Archive | ಫೆಬ್ರವರಿ, 2008

ಗೇರ್ ಗೇರ್ ತಿಮ್ಮಣ್ಣ

27 ಫೆಬ್ರ

‘ಸಂಪದ’ದಲ್ಲಿ ಪ್ರಕಟವಾದ ಎ.ವಿ.ನಾಗರಾಜುರವರ ಈ ಲೇಖನ ಗೇರ್‍-ಶೆಟ್ಟಿ ಪ್ರಕರಣವನ್ನು ರಸವತ್ತಾಗಿ ವರ್ಣಿಸುತ್ತದೆ.picture-3155.jpg

ಮೊನ್ನೆ ಏನಾಯ್ತೂಂತೀರಿ . . . ಬೆಂಗಳೂರಿನಿಂದ ಮೈಸೂರಿಗೆ ಹೊಗ್ತಾ ಇದ್ದಾಗ, ಅರ್ಧ ದಾರಿ ಕ್ರಮಿಸಿದ ಮೇಲೆ, ನಾಲಗೆಯ ದ್ರವ ಆರತೊಡಗಿದಂತಾಗಿ, ಹಾಗು ಕಿಬ್ಬೊಟ್ಟೆಯು ತುಂಬಿಕೊಂಡುಬಂದು ದಾರಿ ಬದಿಯ ಒಂದು ದೊಡ್ಡ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿ, ನೀರಾವರಿ ಕಾರ್ಯವನ್ನು ಮೊದಲು ಮುಗಿಸಿ, ಡಿಕ್ಕಿಯಲ್ಲಿದ್ದ ಪ್ಲಾಸ್ಕಿನಿಂದ ಕಾಫಿಯನ್ನು ತೆಗೆದುಕೊಂಡು ಲೋಟಕ್ಕೆ ಬಗ್ಗಿಸಿಕೊಳ್ಳುತಿದ್ದಂತೆಯೇ , ಮೇಲಿನಿಂದ ದಡದಡನೆ ನಮ್ಮ ಪೂರ್ವೀಕರುಗಳ ಆಗಮನವಾಯಿತು. ಒಂದು ಕೆಂಪು ಮೂತಿಯ ಇಂಪೋರ್ಟೆಡ್ ಗಡವ, ಜೊತೆ ಜೊತೆಯಲಿ ಬಾಯಗಲವಾಗಿದ್ದ ಲೋಕಲ್ ಗಡವಿ ಮತ್ತು ಅವುಗಳ ಸುತ್ತಾ ಮುತ್ತಾ ಪಡ್ಡೆ ಮಂಗಗಳು ಕುಣಿದಾಡುತ್ತಾ ಬಂದು ನನ್ನ ಸುತ್ತಾ ಗಿರಕಿ ಹೊಡೆಯಲಾರಂಬಿಸಿದವು. ಗಡವ ಹಾಗು ಜೊತೆಯಲ್ಲಿದ್ದ ಗಡವಿ ನನ್ನನ್ನು ತಮ್ಮವರೆಂದು ಗುರುತಿಸಿದವೋ ಏನೋ, ಇಂಗ್ಲೀಷಿನಂತಹ ಭಾಷೆಯಲಿ ಏನೇನೋ ಹೇಳಲಾರಂಭಿಸಿದವು. ನಿಧಾನವಾಗಿ ಅವುಗಳ ಮಾತು ನನಗೆ ಅರ್ಥವಾಗತೊಡಗಿತು.

ನಾನು ಗಡವನನ್ನು “ನಿನ್ನ ಹೆಸರೇನು?” ಎಂದದ್ದಕೆ ಅದು “ಗೇರ್ ಗೇರ್ ತಿಮ್ಮಣ್ಣ” ಎಂದಿತು. “ನಿನ್ನಾಕೆಯ ಹೆಸರು?” ಎಂದೆ. “ಅದು ನನ್ನಾಕೆಯಲ್ಲ, ಈ ಪ್ರದೇಶದಲ್ಲಿ ಎಯ್ಡ್ಸ್ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದಾಗಿ ಅಂಕೆ ಸಂಖ್ಯೆಗಳಿಂದ ತಿಳಿದು ಬಂದದ್ದರಿಂದ, ಆಕೆ ಇಲ್ಲಿ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಳೆ. ಅವಳ ಹೆಸರು ಸ್ವಲ್ಪಾ ಗಟ್ಟಿ ಅಂತಾ” ಎಂದಿತು.

“ಸರಿ, ನಿಮ್ಮ ದೇಶದಲ್ಲಿ ಎಯ್ಡ್ಸ್ ಇಲ್ಲವೆ” ಎಂದೆ.

“ಅಯ್ಯೋ ಬುದ್ದೂ, ಎಯ್ಡ್ಸ್ ಎಂಬ ರೋಗದ ಹೆಸರನ್ನು ನೀವು, ಭಾರತೀಯರು ಈ ಮೊದಲು ಕೇಳಿದ್ದಿರೇನು? ಇಲ್ವಲ್ಲಾ, ಅದನ್ನು ಸೃಷ್ಟಿಸಿದೋರು, ಭಾರತಕ್ಕೆ ತಂದೋರು ಎಲ್ಲಾ ನಾವೆ. ಈಗ ಅದನ್ನು ನಿರ್ಮೂಲನ ಮಾಡಿ, ಹೆಸರನ್ನೂ, ಹಣವನ್ನೂ ಗಳಿಸಿಕೊಂಡು ಹೋಗಲು ಬಂದಿದ್ದೇನೆ ಅಷ್ಟೆ. ಆದರೆ, ಈ ಒಳಗಿನ ವಿಷಯವನ್ನು ನೀನು ನನ್ನ ವಂಶಸ್ಥನೆಂದು ಹೇಳಿದ್ದೇನೆ. ಇವನ್ನೆಲ್ಲಾ ಪೇಪರ್ರಿನವರಿಗಾಗಲೀ, ಟಿವಿಯವರಿಗಾಗಲೀ ಹಂಚಬೇಡಾ” ಎಂದಿತು.

“ಸರಿ, ನಿಮ್ಮ ಕಾರ್ಯಕ್ರಮದ ರೀತಿ ಏನು?” ಎಂದೆ.

“ನಾನು ಎಯ್ಡ್ಸ್ ಹೇಗೆ ಬರುತ್ತದೆಂದು ತೋರಿಸಿಕೊಟ್ಟರೆ, ಸ್ವಲ್ಪಾಗಟ್ಟಿ ಅದನ್ನು ಬರದಂತೆ ತಡೆಯುವುದು ಹೇಗೆಂದು ತೋರಿಸುತ್ತಾಳೆ, ಮುಂದೆ ಈ ಮರಿಕೋತಿಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತವೆ” ಎಂದಿತು.

“ಸರಿ, ಹತ್ತು ನಿಮಿಶದಲ್ಲಿ ನಿಮ್ಮ ಕಾರ್ಯಕ್ರಮದ ತುಣುಕೊಂದನ್ನು ನನ್ನ ಮುಂದೆ ಪ್ರದರ್ಶಿಸಲು ಸಾಧ್ಯವೇ? ನನಗೂ ಎಯ್ಡ್ಸ್ ಬಗ್ಗೆ ಸ್ವಲ್ಪವಾದರೂ ಜ್ಝಾನೋದಯವಾಗಲಿ” ಎಂದೆ.

“ಓ. . . ಅದಕ್ಕೇನಂತೆ, ಆ ಸೀನು ನನಗೆ ತುಂಬಾ ಇಷ್ಟ. ನೂರು ಸಾರಿ ಬೇಕಾದರೂ ಮಾಡಿತೋರಿಸುತ್ತೇನೆ” ಎಂದು ಓಡಿ ಹೋಗಿ, ಕೈಯಲ್ಲಿ ಕೋಲಿನ ತುಂಡೊಂದನ್ನು ಮೈಕಿನಂತೆ ಹಿಡಿದುಕೊಂಡು, ಏನೇನೋ ಕಿಚಕಿಚ ಎನ್ನುತ್ತಿದ್ದ ಸ್ವಲ್ಪಾಗಟ್ಟಿಯನ್ನು ಮುಂದಿನಿಂದ ಅನಾಮತ್ತಾಗಿ ತಬ್ಬಿಕೊಂಡು ಬಾಯಿಗೆ ಮುತ್ತು ಕೊಡಲು ಪ್ರಯತ್ನಿಸಿತು. ಆದರೆ ಸ್ವಲ್ಪಗಟ್ಟಿ ಅದಕ್ಕೆ ಅವಕಾಶ ಕೊಡದಂತೆ ತಲೆಯನ್ನು ಕೆಳಕ್ಕೆ ಬಾಗಿಸುತ್ತಾ, ಬಾಯನ್ನು ಮುಚ್ಚಲಾಗದಂತೆ ಅಗಲವಾಗಿ ತೆರೆದು ನಗುತ್ತಿರುವಂತೆ ನಟನೆ ಮಾಡಿತು. ವಿಧಿ ಇಲ್ಲದೆ, ಗೇರ್ ಗೇರ್ ತಿಮ್ಮಣ್ಣ ಅದರ ಕೆನ್ನೆಯ ಮೇಲೆ ಮುತ್ತುಗಳ ಸರ ಪೋಣಿಸತೊಡಗಿತು.

ನಾನು “ಇದೇನು ಗೇರ್ ಮಹಾರಾಜರೇ, ನಾನು ಕೇಳಿದ್ದೇನು, ನೀವು ಮಾಡುತ್ತಿರುವುದೇನು?” ಎಂದೆ.

ಅದಕ್ಕೆ ಆಕೆಯನ್ನು ತನ್ನ ಭಾಹು ಬಂದನದಿಂದ ಬೇಸರದಿಂದಲೇ ಬಿಟ್ಟ ಗೇರ್ ಗೇರ್ ತಿಮ್ಮಣ್ಣ “ನಾನು ಆಕೆಯನ್ನು ತಬ್ಬಿಕೊಂಡು ಮುದ್ದಾಡಲು ಹೋದದ್ದನ್ನು ನೀನು ನೋಡಿದೆಯಲ್ಲವೇ? ಅಂದರೆ ಏಯ್ಡ್ಸ್ ರೋಗ ಬರಲು ಈ ರೀತಿ ಅನೈತಿಕ ಸಂಬಂದವನ್ನು ಬೆಳೆಸಬೇಡಿ ಎಂದು ತೋರಿಸಿಕೊಟ್ಟೆ. ಅವಳು ಬಾಯನ್ನು ಅಗಲವಾಗಿ ಬಿಟ್ಟಿದ್ದರಿಂದ ನಾನು ಆಕೆಯ ತುಟಿ ಜೇನನ್ನು ಸವಿಯಲು ಆಗಲೇಇಲ್ಲ. ಎಯ್ಡ್ಸ್ ಬರುವ ಅವಕಾಶವೂ ಅವಳಿಗೆ ದೊರೆಯಲಿಲ್ಲ. ಅದನ್ನು ಆಕೆ ಸ್ಪಷ್ಟ ಪಡಿಸಿದಳು. ಇವೆಲ್ಲಾ ನಿಮ್ಮಂತಹ ಮಂದ ಬುದ್ಧಿಯವರಿಗೆ ತಕ್ಷಣ ಅರ್ಥವಾಗದು” ಎಂದಿತು.

“ಸರಿಯಪ್ಪ” ಎಂದ ನಾನು ಸ್ವಲ್ಪಗಟ್ಟಿಯನ್ನು “ಏನಮ್ಮಾ ನೀನು ಭಾರತೀಯಳಾಗಿ ಇದಕ್ಕೆಲ್ಲಾ ಅವಕಾಶ ಕೊಡಬಹುದೇ?. ಇಂತಹ ಪ್ರದರ್ಶನಗಳು ಮುಚ್ಚಿದ ಕದಗಳ ಹಿಂದೆಯಲ್ಲವೇ ನಡೆಯಬೇಕಾದದ್ದು” ಎಂದೆ.

ಅದಕ್ಕೆ ಆಕೆ ಸ್ವಲ್ಪವೂ ವಿಚಲಿತಳಾಗದೆ “ಅಯ್ಯೋ ಮಂಕುದಿಣ್ಣೆ, ಗೇರ್ ಮುತ್ತು ಕೊಟ್ಟದ್ದು ನನ್ನ ಕೆನ್ನೆಗೆ ಮಾತ್ರ, ನನಗಲ್ಲ. ಅಷ್ಟಕ್ಕೆಲ್ಲಾ ಎಯ್ಡ್ಸ್ ರೋಗ ಬರುವುದಿಲ್ಲ, ಅಲ್ಲದೆ, ಅಷ್ಟೋ ಆಕರ್ಷಣೆ ಇಲ್ಲದಿದ್ದರೆ ನಮ್ಮೆದುರು ಸಂತೆಯೂ ಸೇರುವುದಿಲ್ಲ. ಒಟ್ಟಲ್ಲಿ ನಮ್ಮ ಉದ್ದೇಶ ಎಯ್ಡ್ಸನ್ನು ಭಾರತದಿಂದ ತೊಲಗಿಸುವುದು. ಅದನ್ನು ತೊಲಗಿಸ ಬೇಕಾದರೆ, ಮೊದಲು ಅದನ್ನು ಭಾರತಕ್ಕೆ ತರಬೇಕು, ಆನಂತರ ನಾವು ಅದನ್ನು ತೊಲಗಿಸುವ ಪ್ರಯತ್ನ ಮಾಡಬೇಕು. ಎನ್ ಜಿ ಓ ಗಳು ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿವೆ, ನಾವು ಖರ್ಚು ಮಾಡುವಂತೆ ಮಾಡಿ, ನಮ್ಮ ಖರ್ಚನ್ನು ಹೊಂದಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ಇದೊಂದು ಅರಿವಿನ ಕಾರ್ಯಕ್ರಮ. ಜನ ಜಾಗೃತಿಗಾಗಿ ಇವೆಲ್ಲಾ ಅಷ್ಟೇ” ಎಂದಿತು. ಇದನ್ನು ಕೇಳಿದ ಸುತ್ತಾ ನೆರೆದಿದ್ದ ಪಡ್ಡೆ ಮಂಗಣ್ಣಗಳಿಗೆ ಜ್ಞಾನೋದಯವಾದಂಗ್ತಾಗಿ, ಓಡಿ ಹೋಗಿ “ಹಿಡಿ ಮಗ, ಹಿಡಿ ಮಗ ಬಿಡಬೇಡ ಅವನ್ನ” ಎಂಬ ಹಾಡಿಗೆ ಕಾಲು ಹಾಕುತ್ತಾ, ಗೇರ್ ಗೇರ್ ತಿಮ್ಮಣ್ಣನ ಹಿಂದೆ ಸುತ್ತತೊಡಗಿದವು.

