Tag Archives: ರಾಜಕೀಯ

ಆಣೆ ಸವಾಲು ಅಲ್ಪಸಂಖ್ಯಾತರ ಓಲೈಕೆಯ ತಂತ್ರ: ಅಬೋಧ ಕುತಾಲಿಕ್

20 ಜನ

*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦

ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು praj_muhmad cartoon ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”

ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.

ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ  ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”

ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.

ತ್ರಿ-ವಾರಿಯೂ ಆಚಾರ್ಯ ರೇಣುಕರೂ…

4 ಜನ

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.

ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.

ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.

ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.

ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!

ಅಪ್ಪ ಅಪ್ಪ ಬಿಜೆಪಿಗೆ ಓಟ್ ಹಾಕಪ್ಪ!

11 ಆಗಸ್ಟ್

ನೊಣ ಹೊಡೆಯುವ ಕೆಲಸವನ್ನು ಶ್ರದ್ಧಾ ಭಕ್ತಿಗಳಿಂದ ಪೂರೈಸಿ ಆಫೀಸಿನ ಬಾಗಿಲು ಮುಚ್ಚಿಕೊಂಡು ಮನೆಗೆ ಬಂದು ಸೋಫಾದ ಮೇಲೆ ಕುಕ್ಕರಿಸಿ ‘ಮುಸ್ಸಂಜೆ ಮನೆಗೆ ಬಂದು ಯಾರ್ಯಾರ ಬಯ್ಯಲಿ’ ಎಂದು ಗುನುಗುತ್ತಾ ಅತ್ತಿತ್ತ ಕಣ್ಣಾಡಿಸುತ್ತಿದ್ದೆವು. ಮಗ ಶಾಲೆಯಿಂದ ಬಂದು ಸೈಕಲನ್ನು ಗೇಟಿನೊಳಗೆ ಇಟ್ಟುಕೊಂಡಿದ್ದ, ಶೂ ಸಾಕ್ಸುಗಳನ್ನು ಅವವುಗಳ ಜಾಗದಲ್ಲಿ ಇರಿಸಿದ್ದ, ಚೀಲವನ್ನು ಸೋಫಾದ ಮೇಲೆ ಎಸೆಯದೆ ನೀಟಾಗಿ ತನ್ನ ರೂಮಿನಲ್ಲಿಟ್ಟಿದ್ದ, ಹಾಳು ಕಾರ್ಟೂನು ನೋಡುತ್ತ ಬಿದ್ದಿರದೆ ಹೋಂ ವರ್ಕ್ ಮಾಡುತ್ತಿದ್ದ. ನಾವು ವಿಪರೀತ ಏಕಾಗ್ರತೆಯಿಂದ, ವಿರೋಧ ಪಕ್ಷದ ನಾಯಕನ ಚಾಲಾಕಿನಿಂದ ಎಷ್ಟೊತ್ತು ಅವಲೋಕಿಸಿದರೂ ಮಗನನ್ನು ಬಯ್ಯುವುದಕ್ಕೆ ಯಾವ ನೆಪವೂ ಸಿಕ್ಕಲಿಲ್ಲ. ಸ್ವಂತ ಮಗನನ್ನು ಬಯ್ಯದ ಅಪ್ಪ ಅವನೆಂತಹ ಅಪ್ಪ!

ಮುಸ್ಸಂಜೆಯ ಹೊತ್ತಿನಲ್ಲೇ ಅಪ್ಪನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಎದುರಾದ ಅಡ್ಡಿಯನ್ನು ನೆನೆದು ತಲೆಕೆಡಿಸಿಕೊಂಡಿರುವಾಗ ಚಿಕ್ಕ ಮಗಳು ಮೆಲ್ಲ ಮೆಲ್ಲಗೆ ಹತ್ತಿರ ಬರುತ್ತಿದ್ದದ್ದು ಕಂಡಿತು.

ಆಕೆಯ ಹೆಜ್ಜೆಗಳ ಲೆಕ್ಕಾಚಾರ, ಪಾದಗಳು ಚಲಿಸುವ ವೇಗ, ಹೆಜ್ಜೆಗಳು ಮೂಡುತ್ತಿದ್ದ ವಿನ್ಯಾಸವನ್ನೆಲ್ಲಾ ಸೂಪರ್ ಕಂಪ್ಯೂಟರಿನ ತೆರದಿ ಗ್ರಹಿಸಿದ ನಮಗೆ ಆಕೆ ಖಂಡಿತವಾಗಿಯೂ ತನ್ನ ಬೇಡಿಕೆಯ ಬಾಂಬನ್ನು ಎಸೆಯಲಿದ್ದಾಳೆ ಎನ್ನುವುದು ಖಾತ್ರಿಯಾಯಿತು. ಈ ಭಯೋತ್ಪಾದಕಿಯಿಂದ ರಕ್ಷಿಸಬೇಕಾದ ನಮ್ಮ ಪರ್ಸು, ಆಫೀಸಿನ ಸಮಯ, ಸೋಮಾರಿತನ. ನಿದ್ರೆಯನ್ನು ನೆನೆದು ನಾವು ಕಂಗಾಲಾದೆವು.

ಈ ಬಾರಿ ಈಕೆಯ ಆಕ್ರಮಣದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಎಷ್ಟು ಇರಬಹುದು ಎಂದು ಊಹೆ ಮಾಡಿಕೊಂಡೆವು. ಈಕೆಯ ಬೇಡಿಕೆಯ ಶಸ್ತ್ರಾಸ್ತ್ರದ ಪ್ರಮಾಣವನ್ನು ನಮ್ಮ ಪೊಲೀಸರ ಇಂಟೆಲಿಜೆನ್ಸಿನ ನಿಖರತೆಯಷ್ಟೇ ನಿಖರವಾಗಿ ಲೆಕ್ಕ ಹಾಕಿದೆವು.

