Archive | ಡಿಸೆಂಬರ್, 2008

ಚರ್ಚೆ: ಅಳುವ ಕಡಲಿನಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ…

24 ಡಿಸೆ

 

ಸಂಕಟದ ನೆನಪೂ ನಮ್ಮಲ್ಲಿ ನಗೆಯುಕ್ಕಿಸುವುದು ಎಂಥಾ ಸೋಜಿಗವಲ್ಲವೇ?

ಚಿಕ್ಕವರಾಗಿದ್ದಾಗ ಅಪ್ಪನ ಜೇಬಿನಿಂದ ಹತ್ತು ರುಪಾಯಿ ಎಗರಿಸಿ, ಮನೆಯ ಹಿಂದಿನ ಬೀದಿಯ ಅಪರಿಚಿತ ಅಂಗಡಿಗೆ ಹೋಗಿ ಎರಡು ರುಪಾಯಿಗೆ ಬಟಾಣಿ ತಗೆದುಕೊಂಡು ಉಳಿದ ಎಂಟು ರೂಪಾಯಿಯನ್ನು ವಾರದ ಇತರ ದಿನಗಳಿಗೆ ಎಂದು ಉಳಿಸಿಟ್ಟುಕೊಂಡು, ಬಟಾಣಿ ಮೆಲ್ಲುತ್ತಾ ಊರೆಲ್ಲಾ ತಿರುಗಿ ಮನೆಗೆ ಬಂದು ಚಡ್ಡಿ ಬಿಚ್ಚಿ ಒಗೆಯಲು ಎಸೆವಾಗ ಅಪ್ಪನ ಎದುರೇ ಚಿಲ್ಲರೆ ಠಣ್ ಠಣ್ ಎಂದು ಬಿದ್ದದ್ದು, ಹೋಂವರ್ಕ್ ಮಾಡದಿದ್ದರೂ ತಾನು ಮಾಡಿರುವುದಾಗಿಯೂ, ಹೋಂ ವರ್ಕ್ ಪುಸ್ತಕ ಮನೆಯಲ್ಲಿ ಬಿಟ್ಟುಬಂದಿರುವುದಾಗಿಯೂ, ಮರುದಿನ ತಪ್ಪದೇ ತೋರಿಸುವುದಾಗಿಯೂ ಹೇಳಿ ತಪ್ಪಿಸಿಕೊಂಡು ಮನೆಗೆ ಓಡಿ ಊಟ ತಿಂಡಿ ಬಿಟ್ಟು ಹೋಂವರ್ಕ್ ಮುಗಿಸಿ ಮಾನ ಉಳಿಸಿಕೊಂಡದ್ದು ದೊಡ್ಡವರಾದ ಮೇಲೆ ನೆನಪಾದಾಗ ನಮ್ಮಲ್ಲಿ ನಗೆಯುಕ್ಕಿಸುತ್ತದೆ.are-we-programmed-to-laugh

ತರಗತಿ ಶುರುವಾಗುತ್ತಿದ್ದ ಹಾಗೆಯೇ ಹೊಟ್ಟೆ ಕುರ್ರ್ ಕುರ್ರ್‌ರ್ ಎನ್ನುತ್ತಾ ಚಿತ್ರ ವಿಚಿತ್ರ ಸದ್ದು ಮಾಡತೊಡಗಿ ಜೀರ್ಣಾಂಗದ ವ್ಯವಸ್ಥೆಯ ಕಟ್ಟ ಕಡೆಯ ದಿಡ್ಡಿ ಬಾಗಿಲು ನಿಯಂತ್ರಣ ತಪ್ಪುವ ಮುನ್ಸೂಚನೆಯನ್ನು ನೀಡಿ ಎಚ್ಚರಿಸಿ, ನಮ್ಮೆಲ್ಲಾ ಪರಿಶ್ರಮವನ್ನು, ನಿಯಂತ್ರಣವನ್ನು, ಆತ್ಮವಿಶ್ವಾಸವನ್ನೂ ಮಣಿಸಿ ಸ್ಪೋಟಿಸಿ ಆ ಅಪಘಾತದ ಸುಳಿವು ಅಕ್ಕ ಪಕ್ಕದ ಹಿತ ಶತ್ರುಗಳಿಗೆ ಸಿಕ್ಕುಹೋಗಿ ಪಟ್ಟ ಪಡಿಪಾಟಲನ್ನು ಎಷ್ಟೋ ವರ್ಷಗಳ ನಂತರ ನೆನಪಿಸಿಕೊಂಡರೆ ಮುಜುಗರಕ್ಕಿಂತ ಹೆಚ್ಚಾಗಿ ಮನಸ್ಸು ತುಂಬಿ ನಗುತ್ತೇವೆ.

ಮುಂಬೈ ಮೇರಿ ಜಾನ್ ಸಿನೆಮಾದ ಒಂದು ದೃಶ್ಯದಲ್ಲಿ ಆಗಂತುಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಒಂದು ಸ್ಕೂಟರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಆಟೋ ಹತ್ತಿ ಹೋಗುತ್ತಾನೆ. ಅದರಲ್ಲಿ ಬಾಂಬ್ ಇರಬಹುದೆಂದು ಜನರು ಗಾಬರಿಯಾಗಿ ಪೋಲೀಸಿನವರಿಗೆ ವಾರ್ತೆ ತಿಳಿಸುತ್ತಾರೆ. ಬಾಂಬ್ ನಿಷ್ಕ್ರಿಯ ದಳದವರು ಸನದ್ಧರಾಗಿ ಬಂದು ಸ್ಕೂಟರಿನ ನಟ್ಟು ಬೋಲ್ಟುಗಳನ್ನೆಲ್ಲಾ ಬಿಚ್ಚಿ ಬೆತ್ತಲಾಗಿಸುವಷ್ಟರಲ್ಲಿ ಆ ಆಗಂತುಕ ವ್ಯಕ್ತಿ ತನ್ನ ಸ್ಕೂಟರ್ ತೆಗೆದುಕೊಂಡು ಹೋಗಲು ಬರುತ್ತಾನೆ. ತನ್ನ ಸ್ಕೂಟರಿಗಾದ ದುಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾನೆ. ಅಲ್ಲಿಯವರೆಗೆ ಆತಂಕದಲ್ಲಿ, ಜೀವವನ್ನು ಅಂಗೈಯಲ್ಲಿ ಹಿಡಿದು ನಿಂತಿದ್ದ ಜನರು ಗೊಳ್ಳೆಂದು ನಗುತ್ತಾರೆ. ಸಂಕಟ ಕಳೆದ ನಂತರ ಮನಸ್ಸು ನಗುವಿನ ಅಲೆಯನ್ನು ಎಬ್ಬಿಸಿಕೊಂಡು ನಷ್ಟ ಪರಿಹಾರ ಮಾಡಿಕೊಳ್ಳುವ ಪರಿ ಸೊಬಗಿನದಲ್ಲವೇ?

(ಕಳೆದ ಸಂಚಿಕೆಯ ಚರ್ಚೆ: ನಗುವುದು ಅಷ್ಟು ಕಷ್ಟವೇ?)

ಗೆರೆಯಲ್ಲಿ ಅರಳುವ ನಗೆ

23 ಡಿಸೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

a3

ನನ್ ಫಿಲ್ಮಿಗೆ ಹಿರೋಯಿನ್ ಹುಡ್ತಾ ಇದ್ದೀನಿ…

ನಗಾರಿ ರೆಕಮಂಡೇಶನ್ 15

23 ಡಿಸೆ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

…………………………………….

ಇಷ್ಟಗಲ ಕಣ್ಣು ಬಿರಿದುಕೊಂಡು, ತಮ್ಮ ದವಡೆಯನ್ನಷ್ಟೇ ಮೆಲಕ್ಕೆ ಕೆಳಕ್ಕೆ ಆಡಿಸುತ್ತಾ ತಮ್ಮ ಸೂತ್ರವನ್ನು ಹಿಡಿದ ಸೂತ್ರಧಾರಿಯನ್ನೇ ಮರೆಸುವಂತೆ ಮೆರೆಯುವ ಅನೇಕ ಬೊಂಬೆಗಳನ್ನು ನೀವು ನೋಡಿರಬಹುದು. ಅಸಲಿಗೆ ಈ ಗೊಂಬೆಗಳಿಗೆ ಸೂತ್ರಧಾರನೇ ಧ್ವನಿ ನೀಡುವುದು. ಮಾತಾಡಿಸುವುದು. ಆದರೆ ಇವು ಸೂತ್ರಧಾರನಿಗಿಂತ ಬುದ್ಧಿವಂತ ಎಂಬಂತೆ ಕಾಣುತ್ತವೆ. ಸೂತ್ರಧಾರನನ್ನೇ ಮರೆಮಾಡುವಷ್ಟು ಚತುರತೆಯನ್ನು ಮೆರೆಯುತ್ತವೆ. ಸೂತ್ರಧಾರ ತನ್ನೊಂದಿಗೆ ತಾನೇ ವಾದಕ್ಕೆ ಬೀಳುತ್ತಾನೆ. ಈ ಬಗೆಯ ಪ್ರದರ್ಶನ ಕಲೆಯನ್ನು ಮಾಡುವವನನ್ನು ಬೊಂಬೆಯಾಡಿಸುವಾತ –ventriloquist – ಎನ್ನುತ್ತಾರೆ.

ಇಂಗ್ಲೀಷಿನಲ್ಲಿ ತನ್ನ ವಿಶಿಷ್ಟವಾದ ಗೊಂಬೆಗಳು, ಅದ್ಭುತವಾದ ಕೊ-ಆರ್ಡಿನೇಶನ್ನಿನಿಂದ, ವೈವಿಧ್ಯೆತೆಯಿಂದ ಕೂಡಿದ ಪಾತ್ರಗಳಿಂದ ಹೆಸರು ಮಾಡಿರುವ ಬೊಂಬೆಯಾಡಿಸುವವ ಜೆಫ್ ಡನ್‌ಮನ್. ಈತ ಸ್ಟ್ಯಾಂಡ್ ಅಪ್ ಕಾಮಿಡಿಯಲ್ಲೂ ಹೆಸರು ಮಾಡಿರುವ ನಲವತ್ತೆಂಟು ವರ್ಷದ ಅಮೇರಿಕನ್.

ಈತ ಸೃಷ್ಟಿಸಿರುವ ಅನೇಕ ಪಾತ್ರಗಳು ತಮ್ಮ ವಿಶಿಷ್ಟ ವರ್ತನೆಗಳಿಂದ ನಮ್ಮನ್ನು ಮನರಂಜಿಸುತ್ತವೆ. ತುಂಬಾ ಸೂಕ್ಷ್ಮವಾದ ಹಾಸ್ಯದಿಂದ ಹಿಡಿದು, ಅಶ್ಲೀಲದ ಎಲ್ಲೆಯನ್ನು ದಾಟಿ ಒಂದು ಕಾಲು ಆಚೆಗಿಡುವ ಹಾಸ್ಯದವರೆಗೆ ಎಲ್ಲಾ ಬಗೆಯ ಹಾಸ್ಯವೂ ಈತನ ಪ್ರದರ್ಶನದಲ್ಲಿ ಹಾದುಹೋಗುತ್ತದೆ.

