Tag Archives: ಸಾಮ್ರಾಟ್

ಕುಚೇಲ ವಾಣಿ: ಸಾಮ್ರಾಟರೇ, ಸೈಡು ಬಿಡಿ

15 ಸೆಪ್ಟೆಂ

ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. kuchela

ಉನ್ನತವಾದ ಕಾಲೇಜಿನ ಕಲಾ ವಿಭಾಗದಲ್ಲಿ ಓದಿ ಚಿನ್ನದ ಪದಕವನ್ನು ಎರಡು ಅಂಕಗಳಲ್ಲಿ ತಪ್ಪಿಸಿಕೊಂಡ ವಿದ್ಯಾರ್ಥಿ ನಾನು. ಎರಡು ಅಂಕ ಕಡಿಮೆ ಗಳಿಸಿದ ತಪ್ಪಿಗಾಗಿ ಏನೋ ಎಂಬಂತೆ ಸಾಮ್ರಾಟರ ಬಳಿ ಇಂಟರ್ನ್ ಆಗಿ ಸೇರಿಕೊಂಡೆ. ತೆಹೆಲ್ಕಾ ಡಾಟ್ ಕಾಮ್ ಪ್ರಸಿದ್ಧಿಯಲ್ಲಿದ್ದ ದಿನದಿಂದ ನಗೆ ನಗಾರಿ ಡಾಟ್ ಕಾಮ್ ನಂತಹ ಬಹುದೊಡ್ಡ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದರೆ ನನ್ನ ಭವಿಷ್ಯವು ಉಜ್ವಲವಾಗಿರುವುದು. ನಾನು ಮುಖ ತೋರಿದೆಡೆಯೆಲ್ಲಾ ಕೆಲಸಕ್ಕೆ ಆಹ್ವಾನಗಳು ತೂರಿ ಬರುವವು. ನೀಳ ಜಡೆಯ ಹುಡುಗಿಯರು ನನ್ನ ಶರ್ಟಿನ ಚುಂಗು ಎಳೆಯುತ್ತ ಒಂದು ಜೋಕು ಹೇಳು ಎಂದು ಪೀಡಿಸುವರು. ಆ ಮುದ್ದಾದ ಚಿತ್ರಗಳಿಗೆ ಚುರುಕಾದ ಅಡಿ ಬರಹಗಳನ್ನು ಕೊಡುತ್ತಿದ್ದವನು ನೀನೇನಾ ಎಂದು ಕಂಡವರೆಲ್ಲಾ ಹುಬ್ಬೇರಿಸುವರು ಎಂದೆಲ್ಲಾ ಕನಸು ಕಾಣುತ್ತ ದಿನ ತಳ್ಳುತ್ತಿದ್ದವನಿಗೆ ಸಾಮ್ರಾಟರಿಂದ ಮುಕ್ತಿಯೇ ಇಲ್ಲದಾಗಿ ಹೋಯಿತು.

ನನ್ನ ಬಗ್ಗೆ ಮಾತೆತ್ತಿದರೆ ‘ನಮ್ಮ ಅತ್ಯಾಪ್ತ ಚೇಲ ಕುಚೇಲ’ ಎಂದು ಸಕ್ಕರೆಯ ಮಾತನಾಡುವ ಸಾಮ್ರಾಟರು ಇಷ್ಟು ದಿನಗಳಲ್ಲಿ ನನಗೆ ನೀಡಿದ ಹಿಂಸೆಯನ್ನು ಪಟ್ಟಿ ಮಾಡಲು ಇದು ಯೋಗ್ಯವಾದ ಸ್ಥಳವಲ್ಲ. ಅವರು ಹೇಳಿದ್ದನ್ನೆಲ್ಲ ಮಾಡಿಕೊಂಡು, ಅವರು ಅಟ್ಟಿದಲ್ಲೆಲ್ಲಾ ಓಡಿ ಅಲೆದಾಡಿಕೊಂಡು ಇದ್ದೆ. ನಾನು ಬರೆದ ವರದಿಗಳಿಗೆಲ್ಲಾ ತಮ್ಮ ಹೆಸರೇ ಹಾಕಿಕೊಂಡು ಸಾಮ್ರಾಟರು ಮೆರೆಯುವಾಗ ನನಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಒಂದಲ್ಲ ಒಂದು ದಿನ ನನಗೂ ಕಾಲ ಕೂಡಿ ಬರುತ್ತದೆ. ಆಗ ಜಗತ್ತೇ ನನ್ನ ಬೆರಳ ಸನ್ನೆಯಿಂದ ಕುಣಿಯುತ್ತದೆ ಎಂದುಕೊಂಡಿದ್ದೆ. ಸಾಮ್ರಾಟರ ಮಹಿಮೆಯಿಂದ ಆ ದಿನ ಎಂದಿಗೂ ಬರುವುದಿಲ್ಲ ಎಂದು ಮೆಲ್ಲಗೆ ಅರಿವಾಗುತ್ತಿದೆ. ಸಾಮ್ರಾಟರೊಡನೆ ಕೆಲಸ ಮಾಡಿದೆ ಎಂದು ಹೇಳಿಕೊಂಡದ್ದಕ್ಕೆ ನಾಲ್ಕು ಕಛೇರಿಗಳಲ್ಲಿ ಕೈಲಿ ಹಿಡಿದಿದ್ದ ಫೈಲು ಕಸಿದುಕೊಂಡು ಹೊರದಬ್ಬಿದರು. ಒಬ್ಬ ಯಜಮಾನರಂತೂ ಜೇಬಲ್ಲಿದ್ದ ಐವತ್ತು ರುಪಾಯಿ, ಬಿಎಂಟಿಸಿ ದಿನದ ಪಾಸನ್ನು ಕಿತ್ತುಕೊಂಡು ಹೊರಗಟ್ಟಿದರು. ಸಾಮ್ರಾಟರ ಹೆಸರು ಹೇಳುತ್ತಿದ್ದಂತೆಯೇ ‘ನೋ ವೇಕೆನ್ಸಿ’ ಎಂದವರು ಅನೇಕರು. ಹೀಗೆ ನಾನು ಎಲ್ಲೆಲ್ಲಿ ಹೋದರೂ ಸಾಮ್ರಾಟರ ಹೆಸರಿನ ಕರಾಳ ನೆರಳು ಅದಾಗಲೇ ಅಲ್ಲಿ ಉಪಸ್ಥಿತವಿರುತ್ತಿತ್ತು.

ಹಳೆ ಗಂಡನ ಪಾದವೇ ಗತಿಯೆಂಬ ಗರತಿಯ ಅನುಭವ ವಾಕ್ಯವನ್ನು ರಕ್ತಗತವಾಗಿಸಿಕೊಂಡು ನಾನು ವಾಪಸ್ಸು ಸಾಮ್ರಾಟರ ಬಳಿ ಬಂದಿರುವೆ. ಆದರೆ ಈ ಬಾರಿ ಸಾಮ್ರಾಟರ ಚೇಲನಾಗಿಯಷ್ಟೇ ಉಳಿಯಲು ಬಂದಿಲ್ಲ. ಸಾಮ್ರಾಟರ ಸಾಮ್ರಾಜ್ಯಕ್ಕೆ ಅನಭಿಷಿಕ್ತ ಯುವರಾಜನಾಗುವ ಹುಮ್ಮಸ್ಸಿನಿಂದ ಬಂದಿದ್ದೇನೆ.