ಸೋಫಾ ಬಳಿ ಬಂದು ಶೂ ಕಳಚಿದ್ದ ಕಾಲುಗಳಿಗೆ ಜೋತು ಬಿದ್ದು, “ಅಪ್ಪ ಅಪ್ಪ…” ಎನ್ನತೊಡಗಿದಳು ಆಕೆ.

ಇನ್ನು ಶ್ರೀಕೃಷ್ಣನ ಭಗವದ್ಗೀತೋಪದೇಶಕ್ಕೆ ಕಾಯುತ್ತ ಕೂರಲಾಗದು ಎಂದು ತೀರ್ಮಾನಿಸಿ ಬಿಲ್ಲು ಬಾಣ ಹಿಡಿದು ಎದ್ದು ನಿಲ್ಲುವ ಅರ್ಜುನ ನಾವಾದೆವು.

“ಏನಮ್ಮಾ?” ಎಚ್ಚರಿಕೆಯಿಂದ ಮೊದಲ ಹೆಜ್ಜೆ ಇಟ್ಟೆವು.

“ಅಪ್ಪಾ, ಒಂದು ಪ್ರಶ್ನೆ ಕೇಳ್ಲಾ?”

“ಹು, ಅದೇನು ಕೇಳಮ್ಮ” ನಮ್ಮೆಲ್ಲಾ ಕವಚಗಳನ್ನು ಭದ್ರಗೊಳಿಸಿಕೊಳ್ಳುತ್ತಾ ಕೇಳಿದೆವು.

“ಅಪ್ಪಾ, ಮತ್ತೆ, ಅಪ್ಪ, ನೀನು ಈ ಸಲ ಬಿಜೆಪಿಗೆ ಓಟ್ ಹಾಕ್ಬೇಕಪ್ಪ…”

ಈ ಅನಿರೀಕ್ಷಿತವಾದ ಅಸ್ತ್ರಕ್ಕೆ ನಾವು ಸಿದ್ಧರಾಗೇ ಇರಲಿಲ್ಲ. ನಮ್ಮ ಸದೃಢ ಕವಚಗಳು ನೀರಲ್ಲಿ ಮುಳುಗಿ ಎದ್ದ ಕನ್ನಡ ನಟಿಯ ಮೇಕಪ್ಪಿನ ಹಾಗೆ ಕಳಚಿ ಬಿದ್ದವು.

“ಏನಮ್ಮಾ, ಏನಂದೆ ಇನೊಂದ್ಸಲ ಹೇಳಮ್ಮ” ಕೇಳಿದೆವು ಸಾವರಿಸಿಕೊಳ್ಳಲು ಸ್ವಲ್ಪ ಸಮಯ ಕಸಿಯುವ ನೆಪದಲ್ಲಿ.

“ನೀನು ಈ ಸಲ ಬಿಜೆಪಿಗೇ ಓಟ್ ಹಾಕ್ಬೇಕು”

ಮಗಳು ಡಾಕ್ಟರ್, ಇಂಜಿನಿಯರ್, ಆಫೀಸರ್, ಟೀಚರ್ ಆಗದಿದ್ದರೂ ಪರ್ವಾಗಿಲ್ಲ ರಾಜಕೀಯ ಪುಢಾರಿ ಮಾತ್ರ ಆಗಬಾರದು ಎಂದು ಒಬ್ಬ ಸಕ್ರಿಯ ರಾಜಕೀಯ ಪುಢಾರಿಯಾಗಿ ನಾವು ಜೀವನವಿಡೀ ಆಶಿಸಿದ್ದೆವು. ಇದು ನೋಡಿದರೆ ಸ್ಕರ್ಟು ಹಾಕುವ ಮೊದಲೇ ಪ್ರಚಾರ ಶುರು ಹಚ್ಚಿಕೊಂಡಿದೆ!

“ಯಾಕಮ್ಮ, ಯಾರು ಹೇಳಿಕೊಟ್ಟರು ನಿನಗೆ ಹಾಗಂತ?” ಒಳಗಿಲ್ಲದ ತಾಳ್ಮೆಯನ್ನು ಮುಖದ ತುಂಬ ಪ್ರದರ್ಶಿಸುತ್ತಾ ಕೇಳಿದೆವು. ದೂರದಲ್ಲೆಲ್ಲೋ ಮಗನನ್ನು ಬಯ್ದು ತಂದೆಯ ಜವಾಬ್ದಾರಿ ನಿಭಾಯಿಸಿಬಿಡಲು ಕ್ಷೀಣ ಅವಕಾಶವೊಂದು ಕಂಡಂತಾಯಿತು.

“ಊ, ಮತ್ತೆ ಇವತ್ತು ಯಜ್ಯೂರಪ್ಪ, ಮತ್ತೆ ಟಿವಿಲಿ ಹೇಳಿದ್ರಪ್ಪ. ಯಜ್ಯೂರಪ್ಪ ಹಂಗೆ ಹೇಳಿದ್ರಪ್ಪ, ಬಿಜೆಪಿ ಮತ ಹಾಕಪ್ಪ”

ವಿಶ್ವ ಸುಂದರಿಯರು ತೀರ್ಪುಗಾರರ ಪ್ರಶ್ನೆಗಳಿಗೆ ಕೊಟ್ಟ ಉತ್ತರವನ್ನಾದರೂ ಅರ್ಥ ಮಾಡಿಕೊಳ್ಳಬಲ್ಲೆ ಎಂಬ ಹುಂಬ ವಿಶ್ವಾಸವಿದ್ದ ನಮಗೆ ಮಗಳ ಈ ಬೌನ್ಸರ್ ತಲೆಯನ್ನು ಮೊಟಕಿ ವಿವೇಕವನ್ನು ಹುಟ್ಟಿಸಿದಂತಾಯ್ತು.

“ಏನು ಮಗಳೇ ಯಡ್ಯೂರಪ್ಪ ಹೇಳಿದ್ದು? ಯಾಕೆ ನಾನು ಬಿಜೆಪಿಗೆ ಓಟ್ ಹಾಕ್ಬೇಕಂತೆ?”

