Archive | ಮಾರ್ಚ್, 2009

ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’‘ದರ್ಶನ’

31 ಮಾರ್ಚ್

(ಖ್ಯಾತ ನಟಿ ಬಂದ್ರೆ ತಾರೇ  ಸಂದರ್ಶನಕ್ಕೆ ಹೋಗಿದ್ದ ಸಾಮ್ರಾಟರ ಆಲ್ಟರ್ ಈಗೋ ಕಳೆದ ಕೆಲವು ದಿನಗಳು ನಾಪತ್ತೆಯಾಗಿದ್ದು ನಮ್ಮ ಅನೇಕ ನಿಷ್ಠಾವಂತ ಓದುಗರಲ್ಲಿ ಆತಂಕವನ್ನೂ, ಸಂಶಯವನ್ನೂ ಮೂಡಿಸಿತ್ತು. ಸಾಮ್ರಾಟರ ಆಲ್ಟರ್ ಈಗೋದ ಆರೋಗ್ಯದ ಕಾಳಜಿ ಹೊಂದಿರುವವರಿಗೆ ಆತಂಕ ಉಂಟಾಗಿದ್ದರೆ, ಆ ಈಗೋದ ‘ಚಾರಿತ್ರ್ಯ’ದ ಮೇಲೆ ಕಾಳಜಿ ಇದ್ದವರಿಗೆ ಸಂಶಯ ಮೂಡಿತ್ತು. ಕಡೆಗೆ ಸಾಮ್ರಾಟರು ಈ ಆತಂಕ, ಸಂಶಯಗಳ ಮುಸುಕನ್ನು ಸರಿಸಲು ನಿರ್ಧರಿಸಿ ತಮ್ಮ ಚೇಲ ಕುಚೇಲನನ್ನು ಅಟ್ಟಿದರು. ಕುಚೇಲ ನಗೆ ಸಾಮ್ರಾಟರ ಆಲ್ಟರ್ ಈಗೋವನ್ನೂ, ಅದರ ಸಂದರ್ಶನವನ್ನೂ ಹಿಡಿದು ತಂದಿದ್ದಾನೆ. ಆದರೆ ಭದ್ರತೆಯ ಕಾರಣಗಳಿಂದ ಸಾಮ್ರಾಟರ ಆಲ್ಟರ್ ಈಗೋ ಇಷ್ಟು ದಿನ ಮಾಡುತ್ತಿದ್ದದ್ದೇನು ಎಂಬ ಸಂಗತಿಯನ್ನು ಬಯಲು ಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.)

ಸಂಜೆ ನಾಲ್ಕಕ್ಕೆ ಸಂದರ್ಶನದ ಸಮಯ ನಿಗದಿಯಾಗಿತ್ತು. ನಮ್ಮ ಆಲ್ಟರ್ ಈಗೋ ಮೂರು ಗಂಟೆ ಐವತ್ತೊಂಭತ್ತು ನಿಮಿಷದಿಂದಲೇ ಕಾದು ಕಾದು ಸುಸ್ತಾಗಿದ್ದ. ಬಂದ್ರೆ ತಾರೇಯವರು ಈ ಸಂದರ್ಶನಕ್ಕೆ ಮುಂಜಾನೆ ಆರರಿಂದಲೇ ಸಿದ್ಧರಾಗುತ್ತಿದ್ದರು ಎಂದು ತಿಳಿದು ಅಭಿಮಾನದಿಂದ ಈಗೋದ ಮನಸ್ಸು ಉಬ್ಬಿಹೋಯ್ತು. ಎಷ್ಟು ಅಧ್ಯಯನ ಶೀಲತೆ, ಎಂತಹ ಶಿಸ್ತು, ಏನು ಹೋಂ ವರ್ಕು ಎಂದು ಮೆಚ್ಚಿಕೊಂಡು ಲೊಚಗುಟ್ಟುತ್ತಿರುವಾಗ ತಾರೇಯವರು ಮುಂಜಾನೆಯಿಂದ ಮೇಕಪ್ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿಯಿತು. ಅಖಂಡವಾಗಿ ಹದಿನೇಳು ಬಾರಿ ಮೇಕಪ್ ಬದಲಾಯಿಸಿ ಸಂದರ್ಶನಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದುದು ತಿಳಿದು ಆಲ್ಟರ್ ಈಗೋಗೆ ತಲೆ ಸುತ್ತು ಬಂದಂತಾಯ್ತು. ಕಡೆಗೆ ತಮ್ಮ ಸಂದರ್ಶನ ಟಿವಿಯಲ್ಲಿ ಪ್ರಕಟವಾಗುವುದಿಲ್ಲವೆಂದೂ, ಕನಿಷ್ಠ ಪಕ್ಷ ಫೋಟೊ ತೆಗೆಯುವುದಕ್ಕೂ ತಮ್ಮ ಬಳಿ ಕ್ಯಾಮರಾ ಇಲ್ಲವೆಂದು ಸ್ಪಷ್ಟ ಪಡಿಸಿದ ನಂತರ ಎರಡೇ ತಾಸುಗಳಲ್ಲಿ ತಯಾರಿ ಮುಗಿಸಿ ಸಂದರ್ಶನಕ್ಕೆ ಹಾಜರಾದರೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಬಂದ್ರೆ ತಾ ರೇ.

ನ.ಸಾ: ಗುಡ್ ಈವನಿಂಗ್ ಮೇಡಂ. (ಹ್ಯಾಂಡ್ ಶೇಕ್ ಮಾಡಲು ಕೈ ಮುಂದೆ ಚಾಚುತ್ತಾ…)

ಬ.ತಾ: (ಸರ್ಕಾರಿ ಗುಮಾಸ್ತೆ ತನ್ನ ಟೇಬಲ್ ಮೇಲೆ ಬಂದ ಫೈಲನ್ನು ನಿರ್ಲಕ್ಷ್ಯದಿಂದ ಕಾಣುವಂತೆ ಮುಂದೆ ಬಂದ ಕೈಯನ್ನು ಕಂಡು) ಹ್ಹಾ! WWW.MIRCHIGOSSIPS.COM

ನ.ಸಾ: (ಕೈ ಕುಲುಕುವ ಭಾಗ್ಯದಿಂದ ವಂಚಿತನಾದ ನಿರಾಸೆಯನ್ನು ತೋರ್ಪಡಿಸಿಕೊಳ್ಳದೆ)  ಮೇಡಂ, ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಇವತ್ತು.

ಬ.ತಾ: (ಮನಸೊಳಗೆ ಆಟಂ ಬಾಂಬ್ ಸಿಡಿದ ಹಾಗೆ ಸಂತೋಷದ ಊಟೆ ಒಡೆದರೂ ತೋರ್ಪಡಿಸಿಕೊಳ್ಳದೆ) ಥ್ಯಾಂಕ್ಯು… ಸಂದರ್ಶನ ಶುರು ಮಾಡೋಣವೇ?

ನ.ಸಾ: ಖಂಡಿತಾ ಮೇಡಂ. ಮೊದಲಿಗೆ ಕನ್ನಡದ ಹುಡುಗಿಯಾಗಿ, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಯೂ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ನಿಮ್ಮನ್ನು ಅಭಿನಂದಿಸಬೇಕು.

ಬ.ತಾ: ನೋಡಿ, ನಾನು ಕನ್ನಡದಲ್ಲಿ ಮಾತಾಡುತ್ತಿರುವುದು ನಿಮ್ಮ ಪತ್ರಿಕೆಯನ್ನು ಮೂರುವರೆ ಓದುಗರು ಬಿಟ್ಟು ಬೇರ್ಯಾರೂ ಓದುವುದಿಲ್ಲ ಎಂಬ ಗ್ಯಾರಂಟಿ ಇರೋದರಿಂದ ಮಾತ್ರ. ನಾವು ನಟಿಯರು ಕನ್ನಡದಲ್ಲೇ ಮಾತಾಡಿದರೆ ನಮ್ಮ ಅವಕಾಶಗಳ ಮೇಲೆ ನಾವೇ ಕಲ್ಲು ಚಪ್ಪಡಿ ಎಳೆದುಕೊಂಡಂತೆ. ನಾವು ಕನ್ನಡದಲ್ಲೇ ಮಾತನಾಡುತ್ತಿದ್ದರೆ  ಬೇರೆ ಭಾಷೆಗಳ ನಿರ್ದೇಶಕ, ನಿರ್ಮಾಪಕರ ಗಮನ ಸೆಳೆಯುವುದು ಹೇಗೆ? ಬಾಲಿವುಡ್ಡಿಗೆ ಹಾರುವ ಅವಕಾಶ ಸಿಕ್ಕುವುದಾದರೂ ಹೇಗೆ? ಕನ್ನಡದಲ್ಲೇ ಮಾತಾಡುತ್ತಿದ್ದರೆ ರಾಷ್ಟ್ರೀಯ ಮಾಧ್ಯಮಗಳಾಗಲಿ, ನಮ್ಮ ಟೈಮ್ಸಾಫಿಂಡಿಯಾದಂತಹ ದೊಡ್ ಪತ್ರಿಕೆಗಳು ನಮ್ ಕಡೆ ತಿರುಗಿಯೂ ನೋಡಲ್ಲ. ನಿಮ್ ಪತ್ರಿಕೆ ಯಾರ ಕಣ್ಗೂ ಬೀಳಲ್ಲ ಅನ್ನೋ ಗ್ಯಾರಂಟಿ ಇರೋದ್ರಿಂದ ನಾನು ಕನ್ನಡದಲ್ಲಿ ಮಾತಾಡ್ತಿದೀನಿ.

ನ.ಸಾ: ಇದು ತಪ್ಪಲ್ಲವಾ ಮೇಡಂ? ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಕನ್ನಡದ ಜನರ ಪ್ರೀತಿಗೆ ಪಾತ್ರರಾಗಿ ಕನ್ನಡದ ಬಗ್ಗೆ ಹೀಗೆ ಕೇವಲವಾಗಿ ಮಾತನಾಡೋದು ತಪ್ಪಲ್ಲವಾ? ನೋಡಿ ಆ ಗಾಂಧಿಯವರು ಬೇರೆ ರಾಜ್ಯದವರಾದರೂ ಕನ್ನಡ ಮಾತನಾಡೋದಕ್ಕೆ ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.

ಬ.ತಾ: ಯಾವುದು ತಪ್ಪು? ಹುಟ್ಟುತ್ತಿದ್ದಂತೆಯೇ ಮಗುವಿಗೆ ಇಂಗ್ಲೀಷಿನಲ್ಲಿ ಅಳುವುದನ್ನು ಕಲಿಸುತ್ತಿರುವುದಾ? ತಮ್ಮೆಲ್ಲಾ ಪರಿಶ್ರಮವನ್ನು ಹಾಕಿ ಕನ್ನಡದ ಶಾಲೆಗಳಿಗೆ ಯಾವ ಪೋಷಕರು ತಮ್ಮ ಮಕ್ಕಳನ್ನು ಕಳಿಸಲು ಹೆದರುವಂತೆ ಮಾಡುವುದರಲ್ಲಿ ಯಶಸ್ವಿಯಾದ ರಾಜಕಾರಣಿಗಳು ಮಾಡುತ್ತಿರುವುದಾ? ಅಥವಾ ಹೊಟ್ಟೆ ಪಾಡಿಗಾಗಿ ನಮ್ಮಂಥವರು ಇಂಗ್ಲೀಷಿನ ಹಿಂದೆ ಬಿದ್ದದ್ದಾ?

ಆ ಗಾಂಧಿಗೆ ಕನ್ನಡ ಚಿತ್ರರಂಗವೇ ಕಡೆಯ ರೆಫ್ಯೂಜು. ಅದಕ್ಕೇ ಮೂರು ವರ್ಷಗಳಿಂದ ಹರಕು ಮುರಕು ಕನ್ನಡ ಮಾತಾಡ್ತಾ ಇರೋದು. ನನ್ನಂತಹ ನಟಿಗೆ ದೇಶದಾದ್ಯಂತ ಬೇಡಿಕೆ ಇದೆ, ನನಗೆ ಆ ಗಿಮಿಕ್ಕುಗಳ ಆವಶ್ಯಕತೆ ಇಲ್ಲ.

