ನೀರು, ಮತ್ತಿತರ ಸಂಪನ್ಮೂಲಗಳು, ಐಟಿ-ಬಿಟಿ ಕಂಪನಿಗಳಿಗೆ ಕೇಳಿದ ಮಾತ್ರಕ್ಕೆ ಸುಲಭವಾಗಿ ಲಭಿಸುತ್ತಿರುವುದು; ವಿದ್ಯೆಯ “ಸಾದ್ಯಂತ ಸಾಫ್ಟ್‌ವೇರೀಕರಣ,” ವ್ಯಾಪಾರದ ವ್ಯಾಪಕ ಬಹುರಾಷ್ಟ್ರೀಕರಣ, ಮತ್ತು ಜನಾವಶ್ಯಕ ಜಾಗಗಳಲ್ಲೆಲ್ಲ  ಜಾಗೃತೀಕರಣವಿಲ್ಲದೆ ಜಾಗತೀಕರಣವಾಗುತ್ತಿರುವುದು; ವಿದ್ಯುನ್ಮಾನ ಮಾಧ್ಯಮವು ಅತ್ಯುನ್ಮಾದಕ ಟಿ.ವಿ. ಸೀರಿಯಲ್ಲುಗಳ ಮೂಲಕ ಸಂಸಾರಗಳನ್ನು ಸೀಳುವ, ಸಜ್ಜನರನ್ನು ಸಮಾಪ್ತಿಮಾಡುವ ನವನವೀನ ಕಪಟೋಪಾಯಗಳನ್ನೂ, ಗಾಢಮೂಢಾಚರಣೆಗಳನ್ನೂ ದಿನವಿಡೀ ಜನಮನದೊಳಗೆ ನಾಟಿಸಿ, ಕ್ಷುಲ್ಲಕ ಸುದ್ದಿ-ಕ್ಷಣಿಕ ಜಾಹೀರಾತುಗಳಿಂದ ಕ್ಷೋಭೆಯನ್ನುಂಟುಮಾಡಿ, ಪ್ರತಿ ಮನೆಯನ್ನು ಅಶಾಂತಿನಿಕೇತನವನ್ನಾಗಿಸುತ್ತಿರುವುದು; ಕ್ರಿಕೆಟ್ ವಾಹಿನಿಗಳು ಕಲಾತ್ಮಕ ಪಂದ್ಯವೊಂದನ್ನು ವರ್ಷಾವಧಿ ಕಾಳದಂಧೆಯನ್ನಾಗಿಸಿ, ಯುವಶಕ್ತಿಯನ್ನು ಪೋಲುಮಾಡಿ, ಐ.ಪಿ.ಎಲ್. ಎಂಬ ಒಂದು ಪಾಪಕೂಪವನ್ನೇ ಹುಟ್ಟುಹಾಕಿರುವುದು; ನರವ್ಯಾಘ್ರಗಳಾಗಿದ್ದ ಪಂಜಾಬಿ ಯುವಕರು ನಶೀಲಿ ಪದಾರ್ಥಗಳಿಂದಾಗಿ ನರಪ್ರೇತಗಳಾಗಿ,  ವ್ಯಗ್ರವಾದಿ ಉಗ್ರವ್ಯಸನಿಗಳಾಗಿ, ಬೇಸಾಯ-ಸೈನ್ಯ ಎರಡನ್ನೂ ಕೈಬಿಟ್ಟು ಓಟ ಕೀಳುತ್ತಿರುವುದು; ರಕ್ತದಾಹಿ ರಿಯಲ್ ಎಸ್ಟೇಟ್‍ಗಳು ಗ್ರಾಮಗ್ರಾಮಗಳನ್ನು, ಕೃಷಿಭೂಮಿ-ಕೃಷಿಕಾರ್ಮಿಕರನ್ನು ನುಂಗಿನೊಣೆದು, ವ್ಯವಸಾಯವನ್ನು ವ್ಯವಕಲನದ ವ್ಯವಹಾರವನ್ನಾಗಿಸಿರುವುದು; ಮೆಟ್ರೋಗಳು ಗಗನಮುಖಿಯಾಗುತ್ತಿದ್ದಂತೆಯೇ, ಅವುಗಳ ಭೂಗತ ಜಗತ್ತು ಮತ್ತಷ್ಟು ಪಾತಾಳಮುಖಿಯಾಗುತ್ತಿರುವುದು, ಮತ್ತು ಅಲ್ಲಿನ ಕೊಳಚೆ ಪ್ರದೇಶಗಳು ‘ನರಲೋಕದ ನರಕ’ಗಳೆಂಬ ಯಶಸ್ಸಿಗಾಗಿ ಪರಸ್ಪರ ಪೈಪೋಟಿಯಲ್ಲಿ ಬಿದ್ದಿರುವುದು; ಹಬ್ಬುತ್ತಿರುವ ಪಬ್ಬು-ಕ್ಲಬ್ಬುಗಳಲ್ಲಿ, ಮದಿರೆಯ ಮಂದಿರಗಳಲ್ಲಿ, ಬೀರ್‍ಬಲ್ಲ, ರಮ್ಮೇಶ, ವಿಸ್ಕ್ಯಂಠ, ತೈಲಪ, ಅಮಲೇಂದ್ರೇತ್ಯಾದಿ ‘ಮದ್ಯ’ರಾತ್ರಿ ಮಕ್ಕಳು, “ಒಂದೇ  ಬಾಟ್ಲ್ ರಮ್// ಸುಜಲಾಂ, ಸುತರಾಂ, ಮರೆಯದ ಪಾನಕಾಂ//” ಎಂದು ಮದ್ಯದೇಶ್ ರಾಗದಲ್ಲಿ ಒಮ್ಮದದಿಂದ ಮೊರೆಯುತ್ತಿರುವುದು, ಮತ್ತು ಅಮೆರಿಖಾದ್ಯ ಅಡ್ಡೆಗಳಲ್ಲಿ ನವಪೀಳಿಗೆಯ ವೈನ್‍ತೇಯ-ವೃಕೋದರ ಸಹೋದರ-ಸಹೋದರಿಯರು ಸ್ವ-ಉದರವನ್ನು ಸಲಹುತ್ತಾ, ತಮ್ಮದೇ ಆದ ಒಂದು “ಬಾರ್-ರತ” ವರ್ಷವನ್ನು,  ಜಡಭರತಖಂಡವನ್ನು ಕಟ್ಟಿಕೊಂಡು ಅದರೊಳಗೆ ಬೆಚ್ಚಗೆ ಬಚ್ಚಿಟ್ಟುಕೊಳ್ಳುತ್ತಿರುವುದು, ಮತ್ತು ಈ ಕಾರಣ, ದೇಶದಲ್ಲಿ ಪುಸುಕಲು-ಪುಕ್ಕಲು ಯುವಪ್ರಜೋತ್ಪತ್ತಿಯಾಗುತ್ತಿರುವುದು; ಮಹಿಳೆಯರ ಮತ್ತು ಮಕ್ಕಳ ಮೇಲೆ ದಿನವಹಿ ದಬ್ಬಾಳಿಕೆ-ದುಂಡಾವರ್ತಿಗಳಾಗುತ್ತಿರುವುದು; ಇವಿಷ್ಟೇ ಸಾಲದೋ ಎಂಬಂತೆ, ಅಂದು ಪಂಜಾಬ-ಸಿಂಧು-ವಂಗಗಳಲ್ಲಿ ಭಾರತದೇಹದ ಶಿರಚ್ಛೇದನ-ಬಾಹುಚ್ಛೇದನದಿಂದುಂಟಾದ ಜನಸಾಗರದ ದಾರುಣ ವಲಸೆ-ಮಾರಣ ಹೋಮಗಳ ಘೋರ ನೆನಪನ್ನು ಕೆರಳಿಸುವಂತೆ, ಇಂದು ಅಸ್ಸಾಮಿನಲ್ಲಿ ಜನಾಂಗೀಯ ದ್ವೇಷಾಗ್ನಿಯು ಭುಗಿಲೆದ್ದಿರುವುದು … ಒಂದೇ, ಎರಡೇ, ಅಥವಾ ಎರಡು ಸಾವಿರದ ಹನ್ನೆರಡೇ?! ದಿಟವಾಗಿ, ಸನಾತನ ಯುಗದಿಂದಲೂ, ನರನಾಡಿನಾಳಗಳ ಆಳಗಲಗಳಲ್ಲಿ “ದೇವ ಕಣ”ವನ್ನು (ಗಾಡ್ ಪಾರ್ಟಿಕಲ್) ಒಯ್ದಿರುವ, ಪರಮಾಣುವಿನಲ್ಲಿಯೂ ಪರಮಾತ್ಮನನ್ನೇ ಕಾಣುವ, ಭಾರತೋದ್ಭವರ ಸ್ಥಿತಿ ಇಷ್ಟು ಬೇಗ ಇಷ್ಟು ಕ್ಷಯಿಸಿತೆಂದರೆ ನಂಬುವುದಾದರೂ ಹೇಗೆ? ಅದು ಹೇಗಾದರಿರಲಿ, ನಿಜ ದುರಂತವೆಂದರೆ, ಈ ಯಾವ ಸುಡುಸತ್ಯಗಳೂ, ಸ್ವಹಿತಾರ್ಥವನ್ನು ಅರಸುತ್ತಿರುವ ಅರಸರನ್ನು, ಲಂಡ-ಲಂಪಟ-ಲಂಚಲೋಲುಪ ಅಧಿಕಾರಸ್ಥರನ್ನು, ನಿತ್ಯಸನ್ಮಾನಿತ ಬುದ್ಧಿಪುರುಷರನ್ನು, ಧರ್ಮಾಗ್ರಹ-ನ್ಯಾಯಾಗ್ರಹ ವರೇಣ್ಯರನ್ನು, ಸ್ವ.ಸಂತೃಪ್ತ ಸು.ಸಂಸುಪ್ತ ಸಾಮಾನ್ಯರನ್ನು ಇನ್ನೂ ಮುಟ್ಟಿಯೇ ಇಲ್ಲವೆಂಬುದು.

