Tag Archives: ಹಾಸ್ಯ ಲೇಖನ

ಕೋಮಲ್ ಕಾಲಂ: ಗೌಡಪ್ಪ ವೀಕ್ ಆಗವ್ನೆ

31 ಆಗಸ್ಟ್

ಕೆರೆ ತಾವದಿಂದ ಬತ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ್ದೆ ಸಾನೇ ದಪ್ಪಾ ಇದೆಯಾ ಸುಗರ್ 400ಪಾಯಿಂಟ್ ಆಯ್ತದೆ. ತೆಳ್ಳಗೆ ಆಗು ಅಂದ್ಯಾರೆ ಅದಕ್ಕೆ ಬಾಡಿ ಇಳಿಸ್ತಾ ಇದೀನಿ ಕಲಾ. ಅಂಗೇ ಇನ್ಸುಲೇಸನ್ ಸ್ಟಾಪ್ ಮಾಡೀವ್ನಿ. ನೋಡಲಾ ಮೈನಾಗೆ ಇರೋ ತೂತೆಲ್ಲಾ ಮುಚ್ಚೈತೆ ಅಂದ. ಸರಿ ಕೈನಾಗೆ ಚೊಂಬು ಯಾಕೆ ಅಂದೆ. ನೋಡಲಾ ಎಲ್ಲಿ ಕೂರಬೇಕು ಅನ್ನಿಸ್ತದೋ ಅಲ್ಲೇ ಕೂರ್ತೀನಿ ಅದಕ್ಕೆ ಕಲಾ ಅಂದ ಗೌಡಪ್ಪ. ಮತ್ತೆ ವಾಸನೆ ಹೋಗೋದಿಕ್ಕೆ ಯಾವುದು ಔಷಧಿ ಹೇಳಿಲ್ವಾ ಅಂದೆ. ಹೋಗಲಾ ತಲೆ ತಿನ್ನಬೇಡ ಅಂದ. ಮಗಂದು ಬೆವರು ವಾಸನೆ ಅಂಗೇ ಗಮ್ ಅಂತಾ ಮೂಗಿಗೇ ಹೊಡೆಯೋದು. ಸರಿ ಬುಡಿ,  ನಂಗೆ ಸಾನೇ ಅರ್ಜೆಂಟ್ ಆಗೈತೆ ಆಮ್ಯಾಕೆ ಸಿಕ್ತೀನಿ ಅಂದು ಹೊಂಟು ಸ್ವಲ್ಪ ಹೊತ್ತಿಗೇನೆ ಧಪ್ ಅಂತಾ ಸವಂಡ್ ಬಂತು. ಏನು ಅಂತಾ ನೋಡಿದ್ರೆ ಗೌಡಪ್ಪ ಸಗಣಿ ಮ್ಯಾಕೆ ಕಾಲಿಟ್ಟು ಕಿಸ್ಕಂಡಿದ್ದ. ಎಬ್ಬಿಸಿ ಮತ್ತೆ ಜಾಗಿಂಗ್ ಪ್ರೋಸೆಸ್ ಸುರು ಮಾಡಿಸ್ದೆ.

ಬೆಳಗ್ಗೆ ಗೌಡಪ್ಪನ ಮನೆಗೆ ಹೋದ್ರೆ, ನಮ್ಮ ಹಳಸೋದ ಫಲಾವು ವಾಸನೆಯ ಗೌಡಪ್ಪ ಪೇಪರ್ ಓದ್ತಾ ಇದ್ದ. ಗೌಡ್ರೆ ಅಂತೂ ನೀವು ಪೇಪರ್ ಓದೋ ಹಂಗೆ ಆದ್ರಲಾ ಅದೇ ಖುಸಿ. ಕರವೇಯಕ್ಕೆ ಹೇಳ್ಬೇಕು ಅಂದೆ. ಮಗಂದು ಯಾವುದೋ ಸಾಮಾನು ಕಟ್ಟಿಸ್ಕಂಡ್ ಬಂದ್ ಪೇಪರ್ ಓದ್ತಾ ಇದ್ದ. ಅದೂ ದೇವೆಗೌಡರು ಪ್ರಧಾನ ಮಂತ್ರಿಯಾಗಿದ್ದು ಕಾಲ. ಏ ಥೂ. ಮನೇಲ್ಲಿ ತಕ್ಕಡಿ ಇತ್ತು. ಇದೇನು ಗೌಡಪ್ಪ ಏನಾದರೂ ಸೊಪ್ಪು ವ್ಯಾಪಾರ ಸುರುಹಚ್ಕಂಡನಾ ಅಂತಾ ಅನ್ಕೊಂತ್ತಿದ್ದಾಗೆನೇ, ಗೌಡಪ್ಪನ ಹೆಂಡರು 100ಗ್ರಾಂ ಕಲ್ಲು ಇಟ್ಟು ಹಿಂದಿನ ದಿನದ ಅನ್ನ ತೂಕ ಮಾಡಿದ್ಲು. ಹಂಗೇ 50ಗ್ರಾಂ ಕಲ್ಲು ಇಟ್ಟು ಸಾರು ತೂಕ ಮಾಡಿದ್ಲು. 25ಗ್ರಾಂ ಇಟ್ಟು ಮುದ್ದೆ ತೂಕ ಮಾಡಿದ್ಲು. ನೋಡವ್ವ ಸರಿಯಾಗೈತಾ ತೂಕ ಅಂದಾ ಗೌಡಪ್ಪ. ಹೂಂ ಸರಿ ಐತೆ ರೀ ಅಂತು. ಒಂದು ಗ್ರಾಂ ಜಾಸ್ತಿ ಆಗಬಾರದು ಅಂದ ಗೌಡಪ್ಪ. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ಡಾಕಟರು ಹೇಳವ್ರೆ ಎಲ್ಲಾನೂ ತೂಕದ ಲೆಕ್ಕದಾಗೆ ತಿನ್ನು ಹಂಗಾದ್ರೆ ಮಾತ್ರ ಸರಿ ಆಯ್ತೀಯಾ ಅಂದವ್ರೆ ಅದಕ್ಕೆ ಕಲಾ ತಕ್ಕಡಿ ತಂದೀವ್ನಿ ಅಂದ. ಮಗಾ ಅದಕ್ಕೆ 50ರೂಪಾಯಿ ಕೊಟ್ಟು ಸರ್ಕಾರದ ಸೀಲ್ ಬೇರೆ ಹಾಕ್ಸಿದ್ದ ಬಡ್ಡೀ ಮಗ. ಅದ್ರಾಗೆ 20ಗ್ರಾಂ ಬಟ್ಟು ಕಳೆದು ಹೋಗಿತ್ತು ಅಂತಾ ಗೌಡನ ಹೆಂಡರು ಮಂಚದ ಕೆಳಗೆ  ಗೌಡಪ್ಪನ ಪಂಚೆ ಎತ್ತಿ ಹುಡುಕ್ತಾ ಇದ್ಲು. ಏ ಥೂ.

ಸರಿ ಗೌಡಪ್ಪನ ಹೆಂಡರು ಮಟನ್ ತಂದು 10ಗ್ರಾಂ ಬಟ್ಟು ಇಟ್ಟು ತೂಕ ಮಾಡಿದ್ಲು. 5ಗ್ರಾಂ ಜಾಸ್ತಿ ಬಂತು ಅದನ್ನ ಚಾಕೂನಾಗೆ ಕಟ್ ಮಾಡಿ ನಾಯಿಗೆ ಹಾಕಿದರೆ, ಮುಂಡೇದು ತಿನ್ಲಿಲ್ಲಾ ಹಂಗೇ ಹೋತು. ಗೌಡರೆ ನಾಳೆ ಮಟನ್ ಊಟ ಆಹಾ ಅಂದೆ. ಒಂದು ಹಲ್ಲಿಗೂ ಸಾಕಾಗಕಿಲ್ಲಾ, ಆದ್ರೂ ಏನ್ಲಾ ಮಾಡೋದು. ಮೂರು ಹೆಂಡರನ್ನ ಸಾಕುಬೇಕು ಕನ್ಲಾ ಅಂದ. ಮೂರನೇ ಹೆಂಡರು ಯಾರ್ರೀ ಗೌಡ್ರೆ ಅಂದೆ. ಅದೇ ಕಲಾ ನಮ್ಮ ಪೂಜಾರಪ್ಪನ ತಂಗಿ ಕಲಾ.ಅಯ್ಯೋ ನಿನ್ ಮುಖಕ್ಕೆ ನಿಂಗನ ಅಂಗಡಿ ಚಾ ಚಲ್ಟಾ ಹುಯ್ಯಾ ಅವಳನ್ನೂ ಬಿಡಲಿಲ್ವಾ ಅಂದೆ. ಅವನ ಹತ್ರ ಹೋಗ್ರೀ ಮಗಾ ಮಾಟ ಮಾಡಿಸಿ ನಿಮ್ಮ ಕಣ್ಣು ತೆಗಿಸ್ತಾವ್ನೆ ಅಂದೆ. ಹಂಗಾರೆ ಬೇಡ ಬುಡ್ಲಾ ಅಂದ. ಮಗಾ ಯಾವಾಗಲೂ ತಲೆ ಬುರುಡೆ ಹಿಡ್ಕಂಡು ರಾತ್ರಿ ಮಸಾನ ತಾವ ಹೋಯ್ತಾ ಇದ್ದಾಗೆ ಡೌಟ್ ಇತ್ತು . ಮಗಾ ಅಘೋರಿ ಇದ್ದಂಗೆ ಅವನೆ ಕಲಾ ಅಂದ. ಅವನ ತಂಗಿ ಲೇಡಿ ಅಘೋರಿ ಇರಬೇಕು ಅಂದ. ನಿಮ್ಮನ್ನೂ ಮಸಾಣ ಕಾಯಕ್ಕೆ ವೀರಬಾಹು ತರಾ ಕಂಬಳ್ಯಾಗೆ ಅಂಗೇ ಒಂದು ಹೋಂ ಗಾರ್ಡ್ ಕೋಲು ಕೊಟ್ಟು ಬಿಡ್ತಾನೆ ಅಂದೆ.

ಸರಿ ನಮ್ಮ ಎಂದಿನ ಅಡ್ಡೆ ನಿಂಗನ ಚಾ ಅಂಗಡಿ ಅಡ್ಡೇ ತಾವ ಸೇರಿದ್ವಿ. ಗೌಡಪ್ಪ ಅರ್ಧ ಚಾ ಕುಡಿದು. ಸಲ್ಟು ತೆಗೆದು ಚೆಡ್ಯಾಗೆ ಪೋಸು ಕೊಟ್ಟ. ಅವನ ಕೈನಾಗೆ ಇರೋ ಬೈಸೆಪ್ಸ್ ನೋಡಿ ದೊನ್ನೆ ಸೀನ ಅಬ್ಬಬ್ಬಾ ಅಂದ. ಅಂಗೇ ಗೌಡಪ್ಪ 50ಡಿಪ್ಸ್ ಹೊಡೆದು ಆ ಕಡೆ ಹೋಗಿ ವಾಂತಿ ಮಾಡಿ ಬಂದ. ಯಾಕ್ರೀ ಗೌಡ್ರೆ, ನೀರು ಕೊಡಲಾ ನಿಂಗ ಅಂದ. ಈಗ ತಾನೆ ಊಟ ಮಾಡಿದ್ದೆ ಕಲಾ ಅದಕ್ಕೆ ಆಮ್ಲೇಟ್ ಹಾಕ್ದೆ. ಏ ಥೂ. ಸರೀ ಗೌಡಪ್ಪನ ಬಾಡಿ ಒಂದು ತರಾ ಮೂಲಂಗಿ ಆದಂಗೆ ಆಗಿತ್ತು, ಹೊಟ್ಟೆ ದಪ್ಪ. ಕೈ ಕಾಲು ಸಣ್ಣ. ಮಗಾ ಹಿರಣ್ಣಯ್ಯ ಕಟ್ಟಿದಂಗೆ ಚೆಡ್ಡಿ ಕಟ್ಟೋನು.

