Tag Archives: ವಾರೆ ಕೋರೆ

ಬ್ಲಾಗ್ ಬೀಟ್ 19

11 ಮಾರ್ಚ್

 

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

ವಾರೆ ಕೋರೆ

ವಾರೆ ಕೋರೆ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಮೊದಲ ಸಂಚಿಕೆಗೆ ಇಪ್ಪತ್ತು ಸಾವಿರ ಓದುಗರನ್ನೂ, ಸರಾಸರಿಯಾಗಿ ನವತ್ತು ಸಾವಿರ ಕಣ್ಣುಗಳನ್ನು ಹೊಂದಿದೆ. ಈ ವಿಕ್ರಮವನ್ನು ಸಾಧಿಸಿದ ಪ್ರಕಾಶ್ ಶೆಟ್ಟಿಯವರು ಅದೇ ಹುಮ್ಮಸ್ಸಿನಿಂದ ಜೊತೆಗೊಂದಿಷ್ಟು ಪೋಲಿ ಬುದ್ಧಿಯಿಂದ ಎರಡನೆಯ ಸಂಚಿಕೆಯನ್ನು ರೂಪಿಸಿದ್ದಾರೆ.

ಮೊದಲ ಸಂಚಿಕೆಯ ಮುಖಪುಟದಲ್ಲಿ ತಲೆ ತುಂಬ ಹೊಳೆಯುವ ಕೂದಲು ಹೊಂದಿದ ದೇವೆಗೌಡರ ಚಿತ್ರವನ್ನು ಛಾಪಿಸಿ ನಾಡಿನಾದ್ಯಂತ ನಗೆ ಬಾಂಬ್ ಸಿಡಿಸಿದ್ದ ವಾರೆ ಕೋರೆ, ಈ ಸಂಚಿಕೆಯಲ್ಲಿ ಮಲ್ಲಿಕಾ ಶೆರಾವತ್‌ಳನ್ನು ತೋರಿಸಿ ಹಾರ್ಟ್ ಅಟ್ಯಾಕ್ ಉಂಟು ಮಾಡಿದೆ. ‘ಲೂಸ್ ಹುಡುಗಿಯರೊಂದಿಗಿನ ರಸ ನಿಮಿಷಗಳ’ ವರದಿಯನ್ನು ಹೊತ್ತು ಬಂದಿದೆ ಎರಡನೆಯ ಸಂಚಿಕೆ.

 

ಬೊಗಳೆ ರಗಳೆ

ಬೊಗಳೂರ ಬ್ಯೂರೋ ತುಂಬ ಬ್ರೇಕಿಂಗ್ ಸುದ್ದಿಯದೇ ಸದ್ದು, ಬ್ರೇಕಿಂಗ್ ಸದ್ದಿನದೇ ಸುದ್ದಿ. ಬೊಗಳೆ ಮಾತಿಗೆ ಬ್ರೇಕಿಲ್ಲದ ಬ್ಯೂರೋದಲ್ಲಿ ಮಜಾಕೀಯ ಅರಾಜಕಾರಣಿಗಳ ಪಕ್ಷಾಂತರ, ಮತಾಂತರ, ಅವಾಂತರಗಳ ಕುರಿತ ಬ್ರೇಕಿಂಗ್ ನ್ಯೂಸುಗಳು ಪ್ರಕಟವಾಗಿವೆ. “ಬೊಗಳೂರು ಬ್ಯುರೋ ಕೂಡ ಆಗಾಗ್ಗೆ Breaking news ಹಾಗೂ Barking news ನೀಡುತ್ತಿರುವುದೇ ಕಾರಣ ಎಂಬ ಎದುರಾಳಿಗಳ ಸಂಶೋಧನೆಯೊಂದು ಏಕದಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಹಗಹಿಸಿ ಅಳುವುದಕ್ಕೆ ಮತ್ತು ಬಿಕ್ಕಿ ಬಿಕ್ಕಿ ನಗುವುದಕ್ಕೆ ಕಾರಣವಾಗಿದೆ.” ಎನ್ನುವ ಮೂಲಕ ನಮ್ಮ ಸಂಶೋಧನೆಗೆ ಕ್ರೆಡಿಟ್ ನೀಡಿರುವ ಬೊಗಳೆ ಬ್ಯೂರೋವನ್ನು ಕಂಡು ಕುಚೇಲ ಕಿಸಕ್ಕನೆ ಕಣ್ಣೀರು ಸುರಿಸುತ್ತಿದ್ದಾನೆ.

