ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
……………………………………………………..
ನಗೆ ಸಾಮ್ರಾಟರಿಗೆ ಬೀಟಿಗೆ ಹೊರಡುವುದು ಯಾಕೋ ತುಂಬಾ ಯಾಂತ್ರಿಕವೆನಿಸಲು ಶುರುವಾಗಿದೆ. ನಕ್ಕು ನಕ್ಕೂ ಮಂದಿ ದಣಿದಿರುವಂತೆ ಬ್ಲಾಗುಗಳಲ್ಲಿ ನಗೆಯ ಬರವಣಿಗೆಗೆ ಸ್ವಲ್ಪ ದಣಿವು ಕಾಣಿಸಿಕೊಂಡಂತೆ ಕಾಣುತ್ತದೆ. ಆದರೂ ಸಾಮ್ರಾಟರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಈ ಸಂಚಿಕೆ ಬ್ಲಾಗ್ ಬೀಟ್ ನಿಮ್ಮೆದುರಿನಲ್ಲಿದೆ:
ಕೆಂಡ ಸಂಪಿಗೆಯ ಸುದ್ದಿ ಕ್ಯಾತ
ಹವ್ಯಾಸಕ್ಕಾಗಿ ಮದುವೆಯಾಗಿ, ಕ್ರಮೇಣ ಮದುವೆಯಾಗುವುದನ್ನೇ ಹವ್ಯಾಸವಾಗಿಸಿಕೊಂಡು ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ನೂರಾ ಎಪ್ಪತ್ತು ಮಕ್ಕಳ ತಂದೆಯಾಗಿರುವ ನೈಜೀರಿಯಾದ ಮಹಮ್ಮದ್ ಬೆಲ್ಲಾ ಅಬೂಬೆಕರ್ ನ ಸಾಧನೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸುದ್ದಿ ಕ್ಯಾತ ವರದಿ ಮಾಡಿದ್ದಾನೆ.
ಎಂಭತ್ತಾರು ಪತ್ನಿಯರನ್ನು ಕಟ್ಟಿಕೊಂಡು ಎಂಭತ್ನಾಲ್ಕು ವರ್ಷ ಬದುಕಿರುವ ಅಬೂಬೆಕರ್ನಿಂದ ‘ಯಶಸ್ವೀ ಗಂಡನಿಗೆ ಹತ್ತೇ ಸೂತ್ರಗಳು’ ಪುಸ್ತಕ ಬರೆಸಲು ಸಂಪರ್ಕಿಸಲಾಗುತ್ತಿದೆ. ಅದಕ್ಕೆ ಬುಕರ್ ಸಿಕ್ಕರೂ ಸಿಗಬಹುದು!
ಪ್ರಕಾಶ್ ಶೆಟ್ಟಿ ಪಂಚ್
ಹ್ಯಾಂಗಿಸಿ ಕೊಂಡ ಪ್ರಕಾಶ್ ಶೆಟ್ಟಿ ತಮ್ಮ ಕಾರ್ಟೂನುಗಳ ಪ್ರದರ್ಶನದ ವರದಿಯನ್ನು ಬ್ಲಾಗಿನಲ್ಲಿ ಅಲ್ಲಲ್ಲಿ ಚೆಲ್ಲಿದ್ದಾರೆ.
ಎಂದಿನಂತೆ ಅವರ ಹರಿತವಾದ ಗೆರೆಗಳ ಬರೆಗೆ ನರೇಂದ್ರ ಮೋದಿ, ಯಡ್ಡಿ, ಲಾಲು, ಪೊಲೀಸು ಬಲಿಯಾಗಿದ್ದಾರೆ.
ಬೊಗಳೂರು ವಾರ್ತೆ
ಜಗತ್ತಿನಲ್ಲಿ ಹೆಚ್ಚುತ್ತಿರುವ ಹಾಟ್ ಕಲ್ಚರಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಬೊಗಳೂರು ಬ್ಯೂರೋ, ಸ್ಯಾಂಪಲ್ಲಿಗೆ ಬಟ್ಟೆಹಾಕುವ ನಟೀ ಮಣಿಯರನ್ನೂ, ಬಟ್ಟೆಯನ್ನು ಸ್ಯಾಂಪಲ್ಲಿಗಾಗಿ ಹಾಕುವವರನ್ನೂ ತರಾಟೆಗೆ ತೆಗೆದುಕೊಂಡಿದೆ.
ಡಿವೋರ್ಸು, ತಾಳಿ ಎಂದೆಲ್ಲಾ ಮ್ಯಾರೀಡ್ ಲೈಫಿನ ವರೀಡ್ ಸಂಗತಿಗಳನ್ನು ವರದ್ದಿ ಮಾಡಿರುವುದರಿಂದ ಬ್ಯಾಚುಲರ್ ಆದ ನಗೆ ಸಾಮ್ರಾಟರು ಅಲ್ಲಿಂದ ಕಾಲ್ಕೀಳುವ ಮುನ್ನ ಈ ನೋಟೀಸನ್ನು ಗಮನಿಸಿದ್ದಾರೆ:
“ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.”
ತಲೆ ಮರೆಸಿಕೊಂಡಿರುವ ಬೊಗಳೂರು ಮಂದಿಯನ್ನು ಪತ್ತೆ ಹಚ್ಚಲು ಸೂಪರ್ ಕಾಪ್ ಚೇಲ ಕುಚೇಲನಿಗೆ ಬಹಳಷ್ಟು ಅರ್ಜಿಗಳು ಬಂದಿದ್ದು ಆತ ಸಾಮ್ರಾಟರ ಅಪ್ಪಣೆಗಾಗಿ ಕಾಯುತ್ತಾ ತುದಿಗಾಲಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದಾನೆ!
ಮಜಾವಾಣಿ
ತಮ್ಮ ಪತ್ರಿಕೆಗಾಗಿ ಪ್ರತ್ಯೇಕ ತಾಣವನ್ನು ತೆರೆದಿರುವ ಮಜಾವಾಣಿ ತನ್ನ ಅತ್ಯಂತ ನಿಕಟ ಪ್ರತಿಸ್ಪರ್ಧಿ ಪತ್ರಿಕೆಯ ವೇಗಕ್ಕೆ ತಕ್ಕಂತೆ ಓಡಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ಸಾಮ್ರಾಟರ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿ ಹೊಸ ವರದಿಗಳ್ಯಾವುವೂ ಪತ್ತೆಯಾಗಿಲ್ಲ.
ಸಾಮ್ರಾಟರು ಬೀಟು ಹಾಕುವಾಗ ‘ಹಗ್ಗಗಳ ಮೇಲೆ ಶಾಸನ ವಿಧಿಸಿದ ಎಚ್ಚರಿಕೆಯ’ ವರದಿ ಪತ್ತೆಯಾಯಿತು.
ಇತ್ತೀಚಿನ ಪ್ರಜಾ ಉವಾಚ