Archive | ಜನವರಿ, 2008

ನಗಾರಿ ಸದ್ದಿಗೆ ಪತರಗುಟ್ಟಿದವರು!

31 ಜನ

ಆಗಾಗ ನಗೆ ಸಾಮ್ರಾಟರು ಹಾಸ್ಯವನ್ನು ಅಷ್ಟು ಲೈಟಾಗಿ ನೋಡಬೇಡಿ ಅಂತ ಸೀರಿಯಸ್ಲೀ ಸೀರಿಯಸ್ಸಾಗಿ ಯೋಚಿಸುತ್ತಾ ಕುಳಿತುಬಿಡುತ್ತಾರೆ. ಆಗ ನಗಾರಿಯ ಸಾರಥ್ಯವಹಿಸುವುದಕ್ಕಾಗಿ ಅಂತಲೇ ಸಾಮ್ರಾಟರು ಮತ್ತೊಂದು ದೇಹ ಧರಿಸಿ ಅವತರಿಸುತ್ತಾರೆ. ಒಂದೇ ವ್ಯತ್ಯಾಸವೆಂದರೆ ಈ ದೇಹದಲ್ಲಿ ಮಿದುಳು ಮಿಸ್ಸಾಗಿರುತ್ತದೆ. ಹಾಗಂತ ಇವರನ್ನು ಸಂಪಾದಕರು ಅನ್ನದೇ ಇರಲಾದೀತೇ? ಹೀಗೆ ಮಿದುಳೇ ಇಲ್ಲದ ಕೋಟಿ ಕೋಟಿ ಮಂದಿಯನ್ನು ನಾವು ಅಧಿಕಾರದ ಗಾದಿಯ ಮೇಲೆ ಕೂರಿಸಿಲ್ಲವೇ?

ಅದು ಜನವರಿ ಇಪ್ಪತ್ತಾರರ ಮಧ್ಯರಾತ್ರಿ. ದೇಶವಿಡೀ ಗಣತಂತ್ರದಿನ ಮುಗಿಸಿ ಸುಸ್ತಾಗಿ ಮಲಗಿದೆ. ಬೇರೆ ಬೇರೆ ವರ್ಗದ ಜನರ ಸುಸ್ತಿಗೆ ಬೇರೆ ಬೇರೆ ಕಾರಣಗಳಿದ್ದವು. ಐಟಿ,ಬಿಟಿ,ಕಾಲ್ ಸೆಂಟರ್ರು, ಫ್ಯಾಕ್ಟರಿಗಳ ಕೂಲಿಗಳಿಗೆ ‘ಗಣತಂತ್ರ ದಿವಸ’ 1157543301_f1cbc833fa.jpgಎಂಬುದು ಜನವರಿಯಲ್ಲಿ ಸಿಕ್ಕ ಮತ್ತೊಂದು ರಜಾದಿನದ ನೆಪಮಾತ್ರದ ಹೆಸರು ಅಷ್ಟೇ, ತಮ್ಮ ವಾರದ ದುಡಿಮೆಯ ದಣಿವನ್ನು ಒಂದೇ ಮುಟಿಗೆಯಲ್ಲಿ ತೀರಿಸಿಕೊಳ್ಳುವವರಂತೆ ಸಿನೆಮಾ ಥಿಯೇಟರುಗಳಿಗೆ, ಪಿಜ್ಜಾ ಗುಡಿಸಲುಗಳಿಗೆ, ಪ್ರವಾಸಿ ತಾಣಗಳಿಗೆ, ಬಾರ್ ರೆಸ್ಟೋರೆಂಟುಗಳೆಂಬ ‘ತೀರ್ಥ’ಸ್ಥಾನಗಳಿಗೆ ಲಗ್ಗೆ ಇಟ್ಟು ಕುಡಿದು, ಕುಣಿದು, ಕೆರಳಿ, ನರಳಿ ಸುಸ್ತಾಗಿದ್ದರು. ಇನ್ನು ಕೇಂದ್ರ, ರಾಜ್ಯ ಸರಕಾರ ಕೃಪಾಪೋಷಿತ ಕಛೇರಿಗಳ ನೌಕರರು ‘ಗಣತಂತ್ರ ದಿನ’ದ ಅನಿವಾರ್ಯವಾದ ಧ್ವಜಾರೋಹಣಾ, ಅಧ್ಯಕ್ಷರ ಕರ್ಣಕಠೋರವಾದ ಭಾಷಣ, ಬಿಗ್ಗ ಬಿಸಿಲಲ್ಲಿ ಪರೇಡುಗಳಲ್ಲಿ ಭಾಗವಹಿಸಿ ಒಂದು ಕಡೆ ದೇಶದ ಹಬ್ಬದ ದಿನದಂದು ದೇಶವನ್ನು ನೆನೆಯುತ್ತಿದ್ದೇವಲ್ಲಾ ಅಂತ ಸಂಭ್ರಮಿಸುತ್ತಾ, ಮತ್ತೊಂದು ಕಡೆ ಅನ್ಯಾಯವಾಗಿ ಒಂದು ರಜಾ ದಿನ ಕೈತಪ್ಪಿತಲ್ಲಾ ಅಂತ ಕೈ ಕೈ ಹಿಸುಕಿಕೊಳ್ಳುತ್ತ ದಣಿದಿದ್ದರು. ಇನ್ನು ಶಾಲೆಯ ಮಕ್ಕಳು ಉಪಧ್ಯಾಯರಿಗಂತೂ ದಣಿವಾಗುವುದು ಸಹಜವೇ, ಬೆಳಿಗ್ಗೆ ಆರು-ಏಳು ಗಂಟೆಗೆ ಎದ್ದು ಹಾಲು ಬ್ರೆಡ್ಡು ತಿಂದು ಹಿಂದಿನ ದಿನ ಅಮ್ಮ ಒಗೆದು ಕೊಟ್ಟ ಬಿಳಿಯ ಯೂನಿಫಾರ್ಮು, ಬಿಳಿಯ ಕ್ಯಾನ್ವಾಸ್ ಶೂ ಮೆಟ್ಟಿಕೊಂಡು, ಮುಖಕ್ಕೆ ಪೌಡರು ಮೆತ್ತಿಕೊಂಡು ಶರ್ಟಿನ ಜೇಬಿನ ಮೇಲೆ ದೇಶದ ತಿರಂಗಾದ ಧ್ವಜ ಸಿಕ್ಕಿಸಿಕೊಂಡು ಶಾಲೆಯ ಮೈದಾನಕ್ಕೆ ಹೋಗಿ ಮೂರ್ನಾಲ್ಕು ತಾಸು ಪರೇಡು, ಸಾಂಸ್ಕೃತಿಕ ಕಾರ್ಯಕ್ರಮಗಳೆಂಬ ಕಸರತ್ತು ಮುಗಿಸಿ ಕಾರ್ಯಕ್ರಮದ ಕೊನೆಯಲ್ಲಿ ಕೊಡುವ ಪೆಪ್ಪರ್ ಮೆಂಟಿಗಾಗಿ ನಿರೀಕ್ಷಿಸುತ್ತ ಸಮಯ ಕಳೆವ ಮಕ್ಕಳಿಗೆ, ಅವರನ್ನು ನೋಡಿಕೊಳ್ಳಲು ಹೆಣಗಾಡಿ ಜೀವ ಸವೆಸುವ ಟೀಚರುಗಳಿಗೆ ದಣಿವಾಗುವುದು ಸಹಜ. ಇನ್ನು ಜನನಾಯಕರು… ಊರಿನ ಯುವಕ ಸಂಘ, ಗಣೇಶ ಚೌತಿ ಸಮಿತಿಯಿಂದ ಹಿಡಿದು ದೆಹಲಿಯ ಕೆಂಪುಕೋಟೆಯವರೆಗೂ ನಡೆಯುವ ಧ್ವಜಾರೋಹಣವನ್ನು ನೆರವೇರಿಸಿ, ಕಾಟಾಚಾರಕ್ಕೆಂಬಂತೆ ನಾಲ್ಕು ನುಡಿಮುತ್ತುಗಳನ್ನು ತಮ್ಮ ‘ಜ್ಞಾನ’ದ ಖಜಾನೆಯಿಂದ ಹೊರತೆಗೆದು ಚೆಲ್ಲಿ ಕೇಳು’ಗರ’ನ್ನು ಪುನೀತರನ್ನಾಗಿಸಿ, ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಕೊಡುವ, ಮಂಗಳ ಗ್ರಹದಿಂದ ನೀರು ಸಪ್ಲೇ ಮಾಡಿಸುವ ಆಶ್ವಾಸನೆಗಳನ್ನು ಕೊಟ್ಟು ಕಿವಿಗಡಕಿಚ್ಚುವ ಚಪ್ಪಾಳೆ ಸಹಿಸಿಕೊಳ್ಳುವಷ್ಟರಲ್ಲೇ ದಣಿದು ಬಸವಳಿದು ಹೋಗಿರುತ್ತಾರೆ.

ಹೀಗೆ ಇಡೀ ದೇಶವೇ ದಣಿದು ಹಾಸಿಗೆಯ ಮೇಲೆ ಮೈಚೆಲ್ಲಿ ಮಲಗಿದಾಗ ಸದ್ದು ಮಾಡಲಾರಂಭಿಸಿತು ‘ನಗೆ ನಗಾರಿ ಡಾಟ್ ಕಾಮ್’! ಸವಿನಿದ್ದೆಯ ಮಡಿಲಲ್ಲಿ ತೇಲಾಡುತ್ತಿದ್ದ ನಿರ್ಲಜ್ಜರೆಲ್ಲಾ ದಿಗಿಲು ಬಿದ್ದವರಂತೆ ಎದ್ದು ಕುಳಿತರು. ದೊಡ್ಡ ದೊಡ್ಡ ಮನುಷ್ಯರ ಸಣ್ಣತನಗಳೆಲ್ಲ ನಗಾರಿಯ ಹರಿತವಾದ ಸದ್ದಿಗೆ ನಲುಗಿದವು. ರಾಜಕಾರಣಿಗಳಿಗೆ ಮೊಟ್ಟ ಮೊದಲ ಬಾರಿಗೆ ‘ಮಾನ’ವಿರುವುದರ ಅರಿವಾಯಿತು. ಮರ್ಯಾದೆ, ಲಜ್ಜೆಯನ್ನೆಲ್ಲ ಊರ ಹೊರಗೆ ಬಿಟ್ಟು ಮಠ ಮಾನ್ಯಗಳ ಒಳಗೆ ಅವಿತ ಕಾವಿಗೆ ನಗಾರಿಯ ಸದ್ದು ಕಾವು ಹುಟ್ಟಿಸಿತು. ಟೇಬಲ್ಲಿನ ಕೆಳಗೆ ಚಾಚಿದ ಕೈ, ಒಂದು ಕೈಯಲ್ಲಿ ಲಾಠಿ, ಸ್ಟೆತಾಸ್ಕೋಪು, ಮ್ಯಾಪು ಹಿಡಿದು ಮತ್ತೊಂದನ್ನು ಅಮಾಯಕರ ಜೇಬಿನೊಳಕ್ಕೆ ತೂರಿಸುತ್ತಿದ್ದವರ ಬೆನ್ನ ಹುರಿಯಲ್ಲಿ ಭಯದ ಝಳಕು! ಏಕೆಂದರೆ ‘ನಗೆ ನಗಾರಿ ಡಾಟ್ ಕಾಮ್’ ಅಂದು ಕಣ್ಣು ತೆರೆದಿತ್ತು.

ನಗಾರಿ ಹರಿತವಾದ ಸದ್ದನ್ನು ಮಾತ್ರ ಮಾಡುತ್ತದೆ ಎಂದು ಮೂಗು ಮುರಿಯುವ ವಿಮರ್ಶಕರೆಲ್ಲಾ ಪತರಗುಟ್ಟಿಹೋಗುವಂತೆ ನಗಾರಿ ‘ಮಿಡಿಯಲಾರಂಭಿಸಿತು’. ಸಮಾಜದ ಕಟ್ಟಳೆಗಳ ಬಂಧನದಲ್ಲಿ ನಲುಗಿದ ಜೀವಗಳ ಅಂತರಂಗದ ಜೀವಸೆಲೆಗೆ ಅಭಿವ್ಯಕ್ತಿಯ ಮಾಧ್ಯಮವಾಯಿತು ನಗಾರಿ. ಆಫೀಸು, ಕೆಲಸದ ಪರಿಸರ, ಆರೋಪಗೊಂಡ ವ್ಯಕ್ತಿತ್ವದ ಘನತೆಯ ಬೇಲಿ, ಅವರಿವರ ಹಂಗು, ತಾವೇ ಕಟ್ಟಿಕೊಂಡ ಕೋಟೆಯ ದಿಡ್ಡಿ ಬಾಗಿಲನ್ನು ದಾಟಿ ಹೊರಬರುವ ಹಾದಿಯಾಯಿತು ನಗಾರಿ. ಬದುಕೆಂಬ ಕ್ರೂರ ನ್ಯಾಯಾಧೀಶ ವಿಧಿಸಿದ ಎಲ್ಲಾ ಮೂರ್ಖ ಶಿಕ್ಷೆಗಳನ್ನು ‘ಹ್ಹೆ..ಹ್ಹೆ..’ ಎನ್ನುವಂತೆ ಎಡಗಾಲಲ್ಲಿ ಒದ್ದು ಮುನ್ನಡೆಯುವ ಹುಮ್ಮಸ್ಸಾಯಿತು ನಗಾರಿ!

ಇನ್ನು ನಗಾರಿಯ ಸದ್ದು ನಿಲ್ಲೋದಿಲ್ಲ. ಈ ನಗಾರಿಯ ಗುಣವೇ ಅಂಥದ್ದು, ಮೇಲಿಂದ ಮೇಲೆ ಬೀಳುವ ಏಟಿನ ತೀವ್ರತೆ ಹೆಚ್ಚಾದಷ್ಟೂ ನಗಾರಿ ಮನಃಪೂರ್ವಕವಾಗಿ ಮಿಡಿಯುತ್ತದೆ. ಆ ಸದ್ದು ನಾಲ್ಕು ದಿಕ್ಕುಗಳಲ್ಲೂ ಮಾರ್ದನಿಸಿ ಸಾವಿರ ಕಿವಿಗಳನ್ನು ತಲುಪಿ ಅವುಗಳ ಮೆದುಳಿಲ್ಲದ ತಲೆಗಳಲ್ಲಿ ನೂರ್ಮಡಿಯಾಗಿ ಪ್ರತಿಧ್ವನಿಗೊಂಡು ಮತ್ತೆ ನಗಾರಿಯ ಮೇಲೆ ಅಪ್ಪಳಿಸುತ್ತದೆ… ನಗಾರಿಯ ಸದ್ದು ನೆಲವನ್ನೇ ಕಂಪಿಸುತ್ತದೆ.

– ‘ಸಂಪಾದನೆ’ಯಿಲ್ಲದ ಕರು


Technorati : , , , ,

ನಗಾರಿ ಸದ್ದು ಮಾಡಲು ತೊಡಗಿದ್ದು ಅದಕ್ಕೇ!

