Archive | ಅಕ್ಟೋಬರ್, 2009

ಅನಾಮಿಕ ಬ್ಲಾಗ್ ಜೀವಿಯ ವಿಶೇಷ ಸಂದರ್ಶನ!

23 ಆಕ್ಟೋ

(ವಿಶೇಷ ಅತಿಥಿಯೊಂದಿಗಿನ ಈ ವಿಶಿಷ್ಟ ಸಂದರ್ಶನಕ್ಕಾಗಿ ನಗೆ ಸಾಮ್ರಾಟರಾದ ನಾವು ಖುದ್ದು ವಹಿಸಿದ ಕಾಳಜಿಯನ್ನು, ಅನುಭವಿಸಿದ ಕಷ್ಟಗಳನ್ನು ಈಗಾಗಲೇ ನಮ್ಮ ನಾಡಿನ ಪ್ರಜೆಗಳ ಗಮನಕ್ಕೆ ತಂದಿದ್ದೇವೆ. ಈ ಅಪರೂಪದ ಅತಿಥಿ: ಅನಾಮಿಕ ಬ್ಲಾಗ್/ ಕಮೆಂಟ್ ಜೀವಿಯ ಸಂದರ್ಶನ ಇದೋ ನಿಮಗಾಗಿ!)

ನಗೆ ಸಾಮ್ರಾಟ್: ನಮಸ್ಕಾರ.

ಅನಾಮಿಕ: ಹು, ಹೇಳಿ ಏನಾಗ್ಬೇಕು?

ನ.ಸಾ: ನೀವು ಯಾವಾಗಲೂ ಹೀಗೇ ಇರುತ್ತೀರಾ?

ಅನಾಮಿಕ: ಹೇಗೆ?

ನ.ಸಾ: ಹೀಗೆ ಈ ಡಬ್ಬಿಯೊಳಗೆ ಕೂತು, ಬರೀ ನಿಮ್ಮ ಎರಡು ಕೈಗಳು ಹೊರಗೆ ಒಳಗೆ ಆಡುವಷ್ಟು ಸ್ಥಳಾವಕಾಶ ಮಾಡಿಕೊಂಡುvishesha sandarshana ಹೀಗೇ ಕೂರುವಿರಾ? ನಿಮ್ಮ ಜೊತೆ ಮಾತಾಡುವವರಿಗೆ, ನೀವು ಮಾತಾಡಿಸುವವರಿಗೆ ನಿಮ್ಮ ಬಗ್ಗೆ ಏನೂ ತಿಳಿಯದ ಹಾಗೆ…

(ಸಾಮ್ರಾಟರು ತಮ್ಮ ಟೀಪಾಯ್ ಮೇಲಿನ ಇರಡು ಗಾಜಿನ ಕಪ್‌ಗಳಲ್ಲಿ ಒಂದನ್ನು ಡಬ್ಬಿಯತ್ತ ತಳ್ಳುವರು! ಅನಾಮಿಕ ಅತಿಥಿ ಮೆಲ್ಲಗೆ ಅದನ್ನು ಒಳಕ್ಕೆ ಎಳೆದುಕೊಳ್ಳುವುದು)

ಅನಾಮಿಕ: ಹು, ಹೌದು. ನಾನು ಯಾವಾಗಲೂ ಹೀಗೇ ಇರುವೆ. ಆದ್ರೆ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗುವಾಗ ಮಾತ್ರ ಡಬ್ಬಿಯಿಂದ ಹೊರಗೆ ಬರುವೆ. ಇದರಿಂದ ನಿಮಗೇನು ಪ್ರಾಬ್ಲಂ?

ನ.ಸಾ: ಏನಿಲ್ಲ, ನಾವು ಯಾರನ್ನು ಮಾತನಾಡಿಸುತ್ತಿರುವುದು ಎಂತಲೇ ನಮಗೆ ತಿಳಿಯದಿದ್ದರೆ ತುಸು ಗೊಂದಲವಾಗುತ್ತೆ. ಕನಿಷ್ಠ ಪಕ್ಷ ನಾವು ಮಾತನಾಡಿಸುತ್ತಿರುವುದು ಗಂಡನ್ನೋ, ಹೆಣ್ಣನ್ನೋ ಎಂಬುದರ ಸುಳಿವಾದರೂ ಸಿಕ್ಕಿದ್ದರೆ ನಮ್ಮ ಪದಪುಂಜಗಳ ಆಯ್ಕೆಯಲ್ಲಿ ತುಸು ಎಚ್ಚರವಹಿಸಬಹುದು.

ಅನಾಮಿಕ : ಬೇಕಿದ್ರೆ ಮಾತಾಡಿ, ಇಲ್ಲಾಂದ್ರೆ ಎದ್ದೋಗಿ. ನಾನೇನು ನನ್ ಸಂದರ್ಶನ ಮಾಡ್ರಿ ಅಂತ ನಿಮ್ಮುನ್ನ ಕಾಲು ಹಿಡ್ಕಂಡು ಕೇಳಿಕೊಂಡ್ನಾ? ಆ ನಿಮ್ಮ ಆಲ್ಟರ್ ಈಗೋನ, ನಿಮ್ಮ ಚೇಲನ್ನ ಉಗಿದು ಓಡಿಸಿದ್ದೆ ನಾನು. ನೀವು ಬಂದು ಬೇಡಿಕೊಂಡಿದ್ದಕ್ಕೆ ಒಪ್ಪಿಕೊಂಡಿದ್ದು. ಇಷ್ಟಕ್ಕೂ ನೀವೇನು ಸಾಚಾನ? ನಗೆ ಸಾಮ್ರಾಟ್ ನಿಜವಾದ ಮನುಷ್ಯನಾ ಅಥ್ವಾ ಯಾವನೋ ಅಡ್ಡ ಕಸುಬಿಯ ಪೆನ್ ನೇಮೋ ಅಂತ ಯಾರಿಗ್ಗೊತ್ತು? ನಿಮ್ ಫೋಟೊ, ಜಾತಕ, ಜನಿವಾರನ್ನ ಎಲ್ಲಾದ್ರೂ ಹಾಕಿದ್ದೀರಾ?

ನ.ಸಾ: ಹೋಗ್ಲಿ ಬಿಡಿ, ನಾವು ಸುಮ್ನೆ ತಮಾಶೆ ಮಾಡಿದ್ರೆ ನಮ್ ಬುಡಕ್ಕೆ ಕೈ ಹಾಕಿದ್ರಲ್ಲ!

ಅನಾಮಿಕ: ನಾನು ಹಿಂಗೇ ಡೇರ್ ಡೆವಿಲ್!

ನ.ಸಾ: (ಗೊಣಗಿಕೊಳ್ಳುತ್ತಾ) ನೋಡಿದ್ರೇನೇ ಗೊತ್ತಾಗುತ್ತೆ ಬಿಡಿ, ನಾಲ್ಕು ದಿಕ್ಕಿನಲ್ಲಿರುವ ರಟ್ಟಿನ ‘ಡೇರ್ ಡೆವಿಲ್’ ಮುಖ ನೋಡಿದ್ರೆ… (ಗಟ್ಟಿಯಾಗಿ) ಹೌದು, ಅದೇನು ಧೈರ್ಯ ನಿಮ್ಮದು, ಯಾರ್ಯಾರನ್ನೆಲ್ಲ ಉಗಿದು ಉಪ್ಪಿನಕಾಯಿ ಹಾಕಿ ಜಾಡಿ ತುಂಬಿಸಿದ್ದೀರಿ.

11 ಅದೆಲ್ಲ ಇರಲಿ, ನಮಗೊಂದು ಸಂಶಯ. ಮತ್ತೆ ಡಬ್ಬಿಯ ವಿಷಯಕ್ಕೆ ಬರ್ತೀನಿ ಅಂತ ಕೋಪ ಮಾಡ್ಕೋಬೇಡಿ, ನೀವು ಡಬ್ಬಿಯ ಹೊರಗೆ ಇದ್ದಾಗ ಹೇಗಿರುವಿರೋ ಡಬ್ಬಿಯ ಒಳಗೂ ಹಾಗೇ ಇರ್ತೀರಾ? ಡಬ್ಬಿ ನಿಮ್ಮ ಮಾತಿನ ಮೇಲೆ, ವರ್ತನೆಯ ಮೇಲೆ, ನಿರ್ಧಾರಗಳ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲವಾ?

ಅನಾಮಿಕ : ಅದೆಲ್ಲಿಂದ ಹುಟ್ಟುತ್ರೀ ನಿಮಗಿಂತಾ ಪ್ರಶ್ನೆಗಳು? ನಾನು ಈ ‘ಡಬ್ಬಿ’ ಬದುಕಿನ ಬಗ್ಗೆ ಒಂದು ಪುಸ್ತಕವನ್ನೇ ಬರೆದಿಟ್ಟಿದ್ದೀನಿ ಕಣ್ರೀ. ಆದ್ರೆ ಅದನ್ನ ಪ್ರಿಂಟು ಹಾಕಿಸೋಕೆ ಡಬ್ಬಿಯಿಂದ ಹೊರಗೆ ಬರ್ಬೇಕು. ಮೇಲಾಗಿ ನಾನು ಬರೆದಿದ್ದೆಲ್ಲಾ ಡಬ್ಬಿಯಲ್ಲಿ ಕುಳಿತೇ, ಡಬ್ಬಿಯಿಂದ ಹೊರಗೆ ಬಂದು ಪುಸ್ತಕ ಯಾರಿಗಾದ್ರೂ ಕೊಟ್ರೆ, ಡಬ್ಬಿಯಲ್ಲಿದ್ದದ್ದು ನಾನೇ ಅನ್ನಲಿಕ್ಕೆ ಸಾಕ್ಷಿ ಏನು ಎಂದು ಕೇಳ್ತಾರೆ. ಯಾರು ಬೇಕಾದರೂ ಡಬ್ಬಿಯೊಳಗೆ ಕೂತಿದ್ದಿರಬಹುದಲ್ಲವಾ ಅಂತ ಲಾ ಪಾಯಿಂಟ್ ಹಾಕ್ತಾರೆ ಕಣ್ರೀ.

ಈ ಡಬ್ಬಿ ಸಾಮಾನ್ಯವಾದದ್ದಲ್ಲ ಕಣ್ರೀ. ಹೊರಗಿದ್ದಾಗ ನಾನು ಸಭ್ಯ, ಮರ್ಯಾದಸ್ಥ, ಪ್ರಪಂಚ ಸರಿಯಾಗಿಯೇ ಇದೆ, ಬದಲಾಗಬೇಕಾಗಿರುವುದು ನಾನು ಎಂಬ ಧೋರಣೆಯುಳ್ಳ ಮನುಷ್ಯ. ತಪ್ಪು ಪಾಠ ಮಾಡಿದ ಲೆಕ್ಚರನ್ನು, ಲಂಚ ಕೇಳಿದ ಸಬ್ ಇನ್ಸ್‌ಪೆಕ್ಟರನ್ನು, ಐದು ವರ್ಷ ಗೋಳು ಹೋಯ್ದುಕೊಂಡು ಓಟು ಕೇಳೋಕೆ ಬಂದ ಫುಡಾರಿಯನ್ನು, ಯಾರನ್ನೂ ನಾನು ಬಯ್ಯುವುದಿಲ್ಲ. ‘ನಡೀತದೆ ಬಿಡು…’ ಅಂದುಕೊಂಡು ಆರಾಮಾಗಿದ್ದು ಬಿಡ್ತೀನಿ.

