Archive | ಮೇ, 2008

ನಮ್ಮ ನಾಡಿಗೆ ರಾಜಕಾರಣಿಗಳ ಆದರ್ಶ ಬೇಕು

29 ಮೇ

(ನಗಾರಿ ರಾಜಕೀಯ ಮನಃಶಾಸ್ತ್ರ ಬ್ಯೂರೋ)

ನಮ್ಮ ದೇಶದ ಮಿನಿಸ್ಟ್ರಿಗಳು ಸಮಸ್ಯೆಗಳನ್ನು ಪರಿಹರಿಸುತ್ತಾರೋ ಬಿಡುತ್ತಾರೋ, ಇಂಥಾ ಸಮೀಕ್ಷೆಗಳನ್ನಂತೂ ಸರಿಯಾಗಿ ನಡೆಸಿ ಅಂಕಿ ಅಂಶಗಳನ್ನಾದ್ರೂ ಕೊಡುತ್ತಾರೆ. ಅದು ನಮ್ಮ ಪುಣ್ಯ. ನಮ್ಮ ದೇಶದಲ್ಲಿ  ಕಳೆದ ಕೇವಲ ಮೂರು ವರ್ಷಗಳಲ್ಲಿ ಹದಿನಾರು ಸಾವಿರ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಒಂದು ಅಂಕಿ ಅಂಶ. ಅಂದರೆ ಅಂದಾಜಿನ ಪ್ರಕಾರ ದಿನಕ್ಕೆ ಹದಿನಾರು ಮಂದಿ ತಮ್ಮ ಪ್ರಾಣ ನೀಗಿಕೊಳ್ಳುತ್ತಿದ್ದಾರೆ. ಯೌವನದ ಹುರುಪು, ಜೀವನ್ನೋಲ್ಲಾಸ, ಲವಲವಿಕೆಗಳಿರುವ ವಯಸ್ಸಿನಲ್ಲೇ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆಗಳು ನಡೆಯುತ್ತಿರುವುದು ಯಾರಿಗೂ ಆತಂಕದ ವಿಚಾರವಾಗಿ ಕಾಣುತ್ತಿಲ್ಲ. ಬಹುಶಃ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಯನ್ನು ಹೊರತು ಪಡಿಸಿದರೆ ಇದು ಹೆಚ್ಚು ಕಳವಳ ಪಡಬೇಕಾದ ಸಂಗತಿ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರೀಕ್ಷೆಗಳಲ್ಲಿ ವಿಫಲರಾಗಿ ನಿರಾಶೆಗೊಳ್ಳುವುದನ್ನು ಪ್ರಮುಖವಾದ ಕಾರಣ ಎಂದು ಸಂಶೋಧನೆಗಳು ತಿಳಿಸುತ್ತಿವೆ. ಇದೂ ಅಲ್ಲದೆ ಸೋಲು,  ಅದರಿಂದುಂಟಾಗುವ ಖಿನ್ನತೆ ಎಳೆಯರ ಬಲಿ ತೆಗೆದುಕೊಳ್ಳುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಪ್ರೇಮದಲ್ಲಿ ಲಫಡಾ ಮಾಡಿಕೊಂಡವರೂ ಆತ್ಮಹತ್ಯೆಗೆ ಶರಣಾಗಿ ತಮ್ಮ ಹೆಸರಿಗೆ ಅಂಟಬಹುದಾದ ಕಳಂಕವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂಬುದೂ ತಿಳಿಯುತ್ತದೆ. ಇದಕ್ಕೆ ಪರಿಹಾರ ಏನು? ಎಳೆಯರಿಗೆ,ಯುವಕರಿಗೆ ಸ್ಫೂರ್ತಿಯಾಗಬಹುದಾದ, ಎಲ್ಲಕ್ಕಿಂತ ಈ ಭಂಡ ಜೀವನ ದೊಡ್ಡದು ಎಂಬುದನ್ನು ಮನವರಿಕೆ ಮಾಡಿಕೊಡುವುದು ಹೇಗೆ?

ನಗೆ ಸಾಮ್ರಾಟರ ಸಲಹೆ ಇಂತಿದೆ. ‘ನಮ್ಮ ಮಕ್ಕಳು, ಯುವಕರು ಸೋಲಿನಿಂದ, ವೈಫಲ್ಯದಿಂದ, ಅವಮಾನದಿಂದ, ಅಪರಾಧದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಅವರಿಗೆ ನಾವು ಒಳ್ಳೆಯ ರೋಲ್ ಮಾಡೆಲ್ಲುಗಳನ್ನು ಕೊಡಬೇಕು. ಅವರೆದುರು ಈಗ ಇರುವ ರೋಲ್ ಮಾಡೆಲ್ಲುಗಳಾದರೂ ಯಾರು? ಕ್ರಿಕೆಟ್ ಪಟುಗಳು, ಸಿನೆಮಾ ತಾರೆಯರು. ಇವರು ಸೋಲಿಗೆ,ಕೆಟ್ಟ ಹೆಸರಿಗಂಜಿ ಪ್ರಾಣ ತೆಗೆದುಕೊಳ್ಳುವುದನ್ನು ನೋಡಿ ನಮ್ಮ ಮಕ್ಕಳು ದುರ್ಬಲರಾಗುತ್ತಿದ್ದಾರೆ. ಇವರಿಗೆ ನಾನು ಶಿಫಾರಸ್ಸು ಮಾಡಬಯಸುವ ರೋಲ್ ಮಾಡೆಲ್ಲುಗಳೆಂದರೆ ನಮ್ಮ ರಾಜಕಾರಣಿಗಳು. ಇದುವರೆಗೂ ಚುನಾವಣೆಯಲ್ಲಿನ ಸೋಲು, ಭ್ರಷ್ಠಾಚಾರದ ಆರೋಪ, ಲೈಂಗಿಕ ಹಗರಣಗಳು ಹೀಗೆ ಎಂಥೆಂಥ ಸಂಕಷ್ಟಗಳು ಎದುರಾದರೂ ಪ್ರಾಣ ನೀಗಿಕೊಂಡ ರಾಜಕಾರಣಿ ನಮಗೆ ಕಾಣಿಸುತ್ತಾನಾ? ಇಲ್ಲ, ಇವರಿಗಿಂತ ಉತ್ತಮವಾದ ಉದಾಹರಣೆ ನಮ್ಮ ಮಕ್ಕಳಿಗೆ ಎಲ್ಲಿ ಸಿಗಲು ಸಾಧ್ಯ?