“ಸರಿಯಮ್ಮಾ, ವಿಶ್ ಯೂ ಬೋತ್ ಆಲ್ ದಿ ಬೆಸ್ಟ್” ಎಂದು ವಿಶ್ಶಿಸಿ, ಕಾರನ್ನೇರಿದೆ.

ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೇಲ್.ಕಾಂ

(ಮೂಲ ಲೇಖನ ‘ಸಂಪದ’ದಲ್ಲಿ ಪ್ರಕಟವಾಗಿತ್ತು)


Technorati : , , ,

ಅವರು ಸಂತೋಷವನ್ನು ಎಲ್ಲಿ ಬಚ್ಚಿಟ್ಟರು ಗೊತ್ತೇ?

26 ಫೆಬ್ರ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಮನುಷ್ಯ ಸಂತೋಷವಾಗಿರುವುದನ್ನು ಕಂಡು ಸಂಕಟಗೊಂಡ ದೇವತೆಗಳು ಕಂಡುಕೊಂಡ ಉಪಾಯದ ಬಗ್ಗೆ ಈ ವಾರ ಬರೆದಿದ್ದಾರೆ.

ಇದು ಈ ಅಂಕಣಕಾರರ ನಾಲ್ಕನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ಅಂದು ಯಾಕೋ ದೇವಲೋಕದಲ್ಲಿ ಎಂದಿನ ಪ್ರಶಾಂತತೆ ಇರಲಿಲ್ಲ. ಎಲ್ಲಿ ನೋಡಿದರೂ ಸಂತೃಪ್ತಿ, ಸಂತಸ, ಶಾಂತತೆಯಿಂದ ನಳನಳಿಸುತ್ತಿರುತ್ತಿದ್ದ ಸ್ವರ್ಗ ಯಾಕೋ ಅಂದು ಕದಡಿದ ನೀರಿನ ಕೊಳದಂತಾಗಿತ್ತು. ದೇವತೆಗಳು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಏನನ್ನೋ ಗಾಢವಾಗಿ ಚಿಂತಿಸುತ್ತಿರುವಂತೆ, ಯಾರನ್ನೋ ತೋರಿಸಿ ಆರೋಪಿಸುತ್ತಿರುವಂತೆ, ನಿಂತಲ್ಲೆ ಜಗಳ ಕಾಯುತ್ತಿರುವಂತೆ ಕಾಣುತ್ತಿದ್ದರು.

ಆಗ ತಾನೆ ತಮ್ಮ ಲೋಕಸಂಚಾರ ಮುಗಿಸಿಕೊಂಡು ದೇವಲೋಕಕ್ಕೆ ಬಂದ ನಾರದ ಮಹರ್ಷಿಗಳಿಗೆ ಸ್ವರ್ಗದ ಈ ವಾತಾವರಣ ಕಂಡು ಗಲಿಬಿಲಿಯಾಯಿತು. ‘ಇದೇನು ಇಂದು ಸ್ವರ್ಗ ಹೀಗಾಗಿಬಿಟ್ಟಿದೆ? ದೇವೇಂದ್ರ ಏನು ಮಾಡುತ್ತಿದ್ದಾನೆ? ಯಾರಾದರೂ ರಾಕ್ಷಸ ಸ್ವರ್ಗವನ್ನು ಅತಿಕ್ರಮಿಸಿಕೊಳ್ಳಬೇಕು ಎಂಬ ಸಂಕಲ್ಪದಿಂದ ತಪಸ್ಸಿಗೆ ಕುಳಿತಿದ್ದಾನೆಯೋ ಹೇಗೆ? ಅಥವಾ ಈಗಾಗಲೇ ಯಾರಾದರೂ ರಾಕ್ಷಸ ಪ್ರಭುಗಳು ತೊಡೆತಟ್ಟಿ ಬಂದು ಯುದ್ಧ ಮಾಡಿ ಇಂದ್ರನನ್ನು ಕುರ್ಚಿಯಿಂದ ಕೆಳಕ್ಕುರಿಳಿಸಿದ್ದಾರೆಯೊ ಏನೋ… ಇಷ್ಟಕ್ಕೂ ಈ ನಮ್ಮ ಇಂದ್ರನಿಗೆ ಅದ್ಯಾಕೆ ಅಂತಹ ಕುರ್ಚಿಯ ಮೋಹವೋ ಕಾಣೆ! ಅದನ್ನುಳಿಸಿಕೊಳ್ಳುವ ತಾಕತ್ತಿಲ್ಲದಿದ್ದರೂ ಅದರ ಮೇಲೆ ಕುಳಿತು ದೌಲತ್ತು ನಡೆಸುವುದಕ್ಕೇನೂ ಕಡಿಮೆಯಿಲ್ಲ. ಅತ್ತ ಭೂಲೋಕದ ಯಾವೊಬ್ಬ ಮನುಷ್ಯನೋ ಇಲ್ಲವೇ ಪಾತಾಳದಿಂದ ಒಬ್ಬ ರಕ್ಕಸನೋ ತನ್ನ ಕುರ್ಚಿಯ ಮೇಲೆ ಕಣ್ಣು ಹಾಕಿದ್ದಾನೆ ಎಂಬುದರ ಸುಳಿವು ದೊರೆತುಬಿಟ್ಟರೆ ಸಾಕು ಈ ಇಂದ್ರ ಕಾಲುಹಿಡಿಯದ ದೇವರುಗಳಿಲ್ಲ!

ಪಾಪ ಆ ತ್ರಿಮೂರ್ತಿಗಳ ಪಾಡಂತೂ ಹೇಳತೀರದು. ಲೋಕ ಪರಿಪಾಲನೆಯ ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ ಹಾಕಿಕೊಂಡು ಮೂರೂ ಮಂದಿ ಸರ್ಕಾರ ನಡೆಸುತ್ತಿರುವಾಗ, ಮನುಷ್ಯರೋ, ರಕ್ಕಸರೋ ಗಾಢವಾದ ತಪಸ್ಸು ಮಾಡಿ ತಲೆಗೆ ಬಂದ ವರವನ್ನು ಕೇಳಿದರೆ ಇಲ್ಲ ಎನ್ನಲಾದೀತೇ? ಅದರಲ್ಲೂ ನಮ್ಮ ಮುಕ್ಕಣ್ಣ ಮಹೇಶ್ವರ ರಕ್ಕಸರ ಡಿಮ್ಯಾಂಡುಗಳನ್ನು ಅಪ್ರೂವ್ ಮಾಡುವುದರಲ್ಲಿ ಎತ್ತಿದ ಕೈ. ಹಾಗಂತ ಮಹೇಶ್ವರನಿಗೆ ಏನೂ ಹೇಳಲಾಗದು, ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ನ ಮುಖ ನೋಡಿಕೊಂಡು ಮೂವರೂ ಸುಮ್ಮನಿರಬೇಕು. ಇಲ್ಲದಿದ್ದರೆ ಸರ್ಕಾರವೇ ಉರುಳಿ ಹೋಗುವ ಭಯ (ಅವರಿಗೂ ಕುರ್ಚಿ ಮೇಲಿನ ಮೋಹ?!).

ಈ ರಕ್ಕಸರು ಮಹಾ ಬುದ್ಧಿವಂತರು. ವಿಷ್ಣುವಿಗೆ ನಮ್ಮ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂಬುದನ್ನು ತಿಳಿದು ಅವರು ನೇರವಾಗಿ ಮಹೇಶ್ವರನಿಗೋ ಇಲ್ಲವೇ ಸೃಷ್ಟಿಕರ್ತ ಬ್ರಹ್ಮನಿಗೋ ಗಾಳಹಾಕುತ್ತಾರೆ. ಆದರೆ ದಿನದ ಇಪ್ಪತ್ನಾಕ್ಲು ಗಂಟೆಯೂ ಸೃಷ್ಟಿಯ ಕೆಲಸದಲ್ಲಿ ತೊಡಗಿದ ಬ್ರಹ್ಮನಿಗೆ ನಾಲ್ಕು ತಲೆಗಳಿದ್ದರೂ, ಒಂದೊಂದು ತಲೆಗೆ ಎರಡೆರಡು ಕೈಗಳಂತೆ ಒಟ್ಟು ಎಂಟು ಕೈಗಳಿದ್ದರೂ ಸಾಲದು. ಅಂತಹ ಬ್ಯುಸಿ ಶೆಡ್ಯೂಲ್‍ನಲ್ಲಿಯೂ ಬಿಡುವು ಮಾಡಿಕೊಂಡು ಆಗಾಗ ರಕ್ಕಸರ ಮೊರೆಯನ್ನಾಲಿಸಿ ಅವರಿಗೆ ಬೇಡಿದ ವರವನ್ನು ಕೊಡುವುದುಂಟು. ಆದರೆ ಅದರಲ್ಲೂ ಅವರದ್ದು ಚಾಣಾಕ್ಷ ನಡೆ. ಚಿರಂಜೀವಿಯಾಗು ಅಂತ ವರ ಕೊಡುವುದು ತಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗಿನದ್ದು ಎಂಬುದನ್ನು ತಿಳಿಸಿ ರಕ್ಕಸರ ಮಹತ್ವಾಕಾಂಕ್ಷಿ ವರಗಳ ಬೇಡಿಕೆಗಳಿಂದ ಬಚಾವಾಗಿಬಿಡುತ್ತಾರೆ. ಆದರೆ ಅವರಿಗೆ ನಮ್ಮ ಮಹಾವಿಷ್ಣುವಿನಂತೆ ಡಿಪ್ಲೊಮೆಟಿಕ್ ಆಗಿ ವರ್ತಿಸಲು ಬಾರದು. ಅದರ ಬಗ್ಗೆ ತಿಳಿಸಿ ಹೇಳವಂತೆ ಅವರು ತಮ್ಮ ಪುತ್ರಿ ಹಾಗೂ ಪತ್ನಿ ಸರಸ್ವತಿದೇವಿಯನ್ನು ಕೇಳಿಕೊಂಡಿದ್ದರೂ, ಮಾತೆ ಸರಸ್ವತಿಯವರು ‘ಸರಸ್ವತೀ ಪುತ್ರ’ ಎಂದು ಹೆಸರಿಟ್ಟು ಕೊಂಡ ಭೂಲೋಕದ ಪ್ರಭೃತ್ತಿಗಳಿಗೆ, ತಮ್ಮ ಹೆಸರನ್ನು ಉಳಿಸಿಕೊಳ್ಳುವುದರ ಸಲುವಾಗಿಯಾದರೂ, ಬುದ್ಧಿ ಧಾರೆಯೆರೆಯುವುದರಲ್ಲಿ ಬ್ಯುಸಿಯಾಗಿದ್ದರಿಂದ ಬ್ರಹ್ಮ ದೇವರಿಗೆ ಉಪದೇಶಿಸುವ ಕಾರ್ಯಕ್ರಮ ಪೋಸ್ಟ್ ಪೋನ್ ಆಗಿತ್ತು. ಮಹೇಶ್ವರನಿಗೆ ಹಿಮಾಲಯದ ತಪ್ಪಲಲ್ಲಿ ಕುಳಿತು ಧ್ಯಾನ ಮಾಡುವುದೇ ಬಹುದೊಡ್ಡ ಕೆಲಸ. ಆಗಾಗ ತಮ್ಮ ಮೂರನೆಯ ಕಣ್ಣು ಎಂಬ ‘ವಿಟೋ’ ಬಳಸಿ ಕೆಲವು anti social elementಗಳನ್ನು ನಾಶಮಾಡುವ ಕರ್ತವ್ಯ ಪಾಲಿಸುತ್ತಾರಾದರೂ ಅದು ದಿನನಿತ್ಯವಿರುವುದಿಲ್ಲ. ಮೇಲಾಗಿ ಅವರ ಪುತ್ರದ್ವಯರಾದ ಗಣೇಶ್ ಹಾಗೂ ಸುಬ್ರಹ್ಮಣ್ಯ ಬೆಳೆದು ಪ್ರಬುದ್ಧರಾಗಿ ತಮ್ಮ ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರಾದ್ದರಿಂದ ಅವರ ಜಗಳ, ಕಿತ್ತಾಟ ಬಗೆಹರಿಸುವ ತಲೆನೋವೂ ಇಲ್ಲ. ಹಾಗಾಗಿ ರಕ್ಕಸರು ತಪಸ್ಸಿಗೆ ಥಟ್ ಅಂತ ಓಗೊಡುವುದು ಮಹೇಶ್ವರನೇ. ಅವರು ಏನು ಕೇಳಿದರೂ ತಥಾಸ್ತು ಎನ್ನುವುದು ಮಾತ್ರ ಮಹೇಶ್ವರನ ಕೆಲಸ. ಇದರಿಂದಾಗಿ ಮಹೇಶ್ವರ ಭಕ್ತ ಪರಾಧೀನನಾದರೂ ಉಳಿದ ದೇವತೆಗಳಿಗೆ ಇದರಿಂದ ಅಷ್ಟೇನೂ ಸಂತೋಷವಾದಂತೆ ಕಾಣುವುದಿಲ್ಲ. ಯಾರಾದರೂ ರಾಕ್ಷಸರು ಶಿವನಿಂದ ಪಡೆಯಬಾರದ ವರಗಳನ್ನು ಪಡೆದು ಸ್ವರ್ಗಕ್ಕೆ ಲಗ್ಗೆ ಹಾಕಿಬಿಟ್ಟರೆ ಎಂಬ ಆತಂಕ ದೇವತೆಗಳದ್ದು. ಶಿವನು ಕೊಟ್ಟ ವರವನ್ನು ಶಿವನ ಮೇಲೆಯೇ ಪರೀಕ್ಷಿಸಲು ಮುಂದಾಗುವ ಅನೇಕ ‘ಮುಗ್ಧ’ ರಕ್ಕಸರನ್ನು ಯಾವ ಉಪಾಯ ಬಳಸಿ ಸಂಹರಿಸುವುದು ಎನ್ನುವುದನ್ನು ಪ್ಲಾನ್ ಮಾಡುತ್ತಾ ಕೂರುವ ಕಷ್ಟ ಶ್ರೀಹರಿಯದು.