31 ಜನ

‘ಸೀರಿಯಸ್ಲೀ ಸೀರಿಯಸ್’. ತಾವು ಹೇಳುವುದೆಲ್ಲವನ್ನೂ ಜನ ತುಂಬಾ ಲೈಟ್ ಆಗಿ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯಲ್ಲಿ ಸಾಮ್ರಾಟರು ಕೊಂಚ ಗಂಭೀರವಾಗಿ ಆದರೆ ಎಲ್ಲೂ ‘ನಗೆ ರಹಿತ’ವಾಗದಂತೆ ಹಾಸ್ಯದ ಬಗೆಗಿನ ಚಿಂತನಯೋಗ್ಯ ಸಂಗತಿಗಳನ್ನು ಇಲ್ಲಿ ನಿವೇದಿಸಿಕೊಳ್ಳುತ್ತಾರೆ.

(‘ಸೀರಿಯಸ್ಲೀ ಸೀರಿಯಸ್’ ಸಂಪಾದಕೀಯ)

ಇಂತಹ ಒಂದು ಪ್ರಯತ್ನವನ್ನು ಮಾಡಬೇಕು ಎಂದು ನಿಶ್ಚಯಿಸಿದಾಗಲೆಲ್ಲಾ ನನ್ನೆದುರು ಎದ್ದು ನಿಲ್ಲುತ್ತಿದ್ದ ಪ್ರಶ್ನೆ -ಹಾಸ್ಯಕ್ಕೆ ಅಂತಲೇ ಒಂದು ಬ್ಲಾಗು ತೆರೆಯಬೇಕೆ? ಹಾಸ್ಯವನ್ನು ಅಷ್ಟು ಪ್ರಾಮುಖ್ಯತೆಯಿಂದ ಕಾಣುವ ಮನಸ್ಥಿತಿ ನಮ್ಮ ಜನರಿಗಿದೆಯೇ- ಎಂಬ ಸಂಶಯ ನನ್ನನ್ನು ಕೊಂಚ ಕಾಲದವರೆಗೆ ಈ ಪ್ರಯತ್ನಕ್ಕೆ ಕೈ ಹಾಕದಿರುವಂತೆ ತಡೆಯಿತು. ಕ್ರಮೇಣ ಹಾಸ್ಯಕ್ಕೆ ಜನ ಅಷ್ಟು ಬೆಲೆ ಕೊಡುತ್ತಾರೆಯೇ ಎಂಬ ಪ್ರಶ್ನೆ ಮರೆಯಾಗುತ್ತಾ, ಜನರು ಬೆಲೆ ಕೊಡುವ ಮೌಲ್ಯದ ಹಾಸ್ಯವನ್ನು ನಾವು ಒದಗಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಎದ್ದು ನಿಂತಿತು. ಅವರು ಮಾಡಿಲ್ಲ, ಇವರು ಮಾಡುತ್ತಿಲ್ಲ, ಇನ್ನೊಬ್ಬರ್ಯಾರೋ ಮಾಡಬಹುದಲ್ಲ ಎಂದು ಜಾರಿಕೊಳ್ಳುವುದಕ್ಕಿಂತ ನಾನೇ ಏಕೆ ಒಂದು try ಕೊಡಬಾರದು ಎಂದುಕೊಂಡು ‘ನಗೆ ನಗಾರಿ ಡಾಟ್ ಕಾಮ್’ ತೆರೆದೆ.

ಈಗ ಎಲ್ಲಾ ಹಾಳಾಗಿದೆ, ಹಾಸ್ಯ ಎಂಬ ಮನುಷ್ಯನ ಮಾನಸಿಕ ವಲಯದ ಅತಿ ಮುಖ್ಯವಾದ ಭಾವ ಈಗ ಕೇವಲ ವ್ಯಾಪಾರಿ ತಂತ್ರವಾಗಿಬಿಟ್ಟಿದೆ. ಹಾಸ್ಯ ಪ್ರವೃತ್ತಿಯವರು ಕೇವಲ ಜೋಕರ್‌(ಹಾಗೆಂದರೆ ಜೋಕರ್‍ಗಳು ಕೀಳು ಅಂತಲ್ಲ) ಗಳಾಗುತ್ತಿದ್ದಾರೆ. ಜನ ಈ ಜೋಕರ್‌ಗಳು ಹೇಳುವುದನ್ನು ಕೇಳಿ ಬಿದ್ದು ಬಿದ್ದು ನಗುತ್ತಾರೆ, ಉರುಳಾಡಿ ಹೊರಳಾಡಿ ನಗುತ್ತಾರೆ ಕಾರ್ಯಕ್ರಮ ಮುಗಿದು ಎದ್ದು ಹೋಗುವಾಗ ಆತ ಹೇಳ ಬಯಸಿದ ಸಂಗತಿಗಳನ್ನು ಗ್ರಹಿಸದೆ ಹೊರಟುಬಿಡುತ್ತಾರೆ.ಹಾಗಂತ ಸಂಪೂರ್ಣವಾದ ತಪ್ಪನ್ನು ಜನರ ಮೇಲೆ ಹೊರಿಸುವಂತಿಲ್ಲ. ಹಾಸ್ಯವನ್ನು ಗುತ್ತಿಗೆಗೆ ತೆಗೆದುಕೊಂಡವರಂತಾಡುವ ವಿದೂಷಕರೂ ಸಹ ತಮ್ಮ ಕೆಲಸ ಕೇವಲ ನೂರು ಮಂದಿಯ ಬಾಯಿಗಳನ್ನು ತೆರೆಸಿ ಹಲ್ಲು, ನಾಲಿಗೆ, ವಸಡುಗಳುಗೆ ಗಾಳಿ ಬೆಳಕು ಕಾಣಿಸುವುದು ಎಂದು ಭಾವಿಸಿರುತ್ತಾರೆ. ಸ್ಟೇಜಿನ ಮೇಲೆ ನಿಂತು ಗಂಟೆ ಗಟ್ಟಲೆ ಕಂಡಕಂಡಲ್ಲಿ ಹೆಕ್ಕಿತಂದ ಜೋಕುಗಳನ್ನು ಒಂದರ ಹಿಂದೆ ಒಂದರಂತೆ ಸಿಡಿಸಬಲ್ಲ ಹಾಸ್ಯಗಾರರು ಯಾಕೆ ಆರೋಗ್ಯಕರವಾದ, ಸೃಜನಶೀಲವಾದ ವಿನೋದ ಸಾಹಿತ್ಯವನ್ನು ಸೃಷ್ಠಿಸುವಲ್ಲಿ ಸೋಲುತ್ತಿದ್ದಾರೆ?

ಒಂದು ವಿಷಯವನ್ನು ಲೇಖಕ ಅಥವಾ ಕಲಾವಿದ ಓದುಗರಿಗೆ, ವೀಕ್ಷಕರಿಗೆ ಹೇಳಬಯಸುವಾಗ ಎರಡು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆತ ತಾನು ಹೇಳಬಯಸುವ ಸಂಗತಿಯನ್ನು ತುಂಬಾ ಸಂಕೀರ್ಣವಾಗಿ ಹೇಳಿದರೆ ಜನರಿಗೆ ಅರ್ಥವಾಗುವುದೇ ಇಲ್ಲ. ಅಲ್ಲಿ ಆತ ಸೋಲುತ್ತಾನೆ. ಇಲ್ಲ ತುಂಬಾ ಸರಳಗೊಳಿಸಿ ಹೇಳಿದರೆ ಜನ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಇಲ್ಲೂ ಕಲಾವಿದ ಅಥವಾ ಲೇಖಕ ಸೋಲುತ್ತಾನೆ. ತುಂಬು ಗಾಂಭೀರ್ಯತೆಯ ಶೈಲಿಯಲ್ಲಿ ಅಭಿವ್ಯಕ್ತಿಗೊಳ್ಳುವ ಸತ್ಯಗಳು ಜನರನ್ನು ಆಕರ್ಷಿಸುವುದೇ ಇಲ್ಲ. ಅದನ್ನು ಓದಬೇಕು ಎಂಬ ಕುತೂಹಲ, ಆಕರ್ಷಣೆ ಓದುಗರಿಗೆ ಬೆಳೆಯುವುದೇ ಇಲ್ಲ. ಇನ್ನು ಹೆಚ್ಚು ಸರಳೀಕರಿಸಿ ಹೇಳಲು ಹೊರಟರೆ ಜನರಿಗೆ ಇದರಲ್ಲಿ ಏನೋ ತಿಳಿಯುವುದಿದೆ ಎಂಬ ಭಾವವೇ ಹುಟ್ಟುವುದಿಲ್ಲ. ಈ ಎರಡೂ ಅಪಾಯಗಳಿಂದ ಪಾರಾಗುವ ವಿಧಾನವೆಂದರೆ, ನವಿರಾದ ಹಾಸ್ಯದ ದಾರಿಯನ್ನು ಹಿಡಿಯುವುದು!

ತೀವ್ರವಾದ ರೋಗಕ್ಕೆ ತುಂಬಾ ಶಕ್ತಿಶಾಲಿಯಾದ, ಪರಿಣಾಮಕಾರಿಯಾದ ಮಾತ್ರೆಗಳನ್ನು ಕೊಟ್ಟ ಡಾಕ್ಟರ್ ಅವನ್ನು ಹಾಲಿನೊಂದಿಗೆ ಸೇವಿಸಿ ಅಂತ ಹೇಳುತ್ತಾರೆ. ಮಾತ್ರೆಯ ಪರಿಣಾಮ ರೋಗದ ಮೇಲೆ ಆಗಬೇಕು, ಆದರೆ ಅದರ ಕಾವು, ಝಳ ದೇಹವನ್ನು ತಟ್ಟಬಾರದು ಎಂಬುದು ಅದರ ಉದ್ದೇಶ. ಹಾಸ್ಯವೂ ಹಾಲಿನ ಹಾಗೆಯೇ. ಸಮಾಜದ ಸಮಸ್ಯೆಗಳಿಗೆ, ವ್ಯಕ್ತಿತ್ವದ ಓರೆಕೋರೆಗಳಿಗೆ ಪರಿಣಾಮಕಾರಿಯಾದ, ಶಕ್ತಿಶಾಲಿಯಾದ ಸತ್ಯವನ್ನು ಹಾಸ್ಯದಲ್ಲಿ ಬೆರೆಸಿ ಕೊಟ್ಟರೆ ಅತ್ತ ರೋಗಕ್ಕೆ ತಕ್ಕ ಮದ್ದೂ ಆದ ಹಾಗಾಗುತ್ತದೆ, ಇತ್ತ ದೇಹಕ್ಕೆ ಆ ಆಂದೋಲನದ ಕಾವೂ ತಟ್ಟುವುದಿಲ್ಲ. ಹಾಸ್ಯವೆಂಬ ಮಾಧ್ಯಮದ ಗಮ್ಮತ್ತೇ ಅಂಥದ್ದು!

ಈ ನಿಟ್ಟಿನಲ್ಲಿ ಹಾಸ್ಯವನ್ನು ಟಿ.ವಿ ಚಾನೆಲ್ಲುಗಳ ದಿನಗೂಲಿ ಜೋಕರ್‌ಗಳ ಹಳಸಲು ಜೋಕುಗಳಿಂದ, ದಿನ ಪತ್ರಿಕೆಗಳ ಸ್ಥಳ ತುಂಬಿಸುವ ನಗೆ ಹನಿಗಳಿಂದ, ವಾರಪತ್ರಿಕೆಗಳ ಅನಿವಾರ್ಯ ‘ಹಾಸ್ಯ ಲೇಖನ’ಗಳಿಂದ, ಸಿನೆಮಾಗಳ ಆಟಕ್ಕುಂಟು ಲೆಕ್ಕಕ್ಕಿಲ್ಲವೆನ್ನುವ ಸಂಪ್ರದಾಯದಿಂದ ಮುಕ್ತಗೊಳಿಸಿ ಹೊಸ ಹೊಳಪು ಕೊಟ್ಟು ಅದರ ಹೊಸ ಸಾಧ್ಯತೆಗಳನ್ನು, ಹೊಸ ಆಯಾಮಗಳನ್ನು ಅನ್ವೇಷಿಸುವುದಕ್ಕಾಗಿಯೇ ಈ ಪ್ರಯತ್ನ. ಅದಕ್ಕಾಗಿಯೇ ನಗೆಯ ನಗಾರಿ ಸದ್ದು ಮಾಡಲು ಆರಂಭಿಸಿದ್ದು!

ನಿಮ್ಮ ಪ್ರೀತಿಯ,

ನಗೆ ಸಾಮ್ರಾಟ್


Technorati : , , , , ,

‘ಒಂದ್ರು ಪಾಯಲ್ಲಿ natural calls’

30 ಜನ

‘ಒಂದ್ರುಪಾಯಲ್ಲಿ ಲೋಕಲ್ ಕಾಲ್…. ಒಂದುರುಪಾಯಲ್ಲಿ ಲೋಕಲ್ ಕಾಲ್….’ ಅಂತ ಮುದ್ದಾದ ಮೂವರು ಮಕ್ಕಳು ಅದ್ಯಾವುದೊ ಮೊಬೈಲ್ ಕಂಪೆನಿಯ ಎಲ್ಲಾ ಲೋಕಲ್ ಕಾಲ್ಸ್ ಒಂದು ರೂಪಾಯಿ ಅಂತ ತಮ್ಮ ತೋರುಬೆರಳನ್ನು ಎತ್ತಿ ತೋರಿಸ್ತಾರೆ.

ಅದನ್ನು ಕಂಡಕೂಡಲೇ ನಮ್ಮ ನಗೆ ಸಾಮ್ರಾಟರಿಗೆ ಇನ್ನೇನೋ ಹೊಳೆದು ಬಿದ್ದು ಬಿದ್ದು ನಗಲಾರಂಭಿಸಿದರು. ಏನಪ್ಪಾ ಅದು ಅಂತ ವಿಚಾರ ಹೊರಟರು ಕೆಲವು ವಿಚಾರವಂತರು.

‘ಯಾಕ್ಸಾರ್ ಆ ಜಾಹೀರಾತು ನೋಡಿ ಈ ಪರಿ ನಗುತ್ತಿದ್ದೀರಿ? ಏನಿದೆ ಅದ್ರಲ್ಲಿ ನಗುವಂಥದ್ದು? ಹೀಗೆ ಸುಮ್ ಸುಮ್ನೆ ನಕ್ಕರೆ ಜನ ಹುಚ್ಚ ಅಂತ ತಿಳಿಯಲ್ವಾ?’ ಅಂದ್ರು.

‘ನೋಡ್ರಿ, ಆ ಜಾಹೀರಾತು ನೋಡ್ರಿ… ಒಂದೆರೆಡು ಸಲ ಗಮನವಿಟ್ಟು ನೋಡಿದಾಗ ಆ ಪುಟ್ಟ ಮಕ್ಕಳು ತೋರ್ಬೆರಳಿನ ಬದಲು ತಮ್ಮ ಕಿರುಬೆರಳನ್ನು ಎತ್ತಿ ‘ಒಂದ್ರು ಪಾಯಲ್ಲಿ natural calls’ ಎಂದಿದ್ದರೆ ಅದನ್ನೇ ನಮ್ಮ ಸುಧಕ್ಕನವ್ರ ಸಾರ್ವಜನಿಕ ಮೂತ್ರಿಗಳಿಗೆ ಜಾಹೀರಾತಿಗಾಗಿ ಬಳಸಿಕೊಳ್ಳಬಹುದಲ್ವಾ? ನೋಡ್ರಿ… ಈ ಥರನಾ ಯೋಚಿಸ್ರೀ..’ ಅಂದ್ರು ನಗೆ ಸಾಮ್ರಾಟ್.