‘ಹೀಗಾಗಿ ನಮ್ಮ ಮಕ್ಕಳ ಪಠ್ಯಪುಸ್ತಕಗಳಲ್ಲಿ ನಮ್ಮ ರಾಜಕಾರಣಿಗಳ ಬಗ್ಗೆ ಪಾಠಗಳನ್ನು ಸೇರಿಸಬೇಕು. ಮಂತ್ರಿಯಾಗಲೇ ಬೇಕು ಎಂಬ ಅತ್ಯಾಸೆಯಿಂದ ಚುನಾವಣೆಗೆ ನಿಂತು, ತನ್ನ ಸರ್ವವಸ್ವವನ್ನೂ ಬಂಡವಾಳವನ್ನಾಗಿ ಹಾಕಿ ಕೊಂಡು ಚುನಾವಣೆಗೆ ನಿಂತು, ಸುತ್ತಲೂ ಎದುರಾಳಿಗಳನ್ನು ಹುಟ್ಟಿಹಾಕಿಕೊಂಡು ಸ್ಪರ್ಧಿಸಿ ಠೇವಣಿ ಕಳೆದುಕೊಂಡು ಸೋತರೂ ನಮ್ಮ ರಾಜಕಾರಣಿಗಳು ಧೃತಿಗೆಡುವುದಿಲ್ಲ. ಆತ್ಮಹತ್ಯೆಯ ಆಲೋಚನೆಯನ್ನೂ ಮಾಡುವುದಿಲ್ಲ. ಹೀನಾಯವಾಗಿ ಸೋತರೂ, ಲಕ್ಷಾಂತರ ಮಂದಿಯ ಮುಂದೆ ಮಾನ ಹರಾಜಾದರೂ, ಎಲ್ಲರೂ ಗುಂಡಿಗೆ ಬಿದ್ದವನ ಮೇಲೆ ಆಳಿಗೊಂದರಂತೆ ಕಲ್ಲು ಎಸೆಯಲು ಸನ್ನದ್ಧರಾದರೂ ನಮ್ಮ ರಾಜಕಾರಣಿಗಳು ನೆಮ್ಮದಿ ಕಳೆದುಕೊಳ್ಳುವುದಿಲ್ಲ. ತಣ್ಣಗೆ ಮಾಧ್ಯದ ಕೆಮರಾಗಳ ಮುಂದೆ ಬಂದು ಜನರ ತೀರ್ಪನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ಆರಾಮಾಗಿ ಇರುತ್ತಾರೆ. ಹೊಟ್ಟೆಯ ಹಸಿವು, ಕಣ್ಣಿನ ನಿದ್ರೆ ಯಾವುದರಲ್ಲೂ ಏರುಪೇರಾಗುವುದಿಲ್ಲ. ಇಂಥ ಮೇಲ್ಪಂಕ್ತಿಯನ್ನು ನಮ್ಮ ಮಕ್ಕಳಿಗೆ ನಾವು ಹಾಕಿಕೊಡಬೇಕು. ಪರೀಕ್ಷೆಯಲ್ಲಿ ಫೇಲ್ ಆದವ ‘ಇದು ಪರೀಕ್ಷಕ ಕೊಟ್ಟ ತೀರ್ಪು, ಇದನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತೇನೆ’ ಎಂದುಕೊಂಡು  ನೆಮ್ಮದಿಯಾಗಿ ಇರುವ ಸ್ಥಿತಪ್ರಜ್ಞತೆಯನ್ನು ಕಲಿತುಕೊಳ್ಳಬೇಕು ನಮ್ಮ ಯುವಕರು’. ಈ ರಾಜಕಾರಣಿಗಳ ಚರಿತ್ರೆಯನ್ನು  ನಮ್ಮ ಮಾಧ್ಯಮಗಳು ಹೆಚ್ಚು ಹೆಚ್ಚು ವಿವರವಾಗಿ ನಮ್ಮ ಮಕ್ಕಳು, ಯುವಕರಿಗೆ ಮುಟ್ಟಿಸಬೇಕು.

‘ಇನ್ನು ಪ್ರೇಮದಲ್ಲಿ ವಿಫಲರಾದವರು, ಲಫಡಾ ಮಾಡಿಕೊಂಡು ಹೆಸರಿಗೆ ಕುತ್ತು ತಂದುಕೊಂಡವರು ಸಹ ನಮ್ಮ ರಾಜಕಾರಣಿಗಳನ್ನು ಕಂಡು ಕಲಿಯಬೇಕಾದ ಪಾಠಗಳು ತುಂಬಾ ಇವೆ. ನಮ್ಮ ರಾಜಕಾರಣಿಗಳು ಲಕ್ಷಣವಾಗಿ ಮನೆ ಮಾಡಿಕೊಂಡಿದ್ದರೂ ರೇಸಾರ್ಟ್ ವಾಸ್ತವ್ಯ ಮಾಡುವುದು ಸರ್ವೇ ಸಾಮಾನ್ಯ. ಇದು ಜಗಜ್ಜಾಹೀರಾದ ಗುಟ್ಟು. ಎಷ್ಟೋ ಮಂದಿಯ ಗುಟ್ಟುಗಳು, ಬೆಳ್ಳಿ ಚಡ್ಡಿ, ಆಸ್ಪತ್ರೆ ಚರಿತ್ರೆಗಳು ಜನರ ಬಾಯಲ್ಲಿ ಚ್ಯೂಯಿಂಗ್ ಗಮ್ಮಾದರೂ ಸಹ ಅವಮಾನದಿಂದ ಯಾವ ರಾಜಕಾರಣಿಯೂ ಪ್ರಾಣ ನೀಗಿಕೊಳ್ಳುವುದಿಲ್ಲ. ಅಂಥ ಮನೋಸ್ಥೈರ್ಯವನ್ನು ನಮ್ಮ ಯುವಕರು, ಪ್ರೇಮಿಗಳು ಕಲಿಯಬೇಕು. ಈ ‘ಆರ್ಟ್ ಆಫ್ ಲೀವಿಂಗ್’ ಕಲಿಸಲು ಶಾಲೆಗಳಲ್ಲಿ ಶಿಬಿರಗಳನ್ನು ಮಾಡಿ ನುರಿತ ರಾಜಕಾರಣಿಗಳಿಂದ ಮಾರ್ಗದರ್ಶನ ಕೊಡಿಸಬೇಕು.’

ನಗೆ ಸಾಮ್ರಾಟರ ಈ ಸಲಹೆಯ ಕಡೆಗೆ ನಮ್ಮ ಪೋಷಕರು ಗಮನ ಹರಿಸಿದರೆ ತಮ್ಮ ಮಕ್ಕಳ ಪ್ರಾಣಗಳನ್ನು ಉಳಿಸಬಹುದು ಎಂಬುದು ಸಾಮ್ರಾಟರ ಚೇಲ ಕುಚೇಲನ ಮಾತು.

ಐಪಿಎಲ್ (ಇಂಡಿಯನ್ ಪೇಮೆಂಟ್ ಲೀಗ್) ವಿಶೇಷ

28 ಮೇ

(ನಗಾರಿ ಕ್ರೀಡಾ ಬ್ಯೂರೋ)

ಚುನಾವಣೆಯ ಬೀಟಿಗೆ ಹೋಗಿದ್ದ ನಗೆ ಸಾಮ್ರಾಟರು ಚುನಾವಣೆಯ ಕಾವು, ಎಲ್ಲೆಲ್ಲೂ ಸುರಿದು ಹರಿದು ಹೋಗುತ್ತಿದ್ದ ಹಣದ, ಹೆಂಡದ ಹೊಳೆಯನ್ನು ನೋಡಿ ಹೇಸಿಕೊಂಡು ಕೊಂಚ ವಿಶ್ರಾಂತಿಗಾಗಿ ಐಪಿಎಲ್ ಅರ್ಥಾತ್ ಇಂಡಿಯನ್ ಪೇಮೆಂಟ್ ಲೀಗ್‌ನ ಕಡೆಗೆ ಬೀಟು ಹಾಕಿದರು. ಜೊತೆಗೆ ಅವರ ಚೇಲ ಕುಚೇಲನೂ ಇದ್ದನೆನ್ನಿ…

