Archive | ನವೆಂಬರ್, 2008

ನಾನು ರಾಜಕೀಯ ಸೇರಬಹುದು: raw-ಹುಳ ಮಹಾಜನ್

22 ನವೆಂ

(ನಗೆ ನಗಾರಿ ರಾಜಕೀಯ ಬ್ಯೂರೋ)

Patriotism is the last refuge of a scoundral ಉದ್ಘರಿಸಿದ ಸ್ಯಾಮುಯಲ್ ಜಾನ್ಸನ್ನನ ಹೇಳಿಕೆಯನ್ನು ಸಾರ್ವತ್ರಿಕ ಗೊಳಿಸಿ Politics is the last refuge of a scoundral ಎಂಬುದಾಗಿ ತಿರುಚಿ ಅದನ್ನು ಸಾಬೀತು ಪಡಿಸಲು ಶ್ರೀಯುತ raw-ಹುಳ ಮಹಾಜನ್ ಕಂಕಣ ಬದ್ಧರಾಗಿದ್ದಾರೆ ಎಂದು ನಮ್ಮ ಮೂಲಗಳು ಅರಚಿಕೊಂಡಿವೆ.

ನಮ್ಮ ಭವ್ಯ ದೇಶದಲ್ಲಿ ತಂದೆಯಿಂದ ಮಗನಿಗೆ ಕೇವಲ ಅರ್ಧ ಪಾಲು ಕ್ರೋಮೋಜೋನುಗಳಷ್ಟೇ ಅಲ್ಲದೆ ಸಂಪೂರ್ಣ ಆಸ್ತಿ, ಭವಿಷ್ಯ, ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಬದುಕು ಬರುವುದು ಅಸಹಜವೇನಲ್ಲ. ತಂದೆ ಒಂದು ಜಾತಿಯವನಾದರೆ ಆತನ ಎಲ್ಲಾ ಮಕ್ಕಳೂ ಅದೇ ಜಾತಿಯವರಾಗುತ್ತಾರೆ ಎಂದು ಬಹು ಹಿಂದೆಯೇ ನಮ್ಮ ಸಮಾಜವನ್ನು ಕಟ್ಟಿದ ಮನು ಮಹಾನುಭಾವರು ಹೇಳಿದ್ದಾರೆ. ಆತನ ತತ್ವವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ನಮ್ಮ ನಾಡಿನ ಅತ್ಯಂತ ವಿಧೇಯರಾದ ಜನತೆ ನಿಜಕ್ಕೂ ಆತನ ಕೃಪೆಗೆ ಅರ್ಹರು. ನಮ್ಮ ದೇಶದಲ್ಲಿ ಅಪ್ಪ ಶ್ರೀಮಂತನಾದರೆ ಆತನ ಪ್ರತಿಯೊಬ್ಬ ಮಗನೂ ಶ್ರೀಮಂತನಾಗುತ್ತಾನೆ. ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುತ್ತಾನೆ. ಅಪ್ಪ ಸರಕಾರಿ ನೌಕರನಾದರೆ ಮಗನೂ ಸರಕಾರಕ್ಕೆ ಬಾದ್ಯಸ್ಥನಾಗುತ್ತಾನೆ. ಅಪ್ಪ ಮಠಾಧಿಪತಿಯಾದರೆ ಅನಧಿಕೃತ ಮಗ ಮಠದ ಅಧಿಪತಿಯಾಗದಿದ್ದರೂ ಆಡಳಿತವನ್ನು ಕೈಗೆತ್ತಿಕೊಳ್ಳುತ್ತಾನೆ. ಹೀಗಿರುವಾಗ raw-ಹುಳರು ರಾಜಕೀಯವನ್ನು ಪ್ರವೇಶಿಸುವ ಮನಸ್ಸು ಮಾಡಿರುವುದು ಭಾರತದ ಸನಾತನ ಪರಂಪರೆಯನ್ನು ಮುಂದುವರೆಸುವ ದಿಟ್ಟವಾದ ಹೆಜ್ಜೆ ಎಂದು ಚಿಂತಕರ ವಲಯದಲ್ಲಿ ಸದ್ದು ಹೊರಡುತ್ತಿದೆ.

2006060914720101

ನಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಗಳೂ ಬೇಕಿಲ್ಲ ಎಂದು ನಾಲಿಗೆಯಲ್ಲಿ ಎಲುಬಿಲ್ಲದ ಮಹಾನುಭಾವರು ಆಗಾಗ ಮೈಕುಗಳ ಮುಂದೆ ಅರಚುತ್ತಲೇ ಇರುತ್ತಾರೆ. ಇತರ ದೇಶಗಳಲ್ಲಿ ರಾಜಕಾರಣಿಯಾಗಬೇಕಾದವನು ಕನಿಷ್ಠ ಶಿಕ್ಷಣ ಅರ್ಹತೆ ಹೊಂದಿರಬೇಕು, ಆಡಳಿತದಲ್ಲಿ ಅನುಭವವನ್ನು ಸಂಪಾದಿಸಿರಬೇಕು ಎಂದೆಲ್ಲಾ ಜನರು ಬಯಸುತ್ತಾರೆ. ತಮ್ಮನ್ನು ಪ್ರತಿನಿಧಿಸುವ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಜನರು ಅನೇಕ ಅರ್ಹತೆಗಳ ಮಾನದಂಡವನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ. ಬೇರಾವ ಕೆಲಸಕ್ಕೂ ಸಲ್ಲದವ, ಬೇರಾವ ಮರ್ಯಾದಸ್ಥ ಉದ್ಯೋಗ ಮಾಡಲು ಬೇಕಾದ ಅರ್ಹತೆ ಇಲ್ಲದವ ಸಲೀಸಾಗಿ ಎರಡನೆಯ ಆಲೋಚನೆ ಇಲ್ಲದೆ ರಾಜಕಾರಣಕ್ಕೆ ಧುಮುಕಬಹುದು ಎಂದು ಲೇವಡಿ ಮಾಡುವವರು ಹಲವರಿದ್ದಾರೆ. ಅವರು ತಿಳಿಯಬೇಕಾದ ಸಂಗತಿಯೊಂದಿದೆ. ಜಗತ್ತಿನ ಬೇರಾವ ದೇಶಕ್ಕೆ ಹೋಲಿಸಿದರೂ ನಮ್ಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಬೇಕಾದ ಅರ್ಹತೆ ಅತ್ಯಂತ ಕಠಿಣವಾದದ್ದು ಹಾಗೂ ಅಸಾಧ್ಯ ಎಂಬುದಕ್ಕೆ ತೀರಾ ಸನಿಹವಾದದ್ದು ಎನ್ನುತ್ತಾರೆ ಸಮಾಜ ವಿಜ್ಞಾನಿ ನಗೆ ಸಾಮ್ರಾಟ್.