‘ಹೌದು… ಹಿಂಗೆ ಯೋಚ್ಸೋದು ಹೆಂಗೆ ಸಾರ್…’ ಅಂತ ತಲೆ ಕೆರೆದುಕೊಂಡು ನಿಂತರು ವಿಚಾರವಂತರು!


Technorati : , , ,

ನಗಾರಿಯಲ್ಲಿ ಕೃಷ್ಣ ಸಂದರ್ಶನ ಎಕ್ಸ್‌ಕ್ಲೋಸೀವ್!

29 ಜನ

ಇದೇ ಮೊಟ್ಟಮೊದಲ ಬಾರಿಗೆ ‘ನಗೆ ನಗಾರಿ ಡಾಟ್ ಕಾಮ್’ ಯಾರೂ ಕೈ,ಕಾಲು, ಮೂಗು ಹಾಕದ ಸಾಹಸಕ್ಕೆ ಕೈಯನ್ನು ಮಾತ್ರ ಹಾಕುತ್ತಿದೆ!

ಒಂದು ಅಭೂತಪೂರ್ವವಾದ ಸಂದರ್ಶನವನ್ನು ಮಾಡಲು ‘ನಗೆ ಸಾಮ್ರಾಟ’ರು ತೀರ್ಮಾನಿಸಿದ್ದಾರೆ. ಉಡುಪಿಯೆಂಬ ಪುಣ್ಯಕ್ಷೇತ್ರದಲ್ಲಿ ಈಗ ಆ ಕೃಷ್ಣನದ್ದೇ ಗುಲ್ಲು. ಯಾವ ಪೇಪರು ತೆಗೆದರೂ, ಎಂಥದ್ದೇ ಚಾನಲ್ಲಿಗೆ ಹಾರಿದರೂ krishna.jpgKRI-FLU.jpg‘ಕೃಷ್ಣಾ…ಕೃಷ್ಣ…!’ ಎಲ್ಲೆಡೆಯೂ ಪರ್ಯಾಯ ವಿಪರ್ಯಾಸದ ಸರ್ಕಸ್ಸು. ಎಲ್ಲರಿಗೂ ಕೃಷ್ಣನ ಹೆಸರು ಹಾಟ್ ಹಾಟ್ ಮಸಾಲೆ ದೋಸೆಯಾಗಿಬಿಟ್ಟಿದೆ. ವಿದೇಶ, ಸ್ವದೇಶ, ಉತ್ತರ ಪ್ರದೇಶ ಹೀಗೆ ವಿವಾದದ ಅಲೆಯಲ್ಲಿ ಎಲ್ಲವೂ ಕೊಚ್ಚಿಕೊಂಡು ದಾಂಗುಡಿಯಿಡುತ್ತಿವೆ. ನೂರಾರು ಸಂದರ್ಶನ, ಪ್ರದರ್ಶನ, ನಿದರ್ಶನಗಳು ಮಾಧ್ಯಮಗಳಲ್ಲಿ ನಡೆಯುತ್ತಿವೆ. ಕೃಷ್ಣನ ಹೆಸರಲ್ಲಿ ಇಷ್ಟೆಲ್ಲಾ ಗುಲ್ಲು ನಡೆಯುತ್ತಿರುವಾಗ ಒಬ್ಬೇ ಒಬ್ಬನಾದರೂ ಸಾಕ್ಷಾತ್ ಶ್ರೀಕೃಷ್ಣನನ್ನೇ ಸಂದರ್ಶಿಸಬಹುದಲ್ಲವಾ ಎಂದು ಯೋಚಿಸಿರದಿದ್ದರಿಂದ ನಗಾರಿಯ ಸಾರಥಿಯಾದ ನಗೆ ಸಾಮ್ರಾಟರು ಇಂತಹ ಸಾಹಸಕ್ಕೆ ಕೈಯನ್ನು ಮಾತ್ರ ಹಾಕಿದ್ದಾರೆ ಇದೇ ಕೆಲಸಕ್ಕಾಗಿ ಅವರು ‘ವೈಕುಂಟ ಯಾತ್ರೆ’ ಬೆಳೆಸಿದ್ದಾರೆ.

ಇಷ್ಟೇ ಆಗಿದ್ದರೆ ನಗಾರಿ ಇಷ್ಟು ಜೋರಾಗಿ ಸದ್ದು ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಆ ಕೃಷ್ಣನೊಂದಿಗೆ ಮಾಧ್ಯಮದವರ ಗುಲ್ಲಿನಲ್ಲಿ ಗಲ್ಲಿಗೇರಿಸಲ್ಪಡುತ್ತಿರುವ ಹೆಸರು ಎಸ್.ಎಂ.ಕೃಷ್ಣ. ಕರ್ನಾಟಕದ ಚುನಾವಣೆಯೆಂಬ ಕುರುಕ್ಷೇತ್ರದಲ್ಲೀಗ ಈ ಕೃಷ್ಣನದ್ದೇ ಸದ್ದು-ಸುದ್ದಿ. ಕೃಷ್ಣ ಲೀಲೆಯನ್ನು ಅಪ್ಪಟ ನಾಸ್ತಿಕರೂ ಶ್ರದ್ಧಾ ಭಕ್ತಿಯಿಂದ ಭಜಿಸುತ್ತಿರುವುದು ನಗೆಯ ಸಾರಥಿಗೆ ಕುತೂಹಲಕರವಾಗಿ ಕಂಡಿದೆ. ಟಿವಿ ಏಳು, ಎಂಟು, ಒಂಭತ್ತು ಮುಂತಾದ ವಾಹಿನಿಗಳೆಲ್ಲ ಯಾರ್ಯಾರನ್ನೋ ಹಿಡಿದು ತಂದು ಅವರ ಮನದಾಳದ ಮಾತನ್ನು, ಬೇರೊಬ್ಬರ ‘ಆತ್ಮಕತೆ’ಯನ್ನು ಭರ್ಜರಿಯಾಗಿ ಬಹಿರಂಗ ಪಡಿಸುತ್ತಿರುವುದನ್ನು ಕಂಡು ಸಾಮ್ರಾಟರು ಮತ್ತೊಂದು ಸಾಹಸಕ್ಕೆ ಕೈಯನ್ನು ಮಾತ್ರ ಹಾಕಿದ್ದಾರೆ. ಹೀಗಾಗಿ ತಮ್ಮ ಮತ್ತೊಂದು ಶರೀರವನ್ನು, ಮೆದುಳಿಲ್ಲದ ತಲೆಯನ್ನು ದೂರದ ‘ಮಹಾ…ರಾಷ್ಟ್ರ’ಕ್ಕೆ ರವಾನಿಸಿದ್ದಾರೆ.

ತುಂಬಾ ಶೀಘ್ರದಲ್ಲಿಯೇ ಈ ಎರಡೂ ಸಂದರ್ಶನಗಳು ಸುದರ್ಶನ ಚಕ್ರದಂತೆ ಬೀಸಿ ಬಂದು ವಿವಾದಗಳನ್ನು ಖಂಡತುಂಡವಾಗಿ ಕತ್ತರಿಸಿ ಸಾವಿರ ತುಂಡು ಮಾಡಲಿವೆ ಎಂದು ರೋಮಾಂಚನದಿಂದ ಹೇಳಲು ಬಯಸುತ್ತೇವೆ.


Technorati : , , ,

ನಗಾರಿ ಸದ್ದು ಮುಗಿಲು ಮುಟ್ಟುತ್ತಿದೆ!

28 ಜನ

ಅಬ್ಬಬ್ಬಾ! ನಗೆ ನಗಾರಿಯ ಸದ್ದು ಕಿವಿಗಡಕಿಚ್ಚುವಂತೆ ಮಾರ್ದನಿಸುತ್ತಿದೆ. ಕನ್ನಡದ ಬ್ಲಾಗಿಗರ ಹುಮ್ಮಸ್ಸು, ಅವರ ಆಸಕ್ತಿ, ಸಹೃದಯತೆಗೆ ನಗಾರಿ ‘ಮಿಡಿಯುತ್ತಿದೆ.’ ಈ ಬ್ಲಾಗಿನ ಬಾಗಿಲು ತೆರೆದದ್ದು ನಿನ್ನೆ(ಜನವರಿ ೨೭) ಒಂದೂ \ವರೆ ದಿನದಲ್ಲಿ ಹಿಟ್ಟುಗಳನ್ನು ಪಡೆದಿದೆ! ಇವತ್ತೊಂದೇ ದಿನ, ಈ ವರೆಗೆ ನೂರಾ ಹನ್ನೆರಡು ಮಂದಿ ಬ್ಲಾಗಿಲಿಗೆ ಬಂದು ನಗಾರಿ ನುಡಿಸಿದ್ದಾರೆ!7.png

ಆದರೆ ಅಷ್ಟು ಮಂದಿ ಬಂದು ಸುಮ್ಮನೆ ಕಣ್ಣು ಹೊಡೆದು ಹೋಗಿದ್ದಾರೆ. ಈ ಬ್ಲಾಗಿಲಿಗೆ ಬಂದ ಅತಿಥಿ ಗೂಡು ಹೇಗಿದೆ ಎಂದು ಒಂದೆರಡು ಸಾಲನ್ನಾದರೂ ಕಮೆಂಟ್ ಬಾಕ್ಸಿನಲ್ಲಿ ಗೀಚಿದರೆ ನಗಾರಿಗೆ ಸಂತೋಷ. ನಗಾರಿಯ ಸ್ವರೂಪ ಈಗ ಹೇಗಿದೆಯೋ ಅದು ನಿಮಗೆ ಮೆಚ್ಚುಗೆಯಾಯಿತೇ? ಇನ್ನು ಹೇಗೆ ಬೆಳೆಯಬಹುದು? ಏನೇನನ್ನು ಸೇರಿಸಿಕೊಳ್ಳಬಹುದು ಎಂಬ ನಿಮ್ಮ ಸಲಹೆಗಳಿಂದ ನಗಾರಿ ಸಮೃದ್ಧಗೊಳ್ಳಬೇಕು.

ಒಂದೇ ಒಂದು ನಲ್ಮೆಯ ಪತ್ರ ಬರೆಯುತ್ತೀರಾ, ಪ್ಲೀಸ್!


Technorati : , , ,

ಮಣ್ಣಿನ ಪ್ರಾಡಕ್ಟ್ ವೇದೇಗೌಡರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ!

27 ಜನ

(ರಾಷ್ಟ್ರೀಯ ‘ಶಿಕ್ಷೆ’ಣ ಬ್ಯೂರೊ)

ನವದೆಹಲಿ: ಕರ್ನಾಟಕ ಎಂಬ ಸರ್ವ ಸಹಿಷ್ಣು ಹಾಗೂ ಸಹಾನುಭೂತಿ ಪ್ರಿಯರ ನಾಡಿನಲ್ಲಿ ಮಾನ್ಯ ವೇದೇ ಗೌಡರ ಹೆಸರು ಕೇಳದವರು ಯಾರೂ ಇಲ್ಲ. ‘ಮಣ್ಣಿನ ಮಗ’, ‘ಧೂಳಿನಿಂದೆದ್ದು ಬರುವ ಫೀನಿಕ್ಸ್’, ‘ಪದ್ಮನಾಭನಗರದ ವೃದ್ಧ ಮಾಂತ್ರಿಕ’, ‘ಕಾಳ ಸರ್ಪಯೋಗ ಮಾಯಾವಿ’, ‘ಪುತ್ರ ವ್ಯಾಮೋಹಿ ಧೃತರಾಷ್ಟ್ರ’ ಎಂಬಂತಹ ಅಭಿದಾನಗಳನ್ನು ಪಡೆದ ಮಾನ್ಯ ವೇದೇಗೌಡರಿಗೆ ಸಿಹಿ ಸುದ್ದಿ. ಅಖಿಲ ಭಾರತ ಅಪರೂಪ ಪ್ರತಿಭಾನ್ವೇಷಣಾ ಸಂಸ್ಥೆಯ ಶಿಫಾರಸ್ಸಿನ ಮೇಲೆ ಕೇಂದ್ರ ಸರಕಾರ ಮಾಜಿ ಪಿಎಮ್ಮು ಗೌಡರಿಗೆ ‘ಅತ್ಯುತ್ತಮ ‘ಶಿಕ್ಷೆ’ಕ’ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ.

‘ನಾವು ಏನೂಂತ ತೋರಿಸುವ ತಕ್ಕ ಪಾಠವನ್ನು ಕಲಿಸುತ್ತೀನಿ’ ಎಂಬ ಒಂದು ಸಾಲಿನ ಆದರ್ಶವನ್ನು ಬದುಕಿನ ಮಂತ್ರವಾಗಿಸಿಕೊಂಡಿರುವ ಗೌಡರು ಆ ಮೂಲಕ ನಾಡಿನ ಸಮಸ್ತರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿದ್ದಾರೆ. ‘ನನ್ನ ಜೀವನವೇ ನನ್ನ ಸಂದೇಶ’ ಎಂಬಂತಹ ಮಹಾತ್ಮರ ಆದರ್ಶವನ್ನು ಅಕ್ಷರಶಃವಾಗಿ ಪಾಲಿಸುತ್ತಿರುವ ಮಾನ್ಯ ವೇದೇ ಗೌಡ್ರು ಅನೇಕರ ಪಾಲಿಗೆ ಗಾಡ್ ಫಾದರ್, ಕೆಲವರಿಗೆ ಬೆಸ್ಟ್ ಫಾದರ್!

ಮಾನ್ಯ ಗೌಡರಿಗೆ ಪ್ರಶಸ್ತಿ ಲಭಿಸಿದ ವಿಷಯವನ್ನು ತಿಳಿದು ಅವರ ಮೆಚ್ಚಿನ ಹಾಗೂ ನೆಚ್ಚಿನ ನೇರ ಶಿಷ್ಯಂದಿರು ಹಾಗೂ ಅವರಿಂದ ಏಕಲವ್ಯನ ಮಾದರಿಯಲ್ಲಿನ ಶಿಕ್ಷಣವನ್ನು ಪಡೆದ ಶಿಷ್ಯಕೋಟಿ ಅಪಾರ ಸಂತಸವನ್ನು ವ್ಯಕ್ತಪಡಿಸಿದೆ.