ಅದೇ ಸಮಯಕ್ಕೆ ನಮ್ಮೂರ್ನಾಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆ ಇತ್ತು. ನೋಡಿದ್ರೆ ಗೌಡಪ್ಪನೂ ಹೆಸರೂ ಕೊಟ್ಟವ್ನೆ. ಸರೀ ಸುರವಾತು. ನಮ್ಮ ತಂಬೂರಿ ಬಂದೋನೆ ಒಂದು 50ಕೆಜಿ ಅಕ್ಕಿ ಎತ್ತಿದ. ತಂತಿ ಪಕಡು ಸೀತು ಬಂದು ಒಂದು 100ಕೆಜಿ ಎತ್ತಿದ್ದ. ಸತ್ಯನಾರಾಯಣ ಪೂಜೆ ಪ್ರಸಾದ ಪ್ರಭಾವ. ಇದೀಗ ನಮ್ಮೂರ ಫೇಮಸ್ ಹಳಸೋದು ಫಲಾವು ವಾಸನೆಯ ಗೌಡಪ್ಪನವರು 150ಕೆಜಿ ಅಕ್ಕಿ ಎತ್ತುತ್ತಿದ್ದಾರೆ ಚಪ್ಪಾಳೆ. ಗೌಡ ಬಂದೋನೆ ಒಂದು ನಾಕು ಸಾಮು ಹೊಡೆದು ಎತ್ತಿ ಇಟ್ಟ. ಕಡೆಗೆ ಗೌಡಪ್ಪಂಗೆ ಪ್ರೈಸ್ ಕೊಟ್ವಿ. ಅದೂ ಪ್ರಾಥಮಿಕ ಸಾಲೇಯಲ್ಲಿ ಮಕ್ಕಳು ಗೆದ್ದಿರೋ ತುಕ್ಕು ಹಿಡಿದ ಕಬಡ್ಡಿ ಸೀಲ್ಡು.

ಬೆಳಗ್ಗೆ ಹೋದ್ರೆ ಗೌಡಪ್ಪನ ಬಲಗೈಗೆ ಬ್ಯಾಂಡೇಜ್ ಇತ್ತು. ಯಾಕ್ರೀ ಗೌಡ್ರೆ. ಬಲಗೈ ಡಿಸ್ ಲೊಕೇಟ್ ಆಗೈತೆ ಅಂದಾ. ಯಾಕ್ರೀ, ಮಗಂದು ಈರುಳ್ಳಿ ಚೀಲ ಜಾರತು ಕಲಾ ಅಂದ. ಅಂಗೇ ಭಟ್ಟಿ ಜಾರೈತೆ ಅಂತಾ ಒಂದು ಹತ್ತು ಕಿತಾ ಕೆರೆತಾವ ಹೋಗಿದ್ನಂತೆ. ದೊಡ್ಡ ಕರುಳು ಸಣ್ಣ ಕರುಳು ಹೋಗೈತೆ ಅಂದ. ಬೆಳಗ್ಗೆಯಿಂದ ತುಂಬಿಸಿದ್ದ ನೀರಿನ ಡ್ರಮ್ ಖಾಲಿಯಾಗಿತ್ತು. ನಿನ್ನ ಬಾಡಿಗೆ ಒಂದಿಷ್ಟು ಬೆಂಕಿ ಹಾಕ. ನೀರು ನೀನೇ ತೆಗೆದುಕೊಂಡು ಬಾ ಅಂತಾ ಗೌಡಪ್ಪನ ಹೆಂಡರು ಬಯ್ತಾ ಇದ್ಲು. ಗೌಡ್ರೆ ಏನ್ರೀ ನಿಮ್ಗೂ 6ಪ್ಯಾಕ್ ಬಂದೈತೆ ಅಂದೆ. ಲೇ ಅದು 6ಪ್ಯಾಕ್ ಅಲ್ಲ ಕಲಾ ಬೆನ್ನಿನ ಮೂಳೆ ಮುಂದೆ ಬಂದಿದೆ ಕಲಾ ಅಂದ. ಸರಿ ಅದೇ ಸಮಯಕ್ಕೆ ಕಟ್ಟಿಗೆ ಒಡೆಯೋ ಕಿಸ್ನ ಬಂದು ಗೌಡಪ್ಪನ ಪಕ್ಕ ಕೂತ. ಲೇ ಕಿಸ್ನ ನಿಮ್ಮಣ್ಣ ಯಾವಾಗ ಬಂದ್ ನಲಾ ಅಂದಾ ಸುಬ್ಬ. ಲೇ ನಮ್ಮ ಅಣ್ಣ ಅಲ್ಲ ಕಲಾ ಗೌಡಪ್ಪ ಕನ್ಲಾ ಅಂದ ಕಿಸ್ನ. ಗೌಡಪ್ಪ ಒಂದು ತರಾ ಕಟ್ಟಿಗೆ ಒಡೆಯೋರು ತರಾನೇ ಆಗಿದ್ದ. ಈಗ ಡಾಕಟರು ಹೇಳವ್ರಂತೆ ಇನ್ನೂ ವೀಕ್ ಆದ್ರೆ ನಿಮಗೆ ಡ್ರಿಪ್ಸ್ ಹಾಕಬೇಕು ಅಂತಾ. ಮಗಾ ಗೌಡಪ್ಪ ನಾಯಿ ಹೊಡಿಯೋ ಕೋಲು ಆದಂಗೆ ಆಗವ್ನೆ. ಹೆಂಡರು ಪಕ್ಕ ಹೋದರೆ ಮಗ ಕಂಡಂಗೆ ಕಾಣ್ತವ್ನೆ. ತಕ್ಕಡಿನಾ ಸಗಣಿ ತೂಗಕ್ಕೆ ಕೊಟ್ಟಿಗ್ಯಾಗೆ  ಹಾಕವ್ನೆ. ಜಾಗಿಂಗ್ ಅಂದ್ರೆ ಬೇಡ ಕಲಾ ದಪ್ಪ ಆಗಬೇಕು ಅಂತಾನೆ. ದಿನಾ ಒಂದು ಕೆಜಿ ಮಟನ್ ಅಂಗೇ ಒಂದು 5ಲೀ ಹಾಲು. ಗ್ಯಾಸ್ ಬೇರೆ. ಕೊಬ್ಬಿದ ಕುರಿ ಆದಂಗೆ ಆಗ್ತೀನಿ ನೋಡ್ರಲಾ ಅಂತಾನೆ ಬಡ್ಡೇ ಹತ್ತದ್ದು.

ಚಟಕ್ಕೆ ಹೊಸ ಚಟ – ಬಿಡುಗಡೆಗೆ ಒಂದು ದಾರಿ

23 ಆಗಸ್ಟ್

ರೀ ಗೌಡ್ರೆ, ಅದೇನ್ರೀ ಯಾವಾಗಲೂ ಸಿಗರೇಟು ಸೇದ್ತಾ ಇರ್ತೀರಿ. ಅತ್ಲಾಗೆ ಬಿಡಬಾರದಾ ಅಂದಾ ಸುಬ್ಬ. ನಾನು ಬಿಡಬೇಕು ಅಂತಾ ಸಾನೇ ದಿನದಿಂದ ಯೋಸನೆ ಮಾಡ್ತಾ ಇದೀನಿ. ಏನ್ಲಾ ಮಾಡಬೇಕು ಅಂದಾ ಗೌಡಪ್ಪ. ನೋಡ್ರೀ ಇದನ್ನ ಬಿಡಬೇಕು ಅಂದ್ರೆ ಗುಟ್ಕಾ ಹಾಕಕ್ಕೆ ಸುರು ಮಾಡ್ರಿ. ಅದು ನಿಮಗೆ ಆಗಕ್ಕಿಲ್ಲಾ ಆಮ್ಯಾಕೆ ಆಟೋ ಮ್ಯಾಟಿಕ್ ಆಗಿ ಬಿಡ್ತೀರಾ. ಸರಿ ಕನ್ಲಾ ನಾಳೆಯಿಂದ ಹಂಗೇ ಮಾತ್ತೀನಿ ಕಲಾ ಅಂದ ಗೌಡಪ್ಪ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ.

ಸರಿ ಮಾರನೆ ದಿನಾ ಗೌಡಪ್ಪ ಅಗಿತಾ ಉಕ್ಕಂತ ಬರ್ತಾ ಇದ್ದ. ನೋಡ್ಲಾ ಸುಬ್ಬ, ಹೆಂಗೆ ನಾವು. ಬಿಡಬೇಕು ಅಂದ್ರೆ ಆಟೆಯಾ ಬಿಟ್ಟೇ ಬಿಡ್ತೀವಿ ಅಂದಾ. ಜೋಬ್ನಾಗೆ ನೋಡಿದ್ರೆ ಒಂದು 20 ಪ್ಯಾಕೆಟ್ ಮಣಿಕ್ ಚಂದ್ ಗುಟ್ಕಾ ಇತ್ತು. ಸಲ್ಟು ಮೇಲೆ ಎಲ್ಲಾ ಉಕ್ಕಂಡಿದ್ದ. ಬಾಯಿ ಪಕ್ಕದಾಗೆ ಜೊಲ್ಲು. ಅದನ್ನ ಟವಲ್ ನಾಗೆ ಒರೆಸಿಕೊಳ್ಳೋನು. ಒಂತರಾ ಹುಚ್ಚ ಪಿಚ್ಚರ್ ಸುದೀಪ್ ಆದಂಗೆ ಆಗಿದ್ದ. ಅವರ ಮನೆ ಮುದುಕಿ ಊಟ ಆದ್ ಮ್ಯಾಕೆ ಅಡಿಕೆ ಸಿಗಲಿಲ್ಲಾ ಅಂತಾ ಎಲೆ ಜೊತೆ ಗುಟ್ಕಾ ಹಾಕ್ಕೊಂಡು ವಾಂತಿ ಮಾಡ್ಕಂಡು ವರಂಡಾದಾಗೆ ಬಿದ್ದಿತ್ತಂತೆ. ಅದಕ್ಕೆ ಈಗ ಗೌಡ ಹಂಚಿನ ಸಂದಿ ಗುಟ್ಕಾ ಪ್ಯಾಕೆಟ್ ಮಡಗ್ತಾನೆ. ರಾಮಾಯಣದಾಗೆ ರಾಮ ದಾರಿಗೋಸ್ಕರ ಕಲ್ಲು ಎಸಿದ್ದನ್ನು ಹೇಗೆ ಮಂಗಗಳು ಫಾಲೋ ಮಾಡಿದ್ವೋ ಅಂಗೇ ರಸ್ತೇಲಿ ಕೆಂಪಗೆ ಇನ್ನೂ ಹಸಿ ಐತೆ ಅಂದ್ರೆ ಗೌಡಪ್ಪ ಇಲ್ಲೇ ಎಲ್ಲೋ ಅವನೆ ಅಂತಾ ಮಾತು. ಗಟ್ಟಿ ಪದಾರ್ಥ ಏನೂ ತಿನ್ನಲ್ಲ ಗೌಡಪ್ಪ. ಯಾಕೇಂದ್ರ ದವಡೆ ಸವದೈತೆ ಅಂತಾನೆ. ಸರಿ ನಿಂಗನ ಅಂಗಡಿಗೆ ಬಂದ ಚಾ ಕುಡಿದು ಮತ್ತೆ ಸಿಗರೇಟು ಹಚ್ಕಂಡ. ಏನ್ರೀ ಗೌಡ್ರೆ ಮತ್ತೆ ಸಿಗರೇಟು. ಚಾ ಕುಡಿಯೋ ಬೇಕಾದ್ರೆ ಮಾತ್ರ ಕಲಾ ಅಂದ. ಲೇ ಸುಬ್ಬ ಗುಟ್ಕಾನು ಸಾನೇ ಜಾಸ್ತಿ ಆಗ್ಬಿಟೈತೆ ಬಿಡಕ್ಕೆ ಏನ್ಲಾ ಮಾಡಬೇಕು. ಗೌಡ್ರೆ ಒಂದು ಕೆಲಸ ಮಾಡ್ರಿ ನಸ್ಯ ಹಾಕಿರಿ ಎಲ್ಲಾ ಬಿಟ್ಟು ಹೋಯ್ತದೆ ಅಂದಾ.