ರಾಜಕಾರಣಿಯಾಗುವ ಮಹಾತ್ವಾಕಾಂಕ್ಷೆಯಿದ್ದವರು ಹೇಗೆ ಮೊದಲು ತಾವು ಬೇರಾವ ಕೆಲಸಕ್ಕೂ ಬಾರದವರು ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ ಎಂಬುದನ್ನು ಹಿಂದಿನ ವರದಿಯೊಂದರಲ್ಲಿ ವಿವರವಾಗಿ ಬಿಚ್ಚಿಡಲಾಗಿದೆ. ಆ ಎಲ್ಲಾ ಅರ್ಹತೆಗಳನ್ನೂ ಶ್ರೀಯುತ raw-ಹುಳ ಮಹಾಜನ್‌ರು ಹೊಂದಿರುವುದು ಸಂತೋಷದ ಸಂಗತಿ. ತಂದೆ ಚಿಕ್ಕಪ್ಪನ ಗುಂಡಿಗೆ ಬಲಿಯಾಗಿ ಒಂಭತ್ತು ಹತ್ತು ದಿನ ಆಸ್ಪತ್ರೆಯಲ್ಲಿ ಹೋರಾಡಿ ಸತ್ತು ಇನ್ನೂ ಚಿತೆಯ ಭಸ್ಮ ಆರಿರದಿದ್ದಾಗಲೇ ಮನೆಯಲ್ಲಿ ಮಾದಕ ದ್ರವ್ಯ ತರಿಸಿಕೊಂಡು ತೆಲೆಗೆ ಮತ್ತು ಏರಿಸಿಕೊಂಡು ಒಬ್ಬನನ್ನು ಅದೇ ಮತ್ತು ಬಲಿ ತೆಗೆದುಕೊಂಡದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಸೇರಿಹೋಗಿದೆ. ಮುಂದೆ ಅನೇಕ ಸಮಾಜ ಕಲ್ಯಾಣ ಕೆಲಸಗಳನ್ನು ಮಾಡಿದ್ದರೂ ತಾವು ರಾಜಕೀಯಕ್ಕೆ ಬರುವುದಕ್ಕೆ ಸರ್ವ ರೀತಿಯಲ್ಲೂ ಅರ್ಹರು ಎಂಬುದನ್ನು ಜನತೆ ಎದುರು ತೋರ್ಪಡಿಸಲು ಬಿಗ್ ಬಾಸ್ ಎಂಬ ಕಾಲ್ಪನಿಕ ರಿಲಾಲಿಟಿ ಶೋನಲ್ಲಿ ಭಾಗವಹಿಸಿದರು. ಆ ಕಾರ್ಯಕ್ರಮದಲ್ಲಿ ಜನರು ಅವರ ಅಶಿಸ್ತು, ದುರ್ವರ್ತನೆಗಳನ್ನೆಲ್ಲಾ ಗಮನಿಸಿ ಈತನಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದರು. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದಂತೆ ಇವರು ಬಿಗ್ ಬಾಸ್‌ ಕಾರ್ಯಕ್ರಮದ ನಿಯಮಗಳನ್ನು ಮುರಿದು ಕಾಂಪೌಂಡ್ ಹಾರಲು ಹೋಗಿ ಸಿಕ್ಕು ಬಿದ್ದು ಬಿಗ್ ಬಾಸ್‌ನಿಂದ ಹೊರಗಟ್ಟಲ್ಪಟ್ಟಿದ್ದಾರೆ. ತಮ್ಮ ಅಶಿಸ್ತಿಗೆ ಮಾಧ್ಯಮದವರಿಂದ ಸನ್ಮಾನವನ್ನು ಪಡೆದಿದ್ದಾರೆ. ಹೀಗಾಗಿ ಅವರು ರಾಜಕಾರಣಿಯಾಗುವುದಕ್ಕೆ ಸರ್ವ ವಿಧದಲ್ಲೂ ಸೂಕ್ತರು ಎಂದು ಜನರು ತೀರ್ಮಾನ ಕೈಗೊಂಡಿದ್ದಾರೆ.

ಬಕ್ಕ ತಲೆಗೆ ಕೊನೆಗೂ ಸಿಕ್ಕಿದೆ ಮದ್ದು!

20 ನವೆಂ

(ನಗೆ ನಗಾರಿ ಜಾಹೀರಾತು ವಿಭಾಗ)

cover1

ಬಹು ದಿನಗಳಿಂದ ನಾಡಿನ ಹಾಸ್ಯಪ್ರಿಯರೆಲ್ಲರೂ ಎದುರುನೋಡುತ್ತಿದ್ದ ‘ವಾರೆ ಕೋರೆ’ ಎಂಬ ಹಾಸ್ಯ ಪತ್ರಿಕೆಯನ್ನು ಪ್ರಕಾಶ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಾಯೋಗಿಕ ಸಂಚಿಕೆಯ ಕೆಲವು ಸ್ಯಾಂಪಲ್ ಪುಟಗಳನ್ನು ತಮ್ಮ ಬ್ಲಾಗಿನಲ್ಲಿ ಹಾಕಿದ್ದಾರೆ.

‘ಬಕ್ಕ ತಲೆಗೆ ಬಕ್ರಿ ಮೂತ್ರ’ ಎಂಬುದು ಈ ಸಂಚಿಕೆ ಸ್ಪೆಷಲ್. ‘ವಾರೆ ಕೋರೆಯ’ವ ವಿಶೇಷ ವರದಿಗಾರ ಖಾಲಿ ತಲೆಮಾರ್, ಬಕ್ರೂರು ಎಂಬ ಗುಡ್ಡಕಾಡು ಪ್ರದೇಶಕ್ಕೆ ಸುಮಾರು ೪೦ ಕಿ.ಮೀ ದೂರ ನಡೆದಾಡಿ ಈ ವರದಿಯನ್ನು ಸಂಗ್ರಹಿಸಿದ್ದಾರೆ ಎನ್ನುತ್ತಾರೆ ಸಂಪಾದಕರು.

ಅಲ್ಲದೆ ಹಿಂದೆ ‘ಸುಧಾ’ದ ‘ವಾರೆನೋಟ’ ಅಂಕಣದಲ್ಲಿ ಬರುತ್ತಿದ್ದ ಆನಂದರನ್ನು ಬಹಳ ಕಷ್ಟದಲ್ಲಿ ಪತ್ತೆ ಹಚ್ಚಿ ಮತ್ತೆ ಬರೆಸಿದ್ದಾರೆ. ವ್ಯಂಗ್ಯಚಿತ್ರಕಾರರಿಗೆಲ್ಲ ಸ್ವಾಮಿ ಸ್ಥಾನದಲ್ಲಿರುವ ಕೆ.ಆರ್. ಸ್ವಾಮಿ ಅವರ ವ್ಯಂಗ್ಯಚಿತ್ರಗಳನ್ನು ಕಾಣದೆ ಕೆಲ ಕಾಲಗಳಾಗಿದ್ದವು. ‘ವಾಕೋ’ದಲ್ಲಿ ಸ್ವಾಮಿಯವರ ‘ಮಕ್ ಬ್ಯಾಕ್’ ಆಗಿದೆಯಂತೆ. ‘ತರಂಗ’ ಖ್ಯಾತಿಯ ಹರಿಣಿಯನ್ನು ಬ್ಲಾಗ್, ಸೈಟುಗಳಲ್ಲಿ ಮಾತ್ರ ಕಾಣುವಂತಾಗಿತ್ತು, ಅವರಿನ್ನು ಪ್ರತಿ ಸಂಚಿಕೆಯಲ್ಲೂ ವಿಜೃಂಭಿಸಲಿದ್ದಾರೆ. ‘ಲಂಕೇಶ್ ಪತ್ರಿಕೆ’ಯ ಗುಜ್ಜಾರ್‌ರವರ ವ್ಯಂಗ್ಯಚಿತ್ರಗಳು ಈ ಸಂಚಿಕೆಯ ತೂಕ ಹೆಚ್ಚಿಸಿವೆಯಂತೆ.  ಎಸ್.ಎಸ್. ಆನಂದ್, ಶ್ರೀಧರ್, ಪಾಂಡುರಂಗರಾವ್, ಸತೀಶ್ ಶೃಂಗೇರಿ, ನಾಗನಾಥ್, ವೆಂಕಟ್ ಭಟ್, ವಿ.ಗೋಪಾಲ್ ಮೊದಲಾದ ಘಟಾನುಘಟಿ ವ್ಯಂಗ್ಯಚಿತ್ರಕಾರರು ತಮ್ಮ ಕೈಚಳಕ ತೋರಿದ್ದಾರಂತೆ.