ನ.ಸಾ: ಇಂಟರೆಸ್ಟಿಂಗ್, ನಿಮ್ಮ ನಿಜ ವ್ಯಕ್ತಿತ್ವ ಹೀಗಿರುವಾಗ ನಿಮ್ಮ ಬರಹ, ಕಮೆಂಟುಗಳೇಕೆ ಹಾಗಿರುತ್ತವೆ?

ಅನಾಮಿಕ: ಹೇಳ್ತೀನಿ ಇರಿ. ಈ ಡಬ್ಬಿಯೊಳಗೆ ಕೂತಾಗ ಏನಾಗುತ್ತೋ ಗೊತ್ತಿಲ್ಲ. ಕೈಗಳು ಚಕಚಕನೆ ಓಡಾಡತೊಡಗುತ್ತವೆ, ಬಲಗೈ ಬೆರಳು ಎಡಗೈ ಹಸ್ತವನ್ನು ಪರಪರನೆ ಕೆರೆಯಲಾರಂಭಿಸುತ್ತವೆ. ಹೃದಯ ಬಡಿತ ಏರತೊಡಗುತ್ತದೆ. ಪಾಪಿ ಜಗತ್ತು ಜಗದ್ಧೋದ್ಧಾರಕನ ಆಗಮನಕ್ಕಾಗಿ ಕಾಯುತ್ತಾ ಕುಳಿತಿದೆ ಎಂದು ಭಾಸವಾಗುತ್ತದೆ. ಡಬ್ಬಿಯ ನಾಲ್ಕೂ ದಿಕ್ಕಿನಿಂದ ಪಾಂಚಜನ್ಯಗಳು ಮೊಳಗಲು ಶುರು ಮಾಡುತ್ತವೆ. ಜಗತ್ತು ಕಾಯುತ್ತ ಕುಳಿತ ಪ್ರವಾದಿ ನಾನೇ ಎಂದು ಎದೆಯುಬ್ಬುತ್ತದೆ. ಅಧರ್ಮದ ನಾಶಕ್ಕಾಗಿ ನಾನು ಕಟಿಬದ್ಧನಾಗುತ್ತೇನೆ.

ಅನಂತರ ಹಾಲಿನಲ್ಲೂ ಹಾಲಾಹಲ ಕಾಣಲು ಶುರುವಾಗುತ್ತದೆ, ಬಿಳಿಯ ಕಾಗದಲ್ಲಿಯೂ ಕಪ್ಪು ಕಲೆಗಳು ಕಾಣಲಾರಂಭಿಸುತ್ತವೆ. ಡಬ್ಬಿಯೊಳಗಿನ ಅಗೋಚರವಾದ ಕೈಗಳು ಕಣ್ಣ ಎದುರು ಬೂತಗನ್ನಡಿಯನ್ನು ಹಿಡಿದದ್ದು ಗೊತ್ತೇ ಆಗುವುದಿಲ್ಲ. ಇರುವೆಯು ಆನೆಯಾಗಿ ಬಿಟ್ಟಿರುತ್ತದೆ. ಅಡಿಕೆಯು ಬೆಟ್ಟವಾಗಿಬಿಟ್ಟಿರುತ್ತದೆ. ನಾನು ಹಿಂದೆಂದೂ ಕೇಳಿರದ ಬಯ್ಗುಳಗಳು ಸರಾಗವಾಗಿ ಹರಿದು ಬರಲಾರಂಭಿಸುತ್ತವೆ. ಎಂದೂ ನಾನು ಬಳಸಿರದ ಕೆಟ್ಟ ಪದಗಳು ಅದು ಹೇಗೋ ಕೀಲಿಸಲ್ಪಡುತ್ತವೆ. ಡಬ್ಬಿಯ ಒಳಗೆ ಸೃಷ್ಟಿಯಾದ ಈ ಬ್ಲಾಗ್ ಬರಹ, ಕಮೆಂಟನ್ನು ಡಬ್ಬಿಯಿಂದಲೇ ಗುರಿಯಿಟ್ಟು ಹೊರಗಿರುವವರಿಗೆ ಎಸೆಯುತ್ತೇನೆ. ತಗುಲಿದವರು ಉಜ್ಜಿಕೊಳ್ಳುತ್ತಾ ಹಿಂದೆ ನೋಡಿದಾಗ? ಏನಿದೆ, ಬರಿ ಡಬ್ಬಿ! ಡಬ್ಬಿಯೊಳಗೆ ನಾನು ಕೇಕೆ ಹಾಕಿ ನಗುತ್ತಿರುತ್ತೇನೆ!

ನ.ಸಾ: ಕುತೂಹಲಕರವಾಗಿದೆ ನಿಮ್ಮ ಡಬ್ಬಿಯ ಮಹಿಮೆ. ಆದರೆ ಹೀಗೆ ವಿಕೃತ ಆನಂದವನ್ನು ಪಡೆಯುವುದು ತಪ್ಪು ಅನ್ನಿಸುವುದಿಲ್ಲವೇ?

ಅನಾಮಿಕ: ಯಾವುದು ತಪ್ಪು? ತಮ್ಮ ಆರೋಗ್ಯ ಚೆನ್ನಾಗಿರಲಿ ಎಂಬ ಸ್ವಾರ್ಥಕ್ಕಾಗಿ ದಿನಪೂರ್ತಿ ಮುಖ ಗಂಟು ಹಾಕಿಕೊಂಡು ಎಲ್ಲರ ನಗುವನ್ನೂ ಕೊಲ್ಲುವ ಕಿಲ್ಲರ್‌ಗಳು ಪಾರ್ಕುಗಳಲ್ಲಿ ಹೊಕ್ಕಳು ಬಾಯಿಗೆ ಬರುವಂತೆ ಹಲ್ಕಿರಿದು ನಗುವುದು ತಪ್ಪಲ್ಲವಾ?

ನ.ಸಾ: ಇದು ಸರಿ ಉತ್ತರ ಅಲ್ಲ ಇವ್ರೇ, ಯಾರೋ ಮಾಡಿದ್ದು ತಪ್ಪು ಅಂತ ಸಾಬೀತು ಪಡಿಸಿದರೆ ನೀವು ಮಾಡಿದ ತಪ್ಪಿಗೆ ಮಾಫಿ ಸಿಕ್ಕುವುದಿಲ್ಲ. ಮೊರಾರ್ಜಿ ದೇಸಾಯಿ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಿದ್ದರು ಎಂದು ಸಾಬೀತು ಪಡಿಸಿದರೆ ನಿಮ್ಮ ಬಾಸಿನ ಕಾಫಿ ಲೋಟದಲ್ಲಿ ನಿಮ್ಮ ಮೂತ್ರ ತುಂಬಿದ ಆರೋಪದಿಂದ ನಿಮ್ಮನ್ನು ಖುಲಾಸೆಗೊಳಿಸಲು ಸಾಧ್ಯವೇ?

12

ಅನಾಮಿಕ: ಮುಚ್ರೀ ಬಾಯಿ, ಏನೋ ಯಾರೂ ಓದದ ಪತ್ರಿಕೆ ಅಂತ ನಿಮಗೆ ಸಂದರ್ಶನ ಕೊಡೋಕೆ ಒಪ್ಪಿಕೊಂಡ್ರೆ ನನ್ನೆದುರೇ ತಲೆಯೆಲ್ಲಾ ಮಾತಾಡ್ತೀರಾ? ನನ್ನ ಹಾಗೆ ಮುಖವಾಡ ಹಾಕಿಕೊಂಡು ಬರೆಯುವವರು ಮಾತ್ರವೇ ವಿಕೃತ ಆನಂದ ಪಡೀತಾರಾ? ಪ್ರತಿಯೊಬ್ಬರ ಬೆನ್ನ ಹಿಂದೆ ಸೃಷ್ಟಿಯಾಗುವ ಒಬ್ಬೊಬ್ಬ ವಿಮರ್ಶಕ/ ವಿಮರ್ಶಕಿಯೂ ವಿಕೃತ ಆನಂದ ಪಡೆಯುವಂಥವರೇ. ಮುಖಕ್ಕೆ ಮುಖ ಕೊಟ್ಟು ಹೇಳಲಾಗದ್ದನ್ನು ಬೆನ್ನ ಹಿಂದೆ ಆಡಿ ತೋರಿಸುವವರು ಹೇಡಿಗಳು ಆಗಲ್ಲವೇ? ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವಾಗ ಹಲ್ಕಿರಿಯುತ್ತಾ, ನಡುಬಗ್ಗಿಸಿ ಎಂಎಲ್‌ಎ ರೆಕಮಂಡೇಶನ್ ಲೆಟರ್ ಪಡೆದು ಟಿವಿಯಲ್ಲಿ ಆ ಪಕ್ಷದ ರಾಷ್ಟ್ರಾಧ್ಯಕ್ಷೆಯನ್ನು ಕಂಡಾಗಲೆಲ್ಲಾ ದೇಶ ಮಾರೋದಕ್ಕೆ ಹುಟ್ಟಿಬಂದ ಹಡಬೆ ಎಂದು ಬಯ್ಯುವ ಧೀರರಿಲ್ಲವೇ? ಇಂಟರ್ನಲ್ ಮಾರ್ಕಿಗಾಗಿ ವಿನಯವಂತಿಕೆಯ ಸೋಗು ಹಾಕಿಕೊಂಡು ನಟಿಸಿ ಮೇಷ್ಟ್ರು ಮರೆಯಾದಾಗ ‘ಮಗಾ, ಈ ಟಕಲನ ತಲೆ ನೋಡಿದ್ಯಾ ಕ್ಲಾಸಲ್ಲಿ? ಕೇತಾನ್ ಫ್ಯಾನ್ ಕಾಣಿಸ್ತಿತ್ತು, ನಾನು ಅದನ್ನ ನೋಡ್ಕಂಡೇ ಕ್ರಾಪು ಸರಿ ಮಾಡ್ಕಂಡೆ’ ಎಂದು ಡೈಲಾಗ್ ಬಾರಿಸುವ ಕೂಲ್ ಹುಡುಗರಿಲ್ಲವೇ? ಎದುರಲ್ಲಿ ಸಿಕ್ಕಾಗ ‘ಈ ಕಾಲದಲ್ಲಿ ಹೆಣ್ಣು ಸ್ವಂತ ಕಾಲ ಮೇಲೆ ನಿಲ್ಲಬೇಕಮ್ಮ, ಸ್ವಂತ ನೌಕರಿ ಇದ್ದರೇನೆ ಅವಳು ಇಂಡಿಪೆಂಡೆಂಟ್ ಇದ್ದಂಗೆ’ ಎಂದು ಬೆನ್ತಟ್ಟಿ ಆಕೆ ಮರೆಯಾದ ನಂತರ ‘ಗಂಡ ಸರಿ ಇದ್ದಿದ್ರೆ ಇವಳ್ಯಾಕೆ ಹಿಂಗೆ ದನದ ಚಾಕರಿ ಮಾಡ್ತಿದ್ಲು?’ ಎಂದು ಮೂಗುಮುರಿಯುವ ಆಫೀಸ್ ಹಸ್ಬೆಂಡುಗಳ ಹೌಸ್ ವೈಫ್‌‌ಗಳು ಸಾಚಾನ?

ನೋಡ್ರಿ ನಾನ್ ಹೇಳೋದು ಇಷ್ಟೇ, ನನ್ನಂಥವರು ನಾಯಿ ಇದ್ದ ಹಾಗೆ!