ಹೀಗಿರುವಾಗ ದೇವತೆಗಳೆಲ್ಲಾ ಆತಂಕಗೊಂಡಿರುವುದಕ್ಕೆ ಮಹೇಶ್ವರನ ಯಾವುದೋ ಹೊಸ ವರವೇ ಕಾರಣವಾಗಿರಬೇಕು. ಯಾವುದಕ್ಕೂ ಇರಲಿ ಒಮ್ಮೆ ವಿಶ್ವಾಮಿತ್ರರನ್ನು ಕೇಳಿಬಿಡೋಣ.’ ಎಂದುಕೊಂಡು ನಾರದ ಮಹರ್ಷಿ ಎದುರಿಗೆ ಬರುತ್ತಿದ್ದ ವಿಶ್ವಾಮಿತ್ರರನ್ನು ಕುರಿತು ಯಾರಾದರೂ ಹೊಸ ರಕ್ಕಸರು ತಪಸ್ಸಿಗೆ ಕುಳಿತಿರುವರೇ ಎಂದು ಪ್ರಶ್ನಿಸಿದರು. ವಿಶ್ವಾಮಿತ್ರರಿಗೆ ಮೊದಲೇ ದೇವತೆಗಳ ಮೇಲೆ ಅಂತಹ ಗುಡ್ ವಿಲ್ ಏನೂ ಇರಲಿಲ್ಲವಲ್ಲ, ಅದೂ ಅಲ್ಲದೆ ಅವರದು ಪ್ರಕಾಂಡ ಕೋಪ, ಸಿಡಿಮಿಡಿಯಿಂದಲೇ ‘ನನಗೆ ತಿಳಿದಂತೆ ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲವಲ್ಲ?’ ಎಂದು ಹೇಳಿ ಸರಸರನೆ ನಡೆದು ಹೋದರು.

ನಾರದರ ಗೊಂದಲ ಇನ್ನಷ್ಟು ಹೆಚ್ಚಿತು. ‘ಯಾವ ರಕ್ಕಸನೂ ತಪಸ್ಸಿಗೆ ಕುಳಿತಿಲ್ಲ ಎನ್ನುವುದಾದರೆ ದೇವತೆಗಳಲ್ಲೇಕೆ ಈ ಪರಿಯ ಆತಂಕ, ಗಡಿಬಿಡಿ? ಈ ಇಂದ್ರ ಇನ್ನೇನು ಕಿತಾಪತಿ ಮಾಡಿಕೊಂಡಿರಬಹುದು? ತ್ರಿಲೋಕ ಸಂಚಾರಿಯಾದ ನನಗೇ ತಿಳಿಯದ ಗಾಸಿಪ್ ಯಾವುದಾದರೂ ಟ್ಯಾಬ್ಲಾಯ್ಡ್‍ನಲ್ಲಿ ಪ್ರಕಟವಾಗಿಬಿಟ್ಟಿದೆಯೋ ಹೇಗೆ? ಅದ್ಯಾರು ಈ ಇಂದ್ರನನ್ನು ತಂದು ದೇವತೆಗಳಿಗೆ ಅಧಿಪತಿಯನ್ನಾಗಿ ಮಾಡಿದರೋ ಕಾಣೆ, ಇವನ ಕಿತಾಪತಿ, ದಗಲಬಾಜಿಗಳು ಒಂದೆರೆಡಲ್ಲ. ಎಷ್ಟು ಮಂದಿಯ ಋಷಿ ಮುನಿಗಳ ಹೆಂಡತಿಯರ ಗೌರವವನ್ನು ಹಾಳು ಮಾಡಿಲ್ಲ ಇವನು. ರಾಕ್ಷಸರೂ ಮಾಡಲು ಹಿಂದೆ ಮುಂದೆ ನೋಡುವಂತಹ ಎಷ್ಟು ಕುಟಿಲ ತಂತ್ರಗಳನ್ನು ಇವನು ಮಾಡಿಲ್ಲ. ಎಷ್ಟು ಮಂದಿ ತಪಸ್ವಿಗಳ ಶ್ರದ್ಧೆಯನ್ನು ಕೆಡಿಸಿಲ್ಲ. ಮತ್ತೆ ಇವೆಲ್ಲಕ್ಕೂ ಆತನದ್ದು ಒಂದೇ ಸಮಜಾಯಿಷಿ: ಧರ್ಮ ರಕ್ಷಣೆ! ಯಾರ ಧರ್ಮವನ್ನು ಯಾರು ರಕ್ಷಿಸುತ್ತಾರೋ ಕಾಣೆ. ಈಗ ಮತ್ತೆ ಯಾವುದಾದರೂ ಋಷಿ ಪತ್ನಿಯ ಗೌರವ ಹಾಳು ಮಾಡುವುದಕ್ಕೆ ಈತ ಹೋಗಿದ್ದಾನೆಯೋ ಹೇಗೆ? ಸಿಕ್ಕುಬಿದ್ದು ಋಷಿಗಳಿಂದ ಅದಿನ್ಯಾವ ಶಾಪಗಳನ್ನು ಪಡೆದು ಬರುತ್ತಾನೊ?’ ಎಂದು ಯೋಚಿಸುತ್ತಿರುವಾಗಲೇ ನಾರದರಿಗೆ ವಸಿಷ್ಟರು ಬರುತ್ತಿರುವುದು ಕಂಡಿತು.
ಇಡೀ ದೇವಲೋಕವೇ ಗೊಂದಲದ ಗೂಡಾಗಿದ್ದರೂ ವಸಿಷ್ಟರು ಮಾತ್ರ ತಮ್ಮ ಎಂದಿನ ಸಂಯಮವನ್ನು ಕೆಡಿಸಿಕೊಂಡಿರಲಿಲ್ಲ. ಇವರನ್ನು ಕೇಳಿದರೆ ಅಸಲು ಸಮಾಚಾರ ಏನೆಂದು ತಿಳಿಯಬಹುದು ಎಂದುಕೊಂಡು ಮಹರ್ಷಿ ನಾರದರು ಸೀದಾ ವಸಿಷ್ಟರ ಬಳಿ ಸಾರಿದರು. ‘ವಂದನೆಗಳು, ವಸಿಷ್ಟ ಮಹರ್ಷಿಗಳಿಗೆ… ದೇವಲೋಕ ಯಾಕೋ ಎಂದಿನ ನೆಮ್ಮದಿಯಿಂದ ಕೂಡಿದಂತೆ ಕಾಣುವುದಿಲ್ಲವಲ್ಲ?’ ಎಂದು ನಾರದರು ನೇರವಾಗಿ ವಿಷಯಕ್ಕೇ ಬಂದರು.

ವಸಿಷ್ಟರು ತಮ್ಮ ಸಹಜ ಪ್ರಸನ್ನತೆಯಿಂದಲೇ, ‘ಏನಿಲ್ಲ ನಾರದರೆ, ದೇವೇಂದ್ರನಿಗೆ ಒಂದು ವಿಷಯದ ಬಗೆಗಿನ ಕೊರಗು ಹತ್ತಿಕೊಂಡಿದೆ. ಭೂಲೋಕದಲ್ಲಿ ಮನುಷ್ಯರು ಸಂತೋಷದಿಂದ ಇರುವುದನ್ನು ಕಂಡು ಆತನಿಗೆ ತಲೆಕೆಟ್ಟಿದೆ. ಭೂಲೋಕದಲ್ಲೇ ಮನುಷ್ಯರು ಸಂತೋಷವನ್ನು ಕಂಡುಕೊಂಡರೆ ಅವರಿಗೆ ಸ್ವರ್ಗದ ಬಯಕೆಯೇ ಇಲ್ಲದಂತಾಗಿಬಿಡುತ್ತೆ. ಆಗ ಸ್ವರ್ಗಕ್ಕೆ ಇರುವ ಡಿಮ್ಯಾಂಡ್ ಕಡಿಮೆಯಾಗಿಬಿಡುತ್ತೆ ಎಂಬ ಚಿಂತೆ ಆತನದ್ದು. ಸಂತೋಷವನ್ನು ಮನುಷ್ಯರು ಇಷ್ಟು ಸುಲಭವಾಗಿ ಕಂದುಕೊಂಡರೆ ದೇವತೆಗಳನ್ನಿರಲಿ, ದೇವರುಗಳನ್ನೂ ಮನುಷ್ಯರು ಮರೆತುಬಿಡುತ್ತಾರೆ. ಸ್ವರ್ಗ ನರಕಗಳು, ಯಜ್ಞ-ಯಾಗ, ದೇವರು-ದೇವರ ಹುಂಡಿ, ವ್ರತ- ಸಂಪ್ರದಾಯಗಳ ಮೇಲೆ ಜನರಿಗೆ ನಂಬಿಕೆಯೇ ಹೊರಟುಹೋಗಿಬಿಡುತ್ತೆ. ಆಗ ಸ್ವರ್ಗಕ್ಕೆ ಬೆಲೆಯೆಲ್ಲಿ ಉಳಿದೀತು ಎಂಬ ಹೊಟ್ಟೆಯುರಿ ಇಂದ್ರನಿಗೆ ಹುಟ್ಟಿದೆ. ಅದರ ತಾಪದಿಂದಾಗಿ ದೇವತೆಗಳೆಲ್ಲಾ ಕಂಗಾಲಾಗಿದ್ದಾರೆ. ಅವರ ನೆಮ್ಮದಿ ಹಾರಿಹೋಗಿದೆ. ಸ್ವರ್ಗ ಈಗ ನರಕಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಅದಕ್ಕೆ ನಾನು ಭೂಲೋಕದ ರೆಸಾರ್ಟ್ ಒಂದರಲ್ಲಿ ಸ್ವಲ್ಪ ಕಾಲದವರೆಗೆ ವಿರಮಿಸಿಕೊಂಡು, ದೇವಲೋಕದ ಅಧಿವೇಶನ ಮುಗಿದ ನಂತರ ಇಲ್ಲಿಗೆ ಆಗಮಿಸುತ್ತೇನೆ. ನೀವೂ ಬರುವುದಿದ್ದರೆ ಹೇಳಿ ನಿಮಗೂ ರೆಸಾರ್ಟ್‍ನಲ್ಲಿ ಒಂದು ರೂಮ್ ಬುಕ್ ಮಾಡುವೆ.’ ಎಂದು ನಾರದರನ್ನು ಆಹ್ವಾನಿಸಿದರು.

ನಾರದರು ವಸಿಷ್ಟರಂತಹ ಹಿರಿಯರೇ ಸ್ವರ್ಗ ಬಿಟ್ಟುಹೋಗುತ್ತಿರುವಾಗ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದು ಭಾವಿಸಿ ತಾವು ಸಮಸ್ಯೆಯನ್ನು ಪರಿಹರಿಸಲು ಇಂದ್ರನಿಗೆ ಅಡ್ವೈಸ್ ಮಾಡುವುದಾಗಿ ತಿಳಿಸಿದ್ದರಿಂದ ವಸಿಷ್ಟರು ತಾವೊಬ್ಬರೇ ಭೂಲೋಕದೆಡೆಗೆ ಪಾದ ಬೆಳೆಸಿದರು.

ಸ್ವರ್ಗದ ಅಸ್ವಸ್ಥತೆಗೆ ಕಾರಣವನ್ನು ತಿಳಿದ ನಾರದರಿಗೆ ಅಲ್ಲಿ ಒಂದು ಕ್ಷಣ ನಿಲ್ಲಲಾಗಲಿಲ್ಲ. ಕೂಡಲೆ ಇಂದ್ರನ ಸಭೆಗೆ ಹೋಗಿ ಒಂದು ಅಧಿವೇಶನವನ್ನು ಕರೆಯುವಂತೆ ತಾಕೀತು ಮಾಡಿದರು. ಡ್ಯುಟಿಯಲ್ಲಿದ್ದ, ಡ್ಯುಟಿ ಮುಗಿಸಿಕೊಂಡು ಹೊರಟಿದ್ದ, ಚಿಂತಾಕ್ರಾಂತರಾಗಿ ಸ್ವರ್ಗದ ಬೀದಿಗಳಲ್ಲಿ ನಿಂತು ಹರಟುತ್ತಿದ್ದ ದೇವತೆಗಳೆಲ್ಲ ಅಧಿವೇಶನದಲ್ಲಿ ಸೇರಿದರು. ದೇವತೆಗಳ ಅಧಿಪತಿ ಇಂದ್ರ ಮಾತನ್ನಾರಂಭಿಸಿ ತನನ್ನು ಕಾಡುತ್ತಿದ್ದ ಸಮಸ್ಯೆಯನ್ನು ಸಭೆಗೆ ಗೊತ್ತುಪಡಿಸಿದ. ಆತ ಸಮಸ್ಯೆಯನ್ನು ಹೇಳುವ ಮೊದಲೇ ಅದು ಎಲ್ಲರಿಗೂ ತಿಳಿದಿರುವಂತೆ ಕಂಡಿತು. ದೇವೇಂದ್ರನಿಗೆ ಈ ಟ್ಯಾಬ್ಲಾಯ್ಡ್ ಗಳಿಗೆ ಯಾರದೋ ಮನಸ್ಸಲ್ಲಿರುವ ಹಗರಣಗಳನ್ನು ಜಗತ್ತಿಗೆ ಟಾಂ ಟಾಂ ಮಾಡುವ ವರವನ್ನು ಅದ್ಯಾವ ದೇವರು ಕೊಟ್ಟರೋ ಎಂದುಕೊಂಡು, ತನ್ನ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಸಭೆಯನ್ನು ಬಿನ್ನವಿಸಿಕೊಂಡ.

