Tag Archives: IPL

ಐಪಿಎಲ್ ಫೇಸ್ ಬುಕ್‌ಗೆ ಸ್ಥಳಾಂತರ : ಮೋಡಿ

18 ಫೆಬ್ರ

ಭದ್ರತೆ ದೃಷ್ಟಿಯಿಂದ ಅಭೂತಪೂರ್ವ ಕ್ರಮ

 

Untitled pictureನವದೆಹಲಿ, ಫೆ.೧೮: ಮಾರ್ಚ್ ೧೨ರಿಂದ ಶುರುವಾಗಲಿರುವ ಐಪಿಎಲ್ ಮೂರನೆಯ ಆವೃತ್ತಿಯನ್ನು ಭದ್ರತೆ ಕಾರಣದಿಂದ ಫೇಸ್ ಬುಕ್ಕಿಗೆ ಸ್ಥಳಾಂತರಿಸಲು ಸರ್ವಸಮ್ಮತವಾಗಿ ತೀರ್ಮಾನಿಸಿರುವುದಾಗಿ ಐಪಿಎ ಲ್ ದೊರೆ ಅಲೆತ ಮೋಡಿ ತಿಳಿಸಿದ್ದಾರೆ.

ಇಲ್ಲಿಯ ಸ್ಥಳೀಯ ಸೈಬರ್ ಕೆಫೆಯಲ್ಲಿ ನೆರೆದ ಸುದ್ದಿಗಾರರೊಂದಿಗೆ ಮಾತನಾಡಿದ ಮೋಡಿ ಭಯೋತ್ಪಾದಕ ಸಂಘಟನೆ ಹುಜಿಯ ಮುಖಂಡನ ಬೆದರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಹರ್ಕತುಲ್ ಜಿಹಾದಿ ಇಸ್ಲಾಮಿ(ಹುಜಿ)ಯ ಕಮ್ಯಾಂಡರ್ ಇಲಿಯಾಸ್ ಕಶ್ಮಿರಿ ಭಾರತದಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿ, ಐಪಿಎಲ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದೇಶಿ ಆಟಗಾರರು ತಮ್ಮ ಜೀವಕ್ಕೆ ತಾವೇ ಜವಾಬ್ದಾರರು, ಪಾಕಿಸ್ತಾನದ ಆಟಗಾರರ ಜೀವಗಳಿಗೆ ಮಾತ್ರ ತಾವು ಜವಾಬ್ದಾರರು ಎಂದು ಬೆದರಿಕೆಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ರೀಡಾ ಪಟುಗಳ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತವಾಯಿತು.

ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಿ ರಾಜಸ್ಥಾನದ ತಂಡದ ಸೋಲಿಗೆ ಕಾರಣವಾಗಿದ್ದ ಮೋಡಿ ಈ ಬಾರಿ ಯಾರಿಗೂ ಅನ್ಯಾಯವಾಗದ ಹಾಗೆ ಸರ್ವ ಸಮ್ಮತವಾದ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. “ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮೆಲ್ಲ ಶೇರುದಾರರ ಹಿತರಕ್ಷಣೆ ಮುಖ್ಯ. ಹಾಗಂತ ನಾವು ಆಟಗಾರರ ಜೀವವನ್ನು ಲೆಕ್ಕಿಸುವುದಿಲ್ಲ ಎಂದೇನಿಲ್ಲ.” ಎಂದಿದ್ದ ಮೋಡಿ ಕಡೆಗೆ ಐಪಿಎಲ್ ಪಂದ್ಯಾವಳಿಗಳನ್ನು ಫೇಸ್ ಬುಕ್ಕಿನಲ್ಲಿ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ.

“ಫೇಸ್ ಬುಕ್ ವಿಶ್ವದಾದ್ಯಂತ ಸುರಕ್ಷಿತವಾದ ಕ್ರೀಡಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ರೈತರು ಕ್ರೀಡಾಮನೋಭಾವದಿಂದ ಬೆಳೆ ತೆಗೆಯುವುದಕ್ಕೆ ನೆರವಾಗಿದೆ. ಒಂಚೂರು ರಕ್ತಪಾತವಿಲ್ಲದೆ ಮಾಫಿಯಾಗಳು ಯುದ್ಧ ನಡೆಸಿಕೊಳ್ಳಲು ಸಹಾಯ ಮಾಡಿದೆ. ಹಿಂಸಾಚಾರವಿಲ್ಲದೆ ವ್ಯಾಂಪೈರುಗಳು ಸಹಜೀವನ ನಡೆಸುವುದಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಐಪಿಎಲ್ ಆಯೋಜಿಸಲು ಹರ್ಷವಾಗುತ್ತದೆ.”