“ಭಾಗ್ಯದೊಡನೆ ಭೇಟಿ” ಎಂದಿಗೆ?

“ಬಿಡುಗಡೆ”ಯ ಆ ಕಾರಿರುಳು ಕಡೆಗೆ ಹಡೆದುಕೊಟ್ಟಿದ್ದು ಇಷ್ಟೆ: ವಸಾಹತಿನ ಅಧಿಕಾರ ಹಸ್ತಾಂತರ; ದೇಶೀ ಅಧಿನಾಯಕರಿಗೆ ಅದೇ “ನೆಲಸಿಗ ಅಧೀನ”ರ ಮೇಲೆ ಸ್ವಾಮ್ಯವನ್ನೀವ, ಅರೆರಾತ್ರಿಯಲ್ಲಿ ಅವರಿಗೆ ಹಿರಿಕೊಡೆಹಿಡಿದು ಅವರನ್ನೇ ಭಾರತಭಾಗ್ಯವಿಧಾತರೆಂದು ಉದ್ಘೋಷಿಸುವ, ಒಂದು ಘನ ಸಂ-ಭ್ರಮ; ಜೊತೆಗೆ, ಪ್ರಭುಗಳು ತಮ್ಮ ಸೇವಕರಿಂದ ತಾವೇ ಆಳಿಸಿಕೊಳ್ಳಲು ಆಯ್ಕೆ ಮಾಡಬೇಕಾದಂಥ ವಿಕಟ, ವಿಲೋಮ ವ್ಯವಸ್ಥೆಯ ಬೀಜಾವಾಪ. ಇದರಿಂದ ದೊರೆತದ್ದು ಸತ್ಪ್ರಜೆಗಳಿಗೆ ಸ್ವಾತಂತ್ರ್ಯವಲ್ಲ; ಹೊಸ ‘ಸ್ವಾಹಾರ್ಥಿ’ ಸ್ವಾಮಿಗಳ ಸ್ವಚ್ಛಂದತೆಗೆ ಸ್ಪಷ್ಟ ಸನ್ನದಷ್ಟೆ. ಮತ್ತು ಇದು ನೆಲೆಗೊಟ್ಟಿದ್ದು ಬರಿಯ ಆರ್ಥಿಕ, ರಾಜಕೀಯ ಭ್ರಷ್ಟತೆಗಲ್ಲ; ಒಂದು ಭವ್ಯ ಸಮಾಜದ-ಸಂಸ್ಕೃತಿಯ-ಸಭ್ಯತೆಯ ಮೌಲ್ಯಹತ್ಯೆಗೆ. ಇಂದಿನ ಕಾಳವರಾಹಕಲ್ಪದ ಭಾರತವು, ಈ ಪರಿಯ ಟೊಳ್ಳು ಬುಡಬೇರುಗಳ ಮೇಲೆ, ಮತ್ತೊಂದು ಹುಟ್ಟಿನ ಹೊಸಿಲಿನಲ್ಲಿ, ಅದಿರುತ್ತ ನಿಂತಿದೆ. ಈ ಭಾವ್ಯಭಾರತವಾದರೂ ನಮಗೆ ಆ ದೀರ್ಘನಿರೀಕ್ಷಿತ “ಭಾಗ್ಯದೊಡನೆ ಭೇಟಿ”ಯನ್ನು ತಂದೀತೇ ಎಂಬುದು, ಪ್ರತಿ ಪ್ರಜೆಯೂ ಧ್ವನಿಯೆತ್ತಿ, ಪ್ರತಿ ಪ್ರತಿನಿಧಿಯಿಂದ ಪ್ರತಿಧ್ವನಿಯನ್ನು  ಪ್ರಚೋದಿಸುವುದರ ಮೇಲೆ ನಿಶ್ಚಿತವಾಗಿ ನಿಂತಿದೆ.  ಪ್ರಜೆಗಳು ಮಂತ್ರಿಮುಗ್ಧ ಹಿಂದಾಳುಗಳಾಗಿ ಕೈಕಟ್ಟಿ ನಿಲ್ಲದೆ, ಸತ್ವದೊಡನೆ ರಾಜಸ-ತ್ವವನ್ನೂ ಕೂಡಿಸಿಕೊಂಡು ಕೈಬೀಸಿ ಮುನ್ನಡೆದರೆ ಮಾತ್ರ, ಸತ್ವವಿರುವ ರಾಜರನ್ನು ಕಾಣಬಹುದು; ಇಲ್ಲದಿದ್ದಲ್ಲಿ ಪ್ರಜಾಸತ್ತೆಯು ಸತ್ತವರ ಸಂತೆಯಾಗುವುದೆಂಬುದರಲ್ಲಿ ಸಂಶಯವೇ ಸುಳಿಯದು.

ವಿಡಂಬನೆ :‌ ಭಾಗ್ಯದೊಡನೆ ಭೇಟಿ ಭಾಗ ೨

19 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ. ಇದು ಸರಣಿಯ ಎರಡನೆಯ ಕಂತು.

