Archive | ಜುಲೈ, 2009

ನಗೆಸಾಮ್ರಾಟರ ಸಚ್ ಕಾ ಸಾಮ್ನಾ!

29 ಜುಲೈ

 

ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.

ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?

ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!

ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!

ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"

ಅದರಲ್ಲಿ ಸಾಮ್ಯತೆ ಅಂದರೆ ಎರಡೂ ಚಿತ್ರದ ನಾಯಕನಟ ಶಿವರಾಜ್ ಕುಮಾರ್. ಅದು ಬಿಟ್ಟರೆ ಓಮ್ ಕರುಳು ಕೊಚ್ಚುವ ರೌಡಿಸ್ಮ್ ಕತೆ ಆಗಿದ್ದರೆ, ತವರಿಗೆ ಬಾ ತಂಗಿ ಅಣ್ಣ-ತಂಗಿಯರ ಕರುಳು ಹಿಂಡುವ ಕತೆ ಹೊಂದಿದೆ.

ಆದರೆ ನಗೆಸಾಮ್ರಾಟರು ಮತ್ತೆ ಕೊಂಚವೂ ವಿಚಲಿತರಾಗದೇ, "ಎರಡೂ ಅಣ್ಣ-ತಂಗಿಗೆ ಸಂಬಂಧಪಟ್ಟ ಸಿನೆಮಾ!" ಎಂದಾಗ ಇದರಲ್ಲಿ ಖಂಡಿತಾ ಉತ್ತರ ಸುಳ್ಳಾಗುತ್ತದೆ ಅಂದುಕೊಂಡರೆ ಅದೂ ನಿಜವಾಗಿತ್ತು. 

ಆಗ ಎಲ್ಲರಿಗೂ ಅನುಮಾನ ಮೂಡಿದ್ದು ನಗೆಸಾಮ್ರಾಟರ ಮೇಲಲ್ಲ; ಪಾಲಿಗ್ರಾಫ್ ಮೆಶೀನ್ ಮೇಲೆ!

ಎಲ್ಲರೂ ಆ ಮೆಶೀನೇ ಸುಳ್ಳು ಹೇಳುತಿದೆ ಅಂದುಕೊಂಡರು.

ಆದರೆ ನಗೆಸಾಮ್ರಾಟರು ಮಾತ್ರ "ತಾನು ಹೇಳಿದ್ದೆಲ್ಲಾ ಸತ್ಯ, ಸತ್ಯವಲ್ಲದೇ ಬೇರೇನೂ ಹೇಳಿಲ್ಲ" ಅಂತ ಬೇಕಾದರೆ ಗೀತೆಯ ಮೇಲೇಕೆ, ತನ್ನ ಬ್ಯಾಂಕಿನ ಖಾತೆಯ ಮೇಲೆಯೂ ಪ್ರಮಾಣ ಮಾಡುವುದಾಗಿ ತಿಳಿಸಿದರು. ಯಾವುದಾದರೂ ಸಿನೆಮಾವನ್ನು ಲಾಜಿಕ್ಕನ್ನು ಪಕ್ಕಕ್ಕಿಟ್ಟು ನೋಡದೇ ಹೋದರೆ ತಲೆ ಎಕ್ಕುಟ್ಟಿ ಹೋಗೋಲ್ಲವಾ ಅಂತಲೇ ಕೇಳಿದರು! ಮಚ್ಚನ್ನು ಮದುವೆಯಾಗೋ ಹೀರೋ, ತನಗೆ ಎಂಗೇಜ್ ಮೆಂಟ್ ಆಗಿದ್ದರೂ ಮತ್ತೊಬ್ಬ ಹುಡುಗನಿಗೆ ಫೋನ್ ಮಾಡಿ ಸುಮ್ಮ ಸುಮ್ಮನೆ ’ನನ್ನನ್ನು ಹಾರಿಸ್ಕೊಂಡು ಹೋಗದೇ ಇದ್ದರೆ ನೀನು ಗಂಡಸೇ ಅಲ್ಲ" ಅನ್ನುವ ಹೀರೋಯಿನ್ನು, ಹೀರೋ ಎಂಟ್ರಿ ಸಾಂಗ್- ಒಂದು ಕನ್ನಡ ಭಾಷೆಯ ಮೇಲಿನ ಸಾಂಗ್- ಮರ ಸುತ್ತೋ ಡ್ಯೂಯೆಟ್ಟು ಹೀಗೆ ಚಿತ್ರವನ್ನು ಅರ್ಧ ಅಥವ ಒಂಡು ಘಂಟೆ ಹಾಡಿನಿಂದಲೇ ಮುಗಿಸುವ ಡೈರೆಕ್ಟರ್ರು, ಪರಭಾಷೆ ಚಿತ್ರದಲ್ಲಿ ಬಂದ ಕಾಮಿಡಿ ದೃಶ್ಯಗಳನ್ನು ಒಂದು pause ಕೂಡ ಬಿಡದೇ ಎತ್ತಿಕೊಳ್ಳುವ ಹಾಸ್ಯಗಳು, ಇವನ್ನೆಲ್ಲಾ ಲಾಜಿಕ್ಕಿಟ್ಟು ನೋಡೋಕಾಗ್ತದಾ?

ಸರಿ, ಆದರೆ ಓಂ- ತವರಿಗೆ ಬಾ ತಂಗಿ ಚಿತದಲ್ಲಿ ಅಣ್ಣ-ತಂಗಿ ಸಾಮ್ಯತೆ ಹೇಗೆ?

ನಗೆಸಾಮ್ರಾಟರು ಒಂದೆರಡು ಬಾರಿ ತಲೆಕೆರೆದುಕೊಳ್ಳುವುದರೊಳಗಾಗಿ ನೆನಪಾಗಿತ್ತು, ಅದು ಅವರು ಥಿಯೇಟರ್ ನೊಳಗೆ ಲಾಜಿಕ್ಕನ್ನು ಜೇಬಿನಲ್ಲಿಟ್ಟು ಕೂತಿರದ ಕಾಲ.