“ಇಲ್ನೋಡಪ್ಪ, ಮತ್ತೆ, ಬಿಜೆಪಿಗೆ ಓಟ್ ಹಾಕ್ಲಿಲ್ಲ ಅಂದ್ರೆ ಹುಶಾರ್ ಅಂತ ಯಜ್ಯೂರಪ್ಪ ಹೇಳಿದಾರಪ್ಪ . ಮತ್ತೆ ನೀನು ಯಜ್ಯೂರಪ್ಪಂಗೆ ಓಟ್ ಹಾಕ್ಲಿಲ್ಲ ಅಂದ್ರೆ ನಾಳೆಯಿಂದ ನಂಗೆ ಐಸ್ ಕ್ರೀಮು ಸಿಕ್ಕಲ್ಲ ಅಲ್ವಾ ಅಪ್ಪಾ…” ಮುಸು ಮುಸು ಅಳಲು ಶುರು ಮಾಡಿದಳು.

ನಮಗೆ ದಿಗ್ದರ್ಶನವಾದ ಅನುಭವವಾಯ್ತು! ಎಲ್ಲೋ ದೂರದಲ್ಲಿ ಕೂತ ರಾಜ್ಯದ ಮುಖ್ಯ ಮಂತ್ರಿಯ ಹಾಡಹಗಲಿನ ಕಪ್ಪು ಪತ್ರ (ಬ್ಲಾಕ್ ಮೇಲು) ಇಲ್ಲಿ ಇಷ್ಟು ದೂರದಲ್ಲಿ ಕೂತ ನನ್ನ ಪುಟ್ಟ ಮಗಳನ್ನು ಈ ಪರಿ ಕಾಡಿದೆಯೆಂದರೆ ಜಗತ್ತು ಯಾವ ದಿಕ್ಕಿನಲ್ಲಿ ಎಷ್ಟು ವೇಗಕ್ಕೆ ಚಲಿಸುತ್ತಿದೆ ಎಂದು ವಿಸ್ಮಯ ಉಂಟಾಯಿತು.

“ಆಗಲಮ್ಮ, ನಾನು ಯಜ್ಯೂರಪ್ಪನಿಗೇ ಓಟ್ ಹಾಕ್ತೀನಿ. ನಿಂಗೆ ಐಸ್ ಕ್ರೀಮು ದಿನಾ ಸಿಗುತ್ತೆ” ಅಂದೆವು ಆಕೆಯ ಮೈದಡವುತ್ತಾ.

“ಥ್ಯಾಂಕ್ಯೂ ಪಪ್ಪ…” ಎಂದು ಅಮೋಘವಾದ ಎರಡು ಆಂಗ್ಲ ಪದಗಳನ್ನುಲಿದು ನಮ್ಮ ಜನ್ಮವನ್ನು ಪಾವನಗೊಳಿಸಿ ಅಡುಗೆ ಮನೆಗೆ ಅವರಮ್ಮನ ಬಳಿಗೆ ಓಡಿದಳು.

– ನಗೆ ಸಾಮ್ರಾಟ್

ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!

6 ಮೇ

‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ ಗಂಡಂದಿರ ಪ್ರತಿಜ್ಞೆಯ ಹಾಗೆ, ‘ಇವತ್ತೇ ಲಾಸ್ಟ್ ಇನ್ನು ಸೋಮಾರಿತನ ಮಾಡುವುದಿಲ್ಲ. ನಾಳೆಯಿಂದ ನಿಯತ್ತಾಗಿ ಬೆಳೆಗ್ಗೆ ಐದಕ್ಕೆದ್ದು ಓದಲು ಕೂರುವೆ’ ಎಂದು ಭೀಷ್ಮನನ್ನೇ ನಡುಗಿಸುವ ವಿದ್ಯಾರ್ಥಿಯ ಪ್ರತಿಜ್ಞೆಯ ಸಾಲಿಗೆ ನಮ್ಮನ್ನೂ ಸೇರಿಸಿಬಿಡಲು ನಮ್ಮ ವಿರೋಧಿಗಳು ಹೊಂಚು ಹಾಕಿ ಸಂಚು ರೂಪಿಸುತ್ತಿರುವುದು ನಮ್ಮ ತೀಕ್ಷ್ಣ ಮತಿಗೆ ತಡವಾಗಿ ಅರಿವಿಗೆ ಬಂದಿದೆ.

‘ಒಂದು ದಿನವೂ ತಪ್ಪಿಸದಂತೆ ನಗಾರಿ ಸದ್ದು ಮಾಡುತ್ತಿರುತ್ತದೆ’ ಎಂದು ನಗೆ ಸಾಮ್ರಾಟರಾದ ನಮ್ಮಾಣೆ, ನಮ್ಮ ಚೇಲ ಕುಚೇಲ, ನಮ್ಮ ಗತಕಾಲದ ಅತ್ಯಾಪ್ತ ಗೆಳೆಯ ತೊಣಚಪ್ಪನವರ ಮೇಲೆ ಆಣೆ ಮಾಡಿ ಹೇಳಿದ್ದ ನಾವು ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಪರಂಧಾಮ ತಲುಪಿ ಅಲ್ಲಿಂದ ರೋಚಕವಾಗಿ ಹಿಂದಿರುಗಿದ್ದು ನಮ್ಮ ನಿಯಮಿತ ಓದುಗರ ನೆನಪಿನಲ್ಲಿರುತ್ತದೆ ಎಂದುಕೊಂಡಿದ್ದೇವೆ. ಅದನ್ನು ಹೊರತು ಪಡಿಸಿದರೆ ನಾವು ಇಷ್ಟು ಕಾಲ ಅನುಪಸ್ಥಿತರಾಗಿದ್ದು ಅನೇಕರಲ್ಲಿ ಸಂಶಯವನ್ನು ಮೂಡಿಸಿರುವುದು ಸಹಜ. ಕೆಲವರು ಹಿಂದೆ ವಿಫಲವಾದ ಆತ್ಮಹತ್ಯಾ ಪ್ರಯತ್ನವನ್ನು ನೆನೆದು, ಇನ್ಯಾರೋ ಯಶಸ್ವಿಯಾಗಿ ನಮ್ಮ ಕೊಲೆ ಮಾಡಿರಬೇಕು ಎಂದು ಅಂದಾಜಿಸಿ ಅಧಿಕಾರಕ್ಕೆ ಬರುವ ಸರಕಾರ ಯಾವುದು ಎಂದು ಊಹಿಸಿದ ರಾಜಕೀಯ ಪಂಡಿತರ ಹಾಗೆ ಫೋಸ್ ಕೊಡುತ್ತಿದ್ದರು. ಇನ್ನು ಕೆಲವರು ಚುನಾವಣೆಯ ಸಂದರ್ಭದಲ್ಲಿ ಗದ್ದಲವಾಗಬಾರದು ಎಂಬ ಕಾರಣಕ್ಕೆ ನಗಾರಿ ಗಂಟು ಮೂಟೆ ಕಟ್ಟಿ ಬಿಸಾಡಿಸುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳ ಮೂಲಕ ದಾಳಿ ನಡೆಸಿದ್ದರು. ಆದರೆ ನಾವು ಮಾತ್ರ ಸೂಕ್ತ ಸಮಯಕ್ಕೆ ಕಾಯುತ್ತ ಕೂತಿದ್ದೆವು.