– ನಗೆ ಸಾಮ್ರಾಟ್

ಮೊದಲ ಕಂತು ಇಲ್ಲಿ ಓದಿ

4. ಅಂದು “ಸ್ವ” ಎಂದೊಡನೆ ಸ್ವತಂತ್ರ, ಸ್ವರಾಜ್ಯ, ಸ್ವದೇಶಿ, ಸ್ವಯತ್ನ, ಸ್ವಶಕ್ತಿ, ಸ್ವಚ್ಛತೆ, ಸ್ವಾಭಿಮಾನ, ಸ್ವಾವಲಂಬನೆ, ಇತ್ಯಾದಿ ನೆನಪಿಗೆ ಬರುತ್ತಿದ್ದವು. ಅದೇ “ಸ್ವ” ಎಂದೊಡನೆ ಇಂದು ನಮಗೆ ಹೊಳೆಯುವುದು “ಸ್ವಾಹಾ!” ಸ್ವತ್ತು, ಸ್ವಕುಟುಂಬ, ಸ್ವಜಾತಿ, ಸ್ವಾರ್ಥ, ಇತ್ಯಾದಿ ಶಬ್ದಗಳು; “ಸ್ವತಂತ್ರ” ಎಂದರೆ ತಮ್ಮದೇ ಅಕ್ರಮಕಾರ್ಯಕ್ರಮಗಳಿಗಾಗಿ ಮಾಡಿಕೊಂಡಿರುವ “ಸ್ವ” ತಂತ್ರ; ಹಾಗೂ “ಜನತಂತ್ರ” ಎಂದರೆ ಜಾಣತಂತ್ರ ಎಂಬಂಥ ಅಸಹಜ ಅರ್ಥಾಂತರಗಳು.

5. ಅಂದು ಆಳಿದ ಪ್ರಭುಗಳು ಅಲ್ಲಲ್ಲಿಗೆ ಒಬ್ಬೊಬ್ಬರಿದ್ದರಷ್ಟೆ. ಆದರಿಂದು, ಚುರಾಯಿತ ಜನಮತಮುದ್ರೆಯನ್ನು ತೋರಿ ಚುನಾಯಿತರೆನಿಸಿಕೊಂಡವರೆಲ್ಲರೂ ನಮ್ಮ ಧಣಿಗಳೇ. ನಮ್ಮನ್ನು ಆಳುವ, ಆಳುಕಾಳುಗಳಂತೆ ಕಾಣುವ, ಇಂಥ ದು:ಶಾಸಕ, ಧೃತರಾಷ್ಟ್ರಕೂಟರು ಇಂದು ಹಳ್ಳಿಗೆ ಹತ್ತಿಪ್ಪತ್ತು. ಜಾತಿ, ಭಾಷೆ, ಇತ್ಯಾದಿಗಳನ್ನು “ಪಾಳೆಯ”ಗಳನ್ನಾಗಿಸಿಕೊಂಡಿರುವ ಪಾಳೆಯಗಾರರು; ದೇಶ ತುಂಡಿರಿಸಿ ಆಳುವ ತುಂಡರಸ-ಪುಂಡರಸರು; ಒಡೆದು-ಹೊಡೆದು ಆಳುವ ಒಡೆಯರು … ಇಂಥವರ ರಾಜಗಣಗಳೇ ಇಂದು ಈ ‘ಭರ್ತ್ಯ’ಭೂಮಿಯಲ್ಲಿ ಭರತನಾಟ್ಯವನ್ನಾಡುತ್ತಿರುವುವು; ತಮ್ಮ ರಾಜ್ಯಲೀಲೆಯಿಂದ ರಾರಾಜಿಸುತ್ತಿರುವುವು. ಆಳುಗಳೇ ಮಾಲೀಕರನ್ನು ಆಯ್ಕೆ ಮಾಡಿ, ಉಚ್ಚ ಪಟ್ಟಗಳಿಗೆ ತುಚ್ಛರನ್ನು ಹರಸಿ ಕಳಿಸಬೇಕಾಗಿರುವಂಥ ಹುಚ್ಚುತನವೇ ನಮ್ಮ ಈ “ಪ್ರಜಾ- ಪ್ರತಿನಿಧಿ ಪ್ರಭುತ್ವದ” ಹೆಚ್ಚುಗಾರಿಕೆಗಳಲ್ಲೊಂದಾಗಿದೆ.

6. ಅಂದೂ ಸಹ, ಅನೇಕ ಭಾರತಸ್ಥರಲ್ಲಿ ವಿದೇಶ ವ್ಯಾಮೋಹ, ವಿಶೇಷವಾಗಿ ಆಂಗ್ಲಾಕರ್ಷಣೆ, ಗಾಢವಾಗಿದ್ದುದು ನಿಜವಲ್ಲವೇ? ಹೌದು, ಇದೇನೋ ಒಪ್ಪತಕ್ಕದ್ದೇ. ವಾಸ್ತವವಾಗಿ, ಅಂದು ಅಂಧಸಮುದ್ರದ (ಅಟ್ಲ್ಯಾಂಟಿಕ್) ಈಚೆಗಿದ್ದ, ಅದರಲ್ಲೂ ಅಲ್ಲಿನ ತಮಸಾ (ಥೇಮ್ಸ್) ನದಿಯ ಬದಿಗಿದ್ದ ಅಯಸ್ಕಾಂತವು, ಇಂದು ಅದರಾಚೆಗಿರುವ ‘ಅಮರ’ ಅಮೆರಿಕಾಗೆ ಸರಿದಿದೆ, ಅಷ್ಟೆ. ತತ್ಫಲವಾಗಿ, ಅಮೆರಿಕಾವೇಶ ಅಮರಿಕೊಂಡಿರುವ ತಾಯ್ತಂದೆಯರು, ಭಾರತದ ಭಾರವನ್ನು ಎಂದು ತೊರೆದೇವೋ ಎಂದು ಹಾತೊರೆಯುತ್ತಾ, ಒಂದೇ ಹಠದಿಂದ ತಮ್ಮ ಬುದ್ಧಿಶಾಲಿ ಬಾಲರಿಗೆ ಬಾಲ್ಯದಿಂದಲೇ ಅಮೆರಿಕದ ಅಮಲೇರಿಸಿ, “ಅಮೆರಿಕ! ಅಮೆರಿಕ!!” ಎಂಬ ಜನ್ಮಸಾಫಲ್ಯ ಮಂತ್ರದ ದೀಕ್ಷೆಯನ್ನು ಅವರಿಗೆ ಸಕಾಲಕ್ಕೆ ಕೊಡಿಸಿ, ಅವರು ಮತ್ತೆಂದೂ ಭಾರತಕ್ಕೆ ಬಾರದಂತೆ ಆಚೆಗಟ್ಟಿ, ಒಂದು ನವಶೈಲಿಯ “ಕ್ವಿಟ್ ಇಂಡಿಯಾ” ಕಿಚ್ಚನ್ನೇ ಹಚ್ಚಿಕ್ಕಿದ್ದಾರೆ. ಅಂದು ಈಸ್ಟ್ ಇಂಡಿಯಾ ಕಂಪನಿಗೆ ಕಚ್ಚಾವಸ್ತುಗಳನ್ನೂ, ಕಾರಕೂನರನ್ನೂ ಒಲವಿನಿಂದ ಒದಗಿಸುತ್ತಿದ್ದ ಭಾರತವು, ಇಂದು ತನ್ನ ಸಮಸ್ತ ಸಮರ್ಥ ಯುವಶಕ್ತಿಯನ್ನು ಹೆಮ್ಮೆ-ಹುಮ್ಮಸ್ಸುಗಳಿಂದ, ಅಮೆರಿಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿಗಳಿಗೆ ಕಚ್ಚಾಮಾಲುಗಳನ್ನಾಗಿ ಪರಿವರ್ತಿಸಿ, ಎಡೆಬಿಡದೆ ರಫ್ತು ಮಾಡುತ್ತಿದೆ. ತನ್ನ ಇಡೀ ಶಿಕ್ಷಣಕ್ರಮವನ್ನು ‘ಪರ’ತಂತ್ರಜ್ಞಾನಕ್ಕೆ “ಪ್ರೋಗ್ರ್ಯಾಮ್” ಮಾಡಿಕೊಂಡು ಧನ್ಯತೆಯಿಂದ ಬೀಗುತ್ತಿದೆ. ಹೀಗೆ, ಬುದ್ಧಿರಾಶಿಯು ಅಮೆರಿಕಾತುರವಾಗಿಯೂ, ‘ನುಂಗಂಬಾಕಂ’ ಆದ ಧನರಾಶಿಯು ಸ್ವಿಸ್‍ಬ್ಯಾಂಕಾಭಿಮುಖವಾಗಿಗೂ ದಿಕ್ಕೆಟ್ಟು, “ಭಂಡ”ವಾಳವಷ್ಟೇ ಭಾರತದ ಅಭಿವೃದ್ಧಿಯಲ್ಲಿ ತೊಡಗಿಸಲು ಮಿಕ್ಕುಳಿಯುತ್ತಿದೆ.

7. ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ಢಂಬಾಚಾರ, ಇವೆಲ್ಲ ಅಂದೂ, ಎಂದೆಂದೂ ಇದ್ದವೇ ತಾನೇ? ಖಂಡಿತ. ಆದರೆ ಅಂದು ಭ್ರಷ್ಟಾಚಾರವು ಒಂದು ಅತಿವಿಶಿಷ್ಟ ಶಿಷ್ಟಾಚಾರವಾಗಿ, ರಾಜಕಾರಣಕ್ಕೆ ಅವಶ್ಯ ಅರ್ಹತೆಯಾಗಿ, ಹುದ್ದೇದಾರರ ಸಿದ್ಧಾಂತವಾಗಿ, ಮಾನ್ಯತೆ ಪಡೆದಿರಲಿಲ್ಲ. ಜನಮಾನಸದೊಳಗೆ “ಡಿ.ಎನ್.ಎ.-ಗತ”ವಾಗಿ, ಚರಾಚರಗಳೆಲ್ಲವನ್ನೂ ನಡೆಸುವ ವಿಶ್ವಚೇತನವಾಗಿ ಹೊರಹೊಮ್ಮಿರಲಿಲ್ಲ. ಲಂಚವೆಂಬ ಮೂಲವ್ಯಾಧಿಯು ಅತ್ಯುಗ್ರ ಆಮೂಲಾಗ್ರ ಅರ್ಬುದವಾಗಿ ಮೆಟ್ಟಿಕೊಂಡಿರಲಿಲ್ಲ; ಅಧಿಕೃತವಾಗಿ (ಮಂತ್ರಿಶಕ್ತಿ, ತಮೋಬಲಗಳಿಂದ) ಅಪಹರಿಸುವ ಸಂಸ್ಕೃತಿ ಆಗಿನ್ನೂ ಮೊಳಕೆಯೊಡೆದಿರಲಿಲ್ಲ. “ಝಣಝಣಹಣ ಅಧಿನಾಯಕ ಜಯಹೇ” ಎಂಬುದು ನಮಗೊಂದು ಅನಧಿಕೃತ ರಾಷ್ಟ್ರಗೀತೆಯಾಗಿರಲಿಲ್ಲ. “ಜಾತಿಯೇ ಜ್ಯೋತಿ,” “ಪರಧನವೇ ಪರಮಾತ್ಮ,” “ತದುಕಲು ಕಲಿಯಿರಿ,” “ನೀವಿರುವುದೆ ನಮಗಾಗಿ,” ಮುಂತಾದ ಪದಪುಂಜಗಳು ಆಗಿನ್ನೂ ಆಳರಸರ ಸ್ಫೂರ್ತಿಸೂಕ್ತಿಗಳಾಗಿ ಮೂಡಿಬಂದಿರಲಿಲ್ಲ. ಶ್ರೇಷ್ಠ ನ್ಯಾಯಮೂರ್ತಿಗಳು, ಜ್ಯೇಷ್ಠ ಐ.ಎ.ಎಸ್.-ಐ.ಪಿ.ಎಸ್. ಅಧಿಕಾರಿಗಳು, ವರಿಷ್ಠ ದಂಡನಾಯಕರು,  ಗಣ್ಯ ಮಾಧ್ಯಮೋದ್ಯೋಗಿಗಳು, ಸುಸಂಪೂಜಿತ ಧರ್ಮಗುರುಗಳು, ಬಿರುದಾಂಕಿತ ಸಮಾಜಸೇವಕರು, ಬಹುಮಾನ್ಯ ಬುದ್ಧಿಜೀವರು … ಮೊದಲಾದ ಸಮಾಜಾಧಾರ ಸ್ತಂಭಗಳೇ ಆಗ ಹೀಗೆ ಹಗರಣರಂಗದಲ್ಲಿ ಮಾನಾಭಿಮಾನ-ವಿಕಲರಾಗಿ ಮುರಿದು ಬಿದ್ದಿರಲಿಲ್ಲ. ಮಹಾಬಿಲೇಶ್ವರರೂ-ವರಾಹಾಂಶ ಸಂಭೂತರೂ ಕೊರೆದ ಬಿಲಿಯನ್ ಬಿಲಗಳ ಬೀಡಾಗಿ, ಸುರಂಗಜೇಬರ ರಾಜಮಾರ್ಗವಾಗಿ, ಕೊಳ್ಳೆಗಳ ಕೊಳಚೆಯ ಕೊಳ್ಳವಾಗಿ, ಭಾರತದ ಪ್ರಭುತ್ವವು ಆಗ ಇನ್ನೂ ಅಷ್ಟು ‘ಪ್ರಬುದ್ಧವಾಗಿರಲಿಲ್ಲ; ಈ ಪ್ರಮಾಣಕ್ಕೆ ‘ಪ್ರಭುಕ್ತ’ವಾಗುವುದು (ತಿಂದುಹಾಕಲ್ಪಡುವುದು) ಎಂದು ಯಾವ ಭಾರತಜ್ಞರೂ ಊಹಿಸಿಯೂ ಇರಲಿಲ್ಲ. ಆಗ ದಿನಕ್ಕೊಂದು ವಿಚಾರಣಾ ಆಯೋಗ ನೇಮಿಸಲ್ಪಡಬೇಕಾಗಿ ಬಂದಿರಲಿಲ್ಲ. ಲೋಕಾಯುಕ್ತ ಸಂಸ್ಥೆಯು ಇನ್ನೂ ಲೋಕಕ್ಕೆ ಅಯುಕ್ತವೆನಿಸಿರಲಿಲ್ಲ. ಕಾನನದ ಕಾನೂನೆಂಬುದು ಸೋಂಕಿತ್ತಾದರೂ ಈಗಿನಂತೆ ಸೊಕ್ಕಿರಲಿಲ್ಲ. ಸಿಂಧುದೇಶವು ಪ್ರಜಾಂತಕ ಪರಿಪಾಲಕರಿಗೆ ಅಷ್ಟು ಅನುಕೂಲಸಿಂಧುವಾಗಿ ತಿರುಗಿರಲಿಲ್ಲ.

ಮೇಲಾಗಿ, ವಿದೇಶಿ ಧಾಳಿಕೋರರು ಇತಿಹಾಸದಾದ್ಯಂತ ಸೂರೆಗೈಯದಿದ್ದಷ್ಟು ಸಂಪತ್ತನ್ನು ಕೆಲವೇ ದಶಕಗಳಲ್ಲಿ ದೇಶಾಂತರಿಸಿ, ತಾಯ್ನಾಡಿನ ಜೀವದ್ರವ್ಯವನ್ನೇ ಇಂಗಿಸುವ ಸ್ವದೇಶಿ ರಾಷ್ಟ್ರಹೀರರು, ಕಳಿಂಗ “ಹಿಂಡಿಯಣ್ಣರು,” ಆಗಿನ್ನೂ ಅವತಾರವೆತ್ತಿರಲಿಲ್ಲ!