ನ.ಸಾ: ದಾಸರು ಗಲ್ಲಿಗೊಂದು ಹಂದಿಯಿರಬೇಕು ಎಂದು ಹೇಳಿದ್ದರು, ಇದೇನು ನಿಮ್ಮನ್ನು ನೀವು ನಾಯಿ ಎಂದು ಕರೆದುಕೊಳ್ಳುವಿರಿ?13

ಅನಾಮಿಕ: ಹೌದು, ನನ್ನಂತಹ ಹೆಸರಿಲ್ಲದ ವಿಮರ್ಶಕರು, ಕ್ರಿಟಿಕ್ಕುಗಳು ನಾಯಿಗಳೇ. ಯಾವ ಮಾಧ್ಯಮ ತಗಂಡ್ರೂ ಮನುಷ್ಯ ಬದಲಾಗಲ್ಲ. ನಾಯಿಯನ್ನ ಪಿಜ್ಜಾ ಹಟ್ಟಿನಲ್ಲಿ ಕೂರಿಸಿದರೂ ಅದು ಅಲ್ಲಿನ ರೆಸ್ಟ್ ರೂಮಿಗೇ ನೆಗೆಯುತ್ತೆ! ಟೀ ಶಾಪಿನ ಚರ್ಚೆಯೇ ಇರ್ಲಿ, ದಿನಪತ್ರಿಕೆಯ ಓದುಗರ ಅಂಕಣವೇ ಇರ್ಲಿ, ಮೊಬೈಲ್ ಬರ್ಲಿ, ಎಸ್.ಎಂ.ಎಸ್ ಬರ್ಲಿ, ಬ್ಲಾಗ್ ಬರ್ಲಿ, ಇಂಟರ್ನೆಟ್ ಡಿಬೇಟ್ ಫಾರಮ್ ಬರ್ಲಿ ಎಲ್ಲಾ ಕಡೆಯೂ ನಾಯಿಗಳು ಇದ್ದೇ ಇರುತ್ತವೆ. ನನ್ನಂತಹ ನಾಯಿಗಳು. ನಮಗೆ ಆನೆಯಂತಹ ಗತ್ತು, ಗಾಂಭೀರ್ಯವಿಲ್ಲ, ಕುದುರೆಯಂತಹ ವಯ್ಯಾರ, ಸೌಂದರ್ಯವಿಲ್ಲ, ಹಸು, ಎಮ್ಮೆಗಳಂತೆ ನಾವು ಉಪಯುಕ್ತರಲ್ಲ ಆದರೆ ಬೀದಿಯಲ್ಲಿ ಇವು ಓಡಾಡಿದರೆ ನಾವು ಮೂರು ಲೋಕ ಒಂದಾಗುವಂತೆ ಬೊಗಳುತ್ತೇವೆ. ಜನರಿಗೆ ರಸ್ತೆಯಲ್ಲಿ ಆನೆ, ಹಸು, ಕುದುರೆ ಇದೆ ಎಂದು ತಿಳಿಯುವುದಕ್ಕೆ ಮುನ್ನ ನಾವು ಬೊಗಳುವುದು ತಲುಪುತ್ತೆ. ಕೆಲವರು ಕಲ್ಲು ಬೀರುತ್ತಾರೆ, ಕೆಲವರು ನಮ್ಮ ಬೊಗಳುವಿಕೆಯಿಂದ ಕಳ್ಳರು ಓಡಿ ಹೋದರು ಎಂದು ಭಾವಿಸುತ್ತಾರೆ.

ನಿಜಕ್ಕೂ ಹೇಳುತ್ತೇವೆ, ನಾವು ಬೀದಿ ನಾಯಿಗಳಿದ್ದ ಹಾಗೆಯೇ. ಕಾರು, ಸ್ಕೂಟರು, ಬಸ್ಸು ಯಾವುದೇ ಚಲಿಸಲು ಬೊಗಳುತ್ತಾ, ರೊಚ್ಚಿನಿಂದ ಅದನ್ನು ಅಟ್ಟಿಸಿಕೊಂಡು ಹೋಗುತ್ತೇವೆ, ಚಲಿಸುತ್ತಿರುವ ವಾಹನ ವೇಗ ಹೆಚ್ಚಿಸಿಕೊಂಡಷ್ಟು ನಮ್ಮ ಹುಮ್ಮಸ್ಸು ಹೆಚ್ಚುತ್ತೆ. ನಾವು ನೆಗೆದು, ಜಿಗಿದು ಅಟ್ಟಿಸಿಕೊಂಡು ಹೋಗುವುದು ಅನೇಕರಿಗೆ ಹೀರೋಯಿಕ್ ಆಗಿ ಕಾಣುತ್ತೆ. ನಮಗೂ ನಾವು ಯಾವುದೋ ಸಿನೆಮಾ ಹೀರೋ ಇರಬೇಕು ಅನ್ನಿಸುತ್ತೆ. ಸಡನ್ನಾಗಿ ಚಲಿಸುತ್ತಿದ್ದ ವಾಹನ ನಿಂತು ಬಿಡುತ್ತೆ ಅಂದುಕೊಳ್ಳಿ. ವೇಗವಾಗಿ ಓಡುತ್ತಿದ್ದ ಬೈಕು ನಿಂತು ಬೈಕಿನ ಚಾಲಕ ಎದುರು ನಿಂತ ಎಂದುಕೊಳ್ಳಿ, ನಾವು ಆಗಸದಿಂದ ಬಿದ್ದ ಉಲ್ಕೆಯಾಗಿಹೋಗುತ್ತೇವೆ. ಏನು ಮಾಡಬೇಕೆಂದು ತೋಚದೆ ಬಾಲವನ್ನು ಬೆನ್ನಟ್ಟಿ ಎರಡು ಸುತ್ತು ತಿರುಗಿ ಹಿಂದಿರುಗಿ ಬಿಡುತ್ತೇವೆ.

ನ.ಸಾ: ಡಬ್ಬಿಯ ಒಳಗೇ ಕೂತು ಇಷ್ಟು ಪ್ರಾಮಾಣಿಕವಾಗಿ ನಿಮ್ಮ ಬಗ್ಗೆ ನೀವೇ ಮಾತಾಡುವುದು ನಿಜಕ್ಕೂ ಆಶ್ಚರ್ಯವಾಗುತ್ತೆ.

ಅನಾಮಿಕ: ನಂಗೂ ತಿಳೀತಿಲ್ಲ, ಅದೇನೋ ಅವಾಗ ಗಾಜಿನ ಲೋಟದಲ್ಲಿ ತಳ್ಳಿದ್ರಲ್ಲ ಅದನ್ನ ಕುಡಿದ ಮೇಲೆ ಹಿಂಗೆಲ್ಲ ಮಾತಾಡೋಕೆ ಶುರು ಮಾಡಿದ್ದು.

ನ.ಸಾ: ಸಂತೋಷ ಸಂತೋಷ, ಅದರಲ್ಲೇನೂ ಇರ್ಲಿಲ್ಲ, ಯೇಸು ಮುಟ್ಟಿದ ಶುದ್ಧವಾದ ನೀರು ಅಷ್ಟೇ. ಸಂದರ್ಶನಕ್ಕೆ ಧನ್ಯವಾದ.

ಉತ್ತರ ಕುಮಾರ: ತಿಳಿದಿಲ್ಲವೇ, ನಾವು ಪತ್ರಕರ್ತರು!

22 ಆಕ್ಟೋ

ಸಾಮ್ರಾಟರು ಉತ್ತರ ಕುಮಾರ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಇವರ ಪೌರುಷವೆಲ್ಲಾ ಕೀಬೋರ್ಡ್ ಮುಂದೆ. ಚಿಕ್ಕವರಿದ್ದಾಗ ಇವರು ಕೇಳುತ್ತಿದ್ದ ಪ್ರಶ್ನೆಗಳಿಗೂ ಈಗವರು ಕೊಡುವ ಉತ್ತರಗಳಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಮಂಗಳೂರು ವಿವಿಯ ವಿದ್ಯಾರ್ಥಿಯೊಬ್ಬ ಸಂಶೋಧನಾ ಪ್ರಬಂಧವನ್ನು ಬರೆದು ಅಲ್ಲಿಂದ ಗಡೀಪಾರಾಗಿದ್ದಾನೆ. ನಮ್ಮ ಪತ್ರಿಕೆಯ ಸಂಚಿಕೆಯೊಂದರಲ್ಲಿ ನಗೆ ಸಾಮ್ರಾಟರ ಉತ್ತರ ಪರಾಕ್ರಮವನ್ನು ಬಿಂಬಿಸುವ ಪ್ರತಿಕ್ರಿಯೆಗಳನ್ನು ಆಯ್ದು ಈ ಅಂಕಣದಲ್ಲಿ ಪ್ರಕಟಿಸಲಾಗುವುದು. ಈ ಉತ್ತರ ಕುಮಾರನಿಗೆ ಸಾರಥಿಯಾಗಿ ಯಾವ ಅರ್ಜುನನೂ ಇಲ್ಲವೆಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ!

uttara kumara

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

ranjit adiga:

ನೋಬೆಲ್ ನೋರಿಗೆ “ಒಸಾಮಾ” ಅಂತ ಹಾಕುವ ಬದಲು “ಒಬಾಮಾ” ಅಂತ ಸ್ಪೆಲ್ಲಿಂಗ್ ಮಿಷ್ಟೇಕು ಆಗಿರ್ಬೋದಾ ಸಾಮ್ರಾಟರೇ?

ನಿಮ್ಮನ್ನೂ ಸೇರಿಸಿ ಜನರ ರಿಯಾಕ್ಷನ್ನು , ಇಬ್ಬರಲ್ಲಿ ಯಾರಿಗೆ ದೊರೆತರೂ ಒಂದೇ ರೀತಿ ಆಗಿರಬಹುದು ಅನ್ನಿಸಿತು.

Nage samrat

ಒಸಾಮಾಗೆ ಶಾಂತಿ ನೋಬೆಲ್ ಬಹುಮಾನ ಕೊಡಲೇಬೇಕು ಎಂಬ ನಿಮ್ಮ ಆಗ್ರಹಕ್ಕೆ ನಮ್ಮ ಸಮ್ಮತಿಯಿದೆ. ಬಹುಮಾನವನ್ನು ಸ್ವೀಕರಿಸಲು ವೇದಿಕೆಗೆ ಬಂದಾಗಲಾದರೂ ಅವನನ್ನು ಹಿಡಿಯಲು ಸಾಧ್ಯವಾಗಬಹುದು!

ರಿಯಾಕ್ಷನ್ನು ಕೊಡುವುದೇ ಪತ್ರಿಕೆಯ ಕೆಲಸ. ಗಾಂಧಿಗೆ ನೊಬೆಲ್ ಸಿಕ್ಕದಿರುವಾಗ ‘ಗಾಂಧಿಗೇ ದೊರಕದ ನೊಬೆಲ್ ಅದೆಷ್ಟು ನೊಬೆಲ್?’ ಎಂದು ಮೂಗೆಳೆಯುತ್ತೇವೆ. ಗಾಂಧಿಗೆ ನೊಬೆಲ್ ಸಿಕ್ಕಿದ್ದಿದ್ದರೆ ಹಿಂದೂ ಮುಸ್ಲೀಂ ಗಲಭೆ, ಪಾಕಿಸ್ತಾನದ ಸೃಷ್ಟಿ ಎಲ್ಲವನ್ನೂ ಎಳೆದುತಂದು ಗಾಂಧಿಗೆ ಕೊಟ್ಟ ಮೇಲೆ ಅದೆಷ್ಟು ನೊಬೆಲ್? ಎಂದು ಕೇಳುತ್ತೇವೆ! ನಾವು ಪತ್ರಕರ್ತರು ನಿಮಗೆ ತಿಳಿದಿಲ್ಲವೇ?

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

Richard shitkins:

Hi Your Holiness Swami Hadhyatmanand,

Pardon me for not writing in your holy tongue as I am yet to get to know it well enough to be able to write in it.