ಮೋಡಿಯವರ ಈ ನಿರ್ಧಾರವನ್ನು ಸ್ವಾಗತಿಸಿರುವ ಫೇಸ್ ಬುಕ್ ನಿರ್ದೇಶಕ ಮಖೇಡಿ ಮ್ಯಾಥ್ಯುಸ್. “ಇದೊಂದು ಸ್ವಾಗತಾರ್ಹ ತೀರ್ಮಾನ. ಐಪಿಎಲ್ ಮೂರನೆಯ ಆವೃತ್ತಿಯನ್ನು ಫೇನ್ ಬುಕ್ಕಿನಲ್ಲಿ ಆಯೋಜಿಸಲು ನಮಗೂ ಹರ್ಷವಾಗುತ್ತದೆ. ಆಟಗಾರರು ತಮ್ಮ ತಮ್ಮ ದೇಶಗಳಲ್ಲೇ, ತಮ್ಮ ಮನೆಯ ಸೋಫಾಗಳಲ್ಲೇ ಕೂತು ಭಾಗವಹಿಸಬಹುದು. ವೀಕ್ಷಕರು ಕೂಡ ಆಫೀಸುಗಳಲ್ಲಿ, ಮನೆಗಳಲ್ಲಿ ಕೂತೇ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕಪಿಸೇನೆಗಳ ಬೆದರಿಕೆ, ಭಯೋತ್ಪಾದಕರ ಬೆದರಿಕೆಗಳಿಗೂ ಅಂಜದೆ ವಿಶ್ವದಾದ್ಯಂತ ಎಲ್ಲರೂ ಪಾಲ್ಗೊಳ್ಳಬಹುದು.”

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಂತರ್ಜಾಲದ ಪ್ರಭಾವವನ್ನು ಅವಗಣಿಸಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಿಲ್ಲ ಎಂದಿರುವ ತಂತ್ರಜ್ಞ ತಂತ್ರೇಶ್ ಜಾದವ್ “ಬೆರಳು ಮುರಿತ, ತೊಡೆ ಸಂದು, ಭುಜದ ನೋವುಗಳಿಲ್ಲದೆ ಆಟಗಾರರು ಆರಾಮವಾಗಿ ಆಡಬಹುದಾದ ಅಂತರ್ಜಾಲದ ಐಪಿಎಲ್ ಆವೃತ್ತಿ ಕ್ರಾಂತಿಕಾರಿಯಾದ ಬೆಳವಣಿಗೆ. ಇದರಿಂದ ಆಟಗಾರರು ತಮ್ಮ ಆಟಕ್ಕೆ ಯಾವ ರೀತಿಯಿಂದಲೂ ಸಂಬಂಧಿಸದ ದೈಹಿಕ ಫಿಟ್‌ನೆಸ್ಗಾಗಿ ಶ್ರಮ ಪಡಬೇಕಿಲ್ಲ. ಅಲ್ಲದೆ ಕೂತಲ್ಲೇ ದೇಹವನ್ನು ಬಿಟ್ಟು ಸಂಚಾರ ಹೋಗಿ ಬರುತ್ತಿದ್ದ ಪೌರಾಣಿಕ ಕತೆಗಳನ್ನು ನಿಜ ಮಾಡಿ ತೋರಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಜೈ ಐಟಿ!”

ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ

28 ಮೇ

(ನಗಾರಿ ಕ್ರೀಡಾ ಬ್ಯೂರೋ)

ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…

ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು ಹುಟ್ಟಿರುವುದು ಮನುಷ್ಯರಾಗಿ ಎಂಬುದರ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಬದುಕುತ್ತಿರುವಾಗ ಒಬ್ಬೊಬ್ಬನಿಗೆ ಕೋಟಿ ಕೋಟಿ ಹಣವನ್ನು ಸುರಿಯುವುದು ಕಂಡು ನಮ್ಮ ವ್ಯವಸ್ಥೆ ಇದ್ದರೆ ಹೀಗಿರ ಬೇಕು, ಪ್ರತಿಭೆ ಇದ್ದವನ ಕಾಲ ಕೆಳಗೆ ಜಗತ್ತನ್ನೇ ಹೆಡೆ ಮುರಿ ಕಟ್ಟಿ ತಂದು ಮಲಗಿಸಬೇಕು. ಪ್ರತಿಭೆ ಇಲ್ಲದ ಬ್ರೂಟುಗಳನ್ನು ಬದುಕುವುದಕ್ಕೂ ಬಿಡಬಾರದು. ಹೆಂಡವನ್ನೋ, ಕಳ್ಳಮಾಲನ್ನೋ, ಪಾನೀಯದ ಹೆಸರಿನಲ್ಲಿ ಕಾರ್ಕೋಟಕವನ್ನೋ ಇವ್ಯಾವುದೂ ಇಲ್ಲವಾದರೆ ಕನಿಷ್ಠ ಪಕ್ಷ ಮಾನ – ಮರ್ಯಾದೆಯನ್ನಾದರೂ ಮಾರಿಕೊಂಡು  ಕಾಸು ಕೂಡಿಡಲಾಗದ ತಂದೆಗೆ ಮಕ್ಕಳನ್ನು ಪಡೆಯುವ ಹಕ್ಕು ಹೇಗೆ ಬರುತ್ತದೆ. ಓದಲು ಕಾಸಿಲ್ಲದೆ ಶಾಲೆಗೆ ಸೇರಲು ಆಗಲಿಲ್ಲ, ಸರ್ಕಾರಿ ಶಾಲೆಗೆ ಸೇರಿದರೂ ಶಿಕ್ಷಕರನ್ನೇ ಏನು, ಶಾಲೆಯ ಕಟ್ಟಡವನ್ನೇ ನೋಡಲಿಲ್ಲ, ಇವೆಲ್ಲಾ ಇದ್ದರೂ ಒಳ್ಳೆಯ ಕೋಚಿಂಗ್ ಪಡೆದು ಮಾರ್ಕು ಗಿಟ್ಟಿಸಿ ತೋರಿಸಲು ಸಾಧ್ಯವಾಗಲಿಲ್ಲ ಎಂಬ ಮಾತ್ರಕ್ಕೆ ಬಡವರ, ದರಿದ್ರರ ಮಕ್ಕಳು ಪ್ರತಿಭಾವಂತರಾಗುತ್ತಾರೆಯೇ? ಇಲ್ಲ. ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಬಿಡಬೇಕು ಎಂದರು ನಗೆಸಾಮ್ರಾಟ್. ‘ಬುದ್ಧಿ, ನಿಮ್ಗೆ ಬುದ್ಧಿ ಇಲ್ಲ. ನಮ್ಮ ಸರ್ಕಾರದವ್ರು ಇದ್ನೆಲ್ಲಾ ಯಾವಾಗೋ ಯೋಚ್ಸಿದಾರೆ ಗೊತ್ತುಂಟಾ? ಅವ್ರೂ ನಿಮ್ಮಂಗೇ ತೀರ್ಮಾನಕ್ಕೆ ಬಂದ್ರು. ಆದ್ರೆ ಅದಕ್ಕೆಲ್ಲಾ ಒಂದು ಗುಂಡನ್ನ ಯೇಸ್ಟ್ ಮಾಡುವಷ್ಟು ಮಡ್ಡಿ ಅಲ್ಲ ನಮ್ಮ ಸರ್ಕಾರ. ಅದ್ಯಾರೋ ಇಟ್ಲರ್ರು  ಯಹೂದಿಗಳ್ನೆಲ್ಲಾ ಗುಂಡಿಯಾಗೆ ಆಕಿ ಗ್ಯಾಸು ಬಿಟ್ಟು ಸಾಯ್ಸಿ ಲಕ್ಷಾಂತರ ರೂಪಾಯಿ ಲುಕ್ಸಾನು ಮಾಡಿಕೊಳ್ಳಾಕೆ ನಮ್ಮ ಸರ್ಕಾರ ಏನು ಮಣ್ಣು ತಿಂತತಾ? ಆ ದರಿದ್ರದವಕ್ಕೆ ಒಟ್ಟೆಗೆ ಹಿಟ್ಟೇ ಇಲ್ಲದ ಹಂಗೆ ಮಾಡಿದ್ರೆ, ಚಳಿಯಾಗೆ ನಡುಗೋವ್ರಿಗೆ ಕಂಬಳಿ ಸಿಗದಂಗೆ ಮಾಡಿದ್ರೆ ಅವ್ರಾಗೆ ಜಂತು ಸತ್ತಂತೆ ಸಾಯ್ತಾರಲುವ್ರಾ? ಅಷ್ಟಕ್ಕೂ ಯಾವ್ನಾದ್ರೂ ಗಟ್ಟಿ ಹೈದ ಬದುಕುಳುದ್ರೆ ಇದ್ದೇ ಐತಲ್ಲಾ, ಕಳ್ಳ ಭಟ್ಟಿ…’ ಎಂದ ಚೇಲ.