‘ಈ ಟಿವಿ’ಯ ಮಾಜಿ, ಜಿ,ಎನ್,ಮೋಹನ್ ‘ಕೋಡಂಗಿಗೆ ಕೆಲಸವಿಲ್ಲ’ ಎಂಬ ಕವನದೊಂದಿಗೆ ನಗಿಸುತ್ತಾರಂತೆ. ಹಾಸ್ಯಕ್ಕೆ ಸಂಬಂಧಿಸಿದ ಎಲ್ಲರೂ ನಮಗೆ ಬೇಕು ಎನ್ನುವ ಸಂಪಾದಕರು ಮಾತನಾಡುವ ಗೊಂಬೆಯ ಖ್ಯಾತಿಯ ಶ್ರೀಕಾಂತರ ಸಂದರ್ಶನ ಮಾಡಿಸಿದ್ದಾರೆ. ಆದರೆ ಸಂದರ್ಶನ ಮಾಡಿದವರು ಯಾರು ಎಂಬುದು ಸಸ್ಪೆನ್ಸ್ ಅಂತೆ. ತುಳು ನಾಡಿನ ಸೂಪರ್ ಬಂಪರ್ ನಾಟಕಕಾರ ದೇವದಾಸ್ ಕಾಪಿಕಾಡ್‌ರನ್ನು ಪರಿಚಿಯಿಸಿದ್ದಾರೆ.

ಇನ್ನು ಡೊಂಕು ಅಂಕಣಗಳು ‘ವಾಕೋ’ದ ಘಮ ಘಮ ಖಾದ್ಯಗಳು. ಡುಂಡಿರಾಜರ ‘ಮಿನಿಗವನಗಳು’, ನರೇಂದ್ರ ರೈ ಅವರ ‘ಮಣ್ಣು ಮಸಿ’, ‘ತಿಂಗಳ ಆಸಾಮಿ’, ‘ಅಂತೆಕಂತೆಗಳ ಸಂತೆ’… ಹೀಗೆ ವಿಚಿತ್ರ ಭೋಜನಗಳಿಂದ ಸಮೃದ್ಧವಾಗಿದೆ ‘ವಾರೆ ಕೋರೆಯ’ ಪ್ರಾಯೋಗಿಕ ಸಂಚಿಕೆ.

ಕನ್ನಡದಲ್ಲಿನ ಒಂದು ಅದ್ಭುತ ಸಾಹಸವನ್ನ್ ಉಳಿಸುವುದಕ್ಕೆ, ಬೆಳೆಸುವುದಕ್ಕೆ ಕನ್ನಡಿಗರಿಗೆ ವಿಶಾಲ ಹೃದಯವಿದೆ, ಕನ್ನಡಿಗರಲ್ಲಿ ಅದಕ್ಕೆ ಬೇಕಾದ ಸಂಪತ್ತು ಇದೆ ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂಬುದು ನಗೆ ಸಾಮ್ರಾಟರ ವೀರಾವೇಷದ ಭಾಷಣದ ಸಾರ. ಕೂಡಲೇ ವಾರೆಕೋರೆಗೆ ಚಂದಾದಾರರಾಗಲು ಈ ಪುಟವನ್ನು ನೋಡಿ…

ನಗಾರಿ ರೆಕಮಂಡೆಶನ್ 14

19 ನವೆಂ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

…………………………………….

ನಮ್ಮ ದೇಶದ ಪ್ರಧಾನಿಯವರ ಬ್ಲಾಗಿದು. ಹ್ಹ! ಆಶ್ಚರ್ಯ ಚಕಿತರಾಗಿ ಉಸಿರು ಗಂಟಲಲ್ಲಿ ಸಿಕ್ಕಿಸಿಕೊಂಡು ಒದ್ದಾಡುವ ಮುನ್ನ ಸ್ವಲ್ಪ ಗಮನಿಸಿ. ಇದು ನಮ್ಮ ದೇಶದ ಪ್ರಧಾನಿಯವರ ಶೇ ನೂರರಷ್ಟು ಅನಧಿಕೃತವಾದ ಬ್ಲಾಗು.

blog

ಬ್ಲಾಗಿನ ಬಗ್ಗೆ ಪರಿಚಯ ನೀಡುತ್ತಾ ಪ್ರಧಾನಿಯವರು ಹೀಗೆ ಬರೆಯುತ್ತಾರೆ: “ನಾನು ಕೆಲ ಸಮಯದ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಆಗಿದ್ದೆ. ಈಗ ಮನಮೋಹನನಾಗಿರುವೆ. ಪ್ರಸ್ತುತ ಮನಮೋಹನನಾಗಿರುವೆನಾದರೂ ಆಗಾಗ ಸೋನಿಯಾ ಆಗುತ್ತಿರುತ್ತೇನೆ. ಈ ದೇಶದ ರಾಜಕೀಯದಲ್ಲಿ ಸದಾ ಬದಲಾಗುವ ಶಾಶ್ವತ ಸ್ಥಾನ ನನ್ನದು. ಶೀಘ್ರದಲ್ಲಿ ನಾನು ರಾಹುಲನಾಗಬಹುದು, ಅಡ್ವಾಣಿಯಾಗಬಹುದು ಇಲ್ಲವೇ ಮೋದಿ. ಇಲ್ಲವಾದರೆ ನಾನು ಲಾಲೂ ಆಗಬಹುದು. ಆ ದಿನ ದೇವರೇ ಭಾರತವನ್ನು ಕಾಪಾಡಬೇಕು. ಒಂದು ವೇಳೆ ನಾನು ಮಾಯಾವತಿಯಾದರೆ ನನಗೆ ಸರ್ಜರಿ ಆವಶ್ಯಕವಾಗಿ ಬೇಕು…’’

ಕನ್ನಡದಲ್ಲಿರುವ ಹಲವು ಬೊಗಳೆ ಬ್ಲಾಗುಗಳ ಹಾಗೆಯೇ ಇದು ಏಕ ಸದಸ್ಯರ ಗುಂಪು ನಡೆಸುತ್ತಿರುವ ಬೊಗಳೆ ಬ್ಲಾಗು. ಬೊಗಳೆ ಇಂಗ್ಲೀಷಿನದಾದ ತಕ್ಷಣ ಅದಕ್ಕೆ ಇಡೀ ದೇಶದ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ ಎಂಬುದು ಅಪ್ಪಟ ಮಿಥ್ ಎಂದು ಸಾಮ್ರಾಟರು ಹೇಳುತ್ತಿದ್ದಾರಾದರೂ ಈ ಬಾರಿ ರೆಕಮಂಡ್ ಮಾಡಲು ಇದಕ್ಕಿಂತ ಉತ್ತಮ ಆಯ್ಕೆ ಇರದುದರಿಂದ ಈ ಬ್ಲಾಗನ್ನು ರೆಕಮಂಡ್ ಮಾಡಲು ಸೂಚಿಸಿದ್ದಾರೆ!