 

ಪುಗಸಟ್ಟೆ

ದೇಶಕ್ಕೆ ದೇಶವೇ ಮುತಾಲಿಕನ ಪ್ರೇಮ ವಿರೋಧಿ ಹೋರಾಟ ಹಾಗೂ ಅದಕ್ಕೆ ವಿರುದ್ಧವಾದ ಪಿಂಕು ಚೆಡ್ಡಿ ಹೋರಾಟದ ಸಾಧಕ, ಬಾಧಕ ನಿಷ್ಕರ್ಷೆಯಲ್ಲಿ ನಿರತವಾಗಿ ಅನ್ನಾಹಾರಗಳನ್ನು ತೊರೆದು, ನೀರು-ಮದಿರೆಗಳನ್ನು ಬಿಟ್ಟು, ಪಬ್ಬು-ಕ್ಲಬ್ಬುಗಳ ಮುಚ್ಚಿ, ಸಿಗರೇಟು-ಗಾಂಜಾಗೆ ಟಾಟಾ ಹೇಳಿ ಕೂತಿರುವಾಗ ಪುಗಸಟ್ಟೆ ವೀರನೊಬ್ಬ “ಚಡ್ಡಿ ಇವ್ರಿಗೆ ಕೊಟ್ಟು ಅವ್ರೇನು ಹಾಕ್ಕೊತ್ತಾರ?’’ ಅಂತ ಕಿತಾಪತಿ ತೆಗೆದಿದ್ದಾನೆ.

 

ಮೋಟುಗೋಡೆಯಾಚೆ ಇಣುಕಿ

ನನ್ನ ಕಣ್ಣುಗಳು ಮೇಲಿವೆ ಎನ್ನುತ್ತಾಳೆ ಈ ಟೀಶರ್ಟು ತೊಟ್ಟ ಬಾಲೆ. ಆದರೆ ಆಕೆಯಂದದ್ದು ಏನು ಎಂದು ಓದುವುದಕ್ಕಾದರೂ ನಮ್ಮ ಬಾಲಕರು ಕಣ್ಣು ಕೆಳಗೆ ಹರಿಸುತ್ತಾರೆ! ಈ ಕಣ್ಣು ಕಣ್ಣಾಟದ ಹೋಳಿ ಕಂಡಿದ್ದು ಮೋಟುಗೋಡೆಯಾಚೆ ಇಣುಕಿ ನೋಡಿದಾಗ.

ಬ್ಲಾಗ್ ಬೀಟ್ 17

2 ಫೆಬ್ರ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………

 

ವಾರೆ ಕೋರೆ ಬಿಡುಗಡೆ

ಜಗತ್ತಿನಾದ್ಯಂತ ಭಾರಿ ಕುತೂಹಲ ಉಂಟು ಮಾಡಿದ್ದ ಕನ್ನಡ ಹಾಸ್ಯ ಪತ್ರಿಕೆ ವಾರೆ ಕೋರೆ ಬಿಡುಗಡೆಯಾಯಿತು. ಕನ್ನಡ ನಾಡಿನಲ್ಲಿ ತುಂಟರಗಾಳಿಯನ್ನು ಎಬ್ಬಿಸಲು ಸಂಕಲ್ಪ ತೊಟ್ಟಿರುವ ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.

