Archive | ಮಾರ್ಚ್, 2010

ಹಳೆಕಂತೆ: ಏಪ್ರಿಲ್ ಒಂದರ ವ್ಯಕ್ತಿ

27 ಮಾರ್ಚ್

ವರ್ಷದ ವ್ಯಕ್ತಿಯನ್ನು ಆರಿಸುವ ಕೆಲಸವನ್ನು ಬಹುತೇಕ ಉಸಿರಿರುವ ಎಲ್ಲಾ ಪತ್ರಿಕೆಗಳೂ, ಸುದ್ದಿ ವಾಹಿನಿಗಳೂ ಮಾಡುತ್ತವೆ. ಹಾಗೆಯೇ ನಗಾರಿಯಲ್ಲಿ ಏಪ್ರಿಲ್ ಒಂದರಂದು ಅಂತಹ ವಿಶೇಷ ವ್ಯಕ್ತಿಯನ್ನು ಪುರಸ್ಕರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಪಟ್ಟಿಯಲ್ಲಿದ್ದ ಹಲವರಲ್ಲಿ ಕಡೆಗೂ ಆಯ್ಕೆಯಾದವರು ಯಾರು?

ಏಪ್ರಿಲ್ ೨೦೦೮ರ ಬರಹದ ತುಣುಕು ಇಲ್ಲಿದೆ:

ಏಪ್ರಿಲ್ ಒಂದು ಮೂರ್ಖರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ ಸಂತೋಷ ಪಡುತ್ತಾ ಅವರ ಸಾಧನೆಯನ್ನು ಕೊಂಡಾಡುವ ದಿನ.

ವರ್ಷದ ವ್ಯಕ್ತಿ, ತಿಂಗಳ ವ್ಯಕ್ತಿ, ವಾರದ ವ್ಯಕ್ತಿ, ದಿನದ ವ್ಯಕ್ತಿ ಎಂದೆಲ್ಲಾ ಬೇಕಾ ಬಿಟ್ಟಿಯಾಗಿ ಪ್ರಶಸ್ತಿಗಳನ್ನು ಕೊಡುವ, ಬೀದಿ ಬದಿಯ ಸುಂದರಿಯನ್ನು ಕರೆದುಕೊಂಡು ಬಂದು ಆಕೆಯನ್ನು ಇಡೀ ಕೇರಿಯ ‘ವಿಶ್ವ ಸುಂದರಿ’ಯನ್ನಾಗಿ ಘೋಷಿಸುವ ಸಂಘಗಳು ನಮ್ಮ ನಡುವೆ ಇವೆ. ಆದರೆ ಏಪ್ರಿಲ್ ಒಂದರ ವ್ಯಕ್ತಿ ಎಂದು ಒಂದು ನೈಜ ಪ್ರತಿಭೆಯನ್ನು, ಒಬ್ಬ ಸಾಧಕ/ಸಾಧಕಿಯನ್ನು ಗುರುತಿಸಿ, ಗೌರವಿಸುವ ಸಾಹಸಕ್ಕೆ ಯಾರೂ ಕೈಯನ್ನು ಮಾತ್ರ ಹಾಕದಿರುವುದು ವಿಷಾದದ ಸಂಗತಿ. ಈ ಕೊರಗನ್ನು ನೀಗಿಸುವತ್ತ ನಗೆ ನಗಾರಿ ದಾಪುಗಾಲು ಹಾಕುತ್ತಿದೆ. ಯಾರೂ ಮಾಡದ ಘನ ಕಾರ್ಯವನ್ನು ನಗಾರಿಯ ಸಾರಥಿ ನಗೆ ಸಾಮ್ರಾಟರು ಮಾಡಲು ಮನಸ್ಸು ಮಾಡುವ ಮೂಲಕ ಹೊಸ ಕ್ರಾಂತಿಯನ್ನು ಮಾಡುತ್ತಿದ್ದಾರೆ.

ಪೂರ್ಣ ಬರಹಕ್ಕಾಗಿ ಇಲ್ಲಿಗೆ ಭೇಟಿ ಕೊಡಿ: ಏಪ್ರಿಲ್ ಒಂದರ ವ್ಯಕ್ತಿ ಯಾರು?

ನಗಾರಿ ರೆಕಮಂಡೇಶನ್ 29:‌ಟಾಮ್ ಮತ್ತು ಜೆರ್ರಿ

18 ಮಾರ್ಚ್

ಜನರನ್ನು ನಗಿಸುವುದು ಸುಲಭದ ಕೆಲಸವಲ್ಲ. ಕೂದಲಿಂದ ಬೆರಳ ತುದಿಯವರೆಗೆ ಚಿತ್ರ ವಿಚಿತ್ರವಾದ ವೇಷ ತೊಟ್ಟು ಬಫೂನಿನಂತೆ ಕುಣಿಯಬೇಕು. ಪದಗಳ ಮೋಡಿಯಲ್ಲಿ ಕೆಡವಿ ಪಂಚುಗಳ ಮೇಲೆ ಪಂಚುಗಳನ್ನು ಕೊಡಬೇಕು. ನೇರವಾದ ಸತ್ಯವನ್ನು ವಕ್ರಗೆರೆಗಳ ದಾಳಿಗೆ ಈಡು ಮಾಡಬೇಕು. ಪ್ರಸಿದ್ಧ ನಟನ, ಪ್ರಸಿದ್ಧ ರಾಜಕಾರಣಿಯ ಕಾಲೆಳೆಯಬೇಕು. ಇಷ್ಟೆಲ್ಲ ಮಾಡಿದರೂ `ನಗದು’ ಎನ್ನುವಂತಹ ಸ್ಪೀಶಿಗಳಿರುತ್ತವೆ. ಹೀಗಿರುವಾಗ ಆ ಎರಡು ಪಾತ್ರಗಳು ಮಾತಿಲ್ಲದೆ, ವಿಡಂಬನೆಯಿಲ್ಲದೆ, ವ್ಯಂಗ್ಯಾರ್ಥ, ದ್ವಂದ್ವಾರ್ಥದ ಹಂಗಿಲ್ಲದೆ, ಅಣಕವಾಡುವ ಆವಶ್ಯಕತೆಯಿಲ್ಲದೆ ಕೇವಲ ತಮ್ಮ ಚಿನ್ನಾಟ, ತುಂಟಾಟಗಳಿಂದಲೇ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೆ, ಮುಗ್ಧ ಬಾಲಕರಿಂದ ಹಿಡಿದು ಪಿಎಚ್ಡಿ ಬುದ್ಧಿವಂತರವರೆಗೆ, ಥೇಮ್ಸ್ ಪುತ್ರರಿಂದ ಹಿಡಿದು ಕೆಂಗೇರಿ ಏರಿಯಾದ ಮನೆಯ ಹುಡಗನವರೆಗೆ ಎಲ್ಲರನ್ನೂ ಬಿದ್ದು ಉರುಳಾಡಿ ನಗುವಂತೆ ಮಾಡಿದವು.