ಗೌಡಪ್ಪ ತಕ್ಷಣನೇ ಒಂದು ನಸ್ಯದ ಡಬ್ಬಿ ತಗೊಂಡು ಅದೂ ಸುರು ಹಚ್ಕಂಡ. ಕಂಡ ಕಂಡೆ ಹಾಕೋನು ಹಂಗೇ ಎದುರೆಗಡೆ ಇದ್ದ ಮುಖದ ಮ್ಯಾಕೆ ಆಕ್ಷಿ ಅನ್ನೋನು. ಮಗಂದು ಬಾಯ್ನಾಗೆ ಇರೋದೆಲ್ಲಾ ಎದುರುಗಿದ್ದೋರು ಮುಖದ ಮ್ಯಾಕೆ. ಇವನು ” ಆ ” ಅಂತಾ ಬಾಯ್ತಗಿದರೆ ಸಾಕು ಎಲ್ಲಾವೂ ಅಡಕಂತಾವೆ. ಓಡ್ರಲಾ. ಮಗಂದು ಟವಲ್ ಪಂಚೆ ಎಲ್ಲಾ ನಸ್ಯ ವಾಸನೆ. ಭೂಪತಿ ನಸ್ಯ ಅಂತೆ ಇವನ ಪಿಂಡ, ಇವನಿಗೆ ಇದನ್ನ ಹೇಳುಕೊಟ್ಟೋರು ಸಿಗಲಿ ಮಾರಿ ಹಬ್ಬ ಮಾತ್ತೀನಿ ಅಂತಿದ್ಲು ಗೌಡಪ್ಪನ ಹೆಂಡರು. ಮಗಾ ಸುಬ್ಬ ಅವರ ಮನೆಗೆ ಹೋಗೋದನ್ನೇ ಬಿಟ್ಟಿದಾನೆ. ಗೌಡಪ್ಪ ವರಾಂಡಾದಾಗೆ ಮಕ್ಕೊತಾನೆ. ಹೆಂಡರು ಗಬ್ಬು ವಾಸನೆ ಅಂತಾ ಹೊರಗೆ ಹಾಕವ್ಳಂತೆ.

ಸರಿ ಗೌಡಪ್ಪಂಗೆ ಮೂರು ಚಟನೂ ಹತ್ಕೊಂತು. ಸಿಗರೇಟು ಸೇದಿ ಸ್ವಲ್ಪ ಹೊತ್ತಿಗೇನೇ ನಸ್ಯ ಹಾಕೋನು ಅದಾಕಿ ಸ್ವಲ್ಪ ಹೊತ್ತಿಗೆ ಗುಟ್ಕಾ ಹಾಕೋನು. ಒಂದು ಸಾರಿ ವಸೂಲಿಗೇ ಅಂತಾ ಕರೆದುಕೊಂಡು ಹೋಗಿದ್ವಿ. ಬಾಯಿ ತುಂಬಾ ಗುಟ್ಕಾ. ನಸ್ಯ ಹಾಕ್ದ ನೋಡಿ. ಆಕ್ಷಿ ಅಂತಿದ್ದಾಗೆನೇ ಎದುರುಗಡೆ ಇದ್ದ ಬಿಳೀ ಪಂಚೆ ಬನೀನಲ್ಲಿ ಇದ್ದೋರು ರಾವು ಬಡದಂಗೆ ಕೆಂಪಗೆ ಆಗಿದ್ದರು. ನಿಮಗೆ ಕಾಸು ಕೊಡಕ್ಕಿಲ್ಲ ಅಂತಾ ಹೊರ ಹಾಕಿದ್ರು. ಟಾಕೀಸ್ನಾಗೆ ಕೂತ್ರೆ ಬಗ್ಗಿ ಉಗಿಯೋನು. ಪಿಚ್ಚರ್ ಬಿಟ್ ಮ್ಯಾಕೆ ತಂಬೂರಿ ತಮ್ಮಯ್ಯ ಚಪ್ಪಲಿ ಯಾಕೋ ಜಾರ್ತಾ ಐತೆ ಅಂದ. ನೋಡಿದ್ರೆ ಗೌಡಪ್ಪ ಸಾನೇ ಚಪ್ಪಲಿಗೆ ಉಗದವ್ನೆ. ಒಂದು ಸಾರಿ ಇಸ್ಮಾಯಿಲ್ ಬಸ್ನಾಗೆ ಹೋಗೋ ಬೇಕಾ್ದರೆ ಹಿಂಗೆ ಉಗಿದಿದಾನೆ. ಹಿಂದಕಡೆ ಇದ್ದ ಮುಖ ಎಲ್ಲಾ ಒಂದು ತರಾ ಸಣ್ಣ ಕುಂಕುಮ ಇಟ್ಟಂಗೆ ಆಗಿತ್ತು. ಮಗುವಿಗೆ ಸಿಡಿದೈತೆ. ಅಲರ್ಜಿ ಆಗುತ್ತೆ ಅಂತಾ ದಂಡ ಬೇರೆ ಇಸ್ಕಂಡಿದ್ರಂತೆ.

ಗೌಡಪ್ಪನ ಮನೆ ಮುಂದೆ ಒಂದು ಸಣ್ಣ ಬೀಡಾ ಅಂಗಡಿ ಆದಂಗೆ ಆಗಿತ್ತು. ಒಂದು ಕಡೆ ಗುಟ್ಕಾ ಪ್ಯಾಕೇಟ್ , ಮತ್ತೊಂದು ಕಡೆ ಸಿಗರೇಟು ತುಂಡು. ಗೌಡಪ್ಪನ ಮನೆ ಎಮ್ಮೆ ಗುಟ್ಕಾ ಪ್ಯಾಕೇಟ್ ತಿಂದು ಸಾಯೋ ಅಂಗೆ ಆಗಿತ್ತಂತೆ. ಇನ್ನೊಂದು ದಪಾ ಗುಟ್ಕಾ ಪ್ಯಾಕೇಟ್ ಕಂಡರೆ ನಾಯಿ ಹೊಡದಂಗೆ ಹೊಡಿತೀನಿ ಅಂತಾ ಹೆಂಡರು ಹೇಳಿದ ಮ್ಯಾಕೆ ಗೌಡಪ್ಪ ಪ್ಯಾಕೆಟ್ ನ್ನ ಜೋಬ್ನಾಗೆ ಮಡಿಕ್ಕಂಡು ಕೆರೆತಾವ ಹೋದಾಗ ಎಸಿತಾನೆ. ಈಗ ದಿನಕ್ಕೆ ಒಂದು ಹತ್ತು ಪ್ಯಾಕೆಟ್ ಸಿಗರೇಟು, 50 ಗುಟ್ಕಾ ಅಂಗೇ 20 ಗ್ರಾಂ ನಸ್ಯ. ಗೌಡಪ್ಪನ ಚಟ ಆಗೈತೆ.

ಚಟಕ್ಕೆ ಅಂತಾ ತಿಂಗಳಿಗೆ 2ಸಾವಿರ ರೂಪಾಯಿ ಬೇಕಂತೆ. ನಿಂಗನ ಚಾ ಅಂಗಡೀಲಿ ಎಲ್ಲಾ ಕೂತಿದ್ವಿ. ಗೌಡ್ರೆ ಇವೆಲ್ಲವನ್ನೂ ಬಿಡಬೇಕಂದ್ರೆ ಅಂತಿದ್ದಾಗೆನೇ ಗೌಡಪ್ಪ ಸುಬ್ಬಂಗೆ ಕೆರ ತಗೊಂಡು ಜ್ವರಾ ಬರೋ ತರಾ ಹೊಡೆದ. ಯಾಕ್ರೀ ಲೇ ಇವನು ಹೇಳ್ದಾ ಅಂತ ಚಟ ಜಾಸ್ತಿ ಮಾಡಿದ್ದಕ್ಕೆ ಮುಂಚೆ ಬರೀ ದಮ್ಮು, ಸುಗರ್ ಇತ್ತು. ಈಗ ಗ್ಯಾಸ್, ತಲೆ ಸುತ್ತು ಎಲ್ಲಾ ಬಂದೈತೆ ಅಂದಾ. ಒಂದು ತಿಂಗಳು ಆಸ್ಪತ್ರಾಗೆ ಇದ್ದೆ ಕಲಾ. ಇಂಜೆಕ್ಷನ್ ಚುಚ್ಚಿ ಚುಚ್ಚಿ ನನ್ನ ಮೈ ಒಂದು ತರಾ ಟಿಂಕರಿಂಗ್ ಮಾಡಿರೋ ಕಾರ್ ತರಾ ಆಗೈತೆ. ನೋಡ್ಲಾ ಗರುಡ ಇದ್ದಂಗೆ ಇದ್ದೆ. ಖಸಾಯಿ ಕಾನೆ ಹಸು ಆದಂಗೆ ಆಗೀನಿ ನೋಡ್ಲಾ ಅಂದಾ.  ಮೊನ್ನೆ ತಾನೆ ಆಸ್ಪತ್ರೆಯಿಂದ ಬಂದವ್ನೆ.ಈಗ ಗೌಡಪ್ಪ ಹೊರಗೆ ಜಾಸ್ತಿ ಬರಕ್ಕೇ ಇಲ್ಲಾ. ಎಲ್ಲಿ ಹೊಸಾ ಚಟ ಸುರುವಾಯ್ತದೋ ಅಂತಾ.

…………………………………..

ನಗಾರಿಯಲ್ಲಿ ಹೊಸ ಅಂಕಣವೊಂದು ಪ್ರಾರಂಭವಾಗಿದೆ. ಅಂಕಣಕಾರ  ಕೋಮಲ್ ರಿಗೆ ನಗಾರಿಗೆ ಸ್ವಾಗತ

ಶಿರವೆಂಬ ಗುಡಿಯೊಳಗೆ ನೆಲೆಸಿರೋ “ಕೇಶ “ವಾ …..

12 ಮಾರ್ಚ್

ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಬಿ.ಇ ಮಾಡಿ ಪ್ರಸ್ತುತ ಮುಂಬೈನ ಟಿಸಿಎಸ್‌ನಲ್ಲಿರುವ ಕುಂದಾಪುರದ ವಿ.ಸುಮಂತ ಶಾನುಭಾಗರು ಕವಿಗಳೂ ಹೌದು, ವಿಕಟಕವಿಗಳೂ ಹೌದು. ಅವರ ಇತ್ತೀಚಿನ ಹಾಸ್ಯ ಲೇಖನ ಸಂಪದದಲ್ಲಿ ಪ್ರಕಟವಾಗಿತ್ತು. ಅದು ನಗೆ ನಗಾರಿಯ ಓದುಗರಿಗಾಗಿ ಇಲ್ಲಿದೆ.

ಲೋ ಸುಮಂತಾ …… ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ .

ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??. ಈ ಕೂದಲಿನ ಮೇಲೆ ಕಾಮೆಂಟರಿ ಕೇಳಿ ಕೇಳಿ ಸುಸ್ತಾಗಿದ್ದೇನೆ .ಕೆಲವೊಮ್ಮೆ ಕೊಲೆ ಮಾಡುವಷ್ಟು ಸಿಟ್ಟು ಬರುತ್ತದೆ .ಈಗ ನೀವೇ ನೋಡಿ …..

ಮೊನ್ನೆ ನಮ್ಮ ಮನೆಯ rent Agreement renew ಮಾಡುವಾಗ ಕಾರ್ಯನಿಮಿತ್ತ ಬ್ರೋಕರ್ ಬಳಿ ಹೋಗಿದ್ದೆ . ಅವನು ಅವನ ಹೊಸ Client ಗೆ " ಇಲ್ಲಿ ಮತ್ತೊಂದು plot ಖಾಲಿ ಇದೆ " ಎಂದು ಹೇಳಿ ನನ್ನ ತಲೆಯನ್ನು ನೋಡುತ್ತಾ ಕೂತರೆ ??? ಸಿಟ್ಟು ಬರುವುದಿಲ್ಲವೆ ???ನಾನೇನು ಮಾಡಲಿ ?? ಹಣೆಯ ಮೇಲೆ "Not for sale" ಎಂದು ಬೋರ್ಡ್ ಹಾಕಿ ತಿರುಗಲೇ??

ಕ್ಷೌರಕ್ಕೆಂದು ಹೋದಾಗ " ಗುರೂ … ಜೋನ್ ಅಬ್ರಾಹಂ ,ಶಾರುಕ್ ಖಾನ್ ಥರ Fomous personality ಗಳ Hair Style ಮಾಡೋ ಅಂದರೆ ಆ ಬಡ್ಡೀಮಗ " ಸಾರ್ …. Natural ಆಗಿ ನಿಮ್ಮದು ಘಜಿನಿ ಕಟ್ ಇದೆ ಇದು ಬಿಟ್ಟು ಬೇರೆ Fomous Personality ಬೇಕು ಅಂದರೆ ಗಾಂಧೀಜೀದು ಮಾಡಬಹುದು " ಅನ್ನೋದೇ ??? ಸಿಟ್ಟು ಬಂದು ಅಲ್ಲಿಂದ ಹೊರನಡೆದು ಬೇರೆ ಸೆಲೂನ್ ಗೆ ಹೋದೆ . ದೊಡ್ಡ ಕ್ಯೂ ಇತ್ತು . ಆದರೂ ನಾನೂ ಹೋಗುತ್ತಲೇ ಸೇಲೂನಿನವನು ಮೊದಲು ನಿಮಗೆ ಕಟ್ಟಿಂಗ್ ಮಾಡುತ್ತೇನೆ ಬನ್ನಿ ಸಾರ್ … ಅಂದ . ಆಯ್ತೆಂದು ಕೂತು "ಏನಪ್ಪಾ ನಂಗೆ ಯಾಕೆ First Preference ಕೊಟ್ಟೆ ಎಂದು ಕೇಳಿದರೆ ಸಾರ್ …ಅವರಿಗೆ ಕಟ್ಟಿಂಗ್ ಮಾಡ್ಲಿಕ್ಕೆ ಅರ್ಧ ಗಂಟೆ ಆಗುತ್ತೆ ನಿಮ್ಮದು ಎರಡು ನಿಮಿಷದಲ್ಲಿ ಮುಗಿಯುತ್ತಲ್ಲ … ಅದಕ್ಕೆ ಅನ್ನುವುದೇ ??? ಅಷ್ಟಲ್ಲದೆ ಕಟ್ಟಿಂಗ್ ಆದ ಮೇಲೆ ನಿತ್ಯದಂತೆ 50/- ಕೊಟ್ಟೆ . ಸಾರ್ … ನಾನು ಕೆಲಸಕ್ಕೆ ಸರಿಯಾಗಿ ಹಣ ತಗೊಳ್ಲೋನು. ಅಂಥ ಹೇಳಿ 20/- ವಾಪಾಸ್ ಕೊಡುವುದೇ ??? ಅವನ ನಿಯತ್ತಿಗೆ ಶಾಪ ಹಾಕುತ್ತ ಮನೆಗೆ ಹೋದೆ .

ಈಗ ಈ ಉದುರೋ ಕೂದಲಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ . ಅಲೋಪತಿ ,ಹೋಮಿಯೋಪತಿ , ಆಯುರ್ವೇದ ,ವಿಜ್ಞಾನ , ಹಿಮಾನಿ , ಪ್ಯಾರಾಶೂಟ್, ನವರತ್ನ ತೈಲ, ತೆಂಗಿನೆಣ್ಣೆ ,ಹರಳೆಣ್ಣೆ ,ಸೀಗೆಕಾಯಿ ಪುಡಿ , ಕ್ಲಿನಿಕ್ ಪ್ಲಸ್ , ಆಲ್ ಕ್ಲೀಯರ್ ,ಅಪ್ನಾ ಖಯಾಲ್ ರಖ್ನಾ ಅನ್ನುತ್ತಾ ಗಾರ್ನೀರ್ , ತಲೆ ಮತ್ತು ಭುಜ (Head and shoulders) , ಯೋಗ, ಧ್ಯಾನ ಇವೆಲ್ಲದರ ಪ್ರಯೋಗ ನಡೆಸಿ ಸೋತು ಹೋದೆ . ಜಪ್ಪಯ್ಯ ಅಂದರೂ ಒಂದು ಕೂದಲು ಜನ್ಮ ಪಡೆಯಲಿಲ್ಲ . ಇನ್ನು Fevicol ಹಾಕಿ ಅಂಟಿಸಿ ಕೊಳ್ಳೋದು ಮತ್ತು ಯೂರಿಯಾ ಸುಫಲಾ ದಂತಹ ರಸಗೊಬ್ಬರ ಹಾಕಿಕೊಳ್ಳುವುದು ಮಾತ್ರ ಬಾಕಿ .ಅಥವಾ ಮೋಡ ಬಿತ್ತನೆಯಂತೆ ಕೇಶ ಬಿತ್ತನೆಯನ್ನು ಸರ್ಕಾರ ಹಮ್ಮಿಕೊಳ್ಳುತ್ತದೋ ಎಂದು ಕಾದು ನೋಡುತ್ತಿದ್ದೇನೆ .

"Dude…. ನಮ್ಮ ಮನೆಯ ಹತ್ರ ಒಬ್ರು ನಾಟಿ ವೈದ್ಯರಿದ್ದಾರೆ . ಅವರು ದನದ ಜೊಲ್ಲು ತಾಗಿದರೆ ಕೂದಲು ಬೆಳೆಯುತ್ತೆ ಅಂದ್ರು" ರಂಗ ಅರುಹಿದ . ಇಡೀ ಮುಳುಗಿದವನಿಗೆ ಚಳಿ ಏನು ?? ಇದೂ ಕೂಡ ನೋಡಿಯೇ ಬಿಡೋಣ .. ಎಂದು 2 ವಾರ ಬೆಳಿಗ್ಗೆ ಬೇಗ ಎದ್ದು ಪಕ್ಕದ ಮನೆಯವರ ಕೊಟ್ಟಿಗೆಗೆ ದೌಡಾಯಿಸಿದೆ . ದನವೋ …. ಸಿಕ್ಕಿದ್ದೇ ಛಾನ್ಸು ಎಂದು ನನ್ನ ತಲೆಯನ್ನು ನೆಕ್ಕಿದ್ದೇ ನೆಕ್ಕಿದ್ದು . ಉಹೂಂ …. ಅರ್ಧ ಕೂದಲು ಬರಲಿಲ್ಲ . ಸ್ವಲ್ಪ ದಿನದ ನಂತರ ಪಕ್ಕದ ಮನೆಯ ಅಂಕಲ್ ಮನೆಗೆ ಕರೆದರು . ಹೋದ ತಕ್ಷಣ ಕಾಫಿ ಕೊಟ್ಟು . "ಏನ್ ತಲೆ ಸಾರ್ ನಿಮ್ಮದು …. ಅಂದರು . ನಾನು ಇವರೆಲ್ಲೋ ನನ್ನ ಲೇಖನಗಳನ್ನು ಓದಿ ಮೆಚ್ಚಿರಬೇಕು ಎಂದುಕೊಂಡು ಧನ್ಯವಾದ ಅನ್ನುವುದಕ್ಕೆ ಮೊದಲೇ …. ಒಂದು ವಾರದಿಂದ ನಮ್ಮ ಹಸು ಒಂದೂವರೆ ಲೀಟರ್ ಹಾಲು ಹೆಚ್ಚಿಗೆ ಕರೀತಾ ಇದೆ ಎನ್ನುವುದೇ ??? ಬಿಸಿ ಇಲ್ಲದಿದ್ದರೂ ಕಾಫಿ ಲೋಟ "ತಡಾಲ್"… ಎಂದು ಕೆಳಗೆ ಬಿತ್ತು.

"ಮಚ್ಚಾ .. ಮಚ್ಚಾ ….ಮೊನ್ನೆ ನಾನು ಕುಂದಾಪುರಕ್ಕೆ ನಮ್ಮಜ್ಜಿ ಮನೆಗೆ ಹೋಗಿದ್ದೆ . ಕರಡಿ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಂಡರೆ ಕೂದಲು ಬರುತ್ತೆ ಅಂಥ ಅಜ್ಜಿ ಹೇಳಿದ್ರು " ಸೇಟು ಫರ್ಮಾಯಿಸಿದ. ಲೋ ….ಏನೋ ?? ಆನೆ ಕೈಯಲ್ಲಿ ಕೋಲೆ ಬಸವನ ಕೈಯಲ್ಲಿ ಆಶೀರ್ವಾದ ಮಾಡಿಸ್ಕೊಳ್ಳೋದು ಕೇಳಿದ್ದೀನಿ ಇದೇನೋ ಕರಡಿ ಕೈಯಲ್ಲಿ ?? ಮತ್ತೆ ಆಮೇಲೆ ಕರಡಿ ಥರಾ ಮೈತುಂಬಾ ಕೂದಲು ಬಂದ್ರೆ ಕಷ್ಟ ಎಂದೆ . ಏಯ್ ಗುಬಾಲು….. ಇಲ್ಲಿವರ್ಗೂ ಯಾವ್ದಾದ್ರೂ ಬೋಳು ತಲೆ ಕರಡಿಯನ್ನ ನೋಡಿದ್ದೀಯಾ ??? ಮತ್ತೆ ಅದು ಆಶೀರ್ವಾದ ಮಾಡೋವಾಗ ತಲೆ ಮೇಲೆ ಕೈ ಇಡುತ್ತೆ ತಾನೆ ?? ಅಲ್ಲಿ ಮಾತ್ರ ಕೂದಲು ಬರುತ್ತೆ ಅಂಥ ಹೇಳಿದ . ಸರಿ … ಇರಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಧಾರ ಅಂತೆ . ಹಾಗೆಯೇ ಊರಿಗೆ ಬಂದ ಕರಡಿ ಕುಣಿಸುವವನಿಗೆ ನೂರು ರುಪಾಯಿ ಕೊಟ್ಟು "ನೋಡು ಈ ಆಶೀರ್ವಾದ ತಲೆಗೆ ಮಾತ್ರ ಅಂಥ ನಿನ್ನ ಕರಡಿಗೆ ಹೇಳು " ಎಂದು ತಾಕೀತು ಮಾಡಿ ಆಶೀರ್ವಾದ ಮಾಡಿಸಿಕೊಂಡೆ.ಕರಡಿ ತಲೆ ಮೇಲೆ ಕೂದಲು ಬಂತೋ ಇಲ್ಲವೊ ತಿಳಿಯದು ನನ್ನ ತಲೆ ಮೇಲೆ ವಾರ ಕಳೆದರೂ ಕೂದಲು ಚಿಗುರಲಿಲ್ಲ .

ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ "ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ…. ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ ….. ಎಂದು .

ಟಾಕು ಟೀಕು ತಾರಾನಾಥ

13 ಮಾರ್ಚ್

ಇಂಜಿನಿಯರಿಂಗ್ ಓದಿಕೊಳ್ಳುತ್ತ ತನ್ನ ಓರಗೆಯ ಗೆಳೆಯರನ್ನು ಕೂಡಿಕೊಂಡು ‘ಸಡಗರ’ ಎಂಬ ಸಣ್ಣದೊಂದು ಮಾಸಪತ್ರಿಕೆಯನ್ನು ಕಳೆದ ಒಂದು ವರ್ಷದಿಂದ ATgAAAB1OtHeNNbJAjB6kEYZkQx1sI6fRkj7Z_AEdZaDUj-PrbID2cxZkt_B3jDu_s8uV9cazNPsYx4g5-ifFW-aw6gkAJtU9VA_OqFoXWvKxVaBRnb342R7bVptRw.jpg ನಡೆಸುತ್ತಿರುವವರು ಸುಪ್ರೀತ್.ಕೆ.ಎಸ್. ಹದಿಹರೆಯದ ಹುಮ್ಮಸ್ಸು, ಹಸಿಯಾದ ಕ್ರಿಯಾ ಶೀಲತೆ ಪತ್ರಿಕೆಯ ಪ್ರತಿ ವಿಭಾಗದಲ್ಲೂ ಎದ್ದು ಕಾಣುತ್ತದೆ. ‘ಸಡಗರ’ಪತ್ರಿಕೆಯಲ್ಲಿ ಪ್ರಕಟವಾಗುವ ಅವರ ಹಾಸ್ಯ ಬರಹಗಳನ್ನು ನಗೆ ನಗಾರಿ ಡಾಟ್ ಕಾಮ್ ‍ನೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ಇದು ಈ ಅಂಕಣಕಾರರ ಐದನೆಯ ಲೇಖನ.
ಹಿಂದಿನ ಲೇಖನ ಇಲ್ಲಿದೆ.

ಆಗಿನ ನಮ್ಮ ಬದುಕಿನ ಸ್ಥಿತಿಯೇ ವಿಚಿತ್ರವಾಗಿರುತ್ತಿತ್ತು. ನಾಡು ಹೋಗು ಎನ್ನುವ ಹಾಗೂ ಕಾಡು ಬಾ ಎನ್ನುವ ಸ್ಥಿತಿಯಂಥದ್ದೇ. ಆದರೆ ಇಲ್ಲಿನ ವ್ಯತ್ಯಾಸ ಅಂದರೆ ನಾವು ಬಂದದ್ದು ನಮ್ಮೂರುಗಳಿಂದ ಈ ಮಾಯಾನಗರಿಗೆ. ಊರಿನಲ್ಲಿ ಉಂಡುಟ್ಟು ಕುಣಿದಾಡಿದ ಮನೆ ಬಿಟ್ಟು ಅಬ್ಬೇಪಾರಿಗಳಂತೆ ಕೆಲಸ ಅರಸಿಕೊಂಡು ಈ ಊರು ಸೇರಿಕೊಂಡಿದ್ದೆವು. ನಮ್ಮಂತಹ ನಾಲ್ಕಾರು ಅಬ್ಬೇಪಾರಿಗಳು ಸೇರಿ ಈ ಭಯಂಕರ ರಾಕ್ಷಸನಂತಹ ನಗರಿಯಲ್ಲಿ ಪುಟ್ಟದೊಂದು ರೂಮು ಮಾಡಿಕೊಂಡು, ಮನೆಯಿಂದ ತಂದಿದ್ದ ದುಡ್ಡನ್ನು ದಿನಕ್ಕೆರಡು ಬಾರಿ ಎಣಿಸಿಕೊಂಡು ಪಂಚೆಯ ಒಳಗಿನ ಅಂಡರ್ ವೇರಿನ ಪದರಗಳಲ್ಲಿಟ್ಟುಕೊಂಡು ಇದಕ್ಕಿಂತ ಸೇಫ್ ಜಾಗವನ್ನು ಕೊಡುವ ಗ್ಯಾರಂಟಿಯನ್ನು ಆ ಸ್ವಿಸ್ ಬ್ಯಾಂಕಿನವರೂ ಕೊಡಲಾರರು ಎಂದುಕೊಳ್ಳುತ್ತಿದ್ದೆವು!

ಹೆಸರಿಗೆ ನಮ್ಮ ದು ಒಂದೇ ಸೂರು. ಆದರೆ ಅದರಡಿ ಬದುಕುವ ನಮ್ಮಲ್ಲಿ ಚೂರೇ ಚೂರು ರುಚಿ ನೋಡಲಾದರೂ ಸಾಕೆನ್ನುವಷ್ಟೂ ಸಹ ಸಾಮ್ಯತೆಗಳಿರಲಿಲ್ಲ. ಒಬ್ಬೊಬ್ಬನದು ಒಂದೊಂದು ದಿಕ್ಕು. ಒಬ್ಬೊಬ್ಬನದು ಒಂದೊಂದು ಜಗತ್ತು, ಇತರರಿಗೆ ಅದು ಆಪತ್ತಾದರೂ ಅವನಿಗೆ ಅದೇ ಮಹತ್ತು. ಇಂತಹ ಜೀವನ ಶೈಲಿಯನ್ನು ಅಖಂಡ ಐದು ವರ್ಷಗಳ ಕಾಲ ಜೀವಿಸಿರುವ ನನಗೆ ಇದನ್ನು ಕಾಣದ ಜಗತ್ತಿನ ಜನರು ಮಾಡಿರುವ ಅನೇಕ ನುಡಿಗಟ್ಟುಗಳು ಗಮ್ಮತ್ತಿನವಾಗಿ ಕಾಣಿಸುತ್ತವೆ. ‘ಎರಡು ದೇಹ ಒಂದೇ ಜೀವ’ ಅಂತ ಪ್ರೇಮಿಗಳನ್ನು ಕರೆಯುತ್ತಾರೆ. ಈ ನುಡಿಗಟ್ಟನ್ನೇ ಸ್ವಲ್ಪ ತಿರುಚಿ, ಅಲ್ಲಿ ಇಲ್ಲಿ ಕೆರೆದು, ಕೊಂಚ ಹರಿದು ನಮ್ಮ ಆ ದಿನಗಳ ಬದುಕಿಗೆ ಅನ್ವಯಿಸುವುದಾದರೆ, ‘ ಒಂದೇ ದೇಹ, ನಾಲ್ಕು ಜೀವ, ನಾಲ್ಕು ದಿಕ್ಕು’ ಎನ್ನಬಹುದು. ಒಬ್ಬ ದಢೂತಿ ಮಾರ್ವಾಡಿಯನ್ನು ಮಣ್ಣು ಮಾಡಲು ಬೇಕಾದಷ್ಟು ಜಾಗದಲ್ಲಿ ಎಬ್ಬಿಸಿದ ಒಂದು ಬಾಗಿಲಿನ, ಅರ್ಧ ಕಿಟಕಿಯ ರೂಮಿನಲ್ಲಿ ನಾವು ನಾಲ್ಕು ಮಂದಿ ಇರುತ್ತಿದ್ದೆವು. ರಾತ್ರಿ ಎಲ್ಲರೂ ಮಲಗಿದಾಗ ನಮ್ಮನ್ನು ಯಾರಾದರೂ ದೂರದಿಂದ ನೋಡಿದರೇ ಅಲ್ಲಿರುವುದು ಒಂದೇ ದೇಹವೆನ್ನಬೇಕು ಹಾಗೆ ಇಬ್ಬರನ್ನೊಬ್ಬರು ಒತ್ತಿಕೊಂಡು, ಒಬ್ಬನ ಕಾಲೊಳಗೆ ಮತ್ತೊಬ್ಬ ಹೊಸೆದುಕೊಂಡು ಬಿದ್ದುಕೊಂಡಿರುತ್ತಿದ್ದೆವು. ರಾತ್ರಿಗಳಲ್ಲಿ ಹೀಗೆ ನಾಲ್ಕು ದೇಹಗಳು ಒಂದೇ ಎನ್ನುವಂತೆ ಬೆಸೆದು, ಹೊಸೆದು, ಮಸೆದುಕೊಳ್ಳುತ್ತಿದ್ದರೂ ಒಮ್ಮೆ ಬೆಳಗಿನ ಅಲಾರಾಂ ಕೂಗಿ (ಈ ನಗರಿಯಲ್ಲಿ ಕೂಗಲಿಕ್ಕೆ ಕೋಳಿಗಳಾದರೂ ಎಲ್ಲಿವೆ?)ದರೆ ಸಾಕು ಒಂದೊಂದು ಜೀವ ಒಂದೊಂದು ದಿಕ್ಕಿನೆಡೆಗೆ ಮುಖ ಮಾಡಿರುವುದು, ಒಬ್ಬೊಬ್ಬರೂ ಒಂದೊಂದು ಧೃವಗಳಾಗಿರುವುದು ಗೋಚರವಾಗುತ್ತದೆ.

ಇದೊಂದು ಕೆಟ್ಟ ಅಭ್ಯಾಸ ಬೆಳೆದು ಬಿಟ್ಟಿದೆ ನೋಡಿ, ಹೇಳಬೇಕಾದ ಸಂಗತಿಗೆ ಸವಿಸ್ತಾರವಾದ ಪೀಠಿಕೆ ಹಾಕುತ್ತಾ ವಿಷಯವನ್ನೇ ಮರೆತುಬಿಡುವ ಚಾಳಿ. ನಾನು ಹೇಳ ಹೊರಟದ್ದು ಐದು ವರ್ಷದ ನಮ್ಮ ನಾಲ್ವರ ಗುಂಪಿನಲ್ಲಿದ್ದ ನಮ್ಮ ತಾರಾನಾಥನ ಬಗ್ಗೆ, ಆದರೆ ಪೀಠೆಕೆಯೇ ಇಲ್ಲಿಯವರೆಗೆ ಕಾಲು ಚಾಚಿಕೊಂಡು ಬಿಟ್ಟಿತು. ಸರಿ, ಇನ್ನು ತಾರಾನಾಥನ ವಿಷಯಕ್ಕೆ ಬರೋಣ.