ಪೋಸ್ಟರ್ ನೋಡದೇ ಬರಿಯ ಟೈಟಲ್ ನೋಡಿ ದೇವರ ಚಿತ್ರ ಅಂದುಕೊಂಡು ಓಂ ಚಿತ್ರ ನೋಡಲು ಬಂದಿದ್ದರು. ಶಿವರಾಜ್ ಕುಮಾರ್ ಗೆ ಅದರಲ್ಲಿ ಸತ್ಯ ಅನ್ನುವ ರೌಡಿಯ ಪಾತ್ರ. ರೌಡಿಸ್ಮ್ ಚಿತ್ರ ಅಂದರೆ ಒಬ್ಬ ರೌಡಿ ಅವನ ಬಾಲದಂತೆ  ಚೇಲಾಗಳು. ಈ ಚೇಲಾಗಳು ಆ ರೌಡಿ(ಚಿತ್ರದಲ್ಲಿ ನಾಯಕ)ಯನ್ನು ಅಣ್ಣಾ ಅಂತಲೇ ಮಾತಾಡಿಸುತ್ತವೆ, ಅಂದರೆ ನಾಯಕಿ ಅತ್ತಿಗೆಯಾಗಬೇಕು ಅಲ್ಲವೇ?

ಹಾಗಾಗದು, ನಾಯಕಿಯನ್ನೂ ಚೇಲಾಗಳು ಅಕ್ಕಾ ಅಂತಲೇ ಕರೆಯುತ್ತವೆ. ನಾಯಕ-ನಾಯಕಿಯನ್ನು ಅಣ್ಣ-ತಂಗಿ ಸಂಬಂಧವಾಗಿಸುತ್ತದೆ!

ಮೊದಲು ದೇವರ ಚಿತ್ರ ಅಂದುಕೊಂಡಿದ್ದ ಸಾಮ್ರಾಟರಿಗೆ ಓಂ ಅಂತಹ ಚಿತ್ರವಾಗದೇ ಒಂದು ಶಾಕ್ ಆಗಲೇ ನೀಡಿದ್ದರು ಚಿತ್ರದ ನಿರ್ದೇಶಕರು. ಚೇಲಾಗಳು ಶಿವರಾಜ್ ಕುಮಾರ್ ರನ್ನು ಅಣ್ಣ ಅಂತಲೂ ನಾಯಕಿ ಪ್ರೇಮಾಳನ್ನು ಅಕ್ಕಾ ಅಂತಲೂ ಕರೆಯುತಿರುವಾಗ ಈ ಚಿತ್ರವನ್ನು ಸಾಯಿಪ್ರಕಾಶ್ ಲೆವೆಲ್ ನ ಅಣ್ಣ-ತಂಗಿ ಚಿತ್ರ ಅಂದುಕೊಂಡು ನೋಡಿ ಸಾಮ್ರಾಟರು ಸುಸ್ತಾದರು ಅಂತ ಬೇರೆ ತಿಳಿಸಿಹೇಳಬೇಕೆ?

ಒಟ್ಟಿನಲ್ಲಿ ಹಾಳು ಲಾಜಿಕ್ಕುಗಳು. ಈ ಲಾಜಿಕ್ಕಿಟ್ಟುಕೊಂಡು ನೋಡಿದರೆ ಸಿನೆಮಾ ಎಲ್ಲಿ ಅರ್ಥವಾಗಬೇಕು ಅಂತ ಸಾಮ್ರಾಟರು ಗೊಣಗಿದರು!

ವಿಜಯ ಕರ್ನಾಟಕ, ಇ‘ಧ’ನ್ನು ಸರಿ ಪಡಿಸಿಕೊಳ್ತೀರಾ?

27 ಜುಲೈ

– ರಂಜಿತ್ ಅಡಿಗ, ಕುಂದಾಪುರ

ಕ್ರಿಕೆಟ್ಟಿನ ಪ್ರಥಮ ಪಾಠವನ್ನು, ಚಿಕ್ಕ ಹುಡುಗರಿಗೂ ಅರಿವಿರುವ ಸಿಲ್ಲಿbad times of media
ಮಿಸ್ಟೇಕನ್ನು  ಸಚಿನ್ ತೆಂಡುಲ್ಕರ್ ಮಾಡಿದರೆ, ಅವನಿಗೆ ಏನನ್ನಬೇಕು?

ಈ ಪ್ರಶ್ನೆ ಕಾಡಿದ್ದು ನಿನ್ನೆಯ ( ಜುಲೈ ೧೯) ವಿಜಯ ಕರ್ನಾಟಕವನ್ನು ಓದಿದಾಗ.
ಸಾಪ್ತಾಹಿಕ ಬಿಟ್ಟು ನೋಡಿದರೆ ಸಂಡೇ ವಿಕ ದ ಯೂಎಸ್ಪಿ ಶ್ರೀವತ್ಸ ಜೋಶಿರವರ
ಪರಾಗಸ್ಪರ್ಶ ಮತ್ತು  ಭಟ್ಟರ ಜನಗಳಮನ ಅಂಕಣ ಅನ್ನಬಹುದು. ಬೆಳಗೆರೆ ಬರೆದದ್ದು ಹಾಯ್
ಬೆಂಗಳೂರ್ ಮತ್ತು ದಟ್ಸ್ ಕನ್ನಡ ಓದುಗರನ್ನು ಹೊರತುಪಡಿಸಿ ಅಂತ ಡಿಸ್ ಕ್ಲೈಮರ್
ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಅಲ್ಲಿ ಬಂದದ್ದೇ ಕಾಲಕ್ರಮೇಣ ಇಲ್ಲಿ ಪುನರ್ಜನ್ಮ
ಪಡೆಯುತ್ತದೆ. ಅದರ ಓದುಗರೂ ವಿ.ಕ. ದ ಓದುಗರೂ ಬೇರೆ ಬೇರೆ ಅನ್ನುವುದು ಭಟ್ಟರ ನಂಬಿಕೆ
ಅನ್ನಿಸುತ್ತದೆ.

