Tag Archives: ಸಿನೆಮಾ

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

3 ಆಕ್ಟೋ

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)

ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.

ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.

ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.

ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.

“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”

ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:

“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”

ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.

“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”

ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ  ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!

ನಗೆಸಾಮ್ರಾಟರ ಸಚ್ ಕಾ ಸಾಮ್ನಾ!

29 ಜುಲೈ

 

ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.

ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?

ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!

ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!

ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"

ಅದರಲ್ಲಿ ಸಾಮ್ಯತೆ ಅಂದರೆ ಎರಡೂ ಚಿತ್ರದ ನಾಯಕನಟ ಶಿವರಾಜ್ ಕುಮಾರ್. ಅದು ಬಿಟ್ಟರೆ ಓಮ್ ಕರುಳು ಕೊಚ್ಚುವ ರೌಡಿಸ್ಮ್ ಕತೆ ಆಗಿದ್ದರೆ, ತವರಿಗೆ ಬಾ ತಂಗಿ ಅಣ್ಣ-ತಂಗಿಯರ ಕರುಳು ಹಿಂಡುವ ಕತೆ ಹೊಂದಿದೆ.

ಆದರೆ ನಗೆಸಾಮ್ರಾಟರು ಮತ್ತೆ ಕೊಂಚವೂ ವಿಚಲಿತರಾಗದೇ, "ಎರಡೂ ಅಣ್ಣ-ತಂಗಿಗೆ ಸಂಬಂಧಪಟ್ಟ ಸಿನೆಮಾ!" ಎಂದಾಗ ಇದರಲ್ಲಿ ಖಂಡಿತಾ ಉತ್ತರ ಸುಳ್ಳಾಗುತ್ತದೆ ಅಂದುಕೊಂಡರೆ ಅದೂ ನಿಜವಾಗಿತ್ತು. 

ಆಗ ಎಲ್ಲರಿಗೂ ಅನುಮಾನ ಮೂಡಿದ್ದು ನಗೆಸಾಮ್ರಾಟರ ಮೇಲಲ್ಲ; ಪಾಲಿಗ್ರಾಫ್ ಮೆಶೀನ್ ಮೇಲೆ!

ಎಲ್ಲರೂ ಆ ಮೆಶೀನೇ ಸುಳ್ಳು ಹೇಳುತಿದೆ ಅಂದುಕೊಂಡರು.

ಆದರೆ ನಗೆಸಾಮ್ರಾಟರು ಮಾತ್ರ "ತಾನು ಹೇಳಿದ್ದೆಲ್ಲಾ ಸತ್ಯ, ಸತ್ಯವಲ್ಲದೇ ಬೇರೇನೂ ಹೇಳಿಲ್ಲ" ಅಂತ ಬೇಕಾದರೆ ಗೀತೆಯ ಮೇಲೇಕೆ, ತನ್ನ ಬ್ಯಾಂಕಿನ ಖಾತೆಯ ಮೇಲೆಯೂ ಪ್ರಮಾಣ ಮಾಡುವುದಾಗಿ ತಿಳಿಸಿದರು. ಯಾವುದಾದರೂ ಸಿನೆಮಾವನ್ನು ಲಾಜಿಕ್ಕನ್ನು ಪಕ್ಕಕ್ಕಿಟ್ಟು ನೋಡದೇ ಹೋದರೆ ತಲೆ ಎಕ್ಕುಟ್ಟಿ ಹೋಗೋಲ್ಲವಾ ಅಂತಲೇ ಕೇಳಿದರು! ಮಚ್ಚನ್ನು ಮದುವೆಯಾಗೋ ಹೀರೋ, ತನಗೆ ಎಂಗೇಜ್ ಮೆಂಟ್ ಆಗಿದ್ದರೂ ಮತ್ತೊಬ್ಬ ಹುಡುಗನಿಗೆ ಫೋನ್ ಮಾಡಿ ಸುಮ್ಮ ಸುಮ್ಮನೆ ’ನನ್ನನ್ನು ಹಾರಿಸ್ಕೊಂಡು ಹೋಗದೇ ಇದ್ದರೆ ನೀನು ಗಂಡಸೇ ಅಲ್ಲ" ಅನ್ನುವ ಹೀರೋಯಿನ್ನು, ಹೀರೋ ಎಂಟ್ರಿ ಸಾಂಗ್- ಒಂದು ಕನ್ನಡ ಭಾಷೆಯ ಮೇಲಿನ ಸಾಂಗ್- ಮರ ಸುತ್ತೋ ಡ್ಯೂಯೆಟ್ಟು ಹೀಗೆ ಚಿತ್ರವನ್ನು ಅರ್ಧ ಅಥವ ಒಂಡು ಘಂಟೆ ಹಾಡಿನಿಂದಲೇ ಮುಗಿಸುವ ಡೈರೆಕ್ಟರ್ರು, ಪರಭಾಷೆ ಚಿತ್ರದಲ್ಲಿ ಬಂದ ಕಾಮಿಡಿ ದೃಶ್ಯಗಳನ್ನು ಒಂದು pause ಕೂಡ ಬಿಡದೇ ಎತ್ತಿಕೊಳ್ಳುವ ಹಾಸ್ಯಗಳು, ಇವನ್ನೆಲ್ಲಾ ಲಾಜಿಕ್ಕಿಟ್ಟು ನೋಡೋಕಾಗ್ತದಾ?