ಚುನಾವಣೆಯಲ್ಲಿನ ಕತ್ತಲ ರಾತ್ರಿಯಲ್ಲಿನ ಹೆಂಡದ ಕಮಟು, ನೋಟಿನ ಗರಿಗರಿಯಿಂದ ರೋಸಿ ಹೋಗಿದ್ದ ನಗೆಸಾಮ್ರಾಟರಿಗೆ ಕ್ರಿಕೆಟ್ ಮೈದಾನದಲ್ಲಿ ಅವನ್ನು ಬಹಿರಂಗವಾಗಿ ಕಂಡು ತುಂಬಾ ಸಂತೋಷವಾಯಿತು. ಲಕ್ಷಾಂತರ ಮಂದಿ ತಮ್ಮೆಲ್ಲಾ ಹಕ್ಕುಗಳಿಂದ ವಂಚಿತರಾಗಿ, ತಾವು ಹುಟ್ಟಿರುವುದು ಮನುಷ್ಯರಾಗಿ ಎಂಬುದರ ಬಗ್ಗೆಯೇ ನಂಬಿಕೆ ಇಲ್ಲದ ಹಾಗೆ ಬದುಕುತ್ತಿರುವಾಗ ಒಬ್ಬೊಬ್ಬನಿಗೆ ಕೋಟಿ ಕೋಟಿ ಹಣವನ್ನು ಸುರಿಯುವುದು ಕಂಡು ನಮ್ಮ ವ್ಯವಸ್ಥೆ ಇದ್ದರೆ ಹೀಗಿರ ಬೇಕು, ಪ್ರತಿಭೆ ಇದ್ದವನ ಕಾಲ ಕೆಳಗೆ ಜಗತ್ತನ್ನೇ ಹೆಡೆ ಮುರಿ ಕಟ್ಟಿ ತಂದು ಮಲಗಿಸಬೇಕು. ಪ್ರತಿಭೆ ಇಲ್ಲದ ಬ್ರೂಟುಗಳನ್ನು ಬದುಕುವುದಕ್ಕೂ ಬಿಡಬಾರದು. ಹೆಂಡವನ್ನೋ, ಕಳ್ಳಮಾಲನ್ನೋ, ಪಾನೀಯದ ಹೆಸರಿನಲ್ಲಿ ಕಾರ್ಕೋಟಕವನ್ನೋ ಇವ್ಯಾವುದೂ ಇಲ್ಲವಾದರೆ ಕನಿಷ್ಠ ಪಕ್ಷ ಮಾನ – ಮರ್ಯಾದೆಯನ್ನಾದರೂ ಮಾರಿಕೊಂಡು  ಕಾಸು ಕೂಡಿಡಲಾಗದ ತಂದೆಗೆ ಮಕ್ಕಳನ್ನು ಪಡೆಯುವ ಹಕ್ಕು ಹೇಗೆ ಬರುತ್ತದೆ. ಓದಲು ಕಾಸಿಲ್ಲದೆ ಶಾಲೆಗೆ ಸೇರಲು ಆಗಲಿಲ್ಲ, ಸರ್ಕಾರಿ ಶಾಲೆಗೆ ಸೇರಿದರೂ ಶಿಕ್ಷಕರನ್ನೇ ಏನು, ಶಾಲೆಯ ಕಟ್ಟಡವನ್ನೇ ನೋಡಲಿಲ್ಲ, ಇವೆಲ್ಲಾ ಇದ್ದರೂ ಒಳ್ಳೆಯ ಕೋಚಿಂಗ್ ಪಡೆದು ಮಾರ್ಕು ಗಿಟ್ಟಿಸಿ ತೋರಿಸಲು ಸಾಧ್ಯವಾಗಲಿಲ್ಲ ಎಂಬ ಮಾತ್ರಕ್ಕೆ ಬಡವರ, ದರಿದ್ರರ ಮಕ್ಕಳು ಪ್ರತಿಭಾವಂತರಾಗುತ್ತಾರೆಯೇ? ಇಲ್ಲ. ಇವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಬಿಡಬೇಕು ಎಂದರು ನಗೆಸಾಮ್ರಾಟ್. ‘ಬುದ್ಧಿ, ನಿಮ್ಗೆ ಬುದ್ಧಿ ಇಲ್ಲ. ನಮ್ಮ ಸರ್ಕಾರದವ್ರು ಇದ್ನೆಲ್ಲಾ ಯಾವಾಗೋ ಯೋಚ್ಸಿದಾರೆ ಗೊತ್ತುಂಟಾ? ಅವ್ರೂ ನಿಮ್ಮಂಗೇ ತೀರ್ಮಾನಕ್ಕೆ ಬಂದ್ರು. ಆದ್ರೆ ಅದಕ್ಕೆಲ್ಲಾ ಒಂದು ಗುಂಡನ್ನ ಯೇಸ್ಟ್ ಮಾಡುವಷ್ಟು ಮಡ್ಡಿ ಅಲ್ಲ ನಮ್ಮ ಸರ್ಕಾರ. ಅದ್ಯಾರೋ ಇಟ್ಲರ್ರು  ಯಹೂದಿಗಳ್ನೆಲ್ಲಾ ಗುಂಡಿಯಾಗೆ ಆಕಿ ಗ್ಯಾಸು ಬಿಟ್ಟು ಸಾಯ್ಸಿ ಲಕ್ಷಾಂತರ ರೂಪಾಯಿ ಲುಕ್ಸಾನು ಮಾಡಿಕೊಳ್ಳಾಕೆ ನಮ್ಮ ಸರ್ಕಾರ ಏನು ಮಣ್ಣು ತಿಂತತಾ? ಆ ದರಿದ್ರದವಕ್ಕೆ ಒಟ್ಟೆಗೆ ಹಿಟ್ಟೇ ಇಲ್ಲದ ಹಂಗೆ ಮಾಡಿದ್ರೆ, ಚಳಿಯಾಗೆ ನಡುಗೋವ್ರಿಗೆ ಕಂಬಳಿ ಸಿಗದಂಗೆ ಮಾಡಿದ್ರೆ ಅವ್ರಾಗೆ ಜಂತು ಸತ್ತಂತೆ ಸಾಯ್ತಾರಲುವ್ರಾ? ಅಷ್ಟಕ್ಕೂ ಯಾವ್ನಾದ್ರೂ ಗಟ್ಟಿ ಹೈದ ಬದುಕುಳುದ್ರೆ ಇದ್ದೇ ಐತಲ್ಲಾ, ಕಳ್ಳ ಭಟ್ಟಿ…’ ಎಂದ ಚೇಲ.

‘ಹನ್ನೊಂದು ಮಂದಿ ಮೂರ್ಖರು ಆಡುವ ಆಟವನ್ನು ಹನ್ನೊಂದು ಸಾವಿರ ಮಂಡಿ ಮೂರ್ಖರು ನೋಡುತ್ತಾ ಕೂರುವುದೇ ಕ್ರಿಕೆಟ್’ ಅಂತ ಅದ್ಯಾವುದೋ ಭೂಪ ಹೇಳಿದ್ದನ್ನೇ ಗಾಸ್ಪೆಲ್ ಟ್ರುಥ್ ಅಂತ ನಂಬ್ಕೋಬೇಕಾ (ಈಗ ಬಿಡಿ, ಗಾಸ್ಪೆಲ್ಲು ಹೇಳಿರುವುದರಲ್ಲೇ ಟ್ರುತ್ಥು ಇಲ್ಲ ಅಂತ ಸಂಶೋಧನೆ ಮಾಡ್ತಿದ್ದಾರೆ!)?  ಅಂತ ತಲೆ ಕೆರೆದುಕೊಳ್ತಾ ಸಾಮ್ರಾಟರು ಮೈದಾನದಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅಲ್ಲಿ ನೆರೆದಿದ್ದ ಯುವ, ಹದಿ-ವೃದ್ಧಾಪ್ಯದ, ಮಧ್ಯವಯಸ್ಕರನ್ನು ಸಂದರ್ಶಿಸಲು ಸಿದ್ಧರಾದರು.