ಬ್ಲಾಗ್ ಬೀಟ್ 17

18 ನವೆಂ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಬೊಗಳೆ ರಗಳೆ

ಕೈ ಪಕ್ಷದಲ್ಲಿ ಟಿಕೇಟುಗಳು ಬಿಕರಿಯಾಗುತ್ತಿವೆ ಎಂಬ ಸತ್ಯವನ್ನು ಜಗಜ್ಜಾಹೀರು ಮಾಡಿ ಪಕ್ಷದಿಂದ ಗೇಟ್ ಪಾಸ್ ಪಡೆದರು ಮಾರ್ಗರೇಟ್ ಆಳ್ವಾ. ಟಿಕೆಟುಗಳು ಎಲ್ಲೆಲ್ಲಿ ಯಾವ ಬೆಲೆಗೆ ಮಾರಾಟವಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಕಾಂಗೈ ಪಾರ್ಟಿಯವರು ಬೊಗಳೆ ರಗಳೆಯ ಅಸತ್ಯ ಅನ್ವೇಷಿಯವರನ್ನು ತನಿಖೆ ಮಾಡಲು ಕೋರಿಕೊಂಡರಂತೆ. ಅವರ ವರದಿ ಇಲ್ಲಿದೆ. ನಮ್ಮ ಜಗದ್ವಿಖ್ಯಾತ ಡಿಟೆಕ್ಟಿವ್ ಕುಚೇಲನ ಕಣ್ತಪ್ಪಿಸಿ ಈ ಕೇಸು ಅಸತ್ಯ ಅನ್ವೇಷಿಯವರ ಪಾಲಾದದ್ದು ಹೇಗೆ ಎನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಸಾಮ್ರಾಟರು ಒಂದು ತನಿಖಾ ಮಂಡಳಿ ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಪಂಚ್ ಲೈನ್

ಚಿತ್ರ ವಿಚಿತ್ರ ಪಂಚುಗಳನ್ನು ಓದುಗರೆಡೆಗೆ ರವಾನಿಸುವಲ್ಲಿ ಜಗತ್ವಿಖ್ಯಾತರಾಗಿರುವ ಗಣೇಶರು ಇತ್ತೀಚೆಗೆ ಹುಡುಗ ಹುಡುಗಿಯರ ನಡುವಿನ ಕೆಮಿಸ್ಟ್ರಿ, ಬಯಲಾಜಿ, ಫಿಸಿಕ್ಸು, ಲಾಜಿಕ್ಕು, ಮ್ಯಾಥಮ್ಯಾಟಿಕ್ಸುಗಳಲ್ಲಿ ಆಸಕ್ತಿ ತಳೆದಿರುವಂತಿದೆ.
ಇತ್ತೀಚಿನ ಅವರ ಪಂಚುಗಳೇ ಅದಕ್ಕೆ ಸಾಕ್ಷಿ:
ಹುಡುಗಿಯರೆಂದರೆ ಯಾರು?
ಗೊತ್ತಾಗದ ಪ್ರಶ್ನೆ… ಹುಡುಗರು ಹುಡುಗೀರು ಏನು ಮಾಡ್ತಾರೆ?

ಪ್ರಕಾಶ್ ಶೆಟ್ಟಿ ಪಂಚ್

ಪ್ರಕಾಶ್ ಶೆಟ್ಟಿಯವರು ಓರೆ ಕೋರೆಯ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿರುವಂತಿದೆ. ಅವರ ಬ್ಲಾಗು ಅವರ ಗೆರೆಗಳ ಪಂಚಿಲ್ಲದೆ ಪೇಲವವಾಗಿದೆ.
ಶೀಘ್ರದಲ್ಲಿಯೇ ತಮ್ಮ ಬ್ಲಾಗಿನಲ್ಲಿ ತಮ್ಮ ಪತ್ರಿಕೆಯ ಪ್ರಾಯೋಗಿಕ ಪ್ರತಿಯನ್ನು ಪ್ರಕಟಿಸುತ್ತೇವೆ ಎಂದು ಪ್ರಾಮಿಸ್ ಮಾಡಿರುವ ಶೆಟ್ಟಿಯವರು ನಗೆ ಸಾಮ್ರಾಟರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅಲ್ಲದೆ ಪ್ರಕಾಶ್ ಶೆಟ್ಟಿಯವರು ಗೌಡರನ್ನು ನಗಿಸುವ ಶಪತ ಕೈಗೊಂಡಿರುವುದರಿಂದ ಸಾಮ್ರಾಟರ ಚೇಲ ಕುಚೇಲ ಗೌಡರು ನಗುತ್ತಾರೋ ಇಲ್ಲವೇ ಕಂಪ್ಯೂಟರಿನಲ್ಲಿ ನಗುವಂತೆ ಗ್ರಾಫಿಕ್ಸ್ ಮಾಡಲಾಗುತ್ತದೆಯೋ ಎಂದು ಪತ್ತೇ ಹಚ್ಚಲು ತಯಾರಾಗಿ ನಿಂತಿದ್ದಾನೆ.

ಕೆಂಡಸಂಪಿಗೆಯ ಸುದ್ದಿ ಕ್ಯಾತ

ಸತ್ತ ನಂತರ ನಿಮ್ಮ ಚಿತಾ ಭಸ್ಮವನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕಂಪೆನಿಯೊಂದು ಹಾಕಿಕೊಂಡಿದ್ದು ಸುದ್ದಿ ಕ್ಯಾತರು ಕರ್ನಾಟಕದಲ್ಲಿನ ಕಾಂಟ್ರ್ಯಾಕ್ಟನ್ನು ಗಿಟ್ಟಿಸಿಕೊಂಡಿದ್ದಾರೆ.
ಮುಂದಿನದನ್ನು ಅವರ ಮಾತಲ್ಲೇ ಕೇಳಿ:  “
ಸಾಯುವ ಮೊದಲು ಬುಕ್ಕಿಂಗ್ ಮಾಡಿಸಿದರೆ ರಿಯಾಯತಿ ಕೂಡ ಲಭ್ಯವಿದೆ. ಸತ್ತ ನಂತರ ಅಡ್ರೆಸ್ ಇಲ್ಲದ ಆತ್ಮಗಳಾಗಿ ಈ ಭೂಮಿಯಲ್ಲಿ ಅಲೆಯುವ ಬದಲು ನೇರವಾಗಿ ಸ್ವರ್ಗವನ್ನು ಸೇರಿಸಿಕೊಳ್ಳಲು ಈ ಯೋಜನೆಯ ಸದುಪಯೋಗ ಯಾಕೆ ಪಡೆದುಕೊಳ್ಳಬಾರದು. ಆಸಕ್ತರು ಮೇಲ್ಕಾಣಿಸಿದ ವಿವರಗಳೊಂದಿಗೆ ಮುಂಗಡ ಬುಕ್ಕಿಂಗ್ ಗಾಗಿ ಸುದ್ದಿಕ್ಯಾತರನ್ನು ಸಂಪರ್ಕಿಸಬಹುದು.”
ಸಾಮ್ರಾಟರು ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿಸಿಯಾಗಿದೆ, ಎಷ್ಟಾದರೂ ಒಮ್ಮೆ ಆತ್ಮಹತ್ಯೆ ಮಾಡಿಕೊಂಡು ಪುನರ್ಜನ್ಮ ಪಡೆದು ಬಂದವರಲ್ಲವೇ? ಅನುಭವ ಹೆಚ್ಚು!

ಚಿತ್ರದ ಚೌಕಟ್ಟು ದಾಟುವ ನಗೆ

17 ನವೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

t4

ನಂಗೊಂದು ಗಂಡು ನೋಡ್ತೀರಾ

ವಾರದ ವಿವೇಕ 19

17 ನವೆಂ

……………………………………………………..