ಹಾಗೆಯೇ ಭಾನುವಾರ ಪಿ. ತ್ಯಾಗರಾಜ್ ರ ಚಾಟಿ-ಚಟಾಕಿ ಅಂಕಣ ಕೂಡ ಬಹಳ ಕುತೂಹಲ ಮತ್ತು
ಮಜಭರಿತವಾಗಿರುತ್ತದೆ. ಆದರೆ  ಕುತೂಹಲ, ಮಜಾ, ವಿವರಗಳಿದ್ದರೆ ಸಾಕೆ? ಸಾರಾಸಗಟಾಗಿ
ಕನ್ನಡದ ಕಾಗುಣಿತ ತಪ್ಪುಗಳೂ ಓದುವಾಗ ಅಡ್ಡಿಪಡಿಸುತ್ತದಲ್ಲ? ನಿನ್ನೆಯ ” ಕಸ್ತೂರಿ
ರಂಗನ್, ವಿಷ್ಣುಗೆ ಕಾಡಿದ್ದ ಆ ಪತ್ರಕರ್ತರು!” ಎಂಬ ಶೀರ್ಷಿಕೆಯ ಚಾಟಿ-ಚಟಾಕಿ
ಗಮನಿಸಿ.  ಅದರಲ್ಲಿ ಸಿನೆಮಾ ಪಿ.ಆರ್.ಓ.,  ಡಿ. ವಿ. ಸುಧೀಂದ್ರ ರ ಪ್ರಸ್ತಾಪ
ಬರುತ್ತದೆ. ಅಂಕಣದಲ್ಲಿ ಎಲ್ಲೆಲ್ಲಿ ಸುಧೀಂದ್ರ ಅಂತ ಬರಬೇಕಿತ್ತೋ ಅಲ್ಲೆಲ್ಲಾ
ಸುದೀಂಧ್ರ ಅಂತಲೇ ಪ್ರಕಟವಾಗಿದೆ. ಒಂದು ಸಲ ಹಾಗಾಗಿದ್ದರೆ ಮುದ್ರಣ ರಾಕ್ಷಸನ ಸಮಸ್ಯೆ
ಅಂದುಕೊಂಡು ಸುಮ್ಮನಿರಬಹುದು, ಆದರೆ ೭ ಸಲ ಹಾಗಾದರೆ ಕಣ್ತಪ್ಪಿನಿಂದಾದದ್ದು
ಎನ್ನಲಾಗುವುದೇ? ಹಾಗೇನೆ “ಅವಾಕ್ಕಾದರು” ಪದ “ಅವಕ್ಕಾದರು” ಅಂತಲೇ ಬರುತ್ತದೆ.
ಅವಕ್ಕೆ+ಆದರು ಮತ್ತು ಅವಾಕ್+ಆದರು ಎರಡು ಪದಕ್ಕೂ ವ್ಯತ್ಯಾಸ ಇದೆಯಲ್ಲವೇ? ಇಂತಹ
ಚಿಕ್ಕಪುಟ್ಟ ತಪ್ಪನ್ನು ಎತ್ತಿಹಿಡಿಯಲು ಮುಜುಗರವಾದರೂ ಹೊಸ ಕನ್ನಡ ಓದುಗರನ್ನು
ತಪ್ಪುದಾರಿಗೆ ಎಳೆಯುವ, ದೈನಂದಿನ ಓದುಗರಿಗೆ ಸಲೀಸು ಓದಿಗೆ ಅಡ್ಡಿಯಾಗುವ
ಪ್ರಮಾದಗಳಾಗಬಾರದಲ್ಲವೇ?

ಹಿಂದಿ ಗಾಯಕರು ಕನ್ನಡ ಚಿತ್ರಗೀತೆ ಹಾಡುವಾಗ ಅಥವ ಟೀವಿ ನಿರೂಪಕರು ಕನ್ನಡ ಪದ
ಉಚ್ಚಾರಣೆಯನ್ನು ತಪ್ಪಾಗಿ ಮಾಡಿದರೆ ಅದನ್ನು ದೊಡ್ಡ ವಿಷಯವನ್ನಾಗಿ ಪರಿವರ್ತಿಸುವ
ಪತ್ರಕರ್ತರು ಅಂಥ ಚಿಕ್ಕ ದೋಷಗಳು ತಮ್ಮಿಂದಾಗದಂತೆ ಎಚ್ಚರ ವಹಿಸಬೇಕಲ್ಲವೇ?

***********

ಉದಯವಾಣಿ ಸಾಪ್ತಾಹಿಕ ಸಂಪದ ವೆಂದರೆ ಬಹಳ ನಿರೀಕ್ಷೆಯಿಟ್ಟು ಓದುವ ದಿನಗಳಿತ್ತು. ಈಗ
ಬಹುಶಃ ಪತ್ರಿಕೆಯ ಸಂಪಾದಕರಿಗೇ ಒಂಥರ ನಿರ್ಲಕ್ಷ್ಯ. ಏನು ಹಾಕಿದರೂ ನಡೆಯುತ್ತೆ.
ಪ್ರಶ್ನಿಸುವವರಿಲ್ಲ ಅನ್ನುವ ಭಾವವೇ?