 

ಪತ್ರಿಕೆ ಬಿಡುಗಡೆಯ ಫೊಟೊ… ನಿದ್ರೇವೇಗೌಡರ ಅ‘ಮೃತ’ ಹಸ್ತದಿಂದ ಪತ್ರಿಕೆ ಬಿಡುಗಡೆ

KPN photo

ಬಿಡುಗಡೆ ಕಾರ್ಯಕ್ರಮದ ವರದಿ…

press

 

ಬೊಗಳೆ ರಗಳೆ

ವಸ್ತುನಿಷ್ಠ ಹಾಗೂ ವ್ಯಕ್ತಿ ಕಷ್ಟ ವರದಿಗಾರಿಕೆಯಲ್ಲಿ ಎತ್ತಿದ ಕೈ ಎಂಬ ಕುಖ್ಯಾತಿಯನ್ನು ಸಂಪಾದಿಸಿ ಸುಸ್ತಾಗಿರುವ ಬೊಗಳೆ ರಗಳೆ ಬ್ಯೂರೋ ಬೇರೆಲ್ಲಾ ಪತ್ರಿಕೆಗಳು ವರದಿ ಮಾಡದ ಸುದ್ದಿಗಳನ್ನು ವರದಿ ಮಾಡುವ ಕಾಯಕವನ್ನು ಮುಂದುವರೆಸಿದೆ.

ಕರುನಾಟಕದ ಅಮುಖ್ಯಮಂತ್ರಿಯವರು ಬೆಳಗಿನ ಉಪಹಾರಕ್ಕೆ ಇಡ್ಲಿ ವಡೆಯನ್ನು ತಿನ್ನುತ್ತಾರೆ ಎಂಬ ಸುದ್ದಿಯನ್ನು ಬೆನ್ನತ್ತಿ ವಿಸ್ತೃತವಾದ ವರದಿಯನ್ನು ಮಾಡಿದ್ದಾರೆ.

“ರಾಜ್ಯದ ಅಮುಖ್ಯಮಂತ್ರಿಗಳು ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ವಡೆ ತಿನ್ನುತ್ತಾರೆ ಎಂದು ವರದ್ದಿಯಾಗಿರುವುದು ತನಿಖೆಗೆ ಅರ್ಹ ಎಂದು ಬೊಗಳೂರು ಓದುಗರೆಲ್ಲರೂ ಪ್ರತಿಭಟನೆ ಮಾಡಿರುವುದರಿಂದ ಒತ್ತಡಕ್ಕೆ ಮಣಿದ ನಮ್ಮ ಅನ್ವೇಷಣಾ ಬ್ಯುರೋ, ರದ್ದಿಗಾರರನ್ನು ಅಟ್ಟಾಡಿಸಿ ಕಳುಹಿಸಿತು.”

ಸುದ್ದಿಗೆ ಸಂಬಂಧ ಪಟ್ಟವರು ಪಡವರು ಹೀಗೆ ಯಾರ್ಯಾರನ್ನೆಲ್ಲಾ ಹಿಡಿದು ಸುದ್ದಿಯನ್ನು ಪಡೆಯಬೇಕು ಎಂಬುದಕ್ಕೆ ಯುವ ಉತ್ಸಾಹಿ ಪತ್ರಿಕೋದ್ಯಮದ ವಿದ್ಯಾರ್ಥಿನಿಯರಿಗೆ ಈ ವರದಿ ದಾರಿ ದೀಪವಾಗಲಿದೆ.

 

ಪಂಚ್ ಲೈನ್

ಓದುಗರನ್ನು ಗಾಬರಿ ಪಡಿಸುವುದಕ್ಕಾಗಿಯೋ ಇಲ್ಲವೇ ಓಡಿಸುವುದಕ್ಕಾಗಿಯೋ ಹೊಸ ಹೊಸ ಅವತಾರಗಳನ್ನೆತ್ತುವೆ ಎಂದು ವೀರ ಪ್ರತಿಜ್ಞೆ ಮಾಡಿರುವ ಪಂಚ್ ಲೈನ್ ಧೀರ ಗಣೇಶರು ಪರೀಕ್ಷೆಯ ನಂತರ ಪಂಚ್ ಲೈನಿಗೆ ಮರಳುವುದಾಗಿ ಮಾತು ಕೊಟ್ಟಿದ್ದರು. ಆದರೆ ವೇದಿಕೆಯ ಮೇಲೆ ನಾಟಕದ ಡೈಲಾಗಿನ ಪಂಚನ್ನೂ, ಲೈನನ್ನೂ ಮರೆತಂತೆ ಬ್ಲಾಗನ್ನು ಮರೆತಿರುವ ಹಾಗಿದೆ. ಅವರಿಗೆ ಈ ಮೂಲಕ ಸಾಮ್ರಾಟರುನ ನೆನಪಿಸುವುದೆಂದರೆ, ಮಾತು ಉಳಿಸಿಕೊಳ್ಳದಿದ್ದ ಆ ಶ್ರೀಕೃಷ್ಣನನ್ನೇ ಜನರು ಮರೆತು ‘ದೇವರಿದ್ದಾನಾ?’ ಎಂದು ಪ್ರಶ್ನಿಸುತ್ತಿದ್ದಾರೆ, ಇನ್ನು ಅವರಂತಹ ಹುಲುಮಾನವರ ಗತಿ ಏನು? ಆದಷ್ಟು ಬೇಗ ಗಣೇಶ್ ಪಂಚಿನ ಮೇಲೆ ಪಂಚುಗಳನ್ನು ರವಾನಿಸಲಿ ಎಂಬುದು ನಮ್ಮ ಅಶಯ.