ತಾರಾನಾಥ ಅತ್ತ ಎತ್ತರದ ತೆಂಗಿನ ಮರವೂ ಅಲ್ಲ ಇತ್ತ ಗಿಡ್ಡಗಿನ ತುಂಬೇ ಗಿಡವೂ ಅಲ್ಲ. ಆತ ಬಣ್ಣ ಅತ್ತಕಡೆ ಗೋಡೆ ಮೇಲಿನ ಸುಣ್ಣವೂ ಅಲ್ಲ, ಇತ್ತ ಬಚ್ಚಲು ಮನೆಯ ಇದ್ದಿಲೂ ಅಲ್ಲ. ಆತನ ಮುಖ ಲಕ್ಷಣ ಅತ್ತ ಗಂಡಸಿನ ಹಾಗೂ ಇರಲಿಲ್ಲ, ಇತ್ತ ಹೆಣ್ಣಿಗನ ಹಾಗೂ ಇರಲಿಲ್ಲ. ಆತನ ಕೂದಲು ಅತ್ತ ನೀಳವಾಗಿಯೂ ಇರಲಿಲ್ಲ, ಇತ್ತ ವಿರಳವಾಗಿಯೂ ಇರಲಿಲ್ಲ. ಅವನ ಮೂಗು… ಇದೇನಿದು ಅತ್ತ ಹಾಗೂ ಇರಲಿಲ್ಲ, ಇತ್ತ ಹೀಗೂ ಇರಲಿಲ್ಲ ಅಂತ ಬರೀ ‘ಇಲ್ಲ’ಗಳನ್ನೇ ಪಟ್ಟಿ ಮಾಡುತ್ತಿರುವಿರಲ್ಲಾ ಎನ್ನುವಿರಾ? ಏನು ಮಾಡುವುದು ದೇವರನ್ನು ವಿವರಿಸುವಾಗ ನನ್ನಪ್ಪ ಅತನು ಅದೂ ಅಲ್ಲ, ಇದೂ ಅಲ್ಲ ಅಂತ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ನನಗೆ ಈ ಅಭ್ಯಾಸ ಹತ್ತಿಕೊಂಡಿ ಬಿಟ್ಟಿದೆ. ಇರಲಿ, ತಾರಾನಾಥ ಎಂಬ ಸಾಕಷ್ಟು ಉದ್ದವಾದ ಹೆಸರಿಗೆ ನಾವು ನಾಲ್ಕು ಅಕ್ಷರ ಹೆಚ್ಚಾಗಿ ಸೇರಿಸಿದ್ದೆವು. ಅವನನ್ನು ನಾವು ಟಾಕು ಟೀಕು ತಾರಾನಾಥ ಎಂದು ಕರೆಯುತ್ತಿದ್ದೆವು. ಅದಕ್ಕೆ ಕಾರಣ ಆತನ ಒಪ್ಪ ಓರಣ, ನಮಗೆ ಸುಸ್ತು ಹೊಡೆಸುತ್ತಿದ್ದ ಆತನ ಶಿಸ್ತು.

ಮನೆಯೆಂಬ ಸೇನಾ ಶಿಬಿರದಲ್ಲಿ ಸೇನಾಧಿಪತಿಯಂತಹ ಅಪ್ಪಂದಿರು ಇದ್ದಾಗಲೇ ನಾನು ಹಾಗೂ ನಮ್ಮ ನಾಲ್ವರ ಗುಂಪಿನ ಮತ್ತಿಬ್ಬರು ‘ರೂಂ ಪಾಠಿ’ಗಳು (ಸಹಪಾಠಿಗಳು ಇದ್ದಂತೆ) ಶಿಸ್ತು ಕಲಿಯದವರು ನಾವು. ಹಾಕಿಕೊಳ್ಳುವ ಬಟ್ಟೆ, ನಮ್ಮ ಊಟ, ತಿಂಡಿ, ಚಹಾ, ಕೆಲಸ, ಓದು, ಪುಸ್ತಕ-ಬ್ಯಾಗು ಯಾವುದನ್ನೂ ಒಪ್ಪವಾಗಿಟ್ಟುಕೊಳ್ಳದ ನಾವು ಹುಟ್ಟುತ್ತಲೇ ಬಂಡಾಯ ಎದ್ದವರು. ವ್ಯವಸ್ಥಿತವಾಗಿದ್ದ ಯಾವುದನ್ನು ಕಂಡರೂ ನಮ್ಮ ನೆಮ್ಮದಿ ಹಾಳಾಗಿ ಹೋಗುತ್ತಿತ್ತು. ಓರಣವಾಗಿ ಜೋಡಿಸಿಟ್ಟ ಸಾಮಾನುಗಳನ್ನೆಲ್ಲಾ ಕೆದರಿ, ಮನೆಯ ತುಂಬೆಲ್ಲಾ ಹರಡಿ ಅಮ್ಮ ಗಾಬರಿಯಾಗುವಂತೆ ಮಾಡಿದಾಗಲೇ ನಮ್ಮ ಮನಸ್ಸಿಗೆ ತೃಪ್ತಿ, ಏನನ್ನೋ ಸಾಧಿಸಿದ ಸಾರ್ಥಕತೆ. ನಮ್ಮ ಪೂರ್ವಾಶ್ರಮದ ಗುಣಲಕ್ಷಣಗಳು ಹೀಗಿರುವಾಗ ನಮಗೆ ಟಾಕು-ಟೀಕು ತಾರಾನಾಥನಂತಹ ಜೀವಿಯನ್ನು ನೋಡಿ ನಮ್ಮ ಕಣ್ಣುಗಳ ಮೇಲೇ ಸಂಶಯ ಬಂದಿತ್ತು.

ಆಗಿನ್ನೂ ನಮ್ಮ ಹತ್ತೂ ಬೈ ಹತ್ತರ ರೂಮಿನಲ್ಲಿ ಮೂರು ಮಂದಿ ಇದ್ದೆವು. ಎಂದಾದರೊಮ್ಮೆ ಪರಮ ಅವ್ಯವಸ್ಥೆಯ ಗೂಡಾದ ಊರ ಮೀನು ಮಾರುಕಟ್ಟೆಯ ಮೇಲೆ ಆ ದಯಾಮಯಿಯಾದ ದೇವರಿಗೆ ಸಡನ್ನಾದ ಪ್ರೀತಿ ಬಂದು ಅದಕ್ಕೆ ಓಡಾಡುವ ಚೈತನ್ಯ ಕೊಟ್ಟು, ನೋಡಲು ಎರಡು ಕಣ್ಣು ಕೊಟ್ಟು ನಮ್ಮ ರೂಮು ನೋಡಲು ಕಳುಹಿಸಿದರೆ ಅದು ನಮ್ಮ ರೂಮಿನ ಅವವ್ಯವಸ್ಥೆ, ಗಲೀಜು ನೋಡಿ ನಾಚಿ ಓಡಿಬಿಡುತ್ತಿತ್ತೇನೊ! ಹೀಗಿರುವಾಗ ನಮ್ಮ ಈ ಗೂಡಿಗೆ ಸೇರ್ಪಡೆಯಾದವನು ತಾರಾನಾಥ. ನಮ್ಮ ರೂಮಿನೊಳಕ್ಕೆ ಕಾಲಿಟ್ಟ ಕ್ಷಣವೇ ಆತ ಕಣ್ಣು ಕತ್ತಲೆಬಂದು ಬಿದ್ದುಬಿಟ್ಟ. ಸ್ವಲ್ಪ ಸಮಯ ಕಳೆದು ಸುಧಾರಿಸಿಕೊಂಡು ಕಣ್ಣುಬಿಟ್ಟು ನೋಡಿದವನಿಗೆ ನಮ್ಮ ರೂಮಿನ ವಿರಾಟ್ ರೂಪ ದರ್ಶನವಾಗಿ ಕಣ್ಣಲ್ಲಿ ರಕ್ತ ಬಂದಂತಾಯಿತು. ಆದರೂ ಅವನ ಶಕ್ತಿಯನ್ನು ಮೆಚ್ಚಲೇ ಬೇಕು, ಆ ನಯನ ಕಠೋರವಾದ ವಿರಾಟ್ ರೂಪದ ದರ್ಶನವನ್ನು ಸಹಿಸಿಕೊಂಡು ಯಾವ ಮುನ್ಸೂಚನೆಯೂ ಇಲ್ಲದೆ ನಾವು ಮೂರು ಜನರನ್ನೂ ರೂಮಿನಿಂದ ಹೊರಕ್ಕೆ ಅಟ್ಟಿ ರೂಮಿನ ಬಾಗಿಲನ್ನು ಒಳಗಿನಿಂದ ಜಡಿದುಕೊಂಡ.

ಒಂದು ತಾಸಾದರೂ ಮಹಾನುಭಾವ ಬಾಗಿಲು ತೆರೆಯಲೇ ಇಲ್ಲ. ನಮಗೆಲ್ಲಾ ಈತ ಒಳಗೇನು ಮಾಡಿಕೊಳ್ಳುತ್ತಾನೋ ಎನ್ನುವ ಭಯ. ಆದರೆ ಏನನ್ನೂ ಮಾಡಲಾಗದ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಾಗಿರಲಿಲ್ಲ. ಸರಿಯಾಗಿ ಎರಡು ತಾಸು ಕಳೇದ ನಂತರ ಬಾಗಿಲು ತೆರೆದ. ಗಾಬರಿಯಿಂದ ರೂಮಿನೊಳಕ್ಕೆ ನಾವು ನುಗ್ಗಿದೆವು. ಈಗ ರೂಮನ್ನು ನೋಡಿ ಮೂರ್ಛೆ ಬೀಳಬೇಕಾದ ಸರದಿ ನಮ್ಮದಾಗಿತ್ತು. ಅಥವಾ ಈಗಾಗಲೇ ನಾವು ಹೃದಯಾಘಾತವಾಗಿ ಸತ್ತು ನೇರವಾಗಿ ಬಂದು ಸ್ವರ್ಗವನ್ನು ನೋಡುತ್ತಿದ್ದೇವೇನೊ ಎನ್ನುವ ಭ್ರಮೆಯಾಯಿತು. ಕೇವಲ ಎರಡು ತಾಸಿನ ಕೆಳಗೆ ಅಪ್ಪಟ ಕೊಳಗೇರಿಯಂತಿದ್ದ ನಮ್ಮ ರೂಮು ಸಾಕ್ಷಾತ್ ಇಂದ್ರದೇವನ ಅಮರಾವತಿಯಂತಾಗಿಬಿಟ್ಟಿತ್ತು! ನಮ್ಮ ಈ ಹೊಸ ‘ಅಮರಾವತಿಯ’ ಇಂದ್ರ ತಾರಾನಾಥ ಬೆಳ್ಳಿ ಬಣ್ಣದ ಬನಿಯನ್ನು, ಅದಕ್ಕೆ ಬಿಳುಪಿನಲ್ಲಿ ಸ್ಪರ್ಧೆ ಒಡ್ಡುವ ಪಂಚೆ ಸುತ್ತಿಕೊಂಡು ನಮ್ಮೆದುರು ನಿಂತಿದ್ದ.