ಹೌದು ಅವು ಟಾಮ್ ಮತ್ತು ಜೆರ್ರಿ!

ವಿಲಿಯಂ ಹನ್ನಾ ಹಾಗೂ ಜೋಸೆಫ್ ಬಾರ್ಬರಾ ಎಂಬಿಬ್ಬರು ಪ್ರತಿಭಾವಂತರು ಸೇರಿ ಸೃಷ್ಟಿಸಿದ ಪಾತ್ರಗಳು-  ಟಾಮ್  ಎಂಬ ಹೆಸರಿನ ಮನೆ ಬೆಕ್ಕು, ಜೆರ್ರಿ ಎಂಬ ಹೆಸರಿನ ತುಂಟ ಇಲಿ.  ಬೆಕ್ಕಿಗೆ ಚಿನ್ನಾಟ ಇಲಿಗೆ ಪ್ರಾಣ ಸಂಕಟವೆಂಬ ಗಾದೆ ಮಾತನ್ನು ಈ ಟಾಮ್ ಹಾಗೂ ಜೆರ್ರಿಗಳು ತಲೆಕೆಳಗು ಮಾಡಿದವು. ಅಂಗೈ ಗಾತ್ರದ ಪುಟ್ಟ ಇಲಿ ಟಾಮ್ನನ್ನು ಕೆಣಕುವುದು, ಟಾಮ್ ನಾನಾ ತಂತ್ರಗಳನ್ನು ಹೂಡಿ ಜೆರ್ರಿಯನ್ನು ಹಿಡಿಯಲು ಹೊಂಚುವುದು. ಜೆರ್ರಿ ತಪ್ಪಿಸಿಕೊಂಡು ಓಡುತ್ತಲೇ ಟಾಮ್ಗೆ ತಿರುಗಿ ಟಾಂಗು ಕೊಡುವುದು – ಇಷ್ಟನ್ನೇ ವೈವಿಧ್ಯಮಯವಾಗಿ ನೂರಕ್ಕೂ ಹೆಚ್ಚು ಸ್ಕೆಚ್ಚುಗಳಲ್ಲಿ ತೋರಿದ ಹನ್ನಾ ಬಾರ್ಬರಾ ಜೋಡಿ ಮನರಂಜನೆಯಲ್ಲಿ ಹೊಸತೊಂದು ಪರಂಪರೆಯನ್ನೇ ಹುಟ್ಟುಹಾಕಿದರು.

ವಯಸ್ಸಾಗದ, ಮುಖ ಸುಕ್ಕು ಗಟ್ಟದ, ಖಾಯಿಲೆ ಬೀಳದ, ಸ್ಕ್ಯಾಂಡಲುಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಳ್ಳದ, ಜನಪ್ರಿಯತೆಗಾಗಿ ಗಿಮಿಕ್ಕು ಮಾಡದ ಅನಿಮೇಶನ್ ತಂತ್ರಜ್ಞಾನದಲ್ಲಿ ರೂಪುಗೊಂಡ ಈ ಪಾತ್ರಗಳು ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಟಾಮ್ ಹಾಗೂ ಜೆರ್ರಿಗಳ ಚಿನ್ನಾಟವನ್ನು ನೋಡದೆ ಈಗಿನ ಮಕ್ಕಳು ನಗುವುದನ್ನು ಕಲಿಯುವುದಿಲ್ಲ. ತಾವು ಎಳೆಯರಾಗಿದ್ದಾಗ ಕಂಡು ಖುಶಿಪಟ್ಟಿದ್ದ ಟಾಮ್ ಹಾಗೂ ಜೆರ್ರಿ ಕಾರ್ಟೂನುಗಳನ್ನು ತಮ್ಮ ಮಕ್ಕಳೊಂದಿಗೂ ಕೂತು ಎಂಜಾಯ್ ಮಾಡಬಹುದಾದ ವಿಶಿಷ್ಟತೆ ಇವುಗಳದು.

೧೯೪೦ರ ಫೆಬ್ರವರಿ ೧೦ರಂದು ಬಿಡುಗಡೆಯಾದ `ಪುಸ್ ಗೆಟ್ಸ್ ದ ಬೂಟ್’ ಸಿನೆಮಾದಲ್ಲಿ ಕಣ್ತೆರೆದ ಈ ಟಾಮ್ ಅಂಡ್ ಜೆರ್ರಿಗೆ ಎಪ್ಪತ್ತು ವರ್ಷಗಳು ಕಳೆದಿವೆ. ಇಂದಿಗೂ ಮಕ್ಕಳ, ವಯಸ್ಕರ ಕಣ್ಣುಗಳಲ್ಲಿ ಅದೇ ಲವಲವಿಕೆಯಿಂದ ಕುಣಿಯುತ್ತಿವೆ!

ಈ ಕೊಂಡಿಯಲ್ಲಿರುವ ತಾಣಕ್ಕೆ ಪ್ರವೇಶಿಸಿದರೆ ಬಹುತೇಕ ಎಲ್ಲಾ ಟಾಮ್ ಜೆರ್ರಿ ತುಂಟಾಟಗಳನ್ನು ಕಂಡು ಆನಂದಿಸಬಹುದು.

ಒಂದು ಸ್ಯಾಂಪಲ್ ಇಲ್ಲಿದೆ:



ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!

ವಾರದ ವಿವೇಕ 39

17 ಮಾರ್ಚ್

………………………………………………….

ಒಳಗೆ ಕೂತಿರುವುದಕ್ಕಿಂತ

ಎರಡು ಪಟ್ಟು ವೇಗದಲ್ಲಿ

ನೀವು ಹಿಂದೆ ಓಡುವಾಗ

ಚಲಿಸುವ ವಸ್ತುವನ್ನು ಬಸ್ಸು ಎನ್ನಬಹುದು.

………………………………………………….