 

ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವೂ, ಎಲ್ಲಿಲ್ಲವೋ ಸತ್ಯದ ಸುಳಿವು ಅಲ್ಲಿ ನಾವಿರುತ್ತೇವೆ ಎಂದು ಅಭಯ ನೀಡಿರುವ ಮಜಾವಾಣಿಯ ಸಂಪಾದ ಮಹಾಶಯರು ವಾಣಿಯನ್ನು ಮರೆತು ‘ಮಜಾ’ ಮಾಡುತ್ತಿರುವಂತಿದೆ ಎಂದು ಸಾಮ್ರಾಟರು ಗಡ್ಡ ಬೋಳಿಸುವ ಸಂಸ್ಥೆಯ ನೌಕರರು ಆಡಿಕೊಳ್ಳುತ್ತಿದ್ದಾರೆ.

ಬ್ಲಾಗ್ ಸ್ಪಾಟಿನಿಂದ ಫೇರಿಕಿತ್ತ ಮೇಲೆ ಮಜಾವಾಣಿ ಸೊರಗಿದೆಯೇ ಎಂಬ ಬಗ್ಗೆ ಲೋಕಾಯುಕ್ತ ತನಿಖೆಯನ್ನೂ, ಮಜಾವಾಣಿಯ ಸಂಪಾದಕರು ಪತ್ರಿಕಾ ಧರ್ಮ ಮೆರೆಯುವುದಕ್ಕೆ ಮಂಗಳೂರಿನ ಕಡೆಯ ಅಮ್ನೇಶಿಯಾ ಪ್ರವೇಶಿಸಿ ದಿವಂಗತರಾದರೋ ಎಂಬುದನ್ನು ಪತ್ತೆಹಚ್ಚಲು ನಮ್ಮ ಚೇಲ ಕುಚೇಲನ ತನಿಖೆಯನ್ನು ನಾವು ಆದೇಶಿಸಿದ್ದೇವೆ.

ಬಕ್ಕ ತಲೆಗೆ ಕೊನೆಗೂ ಸಿಕ್ಕಿದೆ ಮದ್ದು!

20 ನವೆಂ

(ನಗೆ ನಗಾರಿ ಜಾಹೀರಾತು ವಿಭಾಗ)

cover1

ಬಹು ದಿನಗಳಿಂದ ನಾಡಿನ ಹಾಸ್ಯಪ್ರಿಯರೆಲ್ಲರೂ ಎದುರುನೋಡುತ್ತಿದ್ದ ‘ವಾರೆ ಕೋರೆ’ ಎಂಬ ಹಾಸ್ಯ ಪತ್ರಿಕೆಯನ್ನು ಪ್ರಕಾಶ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಾಯೋಗಿಕ ಸಂಚಿಕೆಯ ಕೆಲವು ಸ್ಯಾಂಪಲ್ ಪುಟಗಳನ್ನು ತಮ್ಮ ಬ್ಲಾಗಿನಲ್ಲಿ ಹಾಕಿದ್ದಾರೆ.