ಸದಾ ಸಿಡಿಮಿಡಿ ಮಾಡುವ ಮುದುಕ ವಾಲ್ಟರ್, ಪರ್ಪಲ್ ಬಣ್ಣದ ಅಗಲವಾದ ಕೆನ್ನೆಗಳ, ಹಸಿರು ಜುಟ್ಟಿನ, ಒಂದೇ ಕಾಲಿಗೆ ಶೂ ಹಾಕಿಕೊಂಡ ಪೀನಟ್, ಕಟ್ಟಿಯ ಮೇಲೆ ಕುಳಿತ ಜೊಸೆ ಜಲಾಪೆನೊ, ಜೆಫ್ ಹೆಸರಿನ ತನ್ನದೇ ಬೊಂಬೆ, ಅಖ್ಮದ್ ಎಂಬ ಅಸ್ಥಿಪಂಜರ ಹೊಂದಿರುವ ಸತ್ತ ಭಯೋತ್ಪಾದಕ, ಮೆಲ್ವಿನ್ ಎನ್ನುವ ಸೂಪರ್ ಹೀರೋ, ಬುಬ್ಬ, ಸ್ವೀಟ್ ಡ್ಯಾಡಿ- ಇವು ಆತನ ಬತ್ತಳಿಕೆಯಲ್ಲಿರುವ ಬೊಂಬೆಗಳು.

ಇವುಗಳಲ್ಲಿ ಅತ್ಯಂತ ರಂಜನೀಯವಾದ, ತನ್ನ ಮ್ಯಾನರಿಸಂನಿಂದಲೇ ಹೊಟ್ಟೆ ಹುಣ್ಣಾಗಿಸುವ ಅಖ್ಮದ್‌ನ ಪಾತ್ರದ ಪ್ರದರ್ಶನದ ತುಣುಕು ಇಲ್ಲಿದೆ, ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್:

ಡನ್ ಮನ್ ತನ್ನ ಬೊಂಬೆ ಅಖ್ಮದ್ ಜೊತೆ

ಗಜನಿ ಅಮೀರ್‌ಗೆ ಧಿಕ್ಕಾರ!

22 ಡಿಸೆ

ಗಣೇಶ್

ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ

ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.

ಗಮನಿಸಿ ನೋಡಿದಾಗ ಗೊತ್ತಾಯಿತು-ಅದು ಆಮೀರ್ ಖಾನ್‌ನ ಘಜನಿ ಚಿತ್ರದ ಪೋಸ್ಟರ್-ನನ್ನ ಬೆಡ್‌ನ ಎದುರಿನ ಗೋಡೆಯಲ್ಲಿತ್ತು. ಬೆಳ್ಳಂಬೆಳಗ್ಗೆ ಏಳುವಾಗ ನೋಡಲು ಲಕ್ಷ್ಮಿ ಫೋಟೋ, ಹೋಗಲಿ ಕತ್ರೀನಾಳಾದ್ದಾದರೂ ಹಾಕಬಾರದೆ. (ಹೆಗಲಿನ ಮಟ್ಟಕ್ಕೆ ಬೆಳೆದ ಮಕ್ಕಳಿರುವಾಗ ಇದನ್ನೆಲ್ಲಾ ಯೋಚನೆ ಮಾಡಬಾರದು. ಶಾಂತಂ ಪಾಪಂ.)

ಬರೀ ಮೇಲ್ಮೈ(ಮೇಲಿನ+ಮೈ), ಕೆಟ್ಟ ನೋಟ, ತಲೆಯಲ್ಲಿ ಕಾಫೀತೋಟದ ರಸ್ತೆ ತರಹ ಅಡ್ಡಾದಿಡ್ಡಿ ಗೆರೆ-ಈ ಪೋಸ್ಟರ್ ನನ್ನ ಕೋಣೆಯಲ್ಲಿ ಅಂಟಿಸಿರಬೇಕಾದರೆ ಏನೋ ಮಸಲತ್ತು ನಡೆಯುತ್ತಿದೆ ಎಂದು ಅಂದಾಜಿಸಿದೆ.

ಏನೂ ಗೊತ್ತಿಲ್ಲದವನಂತೆ ಎದ್ದು ನನ್ನ ನಿತ್ಯದ ಕೆಲಸ (ಪಾತ್ರೆ ತೊಳೆಯುವುದು, ಗುಡಿಸುವುದು…) ಮಾಡುತ್ತಿದ್ದೆ. ಮಕ್ಕಳಿಗೆ ತಡೆಯಲಾಗಲಿಲ್ಲ-‘ಕೋಣೆಯಲ್ಲಿದ್ದ ಫೋಟೋ ನೋಡಲಿಲ್ಲವಾ ಅಪ್ಪಾ’ ಎಂದು ಕೇಳಿದರು. ಹೊಸದಾಗಿ ನೋಡುವವನಂತೆ ಹೋಗಿ ನೋಡಿದೆ.

‘ಓಹೋ, ಶಾರುಕ್ ಖಾನ್ ಫೋಟೋ! ಚೆನ್ನಾಗಿಲ್ಲ. ನಿಮ್ಮ ಕೋಣೆಯಲ್ಲಿಯೇ ಹಾಕಿಕೊಳ್ಳಿ’ ಎಂದೆ.

‘ಇಲ್ಲಾಪ್ಪಾ, ಇದು ಆಮೀರ್ ಖಾನ್. ಬಾಡಿ ನೋಡಿ ಹೇಗಿದೆ?’ ಎಂದ ಮಗರಾಯ.

(ಬಾಡಿ..ಹೀರೋಯಿನ್‌ಗಳದ್ದಾಗಿದ್ದರೆ ಸೌಂದರ್ಯ ತುಂಬಿ ತುಳುಕುತ್ತಿತ್ತು. ಈ ಬಾಡಿ ನೋಡಿದಾಗ ಅಂಗಡಿಗಳಲ್ಲಿ ಒಂದರ ಮೇಲೆ ಒಂದು ಜೋಡಿಸಿಟ್ಟ ಪ್ಯಾಕ್‌ಗಳಂತೆ ಕಾಣುತ್ತದೆ. ಆದರೆ ಇದನ್ನು ಮಕ್ಕಳೆದುರು ಹೇಳಲಾಗುತ್ತದಾ?)

ಈಗ ಅಂದಾಜಾಯಿತು. ಇದು ನನ್ನ ಸಿಗರೇಟು, ಕುಡಿತ, ‘೧೦ ಪ್ಯಾಕ್ ಹೊಟ್ಟೆ’ಗೆ ಕತ್ತರಿ ಹಾಕುವ ಪ್ಲಾನ್..

ಈ ಮಕ್ಕಳು ಹೇಗೆ ಬೆಳೀತಾವೆ ನೋಡಿ. ನಿನ್ನೆವರೆಗೆ ಚಡ್ಡಿ ಸರಿ ಹಾಕಲಿಕ್ಕೆ ಬರದಿದ್ದವು ಈಗ ಬಾಡಿ ಬಗ್ಗೆ ನನಗೇ ಹೇಳುವಷ್ಟು ದೊಡ್ಡವರಾದರು.

‘ ನೋಡೋ, ನಾನು ಬಾಡಿ ಬೆಳಸಿ ಇನ್ನು ಸಾಧಿಸಬೇಕಾದ್ದೇನೂ ಇಲ್ಲ. ನೀವು ಬೇಕಿದ್ದರೆ

ಜಿಮ್‌ಗೆ ಸೇರಿ ಪ್ರಯತ್ನಿಸಿ’ ಅಂದೆ. ಅಷ್ಟು ಹೊತ್ತಿಗೆ ನನ್ನ ಮನೆಯಾಕೆಯ ಪ್ರವೇಶವಾಯಿತು.

‘ ನೋಡೇ, ಆತನ ತರಹ ಬಾಡಿ ಬೆಳೆಸಲು ಮಕ್ಕಳಿಗೆ ಗೆ ಗೆ, ಅಲ್ವೇ ನನಗೆ ಬೆಳಗ್ಗೆ ಟೈಮ್ ಎಲ್ಲಿದೆ? ಗುಡಿಸಿ ಒರೆಸುವುದಕ್ಕೇ ಟೈಮ್ ಸಾಲುವುದಿಲ್ಲಾ..’

ವ್ಯಾಯಾಮ ಅಥವಾ ಮನೆಕೆಲಸದಲ್ಲಿ ಒಂದನ್ನು ಕ್ಯಾನ್ಸಲ್ ಮಾಡಿಯಾಳು ಎಂದೆಣಿಸಿದೆ.

‘ಮಧ್ಯರಾತ್ರಿವರೆಗೆ ಟೈಪ್‌ರೈಟರ್ ಕುಟ್ಟುತ್ತೀರಲ್ಲ. ಅದನ್ನು ಬಿಟ್ಟು, ಬೇಗ ಮಲಗಿ, ಬೆಳಗ್ಗೆ ೪ ಘಂಟೆಗೆ ಎದ್ದು ವ್ಯಾಯಾಮ ಮಾಡಿ, ನಂತರ ಉಳಿದ ಕೆಲಸ ಮಾಡಿದರಾಯಿತು.’ ಅಂದಳು. ಹೋಗಿ ಮುಟ್ಟಿದ್ದು ಅಲ್ಲಿಗೇ.. ‘ಸಂಪದ’ವನ್ನು ಮೊದಲಿಂದಲೂ ಸವತಿ ತರಹ ನೋಡುತ್ತಾಳೆ.

ಮುಂದೇನಾಯಿತು ಎಂದು ನೀವು ಆಲೋಚಿಸಿದ್ದೀರೋ ಅದೇ ಆಯಿತು.

ಈಗ ಈ ಚ ಚ ಛಳಿಯಲ್ಲಿ – ನೀವೆಲ್ಲಾ ಕಂಬಳಿ ಹೊದ್ದು ಸುಖನಿದ್ದೆಯಲ್ಲಿರುವಾಗ- ನಾನು- ಈ ಪಾಪಿ ಘಜನಿಯಿಂದಾಗಿ-ಜಾಗಿಂಗ್ ಮಾಡುತ್ತಿದ್ದೇನೆ. ಸ್ಯಾಂಕೀಟ್ಯಾಂಕಿನ ಪಕ್ಕದ ಪೂಲ್‌ನಲ್ಲಿ ಸ್ವಿಮ್ ಮಾಡುತ್ತಿದ್ದೇನೆ,

ಈ ಸಿಕ್ಸ್ ಪ್ಯಾಕ್ ಆಮೀರ್‌ನಿಂದಾಗಿ-

ನನ್ನ ಒಂದು ಪ್ಯಾಕ್ ಸಿಗರೇಟಿಗೆ ಕತ್ತರಿ

ಒಂದೇ ಒಂದು (೨,೩,೪..)ಪೆಗ್‌ಗೂ ಕತ್ತರಿ

ಅರ್ಧ(ರಾತ್ರಿ) ಗಂಟೆ ಸಂಪದ ನೋಡಲೂ ಕತ್ತರಿ ಪ್ರಯೋಗವಾಗಿದೆ.

ಅಮಿತಾಬ್ ಶರ್ಟ್‌ನ ಒಂದು ಬಟನ್ ಸಹ ಬಿಚ್ಚದೇ ಈಗಲೂ ಹೀರೋ ಆಗಿ ಇಲ್ಲವಾ?

ಇಷ್ಟಕ್ಕೆಲ್ಲಾ ಕಾರಣನಾದ ಆಮೀರ್ ಘಜನಿ ರಿಲೀಸ್‌ಗೆಂದು ಬೆಂಗಳೂರಿಗೆ ಬಂದಾಗ ಧಿಕ್ಕಾರ ಕೂಗಬೇಕೆಂದಿದ್ದೇನೆ.