ತನ್ನ ಡ್ಯೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ಬಂದದ್ದಕ್ಕೆ ಸಿಡಿಮಿಡಿಗೊಂಡಿದ್ದ ಸೂರ್ಯದೇವ ಆಲೋಚಿಸಿ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕುವುದೇ ಸೂಕ್ತ ಎಂದು ಆಲೋಚಿಸಿ, ‘ಮಾನವರ ಸುಖಕ್ಕೂ ಹಾಗೂ ಸ್ವರ್ಗದ ನೆಮ್ಮದಿಯ ಹರಣಕ್ಕೂ ಕಾರಣವಾಗಿರುವ ಸಂತೋಷವನ್ನು ಮನುಷ್ಯರಿಗೆ ಸಿಕ್ಕದಂತೆ ಎಲ್ಲಿಯಾದರೂ ಅಡಗಿಸಿಟ್ಟುಬಿಡಬೇಕು.’ ಎಂಬ ಸಲಹೆಯನ್ನು ನೀಡಿದ.

ಸೂರ್ಯದೇವನ ಸಲಹೆಗೆ ಇಡೀ ಸಭೆಯೇ ತಲೆದೂಗಿತು. ಆದರೆ ಅಷ್ಟರಲ್ಲೇ ಕಿರಿಯನಾದ ಅಗ್ನಿದೇವ ಎದ್ದುನಿಂತು, ‘ಸೂರ್ಯದೇವ suggest ಮಾಡಿರುವ ಉಪಾಯ ಒಪ್ಪತಕ್ಕದ್ದೇ ಆದರೆ ಸಂತೋಷವನ್ನು ಎಲ್ಲಿ ಅಡಗಿಸಿಡುವುದು? ಈ ಮನುಷ್ಯರು ಭಾರಿ ಬುದ್ಧಿವಂತರು ಸಂತೋಷವನ್ನು ಎಲ್ಲಿಟ್ಟರೂ ಅವರು ಹುಡುಕಿಯೇ ಹುಡುಕುತ್ತಾರೆ.’ ಎಂದ.

ಕಿರಿಯನಾದ ಅಗ್ನಿದೇವನ ಮಾತುಗಳನ್ನು ಕೇಳಿ ಹಲವರಿಗೆ ಆಶ್ಚರ್ಯವಾಯಿತು. ಅವನ ಪ್ರಬುದ್ಧತೆಯನ್ನು ಕಂಡು ಹಿರಿಯನಾದ ಸೂರ್ಯ ದೇವನಿಗೂ ಮೆಚ್ಚುಗೆಯಾಯ್ತು. ಪರವಾಗಿಲ್ಲ ಹುಡುಗ ನನ್ನ ಗರಡಿಯಲ್ಲಿ ಚೆನ್ನಾಗಿ ಬೆಳೆದಿದ್ದಾನೆ ಎಂದುಕೊಂಡು, ‘ಅಗ್ನಿದೇವನ ಮಾತು ಚಿಂತನಯೋಗ್ಯ. ಚಿಕ್ಕವರು ಅಂತ ಈಗ ಇವರನ್ನು ಉಪೇಕ್ಷೆ ಮಾಡುವಂತಿಲ್ಲ ನೋಡಿ, ಹುಡುಗರು ಬಹಳ ಬೇಗ ಬುದ್ಧಿವಂತರಾಗಿಬಿಡ್ತಾರೆ… ಅಂದಹಾಗೆ ಈ ಮನುಷ್ಯರಿಂದ ಸಂತೋಷವನ್ನು ಎಲ್ಲಿ ಬಚ್ಚಿಡುವುದು?’ ಎಂದ ಸಭೆಯನ್ನುದ್ದೇಶಿಸಿ.

ಸೂರ್ಯದೇವನ ಮಾತನ್ನು ಕೇಳಿ ವಾಯುದೇವ ತಾನೇ ಮೊದಲಾಗಿ ಉಪಾಯ ಸೂಚಿಸಲು ಮುಂದಾದ, ‘ಸಂತೋಷವನ್ನು ಭೂಮಂಡಲದ ಅತಿ ಎತ್ತರದ ಪರ್ವತದ ಶಿಖರದಲ್ಲಿ ಹುದುಗಿಸಿಡೋಣ.ಆ ಎತ್ತರಕ್ಕೆ ಮನುಷ್ಯರು ಏರಲು ಸಾಧ್ಯವಿಲ್ಲ.’ ಎಂದ.

ಅಷ್ಟರಲ್ಲೇ, ‘ಮನುಷ್ಯರಿಗೆ ಇವತ್ತು ಆ ಪರ್ವತ ಏರಲು ಸಾಧ್ಯವಾಗದಿದ್ದರೂ ಒಂದಲ್ಲಾ ಒಂದು ದಿನ ಅವರದನ್ನು ಏರಿ ಸಂತೋಷವನ್ನು ಪಡೆದುಕೊಂಡೇ ಬಿಡುತ್ತಾರೆ.’ ಎಂಬ ಧ್ವನಿ ಸಭೆಯಿಂದ ಧಾವಿಸಿ ಬಂದಿತು.

ಮುಂಗಾರು ಮಳೆ ಸುರಿ-ಸುರಿಸಿ ಆಯಾಸಗೊಂಡಿದ್ದ ವರುಣ ದೇವ ತನ್ನ ದಣಿವಿನ ಮಧ್ಯದಲ್ಲೇ ಎದ್ದು ನಿಂತು, ‘ಮನುಷ್ಯನ ಕೈಯಿಂದ ಸಂತೋಷವನ್ನು ಬಚ್ಚಿಡಬೇಕೆಂಡರೆ ಸಾಗರದ ತಳವೇ ಸೂಕ್ತವಾದ ಸ್ಥಳ. ಮನುಷ್ಯ ಅಲ್ಲಿಗೆ ಹೋಗುವ ಕನಸನ್ನೂ ಕಾಣಲಾರ’ ಎಂದನು.

ಅಷ್ಟರಲ್ಲೇ ಸಭೆಯಲ್ಲಿನ ಮತ್ತೊಬ್ಬ ಹಿರಿಯ, ‘ಈ ಮನುಷ್ಯರನ್ನು ಅಷ್ಟು ಲಘುವಾಗಿ ಪರಿಗಣಿಸಲಾಗದು. ಅವರು ತಮ್ಮ ಬುದ್ಧಿಶಕ್ತಿಯಿಂದ ಒಂದಲ್ಲ ಒಂದು ದಿನ ಸಾಗರದ ಆಳವನ್ನು ಬಗೆದು ಸಂತೋಷವನ್ನು ಪಡೆದುಕೊಂಡುಬಿಡಬಲ್ಲರು.’ ಎಂದನು. ಸಭೆ ಅವರ ಮಾತಿಗೆ ತಲೆದೂಗಿತು.

ಎಲ್ಲರೂ ಆಳವಾಗಿ ಆಲೋಚಿಸುತ್ತಿರುವಾಗ ಚಂದ್ರದೇವ ಎದ್ದುನಿಂತು, ‘ಮನುಷ್ಯ ಗಿರಿಶಿಖರವನ್ನು ಏರಬಲ್ಲ, ಸಾಗರದ ಆಳವನ್ನು ಮುಟ್ಟಬಲ್ಲ ಆದರೆ ಆತ ನನ್ನ ಏರಿಯಾಗೆ ಕಾಲಿಡುವ ಸಾಧ್ಯತೆಯಿಲ್ಲವೇ ಇಲ್ಲ. ಹೆಣ್ಣಿನ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಕಾಲಕಳೆಯುತ್ತಾನೆಯೇ ಹೊರತು ಆತನೆಂದೂ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ಆದ್ದರಿಂದ ಸಂತೋಷವನ್ನು ನನ್ನ ಲೋಕದಲ್ಲಿ ಬಚ್ಚಿಟ್ಟುಬಿಟ್ಟರೆ ನಮ್ಮೆಲ್ಲರ ಚಿಂತೆ ಕಳೆದಂತೆಯೇ.’ ಎಂದ ಖಚಿತವಾದ ಧ್ವನಿಯಲ್ಲಿ.

ಸಭೆಯು ಮೌನವಾಯಿತು. ಬಹುಪಾಲು ದೇವತೆಗಳಿಗೆ ಚಂದ್ರನ ಮಾತು ಒಪ್ಪಿತವಾಯಿತು. ಆದರೆ ಅಷ್ಟರಲ್ಲಿ ನಾರದ ಮಹರ್ಷಿಗಳು ಮಾತನಾಡಿದರು ‘ಮನುಷ್ಯನ ವಿಚಾರಶಕ್ತಿ, ಆತ್ಮಸ್ಥೈರ್ಯಕ್ಕೆ ಚಂದ್ರಲೋಕವನ್ನು ಮೆಟ್ಟುವುದು ಅಸಾಧ್ಯವೇನಲ್ಲ. ಇಂತಹ ಟೆಂಪೊರರಿ ಉಪಾಯಗಳ ಬದಲಾಗಿ ಯಾವುದಾದರೂ ಪರ್ಮನೆಂಟ್ ಉಪಾಯ ಕಂಡುಕೊಳ್ಳಬೇಕು.ಅವರು ಅದೆಷ್ಟು ತಿಪ್ಪರಲಾಗ ಹಾಕಿದರೂ ಸಂತೋಷವನ್ನು ಕಂಡುಕೊಳ್ಳುವುದು ಎಲ್ಲಿ ಅನ್ನೋದು ಅವರಿಗೆ ತಿಳಿಯಬಾರದು. ಅಂತಹ ಜಾಗವನ್ನು ಹುಡುಕಬೇಕು…’

ನಾರದರ ಮಾತಿನಿಂದ ಸಭೆಯಲ್ಲಿನ ಮೌನ ಮತ್ತಷ್ಟು ಗಾಢವಾಯಿತು. ಎಲ್ಲರೂ ದೀರ್ಘವಾಗಿ ಚಿಂತಿಸುತ್ತಾ ಕುಳಿತಿದ್ದರು. ಸೂಜಿ ಬಿದ್ದರೂ ಬಾಂಬ್ ಬಿದ್ದಷ್ಟು ಸದ್ದಾಗಬಹುದಾದಷ್ಟು ಮೌನ. ಇದುವರೆಗೂ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದ ಅಶ್ವಿನಿ ದೇವತೆಗಳು ಎದ್ದುನಿಂತರು. ದೇವತೆಗಳಿಗೆ ಈ ಪಿಳ್ಳೆಗಳೇನು ಹೇಳಿಯಾರು ಎಂಬ ಲೇವಡಿ ಮಾಡುವ ತವಕ. ಆದರೆ ತಾವೇ ಏನೂ ಹೊಳೆಯದ ಅಸಹಾಯಕತೆಯಲ್ಲಿರುವಾಗ ಅವರನ್ನು ಛೇಡಿಸುವುದಾದರೂ ಹೇಗೆ ಎಂದುಕೊಂಡು ಸುಮ್ಮನಾದರು. ಅವರು ಏನು ಹೇಳಬಹುದು ಎಂಬ ಕಾತರದಿಂದ ಸಭೆ ತೊಯ್ದು ತೊಟ್ಟಿಕ್ಕುತ್ತಿತ್ತು.

‘ಮನುಷ್ಯನ ಸಂಕಲ್ಪ ಶಕ್ತಿ ಹಾಗೂ ಆತನ ಸಾಹಸದ ಮುಂದೆ ನಾವುಡ್ಡೊವ ಸವಾಲುಗಳ್ಯಾವುವೂ ನಿಲ್ಲುವುದಿಲ್ಲ. ಬ್ರಹ್ಮಾಂಡದ ಯಾವ ಮೂಲೆಯಲ್ಲಿ ಅಡಗಿಸಿಟ್ಟರೂ ಆತ ಒಂದಲ್ಲ ಒಂದು ದಿನ ಸಂತೋಷವನ್ನು ಪಡೆದೇ ತೀರುತ್ತಾನೆ. ಹಾಗಾಗಿ ಸಂತೋಷವನ್ನು ಹೊರಗೆಲ್ಲೋ ಬಚ್ಚಿಡುವ ಉಪಾಯ ಫಲಿಸುವುದಿಲ್ಲ. ಮನುಷ್ಯನಿಂದ ಸಂತೋಷವನ್ನು ಕಿತ್ತುಕೊಂಡ ನಂತರ ಅದನ್ನು ಎಂತಹ ಜಾಗದಲ್ಲಿಡಬೇಕೆಂದರೆ ಅದನ್ನು ಹುಡುಕುತ್ತಾ ಆತ ಇಡೀ ಬ್ರಹ್ಮಾಂಡವನ್ನೇ ಸಂಶೋಧಿಸಿದರೂ ಅದು ಆತನಿಗೆ ದೊರಕಬಾರದು…’ ಎಂದ ಅಶ್ವಿನಿದೇವತೆಗಳಲ್ಲಿ ಒಬ್ಬನು.

ಆ ಜಾಗ ಯಾವುದಿರಬಹುದೆಂಬ ಕುತೂಹಲದಿಂದ ಎಲ್ಲರೂ ತದೇಕಚಿತ್ತದಿಂದ ಅವರ ಮುಂದಿನ ಮಾತಿಗಾಗಿ ಎದುರುನೋಡುತ್ತಿದ್ದರು. ಮಾತು ಮುಂದುವರಿಸಿದ ಅಶ್ವಿನಿ ದೇವತೆ, ‘ಆದ್ದರಿಂದ ಸಂತೋಷವನ್ನು ಹೊರಗೆಲ್ಲೋ ಅಡಗಿಸಿಡುವ ಬದಲು ಅದನ್ನು ಮನುಷ್ಯನ ಮನಸ್ಸಿನಲ್ಲೇ ಬಚ್ಚಿಟ್ಟುಬಿಡೋಣ. ಆತ ಅದರ ಹುಡುಕಾಟದಲ್ಲಿ ಬ್ರಹ್ಮಾಂಡದ ಶೋಧದಲ್ಲಿ ತೊಡಗುತ್ತಾನೆ ವಿನಃ ಅದು ತನ್ನೊಳಗೇ ಇದೆ ಎಂಬುದಾಗಿ ಯೋಚಿಸುವುದೂ ಇಲ್ಲ. ಆತ ಎಂದೆಂದೂ ಹೊರಗಿನ ಜಗತ್ತಿನಲ್ಲಿ ಸಂತೋಷವನ್ನು ಹುಡುಕಾಡುತ್ತಲೇ ಇರುತ್ತಾನೆ. ತನ್ನೊಳಗೆ ತಿರುಗಿಕೊಂಡು ಆತ ಅದನ್ನು ಕಂಡುಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ.’ ಎಂದು ಮಾತು ಮುಗಿಸಿದ.