‘ಆಹಿಂದ’ ‘ಈ ಮುಂದ’ ಎಂದು ಕುರಿ ಹಿಂಡು ಕಟ್ಟಿಕೊಂಡು ಓಡಾಡುತ್ತಿದ್ದ ಬಿದ್ದ ರಾಮಯ್ಯನವರು ನಮ್ಮ ಸುದ್ದಿಚೋರರಲ್ಲಿ ತಮ್ಮ ಸಂತಸವನ್ನು ತೋಡಿಕೊಳ್ಳುತ್ತ, ”ಜೇಡಿ ಮಣ್ಣು ಪಕ್ಷವೆಂಬ ಹೆಸರಿನ ವಿಶ್ವವಿದ್ಯಾಲಯದಲ್ಲಿ ನಾನು ಕಲಿತ ಪಾಠಗಳಿಗೆ ಬೆಲೆಯೇ ಇಲ್ಲ. ಅದರಲ್ಲೂ ವಿಶ್ವವಿದ್ಯಾಲಯದ ಏಕೈಕ ‘ಶಿಕ್ಷೆ’ಕರಾಗಿದ್ದ ವೇದೇಗೌಡರು ನನಗೆ ಕಲಿಸಿದ ಪಾಠವನ್ನು ನಾನು ಜೀವನ ಪೂರ್ತಿ ಮರೆಯಲಾರೆ, ಅಷ್ಟು ಪ್ರಭಾವಶಾಲಿಯಾದ ‘ಪಾಠ’ ಅವರದು. ಅವರಂತಹ ಗುರುವನ್ನು ಪಡೆದ ನಾನೇ ಧನ್ಯ. ‘ಗುರು ಸತ್ತ ಹೆಣ, ಅವನನ್ನು ಹೆಗಲ ಮೇಲೆ ಸದಾ ಹೊತ್ತಿರಬಾರದು’ ಎಂಬ ಸತ್ಯಕಾಮರ ಮಾತನ್ನು ನನಗೆ ಮನದಟ್ಟು ಮಾಡಿಸಿ ಅದನ್ನು ‘ಕೈ’-ವಾಚಾ-ಮನಸಾ ಪಾಲಿಸುವುದನ್ನು ಕಲಿಸಿದ್ದು ನಮ್ಮ ಗೌಡರು. ಅದರ ಪರಿಣಾಮವಾಗಿಯೇ ನಾನು ತಲೆಯ ಮೇಲೆ ಹೊರೆ ಹೊತ್ತ ಮಹಿಳೆಯನ್ನು ಬಲಗಾಲಿನಲ್ಲೂ, ಹೆಗಲ ಮೇಲಿದ್ದ ಸತ್ತ ಗುರುವಿನ ಹೆಣವನ್ನು ಎಡಗಾಲಿನಲ್ಲೂ ಒದ್ದು, ವಿಶ್ವ ಮಾತೆಯ ‘ಕೈ’ ಹಿಡಿದು ಮುಂದೆ ನಡೆದೆ. ನಮ್ಮ ಭವಿಷ್ಯ ನಮ್ಮ ‘ಕೈ’ಯಲ್ಲಿದೆ ಎಂಬುದನ್ನು ಪ್ರತ್ಯಕ್ಷವಾಗಿ ಕಲಿಸಿಕೊಟ್ಟು ಕಣ್ಣು ತೆರೆಸಿದವರು ವೇದೇ ಗೌಡರು. ಅವರ ಋಣವನ್ನು ಅವರು ಮಣ್ಣಿಗೆ ಪ್ರಿಯವಾಗುವವರೆಗೂ ಮರೆಯೆನು.” ಎಂದು ಹೇಳಿದ್ದಾರೆ.

ಮತ್ತೊಬ್ಬ ಅಪರೂಪದ ಶಿಷ್ಯನನ್ನು ನಮ್ಮ ಸುದ್ದಿಚೋರರು ಅಟ್ಟಿಸಿಕೊಂಡು ಹೋದಾಗ ಅವರು ‘ಖರೆ ಎಂಜ್ಲಾದೆ’ಯವರ ಜೊತೆಗಿದ್ದದ್ದು ನಮಗೆ ಇರುಸುಮುರುಸು ಉಂಟುಮಾಡಿತು. ಆದರೂ ಅವರು ನಮ್ಮನ್ನು ಬರಮಾಡಿಕೊಂಡು ಮಾತಿಗಿಳಿದರು. ಅವರು ಬೇರಾರೂ ಅಲ್ಲ, ನಮ್ಮ ರಾಜ್ಯ ಕಂಡ ಅತೀ ಯಶಸ್ವಿ ಹಾಗೂ ಅತೀ ಪ್ರಾಮಾಣಿಕ, ಸ್ವಚ್ಛ ಹಸ್ತದ ಹಾಜಿ ಮುಖ್ಯಮಂತ್ರಿ (ಇದು ಹೇಗೆ ಎಂಬುದನ್ನು ತನಿಖೆ ಮಾಡಲು ನಮ್ಮ ಸಂಗಡ ಹಿಡನ್ ಸುದ್ದಿಚೋರನನ್ನು ಕರೆದುಕೊಂಡು ಹೋಗಿದ್ದೆವು. ಅದರ ಬಗ್ಗೆ ಆತನ ವರದಿಯನ್ನು ನಂತರ ಡಿಸ್ ಕ್ಲೋಸ್ ಮಾಡಲಿದ್ದೇವೆ) ಚೆಡ್ಯೂರಪ್ಪ! ”ಮಾನ್ಯ ವೇದೇಗೌಡರಿಗೆ ಅತ್ಯುತ್ತಮ ‘ಶಿಕ್ಷೆ’ಕ’ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತ ಹಾಗೂ ಸಮರ್ಥನೀಯವಾದದ್ದು. ನಾನು ಅವರ ನೇರ ವಿದ್ಯಾರ್ಥಿಯೇನಲ್ಲ. ನಾನು ಏಕಲವ್ಯನಂತೆ ಪರೋಕ್ಷವಾಗಿ ಅವರಿಂದ ‘ಪಾಠ’ ಕಲಿತವನು. ಅವರು ನನ್ನ ಪಾಲಿಗೆ ದ್ರೋಣಾಚಾರ್ಯರು. ಹಾಗೆ ನೋಡಿದರೆ ಅವರ ಪಾಲಿಗೆ ನಾನು ಅಸ್ಪೃಶ್ಯ. ಅವರು ನನ್ನನ್ನು ‘ಕಾಮುವಾದಿ’ ಹಿನ್ನೆಲೆಯವನು ಅಂತ ಬಹಳ ದಿನ ದೂರವಿಟ್ಟಿದ್ದರು. ಆದರೆ ಗುರು ದ್ರೋಣರ ಮಗ ಅಶ್ವತ್ಥಾಮನು ಏಕಲವ್ಯನನ್ನು ಹಚ್ಚಿಕೊಂಡು ಮರೆಯಲ್ಲಿ ನಿಂತು ವಿದ್ಯೆ ಕಲಿಯಲು ನೆರವಾದಂತೆ ಗೌಡರ ಪುತ್ರ ರತುನ ಜೋಕುಮಾರರು ನನ್ನ ಕೈಹಿಡಿದರು. ಗೌಡರೂ ದ್ರೋಣರಂತೆ ಮರೆಯಲ್ಲಿ ನಿಂತಂತೆ ಮಾಡಿ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ದ್ರೋಣರು ಶಿಷ್ಯನ ಹೆಸರು ಅಜರಾಮರವಾಗಿ ಇತಿಹಾಸದ ಪುಟಗಳಲ್ಲಿ ಉಳಿಯಲಿ ಎಂದು ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದಂತೆ ನನ್ನ ಗುರುಗಳೂ ನನ್ನ ಹೆಸರನ್ನು ಜಗತ್ಪ್ರಸಿದ್ಧಗೊಳಿಸಲು ಅಧಿಕಾರ ಹಸ್ತಾಂತರಿಸುವಾಗ ನನಗೆ ಕೈ -ಕರುಣಿಸಿದರು. ಅವರಿಂದಾಗಿಯೇ ನಾನು ಇಂದು ಗಿನ್ನಿಸ್ ದಾಖಲೆಯ ಪುಟಗಳಲ್ಲಿ ಸರ್ದಾರ್ಜಿಯನ್ನು ಹಿಮ್ಮೆಟ್ಟಿಸಿ ‘ಜಗತ್ತಿನ ಅತಿ ದೊಡ್ದ ಮೂರ್ಖ’ ಸ್ಥಾನವನ್ನು ಪಡೆದುಕೊಂಡಿದ್ದೇನೆ. ಅವರು ಕಲಿಸಿದ ಪಾಠದಿಂದ ಜನರಲ್ಲಿ ನನ್ನ ಬಗ್ಗೆ ಅಪಾರ ಅನುಕಂಪ ಮೂಡಿದೆ. ಇದಕ್ಕೆಲ್ಲ ನನ್ನ ಗುರುಗಳೇ ಕಾರಣ.” ಎಂದು ತಮ್ಮ ಸಂತಸ, ಸಡಗರವನ್ನು ನಮ್ಮೆದುರು ತೆರೆದಿಟ್ಟರು.

ಈ ನಡುವೆ ಚೆಡ್ಯೂರಪ್ಪನವರು ರಾಜ್ಯ ಕಂಡ ಅತ್ಯಂತ ಸ್ವಚ್ಛ ಹಸ್ತದ ಮುಖ್ಯ ಮಂತ್ರಿ ಎಂಬ ಮಾಹಿತಿಯನ್ನು ಬೆನ್ನಟ್ಟಿದ್ದ ನಮ್ಮ ಗುಪ್ತ ಸುದ್ದಿ ಚೋರರು ಈ ಸ್ಕೂಪ್ ವರದಿ ನಿಮಗಾಗಿ ಎತ್ತಿಕೊಂಡು ಬಂದಿದ್ದಾರೆ. ‘ಮಾನ್ಯ ಚೆಡ್ಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೇವಲ ಒಂದು ವಾರ ಕುಳಿತಿದ್ದರಿಂದ ಅವರಿಗೆ ಕೈ ಹೊಲಸು ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಸಿಗಲಿಲ್ಲ. ಹಾಗಾಗಿ ಅವರು ಅತ್ಯಂತ ಶುದ್ಧ ಹಸ್ತದ ಮು.ಮ ಎಂದು ತಿಳಿದು ಬಂದಿದೆ. ಇದಕ್ಕೂ ಸಹ ಅವರ ಗುರು ವೇದೇಗೌಡರ ಕೃಪೆಯೇ ಕಾರಣವೆಂಬುದು ಪತ್ತೆಯಾಗಿದೆ.’

ಒಟ್ಟಿನಲ್ಲಿ ಪ್ರಶಸ್ತಿಯು ವೇದೇ ಗೌಡರಿಗೆ ಸಂದದ್ದು ಅತ್ಯಂತ ಸಮಂಜಸವಾದದ್ದು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.


Technorati : , ,

ಗಾಳಿಪಟದ ಬಾಲಂಗೋಚಿ ವಿವಾದ

27 ಜನ

ಕನ್ನಡದ ಪೋರ್ಟಲ್‌ಗಳಲ್ಲಿ ಪ್ರಸಿದ್ಧವಾದದ್ದು ಹಾಗೂ ಬಹು ಕ್ರಿಯಾಶೀಲವಾಗಿ ನಡೆಯುತ್ತಿರುವುದು picture-595.jpg‘ಸಂಪದ’. ಸಂಪದದಲ್ಲಿ ತುಂಬಾ ದಿನಗಳಿಂದ ಕಾರ್ಯಶೀಲರಾಗಿರುವ ಬ್ಲಾಗಿಗ ಸುನೀಲ್ ಜಯಪ್ರಕಾಶ್ ರ ಹಾಸ್ಯಾತ್ಮಕವಾದ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.’ಗಾಳಿಪಟ’ ಧೂಳೀಪಟವಾಗುವಂತಹ ವಿಮರ್ಶೆಗಳು ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ನೇರ ದಿಟ್ಟ ರಿಪೋರ್ಟ್.

೧೮-೦೧-೨೦೧೮

ಕಳೆದ ದಶಕದಲ್ಲಿ ಬಿಡುಗಡೆಯಾದ “ಗಾಳಿಪಟ” ಸಿನಿಮಾ ಸೃಷ್ಠಿಸಿದ ವಿವಾದಗಳು ಅನೇಕ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಗಾಳಿಪಟಕ್ಕೆ ಈ ದಿನ ಹತ್ತುವರ್ಷಗಳು ತುಂಬಿದ ಕಾರಣ, ಅದರ ಸುತ್ತ ಏನೇನೆಲ್ಲಾ ಆರೋಪ ಮಾಡಲಾಗಿದ್ದವು ಎಂಬುದರ ಕುರಿತು ಒಂದು ನೇರ, ದಿಟ್ಟ ರಿಪೋರ್ಟ್ ನಮ್ಮ ನಿರಂತರ ಪ್ರತಿನಿಧಿಯಿಂದ.

೧. ಪಿ.ಯು.ಸಿ ಓದುತ್ತಿರುವ ಹುಡುಗಿಗೆ ಮದುವೆ ಏರ್ಪಡಿಸುವುದು ಕಾನೂನುಬಾಹಿರ ಎಂದು ಆರೋಪಿಸಿ, ಅಖಿಲ ಭಾರತ ಮಹಿಳಾ ಆಯೋಗದ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷೆ, “ಯೂವಿಯಲ್ ಕಾರ್ಮೆನೋಸಿಲಿಯಾ”ರವರಿಂದ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಕರುಗಳಿಗೆ ನೊಟೀಸ್ ಜಾರಿ ಮಾಡಲಾಗಿತ್ತು.

೨. ಚಿತ್ರದಲ್ಲಿ ವಿಧವೆಯ ಪಾತ್ರವನ್ನು ಕೋಲೆಬಸವನಂತೆ ಬಳಸಿಕೊಂಡಿರುವುದು, “ಮಹಿಳಾ ಹಕ್ಕುಗಳನ್ನು ದಮನ ಮಾಡುವ ಕಾರ್ಯ” ಎಂದು ಮಹಿಳಾ ಹಕ್ಕು ಆಯೋಗ ಯೋಗರಾಜ್ ಭಟ್ಟರಿಗೆ ನೋಟೀಸ್ ಜಾರಿ ಮಾಡಿದೆ. ಮಹಿಳೆಗೆ ಎಷ್ಟೇ ಕಷ್ಟ ಬಂದರೂ ಆಕೆ ಅದನ್ನು ಸೈರಿಸಿಕೊಳ್ಳಬೇಕು ಎಂಬುದನ್ನು ಸಾರುತ್ತದೆ ಎಂದು “ಮೀನಸ್ ಮೈನಾ ಓವಿಕಾನಗನ್” ಅವರು ಆಯೋಗಕ್ಕೆ ದೂರು ನೀಡಿದ್ದರು.

೩. ಕಾನ್ವೆಂಟ್ ಶಾಲೆಗಳಲ್ಲಿ ಕನ್ನಡ ಕಡೆಗಣಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ಕ್ರೈಸ್ತರೂ ಕನ್ನಡದವರೇ ಎಂದು ಸಾರಲು “ಕ್ಯಾಥೋಲಿಕ್ ಕನ್ನಡ ಕ್ರೈಸ್ತ ಸಂಘ” ಪೊಲೀಸ್ ಕಣ್ಗಾವಲಿನಲ್ಲಿ ಸಂತ ಮೇರಿಯಮ್ಮನ ಜಾತ್ರೆಯನ್ನು ಆಯೋಜಿಸಿ ತನ್ನ ಪ್ರತಿಭಟನೆಯನ್ನು ಶಾಂತ ರೀತಿಯಲ್ಲಿ ಪ್ರಸ್ತುತಪಡಿಸಿತ್ತು.