ದೂರದ ದಿಗಂತದ ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟಿಕೊಂಡು ನಿಂತ ಸಾಮ್ರಾಟರನ್ನು ಕೂಗಿ ಕರೆದ ಚೇಲ ಕುಚೇಲ ಅತ್ತ ಕಡೆ ನೋಡಿ ಎಂದ. ಅಲ್ಲಿ ಕ್ರೀಡಾಂಗಣದ ಗೇಟಿನ ಹೊರಗೆ ನೂರಾರು ಮಂದಿ ಕೈಲಿ ಕ್ರಿಕೆಟ್ ಬ್ಯಾಟು ಬದಲಿಗೆ ಹಾಕಿ ಕೋಲು, ತಿರುಪತಿ ತಿಮ್ಮಪ್ಪನ ಹಳೆಯ ಮೇಲಿರುವ ಸಿಂಬಲ್ಲಿನ ಆಕಾರದ ಝಳಪಿಸುವ ಆಯುಧಗಳನ್ನು ಹಿಡಿದುಕೊಂಡು ಗಲಾಟೆ ಹಾಕುತ್ತಿದ್ದರು. ಕೂಡಲೆ ಸಾಮ್ರಾಟರು ಚೇಲನೊಂದಿಗೆ ಅಲ್ಲಿಗೆ ಧಾವಿಸಿದರು. ಆ ಗುಂಪಿನ ಮುಂಚೂಣಿಯಲ್ಲಿ ಮಿಂಚುತ್ತಿದ್ದ ಹುರಿಯಾಳನ್ನು ಪಕ್ಕಕ್ಕೆ ಕರೆದು, ‘ಏನಯ್ಯಾ ಸಮಾಚಾರ’ ಎಂದರು. ಆ ಹುಡುಗ ವೀರಾ‘ವೇಷ’ದಿಂದ ‘ಅಲ್ರೀ, ನಮ್ಮ ದೇಶ ಎಂಥದ್ದು? ನಮ್ಮ ಸನಾತನ ಸಂಸ್ಕೃತಿ ಎಂಥದ್ದು? ನಾವು ಇಡೀ ಜಗತ್ತಿನ ಆಧ್ಯಾತ್ಮಿಕತೆಯನ್ನು ಕಲಿಸಿಕೊಟ್ಟವರು. ಇಡೀ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳಿಕೊಟ್ಟವರು ಭಾರತೀಯರು… ನಾವು… ನಾವು…’ ಎನ್ನುವಷ್ಟರಲ್ಲಿ ಗಂಟಲು ರೇಗಿತು. ‘ಒಂದು ಸಿಗರೇಟಿದೆಯಾ ಸರ್ರು…’ ಅಂದು, ಸಾಮ್ರಾಟರಿಂದ ಪಡೆದು ಅದರ ತುದಿಗೆ ಬೆಂಕಿಕೊಟ್ಟು ಮಾತು ಮುಂದುವರೆಸಿದ, ‘ಹೆಣ್ಣಿಗೆ ದೇವಿಯ ಸ್ಥಾನವನ್ನು ಕೊಟ್ಟವರು ನಮ್ಮ ಪೂರ್ವಜರು. ಅದಕ್ಕಾಗಿಯೇ ನಾವು ಇಂದು ಆಕೆಯನ್ನು ಅಡುಗೆಮನೆ, ದೇವರ ಮನೆಗೆ ಸೀಮಿತಗೊಳಿಸಿ ಹಿರಿಯರ ಆದರ್ಶ ಪಾಲಿಸುತ್ತಿರುವುದು. ಹೆಣ್ಣಿಗೆ ಮಾತೆಯಂತ ಕರೆದವರು ನಮ್ಮ ಹಿಂದಿನವರು. ಅದಕ್ಕಾಗಿಯೇ ಆಕೆಗೆ ‘ಮಾತೆ’ಯಾಗುವ ಕೆಲಸ ಬಿಟ್ಟು ಬೇರಾವುದಕ್ಕೂ ಅವಕಾಶ ಸಿಗದ ಹಾಗೆ ನೋಡಿಕೊಂಡಿದ್ದೇವೆ. ನಾವು ಹೆಣ್ಣಿಗೆ ಇಂಥಾ ಮರ್ಯಾದೆಯನ್ನು ಮಾಡುತ್ತಿರುವಾಗ ಇವರು ಕ್ರಿಕೆಟ್ ಆಡುವ ಇಪ್ಪತ್ತೆರಡು ಮಂದಿ ಗಂಡಸರು ಹಾಗೂ ಅದನ್ನು ನೋಡುವುದಕ್ಕೆ ಬರುವ ಗಂಡಸರ ಮುಂದೆ ಅರೆ ಬರೆ ಬಟ್ಟೆ ತೊಟ್ಟು ಕುಣಿಯುವುದಕ್ಕಾಗಿ ‘ಚೀರ್ ಲೀಡರ್ಸ್’ನ್ನ ಕರೆಸಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ. ಅದಕ್ಕೇ ನಮ್ಮ ‘ಶಾಂತಿಯುತ’ ಪ್ರತಿಭಟನೆ’ ಎನ್ನುತ್ತಾ ಪಕ್ಕದಲ್ಲಿ ಬಿಟ್ಟಿದ್ದ ದೊಣ್ಣೆಯನ್ನೆತ್ತಿಕೊಂಡು ಹೊರಟ.

ಈ ಗುಂಪಿನ ಪಕ್ಕದಲ್ಲೇ ಮತ್ತೊಂದು ಗುಂಪು ನೆರೆಯಲು ಶುರುವಾಗಿತ್ತು. ಅವರದೂ ಅದೇ ಫ್ಯಾನ್ಸಿ ಡ್ರೆಸ್ಸು. ಇವರ  ಗೋಳೇನು ಕೇಳಿಕೊಂಬೋಗು ಎಂದು ಸಾಮ್ರಾಟರು ಕುಚೇಲನನ್ನು ಅಟ್ಟಿದರು. ‘ಅಯ್ಯೋ ಸಾರ್. ಇಲ್ಲಿ ಇವ್ರು ಸಂಸ್ಕಾರ, ಸಂಸ್ಕೃತಿ ಅಂತ ಗಲಾಟೆ ಮಾಡಾಕೆ ಜನರನ್ನ ಬಾಡಿಗೆ ತಂದದ್ದು ಗೊತ್ತಾಗಿ ಅದ್ಯಾರೋ ರೀಜನಲ್ ಓರಾಟಗಾರರು ಓಡಿ ಬಂದ್ರಂತೆ. ಈ ಸ್ಟೇಡಿಯಮ್ಮಿನವ್ರು ಇದೇಸದಿಂದ ಹುಡುಗೀರ್ನ ಕುಣಿಯೋಕೆ ಕರೆಸಿರೋದ್ನ ಕಂಡು ಅವರ ಮುಖಂಡ… ಪ್ರಾದೇಶಿಕ ಪ್ರತಿಭೆಗಳಿಗೆ ಅವಮಾನವಾಗಿದೆ. ನಿಮಗೆ ನಮ್ಮ ಸ್ಟೇಡಿಯಮ್ಮು ಬೇಕು, ನಮ್ಮ ಜನರು ಟಿಕೆಟು ಖರೀದಿಸ್ಬೇಕು, ನಮ್ಮ ಜನರ ದುಡ್ಡು ಬೇಕು ಆದರೆ ನಮ್ಮವರು ಬೇಡ. ಎಲ್ಲದರಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಬೇಕು. ಅಂತ ಓರಾಟ ಶುರು ಅಚ್ಚಿಕೊಂಡವ್ರಂತೆ’ ವರದಿ ಒಪ್ಪಿಸಿದ ಕುಚೇಲ.