I am visiting your country as part of my research project into
all kinds of shit versus the famous spirituality of your country of holy cows and bullshit which you guys worship.

May I seek to get some enlightenment from your holiness?

Thanks. Different religions and isms of the world have interpreted shit according to the tenets of their own beliefs. For your ready reference, I have reproduced them in a separate mail.

May I seek your indulgence in explaining how you view your own shit?

 

Adhyatmananda swamiji

Dear shitkins,
Accept my blessings.
I wish you all the very best for your research, i hope it goes on very well. you can find too much of shit for free in India. Finding it very easy here. If you do the same in other countries you would be robbed of your precious possessions.

our understanding about shitology is simple. You get what you seek, it may be shit or sat-chit-ananda. Knowing your interest and indulgence , i assure you you`ll get it enough!!

I bow to HIM present in you..

ದರಿದ್ರ ನಾರಾಯಣರ ಲಂಗದ ಮೋಹ!

16 ಆಕ್ಟೋ

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚಿನ ಕುರಿತು ನಾವು ಪ್ರಕಟಿಸಿದ ವರದಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪೂರ್ಣ ದಿಗಂಬರರಾಗಿರುವ ದರಿದ್ರ ನಾರಾಯಣರು ತಾವು ಸಂಪೂರ್ಣ ದಿಗಂಬರರು ಎಂದು ತೋರಿಸಿಕೊಡುವುದರ ಜೊತೆಗೆ ನಮ್ಮ ವರದಿಯಲ್ಲಿ ಚರ್ಚಾಸ್ಪದವಾದ ಸಂಗತಿಯಿದೆ ಎಂದು ತೋರಿದರು.

ನಮ್ಮ ಸಾಮ್ರಾಜ್ಯದ ಪ್ರಜೆಗಳ ಅನುಕೂಲಕ್ಕಾಗಿ ಅವರ ಪ್ರತಿಕ್ರಿಯೆಯನ್ನು ಅದಕ್ಕೆ ನಾವು ನೀಡಿದ ಸಮಾಧಾನಗಳೆರಡನ್ನೂ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು ಪ್ರಕಟಿಸುತ್ತಿಲ್ಲ. 

 

ನಗೆಸಾಮ್ರಾಟರೇ, ನಿಮ್ಮ ಮತ್ತು ನಿಮ್ಮ ಕು-ಚೇಲರ ವಿಚಾರಗಳನ್ನು ಓದಿದ ನಮಗೆ ನಿಮ್ಮ ಮೇಲೆ ಅತೀವ ಮರುಕವಾಗುತ್ತಿದೆ.

ನಟಿಯರ ಲಂಗದ ಕೆಂಪು ಕಂಡ ಗಂಡು ಗೂಳಿಗಳು ಉದ್ರೇಕಗೊಂಡು ರಭಸದ ಧಾಳಿ ಮಾಡುವುದು ಸಹಜಸ್ಥಿತಿ.
ಅದು ಬಿಟ್ಟು ಕೆಂಪು ನಿಶಾನೆ ಕಂಡ ಭಾ ರತಿಯ ರೈಲಿನಂದದಿ ಅಲ್ಲೇ ನಿಂತು ಬಿಟ್ಟು ವಿಜ್ಞಾನದ ಜಿಜ್ಞಾಸೆಯಲ್ಲಿ ನಿ-ರತ ರಾಗಿ ನಿಸರ್ಗದ ವಿರುದ್ಧ ಹೋಗುವುದ ಕಂಡು ಖೇದವಾಗುತ್ತಿದೆ. ಎಲ್ಲ ಗಂಡಸರೂ ನಿಮ್ಮಂತೆ ನಡೆದರೆ ಮನುಕುಲವು ತನ್ನ ಪರಿಸರ ನಾಶವಾಗುವ ಮೊದಲೇ ನಿರ್ವಂಶವಾಗಿ ಪರಿಸರ ಸರಿಪಟ್ಟು ಭೂ ಭಾರ ಕಡಿಮೆಯಾಗ ಬಲ್ಲುದೆ ಎಂಬ ಚಿಂತೆ ಕೊರೆಯುತ್ತಿದೆ.

ಈ ರತಿವಿರಕ್ತಿ ನೋಡಿ, ಮುಕ್ತಕಾಮದ ಪ್ರತಿಪಾದಕ (?) ಓಶೋ ಹಕ್ಕಿಯು ಹಾಡುವದನ್ನೇ ಮರೆತು ಬಿಟ್ಟಿತೇ ಎಂಬ ಭಯವಾಗುತ್ತಿದೆ.

ದಿಗಂಬರ ಪಂಥದತ್ತ ವಾಲಿದ ನಾವು ನಿಮಗಲ್ಲದಿದ್ದರೂ ನಿಮ್ಮ ನಟಿಯರಿಗಾದರೂ ದಿಗಂಬರ ಪಂಥದ ಸಹಜಸ್ತಿತಿಯ ದೀಕ್ಷೆ ಕೊಡಿಸುವತ್ತ ವಿಷಯಾಸಕ್ತರಾಗಿದ್ದೇವೆ.

– ದರಿದ್ರ ನಾರಾಯಣ ಬಟಾಬತ್ತಲ್

***

ಬಟಾಬತ್ತಲ್ ದರಿದ್ರ ನಾರಯಣರೇ,
ನೀವು ಸಲ್ಲಿಸಿದ ಅತೀವ ಮರುಕವನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಮುಂದಿನ ದೀಪಾವಳಿಯಷ್ಟರ ಹೊತ್ತಿಗೆ ನಾವು ಸಂಪೂರ್ಣ ದಿವಾಳಿಯೆದ್ದಿರದಿದ್ದರೆ ಖಂಡಿತವಾಗಿಯೂ ಅದನ್ನು ಹರಾಜು ಹಾಕದೆ ಕಾಪಾಡುತ್ತೇವೆ.

ಗೂಳಿಯ ಮಾತೆತ್ತಿದಿರಿ ಎಂಬ ಕಾರಣಕ್ಕಾಗಿ ನಮಗೀ ಸಂಶಯ ಉದ್ಭವಿಸಿರುವುದು… ಭಾ-ರತಿಯ ಗಂಡಸರು ನಮ್ಮಂತೆ ನಡೆದರೆ ನಿರ್ವಂಶವಾಗುವುದು ಸರಿ. ಅದರಿಂದ ಭೂಭಾರ ಕಡಿಮೆ ಹೇಗಾದೀತು? ನಿಮ್ಮ ಗಂಡು ಗೂಳಿಗಳು ರಭಸದ ದಾಳಿ ಮಾಡಲು ಉಳಿದೇ ಇರುತ್ತವಲ್ಲ! ಅಲ್ಲದೆ ಈ ವಿಜ್ಞಾನದ ಆರಾಧಕ ಕೆಂಪು ಗೂಳಿಗಳು ದಾಳಿ ಮಾಡುವಾಗಲೆಲ್ಲ ರಬ್ಬರ್ ಮಾಸ್ಕು ಹಾಕಿಕೊಂಡಿರ್ತವಲ್ಲ, ಇದರಿಂದ ನಿಮ್ಮ ನಿಸರ್ಗ ಅದೆಷ್ಟು ನೊಂದುಕೊಳ್ಳುವುದೆಂದು ತಿಳಿಯದೇ? ಕೆಂಪು ಸಿಗ್ನಲ್ ನೋಡಿದೊಡನೆ ನಿಮ್ಮ ಬುದ್ಧಿಯೂ ನಿಂತು ಬಿಡುವುದೇ ಕೆಲಸ ಮಾಡದೆ?

ಮುಕ್ತಕಾಮದ ಪ್ರತಿಪಾದಕನಾಗಿದ್ದ ಓಶೋ ಮುಕ್ತ ಚಿಂತನೆಯ ಪ್ರತಿಪಾದಕನೂ ಆಗಿದ್ದ ಅನ್ನೋದು ಕೊಂಚ ಮುಂದಕ್ಕೆ ಚಲಿಸುವ ಅಭ್ಯಾಸವಿರುವ ಸಾಮಾನ್ಯ ಮೆದುಳಿಗೂ ತಿಳಿಯುತ್ತದಂತೆ! ಸಿಗ್ನಲ್ ಇನ್ನೂ ಬದಲಾಗಿಲ್ಲವೇ? ಪರೀಕ್ಷಿಸಿ.

ದಿಗಂಬರ ಪಂಥಕ್ಕೆ ತಾವು ಎಡಗಡೆಯಿಂದ ವಾಲಿದಿರೋ ಇಲ್ಲ ಬಲಗಡೆಯಿಂದ ವಾಲಿದಿರೋ ಎಂಬುದು ಮುಂದೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಅಪರೂಪ ಸಂದರ್ಶನದಲ್ಲಿ ನಿಮ್ಮ ಜಾತಿಯ ಸದಸ್ಯನಿಂದಲೇ ಬಾಯಿ ಬಿಡಿಸುತ್ತೇವೆ. ಅಲ್ಲಿಯವರೆಗೆ ಬಾಯನ್ನ ಮಾತ್ರ (!!) ಮುಚ್ಚಿಕೊಂಡಿರಿ!

:)

– ನಗೆ ಸಾಮ್ರಾಟ್

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

10 ಆಕ್ಟೋ

 

(ನಗೆ ನಗಾರಿ ಅಂತರಾಷ್ಟ್ರೀಯ ಕ್ಯಾತೆ ಬ್ಯೂರೋ)

ಶಾಲೆಗೆ ಸೇರಿದ ಹುಡುಗನೊಬ್ಬನ ಮಾತು, ಪ್ರಶ್ನೆಗಳಿಗೆ ಆತ ನೀಡುವ ಉತ್ತರಗಳು ಆಕರ್ಷಕವಾಗಿದ್ದರೆ ಅವನ್ನೆಲ್ಲ ಕಂಡು ಆತ ತುಂಬಾ ಬುದ್ಧಿವಂತ ಇರಬೇಕು ಎಂದೆನ್ನಿಸುವುದು ಸಾಮಾನ್ಯ. ಆದರೆ ಹಾಗಂತ ಪರೀಕ್ಷೆ ನಡೆಸುವ ಮೊದಲೇ ಆತನಿಗೆ ಮೊದಲ ರ್ಯಾಂಕ್ ಕೊಟ್ಟುಬಿಡಲು ಸಾಧ್ಯವೇ?

ಅಧಿಕಾರಕ್ಕೆ ಬಂದು ಒಂದು ವರ್ಷವೂ ಆಗಿರದ, ಬರಾಕ್ ಒಬಾಮರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಕೊಟ್ಟಿರುವುದನ್ನು ಕಂಡು ಅನೇಕರು ಹೀಗೆ ಮೂಗೆಳೆಯುತ್ತಿದ್ದಾರೆ. ಯುದ್ಧ ದಾಹಿ ಅಮೇರಿಕಾ ದೇಶದ ಶಬ್ಧಕೋಶದಲ್ಲಿಯೂ ಸಹ ಶಾಂತಿ ಎಂಬ ಪದದ ಬದಲಾಗಿ ‘ಬಾಂಬು’ ಇರುವುದನ್ನು ಪತ್ತೆ ಮಾಡಿರುವ ಶಾಂತಿಯುತ ರಕ್ತಕ್ರಾಂತಿಯ ಧುರೀಣರು ಜಾಗತಿಕ ಆರ್ಥಿಕ ಕುಸಿತದ ಈ ಕಾಲದಲ್ಲಿ ನೊಬೆಲ್ ಸಂಸ್ಥೆ ಅಗ್ಗದ ಜೋಕ್ ಕಟ್ ಮಾಡಿದೆ ಎಂದು ಹೇಳಿಕೆ ನೀಡಿದೆ. ಕೆಂಪು ಬಣ್ಣದಲ್ಲಿರಬೇಕಾಗಿದ್ದ ಹೇಳಿಕೆಯ ಪಾಂಪ್ಲೆಟುಗಳು ನೀಲಿಗೆ ತಿರುಗಿದುದರ ಹಿಂದೆ ಸಿ.ಐ.ಎ ಕೈವಾಡವಿದೆಯೆಂದು ಹಳದಿ ಬಣ್ಣದ ಮತ್ತೊಂದು ಪಾಂಪ್ಲೆಟಿನಲ್ಲಿ ಹೇಳಲಾಗಿದೆ.