‘ಬಕ್ಕ ತಲೆಗೆ ಬಕ್ರಿ ಮೂತ್ರ’ ಎಂಬುದು ಈ ಸಂಚಿಕೆ ಸ್ಪೆಷಲ್. ‘ವಾರೆ ಕೋರೆಯ’ವ ವಿಶೇಷ ವರದಿಗಾರ ಖಾಲಿ ತಲೆಮಾರ್, ಬಕ್ರೂರು ಎಂಬ ಗುಡ್ಡಕಾಡು ಪ್ರದೇಶಕ್ಕೆ ಸುಮಾರು ೪೦ ಕಿ.ಮೀ ದೂರ ನಡೆದಾಡಿ ಈ ವರದಿಯನ್ನು ಸಂಗ್ರಹಿಸಿದ್ದಾರೆ ಎನ್ನುತ್ತಾರೆ ಸಂಪಾದಕರು.

ಅಲ್ಲದೆ ಹಿಂದೆ ‘ಸುಧಾ’ದ ‘ವಾರೆನೋಟ’ ಅಂಕಣದಲ್ಲಿ ಬರುತ್ತಿದ್ದ ಆನಂದರನ್ನು ಬಹಳ ಕಷ್ಟದಲ್ಲಿ ಪತ್ತೆ ಹಚ್ಚಿ ಮತ್ತೆ ಬರೆಸಿದ್ದಾರೆ. ವ್ಯಂಗ್ಯಚಿತ್ರಕಾರರಿಗೆಲ್ಲ ಸ್ವಾಮಿ ಸ್ಥಾನದಲ್ಲಿರುವ ಕೆ.ಆರ್. ಸ್ವಾಮಿ ಅವರ ವ್ಯಂಗ್ಯಚಿತ್ರಗಳನ್ನು ಕಾಣದೆ ಕೆಲ ಕಾಲಗಳಾಗಿದ್ದವು. ‘ವಾಕೋ’ದಲ್ಲಿ ಸ್ವಾಮಿಯವರ ‘ಮಕ್ ಬ್ಯಾಕ್’ ಆಗಿದೆಯಂತೆ. ‘ತರಂಗ’ ಖ್ಯಾತಿಯ ಹರಿಣಿಯನ್ನು ಬ್ಲಾಗ್, ಸೈಟುಗಳಲ್ಲಿ ಮಾತ್ರ ಕಾಣುವಂತಾಗಿತ್ತು, ಅವರಿನ್ನು ಪ್ರತಿ ಸಂಚಿಕೆಯಲ್ಲೂ ವಿಜೃಂಭಿಸಲಿದ್ದಾರೆ. ‘ಲಂಕೇಶ್ ಪತ್ರಿಕೆ’ಯ ಗುಜ್ಜಾರ್‌ರವರ ವ್ಯಂಗ್ಯಚಿತ್ರಗಳು ಈ ಸಂಚಿಕೆಯ ತೂಕ ಹೆಚ್ಚಿಸಿವೆಯಂತೆ.  ಎಸ್.ಎಸ್. ಆನಂದ್, ಶ್ರೀಧರ್, ಪಾಂಡುರಂಗರಾವ್, ಸತೀಶ್ ಶೃಂಗೇರಿ, ನಾಗನಾಥ್, ವೆಂಕಟ್ ಭಟ್, ವಿ.ಗೋಪಾಲ್ ಮೊದಲಾದ ಘಟಾನುಘಟಿ ವ್ಯಂಗ್ಯಚಿತ್ರಕಾರರು ತಮ್ಮ ಕೈಚಳಕ ತೋರಿದ್ದಾರಂತೆ.

