ಪರೀಕ್ಷಾ ಮಂಡಳಿಯ ಹೊಸ ನೀತಿಯ ವಿರುದ್ಧ ಪ್ರತಿಭಟನೆಯ ಬೆದರಿಕೆ
ಚೆನ್ನೈ, ಫೆ.೧೯: ತಮಿಳು ನಾಡಿನ ರಾಜ್ಯ ಪರೀಕ್ಷಾ ಮಂಡಳಿ ನಕಲು ತಡೆಗಟ್ಟುವುದಕ್ಕಾಗಿ ಘೋಷಿಸಿರುವ ನಿಯಂತ್ರಣ ಕ್ರಮಗಳನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದ ವಿದ್ಯಾರ್ಥಿಗಳೆಲ್ಲ ಸಂಪೂರ್ಣ ಉಡುಗೆ ತೊಟ್ಟು ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಕಲೇಶ್ ತಿಳಿಸಿದ್ದಾರೆ.
ಕಾಲೇಜಿನ ಸನಿಹದ ಝೆರಾಕ್ಸ್ ಅಂಗಡಿಯಲ್ಲಿ ಮೈಕ್ರೋ ಕಾಪಿ ತೆಗೆಸುವಲ್ಲಿ ಮಗ್ನರಾಗಿದ್ದ ನಕಲೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು. “ಶೂ,ಸಾಕ್ಸು, ಬೆಲ್ಟುಗಳನ್ನು ಪರೀಕ್ಷಾ ಕೇಂದ್ರದೊಳಗೆ ಧರಿಸಿರಲು ಅನುಮತಿಸುವುದಿಲ್ಲ ಎಂದಿರುವುದು ವಿದ್ಯಾರ್ಥಿಗಳ ಸ್ವಾತಂತ್ರ್ಯ ಹರಣದ ಕೃತ್ಯವಾಗಿದೆ. ಶೂ ಸಾಕ್ಸು ಬಿಚ್ಚಿ ಕೊಠಡಿಯೊಳಗೆ ಬನ್ನಿ ಎಂದವರು ನಾಳೆ ಶರ್ಟು ಪ್ಯಾಂಟು ಕಳಚಿ ಬನ್ನಿ ಎಂದು ಫರ್ಮಾನು ಹೊರಡಿಸುವುದಕ್ಕೆ ಹೇಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?” ಎಂದು ಪ್ರಶ್ನಿಸಿದರು.
ಈ ಕ್ರಮಗಳನ್ನು ಕೂಡಲೇ ಹಿಂತೆಗೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. “ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಸಂಪೂರ್ಣ ಫಾರ್ಮಲ್ ದಿರಿಸು ತೊಟ್ಟು, ವಿದ್ಯಾರ್ಥಿನಿಯರು ತೋಳು, ಮಂಡಿಗಳನ್ನೂ ಮುಚ್ಚುವ ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಪ್ರತಿಭಟಿಸುವರು.”
ವಿದ್ಯಾರ್ಥಿಗಳ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ ಕಾಲೇಜು ಬದಿಯ ಅಂಗಡಿಗಳ ವ್ಯಾಪಾರಿ ಸಂಘ ತಾವು ಎಂದಿಗೂ ವಿದ್ಯಾರ್ಥಿಗಳ ಪರ ಎಂದು ಹೇಳಿಕೆ ನೀಡಿದೆ. “ವಿದ್ಯಾರ್ಥಿಗಳ ಹಿತಾಸಕ್ತಿಯೊಂದೇ ನಮಗೆ ಮುಖ್ಯ. ಹತ್ತಾರು ವರ್ಷಗಳಿಂದ ನಾವು ವಿದ್ಯಾರ್ಥಿಗಳಿಗಾಗಿ ನಮ್ಮ ಜೀವನವನ್ನು ಸವೆಸುತ್ತಾ ಬಂದಿದ್ದೇವೆ. ಇಡೀ ಪಠ್ಯಪುಸ್ತಕವನ್ನು ಅಂಗೈಯಲ್ಲಿ ಅಡಗಿಸಿಕೊಳ್ಳುವಷ್ಟು ಚೊಕ್ಕಟವಾಗಿ ನಾವು ಕಾಪಿ ಮಾಡಿಕೊಡದಿದ್ದರೆ ಪಾಪ ಈ ಎಳೆಯ ಮಕ್ಕಳು ರಾತ್ರಿ ದೀಪವನ್ನು ಉರಿಸಿ ಎಸ್.ಟಿ.ಡಿ ಬಿಲ್ಲಿಂಗ್ ಹಾಳೆಯ ಮೇಲೆ ಎಲ್ಲವನ್ನೂ ಬರೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯ ಮೊದಲೇ ಸೋರಿದ ಪ್ರಶ್ನೆ ಪತ್ರಿಕೆಯನ್ನು ಹೆಕ್ಕಿ ತಂದು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಧ್ಯರಾತ್ರಿಯೆಲ್ಲ ಮುದ್ರಿಸಿ ವಿದ್ಯಾರ್ಥಿಗಳನ್ನು ವಯಕ್ತಿಕವಾಗಿ ಸಂಪರ್ಕಿಸಿ ತಲುಪಿಸುವುದು ಕಡಿಮೆ ತ್ರಾಸದ ಕೆಲಸವೇ?”
ಹೊಸ ತಂತ್ರಜ್ಞಾನದಿಂದಾಗಿ ತಮ್ಮ ವೃತ್ತಿ ಯು ಅವನತಿಯ ಅಂಚಿಗೆ ಸರಿಯುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಮೊಬೈಲು, ಪೆನ್ ಡ್ರೈವು ಮೊದಲಾದ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ವಿದ್ಯಾರ್ಥಿಗಳು ಸ್ವತಂತ್ರವಾಗಿ, ನಮ್ಮ ಹಂಗಿಲ್ಲದೆ ಪರೀಕ್ಷೆ ಎದುರಿಸುವ ಕೆಟ್ಟ ಸಂಸ್ಕೃತಿ ಶುರುವಾಗಿದೆ. ಜಾಗತೀಕರಣದ ಹುಚ್ಚು ಹೊಳೆಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಇಂತಹ ಸಾಂಪ್ರದಾಯಿಕ ವೃತ್ತಿಯನ್ನು ಎಲ್ಲರೂ ಸೇರಿ ಉಳಿಸಬೇಕು.”
ಇತ್ತೀಚಿನ ಪ್ರಜಾ ಉವಾಚ