-ಗಣೇಶ(ಸದ್ಯದಲ್ಲಿ ಸಿಕ್ಸ್ ಪ್ಯಾಕ್ ಗಣೇಶ)

(‘ಸಂಪದ’ದಲ್ಲಿ ಪ್ರಕಟವಾದದ್ದು)

ಬ್ಲಾಗ್ ಬೀಟ್ 18

22 ಡಿಸೆ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

 

ಮಜಾವಾಣಿ

ತಮ್ಮದೇ ಸ್ವಂತ ನೆಲೆಯನ್ನು ಕಂಡುಕೊಂಡಿರುವ ಮಜಾವಾಣಿ ತಮ್ಮ ಮೂರುವರೆ ಓದುಗರನ್ನು ಬಹುಕಾಲ ಕಡೆಗಣಿಸಿ ಅವರಿಗೆ ಯಾವ ಸುದ್ದಿಯನ್ನೂ ಕೊಡದೆ ಅನ್ಯಾಯ ಮಾಡುತ್ತಿತ್ತು.
ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಮಜಾವಾಣಿ ಒಳ್ಳೆಯ ಸುದ್ದಿಯನ್ನು  ಹೊತ್ತು ಬಂದಿದೆ. ಚಂದ್ರಯಾನದ ಅಪೂರ್ವ ಯಶಸ್ಸಿನಿಂದ ಹಿಗ್ಗಿರುವ ಇಸ್ರೋದ ವಿಜ್ಞಾನಿಗಳು ಹೊಸತೊಂದು ಸವಾಲಿಗೆ ಸಿದ್ಧರಾಗುತ್ತಿದ್ದಾರೆ ಎಂದು ವರದಿ ಮಾಡಿದೆ.

ಬೊಗಳೆ ರಗಳೆ

ಪಾಕಿಸ್ತಾನದ ಜಬರ್ದಾರಿ ಅಧಕ್ಷರ ಯು ಟರ್ನುಗಳನ್ನು ಕಂಡು ಕಂಗೆಟ್ಟು, ಕುಲಗೆಟ್ಟು ಹೋಗಿರುವ ಬೊಗಳೆ ರಗಳೆಯ ರದ್ದಿಗಾರ ಕರ್ನಾಟಕದ ಘಾಟು ರಸ್ತೆಗಳು ನೇರವಾಗಿರುವ ಸುದ್ದಿಯನ್ನು ಅರುಹಿದ್ದಾನೆ.
“ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ. ”  ಎಂದು ಅಸತ್ಯಾನ್ವೇಷಿಗಳು ಕೈಚೆಲ್ಲಿ ಕೂತಿರುವುದರಿಂದ ಸಾಮ್ರಾಟರು ತನಿಖೆಗಾಗಿ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟಲು ಒಂದು ನಕಲಿ ಪಾಸ್ ಪೋರ್ಟಿಗಾಗಿ ಪ್ರಯತ್ನಿಸುತ್ತಿದ್ದಾರೆ!

ವಾರೆ ಕೋರೆ

ಶುದ್ಧ ತರ್ಲೆ ಮಾಸಪತ್ರಿಕೆಯೊಂದನ್ನು ತೆರೆದಿರುವ ಪ್ರಕಾಶ್ ಶೆಟ್ಟಿ ‘ವಾರೆ ಕೋರೆ’ ಪತ್ರಿಕೆಯ ಹೆಸರಿನಲ್ಲೇ ಒಂದು ಬ್ಲಾಗನ್ನು ತೆರೆದಿದ್ದಾರೆ. ಈ ಬ್ಲಾಗಿನಲ್ಲಿ ‘ವಾರೆ ಕೋರೆ’ಯ ಪ್ರಾಯೋಗಿಕ ಸಂಚಿಕೆಯ ಪುಟಗಳನ್ನು ಏರಿಸಲಾಗಿದೆ.

ಪಂಚ್ ಲೈನ್

ಬ್ಲಾಗಿಂಗಿಗೆ ಅನಿವಾರ್ಯವಾಗಿ ಬಂಕ್ ಮಾಡಿದ್ದ ಗಣೇಶ್.ಕೆ ವಾಪಸ್ಸಾಗಿದ್ದಾರೆ. ಇತ್ತೀಚೆಗೆ ತಮ್ಮ ಪಂಚನ್ನೂ ಲೈನನ್ನೂ ಹುಡುಗ ಹುಡುಗಿಯರ ಬಗ್ಗೆ ಸೀಮಿತಗೊಳಿಸಿರುವ ಅವರಿಗೆ ತಮ್ಮ ಪಂಚುಗಳು ಕೇವಲ ಹುಡುಗರಿಗಾಗಿ ಅಲ್ಲ ಎಲ್ಲರಿಗೂ ಎಂದು ಘೋಷಿಸಿದ್ದಾರೆ.
“ಹುಡುಗ – ಹುಡುಗಿಯರ ನಡುವಿನ chemistry ಯ strategy ಬಗ್ಗೆ ತಲೆಕೆಡಿಸುವ ಪಂಚ್ ಲೈನ್ ಗಳೂ ಇವೆ. ತಲೆಕೆಡಿಸಿಕೊಳ್ಳುವ ಹುಡುಗಿಯರಿದ್ದಾರಾ..? ” ಎಂದು ಕೇಳುವ ಗಣೇಶರ ಸಂಕಟವನ್ನು ತಾಳಲಾರದೆ ಖುದ್ದು ಸಾಮ್ರಾಟರೇ ತನಿಖೆ ಮಾಡಿ ಹುಡುಗ ಹುಡುಗಿಯರು ತಮ್ಮ ನಡುವಿನ ಬಯಾಲಜಿ, ಫಿಸಿಕ್ಸು, ಮೆಕಾನಿಕ್ಸಿನ ಬಗ್ಗೆ ತಿಳಿಯುವಲ್ಲಿ ಬ್ಯುಸಿಯಾಗಿ ಕೆಮಿಸ್ಟ್ರಿ ಓದಲು ಸಮಯವಿಲ್ಲದಾಗಿದೆ ಎಂದು ತಿಳಿದು ಬಂದಿದೆ!

ಬೂಶ್ ಮಹಾಶಯನ ಆದರ್ಶ ಅನುಕರಣೀಯ

17 ಡಿಸೆ

(ನಗೆ ನಗಾರಿ ಉದ್ಯಮ ವಾರ್ತೆ)


ಜಗತ್ತಿನ ಶ್ರೀಮಂತ ರಾಷ್ಟ್ರಗಳೆಲ್ಲಾ ಆರ್ಥಿಕ ಕುಸಿತದ ಭೂತದಿಂದ ನರಳುತ್ತಿರುವಾಗ, ಎಲ್ಲಾ ಕಂಪೆನಿಗಳು ತಮಗಾಗುತ್ತಿರುವ ನಷ್ಟವನ್ನು ತಪ್ಪಿಸುವುದಕ್ಕಾಗಿ ಒಬ್ಬ ಉದ್ಯೋಗಿ ಒಬ್ಬ ಮನುಷ್ಯನ ಆಹಾರವನ್ನು ಮಾತ್ರ ತಿನ್ನಬೇಕು, ಒಬ್ಬಳು ಕೇವಲ ನಾಲ್ಕು ಪೂರ್ತಿ ಊಟಗಳಿಗಾಗುವಷ್ಟು ಖರ್ಚನ್ನು ತನ್ನ ಮೇಕಪ್‌ಗಳಿಗಾಗಿ ವಿನಿಯೋಗಿಸಬೇಕು, ವಾರಕ್ಕೆ ಒಂದೇ ಬಾರಿ ದುಬಾರಿ ಹೊಟೇಲಿನಲ್ಲಿ ಊಟ ಮಾಡಬೇಕು, ವಾರಕ್ಕೆ ಎರಡೇ ಬಾರಿ ಗುಂಡು ಪಾರ್ಟಿ ಇಟ್ಟುಕೊಳ್ಳಬೇಕು, ಹೆಚ್ಚೆಂದರೆ ವಾರಕ್ಕೆ ಮೂರು ಸಿನೆಮಾಗಳನ್ನು ಮಲ್ಟಿಪ್ಲೆಕ್ಸುಗಳಲ್ಲಿ ನೋಡಬೇಕು, ಮನೆಕೆಲಸಕ್ಕೆ ಗರಿಷ್ಠ ಇಬ್ಬರನ್ನು ನೇಮಿಸಿಕೊಳ್ಳಬಹುದು, ಒಂದಿಡೀ ಮಧ್ಯಮವರ್ಗದ ಒಂದು ತಿಂಗಳ ಬಜೆಟ್ಟನ್ನು ಫರ್ ಫೂಮಿಗಳಿಗಾಗಿ ಖರ್ಚು ಮಾಡುವುದನ್ನು ಹತ್ತಿಕ್ಕಬೇಕು  ಎಂದು ಕಟ್ಟಳೆಯನ್ನು ವಿಧಿಸುತ್ತಿದೆ. ಯುದ್ಧಕಾಲದಲ್ಲಿ ಭೀಕರ ಆಹಾರ ಕೊರತೆ ಸಮಸ್ಯೆ ಉದ್ಭವಿಸಿದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಜನರಿಗೆ ಒಂದು ಹೊತ್ತಿನ ಊಟವನ್ನು ಬಿಡುವಂತೆ ಮನವಿ ಮಾಡಿದಾಗ ದೇಶದ ಜನತೆ ಸ್ಪಂದಿಸಿದ ಹಾಗೆಯೇ ಈ ಮೊದಲು ಉಲ್ಲೇಖಿಸಿರುವ ನಿಬಂಧನೆಗಳಿಗೆ  ಕಂಪೆನಿಗಳ ಉದ್ಯೋಗಿಗಳು ಸ್ಪಂದಿಸುತ್ತಿದ್ದಾರೆ.

ತಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ ಎಂದು ನಂಬಿಕೊಂಡಿದ್ದ ಉದ್ಯಮಪತಿಗಳು, ಬಿಸಿನೆಸ್ ಟೈಕೂನುಗಳು ಕಂಡಕಂಡದ್ದನ್ನೆಲ್ಲಾ ಮುಟ್ಟಿ ಮುಟ್ಟಿ ತಡಕಾಡಿ ಕೈ ನೋವು ಮಾಡಿಕೊಂಡರೂ ಕಿಲುಬು ಕಾಸು ಹುಟ್ಟುತ್ತಿಲ್ಲ. ಇದಕ್ಕೆಲ್ಲಾ ಭಾರತದಂತಹ ಆಸೆಬುರುಕ ದೇಶಗಳ ಜನರು ಹೆಚ್ಚೆಚ್ಚು ಹೊಟ್ಟೆ ಬಾಕರಾಗಿದ್ದೇ ಕಾರಣ ಎಂದು ಅಮೇರಿಕಾದ ಅಧ್ಯಕ್ಷರು ಖಾಸಗಿಯಾಗಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಗಾಗಿ ಬೆಂಗಳೂರು ವಿವಿಗೆ ಅರ್ಜಿಗುಜರಾಯಿಸಿದ್ದು ಹಳೆಯ ಸುದ್ದಿ.