ಹಳೆಕಂತೆ: ಏಪ್ರಿಲ್ ಒಂದು ಎಲ್ಲರ ದಿನ

12 ಮಾರ್ಚ್

ಮತ್ತೊಂದು ಏಪ್ರಿಲ್ ಒಂದು ಹತ್ತಿರಾಗುತ್ತಿದೆ. ಫೆಬ್ರವರಿ ಹದಿನಾಲ್ಕರಂದು ಪಿಂಕ್ ಚೆಡ್ಡಿ ಲಲನೆಯರು, ಸ್ಯಾಫ್ರನ್ ಚಡ್ಡಿ ಪಡ್ಡೆಗಳು ರೋಮಾಂಚನಗೊಳ್ಳುವಂತೆಯೇ ಏಪ್ರಿಲ್ ಒಂದು ಹತ್ತಿರಾಗುತ್ತ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಮೈಮೇಲೆ ಕೂದಲು ನಿಮಿರುವ ಬೆರಗು, ಸಂಭ್ರಮ.

೨೦೦೮ರ ಏಪ್ರಿಲ್ ಒಂದನ್ನು ಎಲ್ಲರ ದಿನವನ್ನಾಗಿ ಆಚರಿಸಿದ ನೆನಪನ್ನು ಮಾಡಿಕೊಳ್ಳಲು ಹಳೆ ಕಂತೆಯಿಂದ ಹೆಕ್ಕಿ ತೆಗೆದ ಬರಹದ ತುಣುಕು ಇಲ್ಲಿದೆ:

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು ‘ಮೂರ್ಖ’ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹಾಗೂ ಅತ್ಯಂತ ಸೂಕ್ತವಾದ ಸಂಗತಿ. ಜಗತ್ತಿನಲ್ಲಿ ಎಂಥೆಂಥವರಿಗೋ ಒಂದಿಡೀ ದಿನವನ್ನು ಮೀಸಲಿಡುವ ಪರಿಪಾಠ ಇದೆ. ‘ವ್ಯಾಲೆಂಟೈನ್ಸ್ ಡೇ’ ಅಂತೆ, ‘ಮದರ್ಸ್ ಡೇ’ ಅಂತೆ, ‘ಫಾದರ್ಸ್ ಡೇ’ (ಇದನ್ನು Father`s day ಎಂದು ಓದಿಕೊಳ್ಳಬೇಕಾಗಿ ವಿನಂತಿ, Fathers day ಎಂದು ಓದಿಕೊಂಡರೂ ಅದು ತಾಂತ್ರಿಕವಾಗಿ, ತಾತ್ವಿಕವಾಗಿ, ವಾಸ್ತವಿಕವಾಗಿ, ಕಾಲ್ಪನಿಕವಾಗಿ ತಪ್ಪಿಲ್ಲವಾದರೂ ‘ವ್ಯಾವಹಾರಿಕ’ವಾಗಿ ನಿಷಿದ್ಧ!), ‘ವುಮನ್ಸ್ ಡೇ’ ಇವೆಲ್ಲಾ ಇರಲಿ, ಅಂಥಾ ಮಹಾಮಾರಿ ಏಡ್ಸ್‌ಗೂ ಸಹ ಒಂದು ‘ಏಡ್ಸ್ ಡೇ’ ಎಂಬುದಿದೆ. ಅದೂ ಹೋಗಲಿ ಎಂದುಕೊಳ್ಳೋಣ ಎಂದರೆ Every dog has its day ಎನ್ನುತ್ತಾರೆ. ಹಂಗಾದರೆ ಪ್ರತಿಯೊಂದು ನಾಯಿಗೂ ಒಂದು ದಿನವಿದೆ, ಗಂಡಂದಿರಿಗೂ ಇದೆ!

ಲೇಖನದ ಪೂರ್ಣ ಪಾಠಕ್ಕಾಗಿ ಇಲ್ಲಿ ಕ್ಲಿಕ್ಕಿಸಿ :‌ ಏಪ್ರಿಲ್ ಒಂದು- ಎಲ್ಲರ ದಿನ!

ನಿರೀಕ್ಷಿಸಿ,ಸ್ವಾಮಿ ನಿತ್ಯಕಾಮಾನಂದ ವಿಶೇಷ ಸಂದರ್ಶನ!

10 ಮಾರ್ಚ್

ಮುಖ್ಯವಾಹಿನಿಗಳು ಅಲಕ್ಷಿಸುವ, ಮುಖ್ಯವಾಹಿನಿಗಳನ್ನು ಅಲಕ್ಷಿಸುವ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಅಂತರ್ಜಾಲವು ಬೆಳೆಯುತ್ತಿದೆ. ಈ ಬೆಳವಣಿಗೆಗೆ ನಗೆ ನಗಾರಿ ಡಾಟ್ ಕಾಮ್ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಮುಖ್ಯವಾಹಿನಿಯ ಪತ್ರಕರ್ತರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡ ಸುದ್ದಿಗಳನ್ನೂ, ಸುದ್ದಿ ಮಾಡುವವರನ್ನೂ ಹೆಕ್ಕಿ ತಂದು ವರದಿ ಮಾಡುವುದು ನಮ್ಮ ಹೆಚ್ಚುಗಾರಿಕೆ. ಇಪ್ಪತ್ನಾಲ್ಕೂ ಗಂಟೆ ಬ್ರೇಕಿಂಗ್ ನ್ಯೂಸ್ ತಂದುಕೊಡುವ ಧಾವಂತದಲ್ಲಿ ನಮ್ಮ ಟಿವಿ ಚಾನಲುಗಳ ಸುದ್ದಿಗಾರರು ಮುರಿದ ಸುದ್ದಿಗಳ ಚೂರುಗಳನ್ನು ಆರಿಸಿಕೊಂಡು ಬಂದು ವರದಿ ಮಾಡಲಿಕ್ಕೆ ನಗಾರಿ ಸುದ್ದಿಚೋರರು ಸದಾ ಸಿದ್ಧರು.