ನ.ಸಾ: ಹೋಗಲಿ ಬಿಡಿ, ನೀವು ಚಿತ್ರರಂಗಕ್ಕೆ ಬಂದದ್ದು ಹೇಗೆ ತಿಳಿಸಿ. ನೀವಿನ್ನೂ ಪದವಿ ವಿದ್ಯಾರ್ಥಿ, ಸಿನೆಮಾ ರಂಗ ನಿಮ್ಮನ್ನು ಸೆಳೆದದ್ದು ಏತಕ್ಕೆ?

ಬ.ತಾ: ನಾನು ಸಿನೆಮಾ ನಟಿಯಾಗಬೇಕು ಎಂದು ಕನಸೂ ಕಂಡಿರಲಿಲ್ಲ. ಒಂದು ಒಳ್ಳೆಯ ಕೆಲಸ ಪಡೆದು ಒಳ್ಳೆ ಹಣ ಸಂಪಾದನೆ ಮಾಡಬೇಕು, ಜನಪ್ರಿಯಳಾಗಬೇಕು ಎಂಬುದು ನನ್ನ ಕನಸಾಗಿತ್ತು.

ಆಕಸ್ಮಿಕವಾಗಿ ನನಗೆ ಸಿನೆಮಾ ರಂಗಕ್ಕೆ ಬರುವ ಅವಕಾಶ ಸಿಕ್ಕಿತು. ನನ್ನ ಕನಸು ಇಲ್ಲೇ ಇಷ್ಟು ಸುಲಭವಾಗಿ ಈಡೇರುವಾಗ ಓದುವ ಕಷ್ಟ ಯಾತಕ್ಕೆ ತೆಗೆದುಕೊಳ್ಳಬೇಕು ಅನ್ನಿಸಿತು ಅದಕ್ಕೇ ಸಿನೆಮಾ ರಂಗಕ್ಕೆ ಬಂದು ಬಿಟ್ಟೆ.

ನ.ಸಾ: ಕನಸು ಈಡೇರುವುದು ಎಂದರೇನು ಮೇಡಂ? ನಾಲ್ಕೈದು ಚಿತ್ರಗಳಲ್ಲಿ ಪಡ್ಡೆಗಳ ನಿದ್ದೆಗೆಡಿಸಿ ಜನಪ್ರಿಯರಾಗಿ, ಹಣ ಮಾಡಿಕೊಂಡು ದೊಡ್ಡ ಉದ್ಯಮಿಯನ್ನೋ, ಪ್ರೊಡ್ಯೂಸರನ್ನೋ ಮದುವೆಯಾಗಿ ಸೆಟಲ್ ಆಗುವುದಾ?

ಬ.ತಾ: ಒಂದು ರೀತಿಯಲ್ಲಿ ಹಾಗೆಯೇ.

ನ.ಸಾ: ಮೇಡಂ ನಿಮ್ಮ ಮೊದಲ ಚಿತ್ರದಲ್ಲಿ ಪಕ್ಕದ ಮನೆ ಹುಡುಗಿಯಾಗಿ ಕಂಡ ನೀವು ಎರಡನೆಯ ಸಿನೆಮಾದಲ್ಲಿ ಗ್ಲಾಮರ್ ಬಾಂಬ್ ಆಗಿದ್ದು ಏಕೆ? ಇಷ್ಟು ಮೈಚಳಿ ಬಿಟ್ಟು ನಟಿಸಿದ್ದು ಏಕೆಂದು ತಿಳಿಯಬಹುದೇ?

(ಇನ್ನೂ ಇದೆ)

ಖ್ಯಾತ ನಟಿ ‘ಬಂದ್ರೆ ತಾರೇ’ರೊಂದಿಗೆ ‘ಸಂ’ ‘ದರ್ಶನ’

18 ಮಾರ್ಚ್

ಇಷ್ಟು ದಿನ ಸಾಮ್ರಾಟರ alter ego ಅವರಿಗೆ ಮುಜುಗರವಾಗುವಷ್ಟರ ಮಟ್ಟಿಗೆ ಬಹು ಘನ ಗಂಭೀರವಾದ ವ್ಯಕ್ತಿಗಳನ್ನು ಕರೆದು ತಂದು ಸಂದರ್ಶನ ನಡೆಸುತ್ತಿತ್ತು. ಇದರಿಂದ ಬೇಸರಗೊಂಡ ಸಾಮ್ರಾಟರು ತಮ್ಮ alter egoವನ್ನು ಗಾಂಧಿ ನಗರದ ಗಲ್ಲಿಗೆಳಿಗೆ ಅಟ್ಟಿದರು. ಅದರ ಫಲವಾಗಿ ಕಳೆದ ಸಂಚಿಕೆಯಲ್ಲಿ ಶ್ರೀಮಾನ್ ಚೂರಿಯವರ ಸಂದರ್ಶನ ಮೂಡಿ ಬಂದಿತು.

ಈ ನಡುವೆ ಸಾಮ್ರಾಟರು, ಅವರ ಅತ್ಯಾಪ್ತ ಚೇಲ ಕುಚೇಲನೂ, ಅವರ ಗತಕಾಲದ ಗೆಳೆಯ ತೊಣಚಪ್ಪನವರೂ ಸ್ತ್ರೀ ದ್ವೇಷಿಗಳು. ನಗೆ ನಗಾರಿಯಲ್ಲಿ ಸ್ತ್ರೀ ಸಮಾನತೆ ಇಲ್ಲವೆಂಬ ಆರೋಪಗಳು ಮಾರ್ದನಿಸತೊಡಗಿದ್ದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಸಂಚಿಕೆಯ ವಿಶೇಷ ಸಂದರ್ಶನಕ್ಕಾಗಿ ಸಾಮ್ರಾಟರು ತಮ್ಮ alter egoವನ್ನು ಕನ್ನಡದ ಪ್ರಖ್ಯಾತ ಸಿನೆಮಾ ನಟಿ ‘ಬಂದ್ರೆ ತಾರೇ’ ಬಳಿಗೆ ಅಟ್ಟಿದರು.

‘ಬಂದ್ರೆ ತಾರೇ’ ನಗೆ ನಗಾರಿಯಲ್ಲಿನ ಸ್ತ್ರೀ ಸಮಾನತೆಯ ಹೋರಾಟದ ಮೊದಲ ಫಲಾಕಾಂಕ್ಷಿ ತಾವೇ ಎಂಬ ಖುಶಿಯಲ್ಲಿ ಎಲ್ಲವನ್ನೂ ಬಿಚ್ಚಿ (ಐ ಮೀನ್ ಮನಸ್ಸಿನಲ್ಲಿದ್ದ ಗುಟ್ಟುಗಳನ್ನು) ನಮಗೆ ಸಂದರ್ಶನ ನೀಡಿದ್ದಾರೆ.

ಈ ರೋಚಕ, ಮೈನವಿರೇಳಿಸುವ ಸಂದರ್ಶನ ನಾಳೆ ನಗೆ ನಗಾರಿಯಲ್ಲಿ ಪ್ರಕಟವಾಗಲಿದೆ… ನಿಮ್ಮ ಪ್ರತಿಯನ್ನು ಕರ್ಚೀಫು ಎಸೆದು ಈಗಲೇ ರಿಸರ್ವ್ ಮಾಡಿಕೊಳ್ಳಿ…

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

17 ಮಾರ್ಚ್

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ. ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ, ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ, ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ, “ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್ ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ, ಹೃದಯಕ್ಕೆ” – ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ “ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” – ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು, ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ. ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪. ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬. ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

16 ಮಾರ್ಚ್

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು ನಿರ್ಧರಿಸಿದ್ದೇವೆ.

ಈ ಮಾಲಿಕೆಯ ಎರಡನೆಯ ಆವೃತ್ತಿಯಲ್ಲಿ ನಾವು ಅತಿ ಸಾಮಾನ್ಯ ಬರಹಗಾರ ಕೂಡ ‘ಪ್ರಖ್ಯಾತ ಅಂಕಣಕಾರನಾಗುವುದು ಹೇಗೆ?’ ಎಂದು ತಿಳಿಸಿಕೊಡುತ್ತೇವೆ. ಎಂದಿನಂತೆ ನಮ್ಮ ಸಲಹೆ ಸೂಚನೆಗಳು ಅತ್ಯಂತ ಚುಟುಕಾಗಿಯೂ, ಸ್ಪುಟವಾಗಿಯೂ, ಪರಿಣಾಮಕಾರಿಯಾಗಿಯೂ ಇರುತ್ತವೆಂಬುದನ್ನು ನೆನಪಿಸಬೇಕಿಲ್ಲ. ಹಾಗಾದರೆ, ಭಯ, ಭಕ್ತಿ, ಶ್ರದ್ಧೆಗಳಿಂದ ನಮ್ಮ ಉಪದೇಶ ಕೇಳಲು ಸಿದ್ಧರಾಗಿ.

ಅಂಕಣ ಬರಹವೆಂಬುದು ಯಾವ ಸಾಹಿತ್ಯ ಪ್ರಕಾರ ಎಂದು ತಲೆ ಕೆಡಿಸಿಕೊಂಡು ‘ಕೇಶ’ವನ ಕೃಪೆಯಿಂದ ಉಳಿದುಕೊಂಡಿರುವ ನಾಲ್ಕೈದು ಕೇಶ ಕುಡಿಗಳನ್ನು ಉದುರಿಸುವ ಅಗತ್ಯವಿಲ್ಲ. ಬೇರೆಲ್ಲ ಸಾಹಿತ್ಯ ಪ್ರಕಾರಗಳ ಹಾಗೆ ಇದು ತನ್ನ ಹುಟ್ಟನ್ನು ಅತ್ಯಂತ ಶಕ್ತಿಯುತವಾದ ಗುಟ್ಟನ್ನಾಗಿ ಉಳಿಸಿ ಸಂಶೋಧಕರು, ಪಂಡಿತರಿಗೆ ಹೆಮ್ಮೆ ತರುವ ಸರಕಾಗಿಲ್ಲ. ಅಂಕಣ ಬರಹ ಹುಟ್ಟಿದ್ದು ವೃತ್ತ ಪತ್ರಿಕೆಗಳೆಂಬ ಕುಲ ಹುಟ್ಟಿದ ನಂತರ. ಮೊದ ಮೊದಲು ವೃತ್ತ ಪತ್ರಿಕೆಯೆಂಬ ಬಹುದೊಡ್ಡ ಪಾರ್ಕಿಂಗ್ ಲಾಟನ್ನು ಸುದ್ದಿಗಳೆಲ್ಲಾ ಆಕ್ರಮಿಸಿದ ನಂತರ ಅನಾಥವಾಗಿ, ಬೇವಾರ್ಸಿಯಾಗಿ ಉಳಿದಿರುತ್ತಿದ್ದ ಜಾಗವನ್ನು ಈ ‘ಅಂಕಣ ಬರಹ’ಕ್ಕೆ ಬಿಟ್ಟುಕೊಡಲಾಗುತ್ತಿತ್ತು. ಅಷ್ಟಕ್ಕೇ ಚಿಗುರಿಕೊಂಡ ಈ ಅಂಕಣ ಬರಹಗಾರರ ಗಣ ಪ್ರತಿ ಪತ್ರಿಕೆಯಲ್ಲಿ ತನ್ನ ಪಾಲನ್ನು ಭದ್ರ ಮಾಡುವ ಕೆಲಸ ಮಾಡಲು ಶುರು ಮಾಡಿತು. ಈಗ ಅಂಕಣ ಬರಹಗಳಿಲ್ಲದ ಪತ್ರಿಕೆಯನ್ನು ನೋಡಿದರೆ ಕುಂಕುಮವಿಲ್ಲದ ಹೆಣ್ಣಿನ ಹಣೆ ನೋಡಿದ ಹಾಗಾಗುತ್ತೆ(ಈ ವಾಕ್ಯದಲ್ಲಿ ಸ್ತ್ರೀ ವಾದ, ಕೋಮುವಾದ, ಕಾಮವಾದಗಳನ್ನು ಹುಡುಕುವ ಉದ್ಧಟತನ ತೋರಿದವರನ್ನು ಉಗ್ರವಾಗಿ ಶಿಕ್ಷಿಸಲಾಗುವುದು!).