ಇಷ್ಟು ದಿನ ನಗಾರಿಯು ಬಾಲ್ಯಾವಸ್ಥೆಯಲ್ಲಿತ್ತು ಎನ್ನಬಹುದು. ಬಾಲಿಶವಾದ ಹಾಸ್ಯವೇ ಇದರ ಜೀವಾಳವಾಗಿತ್ತು. ಆಗಾಗ ಸಾಮ್ರಾಟರು ತಮ್ಮತನವನ್ನೂ ಮೀರಿದ ಅದ್ಭುತ ಹಾಸ್ಯವನ್ನು ಹುಟ್ಟಿಸುತ್ತಿದ್ದರು ಎನ್ನುವುದನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲವೂ infantile ಆದ ನಗೆ ಬರಹಗಳೇ ಆಗಿರುತ್ತಿದ್ದವು. ಇನ್ನು ನನ್ನ ಸುಪರ್ದಿಗೆ ಬಂದಿರುವ ನಗಾರಿಗೆ ಯೌವನದ ಹೊಳಪನ್ನು ನೀಡಲು ನಾನು ಯತ್ನಿಸುವೆ. ಬಾಲಿಶತನವನ್ನೂ ಹೊಂದಿದ್ದು ಅದನ್ನು ಮೀರಲು ಯತ್ನಿಸುವ ಯುವಕನ ಹುಮ್ಮಸ್ಸನ್ನು ನಗಾರಿಯ ಬರಹಗಳಲ್ಲಿ ತುಂಬುವತ್ತ ಪ್ರಾಮಾಣಿಕ ಪರಿಶ್ರಮ ವಿನಿಯೋಗಿಸುವೆ. ಸಾಮ್ರಾಟರು ನಗಾರಿಯ ದೊರೆಗಳಾಗಿ ಮುಂದುವರೆಯುತ್ತಾರಾದರೂ ನಗಾರಿಯ ಆಗು ಹೋಗುಗಳಲ್ಲಿ ನಾನೇ ಸಕ್ರಿಯವಾಗಿ ಪಾಲ್ಗೊಳ್ಳುವೆ. ಇನ್ನು ಮೇಲೆ ಸಾಮ್ರಾಟರು ನನ್ನನ್ನು ಎಲ್ಲಿಯೂ ಅಟ್ಟುವುದಿಲ್ಲ ಎನ್ನುವ ವಿಶ್ವಾಸ ನನ್ನದು.

ಕಾಲವು ಬಹು ವೇಗವಾಗಿ ಬದಲಾಯಿಸುತ್ತಿದೆ. ವ್ಯಂಗ್ಯ ಎಂದು ನಾವು ಪರಿಗಣಿಸಿದ್ದು ವಾಸ್ತವವೇ ಆಗಿ ಸ್ಥಾಪಿತವಾಗುತ್ತಿದೆ. ವಾಸ್ತವವೇ ದೊಡ್ಡ ವ್ಯಂಗ್ಯವಾಗಿ ನಮ್ಮನ್ನು ಪರಿಹಾಸ್ಯ ಮಾಡುತ್ತಿದೆ. ಕೈಲಿ ಲಟ್ಟಣಿಗೆ ಹಿಡಿದು, ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಎದೆ ಸೆಟೆಸಿ ನಿಂತ ಹೆಂಡತಿ, ಹಣೆಯ ಮೇಲೆ ಬುಗುಟು ಎದ್ದು, ಸತ್ತೆನೋ ಕೆಟ್ಟೆನೋ ಎಂದು ಓಡುವ ಪತಿ- ಎನ್ನುವುದು ವ್ಯಂಗ್ಯವಾಗಿ ಉಳಿದೇ ಇಲ್ಲ ಎನ್ನುವುದನ್ನು ಭೈರಪ್ಪರಂತಹ ಹೆಸರಾಂತ ಕಾದಂಬರಿಕಾರರು ನಿರೂಪಿಸುವ ವಾಸ್ತವವಾಗಿ ಹೋಗಿದೆ. ಒಬ್ಬರ ಮೇಲೆ ಇನ್ನೊಬ್ಬರು ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರದ ಆರೋಪ ಮಾಡಿ, ತಮ್ಮ ಬಳಿ ಇರುವ ಸಾಕ್ಷ್ಯಗಳ ಸತ್ಯಾಸತ್ಯತೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ, ಕುಮಾರಸ್ವಾಮಿಗಳು ಕರ್ನಾಟಕದ ರಾಜಕೀಯದ ವಾಸ್ತವವನ್ನೇ ದೊಡ್ಡ ವ್ಯಂಗ್ಯವಾಗಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಸಿಗೆಯಲ್ಲಿ ಸೇರಿಕೊಂಡ ತಿಗಣೆಯ ಬಗ್ಗೆಯೇ ವಿನೋದ ಮಾಡುತ್ತ ಕೂರುವ ಸಾಮ್ರಾಟರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ.

ಸಾಮ್ರಾಟರ ವಿನೋದದಲ್ಲಿ ವಿವೇಕವೇ ಹೆಚ್ಚು ಇರುತ್ತದೆ. ಅವರ ವಿನೋದಕ್ಕೆ ನನ್ನ ತಕರಾರುಗಳು ಎರಡು ರೀತಿಯವು. ಓದುಗರು ತಮ್ಮಿಂದ ವಿವೇಕ ಹೇಳಿಸಿಕೊಳ್ಳುವಂಥವರು ಎಂದು ಭಾವಿಸುವುದು ಸಾಮ್ರಾಟರ ಅಹಂಕಾರವನ್ನು ತೋರುತ್ತದೆ ಎನ್ನುವುದು ಮೊದಲ ತಕರಾರು. ಎರಡನೆಯದು, ವಿವೇಕವನ್ನು ವಿನೋದವಾಗಿ ಹೇಳಲು ಹೊರಟರೆ ಓದಿದವರೂ ಸಹ ವಿನೋದದಿಂದಲೇ ಅದನ್ನು ಮರೆತು ಮುಂದೆ ಹೋಗುತ್ತಾರೆ.

ನಗೆ ನಗಾರಿಯ ವಿನೋದವು ಹರಿತವಾಗಿಲ್ಲ. ವಿನೋದಕ್ಕೆ ಈಡು ಮಾಡಿದ ವ್ಯಕ್ತಿಯ ನಿಜ ನಾಮಧೇಯವನ್ನು ಬಳಸದಿರುವುದು ಸಾಮ್ರಾಟರ ಪುಕ್ಕಲುತನವನ್ನು ತೋರುತ್ತದೆ. ನಿಜ ಸನ್ನಿವೇಶಗಳು, ನಿಜ ವ್ಯಕ್ತಿಗಳು, ನಿಜವಾದ ಘಟನೆಗಳೇ ವಿನೋದಕ್ಕೆ, ವ್ಯಂಗ್ಯಕ್ಕೆ ಈಡಾಗಬೇಕು. ಆಗಲೇ ವ್ಯಂಗ್ಯದ ನಿಜವಾದ ಸತ್ವ ಹೊರತರಲಿಕ್ಕೆ ಸಾಧ್ಯ. ದೇಜಗೌ ತಮ್ಮನ್ನು ತಾವು ದಶರಥ, ಮೋತಿಲಾಲ ಎಂದು ಕರೆದುಕೊಳ್ಳುವುದು, ರಾಮುಲು ತಾನು ಯಾವುದೇ ರೀತಿಯಿಂದಲೂ ಚೆಂದ ಕಾಣಿಸಬಾರದೆಂದು ತಲೆ ಬೋಳಿಸಿಕೊಳ್ಳುವುದು, ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಹಲುಬುವುದು, ರವಿ ಬೆಳಗೆರೆ ತನ್ನ ಕೈಲಿನ್ನು ಆಗಲ್ಲ ಎಂದು ಬರೆದುಕೊಳ್ಳುವುದು ಎಲ್ಲವೂ ನಗಾರಿಯ ಮೊನಚಾದ ಹಾಸ್ಯಕ್ಕೆ ಈಡಾಗಬೇಕು. ಇದು ನನ್ನ ವಿಶನ್.