ಈ ಸಂಚಿಕೆಯ ವಿಶೇಷ ಸಂದರ್ಶನಕ್ಕಾಗಿ ಸಾಮ್ರಾಟರು ತಮ್ಮ  alter egoವನ್ನು ಅಲೆಸದ ಜಾಗವಿಲ್ಲ. ಮಾಡಿಸದ ಕೆಲಸವಿಲ್ಲ. ಹತ್ತಾರು ತಾಸುಗಳ ಉಪನ್ಯಾಸದ ವಿಡಿಯೋಗಳಿಂದ ಸಾಧಿಸಲಾಗದ ಜನಪ್ರಿಯತೆಯನ್ನು, ಮಾಧ್ಯಮಗಳ ಒಲುಮೆಯನ್ನು ಹತ್ತೇ ನಿಮಿಷದ ವಿಡಿಯೋ ಕ್ಲಿಪ್ಪಿಂಗಿನಿಂದ ಸಾಧಿಸಿದ ಸ್ವಾಮಿ ನಿತ್ಯಕಾಮಾನಂದರ ಸಂದರ್ಶನ ಪಡೆದೇ ಹಿಂದಿರುಗಬೇಕೆಂದು ಅಪ್ಪಣೆ ಮಾಡಿದ್ದರು. ಸ್ವಾಮಿಯವರು ಸರ್ವಶಕ್ತಿಶಾಲಿಗಳೂ, ಅನೇಕ ದೇಹಗಳನ್ನು ಧರಿಸಬಲ್ಲವರಾದ್ದರಿಂದ ಅವರನ್ನು ಬೆನ್ನಟ್ಟಿ ಹಿಡಿಸು ಸಂದರ್ಶನ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಬಿಡದಿಯಲ್ಲಿನ ದೊಡ್ಡ ದೊಡ್ದ ಪೋಸ್ಟರುಗಳ ಹಿಂದಿನ ಜಾಗದಿಂದ ಹಿಡಿದು ಹಿಮಾಲಯದ ಗುಹೆಗಳವರೆಗೆ ಎಲ್ಲಾ ಜಾಗಗಳನ್ನು ಜಾಲಾಡಿದ್ದಾಯಿತು. ಈ ಸಂದರ್ಭದಲ್ಲಿ ಕೈಯಲ್ಲೊಂದು ಹ್ಯಾಂಡಿಕ್ಯಾಮ್ ಇದ್ದಿದ್ದರೆ ‘ಎಲೆ ಮರೆಯ ಕಾಯಿಯಂತಿರುವ’ ದೇಶದ ಇನ್ನೆಷ್ಟೋ ದೇವಮಾನವರ ಚರಿತ್ರೆ ಬೆಳಕು ಕಾಣುತ್ತಿತ್ತು ಎಂದು ಹಲುಬುತ್ತ ಸಾಮ್ರಾಟರ  alter ego ಕ್ಯಾಮರಾಗಾಗಿ ಅರ್ಜಿ ಹಾಕಿತು.

ಸುತ್ತಾಡಿ ಸುಸ್ತಾಗಿ ದಣಿವಾರಿಸಿಕೊಳ್ಳಲು ಸಾಮ್ರಾಟರ alter ego ಕುಂಭ ಮೇಳದ ಸ್ನಾನ ಮಾಡಿ ಹೊಟೇಲೊಂದರಲ್ಲಿ ಲಸ್ಸಿ ಹೀರುತ್ತಿರುವಾಗ ಅಯಾಚಿತವಾಗಿ ಸಿಕ್ಕವರು ಸ್ವಾಮಿ ನಿತ್ಯಕಾಮಾನಂದ. ಸುತ್ತ ಎಲ್ಲೂ ಕ್ಯಾಮರಾ ಇಲ್ಲದ್ದನ್ನು ಖಾತರಿ ಪಡಿಸಿಕೊಂಡು ಒಂದುವರೆ ತಾಸುಗಳ ‘ದೇಹವನ್ನು ಮೀರಿದ ಅನುಭವ’ ಕೊಡುವ ಧ್ಯಾನ ಮಾಡಿಸಿದ ನಂತರ ಸ್ವಾಮಿಗಳು ಸಂದರ್ಶನಕ್ಕೆ ಸಿದ್ಧರಾದರು.

ಸ್ವಾಮಿಗಳ (ಅಧ್ಯಾತ್ಮ) ರಸಭರಿತ ಸಂದರ್ಶನ ನಗೆ ನಗಾರಿಯಲ್ಲಿ ಶೀಘ್ರವೇ ಪ್ರಕಟವಾಗಲಿದೆ!

ಅವರಿವರ ಭಯಾಗ್ರಫಿ

10 ಮಾರ್ಚ್

ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).

ಈ ಸಂಚಿಕೆಯ ಸ್ಯಾಂಪಲ್:

ಕತ್ತೆ ಜನ್ಮ

ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ.

ವಾರದ ವಿವೇಕ 39

8 ಮಾರ್ಚ್

……………………………………………………………

ಜೀವನವೆಲ್ಲ ಗುರುತಿಸಲ್ಪಡುವುದಕ್ಕಾಗಿ

ಒದ್ದಾಡಿ ಅನಂತರ ಗುರುತು ಸಿಗಬಾರದೆಂದು

ಕೂಲಿಂಗ್ ಗ್ಲಾಸ್ ಹಾಕಿ

ಓಡಾಡುವವರನ್ನು ಸೆಲೆಬ್ರಿಟಿ ಎನ್ನುವರು.
……………………………………………………………

ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರೆ ಹೆಂಗ್ರಿ?

8 ಮಾರ್ಚ್

ಜೋಕುಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಹಾಗು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದೊಂದು ಬಹುದೊಡ್ಡ ಅಚ್ಚರಿಯ, ಸಂಶೋಧನೆಗೆ ಅರ್ಹವಾದ ಪ್ರಶ್ನೆ. ಅದನ್ನು ಒತ್ತಟ್ಟಿಗಿಟ್ಟರೆ ಅವು ಯಾವ ಕ್ಷಣದಲ್ಲಾದರೂ ನಮ್ಮ ಮುಖದಲ್ಲಿ ನಗೆಯರಳಿಸಬಲ್ಲ ಶಕ್ತಿಯನ್ನು ಹೊಂದಿರುವಂಥವು. ವಾಸ್ತವದಲ್ಲಿ ಕಷ್ಟಕರವಾದ ಬದುಕು ಹೊಂದಿರುವವರು ತಮ್ಮ ಸಂಕಟಗಳನ್ನು ಮರೆಯುವುದಕ್ಕಾಗಿ ಜೋಕುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಜೋಕುಗಳಿಗೆ ಜೋತು ಬೀಳುತ್ತಾರೆ ಎಂಬ ಮಾತಿದೆ. ಅದಕ್ಕಾಗಿಯೇ ಇತಿಹಾಸದಲ್ಲಿ ವಿಪರೀತವಾಗಿ ನರಳಿದ ಯಹೂದಿಯರ ಬಳಿ ಜಗತ್ತಿನ ಅತ್ಯಂತ ಶ್ರೇಷ್ಠ ಜೋಕುಗಳಿವೆ ಎನ್ನುತ್ತಾನೆ ಓಶೋ. ಇಂಥ ಜೋಕುಗಳು ನಗೆ ನಗಾರಿಯ ಅಂಗಳದಲ್ಲಿ ಜಾಗ ಪಡೆಯದಿದ್ದರೆ ಹೇಗೆ ? ಜೋಕುಗಳಿಗಾಗಿ ಜಾಲಿಯಾದ ಒಂದು ಪುಟ ಮೀಸಲಾಗಿದೆ: ಸ್ವಲ್ಪಾದ್ರೂ ಸೀರಿಯಸ್ ಆಗ್ರಿ!