ನಮ್ಮ ಯುವಕರಿಗೆ ಪ್ರತಿಭಟನೆಗೆ ಎಂತೆಂಥಾ ವಿಷಯಗಳು ಸಿಕ್ಕುತ್ತವೆ. ಪೂರ್ ಫೆಲೋ ಗಾಂಧಿ ಕೇವಲ ಚಿಟಿಗೆ ಉಪ್ಪಿಗಾಗಿ ಸತ್ಯಾಗ್ರಹ ಮಾಡಿದ. ಇವರ ಬಳಿ ಇದ್ದಿದ್ದರೆ ಇನ್ನೂ ಎಷ್ಟೆಷ್ಟೋ ಮಹತ್ವದ ವಿಷಯಗಳು ಸಿಕ್ಕುತ್ತಿದ್ದವು ಪ್ರತಿಭಟನೆಗೆ ಎಂದು ಕೊಂಡು ಸಾಮ್ರಾಟರು ಕುಚೇಲನ ಸಮೇತ ಕ್ರೀಡಾಂಗಣದ ಒಳಕ್ಕೆ ಬಂದರು. ಎದುರಿಗೇ ನಾಲ್ಕೈದು ಮಂದಿ ಯುವಕರು, ಸ್ಫುರದ್ರೂಪಿಗಳು ಮುಖ ಗಂಟಿಕ್ಕಿಕೊಂಡು ಕುಳಿತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಗೆಸಾಮ್ರಾಟರು ಇಲ್ಲೊಂದು ಸ್ಟೋರಿ ಸಿಕ್ಕೀತು ಅಂತ ಅಂದುಕೊಂಡು ಅವರ ಬಳಿಗೆ ದೌಡಾಯಿಸಿದರು. ಸಾಮ್ರಾಟರು ಪತ್ರಿಕೆಯವರು ಎಂಬುದನ್ನು ಅರಿತ ಕೂಡಲೇ ಆ ಗುಂಪಿನವರೋ ಗೊಳೋ ಎಂದು ಅಳುತ್ತಾ ಫೋಟೊ ಫೋಸಿಗೆ ಸಿದ್ಧರಾದರು. ಸಾಮ್ರಾಟರು ಏನು ನಿಮ್ಮ ಚರಿತ್ರೆ ಎಂದು ಕೇಳುವ ಮೊದಲೇ ಒಬ್ಬ ಯುವಕ ‘ಅಂಕಲ್, ನೀವೇ ನೋಡಿ… ನಮ್ಮ ದೇಶದಲ್ಲಿ ಎಷ್ಟೆಲ್ಲಾ ಅಸಮಾನತೆ, ಶೋಷಣೆ ನಡೆಯುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಆಶ್ವಾಸನೆ ಕೊಟ್ಟಿದ್ದರೂ ಎಲ್ಲೆಲ್ಲೂ ಬರೀ ಅಸಮಾನತೆ, ಶೋಷಣೆ ನಡೆಯುತ್ತಿದೆ. ಎಲ್ಲಾ ಕಡೆ ಬರೀ ಪಾರ್ಶಿಯಾಲಿಟಿ.’ ಎಂದು ಮಾತಿಗೆ ತೊಡಗಿದ. ಸಾಮ್ರಾಟರಿಗೆ ಈ ಹುಡಗನ ಪ್ರಾಮಾಣಿಕ ಕಳಕಳಿಯನ್ನು ಕಂಡು ಮಮತೆ ಉಕ್ಕಿತು. ‘ಅಲ್ಲಾ ಅಂಕಲ್, ಕ್ರಿಕೆಟ್ ಆಡುವುದು ಹುಡುಗರು, ನೋಡುವ ಬಹುಪಾಲು ಮಂದಿ ಹುಡುಗರು ಹೀಗಿರುವಾಗ ಅಲ್ಲಿ ಮೈದಾನದಲ್ಲಿ ಕುಣಿಯುವುದಕ್ಕೆ ಮಾತ್ರ ಹುಡುಗಿಯರು ಬೇಕಾ? ಚೀರ್ ಗರ್ಲ್ಸ್ ಮಾತ್ರ ಬೇಕಾ? ಚೀರ್ ಬಾಯ್ಸ್ ಯಾಕೆ ಇರಬಾರದು. ಇದು ಹುಡುಗರಿಗೆ ತೋರುತ್ತಿರುವ ಅಸಡ್ಡೆ. ಇದು ಹುಡುಗರ ಮೇಲೆ ನಡೆಯುತ್ತಿರುವ ಶೋಷಣೆ. ಮಹಿಳಾ ಪ್ರಧಾನವಾದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಗಂಡಸರ ಶೋಷಣೆ’ ಎಂದು ಏರಿದ ದನಿಯಲ್ಲಿ ಭಾಷಣ ಚಚ್ಚುತ್ತಿರುವಂತೆಯೇ ನಗೆ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಿತ್ತು. ಅಷ್ಟರಲ್ಲಿ ಪಕ್ಕದಲ್ಲಿಯೇ ಬೇತಾಳದಂತೆ ಅಲೆದಾಡುತ್ತಿದ್ದ ‘ಭಾರತದ ಗಡಿಯಾರಗಳು’ ಎಂಬ ಅಚ್ಚ ಇಂಗ್ಲೀಷ್ ಪತ್ರಿಕೆಯ ವರದಿಗಾರ ನಮ್ಮ ಪತ್ರಿಕೆಯ ಮುಖಪುಟಕ್ಕೆ ಒಳ್ಳೆ ಕವರೇಜ್ ಸಿಕ್ಕಿತು ಅಂತ ಅಲ್ಲಿಗೆ ದೌಡಾಯಿಸಿದ. ಸಾಮ್ರಾಟರು ತಣ್ಣಗೆ ಅಲ್ಲಿಂದ ಜಾರಿಕೊಂಡರು.

ಸ್ಟೇಡಿಯಮ್ಮಿನಿಂದ ಹೊರಬಂದು ದಣಿವಾರಿಸಿಕೊಳ್ಳಲು ಸನಿಹದ ಅಂಗಡಿಯಲ್ಲಿ ನೀರು ಕೇಳಿದರೆ ಆತ ‘ನೀರಾದರೆ ಒಂದು ಬಾಟಲಿಗೆ ನೂರು ರೂಪಾಯಿ, ಬೀರಾದರೆ ಐವತ್ತು’  ಅಂದದ್ದು ಕೇಳಿ ದಿಗಿಲಾಗಿ ಓಡಲು ಶುರುಮಾಡಿದವರು ನಗಾರಿಯ ಕಛೇರಿ ತಲುಪಿದಾಗಲೇ ನಿಂತದ್ದು.

ಚರ್ಚೆ: ಬುದ್ಧ ನಗಲಿಲ್ಲ…

28 ಮೇ

ನಮ್ಮ ಧರ್ಮಗಳು ಯಾಕೆ ಜೀವ ವಿರೋಧಿಯಾದವು ಎಂಬುದು ತತ್ವಜ್ಞಾನಿಗಳ, ದಾರ್ಶನಿಕರ, ಧರ್ಮ ಭೀರುಗಳ ಅವಗಾಹನೆಗೆ ಬಿಟ್ಟ ವಿಚಾರ. ಆದರೆ ಅವುಗಳು ನಮ್ಮ ಸಹಜವಾದ ಸಂತಸವನ್ನು ಕಿತ್ತುಕೊಳ್ಳುವಷ್ಟು ಕ್ರೂರ ಹಾಗೂ ಕುಟಿಲವಾದದ್ದು ಏಕೆ ಎಂಬುದನ್ನು ನಾವೆಲ್ಲರೂ ಆಲೋಚಿಸಲೇಬೇಕು.

ನಗುವುದನ್ನು ಸಹಿಸಿಕೊಳ್ಳುವುದಕ್ಕೆ ಯಾವ ಧರ್ಮದಿಂದಲೂ ಸಾಧ್ಯವಾಗಿಲ್ಲ. ಮುಗುಳ್ನಗೆಯೇ ತುಂಬಾ ದುಬಾರಿಯಾಗಿರುವ ಸಂದರ್ಭದಲ್ಲಿ ಬಿದ್ದು ಬಿದ್ದು ನಗುವುದು, ಹೊಟ್ಟೆ ಕುಣಿಸಿಕೊಂಡು ನಗುವುದು, ನೆಲದ ಮೇಲೆ ಉರುಳಾಡಿ ನಗುವುದು, ತೊಡೆ ತಟ್ಟಿಕೊಂಡು ಪುಟಿದಾಡುತ್ತಾ ನಗುವುದು, ಹೊಟ್ಟೆ ಹಿಡಿದುಕೊಂಡು ನಗುವುದು ಎಲ್ಲವೂ ನಮಗೆ ದೇವ-ದೇವತೆಯರ ವಿಚಾರದಲ್ಲಿ ಕಂಡು ಬರುವುದಿಲ್ಲ. ನಗುವುದು ದೈವತ್ವಕ್ಕೆ ಅಪವಾದ ಎಂಬಂತೆ ಚರಿತ್ರೆಯಿಡೀ ದಾಖಲಾಗುತ್ತಾ ಬಂದಿದೆ. ಬುದ್ಧ ನಕ್ಕಿದ್ದ ಎಂಬುದನ್ನು ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದು, ಯೇಸು ಕ್ರಿಸ್ತ ಜೋಕು ಹೇಳಿದ್ದ ಎಂದರೆ ಧರ್ಮ-ದ್ರೋಹಿ ಎನಿಸಿಕೊಳ್ಳಬೇಕಾಗುತ್ತದೆ, ಶಂಕರರು ಬಿದ್ದು ಬಿದ್ದು ನಕ್ಕಿದ್ದರೆ ಎಂದರೆ ನಮಗೆ ಗ್ರಹಣ ಬಾಧೆಯಾಗಿದೆಯಾ ಎಂಬ ಗುಮಾನಿ ಏಳುತ್ತದೆ.