ಇದಿಷ್ಟು ಅಂಕಣ ಬರಹದ ಇತಿಹಾಸ. ಇನ್ನು ಪ್ರಖ್ಯಾತ ಅಂಕಣ ಕಾರನಾಗುವುದಕ್ಕೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಗಮನ ಹರಿಸೋಣ.

೧. ನಂಬರ್ ಮ್ಯಾಟರ್ಸ್

ಅಂಕಣಕಾರನೊಬ್ಬನ  ಯಶಸ್ಸು ನಿರ್ಧಾರವಾಗುವುದು ಒಂದೇ ಅಂಶದಿಂದ. ಆತನ ಅಂಕಣವನ್ನು ಎಷ್ಟು ಮಂದಿ ಓದುತ್ತಾರೆ? ಮುದ್ರಕ, ಮಾಲೀಕ, ಸಂಪಾದಕ ಹಾಗೂ ಅಂಕಣಕಾರ- ಇಷ್ಟು ಮಂದಿ ಓದುವ ಪ್ರಶಸ್ತಿ ವಿಜೇತ ಬರಹಕ್ಕಿಂತ ಅತಿ ಹೆಚ್ಚು ಮಂದಿ ಓದುವ ಕಳಪೆ ಅಂಕಣ ಯಶಸ್ಸಿನ ಮಾಪಕದಲ್ಲಿ ಹೆಚ್ಚು ಅಂಕ ಗಳಿಸುತ್ತದೆ. ಹೀಗಾಗಿ ಅಂಕಣಕಾರನ ಯಶಸ್ಸು ಆತನ ಓದುಗರ ಸಂಖ್ಯೆಯ ಮೇಲೆ- ಅರ್ಥಾತ್ ಪತ್ರಿಕೆಯ ಓದುಗರ ಸಂಖ್ಯೆಯ ಮೇಲೆ ನಿರ್ಭರವಾಗಿರುತ್ತದೆ.
ಹೀಗಾಗಿ ಮೊದಲು ಅತ್ಯಧಿಕ ಪ್ರಸಾರ ಹೊಂದಿರುವ ಪತ್ರಿಕೆ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅನಂತರ ಆ ಪತ್ರಿಕೆಯ ಸಂಪಾದಕರ ಹೆಂಡತಿಯ ತವರು ಮನೆಯ ದಿಕ್ಕು, ಸಂಪಾದಕರ ಕಾರು ಚಾಲಕನ ಮನೆಯ ಓಣಿ, ಸಂಪಾದಕರ ಪೆನ್ನಿನ ಶಾಯಿ ಸರಬರಾಜು ಮಾಡುವವನ ವಿಳಾಸ, ಅವರ ಬಟ್ಟೆಗೆ ಇಸ್ತ್ರಿ ತಿಕ್ಕುವವನ ವಿವರ, ಸಂಪಾದಕರು ಅಡ್ಡ ಬೀಳುವ ಮಠಗಳು, ಸೆಲ್ಯೂಟು ಹೊಡೆಯುವ ಮಂತ್ರಿ ಮಹೋದಯರ ಬಗ್ಗೆ ಮಾಹಿತಿ ಸಂಗ್ರಹಿಸಿ. ಅಂಕಣಕ್ಕೆ ಬೇಕಾದ ವಿಷಯ ಸಂಗ್ರಹದಲ್ಲಿ ನ್ಯೂನ್ಯತೆಯಿದ್ದರೂ ಈ ಮುಂಚೆ ತಿಳಿಸಿದ ವಿವರಗಳ ಸಂಗ್ರಹದಲ್ಲಿ ಚಿಕ್ಕ ಲೋಪವೂ ಆಗಬಾರದು. ಸಂಗ್ರಹವಾದ ಮಾಹಿತಿಯ ಆಧಾರದ ಮೇಲೆ ಯಾರ ಕಾಲುಗಳಿಗೆ ಎಷ್ಟು ನಿಮಿಷ ಮಸಾಜ್ ಮಾಡಬೇಕು, ಯಾರ ಅಂಗೈಗೆ ಎಷ್ಟು ಶಾಖ ಕೊಡಬೇಕು ಎಂಬುದನ್ನು ತೀರ್ಮಾನಿಸಬೇಕು. ಆ ಮೂಲಕ ಅಂಕಣಕಾರನ ಸ್ಥಾನಮಾನವನ್ನು ಸಂಪಾದಿಸಿಕೊಳ್ಳಬೇಕು. ಎಲೆಯ ಮರೆಯ ಕಾಯಿಯಾಗಿ ಉಳಿಯುವುದು ನಿಮ್ಮ ಆದರ್ಶವಾದರೆ ಈ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿ.

೨. ನಿರಂತರತೆಯೇ ತಾಯಿ ತಂದೆ

ಒಮ್ಮೆ ನೀವು ಅಂಕಣಕಾರನ ಸ್ಥಾನಮಾನವನ್ನು ಪಡೆದ ಮೇಲೆ ಅತ್ಯಂತ ತುರ್ತಿನಲ್ಲಿ ರೂಢಿಸಿಕೊಳ್ಳಬೇಕಾದ ಗುಣವೆಂದರೆ ನಿರಂತರತೆ. ನಿರಂತರವಾಗಿಲ್ಲದ ಗಂಗಾಜಲಕ್ಕಿಂತ ನಿರಂತರವಾದ, ಅಡೆತಡೆಯಿಲ್ಲದ ಕೊಚ್ಚೆ ನೀರು ನಮ್ಮ ಪತ್ರಿಕೆಗಳಿಗೆ ಅತಿ ಮುಖ್ಯ. ಹೀಗಾಗಿ ಕವಿಗಳ ಹಾಗೆ ಲಹರಿ ಬಂದಾಗ ಬರೆಯುವ, ಸ್ಪೂರ್ತಿಗಾಗಿ, ಪ್ರೇರಣೆಗಾಗಿ ಬೀದಿ ಸುತ್ತುವ ಹಾಗಿಲ್ಲ. ನಿಂತ ಭಂಗಿಯಲ್ಲೇ ಟಿಕೆಟ್ ವಿವರಗಳನ್ನು ಗೀಚಿಕೊಳ್ಳುವ ಬಸ್ ಕಂಡಕ್ಟರನ ಹಾಗೆ ಬರೆದು ಬಿಸಾಕುವ ತಾಕತ್ತು ಮೊದಲು ರೂಢಿಸಿಕೊಳ್ಳಬೇಕು.

೩. ಗಾಳಿ ಬಂದಾಗ ತೂರಿಕೋ

ವಾರಕ್ಕೊಂದು ಅಂಕಣ ಬರೆಯುವುದಕ್ಕೆ ಈ ದಿಶೆಯಲ್ಲಿ ಅನೇಕ ಅಡ್ಡಿ ಆತಂಕಗಳು ಎದುರಾಗುತ್ತವೆ. ಉದಾಹರಣೆಗೆ,  ಅಧ್ಯಯನದ ಕೊರತೆ, ಸತ್ಯಾಸತ್ಯತೆಯ ಪರಿಶೀಲನೆ, ತಥ್ಯಗಳ ತುಲನೆ, ಪೂರ್ವಾಗ್ರಹದಿಂದ ಮುಕ್ತವಾದ ವಿಶ್ಲೇಷಣೆ ಮುಂತಾದವು. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕೂತರೆ ಪ್ರಖ್ಯಾತ ಅಂಕಣಕಾರನಾಗುವುದಕ್ಕೆ ಸಾಧ್ಯವಿಲ್ಲ. ‘ತಾನು ಬರೆಯುವುದೆಲ್ಲ ಸತ್ಯ, ತಾನು ಬರೆದದ್ದು ಮಾತ್ರ ಸತ್ಯ’ ಎಂಬ ಸರಳವಾದ ನಂಬಿಕೆಯನ್ನು ಅಂಕಣಕಾರನಾದವನು ತನ್ನ ಹೃದಯದಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಿಸಿಟ್ಟುಕೊಳ್ಳಬೇಕು. ಒಂದು ವಿಷಯದ ಬಗ್ಗೆ ಅವರಿವರ ವಾದಗಳನ್ನೆಲ್ಲ ಕೇಳಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ಪತ್ತೆ ಹಚ್ಚಿ, ಸ್ವತಂತ್ರವಾಗಿ ಅಧ್ಯಯನ ಮಾಡಿ ಅಭಿಪ್ರಾಯ ರೂಪಿಸಿಕೊಂಡು ಒಂದು ಅಂಕಣ ಬರೆಯುವಷ್ಟರಲ್ಲಿ ತಿಂಗಳು ಕಳೆದುಹೋಗಿರುತ್ತದೆ!
ಹೀಗಾಗಿ ಅಂಕಣಕಾರನಾದವನು ಸದಾ ಸಮಾಜಮುಖಿಯಾಗಿರಬೇಕು. ಬಹುಸಂಖ್ಯಾತರ ನಾಡಿಮಿಡಿತದ ತಿಳಿವನ್ನು ಹೊಂದಿರಬೇಕು. ತಾನು ಬರೆದದ್ದು ಸತ್ಯವೋ, ಪೂರ್ವಾಗ್ರಹದಿಂದ ಮುಕ್ತವಾದದ್ದೋ, ರಚನಾತ್ಮಕವಾದದ್ದೋ ಎಂದು ಆಲೋಚಿಸುವುದರಲ್ಲಿ ಸಮಯ ಕಳೆಯದೆ ಜನ ಸಾಮಾನ್ಯರು ಆ ವಿಷಯದ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಗ್ರಹಿಸಬೇಕು. ಗಾಳಿ ಬರುತ್ತಿರುವ ದಿಕ್ಕನ್ನು ಕಂಡುಕೊಂಡು ಅಲ್ಲಿ ತೂರಿಕೊಂಡು ಬಿಡಬೇಕು. ಭಯೋತ್ಪಾದಕ ದಾಳಿಯಾದೊಡನೆ ಅದಕ್ಕೆ ಸಂಬಂಧಿಸಿದ, ಸಂಬಂಧಿಸಿರದ ರಾಜಕಾರಣಿಗಳನ್ನು ಉಗಿಯಬೇಕು, ಸೈನ್ಯವನ್ನು ಹೊಗಳಿ ಅಟ್ಟಕ್ಕೇರಿಸಬೇಕು. ಕ್ರಿಕೆಟ್ ಪಂದ್ಯದಲ್ಲಿ ನಮ್ಮ ತಂಡ ವಿಜಯಿಯಾದರೆ ನಮ್ಮನ್ನು ಗೆಲ್ಲುವವರು ಯಾರಿದ್ದಾರೆ ಎಂದು ಜಗತ್ತಿಗೇ ಸವಾಲು ಎಸೆಯಬೇಕು. ಸತತವಾಗಿ ಸೋಲಲು ಶುರುವಾದರೆ ಒಬ್ಬೊಬ್ಬ ಆಟಗಾರನ ಇತಿಹಾಸವನ್ನೂ ಕೆದಕಿ, ಅವರ ಹಣದಾಸೆಯನ್ನು, ಸ್ವಾರ್ಥವನ್ನು ಜರೆದು ಉಗಿದು ಉಪ್ಪಿನಕಾಯಿ ಹಾಕಬೇಕು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ, ಮಾರಣ ಹೋಮವೇ ಕಣ್ಣೆದುರು ನಡೆದರೂ ಅದು ಬಹುಸಂಖ್ಯಾತರ ಮೇಲಿನ ನಿರಂತರ ದೌರ್ಜನ್ಯಕ್ಕೆ ಸಣ್ಣ ಪ್ರತಿಕ್ರಿಯೆ ಎನ್ನಬೇಕು, ಸ್ಯೂಡೋ ಸೆಕ್ಯುಲರ್ ಮಾಧ್ಯಮಗಳ ಹುಯಿಲು ಅನ್ನಬೇಕು. ಇಡೀ ಜಗತ್ತಿನ ನೈತಿಕ ಅಧಃಪತನಕ್ಕೆ, ಹಣದ ವ್ಯಾಮೋಹಕ್ಕೆ, ಗೋವಾದ ಬೀಚಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳಿಗೆ ಬೆಂಗಳೂರಿನ ಐಟಿ ಬಿಟಿ ಮಂದಿಯೇ ಕಾರಣ ಅನ್ನಬೇಕು.
ಈ ಮಾದರಿಗಳನ್ನು ಅನುಸರಿಸಿದರೆ ಎರಡು ಲಾಭಗಳಿವೆ. ಬಹುಸಂಖ್ಯಾತರ ಭಾವನೆಗೆ ಅಂಕಣಕಾರನಾದವ ಸಹಾನುಕಂಪ ತೋರಿದಂತಾಗುತ್ತದೆ. ಎರಡನೆಯದು ಎಂಥದ್ದೇ ಸಂಕಷ್ಟ ಬಂದರೂ, ಯಾವುದೇ ಟೀಕೆಗಳು ಬಂದರೂ ತಾನು ಜನ ಸಾಮಾನ್ಯರ ಎದೆಯ ಅನಿಸಿಕೆಗೆ ಧ್ವನಿ ಕೊಟ್ಟೆನಷ್ಟೇ ಎಂದು ಡೈಲಾಗ್ ಹೊಡೆದು ತಪ್ಪಿಸಿಕೊಳ್ಳಬಹುದು.