ಒಬಾಮರಿಗೆ ನೊಬೆಲ್ ಕೊಟ್ಟಿರುವುದರ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ, ಇರಾಕ್, ಇರಾನ್ ಹಾಗೂ ಸೌದಿ ಅರೇಬಿಯಾ ಎಂಬ ದುಷ್ಟತ್ರಯ ಮಿತ್ರಕೂಟದಲ್ಲಿ ಅಸಮಾಧಾನದ ಹೊಗೆ ಆಡಿರುವುದು ನಿಜವಾದರೂ ಜಗತ್ತಿನ ಯಾವ ಮೂಲೆಯಲ್ಲೂ ಗಟ್ಟಿ ಧ್ವನಿಯ ಪ್ರತಿಭಟನೆ ವ್ಯಕ್ತವಾಗಿರುವುದು ಯಾವ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ಕಳೆದುಕೊಂಡ ಸುದ್ದಿಯನ್ನು ಹೆಕ್ಕಿ ತೆಗೆಯುವಲ್ಲಿ ಜಗತ್ಪ್ರಸಿದ್ಧವಾಗಿರುವ ನಗೆ ನಗಾರಿಯು ಈ ಸುದ್ದಿಯ ಬೆನ್ನಟ್ಟಿತು. ಒಬಾಮರನ್ನು ನೊಬೆಲ್‌ಗೆ ಆಯ್ಕೆ ಮಾಡಿರುವುದನ್ನು ಉಗ್ರವಾಗಿ ವಿರೋಧಿಸಿರುವ ಸಂಘಟನೆಯೊಂದು ‘ಕೊಲೆಗಾರ ಒಬಾಮಗೆ ಶಾಂತಿ ನೊಬೆಲ್?’ ಎಂಬ ಶೀರ್ಷಿಕೆಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಒಂದು ವೇಳೆ ನೊಬೆಲ್ ಸಮಿತಿಯು ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಉಳಿದೆಲ್ಲ ದೊಡ್ಡ ಮಾಧ್ಯಮ ಸಂಸ್ಥೆಗಳು ಈ ಪುಟ್ಟ ಸಂಘಟನೆಯ ಪತ್ರಿಕಾ ಹೇಳಿಕೆಯನ್ನು ಕಸದ ಬುಟ್ಟಿಗೆ ಎಸೆದಿವೆ. ಆದರೆ ಪತ್ರಿಕಾ ಕಛೇರಿಯ ಕಸದ ಬುಟ್ಟಿಯನ್ನೇ ಅತಿಮುಖ್ಯ ಬಾತ್ಮೀದಾರನನ್ನಾಗಿ ಹೊಂದಿರುವ ನಗೆ ನಗಾರಿಯು ಆ ಬಹುಸಂಖ್ಯಾತ ಮೈನಾರಿಟಿಯ ಒಂಟಿ ಧ್ವನಿಗೆ ಬೆಂಬಲ ನೀಡುತ್ತ ಅವರ ಪ್ರಕಟಣೆಯನ್ನು  ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ:

ಮಾನವರ ಕ್ಯಾಲಂಡರಿನ ದಿನಾಂಕ: ೦೯-೧೦-೨೦೦೯
ಮಾನವರ ಭೂಪಟದ ಸ್ಥಳ : ನ್ಯೂಯಾರ್ಕ್

ಅಂತರಾಷ್ಟ್ರೀಯ ಕೀಟ ಪ್ಯಾರಕೀಟ ಸಂಘಟನೆಯ ಅಂಗ ಸಂಸ್ಥೆಯಾದ ಅಂತರಾಷ್ಟ್ರೀಯ ನಿರುದ್ಯೋಗಿ ನೊಣಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನಾನು, ಶ್ರೀಮತಿ ನೊಣಚಮ್ಮ ಈ ಪತ್ರದ ಮೂಲಕ ತಿಳಿಸುವುದೇನೆಂದರೆ…

ಅಮೇರಿಕಾದ ನೂತನ ಅಧ್ಯಕ್ಷರಾದ ಬರಾಕ್ ಹುಸೇನ್ ಒಬಾಮ ಮೇಲ್ನೋಟಕ್ಕೆ ಶಾಂತಿದೂತರಾಗಿ, ಜಗತ್ತಿನ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಮುತ್ಸದ್ಧಿಯಾಗಿ, ದೇವರ ಮಗನಾಗಿ, ಪ್ರವಾದಿಯಾಗಿ ಕಂಡುಬಂದರೂ ಅಂತರಂಗದಲ್ಲಿ ಆತನೂ ರಕ್ತದಾಹಿಯೇ. ಆತನ ದೇಹದಲ್ಲಿ ವರ್ಷವೊಂದಕ್ಕೆ ನಾಶವಾಗುವ ಕೆಂಪು ರಕ್ತ ಕಣಗಳೇ ಇದಕ್ಕೆ ಹಸಿ ಸಾಕ್ಷಿ.

ಒಬಾಮರ ಮೊದಲು ಎರಡು ಅವಧಿಗಳ ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದ ಬುಶ್ ನಿಜವಾದ ಅಹಿಂಸಾವಾದಿಯಾಗಿದ್ದರು ಎಂಬುದನ್ನು ನಮ್ಮ ಕೀಟ ಸಂಘಟನೆಯು  ನೆನೆಯಲು ಇಚ್ಛಿಸುತ್ತದೆ. ಅವರ ಕಾಲಾವಧಿಯಲ್ಲಿ ಅಫಘಾನಿಸ್ತಾನ, ಇರಾಕ್ ಮೊದಲಾದೆಡೆ ನೊಣಗಳ ಹಾಗೆ ಜನರು ಕೊಲ್ಲಲ್ಪಟ್ಟರೂ, ಅಬು ಗಾರಿಬ್, ಗ್ವಾಂಟನಮೋ ಸೆರೆಮಮನೆಗಳಲ್ಲಿ ಕೀಟಗಳಂತೆ ಖೈದಿಗಳು ತಿಕ್ಕಲ್ಪಟ್ಟರು. ಆದರೆ ಬುಶ್ ಆಶ್ರಯದಲ್ಲಿ ನಮ್ಮ ಕೀಟ ಜೀವ ಸಂಕುಲಕ್ಕೆ ಯಾವ ಬಾಧೆಯೂ ತಟ್ಟಲಿಲ್ಲ. ಕೀಟ ಪ್ರಪಂಚದ ಅಧಿದೇವತೆಯಂತೆ ಸನ್ಮಾನ್ಯ ಬುಶ್‌ರವರು ಅಧಿಕಾರ ನಡೆಸಿದರು.

ಇರಾಕ್ ಎಂಬ ದೇಶದ ರಕ್ಕಸ ಸರ್ವಾಧಿಕಾರಿಯನ್ನು ನೇಣಿಗೆ ಹಾಕಿ ಆ ದೇಶಕ್ಕೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟು ಉಡುಗೊರೆಯಾಗಿ ಪತ್ರಕರ್ತನೊಬ್ಬನ ಶೋ ಒಂದು ಗಾಳಿಯಲ್ಲಿ ತೂರಿ ಬಂದಾಗ ಬುಶ್ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ನಡೆಯಿತು. ತೂರಿ ಬಂದ ಶೂ ಸೋಲ್ ಹಾಗೂ ಬುಶ್ ಹಣೆಯ ನಡುವೆ ನಮ್ಮ ಕೀಟ ಸಂಘಟನೆಯ ಅಧ್ಯಕ್ಷರಾದ ಶ್ರೀ ನೊಣಯ್ಯನವರು ಸಿಕ್ಕಿ ಹಾಕಿಕೊಂಡಿದ್ದರು. ಒಂದು ವೇಳೆ ಶೂ ತಮ್ಮ ಹಣೆಗೆ ಅಪ್ಪಳಿಸಲು ಬುಶ್ ಅನುಮತಿಸಿದ್ದಿದ್ದರೆ ಅಂದು ನಮ್ಮ ಸಂಘಟನೆ ನಾಯಕನನ್ನು ಕಳೆದುಕೊಳ್ಳುತ್ತಿತ್ತು. ಪರಮದಯಾಳುವಾದ ಜಾರ್ಜ್ ಬುಶ್ ತಮ್ಮೆಲ್ಲಾ ಆತ್ಮಶಕ್ತಿಯನ್ನು ಒಗ್ಗೂಡಿಸಿ ನಮ್ಮ ನಾಯಕನ ಪ್ರಾಣವನ್ನು ಉಳಿಸಿದರು. ಅಂದೇ ನಾವು ವಿಶ್ವಸಂಸ್ಥೆಗೆ ಪತ್ರವನ್ನು ಬರೆದು ಸನ್ಮಾನ್ಯ ಬುಶ್‌ರಿಗೆ ವಿಶ್ವಶಾಂತಿ ನೊಬೆಲ್ ನೀಡಬೇಕು ಎಂದು ಒತ್ತಾಯಿಸಿದ್ದೆವು. ಪತ್ರವನ್ನು ಹೊತ್ತೊಯ್ದ ನಮ್ಮ ದೂತನು ವಿಮಾನ ನಿಲ್ದಾಣದ ಮಸ್ಕಿಟೊ ರಿಪೆಲೆಂಟ್ ದಾಳಿಗೆ ಬಲಿಯಾಗಿ ಪತ್ರವು ಗುರಿಯನ್ನು ತಲುಪುವಲ್ಲಿ ವಿಫಲವಾಯಿತು.

ಬುಶ್‌ರಂತಹ ಅಪ್ರತಿಮ ಕರುಣಾಮಯಿಯಿಂದ ಅಧಿಕಾರ ಕಸಿದುಕೊಂಡ ಒಬಾಮ ನಮ್ಮ ಸಂಸ್ಥೆಯ ಪಾಲಿಗೆ ಒಸಾಮ ಆದದ್ದು ದುರಂತ. ಜಾರ್ಜ್ ಬುಶ್‌ರಿಂದ ರಕ್ಷಿಸಲ್ಪಟ್ಟ ನಮ್ಮ ಅಧ್ಯಕ್ಷರು ತಮ್ಮ ಕೃತಜ್ಞತಾ ಪತ್ರವನ್ನು ಖುದ್ದಾಗಿ ಅಮೇರಿಕಾದ ಅಧ್ಯಕ್ಷರಿಗೆ ತಲುಪಿಸಲು ವೈಟ್ ಹೌಸ್ ಸೇರಿದ್ದರು. ಆದರೆ ಅಷ್ಟರಲ್ಲಿ ಬುಶ್‌ರನ್ನು ಪಟ್ಟದಿಂದ ಇಳಿಸಿ ಈ ಕರಿದೊರೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೂ ಬುಶ್ ಅಲಂಕರಿಸಿದ್ದ ಅಧ್ಯಕ್ಷ ಸ್ಥಾನದ ಮೇಲಿನ ಗೌರವದಿಂದ ನಮ್ಮ ನೊಣಯ್ಯನವರು ಒಬಾಮರಿಗೆ ಪ್ರೀತಿಯ ಆಲಿಂಗನ ಹಾಗೂ ಕೆನ್ನೆಯ ಮೇಲೆ ಹೂ ಮುತ್ತನ್ನು ನೀಡಲು ಮುಂದಾದರು.