‘ಹನ್ನೊಂದು ಮಂದಿ ಮೂರ್ಖರು ಆಡುವ ಆಟವನ್ನು ಹನ್ನೊಂದು ಸಾವಿರ ಮಂಡಿ ಮೂರ್ಖರು ನೋಡುತ್ತಾ ಕೂರುವುದೇ ಕ್ರಿಕೆಟ್’ ಅಂತ ಅದ್ಯಾವುದೋ ಭೂಪ ಹೇಳಿದ್ದನ್ನೇ ಗಾಸ್ಪೆಲ್ ಟ್ರುಥ್ ಅಂತ ನಂಬ್ಕೋಬೇಕಾ (ಈಗ ಬಿಡಿ, ಗಾಸ್ಪೆಲ್ಲು ಹೇಳಿರುವುದರಲ್ಲೇ ಟ್ರುತ್ಥು ಇಲ್ಲ ಅಂತ ಸಂಶೋಧನೆ ಮಾಡ್ತಿದ್ದಾರೆ!)?  ಅಂತ ತಲೆ ಕೆರೆದುಕೊಳ್ತಾ ಸಾಮ್ರಾಟರು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅಲ್ಲಿ ನೆರೆದಿದ್ದ ಯುವ, ಹದಿ-ವೃದ್ಧಾಪ್ಯದ, ಮಧ್ಯವಯಸ್ಕರನ್ನು ಸಂದರ್ಶಿಸಲು ಸಿದ್ಧರಾದರು.