ಈ ಸಲದ ಉದಯವಾಣಿ (ಜುಲೈ ೧೯) ಸಾಪ್ತಾಹಿಕ ಸಂಪದ ನೋಡಿದರೆ ವಿಷಯ ಅರಿವಾಗುತ್ತದೆ. ಪೇಜ್
ಡಿಸೈನ್ ನಲ್ಲಿ ಅಕ್ಷರ ವಿನ್ಯಾಸದಲ್ಲಿ ತೋರುವ ಆಸಕ್ತಿ ಬೇರೆ ವಿಷಯದಲ್ಲೂ ತೋರಿದ್ದರೆ
ಸಂಪದ ಎಷ್ಟೊಂದು ಸಂಪದ್ಭರಿತವಾಗಿರುತ್ತಿತ್ತು!

೨ ನೇ ಪುಟದಲ್ಲಿ ಫೋಟೋ ವನ್ನು ಕಾಲು ಭಾಗ ಒಂದು ಪೇಜಿಗೆ ಮುಕ್ಕಾಲು ಭಾಗ ಮತ್ತೊಂದು
ಪೇಜಿಗೆ ಹಂಚಿಕೆ ಮಾಡಿದ್ದು ನೋಡಿದರೆ ಪತ್ರಿಕೆಯ ಸಂಪಾದಕರಿಗೆ ವಿಷಯವನ್ನು ಬರೀ
ಓದುವವರು ಮಾತ್ರ ಇರುತ್ತಾರೆ ಅನ್ನುವ ನಂಬಿಕೆ. ಒಳ್ಳೆಯ ಕಾಲಂ ಇದ್ದರೆ ಸಂಗ್ರಹಿಸಿಡುವ
ಓದುಗರೂ ಇರುತ್ತಾರೆ ಅನ್ನುವುದು ಮರೆತುಬಿಟ್ಟರಾ?

ಅದು ಹೋಗಲಿ, ಮೂರನೇ ಪುಟದ ಲಘು ಪ್ರಬಂಧ ಓದಿದರೆ ಮತ್ತೆ ಮುಂದೆ ಉದಯವಾಣಿ ಓದಲೇ ಬಾರದು
ಎಂಬ ಹಾಗಿದೆ. ಬರಹಗಳ ಕೊರತೆಯಾ ಉದಯವಾಣಿಗೆ?  ಬ್ಲಾಗುಗಳು ಹೆಚ್ಚಿರುವ ಇಂಥ ಸಮಯದಲ್ಲಿ
ಹೀಗೆ ನಿರ್ಲಕ್ಷ್ಯ ತೋರಿದರೆ ಯಾವ ಓದುಗರು ನಿಮ್ಮವರಾಗಿ ಉಳಿದುಕೊಳ್ಳುತಾರೆ
ಸಂಪಾದಕರೆ? ಅಲ್ಲದೇ ಬೇರೆ ಪತ್ರಿಕೆಗಳ ಸಾಪ್ತಾಹಿಕದಲ್ಲಿ ಆದಷ್ಟೂ ಸಾಹಿತ್ಯಕ್ಕಾಗಿ
ಮೀಸಲಿಟ್ಟರೆ ಉದಯವಾಣಿ ಸಾಪ್ತಾಹಿಕದ ಎರಡು ಪೇಜು ಆರೋಗ್ಯ ನುಂಗಿಹಾಕುತ್ತದೆ. ನಿಜ
ಆರೋಗ್ಯವಾಣಿ ಚೆನ್ನಾಗಿ ಬರುತ್ತಿದೆ; ಆದರೆ ಅದಕ್ಕೆ ಭಾನುವಾರವನ್ನು
ಮೀಸಲಿಡಬೇಕಿತ್ತೇ?  ಚಂದವಾಗಿ ಬರೆವ ನವನೀತ ಚುಟುಕಗಳು ಸುದ್ಧಿಯಿಲ್ಲದೇ ಮರೆಯಾಗಿವೆ.
ಬೇರೆ ಪತ್ರಿಕೆಗಳಲ್ಲಿ ವಾರದ ದಿನದಲ್ಲಿ ಎಲ್ಲೋ ಮೂಲೆಯಲ್ಲಿ ಓದಸಿಗುವ ಎಸ್ಸೆಮ್ಮೆಸ್
ವಾಕ್ಯಗಳು ಸಾಪ್ತಾಹಿಕ ಸಂಪದದ ಮುಡಿಗೇರಿವೆ. ಭಾನುವಾರದ ಚಂದದ ಮೂಡಿನಲ್ಲಿ ವಾರವಿಡೀ
ಡಿಸ್ಟರ್ಬ್ ಮಾಡಿದ ಎಸ್ಸೆಮ್ಮೆಸ್ಸುಗಳನ್ನೇ ಓದಬೇಕೆ? ಅದರ ಮಟ್ಟಿಗೆ ಸಾಹಿತ್ಯದ
ತುಣುಕುಗಳನ್ನು ನೀಡುವ ವಿ.ಕ. ದ ಐಡಿಯಾವೇ ಚೆನ್ನಾಗಿದೆ.

ಮಳೆ ಕುರಿತ ಮುಖಪುಟ ಬರಹಕ್ಕೆ, ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟರ ಕವಿತೆಗಳಿಗಾಗಿ
ಚಂದದ ಡಿಸೈನ್ ಗಾಗಿ ಮಾತ್ರ ಈ ಸಲದ ಉದಯವಾಣಿ ಸಾಪ್ತಾಹಿಕ ಸಂಪದಕ್ಕೆ ಹತ್ತರಲ್ಲಿ
ನಾಲ್ಕು ಅಂಕ!

ಚರ್ಚೆ: ಡರ್ಟಿ ಜೋಕೆಂಬ ಬೇಲಿ ಹಾರುವ ಹುಮ್ಮಸ್ಸು!