bush-booted

ಈ ಬಗೆಯ ಭೀಕರ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆಗಳು ನಷ್ಟವನ್ನೇ ಬೋನಸ್ಸಾಗಿ ಪಡೆಯುತ್ತಿರುವಾಗ ಉದ್ಯಮಪತಿಗಳು, ಕಂಟ್ರ್ಯಾಕ್ಟರುಗಳುಗಳಿಂದ ಪ್ರಸಾದವನ್ನು ಪಡೆದು ತಮ್ಮ ಉದರ ಪೋಷಣೆ ಮಾಡುವ ರಾಜಕಾರಣಿಗಳು ತಮ್ಮ ಸ್ವಂತ ವೇತನದಲ್ಲಿಯೇ ಉಂಡು ಉಪವಾಸ ಮಲಗಬೇಕಾದ ಸ್ಥಿತಿ ಬಂದಿದೆ. ತಮ್ಮ ಆರ್ಥಿಕ ಸುಭದ್ರತೆಗಾಗಿ ತಾವು ಕೈಗಾರಿಕೋದ್ಯಮಿಗಳನ್ನು, ಲಾಬಿಕೋರರನ್ನು, ರಿಯಲ್ ಎಸ್ಟೇಟ್ ದಂಧೆಯವರನ್ನು, ಗಣಿ ಧಣಿಗಳನ್ನು, ಚಿಟ್ ಫಂಡ್ಸ್ ಶೂರರನ್ನು, ಲಾಟರಿ ವೀರರನ್ನು, ಲಿಕ್ಕರ್ ದೊರೆಗಳನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು ಎಂದು ರಾಜಕಾರಣಿಗಳಿಗೆ ಮನವರಿಕೆಯಾಗತೊಡಗಿದೆ. ಹೀಗಾಗಿ ದೇಶದ ಎಲ್ಲಾ ರಾಜಕಾರಣಿಗಳು ಭಯೋತ್ಪಾದಕ ದಾಳಿ ನಡೆದಾಗಲೂ ತೋರಿಸಲು ಹಿಂದು ಮುಂದು ನೋಡಿದ ಒಗ್ಗಟ್ಟನ್ನು ತೋರಿ ಪಕ್ಷಭೇದ ಮರೆತು ಸಭೆ ಸೇರಿದರು. ಆ ಸಭೆಯಲ್ಲಿ ತಮ್ಮ ಸ್ವಾವಲಂಬನೆಗೆ ರಾಜಕಾರಣಿಗಳು ಏನು ಮಾಡಬೇಕು, ಯಾವ ವ್ಯಾಪಾರವನ್ನು ಶುರು ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಲಾಭದಾಯಕ ಎಂದು ಸಮಾಲೋಚನೆ ನಡೆಸಿದರು.


ನಕಲಿ ಗುರುತು ಚೀಟಿ ಬಳಸಿ ಸಮಾವೇಶದ ಪ್ರವೇಶ ಗಿಟ್ಟಿಸಿಕೊಂಡಿದ್ದ ನಗೆ ಸಾಮ್ರಾಟರು ಸಭೆಯಲ್ಲಿ ಯಾರೊಬ್ಬರೂ ಒಂದೂ ಐಡಿಯಾ ಕೊಡದೆ ತೆಪ್ಪಗೆ ಕುಳಿತಿದ್ದನ್ನು ಕಂಡು ಬೇಸರ ಗೊಂಡರು. ಇದ್ದುದರಲ್ಲಿ ಒಬ್ಬ ಪ್ರಾಮಾಣಿಕಮಂತ್ರಿಯೊಬ್ಬರು ಮಾತನಾಡಿ, ‘ತಲೆ ಉಪಯೋಗಿಸುವ ಕೆಲಸವನ್ನು ನಾವು ಬಿಟ್ಟು ತುಂಬಾ ವರ್ಷಗಳಾಗಿವೆ. ಮೆದುಳಿನ ಕೆಲಸವನ್ನೆಲ್ಲಾ ನಮ್ಮ ಸೆಕ್ರಟರಿಗಳಿಗೆ ವರ್ಗಾಯಿಸಿರುವುದರಿಂದ ನಮ್ಮ ಮೆದುಳುಗಳು ಕೆಲಸ ಮಾಡುವುದಕ್ಕೆ ಸ್ವಲ್ಪ ಕಷ್ಟ ಪಡುತ್ತಿವೆಎಂದು ಆತ್ಮನಿವೇದನೆ ಮಾಡಿಕೊಂಡರು. ಮತ್ತೊಂದು ಅರ್ಧ ಗಂಟೆ ಕಳೆದರೂ ಎರಡು ಗ್ಯಾಲನ್ ಕಾಫಿ, ಒಂದು ಟನ್ನು ಬಿಸ್ಕೇಟುಗಳು ಕರಗಿದವೇ ವಿನಃ ನಮ್ಮ ಶಾಸಕರ ಮೆದುಳುಗಳು ಸ್ಟಾರ್ಟ್ ಆಗಲಿಲ್ಲ.


ಇದೇ ಸಂದರ್ಭವನ್ನು ಬಳಸಿಕೊಂಡು ನಗೆ ಸಾಮ್ರಾಟರು ತಮ್ಮ ಆಲೋಚನೆಯನ್ನು ಸಭೆಯಲ್ಲಿ ಮಂಡಿಸಿದರು. ‘ನಾನು ಈ ಕ್ಷೇತ್ರಕ್ಕೆ ಹೊಸಬ ಹೀಗಾಗಿ ನನ್ನ ಪರಿಚಯ ನಿಮಗೆ ಇರಲಾರದು. ನಾನಿನ್ನೂ ಈ ಫೀಲ್ಡಿಗೆ ಹೊಸಬನಾದ್ದರಿಂದ ನನ್ನ ಮೆದುಳು ಇನ್ನೂ ಕೆಲಸ ಮಾಡುತ್ತಿದೆ. ನಾನು ನಿಮ್ಮೆಲ್ಲರ ಆದರ್ಶ, ಮಾರ್ಗದರ್ಶನದಿಂದ ಅತಿ ಶೀಘ್ರದಲ್ಲಿ ಅದು ಕೆಲಸ ನಿಲ್ಲಿಸುವಂತೆ ಮಾಡಲು ಪ್ರಯತ್ನಿಸುವೆ. ಸದ್ಯಕ್ಕೆ ಈ ಸಮಸ್ಯೆಗೆ ಒಂದು ಪರಿಹಾರ ನನ್ನ ಬಳಿ ಇದೆ.

ಮೊದಲೇ ಹೇಳಿದ ಹಾಗೆ ನಾನಿನ್ನೂ ಅಮೆಚೂರ್ ಆದ್ದರಿಂದ ದಿನ ಪತ್ರಿಕೆಯನ್ನು ಓದುವ ಕೆಟ್ಟ ಅಭ್ಯಾಸವನ್ನಿನ್ನೂ ಇರಿಸಿಕೊಂಡಿದ್ದೇನೆ. ಇರಾಕಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವುದಕ್ಕೆ, ಸಮೂಹ ನಾಶ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವುದಕ್ಕೆ ಸೈನ್ಯವನ್ನು ನುಗ್ಗಿಸಿ ಅವರೆಡನ್ನೂ ಮಾಡುವುದರಲ್ಲಿ ಯಶಸ್ವಿಯಾಗಿ ವಿಫಲರಾಗಿರುವ, ನಿವೃತ್ತಿಯ ಅಂಚಿನಲ್ಲಿರುವ ಅಮೇರಿಕಾದ  ಅಧ್ಯಕ್ಷ ಜಾರ್ಜ್ ಬೂಶ್ ತಮ್ಮ ಅಧಿಕಾರವಧಿ ಮುಗಿಯುವ ಮೊದಲು ತಾವು ಉದ್ಧಾರ ಮಾಡಿದ ದೇಶವನ್ನೊಮ್ಮೆ ನೋಡಿಕೊಂಡು ಹೋಗಲು ಇರಾಕಿಗೆ ಭೇಟಿ ನೀಡಿದ್ದರು. ತಾವು ಮಹದುಪಕಾರ ಮಾಡಿದ ದೇಶದ ಮಧ್ಯಮದ ಎದುರು ಬಡಾಯಿ ಕೊಚ್ಚಿಕೊಳ್ಳುತ್ತಾ ನಿಮ್ಮನ್ನು ಕ್ರೂರ ಸರ್ವಾಧಿಕಾರಿಯಿಂದ ರಕ್ಷಿಸಿದ ನನಗೆ ಏನೆಂದು ಬಿರುದು ಕೊಡುವಿರಿ, ನನಗೆ ಏನು ಬಹುಮಾನ ಕೊಡುವಿರಿ ಎಂದು ಕೇಳಿದಾಗ ಇರಾಕಿ ಪತ್ರಕರ್ತನೊಬ್ಬ ಅತ್ಯಂತ ಕಳಕಳಿಯಿಂದ ಎದ್ದು ನಿಂತು ಬೂಶ್ ಮಹಾಶಯನಿಗೆ ನಾಯಿಎಂಬ ಬಿರುದನ್ನು ನೀಡಿ, ತನ್ನ ಕಾಲುಗಳ ಬೂಟುಗಳನ್ನು ಬಿಚ್ಚಿ ಬಹುಮಾನವಾಗಿ ಅಧ್ಯಕ್ಷರೆಡೆಗೆ ಎಸೆದ. ಚಪ್ಪಲಿ ಹಾರ ಅವಮಾನದ ಸಂಕೇತವಲ್ಲ, ಅದು ಶ್ರಮಿಕನ ಬೆವರಿನ ಸಂಕೇತ ಎಂದು ನಮ್ಮ ನಾಡಿನ ಮಠಾಧೀಶರು ನೀಡಿದ ಹೇಳಿಕೆಯನ್ನು ಕದ್ದು ಕೇಳಿಸಿಕೊಂಡಿದ್ದ ಬೂಶ್ ಬೂಟು ಎಸೆಯುವುದರಿಂದ ನನಗೆ ಅವಮಾನವಾಗಲಿಲ್ಲ. ಅಂದಹಾಗೆ ಬೂಟಿನ ನಂಬರು ಹತ್ತು ಎಂದು ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ವರದಿಯಾಗದ ಅಂಶವೆಂದರೆ ಆ ಬೂಟನ್ನು ಅವರು ಹರಾಜಿಗೆ ಇಟ್ಟು ಹರಾಜಿನಲ್ಲಿ ಬಂದ ಹಣದಿಂದ ಅಮೇರಿಕಾದ ಮತ್ತೊಂದು ಆಟೋ ಮೊಬೈಲ್ ಕಂಪೆನಿಯನ್ನು ಬೇಲ್ ಔಟ್ ಮಾಡಲಿದ್ದಾರೆ. ಇದು ನಮ್ಮ ನಾಡಿನ ಹೆಮ್ಮೆಯ ಪತ್ರಿಕೆ ನಗೆ ನಗಾರಿ ಡಾಟ್ ಕಾಮ್ ಪತ್ತೆ ಹಚ್ಚಿದೆ. (ಇದೀಗ ತಾನೆ ಬಂದ ಸುದ್ದಿಯ ಪ್ರಕಾರ ಸೌದಿಯ ಧನಿಕನೊಬ್ಬ ಆ ಬೂಟಿಗೆ ಹತ್ತು ಮಿಲಿಯನ್ ಡಾಲರ್ ಬಿಡ್ ಮಾಡಿದ್ದಾನೆ)


