Archive | ಸೆಪ್ಟೆಂಬರ್, 2009

ಕಳೆದು ಹೋಗಿದೆ ಹುಡುಕಿ ಕೊಡಿ…

30 ಸೆಪ್ಟೆಂ

(ನಗೆ ನಗಾರಿ ಕ್ರೀಡಾವಿನೋದ ಬ್ಯೂರೋ)

ಸಾವಿರಾರು ರುಪಾಯಿಗಳ ಔಷಧಿ, ಹಣ್ಣು ಹಂಪಲು ತಿಂದು ಅರಗಿಸಿಕೊಂಡರೂ ನಮ್ಮ ನಾಡಿನ ಮಕ್ಕಳು ಎರಡು ಕಾಲ ಮೇಲೆ ನಿಲ್ಲುವುದರೊಳಗೆ ಕಣ್ಮುಚ್ಚುತ್ತವೆ ಆದರೆ ‘ಕಳೆದು ಹೋಗಿದೆ ಹುಡುಕಿ ಕೊಡಿ’ ಎಂದು ಪೋಲಿಸ್ ಸ್ಟೇಷನ್ನಿನಲ್ಲಿ ದಾಖಲಾದ ಅರ್ಜಿಗಳು ಚಿರಂಜೀವಿಗಳು. ಬಹುಶಃ ಇಲ್ಲಿಯೂ ನಮ್ಮ ನಾಡಿನ ಜನತೆ ಸಾವಿರಾರು ರೂಗಳ ಔಷಧಿ ಶೈತ್ಯೋಪಚಾರದ ಖರ್ಚನ್ನು ಮಾಡಿದರೆ ಆ ಅರ್ಜಿಗಳ ಕೊಲೆಗೆ ನಮ್ಮ ಪೋಲೀಸರು ಸಂಚನ್ನು ರೂಪಿಸುವ ಮಟ್ಟಿಗೆ ಕಾರ್ಯ ಪ್ರವೃತ್ತರಾಗಬಹುದು. Dejected Dhoni T20

ಹುಡುಕುವುದರ ಕಷ್ಟ ಅದನ್ನು ಕಳೆದುಕೊಂಡವನಿಗಿಂತ ಚೆನ್ನಾಗಿ ಅದಾರು ಬಲ್ಲರು? ತಿಪ್ಪೆಯ ಒಂದೊಂದು ಕೊಳೆತ ಹಣ್ಣಿನ ಸಿಪ್ಪೆಯನ್ನು ಸರಿಸುತ್ತಲೂ ಕಳೆದು ಹೋದ ವಸ್ತುವನ್ನು ಕಲ್ಪಿಸಿಕೊಳ್ಳುತ್ತಾ ಪ್ರಯಾಸಪಡುವ ಆಸಾಮಿಯನ್ನು ನೀವು ನೋಡಿರುತ್ತೀರಿ. ಆತ ರಸ್ತೆಯಲ್ಲಿ, ಚರಂಡಿಯ ಬಳಿ, ಶಾಲೆಯ ಮೈದಾನದಲ್ಲಿ, ತಿಪ್ಪೆ ಗುಂಡಿಯ ಸನಿಹ, ತಾನು ನಿದ್ರೆಯಲ್ಲಿ  ಓಡಾಡಿರಬಹುದಾದ  ಜಾಗವನ್ನೂ ಸಹ ಬಿಡದೆ ಆತ ತಲಾಶಿಸುತ್ತಿರುವಾಗ ದಾರಿಹೋಕರು ಮಾಡುವುದೇನು? ಚಡ್ಡಿಯೋ, ಪ್ಯಾಂಟೋ ಯಾವುದೋ ಎರಡು ಜೇಬಿರುವ ತೊಡುಗೆಯಾದರೆ ಅವೆರಡೂ ಜೇಬಿನೊಳಕ್ಕೆ ಕೈಗಳನ್ನು ಇಳಿಯ ಬಿಟ್ಟು, “ಏನು?” ಅನ್ನುವಂತೆ ನೋಟದಲ್ಲೇ ಪ್ರಶ್ನೋತ್ತರ ಮಾಲಿಕೆ ಆರಂಭಿಸುತ್ತಾರೆ. ನೀವು ಕೈ ಬಾಯಿ, ಮುಖ ಯಾವುದಕ್ಕೂ ಬಿಡುವಿಲ್ಲದ ಹಾಗೆ ಹುಡುಕಾಟದಲ್ಲಿ ತೊಡಗಿರುವಾಗ ಆ ನಿಮ್ಮ ಹಿತಚಿಂತಕ ದಾರಿಹೋಕ ತನ್ನ ಅನುಭವ ಸಾರವನ್ನೆಲ್ಲ ಹೀರಿ ಸಲಹೆಗಳನ್ನು, “ಹುಶಾರಾಗಿ ಇಟ್ಟುಕೊಳ್ಳಬಾರದಾ…” ಎನ್ನುವಂತಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಬುದ್ಧಿಮಾತುಗಳನ್ನು ಅರ್ಪಿಸುತ್ತಾನೆ. ಭಕ್ತ ಕೊಟ್ಟಿದ್ದನ್ನೆಲ್ಲ ಸ್ವೀಕರಿಸುವ ತಿಮ್ಮಪ್ಪನ ಔದಾರ್ಯ ನಿಮ್ಮಲ್ಲಿದ್ದರೆ ಆ ದಾರಿಹೋಕನ ಬೆನ್ನು ನಿಮ್ಮ ಬೈಗುಳದ ಆಲಿಂಗನವಿಲ್ಲದೆ ಬ್ರಹ್ಮಚರ್ಯ ಪಾಲಿಸುತ್ತದೆ.

ಜನ ಏನೇನನ್ನೆಲ್ಲಾ ಕಳೆದುಕೊಳ್ಳುತ್ತಾರೆ? ಕಳೆದುಕೊಳ್ಳುವುದಕ್ಕೆ ಆ ವಸ್ತುವು ಮೊದಲು ತಮ್ಮ ಬಳಿ ಇರಬೇಕು ಎನ್ನುವ ಸಾಮಾನ್ಯ ತಿಳುವಳಿಕೆಯೂ ಅನೇಕರಿಗಿರುವುದಿಲ್ಲ. ಓಣಿಯ ಒಂದು ಮನೆಯಲ್ಲಿ ಒಂದು ಹಿತ್ತಾಳೆಯ ಚಂಬು ಕದ್ದ ಕಳ್ಳ ಸಿಕ್ಕಿ ಬಿದ್ದರೆ ಉಳಿದ ಮನೆಗಳಲ್ಲಿ ಎಂದೂ ಇದ್ದೇ ಇರದ ಚಿನ್ನದ ಆಭರಣಗಳು ಕಾಣೆಯಾಗಿರುತ್ತವೆ! ಮಾನ, ಮರ್ಯಾದೆ, ಬುದ್ಧಿವಂತಿಕೆ, ಸೌಂದರ್ಯ, ಶೀಲ, ವ್ಯಕ್ತಿತ್ವ, ಪ್ರಾಮಾಣಿಕತೆ, ಆದರ್ಶಗಳು ಕಳೆದು ಹೋದವು ಎಂದು ಯಾರಾದರೂ ಗೋಳಾಡಿದರೆ ಅವು ಮೊದಲು ಎದ್ದವೇ ಎನ್ನುವ ಸಂಶಯ ಸಹಜ.