ವಿಡಂಬನೆ: ಭಾಗ್ಯದೊಡನೆ ಭೇಟಿ

18 ಆಗಸ್ಟ್

ಭಾರತ ಸ್ವಾತಂತ್ರ್ಯ ಗಳಿಸಿ ೬೫ ವಸಂತಗಳು ಪೂರೈಸಿವೆ. ವರ್ಷ ಅರವತ್ತೈದು ಆದ ತರುವಾಯ ವ್ಯಕ್ತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ; ತನ್ನನ್ನು ಹೊರತುಪಡಿಸಿ! ಈ ಅರವತ್ತೈದರ ಮರುಳಿನಲ್ಲಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆಹರೂ ವಾಚಿಸಿದ “ಭಾಗ್ಯದೊಡನೆ ಭೇಟಿ” (tryst with destiny) ನೆನಪಿಸಿಕೊಂಡು ಆ ಭಾಗ್ಯದೊಂದಿಗಿನ ಭೇಟಿಯ ಅನುಭವವನ್ನು ನಗೆ ಸಾಮ್ರಾಜ್ಯಕ್ಕೆ ಇತ್ತೀಚೆಗೆ ವೀಸಾ ಪಡೆದ ಎಸ್.ಜಿ. ಸೀತಾರಾಮ್ ಹಂಚಿಕೊಂಡಿದ್ದಾರೆ.

ಈ ವಿಡಂಬನಾ ಸರಣಿ ಮೂರು ಕಂತುಗಳಲ್ಲಿ ನಿಮ್ಮ ಮುಂದೆ ಮೂಡಿಬರಲಿದೆ.

– ನಗೆ ಸಾಮ್ರಾಟ್

ಆಂಗ್ಲರಾಹುವಿನಿಂದ ಭರತಭೂಮಿಯು ಮುಕ್ತವಾದ ಶ್ರಾವಣ ಅಮಾವಾಸ್ಯೆಯ ಅಂಚಿನ ಆ ಕಟ್ಟಿರುಳಿನ ಅಮೃತಘಳಿಗೆಯಲ್ಲಿ,  ಇಂದು “ಸೆಂಟ್ರಲ್ ಹಾಲ್ ಆಫ್ ಪಾರ್ಲಿಮೆಂಟ್” ಎನ್ನುವ ಮಹಿಮಾನ್ವಿತ ವೇದಿಕೆಯಲ್ಲಿ, ಪ್ರಧಾನಿ ನೆಹ್ರೂ ಅವರು ಭಾರತದ ರಾಜ್ಯಾಂಗ ಸಭೆಯನ್ನುದ್ದೇಶಿಸಿ, ಅಸಾಮಾನ್ಯ ಅಸಮಾನತೆ, ಅನಾರೋಗ್ಯ, ಅಜ್ಞಾನ ಇನ್ನಿತರ ಅನಿಷ್ಟಗಳನ್ನು ಅಳಿಸುವ ಬಗ್ಗೆಯೂ; ಸುಖ, ಶಾಂತಿ, ಸಮೃದ್ಧಿ, ನ್ಯಾಯ, ಸ್ವಾತಂತ್ರ್ಯ, ಲೋಕತಂತ್ರ, ಸಾಮಾನ್ಯರ ಸಾಮ್ರಾಜ್ಯ, ಇನ್ನಿತರ ಮೌಲ್ಯಾದರ್ಶಗಳನ್ನು ಸಿದ್ಧಿಸಿಕೊಳ್ಳುವುದರ ಬಗ್ಗೆಯೂ; ಕರ್ತವ್ಯ, ಜವಾಬ್ದಾರಿ, ಶ್ರಮ, ಸೇವೆ, ಮತ್ತಿತರ ನಾಯಕತ್ವ ಗುಣಗಳ ಬಗ್ಗೆಯೂ ಮಾಡಿದ “ಭಾಗ್ಯದೊಡನೆ ಭೇಟಿ” ಎಂಬ ಭಾಷಣವು ಲೋಕಾನುಶ್ರುತವಾಗಿದೆ. ಆ ವಿದ್ಯುಜ್ಜನಕ ವಾಗ್ಧಾರೆಯಲ್ಲಿ ನೆಹ್ರೂ ಮಹೋದಯರು ಬಯಸಿದ, ಬಣ್ಣಿಸಿದ, ಬಣ್ಣದ ಭೂಮಿಯತ್ತ, ತಮಸ್ಸಿನಿಂದ ಜ್ಯೋತಿಯತ್ತ, ಭಾರತರಥವು ನಿಜಕ್ಕೂ ಸಾಗುತ್ತಿದೆಯೇ ಎಂದು ಕೊಂಚ ಹೊರಳಿ ನೋಡುವುದು ಇಂದಿನ ನವಭಾರತೋದಯ ದಿನೋತ್ಸವದ ಸಂದರ್ಭದಲ್ಲಿ ಬಹು ಪ್ರಸ್ತುತ. ಆದರೆ, 1.27 ಸಹಸ್ರಸಹಸ್ರದಷ್ಟು ಚದರಮೈಲಿಯಿರುವ, 1.24 ಶತಕೋಟಿಯಷ್ಟು ಪ್ರಜಾಪ್ರಭೂತ, 65 ವರ್ಷಗಳಷ್ಟು ವೃದ್ಧ ಭಾರತದ ಮಹಾಭಾರದ ಗಾಥೆಯು ಅನೇಕ ಮಹಾಭಾರತಗಳಿಗೆ ಸಮನಾಗುವುದರಿಂದ, ಸದ್ಯಕ್ಕೆ ಕೆಲವೇ ಬಿಂದುಗಳ ಸಂದಿನಿಂದ ಸಿಂಧುವನ್ನು ಸಂದರ್ಶಿಸುವ ಪ್ರಯತ್ನವನ್ನು ಮಾಡಬಹುದು.

1947 ಮತ್ತು 2012: ಒಂದು ವ್ಯತಿರಿಕ್ತ ಪ್ರತಿಬಿಂಬ

1. ಅಂದಿನ ಸ್ವಾತಂತ್ರ್ಯಾರ್ಥಿಗಳು ದೇಶವು ದೇಹಕ್ಕಿಂತ ಮಿಗಿಲೆಂದೂ, ದೇಶವೇ ದೇವಾಲಯವೆಂದೂ ಭಾವಿಸಿ ಒಂದು ವಿಶಿಷ್ಟ ಅದ್ವೈತಸತ್ವವನ್ನು ಮೆರೆದಿದ್ದ ದೇಶಭಕ್ತೋತ್ತಮರು. ಆದರೆ, ಇಂದು ನಮ್ಮನ್ನಾಳುವವರು, ಸರ್ವಭೂಮಿಯೂ ತಮ್ಮದೆನ್ನುವ (ಇಡೀ ಭಾರತವೇ ಒಂದು ರಿಯಲ್ ಎಸ್ಟೇಟ್) ಸರ್ವಾಹಂಕಾರಭೂಷಿತ ಸಾರ್ವಭೌಮರು.  ತಮ್ಮ ವೈಭವಕ್ಕಾಗಿ ದೇಶದಾನ ಮಾಡುತ್ತಿರುವ ಭಾರತೇಶರು. ಪ್ರಜಾಹಿತಕ್ಕೆ ಪ್ರತಿಯಾಗಿ ಪ್ರವರ್ತಿಸುತ್ತ, ಪ್ರತಿಯೊಂದು ನಿಧಿಯನ್ನೂ ಬಾಚಿಕೊಳ್ಳಲು ತಮ್ಮ ಜನ್ಮವನ್ನೇ ಸಮರ್ಪಿಸಿಕೊಂಡಿರುವ “ಪ್ರತಿ-ನಿಧಿ” ಪ್ರಜಾಪತಿಗಳು. ಅಂದಿನ ಭಾರತದ ಸಾರಥಿಗಳಾಗಿದ್ದವರು ಅತಿರಥ, ಮಹಾರಥ, ಭಗೀರಥರಾಗಿದ್ದರೆ, ಇಂದಿನ ಪ್ರತಿನಿಧಿ ಪ್ರಭುಗಳು ಅತಿರತಿ, ಮಹಾರತಿಯನ್ನು ಭಾರತಮಾತೆಯಲ್ಲಿ ಕಾಣುವ ರಣ ರಾಷ್ಟ್ರಕಾಮರು.