ನಾವು ನಾಪತ್ತೆಯಾಗುವುದಕ್ಕೆ ಈ ಬಾರಿ ಸಣ್ಣ ಪುಟ್ಟ ನೆಪ ಕಾರಣವಾಗಿರಲಿಲ್ಲ. ನಮ್ಮ ನಾಪತ್ತೆಯ ಹಿಂದೆ ಬಹುದೊಡ್ಡ ಸಂಚೇ ನಡೆದಿತ್ತು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ದಿನಾಂಕವನ್ನು ಘೋಷಿಸಿದ ತಕ್ಷಣ ನಾಡಿನಾದ್ಯಂತ ಅನಧಿಕೃತವಾಗಿ ಒಂದು ವದಂತಿ ಹರಿದಾಡಲು ಶುರುವಾಯಿತು. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಸವಾಲಾಗಿರುವ ಈ ಚುನಾವಣೆಯಲ್ಲಿ ಬಹುದೊಡ್ಡ ಸ್ಥಿತ್ಯಂತರವಾಗುವ ಗುಲ್ಲು ಎಲ್ಲೆಡೆ ಕೇಳಿಬಂತು. ಮೊದ ಮೊದಲು ಸಾಮಾನ್ಯ ಜನರು, ರಾಜಕೀಯ ಪಂಡಿತರು, ಮಾಧ್ಯಮದ ಪ್ರಭೃತಿಗಳು ಈ ಗುಲ್ಲನ್ನು ನಿರ್ಲಕ್ಷಿಸಿದ ನಾಟಕವಾಡಿದರು. ಆದರೆ ಯಾವಾಗ ಊರಿಗೊಬ್ಬಳೇ ಪದ್ಮಾವತಿ ಮತ್ತವಳ ತಂಗಿ ರೂಪಲಕ್ಷ್ಮಿ ಎಂಬಂತೆ ದೇಶಕ್ಕೆಲ್ಲ ಎರಡೇ ರಾಜಕೀಯ ಪಕ್ಷಗಳು ಎಂಬ ಪರಿಸ್ಥಿತಿ ಇದ್ದದ್ದು ಬದಲಾಗುವ ಸಾಧ್ಯತೆಗಳು ಕಂಡುಬರಲು ಶುರುವಾಯಿತೋ ಗುಲ್ಲನ್ನು ತಳ್ಳಿ ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಮೂರನೆಯ ರಂಗ, ನಾಲ್ಕನೆಯ ರಂಗ, ಐದನೆಯ ರಂಗ ಎಂದು ಭೈರಪ್ಪನವರ ಆವರಣದ ಮುದ್ರಣದ ಹಾಗೆ ರಾಜಕೀಯ ರಂಗಗಳ ಸಂಖ್ಯೆ ಏರುತ್ತಾ ಹೋದಾಗ ಯಾರು ಬೇಕಾದರೂ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗತೊಡಗಿತು. ರಾಜಕಾರಣಿಗಳಿಗೆ, ಪಂಡಿತರುಗಳಿಗೆ ದಿಗಿಲು ಶುರುವಾದದ್ದೇ ಆಗ! ನಗೆ ಸಾಮ್ರಾಟರಾದ ನಾವು ನಿಶ್ಚಿತವಾಗಿ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳನ್ನು ಕಂಡು ದೇಶಕ್ಕೆ ದೇಶವೇ ನಿಬ್ಬೆರಗಾಯಿತು.

‘ನಗೆ ಸಾಮ್ರಾಟ್ ಪ್ರಧಾನಿಯಾಗುವುದು ಕನಸಿನಲ್ಲೂ ಸಾಧ್ಯವಿಲ್ಲ’ ಎನ್ನುವ ಪ್ರಮುಖ ಪಕ್ಷಗಳ ಉಪೇಕ್ಷೆಯ ಹೇಳಿಕೆಗಳಿಗೆ ಉತ್ತರವಾಗಿ ದಿನೇ ದಿನೇ ಬಲಗೊಳ್ಳಲು ತೊಡಗಿದ ನಮ್ಮ ‘ಇನ್ನೊಂದು ರಂಗ’ ದೇಶದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಹಂತವನ್ನು ತಲುಪಿತ್ತು. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರಿ ಅಂತರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಜಯಿಸಿ ಅಭೂತಪೂರ್ವ ದಾಖಲೆ ಬರೆಯ ಹೊರಟ ನಮ್ಮ ಧೈರ್ಯ, ಸಾಹಸ ಮನೋವೃತ್ತಿಗೆ ಭುವಿಯೇ ಥರ ಥರನೇ ನಡುಗಿತು.