ಕಳೆದು ಹೋದ ವಿಷಯಗಳ ಪ್ರಸ್ತಾಪವನ್ನು ಈಗ ಮಾಡುವುದಕ್ಕೆ ಉದ್ದೇಶವಿದೆ. ನಮ್ಮ ದೇಶದ ಕನಸುಗಳನ್ನು ನನಸಾಗಿಸಲು ಜನ್ಮವೆತ್ತಿ ಬಂದ, ತನ್ನ ಆಗಮನದಿಂದ ಬರಗೆಟ್ಟ ದೇಶಕ್ಕೆ ವಿಜಯಮಾಲೆಯನ್ನು ತೊಡಿಸಿ ಮೆರೆಸಿದ, ದೇಶಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತ, ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಎಂಬ ಯುವಕ ನಮ್ಮೀ ಕತೆಯ ದುರಂತ ನಾಯಕ. ಈತ ದೇಶದ ಹೆಸರನ್ನು ಬೆಳಗುವುದಕ್ಕಾಗಿ ದಿನದ ಪಂದ್ಯಗಳು, ದಿನ ರಾತ್ರಿಯ ಪಂದ್ಯಗಳನ್ನು ಆಡುತ್ತಾ, ಮೈದಾನದಲ್ಲಿ ಬೆವರು ಸುರಿಸುತ್ತಾ ತಂಡವನ್ನು ಮುನ್ನಡೆಸುತ್ತಾ ಕಷ್ಟ ಪಡುತ್ತಾನೆ. ಸಾಲದೆಂಬಂತೆ ಸಂಬಳವೆಂದು ಕ್ರಿಕೆಟ್ ಮಂಡಳಿಯಿಂದ ಕೈಯಲ್ಲಿ ಎಣಿಸಲಾಗದಷ್ಟು ಹಣ! ಇವೆಲ್ಲವನ್ನೂ ಬಹುಶಃ ಈತ ಹೇಗೋ ನಿಭಾಯಿಸುತ್ತಿದ್ದನೇನೋ, ಆದರೆ ಎದುರಾಳಿ ತಂಡದ ಬೌನ್ಸರ್‌ಗಳ ಜೊತೆಗೆ ಬಾಲಿವುಡ್ ಲಲನೆಯರ ‘ಅಂಡರ್ ಆರ್ಮ್’ ಡೆಲಿವರಿಗಳನ್ನು ಎದುರಿಸುವ ಕಷ್ಟ. ಇಷ್ಟು ಸಾಲದೆಂಬಂತೆ ಲೆಕ್ಕ ಹಾಕುವುದಕ್ಕೆ ತನ್ನ ಕಾಲೇಜು ವಿದ್ಯಾಭ್ಯಾಸವೇ ಸಾಲದಷ್ಟು ಮೊತ್ತದ ಜಾಹೀರಾತುಗಳ ಕಾಂಟ್ರ್ಯಾಕ್ಟು. ಇಷ್ಟೆಲ್ಲ ನರಕಯಾತನೆಯನ್ನು ಕೇವಲ ದೇಶದ ಮೇಲಿನ ಅಭಿಮಾನಕ್ಕಾಗಿ, ಕ್ರಿಕೆಟ್ ಮೇಲಿನ ಪ್ರೀತಿಗಾಗಿ, ಅಭಿಮಾನಿಗಳ ಮೇಲಿನ ಗೌರವಕ್ಕಾಗಿ ಪೂರ್ಣ ಮನಸ್ಸಿನಿಂದ ಒಪ್ಪಿ ಅನುಭವಿಸುತ್ತಿದ್ದ ಧೋನಿಯ ಸಹನೆಯ ಕಟ್ಟೆ ಒಡೆದಿದೆ. ಇಷ್ಟು ಕಾಲ ಆತನ ಬೆನ್ನುಲುಬಾಗಿದ್ದ ಶಕ್ತಿಯು ಕಳೆದುಹೋಗಿ ಆತ ಶಾಪಗ್ರಸ್ತ ಗಂಧರ್ವನಾಗಿದ್ದಾನೆ. ರಾಜಕುಮಾರಿಯ ಲಿಪ್‌ಸ್ಟಿಕ್ ಇಲ್ಲದ ತುಟಿಯ ಚುಂಬನಕ್ಕಾಗಿ ಕಾದು  ಕುಳಿತ ಕಪ್ಪೆಯಾಗಿದ್ದಾನೆ. ಆತನ ಅಪೂರ್ವ ಆಸ್ತಿಯಾಗಿದ್ದ ಅದು ಕಳೆದು ಹೋಗಿದೆ. ಹೌದು, ಧೋನಿಯ ಪ್ರಭಾವಳಿ ಕಳೆದು ಹೋಗಿದೆ!

ಆತ ನಿಜಕ್ಕೂ ಬುದ್ಧಿವಂತನಾಗಿದ್ದರೆ ತಾನು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎಂದು ತಿಳಿದಾಗ ಮಿದಾಸ ನೇರವಾಗಿ ತನ್ನ ಹೊಟ್ಟೆಯನ್ನು ಬಗೆದು ಜೀರ್ಣಾಂಗ ವ್ಯೂಹವನ್ನೇ ಮುಟ್ಟಿ ಬಿಡುತ್ತಿದ್ದ. ಹಸಿವೆಯೆಂಬ ರಕ್ಕಸನ ಬಂಗಾರದ ಪ್ರತಿಮೆಯನ್ನು ಮಾಡಿ ಶೋಕೇಸಿನಲ್ಲಿಟ್ಟು ಬಿಟ್ಟಿದ್ದರೆ ಅವನನ್ನು ಹಿಡಿಯುವವರು ಇದ್ದರೆ? ಯಾರಿಗೆ ಗೊತ್ತು, ಮುಟ್ಟಿದ್ದನ್ನು ಬಂಗಾರವಾಗಿಸುವ ಶಕ್ತಿ ಕೈಗಳಿಗೆ ಬಂದಾಗ, ತಲೆಯಲ್ಲಿ ಅದುವರೆಗೂ ಇದ್ದ ಮೆದುಳಿಗೇ ತುಕ್ಕು ಹಿಡಿಯಬಹುದು. ಈ ಕಾಲದ ಮಿದಾಸನ ಕತೆಯೇನು ಭಿನ್ನವಾಗಿಲ್ಲ. ಈತ ಕೆಮ್ಮಿದ ದಿಕ್ಕಿನಲ್ಲಿ ಗಾಳಿಯು ಹೆಚ್ಚಾಗಿ ಎದುರಾಳಿ ಆಟಗಾರ ಚಡಪಡಿಸಿ ಹೋಗುವ ಅದೃಷ್ಟ ಈತನದು. ತಾನೊಮ್ಮೆ ವಿಕೆಟುಗಳ ಹಿಂದಿನ ಜಾಗದಿಂದ ಕದಲಿ  ಬೌಲರ್‌ಗೆ ಸಣ್ಣ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಭಾಷಣ ಕೊಟ್ಟರೆ ಸಾಕು ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಒಪ್ಪಿಸಿ ನಡೆದು ಬಿಡುತ್ತಿದ್ದ. ತಾನು ಕಣ್ಣು ಮುಚ್ಚಿಕೊಂಡು ಎಡಗೈಯಲ್ಲಿ ತೋರಿದ ಆಟಗಾರ ತಂಡದಲ್ಲಿ ಬಂದೊಡನೆ ಅಜ್ಞಾತವಾಸ ಕಳಚಿ ಬಂದ ಅರ್ಜುನನಾಗುತ್ತಿದ್ದ. ಆಗೆಲ್ಲಾ ಧೋನಿಯೆಂಬ ರಾಂಚಿಯ ಹುಡುಗನ ಸುತ್ತಲಿದ್ದ ಪ್ರಭಾವಳಿಯನ್ನು ಕಂಡು ಜನತೆ ಉಘೇ ಉಘೇ ಅನ್ನತೊಡಗಿದರು.