ಸರಿ, ಆದರೆ ಓಂ- ತವರಿಗೆ ಬಾ ತಂಗಿ ಚಿತದಲ್ಲಿ ಅಣ್ಣ-ತಂಗಿ ಸಾಮ್ಯತೆ ಹೇಗೆ?

ನಗೆಸಾಮ್ರಾಟರು ಒಂದೆರಡು ಬಾರಿ ತಲೆಕೆರೆದುಕೊಳ್ಳುವುದರೊಳಗಾಗಿ ನೆನಪಾಗಿತ್ತು, ಅದು ಅವರು ಥಿಯೇಟರ್ ನೊಳಗೆ ಲಾಜಿಕ್ಕನ್ನು ಜೇಬಿನಲ್ಲಿಟ್ಟು ಕೂತಿರದ ಕಾಲ.

ಪೋಸ್ಟರ್ ನೋಡದೇ ಬರಿಯ ಟೈಟಲ್ ನೋಡಿ ದೇವರ ಚಿತ್ರ ಅಂದುಕೊಂಡು ಓಂ ಚಿತ್ರ ನೋಡಲು ಬಂದಿದ್ದರು. ಶಿವರಾಜ್ ಕುಮಾರ್ ಗೆ ಅದರಲ್ಲಿ ಸತ್ಯ ಅನ್ನುವ ರೌಡಿಯ ಪಾತ್ರ. ರೌಡಿಸ್ಮ್ ಚಿತ್ರ ಅಂದರೆ ಒಬ್ಬ ರೌಡಿ ಅವನ ಬಾಲದಂತೆ  ಚೇಲಾಗಳು. ಈ ಚೇಲಾಗಳು ಆ ರೌಡಿ(ಚಿತ್ರದಲ್ಲಿ ನಾಯಕ)ಯನ್ನು ಅಣ್ಣಾ ಅಂತಲೇ ಮಾತಾಡಿಸುತ್ತವೆ, ಅಂದರೆ ನಾಯಕಿ ಅತ್ತಿಗೆಯಾಗಬೇಕು ಅಲ್ಲವೇ?

ಹಾಗಾಗದು, ನಾಯಕಿಯನ್ನೂ ಚೇಲಾಗಳು ಅಕ್ಕಾ ಅಂತಲೇ ಕರೆಯುತ್ತವೆ. ನಾಯಕ-ನಾಯಕಿಯನ್ನು ಅಣ್ಣ-ತಂಗಿ ಸಂಬಂಧವಾಗಿಸುತ್ತದೆ!

ಮೊದಲು ದೇವರ ಚಿತ್ರ ಅಂದುಕೊಂಡಿದ್ದ ಸಾಮ್ರಾಟರಿಗೆ ಓಂ ಅಂತಹ ಚಿತ್ರವಾಗದೇ ಒಂದು ಶಾಕ್ ಆಗಲೇ ನೀಡಿದ್ದರು ಚಿತ್ರದ ನಿರ್ದೇಶಕರು. ಚೇಲಾಗಳು ಶಿವರಾಜ್ ಕುಮಾರ್ ರನ್ನು ಅಣ್ಣ ಅಂತಲೂ ನಾಯಕಿ ಪ್ರೇಮಾಳನ್ನು ಅಕ್ಕಾ ಅಂತಲೂ ಕರೆಯುತಿರುವಾಗ ಈ ಚಿತ್ರವನ್ನು ಸಾಯಿಪ್ರಕಾಶ್ ಲೆವೆಲ್ ನ ಅಣ್ಣ-ತಂಗಿ ಚಿತ್ರ ಅಂದುಕೊಂಡು ನೋಡಿ ಸಾಮ್ರಾಟರು ಸುಸ್ತಾದರು ಅಂತ ಬೇರೆ ತಿಳಿಸಿಹೇಳಬೇಕೆ?

ಒಟ್ಟಿನಲ್ಲಿ ಹಾಳು ಲಾಜಿಕ್ಕುಗಳು. ಈ ಲಾಜಿಕ್ಕಿಟ್ಟುಕೊಂಡು ನೋಡಿದರೆ ಸಿನೆಮಾ ಎಲ್ಲಿ ಅರ್ಥವಾಗಬೇಕು ಅಂತ ಸಾಮ್ರಾಟರು ಗೊಣಗಿದರು!

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

17 ಜುಲೈ

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದbad times of media ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

-ರಂಜಿತ್ ಅಡಿಗ, ಕುಂದಾಪುರ

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

24 ಫೆಬ್ರ

(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ ಮಾಡಿದ್ದಾರೆ: ‘ನುಂಗ್ಲಿ’. ವಿಪರೀತ ಮಿತಭಾಷಿ ಹಾಗೂ ಮೌನಿಯಾದ ಚೂರಿಯವರ ವಿಶೇಷ ಸಂದರ್ಶನ ನಗೆ ನಗಾರಿಗಾಗಿ ಮಾಡಿರುವುದು ನಗೆ ಸಾಮ್ರಾಟರ ಆಲ್ಟರ್ ಈಗೋ)

ನಗೆ ಸಾಮ್ರಾಟ್: ಹೆಲೋ ಚೂರಿಯವರೇ ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು.