ಆಗ ಸ್ಪೋಟಿಸಿತು ರಕ್ಕಸನ ಅಂತರಂಗದಲ್ಲಿದ್ದ ಕ್ರೋಧಾಗ್ನಿ! ರಾಷ್ಟ್ರೀಯ ಮಾಧ್ಯಮದ ಕೆಮರಾಗಳ ಸಮಕ್ಷಮದಲ್ಲಿಯೇ ಆತನ ರೌದ್ರಾವತಾರ ಅನಾವರಣಗೊಂಡಿತು. ಕಡು ನಿಷ್ಕರುಣಿ ಕೊಲೆಗಾರನ ಹಾಗೆ ಒಬಾಮ ನಮ್ಮ ಅಧ್ಯಕ್ಷರನ್ನು ಪಟ್ ಎಂದು ಹೊಡೆದುರುಳಿಸಿ ಬಿಟ್ಟರು. ಕ್ಷಣ ಮಾತ್ರದಲ್ಲಿ ನೊಣಯ್ಯನವರ ಪ್ರಾಣ ಪಕ್ಷಿ ಅನಂತದಲ್ಲಿ ಲೀನವಾಗಿ ಹೋಯ್ತು. ಇಂತಹ ಘೋರವಾದ ಪಾಪವೆಸಗಿಯೂ ಚೂರೂ ಪಶ್ಚಾತಾಪವಿಲ್ಲದೆ ಹತ ನೊಣಯ್ಯನವರ ಶವವನ್ನು ನ್ಯಾಪ್‌ಕಿನ್ನಿನಲ್ಲಿ ಎತ್ತಿ ಬಿಸಾಕಿ ಕೆಮಾರದವರಿಗೆ ಕವರ್ ಮಾಡಲು ನಗುತ್ತಾ ಹೇಳಿದರು. ಅನಂತರ ಕೈ ಒರೆಸಿಕೊಂಡು ಸಂದರ್ಶನ ಮುಂದುವರೆಸಿದರು.

ಈ ಘಟನೆಗೆ ನಮ್ಮ ಬಳಿ ವಿಡಿಯೋ ದಾಖಲೆಗಳಿವೆ. ಅದನ್ನಿಲ್ಲಿ ಲಗತ್ತಿಸಿದ್ದೇವೆ.

ಪತ್ರಿಕೆಗಳ ವರದಿಗಳ ಆಧಾರಗಳಿವೆ.

ಹೇಳಿ, ಇಂತಹ ನಿಷ್ಕರುಣೆಯ, ಕ್ರೂರ ರಕ್ತದಾಹಿ ಮನುಷ್ಯನಿಗೆ ಶಾಂತಿ ನೊಬೆಲ್ ಬಹುಮಾನ ನೀಡಿದರೆ ನೊಬೆಲ್ ಪ್ರತಿಷ್ಠಾನವನ್ನು ಸ್ಥಾಪಿಸಿದ, ಜಿಲಟಿನ್, ಡೈನಮೈಟ್ ಕಂಡುಹಿಡಿದು, ಬೊಫೊರ್ಸ್ ಕಂಪೆನಿಯ ಒಡೆಯನಾಗಿ ವಿಶ್ವಯುದ್ಧದಲ್ಲಿ ಮಾನವರ ಜೀವಗಳನ್ನು ಸೊಳ್ಳೆ ಜೀವಗಳಿಗೆ ಸಮ ಎಂದು ತೋರಿಸಿಕೊಟ್ಟ ಆಲ್ಫ್ರೆಡ್ ನೊಬೆಲ್ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆಯೇ?

ತಮ್ಮ ಈ ನಿರ್ಧಾರವನ್ನು ನೊಬೆಲ್ ಸಮಿತಿಯು ಹಿಂತೆಗೆದುಕೊಳ್ಳದಿದ್ದರೆ ನಾವು ವಿಶ್ವದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ. ನಮ್ಮ ಸಂಘಟನೆಯ ಆತ್ಮಾಹುತಿ ದಳದ ಯೋಧರು ಜಗತ್ತಿನೆಲ್ಲ ಟೀ ಕಪ್ಪುಗಳಲ್ಲಿ ಧುಮುಕಿ ಪ್ರಾಣ ತ್ಯಾಗ ಮಾಡಲಿರುವರು. ಮುಂದೆ ಆಗಲಿರುವ ಎಲ್ಲಾ ಅನಾಹುತಗಳಿಗೆ ನೊಬೆಲ್ ಸಮಿತಿಯೇ ಹೊಣೆ! ಎಚ್ಚರ!

ಇಂತಿ,
ಅಂತರಾಷ್ಟ್ರೀಯ
ನಿರುದ್ಯೋಗಿ ನೊಣಗಳ
ಒಕ್ಕೂಟದ
ಪ್ರಧಾನ ಕಾರ್ಯದರ್ಶಿ
ಶ್ರೀಮತಿ ನೊಣಚಮ್ಮ

ತೊಣಪ್ಪನ ಡೈರಿ

9 ಆಕ್ಟೋ

ಕಾಪಾಡಿದ್ದು ಯಾರು?

 

ನೀವ್ ಅದೆಷ್ಟೇ ವಿನಯವಂತ್ರಾಗಿರ್ಬೋದು, ಆದ್ರೆ ಕೆಲ್ವೊಂದ್ಸಲ ನೀವ್ ಮಾಡಿದ ಕೆಲ್ಸಕ್ಕೆ ತಕ್ಕ ಕ್ರೆಡಿಟ್ಸು ಪಡೀಲೇಬೇಕಾಗುತ್ತೆ. ‘ಈ tonachi diary ಮಗುವಿನ ತಂದೆ ಯಾರು?’, ‘ಈ ಟೀ ಕಪ್ಪು ಒಡೆದದ್ದು ಯಾರು?’, ‘ನನ್ನ ಮಗಳಿಗೆ ಲವ್ ಲೆಟರ್ ಕೊಟ್ಟಿದ್ದು ಯಾರು?’, `ಬಹುಮಾನ ಬಂದ ಈ ಲಾಟರಿ ಟಿಕೆಟ್ ನಿಮ್ದಾ?’ ಅನ್ನೋ ಪ್ರಶ್ನೆಗಳೆದ್ದಾಗ ನಿಮ್ಮೆಲ್ಲಾ ವಿನಯವಂತಿಕೆ ಬಿಟ್ಟು ನಿಮ್ ಕೆಲ್ಸದ್ ಬಗ್ಗೆ ನೀವು ಕ್ರೆಡಿಟ್ಸ್ ತೆಗ್ದುಕೊಳ್ಳಬೇಕಾಗುತ್ತೆ.

ಪಾಪ ಈ ಸೀಕ್ರೇಟು ಆ ಹೆಲಿಕಾಪ್ಟರಿಗೆ ಗೊತ್ತಿರ್ಲಿಲ್ಲ! ವರ್ಷವಿಡೀ ನದಿ ಅನ್ನೋ ಬೋರ್ಡ್ ಹಾಕ್ಕಂಡಿದ್ದ ಬಯಲು ಮಂದಿರವಾಗಿದ್ದ ತುಂಗಾ ನದಿ ತುಂಬಾ ತುಂಬಿಕೊಂಡು ಮಂತ್ರಾಲಯವನ್ನೇ ಮುಳುಗ್ಸುವಾಗ ಮಂತ್ರಾಲಯ ಸ್ವಾಮಿಯವರ್ನ ಕಾಪಾಡಿದ್ದು ಸರಿಯಾದ್ ಸಮ್ಯಕ್ಕೆ ತಲುಪಿದ ಹೆಲೆಕಾಪ್ಟರು. ಮಾರ್ನೆಯ ದಿನ ಸ್ವಾಮ್ಗೋಳು ನಮ್ಮುನ್ ಕಾಪಾಡಿದ್ದು ಗುರುರಾಯ ಅನ್ವಾಗ ಆ ಹೆಲಿಕಾಪ್ಟರು ಮೋಸ್ಟ್ಲಿ ನನ್ ಪೈಲಟ್ ಹೆಸ್ರು ಗುರ್ರಾಯ ಅಂದ್ಕಂಡು ಸಮಾಧಾನ ಮಾಡ್ಕಂತೇನೋ!

ಹೆಲಿಕಾಪ್ಟರ್ ಬಗ್ಗೆ ನಾವ್ ಮಾತಾಡೋದು ಅವು ರಾಜ್ಯದ ಮುಖ್ಯಮಂತ್ರಿ ಸಮೇತ ಸ್ಪೋಟಗೊಂಡಾಗ್ ಮಾತ್ರ ಅನ್ಸುತ್ತೆ!

 

ಸುಳ್ ಮೆಣ್ಸಿನ್‌ಕಾಯ್!

 

ಪಾರ್ಟ್ ಟೈಮು  ನ್ಯೂಸ್ ಪೇಪರ್‌ , ಫುಲ್ ಟೈಮ್ ಪೊಲಿಟಿಕಲ್ ಆಕ್ಟಿವಿಸ್ಟು ಆಗಿರೋ ವಿಜಯ ಕರ್ನಾಟಕವೆಂಬೋ ನಂಬ್ರ ಒನ್ ಪತ್ರಿಕೆಯಲ್ಲಿ ಬ್ಯಾಡ್ಗಿ ಖಾರದ ಮೆಣ್ಸಿನ್ ಕಾಯಿ ಪ್ರ‘ತಾಪ’ರ ಕಾಲಂ ಪಕ್ಕದಲ್ಲೇ ಕೆಂಪ್ ಮೆಣ್ಸಿನ್ ಕಾಯಿ ಮಿರ್ಚಿ ಮಾಡೋ ಮೋಹನ್‌ರು ತಮ್ ಅಂತರ್ಜಾಲದ ಬಗ್ಗೆ ಸ್ವಲ್ಪ್ ಗಮನ ಕೊಡೋದ್ ವಾಸಿ ಅನ್ನಿಸ್ತದೆ.

ಕಳೆದ ಶನಿವಾರದ ಅಂಕಣದಾಗೆ ಅಲ್ಲಾಡಿಸಿದ್ ಕೆಂಪ್ ಮೆಣಸಿನ್ಕಾಯ್‌ನಾಗೆ ಹೀಗಂತಾರೆ:

gandhi

ಪತ್ರಿಕೋದ್ಯಮದ್ ಪಾಠಗಳಲ್ಲದಿದ್ರೂ ತೀಟೆಗಳನ್ ಸಾಮ್ರಾಟರ್ ತಾವ ಕಲ್ತಿರೋ ನಾನು ಗೂಗಲಿನ ಕೌಂಟರಿಗೆ ‘ಗಾಂಧಿ’ ಪದ ತಳ್ಳಿದ್ದೇ ತಡ ನಮ್ ದೇಶದ ತಂದೆ ಮಹಾತ್ಮ ಗಾಂಧಿಯವ್ರೇ ಕಂಡ್ರು. ಎರಡ್ರಾಗೆ ರಾಜೀವ್ ಕಂಡ್ರು, ಮೂರ್ನೇ ಪೇಜ್‌ನಾಗೆ  ಸೋನಿಯಾ ಅಮ್ಮಾವ್ರು ಬಂದ್ರು.

gandi1

gandi2

gandi3

ಅವ್ರೊಳಗಿನ ಹಾಡು ಕ್ಯೂಬಾ ಕೇಳಿದ್ಮೇಲೆ ಅವ್ರ ಇಂಟರ್ನೆಟ್ ಕನೆಕ್ಸನ್ನು ಕ್ಯೂಬಾದ್ದೇನಾ ಅಂಬೋ ಡೌಟು ನನ್ಗೆ ಬಂತು! ಯಾವ್ದಕ್ಕೂ ಮೊಹನ್ ಸಾಹೇಬ್ರು ವಸಿ ಚೆಕ್ ಮಾಡ್ಕಳದು ಒಳ್ಳೇದು!  