ಈಗ ತಾವೇ ಆತನ ಸುತ್ತ ಕಂಡಿದ್ದ ಪ್ರಭಾವಳಿಯು ಕಾಣೆಯಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರ ಮಾತು ಕೇಳಿ ಆತನೂ ತಾನು ಕಂಡಿರದ ವಸ್ತುವನ್ನು ಹುಡುಕಲು ಹೊರಟಿದ್ದಾನೆ. ತನ್ನ ದೇಶದ ಅಭಿಮಾನಿಗಳಿಗೆ ಇಂದಿನ ಆಟದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನ ಗೆಲ್ಲುವಂತೆ ಬೇಡಿಕೊಳ್ಳಿ, ಪಾಕಿಸ್ತಾನವನ್ನೇ ಬೆಂಬಲಿಸಿ ಎಂದು ಬೇಡಿಕೊಂಡಿದ್ದಾನೆ.

ಈ ನಡುವೆ ಧೋನಿ ಕಳೆದುಕೊಂಡಿದ್ದಾನೆ ಎಂದು ಹೇಳಲಾದ ಪ್ರಭಾವಳಿಯನ್ನು ಹುಡುಕಿ ಪತ್ತೆ ಹಚ್ಚಿ ಹಿಂದಿರುಗಿಸುವುದಕ್ಕಾಗಿ ದೇಶದ ನಾನಾ ಭಾಗಗಳಿಂದ ಚಾಣಾಕ್ಷ ಪತ್ತೆದಾರರನ್ನು ದಕ್ಷಿಣ ಆಫ್ರಿಕಾಗೆ ಕರೆಸಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಕಾಣೆಯಾಗಿರುವ ಜನರ ಮಾನವೀಯತೆಯನ್ನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ನಮ್ಮ ಅತ್ಯಾಪ್ತ ಚೇಲ ಕುಚೇಲನಿಗೆ ಸಹ ಕರೆ ಬಂದಿದೆ. ಈತ ಹಿಂದಿನ ಕೇಸ್ ಒಂದರಲ್ಲಿ ತೋರಿದ್ದ ಅಪ್ರತಿಮ ಬುದ್ಧಿಮತ್ತೆಯನ್ನು ಪ್ರಶಂಸಿಸಿ ಈತನ ಸೇವೆಯನ್ನು  ಈ ಕೇಸಿನಲ್ಲಿ ಬಯಸಿದ್ದಾರೆ. ಈ ದಿನದ ಪಂದ್ಯದ ಪ್ರಾರಂಭದ ಒಳಗೆ ತನಿಖೆ ಪೂರ್ಣಗೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರೆ, ಗೆಲುವಿನ ಓಟದಲ್ಲಿರುವಾಗ ನಾನಾ ದೋಷ ಪರಿಹಾರಗಳನ್ನು ಮಾಡಿಸಲು ದೇಶದ ಉದ್ದಗಲಕ್ಕೂ ಅಂಡೆಲೆಸಿದ ಮಾಂತ್ರಿಕರು ತಮ್ಮ ಮೆದುಳನ್ನು ಹುಡುಕಲು ಅಂಜನ ಹಾಕುವಲ್ಲಿ ಮಗ್ನರಾಗಿದ್ದಾರೆಯೇ ಎಂದು ಸಾಮ್ರಾಟರು ಗೊಣಗುತ್ತಿದ್ದಾರೆ!

ಸೌಧ ದಿಗ್ಭಂದನದ ತಾಜಾ ವರದಿ!

28 ಸೆಪ್ಟೆಂ

(ನಗೆ ನಗಾರಿ ದಿಗ್ಭಂದನ ನಿಗ್ರಹ ಬ್ಯೂರೊ)

ಕರ್ನಾಟಕದ ಆಡಳಿತ ಶಕ್ತಿ ಕೇಂದ್ರವೆಂದು ವಿಧಾನ ಸೌಧವನ್ನು ಕರೆಯುವುದು ವಾಡಿಕೆ. ಸರಳ ಬಾಯಿಮಾತಿನಲ್ಲಿ ವಿಧಾನ ಸೌಧವು ‘ಶಕ್ತಿ ಕೇಂದ್ರ’. ದೇವಸ್ಥಾನಗಳು ಭಕ್ತಿ ಕೇಂದ್ರವಾದವು ಅಂದ ಮಾತ್ರಕ್ಕೆ ಅದರಲ್ಲಿರುವವರೆಲ್ಲರೂ ಭಕ್ತರೇ ಎನ್ನಲಾಗುತ್ತದೆಯೇ? ಬ್ಯಾಂಕನ್ನು ವಿತ್ತ ಕೇಂದ್ರ ಎಂದ ತಕ್ಷಣ ಬ್ಯಾಂಕಿಗರೆಲ್ಲ ಲಕ್ಷ್ಮಿಪತಿಗಳು ಎಂದು ಭಾವಿಸುವುದು ಸಾಧುವೇ? ಶಕ್ತಿ ಕೇಂದ್ರದಲ್ಲಿ ಇರುವವರು ಎಂದ ಮಾತ್ರಕ್ಕೆ ರಾಜಕಾರಣಿಗಳೆಲ್ಲರೂ ಶಕ್ತಿವಂತರಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ರಸ್ತೆಯ ಮೇಲೆ ಉರುಳಾಡುವ, ನಾಲ್ಕು ಮಂದಿ ಖಾಕಿಧಾರಿಗಳ ಕೈಲಿ ಎತ್ತಿಸಿಕೊಂಡು ಹೊರಕ್ಕೆ ಹಾಕಿಸಿಕೊಳ್ಳುವ, ಕ್ಯಾಮರಾದೆದುರು ರ್ಯಾಸ್ಕಲ್, ಲೋಫರ್ ಎಂದು ನಿಂದನೆಗಿಳಿಯುವ ನಾಯಕರನ್ನು ಕಂಡು ಚಿಕ್ಕ ಮಗುವೂ ನಿರ್ಧರಿಸಬಲ್ಲದು.