(ಇನ್ನೂ ಉಂಟು)

ತೊಣಚಪ್ಪನ ಡೈರಿ

16 ಮಾರ್ಚ್

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ. ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅಂತ ಗಂಟ್ ಗಟ್ಲೆ ಗಂಟ್ಲು ಹರ್ಕಂಡು, ಪೆನ್ನು ಮುರ್ಕಂಡು ಕಶ್ಟ ಪಡೋದು ತಪ್ತದೆ. ಅಲ್ವಾ?

ತೃತೀಯ ರಂಗಕ್ಕೆ ಯಾವುದೇ ವಿಷನ್ ಇಲ್ಲ: ಪ್ರಣಬ್ ಮುಖರ್ಜಿ

ಒಕ್ಕೂಟ ರಚನೆ ಮಾಡೋಕೆ ರಾಜಕೀಯ ಪಕ್ಷ ಕಟ್ಕಣಕೆ ದುಡ್ಡು ಕಾಸು, ಹೆಂಡ, ಸೀರೆ ಬೇಕೋ ಹೊರ್ತು ವಿಷನ್ನು, ಪಾಲಿಸೀಸು ಬೇಕು ಅಂತ ಯಾವೋನ್ ಹೇಳ್ದವ?

ಅಧಿಕಾರ ಹಿಡ್ಕಬೇಕು, ಕುರ್ಚಿ ಮೇಲೆ ಕುತ್ಕಬೇಕು, ದುಡ್ ಮಾಡ್ಕೋ ಬೇಕು ಇದ್ಕಿಂತ ದೊಡ್ ವಿಷನ್ನು, ಪಾಲಿಸಿ, ಆದರ್ಶ ಇರೋಕ್ ಸಾಧ್ಯ ಐತಾ?

ಈ ಯುಪಿಎ ಹುಟ್ದಾಗ್ ಇರ್ದೇ ಇದ್ದ ವಿಷನ್ನುಗಳಾ ಇವು? ಜನ ಇಂಥದ್ದೆಲ್ಲಾ ಇಲ್ಯೂಶನ್ನಿಗೆ ಬಲಿಯಾಗ್ತಾರೆ ಇನ್ನೂ ಅಂದ್ಕಂಡೀರಾ?

ಮಳೆ ಬರ್ಸೋಕೆ ಕಪ್ಪೆ ಮದ್ವೆ

ಸಿಟೀಲ್ ಕುಂತು ಕೀಬೋರ್ಡ್ ಕುಟ್ಟುವ ನಿಂಗೆ ಇದ್ನ ಓದಿದ್ರೆ ಬಿದ್ ಬಿದ್ ನಗೋಷ್ಟು ಸಿಲ್ಲಿ ಅನ್ಸುತ್ತೆ ಅಲ್ವಾ? ಆದ್ರೂ ಹೇಳ್ತೀನ್ ಕೇಳಿ, ಈ ಜನ ಮಾಡ್ತಿರೋದ್ಕು ನೀವ್ ಬುದ್ಧಿವಂತ್ರು, ಪೇಟೆ ಜನ ಮಾಡ್ತಿರೋದ್ಕು ವ್ಯತ್ಯಾಸ ಇದ್ಯಾ?

ಇವ್ರು ಮಳೆ ಇಲ್ಲದ್ ನಾಡಿಗೆ ನೀರ್ ಸಿಕ್ಲಿ ಅಂತ ಎರಡ್ ಕಪ್ಪೆ ಹಿಡ್ದು ಮದ್ವೆ ಮಾಡ್ತಾರೆ. (ಮದ್ವೆ ಇಲ್ದೆ ಅವೇನ್ ಮಕ್ಳೇ ಮಾಡಲ್ವಾ ಅಂನ್ಬೇಡ್ರಿ. ಶ್ರೀರಾಮ್ ಸೇನೆ ಮುತಾಲಿಕ್ ಕಿವಿಗೆ ಬಿದ್ರೆ ಪ್ರಾಣಿಗಳ್ಲೂ ಹೆಣ್ಣು ಗಂಡು ರಾಖಿ ಅಥ್ವಾ ತಾಳಿ ಇಲ್ದೇ ಒಡಾಡೋಕ್ ಬಿಡಲ್ಲ ಆತ!) ಮಳೆ ಬರುತ್ತೊ ಇಲ್ವೋ ಗೊತ್ತಿಲ್ಲ. ಮಳೆ ಬರ್ಲಿ ಅನ್ನೋ ಉದ್ದೇಶಾಂತೂ ಅವ್ರಲ್ಲಿ ಇರ್ತದೆ. ನೀವ್ ಮಾಡಾದೇನು? ಸರ್ಕಾರ ಒಳ್ಳೇ ಆಡಳಿತ ಕೊಡ್ಲಿ ಅಂತಂದ್ ಓಟ್ ಹಾಕ್ತೀರಿ, ಪ್ರತಿ ಸಲಾನೂ ಇವ್ರು ತಮ್ ಬುದ್ಧಿ ತೋರ್ಸಿದ್ರೂ ಮನೆ ಎದ್ರು ಬಂದ್ ಹಲ್ ಕಿರಿದ್ರೆ ಮತ್ತೆ ನಂಬ್ತೀರಿ…

ಈಗ್ ಹೇಳ್ರಿ ಯಾರು ಮೂಢ್ರು?

ಕೇಳಿಲ್ಲಿ ಜೋಗಿ ಹಾಡುವ ಹಾಡ…

15 ಮಾರ್ಚ್

ಅಖಿಲ ಭಾರತದ ಪ್ರಜ್ಞಾವಂತ ಜನಗಳೇ, ಭೂಸುರರೇ, ಬುದ್ಧಿಜೀವಿ ಮಹಾಶಯರೇ, ಕ್ರಾಂತಿಮರಿಗಳೇ, ಬುದ್ಧಿವಂತ ಕುಡಿಗಳೇ, ಸೃಜನಶೀಲತೆಯ ಕಿಡಿಗಳೇ ಕೇಳಿ ಜ್ಞಾನೋದಯದ ದಾರಿಯಂ ಪೇಳ್ವೆನು.

ಭಾರತ ಭೂಮಿ, ಪುಣ್ಯ ಭೂಮಿ, ಹೊನ್ನಿನ ಭೂಮಿ ಇಂದು ಅಪಾಯದಲ್ಲಿದೆ. ಹೊರಗಿನವರ ದಾಳಿ, ಒಳಗಿನವರ ಸಂಚು ಸೇರಿ ಇದರ ನರ ನಾಡಿಗಳನ್ನು ಕತ್ತರಿಸಿ ಹಾಕುತ್ತಿವೆ. ಓ, ಈ ನೆಲದ ವೀರ ಸಿಂಹಗಳೇ ಎದ್ದೇಳಿ ಈ image ಮಣ್ಣ ಉಳಿಸಲು ಮುಂದಾಗಿ.

ಮುದ್ರಣ ದೋಷಗಳು, ತಿಳುವಳಿಕೆಯ ತಪ್ಪುಗಳು, ಬಾಗಿಲು ತೆಗೆದ ಅಪರಾಧಗಳು, ಹಂಚಿಕೊಂಡ ಪೆದ್ದುತನಗಳು ಎಲ್ಲವನ್ನೂ ಸರಿ ಮಾಡುವ ಸಮಯವೀಗ ಬಂದಿದೆ. ‘ಒಳ್ಳೆಯದೆಲ್ಲಾ ದಿಕ್ಕಿನಿಂದ ಬರಲಿ’ ಎಂಬ ಉಪನಿಷತ್ತಿನ ವಾಕ್ಯವನ್ನು ತಿದ್ದಬೇಕಿದೆ, ದಯೆಯೇ ಧರ್ಮದ ಮೂಲವೆಂಬ ತಿಳುವಳಿಕೆಯ ತಪ್ಪನ್ನು ನೆಟ್ಟಗಾಗಿಸಬೇಕಿದೆ, ಹೊರಗಿನದಕ್ಕೆ ತೆರೆದ ಬಾಗಿಲು ಕಿಟಕಿಗಳನ್ನು ತುರ್ತಾಗಿ ಮುಚ್ಚಬೇಕಿದೆ, ಹಂಚಿಕೊಳ್ಳುವುದು ತಪ್ಪು ಎನ್ನುವುದ ಅರಿಯಬೇಕಿದೆ. ಬನ್ನಿ ಇತಿಹಾಸವನ್ನು ಪುರ್ ನಿರ್ಮಿಸೋಣ.

ಅರ್ಥವಾಗಲಿಲ್ಲವೇ? ಬುದ್ಧಿಯ ಬೀಗ ತೆರೆಯಲಿಲ್ಲವೇ? ಬೆಳಕು ಕಾಣಲಿಲ್ಲವೇ? ಕೇಳಿಲ್ಲಿ ಜೋಗಿ ಹಾಡುವ ಹಾಡ…

ಭಾರತವೂ ಭಯೋತ್ಪಾದಕ ರಾಷ್ಟ್ರ: ಕ್ರಿಕೆಟ್ ಜಗತ್ತು

15 ಮಾರ್ಚ್

 

(ನಗಾರಿ ಕಿರಿಕಿರಿ ಕ್ರಿಕೆಟ್ಟು ಬ್ಯೂರೋ)

ಅಫಘಾನಿಸ್ತಾನದ ಬಾಡಿಗೆ ಹಂತಕರು, ತಮ್ಮದೇ ಸೈನ್ಯದ ಬೇನಾಮಿ ಸೈನಿಕರು, ಬಲೂಚಿಸ್ತಾನದ ಬುಡಕಟ್ಟು ಪಂಗಡದ ಯೋಧರನ್ನು ಭಾರತದೊಳಕ್ಕೆ ನುಗ್ಗಿಸಿ ಭಾರತೀಯ ಸೇನೆಯ ತಾಣಗಳ ಮೇಲೆ, ಕಾಶ್ಮೀರದಲ್ಲಿನ ಮುಸ್ಲಿಮೇತರ ಜನರ ಮೇಲೆ ದಾಳಿ ನಡೆಸಿ ಅದನ್ನು ಜಿಹಾದ್, ಸ್ವಾತಂತ್ರ್ಯ ಹೋರಾಟ, ಧರ್ಮ ಯುದ್ಧ ಎಂದು ಕರೆದುಕೊಂಡು ಹೆಮ್ಮೆಯಿಂದ ಸೋಲುತ್ತಿದ್ದ ಪಾಕಿಸ್ತಾನ ತನ್ನ ಹೋರಾಟವನ್ನು ಹೊಸತೊಂದು ಎತ್ತರಕ್ಕೆ ಕೊಂಡೊಯ್ದದ್ದು ಇತ್ತೀಚೆಗೆ. ಆಟದ ಮೈದಾನದಲ್ಲಿ ನಡೆಯುವ ಕಾಳಗವನ್ನು ಬೌಂಡರಿ ಲೈನ್ ದಾಟುತ್ತಿದ್ದಂತೆಯೇ ಮರೆತು ಬಿಡಬೇಕು ಎಂದು ವಿವೇಕಿ ಕ್ರಿಕೆಟಿಗರು ಹೇಳಿದ್ದಾರಾದರೂ ಈ ಬೌಂಡರಿಯಿಲ್ಲದ, ಮಿತಿಯಿಲ್ಲದ, ಮತಿಯಿಲ್ಲದ ಭಯೋತ್ಪಾದಕರಿಗೆ ಶ್ರೀಲಂಕಾದ ಕ್ರಿಕೆಟಿಗರೂ ಗುರಿಯಾದದ್ದು ದುರದೃಷ್ಟಕರ. ಅಷ್ಟು ಮಂದಿ ಆಟಗಾರರು ಎದುರು ಸಿಕ್ಕರೂ ಒಂದೂ ಗುರಿಯನ್ನು ಸರಿಯಾಗಿ ಮುಟ್ಟದಂತೆ ಶೂಟ್ ಮಾಡಿದ ಭಯೋತ್ಪಾದಕರಿಗೆ ತರಬೇತಿ ಸಿಕ್ಕಿದ್ದು ಪಾಕಿಸ್ತಾನದಲ್ಲೇ ಎಂದು ಸಾಬೀತು ಮಾಡಲು ಬೇರೆ ಸಾಕ್ಷಿಗಳೇ ಬೇಕಿಲ್ಲ.