2. ಅಂದು ಜನಮನವೆಲ್ಲ ಒಂದೇ ಗಣವಾಗಿ, ಭಾರತಾಂಬೆಯನ್ನು ಒಂದೇ ದನಿಯಿಂದ “ವಂದೇ ಮಾತರಂ” ಎಂದು ಭಾವಭಕ್ತಿಭರಿತವಾಗಿ ಕೀರ್ತಿಸಿತ್ತು. ಆದರೆ ಇಂದು, ಓಟು-ಜಾತಿ ಎಂಬ ಉಭಯ ಮತಗಳನ್ನೂ-ಮಠಗಳನ್ನೂ ಗಂಟು ಮಾಡಿರುವ ಅತಿ-ಅತಿ-ಜಾತೀಯತೆಯ “ಮತಾಚಾರ್ಯರು,” ದುರ್ಧರ್ಮಾನಂದರು, ಭಾಷಾಪಾತಕರು, ಮುಂತಾದ ನಿಸ್ಸೀಮ ಮಾನಸಭಂಜಕರ, ದ್ವೇಷಸ್ಥರ, ವೇಷಧಾರಿಗಳ ಸತತ ಪರಿಶ್ರಮದಿಂದಾಗಿ, ಅನೇಕ ಅಬ್ಬರದ ಆರ್ತನಾದಗಳ ಏಕಕಾಲಿಕ ಕಾಕಸಂಗೀತವು ಎಲ್ಲೆಡೆಯಿಂದ ಸಿಡಿದುಬರುತ್ತಿದೆ. ಭಾರತವು “ಒಂದೇ ದೇಶ” ವಾಗುವ ಬದಲು, “ಒಂದೊಂದೇ ಮಾತರಂ” ಎನ್ನುವ ಅಸಂಖ್ಯ ‘ಕಟ್ಟಭಿಮಾನಿಗಳ’ ಇಕ್ಕಟ್ಟು-ಬಿಕ್ಕಟ್ಟುಗಳ ತಿಕ್ಕಾಟದ ಒಕ್ಕೂಟವಾಗಿದೆ. 125 ಕೋಟಿ ಛಿನ್ನವಿಚ್ಛಿನ್ನ ಮನಸ್ಸುಗಳು 125 ಕೋಟಿ ಹೆಡೆಯ ಹೆನ್ನಾಗರದಂತೆ ಇಂದು ನಮ್ಮ ಹೆನ್ನಾಗರಿಕತೆಯ ಕತೆಯನ್ನು ಹಿಂದೋಡಿಸುತ್ತಿವೆ.

3. ಅಂದು ನಾವು ನೋಡುತ್ತಿದ್ದುದು, ನಮಿಸುತ್ತಿದ್ದುದು, ತ್ಯಾಗ-ಸ್ವಚ್ಛತೆ-ಸಮೃದ್ಧಿ-ಧರ್ಮಗಳನ್ನು ಸಂಕೇತಿಸುವ ಒಂದು ಭವ್ಯ ಬಾವುಟ. ಅಂದು ಇದ್ದದ್ದು ಅದೊಂದೇ ಬಾವುಟ, ಒಂದೇ ಸೇನೆ. ಆದರೆ, ಅದರ ತ್ರಿರಂಗುಗಳಲ್ಲಿ ಇಂದು ನಮಗೆ ಕಾಣಸಿಗುತ್ತಿರುವುದು ಎರಡು ಬೇರೆಯೇ ರಂಗುಗಳು: ಕಾಳಹಣ-ಕರಾಳಗುಣದ ಕಡುಕಪ್ಪು, ಮತ್ತು ಅಧಿಕಾರಷಾಹಿ ಟೇಪುಗಳ, ರಕ್ತಬಸಿದು ಏಗುತ್ತಿರುವವರ ಕಟುಗೆಂಪು. ಧರ್ಮಚಕ್ರದ್ದಂತೂ ಕತೆಯೇ ಬೇರೆ. ಪ್ರಜಾ’ಸ್ವಾಮಿ’ಗಳ ಬಹುಬಿಲಿಯನ್ ಕೊಳ್ಳೆಮೊತ್ತಗಳಲ್ಲಿನ ಕೊಳೆಸೊನ್ನೆಗಳನ್ನೂ, “ಸ್ವಾಮ್ಯವಿಲ್ಲದವರು ಸೊನ್ನೆಯಲ್ಲಿಯೇ ಸಾಮ್ಯವನ್ನೈದಿರುವ” ವಿಕೃತ ಸಮೀಕರಣವನ್ನೂ, ಮತ್ತು ಎಲ್ಲೆಡೆ ಮುಸುಕುತ್ತಿರುವ ಮೌಲ್ಯಶೂನ್ಯತೆಯನ್ನೂ ಬಿಂಬಿಸುತ್ತ ಬಂದು, ಕಡೆಗೆ ಈ ಧರ್ಮಚಕ್ರವು ಒಂದು ಗಾಢ-ಗೂಢ ಸೊನ್ನೆಯಾಗಿ, ಅಧರ್ಮಚಕ್ರಾಧಿಪತ್ಯದ ರಾಜ್ಯೋಪಕರಣವಾಗಿ, ಬರಲಿರುವ ಕೂಪಕಂದರದ (Black-hole) ದುಶ್ಶಕುನವಾಗಿ ಹಿಂದುರುಳಲಾರಂಭಿಸಿ ದಶಕಗಳೇ ಕಳೆದವು. ತ್ರಿರಂಗವು ಹೀಗೆ ಗತಿಸಿರುವಂತೆಯೇ, ಇಂದು ಒಂದೊಂದು ರಾಜ್ಯಕ್ಕೂ, ಪಕ್ಷವಿಪಕ್ಷಗಳಿಗೂ, ಬಣೋಪಬಣಗಳಿಗೂ, ಚಳುವಳಿ-ಸಂಘಟನೆಗಳಿಗೂ, ಒಂದೊಂದು ಬಾವುಟ, ಒಂದೊಂದು ಸೇನೆ ಎಲ್ಲಂದರಲ್ಲಿ ತಲೆಯೆತ್ತಿಕೊಂಡಿವೆ. (ದೇಶಾದ್ಯಂತ ಒಬ್ಬೊಬ್ಬ ಸನ್ಮಂತ್ರಿಯ ‘ಸತ್ಕರ್ಮ’ಕಾಂಡಕ್ಕೂ ನಿರೋಧ (ಅಥವಾ ‘ಶತ್ರು’) ಪಕ್ಷಗಳು ಸಿ.ಬಿ.ಐ. ತನಿಖೆಯನ್ನೇ ಒತ್ತಾಯಿಸುತ್ತಿರುವುದರಿಂದಾಗಿ, “ಸಿ.ಬಿ.ಐ. ಮಹಾಸೇನೆ” ಎಂಬುದೊಂದು ಈಗ ಬಾಕಿಯುಳಿದಿದೆಯಷ್ಟೆ.)

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಭಗವಾನ್ ನಿತ್ಯ ಸಾಯಿ ಬಾಬಾ ಸಂದರ್ಶನ!

3 ಡಿಸೆ

ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿ ವಿಶ್ವ ಎಂದರೆ ಭೂಮಿಯನ್ನು ಸೇರಿಸಿಕೊಂಡು ಅಸಂಖ್ಯಾತ ತಾರೆ, ಗ್ರಹಗಳು ಸೇರಿವೆ ಎಂದು ಅರ್ಥೈಸಿಕೊಳ್ಳಬೇಕು.