ಸಾಮ್ರಾಟರಷ್ಟು ನಿರರ್ಗಳವಾಗಿ ನನಗೆ ಬರೆಯಲು ಸಾಧ್ಯವಾಗದಿರಬಹುದು. ಅವರಷ್ಟು ಬುದ್ಧಿವಂತಿಕೆಯಿಂದ ಪ್ರತಿಕ್ರಿಯೆ ನೀಡಲು ನನಗೆ ಬಾರದಿರಬಹುದು. ಆದರೆ ಬೆಳೆಯುವ ಆಕಾಂಕ್ಷೆಯಿರುವ ನಾನು ನಗಾರಿಯಲ್ಲಿ ಅತ್ಯುತ್ತಮವಾದದ್ದೇ ಪ್ರಕಟವಾಗುವಂತೆ ನೋಡಿಕೊಳ್ಳುವೆನು.

ಸಾಮ್ರಾಟರೆ, ಸೈಡು ಬಿಡಿ!

ನಿರೀಕ್ಷಿಸಿ ಸಾಮ್ರಾಟರ ಸಂದರ್ಶನ!

8 ಜನ

ನಗೆನಗಾರಿಯನ್ನು ಪ್ರಾರಂಭಿಸಿದ ಸಾಮ್ರಾಟರು ಕುಂಟುತ್ತ ತೆವಳುತ್ತ ಅದು ಎರಡನೆಯ ವರ್ಷದವರೆಗೆ ಜೀವಂತವಿರುವಂತೆ vishesha sandarshanaನೋಡಿಕೊಂಡಿದ್ದಾರೆ. ಆದರೆ ಇದು ದೊಡ್ಡ ಸಾಧನೆಯಲ್ಲ. ನಗೆ ನಗಾರಿಗೆ ಎರಡು ವರ್ಷ ತುಂಬುವಷ್ಟರಲ್ಲಿ ಒಂದು ಬಾರಿ ಆತ್ಮಹತ್ಯೆಯನ್ನು ಮಾಡಿಕೊಂಡು. ಒಂದು ಬಾರಿ ವಿದೇಶ ಪ್ರಯಾಣವನ್ನು ಮಾಡಿಕೊಂಡು, ಒಂದು ಬಾರಿ ಅಪಹರಣಕ್ಕೆ ಒಳಗಾಗಿ, ಇನ್ನೊಮ್ಮೆ ಎಮರ್ಜನ್ಸಿಯಲ್ಲಿ ಸಿಲುಕಿಕೊಂಡು ಎರಡು ವರ್ಷಗಳ ಕಾಲ ಜೀವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಆಲ್ಟರ್ ಈಗೋವನ್ನೂ, ಅವರನ್ನೂ ಒಂದೇ ಕುರ್ಚಿಯಲ್ಲಿ ಕೂರಿಸಿ ಅವರದೇ ಸಂದರ್ಶನ ಮಾಡಿಬಿಡುವುದೆಂದು ನಗೆ ನಗಾರಿಯ ಸಮಸ್ತ ಸಿಬ್ಬಂದಿ ಹೊಂಚು ಹಾಕಿದೆ. 

ಸಾಮ್ರಾಟರಂತಹ ಘಟಾನುಘಟಿಯನ್ನು ಸಂದರ್ಶಿಸಲು ಸಾಮಾನ್ಯರಿಂದ ಸಾಧ್ಯವಾಗುವುದಿಲ್ಲವೆಂದೇ ಅದ್ವಿತೀಯ ಸಾಧನೆ ಮಾಡಿದ ಟಿವಿ ಸುದ್ದಿ ವಾಹಿನಿಯ ಅತಿ ಜನಪ್ರಿಯ ಸಂದರ್ಶಕ ಮರಣ್ ಚಾಪರ್‌ರನ್ನೇ ಈ ಕೆಲಸಕ್ಕೆ ಒಪ್ಪಿಸಿದ್ದೇವೆ. ತಮ್ಮ ಹರಿತವಾದ ಹಾಗೂ ನಿಖರವಾದ ಪ್ರಶ್ನೆಗಳಿಂದ ಅತಿಥಿಗಳನ್ನು ಗಲಿಬಿಲಿಗೊಳಿಸುವಲ್ಲಿ ಖ್ಯಾತರಾದ ಚಾಪರ್ ಹಿಂದೆ ಹಲವು ಸಂದರ್ಶನಗಳಲ್ಲಿ ಅತಿಥಿಗಳ ನೀರಿಳಿಸಿದ್ದಾರೆ. ಈ ಮಾಹಿತಿಯನ್ನು ಪಡೆದ ಸಾಮ್ರಾಟರು ಕಳೆದಿರುಳಿನಿಂದ ತಮ್ಮ ಖಾಲಿ ಶಿರದಲ್ಲಿ ಸಾಧ್ಯವಾದಷ್ಟು ಹೆಚ್ಚು ನೀರು ತುಂಬಿಸಿಕೊಳ್ಳತೊಡಗಿದ್ದಾರೆ.

ಈ ಅಪರೂಪದ ವಿಶೇಷ ಸಂದರ್ಶನದ ಮೊದಲ ಭಾಗ ನಾಳಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ. ಹೆದರಬೇಡಿ, ನಾಳೆ ಬಂದೇ ಬರುತ್ತದೆ… ಯಾವಾಗ…. ನಾಳೆ!

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

24 ಫೆಬ್ರ

(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ ಮಂದಿರಗಳಲ್ಲೆಲ್ಲಾ ನೂರಾರು ದಿನ ಓಡಿತು, ಅಂತೆಯೇ ಅವರ ಎರಡನೆಯ ಸಿನೆಮಾ ‘ಲವ್ ಲೆಟರು’ ನಾಡಿನ ನೂರಾರು ಸಿನೆಮಾ ಮಂದಿರಗಳಿಂದ ಓಡಿತು, ಈಗ ಅವರು ತಮ್ಮ ಪ್ರತಿಭೆ ಹಾಗೂ ಪ್ರೇಕ್ಷಕರ ತಾಳ್ಮೆಯನ್ನೆಲ್ಲಾ ಪ್ರಯೋಗಕ್ಕೆ ಒಡ್ಡಿ ಮೂರನೆಯ ಸಿನೆಮಾ ಮಾಡಿದ್ದಾರೆ: ‘ನುಂಗ್ಲಿ’. ವಿಪರೀತ ಮಿತಭಾಷಿ ಹಾಗೂ ಮೌನಿಯಾದ ಚೂರಿಯವರ ವಿಶೇಷ ಸಂದರ್ಶನ ನಗೆ ನಗಾರಿಗಾಗಿ ಮಾಡಿರುವುದು ನಗೆ ಸಾಮ್ರಾಟರ ಆಲ್ಟರ್ ಈಗೋ)

ನಗೆ ಸಾಮ್ರಾಟ್: ಹೆಲೋ ಚೂರಿಯವರೇ ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು.

ಚೂರಿ: ನಾನ್ಯಾರು… ನಾನ್ಯಾರು… ನಾನ್ಯಾರು…

ನಗೆ ಸಾಮ್ರಾಟ್: ಹೌದು, ಹೌದು. ನೀವು ಮೊದಲ ಸಿನೆಮಾ ‘ಮುದಿಯಾ’ ಮಾಡಿದಾಗ ಜನರು ಹೀಗೇ ಕೇಳಿದ್ದರು. ‘ಇವನ್ಯಾರು … ಇವನ್ಯಾರು…’ ಎಂದು. ಅದ್ನ ನೆನಪಿಸಿಕೊಳ್ತಿದೀರಾ?