ದೂರದ ದಿಗಂತದ ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟಿಕೊಂಡು ನಿಂತ ಸಾಮ್ರಾಟರನ್ನು ಕೂಗಿ ಕರೆದ ಚೇಲ ಕುಚೇಲ ಅತ್ತ ಕಡೆ ನೋಡಿ ಎಂದ. ಅಲ್ಲಿ ಕ್ರೀಡಾಂಗಣದ ಗೇಟಿನ ಹೊರಗೆ ನೂರಾರು ಮಂದಿ ಕೈಲಿ ಕ್ರಿಕೆಟ್ ಬ್ಯಾಟು ಬದಲಿಗೆ ಹಾಕಿ ಕೋಲು, ತಿರುಪತಿ ತಿಮ್ಮಪ್ಪನ ಹಳೆಯ ಮೇಲಿರುವ ಸಿಂಬಲ್ಲಿನ ಆಕಾರದ ಝಳಪಿಸುವ ಆಯುಧಗಳನ್ನು ಹಿಡಿದುಕೊಂಡು ಗಲಾಟೆ ಹಾಕುತ್ತಿದ್ದರು. ಕೂಡಲೆ ಸಾಮ್ರಾಟರು ಚೇಲನೊಂದಿಗೆ ಅಲ್ಲಿಗೆ ಧಾವಿಸಿದರು. ಆ ಗುಂಪಿನ ಮುಂಚೂಣಿಯಲ್ಲಿ ಮಿಂಚುತ್ತಿದ್ದ ಹುರಿಯಾಳನ್ನು ಪಕ್ಕಕ್ಕೆ ಕರೆದು, ‘ಏನಯ್ಯಾ ಸಮಾಚಾರ’ ಎಂದರು. ಆ ಹುಡುಗ ವೀರಾ‘ವೇಷ’ದಿಂದ ‘ಅಲ್ರೀ, ನಮ್ಮ ದೇಶ ಎಂಥದ್ದು? ನಮ್ಮ ಸನಾತನ ಸಂಸ್ಕೃತಿ ಎಂಥದ್ದು? ನಾವು ಇಡೀ ಜಗತ್ತಿನ ಆಧ್ಯಾತ್ಮಿಕತೆಯನ್ನು ಕಲಿಸಿಕೊಟ್ಟವರು. ಇಡೀ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳಿಕೊಟ್ಟವರು ಭಾರತೀಯರು… ನಾವು… ನಾವು…’ ಎನ್ನುವಷ್ಟರಲ್ಲಿ ಗಂಟಲು ರೇಗಿತು. ‘ಒಂದು ಸಿಗರೇಟಿದೆಯಾ ಸರ್ರು…’ ಅಂದು, ಸಾಮ್ರಾಟರಿಂದ ಪಡೆದು ಅದರ ತುದಿಗೆ ಬೆಂಕಿಕೊಟ್ಟು ಮಾತು ಮುಂದುವರೆಸಿದ, ‘ಹೆಣ್ಣಿಗೆ ದೇವಿಯ ಸ್ಥಾನವನ್ನು ಕೊಟ್ಟವರು ನಮ್ಮ ಪೂರ್ವಜರು. ಅದಕ್ಕಾಗಿಯೇ ನಾವು ಇಂದು ಆಕೆಯನ್ನು ಅಡುಗೆಮನೆ, ದೇವರ ಮನೆಗೆ ಸೀಮಿತಗೊಳಿಸಿ ಹಿರಿಯರ ಆದರ್ಶ ಪಾಲಿಸುತ್ತಿರುವುದು. ಹೆಣ್ಣಿಗೆ ಮಾತೆಯಂತ ಕರೆದವರು ನಮ್ಮ ಹಿಂದಿನವರು. ಅದಕ್ಕಾಗಿಯೇ ಆಕೆಗೆ ‘ಮಾತೆ’ಯಾಗುವ ಕೆಲಸ ಬಿಟ್ಟು ಬೇರಾವುದಕ್ಕೂ ಅವಕಾಶ ಸಿಗದ ಹಾಗೆ ನೋಡಿಕೊಂಡಿದ್ದೇವೆ. ನಾವು ಹೆಣ್ಣಿಗೆ ಇಂಥಾ ಮರ್ಯಾದೆಯನ್ನು ಮಾಡುತ್ತಿರುವಾಗ ಇವರು ಕ್ರಿಕೆಟ್ ಆಡುವ ಇಪ್ಪತ್ತೆರಡು ಮಂದಿ ಗಂಡಸರು ಹಾಗೂ ಅದನ್ನು ನೋಡುವುದಕ್ಕೆ ಬರುವ ಗಂಡಸರ ಮುಂದೆ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದಕ್ಕಾಗಿ ‘ಚೀರ್ ಲೀಡರ್ಸ್’ನ್ನ ಕರೆಸಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ. ಅದಕ್ಕೇ ನಮ್ಮ ‘ಶಾಂತಿಯುತ’ ಪ್ರತಿಭಟನೆ’ ಎನ್ನುತ್ತಾ ಪಕ್ಕದಲ್ಲಿ ಬಿಟ್ಟಿದ್ದ ದೊಣ್ಣೆಯನ್ನೆತ್ತಿಕೊಂಡು ಹೊರಟ.