ಇಂತಹ ಅನಂತ ಸೃಷ್ಟಿಯಲ್ಲಿ ತೀರಾ ಕ್ಷುಲ್ಲಕ ಎಂದು ಪರಿಗಣಿಸಬಹುದಾದ ಸೂರ್ಯ ಎಂಬ ನಕ್ಷತ್ರದ ಸುತ್ತ ಪ್ರದಕ್ಷಿಣೆ ಹಾಕುವ ಗ್ರಹ ಭೂಮಿ. ಈ ಗ್ರಹವು ಸೂರ್ಯನಿಂದ ಅತ್ಯಂತ ಹಿತಕರವಾದ ಅಂತರದಲ್ಲಿ ಇರುವುದರಿಂದ ಇದರ ಮೇಲೆ ವಾಯುಪದರ ರೂಪುಗೊಳ್ಳಲು, ನೀರು ಉಕ್ಕಿ ಹರಿಯಲು, ಜೀವ ಅಂಕುರವಾಗಲು ಸಾಧ್ಯವಾಯಿತು. ಸುತ್ತಲಿನ ಎಲ್ಲಾ ಗ್ರಹಗಳು ಬಂಜೆಯಂತೆ ನರಳುತ್ತಿದ್ದರೆ ಭೂಮಿ ಹಸಿರು ಹಾಗೂ ಉಸಿರಿನಿಂದ ನಳನಳಿಸುತ್ತಿತ್ತು.

ಹೀಗೆ ಉತ್ಪನ್ನವಾದ ಜೀವಿಗಳಲ್ಲಿ ಲಕ್ಷಾಂತರ ಪ್ರಬೇಧ. ಇವುಗಳಲ್ಲಿ ಒಂದು ಬಗೆಯ ಜೀವಿ ಮನುಷ್ಯ. ಈ ಮನುಷ್ಯರಲ್ಲಿ ನಾನಾ ವಿಧ. ಇಂತಹ ವ್ಯತ್ಯಾಸಗಳಲ್ಲಿ ಒಂದು ವರ್ಗ ಹಿಂದೂ. ಇವರಲ್ಲಿ ಹಲವು ಪ್ರಬೇಧಗಳಲ್ಲಿ ಒಂದು: ವಿಷ್ಣು ಆರಾಧಕರು.

ಇವರ ಪ್ರಕಾರ ಜಗತ್ತಿನ ಸೃಷ್ಟಿಕರ್ತನಾದ ದೇವನು ಈ ಭೂಮಿಯೆಂಬ ಗ್ರಹದ ಮೇಲಿನ ಮಾನವನ ವ್ಯವಹಾರಗಳಲ್ಲಿ ವಿಪರೀತ ಆಸಕ್ತನು. ಮನುಷ್ಯನು ದುಷ್ಟ ಮಾರ್ಗಕ್ಕೆ ಇಳಿದಾಗಲೆಲ್ಲಾ ತಾನೇ ಅವತರಿಸಿ ಇಲ್ಲವೇ ತನ್ನ ಅಂಶಗಳನ್ನು ಮನುಷ್ಯರಲ್ಲಿ ತುಂಬಿ ಕಳಿಸಿ ಮಾನವ ವ್ಯವಹಾರಗಳಲ್ಲಿ ಋಜುತ್ವವನ್ನು ಏರ್ಪಾಡು ಮಾಡುತ್ತಾನೆ.

ಇಂತಹ ಅವತಾರಗಳಲ್ಲಿ ಒಬ್ಬರಾದ ಭಗವಾನ್ ನಿತ್ಯ ಸಾಯಿ ಬಾಬಾರವರು ತಮ್ಮ ಅವತಾರದ ಎಂಬತ್ತೈದನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ (ಭಕ್ತರು ಆಚರಿಸಿದ್ದಾರೆ ಎನ್ನುವುದು ಸೂಕ್ತ). ಮಾಧ್ಯಮದೊಂದಿಗೆ ಎಂದೂ ಮಾತನಾಡಲು ಇಚ್ಛಿಸಿದ ಭಗವಾನ್ ನಗೆ ನಗಾರಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಅಭೂತಪೂರ್ವ ಸಂದರ್ಶನ ಅತ್ಯಂತ ಶೀಘ್ರದಲ್ಲಿ ನಗೆ ನಗಾರಿಯಲ್ಲಿ ಪ್ರಕಟವಾಗಲಿದೆ! ನಿರೀಕ್ಷಿಸಿ…

ನಗಾರಿ ಕಿಕ್ಕಿಂಗ್!

28 ನವೆಂ

ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ ವಿರುದ್ಧವೇ ತಿರುಗಿ ಬಿದ್ದದ್ದು ಇವೆಲ್ಲವುಗಳನ್ನು ಕಂಡ ಸಾಮ್ರಾಟರು ಕಂಗಾಲಾಗಿದ್ದರು. ಹಲ್ಲಿಲ್ಲದ ತನ್ನ ಬಳಿಯಿರುವ ಕಡಲೆಯನ್ನು ಕಿತ್ತುಕೊಳ್ಳಲು ಬರುವ ‘ಹಲ್ಕಟ್’ ಮಂದಿಯಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದರು.

ಅವರು ಎಲ್ಲಿ ಹೋಗಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಸಣ್ಣ ಮಾಹಿತಿಯೂ ಇರಲಿಲ್ಲ. ನಗೆ ನಗಾರಿಯ ಪಾಸ್ ವರ್ಡ್ ಅವರ ಸ್ವತ್ತಾದ್ದರಿಂದ ಉಳಿದ ಸದಸ್ಯರ್ಯಾರೂ ನಗಾರಿಯಲ್ಲಿ ಕೆಲಸ ಮಾಡಲೂ ಸಾಧ್ಯವಾಗಲಿಲ್ಲ. ಸಾಮ್ರಾಟರನ್ನು ಹುಡುಕುತ್ತಾ ಹೋಗಬಾರದ ಜಾಗಕ್ಕೆಲ್ಲ ಹೋಗಿಬಂದ ಕುಚೇಲ ನಿರಾಶೆಯಿಂದ ಕೈಚೆಲ್ಲಿ ಕೂತ. ಆಗ ಸಾಮ್ರಾಟರು ತಮ್ಮ ಬೆನ್ನ ನೆರಳಿನಂತಿರುವ ತಮ್ಮ ಆಲ್ಟರ್ ಈಗೋವನ್ನೂ ತೊರೆದು ಜಾಗ ಖಾಲಿಮಾಡಿರುವುದು ಬೆಳಕಿಗೆ ಬಂತು. ಸಾಮ್ರಾಟರ ಅನುಪಸ್ಥಿತಿಯಲ್ಲಿ ಅವರ ಆಲ್ಟರ್ ಈಗೋ ಅರ್ಧಕ್ಕೆ ನಿಲ್ಲಿಸಿದ್ದ ಬಂದ್ರೆ ತಾರೆ ಸಂದರ್ಶನ ಪೂರೈಸುವ ಉಮ್ಮೇದಿನಲ್ಲಿ ನಾಪತ್ತೆಯಾಗಿತ್ತು. ಬಂದ್ರೆ ತಾರೆಯವರು ವಿಪರೀತದ ಡಯಟಿಂಗ್ ನಿಂದ ಸಣಕಲಾಗಿರುವುದನ್ನು ತನ್ನ ಎರಡು ಕಣ್ಣುಗಳಿಂದ ನೋಡಲಾರದೆ ಕಣ್ಣಿರು ಗರೆಯುತ್ತಿದ್ದ ಆಲ್ಟರ್ ಈಗೋವನ್ನು ತೊಣಚಪ್ಪ ಸಂತೈಸಿ ಕರೆದು ತಂದು ಸಾಮ್ರಾಟರ ಪತ್ತೆಗೆ ನೇಮಿಸಿದ. ಆಲ್ಟರ್ ಈಗೋ ಜೀವಿಗಳು ಪ್ರವೇಶಿಸಲು ಯೋಗ್ಯವಲ್ಲದ ಪ್ರದೇಶಗಳನ್ನೆಲ್ಲ ಹೊಕ್ಕು ಸಾಮ್ರಾಟರಿಗೆ ಹುಡುಕಾಡಿದ ಅವರ ಸುಳಿವೆಲ್ಲೂ ಸಿಕ್ಕಲಿಲ್ಲ.