ಎಲ್ಲದರಲ್ಲೂ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅಮೇರಿಕಾ ನಮಗೆ ಈ ವಿಚಾರದಲ್ಲೂ ಮಾದರಿಯಾಗಬೇಕು. ನಾವು ರಾಜಕಾರಣಿಗಳು ಸ್ವಾವಲಂಬಿಗಳಾಗಲು ಬೂಟ್ಸ್, ಚಪ್ಪಲಿಗಳ ವ್ಯಾಪಾರವನ್ನು ಶುರು ಮಾಡಬೇಕು. ಇದು ಅತ್ಯಂತ ಲಾಭದಾಯಕ ಹಾಗೂ ಸುಲಭ ಉದ್ಯಮವಾಗುವ ಎಲ್ಲಾ ಅಂಶಗಳನ್ನೂ ಹೊಂದಿದೆ. ಇದಕ್ಕೆ ಬೇರೆ ಉದ್ಯಮಗಳಿಗೆ ಬೇಕಾದಂತೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಕಾರ್ಖಾನೆ ಸ್ಥಾಪಿಸುವುದಕ್ಕಾಗಿ ಜಾಗ ಕೊಡಿ ಎಂದು ಯಾರ ಮುಂದೂ ಕೈಚಾಚಬೇಕಿಲ್ಲ. ನಾವೆಲ್ಲಾ ರಾಜಕಾರಣಿಗಳು ನಮ್ಮ ನಮ್ಮ ಮತ ಕ್ಷೇತ್ರಕ್ಕೆ ಹೋಗಿ ನಮ್ಮ ಬೂಶ್ ಮಹಾಶಯರು ಹೇಳಿದಂತೆ ನಾವು ನಿಮಗೆ ಮಾಡಿರುವ ಸೇವೆಗೆ ನಮಗೆ ಏನೆಂದು ಬಿರುದು ಕೊಡುವಿರಿ? ಏನು ಬಹುಮಾನ ಕೊಡುವಿರಿ?’ ಎಂದು ಕೇಳಬೇಕು. ಆಗ ಜನರು ಪೂರ್ಣ ಮನಸ್ಸಿನಿಂದ ಕೊಡುವ ಬೂಟು, ಚಪ್ಪಲಿಗಳ ಬಹುಮಾನವನ್ನು ನಾವು ಬಂಡವಾಳವಾಗಿಟ್ಟುಕೊಂಡು ಉದ್ಯಮವನ್ನು ನಡೆಸಬಹುದು. ಏನಂತೀರಿ?’ ಎಂದರು.

ಒಂದು ಕ್ಷಣ ಕಿಕ್ಕಿರಿದ ಸಭಾಂಗಣವನ್ನು ದಿಟ್ಟಿಸಿದ ಸಾಮ್ರಾಟರು ಎದೆಯುಬ್ಬಿಸಿ, ‘ಈ ಸಲಹೆಯನ್ನು ನೀಡಿದ್ದಕ್ಕೆ ನನಗೆ ಯಾವ ಬಹುಮಾನ ಕೊಡುವಿರಿ…’ ಎಂದು ಕೇಳಿದರು ಅಷ್ಟೇ!


ಈಗ ಸಾಮ್ರಾಟರು ಮಾಗಡಿ ರಸ್ತೆಯ ಬದಿಯಲ್ಲಿ ಬಹುದೊಡ್ಡ ಶೂ, ಚಪ್ಪಲಿ ಶೋರೂಂ ಇಟ್ಟುಕೊಂಡಿದ್ದಾರೆ.

ಕಗ್ಗತ್ತಲ ನಡುವೆ ಬೆಳ್ಳಿಯ ಗೆರೆ

17 ಡಿಸೆ

ನಗೆ ಸಾಮ್ರಾಟ್


ತುಂಬಾ ದಿನಗಳಿಂದ ನಮ್ಮ ಕನ್ನಡದ ಪತ್ರಿಕಗಳನ್ನು, ಸುದ್ದಿ ವಾಹಿನಿಗಳನ್ನು ಗಮನಿಸುವುದನ್ನು ಮರೆತು ನಾವು ಇಂಗ್ಲೀಷ್ ಪೇಪರನ್ನು, ಟಿವಿ ಚಾನೆಲ್ಲುಗಳನ್ನು ಹುಚ್ಚರಂತೆ ಗಮನಿಸುತ್ತಿದ್ದೆವು. ಕಾರಣವಿಷ್ಟೇ, ಎಲ್ಲದರೂ ಒಂದೇ ಒಂದು ಕ್ಷಣಕ್ಕಾದರೂ ಬೆಳಕಿನ ಕಿರಣಗಳು ಮೂಡಬಹುದೇನೋ ಎಂದು!


ಇಡೀ ದೇಶವೇ ಸಮೂಹ ಸನ್ನಿಯ ಕಪಿಮುಷ್ಟಿಯಲ್ಲಿ ನರಳುತ್ತಿರುವುದನ್ನು,ನಮ್ಮ ಸುತ್ತ ಮುತ್ತಲಿನ ಜನರೆಲ್ಲರೂ ಯಾವುದೋ ಹಿಪ್ನಾಟಿಸಂಗೆ ಒಳಗಾದವರಂತೆ ವರ್ತಿಸುತ್ತಿರುವಾಗ ಈ ಭೂಮಿಯ ಮೇಲೆ ಆ ದೇವರು ಸ್ಯಾಂಪಲ್ಲಿಗಾಗಿಯಾದರೂ ಇರಲಿ ಎಂದು ಸೃಷ್ಟಿಸಿದ ವಿವೇಕಿಗಳು ಎಲ್ಲಿಹೋದರು ಎಂದು ಹುಡುಕುತ್ತಿದ್ದೆವು. ಸಮೂಹ ಸನ್ನಿಗೆ ಬಲಿಯಾಗಿ ನಮ್ಮ ಮಾಧ್ಯಮಗಳೂ ಸಹ ಅವರ ದಿಟ್ಟ ಧ್ವನಿಯನ್ನು, ಸ್ಪಷ್ಟ ನಿಲುವನ್ನು ಪ್ರಕಟಿಸಲು ಹಿಂದೇಟು ಹಾಕಿದವೇನೋ ಎಂದು ಆತಂಕವಾಯ್ತು. ಸಂವಿಧಾನ ಬದ್ಧವಾಗಿ ಬಂದ ವಾಕ್ ಸ್ವಾತಂತ್ರ್ಯಕ್ಕೆ ಈ ಸಾಮೂಹಿಕ ಒಗ್ಗಟ್ಟಿನಿಂದ ಎಲ್ಲಿ ಅಪಾಯವಾಗಿ, ಒಂದು ಮಾತನ್ನು ಸಾರ್ವಜನಿಕವಾಗಿ ಹೇಳುವುದೂ ಅಪರಾಧವಾಗುತ್ತದೆಯೋ ಎಂದು ಕಳವಳಗೊಂಡಿದ್ದೆವು. ಸಾವಿರಾರು ವರ್ಷಗಳಿಂದ ಎಲ್ಲಾ ಬಗೆಯ ವಿರುದ್ಧ ಅಭಿಪ್ರಾಯಗಳನ್ನು, ಎಲ್ಲಾ ವರ್ಗದ ಹಿಪಾಕ್ರಸಿಯನ್ನು ಸಹಿಸಿಕೊಂಡು ಬಂದ ದೇಶ ಈ ಒಂದು ಘಟನೆಯಿಂದ ಎಲ್ಲಿ ಬದಲಾಗಿಬಿಡಬಹುದೋ ಎಂದು ಆತಂಕಗೊಂಡಿದ್ದೆವು. ಎಲ್ಲಕ್ಕಿಂತಲೂ ಹೆಚ್ಚು ಕಾಡಿದ ಭಯವೆಂದರೆ ‘ಈ ಭೂಮಿಯ ಮೇಲಿರುವ ಆ ಕೆಲವೇ ಕೆಲವು ಶ್ರೇಷ್ಠ ಮೇಧಾವಿಗಳೂ ಸಹ ಈ ಸಂದರ್ಭದಲ್ಲಿ ಸಮಾಜದ ಭಾವನೆಯನ್ನು ಒಪ್ಪಿಕೊಂಡು ಬಿಟ್ಟವೇ? ಎನ್ನುವುದಾಗಿತ್ತು.


ಮುಂಬೈ ಎಂಬ ಭಾರತದ ಆರ್ಥಿಕ ರಾಜಧಾನಿಯ ಮೇಲೆ ತನ್ನ ಬೇನಾಮಿ ಸೈನ್ಯದ ಮೂಲಕ ಪಾಕಿಸ್ತಾನವು ಫಿದಾಯೇ ಯುದ್ಧವನ್ನು ಘೋಷಿಸಿರುವ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ ಮತಿಭ್ರಾಂತವಾದಂತೆ ವರ್ತಿಸುತ್ತಿತ್ತು. ದೇಶದ ಜನಸಮೂಹಕ್ಕೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರಲಿಲ್ಲ. ಮುಂಬೈ ನಗರಿಯನ್ನು ಬಂದರುಗಳ ಮೂಲಕ ಪ್ರವೇಶಿಸಿ  ಹಣದ ಉನ್ಮಾದದ ಪ್ರತೀಕದಂತೆ, ವಾಕರಿಕೆ ತರಿಸುವ ಶ್ರೀಮಂತಿಕೆಯ ಅಮಲಿನ ಸಂಕೇತದಂತೆ, ಬಡವರ ರಕವ ಹೀರುವ ಆಕ್ಟೋಪಸ್ಸುಗಳ ನಕಲಿನಂತೆ ಕಾಣುವ ತಾಜ್ , ಒಬೆರಾಯ್ ಹೊಟೇಲುಗಳ ಮೇಲೆ ಫಿದಾಯೆ ವೀರರು ದಾಳಿ ಮಾಡಿದರು. ಹಣದ ಮದದಲ್ಲಿ ಮೆರೆಯುತ್ತಿದ್ದ, ಜಾಗತೀಕರಣದ ಪಾಯಸವನ್ನು ಕೆನಯ ಸಮೇತ ಮೆಲ್ಲುತ್ತಿದ್ದ ಶ್ರೀಮಂತ ವರ್ಗಕ್ಕೆ ಬಿಸಿ ಮುಟ್ಟಿಸಿದರು. ಇಂತಹ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಾರರನ್ನು ನೂರು ಕೋಟಿ ಜನರಿರುವ ಭಾರತ ಕಂಡಿದ್ದಾದರೂ ಹೇಗೆ? ದೇಶದ ಜನರನ್ನು ಬಡಿದೆಬ್ಬಿಸಲು ಪ್ರಾಣದ ಹಂಗನ್ನು ತೊರೆದು ಬಂದ ಆ ಯೋಧರನ್ನು ನಮ್ಮ ದೇಶದ ಜನರು ಭಯೋತ್ಪಾದಕರು ಎಂದರು. ಕೊಲೆಗಡುಕರು ಎಂದು ಅಪಮಾನಿಸಿದರು. ಎಲ್ಲೋ ಸಿಕ್ಕುವ ಸ್ವರ್ಗವನ್ನು ಹಾಗೂ ಅಲ್ಲಿನ ಕನ್ಯೆಯರನ್ನು ಪಡೆಯುವುದಕ್ಕಾಗಿ ತಮ್ಮ ಇಪ್ಪತ್ತು, ಇಪತ್ತೊಂದರ ವಯಸ್ಸಿನಲ್ಲೇ ಸಾವಿನ ಕುಣಿಕೆಗೆ ಕತ್ತು ಒಡ್ಡಲು ತಯಾರಾದ ಯುವಕರನ್ನು ರಾಕ್ಷಸರು ಎಂದು ಕರೆದರು. ದೇಶಕ್ಕೆ ದೇಶವೇ ಹುಚ್ಚು ಹಿಡಿದಂತೆ ವರ್ತಿಸಿತು.