ಆಗ ಶುರುವಾಯಿತು ಸಂಚಿನ ಮೊದಲ ಹಂತ. ಇನ್ನು ನಾವೆಲ್ಲ ಪರಸ್ಪರ ಕಿತ್ತಾಡುತ್ತ ಕೂತರೆ ದೇಶಕ್ಕೆ ದೇಶವೇ ನಗೆ ಸಾಮ್ರಾಟನ ಸಾಮ್ರಾಜ್ಯವಾಗಿ ಬಿಡುತ್ತದೆ. ನಮ್ಮ ಗಲ್ಲಿ ಪಾಂಚಾಜನ್ಯಗಳನ್ನು ವಿಕಾರವಾಗಿ ಅರಚಿಸುತ್ತಾ ನಾವು ಹೊಡಿ, ಬಡಿ, ಕಡಿ ಎಂದು ಕೂಗಾಡುತ್ತಿದ್ದರೆ ಅಖಂಡ ಭಾರತದಲ್ಲಿ ನಗೆ ನಗಾರಿಯ ಸದ್ದು ಮಾರ್ದನಿಸತೊಡಗುತ್ತದೆ ಎಂಬುದನ್ನು ಅರಿತ ಸರ್ವ ಪಕ್ಷಗಳು ಈ ಭುವಿಯ ಇತಿಹಾಸದಲ್ಲಿ ಹಿಂದೆಂದೂ ನಡೆದಿರದ ಭಾರಿ ಸಂಚನ್ನು ಹೆಣೆದವು. ಈ ದುಷ್ಟ ಕೂಟದ ದಾಳಿ ಹೇಗಿತ್ತೆಂದರೆ ಚೂರು ಪಾರು ಮಹಾಭಾರತದ ಅರಿವಿರುವವರಿಗೆಲ್ಲಾ ಅಭಿಮನ್ಯುವನ್ನು ಆಹುತಿ ತೆಗೆದುಕೊಂಡ ಚಕ್ರವ್ಯೂಹವನ್ನು ನೆನಪಿಸುವಷ್ಟು!

ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದ ಹಾಗೆ ನಮ್ಮನ್ನು ಎಂಟು ಮತ್ತೆರಡು ದಿಕ್ಕುಗಳಿಂದ ಹಣಿದು ಹಾಕಲಾಯಿತು. ನಮ್ಮನ್ನು ಉಸಿರಾಡುವ ಶವದಂತೆ ನಿಷ್ಕ್ರಿಯ ಮಾಡಲಾಯಿತು. ಒಂದಿಂಚೂ ಕದಲದ ಹಾಗೆ ದಿಗ್ಭಂದನ ಮಾಡಲಾಯಿತು. ಮರಾ ಮೋಸದಿಂದ ನಮ್ಮ ಶಕ್ತಿಯನ್ನೆಲ್ಲ ಕುಗ್ಗಿಸಲಾಯಿತು. ನಮ್ಮ ರೆಕ್ಕೆ ಪುಕ್ಕಗಳನ್ನೆಲ್ಲಾ ಹದವಾದ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು. ಇಷ್ಟು ಸಾಹಸವನ್ನು ಮೆರೆದ ದುಷ್ಟಕೂಟ ನಾವು ಈ ಮಹಾನ್ ದೇಶದ ಮಹಾನ್ ಪ್ರಧಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು. ಮುಂದಿನ ಐದು ವರ್ಷ ನೆಮ್ಮದಿಯಾಗಿರಬಹುದು ಎಂದು ಭಾವಿಸಿತು.

ಪ್ರಧಾನಿ ಪಟ್ಟ ತಪ್ಪಿದ ನಿರಾಸೆ, ಮಹಾನ್ ಸಾಧನೆ ಮಾಡುವುದಕ್ಕೆ ಉಂಟಾದ ವಿಘ್ನದ ಬಗೆಗಿನ ಅಸಹನೆ, ರೆಕ್ಕೆ ಪುಕ್ಕ ಕತ್ತರಿಸಲ್ಪಟ್ಟ ಹತಾಶೆ, ಮೈ ಮನಸುಗಳಲ್ಲಿ ಅಪಾರವಾದ ದಣಿವು – ಇವೆಲ್ಲವನ್ನೂ ಇಷ್ಟು ದಿನ ಸಹಿಸಿಕೊಂಡು ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಬಾನಂಗಳಕ್ಕೆ ಚಿಮ್ಮಿದ್ದೇವೆ. ಪ್ರಧಾನಿ ಪಟ್ಟ ಕೈ ತಪ್ಪಿದರೂ ನಮ್ಮ ನಗೆ ಸಾಮ್ರಾಜ್ಯದ ಪಟ್ಟವನ್ನಲಂಕರಿಸಿ ನಗೆ ಸಾಮ್ರಾಟರಾಗಿದ್ದೇವೆ. ನಗೆ ನಗಾರಿಯ ಸದ್ದು ನೂರು ದಿಕ್ಕುಗಳಲ್ಲಿ ಮಾರ್ದನಿಗೊಳ್ಳುವುದನ್ನು ಸಂತೋಷದಿಂದ ಆಲಿಸುತ್ತಿದ್ದೇವೆ. 

– ನಗೆ ಸಾಮ್ರಾಟ್

ನಾನು ರಾಜಕೀಯ ಸೇರಬಹುದು: raw-ಹುಳ ಮಹಾಜನ್

22 ನವೆಂ

(ನಗೆ ನಗಾರಿ ರಾಜಕೀಯ ಬ್ಯೂರೋ)

Patriotism is the last refuge of a scoundral ಉದ್ಘರಿಸಿದ ಸ್ಯಾಮುಯಲ್ ಜಾನ್ಸನ್ನನ ಹೇಳಿಕೆಯನ್ನು ಸಾರ್ವತ್ರಿಕ ಗೊಳಿಸಿ Politics is the last refuge of a scoundral ಎಂಬುದಾಗಿ ತಿರುಚಿ ಅದನ್ನು ಸಾಬೀತು ಪಡಿಸಲು ಶ್ರೀಯುತ raw-ಹುಳ ಮಹಾಜನ್ ಕಂಕಣ ಬದ್ಧರಾಗಿದ್ದಾರೆ ಎಂದು ನಮ್ಮ ಮೂಲಗಳು ಅರಚಿಕೊಂಡಿವೆ.