ಆತನ ಉಪಾಯವನ್ನು ಕೇಳಿ ಸಭೆ ಹರ್ಷೋದ್ಗಾರದಿಂದ ತುಂಬಿತು. ಸ್ವರ್ಗದ ಅಧಿಪತಿ ಇಂದ್ರನಿಗಂತೂ ತಡೆಯಲಾಗದಷ್ಟು ಸಂತಸ ಉಕ್ಕಿಬಂತು. ಕೂಡಲೆ ಆತ ಭೂಲೋಕದ ಸಮಸ್ತ ಸಂತೋಷವನ್ನು ಮನುಷ್ಯನ ಮನಸ್ಸಿನಲ್ಲಿ ಹುದುಗಿಸಿಟ್ಟ. ಭೂಲೋಕದ ಮೇಲೆ ಅತೃಪ್ತಿ, ದುಃಖ, ಅಸೂಯೆ, ಅಸೌಖ್ಯ, ಅನ್ಯಾಯಗಳು ಪ್ರಾರಂಭವಾದವು. ಮನುಷ್ಯರು ಸಂತೋಷವನ್ನರಸಿಕೊಂಡು ಅಲೆಯಲಾರಂಭಿಸಿದರು. ಹೊಸ ಹೊಸ ಪ್ರದೇಶಗಳಿಗೆ ಹೋಗಲಾರಂಭಿಸಿದರು. ಹೊಸ ವಸ್ತುಗಳನ್ನು ಕಂಡುಹಿಡಿಯಲಾರಂಭಿಸಿದರು. ಹೊಸ ಸಿದ್ಧಾಂತಗಳನ್ನು ರೂಪಿಸಲಾರಂಭಿಸಿದರು. ಕೊನೆಗೆ ಈ ಭೂಲೋಕದಲ್ಲಿ ಸಂತೋಷವಿಲ್ಲ, ಸತ್ತ ಮೇಲೆ ಸ್ವರ್ಗದಲ್ಲಿ ಅದನ್ನು ಪಡೆಯಬಹುದು ಎಂದು ಕೈಚೆಲ್ಲಿ ಕುಳಿತರು. ಯಾರೊಬ್ಬರೂ ತಮ್ಮೊಳಗೇ ಅಡಗಿರುವ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಸ್ವರ್ಗಕ್ಕೆ ಮತ್ತೆ ಡಿಮಾಂಡ್ ಹೆಚ್ಚಿತು. ಇಂದ್ರ ಸದ್ಯದ ಮಟ್ಟಿಗೆ ನಿರಾಳನಾದ!


Technorati : , ,

ಬ್ಲಾಗ್ ಬೀಟ್ 4

25 ಫೆಬ್ರ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಈ ವಾರದ ಬೀಟಿನಲ್ಲಿ ಸಿಕ್ಕಿ ಬಿದ್ದ ಪುಣ್ಯಾತ್ಮರು ಯಾರ್ಯಾರು ನೋಡೋಣ ಬನ್ನಿ…

ಪಂಚ್ ಗೆರೆ

ಆಪರೇಷನ್ ಇಲ್ಲದೆ ಮೂಲವ್ಯಾಧಿ ಗುಣಪಡಿಸ್ತಾರಂತೆ ನೋಡಿ ಡಾಕ್ಟರ್ ಇಂಜಿನಿಯರ್ ಗಣೇಶ್!

ಅಪಾರ

ವಿಜಯ ಕರ್ನಾಟಕದ ಪತ್ರಕರ್ತರಾದ ರಘು ಅಪಾರವಾದ ಮಸ್ಯಸಾರ ಪ್ರಿಯ! ಅವರ ‘ಮಧು’ಬನದ ಕವಿತೆಗಳ ಈ ವಾರದ ಝಲಕ್ ಇಲ್ಲಿವೆ.
ಕ್ರಿಕೆಟ್ಟಿಗರ ಹರಾಜೇ ಅಥವಾ ಕ್ರಿಕೆಟ್ಟಿನ ಹರಾಜೆ, ಕ್ರಿಕೆಟ್ಟಿಗರ ಮಾನ ಹರಾಜೇ ‘ನೋ ಕಂಟ್ರಿ ಫಾರ್ ಓಲ್ಡ್ ಮೆನ್ ಎನ್ನೋಣವೆ?’ ಎಂದು ಕೇಳುತ್ತಿದ್ದಾರೆ ಕಮೆಂಟೇಶ್ವರ!

ಬೊಗಳೆ ಅಲ್ಲ ಇದು ರಗಳೆ

ಜಗತ್ತಿನಲ್ಲಿ ಯಾವುದಕ್ಕೆ ಬರ ಬಂದರೂ ಬೊಗಳೆಗೆ ಬರವಿಲ್ಲ, ‘ಬರೆ’ಯಿಲ್ಲ. Marriages are made in heaven, but Marriage reservations are made in India! ಎಂಬ ಸಂಶೋಧನೆಯನ್ನು ಮಾಡಿರುವ ಬೊಗಳೂರು ಬ್ಯೂರೋದ ಏಕ ಸದಸ್ಯ ಸಮಿತಿಯ ಮುಖಂಡರು“ಮದುವೆಗೂ ಮೀಸಲಾತಿ: ಏಬೀವೀಫೋ ಹಕ್ಕೊತ್ತಾಯ”ದ ವರದಿ ಮಾಡಿ ಅಖಿಲ ಭಾರತ ಮೀಸಲಾತಿ ವಿರೋಧಿ ಮೀಸೆವೀರರ ಸಂಘದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2323.png

( ಕಳೆದ ವಾರದ ಬ್ಲಾಗ್ ಬೀಟ್)


Technorati : ,

ನಗಾರಿ ರೆಕಮಂಡೇಶನ್ 3

25 ಫೆಬ್ರ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

ಇಂಗ್ಲೀಷಿನಲ್ಲಿ ಎಲ್ಲಕ್ಕೂ ಸೈಟುಗಳಿವೆ. ಕನ್ನಡದಲ್ಲಿ ಆ ಹುಲುಸಾದ ಫಸಲು ಇನ್ನೂ ಬೆಳೆದಿಲ್ಲ. ಆದರೂ ಅಲ್ಲಿ ಇಲ್ಲಿ ಇರುವಂತಹ ಕೆಲವು ರಸಭರಿತ ವೃಕ್ಷಗಳೆಡೆಗೆ ಆಗಾಗ ‘ಕಲ್ಲು ತೂರಿ’ hit ಮಾಡದಿದ್ದರೆ ಅವುಗಳ ಹಣ್ಣುಗಳು ಕೊಳೆತು ಯಾರಿಗೂ ಉಪಯೋಗಕ್ಕೆ ಬಾರದೆ ಹೋಗಿಬಿಡುತ್ತವೆಯಲ್ಲವೇ?

Untitled picture.png

ಕನ್ನಡದಲ್ಲಿ ಜೋಕುಗಳ ಖಜಾನೆ ತೆರೆಯುವ ಪ್ರಯತ್ನದ ಫಲವಾಗಿ ಮೂಡಿದ ಸೈಟು ಇಲ್ಲಿದೆ. ‘ಕನ್ನಡ ಹನಿಗಳು’ ಎನ್ನುವ ಹೆಸರಿನ ಈ ತಾಣದಲ್ಲಿ ಸಹಸ್ರಾರು ವೆರೈಟಿಯ ನಗೆ ಬುಗ್ಗೆಗಳಿವೆ. ಅವುಗಳಲ್ಲಿ ನೆನೆಯುವ ಸಮಯ ಹಾಗೂ ಆಸಕ್ತಿ ನಿಮಗಿರಬೇಕಷ್ಟೇ!

(ಕಳೆದ ವಾರದ ನಗಾರಿ ರೆಕಮಂಡೇಶನ್)


Technorati : , ,

ವಾರದ ವಿವೇಕ 4

25 ಫೆಬ್ರ

……………………………………………………………………………….

ಮದುವೆಯಿಂದ ಎರಡು ವಿಧದಲ್ಲಿ ಉಪಯೋಗವಾಗುತ್ತದೆ.

ನಿಮ್ಮ ಹೆಂಡತಿ ಒಳ್ಳೆಯವಳಾಗಿದ್ದರೆ

ನೀವು ಸಂತೋಷವಾಗಿರುತ್ತೀರಿ.

ಇಲ್ಲವಾದರೆ ನೀವು ತತ್ವಜ್ಞಾನಿಯಾಗುತ್ತೀರಿ.

-ಸಾಕ್ರಟಿಸ್

……………………………………………………………………………….

(ಕಳೆದ ವಾರದ ‘ವಾರದ ವಿವೇಕ’)


Technorati : , , ,

ಸ್ಪೀಡ್ ಗವರ್ನರ್ ಕಡ್ಡಾಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯ

14 ಫೆಬ್ರ

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೊ)

ಭಾರಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ಹೈಕೋರ್ಟಿನ ತೀರ್ಪಿನ ಬಗೆಗೆ ಅಪಾರವಾದ ಬೆಂಬಲ ವ್ಯಕ್ತವಾಗಿದೆ. ಹೀಗೆ ಬೇಷರತ್ತಾದ ಬೆಂಬಲವನ್ನು ನೀಡಿರುವವರು ಲಾರಿ ಮಾಲೀಕರೂ ಅಲ್ಲ, ಟ್ಯಾಕ್ಸಿ ಸಂಘದವರೂ ಅಲ್ಲ, ಅಖಿಲ ವಿಶ್ವ ರಕ್ಷಣಾತ್ಮಕ ದಾಂಡಿಗರ ಸಂಘದ ಅಧ್ಯಕ್ಷರು!

shoaibunplugged.jpgವೇಗವೆಂಬುದು ಅಂತ್ಯಂತ ಅಪಾಯಕಾರಿಯಾದ ಸಂಗತಿ. Speed thrills, but kills ಎಂಬುದಾಗಿ ಜಗತ್ತಿನ ಅತ್ಯಂತ ವೇಗದ ಫೆರಾರಿ ಚಾಲಕ ಮೈಕೆಲ್ ಶೂಮಾಕರ್ ಹೇಳಿರುವುದು ಇಲ್ಲಿ ಪ್ರಸ್ತುತ. brett%20lee%2001.jpgವೇಗದಿಂದಾಗಿ ಅನಾಹುತ ಸಂಭವಿಸುತ್ತವೆ, ವೇಗದಿಂದಾಗಿ ಹಾನಿಯಾಗುತ್ತದೆ, ವೇಗ ಸೈತಾನನಿದ್ದಂತೆ ಎಂಉ ಹೇಳಿದರು ಅಖಿಲ ವಿಶ್ವ ರಕ್ಷಣಾತ್ಮಕ ದಾಂಡಿಗರ ಸಂಘದ ಅಧ್ಯಕ್ಷರಾದ ಬ್ಯಾಟ್ಸ್ ಮನ್ ಮಿಸ್ಟರ್ ನಾನಾಮಿಕ‘.

ಕ್ರಿಕೆಟ್ ಚೆಂಡನ್ನು ನೂರಾ ಐವತ್ತು, ನೂರಾ ನಲವತ್ತು ಕಿ.ಮೀ ಪ್ರತಿಘಂಟೆ ವೇಗದಲ್ಲಿ ಎಸೆಯುವ ಬೌಲರ್‌ಗಳಿಂದ ನಮ್ಮಂತಹ ಬ್ಯಾಟ್ಸ್ ಮನ್‌ಗಳ ಪಕ್ಕೆಲುಬು, ತೊಡೆ ಮೂಳೆ, ತೊಡೆ ಸಂದು (ಗಾರ್ಡ್ ಆ ಸಮಯದಲ್ಲಿ ಗಾರ್ಡ್ ಲೆಸ್ ಆಗಿಬಿಡುತ್ತದೆ), ತಲೆ ಬುರುಡೆ ಅವಸಾನದ ಅಪಾಯ ಎದುರಿಸುತ್ತವೆ. ಹಾಗಾಗಿ ಇಂತಹ ವೇಗಿಗಳನ್ನು ಅಮಾನವೀಯರು ಎಂದು ಪರಿಗಣಿಸಿ ಅವರಿಗೂ ಕಡ್ಡಾಯವಾದ ವೇಗ ನಿಯಂತ್ರಕವನ್ನು ಅಳವಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾವಳಪಿಂಡಿಯ ಎಕ್ಸ್ ಪ್ರೆಸ್ ಶೋಭಾ ಹಕ್ತರ್, ಕಾಂಗರೂ ಪಾಳಯದ ಕ್ಷಿಪಣಿ ಬೆಟ್ಟಿ ಇಲಿ, ಕಪ್ಪು ಬೆಕ್ಕುಗಳ ಅಡ್ಡಾದ ಇನ್‌ಸೇನ್ ಬಾಂಡ್ ಇವರೆಲ್ಲರೂ ವೇಗವೆಂಬ ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿ ಅಮಾಯಕರ ಮಾನ ಹಾಗೂ ಪ್ರಾಣಕ್ಕೆ ಧಕ್ಕೆ ಉಂಟು ಮಾಡಿತ್ತಿರುವುದರಿಂದ ಅವರುಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಿ ಶೀಘ್ರವಾಗಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ನಾವೆಲ್ಲಾ ಬ್ಯಾಟ್ಸ್ ಮನ್‌ಗಳು ಸಾಲಾಗಿ ಪೆವಿಲಿಯನ್ ಕಡೆಗೆ ಪೆರೇಡ್ ಹೊರಡುವೆವು ಎಂದು ಬೆದರಿಕೆ ಒಡ್ಡಿರುವುದು ಒದರಿಯಾಗಿದೆ.