೪. “ಮನದ ಮುಗಿಲಲ್ಲಿ ಮುಹಬ್ಬತ್” ಎಂಬ ಹೆಸರಿಟ್ಟಿದ್ದರೂ ಚಿತ್ರದಲಿ ಮುಸ್ಲಿಂ ಸಂವೇದನೆ ಕಾಣಿಸುವುದಿಲ್ಲ. ಅದೂ ಅಲ್ಲದೆ ಈ ಚಿತ್ರದಲ್ಲಿ ಹಂದಿಯನ್ನು ಕೊಲೆ ಮಾಡುವ ಸನ್ನಿವೇಶಗಳಿದ್ದು, ಆದಕಾರಣ “ಮುಸ್ಲಿಮರು” ಈ ಸಿನಿಮಾ ನೋಡಬಾರದು ಎಂಬ ಫತ್ವಾ ಹೊರಡಿಸಲಾಗಿತ್ತು.

೫. ಈ ಚಿತ್ರದಲ್ಲಿ ತಮ್ಮ ಸಮಾಜದ ಒಬ್ಬರನ್ನು ಪ್ರಾಣಿಕುಲಕ್ಕೆ ಹೋಲಿಸಿ ಅವಮಾನ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿತ್ತು. “ಚಿತ್ರದಲ್ಲಿ ಒಬ್ಬ ದಲಿತನನ್ನು ಅವಶ್ಯವಿಲ್ಲದಿದ್ದರೂ ಮೂಗನನ್ನಾಗಿ ಮಾಡಲಾಗಿತ್ತು”, ಎಂಬುದು ದಸಂಸದ ಆಕ್ರೋಶಕ್ಕೆ ಕಾರಣ.

Gaalipata.jpg
೬. ತಮ್ಮ ಸಹಸಂಘಗಳ ಆರೋಪದಲ್ಲಿ ನಿಜಕ್ಕೂ ಹುರುಳಿದೆ ಎಂದು“ಅಹಿಂದ” ಅವುಗಳಿಗೆ ತನ್ನ ಪೂರ್ಣ ಬೆಂಬಲ ಘೋಷಿಸಿದೆ. ಅಹಿಂದ ಒಂದು ಹೆಜ್ಜೆ ಮುಂದೆ ಹೋಗಿ, ಪುರೋಹಿತಶಾಹಿ ಸಮಾಜವನ್ನು ಕಿತ್ತೊಗೆದು, ವಿಶ್ವದ ಏಕೈಕ ಸಮಾಜಮುಖಿ ಧರ್ಮವಾದ ಬೌದ್ಧ ಧರ್ಮದ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸುವಂತೆ ತನ್ನ ಸಹಸಂಘಟನೆಗಳಿಗೆ ಕರೆ ನೀಡಿತ್ತು.

೭. “ಬ್ರಾಹ್ಮಣರು ಮತ್ತು ಒಕ್ಕಲಿಗರು ಒಂದಾಗಿಬಿಟ್ಟರೆ ವೈದಿಕ ಧರ್ಮ ಪುನಶ್ಚೇತನಗೊಳ್ಳುತ್ತದೆ ಎಂಬುದನ್ನು ಮನಗಂಡಂತಿರುವ ಯೋಗರಾಜ ಭಟ್ಟರು, ಪುರೋಹಿತಶಾಹಿ ಸಮಾಜವನ್ನು ಹೇಗಾದರೂ ಮಾಡಿ ಮುಂದುವರಿಸಿಕೊಂಡು ಹೋಗಲೇಬೇಕು ಎಂಬ ಸಂದೇಶವನ್ನು ಸಾರುವ ಸೂಕ್ಷ್ಮ ಹಾಗು ಅತಿ ಹೀನ ಮನಸ್ಥಿತಿಯ ಸಿನಿಮಾ ಮಾಡಿದ್ದಾರೆ” ಎಂದು “ವಿಶ್ವ ಮಾನವ ವಿಮರ್ಶಕರ ಸಂಘ” ಗಂಭೀರ ಆರೋಪ ಮಾಡಿತ್ತು. “ಒಟ್ಟಿನಲ್ಲಿ ಬ್ರಾಹ್ಮಣರು ಮತ್ತು ಗೌಡರು ಒಂದಾಗಿಬಿಡಬೇಕು ಎಂಬ ಹಿಡನ್ ಅಜೆಂಡಾ ಈ ಸಿನಿಮಾದಲ್ಲಿದೆ” ಎಂಬುದೇ ಇಷ್ಟೆಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು.

೮. ಬ್ರಾಹ್ಮಣ ಕುಟುಂಬವೊಂದು ಬೇಟೆಯಲ್ಲಿ ನಿರತವಾಗಿರುವಂತೆ ಚಿತ್ರಿಸಿದ್ದರೂ, ಕೊನೆಗೆ ಅದೇ ಹಂದಿಯಲ್ಲಿ ವರಾಹಾವತಾರವನ್ನು ತೋರಿಸಿ, ಅದರ ಕಣ್ಣಿನಿಂದ ದಿವ್ಯ ಬೆಳಕನ್ನು ಕಾಣಿಸುತ್ತಲೇ ಒಬ್ಬನಿಗೆ ಮೋಕ್ಷ ನೀಡಿಸಿದ ಕಾರಣ, ಗಾಳಿಪಟದ ನಿರ್ದೇಶಕ ಯೋಗರಾಜ್ ಭಟ್ಟರಿಗೆ “ಬ್ರಾಹ್ಮಣರ ಸಂಘ”ವು, “ವರ್ಷದ ಬ್ರಾಹ್ಮಣ” ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಈ ತೀರ್ಮಾನ ಅದೇ ಸಮಾಜದ ಇನ್ನಿತರ ಅಭಿಮಾನಿ ಸಂಘಗಳ ಕೆಂಗಣ್ಣಿಗೆ ಗುರಿಯಾಗಿ ನಂತರ ಪ್ರಶಸ್ತಿ ತಿಪ್ಪೆ ಗುಂಡಿಗೆ ಬಿದ್ದುಹೋದದ್ದನ್ನು ನೆನಪಿಸಿಕೊಳ್ಳಬಹುದು.

೯. ಒಟ್ಟಿನಲ್ಲಿ ಗಾಳಿಪಟ, “ಪ್ರಗತಿಪರ ಸಮಾಜದ” ಯಾವ ಒಬ್ಬರೂ ನೋಡಬಾರದ ಸಿನಿಮಾ ಆಗಿದ್ದರೂ ಜನ ಅದನ್ನು ಇಷ್ಟಪಟ್ಟಿದ್ದು ಜಗತ್ತಿನ ೮+೮ನೆಯ ಅದ್ಭುತ!!!! ಎಂದು ಸಾಹಿತ್ಯವಲಯ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿತ್ತು.

೧೦. “ಅಖಿಲ ಭಾರತ ಸಂಸ್ಕೃತ ಪ್ರಚಾರ ಪರಿಷತ್ತಿನ” ಅಧ್ಯಕ್ಷರಾದ ಡಾ||ಸುಮಕೋಮಲಾನಂದಶಂಕರವಿದ್ಯಾಮತಿಶ್ರೀಗುಣಶೀಲರಘುವರೇಣ್ಯರು ಗಾಳಿಪಟ ಚಿತ್ರದಲ್ಲಿ ಒಂದು ಕಡೆ, ಸಂಸ್ಕೃತ ಪದವೊಂದನ್ನು “ಅಚ್ಚ ಕನ್ನಡ” ಪದ ಎಂಬುದಾಗಿ ಹೇಳಿಸಿರುವುದನ್ನು ಖಂಡಿಸಿ ಮಾತನಾಡುತ್ತ, “ಸಂಸ್ಕೃತವಿಲ್ಲದ ಕನ್ನಡ ಜಾಳು” ಎಂಬುದಾಗಿ ಹೇಳಿದ್ದರು. ಈ ಹೇಳಿಕೆ, ಅನೇಕ ಆನ್ಲೈನ್ ಫೋರಮ್ಮುಗಳಲ್ಲಿ ವಾದವಿವಾದಕ್ಕೆಡೆ ಮಾಡಿತ್ತು.

೧೧. “ತಪ್ಪುಗಳಿಗೆ ಜೈ”, ಎಂಬುದನ್ನು ತೋರಿಸಿಕೊ”ಣ್ಣ” ಯೋಗರಾಜ್ ಭಟ್ಟರಿಗೆ “ಕನ್ನಡ ಸಂಘ”ವು ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ “ವರುಣ ಅವಕೃಪೆ ಕಾರ್ಯಕ್ರಮ ಅಸಂಪೂರ್ಣ” ಎಂಬ ಸುದ್ಧಿ ನಾಡಿನ ಪತ್ರಿಕೆಗಳಲ್ಲಿ ಮರುದಿನ ಕಾಣಿಸಿಕೊಂಡಿತ್ತು.

೧೨. “ಕರಾವಳಿಯ ಕಲೆಯಾದ ಯಕ್ಷಗಾನವನ್ನು ಚಿತ್ರದಲ್ಲಿ ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ” ಎಂದು ಮಲೆನಾಡು ಯಕ್ಷಗಾನ ಅಭಿಮಾನಿಗಳ ಸಂಘ ಉಗ್ರ ಹೋರಾಟಕ್ಕೆ ಕರೆ ನೀಡಿತ್ತು.
……………………………………………………………………………………………………………..


ಬ್ಲಾಗಾರ್ಪಣೆ
– “ಸೃಜನಶೀಲ” ಎಂಬ ಪದವನ್ನು ಅಡ್ಡಡ್ಡ ಉದ್ದುದ್ದ ಸೀಳಿ ಸೀಳಿ ಕನ್ನಡಿಗರನ್ನು ಕಲೆಯಿಂದ ದೂರಮಾಡಿ ಕನ್ನಡತನವನ್ನು ಕೊಲೆಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತ ಮಹಾಮಹಿಮ ಧೀಮಂತರಿಗೆ.

(ಮೂಲ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು)

ಭಾರತದ ಗೆಲುವಿಗೆ ‘ಕೋತಿ’ಯಾಟ ಕಾರಣ!

27 ಜನ

(ಜಾಗತಿಕ ಕಿರಿಕಿರಿಕೆಟ್ಟು ಬ್ಯೂರೊ)

ಪರ್ತ್, ಆಸ್ಟ್ರೇಲಿಯಾ: ತಮ್ಮ ಪಾಲಿಗೆ ಅಬೇಧ್ಯವಾದ ಕೋಟೆಯಂತಿದ್ದ ‘ಪರ್ತ್’ನಲ್ಲಿ ಭಾರತದ ಕ್ರಿಕೆಟ್ ಕಲಿಗಳು, ಪೇಪರ್ ಹುಲಿಗಳು ಹೀನಾಯಮಾನವಾಗಿ ಸೋಲಿಸಿರುವುದರಬಗ್ಗೆ ಆಸ್ಟ್ರೇಲಿಯಾ ತೀವ್ರ ಮುಖಭಂಗವನ್ನು ಅನುಭವಿಸುತ್ತಿತ್ತು. ಆಸ್ಟ್ರೇಲಿಯಾ ಎಂಬ ಕ್ರಿಕೆಟ್ ತಂಡದ ಪರ್ಯಾಯ ಹೆಸರೇ ಗೆಲುವು ಎಂದು ಸಾರಿ ಹೇಳಿದ ಆಸ್ಟ್ರೇಲಿಯಾದ ನಾಯಕ ರಿಕಿಕಿರಿ ಪೇಂಟಿಂಗ್ ಕ್ರಿಕೆಟ್ಟಿನಲ್ಲಿ ತಮ್ಮ ಮೇಲೆ ಗೆಲ್ಲಲ್ಲು ಖುದ್ದು ಆ ದೇವರಿಗೂ ಸಾಧ್ಯವಿಲ್ಲವೆಂದೂ, ಹನ್ನೊಂದು ಮಂದಿ ಆಡುವ ಆಟದಲ್ಲಿ ತಾವು ಮೂರು ಮಂದಿ ಅಂಪೈರುಗಳನ್ನು ಕಷ್ಟಪಟ್ಟು ಸೇರಿಸಿಕೊಂಡು ಒಟ್ಟು ಹದಿನಾಲ್ಕು ಮಂದಿ ಆಡುವಾಗ ತಮ್ಮ ಮೇಲೆ ಗೆಲ್ಲಲ್ಲು ಯಾರಿಗೆ ತಾನೆ ಸಾಧ್ಯ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ರಟ್ಟುಮಾಡಿದರು. ಹೀಗಿರುವಾಗ ‘ಪರ್ತ್’ನಲ್ಲಿ ಭಾರತೀಯರು ನಮ್ಮ ಮೇಲೆ ಗೆಲ್ಲುವುದಕ್ಕೆ ಹೇಗೆ ಸಾಧ್ಯ? ಇದರ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿರಬೇಕು ಎಂದು ಗುಮಾನಿ ವ್ಯಕ್ತಪಡಿಸಿ ಒಂದೇ ಕಣ್ಣಿನಲ್ಲಿ ಅಳಲು ಪ್ರಾರಂಭಿಸಿದರು.