hypocrite

ಇನ್ನು ಹತ್ತು ಮಂದಿ ಅಬೋಧ ಬಾಲಕರು ಇನ್ನೂರು ಮಂದಿಯನ್ನು ಕೊಂದ ಮಾತ್ರಕ್ಕೆ ನಮ್ಮ ಸರಕಾರ ಅಮಾನವೀಯ ಕೆಲಸಕ್ಕಿಳಿಯಿತು. ನರ ಭಕ್ಷಕ ಸೈನ್ಯವನ್ನು ಕರೆಸಿ ಅದರ ರಕ್ತ ಪೀಪಾಸು ಕಮಾಂಡೊಗಳನ್ನು ಛೂ ಬಿಡಲಾಯ್ತು. ಏಳೆಂಟು ಮಂದಿ ಅಮಾಯಕ ಫಿದಾಯೇ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವುದಕ್ಕೆ ನೂರಾರು ಮಂದಿ ಕ್ರೂರ ಕಮ್ಯಾಂಡೊಗಳನ್ನು ಕರೆಸಲಾಯ್ತು. ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿ ಆ ಹತ್ತು ಮಂದಿಯಲ್ಲಿ ಒಂಭತ್ತು ಮಂದಿ ಹೋರಾಟಗಾರರು ಕಮ್ಯಾಂಡೊಗಳ ಜೀವ ಭಕ್ಷಕ ಬುಲೆಟುಗಳಿಗೆ ಆಹಾರವಾಗಿ ಕಣ್ಮುಚ್ಚಿದರು. ಇಷ್ಟಕ್ಕೂ ಆ ಘಟನೆಯಲ್ಲಿ ಸತ್ತವರ ಸಾವಿಗೆ ಈ ಒಂಭತ್ತು ಮಂದಿ ಫಿದಾಯೆಗಳೇ ಕಾರಣ ಎನ್ನುವುದಕ್ಕೆ ಏನಿತ್ತು ಸಾಕ್ಷಿ? ಅವರೇ ಕೊಂದರು ಎನ್ನುವುದಕ್ಕೆ ಇದ್ದ ಪುರಾವೆಗಳು ಯಾವುವು? ಒಂದು ವೇಳೆ ಅವರು ತಪ್ಪನ್ನೇ ಮಾಡಿದ್ದರೂ ಅವರನ್ನು ಶಿಕ್ಷಿಸುವುದಕ್ಕೆ ನಮ್ಮ ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯಿದೆ. ಅವರನ್ನು ಶರಣಾಗುವಂತೆ ಮನವೊಲಿಸಿ ಇಲ್ಲವೇ ಅವರೊಂದಿಗೆ ಮಾತು ಕತೆಗೆ ಕುಳಿತು ಅವರನ್ನು ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕಿತ್ತು. ಅದು ಬಿಟ್ಟು ಅವರನ್ನು ಅಮಾನವೀಯವಾಗಿ ಕೊಂದು ಬಿಸಾಕುವುದರ ಮೂಲಕ ನಮ್ಮ ಸೈನ್ಯ, ಪೊಲೀಸರು ಹಾಗೂ ಸರಕಾರ ತಾನೆಂಥ ರಕ್ತ ಪೀಪಾಸು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.


ಆಗುವ ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎನ್ನುವಂತೆ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಭದ್ರತೆಯ ಲೋಪಕ್ಕೆ ನೆರೆಯ ಪಾಕಿಸ್ತಾನವನ್ನು ದೂರುವ ಚಟ ನಮಗೆ ತುಂಬಾ ಹಿಂದಿನಿಂದಲೇ ಇದೆ. ಪಾಪ ಆ ದೇಶ ತಮ್ಮ ದಿಕ್ಕೆಟ್ಟ ರಾಜಕೀಯ, ಬರಗೆಟ್ಟ ಆರ್ಥಿಕತೆ, ಅನಕ್ಷರತೆ, ನಿರುದ್ಯೋಗದಿಂದ ತನ್ನ ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿದೆ. ಆ ದೇಶದಲ್ಲಿ ಸರಕಾರಕ್ಕೆ ಜನರ ಹಸಿವನ್ನು ತಣಿಸಲು ಸಾಧ್ಯವಾಗಿಲ್ಲ ಇನ್ನು ಅದು ಭಾರತವನ್ನು ಹಾಳು ಮಾಡುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವೇ? ಅಲ್ಲಿನ ಜನರಾದರೂ ತಮ್ಮ ಹಸಿವಿಗಿಂತ ತಮ್ಮ ದ್ವೇಷ ಮುಖ್ಯ ಎಂದು ಎಂದಾದರೂ ಭಾವಿಸಲು ಸಾಧ್ಯವಿದೆಯೇ? ಗೌರವಯುತವಾಗಿ ಈ ದೇಶದಿಂದ ಬೇರೆಯಾದ ನಮ್ಮ ಬಂಧುಗಳು ಅವರು ನಾವು ಅವರನ್ನು ಶತ್ರುಗಳಂತೆ ಕಾಣುವುದು ಅಮಾನವೀಯ. ನಮ್ಮ ಯುದ್ಧ ದಾಹಿ ಸರಕಾರಗಳು, ರಕ್ತಪೀಪಾಸು ಸೈನ್ಯ ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳನ್ನು ದೂರುತ್ತವೆ.


ಇಷ್ಟು ದಿನ ಕೇವಲ ಕೋಮುವಾದಿ ಬಹುಸಾಂಖ್ಯಾತರು ಮಾತಾಡುತ್ತಿದ್ದ ರೀತಿಯಲ್ಲೇ ಇತ್ತೀಚೆಗೆ ಮುಸ್ಲೀಂ ಮುಖಂಡರು, ಎಡಪಂಥೀಯರೂ ಮಾತಾಡಲು ಶುರು ಮಾಡಿದ್ದಾರೆ. ಶಾರುಖ್ ಖಾನ್, ಅಮೀರ್ ಖಾನ್ ರಿಂದ ಹಿಡಿದು ಪ್ರತಿಯೊಬ್ಬ ಮುಸ್ಲಿಂ ಜನಪ್ರಿಯ ವ್ಯಕ್ತಿಗಳು ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಿ. ಅವರಿಗೆ ಧರ್ಮವಿಲ್ಲ, ಮಾನವೀಯತೆಯಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಹುಸಂಖ್ಯಾತರ ಕೋಮುವಾದದಿಂದ ರೊಚ್ಚಿಗೆದ್ದ, ವ್ಯವಸ್ಥೆಯ ಬಹುಸಂಖ್ಯಾತರ ಓಲೈಕೆಯಿಂದ ಅಭದ್ರತೆ ಒಳಗಾಗುವ ಅಲ್ಪಸಂಖ್ಯಾತರು ಕೋವಿ ಕೈಗೆತ್ತಿಕೊಳ್ಳುತ್ತಾರೆ. ನಮ್ಮ ಸೈನಿಕರ ಹಾಗೆ ಕೊಲ್ಲುವುದಕ್ಕಾಗಿ ಎಂತಲೇ ಗನ್ನು ಕೈಗಿರಿಸಿಕೊಂಡು ತರಬೇತಿ ಪಡೆಯುವಂಥವರಲ್ಲ ಅವರು. ಅವರನ್ನು ಖಂಡಿಸುವ ಮೂಲಕ ಅಲ್ಪಸಂಖ್ಯಾತ ವರ್ಗ ಬಹುಸಂಖ್ಯಾತರ ಬಲೆಗೆ ಬೀಳುತ್ತಿದೆ. ಮುಂಬೈ ಘಟನೆ ನಡೆದ ನಂತರ ದೇಶವಿಡೀ ಕಠಿಣ ಕಾನೂನುಗಳಿಗೆ ಉಗ್ರವಾದ ಕ್ರಮಗಳಿಗಾಗಿ ಸರಕಾರವನ್ನು ಒತ್ತಾಯ ಪಡಿಸುತ್ತಿವೆ. ಪೋಟಾದಂತಹ ಜೀವ ವಿರೋಧಿ, ದುಷ್ಟ ಕಾನೂನನ್ನು ತೆಗೆದು ಹಾಕಿ ಪ್ರಜ್ಞಾವಂತರಲ್ಲಿ ನೆಮ್ಮದಿಯನ್ನು ಮೂಡಿಸಿದ್ದ ಯುಪಿಎ ಸರಕಾರ ಸಹ ಒತ್ತಡಕ್ಕೆ ಮಣಿದು ಪೋಟಾದಂತಹ ಕಾಯ್ದೆಯನ್ನು ತರುವ ಬಗ್ಗೆ ಆಲೋಚನೆ ನಡೆಸುತ್ತಿದೆ. ಇದು ನಿಜಕ್ಕೂ ದುರದೃಷ್ಟಕರ. ಸಾಯಲು ತಯಾರಾಗಿ ಬರುವ ಹೋರಾಟಗಾರರು ನಮ್ಮ ಕಾಯ್ದೆಗಳಿಗೆ ಹೆದರುತ್ತಾರೆಯೇ? ಇಂತಹ ಕಾಯ್ದೆಗಳಿಂದ ಏನೂ ಉಪಯೋಗವಾಗುವುದಿಲ್ಲ. ಸುಮ್ಮನೆ ಇವನ್ನು ಬಳಸಿಕೊಂಡು ಅಮಾಯಕರನ್ನು ಹಿಂಸಿಸಲಾಗುತ್ತದೆ. ಈಗ ರಾಜ್ಯ ಸರಕಾರಗಳು ಮಾಡಿರುವ ಕೋಕಾ ಕಾನೂನು ಬಳಸಿಕೊಂಡು ಯೂನಿಯನ್ ಮುಖಂಡರನ್ನು ಹಿಂಸಿಸುತ್ತಿರುವುದು ಕಾಣುವುದಿಲ್ಲವೇ?

ಭಯೋತ್ಪಾದನೆಯ ಬಗ್ಗೆ ಹಿಸ್ಟೀರಿಕ್ ಆಗಿ ದೇಶಕ್ಕೆ ದೇಶವೇ ಆವೇಶದಿಂದ ವರ್ತಿಸುತ್ತಿರುವಾಗ  ಈ ಮೇಲೆ ನಾವು ಕೊಡಮಾಡಿರುವ ವಿವೇಕಯುತವಾದ, ಪ್ರಜ್ಞಾವಂತಿಕೆಯಿಂದ ಕೂಡಿದ ಹೇಳಿಕೆಗಳನ್ನು ನೀಡುವುದಕ್ಕೆ ಯಾರೂ ಮುಂದೆ ಬರದಿದ್ದುದನ್ನು ಕಂಡು ನಾವು ತೀವ್ರವಾಗಿ ಖಿನ್ನರಾಗಿದ್ದೆವು. ಆದರೂ ನಮ್ಮ ದೇಶದ ಗೌರವವನ್ನು, ಮರ್ಯಾದೆಯನ್ನು ಕಾಪಾಡಲು ಒಂಟಿ ಕಾಲಲಿ ನಿಂತು ಶ್ರಮಿಸುತ್ತಿರುವ ಇಂಗ್ಲೀಷ್ ಮಾಧ್ಯಗಳ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕಡೆಗೂ ಕವಿದ ಕಗ್ಗತ್ತಲ ನಡುವೆ ಬೆಳ್ಳಿಎಯ ರೇಖೆ ಮೂಡಿದೆ. ನಮ್ಮಂತಹ ಸಾವಿರಾರು ಮಂದಿ ಜಾತ್ಯಾತೀತವಾದಿಗಳ, ಪ್ರಗತಿಪರರ, ಹಿಂಸೆ ವಿರೋಧಿಗಳ, ಶಾಂತಿ ದೂತರ, ಅಂತರಾಷ್ಟ್ರೀಯ ಮಾನ್ಯತೆ ಗಳಿಸಿದ ವೀರರ ಧೀಮಂತ ಪ್ರತಿನಿಧಿಯಾಗಿ ನಮ್ಮ ಬುದ್ಧಜೀವಿ ಹಾಗೂ ಸುದ್ದಿಜೀವಿ ಅರುಂಧತಿ ರಾಯ್‌ರವರು ಮಾತಾಡಿದ್ದಾರೆ.