ಲಂಕನ್ ಕ್ರಿಕೆಟ್ ತಂಡದೊಂದಿಗೇ ತಾವೂ ಹೊರಡುತ್ತಿದ್ದ ಪಾಕಿಸ್ತಾನದ ತಂಡ ಆ ದಿನ ಮಾತ್ರ ಹಿಂದಕ್ಕೆ ಉಳಿಯಲು ಯಾವ ಕೋಚು ಚಿಟ್ ಕಳುಹಿಸಿರಬೇಕು ಎಂದು ಜಗತ್ತೇ ತಲೆ ಕೆಡಿಸಿಕೊಂಡು ಕೂತಿರುವಾಗ ನಾವು ಸತ್ಯಶೋಧನೆಗಾಗಿ, ಕಾಣದ ಕೈಗಳ ಕೈವಾಡದ ತನಿಖೆಗಾಗಿ ನಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟುತ್ತಿದ್ದೇವೆ.

ಪಾಕಿಸ್ತಾನವೆಂಬ ‘ಪಾತಕಿ ಸ್ಥಾನ’ದಲ್ಲಿ ಬಾಳುವೆ ಮಾಡುವುದಕ್ಕಿರಲಿ, ಆಟವಾಡುವುದಕ್ಕೂ ಜಗತ್ತು ಹೆದರುವಂತಾಗಿದೆ. ಜಗತ್ತಿನ ಕ್ರಿಕೆಟ್ ವೀರರೆಲ್ಲಾ ಪಾಕಿಸ್ತಾನಕ್ಕೆ ಕಾಲಿಡಲು ಭಯಭೀತರಾಗಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಭಾರತ ಯಾವ ಕಾಲದಿಂದಲೂ ಜರೆಯುತ್ತಿದ್ದರೂ ಅದನ್ನು ಪ್ರತಿನಿತ್ಯ ಕೇಳುವ ದೂರದ ದೇವಸ್ಥಾನದ ಗಂಟೆಯ ನಾದದ ಹಾಗೆ ಭಾವಿಸಿ ಮೈಮರೆಯುತ್ತಿದ್ದ ಜಗತ್ತು ಈಗ ಎಚ್ಚೆತ್ತುಕೊಂಡಿದ್ದೆ. ಗಂಟೆಯ ಸದ್ದಿಗೆ ತಲೆದೂಗಿಸುತ್ತಿದೆ.

ಆದರೆ ಅದರ ನಡುವೆಯೇ ಅತ್ಯಂತ ಕರ್ಕಶವಾದ ಸದ್ದೊಂದು ಕೇಳಿಬರಲು ತೊಡಗಿದೆ. ಪಾಕಿಸ್ತಾನವೆಂಬ ಹೋಲಿಕೆಗೆ ಸಿಗದ ದೇಶದ ಜೊತೆಗೆ ಭಾರತದ ಹೆಸರನ್ನೂ ತಳುಕು ಹಾಕಲಾಗುತ್ತಿದ್ದ. ಜಗತ್ತಿನಾದ್ಯಂತ ಕ್ರಿಕೆಟ್ ಕಲಿಗಳು  ಪಾಕಿಸ್ತಾನ ಮಾತ್ರವಲ್ಲ ಭಾರತದ ಹೆಸರು ಕೇಳಿದರೂ ನಮ್ಮ ತೊಡೆಗಳು ನಡುಗುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಜೊತೆಗೆ ಭಾರತವೂ ತಮಗೆ ದುಃಸ್ವಪ್ನವನ್ನು ತರಿಸುತ್ತಿವೆ ಎಂದು ವರದಿ ಮಾಡಿದ್ದಾರೆ. ಪಾಕ್ ಜೊತೆಗೆ ಭಾರತವನ್ನೂ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ. ಈ ಆಗ್ರಹದ ಧ್ವನಿಗೆ ಕ್ರಿಕೆಟ್ ಜಗತ್ತಿನದಲ್ಲದೆ ಇತರ ಧ್ವನಿಗಳೂ ಸೇರಿಕೊಂಡಿವೆ.

ಇವರ ಆಗ್ರಹಕ್ಕೆ ಕಾರಣವೇನೆಂದು ನಮ್ಮ ಆತ್ಮೀಯ ಗೆಳೆಯ ತೊಣಚಪ್ಪನವರು ವಿಚಾರಿಸಿದಾಗ ಆಸ್ಟ್ರೇಲಿಯಾ ತಂಡದ ಹೆಸರು ಹೇಳಲಿಚ್ಚಿಸದ ಆಟಗಾರನೊಬ್ಬ ಹೀಗೆಂದ, “ಭಾರತ ಭಯೋತ್ಪಾದಕ ರಾಷ್ಟ್ರವಾಗಿದೆ. ಅದರ ಹೆಸರು ಕೇಳಿದರೆ ನಮ್ಮ ಆಟಗಾರರು ಭಯದಿಂದ ತತ್ತರಿಸಿ ಹೋಗುತ್ತಾರೆ. ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದವು. ಇಡೀ ಭಾರತ ತಂಡವಲ್ಲ, ಅದರ ಒಬ್ಬ ಆಟಗಾರನನ್ನು ಕಂಡು ನಮ್ಮ ತಂಡವೇ ಭಯಭೀತಗೊಂಡಿತ್ತು. ನಮ್ಮ ತಂಡದ ಪ್ರಮುಖ ಸ್ಪಿನ್ ಬೌಲರ್ ಕನಸಿನಲ್ಲಿ ಆ ಆಟಗಾರ ಬಂದು ಭಯವನ್ನು ಹುಟ್ಟಿಸುತ್ತಿದ್ದ. ಹೇಗೋ ಭಾರತದ ಸರಣಿ ಪ್ರವಾಸದ ಸಂದರ್ಭದಲ್ಲಿ ಕಲಿತಿದ್ದ ‘ರಾಮ ರಕ್ಷಾ ಸ್ತೋತ್ರ’ವನ್ನು ಪಠಿಸಿ ಆತನನ್ನು ಸಹಿಸಿಕೊಂಡು ಆಡುತಿದ್ವಿ. ಆದರೆ ಈಗ ಇಡೀ ತಂಡಕ್ಕೆ ತಂಡವೇ ಭಯೋತ್ಪಾದಕ ಯುನಿಟ್ ಆಗಿದೆ. ಅವರ ಮೇಲೆ ಆಡಿದ ಎಲ್ಲಾ ತಂಡಗಳೂ ಸೀರೀಸ್ ಸೋಲುವುದರ ಜೊತೆಗೆ ಆ ತಂಡದ ನಾಯಕ ತಲೆ ದಂಡ ಕೊಡಬೇಕಾಗಿ ಬಂತು. ನೋಡಿ, ಈ ಧೋನಿ ಎಂಬ ಬಂಡು ಕೋರನ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ನಡೆಸಿರುವ ಭಯೋತ್ಪಾದನೆಯನ್ನ, ಇವರು ಸತತವಾಗಿ ಆರು ಸರಣಿಗಳನ್ನು ಗೆದ್ದಿದ್ದಾರೆ. ನಮ್ ತಂಡದ ಮೇಲೆ ಆಡಿ ಮಣಿಸಿದ ನಂತರ ನಮ್ಮದೇ ದೇಶದ ಮಂದಿ ನನ್ನನ್ನು ಶತ್ರುವಾಗಿ ಕಾಣಲು ಶುರುಮಾಡಿದ್ರು, ಗಾಯವಾಗದಿದ್ದರೂ, ಆಯಾಸವಾಗದಿದ್ದರೂ ನನಗೆ ವಿಶ್ರಾಂತಿ ಕೊಟ್ಟು ಕೂರುವಂತೆ ಮಾಡಿದರು. ಅಲ್ಲಿ ಇಂಗ್ಲೆಂಡಿನಲ್ಲಿ ಪೀಟರ್ ಸನ್ನಿಗೆ ಗೂಸಾ ತಿನ್ನಿಸಿದರು. ಶ್ರೀಲಂಕಾದ ನಾಯಕ ಪದವಿ ತ್ಯಾಗ ಮಾಡುವ ಮಾತನಾಡಿದ. ಜೊತೆಗೆ ಈ ಭಯೋತ್ಪಾದಕ ತಂಡಕ್ಕೆ ಸಿಕ್ಕುತ್ತಿರುವ ಆರ್ಥಿಕ ಬೆಂಬಲವೂ ಸಹ ಅಗಾಧ ಮಟ್ಟದ್ದಾಗಿದೆ. ನಮ್ ನೆಲದ ಮೇಲೆ ಬಂದು ನಮ್ಮನ್ನೇ ಎದುರು ಹಾಕಿಕೊಂಡ ಭಜ್ಜಿ ಸಿಂಗರನ್ನು ನಾವು ಏನೂ ಮಾಡಲಾಗಲಿಲ್ಲ. ಅದೇ ಕೊರಗಿನಲ್ಲಿ ನಮ್ ಸೈ-ಮೊಂಡನು ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಇಷ್ಟೆಲ್ಲಾ ಕಷ್ಟ ನಷ್ಟ, ಧ್ವಂಸ-ದಾಳಿಯನ್ನು ಮಾಡಿದ ಭಾರತವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕಾಗಿ ನಾನು ಸಮಸ್ತ ಕ್ರಿಕೆಟ್ ಜಗತ್ತಿನ ಪರವಾಗಿ ಆಗ್ರಹಿಸುತ್ತೇನೆ.”

ಆಸ್ಟ್ರೇಲಿಯಾ ನಾಯಕನ ಈ ಮಾತಿಗೆ ತಮ್ಮ ಧ್ವನಿಯನ್ನು ಸೇರಿಸಿರುವ ಅನೇಕರು, “ಭಾರತಕ್ಕೆ ಹೆದರಿ ನಮ್ಮ ದೇಶದ ಅಧ್ಯಕ್ಷ ಹೊರಗುತ್ತಿಗೆಯನ್ನು ನಿಯಂತ್ರಿಸುವ, ತನ್ನದೇ ದೇಶದ ಕಂಪೆನಿಗಳಿಗೆ ನಷ್ಟವುಂಟು ಮಾಡುವ ನಿರ್ಧಾರ ಮಾಡಬೇಕಿದೆ. ಕ್ರಿಕೆಟ್ಟಿನಲ್ಲಿ ಪುರುಷರ ತಂಡ ಮಾಡಿದ ದಾಳಿ ಸಾಲದು ಎಂಬಂತೆ ಮಹಿಳೆಯರ ತಂಡವೂ ವರ್ತಿಸುತ್ತಿದೆ. ಒಬ್ಬನೇ ಭಾರತೀಯ ಎರಡು ಆಸ್ಕರ್ ಬಾಚಿದ್ದಾನೆ, ಭಾರತದ ಕತೆಯಿರುವ ಎರಡು ಸಿನೆಮಾಗಳು ಪ್ರಶಸ್ತಿಯನ್ನು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಿವೆ. ನಮಗಿಂತ ನಿಖರವಾಗಿ ಚಂದ್ರನನ್ನು ಪರಿಚಯಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗೇ ಮುಂದುವರಿದರೆ ಭಾರತದ ಭಯದಲ್ಲಿ ಜಗತ್ತಿನೆಲ್ಲಾ ರಾಷ್ಟ್ರಗಳು ಅಳುತ್ತಾ ಕೂರುವುದು ನಿಶ್ಚಿತ. ಅದಕ್ಕೇ ಭಾರತವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲೇ ಬೇಕು.” ಎಂದು ನಮ್ಮ ತೊಣಚಪ್ಪನವರಲ್ಲಿ ತಮ್ಮ ದುಃಖ ತೋಡಿಕೊಂಡರು.