ಕಿರಿಕಿರಿ ಪೇಂಟಿಂಗ್‌ರ ದುಃಖವನ್ನು ತಾಳಲಾರದೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರತದ ಈ ಅಭೂತ-ಭವಿಷ್ಯ-ಪೂರ್ವ-ಪಶ್ಚಿಮ ಸಾಧನೆಗೆ ಕಾರಣವೇನು ಎಂಬ ಚಿದಂಬರ ರಹಸ್ಯವನ್ನು ಬೇಧಿಸಲು ಸ್ಕಾಟ್ ಯಾರ್ಡ್ ಪೊಲೀಸರನ್ನು ಕರೆಸಿಕೊಂಡರು. ಅಸಂಖ್ಯಾತ ಚಿದಂಬರ ರಹಸ್ಯಗಳನ್ನು ಎಡಗೈಯಲ್ಲಿ ಬೇಧಿಸಿದ ಖ್ಯಾತಿಯಿರುವ ಸ್ಕಾಟ್ ಯಾರ್ಡ್ ಪೊಲೀಸರು ‘ಪರ್ತ್’ ಕ್ರೀಡಾಂಗಣದ ಒಂದು ಹುಲ್ಲು ಕಡ್ಡಿಯನ್ನೂ ಬಿಡದೆ ತಲಾಶು ನಡೆಸಿ,ಶೂನ್ಯ ಸದಸ್ಯರ ಒಂದು ತಂಡವನ್ನು ಭಾರತಕ್ಕೆ ರವಾನಿಸಿ ಇಲ್ಲಿ ವ್ಯಾಪಕವಾದ ಸಾಕ್ಷಿಗಳನ್ನು ಸಂಗ್ರಹಿಸಿ ತಮ್ಮ ವರದಿಯನ್ನು ಒಪ್ಪಿಸಿದರು. “ಕ್ರೀಡಾಂಗಣದ ಹೆಸರು ‘ಪರ್ತ್’ಎಂಬುದಾಗಿದೆ. ಇಲ್ಲಿ ಮಿಂಚಿನಂತೆ ಹೊಳೆದು, ಆಸ್ಟ್ರೇಲಿಯನ್ ಬೌಲರ್‌ಗಳ ಪಾಲಿಗೆ ಗುಡುಗಿನಂತೆ ಅಬ್ಬರಿಸಿದವರು ವಿ.ವಿ.ಎಸ್.ಲಕ್ಷಣ್. ಇವರ ಪೂರ್ಣ ಹೆಸರುವಂಗಿಪುರಪ್ಪು ವೆಂಕಟಸಾಯಿ ಲಕ್ಷಣ್. ಈ ಹೆಸರಿನಲ್ಲಿರುವ ಸಾಯಿ ಎಂಬುದು ‘ಭಗವಾನ್ ಶ್ರೀ ಸತ್ಯಸಾಯಿ ಬಾಬಾ’ರಮೇಲಿನ ಭಕ್ತಿಯಿಂದ ಸೇರ್ಪಡೆಯಾದದ್ದು. ಅವರು ಇರುವುದುಪುಟ್ಟ’ಪರ್ತಿ’ಯಲ್ಲಿ. ಬಾಬಾರವರು ಅನೇಕಾನೇಕ ಪವಾಡಗಳಿಗೆ ಹೆಸರಾದವರು.ಇಲ್ಲಿರುವ ಕೊಂಡಿಯನ್ನು ಗಮನಿಸಿ, ಕ್ರಿಕೆಟ್ಟು ನಡೆದದ್ದು ‘ಪರ್ತ್’ನಲ್ಲಿ, ಸಾಯಿ ಬಾಬಾ ಇರುವುದು ‘ಪರ್ತಿ’ಯಲ್ಲಿ. ಇದೇ ಈ ಪವಾಡಸದೃಶ ಗೆಲುವಿಗೆ ಕಾರಣ. ಕೇಸ್ ಕಂಪ್ಲೀಟೆಡ್…”singh.jpg

ಆದರೆ ಈ ವರದಿಯನ್ನು ಪರಾಮರ್ಶಿಸಿ ಇದು ಅಡಿಯಿಂದ ಮುಡಿಯವರೆಗೂ ಮಿಥ್ಯವೆಂದು ಪರಿಗಣಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಈ ಕೇಸನ್ನು ಜಗತ್ತಿನಲ್ಲೇ ಶ್ರೇಷ್ಠ ಸುದ್ದಿಚೋರ ಸಂಸ್ಥೆಯಾದ ‘ನಗೆ ನಗಾರಿ ಡಾಟ್ ಕಾಮ್’ನಅದ್ವಿತೀಯ, ಅಪ್ರತಿಮ ವರದಿಚೋರ ನಗೆಸಾಮ್ರಾಟ್ ಕೈಗೊಪ್ಪಿಸಿದರು. ಮೂರುದಿನ, ಮೂರು ರಾತ್ರಿಗಳ ಸತತ ತನಿಖೆಯ ನಂತರ ನಗೆಸಾಮ್ರಾಟರು ಸ್ಫೋಟಕ ಹಾಗೂ ಶೇ.೧೦೧ರಷ್ಟು ಸತ್ಯಸ್ಯ ಸತ್ಯವಾದ ವರದಿಯನ್ನು ಬಹಿರಂಗಪಡಿಸಿದ್ದಾರೆ.

ಬೇರೆಲ್ಲಾ ಪತ್ತೆದಾರರು, ಪಟ್ಟೇದಾರರು ತಮ್ಮ ಗಮನವನ್ನು ಕೇವಲ ‘ಪರ್ತ್’ನ ಮೇಲೆ ಕೇಂದ್ರೀಕರಿಸಿದ್ದರೆ ನಗೆ ಸಾಮ್ರಾಟರು ಕೇಸಿನ ಮೂಲ ಬೇರನ್ನು ಹುಡುಕಿ ಹೊರಟರು. ಅವರು ಹೋಗಿ ತಲುಪಿಕೊಂಡದ್ದು ‘ಸಿಡ್ನಿ’ ಕ್ರೀಡಾಂಗಣಕ್ಕೆ. ಮೂಲ ಬೇರನ್ನು ಕಂಡುಹಿಡಿದ ಅವರ ಕುಶಾಗ್ರಮತಿ ಜಗತ್ತಿನ ಎಲ್ಲಾ ಪತ್ತೇದಾರಿಗಳಿಗೂ ಆದರ್ಶಪ್ರಾಯ. ಇವರ ತಂತ್ರಗಳನ್ನೇ ಕಲಿತು ಹೋದ ಸಾಮಾನ್ಯ ಬುದ್ಧಿವಂತಿಕೆಯ ಹುಡುಗ ಶೆರ್ಲಾಕ್ ಹೋಮ್ಸ್ ಆಗಿ ಹೆಸರು ಮಾಡಿದ್ದು ಈಗ ಇತಿಹಾಸ.

ಇರಲಿ, ವಿಷಯಕ್ಕೆ ಬರೋಣ. ಸಿಡ್ನಿಯಲ್ಲಿ ನಡೆದ ಎರಡನೆಯ ಕ್ರಿಕೆಟ್ ಟೆಸ್ಟ್‌ನಲ್ಲಿವೀರ ಮಾರುತಿಯ ಅವತಾರದಂತೆ ಗದೆಯೆಂಬ ಬ್ಯಾಟನ್ನು ಹಿಡಿದು ಗುರ್‌ಭಜನ್ ಸಿಂಗರು ಹೆಂಡ್ರು ಸೈಮೊಂಡು ಎಸೆದ ಚೆಂಡುಗಳಿಗೆ ಬೌಂಡರಿಯ ಪಥ ತೋರಿಸುತ್ತಿದ್ದಾಗ ಕೆರಳಿ, ನರಳಿದ ಸೈಮೊಂಡು ಸಿಂಗರನ್ನು ಕೆಣಕಿದರು. ಶತೃವಿನಲ್ಲೂ ಸಾಕ್ಷಾತ್ ‘ಭಜರಂಗಿ’ಯನ್ನು ಕಂಡ ಸಿಂಗರು ಭಕ್ತಿಯ ಆವೇಶದಲ್ಲಿ ಸೈಮೊಂಡರನ್ನು ಕುರಿತು ‘ಕೋತಿ, ದೊಡ್ಡ ಕೋತಿ, ಶ್ರೇಷ್ಠ ಕೋತಿ…’ಎಂದು ಮೊದಲುಗೊಂಡು ‘ಭಜ್ಜಿ’ಸಿದರು. ಸಿಂಗರ ಭಕ್ತಿಯ ಶಕ್ತಿಯನ್ನು ಅರಿಯದ ಮೊಂಡರು ಹಾಗೂ ನಾಯಕ ಕಿರ್ಕಿರಿ ಪೇಂಟಿಂಗರು ಇದನ್ನು ಖಂಡತುಂಡವಾಗಿ ವಿರೋಧಿಸಿದರು. monkey_wideweb__470x353,0.jpg

ಈ ಸಂಗತಿ ಆಸ್ಟ್ರೇಲಿಯಾ ಹಾಗೂ ಭಾರತವಷ್ಟೇ ಅಲ್ಲದೆ ಜಗತ್ತಿನ ಎಲ್ಲಾ ಸುದ್ದಿಬಾಕರ ಹಸಿವಿಗೆ ಆಹಾರವಾಗಿ, ಟಿವಿ, ರೇಡಿಯೋ, ಅಂತರ್ಜಾಲ, ಪತ್ರಿಕೆ, ರೋಡು, ಗಲ್ಲಿಗಳಲ್ಲಿ ‘ಕೋತಿ’ಯಾಟದ ಹಾಗೂ ಭಕ್ತ ಭಜ್ಜನ್ನರ ಜಪ ಎಲ್ಲೆಡೆ ಪ್ರರಂಭವಾಯಿತು. ಬೇಡರ ಕಣ್ಣಪ್ಪ ಈಶ್ವರನನ್ನು ನಿಂದಿಸುತ್ತ ಒಂದೊಂದೋ ಎಲೆಯನ್ನು ಕಿತ್ತು ಶಿವಲಿಂಗದ ಮೇಲೆ ಎಸೆದದ್ದಕ್ಕೇ ಸಂಪ್ರೀತನಾದ ಶಿವ ಅವನಿಗೆ ವರದಾನಗೈದದ್ದನ್ನು ಆದರ್ಶವನ್ನಾಗಿಸಿಕೊಂಡ ವೀರ ಮಾರುತಿ ಜಗತ್ತಿನೆಲ್ಲೆಡೆ ನಡೆಯುತ್ತಿದ್ದ ‘ಕೋತಿ’ನಾಮಾವಳಿಯಿಂದ ಸಂತುಷ್ಟನಾಗಿ ತನ್ನ ಕಪಿ ಸೇನೆಯ ಸಮೇತವಾಗಿ ‘ಪರ್ತ್’ನಲ್ಲಿ ಬಂದಿಳಿದು ಭಜ್ಜಿಯನ್ನು ಭೇಟಿಯಾದರು.symonds.jpg

ಭಕ್ತ ‘ಭಜ್ಜಿ’ ಹಾಗೂ ಭಕ್ತವತ್ಸಲ ‘ಭಜರಂಗಿ’ ಡ್ರೆಸ್ಸಿಂಗ್ ರೂಮಿನಲ್ಲೇ ಕುಳಿತು ಭಾರತದ ಆಟಗಾರರಿಗೆ ನೆರವಾಗುವುದಾಗಿ ತೀರ್ಮಾನಿಸಿದರು. ಹೊಚ್ಚ ಹೊಸತಾದ ಹೊಳೆಯುವ ಕುಕ್ಕಬುರ್ರಾ ಚೆಂಡನ್ನು ಹೊತ್ತು ಬಂದ ರುದ್ರ ಪ್ರತಾಪ ಸಿಂಗ ಬೌಲ್ ಮಾಡುವಾಗ ವೀರ ಹನುಮಂತನ ಅನುಗ್ರಹದ ದೃಷ್ಟಿ ಬಿದ್ದಿತು. ವೇಗವಾಗಿ ಪಿಚ್ಚನ್ನಪ್ಪಳಿಸಿದ ಚೆಂಡು ಆಸ್ಟ್ರೇಲಿಯಾದ ದಾಂಡಿಗರ ಬ್ಯಾಟನ್ನು ಮಾತ್ರ ಮುಟ್ಟಿ ‘ಸಿ’ಟರ್ನ್ ತೆಗೆದುಕೊಂಡಂತೆ ಸ್ವಿಂಗ್ ಆಗಿ ಕ್ಷೇತ್ರ ರಕ್ಷಕರ ಕೈಸೇರುತ್ತಿದ್ದವು. ಹನುಮಂತ ದೇವರ ಬಾಲದಂತೆ ಬಾಲು ಸ್ವಿಂಗಾಗಿ ರುದ್ರ ಪ್ರತಾಪರು ಆರ್ಪಿ ಸ್ವಿಂಗಾದರು!

ಇಷ್ಟಕ್ಕೇ ಸುಮ್ಮನಾಗದ ‘ಬಾಲ’ಮಹಿಮೆ ಚೆಂಡು ಸವೆದು ಹಳೆಯದಾದ ಮೇಲೂ ಜಂಬೋ ಕೈಯಲ್ಲಿ ಅದು ಗೂಗ್ಲಿಯಾಗಿ, ರಾಂಗಾಗಿ ‘ಯು’ ಟರ್ನಾಗಿ ಆಸ್ಟ್ರೇಲಿಯಾದ ದಾಂಡಿಗರನ್ನು ಗೋಳು ಹೊಯ್ದುಕೊಂಡಿತು.

ಮಾರುತಿಯ ಕೃಪೆಗೆ ಎಲ್ಲೆಯಿದೆಯೇ? ಭಾರತದ ಆಟಗಾರರು ಬ್ಯಾಟಿಂಗ್ ಮಾಡುವಾಗ ಮತ್ತೆ ರುದ್ರ ಪ್ರತಾಪರ ಎಂಬ ‘ಬಾಲ’೦ಗೋಚಿಯ ಮೂಲಕ ‘ಬಾಲ’ಪವಾಡ ಜರುಗಿತು. ಆರ್ಪಿ ರುದ್ರ ನರ್ತನದಿಂದ ಆಸ್ಟ್ರೇಲಿಯಾದ ಚೆಂಡುಗಾರರು ಬೆವರಿಳಿದುಹೋದರು.

ಈ ವರದಿಯನ್ನು ಕಂಡು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ಕಿರ್ಕಿರಿ ಪೇಂಟಿಂಗರು ಸ್ವರ್ಗ ಕೈ ಸಿಕ್ಕಷ್ಟು ಖುಶ್ ಆಗಿದ್ದಾರೆ. ಈ ‘ಬಾಲ’ಪೀಡೆಯನ್ನು ನಿವಾರಣೆ ಮಾಡಿಕೊಳ್ಳಲು ಕರ್ನಾಟದಕ ವೃದ್ಧ ಮಾಂತ್ರಿಕರ ಅತ್ಯಾಪ್ತ ಜೋತಿಷಿಯನ್ನು ಕರೆಸಿಕೊಂಡು ಸಹಸ್ರ’ಕೋತಿ’ಯಾಗವನ್ನು ಸೈಮೊಂಡರ ಕೈಯಲ್ಲಿ ಮಾಡಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಹನುಮಾನ್ ಮಹಾರಾಜರನ್ನು ‘ಅಡಿಲೇಡಿ’ಗೆ ಬರದಂತೆ ಕೋರಿಕೊಂಡಿದ್ದಾರೆ. ಅದರ ಫಲವಾಗಿ ಆರ್ಪಿ ಸಿಂಗರು ಕೇವಲ ನಾಲ್ಕು ಓವರ್ ಎಸೆಯುವಷ್ಟರಲ್ಲಿ ದಣಿದು ಬಟ್ಟೆಂಗ್ ರೂಮನ್ನು ಸೇರಿರುವುದುಭಾರತೀಯರ ಪಾಳಯೆದಲ್ಲಿ ಕೋಲಾಹಲ ಹುಟ್ಟಿಸಿದೆ.

ಈ ಮಧ್ಯೆ ಉಗ್ರ ಭಾರತೀಯ ಕ್ರಿಕೆಟಾಭಿಮಾನಿಗಳು ಪತ್ತೆದಾರಿ ಚತುರ ‘ನಗೆ ಸಾಮ್ರಾಟ’ರ ಬೆನ್ನು ಹತ್ತಿರುವುದರಿಂದ ಅವರು ಜಗಜ್ಜಾಹೀರಾದ ಜಾಗದಲ್ಲಿ ಭೂಗತರಾಗಿದ್ದಾರೆ. ಅಲ್ಲಿಂದಲೇ ಈ ವರದಿಯನ್ನು ಬರೆದು ಕಳುಹಿಸಿ ‘ಪ್ರತಿ ವಾರದ ಅಚ್ಚರಿ!’ಯಾದ ‘ಹಾಯ್ ಬೆಂಗಳೂರ್!’ನ ಸಂಪಾದಕರ ರೆಕಾರ್ಡನ್ನು ಮುರಿದಿದ್ದಾರೆ.