ಅವರ ದಿಟ್ಟತನಕ್ಕೆ, ಸತ್ಯ ನಿಷ್ಟುರತೆಗೆ, ಜಾತ್ಯಾತೀತವಾದಕ್ಕೆ ಜಯವಾಗಲಿ. ಅರುಂಧತಿ ಸಂತತಿ ಸಾವಿರವಾಗಲಿ. ಫಿದಾಯೆಗಳು ಅಮರರಾಗಲಿ

(ಚಿತ್ರ ಕದ್ದದ್ದು ಇಲ್ಲಿಂದ:

http://neoconexpress.blogspot.com/2006/02/la-times-gutless-offenders-and-cartoon.html)


ಸ್ಟೇಟ್ ಲೆಸ್ ಉಗ್ರವಾದಿಗಳು ಬರುವುದು ಸ್ವರ್ಗದಿಂದ

15 ಡಿಸೆ

(ನಗೆ ನಗಾರಿ ನೆರೆ ಹೊರೆಬ್ಯೂರೋ)

ದೊಡ್ಡಣ್ಣನೊಂದಿಗೆ ಇದ್ದರೆ ತಾನು ಉದ್ಧಾರವಾಗುವುದಿಲ್ಲ. ಸದಾ ಆತ ತೊಟ್ಟು ಬಿಟ್ಟ ಅಂಗಿಯನ್ನು, ಆತ ಬಳಸಿ ಬಿಟ್ಟ ಪಾಠಿ ಚೀಲವನ್ನು ಸಹಿಸಿಕೊಳ್ಳುತ್ತಾ ಎರಡನೆಯ ದರ್ಜೆಯವನಾಗಿ ಬದುಕಬೇಕು. ನಾನು ಬೇರೆಯಾಗಿ ಹೋಗುತ್ತೇನೆ. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ. ನನ್ನ ಕಾಲುಗಳ ಮೇಲೆ ನಾನು ನಿಲ್ಲುತ್ತೇನೆ, ಯಾರ ಹಂಗೂ ಇಲ್ಲದೆ ಬೆಳೆದು ನಿಂತು ನಾನು ಜಗತ್ತಿಗೆ ಮಾದರಿಯಾಗುತ್ತೇನೆ ಎಂದು ತನ್ನನ್ನು ಭಾರತವೆಂಬ ದೇಶದಿಂದ ಬೇರ್ಪಡಿಸಿಕೊಂಡು ಪಾಕ್(ಪವಿತ್ರ)ಸ್ಥಾನ್(ನೆಲ) ಎಂದು ಕರೆದುಕೊಂಡ ದೇಶದಲ್ಲಿ ಮಣ್ಣಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದು ನಮ್ಮ ನಾಡಿನ ಮಣ್ಣಿನ ಮಕ್ಕಳು, ದತ್ತು ಮಕ್ಕಳು, ಸಾಕು ಮಕ್ಕಳು, ಕಳ್ನನ್ಮಕ್ಕಳ ಗಮನವನ್ನೆಲ್ಲಾ ಸೆಳೆದಿದೆ.


ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರು ಸ್ಟೇಟ್ ಲೆಸ್ ಮನುಷ್ಯರು ಎಂದು ಪಾಕಿಸ್ತಾನದ ಪ್ರಧಾನಿ ಹಾಗೂ ಅದರ ದಿವಂಗತ ಮಾಜಿ ಪ್ರಧಾನಿಯ ವಿಧುರ ರಾಷ್ಟ್ರ್ಯಾಧ್ಯಕ್ಷರು ಗ್ರಾಮಾಫೋನು ಹಚ್ಚಿ ಹಾಡಿದ್ದನ್ನು ತರಾಟೆಗೆ ತೆಗೆದುಕೊಂಡ ನಮ್ಮ ದೇಶದ ವಿದೇಶಾಂಗ ವ್ಯವಹಾರ ಸಚಿವರು ಸ್ಟೇಟ್ ಲೆಸ್ ಮನುಷ್ಯರು ಸ್ವರ್ಗದಿಂದ ಇಳಿದು ಬರುವುದಕ್ಕೆ ಸಾಧ್ಯವೇ?’ ಎಂದು ಕೇಳಿದ ಪ್ರಶ್ನೆಗೆ ಉತ್ತರ ದೊರಕದೆ ಪಾಕಿಸ್ತಾನದ ಸಮಸ್ತ ಗ್ರಾಮಾಫೋನುಗಳು ಬಾಯ್ಮುಚ್ಚಿಕೊಂಡಿದ್ದಾಗ ಸಾಮ್ರಾಟರು ಹೌದು ಅವರು ಸ್ವರ್ಗದಿಂದದಲೇ ಬರುವುದು…’ ಎಂದು ವಾದಿಸಿ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ಭೂಮಿಯ ಮೇಲೆ ಪವಿತ್ರವಾದ ನೆಲ ಎಂದು ತನ್ನ ತಾನೇ ಕರೆದುಕೊಂಡಿರುವ ನಮ್ಮ ನೆರೆಯ ಹೊರೆಯ ರಾಷ್ಟ್ರದ ಮುಷ್ಟಿಯಲ್ಲಿರುವ ಭೂಲೋಕದ ಸ್ವರ್ಗ ಕಾಶ್ಮೀರದ ಮಣ್ಣಿನಿಂದಲೇ ಈ ಸ್ಟೇಟ್ ಲೆಸ್ ಮನುಷ್ಯರು ಭಾರತಕ್ಕೆ ಬರುತ್ತಿರುವುದು ಎಂದು ಅವರು ವಿವರಿಸಿ ಹೇಳಿದ್ದನ್ನು ಗ್ರಾಮಾಫೋನುಗಳು ರೆಕಾರ್ಡು ಮಾಡಿಕೊಂಡಿವೆ.


pakistan_alqaeda_terror



ಪಾಕಿಸ್ತಾನವೆಂಬ ಪವಿತ್ರ ನೆಲ ತನ್ನ ರಾಷ್ಟ್ರದ ಅಧ್ಯಕ್ಷರನ್ನು, ಪ್ರಧಾನಿಯನ್ನು ಪಡೆಯುವುದಕ್ಕೆ ಎಷ್ಟೆಲ್ಲಾ ತ್ಯಾಗಗಳನ್ನು ಮಾಡಬೇಕಾಯಿತು ಎಂಬುದು ಇತಿಹಾಸವನ್ನು ಅರೆದುಕುಡಿದು ಅಜೀರ್ಣದಿಂದ ಬಳಲುತ್ತಿರುವವರಿಗೆಲ್ಲಾ ತಿಳಿದಿರುವ ಸಂಗತಿ. ಎಷ್ಟೋ ವೇಳೆ ಆ ದೇಶ ತನ್ನ ಹಾಲಿ ಅಧ್ಯಕ್ಷ, ಪ್ರಧಾನಿಯನ್ನೇ ಬಲಿದಾನ ಮಾಡಬೇಕಾಯಿತು. ಈ ನೆಲದ ಮಹತ್ವ ಸಾಮಾನ್ಯವಾದದ್ದಲ್ಲ. ಈ ನೆಲ ಸ್ಪೂರ್ತಿಯ ಸೆಲೆ. ಜಗತ್ತಿನ ಮೂಲೆ ಮೂಲೆಯಲ್ಲಿ ಬೆನ್ನ ಹಿಂದಿರುವ ತೊಗಲಿನ ಚೀಲದಲ್ಲಿ ಅಡಗಿಸಿಟ್ಟುಕೊಂಡ ಬಾಂಬನ್ನು ನೇವರಿಸುತ್ತಾ ಕನವರಿಸುವ ಎಲ್ಲಾ ಜೀವಂತ ಬಾಂಬುಗಳಿಗೆ ಏಕೈಕ ಸ್ಪೂರ್ತಿಯ ಸೆಲೆಯಾಗಿ ಪಾಕಿಸ್ತಾನ ಕಾರ್ಯ ನಿರ್ವಹಿಸುತ್ತಿದೆ. ಇಡೀ ಜಗತ್ತಿಗೆ ತೈಲವನ್ನು ಪೂರೈಸುತ್ತೇವೆ ಎಂದು ಹುಮ್ಮಸ್ಸಿನಿಂದ ಹೊರಟು ಅರ್ಧ ದಾರಿಯಲ್ಲಿ ದಣಿದು ಕುಳಿತ ಅರಬ್ ದೇಶಗಳು, ವಿಶ್ವದ ಪ್ರತಿಯೊಂದು ದೇಶಕ್ಕೂ ಕಂಪ್ಯೂಟರನ್ನು ಒದಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿ ಹೊರಟ ಅಮೇರಿಕಾದಂತಹ ದೇಶಗಳು, ಜಗತ್ತಿಗೆ ಶಾಂತಿಯನ್ನು ಬೋಧಿಸುತ್ತೇವೆ ಎಂದು ಹೊರಟು ಕೈಸೋತ ಶಾಂತಿ ಪ್ರಿಯ ಆಲಿಪ್ತ ರಾಷ್ಟ್ರಗಳು ಪಾಕಿಸ್ತಾನವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿವೆ. ಅಂಗೈ ಅಗಲದ ಪುಟ್ಟ ದೇಶ ಇಡೀ ಜಗತ್ತಿಗೆ ಬೇಕಾಗುವಷ್ಟು ಮಾತ್ರವಲ್ಲದೆ ಜಗತ್ತು ಸಾಕು ಸಾಕೆಂದು ಬೇಡಿಕೊಳ್ಳುವಷ್ಟು ಭಯೋತ್ಪಾದಕರನ್ನು, ಜಿಹಾದಿಗಳನ್ನು, ಮೆದುಳು ತೊಳೆಸಿಕೊಂಡ ಪಡ್ಡೆಗಳನ್ನು, ಕಲಾಶ್ನಿಕೋವ್ ವೀರರನ್ನು, ಮಾನವ ಬಾಂಬುಗಳನ್ನು, ಉನ್ಮತ್ತ ಏರೋಪ್ಲೇನುಗಳನ್ನು ಸರಬರಾಜು ಮಾಡುತ್ತಲೇ ಇದೆ. ಅದಕ್ಕೆ ಸುಸ್ತೆಂಬುದು ಇಲ್ಲವೇ ಇಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಭಯೋತ್ಪಾದನೆಯನ್ನು ಇಷ್ಟು ವರ್ಷಗಳ ಕಾಲ ಸಮರ್ಪಕವಾಗಿ ರಫ್ತು ಮಾಡಿರುವ, ಮಾಡುತ್ತಿರುವ ಪಾಕಿಸ್ತಾನದ ಗುಣವಿಶೇಷಗಳನ್ನು ಅಧ್ಯಯನ ಮಾಡಲು ನಮ್ಮ ದೇಶದಲ್ಲಿ ಕೆಲಸ ಸಿಕ್ಕದ ಎಂಬಿಎ ಪದವೀಧರರನ್ನು ಅಟ್ಟಬಹುದು ಎಂದು ಸಾಮ್ರಾಟರು ಶಿಫಾರಸ್ಸು ಮಾಡಿರುವುದು ಅಂತರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿದೆ.