ತಮ್ಮ ಸಂದರ್ಶನವನ್ನು ಮುಗಿಸಿಕೊಂಡು ತೊಣಚಪ್ಪನವರು ವಿಮಾನ ನಿಲ್ದಾಣದಲ್ಲಿನ ನೌಕರಿಗೆ, ವಿಮಾನದೊಳಗಿನ ಗಗನ ಸಖಿಯರಿಗೆ ತಮ್ಮ ಭಾರತದ ಪಾಸ್ ಪೋರ್ಟ್ ತೋರಿಸಿ ಭಯ ಹುಟ್ಟಿಸಿದ ಘಟನೆ ತಡವಾಗಿ ವರದಿಯಾಗಿದೆ.

(ಚಿತ್ರ: ಸಾಮ್ರಾಟರ ಕೈಚಳಕ)

ಬೂಟು ಎಸೆದ ವೀರನಿಗೆ ತಕ್ಕ ಸಜೆ!

13 ಮಾರ್ಚ್

(ನಗಾರಿ ಅಂತರಾಷ್ಟ್ರೀಯ ಸಮಾಚಾರ ಬ್ಯೂರೊ)

ಅವಧಿ ಮುಗಿಯುವ ಮುನ್ನ ತಾನು ಹಾಳು ಮಾಡಿದ ಇರಾಕಿಗೆ ಪ್ರೀತಿ ಪೂರ್ವಕವಾಗಿ ಗುಡ್ ಬೈ ಹೇಳಲು ಬಂದಿದ್ದ ಬುಶ್ ಮಹಾಶಯನನ್ನು ಏಳು ನಂಬರಿನ ಎರಡು ಬೂಟುಗಳನ್ನು ಎಸೆಯುವುದರ ಮೂಲಕ, ‘ನಾಯಿ’ ಎಂದು ವಿಶ್ ಮಾಡುವುದರ ಮೂಲಕ ಬರಮಾಡಿಕೊಂಡಿದ್ದ ಇರಾಕಿನ ಪತ್ರಕರ್ತ ಜೈದಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಸಜೆ ವಿಧಿಸಿದೆ.ತಾನು ಇರಾಕಿನ ಮುಗ್ಧರನ್ನು ಹತ್ಯೆಗೈದ ಬುಶ್‌ನನ್ನು ಕಂಡಾಗ ಭಾವೋದ್ರೇಕಕ್ಕೊಳಗಾಗಿ ಬೂಟು ಎಸೆದೆ ಎಂದು ತಪ್ಪೊಪ್ಪಿಕೊಂಡರೂ ನ್ಯಾಯಾಲಯ ಆತನಿಗೆ ದಂಡನೆ ನೀಡಿದೆ. eng_shoes_1_BM_Baye_721293g

ಈ ತೀರ್ಪನ್ನು ವಿರೋಧಿಸಿ ಇರಾಕಿನಲ್ಲಿ ಜೈದಿ ಅಭಿಮಾನಿಗಳು ತಮ್ಮ ಆಕ್ರೋಶ ತೋರ್ಪಡಿಸುತ್ತಿದ್ದರೆ ಜಗತ್ತಿನ ಈ ಮೂಲೆಯಲ್ಲಿ ತೀರ್ಪಿನ ಪರವಾಗಿ ಮಾತುಗಳು ಕೇಳಿಬರುತ್ತಿವೆ. ಅಖಿಲ ಕರ್ನಾಟಕ ಕೊರೆತ ವೀರರ, ಭಾಷಣ ಕೋರರ ಸಂಘದ ಅಧ್ಯಕ್ಷರು ನಗೆ ನಗಾರಿಯೊಂದಿಗೆ ಹೀಗೆ ಮಾತನಾಡಿ, “ಈ ಜೈದಿಯಂಥವರನ್ನು ಜೈಲಿಗೆ ಅಟ್ಟುವುದರ ಮೂಲಕ ಆತನ ಕೆಲಸಕ್ಕೆ ಜನ ಮನ್ನಣೆ ದೊರಕದಂತೆ ನೋಡಿಕೊಳ್ಳಬೇಕು. ಈ ಜೈದಿಯಂಥವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಧಕ್ಕೆ ಉಂಟಾಗುತ್ತದೆ. ಜನ ಸಾಮಾನ್ಯರು ಇವನ ಆದರ್ಶವನ್ನೇ ಅನುಕರಿಸಿದರೆ ನಾವು ವಿಪರೀತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಗಡಿಯಾರವನ್ನೇ ಏನು ಕೆಲವೊಮ್ಮೆ ಕ್ಯಾಲಂಡರನ್ನೂ ಮರೆತು ನಾವು ತನ್ಮಯರಾಗಿ ವೇದಿಕೆಯ ಮೇಲೆ ಭಾಷಣದ ಮಳೆಗರೆಯುತ್ತಿರುತ್ತೇವೆ. ಕೇಳುಗರ ಕಿವಿಯ ಆಳ ಅಗಲ, ತಲೆಯೊಳಗಿನ ಮಿದುಳಿನ ವಿಸ್ತಾರ ಅರಿಯದೆ ಮಾತಿನ ಸುನಾಮಿಯನ್ನೇ ಹರಿಸುತ್ತಿರುತ್ತೇವೆ. ಆಗ ಕೇಳುಗರೂ ಸಹ ಗಾಂಧೀಜಿಯವರ ಮೂರು ಮಂಗಗಳಲ್ಲಿ ಒಂದರ ಭಂಗಿಯಲ್ಲಿ – ಕಣ್ಮುಚ್ಚಿಕೊಂಡು ನಿದ್ರೆ ಮಾಡುತ್ತಲೋ, ಕುರುಕಲು ತಿಂಡಿ, ಗುಟಕಾ, ಎಲೆ ಅಡಿಕೆಗಳಿಂದ ಬಾಯಿ ಮುಚ್ಚಿಕೊಂಡೋ, ಐಪಾಡು, ಮೊಬೈಲುಗಳಿಂದ ಕಿವಿ ಮುಚ್ಚಿಕೊಂಡೋ- ಕೂತು ನಮ್ಮನ್ನು ಸಹಿಸಿಕೊಳ್ಳುತ್ತಾರೆ.

“ಇವರಿಗೆಲ್ಲ ಜೈದಿ ಗಾಳಿ ಬೀಸಿದರೆ ಏನಾಗುತ್ತದೆ ಊಹಿಸಿದ್ದೀರಾ? ಭಾಷಣ ಕೇಳಲು ಬಂದವರು ನಮ್ಮ ಮಾತಿನ, ಚಾಟೋಕ್ತಿಗಳ, ಕುಯುಕ್ತಿಯ ಹೇಳಿಕೆಗಳ, ಅಪಹಾಸ್ಯದ, ತರ್ಕದ ದಾಳಿಗೆ ಪ್ರತಿಯಾಗಿ ನಮ್ಮ ಮೇಲೆ ಚಪ್ಪಲಿ, ಬೂಟು, ಕಮಟು ವಾಸನೆ ಹೊಡೆಯುವ ಸಾಕ್ಸುಗಳ ಪ್ರತಿದಾಳಿ ನಡೆಸಿದರೆ ನಾವು ಎಲ್ಲಿಗೆ ಹೋಗೋಣ? ಇರಾಕಿನ ಪ್ರಸಂಗವಾದ ಮೇಲೆ ನಾವು ಎಚ್ಚೆತ್ತುಕೊಂಡು ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬನ್ನಿ ಎಂದು ಬೋರ್ಡು ಹಾಕಿಸಿ ಮುನ್ನಚ್ಚೆರಿಕೆ ತೆಗೆದುಕೊಳ್ಳಲು ಶುರು ಮಾಡಿದ್ದೇವೆ. ಆದರೂ ನಾವು ಸಂಪೂರ್ಣ ಸುರಕ್ಷಿತರಲ್ಲ.

“ಭಾಷಣ ಸೇರಲು ಬಂದ, ಕರೆದುಕೊಂಡು ಬಂದ ಜನರು ಚಪ್ಪಲಿಗಳ ಬದಲಾಗಿ ಬೇರೆ ಆಯುಧಗಳನ್ನ ಬಳಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಕೊಳೆತ ಮೊಟ್ಟೆ, ಟೊಮೆಟೊ, ಆಲೂಗಡ್ಡೆ, ಸೌತೇಕಾಯಿ, ಕಿತ್ತಲೆ ಹಣ್ಣು, ಮುದುಡಿದ ಪ್ಲಾಸ್ಟಿಕ್ ಬಾಟಲಿ, ಟೀ ಕಪ್ಪು, ಸಾಸರು, ಹೂವಿನ ಕುಂಡ, ಪೆನ್ನು, ರಟ್ಟು, ಪೆನ್ಸಿಲ್ಲು – ಹೀಗೆ ಯಾವುದರಿಂದಲಾದರೂ ದಾಳಿ ಮಾಡಬಹುದು. ಬುಶ್ ಮಹಾಶಯನೇನೋ ಸ್ಲಿಮ್ಮಾಗಿ, ಸ್ಟಿಫಾಗಿ ಇದಾನೆ ಅದ್ಕೇ ಎರಡೂ ಬೂಟುಗಳಿಂದ ತಪ್ಪಿಸಿಕೊಂಡ, ಇಡೀ ಭೂಗೋಳವನ್ನು ಹೊಟ್ಟೆಯಲ್ಲಿ ಪ್ರತಿಷ್ಠಾಪಿಸಿಕೊಂಡ ನಮ್ಮ ಪಾಡೇನು? ಇದಕ್ಕೆಲ್ಲಾ ನಾವು ಸಿದ್ಧರಾಗಿರಬೇಕು. ಪ್ರಾಣವನ್ನೇ ಒತ್ತೆಯಿಟ್ಟು ಭಾಷಣ ಸಿದ್ಧ ಪಡಿಸಿ, ಪ್ರಾಣದ ಹಂಗನ್ನೇ ಲೆಕ್ಕಿಸದೆ ಗಂಟೆ ಗಟ್ಟಲೆ ವೇದಿಕೆಯ ಮೇಲೆ ಕೊರೆಯುವುದರ ಜೊತೆಗೆ ನಾವು ಪ್ರಾಣವನ್ನೇ ಪಣಕ್ಕೊಡ್ಡಿ ಇಂತಹ ದಾಳಿಗೆ ಸಿದ್ಧರಾಗಬೇಕು. ಜನರು ನಮಗೆ ಯಾವ ಯಾವ ತೊಂದರೆಗಳನ್ನ ಒಡ್ಡುತ್ತಾರೋ ಹೇಳಲು ಬಾರದು. ನಾವು ಲಹರಿಯನ್ನು ಹಿಡಿದು ಯಾವುದೋ ಗಹನವಾದ ವಿಷಯ ಪ್ರವೇಷ ಮಾಡುವಾಗ ಕೆಲವರು ನಮ್ಮನ್ನೇ ನುಂಗುವಷ್ಟಗಲಕ್ಕೆ ಬಾಯಿತೆರೆದು ಆಕಳಿಸುತ್ತಾ ನಮ್ಮನ್ನು ಬೆದರಿಸುತ್ತಾರೆ, ಮಾತು ಅರ್ಧದಲ್ಲೇ ಇರುವಾಗ ಕಿವಿ ಕಿತ್ತು ಹೋಗುವ ಹಾಗೆ ಚಪ್ಪಾಳೆ ತಟ್ಟಿ ಭಯೋತ್ಪಾದನೆಯುಂಟು ಮಾಡುತ್ತಾರೆ. ನಾವು ಮಾತಾಡುವ ಸದ್ದು ಮೈಕಾಸುರನ ಮೂಲಕ ಹಾದು ದೊಡ್ಡ ಧ್ವನಿಯಾದರೂ ಅದನ್ನು ಮೀರಿಸುವ ಜೋರಿನಲ್ಲಿ ಹರಟೆ ಹೊಡೆಯುತ್ತಾ ನಮ್ಮ ತೊಡೆಗಳು ನಡುಗುವಂತೆ ಮಾಡುತ್ತಾರೆ. ಇವೆಲ್ಲಕ್ಕೂ ಜೈದಿಗೆ ವಿಧಿಸಿದ ಹಾಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು.”