25 ಜುಲೈ

 

ಕೆಲವು ಬಗೆಯ ಜೋಕುಗಳಿವೆ. ಅವುಗಳು ಸಾಮಾನ್ಯ ಜೋಕುಗಳಿಗಿಂತ ಹೆಚ್ಚು ಚಲಾವಣೆಯಲ್ಲಿರುತ್ತವೆ. ಮೊಬೈಲುಗಳಲ್ಲಿ ಕ್ಷಣಮಾತ್ರದಲ್ಲಿ ಪ್ರತ್ಯಕ್ಷವಾಗಿ ಮೊಬೈಲಿಗ ಕಣ್ಣಾಡಿಸಿ ಆಸ್ವಾದಿಸಿ, ಅಲ್ಲಿಂದ ನಾಲ್ಕೈದು ವಿಳಾಸದಾರರಿಗೆ ರವಾನೆಯಾದೊಡನೆಯೇ ಪುರ್ರೆಂದು ಮೊಬೈಲ್ ಅಂಗಳದಿಂದ ಅಂತರಿಕ್ಷಕ್ಕೆ ಹಾರಿ ಬಿಡುತ್ತವೆ.

ಅವುಗಳಿಗೆ ಎಲ್ಲೆಡೆಯಲ್ಲೂ ಪ್ರವೇಶವಿಲ್ಲ. ಜೋಕುಗಳ ಸಮಾಜದಲ್ಲಿ ಅವು ಅಸೃಶ್ಯರಿದ್ದಂತೆ. ಅವುಗಳಲ್ಲಿ ಯಾರ ಮೇಲೂ ವೈಯಕ್ತಿಕ ನಂಜು ಕಾರಲಾಗಿರುವುದಿಲ್ಲ. ವ್ಯಕ್ತಿ ಕೇಂದ್ರಿತವಾದ ಹೀಯಾಳಿಕೆಯಿರುವುದಿಲ್ಲ. ಯಾರಿಗೂ ನೋವಾಗುವಂತಹ ಜನಾಂಗೀಯ ನಿಂದನೆಯಾಗಲಿ ಇರುವುದಿಲ್ಲ. ಆದರೂ ಅವುಗಳು ‘ಘೆಟ್ಟೋ’ಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುತ್ತವೆ.

ಅವುಗಳ ಗುಣಮಟ್ಟವನ್ನು ನಿರ್ಲಕ್ಷಿಸಲಾಗುವುದಿಲ್ಲ. ಜೋಕೊಂದರ ಸೃಷ್ಟಿಗೆ, ಅದರ ಉದ್ದೇಶ ಸಾರ್ಥಕವಾಗುವುದಕ್ಕೆ ಬೇಕಾಗುವ ಎಲ್ಲಾ ಬುದ್ಧಿವಂತಿಕೆ, ತಂತ್ರಗಾರಿಕೆ ಅದರಲ್ಲಿರುತ್ತದೆ. ಆದರೆ ಅವು ಗಳು ಮಾಮೂಲಿನ ಜೋಕುಗಳು ಪಡೆಯುವ ಗಾಳಿ ಬೆಳಕನ್ನು ಪಡೆದುಕೊಳ್ಳುವುದಿಲ್ಲ.

ಹೌದು, ಅವು ಪೋಲಿ ಜೋಕುಗಳು!

ಪೋಲಿ ಎಂಬ ಪದವನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ಒಂದು ಮಾನದಂಡದಲ್ಲಿ ಪೋಲಿಯಾಗಿ ಕಂಡ ಚಟುವಟಿಕೆ ಮಾನದಂಡ ಬದಲಾಯಿಸಿದಾಕ್ಷಣ ರಸಿಕತೆ ಎನ್ನಿಸಿಕೊಳ್ಳುತ್ತದೆ. ತನ್ನ ಮಗ ಮಾಡಿದರೆ ಅದು ರಸಿಕತೆ, ನಿನ್ನ ಮಗ ಮಾಡಿದರದು ವ್ಯಭಿಚಾರ ಎನ್ನುವ ಹಳೆಯ ಮಾತಿನಂತೆ ಮಾನದಂಡಗಳು ಬದಲಾಗುತ್ತವೆ.

ನಿಜಕ್ಕೂ ಪೋಲಿ ಜೋಕುಗಳಲ್ಲಿ ಇರುವುದು ಏನು? ಲೈಂಗಿಕತೆಯನ್ನು ವಿಜೃಂಭಿಸುವ, ಸುಪ್ತವಾಗಿರಿಸಿದ ಲೈಂಗಿಕ ವಾಸನೆಯನ್ನು ಕೆಣಕುವ ಗುಣ. ಕೆಲವು ಜೋಕುಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ, ಭೋಗದ ವಸ್ತುವಿನಂತೆ ಕಾಣುವ ಗುಣವೂ ಇರುತ್ತೆ. ಆದರೆ ನಮ್ಮ ಸಭ್ಯ ಸಮಾಜ ಅಂತಹ ಜೋಕುಗಳನ್ನು ನಿರ್ಬಂಧಿಸುವುದಕ್ಕೆ, ಅವುಗಳನ್ನು ಪೋಲಿ ಎಂದು ಕರೆಯುವುದಕ್ಕೆ ಹೆಣ್ಣಿನ ಗೌರವಕ್ಕೆ ಅವು ಉಂಟು ಮಾಡುವ ಧಕ್ಕೆಯೇ ಪ್ರಮುಖ ಕಾರಣವೇ? ಅಥವಾ ಎಲ್ಲಾ ಸಮಾಜಗಳಿಗೆ, ಎಲ್ಲಾ ಧರ್ಮಗಳಿಗೆ ಟಬೂ ಆಗಿರುವ ಲೈಂಗಿಕತೆಯ ಪ್ರಸ್ತಾಪವೇ ಅಸಾಧು ಎನ್ನುವುದೇ?