‘ಈ ಟಿವಿ’ಯ ಮಾಜಿ, ಜಿ,ಎನ್,ಮೋಹನ್ ‘ಕೋಡಂಗಿಗೆ ಕೆಲಸವಿಲ್ಲ’ ಎಂಬ ಕವನದೊಂದಿಗೆ ನಗಿಸುತ್ತಾರಂತೆ. ಹಾಸ್ಯಕ್ಕೆ ಸಂಬಂಧಿಸಿದ ಎಲ್ಲರೂ ನಮಗೆ ಬೇಕು ಎನ್ನುವ ಸಂಪಾದಕರು ಮಾತನಾಡುವ ಗೊಂಬೆಯ ಖ್ಯಾತಿಯ ಶ್ರೀಕಾಂತರ ಸಂದರ್ಶನ ಮಾಡಿಸಿದ್ದಾರೆ. ಆದರೆ ಸಂದರ್ಶನ ಮಾಡಿದವರು ಯಾರು ಎಂಬುದು ಸಸ್ಪೆನ್ಸ್ ಅಂತೆ. ತುಳು ನಾಡಿನ ಸೂಪರ್ ಬಂಪರ್ ನಾಟಕಕಾರ ದೇವದಾಸ್ ಕಾಪಿಕಾಡ್‌ರನ್ನು ಪರಿಚಿಯಿಸಿದ್ದಾರೆ.

ಇನ್ನು ಡೊಂಕು ಅಂಕಣಗಳು ‘ವಾಕೋ’ದ ಘಮ ಘಮ ಖಾದ್ಯಗಳು. ಡುಂಡಿರಾಜರ ‘ಮಿನಿಗವನಗಳು’, ನರೇಂದ್ರ ರೈ ಅವರ ‘ಮಣ್ಣು ಮಸಿ’, ‘ತಿಂಗಳ ಆಸಾಮಿ’, ‘ಅಂತೆಕಂತೆಗಳ ಸಂತೆ’… ಹೀಗೆ ವಿಚಿತ್ರ ಭೋಜನಗಳಿಂದ ಸಮೃದ್ಧವಾಗಿದೆ ‘ವಾರೆ ಕೋರೆಯ’ ಪ್ರಾಯೋಗಿಕ ಸಂಚಿಕೆ.

ಕನ್ನಡದಲ್ಲಿನ ಒಂದು ಅದ್ಭುತ ಸಾಹಸವನ್ನ್ ಉಳಿಸುವುದಕ್ಕೆ, ಬೆಳೆಸುವುದಕ್ಕೆ ಕನ್ನಡಿಗರಿಗೆ ವಿಶಾಲ ಹೃದಯವಿದೆ, ಕನ್ನಡಿಗರಲ್ಲಿ ಅದಕ್ಕೆ ಬೇಕಾದ ಸಂಪತ್ತು ಇದೆ ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂಬುದು ನಗೆ ಸಾಮ್ರಾಟರ ವೀರಾವೇಷದ ಭಾಷಣದ ಸಾರ. ಕೂಡಲೇ ವಾರೆಕೋರೆಗೆ ಚಂದಾದಾರರಾಗಲು ಈ ಪುಟವನ್ನು ನೋಡಿ…

ಬ್ಲಾಗ್ ಬೀಟ್ 16

25 ಆಕ್ಟೋ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

……………………………………………………..

ಸಾಮ್ರಾಟರ ಅಕಾಲಿಕ ಮರಣದಿಂದ ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಬಿಡುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೀಟಿಗೆ ಸಾಮ್ರಾಟರು ಬರುತ್ತಿಲ್ಲ ಎಂಬುದನ್ನು ತಿಳಿದು ಬ್ಲಾಗಿಗ ಮಹಾಶಯರು ಇಲ್ಲ ಸಲ್ಲದ ತಂಟೆ ತಕರಾರು ತೆರೆದುಕೊಳ್ಳುತ್ತಾರೆ ಎಂದೆಲ್ಲಾ ಭಾವಿಸಿದ್ದ ಸಾಮ್ರಾಟರ ಅತೃಪ್ತ ಆತ್ಮಕ್ಕೆ ತಕ್ಕ ಪಾಠ ಸಿಕ್ಕಿದೆ. ಅಜ್ಜಿಯ ಕೋಳಿ ಕೂಗದಿದ್ದರೆ ಬೆಳಕೇ ಹರಿಯುವುದಿಲ್ಲ ಎಂಬುದನ್ನು ಅಕ್ಷರಶಃ ನಂಬಿಕೊಂಡಿದ್ದ ಸಾಮ್ರಾಟರು ಈಗ ಸದ್ದಿಲ್ಲದೆ ಅಜ್ಜಿಯ ಕೈಲಿದ್ದ ಕೋಳಿಯ ಕತ್ತು ಸೀಳಿ ಆ ಅಜ್ಜಿಯ ಕೈಲೇ ಮಸಾಲೆ ಅರೆಸುತ್ತಿದ್ದಾರೆ!

