Tag Archives: nage nagaari

ತ್ರಿ-ವಾರಿಯೂ ಆಚಾರ್ಯ ರೇಣುಕರೂ…

4 ಜನ

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.

ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.

ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.

ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.

ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!

ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು…

2 ಜನ

ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ sataapakeeya ಅನುಭವದ ಬುತ್ತಿ ನೆರವಿಗೆ ಬರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ನಗೆ ನಗಾರಿ ಹುಟ್ಟಿ ಎರಡು ವರ್ಷಗಳು ಪೂರೈಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ನಮ್ಮ ಆಪ್ತ ಚೇಲ ಕುಚೇಲ ನಮ್ಮ ಬಳಿ ತಂದಾಗ ನಾವು ಬಹಿರ್ದೆಶೆಯ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಕುಚೇಲ ತಂದ ಸುದ್ದಿ ಸರ್ಕಾರಿ ಹೂಡಿಕೆ ಹಿಂತೆಗೆತದಂತಹ ಪರಿಣಾಮವನ್ನು ನಮ್ಮ ಪುಣ್ಯದ ಕಾರ್ಯದ ಮೇಲೆ ಉಂಟುಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದುಕೊಂಡು ನಾವು ಫ್ಲಶ್ ಮಾಡಿ ಹೊರಬಂದೆವು.

ಎರಡು ವರ್ಷಗಳ ಅವಧಿ ಸಾಮಾನ್ಯವಾದದ್ದಲ್ಲ. ಹತ್ತು ಹದಿನೈದು ನಿಮಿಷಕ್ಕೊಂದು ಶಿಶುವು ಸಾವನ್ನಪ್ಪುವ ಈ ಜಗತ್ತಿನಲ್ಲಿ ಇಷ್ಟು ಅವಧಿಯವರೆಗೆ ಬದುಕಿ ಉಳಿದಿರುವುದೇ ಅಸಾಮಾನ್ಯ ಸಾಧನೆ. ಹೀಗಿರುವಾಗ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ಗತಕಾಲದ ಇತಿಹಾಸವನ್ನು ಕೆದಕುತ್ತ ಕೂರದಿರಲು ಸಾಧ್ಯವೇ?

ನಮ್ಮ ಏಕಮೇಜು, ಏಕ ಕುರ್ಚಿ ಕೋಣೆಯಲ್ಲಿ ಕುಚೇಲ, ನಮ್ಮ ಆಲ್ಟರ್ ಈಗೋ, ತೊಣಚಪ್ಪ, ಸ್ವಾಮಿ ಅಧ್ಯಾತ್ಮಾನಂದರನ್ನು ಕಲೆ ಹಾಕಿ ನಾವು ಚರ್ಚೆಯನ್ನು ಪ್ರಾರಂಭಿಸಿದೆವು. “ನಾವು ಇದುವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಪರಿಶೀಲಿಸಿ ಮುಂದೆ ನಡೆಯುವ ಸಮಯವಿದು. ಹೀಗೆ ಪರಿಶೀಲಿಸುವುದರಿಂದ ಮುಂದಿನ ಹಾದಿಯು ಸುಗಮವಾಗುವುದೆಂಬ ವಿಶ್ವಾಸವಿಲ್ಲವಾದರೂ ಹಾದಿಯಲ್ಲಿ ಸಿಕ್ಕಬಹುದಾದ ಶಾರ್ಟ್ ಕಟ್ಟುಗಳ ಬಗ್ಗೆ ಎಚ್ಚರವಹಿಸಬಹುದು.”

ನಮ್ಮ ಕಛೇರಿಯ ಹೈರಾರ್ಖಿಯನ್ನು ಮುರಿದು ಸ್ವಾಮಿ ಅಧ್ಯಾತ್ಮಾನಂದರು ಮಾತಾಡತೊಡಗಿದರು. “ನಗೆ ನಗಾರಿ ಹತ್ತಿರತ್ತಿರ ಎರಡು ವರ್ಷಗಳ ಕಾಲ ಬಡಿದುಕೊಳ್ಳುತ್ತಿದ್ದರೂ ಜನರಿಗೆ ಬೇಕಿರುವುದೇನು ಎಂಬುದು ನಮ್ಮ ಸಾಮ್ರಾಟರಿಗೆ ಅರಿವಾಗಲಿಲ್ಲ. ದಿನದ ರೊಟ್ಟಿಯನ್ನು, ರುಚಿಕಟ್ಟಾದ ಚಟ್ನಿ ಪುಡಿಯನ್ನು ಜೊತೆಗೆ ಕೆನೆ ಮೊಸರನ್ನು, ಊಟದ ಕಷ್ಟ ನಿವಾರಿಸುವುದಕ್ಕಾಗಿ ಹೊಚ್ಚಹೊಸ ಹಿಂದಿ ಸಿನೆಮಾದ ಪೈರೇಟೆಡ್ ಸಿಡಿಯನ್ನು ಸಂಪಾದಿಸುವುದರಲ್ಲೇ ಹೈರಾಣಾಗಿ ಹೋಗುವ ಪ್ರಜೆಗಳ ಅಪೇಕ್ಷೆಯೇನು ಅದು ಅರಿಯದೆಯೇ ಅವರ ಗಂಟಲೊಳಗೆ ಹಾಸ್ಯರಸವನ್ನು ತುರುಕುತ್ತಿದ್ದಾರೆ ಸಾಮ್ರಾಟರು ಎಂಬುದು ನಮ್ಮ ಅಭಿಪ್ರಾಯ.”