ಚೂರಿ: ಇಲ್ಲ. ನನ್ನೇ ನಾನು ಆಗಾಗ ಹಿಂಗೆ ಪ್ರಶ್ನೆ ಮಾಡ್ಕೋತಿರ್ತೀನಿ. ಉತ್ತರ ಸಿಗದೆ ಇನ್ನೇನು ನನ್ನ ತಲೆ ಕೆಟ್ಟು ಹೋಗುತ್ತೆ ಅಂದಾಗ ಸಿನೆಮಾ ಮಾಡಿಬಿಡ್ತೀನಿ ಅದೇ ಹುಳ ಬಿಟ್ಟು. ಜನರಿಗೆ ನನ್ನ ತಲೆ ನೋವು ರವಾನಿಸಿಬಿಡ್ತೀನಿ.

ನ.ಸಾ: ನಿಮ್ಮ ಮೊದಲ ಸಿನೆಮಾ ‘ಮುದಿಯಾ’ದಲ್ಲಿ ಸಾವು, ಗೋರಿ ಎಂದೆಲ್ಲಾ ದೊಡ್ಡ ದೊಡ್ಡ ಪದಗಳನ್ನ ಬಳಸಿದ್ರಿ. ಜೊತೆಗೆ ಕ್ರೌರ್ಯವನ್ನು ಫೇರ್ ಅಂಡ್ ಲವ್ಲಿ, ಮೇಕಪ್ಪು ಇಲ್ಲದೆ ಹಸಿಹಸಿಯಾಗಿ ತೋರಿಸಿದ್ರಿ.

ಚೂರಿ: ಹೌದು, ಕ್ರೌರ್ಯ ಅನ್ನೋದು ಪ್ರತಿಯೊಬ್ಬನಲ್ಲೂ ಇದೆ. ಅದಕ್ಕೆ ವೈಭವೀಕರಣ ನೀಡಬಾರದು. ಹಸಿ ಹಸಿಯಾಗಿ ಹಾಗೇ ತೋರಿಸ್ಬೇಕು. ಹಸಿ ತರಕಾರಿ ಹೇಗೆ ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು.

ನ.ಸಾ: ನಿಮ್ಮ ಎರಡನೆಯ ಚಿತ್ರ ‘ಲವ್ ಲೆಟರ್’ ನಲ್ಲಿ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿದ್ರಿ. ನಿಮ್ಮ ಹಸಿ ಹಸಿತನ ಹಾಗೂ ಹುಸಿತನಗಳೆಲ್ಲದರೆ ಜೊತೆಗೆ ಕುಡಿತವೆಂಬ ದುಶ್ಚಟವನ್ನು ಎದುರಿಸುವ ಧೈರ್ಯ ಮಾಡಿದ್ರಿ. ಆದರೆ ನಿಮ್ಮ ಆ ಸಿನೆಮಾ ಹೀನಾಯವಾಗಿ ಸೋತಿತು. ನೀವು ಕುಡಿತದ ಬಗ್ಗೆ ಸಿನೆಮಾ ಮಾಡಲು ಹೊರಟಿದ್ದೇ ಅದರ ಸೋಲಿಗೆ ಕಾರಣ ಎನ್ನಬಹುದೇ? 

ಚೂರಿ: ಇಲ್ಲ. ಸಿನೆಮಾ ನಿಜವಾಗ್ಲೂ ಚೆನ್ನಾಗೇ ಇತ್ತು ಆದ್ರೆ ಪ್ರೇಕ್ಷಕರು ಸಿನೆಮಾ ನೋಡಲಿಲ್ಲ ಅಷ್ಟೇ. ಪ್ರೇಕ್ಷಕರು ನೋಡಲಿಲ್ಲ ಎಂದ ಮಾತ್ರಕ್ಕೆ ಸಿನೆಮಾ ಸೋಲಲ್ಲ. ಕುಡಿತದ ಬಗ್ಗೆ ಸಿನೆಮಾ ಮಾಡಿದ್ದು ಸೋಲಿಗೆ ಕಾರಣ ಅಂತ ಹ್ಯಾಗೆ ಹೇಳ್ತೀರಿ?

ನ.ಸಾ: ನೋಡ್ರಿ ಸಿನೆಮಾ ನೋಡಲು ಥಿಯೇಟರಿಗೆ ಬರುವ ಮಂದಿಯಲ್ಲಿ ಬಹುಪಾಲು ಗಂಡಸರದು. ಅವರು ಸಿನೆಮಾ ನೋಡಲು ಬರುತ್ತಾರೆ ಇಲ್ಲವೇ ತಮ್ಮ ಅಥವಾ ಇನ್ನೊಬ್ಬರ ಹೆಂಡತಿಯರಿಗೆ, ಮಕ್ಕಳಿಗೆ ಸಿನೆಮಾ ತೋರಿಸಲು ಬರುತ್ತಾರೆ. ಕಾಲೇಜು ಬಂಕ್ ಮಾಡಿ, ಗೆಳೆಯರ ಗುಂಪು ಸಂಪಾದಿಸಿ, ಪಾಕೆಟ್ ಮನಿಯ ನೆರವಿನಿಂದ ಸಿನೆಮಾ ಥಿಯೇಟರಿಗೆ ಲಗ್ಗೆ ಇಡುವ ಪಡ್ಡೆಗಳನ್ನು ಬಿಟ್ಟರೆ ಇವರದೇ ಮೆಜಾರಿಟಿ. ಅಲ್ಲದೇ ಇವರು ಸಂಜೆಯಾಗುತ್ತಿದ್ದ ಹಾಗೆ ‘ತೀರ್ಥ ರೂಪ’ ರಾಗುವಂಥವರು. ಅವರ ‘ಮದುಬನದ’ ಸವಿಯನ್ನು ಕೀಳು ಎಂದು ತೋರಿಸಿದ ಸಿನೆಮಾಗೆ ಅವರು ಯಾಕೆ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ? ರಾಜಕಾರಣಗಳು ತಮ್ಮ ಹೆಂಡತಿ ಮಕ್ಕಳನ್ನು ಮಾಸ್ಟರ್ ಹಿರಣ್ಣಯ್ಯನವರ ನಾಟಕಕ್ಕೆ ಕಳುಹಿಸಿದ ಹಾಗೆ ಇದು!

ಚೂರಿ: ಹಾಗೋ, ಅದಕ್ಕೆ ನಾನು ಈ ಸಿನೆಮಾದಲ್ಲಿ ಹಳೆಯ ಪದ್ಧತಿಯನ್ನೆಲ್ಲಾ ಬಿಟ್ಟು ಹೊಸ ಸಾಹಸಕ್ಕೆ ಕೈ ಹಾಕಿರುವೆ.

ನ.ಸಾ: ಏನದು ಸಾರ್?