ಚೂರಿ: ನಾನ್ಯಾರು… ನಾನ್ಯಾರು… ನಾನ್ಯಾರು…

ನಗೆ ಸಾಮ್ರಾಟ್: ಹೌದು, ಹೌದು. ನೀವು ಮೊದಲ ಸಿನೆಮಾ ‘ಮುದಿಯಾ’ ಮಾಡಿದಾಗ ಜನರು ಹೀಗೇ ಕೇಳಿದ್ದರು. ‘ಇವನ್ಯಾರು … ಇವನ್ಯಾರು…’ ಎಂದು. ಅದ್ನ ನೆನಪಿಸಿಕೊಳ್ತಿದೀರಾ?

ಚೂರಿ: ಇಲ್ಲ. ನನ್ನೇ ನಾನು ಆಗಾಗ ಹಿಂಗೆ ಪ್ರಶ್ನೆ ಮಾಡ್ಕೋತಿರ್ತೀನಿ. ಉತ್ತರ ಸಿಗದೆ ಇನ್ನೇನು ನನ್ನ ತಲೆ ಕೆಟ್ಟು ಹೋಗುತ್ತೆ ಅಂದಾಗ ಸಿನೆಮಾ ಮಾಡಿಬಿಡ್ತೀನಿ ಅದೇ ಹುಳ ಬಿಟ್ಟು. ಜನರಿಗೆ ನನ್ನ ತಲೆ ನೋವು ರವಾನಿಸಿಬಿಡ್ತೀನಿ.

ನ.ಸಾ: ನಿಮ್ಮ ಮೊದಲ ಸಿನೆಮಾ ‘ಮುದಿಯಾ’ದಲ್ಲಿ ಸಾವು, ಗೋರಿ ಎಂದೆಲ್ಲಾ ದೊಡ್ಡ ದೊಡ್ಡ ಪದಗಳನ್ನ ಬಳಸಿದ್ರಿ. ಜೊತೆಗೆ ಕ್ರೌರ್ಯವನ್ನು ಫೇರ್ ಅಂಡ್ ಲವ್ಲಿ, ಮೇಕಪ್ಪು ಇಲ್ಲದೆ ಹಸಿಹಸಿಯಾಗಿ ತೋರಿಸಿದ್ರಿ.

ಚೂರಿ: ಹೌದು, ಕ್ರೌರ್ಯ ಅನ್ನೋದು ಪ್ರತಿಯೊಬ್ಬನಲ್ಲೂ ಇದೆ. ಅದಕ್ಕೆ ವೈಭವೀಕರಣ ನೀಡಬಾರದು. ಹಸಿ ಹಸಿಯಾಗಿ ಹಾಗೇ ತೋರಿಸ್ಬೇಕು. ಹಸಿ ತರಕಾರಿ ಹೇಗೆ ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು.

ನ.ಸಾ: ನಿಮ್ಮ ಎರಡನೆಯ ಚಿತ್ರ ‘ಲವ್ ಲೆಟರ್’ ನಲ್ಲಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿದ್ರಿ. ನಿಮ್ಮ ಹಸಿ ಹಸಿತನ ಹಾಗೂ ಹುಸಿತನಗಳೆಲ್ಲದರೆ ಜೊತೆಗೆ ಕುಡಿತವೆಂಬ ದುಶ್ಚಟವನ್ನು ಎದುರಿಸುವ ಧೈರ್ಯ ಮಾಡಿದ್ರಿ. ಆದರೆ ನಿಮ್ಮ ಆ ಸಿನೆಮಾ ಹೀನಾಯವಾಗಿ ಸೋತಿತು. ನೀವು ಕುಡಿತದ ಬಗ್ಗೆ ಸಿನೆಮಾ ಮಾಡಲು ಹೊರಟಿದ್ದೇ ಅದರ ಸೋಲಿಗೆ ಕಾರಣ ಎನ್ನಬಹುದೇ? 

ಚೂರಿ: ಇಲ್ಲ. ಸಿನೆಮಾ ನಿಜವಾಗ್ಲೂ ಚೆನ್ನಾಗೇ ಇತ್ತು ಆದ್ರೆ ಪ್ರೇಕ್ಷಕರು ಸಿನೆಮಾ ನೋಡಲಿಲ್ಲ ಅಷ್ಟೇ. ಪ್ರೇಕ್ಷಕರು ನೋಡಲಿಲ್ಲ ಎಂದ ಮಾತ್ರಕ್ಕೆ ಸಿನೆಮಾ ಸೋಲಲ್ಲ. ಕುಡಿತದ ಬಗ್ಗೆ ಸಿನೆಮಾ ಮಾಡಿದ್ದು ಸೋಲಿಗೆ ಕಾರಣ ಅಂತ ಹ್ಯಾಗೆ ಹೇಳ್ತೀರಿ?