ಹೈರಾರ್ಖಿ ಮುರಿದ ಸಿಟ್ಟಿನ ಭರದಲ್ಲಿ ತೊಣಚಪ್ಪ ಅಬ್ಬರಿಸಿದರು, “ಸ್ವಾಮ್ಗಳು ಪ್ರವಚ್ನ ಬುಟ್ಟು ವಿಸ್ಯ ಏನಂತ ಒದರಬೇಕು.”

ಹೆಸರಿನಲ್ಲಿದ್ದ ಆಧ್ಯಾತ್ಮವನ್ನು ನೆನೆಸಿಕೊಂಡು ಕೋಪ ಹತ್ತಿಕ್ಕಿಕೊಂಡ ಅಧ್ಯಾತ್ಮಾನಂದರು ಮುಂದುವರೆದರು, “ ನಗಾರಿ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಜನಪ್ರಿಯವಾದ ವರದಿ ಯಾವುದು ಎಂದು ಅವಲೋಕಿಸಿದರೆ ನಾವು ಹೇಳಲು ಹೊರಟಿದ್ದೇನು ಎಂಬುದು ವೇದ್ಯವಾಗುತ್ತೆ.”

ಸ್ವಾಮಿಗಳ ವಾಕ್ಯ ಪೂರ್ಣಗೊಂಡು ಫುಲ್ ಸ್ಟಾಪ್ ಬೀಳುವ ಮೊದಲೇ ಕುಚೇಲ ವರದಿಯನ್ನು ತಂದಿರಿಸಿದ. ನಾವು ಅತಳ-ಸುತಳ-ಪಾತಾಳಗಳನ್ನು ಬೇಧಿಸಿ, ಗವಿ ಗುಡಾರಗಳನ್ನು ಸ್ಪೋಟಿಸಿ ಮಾಡಿದ ಯಾವ ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ ಬಂದಿತು.

ಆ ವರದಿಗೆ ಬಂದ ಪ್ರಜೆಗಳ ಪ್ರತಿಕ್ರಿಯೆಗಳ ಮಹಾಪೂರ ಕೋಣೆಯೊಳಗಿದ್ದ ಎಲ್ಲರನ್ನೂ ದಿಗ್ಮೂಢರನ್ನಾಗಿಸಿತು- ಅಧ್ಯಾತ್ಮಾನಂದರ ಹೊರತು. “ಜನರು ತಮ್ಮ ಭವಿಷ್ಯತ್ತಿನ ಬಗ್ಗೆ, ಮುಂದಾಗಲಿರುವ ಘಟನೆಗಳ ಬಗ್ಗೆ ಈ ಮಟ್ಟಿಗೆ ವ್ಯಾಕುಲರಾಗಿರುವಾಗ ಸಾಮ್ರಾಟರು ಹೀಗೆ ಇತಿಹಾಸವನ್ನು, ವರ್ತಮಾನ ಪತ್ರಿಕೆಗಳನ್ನು ಅರೆದು ನಗೆ ಗುಳಿಗೆ ತಯಾರಿಸುವುದರಲ್ಲಿ ಮಗ್ನರಾಗುವುದು ಸಮಂಜಸವಲ್ಲ.”

ಮರದಿಂದ ಉದುರಿದ ಸೇಬು ನ್ಯೂಟನ್ನಿನನಿಗೆ ಗುರುತ್ವಾಕರ್ಷಣೆಯನ್ನು ಕಾಣಿಸಿದ ಹಾಗೆ ಸ್ವಾಮಿಗಳ ಪ್ರವಚನ ಕೇಳಿ ತೂಕಡಿಸುತ್ತಿದ್ದ ನಮ್ಮ ಆಲ್ಟರ್ ಈಗೋನ ಎಂಜಲು ನಮ್ಮ ನಿದ್ದೆಯನ್ನು ಕೆಡಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ನಾವು ಸೀದಾ ಖೋಡಿ ಹಳ್ಳಿ ಸ್ವಾಮೀಜಿಯ ಪಾದಕ್ಕೆರಗಿದೆವು. ಸ್ವಾಮಿಗಳು ಕೈಲಿದ್ದ ಬ್ಲ್ಯಾಕ್ ಬೆರ್ರಿಯನ್ನು ಬದಿಗಿಟ್ಟು ನೆತ್ತಿ ಮುಟ್ಟಿದೊಡನೆಯೇ ಮಿದುಳಲ್ಲಿ ಮಿಂಚಿನ ಸಂಚಾರವಾಯಿತು. ಪ್ರಳಯಕಾಲದ ಸಿಡಿಲು ಸ್ಪೋಟಿಸಿ ಅದರ ಸದ್ದು ಖಾಲಿ ಬುರುಡೆಯೊಳಗೆ ಮಾರ್ದನಿಸಿತು. ಇನ್ನು ದೇಹದಲ್ಲಿರುವ ಪ್ರತಿ ಕೋಶವನ್ನೂ, ಭಗವಂತ ನೀಡಿರುವ ಪ್ರತಿ ಕ್ಷಣವನ್ನೂ ಜನಸಾಗರದ ಭವಿಷ್ಯವನ್ನು ಸುಭದ್ರಗೊಳಿಸುವ ಕಾಯಕಕ್ಕೆ ವಿನಿಯೋಗಿಸಬೇಕು ಎಂದು ತೀರ್ಮಾನಿಸಿದೆವು. ಕೂಡಲೇ ಎಲ್.ಐ.ಸಿ ಕಛೇರಿ ಹೊಕ್ಕು ಅಲ್ಲಿಂದ ಹೊರದಬ್ಬಿಸಿಕೊಂಡೆವು.