Technorati : , , ,

ಬ್ಲಾಗ್ ಬೀಟ್

27 ಜನ

ಕನ್ನಡದ ಬ್ಲಾಗುಗಳ ಲೇಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

  • ‘ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು…’ ಎನ್ನುವ ರವೀಂದ್ರನಾಥ ಠಾಗೋರರ ಉಕ್ತಿಯ ತದ್ಭವವನ್ನೇ ಬಾಳಿನ ಆದರ್ಶವಾಗಿಸಿಕೊಂಡಿರುವ ಪತ್ರಿಕೆ ‘ಮಜಾವಾಣಿ’. ಕನ್ನಡದ ಪ್ರಮುಖ ದಿನಪತ್ರಿಕೆಯೊಂದರ ಏಕೈಕ ಪ್ರತಿ ಸ್ಪರ್ಧಿಯಾದ ಇದರ ಸೊಂಪಾದ’ಕರು’ವಾಗಿ ಬೆಳೆದವರು ‘ವಾರ್ತಾವಿದೂಷಕ’ರು. ಜಗತ್ತಿನ ಶ್ರೇಷ್ಠ ಹಾಗೂ ನಂಬರ್ ಒನ್ ಮೂರ್ಖ ಎಂಬ ಕೀರ್ತಿಗೆ ಪಾತ್ರವಾಗಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸರ್ದಾರ್ಜಿಯ ಸಾಧನೆಯನ್ನು ಮುರಿದು ಪುಡಿಪುಡಿ ಮಾಡಿರುವ ಬಿ.ಎಸ್.ಯಡ್ಯೂರಪ್ಪನವರ ಬಗ್ಗೆ ಎಕ್ಸ್ ಕ್ಲೋಸಿವ್ ವರದಿಯಲ್ಲಿ ”ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸಹೋಗಲು ಸಿದ್ಧ” ಎಂದು ಘೋಷಿಸಿದ್ದಾರೆ. ಅಲ್ಲದೆ ದಿಟ್ಟ ಎದೆಯ ವರದಿಗಾರರು “ಮಾಟ-ಮಂತ್ರ: ಯಡ್ಡಿ ಆರೋಪ ಸಾಬೀತು!” ಮಾಡುವ ತನಿಖಾ ವರದಿಯನ್ನು ಖುದ್ದಾಗಿ ಕುಳಿತು ಮುತುವರ್ಜಿಯಿಂದ ಹೆಣೆದಿದ್ದಾರೆ.

  • ‘ಪಂಚ್ ಕಾ ಸರ್ ಪಂಚ್’ ಎಂದು ಎದೆಯುಬ್ಬಿಸಿ ನಿಂತಿರುವವರು ದಾವಣಗೆರೆಯ ಕೆ.ಗಣೇಶ್. ‘ದೇಶದ ಸಮಸ್ತ ಗಂಡು ಜೀವಗಳ’ ಬದುfuಕಿನಲ್ಲಿ ರಸಿಕತೆ ಎಂಬುದು ಉಳಿಸುವಲ್ಲಿ ಅಹರ್ನಿಶಿ ದುಡಿಯುತ್ತಿರುವ ಮಲ್ಲಿಕಾ ಶೆರಾವತ್ ಒಂದು ಪತ್ರಿಕೆಯನ್ನು ಆರಂಭಿಸಿದರೆ… ಎಂಬ ಮರ್ಮಾಘಾತುಕ ಕಲ್ಪನೆಯನ್ನು ಮಾಡಿದ್ದಾರೆ ಗಣೇಶ್. ಅಂತಹ ಪತ್ರಿಕೆಯೇನಾದರೂ ಪ್ರಕಟಗೊಳ್ಳಲು ಅನುಮತಿ ಕೊಟ್ಟರೆ ತಾವು ಅನಿರ್ಧಿಷ್ಟ ಅವಧಿಯವರೆಗೆ ‘ಶೆರಾವತ್ ದೇವತೆಯ ಚಿತ್ರಗಳನ್ನು’ ನೋಡುವ ಮೂಲಕ ಸತ್ಯಾಗ್ರಹ ನಡೆಸುತ್ತೇವೆ ಎಂಬ ಇತರೆ ಪತ್ರಿಕೆಗಳ ಸಂಪಾದಕರ ಎಚ್ಚರಿಕೆ ಎಲ್ಲೂ ವರದಿಯಾಗಿಲ್ಲ. ‘ಸೊಂಪಾದ’ಕಿಯಾದ್ರೆಮಲ್ಲಿಕಾ ಎಡಿಟೋರಿಯಲ್ ಹೇಗಿರಬಹುದು? ನೋಡಿ…

  • ಪಂಚಿನ ಸರಪಂಚರಾದ ಗಣೇಶರ ಮತ್ತೊಂದು ಬ್ಲಾಗು ‘ಪ್ರತಿಸ್ಪಂದನ’. ಇದು ಹಾಸ್ಯಮಯ ಬ್ಲಾಗು ಅಂತ ಅವರು ಒಪ್ಪದಿದ್ದರೂ ಅವರ ಪಂಚಿನ ಏಟನ್ನು ಇದು ತಪ್ಪಿಸಿಕೊಳ್ಳಲು ಸಾಧ್ಯವಾಗದು. ಕನ್ನಡ ನಾಡಿನ ಹೆಸರಾಂತ ಹಾಗೂ ಹೆಮ್ಮೆಯ ಆಂಗ್ಲ ಪತ್ರಿಕೆಗಳು ಬ್ರಾಂಡ್ ಬೆಂಗಳೂರು ಎಂದು ಬೆಂಗಳೂರಿಗೆ ಇರುವ ಇಲ್ಲದ ನಯ, ನಾಜೂಕು, ಹೊಳಪು-ತಳಕು-ಬಳಕು-ಉಳುಕು ಒದಗಿಸುತ್ತಿರುವುದಕ್ಕೆ ಏಕೈಕ ಪ್ರತಿಸ್ಪರ್ಧೆಯಾಗಿ ‘ಪ್ರತಿಸ್ಪಂದಿಸಿ’ದವರು ಗಣೇಶ್. ಬ್ರಾಂಡ್ ದಾವಣಗೆರೆಯ ಬಗ್ಗೆ ಬರೆಯುತ್ತಾರೆ.

  • ಇದು ‘ಪೋಲಿಮನೆ’. ಇಲ್ಲಿ ಸುದ್ದಿಯಿದೆ, ಸ್ವಾರಸ್ಯವಿದೆ, ತಮಾಷೆಯಿದೆ… ತಲೆತಿನ್ನುವ ತೂಕದ ಸಾಹಿತ್ಯವನ್ನೊಂದು ಬಿಟ್ಟು ಎಲ್ಲವೂ ಇದೆ. ಎಲ್ಲ ಮಡಿಯನ್ನೂ ಕಳಚಿಟ್ಟು ಒಳಗೆ ಬನ್ನಿ ಎನ್ನುವ ಬ್ಲಾಗಿಗರು. ಹುಷಾರು, ಶುದ್ಧ ಅಪಾಪೋಲಿಗಳ ಬ್ಲಾಗಿದು ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. “ಪುರುಷರಿಗೆ ಕೆಲಸಕ್ಕಿಂತಲೂ ‘ಅದೇ’ ಮುಖ್ಯ!” ಎಂಬ ಅವರ ವರದಿಯನ್ನು ಒಂಟಿ ಕಣ್ಣಲ್ಲಿ ಓದಿದ ನಾಡಿನ ಸಮಸ್ತ ಪುರುಷರು ಎರಡೂ ಕಣ್ಣುಗಳಲ್ಲಿ ಕಿಡಿಗಳನ್ನು ಕಾರುತ್ಇರುವುದಾಗಿ ನಗಾರಿ.ಕಾಮ್‌ಗೆ ತಿಳಿದು ಬಂದಿದೆ. ‘ಅದೇ’ ಎಂದರೆ ಮೇಜಿನ ಕೆಳಗೆ ಕೈ ಚಾಚುವುದು ಎಂದು ಗ್ರಹಿಸಿರುವ ‘ತರ್ಕಾರಿ’ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ವರದಿಯಾಗಿಲ್ಲ.


Technorati : , ,

ದೇವಲೋಕದಲ್ಲೊಂದು ಸಭೆ

27 ಜನ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಮೊದಲ ಲೇಖನವಾಗಿ ‘ದೇವಲೋಕದಲ್ಲೊಂದು ಸಭೆ’ ಹಾಸ್ಯ ಲೇಖನ ಪ್ರಕಟವಾಗಿದೆ. ಕರ್ನಾಟಕದಲ್ಲಿ ನಡೆದ ಅಧಿಕಾರ ಹಸ್ತಾಂತರ ಎಂಬ ನಾಟಕದ ಸಂದರ್ಭದ ಸಂಗತಿಗಳನ್ನು ಇಲ್ಲಿ ವಿಡಂಬನಾತ್ಮಕವಾಗಿ ಬಿಂಬಿಸಿದ್ದಾರೆ.

ದೇವಲೋಕದಲ್ಲಿ ಅಲ್ಲೋಲಕಲ್ಲೋಲವೆದ್ದಿತ್ತು. ಎಲ್ಲೆಲ್ಲೂ ಗೊಂದಲದ ವಾತಾವರಣ ಕವಿದಿತ್ತು. ದೇವತೆಗಳ ಮುಖದ ಮೇಲೆ ಆತಂಕ, ಕಳವಳದ ಛಾಯೆ ಕುಣಿಯುತ್ತಿತ್ತು.ಆಫೀಸಿನಲ್ಲಿ ದೊಡ್ಡವರು ಸಿಟ್ಟಾದರೆ ಕೆಳಗಿನವರು ಥರಥರ ನಡುಗುವಂತೆ ಅವರು ಗಾಬರಿಯಾಗಿದ್ದರು.

ಅಂದು ದೇವಾಧಿದೇವ ಮಹಾವಿಷ್ಣು ಒಂದು general body meeting ಕರೆದಿದ್ದ. ಭೂಲೋಕದಲ್ಲಿ ನಡೆಯುತ್ತಿರುವ ಕೆಲವು ಸಂಗತಿಗಳನ್ನು ಚರ್ಚಿಸಿ ಕೆಲವು ಐತಿಹಾಸಿಕ ತೀರ್ಮಾನಗಳನ್ನು ಅಂದು ತೆಗೆದುಕೊಳ್ಳಬೇಕಿತ್ತು. ಸ್ವರ್ಗಕ್ಕೆ, ನರಕಕ್ಕೆ ನೋಟೀಸ್ ಹೋಗಿತ್ತು. ಭೂಲೋಕದಿಂದ ಸ್ವರ್ಗನರಕಗಳಿಗೆ ಬಂದು ಸೇರಿದ್ದ ಅನೇಕರಿಗೂ ಆ ಮೀಟಿಂಗ್‍ನಲ್ಲಿ ಭಾಗವಹಿಸಲು ಕರೆಬಂದಿತ್ತು.

ಅಂದು ವಿಷ್ಣುವಿನ ಆಸ್ಥಾನದಲ್ಲಿ ಸ್ಮಶಾನ ಮೌನ ಕವಿದಿತ್ತು.ಸದಾ ಕಾಲ ಚಿದ್ವಿಲಾಸದ ನಗೆಯನ್ನು ತುಟಿಗಳ ಮೇಲೆ ಹೊತ್ತು ಶೋಭಿಸುವ ಮಹಾವಿಷ್ಣು ಅಂದು ವಿಷಣ್ಣವದನನಾಗಿದ್ದು ಕಂಡು ಇತರರಿಗೆಲ್ಲಾ ಕೊಂಚ ದಿಗಿಲಾಗಿತ್ತು. ಮತ್ತ್ಯಾವ ಅಸುರ ಭೂಲೋಕದಲ್ಲಿ ತಲೆ ಎತ್ತಿದ್ದಾನೊ, ಮಹಾವಿಷ್ಣು ಇನ್ನ್ಯಾವ ಅವತಾರವೆತ್ತಿ ಭೂಲೋಕದ ಟ್ರಿಪ್‍ಗೆ ಹೋಗಬೇಕೊ ಎಂದು ಎಲ್ಲರೂ ಆಲೋಚಿಸುತ್ತಿದ್ದರು.

ಸಭೆಗೆ ಬರಬೇಕಾದವರೆಲ್ಲರೂ ಜಮಾವಣೆಯಾದ ನಂತರ ಮಹಾವಿಷ್ಣು ಅನಂತಶಯನಾಸನದಿಂದ ಮೆಲ್ಲಗೆ ಎದ್ದು ಕುಳಿತು ಮಾತಾಡಲು ತೊಡಗಿದ. ”ನಮ್ಮ ಆಹ್ವಾನದ ಮೇರೆಗೆ ಸಭೆಗೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು. ನಾನು ನೇರವಾಗಿ ವಿಷಯಕ್ಕೇ ಬಂದುಬಿಡುವೆ ನಮ್ಮ ಬ್ರಹ್ಮದೇವನಿಗೆ ನಾನು ಮೊದಲೇ ಹೇಳಿದ್ದೆ. ಈ ಮನುಷ್ಯನೆಂಬ ಪ್ರಾಣಿಯನ್ನು ಸೃಷ್ಟಿಸುವಾಗ ಸ್ವಲ್ಪ ಹುಶಾರಾಗಿರಪ್ಪಾ, ಅವನ ಕೈಗೆ ಬುದ್ಧಿಯನ್ನು ಕೊಟ್ಟು ಹರಸಿಕಳುಹಿಸುವ ಮುನ್ನ ಕೊಂಚ ಅದರ ಪರಿಣಾಮಗಳನ್ನೂ ಯೋಚಿಸು ಎಂದು ಹೇಳಿದ್ದೆ. ಈಗ ನೋಡಿ ಏನಾಗಿದೆ…” ವಿಷ್ಣುವಿನ ಮುಖದ ತುಂಬ ವಿಷಾದ ಕವಿದಿತ್ತು.