ಪ್ರತಿ ಪ್ರತಿಭಾಶಾಲಿಗೂ ಒಂದು ರೀತಿಯ ಮನೋವೈಕಲ್ಯವಿರುತ್ತದೆ.
ಆತನ ಕೃತಿಗಳು ಅದೇ ರೀತಿಯ ವೈಫಲ್ಯವಿರುವವರಿಗೆ ಮೆಚ್ಚಿಗೆ ಆಗುತ್ತದಂತೆ.
ಆ ಪ್ರತಿಭಾಶಾಲಿ ಅದೃಷ್ಟವಂತನಾಗಿದ್ದರೆ ಅದೇ ರೀತಿಯ ವೈಕಲ್ಯದಿಂದ ನರಳುವವರ ಸಂಖ್ಯೆ ಲಕ್ಷಾಂತರ.
– ಮ್ಯಾಕ್ಸ್ ನಾರ್ಡೋ

……………………………………………………..

(ಕಳೆದ ವಾರದ ವಿವೇಕ)

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

15 ನವೆಂ

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ ಪಡಬೇಕಿಲ್ಲ. ಉದಾಹರಣೆಗೆ ಎಸ್.ಎಸ್.ಎಸ್.ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತದೆ ಎಂದುಕೊಳ್ಳಿ. ನೀವು ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದರೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿಕೊಂಡು ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಬಹುದು. ನಿಮ್ಮನ್ನು ವೈಯಕ್ತಿಕವಾಗಿ ಬಲ್ಲವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ಅದನ್ನು ಅಲ್ಲಗಳೆಯುವುದಿಲ್ಲ. ಒಂದು ವೇಳೆ ನೀವು ಪತ್ರಿಕೆಯನ್ನು ಹಿಡಿದು ನಿಮ್ಮ ಗುರುತಿರದ ಬೀದಿಯಲ್ಲಿ ನಾಲ್ಕು ಬಾರಿ ತಿರುಗಿದರೆ ಸಾಕು ಹಲವರು ಹಿಂತಿರುಗಿ ನಿಮ್ಮ ಮುಖವನ್ನು ಪರೀಕ್ಷಿಸಿ ಮನೆಗೆ ಹೋಗಿ ಪೇಪರ್ ತಿರುವಿ ಹಾಕುತ್ತಾರೆ. ಶಂಖದಿಂದ ಬಂದದ್ದೆಲ್ಲವೂ ತೀರ್ಥದ ಮಹಿಮೆಯನ್ನು ಪಡೆದುಕೊಳ್ಳುವಂತೆ ಪತ್ರಿಕೆಗಳಲ್ಲಿ ಬಂದದ್ದೆಲ್ಲವೂ ಸತ್ಯದ ಮಹಿಮೆಯನ್ನು ಪಡೆಯುತ್ತಿರುವುದು ಇಪ್ಪತೊಂದನೆತ ಶತಮಾನದ ಸೋಜಿಗ.

ಅಮೇರಿಕಾದಲ್ಲಿ ಬೈಬಲ್ಲಿಗೆ ಅದೆಷ್ಟು ಜನರು ಬೆಲೆ ಕೊಡುತ್ತಾರೋ ಇಲ್ಲವೋ, ಅಲ್ಲಿನ ಪತ್ರಿಕೆಗಳಿಗೆ ಖಂಡಿತಾ ಬೆಲೆ ಕೊಡುತ್ತಾರೆ. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ಎಂದರೆ ಕೇಳಬೇಕಿಲ್ಲ. ಅದರ ಘೋಷವಾಕ್ಯ ಹೀಗಿದೆ: All the news that’s fit to print ಎಂದ ಮೇಲೆ ಕೇಳಬೇಕೆ? ಆ ಪತಿಕೆಯಲ್ಲಿ ಪ್ರಕಟವಾಗಿರುವುದೆಲ್ಲಾ ನ್ಯೂಸೇ. ಇಂಥ ಪತ್ರಿಕೆಯು ಗಳಿಸಿಕೊಂದಿರುವ ವಿಶ್ವಾಸಾರ್ಹತೆಯಿಂದ ಒಂದು ವೇಳೆ ದೇವರೂ ಸಹ ಅಸೂಯೆ ಪಟ್ಟಾನು. ತನ್ನ ಹಳೆಯ ಧಾರ್ಮಿಕ ಗ್ರಂಥಗಳ ಹೊಸ ಆವೃತ್ತಿಯ ಪ್ರಕಟಣೆಗಾಗಿ ಈ ಪತ್ರಿಕೆಗಳನ್ನೇ ಆಯ್ದುಕೊಂಡಾನು.

ಇಷ್ಟೆಲ್ಲಾ ಆದರೂ ಸರ್ವಶಕ್ತ ಪತ್ರಿಕೆಗಳನ್ನೇ ನಡುಗಿಸುವ ಪ್ರಳಯಾಂತಕರು ಸಹ ಆ ದೇವನ ಸೃಷ್ಟಿಯಲ್ಲಿರುತ್ತಾರೆ ಎಂಬುದನ್ನು ಮರೆಯಬಾರದು. ‘ಅಮೇರಿಕಾ ಇರಾಕ್ ಯುದ್ಧವನ್ನು ಅಂತ್ಯಗೊಳಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸಿನ ಮುಖಪುಟದಲ್ಲಿ ವರದಿಯಾದರೆ ಅಳ್ಳದೆಯವರೇ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ‘ದೇವೇಗೌಡರು ಹೇಳಿದ ಜೋಕಿಗೆ ಖರ್ಗೆಯವರು ಬಿದ್ದು ಬಿದ್ದು ನಕ್ಕರು’ ಎಂಬ ವಾರ್ತೆ ನಮ್ಮ ರಾಜ್ಯದ ಜನರಿಗೆ ಹೇಗೆ ಕರ್ಣಾನಂದದಾಯಕವೋ ಹಾಗೆಯೇ ಈ ಸುದ್ದಿ. ಮುಂಜಾನೆಯ ಪತ್ರಿಕೆಯಲ್ಲಿ ಇಂಥ ಸುದ್ದಿ ಪ್ರಕಟವಾದರೆ ಏನನ್ನಿಸಬಹುದು? ಕೆಲವು ಬುದ್ಧಿವಂತರು ಕ್ಯಾಲಂಡರನ್ನು ಎರಡೆರಡು ಬಾರಿ ತಿರುಗಿಸಿ ನೋಡಿ ಅಂದು ಏಪ್ರಿಲ್ ಒಂದು ಅಲ್ಲ ಎಂದು ಖಾತ್ರಿ ಪಡಿಸಿಕೊಳ್ಳಬಹುದು. ಮತ್ತೊಂದಷ್ಟು ಮಂದಿ ಸಂ-ಚೋಧನೆಯ ಒಲವಿದ್ದವರು ಉಳಿದ ಪತ್ರಿಕಗಳತ್ತ ಕಣ್ಣು ಹಾಯಿಸಿ ಕ್ರಾಸ್ ಚೆಕ್ ಮಾಡಿಕೊಳ್ಳಬಹುದು. ಸಾಮ್ರಾಟರಂತಹ ಅತೀ ಬುದ್ಧಿವಂತರು ತಮಗಿಂತ ಬುದ್ಧಿವಂತರ ಬಳಿ ಹೋಗಿ ‘ಇವತ್ತಿನ ಪೇಪರ್ ಇದ್ಯಾ’ ಅಂತ ಪಕ್ಕದ ಮನೆಯವರ ಬಳಿ ಕೇಳಿ ‘ಏನು ವಿಶೇಷ ಇವತ್ತು ಪೇಪರಿನಲ್ಲಿ…’ ಎಂದು ಹಲ್ಲು ಗಿಂಜಿ ನಾಲ್ಕೈದು ಮಂದಿ ಕನ್‌ಫರ್ಮ್ ಮಾಡಿದ ನಂತರವೇ ನಂಬಬಹುದು.