ಹುಚ್ಚುಖೋಡಿ ಮಠದ ಪರಮಯೋಗ್ಯ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಜನರ ಭವಿಷ್ಯವನ್ನು ಕಾಣುವ ಸಿದ್ಧಿಯನ್ನು ಪಡೆದುಕೊಂಡೆವು. ಈ ದಿವ್ಯಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ ಹೇರಳವಾಗಿ ಧನ ದ್ರವ್ಯಾದಿಗಳನ್ನು ಅರ್ಪಿಸುವ ಟಿವಿ ಚಾನಲು, ಸಿನೆಮಾ ತಾರೆಯರು, ರಾಜಕಾರಣಿಗಳ ಸೇವೆಗೆ ಬಳಸು ಎಂಬ ದಿವ್ಯೋಪದೇಶದೊಂದಿಗೆ ಹಿಂದಿರುಗಿದೆವು.

ಚಿತ್ರ ವಿದೂಷಕ

1 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

e3

ಮೂರು ವರ್ಷಕ್ಕೇ ಪ್ರಳಯವಾದ್ರೆ ನನ್ ಮೊಮ್ಮಕ್ಕಳನ್ನು ಕಾಣೋದು ಯಾವಾಗ?

ನಗಾರಿ ರೆಕಮಂಡೇಶನ್ 20

2 ಜೂನ್

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್!

ಹ್ಹ! ನಿಲ್ಲಿ ನಾವು ಆತನ ಹೆಸರು, ಆತನ ಪೋಷಾಕು, ಆತನ ವಿಗ್ರಹ ಬಳಸಿ ಯಾವುದೇ ವಿವಾದ ಪಡೆಯುವ ಹುನ್ನಾರ ನಡೆಸುತ್ತಿಲ್ಲ. ಆ ರೀತಿಯ ವಿವಾದ ಸೃಷ್ಟಿಸಿ ಈಗಾಗಲೇ ನಿರ್ವಹಿಸಲಾಗದಷ್ಟು ಬೆಳೆದು ನಿಂತಿರುವ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನೂ ಹೊಂದಿಲ್ಲ.

ಕರ್ನಾಟಕದಲ್ಲಿ ಹುಟ್ಟಿ ರಾಜ್ ಕುಮಾರ್ ಹೆಸರು ಕೇಳಿಲ್ಲ, ಭಾರತದಲ್ಲಿ ಹುಟ್ಟಿ ಗಾಂಧಿ ತಾತ ಗೊತ್ತಿಲ್ಲ ಎನ್ನುವವರನ್ನು ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಜಾಗತಿಕ ‘ನಗೆ ಸಾಮ್ರಾಟ’ಚಾಪ್ಲಿನ್‌ನ ಬಗ್ಗೆ ಕೇಳದವರು ನಮಗೆ ಸಿಕ್ಕುವುದಿಲ್ಲ.

ಚಾಪ್ಲಿನ್ ಮನುಷ್ಯ ಈ ಭೂಮಿಯ ಮೇಲೆ ಮಾಡಬಹುದಾದ ಅತಿ ದೊಡ್ಡ ಸಾಧನೆಯೆಂದರೆ ನಗು ನಗುತ್ತಾ ಬಾಳುವುದು ಎಂಬುದನ್ನು ತೋರಿಸಿಕೊಟ್ಟವನು. ಎಲ್ಲಾ ಸಮಸ್ಯೆಗಳಿಗೂ ನಗುವಿನ ಪರಿಹಾರವನ್ನು ಕಾಣಿಸಿದವನು. ನಗು ಅರಳುವುದು ಕ್ರೌರ್ಯವಿಲ್ಲದ ಮುಗ್ಧ ಮನಸ್ಸಿನಲ್ಲಿ ಎಂಬುದು ಆತನ ಭಿಕಾರಿ ಪಾತ್ರದ ಪ್ರತಿ ಚಲನವಲನಗಳಲ್ಲೂ ಎದ್ದು ತೋರುತ್ತದೆ.

ಈ ಸಂಚಿಕೆಯಲ್ಲಿ ನಗೆಗಾರರ ಸಾಮ್ರಾಟನಾದ ಚಾರ್ಲಿ ಚಾಪ್ಲಿನ್ನನ ಸಿನೆಮಾದ ಒಂದು ತುಣುಕು.

ಹೊಟೇಲಿನಲ್ಲಿ ಹಾಡಿ ಕುಣಿಯಬೇಕಾಗಿರುತ್ತದೆ. ನಾಯಕಿ ಬರೆದುಕೊಟ್ಟ ಹಾಡಿನ ಚೀಟಿ ಕಳೆದು ಹೋಗುತ್ತೆ. ಪದಗಳು, ಅರ್ಥಗಳು, ವಾಕ್ಯಗಳು, ಸಾಹಿತ್ಯದ ಹಂಗಿಲ್ಲದೆ ನಾನು ನಗಿಸಬಲ್ಲೆ, ಕಲೆಗೆ ಅವೆಲ್ಲ ಪೂರಕವೇ ಹೊರತು ಅವೇ ಕಲೆಯಲ್ಲ ಎಂದು ಹೊಟ್ಟೆ ಹುಣ್ಣಾಗುವ ರೀತಿಯಲ್ಲಿ ವಿಷದ ಪಡಿಸುವ ಚಾಪ್ಲಿನ್ ನಮ್ಮನ್ನು ರಂಜಿಸುವುದರಲ್ಲಿ ಸೋಲುವುದಿಲ್ಲ.