ಆಡಳಿತ ನಡೆಸುತ್ತಿರುವ ಸರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಸರಕಾರಿ ಯಂತ್ರವೇ ಸ್ಥಗಿತಗೊಂಡಿದೆ ಎಲ್ಲೂ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷ ವಿಧಾನ ಸೌಧಕ್ಕೇ ದಿಗ್ಭಂದನ ಹಾಕಿಬಿಟ್ಟರೆ ಕೆಲಸ ಚುರುಕುಗೊಳ್ಳಲು ಸಾಧ್ಯವೇ? ಕಾಲೇಜುಗಳಲ್ಲಿ ರಜೆಗಳನ್ನು ಕಡಿತುಗೊಳಿಸಿ ಹೆಚ್ಚು ಸಮಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ವಿನಿಯೋಗಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಎರಡೆರಡು ದಿನ ಮುಷ್ಕರ ಮಾಡಿ ತರಗತಿಗಳನ್ನು ಬಹಿಷ್ಕರಿಸುವಷ್ಟೇ ಬುದ್ಧಿವಂತಿಕೆಯ ಕೆಲಸವಿದು.

ವಿರೋಧ ಪಕ್ಷದ ನಾಯಕರು ವಿಧಾನ ಸೌಧಕ್ಕೆ ದಿಗ್ಭಂದನ ಹಾಕಿಬಿಟ್ಟರೆ ಸರಕಾರವೇ ಬಿದ್ದು ಹೋಗುತ್ತದೆ ಎಂದು ಬೆದರುವ ಆಡಳಿತ ಪಕ್ಷಕ್ಕೆ ತೊಡೆ ಒತ್ತಿ ಉಳಿತ ತಕ್ಷಣ ಹೂಸು ಅಡಗಿ ಹೋಗುತ್ತದೆ ಎನ್ನುವ ಭ್ರಮೆ! ವರ್ಷದ ಬಹುಪಾಲು ವಿಧಾನ ಸೌಧದ ನೆನಪೂ ಬಾರದ ಸಚಿವರ ಕೋಣೆಗೆ ಬೀಗ ಹಾಕಿದ ಮಾತ್ರಕ್ಕೆ ಅವರ ಕಾರ್ಯಕ್ಷಮತೆಗೆ ಚ್ಯುತಿಯಾದೀತೇ? ಸೊನ್ನೆಗೆ ಏನನ್ನಾದರೂ ಕಳೆದುಕೊಂಡೇನೆಂಬ ಭಯವೇ?

ಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಗಾಂಧಿ (ಸೋನಿಯಾ, ರಾಹುಲ್, ಪ್ರಿಯಾಂಕ ಎಂದು ಪ್ರತ್ಯೇಕವಾಗಿ ಹೇಳಬೇಕೆ?)ವಾದಿಗಳನ್ನು ಖಾಕಿ ಧರಿಸಿದ ಪೊಲೀಸರು ತಡೆಗಟ್ಟಿದ್ದು, ಹೋರಾಟಗಾರರು ಒಳಕ್ಕೆ ನುಗ್ಗದ ಹಾಗೆ ತಡೆಯೊಡ್ಡಿದ್ದು, ಬ್ಯಾರಿಕೇಡ್ ಹಾರಿದ ವೀರರಿಗೆ ಲಾಠಿ ಬಾಸುಂಡೆಯ ಸ್ವಯಂವರವನ್ನು ಆಯೋಜಿಸಿದ್ದು, ಖಾದಿ ಧಾರಿ ವಯೋವೃದ್ಧರನ್ನು ಮುದ್ದಾಂ ಎತ್ತಾಕಿಕೊಂಡು ಜೀಪುಗಳಲ್ಲಿ ತುಂಬಿಸಿದ್ದು ಎಲ್ಲವನ್ನು ಸುರಕ್ಷಿತ ಅಂತರದಲ್ಲಿ ನಿಂತು ಕೆಮರಾ ಕಣ್ಣುಗಳಲ್ಲಿ ಕಾಣುತ್ತಿದ್ದ ಯುವಕ ಯುವತಿಯರು ಸ್ವಂತ ಕಣ್ಣುಗಳಲ್ಲಿ ಕಣ್ಣೀರು ಸುರಿಸಿ, ತಾವು ಕಂಡಿರದ ಬ್ರಿಟೀಷರ ದೌರ್ಜನ್ಯವನ್ನು ನೆನೆದು, ಟಿವಿ ನೋಡುವ ಅಮಾಯಕ ವೀಕ್ಷಕರಿಗೆ ನೆನಪಿಸಿ ಟಿಶ್ಯೂ ಕಾಗದಗಳಲ್ಲಿ ಕಣ್ಣೀರು ಇಂಗಿಸುತ್ತಿರುವಾಗ ಗಾಂಧಿ ತಾತ ತುಟಿ ಕೊಂಕಿಸಿದ್ದು ಯಾರಿಗೂ ಕಾಣಲಿಲ್ಲ.

ತಮ್ಮನ್ನು ದಿಗ್ಭಂದನ ಹೋಮವನ್ನು ಹಾಳು ಮಾಡಿದ ರಕ್ಕಸರ ವಿರುದ್ಧ ಸರ್ಕಾರಿ ಊಟ ಬಿಟ್ಟು ಒಂದು ತಾಸು ಪ್ರತಿಭಟಿಸಿದ ಹುರಿಯಾಳುಗಳು ತಮ್ಮನ್ನು ಬಂಧಿಸಿಟ್ಟ ಸ್ಥಳ ನಾಯಿ ಶೆಡ್ಡೆಂದು ತಿಳಿದು ಉಗ್ರವಾಗಿ ಕ್ರುದ್ಧರಾಗಿ ಎರಡು ತಾಸು ಪ್ರತಿಭಟನೆ ನಡೆಸಿದರು. ಕುರಿ ದೊಡ್ಡಿ, ಕತ್ತೆ ದೊಡ್ಡಿಯಲ್ಲಿ ರಾಜಾರೋಷವಾಗಿ ಮೆರೆಯಬೇಕಾದ ತಮ್ಮನ್ನು ನಾಯಿ ಶೆಡ್ಡಿನಲ್ಲಿ ಕೂಡು ಹಾಕಿದ ಪೋಲಿಸರನ್ನು ಏಕಕಂಠದಲ್ಲಿ ನಿಂದಿಸಿದರು. ಪ್ರಾಮಾಣಿಕತೆಗೆ ಕುಖ್ಯಾತವಾದ ನಾಯಿಗಳ ಶೆಡ್ಡಿನಲ್ಲಿ ತಮ್ಮನ್ನು ಕೂಡಿಟ್ಟಿರುವುದು ಇಡೀ ಪ್ರಜಾಪ್ರಭುತ್ವಕ್ಕೇ ಅಪಮಾನ ಎಂದು ವಿರೋಧಪಕ್ಷದ ಮುಖಂಡ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಜಾಪ್ರಭುತ್ವದ ಕಾವಲು ನಾಯಿಗಳಾದ ವಿರೋಧ ಪಕ್ಷಗಳ ನಾಯಕರನ್ನು, ಬೊಗಳು ನಾಯಿಗಳಾದ ಮಾಧ್ಯದ ಹುರಿಯಾಳುಗಳನ್ನು ಕ್ಯಾಮರಾ ಯೋಧರನ್ನು ನಾಯಿ ಶೆಡ್ಡಿನಲ್ಲಿ ಹಾಕುವುದು ಅರ್ಥಪೂರ್ಣವಾದ ಕ್ರಿಯೆ ಎಂದು ಮೊಬೈಲಿನಲ್ಲಿ ಟ್ವೀಟ್ ಎಸೆದ ಯುವಕನು ಅಹಿಂಸಾವಾದಿಗಳ ಬಿಸಿಯುಸಿರಿನ ತಾಪಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂಳೆಗಳ ಎಣಿಕೆಯಲ್ಲಿ ತೊಡಗಿದ್ದಾನೆ.