ನಗಾರಿ ರೆಕಮಂಡೇಶನ್ – 21

19 ಜುಲೈ

 

ಅಂತರ್ಜಾಲವೆಂಬ ಮಾಹಿತಿಯ ಆಗರದಲ್ಲಿ ಅಲೆದಾಡುವ ನಮಗೆ ಕಂಡ ನಗೆ ಬುಗ್ಗೆಗಳನ್ನು ನಮ್ಮ ಸಾಮ್ರಾಜ್ಯದ ವಿನಮ್ರ ಪ್ರಜೆಗಳೊಂದಿಗೆ ಹಂಚಿಕೊಳ್ಳುವ ಅಂಕಣವಿದು. ನೀವು ಕಂಡ ನಗೆಯುಕ್ಕಿಸುವ ಸಂಗತಿಗಳನ್ನು (ಅವು ವೆಬ್ ಸೈಟ್ ಆಗಿರಬಹುದು, ಯು ಟ್ಯೂಬಿನ ವಿಡಿಯೋಗಳಾಗಿರಬಹುದು) ಹಂಚಿಕೊಳ್ಳಲು ಇಲ್ಲೊಂದು ಕಮೆಂಟು ಹಾಕಿ ಸಾಕು.

picture-6334ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲದೆ ಹಾಯ್ ಬೆಂಗಳೂರು, ಕಸ್ತೂರಿ, ಸುದ್ದಿ ಸಂಗಾತಿಗಳಲ್ಲಿ ಹಾಸ್ಯ ಅಂಕಣಗಳನ್ನು ನಿರ್ವಹಿಸುತ್ತಿದ್ದ ಎಚ್. ಆನಂದರಾಮ ಶಾಸ್ತ್ರಿಯವರ  ಬ್ಲಾಗ್ ಅಕೌಂಟು ‘ಸಂಪದ’ದಲ್ಲಿದೆ.

ಹಾಸ್ಯದ ಬಗ್ಗೆ ಶಾಸ್ತ್ರಿಯವರು ಬರೆದ  ಸೊಗಸಾದ ಲೇಖನವೊಂದು ಇಲ್ಲಿದೆ. ಆ ಲೇಖನದ ತುಣುಕು ನಗೆ ನಗಾರಿಗಾಗಿ:

ಇಂದು ’ಮೂರ್ಖರ ದಿನ’. ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುವ ದಿನ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!
ಹಾಸ್ಯವೆಂಬುದು ಜಾಣರಿಂದ, ಜಾಣರಿಗಾಗಿ ಇರುವ ಜಾಣತನ. ಯಾರನ್ನಾದರೂ ಈ ದಿನ ನಾವು ’ಮೂರ್ಖ’ರನ್ನಾಗಿಸಲು, ಅರ್ಥಾತ್ ಬೇಸ್ತುಬೀಳಿಸಲು ಜಾಣತನವನ್ನೇನೋ ಉಪಯೋಗಿಸಬೇಕು, ಸರಿಯೇ, ಆದರೆ ಆ ಜಾಣತನವು ಮೋಸವೇ ಹೊರತು ಹಾಸ್ಯವಲ್ಲ. ಹಲವು ಸಲ ಅದು ಅಪಹಾಸ್ಯ!

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಬ್ಲಾಗ್ ಬೀಟ್ 22

18 ಜುಲೈ

 

ನಾವು ಮಾಡುವ ತಪ್ಪನ್ನು ನಮಗಿಂತಾ ಚೆನ್ನಾಗಿ ಯಾರ್ಯಾರು ಮಾಡಿದ್ದಾರೆ ಎಂದು ವಿವರವಾಗಿ ದಾಖಲಿಸುವ ಕಲೆಯನ್ನೇ ವಿಮರ್ಶೆ ಎನ್ನುವುದು. ನಮ್ಮ  ಪ್ರಮುಖ ಪತ್ರಿಕೆಗಳು ಇದನ್ನು ಮಿರ್ಚಿ, ಮಸಾಲಾ ಹೆಸರಿನಲ್ಲಿ ಮಾಡುತ್ತಿವೆ. ಪ್ರತಿ ಸಂಚಿಕೆಯಲ್ಲಿ ಇದನ್ನೇ ನಾವು ‘ಬ್ಲಾಗ್ ಬೀಟ್’ ಹೆಸರಿನಲ್ಲಿ ಮಾಡುತ್ತಿದ್ದೇವೆ.

ನಮ್ಮ ವಿಮರ್ಶೆಯ ಮೊನೆಗೆ ನಿಮ್ಮ ಬ್ಲಾಗೂ ತಾಕಬೇಕೆಂದಿದ್ದರೆ ಇಲ್ಲೊಂದು ಕಮೆಂಟ್ ಹಾಕಿ.

……………………..

ಬೊಗಳೆ

 

‘ಸ್ವಂತ ಮನೆ’ಯನ್ನು ಕಟ್ಟಿಕೊಳ್ಳುವುದರಲ್ಲಿ ಮಜಾವಾಣಿ ಆಯ್ತು ಈಗ ಬೊಗಳೆಯ ಸರದಿ! ನಾವಿನ್ನೂ ವರ್ಡ್ ಪ್ರೆಸ್ಸೆಂಬ ಮನೆ ಮಾಲೀಕನ ಮರ್ಜಿಯಲ್ಲಿ ಬದುಕುತ್ತಾ ಬಾಡಿಗೆ ಮನೆ ಸೊಗಸು ನೀವೇನು ಬಲ್ಲಿರಿ, ಈ ಜಗತ್ತೇ ಬಾಡಿಗೆ ಮನೆ, ಈ ದೇಹ ಬಾಡಿಗೆ ಮನೆ… ಬಾಡಿಗೆತನಕ್ಕೆಲ್ಲಿ ಕೊನೆ ಎಂದು ದೇವದಾಸ ಪದ ಹಾಡಿಕೊಳ್ಳುತ್ತಾ ಇದ್ದೇವೆ.