ಚೂರಿ: ಕುಡಿತದ ಕಾನ್ಸೆಪ್ಟು ಇಟ್ಟುಕೊಂಡಿದ್ದಕ್ಕೆ ಗಂಡಸರು ಥಿಯೇಟರಿಗೆ ಬರುವ ಮನಸ್ಸು ಮಾಡಲಿಲ್ಲ, ಪಡ್ಡೆಗಳು, ಹೆಣ್ಣುಮಕ್ಕಳಿಗೆ ಧೈರ್ಯ ಸಾಲಲಿಲ್ಲ ಅಂದ್ರಲ್ಲ, ಅದಕ್ಕೆ ಈ ಬಾರಿ ವಿಭಿನ್ನವಾಗಿ ಸಿನೆಮಾ ಮಾಡಿರುವೆ. ಮದರ್ ಸೆಂಟಿಮೆಂಟು ಇಟ್ರೆ ಕಾಲೇಜು ಹುಡುಗೀರು ನಿದ್ದೆ ಮಾಡ್ತಾರೆ, ಅಕ್ಕ ತಂಗಿ ಕಥೆ ಮಾಡಿದ್ರೆ ಹುಡುಗರು ಥಿಯೇಟರ್‌ ಕಡೆಗೆ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಪಡ್ಡೆಗಳಿಗೆ ಮಾಸ್ ಸಿನೆಮಾ ಮಾಡಿದ್ರೆ ಎಲೈಟ್ ಪತ್ರಕರ್ತರು, ಟಿವಿಯವರು ಮೂಸಿಯೂ ನೋಡಲ್ಲ. ಸಾಮಾಜಿಕ ಕಳಕಳಿಯ ಕಥೆ ಇಟ್ಟುಕೊಂಡು ಸಿನೆಮಾ ಮಾಡಿದ್ರೆ ಸಮಾಜವೇ ನೋಡಲ್ಲ. ಅದ್ಕೆ ಈ ಬಾರಿ ಎಲ್ಲಾ ವರ್ಗಕ್ಕೆ ತಲುಪುವ ಸಿನೆಮಾ ಮಾಡಿದ್ದೇನೆ.

ನ.ಸಾ: ಹೌದು, ನಿಮ್ಮ ‘ನುಂಗ್ಲಿ’ ವಿಶಿಷ್ಟವಾಗೇ ಇದೆ. ಆದ್ರೆ ಇದರ ವಿಶಿಷ್ಟತೆ ಏನು?

ಚೂರಿ: ಕಳೆದ ಸಿನೆಮಾದಲ್ಲಿ ಮಾಡಿದ ತಪ್ಪನ್ನು ಇಲ್ಲಿ ತಿದ್ದಿಕೊಂಡಿರುವೆ. ಅಲ್ಲಿ ಸಿನೆಮಾದ ಕಥೆಯೇ ಹಲವರಿಗೆ ಅಪಥ್ಯವಾಯಿತು. ಹೀಗಾಗಿ ಈ ಸಿನೆಮಾದಲ್ಲಿ ಅದರ ಗೋಜಿಗೇ ಹೋಗಿಲ್ಲ. ಅವರಿವರ ಭಾವನೆಗೆ ನೋವುಂಟು ಮಾಡುವ ಹಕ್ಕು ನಮಗೆಲ್ಲಿದೆಯಲ್ವಾ ಸಾರ್? ಹಾಗಾಗಿ ಈ ಸಿನೆಮಾದಲ್ಲಿ ಕಥೆಯನ್ನೇ ಬಳಸಿಲ್ಲ ನಾವು. ಇದು ಇತ್ತೀಚೆಗೆ ಪ್ರಸಿದ್ಧವಾಗುತ್ತಿರುವ ತಂತ್ರ. ನಾವೂ ಇದನ್ನು ಬಳಸಿದ್ದೀವಿ.

ನ.ಸಾ: ಹೌದು, ಹೌದು, ಸೋಪೇ ಇಲ್ಲದ ಸೋಪಿನ ಡಬ್ಬಿ, ಹಾಲೇ ಇಲ್ಲದ ಹಾಲಿನ ಪಾಕೆಟು, ಅಕ್ಕಿಯೇ ಇಲ್ಲದ ಅಕ್ಕಿಯ ಮೂಟೆ, ಮೆದುಳೇ ಇಲ್ಲದ ತಲೆ ಬುರುಡೆಗಳು ಸಾಮಾನ್ಯವಾಗುತ್ತಿರುವ ಈ ಕಾಲದಲ್ಲಿ ಕಥೆಯಿಲ್ಲದ ಸಿನೆಮಾ ತಂತ್ರ ಯಶಸ್ವಿಯಾಗಬಹುದು. ಅಂದ ಹಾಗೆ ನಿಮ್ಮ ಈ ತಂತ್ರದ ಮುಂದುವರಿದ ಭಾಗ ಏನು? ಪ್ರೇಕ್ಷಕರೇ ಇಲ್ಲದ ನೂರು ದಿನವಾ?

ಚೂರಿ: ಹೌದು, ಆ ತಂತ್ರವನ್ನು ಬಳಸಬೇಕು. ಈಗಾಗಲೇ ಕೆಲವರು ಆಕಾಶದ ವೀರಗನ್ನಡಿಗರು ಆ ತಂತ್ರ ಬಳಸಿ ಯಶಸ್ವಿಯಾಗಿದಾರೆ. ಜನರೇ ಇಲ್ಲದೆಯೂ ಸಿನೆಮಾವನ್ನು ನೂರು ದಿನ ಓಡಿಸುವುದು ಆ ತಂತ್ರ. ಅದನ್ನೂ ಮುಂದಿನ ಸಿನೆಮಾಗಳಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನ.ಸಾ: ‘ಲವ್ ಲೆಟರ್’ ಹಾಗೂ ‘ಮುದಿಯಾ’ದ ಮೂಲಕ ಉತ್ತಮ ಕಳಕಳಿಯನ್ನು ಹೊಂದಿರುವ ನಿರ್ದೇಶಕ ಎಂದು ಹೆಸರು ಮಾಡಿದವರು ನೀವು ಈಗ ಇಂಥ ಸಿನೆಮಾ ಮಾಡಿದ್ದರಿಂದ ನಿಮಗೆ ಏನೂ ಅನ್ನಿಸಲ್ವಾ?

ಚೂರಿ: ನೋಡಿ ನಾನು ನನ್ನ ಪ್ರತಿಭೆಯನ್ನೆಲ್ಲ ಧಾರೆಯೆರೆದು ಲವ್ ಲೆಟರ್ ಸಿನೆಮಾ ಮಾಡಿದೆ. ಜನರು ನೋಡಲಿಲ್ಲ. ತಪ್ಪು ಮಾಡಿದರು. ಅಂಥ ಒಳ್ಳೆಯ ಸಿನೆಮಾವನ್ನು ಅವರು ನೋಡಲಿಲ್ಲ. ಅದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ತಪ್ಪು ಮಾಡಿದವರಿಗೆ ಪನಿಶ್‌ಮೆಂಟ್ ಇರಲೇ ಬೇಕು. ಅದಕ್ಕೆ ಅವ್ರು ಈ ನನ್ನ ‘ನುಂಗ್ಲಿ’ ಸಿನೆಮಾ ನೋಡಬೇಕು. ಜನರಿಗೆ ಬುದ್ಧಿ ಕಲಿಸುವುದಕ್ಕಾಗಿ ನಾನು ‘ನುಂಗ್ಲಿ’ ಮಾಡಿರುವೆ.

ನ.ಸಾ: ಅದೇನೋ ಸರಿ ಸಾರ್ ಆದರೆ ನಿಮ್ ಈ ಸಿನೆಮಾದಲ್ಲಿ ಸೊಂಟದ ಕೆಳಗಿನ ಡೈಲಾಗುಗಳೇ ಜಾಸ್ತಿಯಂತೆ.

ಚೂರಿ: ಯಾರ್ರಿ ಹೇಳಿದ್ದು? ಸೊಂಟದ ಕೆಳಗಿನ ಡೈಲಾಗು ಒಂದೂ ಇಲ್ಲ ನಮ್ಮ ಸಿನೆಮಾದಲ್ಲಿ. ಒಂದನ್ನಾದರೂ ತೋರಿಸಿ ಬಿಡಿ ನೋಡೋಣ. ಎಲ್ಲವೂ ಸೊಂಟದ ಮೇಲಿನದ್ದೇ. ಎಲ್ಲರೂ ಬಾಯಲ್ಲಿಯೇ ಡೈಲಾಗು ಹೇಳಿರುವುದು, ಯಾರೂ ಸೊಂಟದ ಕೆಳಗಿಂದ ಡೈಲಾಗು ಹೇಳಿಲ್ಲ. ಸುಮ್ಮನೆ ಆರೋಪ ವಹಿಸಬೇಡಿ, ನೋವಾಗುತ್ತೆ.