ನ.ಸಾ: ನೋಡ್ರಿ ಸಿನೆಮಾ ನೋಡಲು ಥಿಯೇಟರಿಗೆ ಬರುವ ಮಂದಿಯಲ್ಲಿ ಬಹುಪಾಲು ಗಂಡಸರದು. ಅವರು ಸಿನೆಮಾ ನೋಡಲು ಬರುತ್ತಾರೆ ಇಲ್ಲವೇ ತಮ್ಮ ಅಥವಾ ಇನ್ನೊಬ್ಬರ ಹೆಂಡತಿಯರಿಗೆ, ಮಕ್ಕಳಿಗೆ ಸಿನೆಮಾ ತೋರಿಸಲು ಬರುತ್ತಾರೆ. ಕಾಲೇಜು ಬಂಕ್ ಮಾಡಿ, ಗೆಳೆಯರ ಗುಂಪು ಸಂಪಾದಿಸಿ, ಪಾಕೆಟ್ ಮನಿಯ ನೆರವಿನಿಂದ ಸಿನೆಮಾ ಥಿಯೇಟರಿಗೆ ಲಗ್ಗೆ ಇಡುವ ಪಡ್ಡೆಗಳನ್ನು ಬಿಟ್ಟರೆ ಇವರದೇ ಮೆಜಾರಿಟಿ. ಅಲ್ಲದೇ ಇವರು ಸಂಜೆಯಾಗುತ್ತಿದ್ದ ಹಾಗೆ ‘ತೀರ್ಥ ರೂಪ’ ರಾಗುವಂಥವರು. ಅವರ ‘ಮದುಬನದ’ ಸವಿಯನ್ನು ಕೀಳು ಎಂದು ತೋರಿಸಿದ ಸಿನೆಮಾಗೆ ಅವರು ಯಾಕೆ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ? ರಾಜಕಾರಣಗಳು ತಮ್ಮ ಹೆಂಡತಿ ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯನವರ ನಾಟಕಕ್ಕೆ ಕಳುಹಿಸಿದ ಹಾಗೆ ಇದು!

ಚೂರಿ: ಹಾಗೋ, ಅದಕ್ಕೆ ನಾನು ಈ ಸಿನೆಮಾದಲ್ಲಿ ಹಳೆಯ ಪದ್ಧತಿಯನ್ನೆಲ್ಲಾ ಬಿಟ್ಟು ಹೊಸ ಸಾಹಸಕ್ಕೆ ಕೈ ಹಾಕಿರುವೆ.

ನ.ಸಾ: ಏನದು ಸಾರ್?

ಚೂರಿ: ಕುಡಿತದ ಕಾನ್ಸೆಪ್ಟು ಇಟ್ಟುಕೊಂಡಿದ್ದಕ್ಕೆ ಗಂಡಸರು ಥಿಯೇಟರಿಗೆ ಬರುವ ಮನಸ್ಸು ಮಾಡಲಿಲ್ಲ, ಪಡ್ಡೆಗಳು, ಹೆಣ್ಣುಮಕ್ಕಳಿಗೆ ಧೈರ್ಯ ಸಾಲಲಿಲ್ಲ ಅಂದ್ರಲ್ಲ, ಅದಕ್ಕೆ ಈ ಬಾರಿ ವಿಭಿನ್ನವಾಗಿ ಸಿನೆಮಾ ಮಾಡಿರುವೆ. ಮದರ್ ಸೆಂಟಿಮೆಂಟು ಇಟ್ರೆ ಕಾಲೇಜು ಹುಡುಗೀರು ನಿದ್ದೆ ಮಾಡ್ತಾರೆ, ಅಕ್ಕ ತಂಗಿ ಕಥೆ ಮಾಡಿದ್ರೆ ಹುಡುಗರು ಥಿಯೇಟರ್‌ ಕಡೆಗೆ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಪಡ್ಡೆಗಳಿಗೆ ಮಾಸ್ ಸಿನೆಮಾ ಮಾಡಿದ್ರೆ ಎಲೈಟ್ ಪತ್ರಕರ್ತರು, ಟಿವಿಯವರು ಮೂಸಿಯೂ ನೋಡಲ್ಲ. ಸಾಮಾಜಿಕ ಕಳಕಳಿಯ ಕಥೆ ಇಟ್ಟುಕೊಂಡು ಸಿನೆಮಾ ಮಾಡಿದ್ರೆ ಸಮಾಜವೇ ನೋಡಲ್ಲ. ಅದ್ಕೆ ಈ ಬಾರಿ ಎಲ್ಲಾ ವರ್ಗಕ್ಕೆ ತಲುಪುವ ಸಿನೆಮಾ ಮಾಡಿದ್ದೇನೆ.

ನ.ಸಾ: ಹೌದು, ನಿಮ್ಮ ‘ನುಂಗ್ಲಿ’ ವಿಶಿಷ್ಟವಾಗೇ ಇದೆ. ಆದ್ರೆ ಇದರ ವಿಶಿಷ್ಟತೆ ಏನು?