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ನಗಾರಿ ರೆಕಮಂಡೇಶನ್ಸ್ 17

3 ಫೆಬ್ರ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ಪ್ರತಿ ಸಂಚಿಕೆಯಲ್ಲೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

……………………………………

ಟಿವಿ ಶೋಗಳು ಹಾಗೂ ಶೋ ಆಂಕರ್‌ಗಳು ಅಮೇರಿಕಾದ ಟಿವಿ ಜಗತ್ತಿನಲ್ಲಿ ಸ್ಥಾಪಿಸಿರುವ ಸ್ಥಾನವು ಬಹಳ ಪ್ರಮುಖವಾದದ್ದು. ಒಬ್ಬೊಬ್ಬ ಟಿವಿ ಆಂಕರ್ ಪ್ರಸಿದ್ಧಿಯಲ್ಲಿ ಸಹ ಹಾಲಿವುಡ್ ಹಿರೋನ ಎತ್ತರ ಏರಿರುವುದು, ಅವರೂ200px-Davidlettermannavy ಸಹ ಸೆಲೆಬ್ರಿಟಿಗಳಾಗಿರುವುದು ಕಂಡು ಬರುತ್ತದೆ. ಭಾರತದ ಟಿವಿ ಚಾನೆಲ್ಲುಗಳಲ್ಲೂ ಸಹ ಇಂತಹ ಕೆಲವು ಉದಾಹರಣೆಗಳಿವೆಯಾದರೂ ಆಸಕ್ತರು ಇದನ್ನೇ ಉದ್ಯೋಗವಾಗಿ ಪಡೆಯುವಷ್ಟರ ಮಟ್ಟಿಗೆ ಈ ಸಂಪ್ರದಾಯವಿನ್ನೂ ಬೆಳೆದಿಲ್ಲ.

ಐಬಿಎಸ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಗಾಗಿ ಲೇಟ್ ಶೋ ಎಂಬ ಹೆಸರಿನ ತಡರಾತ್ರಿಯ ಕಾರ್ಯಕ್ರಮವನ್ನು ಕಳೆದ ಹದಿನೈದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಡೇವಿಡ್ ಮೈಕೇಲ್ ಲೆಟರ್‌ಮನ್ ಅಮೇರಿಕಾದಲ್ಲಿ ಹೆಸರುವಾಸಿ. ಈತನ ಟಾಕ್ ಶೋನಲ್ಲಿ ಕಾಮಿಡಿಯೇ ಪ್ರಧಾನವಾದರೂ ಒಂದು ಸಾಂಪ್ರದಾಯಿಕ ಟಿವಿ ಕಾರ್ಯಕ್ರಮಕ್ಕೆ ಬೇಕಾದ ಅಂಶಗಳನ್ನೆಲ್ಲಾ ಈ ಕಾರ್ಯಕ್ರಮ ಹೊಂದಿರುತ್ತದೆ.

ಲೆಟರ್‌ಮನ್‌ನ ಲೇಟ್ ನೈಟ್ ಶೋಗೆ ಭಾರತದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಆಹ್ವಾನಿತಳಾಗಿದ್ದಳು. ಆ ಸಂದರ್ಶನದಲ್ಲಿ ಲೆಟರ್‌ಮನ್‌ನ ಮೊನಚಾದ, ಕಾಲೆಳೆಯುವ ಪ್ರಶ್ನೆಗಳಿಗೆ ಐಶ್ವರ್ಯ ಸಹ ಪ್ರಖರವಾಗಿಯೇ ಉತ್ತರಿಸಿದಳು.

ಭಾರತದ ಬಗ್ಗೆ ತನ್ನ ಅಜ್ಞಾನವನ್ನು ಪ್ರದರ್ಶಿಸುತ್ತಾ ಲೆಟರ್‌ಮನ್ ಐಶ್ವರ್ಯಳನ್ನು ಹೀಗೆ ಪ್ರಶ್ನಿಸುತ್ತಾನೆ, “ನಿಮ್ಮ ದೇಶದಲ್ಲಿ ಮಕ್ಕಳು ತಂದೆ ತಾಯಿಯ ಜೊತೆಗೇ ಇರುತ್ತಾರಾ?”
ಅದಕ್ಕೆ ಐಶ್ವರ್ಯ ಕೊಡುವ ಮಾರ್ಮಿಕ ಉತ್ತರ, “ಹೌದು, ನಮ್ಮ ದೇಶದಲ್ಲಿ ತಮ್ಮ ಅಪ್ಪ ಅಮ್ಮನೊಂದಿಗೆ ಮಾತಾಡಲು, ಊಟ ಮಾಡಲು ಮಕ್ಕಳು ಅಪಾಯಿಂಟ್ ಮೆಂಟ್ ಪಡೆಯುವ ಆವಶ್ಯಕತೆಯಿಲ್ಲ!”