ನ.ಸಾ: ಹೋಗ್ಲಿ ಬಿಡಿ ಸರ್. ನಿಮ್ಮ ಮುಂದಿನ ಯೋಜನೆಗಳೇನು ಸರ್? ‘ನುಂಗ್ಲಿ’ಯನ್ನು ಯಾವ ರೀತಿ ಜನರು ರಿಸೀವ್ ಮಾಡಿದ್ದಾರೆ?

ಚೂರಿ: ‘ನುಂಗ್ಲಿ’ಯನ್ನು ಕನರು ಒಪ್ಪಲೇಬೇಕು. ಅವರು ನನ್ನ ‘ಲವ್ ಲೆಟರ್’ ಮಾನ್ಯ ಮಾಡಲಿಲ್ಲವಾದ್ದರಿಂದ ನಾನು ‘ನುಂಗ್ಲಿ’ ಮಾಡಿರುವೆ. ‘ನುಂಗ್ಲಿ’ಯನ್ನು ಜನರು ಒಪ್ಪದಿದ್ದರೆ ಇದಕ್ಕಿಂತಲೂ ಹೆಚ್ಚಿನ ‘ಪ್ರತಿಭೆ’ ವಿನಿಯೋಗಿಸಿ ಜನರಿಗೆ ಶಿಕ್ಷೆ ಕೊಡುವೆ. ಜನರೇ ಆಲೋಚನೆ ಮಾಡಲಿ ಏನು ಮಾಡಬೇಕು ಅಂತ…

ನ.ಸಾ: ಒಟ್ಟಿನಲ್ಲಿ ನಿಮಗೆ ಪ್ರೇಕ್ಷಕರೇ ಪ್ರಭುಗಳು ಅಂದ ಹಾಗಾಯ್ತು. ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು. ಮುಂದಿನ ಸಿನೆಮಾಗೆ ಸೆಕೆಂಡ್ ಹಿರೋ ಪಾರ್ಟ್ ಇದ್ದರೆ ನನಗೆ ಕೊಡಿಸಿ… 

ಹೀಗೂ ಒಂದು ರಿಯಾಲಿಟಿ ಶೋ!

5 ನವೆಂ

(ನಗೆ ನಗಾರಿ ಮನರಂಜನಾ ಬ್ಯೂರೋ)

ತಮ್ಮ ರಿಯಲ್ ಬದುಕಿನ ಕಷ್ಟ ಸಂಕಟಗಳನ್ನು, ಉಪದ್ವಾಪ್ಯಗಳನ್ನು ಮರೆಯುವುದಕ್ಕಾಗಿ ಕ್ಷಣಮಾತ್ರಕ್ಕೆ ತಮ್ಮೆಲ್ಲಾ ದುಃಖಗಳಿಂದ ಬಿಡುವನ್ನು ಪಡೆಯುವುದಕ್ಕಾಗಿ, ಹಗಲಿನ ದುಡಿಮೆಯಿಂದ ಆದ ದಣಿವನ್ನು ತಣಿಸುವುದಕ್ಕಾಗಿ ಮನುಷ್ಯನು ಮನರಂಜನೆಯನ್ನು ಕಂಡುಕೊಂಡ ಎಂದು ಸಣ್ಣ ಮಗುವಾದರೂ ಯೋಚಿಸಿ ಹೇಳಬಹುದು. ಸಣ್ಣಗೆ ತಮಟೆಯನ್ನು ಬಡಿಯುತ್ತಾ, ಬೆಂಕಿಯ ಸುತ್ತ ಕುಣಿಯುತ್ತಾ, ಅಜ್ಜಮುತ್ತಜ್ಜನ ಕಾಲದ ರಾಜ, ರಾಕ್ಷಸ, ರಾಜಕುಮಾರಿಯರ ಕಥೆಯನ್ನು ಕೇಳುತ್ತಾ, ತಾವೇ ಕಟ್ಟಿಕೊಂಡ ಹಾಡು ಹಾಡುತ್ತಾ ಬೆಳೆದವರನ್ನು ಕಂಡು ನಮ್ಮ ವಿಜ್ಞಾನಕ್ಕೆ ಭಾರೀ ಅನುಕಂಪ ಮೂಡಿತು. ಮನರಂಜನೆಯ ಹೆಸರಿನಲ್ಲಿ ಜನರೇ ಕಷ್ಟ ಪಡುವುದು ಎಂಥಾ ಘೋರವಾದ ಸಂಗತಿ ಎಂದು ಆಲೋಚಿಸಿದ ವಿಜ್ಞಾನದ ವಂದಿಗರು ಅದಕ್ಕಾಗಿಯೇ ಎಂದು ಟಿವಿ ಎಂಬ ಮಾಯಾಪೆಟ್ಟಿಗೆಯನ್ನು ಆಕಾಶದಿಂದ ತಂದು ಪ್ರತಿಯೊಬ್ಬರ ಮನೆಯಲ್ಲಿರಿಸಿದರು. ಹಲವು ಮಂದಿಯ ಮನರಂಜನೆಗಾಗಿ ಕೆಲವು ಮಂದಿ ದುಡಿಯುವುದನ್ನು ಬಹುದೊಡ್ಡ ಆದರ್ಶವಾಗಿ ಕಲಿಸಿದರು. ಬೆಳಗೆಲ್ಲಾ ದುಡಿದು ಬಂದವರ ಮನಸ್ಸಮಾಧಾನಕ್ಕಾಗಿ ಮನರಂಜನೆ ನೀಡುವುದು ಅನೇಕರಿಗೆ ಮುಖ್ಯ ದುಡಿಮೆಯಾಯಿತು.