ಈ ನಡುವೆ ತಮ್ಮ ಶೆಡ್ಡಿನಲ್ಲಿ ರಾಜಕಾರಣಿಗಳನ್ನು ಅಕ್ರಮವಾಗಿ ತುಂಬಿದ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಶ್ವಾನಸಭೆಯು, ಈ ಘಟನೆಯ ತರುವಾಯ ಇಡೀ ಶೆಡ್ಡನ್ನು ಶ್ವಾನ ಮೂತ್ರದಿಂದ ಸ್ವಚ್ಛಗೊಳಿಸುವ ಕಾರ್ಯಕ್ರಮ ನೆರವೇರಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ತಿಳಿಯಲು ತೆರಳಿದ್ದ ನಗೆ ನಗಾರಿಯ ಏಕಮೇವ ವರದಿಗಾರ ತೊಣಚಪ್ಪನವರು ಕಳಿಸಿದ ವರದಿ ಕಛೇರಿ ತಲುಪಿದೆ. ಕಛೇರಿಯ ಕಟ್ಟಡದ ಮೇಲ್ಛಾವಣಿಯಲ್ಲಿ ವರದಿಯುವ ಕಾಲು ಒದ್ದೆಯಾದ ಪ್ಯಾಂಟಿನ ರೂಪದಲ್ಲಿ ಹಾರಾಡುತ್ತಿದೆ!

ತುಟಿಯರಳಿಸುವ ಕೆಮರಾ

26 ಸೆಪ್ಟೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

ಈ ಸಂಚಿಕೆ ಸ್ಯಾಂಪಲ್:

b5

ದೇವರನ್ನು ಕಾಣುವ ಸುಲಭ ಉಪಾಯ!

ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

26 ಸೆಪ್ಟೆಂ

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ sataapakeeya ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ ಟೈಮ್ ಧರ್ಮ ಜಿಜ್ಞಾಸುಗಳು, ಫುಲ್ ಟೈಮ್ ಟಿವಿ ವಾಹಿನಿ ಜೋತಿಷಿಗಳು ತಮ್ಮ ಹೆಸರಿಲ್ಲದ ಶಾಂತಿ ಹೋಮಗಳಿಗೆ ಬ್ಲಾಗ್ ಲೋಕದ ಅತಿ ಕ್ಷುದ್ರ ಜೀವಿಯೇ ತಣ್ಣಗಾಗಿ ಹೋಯಿತು ಎಂದು ಬಯೋಡೇಟಾ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಕೊಚ್ಚೆಯಲ್ಲಿ ನೆತ್ತಿಯ ಮಟ್ಟಕ್ಕೆ ಮುಳುಗಿ ಅಲ್ಲಿದಂಲೇ ಕೆಸರೆರುಚುತ್ತಾ ಅವರಿವರ ಬಟ್ಟೆಯನ್ನು ಕೊಳೆಯಾಗಿಸಿ, ಮಡಿ ಕೆಡಿಸಿ ಮಡಿವಂತರು ಸ್ನಾನ ಗೃಹಕ್ಕೆ ಪದೇ ಪದೇ ತೆರಳುವಂತೆ ಮಾಡಿದ ಖುಶಿಯಲ್ಲಿ ಇನ್ನೆರಡು ಅಡಿ ಆಳಕ್ಕೆ ಕೊಚ್ಚೆಯಲ್ಲಿ ಮುಳುಗುತ್ತಿರುವ ಅನಾಮಿಕ ಬ್ಲಾಗಿಗರು ಹಾಗೂ ಬೇವಾರ್ಸಿ ಕಮೆಂಟುಗಳ ಸೃಷ್ಟಿಕರ್ತರು ತಮ್ಮ ೨೪/೭ ಕಠಿಣ ಶ್ರಮದಿಂದ ಸಾಮ್ರಾಟರು ಬ್ಲಾಗ್ ಮಂಡಲದಿಂದ ಓಡಿಹೋದರು ಎಂದು ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮನಸ್ಸಿನ ಮಂಡಿಗೆಯಲ್ಲಿ ಸಿಕ್ಕ ಒಂಟಿ ಹರಳಿನ ಹಾಗೆ ನಾವು ಮತ್ತೆ ಹಾಜರಾಗಿದ್ದೇವೆ.

ಪ್ರತಿ ಬಾರಿಯ ಹಾಗೆ ಇಷ್ಟು ದಿನಗಳ ನಮ್ಮ ಗೈರು ಹಾಜರಿಗೆ ಕಾರಣವನ್ನು ನಿವೇದಿಸಿಕೊಳ್ಳಲೇಬೇಕು. ಓದುಗ ಪ್ರಜೆಗಳಾದ ನೀವು ಎಂದಿಗಾದರೂ ನಮ್ಮನ್ನು ಕಾರಣ ಕೇಳಿದ್ದುಂಟೇ? ಆದರೂ ನಮ್ಮ ಪ್ರಜಾ ಸಮೂಹಕ್ಕೆ ಉತ್ತಮ ಉದಾಹರಣೆಯನ್ನು ಹಾಕಿಕೊಡುವ ಮಹೋದ್ದೇಶದಿಂದ ನಾವು ಈ ಅಭ್ಯಾಸವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇವೆ. ನಾವು ಗೈರು ಹಾಜರಾದ ದಿನಗಳಲ್ಲಿ ಎರಡು ಮುಕ್ಕಾಲು ದಿನಗಳನ್ನು ನಾವು ಗೈರು ಹಾಜರಿಯ ಕಾರಣವನ್ನು ಅನ್ವೇಷಿಸುವುದರಲ್ಲಿಯೇ ಕಳೆಯುತ್ತೇವೆ ಎಂದರೆ ನಮ್ಮ ಬದ್ಧತೆ ಎಷ್ಟು ಗಂಭೀರವಾದದ್ದು ಎಂಬುದರ ಕಲ್ಪನೆ ನಿಮಗಾದೀತು.