ಸ್ವಂತ ಮನೆ ಕಟ್ಟಿಕೊಂಡಿರುವ ಬೊಗಳೆಯಲ್ಲಿ ಎಂಪಿಗಳು ಎಮ್ಮೆಗಳಾಗಲು ಒಪ್ಪಲಿಲ್ಲವೇಕೆ ಎಂಬ ವರದಿಯಿದೆ.

ಮೋಟುಗೋಡೆ

 

ಮೋಟುಗೋಡೆಗೆ ಎದುರಾಗಿ ಚಲ್ಲಣವಿಲ್ಲದ ಚೋಟುಗಳನ್ನು ನಿಲ್ಲಿಸಿ ನೋಡಿಕೊಳ್ಳಿ ಎಂದು ಸವಾಲೆಸೆದು ತಲ್ಲಣ ಸೃಷ್ಟಿಸಿರುವ ಮೋಟುಗೋಡೆ ಬ್ಲಾಗಿನಲ್ಲಿ ಖ್ಯಾತರು ಮೋಟುಗೋಡೆಯನ್ನು ಜಿಗಿದು ಮಾಡಿದ ಸಾಹಸದ ದಾಖಲಾತಿ ಮುಂದುವರೆದಿದೆ. ಗಂಗಾಧರ ಚಿತ್ತಾಲರ, ಅಡಿಗರ ಗೋಡೆ ದಾಟಿದ ಸಾಹಸಗಳು ಇಲ್ಲಿವೆ

ಕೆಂಡಸಂಪಿಗೆ

 

ಮುದ್ರಣಕ್ಕೆ ಕಾಗದವನ್ನು ಬಳಸದ, ವರದಿಗಾರರಿಗೆ, ಬರಹಗಾರರಿಗೆ , ಅನಾಮಿಕ ಕಮೆಂಟುದಾರರಿಗೆ ಟಿಎ, ಡಿಎ, ಬಾಟಾ ಕೊಡದ   ಕೆಂಡಸಂಪಿಗೆಯಲ್ಲಿ ಕಾಸ್ಟ್ ಕಟಿಂಗ್ ನಡೆಯುತ್ತಿದೆಯಾ ಎಂಬ ಸಂಶಯ ಸಾಮ್ರಾಟರಿಗೆ ಬಂದಿದೆ.

ಜಗತ್ತಿನಾದ್ಯಂತ ಪತ್ರಿಕೆಗಳು ತಮ್ಮ ಹೆಚ್ಚುವರಿ ವರದಿಗಾರರನ್ನು, ಪ್ರೂಫ್ ತಿದ್ದುವ ಬುದ್ಧಿವಂತರನ್ನು ಮನೆಗೆ ಕಳಿಸುತ್ತಿದ್ದರೆ ಕೆಂ.ಸಂದಲ್ಲಿ ಅಪ್ರತಿಮ ವರದಿಗಾರ ಸುದ್ದಿ ಕ್ಯಾತನನ್ನೇ ಹೊರಗೆ ಅಟ್ಟಲಾಗಿದೆ.

ಈ ಬಗ್ಗೆ ಕೆಂ.ಸಂದ ಅತಿಥಿ ಸಂಪಾದಕರು ಕೊಂಚ ಗಮನ ಹರಿಸಲಿ ಎಂಬುದು ನಗೆ ಸಾಮ್ರಾಟರ ಕೋರಿಕೆ.

ಇನ್ನು ಅತಿಥಿ ಸಂಪಾದಕರ ಹೊಸತೊಂದು ಐಡಿಯಾ ಬಗ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ.

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

17 ಜುಲೈ

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದbad times of media ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

-ರಂಜಿತ್ ಅಡಿಗ, ಕುಂದಾಪುರ

ಚಿತ್ರ- ನಗುವಿಗೆ ಹತ್ರ

16 ಜುಲೈ

 

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

ಈ ಸಂಚಿಕೆ ಸ್ಯಾಂಪಲ್:

a1

ಫೋಟೊ ಅಂದ್ರೆ ನಂಗೆ ಸಂಕೋಚ!

ವಾರದ ವಿವೇಕ 29

15 ಜುಲೈ

……………………………….

ನೀವಂದುಕೊಂಡದ್ದು

ಸಿಗದಿದ್ದಾಗ

ಸಿಕ್ಕಿದ್ದು ಅನುಭವ

ಅಂದುಕೊಳ್ಳುವುದು ಜಾಣತನ.

……………………………….

ನಾವು ಹಾಜರ್!

15 ಜುಲೈ

ನಮ್ಮ ಸುದೀರ್ಘವಾದ ಬಿಟ್ಟಿ ವಿದೇಶ ಪ್ರಯಾಣವನ್ನು ಸಾಂಗವಾಗಿ ಪೂರೈಸಿಕೊಂಡು ನಾವು ಈ ದೇಶಕ್ಕೆ, ಈ ನಮ್ಮ ಸಾಮ್ರಾಜ್ಯಕ್ಕೆ ವಾಪಸ್ಸಾಗಿದ್ದೇವೆ. ನಾವು ಇಲ್ಲಿಲ್ಲದ ವೇಳೆಯಲ್ಲಿ ಸಾಕಷ್ಟು ರೋಚಕ ಘಟನೆಗಳು ನಡೆದು ಹೋಗಿವೆ. ಜಗತ್ತಿನಲ್ಲಿ ಅನೇಕ ಅಲ್ಲೋಲ ಕಲ್ಲೋಲಗಳು ಸಂಭವಿಸಿವೆ.ಆದರೆ ಇವ್ಯಾವಕ್ಕೂ ನಾವು ಜವಾಬ್ದಾರರಲ್ಲ ಎಂದು ಮತ್ತೊಮ್ಮೆ ಮನದಟ್ಟು ಮಾಡಿಕೊಡಲು ಬಯಸುತ್ತೇವೆ.