ಇನ್ನು ತೀರ್ಪು ಸೂಕ್ತವಾದದ್ದು ಆದರೆ ಅದರ ಜೊತೆಗೆ ಮತ್ತೊಂದು ಕೆಲಸವನ್ನು ನ್ಯಾಯಾಲಯ ಮಾಡಬೇಕು ಎಂದು ಅಖಿಲ ವಿಶ್ವ ಬುಶ್ ವಿರೋಧಿ ಸಂಘದ ಉಪಾಧ್ಯಕ್ಷ ಸಲಹೆ ನೀಡಿದ್ದಾರೆ. “ಎರಡು ಬಾರಿ ಬೂಟ್ ಎಸೆಯುವ ಅವಕಾಶ ಸಿಕ್ಕಿದರೂ ಒಂದೂ ಬೂಟು ಗುರಿಯನ್ನು ತಲುಪುವಲ್ಲಿ ವಿಫಲವಾಯ್ತು. ತನಗೆ ಸಿಕ್ಕ ಅತ್ಯಂತ ಅಮೂಲ್ಯ ಅವಕಾಶವನ್ನು ತನ್ನ ಬೇಜಾವಾಬ್ದಾರಿತನದಿಂದ ಹಾಳುಮಾಡಿಕೊಂಡ ಜೈದಿಗೆ ಶಿಕ್ಷೆ ವಿಧಿಸಿದ್ದು ಸರಿಯಾಗಿಯೇ ಇದೆ. ಇದರ ಜೊತೆಗೆ ಆತನಿಗೆ ಕಾರಾಗೃಹದಲ್ಲಿ ಗುರಿ ತಪ್ಪದ ಹಾಗೆ ಬೂಟು ಎಸೆಯುವ ತರಬೇತಿಯನ್ನು ನೀಡಬೇಕು.”

(ಚಿತ್ರ: http://www.welt.de/english-news/article2894269/Rival-cobblers-claim-credit-for-shoes-thrown-at-Bush.html)

ಶಿರವೆಂಬ ಗುಡಿಯೊಳಗೆ ನೆಲೆಸಿರೋ “ಕೇಶ “ವಾ …..

12 ಮಾರ್ಚ್

ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಬಿ.ಇ ಮಾಡಿ ಪ್ರಸ್ತುತ ಮುಂಬೈನ ಟಿಸಿಎಸ್‌ನಲ್ಲಿರುವ ಕುಂದಾಪುರದ ವಿ.ಸುಮಂತ ಶಾನುಭಾಗರು ಕವಿಗಳೂ ಹೌದು, ವಿಕಟಕವಿಗಳೂ ಹೌದು. ಅವರ ಇತ್ತೀಚಿನ ಹಾಸ್ಯ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು. ಅದು ನಗೆ ನಗಾರಿಯ ಓದುಗರಿಗಾಗಿ ಇಲ್ಲಿದೆ.

ಲೋ ಸುಮಂತಾ …… ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ .

ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??. ಈ ಕೂದಲಿನ ಮೇಲೆ ಕಾಮೆಂಟರಿ ಕೇಳಿ ಕೇಳಿ ಸುಸ್ತಾಗಿದ್ದೇನೆ .ಕೆಲವೊಮ್ಮೆ ಕೊಲೆ ಮಾಡುವಷ್ಟು ಸಿಟ್ಟು ಬರುತ್ತದೆ .ಈಗ ನೀವೇ ನೋಡಿ …..

ಮೊನ್ನೆ ನಮ್ಮ ಮನೆಯ rent Agreement renew ಮಾಡುವಾಗ ಕಾರ್ಯನಿಮಿತ್ತ ಬ್ರೋಕರ್ ಬಳಿ ಹೋಗಿದ್ದೆ . ಅವನು ಅವನ ಹೊಸ Client ಗೆ " ಇಲ್ಲಿ ಮತ್ತೊಂದು plot ಖಾಲಿ ಇದೆ " ಎಂದು ಹೇಳಿ ನನ್ನ ತಲೆಯನ್ನು ನೋಡುತ್ತಾ ಕೂತರೆ ??? ಸಿಟ್ಟು ಬರುವುದಿಲ್ಲವೆ ???ನಾನೇನು ಮಾಡಲಿ ?? ಹಣೆಯ ಮೇಲೆ "Not for sale" ಎಂದು ಬೋರ್ಡ್ ಹಾಕಿ ತಿರುಗಲೇ??

ಕ್ಷೌರಕ್ಕೆಂದು ಹೋದಾಗ " ಗುರೂ … ಜೋನ್ ಅಬ್ರಾಹಂ ,ಶಾರುಕ್ ಖಾನ್ ಥರ Fomous personality ಗಳ Hair Style ಮಾಡೋ ಅಂದರೆ ಆ ಬಡ್ಡೀಮಗ " ಸಾರ್ …. Natural ಆಗಿ ನಿಮ್ಮದು ಘಜಿನಿ ಕಟ್ ಇದೆ ಇದು ಬಿಟ್ಟು ಬೇರೆ Fomous Personality ಬೇಕು ಅಂದರೆ ಗಾಂಧೀಜೀದು ಮಾಡಬಹುದು " ಅನ್ನೋದೇ ??? ಸಿಟ್ಟು ಬಂದು ಅಲ್ಲಿಂದ ಹೊರನಡೆದು ಬೇರೆ ಸೆಲೂನ್ ಗೆ ಹೋದೆ . ದೊಡ್ಡ ಕ್ಯೂ ಇತ್ತು . ಆದರೂ ನಾನೂ ಹೋಗುತ್ತಲೇ ಸೇಲೂನಿನವನು ಮೊದಲು ನಿಮಗೆ ಕಟ್ಟಿಂಗ್ ಮಾಡುತ್ತೇನೆ ಬನ್ನಿ ಸಾರ್ … ಅಂದ . ಆಯ್ತೆಂದು ಕೂತು "ಏನಪ್ಪಾ ನಂಗೆ ಯಾಕೆ First Preference ಕೊಟ್ಟೆ ಎಂದು ಕೇಳಿದರೆ ಸಾರ್ …ಅವರಿಗೆ ಕಟ್ಟಿಂಗ್ ಮಾಡ್ಲಿಕ್ಕೆ ಅರ್ಧ ಗಂಟೆ ಆಗುತ್ತೆ ನಿಮ್ಮದು ಎರಡು ನಿಮಿಷದಲ್ಲಿ ಮುಗಿಯುತ್ತಲ್ಲ … ಅದಕ್ಕೆ ಅನ್ನುವುದೇ ??? ಅಷ್ಟಲ್ಲದೆ ಕಟ್ಟಿಂಗ್ ಆದ ಮೇಲೆ ನಿತ್ಯದಂತೆ 50/- ಕೊಟ್ಟೆ . ಸಾರ್ … ನಾನು ಕೆಲಸಕ್ಕೆ ಸರಿಯಾಗಿ ಹಣ ತಗೊಳ್ಲೋನು. ಅಂಥ ಹೇಳಿ 20/- ವಾಪಾಸ್ ಕೊಡುವುದೇ ??? ಅವನ ನಿಯತ್ತಿಗೆ ಶಾಪ ಹಾಕುತ್ತ ಮನೆಗೆ ಹೋದೆ .

ಈಗ ಈ ಉದುರೋ ಕೂದಲಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ . ಅಲೋಪತಿ ,ಹೋಮಿಯೋಪತಿ , ಆಯುರ್ವೇದ ,ವಿಜ್ಞಾನ , ಹಿಮಾನಿ , ಪ್ಯಾರಾಶೂಟ್, ನವರತ್ನ ತೈಲ, ತೆಂಗಿನೆಣ್ಣೆ ,ಹರಳೆಣ್ಣೆ ,ಸೀಗೆಕಾಯಿ ಪುಡಿ , ಕ್ಲಿನಿಕ್ ಪ್ಲಸ್ , ಆಲ್ ಕ್ಲೀಯರ್ ,ಅಪ್ನಾ ಖಯಾಲ್ ರಖ್ನಾ ಅನ್ನುತ್ತಾ ಗಾರ್ನೀರ್ , ತಲೆ ಮತ್ತು ಭುಜ (Head and shoulders) , ಯೋಗ, ಧ್ಯಾನ ಇವೆಲ್ಲದರ ಪ್ರಯೋಗ ನಡೆಸಿ ಸೋತು ಹೋದೆ . ಜಪ್ಪಯ್ಯ ಅಂದರೂ ಒಂದು ಕೂದಲು ಜನ್ಮ ಪಡೆಯಲಿಲ್ಲ . ಇನ್ನು Fevicol ಹಾಕಿ ಅಂಟಿಸಿ ಕೊಳ್ಳೋದು ಮತ್ತು ಯೂರಿಯಾ ಸುಫಲಾ ದಂತಹ ರಸಗೊಬ್ಬರ ಹಾಕಿಕೊಳ್ಳುವುದು ಮಾತ್ರ ಬಾಕಿ .ಅಥವಾ ಮೋಡ ಬಿತ್ತನೆಯಂತೆ ಕೇಶ ಬಿತ್ತನೆಯನ್ನು ಸರ್ಕಾರ ಹಮ್ಮಿಕೊಳ್ಳುತ್ತದೋ ಎಂದು ಕಾದು ನೋಡುತ್ತಿದ್ದೇನೆ .

"Dude…. ನಮ್ಮ ಮನೆಯ ಹತ್ರ ಒಬ್ರು ನಾಟಿ ವೈದ್ಯರಿದ್ದಾರೆ . ಅವರು ದನದ ಜೊಲ್ಲು ತಾಗಿದರೆ ಕೂದಲು ಬೆಳೆಯುತ್ತೆ ಅಂದ್ರು" ರಂಗ ಅರುಹಿದ . ಇಡೀ ಮುಳುಗಿದವನಿಗೆ ಚಳಿ ಏನು ?? ಇದೂ ಕೂಡ ನೋಡಿಯೇ ಬಿಡೋಣ .. ಎಂದು 2 ವಾರ ಬೆಳಿಗ್ಗೆ ಬೇಗ ಎದ್ದು ಪಕ್ಕದ ಮನೆಯವರ ಕೊಟ್ಟಿಗೆಗೆ ದೌಡಾಯಿಸಿದೆ . ದನವೋ …. ಸಿಕ್ಕಿದ್ದೇ ಛಾನ್ಸು ಎಂದು ನನ್ನ ತಲೆಯನ್ನು ನೆಕ್ಕಿದ್ದೇ ನೆಕ್ಕಿದ್ದು . ಉಹೂಂ …. ಅರ್ಧ ಕೂದಲು ಬರಲಿಲ್ಲ . ಸ್ವಲ್ಪ ದಿನದ ನಂತರ ಪಕ್ಕದ ಮನೆಯ ಅಂಕಲ್ ಮನೆಗೆ ಕರೆದರು . ಹೋದ ತಕ್ಷಣ ಕಾಫಿ ಕೊಟ್ಟು . "ಏನ್ ತಲೆ ಸಾರ್ ನಿಮ್ಮದು …. ಅಂದರು . ನಾನು ಇವರೆಲ್ಲೋ ನನ್ನ ಲೇಖನಗಳನ್ನು ಓದಿ ಮೆಚ್ಚಿರಬೇಕು ಎಂದುಕೊಂಡು ಧನ್ಯವಾದ ಅನ್ನುವುದಕ್ಕೆ ಮೊದಲೇ …. ಒಂದು ವಾರದಿಂದ ನಮ್ಮ ಹಸು ಒಂದೂವರೆ ಲೀಟರ್ ಹಾಲು ಹೆಚ್ಚಿಗೆ ಕರೀತಾ ಇದೆ ಎನ್ನುವುದೇ ??? ಬಿಸಿ ಇಲ್ಲದಿದ್ದರೂ ಕಾಫಿ ಲೋಟ "ತಡಾಲ್"… ಎಂದು ಕೆಳಗೆ ಬಿತ್ತು.