ಈ ಅಪರೂಪದ ಸಂದರ್ಶನ ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

29 ಜನ

 

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಗರವನ್ನು ಕಂಡು ಸಾಮ್ರಾಟರು ಹರ್ಷೋದ್ಘಾರದಿಂದ ಕಂಬನಿ ಮಿಡಿದರು. ವೇದಿಕೆಯ ಮೇಲಿನ ಗಣ್ಯರೇ ಹೀಗೆ ಕಂಬನಿ ಮಿಡಿದದ್ದನ್ನು ಕಂಡು ಗೊಂದಲಕ್ಕೊಳಗಾದ ಮಹಾಜನತೆಯು ತಾವೂ ಎರಡು ಸೆಕಂಡು ಮೌನವನ್ನಾಚರಿಸಿ, ತಲೆ ತಗ್ಗಿಸಿ, ಕಷ್ಟ ಪಟ್ಟು ಎರಡು ಹನಿ ಕಣ್ಣೀರು ಹರಿಸಿದರು. ಸಾಮ್ರಾಟರು ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೋ, ಶ್ರೀಮಂತರ ಕಾರುಗಳಿಗೆ ರಕ್ತ ತರ್ಪಣ ಅರ್ಪಿಸಿದವರಿಗೋ, ದರೋಡೆಕೋರರಿಂದ ಬದುಕುವ ಹಕ್ಕನ್ನು ಕಳೆದುಕೊಂಡವರಿಗೋ ಗೌರವ ಸೂಚಿಸುವುದಕ್ಕಾಗಿ ಕಂಬನಿ ಮಿಡಿದಿದ್ದಾರೆ ಎಂದು ತಿಳಿದಿತ್ತು ಜನತೆ. ಆದರೆ ಸಾಮ್ರಾಟರನ್ನು ಪಕ್ಕಕ್ಕೆಳೆದ ಕುಚೇಲ ಅವರ ಕಣ್ಣಲ್ಲಿ ಬಿದ್ದಿದ್ದ ಧೂಳನ್ನು ಊದಿ ತೆಗೆದು ಅವರ ಹರ್ಷೋದ್ಘಾರದ ಕಣ್ಣೀರ ಧಾರೆಯನ್ನು ಬಂದ್ ಮಾಡಿದ. ಆದರೆ ಮಹಾ ಜನತೆ ಮಾತ್ರ ತಮ್ಮ ಮಾನಸ ಮಂದಿರದಲ್ಲಿ ಪ್ರತಿಷ್ಠಾಪಿಸಿದ ನಗೆ ಸಾಮ್ರಾಟರ ಕಣ್ಣೀರಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ಧಟತನಕ್ಕೆ ಕೈ ಹಾಕಲಿಲ್ಲ. enews_party_hat

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

– ನಗೆ ಸಾಮ್ರಾಟ್

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

15 ನವೆಂ

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದರೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿಕೊಂಡು ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬಹುದು. ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ಅದನ್ನು ಅಲ್ಲಗಳೆಯುವುದಿಲ್ಲ. ಒಂದು ವೇಳೆ ನೀವು ಪತ್ರಿಕೆಯನ್ನು ಹಿಡಿದು ನಿಮ್ಮ ಗುರುತಿರದ ಬೀದಿಯಲ್ಲಿ ನಾಲ್ಕು ಬಾರಿ ತಿರುಗಿದರೆ ಸಾಕು ಹಲವರು ಹಿಂತಿರುಗಿ ನಿಮ್ಮ ಮುಖವನ್ನು ಪರೀಕ್ಷಿಸಿ ಮನೆಗೆ ಹೋಗಿ ಪೇಪರ್ ತಿರುವಿ ಹಾಕುತ್ತಾರೆ. ಶಂಖದಿಂದ ಬಂದದ್ದೆಲ್ಲವೂ ತೀರ್ಥದ ಮಹಿಮೆಯನ್ನು ಪಡೆದುಕೊಳ್ಳುವಂತೆ ಪತ್ರಿಕೆಗಳಲ್ಲಿ ಬಂದದ್ದೆಲ್ಲವೂ ಸತ್ಯದ ಮಹಿಮೆಯನ್ನು ಪಡೆಯುತ್ತಿರುವುದು ಇಪ್ಪತೊಂದನೆತ ಶತಮಾನದ ಸೋಜಿಗ.

ಅಮೇರಿಕಾದಲ್ಲಿ ಬೈಬಲ್ಲಿಗೆ ಅದೆಷ್ಟು ಜನರು ಬೆಲೆ ಕೊಡುತ್ತಾರೋ ಇಲ್ಲವೋ, ಅಲ್ಲಿನ ಪತ್ರಿಕೆಗಳಿಗೆ ಖಂಡಿತಾ ಬೆಲೆ ಕೊಡುತ್ತಾರೆ. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ಎಂದರೆ ಕೇಳಬೇಕಿಲ್ಲ. ಅದರ ಘೋಷವಾಕ್ಯ ಹೀಗಿದೆ: All the news that’s fit to print ಎಂದ ಮೇಲೆ ಕೇಳಬೇಕೆ? ಆ ಪತಿಕೆಯಲ್ಲಿ ಪ್ರಕಟವಾಗಿರುವುದೆಲ್ಲಾ ನ್ಯೂಸೇ. ಇಂಥ ಪತ್ರಿಕೆಯು ಗಳಿಸಿಕೊಂದಿರುವ ವಿಶ್ವಾಸಾರ್ಹತೆಯಿಂದ ಒಂದು ವೇಳೆ ದೇವರೂ ಸಹ ಅಸೂಯೆ ಪಟ್ಟಾನು. ತನ್ನ ಹಳೆಯ ಧಾರ್ಮಿಕ ಗ್ರಂಥಗಳ ಹೊಸ ಆವೃತ್ತಿಯ ಪ್ರಕಟಣೆಗಾಗಿ ಈ ಪತ್ರಿಕೆಗಳನ್ನೇ ಆಯ್ದುಕೊಂಡಾನು.