ಚೂರಿ: ಕಳೆದ ಸಿನೆಮಾದಲ್ಲಿ ಮಾಡಿದ ತಪ್ಪನ್ನು ಇಲ್ಲಿ ತಿದ್ದಿಕೊಂಡಿರುವೆ. ಅಲ್ಲಿ ಸಿನೆಮಾದ ಕಥೆಯೇ ಹಲವರಿಗೆ ಅಪಥ್ಯವಾಯಿತು. ಹೀಗಾಗಿ ಈ ಸಿನೆಮಾದಲ್ಲಿ ಅದರ ಗೋಜಿಗೇ ಹೋಗಿಲ್ಲ. ಅವರಿವರ ಭಾವನೆಗೆ ನೋವುಂಟು ಮಾಡುವ ಹಕ್ಕು ನಮಗೆಲ್ಲಿದೆಯಲ್ವಾ ಸಾರ್? ಹಾಗಾಗಿ ಈ ಸಿನೆಮಾದಲ್ಲಿ ಕಥೆಯನ್ನೇ ಬಳಸಿಲ್ಲ ನಾವು. ಇದು ಇತ್ತೀಚೆಗೆ ಪ್ರಸಿದ್ಧವಾಗುತ್ತಿರುವ ತಂತ್ರ. ನಾವೂ ಇದನ್ನು ಬಳಸಿದ್ದೀವಿ.

ನ.ಸಾ: ಹೌದು, ಹೌದು, ಸೋಪೇ ಇಲ್ಲದ ಸೋಪಿನ ಡಬ್ಬಿ, ಹಾಲೇ ಇಲ್ಲದ ಹಾಲಿನ ಪಾಕೆಟು, ಅಕ್ಕಿಯೇ ಇಲ್ಲದ ಅಕ್ಕಿಯ ಮೂಟೆ, ಮೆದುಳೇ ಇಲ್ಲದ ತಲೆ ಬುರುಡೆಗಳು ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಕಥೆಯಿಲ್ಲದ ಸಿನೆಮಾ ತಂತ್ರ ಯಶಸ್ವಿಯಾಗಬಹುದು. ಅಂದ ಹಾಗೆ ನಿಮ್ಮ ಈ ತಂತ್ರದ ಮುಂದುವರಿದ ಭಾಗ ಏನು? ಪ್ರೇಕ್ಷಕರೇ ಇಲ್ಲದ ನೂರು ದಿನವಾ?

ಚೂರಿ: ಹೌದು, ಆ ತಂತ್ರವನ್ನು ಬಳಸಬೇಕು. ಈಗಾಗಲೇ ಕೆಲವರು ಆಕಾಶದ ವೀರಗನ್ನಡಿಗರು ಆ ತಂತ್ರ ಬಳಸಿ ಯಶಸ್ವಿಯಾಗಿದಾರೆ. ಜನರೇ ಇಲ್ಲದೆಯೂ ಸಿನೆಮಾವನ್ನು ನೂರು ದಿನ ಓಡಿಸುವುದು ಆ ತಂತ್ರ. ಅದನ್ನೂ ಮುಂದಿನ ಸಿನೆಮಾಗಳಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನ.ಸಾ: ‘ಲವ್ ಲೆಟರ್’ ಹಾಗೂ ‘ಮುದಿಯಾ’ದ ಮೂಲಕ ಉತ್ತಮ ಕಳಕಳಿಯನ್ನು ಹೊಂದಿರುವ ನಿರ್ದೇಶಕ ಎಂದು ಹೆಸರು ಮಾಡಿದವರು ನೀವು ಈಗ ಇಂಥ ಸಿನೆಮಾ ಮಾಡಿದ್ದರಿಂದ ನಿಮಗೆ ಏನೂ ಅನ್ನಿಸಲ್ವಾ?

ಚೂರಿ: ನೋಡಿ ನಾನು ನನ್ನ ಪ್ರತಿಭೆಯನ್ನೆಲ್ಲ ಧಾರೆಯೆರೆದು ಲವ್ ಲೆಟರ್ ಸಿನೆಮಾ ಮಾಡಿದೆ. ಜನರು ನೋಡಲಿಲ್ಲ. ತಪ್ಪು ಮಾಡಿದರು. ಅಂಥ ಒಳ್ಳೆಯ ಸಿನೆಮಾವನ್ನು ಅವರು ನೋಡಲಿಲ್ಲ. ಅದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರಿಗೆ ಪನಿಶ್‌ಮೆಂಟ್ ಇರಲೇ ಬೇಕು. ಅದಕ್ಕೆ ಅವ್ರು ಈ ನನ್ನ ‘ನುಂಗ್ಲಿ’ ಸಿನೆಮಾ ನೋಡಬೇಕು. ಜನರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ‘ನುಂಗ್ಲಿ’ ಮಾಡಿರುವೆ.

ನ.ಸಾ: ಅದೇನೋ ಸರಿ ಸಾರ್ ಆದರೆ ನಿಮ್ ಈ ಸಿನೆಮಾದಲ್ಲಿ ಸೊಂಟದ ಕೆಳಗಿನ ಡೈಲಾಗುಗಳೇ ಜಾಸ್ತಿಯಂತೆ.