ಮಾಡಲು ಕೆಲಸವಿಲ್ಲದ ದ ಎಸ್ ಮೆನ್ (ಹೌದು ಗಂಡಸರು!) ಎಂಬ ಹೆಸರಿನ ಗುಂಪಿನ ಸದಸ್ಯರು ನವೆಂಬರ್ ಹದಿನಾಲ್ಕರಂದು ಅಂದರೆ ನಿನ್ನೆ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಣಕು ಪ್ರತಿ ಮಾಡಿ ಅದನ್ನು ೧.೨ ಮಿಲಿಯನ್ ಕಾಪಿಗಳಾಗಿ ಮುದ್ರಿಸಿ ಹಂಚಿದ್ದಾರೆ. ಅದರಲ್ಲಿ ಅಮೇರಿಕಾದ ಪ್ರಜೆ ಹುಬ್ಬೇರಿಸಿ ಓದಬಹುದಾದ ವರದಿಗಳೇ ತುಂಬಿದ್ದವಂತೆ. ‘ಅಮೇರಿಕಾ ಇರಾಕಿ ಯುದ್ಧವನ್ನು ಕೊನೆಗೊಳಿಸಿದೆ’ ಎಂಬ ವರದಿಯ ಪಕ್ಕದಲ್ಲಿ ಜಾರ್ಜ್ ಬುಶ್‌ರನ್ನು ಬಂಧಿಸಲಾಗಿದೆ ಎಂದು ಪ್ರಕಟವಾಗಿತ್ತಂತೆ. ಒಳ ಪುಟಗಳಲ್ಲಿ ಕಾಂಡಲೀನ ರೈಸ್ ತಪ್ಪೊಪ್ಪಿಗೆ… ಹೀಗೆ ರಸವತ್ತಾದ ವರದಿಗಳು. ಪ್ರಜೆಗಳು ಕನಸಿನಲ್ಲಿ ಮಾತ್ರ ಕಲ್ಪಿಸಿಕೊಳ್ಳಬಹುದಾದ ಘಟನೆಗಳು ವರದಿಯಾಗಿವೆಯಂತೆ. ಇದರಿಂದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರ್ಚಸ್ಸಿಗೇನು ಧಕ್ಕೆಯಾಗದು. ಈ ಪ್ರ್ಯಾನ್ಕ್‌ಸ್ಟರರು ಪತ್ರಿಕೆಯ ದಿನಾಂಕವನ್ನು ಜುಲೈ ೪ ೨೦೦೯ ಎಂದು ಮುದ್ರಿಸಿದ್ದರೆ ಘೋಷವಾಕ್ಯವನ್ನು ತಿದ್ದಿ All the news we hope to print ಎಂದು ಮುದ್ರಿಸಿ ತಮ್ಮ ಉದ್ದೇಶವನ್ನು ಸಾರಿದ್ದಾರೆ.

ಈ ನಡುವೆ ಹಿಂದೊಮ್ಮೆ ನಾವು ಕೇಳಿದ್ದ ಜೋಕು ನೆನಪಾಗಿ ನಗೆ ನಗಾರಿಯ ಸಿಬ್ಬಂದಿಯೆಲ್ಲಾ ನೆಲದ ಮೇಲೆ ಉರುಳುರುಳಿ ನಗುತ್ತಿದ್ದಾರೆ. ಪತ್ರಿಕೆಯು ಸುದ್ದಿಯಾಗಬಹುದನ್ನೆಲ್ಲಾ ಮುದ್ರಿಸುತ್ತೇವೆ ಎಂದು ಘೋಷವಾಕ್ಯ ಇಟ್ಟುಕೊಳ್ಳುತ್ತಾರೆಂದರೆ ಜಗತ್ತಿನಲ್ಲಿ ಪ್ರತಿ ದಿನ ಇವರ ಪತ್ರಿಕೆಯ ಇಪ್ಪತ್ತು ಚಿಲ್ಲರೆ ಪುಟಗಳು ತುಂಬುವಷ್ಟು ಮಾತ್ರ ಘಟನೆಗಳು ನಡೆಯುತ್ತವೆ ಎಂತಲೇ? ಒಂದು ಹೆಚ್ಚಿಲ್ಲ, ಕಡಿಮೆ ಇಲ್ಲ!

ಕೆಲ ದಿನಗಳ ಹಿಂದೆ ಸಾಮ್ರಾಟರಾದ ನಮ್ಮ ಹಾಗೂ ನಗೆ ನಗಾರಿಯ ವಿಶ್ವಾಸಾರ್ಹತೆಯನ್ನು ನಾಶ ಪಡಿಸುವುದಕ್ಕಾಗಿ ಬಹುದೊಡ್ಡ ಹುನ್ನಾರ ನಡೆದಿತ್ತು. ನಮ್ಮ ಪತ್ರಿಕೆಯಲ್ಲಿ ಹೆಸರಿನಲ್ಲಿ ದೇವೇಗೌಡರು ಬರೆದ ಹಾಸ್ಯ ಲೇಖನ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಹನಿಗವನವನ್ನು ಮುದ್ರಿಸುವ ಅತಿರಂಜಕ ಯೋಜನೆ ವಿಫಲವಾಯಿತು ಎಂದು ತಿಳಿಸುವುದಕ್ಕೆ ಹರ್ಷಿಸುತ್ತೇವೆ. ಈ ಹುನ್ನಾರವನ್ನು ಪತ್ತೆ ಹಚ್ಚಿ ನಮ್ಮ ಓದುಗರನ್ನು ಹೃದಯಾಘಾತ, ಶಾಕ್‌ನಿಂದ ಕಾಪಾಡಿದ ಡಿಟೆಕ್ಟಿವ್ ಚೇಲ ಕುಚೇಲನಿಗೆ ನಾವು ಸನ್ಮಾನಿಸಿದ್ದು ಯಾವ ಪತ್ರಿಕೆಯಲ್ಲೂ ವರದಿಯಾಗಲಿಲ್ಲ.

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

14 ನವೆಂ

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸಿ ಮೆರೆದು ಜನರು ಮರೆತು ಹೋದವರೂ, ವೀರಮರಣವನ್ನಪ್ಪಿ ನಾಲ್ಕು ಕ್ಷಣ ನೆರೆದವರ ಮೌನಾಚರಣೆಯನ್ನು ಸ್ವೀಕರಿಸಿದವರೂ, ಮುಖಹೇಡಿಗಳಾಗಿ ಹೌಹಾರಿ ಬಸವಳಿದು ಹೋದವರೂ ಎಲ್ಲರಿಗೂ ಪ್ರಿಯವಾದ ವಾಕ್ಯ. ಇದರರ್ಥ ನಿಮ್ಮಲ್ಲಿರುವ ದೊಡ್ಡ ತಪ್ಪನ್ನು ಮೊದಲು ತಿದ್ದಿಕೊಳ್ಳಿ ಆಮೇಲೆ ಇನ್ನೊಬ್ಬರಲ್ಲಿರುವ ಸಣ್ಣ ತಪ್ಪಿನ ಬಗ್ಗೆ ಮಾತನಾಡಲು ನಿಮಗೆ ಅರ್ಹತೆ ಬರುತ್ತದೆ ಎಂದು. ಉದಾಹರಣೆಗೆ: ಕೂದಲಿಗೆ ಶ್ಯಾಂಪೂ ಹಾಕೆ ಬೇಡ, ಹಾಳಾಗುತ್ತವೆ ಎಂದು ತಂದೆ ಮಗನಿಗೆ ಉಪದೇಶ ಮಾಡುತ್ತಾನೆ. ತಂದೆಯ ಬೋಳು ತಲೆಯಲ್ಲಿನ ನಾಲ್ಕು ಕೂದಲುಗಳನ್ನು ಹುಡುಕಿ ತೋರಿಸಿ ಮಗ ಮೇಲಿನ ವಾಕ್ಯವನ್ನು ಹೇಳಬಹುದು.