Technorati : , ,

ಸರಕಾರದ್ದು ಮಲತಾಯಿ ಧೋರಣೆ: ರಿಮೇಕರು

14 ಫೆಬ್ರ

(ಸಿನೆಮಾ ರಿಮೇಕರು ಜೋಕರು ಬ್ಯೂರೊ)

ಕೇವಲ ಸ್ವಮೇಕ್ ಸಿನೆಮಾಗಳಿಗೆ ಸಬ್ಸಿಡಿ ಕೊಡುವುದು ಹಾಗೂ ಸ್ವಮೇಕ್ ಸಿನೆಮಾಗಳನ್ನು ಮಾತ್ರ ಅಪ್ಪಿ ಮುದ್ದಾಡುವ ಸರಕಾರದ ಧೋರಣೆಯನ್ನು ರಿಮೇಕ್ ನಿರ್ಮಾಪಕರು ಖಂಡ ತುಂಡವಾಗಿ ಖಂಡಿಸಿದ್ದಾರೆ. ಸರಕಾರ ಎಂಬುದು ತಾಯಿಯ ಹಾಗಿರಬೇಕು. ಅದಕ್ಕೆ ತನ್ನ ಎಲ್ಲಾ ಮಕ್ಕಳು ಒಂದೇ ಸಮನಾಗಿರಬೇಕು. ಆದರೆ ಸರಕಾರ ಈಗ ಮಲತಾಯಿ ಧೋರಣೆಯನ್ನು ತೋರ್ಪಡಿಸುತ್ತಿರುವುದು ವಿಷಾದದ ಸಂಗತಿ ಎಂದಿದ್ದರೆ ಹೆಸರು ಹೇಳಲಿಚ್ಚಿಸಿದ (ಹೆಸರಿಲ್ಲದ) ನಿರ್ಮಾಪಕರು.

ತಾಯಿ ತನ್ನ ಬುದ್ಧಿವಂತ ಮಗನಿಗೂ, ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕುಬಿದ್ದ ಮಗನಿಗೂ ಒಂದೇ ಸಮನಾದ ಪ್ರೀತಿಯನ್ನು ಕೊಡುವುದಿಲ್ಲವೇ ಹಾಗೆ ಸರಕಾರ ನಡೆದುಕೊಳ್ಳಬೇಕು ಎಂಬ ಅವರ ವಾದಕ್ಕೆ ರಾಜ್ಯದ ಅನೇಕ ಬುದ್ಧಿನಿರ್ಜೀವಿಗಳ ಬೆಂಬಲ ವ್ಯಕ್ತವಾಗಿದೆ.

ನಗಾರಿಯ ಒದರಿಗಾರನಿಗೆ ಸಾಮಾಹಿಕವಾದ ಎಕ್ಸ್ ಕ್ಲೋಸಿವ್ ವರದಿ ನೀಡಿದ ರಿಮೇಕ್ ನಿರ್ಮಾಪೆಕರ ಸಂಘದ ಅಧಕ್ಷರು ಮಾತನಾಡುತ್ತ, ‘ನ್ಯಾಯಯುತವಾಗಿ ನೋಡಿದರೆ ಸರಕಾರದಿಂದ ನಮಗೇ ಹೆಚ್ಚಿನ ಸವಲತ್ತು ಹಾಗೂ ಪ್ರೋತ್ಸಾಹ ಬೇಕು.’ ಎಂದರು.

ಈ ಉತ್ತರದಿಂದ ಪುಳಕಿತನಾದ ನಮ್ಮ ರಿಪೋರ್ಟರ್ ಅದ್ಹೇಗೆ ಸಾರ್ ಅಂದ. ‘ನೋಡ್ರಿ, ಈ ಸ್ವಮೇಕ್ ಸಿನೆಮಾ ಮಾಡೋರು ತಮ್ಮದೇ ಚಿತ್ರಕತೆ, ತಮ್ಮದೇ ಕಥೆ, ತಮ್ಮದೇ ಸಂಭಾಷಣೆ ಎಲ್ಲಾದರಲ್ಲೂ ತಾವೇ ಕಾಣಬೇಕು ಎನ್ನುವ ಅವರ ಮನೋಭಾವ ಸ್ವಾರ್ಥದ್ದು. ಆದರೆ ನಾವು ನೋಡಿ ವಿಶ್ವ ಮಾನವರಾಗುವ ಪ್ರಯತ್ನ ಮಾಡುವವರು. ನಮಗೆ ನಮ್ಮದೇ ಕತೆಯಾಗಬೇಕು ಎನ್ನುವ ಸ್ವಾರ್ಥವಿಲ್ಲ. ಯಾರ ಕತೆಯಾದರೂ ಆದೀತು. ಯಾವ ಭಾಷೆಯ ಚಿತ್ರಕತೆಯಾದರೂ ಆದೀತು. ನಾವು ಯಾವುದಕ್ಕೂ ನಮ್ಮ ಸ್ವಾರ್ಥವನ್ನು ಸೇರಿಸುವುದಿಲ್ಲ.’ ಎಂದರು.

ಅಷ್ಟರಲ್ಲಿ ಅವರ ಸಹಾಯಕ ನಾಲ್ಕು ಹಿಂದಿ, ತಮಿಳು, ತೆಲುಗಿನ ತಲಾ ಎರಡು ಸಿನೆಮಾಗಳ ಡಿವಿಡಿ ಕೊಟ್ಟು ಸಾರ್ ಎರಡು ಫಿಲಮ್ಮು ಮಾಡಬಹುದು ಸಾರ್ ಅಂತ ಕಿವಿಯಲ್ಲಿ ಉಸುರಿ ಮಾಯವಾದ. ನಮ್ಮ ನಿರ್ ಮಾಪ ಕರು ಮಾತು ಮುಂದುವರೆಸುತ್ತಾ, ‘ಇನ್ನೊಂದು ಸಂಗತಿ ಗೊತ್ತೇನ್ರಿ ನಮ್ಮಷ್ಟು ವಿನಯವಂತರು ಹಾಗೂ ದೈವಭಕ್ತರು ಬೇರಾರೂ ಇಲ್ಲ. ಹೇಗೆ ಅಂತೀರಾ? ಕೇಳಿ ಈ ಸ್ವಮೇಕು ಜನರು ಮಾಡೋದು ಏನ್ರಿ? ಕತೆಯನ್ನು ನಾವೇ ಬರೆದ್ವಿ, ಚಿತ್ರಕತೆಯನ್ನು ನಾವೇ ಹೊಸೆದ್ವಿ, ಇದು ನಮ್ಮ ಸ್ವಂತ ಚಿತ್ರ ಅಂತ ಎಷ್ಟು ಅಹಂಕಾರದಿಂದ ಮಾತನಾಡ್ತಾರೆ ನೋಡಿ. ನಾವು ಮಾತ್ರ ಎಲ್ಲವೂ ಭಗವಂತನ ಆಟ ಎಂಬುದನ್ನು ನಂಬಿಕೊಂಡವರು. ಆತನೇ ಸೂತ್ರಧಾರಿ ನಾವೆಲ್ಲಾ ಕೇವಲ ಪಾತ್ರಧಾರಿಗಳು ಎಂಬುದನ್ನು ಅಪ್ರಾಮಾಣಿಕವಾಗಿ ಒಪ್ಪಿಕೊಂಡವರು ನಾವು. ಹೀಗಾಗಿ ನಾವು ಕತೆಯನ್ನೋ, ಚಿತ್ರಕತೆಯನ್ನೋ ಯಾರೋ ಒಬ್ಬ ಹುಲುಮಾನವ ಬರೆದದ್ದು ಎಂಬುದನ್ನು ನಂಬುವುದೇ ಇಲ್ಲ. ಎಲ್ಲವನ್ನೂ ಆ ಭಗವಂತನದೇ ಕೆಲಸ ಎಂದು ನಂಬಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಆ ಭಗವಂತನ ಸೃಷ್ಟಿಯಾದ ಕತೆಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ನಾವು ನಮ್ಮ ಹೆಸರಿನಲ್ಲಿ ಬಳಸಿಕೊಳ್ತೇವೆ.’

ಇಷ್ಟು ಮಾತನಾಡುತ್ತಿರುವಷ್ಟರಲ್ಲಿ ನೀರ್ಮಾಪಕರ ಆಪ್ತ ಸಂಭಾಷಣಾಕಾರ ತಲೆ ಕೆರೆದುಕೊಳ್ತಾ ಅಲ್ಲಿಗೆ ಬಂದ. ‘ಸಾರ್, ಇಲ್ನೋಡಿ ಸಾರ್, ಈ ಬುಕ್ಕಿನೊಳಗಿರೋ ಈ ಹತ್ತು ಜೋಕುಗಳನ್ನ ಸೇರಿಸಿ ಬಿಟ್ರೆ ಒಂದು ಸ್ವಮೇಕ್ ಕಾಮಿಡಿ ಫಿಲಮ್ಮು ಸುತ್ತಿಬಿಡಬಹುದು ಸಾರ್‘.ಅಂತ ಹೇಳಿ ತೆರೆಮರೆಗೆ ಸರಿದ. ಮಾತು ಮುಂದುವರೆಸಿದ ನಿರ್ಮಾಪೆಕರು‘ ‘ ನಮ್ಮ ಕಷ್ಟಗಳನ್ನ ಒಂದು ಸಲ ಸರಕಾರ ತನ್ನೆರಡು ಕಣ್ಣು ತೆರೆದು ನೋಡಿಬಿಟ್ರೆ ಸಾಕು ಕಣ್ರೀ, ಸಿನೆಮಾಗೆ ಸಬ್ಸಿಡಿ ಇರಲಿ, ಖರ್ಚಾದ ಒಂದು ಪೈಸೆಯನ್ನೂ ಬಿಡದ ಹಾಗೆ ಹಣ ಕೊಟ್ಟುಬಿಡುತ್ತದೆ. ಎಲ್ಲೋ ಕೂತು ಒಬ್ಬ ಸ್ವಂತ ಕತೆಯನ್ನು ಬರೆದು ಬಿಡಬಹುದು. ಆದರೆ ರಿಮೇಕು ಮಾಡೋಕೆ, ರಿಮಿಕ್ಸೋ ಮಾಡೋಕೆ ನಾವು ಎಷ್ಟೆಲ್ಲಾ ಸರ್ಕಸ್ಸು ಮಾಡಬೇಕು ಗೊತ್ತಾ? ಹತ್ತಾರು ಪುಸ್ತಕ ಓದಿಸಬೇಕು, ನಾಲ್ಕಾರು ಸಿನೆಮಾ ತೋರಿಸಿ ಹಂಸಕ್ಷೀರ ನ್ಯಾಯದ ಹಾಗೆ ಹೀರಿಕೊಂಡು ಒಂದು ಕತೆ ಸಿದ್ಧ ಮಾಡಿಕೊಳ್ಳಬೇಕು. ಇನ್ನು ಕೆಲವು ಸಲ ಅಷ್ಟೆಲ್ಲಾ ರೀಸರ್ಚು ಮಾಡೋಕೆ ಸಮಯ ಸಿಗದಿದ್ದಾಗ ಯಾವ್ದಾದ್ರೂ ಹಳೆಯ ಹಿಟ್ ಫಿಲಮ್ಮನ್ನ ಅದೇ ಹೆಸರಿನಾಗೆ ಮತ್ತೆ ಸುತ್ತಿಬಿಟ್ಟರಾಯ್ತು, ‘ಶೋಲೆ‘, ‘ಡಾನ್ ಮಾಡಿದ್ರಲ್ಲ ಹಂಗೆ. ಇನ್ನೂ ಕೆಲವು ಸಲ ಯಾವ ಕತೆಯೂ ಸಿಕ್ಕದಿದ್ರೆ ಏನು ಮಾಡೋದು? ಅದಕ್ಕೂ ನಾವು ಉಪಾಯ ಕಂಡು ಹಿಡಿದಿದ್ದೀವಿ ಕಣ್ರೀ. ತೆಲುಗಿನದೊ, ತಮಿಳಿನದೋ ಒಂದು ಹಿಟ್ ಸಿನೆಮಾದ ಕತೆಯನ್ನು ತಲೆ ಮಾಸಿದವನ ಹೆಸರಲ್ಲಿ ಕಾದಂಬರಿಯಾಗಿ ಬರೆಸಿ ಬಿಡೋದು ಆಮೇಲೆ ಆ ಕಾದಂಬರಿ ಆಧರಿಸಿ ಸಿನೆಮಾ ಮಾಡೋದು. ಈ ನಮ್ಮ ಐಡಿಯಾಗೆ ಇಗ್ನೋಬಲ್ ಕೊಡಬೇಕೆಂದು ಸಾಕ್ಷಾತ್ ಲಲ್ಲೂ ಪರಸಾದ್ ಮೂದೇವ್ ಅವರೇ ಶಿಫಾರಸ್ಸು ಮಾಡಿದ್ದಾರೆ ಗೊತ್ತೇನ್ರಿ?’