ಈ ಸಂಚಿಕೆಯ ಸ್ಯಾಂಪಲ್:

ನಾಸ್ತಿಕ ಬಾಯ್ ಫ್ರೆಂಡ್

ತನ್ನ ಬಾಯ್ ಫ್ರೆಂಡ್ನನ್ನು ಕಾಣಲು ಹೋಗಿದ್ದ ಯುವತಿ ಸಪ್ಪೆ ಮುಖ ಹೊತ್ತು ಮನೆಗೆ ಹಿಂದಿರುಗಿದ್ದಳು.
ಅವರಮ್ಮನಿಗೆ ಹೇಳಿದಳು, “ರಂಜಿತ್ ನನಗೆ ಪ್ರೊಪೋಸ್ ಮಾಡಿದ.”
“ಅದಕ್ಕ್ಯಾಕೆ ನೀನು ಬೇಜಾರಾಗಿದ್ದೀಯಾ?”
“ಯಾಕಂದ್ರೆ ಅವನು ನಾಸ್ತಿಕನಂತೆ. ನರಕ ಇದೆ ಎನ್ನುವುದಕ್ಕೆ ಅವನಿಗೆ ನಂಬಿಕೆಯಿಲ್ಲವಂತೆ.”
ತಾಯಿ ಹೇಳಿದಳು, “ಯೋಚಿಸಬೇಡ ಬೇಬಿ, ಅವನನ್ನ ಮದುವೆಯಾಗು ಆಮೇಲೆ ತನ್ನ ನಂಬಿಕೆ ಸುಳ್ಳು ಎಂದು ಅವನಿಗೇ ಅರಿವಾಗುತ್ತೆ.”


ಪ್ರತಂಪು ಸಿಂಹ ಬರೆದಿದ್ದಾರೆ: ಮುಹ್ ಖೋಲ್ಕರ್ ನಕ್ಕುನೋಡಿ…. ಮಿಸ್ಟರ್ ಬುದ್ಧಿಜೀವಿ!

5 ಮಾರ್ಚ್

ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು’ ಎಂಬ ಪದವನ್ನು ನಾನು ಬಳಸುವುದಿಲ್ಲ. ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ.ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು.

ನಾನು ವಸ್ತುನಿಷ್ಟವಾಗಿ ಬರೆಯುವುದಿಲ್ಲ ವ್ಯಕ್ತಿ ನಿಷ್ಠವಾಗಿ ಬರೆಯುತ್ತೇನೆ ಎಂದು ಹಲವರು ಆರೋಪ ಮಾಡುತ್ತಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನನ್ನ ಅಂಕಣಗಳನ್ನು ಮುಕ್ತ ಮನಸ್ಸಿನಿಂದ, ಪೂರ್ವಾಗ್ರಹ ತೊರೆದು ಓದಿ. ನಾನು ಯಾವ ಸಂದರ್ಭದಲ್ಲೂ ವ್ಯಕ್ತಿ ನಿಂದನೆಗೆ ಇಳಿದಿಲ್ಲ. ಅದಂತ ಪೂರ್ತಿಯವರ ಬಗ್ಗೆ ಬರೆಯುವಾಗಲೂ ನಾನವರನ್ನು ವೈಯಕ್ತಿಕವಾಗಿ ಟೀಕಿಸಿಲ್ಲ. `ಜ್ಞಾನಪೀಠಿ ನಂಬರ್ ೬’ ಎಂದು ಸಂಬೋಧಿಸಿದ್ದೇನೆ. ಕೆಂಪಾ ಬಗ್ಗೆ ಬರೆಯುವಾಗ ಅವರನ್ನು `ಜಿರಳೆ ಔಷಧಿ’ ಎಂದು ಕರೆಯುವುದರ  ಮೂಲಕ ನಾನು ಇಡೀ ಚರ್ಚೆಯನ್ನು  ವ್ಯಕ್ತಿಗಳಿಂದ  `ಜ್ಞಾನಪೀಠ, ಜಿರಳೆ ಔಷಧಿ’ ಎನ್ನುವ ವಸ್ತುಗಳ ಬಗೆಗೆ ತಿರುಗಿಸಿ `ವಸ್ತು’ನಿಷ್ಠವಾದ ಚರ್ಚೆ ಮಾಡಿದ್ದೇನೆ.

ನಗೆ ನಗಾರಿ ಡಾಟ್ ಕಾಮ್ ಎರಡು ವರ್ಷಗಳಿಂದ ಅಂತರ್ಜಾಲದಲ್ಲಿ ನಗೆಯ ಹಬ್ಬವನ್ನು ಮಾಡುತ್ತಿದೆ. ನನ್ನ ಗೆಳೆಯರು ಕೇಳಿದ್ರು `ನೀನು ಕನ್ನಡದಲ್ಲಿ ಬರೆಯೋದೇನಿದ್ರೂ ಅಂಕಣದಲ್ಲಿ ಮಾತ್ರ. ಆರ್ಕುಟ್, ವೆಬ್ ಸೈಟಿನಲ್ಲಿ ನೀನು ಇಂಗ್ಲೀಷಿನಲ್ಲಷ್ಟೇ ಕೀಬೋರ್ಡು ಇರುವುದು ಎಂದು ನಂಬಿರುವೆ. ಆದರೆ ನಗಾರಿ ಬ್ಲಾಗಿಗೆ ಕನ್ನಡದಲ್ಲಿ ಯಾಕೆ ಬರೆಯಲು ಒಪ್ಪಿದೆ’ ಎಂದು. ಅದಕ್ಕೆ ನಾನವರಿಗೆ ಹೇಳಿದೆ,  `ಇದು ಹಲ್ಲುಳ್ಳ ವೀರರು ಮೆಟ್ಟುವ, ಹಿಟ್ಟು ತಟ್ಟುವ ಬ್ಲಾಗು. ಹಲ್ಲಿದ್ದ ಗಟ್ಟಿಗರಷ್ಟೇ ಹಲ್ಲು ತೋರಿ ನಗಲಿಕ್ಕೆ ಸಾಧ್ಯ. ಅದಕ್ಕೇ ಇಲ್ಲಿ ಕನ್ನಡದಲ್ಲಿ ಬರೆಯೋದು’ ಅಂತ. ಈ ಹಲ್ ಸೆಟ್ಟಿನ ಬ್ಲಾಗಿಗೆ ಬರೆಯಲು ಹಿಂದೆ ಕಾಂಡೋಮ್ ಬಿಚ್ಚಿಟ್ಟ ಪೆನ್ನೂ  ಬೇಕಿಲ್ಲ, ಫಿಲ್ಟರ್ ತೆಗೆದಿಟ್ಟ ಗಂಟಲೂ ಬೇಕಿಲ್ಲ. ಕುಟ್ಟಲು ಕೀಬೋರ್ಡ್ ಇದ್ದರೆ ಸಾಕು.