ಇಷ್ಟು ಪೀಠಿಕೆಯನ್ನು ಬಯಸುವ ಸಂಗತಿಯಾಗುವುದು ಎಂಬುದು ನಿಮ್ಮಂತಹ ಬುದ್ಧಿವಂತರಿಗೂ ಹೊಳೆದಿರಲಾಗದು. ಇಷ್ಟು ದಿನ ಭಾರತದ ಯಾವ ಮೂಲೆಯಲ್ಲಿ ಬಾಂಬುಗಳು ಸಿಡಿದರೂ, ಸಿಡಿಯದೆ ಮಲಗಿ ನಿದ್ದೆ ಹೋದರೂ, ಬಾಂಬಿನ ಸದ್ದು ಮಾಡುವ ಆನೆ ಪಟಾಕಿ ಅಬ್ಬರಿಸಿದರೂ, ನಾಲ್ಕು ಮಂದಿ ತಲೆಗೆ ಬಿಳಿಯ ಟೊಪ್ಪಿ ತೊಟ್ಟವರು ಒಂದೇ ದಿನ ಕಾಣೆಯಾದರೂ ‘ಭಯೋತ್ಪಾದನೆ’, ‘ಉಗ್ರವಾದ’, ‘ಮೂಲಭೂತವಾದ’, ‘ಮತಾಂಧತೆ’ ಎಂದೆಲ್ಲಾ ದಿನಪತ್ರಿಕೆಗಳ ಅಂಕಣಕೋರರು, ವಾರಪತ್ರಿಕೆಗಳ ಸೊಂಪಾದಕರು ಅಂಕಣಗಳ ಮೇಲೆ ಅಂಕಣಗಳನ್ನು ಚಚ್ಚುತ್ತಿದ್ದರು. ಕೆಲವರು ಅಲ್ ಖೈದ, ಮಷ್ಕಿರಿ ತೊಯ್ಬಾ, ಮಜಾಹಿದ್ದೀನ್ ಎಂದೆಲ್ಲಾ ಯಾರಿಗೂ ಅರ್ಥವಾಗದ ಶಬ್ಧಗಳ ದಾಳಿಯನ್ನು ಮಾಡುತ್ತಾ ಜನಸಾಮಾನ್ಯರನ್ನು ಭಯಭೀತರನ್ನಾಗಿಸುತ್ತಿದ್ದರು. ಕೇಸರಿ ಪಾರ್ಟಿಯಂತೂ ಪರಮ ತತ್ವಜ್ಞಾನಿಯ ಫೋಸಿಗೆ ರೆಡಿಯಾಗುತ್ತಾ ‘ನಾವು ಯಾವ ಕಾಲದಿಂದ ಹೇಳುತ್ತಾ ಬಂದಿದ್ದೇವೆ, ಅವರ ಮತಾಂಧತೆ ಹೆಚ್ಚಾಯಿತು ಅಂತ, ನೀವು ಕೇಳಲಿಲ್ಲ. ಸರಕಾರದ ಮೃದು ಧೋರಣೆಯಿಂದಾಗಿ ಗಟ್ಟಿ ಗಟ್ಟಿ ಬಾಂಬುಗಳು ಸ್ಪೋಟಗೊಳ್ಳುತ್ತಿವೆ. ನಮ್ಮವರನ್ನು ನೋಡಿ ಎಂದಿಗೂ ಒಬ್ಬರ ಮೇಲೆ ಕೈ ಎತ್ತಿದವರಲ್ಲ. ನಮ್ಮವರು ಯಾರ ಮೇಲಾದರೂ ದಂಡೆತ್ತಿ ಹೋದ ಉದಾಹರಣೆ ಇತಿಹಾಸದಲ್ಲಿ ಸ್ಯಾಂಪಲ್ಲಿಗಾದರೂ ಇದ್ದರೆ ತೋರಿಸಿ ನಾವು ಪ್ರಸ್ತುತ ಹಾಕಿಕೊಂಡಿರುವ ಶಾರ್ಟ್ಸ್ ಕಳಚಿ ನಿಮ್ಮಂತೆ ಪ್ಯಾಂಟು ತೊಡುತ್ತೇವೆ.’ ಎಂದು ಮೈಕುಗಳ ಮುಂದೆ ವಾಗ್ಝರಿಯನ್ನು ಹರಿಸಿ ಮೈಕನ್ನೂ, ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದರು.

ಇವರಿಗೆ ವಿರುದ್ಧವಾದದ್ದನ್ನೇ ಹೇಳುತ್ತಾ ಬಂದಿರುವ ಹ್ಯಾಂಡ್ ಪಾರ್ಟಿಯವರು ಆಡಳಿತದಲ್ಲಿದ್ದಾಗ ಅದರ ಹೋಂ ಮಿನಿಸ್ಟರು, ‘ಉಗ್ರವಾದವನ್ನು ನಾವು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು ಸೆರೆಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸುತ್ತೇವೆ. ಭಯೋತ್ಪಾದಕರ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ’ ನಾಲ್ಕೈದು ಸೂಟು ಬದಲಿಸುವ ನಡುವೆ ಸಮಯ ಮಾಡಿಕೊಂಡು ಹಿಂದಿನ ಹೇಳಿಕೆಯನ್ನೇ ನೆನಪಿನಿಂದ ಹೊರತೆಗೆದು ಮರು ಉಚ್ಚರಿಸಿ ಬೆವರೊರೆಸಿಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಕೆಲವು ಭೂಮಿಯ ಮೇಲಿನ ಏಕೈಕ ಬುದ್ಧಿವಂತ ಪ್ರಾಣಿಗಳು ‘ಭಯೋತ್ಪಾದನೆಗೆ ಯಾವ ಧರ್ಮವನ್ನೂ ಹೊಣೆಯಾಗಿಸಲು ಸಾಧ್ಯವಿಲ್ಲ. ಒಂದು ಸಮಾಜ ಶಾಂತಿಯಿಂದ ಇದೆ ಎಂದರೆ, ಸಹಬಾಳ್ವೆ ಬ್ರಾತೃತ್ವವನ್ನು ಪಾಲಿಸುತ್ತಿದೆ, ಸರ್ವರಿಗೂ ಸ್ವತಂತ್ರವನ್ನು ಕೊಟ್ಟಿದೆ ಎಂದಾಗ ಅದಕ್ಕೆ ಅವರು ಪಾಲಿಸುವ ಧರ್ಮ, ಅವರ ಸಂಸ್ಕಾರವನ್ನು ಹೊಣೆ ಮಾಡಬೇಕು. ಆದರೆ ಅವರು ಹಿಂಸೆಗಿಳಿದು ಮುಗ್ಧ ಮಕ್ಕಳ, ಅಮಾಯಕರ ಪ್ರಾಣವನ್ನು ತೆಗೆಯುವಾಗ, ತಮ್ಮ ದೇಶವನ್ನೇ ಒಡೆದೊಡೆದು ದಳ್ಳುರಿಯಲ್ಲಿ ಬೇಯಿಸುವಾಗ ಅದಕ್ಕೆ ಧರ್ಮವನ್ನು ಹೊಣೆ ಮಾಡಬಾರದು. ಭಯೋತ್ಪಾದನಕನಿಗೆ ಧರ್ಮವಿಲ್ಲ. ಆತನ ಕೃತ್ಯಗಳೆಲ್ಲವೂ ಸ್ವಂತ ವಿವೇಚನೆಯಿಂದ ಬಂದವು.’ ಎಂದು ಘನಘಂಬೀರವಾದ ವಿಚಾರವನ್ನು ಮಂಡಿಸಿ ಗಡ್ಡ ಕೆರೆಯುತ್ತಾ ನಿಂತಿರುವಾಗ ಹ್ಯಾಂಡ್ ಪಕ್ಷದ ವಕ್ತಾರ ಬಂದು ‘ನಾವು ಅದನ್ನೇ ಹೇಳುತ್ತಿದ್ದದ್ದು, ಭಯೋತ್ಪಾದನೆಗೆ ಧರ್ಮ ಕಾರಣವಲ್ಲ. ಹಾಗೆಯೇ ಭಯೋತ್ಪಾದನೆಯನ್ನು ಮತದ ಹೆಸರು ಹೇಳಿ ಕರೆಯುವುದು ತಪ್ಪು. ಭಯೋತ್ಪಾದಕರದು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ ವಿರುದ್ಧದ ಬಂಡಾಯದ ದನಿ’ ಎಂದು ಉಸುರುತ್ತಾರೆ. ಕೇಸರಿ ಪಕ್ಷದವರು ಇವರಿಬ್ಬರ ಮಾತುಗಳನ್ನು ಕೇಳುತ್ತಾ ಚಿದ್ವಿಲಾಸದ ನಗೆ ಬೀರುತ್ತಾ, ‘ತುಷ್ಟೀಕರಣ’ ಎಂದು  ಉದ್ಗರಿಸುತ್ತಾರೆ.