ನಮ್ಮ ಭವ್ಯ ದೇಶದಲ್ಲಿ ತಂದೆಯಿಂದ ಮಗನಿಗೆ ಕೇವಲ ಅರ್ಧ ಪಾಲು ಕ್ರೋಮೋಜೋನುಗಳಷ್ಟೇ ಅಲ್ಲದೆ ಸಂಪೂರ್ಣ ಆಸ್ತಿ, ಭವಿಷ್ಯ, ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ಬದುಕು ಬರುವುದು ಅಸಹಜವೇನಲ್ಲ. ತಂದೆ ಒಂದು ಜಾತಿಯವನಾದರೆ ಆತನ ಎಲ್ಲಾ ಮಕ್ಕಳೂ ಅದೇ ಜಾತಿಯವರಾಗುತ್ತಾರೆ ಎಂದು ಬಹು ಹಿಂದೆಯೇ ನಮ್ಮ ಸಮಾಜವನ್ನು ಕಟ್ಟಿದ ಮನು ಮಹಾನುಭಾವರು ಹೇಳಿದ್ದಾರೆ. ಆತನ ತತ್ವವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ನಮ್ಮ ನಾಡಿನ ಅತ್ಯಂತ ವಿಧೇಯರಾದ ಜನತೆ ನಿಜಕ್ಕೂ ಆತನ ಕೃಪೆಗೆ ಅರ್ಹರು. ನಮ್ಮ ದೇಶದಲ್ಲಿ ಅಪ್ಪ ಶ್ರೀಮಂತನಾದರೆ ಆತನ ಪ್ರತಿಯೊಬ್ಬ ಮಗನೂ ಶ್ರೀಮಂತನಾಗುತ್ತಾನೆ. ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುತ್ತಾನೆ. ಅಪ್ಪ ಸರಕಾರಿ ನೌಕರನಾದರೆ ಮಗನೂ ಸರಕಾರಕ್ಕೆ ಬಾದ್ಯಸ್ಥನಾಗುತ್ತಾನೆ. ಅಪ್ಪ ಮಠಾಧಿಪತಿಯಾದರೆ ಅನಧಿಕೃತ ಮಗ ಮಠದ ಅಧಿಪತಿಯಾಗದಿದ್ದರೂ ಆಡಳಿತವನ್ನು ಕೈಗೆತ್ತಿಕೊಳ್ಳುತ್ತಾನೆ. ಹೀಗಿರುವಾಗ raw-ಹುಳರು ರಾಜಕೀಯವನ್ನು ಪ್ರವೇಶಿಸುವ ಮನಸ್ಸು ಮಾಡಿರುವುದು ಭಾರತದ ಸನಾತನ ಪರಂಪರೆಯನ್ನು ಮುಂದುವರೆಸುವ ದಿಟ್ಟವಾದ ಹೆಜ್ಜೆ ಎಂದು ಚಿಂತಕರ ವಲಯದಲ್ಲಿ ಸದ್ದು ಹೊರಡುತ್ತಿದೆ.

2006060914720101

ನಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಗಳೂ ಬೇಕಿಲ್ಲ ಎಂದು ನಾಲಿಗೆಯಲ್ಲಿ ಎಲುಬಿಲ್ಲದ ಮಹಾನುಭಾವರು ಆಗಾಗ ಮೈಕುಗಳ ಮುಂದೆ ಅರಚುತ್ತಲೇ ಇರುತ್ತಾರೆ. ಇತರ ದೇಶಗಳಲ್ಲಿ ರಾಜಕಾರಣಿಯಾಗಬೇಕಾದವನು ಕನಿಷ್ಠ ಶಿಕ್ಷಣ ಅರ್ಹತೆ ಹೊಂದಿರಬೇಕು, ಆಡಳಿತದಲ್ಲಿ ಅನುಭವವನ್ನು ಸಂಪಾದಿಸಿರಬೇಕು ಎಂದೆಲ್ಲಾ ಜನರು ಬಯಸುತ್ತಾರೆ. ತಮ್ಮನ್ನು ಪ್ರತಿನಿಧಿಸುವ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಜನರು ಅನೇಕ ಅರ್ಹತೆಗಳ ಮಾನದಂಡವನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿ ರಾಜಕಾರಣಿಯಾಗುವುದಕ್ಕೆ ಯಾವ ಅರ್ಹತೆಯೂ ಬೇಕಿಲ್ಲ. ಬೇರಾವ ಕೆಲಸಕ್ಕೂ ಸಲ್ಲದವ, ಬೇರಾವ ಮರ್ಯಾದಸ್ಥ ಉದ್ಯೋಗ ಮಾಡಲು ಬೇಕಾದ ಅರ್ಹತೆ ಇಲ್ಲದವ ಸಲೀಸಾಗಿ ಎರಡನೆಯ ಆಲೋಚನೆ ಇಲ್ಲದೆ ರಾಜಕಾರಣಕ್ಕೆ ಧುಮುಕಬಹುದು ಎಂದು ಲೇವಡಿ ಮಾಡುವವರು ಹಲವರಿದ್ದಾರೆ. ಅವರು ತಿಳಿಯಬೇಕಾದ ಸಂಗತಿಯೊಂದಿದೆ. ಜಗತ್ತಿನ ಬೇರಾವ ದೇಶಕ್ಕೆ ಹೋಲಿಸಿದರೂ ನಮ್ಮ ದೇಶದಲ್ಲಿ ರಾಜಕಾರಣಿಯಾಗುವುದಕ್ಕೆ ಬೇಕಾದ ಅರ್ಹತೆ ಅತ್ಯಂತ ಕಠಿಣವಾದದ್ದು ಹಾಗೂ ಅಸಾಧ್ಯ ಎಂಬುದಕ್ಕೆ ತೀರಾ ಸನಿಹವಾದದ್ದು ಎನ್ನುತ್ತಾರೆ ಸಮಾಜ ವಿಜ್ಞಾನಿ ನಗೆ ಸಾಮ್ರಾಟ್.