ಇಷ್ಟೆಲ್ಲಾ ಆದರೂ ಸರ್ವಶಕ್ತ ಪತ್ರಿಕೆಗಳನ್ನೇ ನಡುಗಿಸುವ ಪ್ರಳಯಾಂತಕರು ಸಹ ಆ ದೇವನ ಸೃಷ್ಟಿಯಲ್ಲಿರುತ್ತಾರೆ ಎಂಬುದನ್ನು ಮರೆಯಬಾರದು. ‘ಅಮೇರಿಕಾ ಇರಾಕ್ ಯುದ್ಧವನ್ನು ಅಂತ್ಯಗೊಳಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸಿನ ಮುಖಪುಟದಲ್ಲಿ ವರದಿಯಾದರೆ ಅಳ್ಳದೆಯವರೇ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ‘ದೇವೇಗೌಡರು ಹೇಳಿದ ಜೋಕಿಗೆ ಖರ್ಗೆಯವರು ಬಿದ್ದು ಬಿದ್ದು ನಕ್ಕರು’ ಎಂಬ ವಾರ್ತೆ ನಮ್ಮ ರಾಜ್ಯದ ಜನರಿಗೆ ಹೇಗೆ ಕರ್ಣಾನಂದದಾಯಕವೋ ಹಾಗೆಯೇ ಈ ಸುದ್ದಿ. ಮುಂಜಾನೆಯ ಪತ್ರಿಕೆಯಲ್ಲಿ ಇಂಥ ಸುದ್ದಿ ಪ್ರಕಟವಾದರೆ ಏನನ್ನಿಸಬಹುದು? ಕೆಲವು ಬುದ್ಧಿವಂತರು ಕ್ಯಾಲಂಡರನ್ನು ಎರಡೆರಡು ಬಾರಿ ತಿರುಗಿಸಿ ನೋಡಿ ಅಂದು ಏಪ್ರಿಲ್ ಒಂದು ಅಲ್ಲ ಎಂದು ಖಾತ್ರಿ ಪಡಿಸಿಕೊಳ್ಳಬಹುದು. ಮತ್ತೊಂದಷ್ಟು ಮಂದಿ ಸಂ-ಚೋಧನೆಯ ಒಲವಿದ್ದವರು ಉಳಿದ ಪತ್ರಿಕಗಳತ್ತ ಕಣ್ಣು ಹಾಯಿಸಿ ಕ್ರಾಸ್ ಚೆಕ್ ಮಾಡಿಕೊಳ್ಳಬಹುದು. ಸಾಮ್ರಾಟರಂತಹ ಅತೀ ಬುದ್ಧಿವಂತರು ತಮಗಿಂತ ಬುದ್ಧಿವಂತರ ಬಳಿ ಹೋಗಿ ‘ಇವತ್ತಿನ ಪೇಪರ್ ಇದ್ಯಾ’ ಅಂತ ಪಕ್ಕದ ಮನೆಯವರ ಬಳಿ ಕೇಳಿ ‘ಏನು ವಿಶೇಷ ಇವತ್ತು ಪೇಪರಿನಲ್ಲಿ…’ ಎಂದು ಹಲ್ಲು ಗಿಂಜಿ ನಾಲ್ಕೈದು ಮಂದಿ ಕನ್‌ಫರ್ಮ್ ಮಾಡಿದ ನಂತರವೇ ನಂಬಬಹುದು.

ಮಾಡಲು ಕೆಲಸವಿಲ್ಲದ ದ ಎಸ್ ಮೆನ್ (ಹೌದು ಗಂಡಸರು!) ಎಂಬ ಹೆಸರಿನ ಗುಂಪಿನ ಸದಸ್ಯರು ನವೆಂಬರ್ ಹದಿನಾಲ್ಕರಂದು ಅಂದರೆ ನಿನ್ನೆ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಣಕು ಪ್ರತಿ ಮಾಡಿ ಅದನ್ನು ೧.೨ ಮಿಲಿಯನ್ ಕಾಪಿಗಳಾಗಿ ಮುದ್ರಿಸಿ ಹಂಚಿದ್ದಾರೆ. ಅದರಲ್ಲಿ ಅಮೇರಿಕಾದ ಪ್ರಜೆ ಹುಬ್ಬೇರಿಸಿ ಓದಬಹುದಾದ ವರದಿಗಳೇ ತುಂಬಿದ್ದವಂತೆ. ‘ಅಮೇರಿಕಾ ಇರಾಕಿ ಯುದ್ಧವನ್ನು ಕೊನೆಗೊಳಿಸಿದೆ’ ಎಂಬ ವರದಿಯ ಪಕ್ಕದಲ್ಲಿ ಜಾರ್ಜ್ ಬುಶ್‌ರನ್ನು ಬಂಧಿಸಲಾಗಿದೆ ಎಂದು ಪ್ರಕಟವಾಗಿತ್ತಂತೆ. ಒಳ ಪುಟಗಳಲ್ಲಿ ಕಾಂಡಲೀನ ರೈಸ್ ತಪ್ಪೊಪ್ಪಿಗೆ… ಹೀಗೆ ರಸವತ್ತಾದ ವರದಿಗಳು. ಪ್ರಜೆಗಳು ಕನಸಿನಲ್ಲಿ ಮಾತ್ರ ಕಲ್ಪಿಸಿಕೊಳ್ಳಬಹುದಾದ ಘಟನೆಗಳು ವರದಿಯಾಗಿವೆಯಂತೆ. ಇದರಿಂದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರ್ಚಸ್ಸಿಗೇನು ಧಕ್ಕೆಯಾಗದು. ಈ ಪ್ರ್ಯಾನ್ಕ್‌ಸ್ಟರರು ಪತ್ರಿಕೆಯ ದಿನಾಂಕವನ್ನು ಜುಲೈ ೪ ೨೦೦೯ ಎಂದು ಮುದ್ರಿಸಿದ್ದರೆ ಘೋಷವಾಕ್ಯವನ್ನು ತಿದ್ದಿ All the news we hope to print ಎಂದು ಮುದ್ರಿಸಿ ತಮ್ಮ ಉದ್ದೇಶವನ್ನು ಸಾರಿದ್ದಾರೆ.