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

3 ಆಕ್ಟೋ

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)

ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.

ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.

ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.

ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.

“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”

ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:

“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”

ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.

“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”

ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ  ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

2 ಆಕ್ಟೋ

ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು. ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು, ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು. ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಈ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.

– ನಗೆ ಸಾಮ್ರಾಟ್

ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ.

ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬೇಕು ಎಂದು ತೊಣಚಪ್ಪನವರು ಕೇಳಿಕೊಂಡಾಗ ನಾವು ದಿಗ್ಭ್ರಾಂತರಾದೆವು. ಕಾರಣವಿಷ್ಟೆ. ನಾವು ಈ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗಿನ ಹೆಸರನ್ನೇ ಆಲಿಸಿರಲಿಲ್ಲ. ಇದೊಂದು ಬ್ಲಾಗು ಬಿಡಿ, ವಾಸ್ತವವಾಗಿ ನಮಗೆ ಬ್ಲಾಗ್ ಎಂದರೇನೆಂದೇ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಈ ಬ್ಲಾಗ್ ಬಗ್ಗೆ ತಿಳಿಯದಿರುವುದು ಅಂತಹ ಅಪರಾಧವಲ್ಲ ಬಿಡಿ. ಒಬ್ಬನಿಗೆ ಬ್ಲಾಗ್ ಬಗ್ಗೆ ತಿಳಿದಿಲ್ಲ ಎಂದರೆ ಆತ ಕಾಲೇಜು ವಿದ್ಯಾರ್ಥಿಯಲ್ಲ, ಪುಕ್ಕಟೆ ಅಂತರ್ಜಾಲದ ಸಂಪರ್ಕವಿರುವ ಆಫೀಸಿನಲ್ಲಿ ದುಂದಾಗಿ ಕಳೆಯಲು ಹೆಚ್ಚು ಸಮಯವಿರುವ ಉದ್ಯೋಗಿಯಲ್ಲ, ಪತ್ರಿಕಾ ಕಛೇರಿಗಳ ಕಸದ ಬುಟ್ಟಿಯಲ್ಲಿ spirituality ಪ್ರಾಣ ಬಿಡುವ ತಮ್ಮ ಕೃತಿಗಳಿಗೆ ಕೃತಕ ಉಸಿರಾಟ ಕೊಡಬಯಸುವ ಹವ್ಯಾಸಿ ಲೇಖಕನಲ್ಲ, ಪತ್ರಿಕೆಯಲ್ಲಿ ಎರಡು ಕಾಲಂ ವರದಿ ಪ್ರಕಟವಾಗದ ಸಂಪಾದಕೀಯ ಬರೆಯುವ ಹುಮ್ಮಸ್ಸಿರುವ ಪತ್ರಕರ್ತನಲ್ಲ, ಅವರಿವರನ್ನು ಬಯ್ಯುವ, ಅದಕ್ಕಾಗಿ ಸಮಯ ವಿನಿಯೋಗಿಸುವ, ಬೈದವರಿಗೆ ತಾನಿಲ್ಲಿ ಕೀಬೋರ್ಡಿನ ಮೇಲೆ ಕುಟ್ಟಿದ್ದು ತಲುಪಿಯೇ ತಲುಪುತ್ತದೆ ಎಂದು ಬ್ಲಾಗ್ ಅಂಚೆ ಇಲಾಖೆಯ ಮೇಲೆ ಅಪಾರ ವಿಶ್ವಾಸವಿರಿಸುವ ನಾಮವಿಲ್ಲದ,ಲಿಂಗವಿಲ್ಲದ ಜೀವಿಯಲ್ಲ ಎಂದು ನಿರ್ಧರಿಸಬಹುದು.

ಆದರೆ ನಮಗೆ ಈ ಅಂತರಜಾಲ ಎಂದರೇನೆಂಬುದೇ ತಿಳಿದಿರಲಿಲ್ಲ. ನಮ್ಮ ಮಠದ ವಾತಾವರಣದಲ್ಲಿ ನಮಗೆ ವೆಬ್ ಎಂದರೆ ಜೇಡನದ್ದೇ ಎಂದು ಕೇಳುವಷ್ಟರ ಮಟ್ಟಿಗೆ ಮಾತ್ರ ತಿಳುವಳಿಕೆ ಬೆಳೆದಿತ್ತು. ಆದರೆ ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕಲ್ಲವೇ? ಏಕೆ ಬದಲಾಗಬೇಕು ಎಂದು ಜಿಜ್ಞಾಸುಗಳು ಪ್ರಶ್ನಿಸಬಹುದು. ಬದಲಾಗದಿದ್ದರೆ ಚಲಾವಣೆ ಇರುವುದಿಲ್ಲವಾದ್ದರಿಂದ ಬದಲಾಗಲೇ ಬೇಕು.

ಅಂತರಜಾಲದ ಓನಾಮವನ್ನೂ ತಿಳಿಯದ ನಮ್ಮ ಕೈಲಿ ಅಂಕಣವನ್ನು ಬರೆಸುವ ಸಾಹಸವನ್ನು ಮಾಡಲು ಬಂದ ತೊಣಚಪ್ಪನವರನ್ನು ನಾವು ಗದರಿಸಿ ಕಳುಹಿಸಿದೆವು. ತೊಣಚಿ ಬಿಡು ಎಂದರೆ ಬಿಟ್ಟು ಬಿಡುವುದೇ? ನಮ್ಮ ಮಠದಲ್ಲಿ ದಾನ, ಖರ್ಚು ವೆಚ್ಛಗಳನ್ನು ನೆನಪಿಡುವುದಕ್ಕಾಗಿ ತಂದಿಟ್ಟುಕೊಂಡಿದ್ದ ಕಂಪ್ಯೂಟರನ್ನು ಅಂತರಜಾಲದ ಸಂಪರ್ಕಕ್ಕೆ ಒಡ್ಡಿ ನಮಗೆ ನಗೆ ನಗಾರಿ ಬ್ಲಾಗನ್ನು ತೊಣಚಪ್ಪ ತೋರಿದರು. ಸಂಪಾದಕರಾದ ನಗೆ ಸಾಮ್ರಾಟರ ಬರಹಗಳನ್ನು ತೋರಿಸಿದರು. ಅದರಲ್ಲಿ ಸಾಮ್ರಾಟರು ತಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವುದನ್ನು ನೋಡಿ ನಮಗೆ ಗಾಬರಿಯಾಯಿತು. ಇವರು ಇನ್ನ್ಯಾವುದೋ ಮಠದ ಸ್ವಾಮಿಯೇ ಎಂಬ ಶಂಕೆ ಉಂಟಾಯಿತು. ಆದರೆ ಆ ಬಗೆಯ ಸ್ವಸಂಬೋಧನೆಯ ಹಿಂದಿನ ಕಾರಣವನ್ನು ಅರಿತು ನಾವು ಸಮಾಧಾನ ಹೊಂದಿದೆವು.

ನಮ್ಮ ಈ ಅಂಕಣದ ಮೊದಲ ಲೇಖನವಾಗಿ ನಾವು ಏನನ್ನು ಬರೆಯಬೇಕೆಂದು ಆಲೋಚಿಸುವಾಗ ಅಧ್ಯಾತ್ಮದ ಬಗ್ಗೆ ಬರೆಯುವುದಕ್ಕಾಗಿ ನಮ್ಮನ್ನೇ ಏಕೆ ಸಂಪಾದಕರು ಆರಿಸಿದರು ಎಂಬ ಪ್ರಶ್ನೆಯು ಹುಟ್ಟಿಕೊಂಡಿತು. ಅಧ್ಯಾತ್ಮ ಎಂಬುದು ಮಠದ ಸ್ವಾಮೀಜಿಗಳ, ಸಂನ್ಯಾಸಿಗಳ, ಪೂಜಾರಿಗಳ, ಪಿಂಚಣಿ ಎಣಿಸುತ್ತಿರುವವರ ಸ್ವತ್ತು ಆದದ್ದು ಯಾವಾಗಿನಿಂದ ಎಂಬ ಜಿಜ್ಞಾಸೆ ಮೂಡಿತು. ಆಟೋ ಚಾಲಕನಿಗೆ, ರೈತನಿಗೆ, ಚಮ್ಮಾರನಿಗೆ, ಬಸ್ ಡ್ರೈವರಿಗೆ, ಟೀ ಸ್ಟಾಲ್ ಮಾಣಿಗೆ, ವಾರ್ತಾ ನಿರೂಪಕಿಗೆ ತಿಳಿಯದ ಯಾವ ಅಧ್ಯಾತ್ಮ ಮಠ ಮಂದಿರಗಳಲ್ಲಿ ಕೂತ ಸ್ವಾಮೀಜಿಗಳಿಗೆ ತಿಳಿದೀತು ಎನ್ನಿಸಿತು. ಮದುವೆ, ದಾಂಪತ್ಯದ ಬಗ್ಗೆ, ಕುಟುಂಬದ ಬಗ್ಗೆ, ಸಂಸಾರ ಸಾಗರದ ಬಗ್ಗೆ ಅವ್ಯಾವುಗಳಲ್ಲೂ ತೊಡಗಿಕೊಳ್ಳದವನಿಗೆ ತಿಳಿದಿರಲು ಹೇಗೆ ಸಾಧ್ಯ? ಈಜೇ ಬರದವನ ಬಳಿ ನದಿಯ ಆಳದ ಬಗ್ಗೆ, ಅದರ ಹರಿವಿನ ಬಗ್ಗೆ, ದಾಟುವ ಬಗ್ಗೆ ಸಲಹೆ ಕೇಳುವುದು ವಿವೇಕಯುತವೇ? ಹೆಣ್ಣಿನ ಸಂಗವನ್ನೇ ಅರಿಯದ (ಅಥವಾ ಹಾಗೆ ತೋರ್ಪಡಿಸುವ) ಸಂನ್ಯಾಸಿ ಹೆಣ್ಣು ಮಾಯೆ, ಹೆಣ್ಣು ಬಂಧನ, ಸಂಸಾರ ಸಾಗರ ಎನ್ನದೆ ಇನ್ನೇನು ಅಂದಾನು? ಹೆಣ್ಣು ಗಂಡಿನ ಸಂಯೋಗವನ್ನು ಪಾಪವೆನ್ನದೆ ಮತ್ತೇನು ಅಂದಾನು? ಎಟುಕದ ದ್ರಾಕ್ಷಿ ಹುಳಿಯಲ್ಲವೇ?