ಆದರೆ ಕಾಲ ಚಕ್ರ ಉರುಳಿದ ಹಾಗೆ ಚಿದ್ವಿಲಾಸದ ನಗೆ ಬೀರುವವರ ಸರದಿಯೂ ಬದಲಾಗಿದೆ. ಕೇಸರಿ ಪಕ್ಷದವರು ಬೆವರಿಳಿಯುವ ಹಣೆಯನ್ನು ತಮ್ಮ ಜುಬ್ಬಗಳಿಗೆ ತಿಕ್ಕಿಕೊಳ್ಳುತ್ತಿದ್ದರೆ ಹ್ಯಾಂಡಿನವರು ಬೀಗುತ್ತಿದ್ದಾರೆ. ಕೇಸರಿ ಪಕ್ಷದ ಬೆಂಬಲಿಗರು ಬಾಂಬುಗಳನ್ನು ಮಾಡುವಲ್ಲಿ ಹೆಸರು ಮಾಡಿದ್ದಾರೆ, ಹ್ಯಾಂಡಿನವರಷ್ಟು ಚೆನ್ನಾಗಿ ಮಾಡುವುದನ್ನು ಇನ್ನೂ ಕಲಿತಿಲ್ಲವಾದರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಈ ಮಹಾನ್ ಪ್ರಯೋಗದಲ್ಲಿ ತಮ್ಮ ಜೀವವನ್ನೇ ಹವಿಸ್ಸನ್ನಾಗಿ ಅರ್ಪಿಸಿದ್ದಾರೆ. ಹ್ಯಾಂಡಿನ ಅನುಯಾಯಿಗಳಷ್ಟು ತರಬೇತಿಯನ್ನು ಕೇಸರಿ ಪಕ್ಷದ ಅಭಿಮಾನಿಗಳು ಪಡೆಯಬೇಕು ಎಂಬ ಉದ್ದೇಶದಿಂದ ನೇರವಾಗಿ ಸೇನೆಯಿಂದ ಉನ್ನತ ಅಧಿಕಾರಿಯನ್ನು ತರಬೇತಿ ನೀಡಲು ನೇಮಿಸಲಾಗಿದೆ. ಹಾಗೆಯೇ ಇವರ ಮೇಲೆ ಭಗವಂತನ ಕೃಪೆ ಹೆಚ್ಚಾಗಿರಲಿ ಎಂದು ಸಾಧ್ವಿ ಮಣಿಯವರ ನೆರವನ್ನೂ ಪಡೆಯಲಾಗಿದೆ. ಬುದ್ಧಿಜೀವಿಗಳು ಆಚೆ ಈಚೆ ನೋಡಿ ಮೊದಲು ಯಾರಾದರೂ ಮಾತನಾಡಲಿ ಎಂದು ಕಾಯುತ್ತಿದ್ದಾರೆ. ಕೇಸರಿ ಪಕ್ಷದವರು ಮಾಡುತ್ತಿದ್ದ ಆರೋಪಗಳ ಕಾಪಿಯನ್ನು ಪತ್ರಿಕೆಯ ಕಛೇರಿಗಳಿಂದ ಸ್ಪೀಡ್ ಪೋಸ್ಟಿನಲ್ಲಿ ತರಿಸಿಕೊಂಡ ಹ್ಯಾಂಡ್ ಪಕ್ಷದವರು ಅವನ್ನು ಉರುಹೊಡೆಯುವಲ್ಲಿ ಮಗ್ನರಾಗಿದ್ದರೆ ಕೇಸರಿ ಪಕ್ಷದವರು ಹ್ಯಾಂಡ್ ಪಕ್ಷದವರ ಹೇಳಿಕೆಗಳ ಮೊರೆಹೋಗಿದ್ದಾರೆ. ಈ ಮಧ್ಯೆ ನಗೆ ಸಾಮ್ರಾಟರಂತಹ ಮಾಜಿ ಜವಾಬ್ದಾರಿಯುತ ಪ್ರಜೆಗಳು ಹಾಗೂ ಹಾಲಿ ರಾಜಕೀಯ ವಿಶ್ಲೇಷಕರು ಕೇಸರಿ ಹಾಗೂ ಹ್ಯಾಂಡ್ ಪಕ್ಷಗಳ ಈ ಸಾಮರಸ್ಯವನ್ನು, ಕೊಡುತೆಗೆದುಕೊಳ್ಳುವಿಕೆಯನ್ನು ನಾವು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಬಾಮ ಯುವಕರಿಗೆ ಆದರ್ಶವಾಗಬಾರದು!

13 ನವೆಂ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ, ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್ ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ. ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ. ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು (head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ ಮಲಗಬಾರದು.

ಇವ್ರ ಭಯಾಗ್ರಫಿಗಳು

13 ನವೆಂ

ಅವರು ನಮಗಿಂಥ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಬೂಟ್ ಪಾಲಿಶ್

16_lincoln_1
ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ತಮ್ಮ ಬೂಟುಗಳನ್ನು ತಾವೇ ಪಾಲಿಶ್ ಮಾಡಿಕೊಳ್ಳುವ ಸಂಪ್ರದಾಯವನ್ನು ಪಾಲಿಸುತ್ತಿದ್ದರು.
ಒಮ್ಮೆ ಸೆನೆಟ್ ಸದಸ್ಯರೊಬ್ಬರು ಅವರನ್ನು ಕೆಣಕಿದರು, ‘ಮಿ.ಲಿಂಕನ್ ನೀವು ನಿಮ್ಮ ಬೂಟುಗಳನ್ನು ನೀವೇ ಪಾಲಿಶ್ ಮಾಡಿಕೊಳ್ಳುತ್ತೀರಾ?’
ತಡಮಾಡದೆ ಲಿಂಕನ್ ಉತ್ತರಿಸಿದರು, ‘ಹೌದು. ನೀವು  ಯಾರ ಬೂಟು ಪಾಲಿಶ್ ಮಾಡುತ್ತೀರಿ?’