ಅಷ್ಟರಲ್ಲಿ ನಮ್ಮ ಸುದ್ದಿ ಚೋರನಿಗೆ ಕಣ್ಣು ಕತ್ತಲೆ ಬಂದಂ;ತಾಗುತ್ತಿತ್ತು, ನಿರ್ಮಾಪೆಕರು ಮಾತು ಮುಂದುವರೆಸಿದರು. ‘ನಮ್ಮ ಬಳಿ ಇಂತಹ ಇನ್ನಷ್ಟು ಮತ್ತಷ್ಟು ಸ್ಫೋಟಕ ಐಡಿಯಾಗಳಿವೆ ಕಣ್ರೀ ನೀವೆಲ್ಲಾ ಮಾಧ್ಯಮದವರು ನಾವು ಪರರಾಜ್ಯದಿಂದ ಕತೆ ಕದೀತೀವಿ ಅಂತ ರೊಳ್ಳೆ ತೆಗೆದಿದ್ದೀರಲ್ಲ ಅದನ್ನು ತಪ್ಪಿಸೋದಕ್ಕೆ ಒಂದು ಕ್ರಾಂತಿಕಾರಕ ಸುಧಾರಣೆ ಅಳವಡಿಸಿಕೊಂಡಿದ್ದೀವಿ. ಏನು ಅಂದ್ರಾ, ಕೇಳಿ ಈ ಕನ್ನಡ ಉಟ್ಟುಓರಾಟಗಾರರು ಕನ್ನಡಿಗರಿಗೇ ಮೊದಲ ಆದ್ಯತೆ ಕೊಡಿ ಅಂತ ಹೇಳಿರೋದನ್ನ ಗಂಭೀರವಾಗಿ ಪರಿಗಣಿಸಿ ನಾವು ಕನ್ನಡಿಗರ ಕತೆಗಳನ್ನೇ ಕದಿಯುವ ಯೋಜನೆ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ಪ್ರಕಾಶನಕ್ಕೆ ಬರುವ ಎಲ್ಲಾ ಪುಸ್ತಕಗಳನ್ನು ಓದಲು ಜನರನ್ನು ನೇಮಿಸಿ ಚಿತ್ರವಾಗುವ ಯೋಗ್ಯತೆ ಉಳ್ಳ ಕತೆಯನ್ನು ಅಪಹರಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇಷ್ಟೆಲ್ಲಾ ಸಾಹಸಗಳನ್ನು ಮಾಡುತ್ತಿರುವ ನಮಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಅದು ಬಿಟ್ಟು ಈ ಸರಕಾರದವರು ಆ ಸ್ವಾರ್ಥಿ ಸ್ವಮೇಕರುಗಳಿಗೆ ಮಣೆ ಹಾಕುತ್ತಿರುವುದು ನಿಜಕ್ಕೂ ಮಲತಾಯಿ ಧೋರಣೆ ಎತ್ತಿ ತೋರಿಸುತ್ತದೆ.’

ನಿರ್ಮಾಪೆಕರ‘ some-ದರ್ಶನ ಮುಗಿಸಿಕೊಂಡು ಹೊರಬಂದು ತನ್ನ ಚೀಲದೊಳಕ್ಕೆ ಕೈ ಹಾಕಿದ ನಮ್ಮ ವಾಹ್ರದ್ದಿಗಾರರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದಿನ ದಿನ ತಾನೆ ಬರೆದು ಮುಗಿಸಿಟ್ಟುಕೊಂಡಿದ್ದ ತಮ್ಮ ಕತೆ ಕಾಣಿಯಾಗಿರುವುದು ಕಂಡು ಅವರು ದಿಗ್ಭ್ರಾಂತರಾಗಿ ಹಾಸಿಗೆ ಹಿಡಿದಿದ್ದಾರೆ ಎಂದು ತಿಳಿಸಲು ವಿಷಾದಪೂರ್ವಕವಾಗಿ ಸಂತೋಷಿಸುತ್ತೇವೆ.


Technorati : , , , ,

ಹಾಸ್ಯಮಯ ವ್ಯಕ್ತಿತ್ವ

14 ಫೆಬ್ರ

ಹಾಸ್ಯಮಯ ವ್ಯಕ್ತಿತ್ವದ ಬಗ್ಗೆ ಸ್ವಲ್ಪ ಚರ್ಚೆ ನಡೆಸೋಣ.

ನಮ್ಮ ವ್ಯಕ್ತಿತ್ವದಲ್ಲಿ ಹಾಸ್ಯಪ್ರಿಯತೆಯನ್ನು, ಹಾಸ್ಯ ಮನೋಭಾವವನ್ನು ಬೆಳೆಸಿಕೊಂಡರೆ ವ್ಯಕ್ತಿತ್ವದ ಘನತೆಗೆ ಧಕ್ಕೆಯಾಗುತ್ತದೆಯೇ? ಘನವಾದ ವ್ಯಕ್ತಿತ್ವದವರು, ತುಂಬಾ ಬುದ್ದಿವಂತರು, ವಿಚಾರವಂತರು, ಚಿಂತಕರು, ಆಧ್ಯಾತ್ಮಜೀವಿಗಳು ಗಂಭೀರವಾದ ಚರ್ಯೆಯನ್ನು ರೂಢಿಸಿಕೊಂಡಿರಬೇಕು ಎನ್ನುವುದು ಸಮಾಜದ ನಿರೀಕ್ಷೆ. ಕ್ಷಣಕ್ಕೆ ಕ್ಷಣಕ್ಕೆ ತಮ್ಮ ಮೇಲೇ ಇಲ್ಲವೇ ಇತರರ ಮೇಲೆ ಜೋಕು ಮಾಡಿಕೊಂಡು ನಗುತ್ತಾ ಎಲ್ಲರನ್ನೂ ನಗಿಸುತ್ತಿರುವವರು ಜೋಕರ್‌ಗಳು ಎಂದು ಕರೆಸಿಕೊಳ್ಳುತ್ತಾರೆ. ಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಂಡ ಮಾತ್ರಕ್ಕೆ ನಮ್ಮ ಸಾಮರ್ಥ್ಯ, ಪ್ರತಿಭೆಯು ಮೌಲ್ಯ ಕಳೆದುಕೊಂಡುಬಿಡುತ್ತದೆಯೇ?

ಈ ಸಂಬಂಧವಾಗಿ ಸ್ವಾಮಿ ವಿವೇಕಾನಂದರು ಒಂದು ಬಾರಿ ಹೇಳಿದ್ದರು. ‘ಮುಖ ಸಿಂಡರಿಸಿಕೊಂಡಿರುವುದು ಆಧ್ಯಾತ್ಮದ ಲಕ್ಷಣವಲ್ಲ. ಹೊಟ್ಟೆ ಕೆಟ್ಟದ್ದರ ಲಕ್ಷಣ’ ಎಂದು. ಎಷ್ಟು ಸತ್ಯವಾದ ಮಾತಲ್ಲವೇ? ನಮ್ಮಲ್ಲಿರುವ ಈ ಬಗೆಯ ಮನೋಭಾವಕ್ಕೆ ಕಾರಣವೇನು? ಹಾಸ್ಯವೆಂಬುದು ಗಾಂಭೀರ್ಯದ ವಿರೋಧಿಯಾದದ್ದು ಯಾವಾಗಿನಿಂದ?

(ಕಳೆದ ವಾರದ ಚರ್ಚೆ)


Technorati :
, ,

ಪರಮೇಶಿ ನಿದ್ದೆ ಪ್ರಸಂಗ!

14 ಫೆಬ್ರ

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpgನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ತರಗತಿಯಲ್ಲಿ ಅಧ್ಯಾಪಕರ ಕರ್ಣಕಠೋರವಾದ ಪಾಠದ ನಡುವೆಯೂ ತಪಸ್ಸಿನ ಹಾಗೆ ನಿದ್ರೆ ಮಾಡುತ್ತಿದ್ದ ಪರಮೇಶಿಯ ಬಗ್ಗೆ ಈ ವಾರ ಬರೆದಿದ್ದಾರೆ.

ಇದು ಈ ಅಂಕಣಕಾರರ ಮೂರನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ನಮ್ಮ ಕ್ಲಾಸಿನಲ್ಲಿ ಪರಮೇಶಿ ಅಂದರೆ ಎಲ್ಲರಿಗೂ ಭಯಮಿಶ್ರಿತ ಗೌರವ. ಏನೋ ಅಭಿಮಾನ. ನಮ್ಮೆಲ್ಲರಿಗೂ ಆತ ದೊಡ್ಡ ಕ್ರಾಂತಿಕಾರಿಯಂತೆ, ಮಹಾ ಧೈರ್ಯವಂತನಂತೆ ಕಾಣುತ್ತಿದ್ದ. ತರಗತಿಯ ಶಿಕ್ಷಕರಿಗಂತೂ ಅವನೆಂದರೆ ದುಸ್ವಪ್ನ. ಅದು ಯಾವ ಉಪಾಧ್ಯಾಯರ ಕ್ಲಾಸೇ ಇರಲಿ, ಅವರು ಅದೆಷ್ಟೇ ಕಟ್ಟುನಿಟ್ಟಿನವರಾಗಿರಲಿ, ಅವರು ಕೈಲಿ ಬೆತ್ತವನ್ನೇ ಏನು ಚಾಟಿಯನ್ನೇ ಹಿಡಿದುಕೊಂಡುಬರಲಿ, ಅವರು ಮಾಡುವ ಪಾಠ ಅವನಿಗೆ ಹಿಡಿಸಲಿಲ್ಲ, ಅವನ ತಲೆಗೆ ಹತ್ತಲಿಲ್ಲ ಅಂದರೆ ಸಾಕು ತನ್ನೆದುರಿನ ಡೆಸ್ಕ್‌ಗೆ ತನ್ನೆರೆಡು ಕೈಗಳನ್ನು ಮೊಣಕೈವರೆಗೂ ಊರಿ ಆಸನ ಸಿದ್ಧಪಡಿಸಿಕೊಂಡು ತನ್ನ ತಲೆಯನ್ನು ಅದರ ಮೇಲೆ ಪ್ರತಿಷ್ಠಾಪಿಸಿ ಸೊಂಪಾಗಿ ನಿದ್ದೆ ಮಾಡಲಾರಂಭಿಸುತ್ತಾನೆ. ಉಪಾಧ್ಯಾಯರು ನೋಡಿ ಸನ್ನೆ ಮಾಡಿದಾಗ ಪಕ್ಕದವರು ಅವನ ಬೆನ್ನಿಗೆ ತಿವಿದರೂ ಅವನಿಗೆ ತಿಳಿಯುವುದಿಲ್ಲ. ಉಪಾಧ್ಯಾಯರೇ ಬೆತ್ತದಿಂದ ಅವನ ಬೊಜ್ಜು ಹೊಟ್ಟೆಗೆ ತಿವಿದರೂ ಕೆಲವೊಮ್ಮೆ ಅವನನ್ನು ‘ಸಮಾಧಿ ಸ್ಥಿತಿ’ಯಿಂದ ಹೊರಗೆಳೆಯಲು ಸಾಧ್ಯವಾಗುವುದಿಲ್ಲ.

ಪರಮೇಶಿಗೆ ಜಗತ್ತಿನಲ್ಲಿ ಮಾಡಲಿಕ್ಕಿರುವುದು ಎರಡೇ ಕೆಲಸ. ಒಂದು ಹೊಟ್ಟೆ ತುಂಬಾ ತಿನ್ನುವುದು ಮತ್ತೊಂದು ಕಣ್ಣುತುಂಬಾ ನಿದ್ದೆ ಮಾಡುವುದು. ದೇವರು ಒಬ್ಬೊಬ್ಬರನ್ನು ಒಂದೊಂದು ಕೆಲಸ ಮಾಡುವುದಕ್ಕಾಗಿ ಭೂಮಿಗೆ ಕಳುಹಿಸಿರುತ್ತಾನೆ ಎಂದು ಬಲವಾಗಿ ನಂಬಿರುವ ಈತ ತನ್ನನ್ನು ದೇವರು ಈ ಎರಡು ಮಹತ್ಕಾರ್ಯ ಮಾಡಲಿಕ್ಕಾಗಿಯೇ ಕಳುಹಿಸಿಕೊಟ್ಟಿದ್ದಾನೆ ಎಂದು ಅವರಪ್ಪನ ಮೇಲೆ ಆಣೆ ಹಾಕಿ ಹೇಳುತ್ತಾನೆ. ಊಟಕ್ಕೆ ಕುಳಿತರೆ ಅವನೇ ಭೀಮಸೇನ, ಅವನೇ ಘಟೋತ್ಗಜ. ಮೂರು ಮೂರು ಮಂದಿಯ ಊಟವನ್ನೇ ಒಬ್ಬನೇ ಅನಾಯಾಸವಾಗಿ ಉಂಡು ‘ಈಗೀಗ ನಾನು ಊಟ ಕಡಿಮೆ ಮಾಡಿಬಿಟ್ಟಿದ್ದೇನೆ. ಈ ಹಾಳಾದ್ದು ಬೊಜ್ಜು ಬೆಳೆದುಬಿಟ್ಟಿದೆ. ಕರಗಿಸಬೇಕು.’ ಎಂದು ಶುದ್ಧ ಸಂತನಂತೆ ಮಾತನಾಡುತ್ತಾನೆ. ಅವನ ಭರಪೂರವಾದ ಊಟ, ಸೊಂಪಾದ ನಿದ್ದೆಯನ್ನು ಕಂಡು ಕರುಬಿದವರು ಎಷ್ಟು ಜನ? ಖ್ಯಾತ ಬರಹಗಾರರೊಬ್ಬರು `ಜಗತ್ತಿಗೇ ಹೊಟ್ಟೆ ಕಿಚ್ಚಾಗುವಂತೆ ಬದುಕ್ರೋ’ ಎಂದದ್ದನ್ನು ನಮ್ಮ ಪರಮೇಶಿ ಕಾಯಾ-ವಾಚಾ-ಮನಸಾ ಪಾಲಿಸುತ್ತಿದ್ದಾನೆ.