"ಮಚ್ಚಾ .. ಮಚ್ಚಾ ….ಮೊನ್ನೆ ನಾನು ಕುಂದಾಪುರಕ್ಕೆ ನಮ್ಮಜ್ಜಿ ಮನೆಗೆ ಹೋಗಿದ್ದೆ . ಕರಡಿ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಂಡರೆ ಕೂದಲು ಬರುತ್ತೆ ಅಂಥ ಅಜ್ಜಿ ಹೇಳಿದ್ರು " ಸೇಟು ಫರ್ಮಾಯಿಸಿದ. ಲೋ ….ಏನೋ ?? ಆನೆ ಕೈಯಲ್ಲಿ ಕೋಲೆ ಬಸವನ ಕೈಯಲ್ಲಿ ಆಶೀರ್ವಾದ ಮಾಡಿಸ್ಕೊಳ್ಳೋದು ಕೇಳಿದ್ದೀನಿ ಇದೇನೋ ಕರಡಿ ಕೈಯಲ್ಲಿ ?? ಮತ್ತೆ ಆಮೇಲೆ ಕರಡಿ ಥರಾ ಮೈತುಂಬಾ ಕೂದಲು ಬಂದ್ರೆ ಕಷ್ಟ ಎಂದೆ . ಏಯ್ ಗುಬಾಲು….. ಇಲ್ಲಿವರ್ಗೂ ಯಾವ್ದಾದ್ರೂ ಬೋಳು ತಲೆ ಕರಡಿಯನ್ನ ನೋಡಿದ್ದೀಯಾ ??? ಮತ್ತೆ ಅದು ಆಶೀರ್ವಾದ ಮಾಡೋವಾಗ ತಲೆ ಮೇಲೆ ಕೈ ಇಡುತ್ತೆ ತಾನೆ ?? ಅಲ್ಲಿ ಮಾತ್ರ ಕೂದಲು ಬರುತ್ತೆ ಅಂಥ ಹೇಳಿದ . ಸರಿ … ಇರಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಧಾರ ಅಂತೆ . ಹಾಗೆಯೇ ಊರಿಗೆ ಬಂದ ಕರಡಿ ಕುಣಿಸುವವನಿಗೆ ನೂರು ರುಪಾಯಿ ಕೊಟ್ಟು "ನೋಡು ಈ ಆಶೀರ್ವಾದ ತಲೆಗೆ ಮಾತ್ರ ಅಂಥ ನಿನ್ನ ಕರಡಿಗೆ ಹೇಳು " ಎಂದು ತಾಕೀತು ಮಾಡಿ ಆಶೀರ್ವಾದ ಮಾಡಿಸಿಕೊಂಡೆ.ಕರಡಿ ತಲೆ ಮೇಲೆ ಕೂದಲು ಬಂತೋ ಇಲ್ಲವೊ ತಿಳಿಯದು ನನ್ನ ತಲೆ ಮೇಲೆ ವಾರ ಕಳೆದರೂ ಕೂದಲು ಚಿಗುರಲಿಲ್ಲ .

ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ "ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ…. ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ ….. ಎಂದು .

ಚರ್ಚೆ: ಸ್ನೇಹ ಸೇತು ಕಡಿಯುವ ಮುನ್ನ

11 ಮಾರ್ಚ್

ತನ್ನನ್ನು ತಾನು ಗೇಲಿ ಮಾಡಿಕೊಂಡು ನಗುವುದೇ ಅತ್ಯಂತ ಶ್ರೇಷ್ಠವಾದ ಹಾಸ್ಯ. ಇನ್ನೊಬ್ಬನ ಕಾಲೆಳೆಯುವುದೂ, ಅಸಹಾಯಕತೆಯನ್ನು ಲೇವಡಿ ಮಾಡುವುದೂ ಹಾಸ್ಯದ ಪರಿಧಿಯಲ್ಲಿ ಓಡಾಡಿಕೊಂಡಿರಲು ಪರವಾನಿಗೆ ಪಡೆದಿದೆಯಾದರೂ ಅದು ಆ ಇನ್ನೊಬ್ಬನಿಗೆ ನೋವುಂಟು ಮಾಡುವ ಯಾವ ಹಕ್ಕನ್ನು ಹೊಂದಿಲ್ಲ. ಇನ್ನೊಬ್ಬನನ್ನು ನೋಯಿಸುವ ಹಾಸ್ಯ ಕುಹಕವಾಗುತ್ತದೆ.

ಹಾಸ್ಯವನ್ನು ಸವಿಯುವುದಕ್ಕೆ, ವ್ಯಂಗ್ಯವನ್ನು ಆಸ್ವಾದಿಸುವುದಕ್ಕೆ ಹಾಸ್ಯಪ್ರಜ್ಞೆಯೆಂಬುದು ಆವಶ್ಯಕವಾಗಿ ಇರಲೇಬೇಕು. ಹಾಸ್ಯಪ್ರಜ್ಞೆ ಇಲ್ಲದ ಗಂಭೀರ ಘಮಂಡಿಗಳಿಗೆ ನವಿರಾದ, ಆರೋಗ್ಯಕರವಾದ, ಹಾರ್ಮ್‌ಲೆಸ್ ಆದ ಹಾಸ್ಯ, ವಿಡಂಬನೆಯೂ ಸಹ ವೈಯಕ್ತಿಕ ದೂಷಣೆಯಾಗಿ, ಅಫೆನ್ಸಿವ್ ಆಗಿ ಕಾಣುತ್ತೆ. ಅಂಥವರ ಬಗ್ಗೆ ಪ್ರಾಮಾಣಿಕವಾದ ಅನುಕಂಪದ ನಗೆ ಬೀರಿ ಮುಂದೆ ಸಾಗಬೇಕಷ್ಟೇ.

ಆದರೆ ನಗಿಸುವವರ, ನಗುವವರ ದಡದಲ್ಲಿ ನಿಂತವರು ಆಚೆ ದಡವರ ಬಗ್ಗೆ ಅನುಕಂಪವನ್ನೂ, ಸಹಾನುಭೂತಿಯನ್ನೂ ಹೊಂದಿರಬೇಕಾಗುತ್ತದೆ. ಆಚೆ ದಡದಲ್ಲಿ ನಿಂತು ನಗೆಪಾಟಲಿಗೆ ಈಡಾಗುವವರ ಬಗ್ಗೆ, ಅವರ ಭಾವನೆಗಳ ಬಗ್ಗೆ ಕಾಳಜಿಯಿರಬೇಕಾಗುತ್ತದೆ. ಈ ಎರಡೂ ದಡಗಳ ನಡುವಿನ ಕಂದರ ಅತಿಯಾಗದ ಹಾಗೆ ಎಚ್ಚರವಹಿಸುತ್ತಾ, ಸಹೃದಯತೆಯಿಂದ ಎರಡೂ ದಡವನ್ನು ಬೆಸೆಯುವ ಸೇತುವೆ ನಿರ್ಮಿಸುತ್ತಾ ಹಾಸ್ಯದ ನದಿಯ ನೀರನ್ನು ಸವಿಯಬೇಕು. ಇಲ್ಲವಾದಲ್ಲಿ ಎರಡೂ ಬದಿಯವರ ಮುಖದ ಮೇಲಿನ ನಗು ಮರೆಯಾಗಿ ಭಾವೋದ್ರೇಕದ ರಕ್ತದೋಕುಳಿ ಹರಿದು ನಗೆ ಬುಗ್ಗೆಯ ಹರಿವು ಕಲುಷಿತಗೊಳ್ಳುತ್ತದೆ.

ಇಷ್ಟೆಲ್ಲ ಹೇಳಲು ಕಾರಣ ಸರಳವಾದದ್ದು. ಜೋಕುಗಳಲ್ಲಿ, ವಿಡಂಬನೆಯಲ್ಲಿ ಸಾಕಷ್ಟು ಸಹಜವಾಗಿರುವ ‘ಜನಾಂಗೀಯ ನಿಂದನೆ’ಯ ಬಗ್ಗೆ ನಿಮ್ಮ ಗಮನ ಸೆಳೆಯಬೇಕಿತ್ತು. ನಮ್ಮ ಹಾಸ್ಯಕ್ಕಾಗಿ, ನಮ್ಮ ಮನರಂಜನೆಗಾಗಿ ಒಂದಿಡೀ ಜನಾಂಗದ, ಅದರ ಸದಸ್ಯರ ಭಾವನೆಗಳ ಪರಿವೆಯೇ ಇಲ್ಲದೆ ವರ್ತಿಸುವುದು ಅನಾಗರೀಕವಾಗುತ್ತದೆಯಲ್ಲವೇ? ದೇಶ ಭಕ್ತ ಪಂಜಾಬಿಗಳನ್ನು, ದೈಹಿಕ ಶಕ್ತಿಯಲ್ಲಿ ಅಪ್ರತಿಮರಾದ, ಬುದ್ಧಿಶಕ್ತಿಯಲ್ಲೂ ಯಾರಿಗೇನು ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ, ಧೈರ್ಯ- ಸಾಹಸಗಳಲ್ಲಿ ಮೊದಲಿಗರಾದ ಸರ್ದಾರ್ಜಿಗಳನ್ನು ಬುದ್ಧಿಹೀನರಾಗಿ, ಪೆದ್ದರಾಗಿ ಮೂದಲಿಸುವುದು ನಿಜಕ್ಕೂ ಅಸಹ್ಯ ಹುಟ್ಟಿಸುವ ವರ್ತನೆ. ಆ ಜನಾಂಗದ, ಜನರ ಸ್ಥಾನದಲ್ಲಿ ನಮ್ಮನ್ನೇ ಕಲ್ಪಿಸಿಕೊಂಡು ಒಮ್ಮೆ ಜೋಕುಗಳನ್ನು ಓದಿಕೊಂಡರೆ ನಾವು ಅದೆಷ್ಟೇ ಹಾಸ್ಯಪ್ರಜ್ಞೆಯುಳ್ಳವರೆಂದುಕೊಂಡರೂ ಮನಸ್ಸು ಕಹಿಯಾಗುತ್ತದೆ.

ವೈದ್ಯ, ವಕೀಲ, ಪೊಲೀಸು, ರಾಜಕಾರಣಿ, ಪತ್ರಕರ್ತ, ಕಾಲೇಜು ಪ್ರೊಫೆಸರು, ಮಠದ ಸ್ವಾಮೀಜಿ, ಮಿಶಿನರಿ ಪಾದ್ರಿ ಇವರುಗಳ ಕುರಿತ ಜೋಕುಗಳು ನೇರವಾಗಿ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿರುವುದಿಲ್ಲ. ಆಯಾ ಕ್ಷೇತ್ರದ, ಆಯಾ ವೃತ್ತಿಯ ವೈಪರೀತ್ಯಗಳನ್ನು ವ್ಯಂಗ್ಯಕ್ಕೆ, ಲೇವಡಿಗೆ, ಹಾಸ್ಯಕ್ಕೆ ಒಳಪಡಿಸುವ ಪ್ರಯತ್ನವಷ್ಟೇ ಆಗಿರುತ್ತದೆ.

ತಿಳಿದೋ ತಿಳಿಯದೆಯೋ ಈ ರೀತಿ ನಗೆಯೆಂಬ ಮಹಾ ನದಿಯ ಒಂದು ಬದಿಯಲ್ಲಿ ನಿಂತ ನಾವುಗಳು ಇನ್ನೊಂದು ಬದಿಯೊಂದಿಗಿನ ಸ್ನೇಹ ಸೇತುವನ್ನು ಕಡಿದುಕೊಳ್ಳುವ ಹಂತ ತಲುಪಿರುತ್ತೇವೆ. ಆಗ ಕೊಂಚ ಎಚ್ಚರವಹಿಸಬೇಕಷ್ಟೇ!