…………………………

ಪ್ರಕಾಶ್ ಶೆಟ್ಟಿಯವರದು ಬರೇ ವಾರೆ ಕೋರೆ

ತಮ್ಮ ವಾರೇ ಕೋರೆ ಗೆರೆಗಳಿಂದ ನಾಡಿನ ಉದ್ದಗಲಕ್ಕೆ ಚಿರಪರಿಚಿತರಾಗಿರುವ ಪ್ರಕಾಶ್ ಶೆಟ್ಟಿಯವರು ಬಹುದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಈ ಸಾಧನೆ ಗಿನ್ನಿಸ್ ದಾಖಲೆಯ ಪುಸ್ತಕದಲ್ಲೇ ಶ್ರೇಷ್ಠ ಮಟ್ಟದ ಸ್ಥಾನಮಾನವನ್ನು ಪಡೆಯಲಿದೆ ಎಂದು ಗುಸುಗುಸು ಶುರುವಾಗಿದೆ. ಅಸಲಿಗೆ ಇವರು ಮಾಡಲು ಹೊರಟಿರುವುದಾದರೂ ಏನನ್ನು? ‘ದೇವೇಗೌಡರನ್ನು ನಗಿಸಲು ಹೊರಟಿದ್ದಾರೆ!’

ಇಲ್ಲಿ ನೋಡಿ…

ಹೌದು, ಪ್ರಕಾಶ್ ಶೆಟ್ಟಿಯವರು ಕನ್ನಡದಲ್ಲಿ ಒಂದು ಹಾಸ್ಯ ಮಾಸ ಪತ್ರಿಕೆಯನ್ನು ತೆರೆಯುತ್ತಿದ್ದಾರಂತೆ. ಗೌಡರನ್ನು, ಖರ್ಗೆಯವರನ್ನು ನಗಿಸುವ ಹುಮ್ಮಸ್ಸಿರುವ ಶೆಟ್ಟಿಯವರ ಪಂಚ್‌ನ್ನು ಕನ್ನಡಿಗರು ಸಕತ್ತಾಗಿ ಸ್ವೀಕರಿಸಲಿ ಎಂಬುದು ಸಾಮ್ರಾಟರ ಹಾರೈಕೆ.

…………………………

ಆಚಾರ್ಯರಿಗೆ ಸ್ವಲ್ಪ ಬೇಜಾರಾಗುತ್ತದೆಯಂತೆ!

ತಮ್ಮನ್ನು ಹೋಂ ಮಿನಿಸ್ಟರ್ ಎಂದು ಕನಿಕರದಿಂದ, ಲೇವಡಿಯಿಂದ, ಮಮತೆಯಿಂದ ಕರೆಯುವುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಆಚಾರ್ಯರು ಇಷ್ಟೆಲ್ಲಾ ಆದರೂ ಇದರಿಂದ ಸ್ವಲ್ಪ ಬೇಜಾರಾಗುತ್ತದೆ ಎಂದು ಹೇಳಿದ್ದು ನಾಡಿನ ಹೆಸರಾಂತ ಪತ್ರಿಕೆ ಮಜಾವಾಣಿಯಲ್ಲಿ ವರದಿಯಾಗಿದೆ.

ಹಾಗೆಯೇ ನಮ್ಮ ಮಾನ್ಯ ಮುಖ್ಯ ಮಂತ್ರಿಯವರು ಅಮೇರಿಕಾದ ಅಕ್ಕನ ಸಮಾರಂಭಕ್ಕೆ ಹೋಗಿ ಆಂಗ್ಲ ರಾಜಕಾರಣಿಗೆ ಉಚಿತವಾಗಿ ಲೋಟಸ್ ಫ್ಲವರ್ ಆಪರೇಷನ್ ಮಾಡಿದ ಸಂಗತಿ ಸಚಿತ್ರ ವರದಿ ಮಜಾವಾಣಿಯಲ್ಲಿ ಪ್ರಕಟವಾಗಿದೆ.