ಆಮೇಲಿನ ಒಂದು ವಾರ ನಾವು ಈ ‘ಅನ್ಯಗ್ರಹ ಜೀವಿ’ಯ ಚರ್ಯೆಗಳನ್ನು ಕುತೂಹಲದಿಂದ ಗಮನಿಸುವುದರಲ್ಲೇ ಕಳೆದುಬಿಟ್ಟೆವು. ಬೆಳಿಗ್ಗೆ ಎಂದೂ ಸೂರ್ಯನಿಗಿಂತ ಮುಂಚೆ ಏಳುವ ಅಪರಾಧ ಮಾಡದ ನಮಗೆ ಬೆಳಿಗ್ಗೆ ಮೂರು ಘಂಟೆಗೇ ಈತ ಇಟ್ಟ ಅಲರಾಮಿನ ಬಡಿತ ಮರಣ ಮೃದಂಗವಾಗಿ ಕೇಳುತ್ತಿತ್ತು. ಮೂರು ಗಂಟೆಗೆ ಒಂದು ಸೆಕೆಂಡು ಆಚೆ, ಒಂದು ಸೆಕೆಂಡು ಈಚೆ ಇಲ್ಲ ಎನ್ನುವಂತೆ ಏಳುತ್ತಿದ್ದ ತಾರಾನಾಥ ನೇರವಾಗಿ ನಮ್ಮ ರೂಮಿನ ಸ್ನಾನದ ಸೆಕ್ಷನ್‌ಗೆ ನಡೆಯುತ್ತಿದ್ದ. ಅಲ್ಲಿ ಹಿಂದಿನ ರಾತ್ರಿಯೇ ಭರ್ತಿ ಬಕೆಟ್ ನೀರು ತುಂಬಿಸಿಟ್ಟಿರುತ್ತಿದ್ದ, ಗರಿಗರಿಯಾದ ಟವೆಲ್ಲು, ಸ್ನಾನವಾದ ನಂತರ ಹಾಕಿಕೊಳ್ಳಬೇಕಾದ ಬನಿಯನ್ನು ಲುಂಗಿ, ಅಂಡರ್ವೇರುಗಳನ್ನು ಹಿಂದಿನ ರಾತ್ರಿಯೇ ಜೋಡಿಸಿಟ್ಟಿರುತ್ತಿದ್ದ. ಎಚ್ಚರವಾದ ಕೂಡಲೇ ರೋಬೊಟ್‌ನ ಹಾಗೆ ಸ್ನಾನದ ಸೆಕ್ಷನ್‌ಗೆ ಹೋಗಿ ಸ್ನಾನ ಆರಂಭಿಸಿಬಿಡುತ್ತಿದ್ದ. ನಿಖರವಾಗಿ ಎರಡು ವರೆ ಚೊಂಬು ನೀರು ಮೈ ಮೇಲೆ ಬಿದ್ದ ಕೂಡಲೆ ಸ್ವಲ್ಪ ಕಾಲ ಮೌನ. ಆಗ ಆತನ ಮೈಗೆ ಸೋಪು ತಿಕ್ಕಿಕೊಳ್ಳುತ್ತಿದ್ದ. ಸರಿಯಾಗಿ ಎರಡು ನಿಮಿಷದ ನಂತರ ಮತ್ತೆ ನಾಲ್ಕು ಚೊಂಬು ನೀರು ಮೈ ಮೇಲೆ ಸುರಿದ ಸದ್ದು. ಮತ್ತೆ ಮೌನ. ಆಗ ಮತ್ತೊಮ್ಮೆ ಆತ ಮೈಗೆ ಸೋಪು ಹಚ್ಚುತ್ತಿದ್ದಾನೆ ಎಂದು ತಿಳಿಯಬೇಕು. ಇದಾದ ನಂತರ ಆರು ಚೊಂಬು ನೀರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ನಿಮಿಷವಾಗುತ್ತಿತ್ತು. ಆತ ಹಿಂದಿನ ದಿನ ತೊಟ್ಟುಕೊಂಡಿದ್ದ ಬನೀನು, ಪಂಚೆಯನ್ನು ಅದೇ ಬಕೆಟ್ಟಿನಲ್ಲಿ ನೆನೆ ಹಾಕಿ ಮೊದಲೇ ಜೋಡಿಸಿಟ್ಟುಕೊಂಡಿದ್ದ ಬನೀನು, ಪಂಚೆ ತೊಟ್ಟುಕೊಂಡು ಹೊರಬರುತ್ತಿದ್ದ.

ಸ್ನಾನ ಮುಗಿಸಿದ ನಂತರ ಹಿಂದಿನ ರಾತ್ರಿಯೇ ತುಂಬಿಟ್ಟುಕೊಂಡ ಬಿಸ್ಲೇರಿ ಬಾಟಲಿಯಲ್ಲಿ ಕಾಲು ಭಾಗದಷ್ಟು ನೀರನ್ನು ಕುಡಿದು ರೂಮಿನ ಒಂದು ಮೂಲೆಯಲ್ಲಿದ್ದ ದೇವರ ಫೋಟೊ ಮುಂದೆ ಕುಳಿತುಕೊಳ್ಳುತ್ತಿದ್ದ. ಆಮೇಲಿ ಒಂದು ತಾಸು ಅಖಂಡವಾದ ಪೂಜೆ. ಅವನ ಭಕ್ತಿ, ಭಾವಕ್ಕಿಂತಲೂ ದೇವರ ಮೂಲೆಯನ್ನು ಒಪ್ಪವಾಗಿಸುತ್ತಿದ್ದ ರೀತಿ, ಊದಿನಬತ್ತಿ ಹಚ್ಚಿಡುವ ಶೈಲಿ, ಒಂದು ಹನಿ ಎಣ್ಣೆ ನೆಲಕ್ಕೆ ಬೀಳದ ಹಾಗೆ ಹಚ್ಚಿಡುತ್ತಿದ್ದ ದೀಪ, ಹಿಂದಿನ ರಾತ್ರಿ ಮಲಗುವ ಮುನ್ನವೇ ಪಕ್ಕದ ಮನೆಯ ಗಿಡದಿಂದ ಕಿತ್ತು ತಂಡಿಟ್ಟುಕೊಂಡ ದಾಸವಾಳದ ಅರೆಬಿರಿದ ಮೊಗ್ಗು – ಇವನ್ನೆಲ್ಲಾ ನೋಡಿಯೇ ದೇವರು ಪ್ರತ್ಯಕ್ಷವಾಗಿಬಿಡಬೇಕು! ಒಂದು ತಾಸಿನ ಪೂಜೆಯೆಂದರೆ ಕರೆಕ್ಟಾಗಿ ಒಂದೇ ತಾಸು. ಅನಂತರ ಇನ್ನೊಂದು ಐದು ನಿಮಿಷ ಇರಯ್ಯಾ ಅಂತ ಸಾಕ್ಷಾತ್ ಆ ಆಂಜನೇಯನೇ ಹೇಳಿದರೂ ಈತ ನಿಲ್ಲುವುದಿಲ್ಲ. ನೇರವಾಗಿ ಬಚ್ಚಲಿಗೆ ಹೋಗಿ ನೆನೆಸಿಟ್ಟಿದ್ದ ಬಟ್ಟೆ ಒಗೆದು ರೂಮಿನ ಹೊರಗೆ ಒಣಗಲು ಹರವಿ ಚಪ್ಪಲಿ ಮೆಟ್ಟಿ ಹೊರಗೆ ವಾಕಿಂಗ್ ಹೊರಟು ಬಿಡುತ್ತಿದ್ದ. ರೂಮಿನ ಬಾಗಿಲ ಬಳಿ ಆತ ಚಪ್ಪಲಿಬಿಡುವ ಸದ್ದು ಕೇಳಿತೆಂದರೆ ಸಮಯ ಐದು ಗಂಟೆಯಾಯಿತೆಂದೇ ಅರ್ಥ!

ವಾಕಿನಿಂದ ಹಿಂದಿರುಗಿ ಬರುವಾಗ ಪಕ್ಕದ ಮನೆಯ ಎದುರು ಬಿದ್ದಿರುತ್ತಿದ್ದ ದಿನಪತ್ರಿಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಿದ್ದ. ಸರಿಯಾಗಿ ನಲವತ್ತೈದು ನಿಮಿಷ ಪೇಪರ್ ಓದಿ ಅದನ್ನು ಮತ್ತೆ ಅದರ ಸ್ವಸ್ಥಾನದಲ್ಲಿಯೇ ಎಸೆದು ಬಂದು ಈತ ಕೂರುವುದಕ್ಕೆ ಸರಿಯಾಗಿ ಪಕ್ಕದ ಮನೆಯವರು ಬಾಗಿಲು ತೆರೆಯುತ್ತಿದ್ದರು.

ಇದದ್ದು ಒಂದೇ ಕೋಣೆಯಾದರೂ ಅದರಲ್ಲಿ ನಾಲ್ಕು ಕಂಪಾರ್ಟ್ ಮೆಂಟುಗಳನ್ನಾಗಿ ಮಾಡಿಕೊಂಡು ನಾವು ನಾಲ್ಕು ಮಂದಿ ನಮ್ಮ ಸಾಮಾನು ಸರಂಜಾಮುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆವು. ನಮ್ಮ ಶಿಸ್ತೋ, ಆ ದೇವರಿಗೇ ಪ್ರೀತಿ. ಲಾಠಿಚಾರ್ಜ್ ಆದಾಗ ಚದುರಿದ ಜನರ ಗುಂಪಿನಂತೆ ನಮ್ಮ ಚೀಲಗಳು, ಅಂಗಿ, ಬನಿಯನ್ನು, ಪ್ಯಾಂಟು, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಆದರೆ ಆ ಒಂದು ಮೂಲೆ ಮಾತ್ರ ನಿಗಿನಿಗಿ ಹೊಳೆಯುವಷ್ಟು ಚೊಕ್ಕಟವಾಗಿರುತ್ತಿತ್ತು. ಅದು ತಾರಾನಾಥನದು ಅಂತ ಪ್ರತ್ಯೇಕವಾಗಿ ಹೇಳಬೇಕೆ? ಆರುಗಂಟೆಗೆ ತನ್ನ ಸ್ಥಳವನ್ನು ಸ್ವಚ್ಛ ಮಾಡಲು ಕೂರುತ್ತಿದ್ದ ತಾರಾನಾಥ ಏಕಾಗ್ರ ಚಿತ್ತನಾಗಿ, ತಪಸ್ಸು ಮಾಡುವ ಯೋಗಿಯ ಹಾಗೆ ಸುಮಾರು ಒಂದು ತಾಸು ಅದರಲ್ಲೇ ತಲ್ಲೀನನಾಗುತ್ತಿದ್ದ. ಹಿಂದಿನ ದಿನವಷ್ಟೇ ಜೋಡಿಸಿಟ್ಟ ಬಟ್ಟೆ, ಪುಸ್ತಕ, ಸೂಟಕೇಸುಗಳನ್ನು ಮತ್ತೆ ಜರುಗಿಸಿ ಧೂಳು ಒರೆಸಿ, ನೀಟಾಗಿ ಜೋಡಿಸಿಡುತ್ತಿದ್ದ. ಆತ ಆ ದೈನಂದಿನ ಕ್ರಿಯೆ ಮುಗಿಸಿ ಮುಖ ಕೈಕಾಲು ತೊಳೆದು ನಮ್ಮನ್ನು ನಿದ್ರಾಲೋಕದಲ್ಲಿ ಮುಳುಗಿ ತೇಲಿ ಓಲಾಡುತ್ತಿದ್ದ ನಾವು ಮೂರು ಮಂದಿಯನ್ನು ಎಬ್ಬಿಸಲು ಆರಂಭಿಸುತ್ತಿದ್ದ. ಆತ ನಮ್ಮನ್ನು ಏಳಿಸಲು ಬಳಸುತ್ತಿದ್ದ ವಿಧಾನವೂ ಬಲೇ ಮಜವೆನಿಸುವಂಥದ್ದು. ಮೂರ್ನಾಲ್ಕು ಸಲ ‘ಎದ್ದೇಳ್ರೋ ಬೆಳಕಾಯ್ತು…’ ಅನ್ನುತ್ತಿದ್ದ ಸಮಯ ಇನ್ನೂ ಏಳೇ ಗಂಟೆ ಆಗಿದ್ದರೂ ‘ಎಂಟುಗಂಟೆಯಾಯ್ತು, ಒಂಭತ್ತು ಗಂಟೆಯಾಯ್ತು’ ಅಂತ ಹೆದರಿಸುತ್ತಿದ್ದ ಮೊದ ಮೊದಲು ಆತನ ಈ ತಂತ್ರಕ್ಕೆ ಬಲಿಬಿದ್ದು ನಾವು ಎದ್ದು ಬಿದ್ದು ಹೊರಡಲು ಸಿದ್ಧರಾಗುತ್ತಿದ್ದೆವು. ನಂತರದ ದಿನಗಳಲ್ಲಿ ಆತನ ಉಪಾಯ ತಿಳಿದು ಯಾವ ಭಯವೂ ಇಲ್ಲದೆ ಮಲಗಿರುತ್ತಿದ್ದೆವು. ಆಗ ಆತ ದಬದಬನೆ ಸದ್ದು ಮಾಡುತ್ತಾ ನಮ್ಮ ಕಿವಿಗಳಿಗೆ ಮರಣ ಮೃದಂಗದ ದನಿ ಕೇಳಿಸುವಂತೆ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ಧಡಾರನೆ ಬಾಗಿಲು ಕಿಟಕಿ ಘರ್ಷಿಸಿ ‘ಕುಂಭಕರ್ಣ’ರನ್ನು ಏಳಿಸಲು ಪ್ರಯತ್ನಿಸುತ್ತಿದ್ದ. ಇದೆಲ್ಲಾ ಫಲ ಕೊಡದಿದ್ದರೆ ಕಟ್ಟ ಕಡೆಯ ಅಸ್ತ್ರವೆಂಬಂತೆ ತನ್ನ ‘ಕೋಕಿಲ’ ಕಂಠದಿಂದ ಹಾಡು ಗುನುಗಲು ಶುರುಮಾಡಿಬಿಡುತ್ತಿದ್ದ! ಆತ ಸಂಗೀತ ಕಛೇರಿಯ ಅಬ್ಬರ, ಬರ್ಬರತೆಗೆ ಮಣಿದು ನಾವು ಏಳದಿದ್ದರೆ ನಮ್ಮ ಕಿವಿಗಳಿಂದ ರಕ್ತ ಹರಿಯುತ್ತಿದ್ದದ್ದು ಗ್ಯಾರಂಟಿ.