ಕಣ್ಣಲ್ಲಿ ನೀರು ಊಟೆ ಒಡೆಯುವ ಹಾಗೆ ನಕ್ಕಾಗ ನಮ್ಮೊಳಗಿನೆ ಗಂಟುಗಳೆಲ್ಲಾ ಸಡಿಲಾಗಿ ನಾವು ತೀರಾ ಸಹಜವಾಗಿಬಿಡುತ್ತೇವೆ, ನಮ್ಮ ಕೃತಕತೆಯನ್ನು ಕಿತ್ತೊಗೆದು ನಮ್ಮ ಕೇಂದ್ರಕ್ಕೆ ನಾವು ಹತ್ತಿರಾಗಿಬಿಡುತ್ತೇವೆ. ಆದರೆ ಮರುಕ್ಷಣವೇ ನಮ್ಮ ಪ್ರಜ್ಞೆ ನಮ್ಮನ್ನು ಚುಚ್ಚಲು ಶುರು ಮಾಡುತ್ತದೆ. ಇಷ್ಟು ನಕ್ಕು ಬಿಟ್ಟಿದ್ದೀಯ, ಮುಂದೆ ಇನ್ನೇನು ಕಾದಿದೆಯೋ ಎಂದು ಹೆದರಿಸುತ್ತದೆ. ಮನಸಾರೆ ನಕ್ಕ ಬಗ್ಗೆ ಒಂದು ಗಿಲ್ಟ್ ಹುಟ್ಟಿಕೊಳ್ಳುತ್ತದೆ.

ಯಾಕೆ ಹೀಗೆ?

ಬ್ಲಾಗ್ ಬೀಟ್ 8

28 ಮೇ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………..

ಪಂಚ್ ಲೈನ್

ಪಂಚು ಹೊಡೆಯುವುದರಲ್ಲಿ ಸಿದ್ಧ ಹಸ್ತರಾಗಿ ಕಾಣುವ ಗಣೇಶ್ ನಿಜವಾದ ಮೌತ್ ಕಾ ಸೌದಾಗರ್ ನಮ್ಮ ಸೋನಿಯಮ್ಮ ಹೇಳಿದ ಹಾಗೆ ಗುಜರಾಥಿನ ನರೇಂದ್ರ ಮೋದಿಯಲ್ಲ. ಮತ್ತ್ಯಾರು? ಹಾಗಾದರೆ ಈ ಲಿಂಕನ್ನು ಕ್ಲಿಕ್ಕಿಸಿ.

ಸಂತೆ ನೆರೆಯುವುದಕ್ಕೆ ಮುನ್ನವೇ ಗಂಟು ಕಳ್ಳರು ದೌಡಾಯಿಸಿದರು ಎಂಬಂತೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ತೆರೆಯುವುದಕ್ಕೆ ಮುಂಚೆಯೇ ಅದಕ್ಕೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಚೌಕಾಶಿ ನಡೆಯಲು ಶುರುವಾಗಿದೆ. ಕೆಂಪೇ‘ಗೌಡ’ರ ಹೆಸರಿಡಬೇಕೋ, ವಿಶ್ವೇಶ್ವರ‘ಅಯ್ಯ’ನವರ ಹೆಸರಿಡಬೇಕೋ, ಟಿಪ್ಪು ‘ಸುಲ್ತಾನ್’ನ ಹೆಸರನ್ನು ಮಡಗಬೇಕೋ ಅನ್ನೋ ವಿಚಾರವಾಗಿ ಭಾರೀ ‘ಚರ್ಚೆ’ ನಡೆಯುತ್ತಿದೆ. ಇದಕ್ಕೊಂದು ಒಳ್ಳೆಯ ಪರಿಹಾರವನ್ನು ಗಣೇಶ್ ಕೊಟ್ಟಿದ್ದಾರೆ. ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ?

………………………………………………………………..

ಬೊಗಳೆ ರಗಳೆ

ಕನ್ನಡ ನಾಡಿನ ಪತ್ರಿಕೆಗಳೆಲ್ಲಾ ರಾಜಕೀಯದ ಬಿಸಿಯನ್ನು ಮನೆ ಮೆನೆಗೆ ತಲುಪಿಸಿ ಬೇಸಿಗೆಯನ್ನು ಮತ್ತಷ್ಟು ಅಸಹನೀಯಗೊಳಿಸುವಲ್ಲಿ ಪೈಪೋಟಿ ನಡೆಸುತ್ತಿರುವಾಗ ಬೊಗಳೂರು ಭಯ ಭೀತ ಬ್ಯೂರೋ ತಾನೇನೂ ಕಡಿಮೆಯಿಲ್ಲ ಎಂದು ರಾಜಕೀಯ ವರದ್ದಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ನೇತಾಗಳೆಂಬ ಭೂತಗಳು ಓಡಾಡುತ್ತಾ ಭಯೋತ್ಪಾದನೆ ಮಾಡುತ್ತಿರುವುದನ್ನು ‘ರಾತ್ರಿ ಏಳರವರೆಗಿನ ಪ್ರಜ್ಞಾವಂತ’ ಮತದಾರ ಅನಂತರ ಕಣ್ಣು ಕೆಂಪು ಮಾಡಿಕೊಂಡು ನೋಡುತ್ತಿರುವುದನ್ನು ಬೊಗಳೂರು ವಾಹ್-ರದ್ದಿಗಾರ ತಂದು ಸುರಿದಿದ್ದಾನೆ.

………………………………………………………………..

ಮಜಾವಾಣಿ

ಚುನಾವಣೆಗಳು ಹತ್ತಿರಬಂದಾಗ ಪತ್ರಿಕೆಗಳು ಮದುವೆ ಮನೆಯಲ್ಲಿ ಸಿಂಗಾರಗೊಂಡ ವಧುವಿನ ಹಾಗಾಗಿರುತ್ತವೆ. ಇದಕ್ಕೆ ಅಂತರ್ಜಾಲದ ಅತ್ಯಂತ ‘ಜನಪ್ರಿಯ’ ‘ವಿಶ್ವಾಸಾರ್ಹ’ ಪತ್ರಿಕೆಯೂ ಕಡಿಮೆಯಿಲ್ಲ. ಅವರು ಚುನಾವಣೆಯ ಸಂದರ್ಭದಲ್ಲಿ ಜನಮತವನ್ನು ಸಂಗ್ರಹಿಸಿ ತಮ್ಮ ಪತ್ರಿಕೆಯಲ್ಲಿ ಚಾಪಿಸಿಕೊಂಡಿದ್ದಾರೆ. ಮುಂದಿನದು ಸಂಪಾದಕರ ಮಾತುಗಳಲ್ಲಿ…

ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ,  ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ.   – ಸಂ.

………………………………………………………………..

ಪ್ರಕಾಶ್ ಶೆಟ್ಟಿ ಪಂಚ್

ಶೆಟ್ಟಿಯವರ ಗೆರೆಗಳಲ್ಲಿ ಸೆರೆಯಾಗಿರುವ ಸಂಗತಿಗಳು ಹಲವು. ಗರ್ಜಿಸುವುದನ್ನೇ ಮರೆತಿರುವ ಮಹಾರಾಷ್ಟ್ರದ ಹಳೆಯ ಹುಲಿಯ ಅಳಲಾದರೂ ಏನು? ಜಾರ್ಜು ಬುಸ್ಸು ಇನ್ ಫ್ಲೇಷನ್ನಿಗೆ ಸಂ-ಚೋದಿಸಿದ ಕಾರಣ ಯಾವುದು? ಚುನಾವಣೆ ಕಿಕ್ಕಿಗಾಗಿ ಕೆಲವು ಶೆಟ್ಟಿ ಪಂಚುಗಳು….