ಈ ಬಾರಿಯ ನಮ್ಮ ಗೈರು ಹಾಜರಿಗೆ ಗಟ್ಟಿಯಾದ ಕಾರಣವಿಲ್ಲದಿಲ್ಲ. ಹಿಂದಿನ ಸಂಚಿಕೆಯಲ್ಲಿ ನಾವು ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋವನ್ನು ಉಂಟು ಮಾಡಿದ, ಕಾಫಿ ಲೋಟದಲ್ಲಿ (ಕೆಲವರ ವ್ಹಿಸ್ಕಿ ಗಾಜಿನಲ್ಲಿ) ಬಿರುಗಾಳಿ ಎಬ್ಬಿಸಿದ ಬ್ಲಾಗ್ ಪ್ರಜೆಯ ವಿಶೇಷ ಸಂದರ್ಶನವನ್ನು ಪ್ರಕಟಿಸುವುದಾಗಿ ಘೋಷಿಸಿದ್ದೆವು. ಕೆಲಸ ಮುಗಿಯುವವರೆಗೆ ಅದನ್ನು ಯಾರ ಬಳಿಯೂ ಬಾಯಿ ಬಿಡಬೇಡ ಎಂಬ ಹಿರಿಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನೂ ನೀಡದ ನಾವು ಕೆಲಸವನ್ನು ಘೋಷಿಸಿದ ನಂತರವೇ ಅದನ್ನು ಮಾಡಲು ತೊಡಗುವುದು. ಈ ಬಾರಿ ನಾನು ಸೊನ್ನೆ ರನ್ನುಗಳಿಗೇ ಔಟಾಗುವುದು ಎಂದು ಘೋಷಿಸಿ ಮೈದಾನದಲ್ಲಿ ಆ ಘೋಷಣೆಯನ್ನು ಸಾಕಾರಗೊಳಿಸಿದ ನೆಪವನ್ನಿಟ್ಟುಕೊಂಡು ನಮ್ಮನ್ನು ಕಾಲೇಜು ಕ್ರಿಕೆಟ್ ಟೀಮಿನಿಂದ ಹೊರ ಹಾಕಿದ ಪ್ರಕರಣವನ್ನು ನಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆಯಲಿದ್ದೇವೆ.

ಬ್ಲಾಗ್ ಅಂಗಳದ ಆ ಸೆಲೆಬ್ರಿಟಿಯ ಸಂದರ್ಶನಕ್ಕಾಗಿ ನಮ್ಮ ಆಲ್ಟರ್ ಈಗೋವನ್ನು ಅಟ್ಟಿದ್ದೆವು. ಬ್ಲಾಗ್ಲೋಕ ವಿಖ್ಯಾತ ಬ್ಲಾಗಿನ ಅನಾಮಿಕ ಯಜಮಾನರನ್ನು ಹುಡುಕಿಕೊಂಡು ಹೊರಟ ನಮ್ಮ ಆಲ್ಟರ್ ಈಗೋ ಎಷ್ಟು ದಿನಗಳಾದರೂ ಹಿಂದಿರುಗಲಿಲ್ಲ. ಸರಿಯಾದ ವಿಳಾಸ, ಲ್ಯಾಂಡ್ ಮಾರ್ಕು, ಗುರುತಿನ ಚರ್ಯೆ, ಮೊಬೈಲ್ ನಂಬರು  ಇದ್ದರೇನೇ ಈ ನಗರಗಳಲ್ಲಿ ವ್ಯಕ್ತಿಯನ್ನು ಹುಡುಕುವುದು ಕಷ್ಟ ಹೀಗಿರುವಾಗ ಹೆಸರಿಲ್ಲದ ಬ್ಲಾಗ್ ವ್ಯಾಸನನ್ನು ಹುಡುಕಿ ಹೊರಟ ನಮ್ಮ ಆಲ್ಟರ್ ಈಗೋ ಅಂತರಜಾಲದ ಯಾವುದೋ ಎಳೆಯಲ್ಲಿ ಕಾಲು ಸಿಕ್ಕಿಸಿಕೊಂಡು ಖೈದಾಗಿ ಹೋಯಿತು. ಅದನ್ನು ಹುಡುಕಲೆಂದು ಕಳುಹಿಸಿದ ಲೋಕ ವಿಖ್ಯಾತ ಡಿಟೆಕ್ಟೀವ್ ಶೆರ್ಲಾಕ್ ಹೋಮ್ಸನ ಗುರು, ನಮ್ಮ ಅತ್ಯಾಪ್ತ ಚೇಲ ಕುಚೇಲ ಸಹ ಕಣ್ಮರೆಯಾಗಿ ಹೋದ. ಆ ಬ್ಲಾಗಿಗರ ಬಗ್ಗೆ ಈಗಾಗಲೇ ಬ್ಲಾಗ್ಲೋಕದಲ್ಲಿ ಅನೇಕ ವದಂತಿಗಳು, ನಿಗೂಢ ದಂತಕತೆಗಳು ಹರಡಿಕೊಂಡಿದ್ದರಿಂದ ಅಲ್ಲೆಲ್ಲಾದರೂ ಚಾಚಿಕೊಂಡಿರಬಹುದಾದ ಬರ್ಮುಡ ರೆಕ್ಟಾಂಗಲ್, ಸರ್ಕಲ್‌ಗಳ ರಹಸ್ಯ ಬೇಧಿಸಲು ಖುದ್ದಾಗಿ ನಾವೇ ತೆರಳಿದೆವು.