ನಾವು ಮೂರೂ ಮಂದಿ ಒಟ್ಟಿಗೇ ಎದ್ದು ಹಲ್ಲುಜ್ಜಲು, ನಿತ್ಯ ಕರ್ಮ ತೀರಿಸಲು ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡುತ್ತ ಭೀಕರ ಕಾಳಗದಲ್ಲಿ ಮುಳುಗಿರುವಾಗ ತಾರಾನಾಥ ತನ್ನ ಸೂಟ್ ಕೇಸಿನಲ್ಲಿ ಗರಿ ಮುರಿಯದ ಹಾಗೆ ಮಡಚಿಟ್ಟ ಬಟ್ಟೆಯನ್ನು ಕೇರ್ ಫುಲ್ಲಾಗಿ ಹೊರತೆಗೆದು ಡ್ರೆಸ್ಸಿಂಗ್ ಶುರುಮಾಡಿಕೊಳ್ಳುತ್ತಿದ್ದ. ಆಹಾ… ಅವನ ಡ್ರೆಸ್ಸಿಂಗ್ ಸಂಪ್ರದಾಯವನ್ನು ನೋಡಲು ಎರಡು ಕಣ್ಣುಗಳೂ ಸಾಲದಾಗಿದ್ದವು. ಮಾರ್ನಿಂಗ್ ಶೋ ಸಿನೆಮಾಗೆಂದು ಮೇಕಪ್ ಶುರುಮಾಡುವ ಹೆಣ್ಣು ಮಕ್ಕಳು ಸೆಕೆಂಡ್ ಶೋ ಹೊತ್ತಿಗೆ ರೆಡಿಯಾಗುವಷ್ಟಲ್ಲದಿದ್ದರೂ ಅವರಿಗಿಂತ ಕಡಿಮೆಯಿಲ್ಲ ಎನ್ನುವಂತೆ ಆತ ರೆಡಿಯಾಗುತ್ತಿದ್ದ. ಸ್ನಾನ ಮಾಡಿ ಇನ್ನೂ ಮೈಯ ಮೇಲಿನ ತೇವ ಆರಿರದಿದ್ದರೂ ತಾರಾನಾಥ ಡ್ರೆಸ್ ಮಾಡಿಕೊಳ್ಳುವ ಮೊದಲು ಎರಡೆರಡು ಬಾರಿ ಸೋಪ್ ಹಾಕಿ ಮುಖ ತೊಳೆಯುತ್ತಿದ್ದ. ನಾವೆಲ್ಲ ಗುಬ್ಬಿಯ ಹಿಕ್ಕೆ ಅಂತ ಛೇಡಿಸುತ್ತಿದ್ದ ‘ಫೇರ್ ಅಂಡ್ ಲವ್ಲಿ’ಯನ್ನು ಒಂದು ಕೋಟ್ ಬಳಿದುಕೊಳ್ಳುತ್ತಿದ್ದ. ಅದರ ಮೇಲೆ ಪೌಡರ್. ಬಗಲುಗಳಿಗೆ ಸೂಟ್ ಕೇಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಿದ್ದ ವಿದೇಶಿ ಪರ್ ಫ್ಯೂಮ್. ಇದೆಷ್ಟು ನಡೆಯುವಷ್ಟರಲ್ಲಿ ನಮ್ಮ ನಿತ್ಯ ಕರ್ಮಗಳೆಲ್ಲಾ ಮುಗಿದು ಆಫೀಸಿಗೆ ಹೊರಡಲು ತಯಾರಾಗಿರುತ್ತಿದ್ದೆವು!

ಬಟ್ಟೆ-ಬರೆ, ತಿನ್ನುವ ಪದಾರ್ಥ, ಜೀವನ ಪದ್ಧತಿಗಳಲ್ಲಿ ತಾರಾನಾಥ ಪಾಲಿಸುತ್ತಿದ್ದ ಟಾಕು ಟೀಕನ್ನು ಲೇವಡಿ ಮಾಡುತ್ತಿದ್ದ ನಾವು ದುಡ್ಡಿನ ವಿಚಾರದಲ್ಲಿನ ಆತನ ಲೆಕ್ಕ ತಪ್ಪದ ವಿವೇಕ, ಮಾತುಗಾರಿಕೆಯಲ್ಲಿನ ತೂಕ ಹಾಗೂ ಸಮಯ ಪಾಲನೆಯನ್ನು ಮಾತ್ರ ಪರೋಕ್ಷವಾಗಿ ಗೌರವಿಸುತ್ತಿದ್ದೆವು. ಶೀತವಾದಾಗ ಕಟ್ಟಿಕೊಂಡ ಮೂಗಿನಿಂದ ಸಿಂಬಳವನ್ನು ಸೀಟಿ ತೆಗೆದು ರೊಪ್ಪನೆ ನೆಲಕ್ಕೆ ಒಗೆಯುವಂತೆ ಹಣವನ್ನು ಖರ್ಚು ಮಾಡುತ್ತಿದ್ದ ನನಗೂ, ಮಾತಿಗೆ ಕುಳಿತರೆ ಎದುರಿಗಿರುವವನ ತೆಲೆ ಹೋಳಾಗಿ ಮೆದುಳು ಈಚೆ ಬಂದರೂ ಮಾತು ನಿಲ್ಲಿಸದ ರಂಗನಿಗೂ, ಸಮಯ ಪಾಲನೆಯಲ್ಲಿ ನಮ್ಮ ರೈಲುಗಳಿಗೇ ಪಾಠ ಹೇಳಿಕೊಡುವಷ್ಟು ಪಂಡಿತನಾದ, ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನೂ ಮಾಡದ, ಹುಟ್ಟುವಾಗಲೇ ಒಂದು ತಿಂಗಳು ಲೇಟಾಗಿ ಹುಟ್ಟಿದ್ದ ಪ್ರಕಾಶನಿಗೂ ತಾರಾನಾಥ ಅನೇಕ ವಿಷಯಗಳಲ್ಲಿ ಆದರ್ಶನಾಗಿದ್ದ. ನಾವೆಲ್ಲರೂ ಹೊರಗೆ ಆತನನ್ನು ರೇಗಿಸಿ ಆಡಿಕೊಳ್ಳುತ್ತಿದ್ದರೂ ಅಂತರಂಗದಲ್ಲಿ ಆತನ ಟೀಕು-ಟಾಕಿನ ಆರಾಧಕರಾಗಿದ್ದೆವು. ಆತನಂತಾಗಬೇಕು ಎಂತ ದಿನಕ್ಕೆ ಹತ್ತಾರು ಬಾರಿಯಾದರೂ ಅಂದುಕೊಳ್ಳುತ್ತಿದ್ದೆವು, ಅದರ ಜೊತೆಗೇ ಆತನ ವಿಪರೀತಗಳನ್ನು ನೆನೆಸಿಕೊಂಡು ದಿನಕ್ಕೆ ಕನಿಷ್ಠ ಪಕ್ಷ ಇಪ್ಪತ್ತು ಬಾರಿಯಾದರೂ ಅಪಹಾಸ್ಯ ಮಾಡುತ್ತಿದ್ದೆವು.

ತಾರಾನಾಥನನ್ನು ಕಂಡು ಅದಾಗಲೇ ಹತ್ತು ವರ್ಷಗಳಾಗಿದ್ದವು. ಅಂದು ಹೆಂಡತಿಯ ಒತ್ತಾಯಕ್ಕೆ ಹದಿನೈದು ದಿನಗಳ ಗಡ್ಡಕ್ಕೆ ಮೋಕ್ಷ ಕಾಣಿಸಲು ಸಲೂನ್‌ಗೆ ಹೋಗಿ ಹಿಂದಿರುಗುತ್ತಿದ್ದೆ. ಅಂದು ಅಮಾವಾಸ್ಯೆ ಇದ್ದದ್ದರಿಂದ ಬೆಳಗಾಗಿಯೇ ಮಗ ಸ್ಕೂಟರನ್ನು ತೊಳೆದು ಲಕ-ಲಕ ಹೊಳೆಯುವಂತೆ ಮಾಡಿದ್ದ. ನನ್ನಾಕೆಯ ಕೈಗಳ ಕೈಶಲ್ಯಕ್ಕೆ ಸಾಕ್ಷಿಯೆಂಬಂತೆ ನನ್ನ ಬಟ್ಟೆಗಳು ಶುಭ್ರವಾಗಿದ್ದವು. ಸಲೂನಿನಿಂದ ಟಿಪ್ ಟಾಪ್ ಆಗಿ ಹೊರಬರುವಾಗ ಸಿಗ್ನಲ್ ಬಳಿ ಮಣ್ಣು ಮೆತ್ತಿಕೊಂಡು ಗುರುತು ಸಿಗದ ಹಾಗೆ ಬಣ್ಣಗೆಟ್ಟಿದ್ದ ಸ್ಕೂಟರಿನಲ್ಲಿ ತನ್ನ ಮಗನ ಮೂಗಿನಿಂದ ಇಳಿಯುತ್ತಿದ್ದ ಸಿಂಬಳವನ್ನು ತನ್ನ ಶರ್ಟಿನ ಅಂಚಿನಿಂದ ಒರೆಸುತ್ತಿದ್ದ ವ್ಯಕ್ತಿ ಕಾಣಿಸಿದ. ಆತನನ್ನು ಎಲ್ಲೋ ಕಂಡಂತೆ ನನಗೆ ಭಾಸವಾಗುತ್ತಿತ್ತು. ಆದರೆ ಆತನ ಕೆದರಿದ ಕೂದಲು, ಮಾಸಲು ಬಣ್ಣದ ಬಟ್ಟೆ, ಸುಮಾರು ತಿಂಗಳ ವಯಸ್ಸಿನ ಗಡ್ಡದಿಂದಾಗಿ ಆತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಕೊಂಚ ಹತ್ತಿರ ಹೋಗಿ ದಿಟ್ಟಿಸಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ! ಆತ ನಮ್ಮ ತಾರಾನಾಥ! ಬದುಕೆಂಬ ಶಿಕ್ಷಕ ತೋರಿಸುವ ದಾರಿಗಳನ್ನು ಕ್ರಮಿಸದೆ ಇರುವ ಧೈರ್ಯ ಯಾರು ತೋರಿಯಾರು?

(ಮೂಲ ಲೇಖನ ಸಡಗರ -ಮುಂಚಿನ ಹೆಸರು ‘ಕಲರವ’- ಪತ್ರಿಕೆಯಲ್ಲಿ ಪ್ರಕಟವಾಗಿತ್ತು)