ರಾಜಕಾರಣಿಯಾಗುವ ಮಹಾತ್ವಾಕಾಂಕ್ಷೆಯಿದ್ದವರು ಹೇಗೆ ಮೊದಲು ತಾವು ಬೇರಾವ ಕೆಲಸಕ್ಕೂ ಬಾರದವರು ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ ಎಂಬುದನ್ನು ಹಿಂದಿನ ವರದಿಯೊಂದರಲ್ಲಿ ವಿವರವಾಗಿ ಬಿಚ್ಚಿಡಲಾಗಿದೆ. ಆ ಎಲ್ಲಾ ಅರ್ಹತೆಗಳನ್ನೂ ಶ್ರೀಯುತ raw-ಹುಳ ಮಹಾಜನ್‌ರು ಹೊಂದಿರುವುದು ಸಂತೋಷದ ಸಂಗತಿ. ತಂದೆ ಚಿಕ್ಕಪ್ಪನ ಗುಂಡಿಗೆ ಬಲಿಯಾಗಿ ಒಂಭತ್ತು ಹತ್ತು ದಿನ ಆಸ್ಪತ್ರೆಯಲ್ಲಿ ಹೋರಾಡಿ ಸತ್ತು ಇನ್ನೂ ಚಿತೆಯ ಭಸ್ಮ ಆರಿರದಿದ್ದಾಗಲೇ ಮನೆಯಲ್ಲಿ ಮಾದಕ ದ್ರವ್ಯ ತರಿಸಿಕೊಂಡು ತೆಲೆಗೆ ಮತ್ತು ಏರಿಸಿಕೊಂಡು ಒಬ್ಬನನ್ನು ಅದೇ ಮತ್ತು ಬಲಿ ತೆಗೆದುಕೊಂಡದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಸೇರಿಹೋಗಿದೆ. ಮುಂದೆ ಅನೇಕ ಸಮಾಜ ಕಲ್ಯಾಣ ಕೆಲಸಗಳನ್ನು ಮಾಡಿದ್ದರೂ ತಾವು ರಾಜಕೀಯಕ್ಕೆ ಬರುವುದಕ್ಕೆ ಸರ್ವ ರೀತಿಯಲ್ಲೂ ಅರ್ಹರು ಎಂಬುದನ್ನು ಜನತೆ ಎದುರು ತೋರ್ಪಡಿಸಲು ಬಿಗ್ ಬಾಸ್ ಎಂಬ ಕಾಲ್ಪನಿಕ ರಿಲಾಲಿಟಿ ಶೋನಲ್ಲಿ ಭಾಗವಹಿಸಿದರು. ಆ ಕಾರ್ಯಕ್ರಮದಲ್ಲಿ ಜನರು ಅವರ ಅಶಿಸ್ತು, ದುರ್ವರ್ತನೆಗಳನ್ನೆಲ್ಲಾ ಗಮನಿಸಿ ಈತನಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದರು. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದಂತೆ ಇವರು ಬಿಗ್ ಬಾಸ್‌ ಕಾರ್ಯಕ್ರಮದ ನಿಯಮಗಳನ್ನು ಮುರಿದು ಕಾಂಪೌಂಡ್ ಹಾರಲು ಹೋಗಿ ಸಿಕ್ಕು ಬಿದ್ದು ಬಿಗ್ ಬಾಸ್‌ನಿಂದ ಹೊರಗಟ್ಟಲ್ಪಟ್ಟಿದ್ದಾರೆ. ತಮ್ಮ ಅಶಿಸ್ತಿಗೆ ಮಾಧ್ಯಮದವರಿಂದ ಸನ್ಮಾನವನ್ನು ಪಡೆದಿದ್ದಾರೆ. ಹೀಗಾಗಿ ಅವರು ರಾಜಕಾರಣಿಯಾಗುವುದಕ್ಕೆ ಸರ್ವ ವಿಧದಲ್ಲೂ ಸೂಕ್ತರು ಎಂದು ಜನರು ತೀರ್ಮಾನ ಕೈಗೊಂಡಿದ್ದಾರೆ.

ಒಬಾಮ ಯುವಕರಿಗೆ ಆದರ್ಶವಾಗಬಾರದು!

13 ನವೆಂ

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ)

ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಭಾರತದಲ್ಲಿ ನೆಲೆಸಿರುವ ಅನೇಕ ಜಾಗತಿಕ ರಾಜಕೀಯ ಪಂಡಿತರು ಭಾರತವನ್ನು ಅಪ್ಪಳಿಸಿದ ಎರಡನೆಯ ಸುನಾಮಿ ಇದು ಎಂದು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದರು. ಆದರೆ ಅದು ಯಾವ ಪತ್ರಿಕೆಯಲ್ಲೂ ಬೆಳಕು ಕಾಳದೆ ಡಾರ್ಕ್ ರೂಮ್ ಪಾಲಾಯಿತು. ಎಪ್ಪತ್ತು ಚಿಲ್ಲರೆ ವರ್ಷ ವಯಸ್ಸಿನ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್‌ರನ್ನು ಸುಲಭವಾಗಿ ಮಣಿಸಿದ ನಲವತ್ತೇಳು ವರ್ಷದ ‘ಯುವಕ’ ಒಬಾಮ `we can change’ ಎಂಬ ಘೋಷವಾಕ್ಯದೊಂದಿಗೆ ಅಧಿಕಾರ ಪಡೆದುಕೊಂಡಿದ್ದಾರೆ. ಗುಲಾಮರಾಗಿ ನರಳಿದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದೇಶದ ಸರ್ವೋಚ್ಛ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾದದ್ದು ಅಮೇರಿಕಾದ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿ ಎಂಬ ಹೊಗಳಿಕೆಯ ನಡುವೆಯೇ ಇದು ಸಾಧ್ಯವಾಗಲು ಇನ್ನೂರ ಇಪ್ಪತ್ತೊಂದು ವರ್ಶ ಬೇಕಾಯ್ತೆ ಎಂಬುದು ಸಾಮ್ರಾಟರ ಕೊಂಕು! ಭಾರತ ಅಮೇರಿಕಾದಿಂದ ಕಲಿಯಬೇಕಾದ್ದು ತುಂಬಾ ಇದೆ ಎಂದು ಚಡಪಡಿಸುವವರನ್ನು ಸಮಾಧಾನ ಪಡಿಸುವುದಕ್ಕಾಗಿ ಸಾಮ್ರಾಟರು ಶ್ರೀಮಾನ್ ಘಾರವರನ್ನು ನೆನೆಸಿಕೊಂಡು ಲೈಟ್ ಪದ್ಯ ಹೊಸೆದಿದ್ದಾರೆ.