ಈ ನಡುವೆ ಹಿಂದೊಮ್ಮೆ ನಾವು ಕೇಳಿದ್ದ ಜೋಕು ನೆನಪಾಗಿ ನಗೆ ನಗಾರಿಯ ಸಿಬ್ಬಂದಿಯೆಲ್ಲಾ ನೆಲದ ಮೇಲೆ ಉರುಳುರುಳಿ ನಗುತ್ತಿದ್ದಾರೆ. ಪತ್ರಿಕೆಯು ಸುದ್ದಿಯಾಗಬಹುದನ್ನೆಲ್ಲಾ ಮುದ್ರಿಸುತ್ತೇವೆ ಎಂದು ಘೋಷವಾಕ್ಯ ಇಟ್ಟುಕೊಳ್ಳುತ್ತಾರೆಂದರೆ ಜಗತ್ತಿನಲ್ಲಿ ಪ್ರತಿ ದಿನ ಇವರ ಪತ್ರಿಕೆಯ ಇಪ್ಪತ್ತು ಚಿಲ್ಲರೆ ಪುಟಗಳು ತುಂಬುವಷ್ಟು ಮಾತ್ರ ಘಟನೆಗಳು ನಡೆಯುತ್ತವೆ ಎಂತಲೇ? ಒಂದು ಹೆಚ್ಚಿಲ್ಲ, ಕಡಿಮೆ ಇಲ್ಲ!

ಕೆಲ ದಿನಗಳ ಹಿಂದೆ ಸಾಮ್ರಾಟರಾದ ನಮ್ಮ ಹಾಗೂ ನಗೆ ನಗಾರಿಯ ವಿಶ್ವಾಸಾರ್ಹತೆಯನ್ನು ನಾಶ ಪಡಿಸುವುದಕ್ಕಾಗಿ ಬಹುದೊಡ್ಡ ಹುನ್ನಾರ ನಡೆದಿತ್ತು. ನಮ್ಮ ಪತ್ರಿಕೆಯಲ್ಲಿ ಹೆಸರಿನಲ್ಲಿ ದೇವೇಗೌಡರು ಬರೆದ ಹಾಸ್ಯ ಲೇಖನ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಹನಿಗವನವನ್ನು ಮುದ್ರಿಸುವ ಅತಿರಂಜಕ ಯೋಜನೆ ವಿಫಲವಾಯಿತು ಎಂದು ತಿಳಿಸುವುದಕ್ಕೆ ಹರ್ಷಿಸುತ್ತೇವೆ. ಈ ಹುನ್ನಾರವನ್ನು ಪತ್ತೆ ಹಚ್ಚಿ ನಮ್ಮ ಓದುಗರನ್ನು ಹೃದಯಾಘಾತ, ಶಾಕ್‌ನಿಂದ ಕಾಪಾಡಿದ ಡಿಟೆಕ್ಟಿವ್ ಚೇಲ ಕುಚೇಲನಿಗೆ ನಾವು ಸನ್ಮಾನಿಸಿದ್ದು ಯಾವ ಪತ್ರಿಕೆಯಲ್ಲೂ ವರದಿಯಾಗಲಿಲ್ಲ.

ವಾರದ ವಿವೇಕ 15

17 ಆಗಸ್ಟ್

……………………………………………………….

ಗಾಳಿಯಲ್ಲಿ ಮಹಲು ಕಟ್ಟಿ.

ಅದರಲ್ಲಿ ತಪ್ಪೇನಿಲ್ಲ.

ಆದರೆ ನೆಲದ ಮೇಲೆ ಅದಕ್ಕೆ

ಫೌಂಡೇಶನ್ ಹಾಕುವುದನ್ನು ಮರೆಯಬೇಡಿ!

– ಮದನ ಮೋಹನ ಮಾಳವೀಯ

……………………………………………………….

ವಾರದ ವಿವೇಕ 14

1 ಆಗಸ್ಟ್

…………………………………………………………………………………….

ಕಣ್ಣೀರು ಸುರಿಯುವುದೊಂದೇ ಹೆಣ್ಣಿನ
ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಅದನ್ನೇ
ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು.

– ಬೀchi

…………………………………………………………………………………….

ನಗಾರಿಯ ಸಂಚಿಕೆ ಹೇಗಿತ್ತು?