…………………………

ಬೊಗಳೆ ದಿವಾಳಿ ವಿಶೇಷಾಂಕ

ರಾಜ್ಯದ ಪ್ರತಿಯೊಂದು ಪತ್ರಿಕೆಯೂ ತಾನು ಬದುಕಿದ್ದೇನೆ ಎಂಬುದನ್ನು ಸಾಬೀತು ಪಡಿಸುವುದಕ್ಕಾಗಿಯೇ ದೀಪಾವಳಿಯಂದು ವಿಶೇಷಾಂಕದ ಹೆಸರಿನಲ್ಲಿ ಒಂದೇ ಆಕಾರದ, ಒಂದೇ ತೂಕದ, ಒಂದೇ ಬೆಲೆಯ ಒಂದಷ್ಟು ಸರಕನ್ನು ದಾಟಿಸಿ ಕೈತೊಳೆದುಕೊಂಡುಬಿಡುತ್ತವೆ.

ಈ ರೇಸಿನಲ್ಲಿ ತಾನೇನೂ ಕಡಿಮೆ ಇಲ್ಲ ಎಂದು ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಟೊಂಕ ಕಟ್ಟಿ ನಿಂತು ದಿವಾಳಿ ವಿಶೇಷಾಂಕವನ್ನು ಹೊರತಂದಿದ್ದಾರೆ. ಅವರು ಈ ಸಂಚಿಕೆಯನ್ನು ಹೊರತಂದಿದ್ದಕ್ಕಾಗಿ ಹಾಗೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಕೃಪೆ ಮಾಡಿದ್ದಕ್ಕಾಗಿ ಸಾಮ್ರಾಟರಿಂದ ಅಭಿನಂದೆಗಳ ಠುಸ್ ಪಟಾಕಿಯನ್ನು ಪಡೆದಿದ್ದಾರೆ.

(ಇವರ ಉಚಾವಣೆಯಿಂದ ಸಾಮ್ರಾಟರೂ ಸಹ ನಗೆ ನಗಾರಿ ದೀಪಾವಳಿ ವಿಶೇಷಾಂಕ ತರುವ ಸನ್ನಾಹದಲ್ಲಿದ್ದಾರೆ ಎಂಬುದು ಕೇವಲ ಊಹಾಪೋಹದ ಆಧಾರದಲ್ಲಿ ರೂಪುಗೊಂಡಿರುವ ವಾಸ್ತವ ಸಂಗತಿ ಎಂದು ತಿಳಿಸುತ್ತಿದ್ದೇವೆ.)

…………………………

ಪಂಚುಗಳು

ತುಂಬಾ ದಿನಗಳಿಂದ ಬ್ಲಾಗ್ ಲೋಕದಿಂದ ಗಣೇಶರು ನಾಪತ್ತೆಯಾಗಿ ಅನಂತರ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾರ್ತೆಯೂ ವರದಿಯಾಗಿ ಜನರು ಅನವಶ್ಯಕವಾದ ಸಂಶೋಧನೆಗಳನ್ನು ಮಾಡಲು ಶುರು ಮಾಡತೊಡಗಿದಾಗಲೇ ಗಣೇಶರು ಪ್ರತ್ಯಕ್ಷರಾಗಿ ಒಂದೆರಡು ಪಂಚು ಕೊಟ್ಟು ಮಾಯವಾಗಿದ್ದಾರೆ.

ಅವರು ಕೊಟ್ಟ ಪಂಚಿನ ಅರ್ಥ ಸಾಮ್ರಾಟರಿಗೆ ಸಿಕ್ಕದೆ ಅದನ್ನು ಹುಡುಕಿ ಅಲೆಯುತ್ತಿದ್ದಾರೆ. ಯಾರಿಗಾದರೂ ಸಿಕ್ಕಿದರೆ ಶೇ ಐವತ್ತನ್ನು ತಮ್ಮತ್ತ ತಳ್ಳಲು ಮನವಿ ಮಾಡಿಕೊಂಡಿದ್ದಾರೆ!