ವಿಷಯ ನೇರವಾಗಿ ತಮ್ಮೆಡೆಗೇ ತಿರುಗಿದ್ದರಿಂದ ಬ್ರಹ್ಮದೇವರು ಕೊಂಚ ಅಪ್ರತಿಭರಾದರೂ ಅದನ್ನು ತೋರಿಸಿಕೊಳ್ಳದಂತೆ, “ಮಹಾವಿಷ್ಣು ಹೇಳುತ್ತಿರುವುದೇನೂ ನನಗೆ ಅರ್ಥವಾಗದು. ದೇವರ ಸೃಷ್ಠಿಯ ಮಹಾನತೆಯನ್ನು, ದೇವರ ಘನತೆಯನ್ನು ತಿಳಿದುಕೊಳ್ಳಲು ಸಾಮರ್ಥ್ಯವಿರುವ ಒಂದೇ ಒಂದೇ ಜೀವಿ ಅಷ್ಟು ಸುಂದರವಾದ ಭುವಿಯ ಮೇಲಿರದಿದ್ದರೆ ಏನುಪಯೋಗ ಎಂದು ಮಹಾವಿಷ್ಣುವೇ ಸೂಚಿಸಿದ್ದರಿಂದ ನಾನು ಮಾನವನಿಗೆ ವಿವೇಚನಾ ಶಕ್ತಿಯನ್ನು ದಯಪಾಲಿಸಿ ಭೂಮಿಗೆ ಕಳುಹಿಸಿಕೊಟ್ಟೆ. ದೇವ ಸೃಷ್ಟಿಯನ್ನು ಕಂಡು ವಿಸ್ಮಯಗೊಂಡ ಮಾನವ ದೇವರನ್ನು ಹೊಗಳುವುದನ್ನು ಕೇಳಿ ತಮಗೆ ಖುಷಿಯಾಗುವುದಿಲ್ಲವೇ? ರಸ್ತೆರಸ್ತೆಯಲ್ಲಿ ಮಹಾವಿಷ್ಣುವಿನ, ಮಹಾದೇವನ ಮಂದಿರಗಳಲ್ಲಿ ನಡೆಯುವ ಅರ್ಚನೆ, ಪೂಜೆಗಳಿಂದ ತಾವು ಸಂತುಷ್ಟರಾಗಿಲ್ಲವೇ? ಮನುಷ್ಯನಿಗೆ ಅಂತಹ ಬುದ್ಧಿಯನ್ನು ಕೊಟ್ಟುಕಳುಹಿಸಿದ ನನಗಾಗಿ ಅಂತ ಆತ ಒಂದಾದರೂ ದೇವಸ್ಥಾನ ಕಟ್ಟಿದ್ದಾನೆಯೇ? ಈ ಅನ್ಯಾಯ ಕಂಡೂ ನಾನು ಸುಮ್ಮನಿಲ್ಲವೇ? ನಾನೆಂದಾದರೂ ಮೀಸಲಾತಿಗಾಗಿ ಬಾಯೆತ್ತಿದ್ದೇನೆಯೇ? ಸುಮ್ಮನೆ ನನ್ನ ಮೇಲೆ ಆರೋಪ ಮಾಡಿದರೆ ನನ್ನ ಮನಸ್ಸಿಗೆ ನೋವಾಗುವುದಿಲ್ಲವೇ?” ಎಂದರು ವಿಷ್ಣುವಿನೆಡೆಗೆ ನೋಡುತ್ತಾ.

ಇದನ್ನೆಲ್ಲಾ ಕೇಳುತ್ತಿದ್ದ ಮುಕ್ಕಣ್ಣ ಕೊಂಚ ಗಡುಸಾಗಿ, “ನಿಮ್ಮ ದೋಷಾರೋಪಣೆಗಳನ್ನು ಆಮೇಲೆ ಮಾಡಿ ಮೊದಲು ಸಭೆ ಕರೆಯಲು ಕಾರಣವೇನು ಎಂಬುದನ್ನು ಅರುಹಿ.” ಎಂದ. ‘ಶಿವ ಅಂದರೆ ಹೀಗಿರಬೇಕು, ಅದೇನು ಗಾಂಭೀರ್ಯ, ಮಿತಭಾಷೆ…’ ಎಂದುಕೊಂಡರು ಸಭಿಕರೆಲ್ಲ.

ಮಹಾದೇವನ ಗಂಭೀರ ಮಾತಿಗೆ ಬೆಲೆಕೊಡುತ್ತಾ ಮಹಾವಿಷ್ಣು , “ ಭೂಲೋಕದ ಇತ್ತೀಚಿನ ಸಂಗತಿಗಳು ನಮ್ಮ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿವೆ. ನಮ್ಮ ಅನೇಕ ಅವತಾರಗಳನ್ನು, ಅವುಗಳ ಸಂದೇಶಗಳನ್ನು ಈ ಹುಲು ಮಾನವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಹೆಸರನ್ನು ಬಳಸಿಕೊಂಡು ನಮ್ಮ ಪ್ರಸಿದ್ಧಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ.”

ಸಭಿಕರೆಲ್ಲರಿಗೂ ಮಹಾವಿಷ್ಣುವಿನ ಮನದ ನೋವು ತಟ್ಟಿತು. ಆದರೆ ಯಾರಿಗೂ ಅಸಲಿನ ಸಂಗತಿಯೇನು ಎಂಬುದು ತಿಳಿಯಲಿಲ್ಲ. ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹೊತ್ತು ಎಲ್ಲರೂ ವಿಷ್ಣುವಿನ ಮುಖವನ್ನೇ ದಿಟ್ಟಿಸುತ್ತಿದ್ದರು.

ಮಹಾವಿಷ್ಣು ಮುಂದುವರೆಸುತ್ತಾ, “ಭೂಲೋಕದಲ್ಲಿ ಕರ್ನಾಟಕವೆಂಬ ಪ್ರದೇಶ ಇರುವುದಷ್ಟೇ. ಅದರ ಸಿಂಹಾಸನಕ್ಕೆ ನಡೆಯುತ್ತಿರುವ ಪ್ರಹಸನದಲ್ಲಿ ನಮ್ಮ ಹೆಸರನ್ನು ವಿನಾಕಾರಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಿಷ್ಟು ಸಮಯದ ನಂತರ ಸಿಂಹಾಸನವನ್ನು ಒಪ್ಪಿಸುತ್ತೇನೆ ಎಂದು ಮಾತುಕೊಟ್ಟು ಅನಂತರ ಕೈಎತ್ತಿ, ‘ಮಹಾಭಾರತದಲ್ಲಿ ಶ್ರೀಕೃಷ್ಣನೇ ಕೊಟ್ಟ ಮಾತಿಗೆ ತಪ್ಪಿರುವಾಗ ನನ್ನದೇನು?’ ಎಂದು ಮುಖ್ಯಮಂತ್ರಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ನೀವೇ ಹೇಳಿ, ನಾನು ಎಂದಾದರೂ ಕೊಟ್ಟ ಮಾತಿಗೆ ತಪ್ಪಿರುವೆನೇ? ದ್ರೌಪದಿಗೆ ಕೊಟ್ಟ ಮಾತಿನಂತೆ ಕೌರವರ ಸರ್ವನಾಶವನ್ನು ಮಾಡಲಿಲ್ಲವೇ? ಕೆಲವೊಮ್ಮೆ ಮಾತು ಮುರಿಯುವ ನಾಟಕವಾಡಿದರೂ ಅದು ಧರ್ಮಕ್ಕಾಗಿಯಲ್ಲವೇ? ಧರ್ಮದ ಪಕ್ಷ ಗೆಲ್ಲಲಿ ಎಂಬ ಉದ್ದೇಶದಿಂದಲೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂಬುದು ನಿಮಗೂ ತಿಳಿದಿದೆಯಲ್ಲವೇ?” ಎಂದು ಸಭಿಕರನ್ನು ದಿಟ್ಟಿಸಿದ.

ವಿಷ್ಣುವಿನ ಮಾತನ್ನು ಅನುಮೋದಿಸುತ್ತಾ ಸಭೆಯ ನಡುವಿಂದ ಧ್ವನಿಯೊಂದು ಬಂದಿತು, “ನಿಮ್ಮ ಮನಸ್ಸಿನ ವೇದನೆ ನನಗರ್ಥವಾಗುತ್ತೆ ಮಹಾಪ್ರಭು. ಈ ದುಷ್ಟ ಮಾನವರಿಂದ ಕೇವಲ ನಿಮ್ಮ ಹೆಸರು ಮಾತ್ರವಲ್ಲ, ನನ್ನ ಹೆಸರಿಗೂ ಕಳಂಕ ತಗುಲಿದೆ..” ‘ಹ್ಹಾ! ಕೌಟಿಲ್ಯ!’ ಎಂದು ಉದ್ಘರಿಸಿತು ಸಭೆ. ನೀಳವಾದ ಶಿಖೆಯನ್ನು ಬಿಟ್ಟ ಉಜ್ವಲ ಕಂಗಳ ಕೌಟಿಲ್ಯ ಏರಿದ ದನಿಯಲ್ಲಿ ಮಾತು ಮುಂದುವರೆಸಿದ, “ಆ ಕಾಲದಲ್ಲಿ ಕೌಟಿಲ್ಯನೇ ಮೋಸದ ರಾಜಕೀಯ ಮಾಡಿರುವಾಗ ನಾವು ಮಾಡಿದರೆ ತಪ್ಪೇನು ಎಂದು ಆತ ಹೇಳಿಕೆ ನೀಡಿದ್ದಾನೆ. ನೀವೇ ಹೇಳಿ, ನಂದನ ದುರಾಡಳಿತದ ಆಳ್ವಿಕೆಯನ್ನು ಕೆಡವಲು ನಾನು ಆರಿಸಿಕೊಂಡ ಮಾರ್ಗಗಳು ಪ್ರಶ್ನಾರ್ಹವಾಗಿರಬಹುದು ಆದರೆ ಅದರಲ್ಲಿ ನನ್ನ ಸ್ವಾರ್ಥದ ಲವಲೇಶವೂ ಇರಲಿಲ್ಲ. ಕುಮಾರ ಚಂದ್ರಗುಪ್ತನನ್ನು ನಾನು ಸಿಂಹಾಸನದ ಮೇಲೆ ಕೂರಿಸಿ ನನಗೆ ಸರ್ವ ಅಧಿಕಾರವಿರುವ ಮಹಾ ಮಂತ್ರಿಯ ಪಟ್ಟ ದೊರೆಯುವುದಿದ್ದರೂ ಅದನ್ನು ತಿರಸ್ಕರಿಸಿ ನನ್ನ ಹಳೆಯ ಬಡತನದ ಬದುಕಿಗೆ ಹಿಂದಿರುಗಿದೆ. ಈಗಹೇಳಿ ತಮ್ಮ ಸ್ವಾರ್ಥಕ್ಕಾಗಿ ನಾಡಿನ ಜನತೆಯ ತೀರ್ಪನ್ನು ತಿರಸ್ಕರಿಸಿದವರಿಗೆ ನನ್ನ ಹೆಸರು ಎತ್ತಲು ಯಾವ ಯೋಗ್ಯತೆಯಿದೆ?” ಕೌಟಿಲ್ಯನ ಮುಖ ಆವೇಶದಿಂದ ಗಂಭೀರವಾಗಿತ್ತು.

ಅಷ್ಟು ಹೊತ್ತಿಗೆ ಸಭಿಕರಿಗೆಲ್ಲಾ ಸಮಸ್ಯೆಯ ತೀವ್ರತೆಯ ಅರಿವಾಗಿತ್ತು. ಎಲ್ಲರೂ ಮೌನವಾಗಿ ತುಟಿಬಿಚ್ಚದೆ ಕುಳಿತಿದ್ದರು.

ಕೆಲಕಾಲದ ನಂತರ ಮಹಾವಿಷ್ಣುವೇ, “ಈ ಸಮಸ್ಯೆಗೊಂದು ಸರ್ವಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳಲು ಈ ಸಭೆಯನ್ನು ಕರೆದೆ. ಒಬ್ಬ ವ್ಯಕ್ತಿಯ ಒಂದು ವಿಚಾರವನ್ನು, ಒಂದು ಹೊಸ ಅನ್ವೇಷಣೆಯನ್ನು ಇನ್ನೊಬ್ಬರು ಬಳಸುವುದನ್ನು ತಡೆಯಲು ಭೂಲೋಕದಲ್ಲಿ ಒಂದು ವ್ಯವಸ್ಥೆಯಿದೆಯಂತೆ. ಅದನ್ನು ಪೇಟೆಂಟ್ ಅಂತ ಕರೆಯುತ್ತಾರಂತೆ. ನಾವೂ ಕೂಡ ನಮಗೆ ಸಂಬಂಧಿಸಿದ ವಿಚಾರಗಳನ್ನು, ನಮ್ಮ ಅವತಾರಗಳನ್ನೆಲ್ಲಾ ಪೇಟೆಂಟ್ ಮಾಡಿಸಿಬಿಡೋಣ. ಆಗ ನಮ್ಮ ಅನುಮತಿಯಿಲ್ಲದೆ ಯಾರೂ ಅದರ ಬಗ್ಗೆ ಮಾತನಾಡಲು ಸಾಧ್ಯವಾಗದು…” ಎಂದು ಸಭೆಯ ಅಭಿಪ್ರಾಯ ತಿಳಿಯುವಂತೆ ಅತ್ತಿತ್ತ ನೋಡಿದ.

ಮಹಾದೇವ ತನ್ನ ಅಭಿಪ್ರಾಯ ತಿಳಿಸುತ್ತಾ, “ದೇವರುಗಳಾದ ನಾವು ಮನುಷ್ಯರ ಬಳಿಗೆ ಹೋಗುವುದೇ? ಇದ್ಯಾಕೊ ಸರಿಯೆನಿಸಲ್ಲ.” ಎಂದ ಶಾಂತವಾಗಿ.

ಏನು ಮಾಡುವುದು? ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕು. ಇಲ್ಲವಾದರೆ ನಮ್ಮನ್ನು ಹಳೇ ಕಾಲದವರು ಅಂತ ನಮ್ಮ ಕಿರಿಯರು ಆಡಿಕೊಳ್ಳುತ್ತಾರೆ. ಬಾಲಕ ಗಣೇಶನದೂ ಇದೇ ಅಭಿಪ್ರಾಯ. ಹಾಗಾಗಿ ಈ ಪೇಟೆಂಟ್ ಕೆಲಸವನ್ನು ಆತನಿಗೇ ಒಪ್ಪಿಸಿಬಿಡೋಣ.” ಎಂದು ಮಹಾವಿಷ್ಣು ಹೇಳುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗುಜುಗುಜು ಕೇಳಿಬಂತು ಅನಂತರ ಸಭೆ ಸರ್ವಾನುಮತದಿಂದ ಅದನ್ನು ಅನುಮೋದಿಸಿತು.

ಬಾಲಕ ಗಣೇಶ, “ಈ ಸಲದ ಚೌತಿ ಹೇಗೂ ಆಗಿಹೋಯ್ತು, ಮುಂದಿನ ಸಲ ಭೂಲೋಕಕ್ಕೆ ಹೋದಾಗ ಆ ಕೆಲಸವನ್ನು ಮಾಡಿಕೊಂಡುಬರುತ್ತೇನೆ. ನೀವೇನೂ ಚಿಂತಿಸಬೇಡಿ.” ಎಂದನು ಆತ್ಮವಿಶ್ವಾಸದಿಂದ.

ಈಗಿನ ಜನರೇಷನ್ ತುಂಬಾ ಬುದ್ಧಿವಂತರು, ಎಂತಹ ಸಮಸ್ಯೆಗಾದರೂ ಸುಲಭವಾಗಿ ಪರಿಹಾರ ಕಂಡುಕೊಂಡುಬಿಡುತ್ತಾರೆ, ಎಲ್ಲಾ ಕಾಲನ ಮಹಿಮೆ ಎಂದುಕೊಳ್ಳುತ್ತಾ ಸಭಿಕರು ಊಟದ ವ್ಯವಸ್ಥೆ ಮಾಡಿದೆಡೆಗೆ ಸಾಗಿದರು ನೆಮ್ಮದಿಯ ನಿಟ್ಟುಸಿರುಬಿಡುತ್ತಾ.

(ಮೂಲ ಲೇಖನ ‘ಸಡಗರ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.)


Technorati : , , ,