ನಗೆ ಸಾಮ್ರಾಟರು ಯಾರು, ಅವರ ಸಾಧನೆ ಏನು ಎಂದು ಸಾಮ್ರಾಜ್ಯದ ಪ್ರಜೆಗಳಾದ ನಿಮಗೆಲ್ಲಾ ಗೊತ್ತಿದೆ. ಅವರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ನಾವ್ ಫ್ರೆಂಡ್ಸು ಮಾಡೋಕೆ ಕೆಲ್ಸ ಇಲ್ಲದಾಗ ಹೇಳ್ತಿರ್ತೀವಿ, ಸೂರ್ಯಂಗೇ ಟಾರ್ಚಾ, ತಿಮ್ಮಪ್ಪಂಗೇ ಕಟಿಂಗಾ ಅಂತ. ಹಾಗೇ ಹೇಳ್ತೀವಿ, ತಿಪ್ಪೆಗೇ  ಕಸನಾ ಅಂತ. ನನ್ ಪಾಲಿಗೆ ಸಾಮ್ರಾಟರು ತಿಪ್ಪೆ, ಅವ್ರಿಗೆ ಕಸ ಎಸೆಯೋ ಕೆಲಸ ನಾನು ಮಾಡಲ್ಲ. ಆದ್ರೆ ಈ ತಿಪ್ಪೆ ಕಡೆ ತಿರುಗಿ ಕಲ್ಲು ಎಸೆದು ಮೈಮೇಲೆಲ್ಲಾ ಕಸ ಎಳೆದುಕೊಂಡ ವ್ಯಕ್ತಿಗಳ  ಬಗ್ಗೆ ಬರೀತೀನಿ. ಯಾಕಂದ್ರೆ ಅವ್ರಿಗೂ ಇದಕ್ಕೂ ಸಂಬಂಧ ಇದೆ.

ನಿಮಗೆಲ್ಲ ನೆನಪಿರಬಹುದು ಬೀಚಿಯವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಬಗ್ಗೆ ನಾನು ಒಂದು ಲೇಖನ ಬರೆದಿದ್ದೆ. ಅದರಲ್ಲಿ ನಾನು ಬೀಚಿಯವರು ಅಷ್ಟು ದೊಡ್ಡ ಬುದ್ಧಿಜೀವಿಯಾಗಿದ್ದರೂ ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು. ಈಗಿನ ಬುದ್ಧಿಜೀವಿಗಳಿಗೆ ಉಳಿದೆಲ್ಲಾ ಪ್ರಜ್ಞೆಗಳಂತೆ  ಹಾಸ್ಯ ಪ್ರಜ್ಞೆಯೂ ಇಲ್ಲ ಎಂದಿದ್ದೆ. ಆಗ ನಮ್ಮಾಫಿಸೀಗೆ ಒಂದು ಫ್ಯಾಕ್ಸ್ ಬಂತು, ಒಬ್ಬ ದೊಡ್ಡ ಲೇಖಕರು `ಇವ್ನು ನಮ್ಮನ್ನು ಆಡಿಕೊಂಡು ನಗ್ತಿದಾನೆ. ಸೋಮಸೂಜಿ, ಕೆಂಪಾ, ಓಎಂದ ರಾವ್ ಮುಂತಾದವರಿಗೆ  ನಗಲಿಕ್ಕೆ ಹಲ್ಲೇ ಇಲ್ಲ ಅಂತ ಆರೋಪಿಸಿದ್ದಾನೆ.’ ಅಂತ ಹೇಳಿದ್ರು. ನಮ್ಮ ಸಂಪಾದಕರು ಆ ಲೇಖಕರ ಫೋನ್ ನಂಬರ್ ಕೊಟ್ಟು ಮಾತಾಡು, ಅವರೇನಂದ್ರು ಅಂತ ರೆಕಾರ್ಡ್ ಮಾಡಿಕೋ ನಾಳೆ ನ್ಯೂಸಿಲ್ಲದಿದ್ರೆ `ದಂತ-ಕ್ಯಾತೆ’ ಅಂತ ವರದಿ ಪ್ರಕಟಿಸಿ ಎಸ್.ಎಂ.ಎಸ್ ಪೋಲ್ ಮಾಡಬಹುದು ಅಂದ್ರು. ನಾನು ಅವ್ರಿಗೆ ನೇರವಾಗಿ ಕೇಳ್ದೆ, `I stand by my views. If  you people have teeth and gums, not to mention guts, why don`t you smile to camera?’ ಅತ್ತಕಡೆಯಿಂದ ಬ್ಬೆಬ್ಬೆಬ್ಬೆ ಅಂತ ಉತ್ತರ ಬಂತು. `I don`t need to answer to you on phone, because my dentures are missing from yesterday. I`ll lodge my protest infront of gandhi statue tomorrow.’ ಅಂತ ಮತ್ತೆ ಫ್ಯಾಕ್ಸ್ ಕಳಿಸಿದ್ರು. ಹಲ್ ಸೆಟ್ ಇಲ್ಲದಿದ್ರೂ ಗಾಂಧಿ ಅದೆಷ್ಟು ಚೆನ್ನಾಗಿ ನಗ್ತಾ ಇದ್ರು, dentures ಇಟ್ಟುಕೊಂಡೂ ನಗಲಿಕ್ಕೆ ಬಾರದ ಈ ನಗೆ ವಿರೋಧಿ, ಗಾಂಭೀರ್ಯ ಪಕ್ಷಪಾತಿ ವ್ಯಕ್ತಿಯ ಬಗ್ಗೆ ಹೇಳ್ತೀನಿ.