ಜಿಜ್ಞಾಸೆಗಳು ಕೈ ಹಿಡಿದು ಜಗ್ಗುತ್ತಿರುವಾಗ ನಾವು ಸಾಮ್ರಾಟರನ್ನು ಸಂಪರ್ಕಿಸಿದೆವು. ಚಾಟ್ ಕೋಣೆಯಲ್ಲಿ ಕುಳಿತು ನೇರವಾಗಿ ನಮ್ಮ ಗೊಂದಲಗಳನ್ನು ತೋಡಿಕೊಂಡೆವು. “ನೋಡಿ ಸ್ವಾಮಿಗಳೇ, ನಿಮ್ಮ ಈ ಜಿಜ್ಞಾಸೆಗಳು ಹುಟ್ಟುವುದಕ್ಕೆ ನಮ್ಮ ಬ್ಲಾಗಿಗೆ ಬರೆಯುವುದರಿಂದಾವ ಸಂಭಾವನೆಯೂ ದೊರೆಯುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾದರೆ ನಾವು ಅಸಹಾಯಕರು. ನಮ್ಮ ಬ್ಲಾಗಿನ ಅಭಿಮಾನಿಗಳ ಸಂಖ್ಯೆ ಕಡಿಮೆ ಎನ್ನುವುದು ಕಾರಣವಾದರೆ ಅದರ ಬಗ್ಗೆಯೂ ನಾವೇನು ಮಾಡಲು ಸಾಧ್ಯವಿಲ್ಲ, ಬ್ಲಾಗ್ ಹಿಟ್ಟುಗಳನ್ನು ಏರಿಸಿಕೊಳ್ಲುವುದಕ್ಕಾಗಿ ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಸೌಕರ್ಯವಿಲ್ಲ, ಹೆಸರು ಬದಲಿಸಿಕೊಳ್ಳುವ ಅನಿವಾರ್ಯವಿಲ್ಲ.  ಈ ಬರವಣಿಗೆಯಿಂದ ನಿಮ್ಮ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಲಾರದು ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಅದರ ಬಗ್ಗೆ ಏನಾದರೂ ಉಪಾಯ ಹೂಡಬಹುದು. ಆದರೆ ಇದು ನನ್ನ ಪ್ರಾಮಾಣಿಕ ಪ್ರಶ್ನೆ, ಆತ್ಮಸಾಕ್ಷಿಯ ಕಾಟ ಎನ್ನುವುದಾದರೆ ಒಂದು ಮಾತು ನೆನಪಿನಲ್ಲಿಡಿ. ಶಂಖದಿಂದ ಬಂದರಷ್ಟೇ ತೀರ್ಥ. ಆನೆ ನಡೆದದ್ದೇ ದಾರಿ. ಒಂದನೆಯ ತರಗತಿಯ ಹುಡುಗನ ಉತ್ತರ ಪತ್ರಿಕೆಯನ್ನೇ ವೇದಿಕೆಯ ಮೇಲೆ ನಿಂತು ಕವಿ ಎಂದು ಕರೆದುಕೊಳ್ಳುವವನೊಬ್ಬ ಓದಿದರೆ ಅದೇ ಕವಿತಾವಾಚನವಾಗುತ್ತೆ. ಹೀಗಾಗಿ ನೀವು ಯೋಚಿಸಬೇಡಿ, ಸುಮ್ಮನೆ ನನ್ನ ತಲೆ ಕೊರೆಯಬೇಡಿ, ನಿಮ್ಮದೂ ಕೊರೆದುಕೊಳ್ಳಬೇಡಿ. ಕೊರೆಸಿಕೊಳ್ಳಲು ಸಾಲುಗಟ್ಟಿರುವ ಅಸಂಖ್ಯಾತ ಪ್ರಜೆಗಳು ನಮ್ಮ ಸಾಮ್ರಾಜ್ಯದಲ್ಲಿವೆ.” ಎಂದವರು ವಿವರಿಸಿದಾಗ ನಮಗೆ ಧೈರ್ಯ ಬಂದಿತು.

ಹೀಗಾಗಿ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ತಿನ್ನಿಸಿ, ನಗೆ ನಗಾರಿಯೆಂಬ ನೀರನ್ನು ಕುಡಿಸಿ ನೀವು ‘ನಗೆ ಬಾಂಬು’ಗಳನ್ನು ಸಿಡಿಸುವಂತೆ ಮಾಡಿ ನಿಮ್ಮ ವಾತಾವರಣವನ್ನು ಹಾಸ್ಯಮಯ ಮಾಡುವ ಉದ್ದೇಶದಿಂದ ನಾವು ಬರೆಯಲು ಒಪ್ಪಿಕೊಂಡಿದ್ದೇವೆ. ಮುಂದಿನ ಸಂಚಿಕೆಯಿಂದ ನಮ್ಮ ಅಧ್ಯಾತ್ಮ ಪ್ರವಚನವನ್ನು ಶುರು ಮಾಡುವೆವು. ಶಿರಸ್ತ್ರಾಣ, ಕರ್ಣ ಕವಚಗಳನ್ನು, ನೇತ್ರ ಕುಂಡಲಗಳನ್ನು ತಯಾರು ಮಾಡಿಟ್ಟು ಕೊಳ್ಳುವವರಿಗೆ ಸಾಕಷ್ಟು ಸಮಯಾವಕಾಶವಿದ್ದೇ ಇದೆ.

ನಗಾರಿ ರೆಕಮಂಡೇಶನ್ 25

2 ಆಕ್ಟೋ

ಒಂದು ಕಾಲದ ಅಮೇರಿಕಾದ ಅತಿ ಶ್ರೀಮಂತ ಸ್ಟ್ಯಾಂಡ್ ಅಪ್ ಕಮಿಡಿಯನ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಜೆರ್ರಿ ಸೈನ್ ಫೆಲ್ಡ್‌ನದ್ದು200px-Jerry_Seinfeld_(1997) ದಿನನಿತ್ಯದ ಘಟನೆಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ಹುಡುಕಿ ಅವುಗಳಲ್ಲಿ ಅಡಗಿರುವ ಅಸಂಬದ್ಧತೆ, ವಕ್ರತೆ, ವ್ಯಂಗ್ಯವನ್ನು ಹೊರತೆಗೆದು ನಗಿಸುವ ವಿಶಿಷ್ಟ ಹಾಸ್ಯ.

ಅಮೇರಿಕನ್ನರ ದೈನಂದಿನ ಬದುಕಿನಲ್ಲಿ ಅತಿ ಯಾಂತ್ರಿಕ ಭಾಗವಾದ ವಾಶಿಂಗ್ ಮಶೀನಿನೊಂದಿಗೆ ಕಳೆಯುವ ಸಮಯವನ್ನು ಕೂಡ ಹಾಸ್ಯದ ವಸ್ತುವನ್ನಾಗಿಸಿಕೊಳ್ಳಬಲ್ಲ. “ವಾಶಿಂಗ್ ಮಶೀನು ಬಟ್ಟೆಗಳ ಪಾಲಿಗೆ ನೈಟ್ ಪಾರ್ಟಿ ಇದ್ದ ಹಾಗೆ. ಬಟ್ಟೆಗಳಲ್ಲೆ ಒಟ್ಟಿಗೆ ಸೇರುವುದು ಅಲ್ಲಿ ಮಾತ್ರ. ಮಶೀನಿನ ಸ್ವಿಚ್ಚು ಅದುಮುತ್ತಿದ್ದ ಹಾಗೆ ಲೋಕವೇ ತಿರುಗಲು ಶುರುವಾಗುತ್ತೆ. ಶರ್ಟು ಸ್ಕರ್ಟಿನ ಜೊತೆ ಡ್ಯಾನ್ಸ್ ಮಾಡಲು ಶುರು ಮಾಡುತ್ತದೆ, ಪ್ಯಾಂಟು ಕೋಟಿನೊಂದಿಗೆ ಬೆಸೆದುಕೊಳ್ಳುತ್ತದೆ. ಈ ಮಳ್ಳನಂತಹ ಸಾಕ್ಸು ಮಾತ್ರ ತಾನು ತಪ್ಪಿಸಿಕೊಳ್ಳಲು ಇದೇ ಸುವರ್ಣಾವಕಾಶ ಎಂಬಂತೆ ಹಾರಿ ಹಾರಿ ಕಾಣದ ಜಾಗವನ್ನು ತಲುಪಿಕೊಳ್ಳುತ್ತೆ” ಎಂಬ ರೀತಿಯ ಹಾಸ್ಯವನ್ನು ಆತನಷ್ಟೇ ಮಾಡಬಲ್ಲ.

ಸ್ಟ್ಯಾಂಡ್ ಕಾಮಿಡಿಯಲ್ಲಿ ಹೆಸರುವಾಸಿಯಾದ ಸೈನ್‌ಫೆಲ್ಡ್ ಮುಂದೆ ಲ್ಯಾರಿ ಡೇವಿಡ್‌ನೊಡಗೂಡಿ ತನ್ನ ಹೆಸರಿನಲ್ಲೇ ಒಂದು ಕಾಮಿಡಿ ಶೋ ನಿರ್ಮಿಸಿದ. ತಾನೇ ನಿರ್ಮಾಪಕನಾಗಿ, ನಿರ್ದೇಶಕನಾಗಿ ನಿರ್ಮಿಸಿದ ‘ಸೈನ್ ಫೆಲ್ಡ್’ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ತಾನೇ ಮುಖ್ಯ ಪಾತ್ರವನ್ನೂ ನಿರ್ಮಿಸಿದ. ತನ್ನ ಪಾತ್ರದಲ್ಲಿನ ಅಭಿನಯಕ್ಕಾಗಿ ಬಹುಮಾನ,ಮನ್ನಣೆಗಳನ್ನೂ ಗಳಿಸಿಕೊಂಡ. ಸೈನ್ ಫೆಲ್ಡ್ ಟಿವಿ ಕಾರ್ಯಕ್ರಮವು ಜನಪ್ರಿಯವಾಗಿ ಒಂಬತ್ತು ಸೀಸನ್‌ಗಳಷ್ಟು ಪ್ರಸಾರವಾಗಿದೆ.

ಸೈನ್ ಫೆಲ್ಡ್ ಸ್ಟ್ಯಾಂಡ್ ಅಪ್ ಕಾಮಿಡಿಯ ಒಂದು ತುಣುಕು ಈ ಸಂಚಿಕೆಯ ನಮ್ಮ ರೆಕಮಂಡೇಶನ್!

ಸ್ಪೋಟಕ ಸಂದರ್ಶನಕ್ಕೆ ತಯಾರಾಗಿ!

2 ಆಕ್ಟೋ

 

ಕನ್ನಡ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ ಹೆಸರಾಂತ ಬ್ಲಾಗಿಗರೊಬ್ಬರ ಸಂದರ್ಶನ ಶೀಘ್ರವೇ ನಗೆ ನಗಾರಿಯಲ್ಲಿ ಮೂಡಿಬರಲಿದೆ!

ಈ ಅತಿ ಸೂಕ್ಷ್ಮ ಸಂದರ್ಶನವನ್ನು ಖುದ್ದು ಸಾಮ್ರಾಟರೇ ಮಾಡಿಕೊಂಡು ಬಂದಿದ್ದಾರೆ!

ಬ್ಲಾಗ್ ಅಂಗಳದಲ್ಲಿ ಕೋಲಾಹಲ ಹುಟ್ಟಿಸುವಂತಹ ಅಂಶಗಳು ಈ ಸಂದರ್ಶನದಲ್ಲಿ ಅಡಗಿವೆ!

ಸ್ಪೋಟಕ ಸತ್ಯಗಳು ಇದರಲ್ಲಿ ಬಯಲಾಗಿವೆ!

ಈ ಅಪರೂಪದ ಸಂದರ್ಶನಕ್ಕಾಗಿ ನಗೆ ನಗಾರಿಯನ್ನು ತಪ್ಪದೇ ಓದುತ್ತಿರಿ.

(ಒರಿಜಿನಲ್ ಸಂದರ್ಶನ ಪ್ರಕಟವಾಗುವ ಮುನ್ನವೇ ಚೀನಾ ಮಾರ್ಗವಾಗಿ ಚಲಿಸಿ ಪ್ರಕಟವಾಗುವ ಅಗ್ಗದ ನಕಲಿ ಸಂದರ್ಶನವನ್ನು ಓದಿ ಮರುಳಾಗದಿರಿ!)

– ನಗೆ ಸಾಮ್ರಾಟ್