ನಾವು ಅಮೇರಿಕಾಗೆ ಕಾಲಿಟ್ಟದ್ದಕ್ಕೂ ಪಾಪ್ ತಾರೆ ಮೈಕೆಲ್ ಜಾಕ್ಸನ್ ಸತ್ತದ್ದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸಾರಿ ಸಾರಿ ಹೇಳಲು ಇಚ್ಚಿಸುತ್ತೇವೆ. ಕಪಿಲ್ ಸಿಬಲರ ಕ್ರಾಂತಿಕಾರಿ ಯೋಜನೆಗೂ, ಸೆಕ್ಷನ್ ೩೭೭ನ್ನು ಅಳಿಸಿ ಹಾಕುವ ಹುನ್ನಾರಕ್ಕೂ ನಮ್ಮ ಕುಮ್ಮಕ್ಕು ಇಲ್ಲ ಎಂದು ಸ್ಪಷ್ಟಪಡಿಸಬಯಸುತ್ತೇವೆ. ಇನ್ನ್ಯಾವುದೇ ಸಣ್ಣ ಪುಟ್ಟ ಮಹಾನ್ ಘಟನೆಗಳಿಗೆ ನಮ್ಮ ಹೆಸರನ್ನು ತಳುಕು ಹಾಕಿ ಕೆಲವು ಟ್ಯಾಬ್ಲಾಯ್ಡ್‌ಗಳು ಮಾತನಾಡುತ್ತಿದ್ದರೆ ನಾವದಕ್ಕೆ ಜವಾಬ್ದಾರರಲ್ಲ.

ಇನ್ನು ನಮ್ಮ ಅನುಪಸ್ಥಿತಿಯಲ್ಲಿ ನಮ್ಮ ಸಾಮ್ರಾಜ್ಯದಲ್ಲಿ ಜರುಗಿರುವ, ಜರುಗದಿರುವ ಕೆಲಸಗಳನ್ನು ನೋಡಿಕೊಳ್ಳಬೇಕಿದೆ. ಜೇಡರ ಬಲೆಗಳನ್ನು ಕೆಡವಿ, ಧೂಳೊರೆಸಿ ಸಾಮ್ರಾಜ್ಯವನ್ನು ಸ್ವಚ್ಛಗೊಳಿಸಿಕೊಳ್ಳಬೇಕಿದೆ. ನಗಾರಿ ಲಯ ತಪ್ಪಿದ್ದರೆ ಚೂರು ತದುಕಿ ಲಯಕ್ಕೆ ತರಬೇಕಿದೆ.

ಈ ನಡುವೆ ಇಷ್ಟು ದಿನಗಳ ಕಾಲ ನಾವಿಲ್ಲದೆ ವಿರಹ ವೇದನೆಯನ್ನು ಅನುಭವಿಸಿದ ನಮ್ಮ ಸಾಮ್ರಾಜ್ಯದ ಪ್ರಜೆಗಳಿಗೆ ಅಪೂರ್ವವಾದ ಭೂರಿ ಭೋಜನವನ್ನೇ ಸಿದ್ಧ ಪಡಿಸಿ ಬಡಿಸುವ ಸನ್ನಾಹದಲ್ಲಿದ್ದೇವೆ.

ಅಮೇರಿಕಾದ ಪ್ರವಾಸದ ಅಪೂರ್ವವಾದ, ಅಪಶ್ಚಿಮವಾದ ಪ್ರವಾಸ ಕಥನವನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮಗೆ ಓದಿಸುವ ಸಂಚು ರೂಪಿಸಿದ್ದೇವೆ. ಜೊತೆಗೆ ನಗೆ ನಗಾರಿಯ ಸದ್ದಿಗೆ ವೆರೈಟಿ ಬೆರೆಸುವ ಸಲುವಾಗಿ ಅನೇಕ ಹೊಸ ಧ್ವನಿಯ ಅಂಕಣಗಳನ್ನು ಪ್ರಾರಂಭಿಸುತ್ತಿದ್ದೇವೆ.

ಇದೆಲ್ಲದರ ಜೊತೆಗೆ ಬೋನಸ್ ಎಂಬಂತೆ ಒಂದು ಅತಿ ರುಚಿಕಟ್ಟಾದ ಐಟಂ ಸಿದ್ಧ ಪಡಿಸಿದ್ದೇವೆ. ನಾವಿಲ್ಲದ ಸಮಯದಲ್ಲಿ ಕನ್ನಡ ಬ್ಲಾಗ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ‘ವಿಮರ್ಶಕಿ’ ನಗೆ ನಗಾರಿಯಲ್ಲಿ ಎದೆ ಬಿಚ್ಚಿ ಮಾತಾಡಲಿದ್ದಾಳೆ! ನಾವು ಅಮೇರಿಕಾದಲ್ಲಿದ್ದರೂ ನಮ್ಮ alter ego ಇತ್ತ ಈ ‘ಕಟು ವಿಮರ್ಶಕಿ’ಯ ಬೆನ್ನು ಬಿದ್ದು ಆಕೆಯ ಎಕ್ಸ್-ಕ್ಲೂಸೀವ್ ಸಂದರ್ಶನವನ್ನು ಮಾಡಿಕೊಂಡು ಬಂದಿದೆ.

ಎಲ್ಲವೂ ನಿಮಗಾಗಿ, ಈ ನಮ್ಮ ಸಾಮ್ರಾಜ್ಯದ ವಿನಮ್ರ ಪ್ರಜೆಗಳಿಗಾಗಿ!

ಇಂತಿ,

ನಿಮ್ಮ  ನಗೆ ಸಾಮ್ರಾಟ್