ಕಡೆಗೆ ನಗಾರಿಯ ಸದಸ್ಯರೆಲ್ಲ ನಿರಾಶೆಯ ಮಡುವಲ್ಲಿ ಮುಳುಗಿರುವಾಗ, Yes We can ಮಂತ್ರದ ಒಡೆಯ, ಹಿರಿಯಣ್ಣ ಅಮೇರಿಕಾದ ಪ್ರಥಮ ಕರಿಯ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದರು. ಅಮೇರಿಕಾದ ಈ ಮಾಂತ್ರಿಕ ಮಾತುಗಾರನ ಮೋಡಿಗೆ ಸಿಲುಕಿ ತಮ್ಮ ಗೋಳನ್ನು ಮರೆಯುವುದಕ್ಕೆ ಎಲ್ಲರೂ ಟಿವಿ ಚಾಲೂ ಮಾಡಿ ಕೂತೆವು. ವ್ಯಾಪಾರಕ್ಕಾಗಿ, ಉದ್ಯೋಗ ಸೃಷ್ಟಿಗಾಗಿ ಭಾರತಕ್ಕೆ ಬಂದಿರುವ ಒಬಾಮನ ಬೆಂಬಲಕ್ಕೆಂದು ನಾವು ಮೈಕೊರೆಯುವ ಚಳಿಯಲ್ಲಿ ಅಮೇರಿಕನ್ ಕಂಪೆನಿಯ ಎಸಿ ಚಾಲೂ ಮಾಡಿ, ಪೆಪ್ಸಿ ಹೀರುತ್ತ, ಕೆ.ಎಫ್.ಸಿ ಕೋಳಿ ತೊಡೆಯನ್ನು ಮೆಲ್ಲತೊಡಗಿದೆವು. ಜಗತ್ತಿನ ಶ್ರೀಮಂತ ರಾಷ್ಟ್ರದ ಗನಘಂಭೀರ ಅಧ್ಯಕ್ಷರು ಕೂತಿದ್ದಾರೆ. ಅವರೆದುರು ಪುಟ್ಟ ಮಕ್ಕಳು ಕುಣಿಯುತ್ತಿದ್ದಾರೆ. ಕಾನ್ವೆಂಟ್ ಶಾಲೆಯಲ್ಲಿ, ಮನೆಯಲ್ಲಿ ಎಂದೂ ತೊಟ್ಟಿರದ ಬಟ್ಟೆಗಳನ್ನು ತೊಟ್ಟು ಎಂದೂ ಕೇಳಿರದ ಹಾಡಿಗೆ ಎಂದೂ ಕಂಡಿರದ ವ್ಯಕ್ತಿಯ ಎದುರು ನೃತ್ಯ ಮಾಡುವ ದೈನೇಸಿ ಸ್ಥಿತಿಯ ಬಗ್ಗೆ ಮರುಗುತ್ತ ಮಕ್ಕಳೂ ಗಂಭೀರವಾಗಿದ್ದರು. ಇದ್ದಕ್ಕಿದ್ದಂತೆ ಏನೋ ಮಾಂತ್ರಿಕವಾದದ್ದು ಸಂಭವಿಸಿತು. ಗಂಭೀರವಾಗಿ ಕುಳಿತಿದ್ದ ಒಬಾಮ ವೇದಿಕೆಯ ಮೇಲೆ ನಡೆದರು. ಮಕ್ಕಳು ಹಾಕುತ್ತಿದ ಹೆಜ್ಜೆಗಳನ್ನು ಅನುಕರಿಸತೊಡಗಿದರು. ಭಾರತದ ನೆಲದಲ್ಲಿ ನಿಂತು ಭಾರತದ ಟ್ಯೂನಿಗೆ ಹೆಜ್ಜೆ ಹಾಕಿಬಿಟ್ಟರು.

ನಮ್ಮಿಡೀ ತಂಡಕ್ಕೆ ಆಕಾಶವೇ ಕಳಚಿ ಖಾಲಿಯಾದ ಕೆ.ಎಫ್.ಸಿಯ ರಟ್ಟಿನ ಡಬ್ಬಿಯಲ್ಲಿ ಬಿದ್ದ ಹಾಗಾಯ್ತು. ಅಮೇರಿಕಾದ ಅಧ್ಯಕ್ಷ ಭಾರತದ ಜನರ ಮನರಂಜನೆಯ ವಸ್ತುವಾದ ವ್ಯಂಗ್ಯದ ಸೃಷ್ಟಿ ಹುಲುಮಾನವರಿಂದ ಸಾಧ್ಯವಿಲ್ಲದು. ಗಂಭೀರನಾದ ಭಗವಂತನಿಗೂ ಇಂತಹ ಸನ್ನಿವೇಶವನ್ನು ಸೃಷ್ಟಿಸುವ ಆಸಕ್ತಿ ಇಲ್ಲ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಇಂತಹ ಅಪೂರ್ವ ಘಟನೆ ಘಟಿಸಿತೆಂದರೆ ಅಲ್ಲಿ ಸಾಮ್ರಾಟರು ಇರಲೇಬೇಕು ಎಂದು ನಮಗೆ ಕ್ಷಣಮಾತ್ರಕ್ಕೆ ಹೊಳೆದುಬಿಟ್ಟಿತು.

ಕೂಡಲೆ ನಗಾರಿ ಬ್ಯುರೋದ ಮುಂಬೈ ಕಚೇರಿಗೆ ಸಾಮ್ರಾಟರ ಭಾವಚಿತ್ರವನ್ನು ಕಳುಹಿಸಿ ಪತ್ತೆ ಹಚ್ಚಿಸಲು ತಿಳಿಸಲಾಯ್ತು. ಯಾವುದೇ ಅಂತರಾಷ್ಟ್ರೀಯ ಬಿಕ್ಕಟ್ಟು ಏರ್ಪಡಬಾರದೆಂದು ಒಬಾಮ ದೇಶ ಬಿಡುವವರೆಗೆ ಕಾಯುವಂತೆ ತಿಳಿಸಲಾಯ್ತು. ಕೂಡಲೆ ಸಿಕ್ಕಿ ಬಿದ್ದ ಸಾಮ್ರಾಟರ ಮನವೊಪ್ಪಿಸಿ ಎಳೆ ತರುವುದರಲ್ಲಿ ಇಷ್ಟು ಸಮಯ ಘಟಿಸಿತು.

ಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರತಿಸ್ಪರ್ಧಿ ಪತ್ರಿಕೆಯು ಸಾಮ್ರಾಟರ ಆಗಮನದ ಸುದ್ದಿಯು ತಲುಪಿದ ಕೂಡಲೆ ಎಚ್ಚೆತ್ತಿದೆ. ಸೋಮವಾರ ಧರೆ ಸ್ಪೋಟಗೊಳ್ಳುವಂತಹ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬಹುಶಃ ಅದು ಸಾಮ್ರಾಟರು ನಗಾರಿಯ ಕೇಂದ್ರ ಕಛೇರಿಗೆ ಹಿಂದಿರುಗಿದ ಸುದ್ದಿಯನ್ನೇ ಮೊದಲು ಬ್ರೇಕ್ ಮಾಡುವ ಹೊಂಚು ಹಾಕಿಕೊಂಡಿದ್ದರೆ, ಈ ಮೂಲಕ ನಾವು ಅವರಿಗೆ ಮರುಕ ಸೂಚಿಸಲು ಇಚ್ಛಿಸುತ್ತೇವೆ.

 

 

ಮುಂದುವರೆದದ್ದು ಎಲ್ಲಿ?

6 ಆಕ್ಟೋ

picture-16