ಯಾವುದೇ ಒಳ್ಳೆಯ ಸಂಗತಿಯೂ ಕ್ರಮೇಣ ಸತ್ವವನ್ನು ಕಳೆದುಕೊಂಡು ಕಾಲಿಗೆ ಕಚ್ಚಿಕೊಂಡ ಕೊಚ್ಚೆಯ ಬಳ್ಳಿಯಾಗುತ್ತದೆ ಎಂಬುದು ಸಾಮ್ರಾಟರ ಅನುಭವದ ತಿಳುವಳಿಕೆ. ಅದರಂತೆಯೇ ಟಿವಿಯ ಮನರಂಜನೆಯೇ ಜನರ ಮನೋವೇದನೆಗೆ ಕಾರಣವಾಗತೊಡಗಿದ್ದು ನಮ್ಮ ಸಂಸ್ಕೃತಿ ಚಿಂತಕರು, ಮನಃಶಾಸ್ತ್ರಜ್ಞರು ಮಾಡಲು ಕೆಲಸವಿಲ್ಲದಾಗ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ. ನಾನಾ ವೇಷಗಳಲ್ಲಿ, ನಾನಾ ಶಕ್ತಿಗಳೊಂದಿಗೆ ಭೂಮಿಯ ಮೇಲೆ ಜನ್ಮವೆತ್ತಿ ಬರುತ್ತಾ ದೇವತೆಗಳ, ಮಾನವರ ನೆಮ್ಮದಿಯನ್ನು ಕೆಡಿಸುತ್ತಿದ್ದ ರಕ್ಕಸರು ಧಾರಾವಾಹಿ’ ಎಂಬ ರೂಪ ಪಡೆದು ದಿನದಿನವೂ ಜನಸಾಗರವನ್ನು ದುಃಖದಲ್ಲಿ ಮುಳುಗಿಸುವ ಕೆಲಸವನ್ನು ನಿರಾಯಾಸವಾಗಿ ಮಾಡಲು ಶುರುಮಾಡಿದರು. ಜನರನ್ನು ಒಂದಿಂಚೂ ಕದಲದ ಹಾಗೆ, ಒಂಚೂರೂ ಸ್ವಂತ ಆಲೋಚನೆ ಮಾಡದ ಹಾಗೆ, ತಾಯಿ ಮಕ್ಕಳ ಕಡೆಗೆ ಗಮನ ಕೊಡದ ಹಾಗೆ, ತಂದೆ ಹೊರಗಿನ ಕೆಲಸಗಳಿಗೆ ಏಕಾಗ್ರತೆ ತಾಳದ ಹಾಗೆ, ಮಕ್ಕಳು ತಮ್ಮ ಕರ್ತವ್ಯವನ್ನು ನೆನೆಯದ ಹಾಗೆ ಮಾಡುವ ಸಮ್ಮೋಹನಾಸ್ತ್ರವನ್ನು ರಕ್ಕಸರು ಕಂಡುಕೊಂಡದ್ದು ಇಡೀ ಪುರಾಣ ಲೋಕದ ವಿಸ್ಮಯ. ಆದರೆ ಯಾವಾಗ ಧರ್ಮಕ್ಕೆ ತೊಂದರೆಯಾಗುತ್ತದೆಯೋ, ಯಾವಾಗ್ಯಾವಾಗ ಮನುಷ್ಯನಿಗೆ ಕಂಟಕ ಬರುತ್ತದೆಯೋ ಆಗ ನಾನು ಅವತರಿಸಿ ಬರುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದು ಸುಳ್ಳಾಗಲಿಲ್ಲ.


tv

ಧಾರಾವಾಹಿಯ ರಕ್ಕಸನ ದಾಳಿಯಿಂದ ಮನುಷ್ಯನನ್ನು ರಕ್ಷಿಸಲು ರಿಯಾಲಿಟಿ ಶೋ’ಗಳೆಂಬ ದೇವದೂತರು ಅವತರಿಸಿಬಂದವು. ಪ್ರತಿದಿನ ಒಂದು ಧಾರಾವಾಹಿ ಮುಗಿದಾಗ ನಾಳೆ ಏನಾಗುವುದೋ ಎಂಬ ಆತಂಕದಲ್ಲಿ ಇಡೀ ದಿನವನ್ನು ಕಳೆದು ಮರುದಿನ ಧಾರಾವಾಹಿಯ ಸಮಯಕ್ಕಾಗಿ ಜಾತಕ ಪಕ್ಷಿಯ ಹಾಗೆ ಕಾಯುತ್ತಿದ್ದವರನ್ನು ಸಂಕಟದಿಂದ ಪಾರುಮಾಡಲು ಬಂದಂತೆ ಅವತರಿಸಿದ್ದು ರಿಯಾಲಿಟಿ ಶೋ. ಯಾರೋ ಕೆಲಸವಿಲ್ಲದವರು ಕುಳಿತು ಹೆಣೆದು ಬಿಸಾಕಿದ ಕಾಲ್ಪನಿಕ ಧಾರಾವಾಹಿಗಳನ್ನು ನೋಡುವುದಕ್ಕಿಂತ ನೈಜತೆಯನ್ನು ಉಣಬಡಿಸುವ ಕಾರ್ಯಕ್ರಮಗಳನ್ನು ಜನರೂ ಅಪ್ಪಿಕೊಂಡರು. ಸ್ಟೇಜಿನ ಮೇಲೆ ನಿಜವಾಗಿ ಹಾಡುವುದು, ಕುಣಿಯುವುದು, ಜೋಕು ಮಾಡುವುದು, ಒಂದಷ್ಟು ಜನರನ್ನು ಒಟ್ಟಿಗೇ ಕೂಡಿ ಹಾಕಿ ಅವರ ಚಲನವಲನವನ್ನು ನೈಜ’ ಬಿಹೇವಿಯರನ್ನು ಲಕ್ಷಾಂತರ ಜನರು ನೋಡುವ ಏರ್ಪಾಟು ಮಾಡುವುದು ಇವೆಲ್ಲವನ್ನೂ ಜನರು ಮೆಚ್ಚಿಕೊಳ್ಳತೊಡಗಿದರು. ಇದಕ್ಕೆ ಕಾರಣ, ಪ್ರತಿದಿನವೂ ಬಿಡದೆ ಕಾರ್ಯಕ್ರಮ ನೋಡಬೇಕು ಎಂಬ ಒತ್ತಡ ಇಲ್ಲದಿರುವುದು!

ಆದರೆ ರಕ್ಕಸನ ಶಕ್ತಿಯನ್ನು ಕಡಿಮೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಹಲವರ ಅಭುಪ್ರಾಯ. ಮೂಲೆ ಮನೆ ಮಾಲಮ್ಮನವರ ಪ್ರಕಾರ ಧಾರವಾಹಿಗಳೇ ಇನ್ನೂ ಪ್ರಬಲವಾಗಿವೆಯಂತೆ. ಏಕೆಂದರೆ ಧಾರಾವಾಹಿಯನ್ನು ನಿಯಮಿತವಾಗಿ ನೋಡಬೇಕು ಎಂದೇನಿಲ್ಲ. ನೋಡಲು ಬಿಟ್ಟು ಒಂದು ವರ್ಷವಾದ ನಂತರ ಮತ್ತೆ ನೋಡಲು ಶುರು ಮಾಡಿದರೂ ಕಥೆಯ ಲಿಂಕ್ ತಪ್ಪಿತು ಎನ್ನಲಾಗುವುದಿಲ್ಲ. ಉದಾಹರಣೆಗೆ ಯುವತಿಯೊಬ್ಬಳ ಮದುವೆ ನಿರ್ಧಾರವಾಗುತ್ತದೆ ಎಂದುಕೊಳ್ಳಿ. ನೀವು ಒಂದೆರಡು ವಾರ ನೋಡದಿದ್ದರೆ ಮದುವೆ ನಡೆದು ಹೋಗಿಬಿಡುತ್ತದೆ ಎಂಬ ಆತಂಕ ಪಡುವ ಅಪಾಯವಿಲ್ಲ. ಇನ್ನೇನು ಮದುವೆಗೆ ನಾಲ್ಕು ದಿನ ಇದೆ ಎನ್ನುವಾಗ ಹುಡುಗನ ಕಡೆಯಿಂದ ಒಂದು ತಕರಾರು ಬರುತ್ತದೆ, ಹುಡುಗನ ಮನೆಯಲ್ಲಿ ಯಾರಾದರೊಬ್ಬರು ಕ್ಯಾತೆ ತೆಗೆಯುತ್ತಾರೆ. ಮದುವೆ ಮುಂದೆ ಹೋಗುತ್ತದೆ. ನೀವು ಒಂದುವರ್ಷ ಕಳೆದು ನೋಡಿದರೂ ಹುಡುಗಿಗೆ ಮದುವೆಯಾಗಿರುವುದಿಲ್ಲ. ಮತ್ತೆ ಹೊಸ ಹೊಸ ಸಮಸ್ಯೆಗಳನ್ನು ನಿರ್ದೇಶಕರು ತಮ್ಮ ಮಾಯಾಜಾಲದಿಂದ ಸೃಷ್ಟಿಸಿ ಪಾತ್ರಧಾರಿಗಳನ್ನು ಜೊತೆಗೆ ಧಾರಾವಾಹಿಗಳ ವೀಕ್ಷಕರನ್ನು ಸಿಕ್ಕಿಸಿರುತ್ತಾರೆ. ಆದರೆ ರಿಯಾಲಿಟಿ ಶೋಗಳು ಹಾಗಲ್ಲ ಅವು ಒಂದು ದಿನ ಬಿಟ್ಟರೆ ಅಂದು ಗೆದ್ದದ್ದು ಯಾರು, ಯಾರು ಹೇಗೆ ಫರ್‌ಫಾರ್ಮ್ ಮಾಡಿದರು, ಯಾರು ಒಳ್ಳೆಯ ಅಂಕಗಳಿಸಿದರು ಎಂಬುದು ತಿಳಿಯುವುದೇ ಇಲ್ಲ.