ಚೂರಿ: ಯಾರ್ರಿ ಹೇಳಿದ್ದು? ಸೊಂಟದ ಕೆಳಗಿನ ಡೈಲಾಗು ಒಂದೂ ಇಲ್ಲ ನಮ್ಮ ಸಿನೆಮಾದಲ್ಲಿ. ಒಂದನ್ನಾದರೂ ತೋರಿಸಿ ಬಿಡಿ ನೋಡೋಣ. ಎಲ್ಲವೂ ಸೊಂಟದ ಮೇಲಿನದ್ದೇ. ಎಲ್ಲರೂ ಬಾಯಲ್ಲಿಯೇ ಡೈಲಾಗು ಹೇಳಿರುವುದು, ಯಾರೂ ಸೊಂಟದ ಕೆಳಗಿಂದ ಡೈಲಾಗು ಹೇಳಿಲ್ಲ. ಸುಮ್ಮನೆ ಆರೋಪ ವಹಿಸಬೇಡಿ, ನೋವಾಗುತ್ತೆ.

ನ.ಸಾ: ಹೋಗ್ಲಿ ಬಿಡಿ ಸರ್. ನಿಮ್ಮ ಮುಂದಿನ ಯೋಜನೆಗಳೇನು ಸರ್? ‘ನುಂಗ್ಲಿ’ಯನ್ನು ಯಾವ ರೀತಿ ಜನರು ರಿಸೀವ್ ಮಾಡಿದ್ದಾರೆ?

ಚೂರಿ: ‘ನುಂಗ್ಲಿ’ಯನ್ನು ಕನರು ಒಪ್ಪಲೇಬೇಕು. ಅವರು ನನ್ನ ‘ಲವ್ ಲೆಟರ್’ ಮಾನ್ಯ ಮಾಡಲಿಲ್ಲವಾದ್ದರಿಂದ ನಾನು ‘ನುಂಗ್ಲಿ’ ಮಾಡಿರುವೆ. ‘ನುಂಗ್ಲಿ’ಯನ್ನು ಜನರು ಒಪ್ಪದಿದ್ದರೆ ಇದಕ್ಕಿಂತಲೂ ಹೆಚ್ಚಿನ ‘ಪ್ರತಿಭೆ’ ವಿನಿಯೋಗಿಸಿ ಜನರಿಗೆ ಶಿಕ್ಷೆ ಕೊಡುವೆ. ಜನರೇ ಆಲೋಚನೆ ಮಾಡಲಿ ಏನು ಮಾಡಬೇಕು ಅಂತ…

ನ.ಸಾ: ಒಟ್ಟಿನಲ್ಲಿ ನಿಮಗೆ ಪ್ರೇಕ್ಷಕರೇ ಪ್ರಭುಗಳು ಅಂದ ಹಾಗಾಯ್ತು. ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು. ಮುಂದಿನ ಸಿನೆಮಾಗೆ ಸೆಕೆಂಡ್ ಹಿರೋ ಪಾರ್ಟ್ ಇದ್ದರೆ ನನಗೆ ಕೊಡಿಸಿ… 

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

6 ಫೆಬ್ರ

ಸಂಪದಿಗಣೇಶರ ಬರಹವನ್ನು ಅಲ್ಲಿಂದ ನೇರವಾಗಿ ಹೈಜ್ಯಾಕ್ ಮಾಡಿ ಇಲ್ಲಿ ಹಾಕಿದ್ದೇವೆ.

– ನಗೆ ಸಾಮ್ರಾಟ್

 

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ.
ನಾಯಕಿ, ಕೋಟ್ಯಾಧೀಶ…(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?..
ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ  ?
-ನಮ್ಮದು ಡಿಫರೆಂಟೂ..
ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ..
‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ..,
ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ)..
ಎಮ್.ಜಿ.ರೋಡಲ್ಲಿ ಬರುತ್ತಾಳೆ..
ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ..
ನಾಯಕ ಡಾಕ್ಟ್ರು?..ಊಹೂಂ
ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ
ಲಾಯರ್? ಪೋಲೀಸ್? ಕಳ್ಳ? .. ಊಹೂಂ..
ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..
ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..

ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ ೩-೪ ಕಾಯಿನ್ ಮೇಲೆ
ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ..
ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್‌ಲ್ ಹಾಕ್ರೀ..)

ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ)
ಹರಿದ ಅಂಗಿ..(ಒಳಗೆ ಮೃದು ಹೃದಯ)
ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..)
ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ..
ಹಾಡಿಗೆ ಆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ)

ಈ ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು,
ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು.
ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್
ಆಗಿ ಬಂದಿದೆ.

ಲವ್ ಸುರು..
ಈಗ ವಿಲನ್ ಎಂಟ್ರಿ ಆಗಬೇಕಲ್ಲ..ಯಾರು ವಿಲನ್?

ಹುಡುಗಿಯ ಅಪ್ಪ..? ಊಹೂಂ.. ಡಿಫರೆಂಟೂ..
ಅಪ್ಪ ಖುಷಿಯಿಂದ ಒಪ್ಪುವನು. ಮದುವೆ ಗ್ರಾಂಡ್ ಆಗಿ ಸ್ವಿಜರ್‌ಲ್ಯಾಂಡ್‌ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.

ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)
‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ.
ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ? ಅಮೆರಿಕಾ ಅಧ್ಯಕ್ಷನ ಬೀಗ ಎಂದು
ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’
ಇಂಟರ್‌ವಲ್

***

ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ.
ಕೇವಲ ನಾಯಕನ ಒಂದೊಂದು ಡ್ರೆಸ್‌ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್‌ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.

ಈಗ ಇಂಟರ್‌ವಲ್ ನಂತರದ ಕತೆ-
ಅಮೆರಿಕಾದ ಫೈಟರ್ ಜೆಟ್‌ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ..
ಡಿಫರೆಂಟೂ..
ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ
ಹೋಗುವನು. ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್‌ಗಳು ವಿಮಾನ ಹೈಜಾಕ್ ಮಾಡುವರು!!
ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’-
ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು..
ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್‌ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ.

ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ.
ಯಾಕೆಂದರೆ ಎಪ್ರಿಲ್ ೧ಕ್ಕೆ ನಮ್ಮ ಸಿನೆಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು. ಅಕ್ಷರಶಃ ಚಿಂದಿ ಉಢಾಯಿಸುವುದು!!

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

22 ಜುಲೈ

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.

ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.

‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು…’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.

‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ…’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.

‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ… ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.

ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!

ಹಿರಿಯ ನಾಯಕರ ಮೀಸಲಾತಿಗೆ ಆಗ್ರಹ

9 ಜುಲೈ

( ನಗೆ ನಗಾರಿ ಸಿನಿಮಾ ಬ್ಯೂರೋ)

‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ ಮಾಡಲು ಕೆಲಸವಿಲ್ಲದ ‘ಕ್ರಿಯಾಶೀಲ’ರ ಸಂಘಟನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ. ಈ ಪ್ರಕಟಣೆ ಕೇವಲ ನಗೆ ನಗಾರಿಯ ಕಛೇರಿಯನ್ನು ತಲುಪಿರುವುದರ ಹಿಂದಿನ ರಹಸ್ಯದ ಬಗ್ಗೆ ಪ್ರತಿಸ್ಪರ್ಧಿ ಪತ್ರಿಕೆಗಳು ತನಿಖೆ ನಡೆಸಬಹುದು!

‘ಕನ್ನಡದಲ್ಲಿ ಅನಾರೋಗ್ಯಕರವಾದ ಬೆಳವಣಿಗೆಯೊಂದು ನಡೆಯುತ್ತಿದೆ. ಇದರಿಂದ ನಟನೆ ಎಂಬ ಕಲೆಗೇ ಅವಮಾನ ಮಾಡಿದ ಹಾಗಾಗುತ್ತದೆ.’ ಎಂದು ನಗೆ ಸಾಮ್ರಾಟರೊಂದಿಗೆ ಮಾತಿಗಿಳಿದ ನಿರುದ್ಯೋಗಿ ಕ್ರಿಯಾಶೀಲರ ಸಮಿತಿಯ ಕಾರ್ಯದರ್ಶಿ ‘ ಈಗ ನೋಡಿ ಕಲಾವಿದನ ನಿಜವಾದ ಸಾಮರ್ಥ್ಯ ಹಾಗೂ ಪ್ರತಿಭೆಯ ಅನಾವರಣವಾಗುವುದು ಆತ ಪಾತ್ರವೊಂದನ್ನು ಆವಾಹಿಸಿಕೊಂಡು ನಟಿಸಿದಾಗ. ಉದಾಹರಣೆಗೆ ರಾಜನ ಪಾತ್ರವನ್ನು ಮಾಡುವಾಗ ನಾಯಕ ನಟ ಬಡವನಾದರೂ, ಸಿರಿವಂತಿಕೆಯ ಗತ್ತನ್ನು ಒಂದು ದಿನವೂ ಅನುಭವಿಸಿ ಗೊತ್ತಿರದಿದ್ದರೂ ರಾಜನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಬೇಕು. ಪಾತ್ರಕ್ಕೂ, ನಿಜ ವ್ಯಕ್ತಿತ್ವಕ್ಕೂ ನಡುವಿರುವ ಕಂದಕ ಹೆಚ್ಚಿದಷ್ಟೂ ಅದು ಕಲಾವಿದನಿಗೆ ಬಲವಾದ ಸವಾಲನ್ನು ಒಡ್ಡುತ್ತದೆ. ಅದನ್ನು ನಿಭಾಯಿಸುವವನು ಒಳ್ಳೆಯ ನಟ.’ ಎಂದರು.

‘ನಿಮ್ಮ ಫಿಲಾಸಫಿ ಎಲ್ಲಾ ಸರಿ ಸಾರ್. ಅದಕ್ಕೂ ಪ್ರಸ್ತುತ ನೀವು ಮಾಡುತ್ತಿರುವ ಹಕ್ಕೊತ್ತಾಯಕ್ಕೂ ಏನು ಸಂಬಂಧ ಸಾರ್?’ ತಲೆ ಕೆರೆದುಕೊಂಡು ಪ್ರಶ್ನಿಸಿದರು ನಗೆ ಸಾಮ್ರಾಟ್.