ಈ ಗುಂಪಿನ ಪಕ್ಕದಲ್ಲೇ ಮತ್ತೊಂದು ಗುಂಪು ನೆರೆಯಲು ಶುರುವಾಗಿತ್ತು. ಅವರದೂ ಅದೇ ಫ್ಯಾನ್ಸಿ ಡ್ರೆಸ್ಸು. ಇವರ  ಗೋಳೇನು ಕೇಳಿಕೊಂಬೋಗು ಎಂದು ಸಾಮ್ರಾಟರು ಕುಚೇಲನನ್ನು ಅಟ್ಟಿದರು. ‘ಅಯ್ಯೋ ಸಾರ್. ಇಲ್ಲಿ ಇವ್ರು ಸಂಸ್ಕಾರ, ಸಂಸ್ಕೃತಿ ಅಂತ ಗಲಾಟೆ ಮಾಡಾಕೆ ಜನರನ್ನ ಬಾಡಿಗೆ ತಂದದ್ದು ಗೊತ್ತಾಗಿ ಅದ್ಯಾರೋ ರೀಜನಲ್ ಓರಾಟಗಾರರು ಓಡಿ ಬಂದ್ರಂತೆ. ಈ ಸ್ಟೇಡಿಯಮ್ಮಿನವ್ರು ಇದೇಸದಿಂದ ಹುಡುಗೀರ್ನ ಕುಣಿಯೋಕೆ ಕರೆಸಿರೋದ್ನ ಕಂಡು ಅವರ ಮುಖಂಡ… ಪ್ರಾದೇಶಿಕ ಪ್ರತಿಭೆಗಳಿಗೆ ಅವಮಾನವಾಗಿದೆ. ನಿಮಗೆ ನಮ್ಮ ಸ್ಟೇಡಿಯಮ್ಮು ಬೇಕು, ನಮ್ಮ ಜನರು ಟಿಕೆಟು ಖರೀದಿಸ್ಬೇಕು, ನಮ್ಮ ಜನರ ದುಡ್ಡು ಬೇಕು ಆದರೆ ನಮ್ಮವರು ಬೇಡ. ಎಲ್ಲದರಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಬೇಕು. ಅಂತ ಓರಾಟ ಶುರು ಅಚ್ಚಿಕೊಂಡವ್ರಂತೆ’ ವರದಿ ಒಪ್ಪಿಸಿದ ಕುಚೇಲ.