ಏನೇ ಆದರೂ ಇಂದಿನ ಟಿವಿಯ ಯುಗದಲ್ಲಿ ಧಾರಾವಾಹಿ ಎಂಬ ಮಹಾ ಪ್ರಭಾವದಿಂದ ಪ್ರೇಕ್ಷಕರನ್ನು ಪಾರು ಮಾಡಲು ರಿಯಾಲಿಟಿ ಶೋಗಳೆಂಬ ಆಶಾಕಿರಣಗಳು ಕಾಣಿಸಿಕೊಂಡಿರುವುದು ಸಾಮ್ರಾಟರಿಗೆ ಸಮಾಧಾನ ತಂದಿದೆ. ಈ ಬಹುದೊಡ್ಡ ಕ್ರಾಂತಿಯಲ್ಲಿ ತಮ್ಮದೂ ಪಾಲು ಇರಬೇಕೆಂದು ಇಚ್ಚಿಸಿರುವ ಸಾಮ್ರಾಟರು ತಾವೂ ಒಂದಷ್ಟು ರಿಯಾಲಿಟಿ ಶೋಗಳನ್ನು ಮಾಡಿಕೊಟ್ಟು ಜನರನ್ನು ಧಾರಾವಾಹಿ ಗುಮ್ಮನಿಂದ ಪಾರು ಮಾಡುವ ಯೋಚನೆಯಲ್ಲಿದ್ದಾರೆ. ಅವರ ತಲೆಯಲ್ಲಿರುವ ಕೆಲವು ರಿಯಾಲಿಟಿ ಶೋಗಳ ಕಲ್ಪನೆಗಳು ಹೀಗಿವೆ: ‘ದಿ ಗ್ರೇಟ್ ಹಾರರ್ ಶೋಎಂಬ ಭಯಾನಕವಾದ ರಿಯಾಲಿಟಿ ಶೋ. ಇದನ್ನು ಕಂಡು ಬೆಚ್ಚದವರು ಯಾರೂ ಇರಬಾರದು! ಅನೇಕ ಚಾನೆಲ್ಲುಗಳು ಬಳಸಿ ಬಳಸಿ ಸೊರಗಿ ಸೋರಿ ಹೋಗಿರುವ ದೆವ್ವದ ಮಿಸ್ಟರಿ ಕಥೆಗಳು, ಪವಾಡದ ವಿವರಗಳ್ಯಾವೂ ಇದರಲ್ಲಿರುವುದಿಲ್ಲ. ಈ ಶೋನಲ್ಲಿ ಅವರು ತೋರಿಸಬೇಕೆಂದಿರುವುದು ಇಷ್ಟೇ: ಬಾಲಿವುಡ್ಡು, ಸ್ಯಾಂಡಲ್ ವುಡ್ಡಿನ ಎಲ್ಲಾ ನಾಯಕ, ನಾಯಕಿಯರನ್ನು ತೋರಿಸುವುದು. ಅದೂ ಮೇಕಪ್ಪು, ವಿಗ್ಗುಗಳು ಇಲ್ಲದೇ!


ಮತ್ತೊಂದು,‘ ದಿ ಗ್ರೇಟ್ ಗಾಡ್ ಫಾದರ್’! ಇದು ಬಿಗ್ ಬ್ರದರ್ ಶೋನಿಂದ ಪ್ರೇರಿತವಾದದ್ದು ಎಂಬುದು ಸಾಮ್ರಾಟರ ಕಾಲೆಳೆಯುವವರ ಕೀಟಲೆಯಾದರೂ ಇದರಲ್ಲಿ ಹೊಸ ಚಿಂತನೆಯಿದೆ. ಒಂದು ಬಹು ಎತ್ತರದ ಬೇಲಿ ಇರುವ, ಒಮ್ಮೆ ಒಳ ಹೊಕ್ಕವರು ಹೊರಗೆ ಬರದಷ್ಟು ಭದ್ರವಾಗಿರುವ ಕಟ್ಟಡದಲ್ಲಿ ನಾಡಿನ ಹೆಸರಾಂತ ರಾಜಕಾರಣಿಗಳನ್ನೆಲ್ಲಾ ಹಾಕಿಬಿಡುವುದು. ಅರವತ್ತು, ಎಪ್ಪತ್ತು, ಎಂಭತ್ತು ಎಂದು ವಯಸ್ಸು ಹಾಗೂ ತೂಕದಲ್ಲಿ ತೂಗುತ್ತಿರುವವರ ನಾಯಕರನ್ನು ಕೆಮರಾಗಳ ಕಣ್ಗಾವಲಿನಲ್ಲಿ ಸೇರಿಸುವುದು. ಪಕ್ಷ ಬೇಧವಿಲ್ಲದೆ ಅರ್ಹತೆಯಿರುವವರನ್ನೆಲ್ಲಾ ಆರಿಸುವುದು. ಸತತ ಎರಡು ವರ್ಷಗಳ ಕಾಲ ಅವರ ಚಲನವಲನಗಳನ್ನೆಲ್ಲಾ ಗಮನಿಸುತ್ತಿರುವುದು. ಇದರಲ್ಲೇನು ಸ್ಪೆಶಾಲಿಟಿ ಇದೆ ಅಂತೀರಾ? ಇದಕ್ಕೂ ಬಿಗ್ ಬಾಸ್ ನಂತಹ ಶೋಗೂ ವ್ಯತ್ಯಾಸವಿಲ್ಲ ಎನ್ನುತ್ತೀರಾ? ಸಾಮ್ರಾಟರ ಉಪಾಯವನ್ನು ತಾಳ್ಮೆಯಿಂದ ಕೇಳಿ, ಎರಡು ವರ್ಷ ಹೀಗೆ ಕಾರ್ಯಕ್ರಮ ನಡೆಸಿದ ನಂತರ ಸದ್ದಿಲ್ಲದೆ ಎಲ್ಲಾ ಕೆಮರಾಗಳನ್ನು ಆಫ್ ಮಾಡಿ ಆ ಕಟ್ಟಡದ ಕಾಂಪೌಂಡಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಿ ಕೀಲಿಕೈಯನ್ನು ನಾಶ ಮಾಡಿಬಿಡುವುದು! ಆಗ ಅದು ದೇಶವೇ ಕೊಂಡಾಡುವ ರಿಯಾಲಿಟಿ ಶೋ ಆಗಿಬಿಡುತ್ತದೆ!

ತಮ್ಮ ಐಡಿಯಾಗಳನ್ನು ಯಾರೂ ಕದಿಯಬಾರದೆಂದು ಸಾಮ್ರಾಟರು ಅವನ್ನು ಪೇಟೆಂಟ್ ಮಾಡಿಸಲು ಮುಂದಾಗಿದ್ದಾರೆ. ಕಾಪಿ ಮಾಡುವವರೂ ಪೇಟೆಂಟ್ ದಕ್ಕುವ ಮೊದಲೇ ಪ್ರಯತ್ನಿಸಬೇಕಾಗಿ ಸೂಚನೆ!