ಕಾಲನೇ ಕೈ ಹಿಡಿದನೆಂದರೆ ಆಗದ ಕೆಲಸ ಯಾವುದಾದರೂ ಉಂಟೇ? ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡಿದರೆಂದರೆ ಸಿಕ್ಕದ ನೌಕರಿ ಯಾವುದಾದರೂ ಉಂಟೆ? ನಾವು ಅನಾಮಿಕ ಬ್ಲಾಗಿಗರ ಬೆನ್ನಟಿ ಹೊರಟ ಕೆಲವೇ ದಿನಗಳಲ್ಲಿ ಆ ಬ್ಲಾಗಿಗರೇ ನಮ್ಮ ಕಾಲಿಗೆ ಕಚ್ಚಿಕೊಂಡರು. ಆದರೆ ಕಾಲಿಗೆ ತೊಡರಿಕೊಂಡ ಆ ವಸ್ತುವಿಗೆ ಮುಖವಾಗಲಿ, ಉಳಿದ ಅವಯವಗಳಾಗಲಿ ಇದ್ದಂತೆ ತೋರಲಿಲ್ಲ. ಉದ್ದನೆಯ ಕೂದಲಿದ್ದ ಮಾತ್ರಕ್ಕೆ ಹೆಣ್ಣೆಂದು ಗುರುತಿಸುವುದು, ಜೇಬಲ್ಲಿ ಪೆನ್ನು ಇಟ್ಟುಕೊಂಡ ಮಾತ್ರಕ್ಕೆ ವಿದ್ಯಾವಂತ ಎಂದು ಭಾವಿಸಿದಷ್ಟೇ ಪ್ರಮಾದಕಾರಿ ಎಂದು ಅನುಭವದಿಂದ ಕಂಡುಕೊಂಡಿದ್ದ ನಾವು ಇನ್ನಿತರ ದೇಹದ ಭಾಗಗಳಿಗಾಗಿ ಹುಡುಕಾಡಿದೆವು. ಗಂಡು, ಹೆಣ್ಣೆಂದು ಪ್ರತ್ಯೇಕಿಸುವುದಕ್ಕೆ ಆ ದೇವರು ಅದೆಷ್ಟು ಸ್ಪಷ್ಟವಾದ ಭಿನ್ನತೆಯನ್ನು ಕೊಟ್ಟಿದ್ದಾಗ್ಯೂ ನಮಗೆ ನಮ್ಮ ಕಾಲಿಗೆ ತೊಡರಿದ ವಸ್ತು ಯಾವ ಲಿಂಗದ್ದು ಎಂದು ನಿರ್ಧರಿಸಲಾಗಲಿಲ್ಲ. ಆದರೂ ಆ ವಸ್ತುವೇ ವಿಖ್ಯಾತ ಬ್ಲಾಗಿನ ವಾರಸುದಾರ ಎಂದು ನಾವು ನಮ್ಮ ಆರನೆಯ ಇಂದ್ರಿಯ ಹಾಗೂ ಏಳನೆಯ ಇಂದ್ರಿಯಗಳ ಸಹಯೋಗದಿಂದ ನಡೆಸಿದ ಕಾರ್ಯಾಚರಣೆಯಿಂದ ಕಂಡುಕೊಂಡೆವು.

ಸಂದರ್ಶನ ಶುರು ಮಾಡುವ ಮುನ್ನ, ಅತಿಥಿಯನ್ನು ಹೊಗಳಿ ಅಟ್ಟಕ್ಕೇರಿಸುವುದು ನಮ್ಮ ಎಂದಿನ ಪದ್ಧತಿ. ನಾವು ಈಗಾಗಲೇ ಅಟ್ಟದಲ್ಲಿ ಈಸಿ ಚೇರು ಹಾಕಿಕೊಂಡು ಕೂತಿರುತ್ತೇವಾದ್ದರಿಂದ ಅತಿಥಿಯನ್ನು ಅಲ್ಲಿಗೇ ಕರೆಸಿಕೊಳ್ಳುವುದು ನಮಗೆ ಅನುಕೂಲಕರವಾದ ಸಂಗತಿ. ಈ ವಸ್ತುವನ್ನು ಹೀಗೆ ಅಟ್ಟಕ್ಕೆ ಏರಿಸುವುದಕ್ಕೆ ನಮಗೆ ಬಹು ಪ್ರಯಾಸವಾಯಿತು. ಮುಖವೇ ಇಲ್ಲದ ವಸ್ತುವಿಗೆ ಮುಖ ಸ್ತುತಿ ಮಾಡುವುದಾದರೂ ಹೇಗೆ? ನಿಮ್ಮ ಕಣ್ಣುಗಳು ನೀಳವಾದ ಮೀನಿನ ಕಣ್ಣುಗಳ ಹಾಗಿವೆ, ಮೂಗಿ ಸಂಪಿಗೆಯ ಹಾಗಿದೆ, ಮೀಸೆ  ಬೋರ್ಡು ಒರೆಸುವ ಡಸ್ಟರ್ ಇದ್ದ ಹಾಗಿದೆ, ಮುಂಗುರುಳು ನಮ್ಮ ಕಾರಿನ ವೈಪರ್ ಇದ್ದ ಹಾಗಿದೆ ಎನ್ನಲಿಕ್ಕೆ ಆಯಾ ಅವಯವಗಳ ಜಾಗದಲ್ಲಿ ಏನಾದರೊಂದು ಇರಲೇ ಬೇಕಲ್ಲವೇ? ಮುಖವೇ ಇಲ್ಲದ ಈ ವಸ್ತುವನ್ನಿಟ್ಟುಕೊಂಡು ಅದೆಂತಹ ಕಲ್ಪನಾ ಶಕ್ತಿಯಿರುವ ಕವಿಯಾದರೂ ಒಂದೇ ಒಂದು ಸಾಲು ಬರೆಯಲಾರ!

ಹೇಗೋ ನಮ್ಮ ತಪಃಶಕ್ತಿಯನ್ನೆಲ್ಲ ಖರ್ಚು ಮಾಡಿ ಆ ವಸ್ತುವನ್ನು ಅಟ್ಟಕ್ಕೆ ಏರಿಸಿ ನಾವು ಸಂದರ್ಶವನ್ನು ನಡೆಸಿದೆವು. ಆ ಸಂದರ್ಶನದ ಕತೆಯೋ, ಅದು ಮತ್ತೊಂದು ಉದಯ ಟಿವಿ ಧಾರಾವಾಹಿಯ ಸರಕಾಗುವಷ್ಟಿದೆ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಹೇಳುವೆ. ಸರಿ ಸಂದರ್ಶನ ಮುಗಿಸಿಕೊಂಡು, ಬರ್ಮುಡ ಪೆಂಟಗನ್ನಿನಲ್ಲಿ ಲೀನವಾಗಿದ್ದ ನಮ್ಮ ಆಲ್ಟರ್ ಈಗೋ ಹಾಗೂ ಕುಚೇಲನನ್ನು ಪತ್ತೇ ಹಚ್ಚಿ ಎಳೆದುಕೊಂಡು ನಮ್ಮ ಕಛೇರಿಗೆ ಹಿಂದಿರುಗುವಷ್ಟರಲ್ಲಿ ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು.

ನಗೆ ಸಾಮ್ರಾಜ್ಯದ ಸಾಮ್ರಾಟರಾದ ನಮ್ಮನ್ನು ಇಷ್ಟು ಬೆವರಿಳಿಸುವಂತೆ ಮಾಡಿದ ಆ ಸಂದರ್ಶನವನ್ನು ಶೀಘ್ರದಲ್ಲಿಯೇ ನಗೆ ನಗಾರಿಯಲ್ಲಿ ಬೆಳಕು ಕಾಣಿಸುತ್ತೇವೆ. ಇನ್ನು ಮುಂದೆ ತಪ್ಪದೆ ನಗಾರಿಯ ಸದ್ದು ಎಂದಿನ ಕರ್ಕಶ ಶೃತಿಯಲ್ಲಿ ನಿಮ್ಮ ಕಿವಿಗಳನ್ನಪ್ಪಳಿಸಿ ಕಿವಿಯ ಮೇಣವನ್ನು ಕೆಡವಿ ಸ್ವಚ್ಛಗೊಳಿಸುವುದು ಎಂದು ಭರವಸೆ ಕೊಡುತ್ತೇವೆ.