ನಮ್ಮ ಯುವಕರಿಗೆ ಪ್ರತಿಭಟನೆಗೆ ಎಂತೆಂಥಾ ವಿಷಯಗಳು ಸಿಕ್ಕುತ್ತವೆ. ಪೂರ್ ಫೆಲೋ ಗಾಂಧಿ ಕೇವಲ ಚಿಟಿಗೆ ಉಪ್ಪಿಗಾಗಿ ಸತ್ಯಾಗ್ರಹ ಮಾಡಿದ. ಇವರ ಬಳಿ ಇದ್ದಿದ್ದರೆ ಇನ್ನೂ ಎಷ್ಟೆಷ್ಟೋ ಮಹತ್ವದ ವಿಷಯಗಳು ಸಿಕ್ಕುತ್ತಿದ್ದವು ಪ್ರತಿಭಟನೆಗೆ ಎಂದು ಕೊಂಡು ಸಾಮ್ರಾಟರು ಕುಚೇಲನ ಸಮೇತ ಕ್ರೀಡಾಂಗಣದ ಒಳಕ್ಕೆ ಬಂದರು. ಎದುರಿಗೇ ನಾಲ್ಕೈದು ಮಂದಿ ಯುವಕರು, ಸ್ಫುರದ್ರೂಪಿಗಳು ಮುಖ ಗಂಟಿಕ್ಕಿಕೊಂಡು ಕುಳಿತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಗೆಸಾಮ್ರಾಟರು ಇಲ್ಲೊಂದು ಸ್ಟೋರಿ ಸಿಕ್ಕೀತು ಅಂತ ಅಂದುಕೊಂಡು ಅವರ ಬಳಿಗೆ ದೌಡಾಯಿಸಿದರು. ಸಾಮ್ರಾಟರು ಪತ್ರಿಕೆಯವರು ಎಂಬುದನ್ನು ಅರಿತ ಕೂಡಲೇ ಆ ಗುಂಪಿನವರೋ ಗೊಳೋ ಎಂದು ಅಳುತ್ತಾ ಫೋಟೊ ಫೋಸಿಗೆ ಸಿದ್ಧರಾದರು. ಸಾಮ್ರಾಟರು ಏನು ನಿಮ್ಮ ಚರಿತ್ರೆ ಎಂದು ಕೇಳುವ ಮೊದಲೇ ಒಬ್ಬ ಯುವಕ ‘ಅಂಕಲ್, ನೀವೇ ನೋಡಿ… ನಮ್ಮ ದೇಶದಲ್ಲಿ ಎಷ್ಟೆಲ್ಲಾ ಅಸಮಾನತೆ, ಶೋಷಣೆ ನಡೆಯುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಆಶ್ವಾಸನೆ ಕೊಟ್ಟಿದ್ದರೂ ಎಲ್ಲೆಲ್ಲೂ ಬರೀ ಅಸಮಾನತೆ, ಶೋಷಣೆ ನಡೆಯುತ್ತಿದೆ. ಎಲ್ಲಾ ಕಡೆ ಬರೀ ಪಾರ್ಶಿಯಾಲಿಟಿ.’ ಎಂದು ಮಾತಿಗೆ ತೊಡಗಿದ. ಸಾಮ್ರಾಟರಿಗೆ ಈ ಹುಡಗನ ಪ್ರಾಮಾಣಿಕ ಕಳಕಳಿಯನ್ನು ಕಂಡು ಮಮತೆ ಉಕ್ಕಿತು. ‘ಅಲ್ಲಾ ಅಂಕಲ್, ಕ್ರಿಕೆಟ್ ಆಡುವುದು ಹುಡುಗರು, ನೋಡುವ ಬಹುಪಾಲು ಮಂದಿ ಹುಡುಗರು ಹೀಗಿರುವಾಗ ಅಲ್ಲಿ ಮೈದಾನದಲ್ಲಿ ಕುಣಿಯುವುದಕ್ಕೆ ಮಾತ್ರ ಹುಡುಗಿಯರು ಬೇಕಾ? ಚೀರ್ ಗರ್ಲ್ಸ್ ಮಾತ್ರ ಬೇಕಾ? ಚೀರ್ ಬಾಯ್ಸ್ ಯಾಕೆ ಇರಬಾರದು. ಇದು ಹುಡುಗರಿಗೆ ತೋರುತ್ತಿರುವ ಅಸಡ್ಡೆ. ಇದು ಹುಡುಗರ ಮೇಲೆ ನಡೆಯುತ್ತಿರುವ ಶೋಷಣೆ. ಮಹಿಳಾ ಪ್ರಧಾನವಾದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಂಡಸರ ಶೋಷಣೆ’ ಎಂದು ಏರಿದ ದನಿಯಲ್ಲಿ ಭಾಷಣ ಚಚ್ಚುತ್ತಿರುವಂತೆಯೇ ನಗೆ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಬೇತಾಳದಂತೆ ಅಲೆದಾಡುತ್ತಿದ್ದ ‘ಭಾರತದ ಗಡಿಯಾರಗಳು’ ಎಂಬ ಅಚ್ಚ ಇಂಗ್ಲೀಷ್ ಪತ್ರಿಕೆಯ ವರದಿಗಾರ ನಮ್ಮ ಪತ್ರಿಕೆಯ ಮುಖಪುಟಕ್ಕೆ ಒಳ್ಳೆ ಕವರೇಜ್ ಸಿಕ್ಕಿತು ಅಂತ ಅಲ್ಲಿಗೆ ದೌಡಾಯಿಸಿದ. ಸಾಮ್ರಾಟರು ತಣ್ಣಗೆ ಅಲ್ಲಿಂದ ಜಾರಿಕೊಂಡರು.

ಸ್ಟೇಡಿಯಮ್ಮಿನಿಂದ ಹೊರಬಂದು ದಣಿವಾರಿಸಿಕೊಳ್ಳಲು ಸನಿಹದ ಅಂಗಡಿಯಲ್ಲಿ ನೀರು ಕೇಳಿದರೆ ಆತ ‘ನೀರಾದರೆ ಒಂದು ಬಾಟಲಿಗೆ ನೂರು ರೂಪಾಯಿ, ಬೀರಾದರೆ ಐವತ್ತು’  ಅಂದದ್ದು ಕೇಳಿ ದಿಗಿಲಾಗಿ ಓಡಲು ಶುರುಮಾಡಿದವರು ನಗಾರಿಯ ಕಛೇರಿ ತಲುಪಿದಾಗಲೇ ನಿಂತದ್ದು.

ಸೀರಿಯಲ್ ರಕ್ಕಸನ ಸಾವು?!

26 ಏಪ್ರಿಲ್

(ನಗಾರಿ ಮನೋರಂಜನಾ ಬ್ಯೂರೋ)

ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.

ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, “ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು” ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ.

ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ ಪ್ರಚಂಡ ಹುಟ್ಟಿಬಿಟ್ಟಿದ್ದಾನೆ. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!