ಅನೈಸರ್ಗಿಕ ದಂತಪಂಕ್ತಿಯಿರುವ ಈ ಅದಂತ ಪೂರ್ತಿ ಎಂಥಾ ಸಾಹಿತಿ ಅಂತ ಎಲ್ಲರಿಗೂ ಗೊತ್ತು. ಅವರೆಂಥಾ ದೊಡ್ಡ ಕಾಪಿ ಕ್ಯಾಟು, ಹಲ್ಕಿರಿಯುವುದರ ವಿರೋಧಿ ಎಂದು ನಾನು ಹೇಳಬೇಕಿಲ್ಲ. ಇವರು ಬರ್ಮಿಂಗ್ ಹ್ಯಾಮಿನಲ್ಲಿ ಡಾಕ್ಟರೇಟ್ ಪಡೆಯೋಕೆ, ನವ್ಯ ಕಾವ್ಯ ಚಳುವಳಿಯ ಹರಿಕಾರರಾಗುವುದಕ್ಕೆ, ಲಂಕೇಶ್, ಪೂರ್ಣ ಚಂದ್ರ ತೇಜಸ್ವಿಯವರ ಸರಿ ಸಮಾನರಾಗುವುದಕ್ಕೆ, ಒಂದಿಡೀ ಹೊಸ ತಲೆಮಾರಿನ ಲೇಖಕರಿಗೆ ಮೇಷ್ಟ್ರು ಆಗಿರುವುದಕ್ಕೆ, ಎಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜದ ವಿದ್ಯಮಾನಗಳ ಬಗ್ಗೆ ದಿಟ್ಟ ನಿಲುವು ತಳೆಯುವುದಕ್ಕೆ ಹಗಲು ರಾತ್ರಿಯೆನ್ನದೆ ಅದೆಷ್ಟು ಕಾಪಿ ಹೊಡೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನ ತಿಳಿಯೋದಕ್ಕೆ ಅವರ ಕತೆಗಳನ್ನ, ಕವಿತೆಗಳನ್ನ, ವಿಮರ್ಶೆಯನ್ನ ಓದಬೇಕಿಲ್ಲ.

ಇಂತಹ ಅದಂತ ಪೂರ್ತಿಗಳು ಇಷ್ಟೆಲ್ಲಾ ಬರೆದ್ರೂ ಒಂದೇ ಒಂದು ಹಾಸ್ಯ ಲೇಖನ ಬರೆದಿಲ್ಲ. ಯಾವುದೋ ದೇಶದ ಕವಿಯನ್ನು ಕನ್ನಡಕ್ಕೆ ಪರಿಚಯ ಮಾಡಿಸಿದರೂ ಕನ್ನಡದ ಹಾಸ್ಯ ಸಾಹಿತ್ಯವನ್ನು ವಿಮರ್ಶಿಸಿಲ್ಲ. ಜನ ಸಾಮಾನ್ಯರ ದಿನ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಾಸ್ಯದ ಕುರಿತು ಒಂದೇ ಒಂದು ಒಳ್ಳೆ ಮಾತಾಡಿದ್ದಾರಾ? ಇದರಿಂದ ಏನು ತಿಳಿಯುತ್ತೆ ಅಂದ್ರೆ, ಅದಂತ ಮೂರ್ತಿಗಳು ನಗೆ ವಿರೋಧಿ ಹಾಗೂ ಜೀವವಿರೋಧಿ.

ಇವರೊಬ್ಬರೇ ಅಲ್ಲ, ಯಾವ ಬುದ್ಧಿಜೀವಿಯನ್ನೇ ತೆಗೆದುಕೊಳ್ಳಿ. ನಗುವುದು ಎಂದರೆ ಅವರಿಗೆ ತಿಳಿದೇ ಇಲ್ಲ. ಇವರು ಮಾತಾಡೋಕೆ ಶುರು ಮಾಡಿದರೆ ಜನರು ತೂಕಡಿಸಲು ತೊಡಗುತ್ತಾರೆ. ಓಶೋ ಒಂದು ಮಾತು ಹೇಳ್ತಾರೆ, `ನಗುವುದಕ್ಕೆ, ನಗಿಸುವುದಕ್ಕೆ, ನಗಲ್ಪಡುವುದಕ್ಕೆ ಅತಿ ಹೆಚ್ಚಿನ ಬೌದ್ಧಿಕ ಪ್ರಾಮಾಣಿಕತೆ ಬೇಕು. ಗುಂಡಿಗೆ ಬೇಕು.’ ಇವರು ಕೊಚ್ಚಿಕೊಳ್ಳುವ ಮಾರ್ಕ್ಸಿಸ್ಟ್ ಸಮಾಜದಲ್ಲಿ ನಗುವುದಕ್ಕೂ ಸರಕಾರದ ಅಪ್ಪಣೆ ಇರಬೇಕು ಎಂದು ಗೊತ್ತಿಲ್ಲವೇ?