ತನ್ನ ದೇಶದ ಮಣ್ಣಿನಿಂದ ಯಾವೊಬ್ಬ ಭಯೋತ್ಪಾದಕನೂ ಹುಟ್ಟಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷರು ತುಂಬು ಆತ್ಮವಿಶ್ವಾಸದಿಂದ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ಅಪಹಾಸ್ಯವನ್ನಲದೇ ಬೇರೇನನ್ನು ಹುಟ್ಟು ಹಾಕದಿದ್ದರೂ ನಮ್ಮ ನಾಡಿನಲ್ಲಿ ಥರೇವಾರಿ ಪ್ರತಿಕ್ರಿಯೆಗಳನ್ನು ಪಡೆದಿರುವುದು ಅಚ್ಚರಿ ಉಂಟು ಮಾಡಿದೆ. ನಮ್ಮ ನಾಡಿನ ಏಕೈಕ ಮಣ್ಣಿನ ಮಗನಾದ ವೇದನೇ ಗೌಡರು ನಗೆ ನಗಾರಿ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೀಗೆಂದರು: “ಪಾಕಿಸ್ತಾನದ ನೆಲದಿಂದ ಭಯೋತ್ಪಾದಕ ಹುಟ್ಟುತ್ತಾನೋ ಇಲ್ಲವೋ ಎಂಬುದು ನನಗೆ ಸಂಬಂಧಿಸಿದ ಸಂಗತಿಯಲ್ಲ. ಅದರ ಬಗ್ಗೆ ನಮ್ಮ ಪಕ್ಷದ ನಿಲುವನ್ನು ಪ್ರಕಟ ಪಡಿಸುವುದಕ್ಕೆ ಇನ್ನೂ ಲೋಕ ಸಭೆ ಚುನಾವಣೆಯವರೆಗೆ ಕಾಯಬೇಕು. ಆದರೆ ಇಲ್ಲಿ ಮಣ್ಣಿನ ವಿಚಾರ ಬಂದಿರುವುದರಿಂದ ಹೇಳುತ್ತಿದ್ದೇನೆ, ಪಾಕಿಸ್ತಾನದ ಮಣ್ಣಿಗಿಂತ ಕರ್ನಾಟಕದ ಮಣ್ಣು ವಿಶಿಷ್ಟ. ಏಕೆಂದರೆ ಈ ಮಣ್ಣು ನನ್ನಂಥ ಮಗನನ್ನು ಹುಟ್ಟುಹಾಕಿದೆ.”

ಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೂತನ ಡಾಕ್ಟರ್ಬಿಎಸ್‌ವೈರವರು ಮಣ್ಣು ಮಸಿ ಎಲ್ಲಾ ನನ್ನ ಹತ್ತಿರ ತರಬೇಡಿ ಹೊಸ ಸಫಾರಿ ಕೋಟು ಮಲಿನವಾಗುತ್ತದೆ ಎಂದು ಎಚ್ಚರಿಸಿದರು.

(ಚಿತ್ರ ಕೃಪೆ: ಗೂಗಲ್)

ವಾರದ ವಿವೇಕ 20

14 ಡಿಸೆ

……………………………………..

ಪುರುಷರಿಗೆ ಸಮಾನರಾಗಬೇಕು
ಎನ್ನುವ ಮಹಿಳೆಯರು
ಮಹತ್ವಾಕಾಂಕ್ಷೆ ಇಲ್ಲದವರು.

……………………………………..

ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

4 ಡಿಸೆ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ಉಗ್ರವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ಸಂಯಮಿಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!


ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು. ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ, ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!


ಅವರೆಲ್ಲಾ ಮೂರ್ಖರು. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ. ಭಾರತವೆಂಬ ಪುಣ್ಯ ಭೂಮಿಯಿಂದ ಅವರು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ತಮ್ಮ ದೇಶದ ಬಹುದೊಡ್ಡ ಕಟ್ಟಡಕ್ಕೆ ವಿಮಾನವನ್ನು ನುಗ್ಗಿಸಿ, ಸಾವಿರಾರು ಮಂದಿಯನ್ನು ಒಸಾಮ ಕೊಂದಾಗಆಧುನಿಕ ನಾಗರೀಕತೆಯ ಗಗನ ಚುಂಬಿಗಳ ಎದೆಯೊಳಗೆ ಬಂಡಾಯದ ವಿಮಾನ ನುಗ್ಗಿಸಿ ಆತ ಹರಿಸಿದ ರಕ್ತದಲ್ಲಿ, ಹೊಸ ಮುಂಜಾವಿನ ಬೆಳ್ಳಿ ರೇಖೆಗಳು ಪ್ರತಿಫಲಿಸುತ್ತಿದ್ದವುಎಂದು ಸುಮಧುರವಾದ ಕಾವ್ಯವನ್ನು ರಚಿಸಿ ಅಮರರಾಗುವುದನ್ನು ಬಿಟ್ಟು ಆತನ ಯಕಃಶ್ಚಿತ್ ತಪ್ಪಿಗೆ ಒಸಾಮನ ತಲೆ ತೆಗೆಯ ಹೊರಟು ಬಿಡುತ್ತಾರೆ ಹೆಡ್ಡರು. ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕುರುಡಾಗುತ್ತದೆಯಲ್ಲವೇ? ನಮ್ಮ ಕಣ್ಣು ಹೋದರೂ ಚಿಂತೆಯಿಲ್ಲ ಜಗತ್ತು ಕುರುಡಾಗಬಾರದು. ನಮಗೆ ಕಣ್ಣುಗಳಿದ್ದರೇ ತಾನೆ ಕುರುಡಾಗಲು ಸಾಧ್ಯ? ನಮ್ಮ ಕಣ್ಣುಗಳನ್ನೇ ನಾವು ಕಿತ್ತು ಬಿಟ್ಟರೆ? ಎಂದು ಆಲೋಚಿಸುವ ಮುತ್ಸದ್ಧಿತನ ಆ ಯಹೂದಿ ದೇಶದವರಿಗೆ ಯಾವಾಗ ಬಂದೀತು? ನಮ್ಮಲ್ಲಿ ಸಿರಿ ಸಂಪತ್ತು ಇದ್ದರಲ್ಲವೇ ಕಳ್ಳ ಕಾಕರ ಕಾಟ, ಅದಕ್ಕೆ ಪೊಲೀಸು, ಕಾನೂನಿನ ರಕ್ಷಣೆಯ ಹುಡುಕಾಟ, ಊಟಕ್ಕೆ ಗತಿಯಿಲ್ಲದೆ, ಹಸಿವೆಯಿಂದ ನರಳಿ ನರಳು ಸಾಯುವ ಸ್ಥಿತಿಗೆ ನಾವು ಬಂದುಬಿಟ್ಟರೆ? ಅವ್ಯಾವ ಚಿಂತೆಯೂ ಇರದು. ನಾವು ಶಿಕ್ಷಿತರಾಗಿ ಎಲ್ಲವನ್ನೂ ತಿಳಿಯ ಹೊರಟರೆ ಅಲ್ಲವೇ ಭಿನ್ನಾಭಿಪ್ರಾಯಗಳು ಬರುವುದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಅನ್ನಿಸುವುದುಒಂದಕ್ಷರ ಕಲಿಯದಿರುವ ನಿರ್ಧಾರ ಮಾಡಿ ಗಟ್ಟಿ ಮನಸ್ಸು ಮಾಡಿದರೆ ಇವೆಲ್ಲ ಸಮಸ್ಯೆಗಳೇ ಇರುವುದಿಲ್ಲ. ಇಂತಹ ಸರಳ ಸತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ದೇವರ ನಿಜವಾದ ಪ್ರಜೆಗಳು ನಾವೇ. ಬದುಕು ಇರುವುದು ಈ ಭೂಮಿಯ ಮೇಲೆ ಅಲ್ಲ ಎಂಬುದು ನಮಗಷ್ಟೇ ಗೊತ್ತು ಹೀಗಾಗಿ ನಾವು ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ನಾವೇ ಶಾಶ್ವತವಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳು ಶಾಶ್ವತವೇ?


ಅಮೇರಿಕಾ, ಇಸ್ರೇಲುಗಳು ನಮ್ಮಿಂದ ಕಲಿಯುವಂಥದ್ದು ತುಂಬಾ ಇದೆ. ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದು ಹೊರಡುವುದಾಗಲೀ, ಭಯೋತ್ಪಾದಕರಿಗೆ ಅನ್ನ ನೀರು ಕೊಟ್ಟು ಆಶ್ರಯ ನೀಡುತ್ತಿರುವವರನ್ನು ನಾಶ ಮಾಡುತ್ತೇವೆ ಎಂದಾಗಲೀ ಹೊರಡುವುದು ಮೂರ್ಖತನವಾಗುತ್ತದೆ. ಪಾಪ ಭಯೋತ್ಪಾದಕರೂ ಮನುಷ್ಯರೇ ಅಲ್ಲವೇ? ಪರಿಸ್ಥಿತಿಯಿಂದಾಗಿ ಆತ ಆ ಮಾರ್ಗ ಹಿಡಿದಿದ್ದಾನೆ. ಒಂದು ವೇಳೇ ನಾವೇ ಆ ಸ್ಥಾನದಲ್ಲಿದ್ದರೂ ಹಾಗೇ ಮಾಡುತ್ತಿರಲಿಲ್ಲವೇ? ಭಯೋತ್ಪಾದನೆ ಅಸಲಿಗೆ ಸಮಸ್ಯೆಯೇ ಅಲ್ಲ. ಭಯೋತ್ಪಾದಕ ನಮ್ಮನ್ನು ಕೊಂದರೆ ಏನು ಮಾಡಿದ ಹಾಗಾಯಿತು? ನಮ್ಮ ದೇಹ ನಾಶವಾಯಿತು ಅಷ್ಟೇ! ಅದಕ್ಕಿಂತ ಹೆಚ್ಚಿನದನ್ನೇನೂ ಆತ ಮಾಡಲಾರ. ನಮ್ಮ ಶಾಶ್ವತವಾದ, ಚಿರನೂತನವಾದ ಆತ್ಮವನ್ನು ಆತ ಮುಟ್ಟಲೂ ಸಾಧ್ಯವಾಗದು. ಅಂತಹವರನ್ನು ನಿಗ್ರಹಿಸಬೇಕು, ನಿವಾರಿಸಬೇಕು ಎಂದೆಲ್ಲಾ ಮಾತಾಡುವುದು ಬಾಲಿಶವಲ್ಲವೇ?


ಅದಕ್ಕಾಗಿ ಘಂಟಾಘೋಷವಾಗಿ ಹೇಳೋಣ: ನಾವು ಭಾರತೀಯರು, ನಾವಿನ್ನೂ ಬದುಕಿದ್ದೇವೆ. ಜಗತ್ತು ನಮ್ಮನ್ನು ನೋಡಿ ಬುದ್ಧಿ ಕಲಿಯಲಿ. ದೇವರ ಅಪೂರ್ವ ಸೃಷ್ಟಿಯಾದ ನಾವು ಇಲ್ಲಿಂದ ಖಾಲಿಯಾಗುವುದರೊಳಗೆ ಜಗತ್ತು ನಮ್ಮನ್ನು ಅರಿತುಕೊಳ್ಳಲಿ, ನಮ್ಮನ್ನು ಅನುಕರಿಸಲಿ.