 

ಇಂತಿ ನಿಮ್ಮ
ನಗೆ ಸಾಮ್ರಾಟ್

ವಾರದ ವಿವೇಕ 33

26 ಸೆಪ್ಟೆಂ

…………………………………….

ಮರಳಿ ಯತ್ನವ ಮಾಡು

ಎನ್ನುವುದು ನಿಮ್ಮ ಸಿದ್ಧಾಂತವಾಗಿದ್ದರೆ

ಸ್ಕೈ ಡೈವಿಂಗ್ ನಿಮಗೆ

ಹೇಳಿ ಮಾಡಿಸಿದ್ದಲ್ಲ!

…………………………………….

(ಇಂಥವೇ ಹಳೆಯವು)

ನಗಾರಿ ರೆಕಮಂಡೇಶನ್ 24

1 ಸೆಪ್ಟೆಂ

ಅಂತರ್ಜಾಲವೆಂಬ ಸಾಗರದಲ್ಲಿ ಈಜಿ ಅಪರೂಪದ ದ್ವೀಪಗಳನ್ನು ತಲುಪಿಕೊಳ್ಳುವುದು ಪ್ರಯಾಸದ ಕೆಲಸ. ಒಮ್ಮೆ ಹಾಗೆ ಕಂಡ ನಗೆ ದ್ವೀಪಗಳನ್ನು ಸಹಮನಸ್ಕರಿಗೆ ಪರಿಚಯಿಸುವ ಘನೋದ್ದೇಶದಿಂದ ಸಾಮ್ರಾಟರು ತೆರೆದಿರುವ ಅಂಕಣವಿದು.

ಐವತ್ಮೂರು ವರ್ಷದ ಅಮೇರಿಕಾದ ಕಮಿಡಿಯನ್ ಬಿಲ್ ಮಹರ್ ಒಳ್ಳೆಯ ರಾಜಕೀಯ ವಿಶ್ಲೇಷಕನೂ ಹೌದು. ಇತ್ತೀಚೆಗೆ ಎಚ್.ಬಿ.ಒ ಚಾನೆಲ್ಲಿಗಾಗಿ ರಿಯಲ್ ಟೈಮ್ ಎನ್ನುವ ಟಿವಿ ಕಾರ್ಯಕ್ರಮ ಮಾಡಿಕೊಡುತ್ತಿರುವ ಮಹರ್, ಅದರಲ್ಲಿ ಸಮಕಾಲೀನ ರಾಜಕೀಯ 180px-Maher1 ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ಹಾಗೂ ವಿಡಂಬನೆ ಮಾಡುತ್ತಾನೆ.

೧೯೫೬ರ ಜನವರಿ ಇಪ್ಪತ್ತರಂದು ಅಮೇರಿಕಾದಲ್ಲಿ ಜನಿಸಿದ ಈತ ಸ್ಟ್ಡ್ಯಾಂಡ್ ಅಪ್ ಕಾಮಿಡಿ ಮೂಲಕ ಗುರುತಿಸಿಕೊಂಡವನು. ಅನಂತರ ಅನೇಕ ಹಾಸ್ಯಪ್ರಧಾನವಾದ ಟಿವಿ ಟಾಕ್ ಶೋಗಳನ್ನು ನಡೆಸಿಕೊಟ್ಟ. ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ವಿಡಂಬನೆಯನ್ನು ಮಾಡುವ ‘ಪೊಲಿಟಿಕಲಿ ಇನ್ ಕರೆಕ್ಟ್’ ಎಂಬ ಟಾಕ್ ಶೋವನ್ನು ಮೊದಲಿಗೆ ಕಾಮಿಡಿ ಸೆಂಟ್ರಲ್ ವಾಹಿನಿಗಾಗಿ ಅನಂತರ ಎಬಿಸಿಗಾಗಿ ನಡೆಸಿಕೊಡುತ್ತಿದ್ದ.

ತನ್ನ ಹರಿತವಾದ ರಾಜಕೀಯ ವಿಡಂಬನೆಗಳಿಗೆ ಹೆಸರಾಗಿರುವ ಈತ ಸ್ಪಷ್ಟವಾದ ರಾಜಕೀಯ ನಿಲುವುಗಳನ್ನೂ ಹೊಂದಿದ್ದಾನೆ. ಅಮೇರಿಕಾದ ಎಡಪಂಥೀಯ ರಾಜಕೀಯ ಪಕ್ಷವನ್ನು ಈತ ಬೆಂಬಲಿಸುತ್ತಾನೆ. ಮರಿಜುವಾನವನ್ನು ಸಕ್ರಮಗೊಳಿಸುವುದರ ಪರವಾಗಿ ಈತ ಬೆಂಬಲ ನೀಡಿದ್ದಾನೆ. ಪ್ರಾಣಿಗಳ ಹಕ್ಕು ರಕ್ಷಣೆಗೆ ಒತ್ತಾಯಿಸುವ ಪೀಟಾ ಸಂಸ್ಥೆಗೆ ಬೆಂಬಲಿಸಿದ್ದಾನೆ. ಸಲಿಂಗಿಗಳ ಹಕ್ಕು ರಕ್ಷಣೆಯ ಹೋರಾಟಕ್ಕೆ ಈತನ ಬೆಂಬಲವಿದೆ.

೨೦೦೮ರಲ್ಲಿ ಸ್ಥಾಪಿತ ಧರ್ಮಗಳನ್ನು ಲೇವಡಿ ಮಾಡುವ, ಮೂಢ ನಂಬಿಕೆಗಳನ್ನು, ಧಾರ್ಮಿಕ ಶ್ರದ್ಧೆಗಳನ್ನು ವಿಡಂಬನೆಗೆ ಒಳಪಡಿಸುವ ಈತನ ಚಿತ್ರ ‘ರಿಲಿಜುಲಸ್’ ಬಿಡುಗಡೆಯಾಗಿತ್ತು. Religion ಹಾಗೂ ridiculous ಪದಗಳ ಸಂಯೋಗದಿಂದ ಹುಟ್ಟಿದ ಹೊಸ ಪದದವನ್ನು ಸಿನೆಮಾ ಹೆಸರಾಗಿ ಬಳಸಲಾಗಿದೆ. ಇದರಲ್ಲಿ ಮಹರ್ ಜಗತ್ತಿನ ಪ್ರಮುಖ ಧರ್ಮಗಳನ್ನು, ಅವರ ಧಾರ್ಮಿಕ ನಂಬಿಕೆಗಳನ್ನು ತೀಕ್ಷ್ಣವಾದ ಗೇಲಿಗೆ ಒಳಪಡಿಸಿದ್ದಾನೆ.

ಈತನ ಸ್ಡ್ಯಾಂಡ್ ಅಪ್ ಕಾಮಿಡಿಯ ತುಣುಕನ್ನು ಸಾಮ್ರಾಟರು ಈ ಸಂಚಿಕೆಯಲ್ಲಿ ರೆಕಮಂಡ್ ಮಾಡುತ್ತಿದ್ದಾರೆ.

ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್! ಹೇಗಿದೆ ಎಂದು ತಿಳಿಸುತ್ತೀರಲ್ಲ?