ಇದೇ ಸಂದರ್ಭದಲ್ಲಿ ಇನ್ನೊಬ್ಬ ಢೋಂಗಿ ಬುದ್ಧಿಜೀವಿ ಪತ್ರಕರ್ತರ ಬಗ್ಗೆ ಬರೀಬೇಕು. ಇವರ ಬಗ್ಗೆ ನಾನು ನಮ್ಮ ಪತ್ರಿಕೆಯ ವಾಚಕರ ವಾಣಿಯಲ್ಲಿ , ನನ್ನ ವೆಬ್ ಸೈಟಿನಲ್ಲಿ ಬೇರೆಯವರ ಹೆಸರಿನಲ್ಲಿ ಆಗಲೇ ತುಂಬಾ ಬರೆದಿದ್ದೀನಿ. ಆದರೂ ಇಲ್ಲಿ ಈತನ ಲಂಪಟತೆಯನ್ನು ಬಯಲು ಮಾಡಲೇಬೇಕು.ಆತ ಬೇರಾರೂ ಅಲ್ಲ ಸಾಯ್ ಬೆಂಗಳೂರು ಅನ್ನೋ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾದ ಕಪ್ಪು ಪತ್ರಿಕೆಯ  ಸ್ವಯಂ ಘೋಷಿತ ಸಾರಥಿ. ಶಿವರಾಮ ಕಾರಂತರು ಇಂತಹ ಪತ್ರಿಕೋದ್ಯಮವನ್ನು ಚರಂಡಿ ಪತ್ರಿಕೋದ್ಯಮ  ಎಂದು ಜರೆದಿದ್ದರು. ಇಂತಹ ಚರಂಡಿಯಲ್ಲಿ  ತಾನು ಪ್ರಾಮಾಣಿಕ, ಹೃದಯವಂತ, ನಿಷ್ಠುರ ಪತ್ರಕರ್ತ, ಕಷ್ಟದಲ್ಲಿರುವವರಿಗೆಲ್ಲಾ ನೆರವಾಗುವ ಆಪ್ತಬಂಧು ಎಂದು ಫೋಸ್ ಕೊಡುತ್ತಾ ಅಕ್ಷರಗಳ ಊದುಬತ್ತಿ ಹಚ್ಚಿಟ್ಟುಕೊಂಡು ಕೂತಿರುವ ಗವಿ ಬಿಳಿಗೆರೆಗೆ ಹಾಸ್ಯ ಅಂದರೆ ಏನು ಗೊತ್ತು? `ಕೇಳಿ’ ಅನ್ನೋ ದ್ವಂದ್ವಾರ್ಥವಿರುವ ಅಂಕಣದಲ್ಲಿ ತಾನೇ ಬರೆದ ಪ್ರಶ್ನೆಗೆ ಪೋಲಿಯಾಗಿ, ತನ್ನ ಮಕ್ಕಳೂ ಸಹ ಓದಲಾಗದಷ್ಟು ಅಸಹಸ್ಯವಾಗಿ ಉತ್ತರ ಕೊಟ್ಟು ಅದನ್ನೇ ಹಾಸ್ಯ ಪ್ರಜ್ಞೆ ಎಂದು ಕರೆಯುವುದು ಬಿಟ್ಟರೆ ಈತ ಒಂದಾದರೂ ಹಾಸ್ಯ ಲೇಖನ ಬರೆದಿದ್ದಾರಾ? ಆ ಅಂಕಣದಲ್ಲಿ  ಶ್ರೀಮತಿ ಶಿಲ್ಪಾ  ಶೆಟ್ಟಿ ಕುಂದ್ರಾ, ಶ್ರೀಮತಿ ಐಶ್ವರ್ಯ ಬಚ್ಚನ್, ಸಾನಿಯಾ ಮಿರ್ಜಾರನ್ನು ತನ್ನ ಹಿಂದೆ ಬಿದ್ದಿರುವ ಪ್ರೇಯಸಿಯರು ಅನ್ನುವ ಹಾಗೆ ಕೀಳಾಗಿ ಬರೆಯುವ ಈತ ಹೆಣ್ಣು ಮಕ್ಕಳಿಗೆ ತಂದೆ, ಅಣ್ಣ, ಬಂಧು ಆಗಲು ಸಾಧ್ಯವೇ? ಈತನ ಬಂಧುತ್ವ, ಬಾಂಧವ್ಯ ಎಂಥದ್ದು ಎಂಬುದು ಪತ್ರಿಕೆಗಳಲ್ಲಿ ಬಯಲಾಗುತ್ತಿದೆ. ಮೊಮ್ಮಕ್ಕಳು ಹುಟ್ಟಿದ ಮೇಲೂ ಐ ಲವ್ ರವಿಕೆ  ಅನ್ನೋ ಥರ ಪತ್ರ ಪ್ರೇಮ ಬರೆಯೋದು, ಪೋಲಿ ಪುಸ್ತಕಗಳನ್ನು ಅನುವಾದಿಸುವುದು ನೋಡಿದರೇನೇ ತಿಳಿಯುತ್ತೆ  ಆತ ಎಂಥಾ ಢೋಂಗಿ ವ್ಯಕ್ತಿ ಎಂದು.

ಭಾರತವನ್ನು ಬೈದು ದೊಡ್ಡವರಾದ ಬರಹಗಾರರು, ಭಾರತದ ಬಡತನವನ್ನು, ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಚಿತ್ರೋದ್ಯಮದವರು, ಮುಸ್ಲೀಮರ ಬಗ್ಗೆ ಒಲವಿನಿಂದ ಮಾತನಾಡುವ ಸಿನೆಮಾ ನಟರು ಯಾರನ್ನೇ ಗಮನಿಸಿ ಇವರೆಲ್ಲರೂ ಹಾಸ್ಯವನ್ನು ಕೀಳಾಗಿ ಕಾಣುವವರು. ನಗೆ ವಿರೋಧಿಗಳು, ನಗುವುದು ಸಹಜ ಧರ್ಮ ಎಂದು ಡಿವಿಜಿ ಹೇಳಿದ್ದಾರೆ. ಹೀಗಾಗಿ ಇವರೆಲ್ಲ ಸಹಜವಾದ ನಿಸರ್ಗ ವಿರೋಧಿಗಳು, ಧರ್ಮ ವಿರೋಧಿಗಳು. ಸದಾ ನಗುವ ಸದಾನಂದ ಗೌಡ, ಶೋಭಾ ಕರಂದ್ಲಾಜೆಯವರನ್ನು ನೋಡಿಯಾದರೂ ನಗುವುದನ್ನು ಬುದ್ಧಿಜೀವಿಗಳು ಕಲೀಬೇಕು. ಇಲ್ಲವಾದರೆ ಮುಂದೊಂದು ದಿನ ಜನರು ಹೇಳುತ್ತಾರೆ, ಅದಂತಪೂರ್ತಿ sucks!

ವಸ್ತುನಿಷ್ಟ ಅಂಕಣಕಾರನಾಗಿ ನಗೆ ನಗಾರಿಯ ವಾರ್ಷಿಕ ವಿಶೇಷಾಂಕಕ್ಕೆ ಈ ಬರಹ ಬರೆದಿದ್ದೇನೆ… ಒಂದೇ ಒಂದು ಸಾಲಿನಲ್ಲಾದರೂ hate mongering, ad hominem, digressing ವಾದ ಕಂಡು ಬಂದಿದೆಯೇ? ಖಂಡಿತಾ ಇಲ್ಲ. ಒಂದು ವೇಳೆ  ಇದೆ ಎಂದು ಯಾರಾದರೂ ಹೇಳಿದರೆ ಅವರು ನಗೆ ವಿರೋಧಿಗಳು, ಜೀವವಿರೋಧಿಗಳು, ಧರ್ಮ ವಿರೋಧಿಗಳು… losers!

ಮಳೆಯಲಿ… ಜೊತೆಯಲಿ…

3 ಮಾರ್ಚ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

ಮಳೆಯಲಿ… ಜೊತೆಯಲಿ… ಸಿಕ್ಕಲಿ ಒಂದಾದರೂ ಇಲಿ!