………………………………………………………………..

ನಗಾರಿ ರೆಕಮಂಡೇಶನ್ 8

27 ಮೇ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

………………………………………………………………….

ನಮ್ಮ ಸಾರ್ವಜನಿಕ ವೇದಿಕೆಗಳಲ್ಲಿನ ಹಲವಾರು ಚಟುವಟಿಕೆಗಳು ಅವೆಷ್ಟು ಔಪಚಾರಿಕವಾಗಿಬಿಟ್ಟಿವೆ ಎಂದು ಆಲೋಚಿಸಿದರೆ ಆಶ್ಚರ್ಯವಾಗುತ್ತದೆ. ವೈಯಕ್ತಿಕವಾದ ಭಾವನೆ, ಲಹರಿಗಳನ್ನೆಲ್ಲಾ ಮರೆತು ಇಡೀ ಗುಂಪು ಒಂದೇ ಭಾವವನ್ನು ಧರಿಸುವಂತೆ ಪ್ರೇರೇಪಿಸುವ ಈ ಔಪಚಾರಿಕ ಸಂಗತಿಗಳು ನಿಜಕ್ಕೂ ನಮ್ಮನ್ನು ನಯವಂಚಕರನ್ನಾಗಿಸಿಬಿಡುತ್ತವೆ.

ಇಷ್ಟು ಪೀಠಿಕೆ ಹಾಕಿ ತಲೆ ಕೆಡಿಸಲು ಕಾರಣವಾದದ್ದು ಒಂದು ಸಣ್ಣ ವಿಡಿಯೋ ತುಣುಕು. ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರಾನ್ ಬ್ರೌನ್ ಎನ್ನುವವನ ಅಂತಿಮ ಸಂಸ್ಕಾರಕ್ಕೆ ಹೋಗುವಾಗ ತನ್ನ ಸಹಾಯಕನೊಂದಿಗೆ ಜೋಕನ್ನು ಮುರಿಯುತ್ತಾ ನಗುತ್ತಾ ಹೋಗುತ್ತಿರುತ್ತಾನೆ. ಯಾವಾಗ ಮಾಧ್ಯಮದ ವಿಡಿಯೋ ತನ್ನನ್ನು ಸೆರೆಹಿಡಿಯುತ್ತಿದೆ ಎಂಬುದನ್ನು ಅರಿಯುತ್ತಾನೋ ಆಗ ಕ್ಲಿಂಟನ್ ಗಂಭೀರ ವದನನಾಗಿಬಿಡುತ್ತಾನೆ. ಒಮ್ಮೆಗೇ ಜಗತ್ತಿನ ದುಃಖ ಆತನ ಮುಖದಲ್ಲಿ ಮಡುಗಟ್ಟಿಬಿಡುತ್ತದೆ. ಕ್ಷಣಾರ್ಧದಲ್ಲಿ ಕಣ್ಣೀರೂ ಚಿಮ್ಮಿಬಿಡುತ್ತದೆ. ಪಾಪ ಇದ್ಯಾವುದರ ಪರಿವೆ ಇಲ್ಲದ ಕ್ಲಿಂಟನ್‌ನ ಸಹಾಯಕ ಮುರಿದ ಜೋಕಿನ ಲಹರಿಯಲ್ಲೇ ನಗುತ್ತಾ ಬರುತ್ತಿರುತ್ತಾನೆ. ಒಮ್ಮೆ ಈ ವಿಡಿಯೋ ತುಣುಕು ನೋಡಿ, ನಿಮಗೂ ನಗು ಬರದಿದ್ದರೆ ಕೇಳಿ…

ವಾರದ ವಿವೇಕ 10

27 ಮೇ

…………………………………………………………

ಸಾಲ ಪಡೆಯಬೇಕಾದರೆ

ನಿರಾಶಾವಾದಿಯ ಬಳಿಯೇ ಪಡೆಯಿರಿ.

ಆತ ನೀವು ಹಣ ಹಿಂದಿರುಗಿಸಬಹುದು

ಎಂಬುದನ್ನು ಕನಸಿನಲ್ಲೂ ಆಶಿಸುವುದಿಲ್ಲ.

…………………………………………………………

ಚುನಾವಣಾ ಆಯೋಗ ಪ್ರಜಾತಂತ್ರ ವಿರೋಧಿ: ಸರ್ವ ಪಕ್ಷಗಳ ಒಕ್ಕೊರಲು

11 ಮೇ

( ನಗಾರಿ ಅನುಕಂಪ ಬ್ಯೂರೋ)

ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಚುನಾವಣೆಯನ್ನು ನಡೆಸಲು ಸರ್ವ ಸನ್ನದ್ಧರಾಗಿ ನಿಂತಿರುವ ಗೋಪಾಲಸ್ವಾಮಿಯವರ ನೇತೃತ್ವದ ಚುನಾವಣಾ ಆಯೋಗ ಪ್ರಜಾತಂತ್ರ ವಿರೋಧಿಯಾದದ್ದು ಎಂದು ಸರ್ವಪಕ್ಷಗಳ ನಾಯಕರು ಖಾಸಗಿ ವೇದಿಕೆಯಲ್ಲಿ ಊಳಿಡುತ್ತಿರುವುದು ವರದಿಯಾಗಿದೆ. ನಾಯಕರುಗಳ ಆಲಾಪವನ್ನು ಬೆಂಬಲಿಸಿರುವ ಕೆಲವು ಅನಧಿಕೃತ, ಕೆಲವು ಅಧಿಕೃತ ಬುದ್ಧಿಜೀವಿಗಳು ಮತ್ತು ಕೆಲವು ಸಾರ್ವತ್ರಿಕ ಲದ್ದಿ ಜೀವಿಗಳು ಸಹ ಚುನಾವಣಾ ಆಯೋಗ ಜನರ ವಿರೋಧಿ ಎಂದು ಬೊಬ್ಬಿರಿಯುತ್ತಿವೆ.

ಓದನ್ನು ಮುಂದುವರೆಸಿ

ಇದು ಕೇವಲ ಜಾಹೀರಾತು

11 ಮೇ

ಭಾರತೀಯ ಜತನ ಪಕ್ಷ

ನಿಮಗೆ ಮಳೆಗಾಲದಲ್ಲಿ ಮಳೆ ಬಂತೇ? ಇಲ್ಲ!
ಬೇಸಿಗೆಯಲ್ಲಿ ಅಕಾಲಿಕ ಮಳೆ ಬಂದು ತೊಂದರೆಯಾಯ್ತೇ? ಹೌದು!
ಇದಕ್ಕೆಲ್ಲಾ ಕಾರಣ ಅರವತ್ತು ವರ್ಷಗಳಿಂದ ನಿಮ್ಮನ್ನಾಳಿದ ಕಾಂಗ್ರೆಸ್…
ಇಷ್ಟು ವರ್ಷಗಳಿಂದ ಅವರು ನಿಮ್ಮನ್ನು ದೋಚಿದ್ದಾರೆ, ನಿಮ್ಮನ್ನು ಮೋಸ ಮಾಡಿದ್ದಾರೆ, ನಿಮ್ಮನ್ನು ಗೋಳು ಹೋಯ್ದುಕೊಂಡಿದ್ದಾರೆ, ನಿಮ್ಮ ನೆಮ್ಮದಿಯನ್ನು ಕಸಿದಿದ್ದಾರೆ…
ನಮಗೂ ಒಂದು ಅವಕಾಶ ಕೊಡಿ!