‘ಸಂಬಂಧವಿಲ್ಲದೆ ಮಾತನಾಡುವುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಾನಿನ್ನೂ ರಾಜಕೀಯಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಒಂದು ವೇಳೆ ಜನಪ್ರಿಯತೆಯ ಭಾರ ಜಾಸ್ತಿಯಾದರೆ ಅದನ್ನು ಕಳೆದುಕೊಂಡು ಸ್ವಲ್ಪ ನಿರಾಳವಾಗುವುದಕ್ಕೆ ಆ ಯೋಚನೆ ಮಾಡಬಹುದು. ಆಗ ಸಂಬಂಧವಿಲ್ಲದ ಹಾಗೆ ಮಾತನಾಡುವುದಕ್ಕೆ ಪ್ರಯತ್ನ ಪಡುತ್ತೇನೆ.

‘ಈಗ ಪ್ರಸ್ತುತ ಹಕ್ಕೊತ್ತಾಯದ ವಿಷಯಕ್ಕೆ ಬರುತ್ತೇನೆ. ನೋಡಿ ಈಗ ಕಾಲೇಜು ಹುಡುಗ ಪಾತ್ರಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗನನ್ನೇ ಹಾಕಿಕೊಳ್ಳುತ್ತಿದ್ದಾರೆ. ಯುವಕನ ಪಾತ್ರಕ್ಕೆ ಯುವ ನಟನನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪಾತ್ರವನ್ನು ಆವಾಹಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಂತಾಗುವುದಿಲ್ಲ. ಯುವಕರು ಯುವಕರ ಹಾಗೆ ನಟಿಸಲು ಏನು ಮಹಾ ಪ್ರತಿಭೆ ಬೇಕು ಹೇಳಿ? ಪ್ರಾಣಿ ಪ್ರಾಣಿಯಂತಿರುವುದಕ್ಕೆ ಯಾವುದಾದರೂ ಪರಿಶ್ರಮ ಬೇಕೇ? ಪ್ರಾಣಿ ಮನುಷ್ಯನ ಹಾಗೆ ಮಾಡುವುದಕ್ಕೆ ಅಗಾಧವಾದ ಪ್ರತಿಭೆ ಬೇಕು.  ವಯಸ್ಸು ನಲವತ್ತು ದಾಟಿ, ಕ್ರಾಪಿನ ಜಾಗದಲ್ಲಿ ಜಾರುವ ಬುರುಡೆ ಬಂದವರಿಗೆ ಇಪ್ಪತ್ತರ ಹರೆಯದ ನಾಯಕನ ಪಾತ್ರವನ್ನು ಕೊಡಬೇಕು. ಆಗ ನಟನಾ ಸಾಮರ್ಥ್ಯ ಅನಾವರಣ ಗೊಳ್ಳುತ್ತದೆ. ಇಪ್ಪತ್ತರ ತರುಣನಿಗೆ ಹದಿನೆಂಟರ ತರುಣಿಯ ಸೊಂಟ ಬಳಸಿ ಕುಣಿಯುವುದು ಕಷ್ಟವಾಗುವುದಿಲ್ಲ ಅದಕ್ಕೆ ಯಾವ ಸಾಧನೆಯೂ ಬೇಕಿಲ್ಲ. ಆದರೆ ನಲವತ್ತೈದರ ನಟ ತನ್ನ ಮಗಳ ವಯಸ್ಸಿನ ನಟಿಯೊಂದಿಗೆ ಮರ ಸುತ್ತುವುದು ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಅದಕ್ಕಾಗಿಯೇ ನಾವು ಕನ್ನಡದಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಶೇ. ೨೦ರಷ್ಟು ಸಿನೆಮಾಗಳಿಗೆ ನಲವತ್ತು ದಾಟಿದವರನ್ನೇ ಯುವ ನಾಯಕನ ಪಾತ್ರಕ್ಕೆ ಆರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ.’ ಎಂದು ವಿವರಿಸಿದರು.

ಸಂದರ್ಶನ ಮುಗಿಸಿದ ನಗೆ ಸಾಮ್ರಾಟರಿಗೆ, ಹೌದು ಇವರು ಬರೀ ನಾಯಕ ನಟರುಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ನಟೀ ಮಣಿಯರ ವಿಚಾರವೇನು ಎಂದು ಕೇಳುವ ಮನಸ್ಸಾಯಿತು. ಆದರೆ ನಲವತ್ತು ಮೀರಿದ ನಟಿ ಮಣಿಯರು ಹದಿನೆಂಟರ ಹುಡುಗನ ಬೆನ್ನು ತಬ್ಬಿಕೊಂಡು  ಬೈಕಿನಲ್ಲಿ ಕಾಲೇಜಿಗೆ ಬರುವ ದೃಶ್ಯವನ್ನು ಕಲ್ಪಿಸಿಕೊಂಡು ತಮ್ಮ ಪ್ರಶ್ನೆ ಮಹಿಳಾ ಉಟ್ಟು ಓರಾಟಗಾರ್ತಿಯರ್ಯಾರ ಕಿವಿಗೂ ಬೀಳದಂತೆ ಎಚ್ಚರವಹಿಸಿ ಅಲ್ಲಿಂದ ಜಾರಿಕೊಂಡರು!