ತರಗತಿಯಲ್ಲಿ ನಿದ್ದೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಮನೆಯಲ್ಲಿ ಮೆದುವಾದ ಹಂಸ ತೋಲಿಕಾತಲ್ಪದಂತಹ ಹಾಸಿಗೆ, ತಲೆ ಮೇಲೆ ಗಿರ್ರನೆ ತಿರುಗುವ ಫ್ಯಾನು ಇದ್ದರೂ ಹಲವರಿಗೆ ನಿದ್ದೆ ಬರುವುದೇ ಇಲ್ಲ. ನಿದ್ರಾದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಅನೇಕರು ಅನೇಕ ವಿಧವಾದ ತಪಸ್ಸುಗಳನ್ನಾಚರಿಸುತ್ತಾರೆ. ಹಲವಾರು ಟಾನಿಕ್, ಮಾತ್ರೆಗಳನ್ನು ನುಂಗಿ ಬಸವಳಿಯುತ್ತಾರೆ. ಆದರೆ ತಲೆಯಿಡಲು ಒಂದು ಮೆತ್ತನೆಯ ಆಸರೆಯಿಲ್ಲದೆ, ಕಾಲುಚಾಚಲು ಜಾಗವಿಲ್ಲದ ಪರಮ ಅಸುಖಿ ಪರಿಸ್ಥಿತಿಯಲ್ಲಿ ನಿದ್ರಾದೇವಿಯನ್ನು ಒಲಿಸಿಕೊಳ್ಳುವುದಕ್ಕೆ ಅದೆಂತಹ ಸಾಧನೆಯನ್ನು ಮಾಡಿರಬೇಕು ಅಲ್ಲವೇ? ಮೇಲಾಗಿ ತರಗತಿಯಲ್ಲಿನ `ನಿದ್ರಾ ತಪಸ್ಸಿ’ಗೆ ನೂರೆಂಟು ವಿಘ್ನಗಳು. ಶಾಲೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಭರ್ರೋ ಎಂದು ಓಡುವ ವಾಹನಗಳ ಗೌಜು-ಗದ್ದಲ, ಅವುಗಳ ಹಾರನ್ ಹೊರಡಿಸುವ ಭಯಾನಕ ಸದ್ದು, ಸರಿಯಾದ ಕಿಟಕಿಗಳಿಲ್ಲದೆ, ಒಂದು ಫ್ಯಾನಿಲ್ಲದೆ ಅನುಭವಿಸುವ ನರಕಯಾತನೆಯಂತಹ ಸೆಖೆ, ಅಕ್ಕಪಕ್ಕ ಪಾಠಕೇಳುತ್ತಾ ಕುಳಿತವರಿಗೆ ತೊಂದರೆ ಕೊಡಬಾರದೆಂಬ ಎಚ್ಚರ, ಪಾಠ ಮಾಡುವು ಉಪಾಧ್ಯಾಯರಿಗೆ ಗೊತ್ತಾಗದ ಹಾಗೆ ತಪಸ್ಸಿಗೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ, ಎಲ್ಲಕ್ಕಿಂಗ ಮಿಗಿಲಾಗಿ ಕರ್ಣಕಠೋರವಾದ ಶಿಕ್ಷಕರ ಪಾಠದ ಅರಚಾಟ- ಇವೆಲ್ಲವನ್ನೂ ಮೆಟ್ಟಿ ನಿಂತು (ಅಲ್ಲಲ್ಲ, ಕುಳಿತು) ನಿದ್ದೆ ಮಾಡುವ ಪರಮೇಶಿ ಮಹಾನ್ ಸಾಧಕನಲ್ಲದೆ ಮತ್ತೇನು?

ತರಗತಿಯಲ್ಲಿ ಕುಳಿತು ನಿದ್ದೆ ಮಾಡುವುದಕ್ಕೂ ಪ್ರತಿಭೆಯಿರಬೇಕು ಎಂಬುದು ಪರಮೇಶಿಯ ಅಭಿಪ್ರಾಯ. ಮೇಲೆ ಹೇಳಿದ ವಿಘ್ನಗಳನ್ನು ಮೀರಿದರೂ ಯಶಸ್ವಿಯಾಗಿ ನಿದ್ದೆ ಮಾಡಲು ಅನೇಕರಿಗೆ ಸಾಧ್ಯವಾಗುದಿಲ್ಲ. ನಿದ್ದೆ ಮಾಡುವಾಗಿನ ಭಂಗಿಯ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂಬುದು ಅವನ ಸಲಹೆ. ಎಲ್ಲಾ ಭಂಗಿಗಳಿಗಿಂತ ಅಪಾಯಕಾರಿಯಾದದ್ದು: ಮೊಣಕೈಯನ್ನು ಮೇಜಿನ ಮೇಲೆ ಊರಿ, ಒಂದೇ ಕೈಯ ಮೇಲೆ ಗದ್ದವಿಟ್ಟುಕೊಂಡು ನಿದ್ದೆಗೆ ಶರಣಾಗುವುದು. ಹಾಗೆ ಮಾಡುವುದರಿಂದ ತಪಸ್ಸಿನಲ್ಲಿ ಲೀನವಾಗಿರುವ ದೇಹವನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ತಕ್ಕಡಿಯನ್ನು ತೂಗಿದಂತೆ ಒಮ್ಮೆ ಅತ್ತಲೂ ಒಮ್ಮೆ ಇತ್ತಲೂ ತಲೆಯಾಡಿಸುತ್ತಾ ತಾನು ನಿದ್ರಿಸುತ್ತಿದ್ದೇನೆ ಎಂಬ ರಹಸ್ಯವನ್ನು ಜಗಜ್ಜಾಹೀರು ಮಾಡಿದಂತಾಗುತ್ತದೆ. ಅಷ್ಟೇ ಅಲ್ಲದೆ ಅಕ್ಕಪಕ್ಕದಲ್ಲಿರುವ ವಿಘ್ನಸಂತೋಷಿಗಳ್ಯಾರಾದರೂ ನಮ್ಮ ತಲೆಗೆ ಆಸರೆಯಾಗಿರುವ ಕೈಯನ್ನು ಜರುಗಿಸಿಬಿಟ್ಟರೆ ವರ್ಲ್ಡ್ ಟ್ರೇಡ್ ಸೆಂಟರಿನ ಹಾಗೆ ತಲೆ ಮೇಜಿನ ಮೇಲಪ್ಪಳಿಸಿ ಬಾಯಲ್ಲಿರುವ ಹಲ್ಲುಗಳಿಗೋ ಇಲ್ಲ ಮೂಗಿಗೋ ಮೋಕ್ಷವಾಗುದಂತೂ ಗ್ಯಾರಂಟಿ.ಈ ವಿಚಾರವಾಗಿ ಬಹಳಷ್ಟು ಸಂಶೋಧನೆ ಮಾಡುತ್ತಿರುವ ಪರಮೇಶಿ ನಿದ್ರಿಸಲು ಅತ್ಯಂತ ಪರಿಣಾಮಕಾರಿಯಾದ ಭಂಗಿಯೊಂದನ್ನು ಸಿದ್ಧಪಡಿಸುತ್ತಿರುವುದಾಗಿಯೂ, ಅದು ಸಿದ್ಧವಾದರೆ ತರಗತಿಯಲ್ಲಿ ವಿದ್ಯಾರ್ಥಿಗಳು ಯಾವ ಅಡ್ಡಿ ಆತಂಕವಿಲ್ಲದೆ, ಯಾರ ಭಯವೂ ಇಲ್ಲದೆ ಆರಾಮಾಗಿ ನಿದ್ರಿಸಬಹುದೆಂದು ಹೇಳಿದ್ದಾನೆ.


Technorati : , , , ,

ಬ್ಲಾಗ್ ಬೀಟ್ 3

14 ಫೆಬ್ರ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………………………………….

ಈ ವಾರದ ಬ್ಲಾಗ್ ಬೀಟಿಗೆ ಹೊರಟ ಸುದ್ದೀಶರಿಗೆ ಬಹುಮಟ್ಟಿಗೆ ನಿರಾಶೆಯಾದದ್ದು ಖಂಡಿತಾ. ಕನ್ನಡಲ್ಲಿ ಅನೇಕ ಮಂದಿ ಬ್ಲಾಗಿನ ಬಾಗಿಲು ತೆರೆದು ಏನನ್ನೂ ಗೀಚಿ ಸಮಯ ಹಾಳು ಮಾಡಿಕೊಳ್ಳದೆ ಬುದ್ಧಿವಂತರಾಗಿಬಿಟ್ಟಿದ್ದಾರಲ್ಲ ಎಂಬ ಆಶ್ಚರ್ಯವಾದದ್ದು ಖಂಡಿತಾ. ಆದರೆ ಎವರ್ಗ್ರೀನ್ ಆಗಿ ಕೆಲವರು ಬ್ಲಾಗಿನ ಬಾಗಿಲಿಗೆ ಹೋದರೆ ಮೃಷ್ಟಾನ್ನ ಭೋಜನ ಉಣಬಡಿಸುವವರು ಇದ್ದೇ ಇರುತ್ತಾರೆ.

ಬೊಗಳೆ ರಗಳೆ

ನನ್ನದು ಜನಸೇವೆ: ಕಿಡ್ನಿ ಮಾರ್ಕೆಟ್ ಪ್ರೈ.ಲಿ. ಒಡೆಯ

ಎಲ್ಲಿ ಸುದ್ದಿ ಇರಲಿ ಬಿಡಲಿ ನಮ್ಮ ಬೊಗಳೆ ಒದರಿಗಾರ ಮಾತ್ರ ನಿತ್ಯ ಬೊಗಳೆ ಬಿಡುತ್ತಲೇ ಇರುತ್ತಾನೆ. ಈ ವಾರದ ಬ್ಲಾಗ್ ಬೀಟಿನಲ್ಲಿ ಸಿಕ್ಕಿಬಿದ್ದ ಸುದ್ದಿ ರೋಚಕವಾದದ್ದು ಹಾಗೂ ತುಂಬಾ ಎಕ್ಸ್ ಕ್ಲೂಸಿವ್ ಆದದ್ದು. ಕಿಡ್ನಿ ಕದಿಯುವ ರ್ಯಾಕೆಟ್ ನ ಕಿಂಗ್ ಪಿನ್‌ನ ಬಳಿ ಸಂದರ್ಶನ ಮುಗಿಸಿಕೊಂಡು ಬಂದಿರುವ ಒದರಿಗಾರ ಆತ ತಾನು ಮಾಡಿದ್ದು ಸಮಾಜ ಸೇವೆ ಎಂದು ಹೇಳಿರುವುದು ರೋಮಾಂಚನ ಮೂಡಿಸಿದೆ. ಅಲ್ಲದೆ ತನ್ನ ಸಮಾಜ ಸೇವೆಗೆ ಭಾರತ ರತ್ನವನ್ನು ಕೊಡಿಸಬೇಕು ಎಂಬ ಆತನ ಬೇಡಿಕೆ ನಮ್ಮ ಚಿಂತಕರ ಚಾವಡಿಯಲ್ಲಿ ಭಾರಿ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
……………………………………………………………………….

ಪಂಚ್ ಲೈನ್

ಹುಡುಗಿಯನ್ನು ಇಟ್ಟುಕೊಳ್ಳೋದಕ್ಕೂ ಆನೆಯನ್ನು ಇಟ್ಟುಕೊಳ್ಳೋದಕ್ಕೂ ವ್ಯತ್ಯಾಸವಿದೆಯಾ ಎಂದು ಕೆ.ಗಣೇಶ್ ಬೃಹತ್ ಸಂಶೋಧನೆಯನ್ನು ಮಾಡಿ ನಾಲ್ಕು ಸಾಲಿನ ಬೃಹತ್ ಪಿ.ಎಚ್.ಡಿ ಪ್ರಬಂಧವನ್ನು ಸಿದ್ಧ ಪಡಿಸಿದ್ದಾರೆ. ಅದೇನೆಂದು ತಿಳಿಯೋದಕ್ಕೆ ಎಲ್ಲರಿಗೂ ಕುತೂಹಲ ಇರಬೇಕಲ್ಲವಾ? ಇಲ್ಲಿಗೆ ದೌಡಾಯಿಸಿ.

……………………………………………………………………….

ಅಪಾರ

ಮದ್ಯಸಾರ ಎಂಬ ಅದ್ಭುತವಾದ ಕಣ್ಣಿಗೆ ತಂಪು ನೀಡುವ ಹೆಸರಿನ ಕೆಟಗರಿಯಲ್ಲಿ ಅಪಾರರು ಅಪಾರವಾದ ಸಾಧಾನೆಯನ್ನು ಮಾಡುತ್ತಿದ್ದಾರೆ. ಕಮೆಂಟ್ ರೀ ಅಂತ ಕಂಡದ್ದನ್ನು ಕೇಳಿದ್ದನ್ನು ಹುರಿದು ಮುಕ್ಕಿ ಕಮೆಂಟ್ ಮಾಡುತ್ತಿದ್ದಾರೆ. ಮದ್ಯದ ಮಹಿಮೆಯನ್ನು ವರ್ಣಿಸುತ್ತಾ ಕುಡುಕನ ಹೃದಯ ವೈಶಾಲ್ಯವನ್ನು ಕೊಂಡಾಡಿದ್ದಾರೆ. ಕುಡುಕನ ಹೃದಯ ಬಲು ಮಿದು ಅನ್ನೋದನ್ನ ಕಂಡುಹಿಡಿದಿದ್ದಾರೆ.

…………………………………………………………………………

ಗುಜ್ಜಾರ್ ಗೆರೆ

ಆ ಗೆರೆಗಳೇ ಅಂಥವು. ನೂರು ಪದಗಳಲ್ಲಿ ಹೇಳವಾಗದ್ದನ್ನು, ಉಕ್ಕಿಸಲಾಗದ ಅರ್ಥವನ್ನು ಒಂದು ಓರೆಯಾದ ಗೆರೆ ಹೇಳಿಬಿಡಬಲ್ಲದು ನಿರಾಯಾಸವಾಗಿ. ‘ಕನ್ನಡ ಟೈಮ್ಸ್’ ಎಂಬ ಹೆಸರಿನ ಅಪ್ಪಟ ಕನ್ನಡ ವಾರ ಪತ್ರಿಕೆಯಲ್ಲಿ ಗೆರೆಗಳೊಂದಿಗೆ ಸರಸವಾಡುವ ಗುಜ್ಜಾರ್ ಬರೆದ ಕಾರ್ಟೂನೊಂದು ಈ ವಾರ ಅವಧಿಯಲ್ಲಿ ಸಿಕ್ಕಿ ಬಿದ್ದಿದೆ.

…………………………………………………………………………

(ಕಳೆದ ವಾರದ ಬ್ಲಾಗ್ ಬೀಟ್)


Technorati : , , ,