(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗವನ್ನು ಜೆಟ್ ಲೀ ಹಾಗೂ ಉಳಿದ ಭಾಗದ ಮೂರನೇ ಒಂದು ಭಾಗವನ್ನು ಚೆಡ್ಡಿ, ಕರೆಂಟು ಅಂದಾಜೆ, ಕುಮಾರಾನಂತರು ಕೊಟ್ಟಿದ್ದಾರೆ)

ಕೈ ಎಸ್ಸು

ನಿಮಗೆ ದಿನಾ ನಮ್ಮ ಮುಖಗಳನ್ನು ನೋಡಲು ಸಾಧ್ಯವಾಗುತ್ತದೆಯೇ? ಇಲ್ಲ. ನಾವು ನಿಮಗೆ ಸಿಕ್ಕುವುದಕ್ಕೆ ಸಾಧ್ಯವೇ ಆಗುವುದಿಲ್ಲ (ನಾವು ಯಾವಾಗಲೂ ದೆಹಲಿಯಲ್ಲಿರುತ್ತೇವಲ್ಲಾ?)
ಹೀಗಾಗಿ ನಾವು ನಿಮಗೆಲ್ಲಾ ಉಚಿತವಾಗಿ ಕಲರ್ ಟಿವಿ ಕೊಡ್ತೀವಿ. ಅದರಲ್ಲಿ ದಿನಾ ನಮ್ಮ ಬ್ಲಾಕ್ ಅಂಡ್ ವೈಟ್ ಮುಖವನ್ನು ನೋಡುತ್ತಾ ಕೂರಬಹುದು.
ನಿಮಗೆ ಅಕ್ಕಿ, ಕೊಡ್ತೇವೆ, ನೀವು ಸೋಮಾರಿ ಯುವಕರಾದರೆ ಸ್ಟೈಫಂಡ್ ಕೊಡ್ತೇವೆ….
ಏನೂ ಕೊಡಲಾಗದಿದ್ದರೂ ನಮ್ಮ ಚಿಹ್ನೆಯನ್ನೇ ಕೊಡುತ್ತೇವೆ… ಹೊಸಬರಿಗಿಂತ ಹಳೆಯರು ವಾಸಿ ಅಲ್ಲವೇ?

(ಈ ಜಾಹೀರಾತಿನ ಖರ್ಚು ಭಾಗ ಭಾಗವಾಗಿ ಹತ್ತೆಂಟು ಮಂದಿ ಭರಿಸಿದ್ದು, ಕುರ್ಚಿಯನ್ನು ಕಂಚಿಕೊಳ್ಳಲು ಸಮ್ಮಿಶ್ರ ಸಿ.ಎಂ ಪ್ರಹಸನ ನಡೆಯಬಹುದಾದ ಸಂಭವನೀಯತೆ ಇದೆ)

ತಂದೆ ಮಕ್ಕಳ ಪಕ್ಷ

ನಮ್ಮದು ಮಕ್ಕಳ ಪಕ್ಷ. ನೋಡಿ ನೀವು ಧೃತರಾಷ್ಟ್ರನ ಕಥೆಯನ್ನು ಓದಿಕೊಂಡು ಬಂದವರು. ನಮ್ಮ ಸುಯೋಧನನಂಥ ಮಗನನ್ನು ಬಿಟ್ಟು ರಾಜ್ಯ ನಡೆಸಲು ಸಾಧ್ಯವಾಗುತ್ತದಾ?
ಇಪ್ಪತ್ತು ತಿಂಗಳಲ್ಲಿ ನಾವು ಏನು ಅಂತ ತೋರಿಸಿದ್ವಿ. ಅದನ್ನೇ ಪೂರ್ತಿ ಸಿನೆಮಾ ಅಂದ್ಕೋಬೇಡಿ. ನೀವು ನಂಬಲಿಕ್ಕಾಗದ್ದನ್ನೆಲ್ಲಾ ಮಾಡಲು ನಮಗೆ ಸಾಧ್ಯವಿದೆ. ಒಂದು ಅವಕಾಶ ಕೊಟ್ಟು ನೋಡಿ…
ನಮ್ಮ ಪಕ್ಷದ ಚಿಹ್ನೆ ‘ಹೊರೆ ಹೊತ್ತ ಮಹಿಳೆ’ ಆದರ್ಶವನ್ನು ನಾವು ಜಾರಿಗೆ ತರುವೆವು….
(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗ ಕಸ್ತೂರಿಯಿಂದ ಹರಿದು ಬಂದಿದ್ದರೆ ಮತ್ತರ್ಧ ಅತ್ತ ರಾ..ಅಧಿಕರ ಅನಧಿಕೃತ ಅಕೌಂಟಿನಿಂದ ಬಂದಿದೆ)

ಕೆಂಪು ಪಕ್ಷ

ಕೋಮುವಾದಿ ಜಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕೆ ನಮ್ಮ ಹೋರಾಟ!
ಜಾತಿವಾದಿ ಜೆಡಿಸ್ಸುನ್ನು ಅಧಿಕಾರದಿಂದ ದೂರವಿಡಲು ನಮ್ಮ ಹೋರಾಟ!
ಇನ್ನು ನಾವು ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ನಾವು ಸರಕಾರ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಮಗೆ ಕಾಂ-ಗೆಸ್ಸಿನ ಆಸರೆ ಬೇಕು. ಅವರೊಂದಿಗೆ ಸೇರಿ ಸರಕಾರ ಮಾಡುತ್ತೇವೆ.
ಆಮೇಲೆ ಮತ್ತೆ ನಮ್ಮ ಹೋರಾಟ ಮುಂದುವರೆಸುತ್ತೇವೆ… ಬೆಲೆಯೇರಿಕೆ ವಿರುದ್ಧ, ಸರಕಾರದ ವಿರುದ್ಧ… ಹಾಗಂತ ಸರಕಾರ ಬೀಳಿಸುವ ಅಪಾಯ ಒಡ್ಡುವುದಿಲ್ಲ….

(ಜಾಹೀರಾತಿಗೆ ಹಣ ಹೊಂದಿಸುವುದಕ್ಕೆ ಕಾಡಿಗೆ ಹೋದವರು ಇನ್ನೂ ಹಿಂದಿರುಗಿಲ್ಲ)

(ಉಳಿದ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಜೇಬಲ್ಲಿ ಕಾಸಿಲ್ಲದೆ ಜಾಹೀರಾತು ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. -ನಗೆ ಸಾಮ್ರಾಟ್)

ಬ್ಲಾಗ್ ಬೀಟ್ 8

6 ಮೇ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಓದನ್ನು ಮುಂದುವರೆಸಿ

ನಗಾರಿ ರೆಕಮಂಡೆಶನ್ 7

6 ಮೇ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

ನಗೆ ಸಾಹಿತಿಗಳ ಹೆಸರಿನಲ್ಲಿ ‘ನಗದು’ ಮಾಡಿಕೊಳ್ಳುವ ‘ನಗಿಸುವ ಏಜೆಂಟ’ರುಗಳು ನಮ್ಮನ್ನು ತಮ್ಮ ರಿಪೀಟಾದ ಜೋಕುಗಳಿಂದ, ಹಳಸಿಹೋದ ಹಾಸ್ಯಪ್ರಸಂಗಗಳು, ಕದ್ದು ತಂದ, ಕೆರೆದು-ಹರಿದು ಹಿಂದಿ, ಇಂಗ್ಲೀಷು ಚಾನಲ್ಲುಗಳಿಂದ ಅಪಹರಿಸಿದ ಹಾಸ್ಯವನ್ನು ನಮ್ಮ ಮುಂದಿಟ್ಟು ಅಳುವಂತೆ ಮಾಡುವಲ್ಲಿ ಸಫಲರಾಗುತ್ತಿರುವಾಗ ಕೆಲವೇ ಕೆಲವರು ನಮ್ಮನ್ನು ನಗಿಸುವಲ್ಲಿ ಸಫಲರಾಗಿದ್ದಾರೆ. ಅಂಥವರಲ್ಲಿ ಪ್ರಮುಖರು ಪ್ರಾಣೇಶ್. ಪ್ರಾಣೇಶ್ ಬೀಚಿ.

ಓದನ್ನು ಮುಂದುವರೆಸಿ