14 ಜುಲೈ

ಅಸಲಿಗೆ ನಗೆ ನಗಾರಿ ಡಾಟ್ ಕಾಮ್ ಎಂಬ ವಿಚಿತ್ರ ಹೆಸರಿನ ಬ್ಲಾಗನ್ನು ತೆರೆದು ಹತ್ತಿರ ಆರು ತಿಂಗಳುಗಳು ಕಳೆದಿವೆ. ಆದರೂ ಪೂರ್ಣ ಪ್ರಮಾಣದ ಸಂಚಿಕೆಯನ್ನು ರೂಪಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಬರಹಗಳನ್ನು ದಾಖಲಿಸಲು ನಮ್ಮಿಂದ ಆಗಿರಲಿಲ್ಲ. ಮೊದಲು ಇದನ್ನು ವಾರಕ್ಕೊಮ್ಮೆ ಅಪ್‌ಡೇಟ್ ಮಾಡುವ ಇರಾದೆ ನಮ್ಮದಾಗಿತ್ತಾದರೂ ಅದು ಸುಲಭದ ಕೆಲಸವಲ್ಲ ಎಂದುಕೊಂಡು ಸುಮ್ಮನಾದೆವು. ಆದರೆ ಈಗ ಹದಿನೈದು ದಿನಕ್ಕೊಮ್ಮೆ ಬ್ಲಾಗಿನ ಸಂಚಿಕೆಯನ್ನು ರೂಪಿಸಬಹುದು ಎಂಬ ಧೈರ್ಯ ಬಂದಿದೆ. ಅದಕ್ಕೇ ಪ್ರಾಯೋಗಿಕವಾಗಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಹಿಂದಿನ ಹದಿನೈದು ದಿನಗಳಲ್ಲಿ ನಗೆ ನಗಾರಿ ಡಾಟ್ ಕಾಮ್ ಅರಳಿದ ರೀತಿಯನ್ನು ಗಮನಿಸಿದವರಿಗೆ ನಮ್ಮ ಪ್ರಯತ್ನದ ಅರಿವಾಗಬಹುದು.

ಇನ್ನು ಮುಂದೆ ಹದಿನೈದು ತಿಂಗಳಿಗೊಂದು ಸಂಚಿಕೆಯನ್ನು ಹೊರ ತರುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೇವೆ. ನಗೆ ನಗಾರಿ ನಿರಂತರವಾಗಿ ಅನುರಣಿಸುತ್ತಿರಬೇಕು ಎಂಬ ಆಶಯ ನಮ್ಮದು. ನಗುವುದು ಸಹಜ ಧರ್ಮ ಎಂದರು ಡಿ.ವಿ.ಜಿ ಆದರೆ ನಾವು ಅದೊಂದು ಧರ್ಮವನ್ನು ಬಿಟ್ಟು ಬೇರೆಲ್ಲಾ ಧರ್ಮದ ಬೆನ್ನು ಹತ್ತಿ ನಗುವುದನ್ನು ಮರೆತಿರುವುದು ವಿಷಾದನೀಯ. ಇಲ್ಲಿರುವ ಬರಹಗಳು ಬೇಕಾದ ಎಲ್ಲಾ ಮಾಹಿತಿ, ವಿಶ್ಲೇಷಣೆ, ಟೀಕೆ- ಟಿಪ್ಪಣಿಗಳನ್ನೆಲ್ಲಾ ನಗೆಯ ಮಾರುವೇಷದಲ್ಲಿ ನಿಮಗೆ ತಲುಪಿಸುವ ಉದ್ದೇಶ ಹೊಂದಿರುವಂಥವು. ಇಲ್ಲಿನ ಬರಹಗಳು ನಿಮ್ಮ ಮನಸ್ಸನ್ನು ಕೊಂಚ ಸಡಿಲವಾಗಿಸಿ ಸ್ವಲ್ಪ ಮನರಂಜನೆಯನ್ನು, ಒಂದಿಷ್ಟು ಚಿಂತನೆಯನ್ನು ಹುಟ್ಟಿಸುವ ಇಶಾರೆಯನ್ನು ನೀಡಿದರೆ ಸಾಕು ನಮ್ಮ ಪ್ರಯತ್ನ ಸಾರ್ಥಕ.

ಈ ಬ್ಲಾಗಿನಿಂದ ನಗು ಹುಟ್ಟುತ್ತದೆ ಎಂಬುದು ಶುದ್ಧ ಭ್ರಮೆ. ನಗು ಎನ್ನುವುದು ನಮ್ಮ ಉಸಿರಾಟದ ಹಾಗೆ ನಮ್ಮನ್ನು ಆವರಿಸಬೇಕು. ಅದು ನಮ್ಮ ವ್ಯಕ್ತಿತ್ವದ ಹಾಗೆಯೇ ಹೊರಹೊಮ್ಮಬೇಕು. ಇಷ್ಟಕ್ಕೂ ನಮಗಿರುವ ನಾಲ್ಕು ದಿನದ ಬದುಕಲ್ಲಿ ಎಷ್ಟನ್ನು ಅಂತ ಚಿಂತೆಯಲ್ಲಿ, ರೋದನೆಯಲ್ಲಿ, ದ್ವೇಷದಲ್ಲಿ, ಬಿಗುಮಾನದಲ್ಲಿ ಕಳೆಯುವುದು ಹೇಳಿ…

-ನಗೆ ಸಾಮ್ರಾಟ್