ಒಬಾಮನಿಗೆ ಬಹುಪರಾಕ್
ನಮಗೊಬ್ಬ ಸಿಗುವುದು ಎಂದು?
ಚಿಂತೆ ಬೇಡ
ಅವರಿಗಾತ ಸಿಕ್ಕಲು ಬೇಕಾಯ್ತು
ವರ್ಷಗಳು ೨೨೧
ನಮ್ಮದಿನ್ನೂ ಅರವತ್ತೊಂದು!

ಈ ಮಧ್ಯೆ ಒಬಾಮರಿಂದ ಸ್ಪೂರ್ತಿ ಪಡೆದ ಜಗತ್ತಿನ ತರುಣ ತರುಣಿಯರು ದೇಶದ ಅಭಿವೃದ್ಧಿಗಾಗಿ ತಾವೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸಕ್ತಿಯನ್ನು ತಳೆದಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯುವುದರಿಂದಾಗುವ ಬದಲಾವಣೆಯ ಬಗ್ಗೆ ಹಾಗೂ ಯುವಕರು ರಾಜಕೀಯಕ್ಕೆ ಬರಬೇಕೆ ಎಂಬ ಬಗ್ಗೆ ನಗೆ ನಗಾರಿ ಸಾಕಷ್ಟು ಮಂದಿಯನ್ನು ಸಂದರ್ಶಿಸಿ ಅಭಿಪ್ರಾಯ ಕ್ರೂಢಿಕರಿಸಿದೆ.

ಟಿಮ್ ಜೋನ್ ಪಾಪಣ್ಣ, ಯುವಕ: ಒಬಾಮ ನಮಗೆಲ್ಲಾ ಸ್ಪೂರ್ತಿ. ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು. ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ, ಕ್ರಾಂತಿಕಾರಿ ಚಿಂತನೆಗಳ, ಬಿಸಿ ರಕ್ತದ, ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ, ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ.

indian-flag

ಶ್ರೀ ಚಿಂತಾಕ್ರಾಂತ ಮೂರ್ತಿ, ಬುದ್ಧಿಜೀವಿ: ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಒಬಾಮನ ಗೆಲುವನ್ನು ಯಾವ ನೆಲಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದನ್ನು ನಾನು ಹಲವು ದಿನಗಳಿಂದ ನಿರ್ಲಿಪ್ತನಾಗಿ ಗಮನಿಸುತ್ತಿದ್ದೇನೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತಳೆಯಬೇಕೆ ಬೇಡವೇ ಎಂಬುದು ಜಾಗತೀಕರಣದ ಈ ಕಾಲಘಟ್ಟದಲ್ಲಿ ಅತ್ಯಂತ ಕ್ಷಿಷ್ಟಕರವಾದ ಹಾಗೂ ಸಮಗ್ರ ಅಧ್ಯಯನವನ್ನು ಬೇಡುವಂತಹ ಪ್ರಶ್ನೆ. ನಾವು ಏನೇ ಮಾತನಾಡಿದರೂ ಅದರೂ ಅತಿ ಸೂಕ್ಷ್ಮ ಸಂಗತಿಯೊಂದರ ಸುಲಭದ ಸರಳೀಕರಣವಾಗಿಬಿಡುವ ಅಪಾಯವಿರುವುದರಿಂದ ನೇರವಾದ ನಿಲುವುಗಳಿಗೆ ಬಂದು ನಿಲ್ಲುವುದು ಸೂಕ್ತವಾಗದು. ಪ್ರಗತಿಪರರು, ಚಿಂತಕರು, ಯುವಕರ ನಾಡಿಮಿಡಿತ ಅರಿಯಬಲ್ಲತಜ್ಞರು ಕೂಡಿ ವಿಚಾರ ಸಂಕೀರ್ಣವೊಂದನ್ನು ಏರ್ಪಡಿಸಿ ಈ ಬಗ್ಗೆ ಕೂಲಂಕುಶವಾದ ಚರ್ಚೆಯನ್ನು ನಡೆಸಿ ವರದಿಯನ್ನು ತಯಾರಿಸಬೇಕು. ಅನಂತರವಷ್ಟೇ ಯುವಕರು ರಾಜಕೀಯಕ್ಕೆ ಧುಮುಕಬಹುದೇ ಇಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಬಹುದು.

ಶ್ರೀಯುತ ಮಲ್ಲರೆಡ್ಡಿ, ಹಿರಿಯ ಮುತ್ಸದ್ಧಿ, ರಾಜಕಾರಣಿ: ಒಬಾಮನ ಉದಾಹರಣೆಯನ್ನು ನಮ್ಮ ಯುವಕರು ಸ್ಪೂರ್ತಿಯಾಗಿ ಭಾವಿಸಬಾರದು. ಇದರಲ್ಲಿ ಅನೇಕ ಸೂಕ್ಷ್ಮಗಳಿರುವುದು ಅವರಿಗೆ ತಿಳಿಯುವುದಿಲ್ಲ. ಮೊದಲನೆಯದಾಗಿ ನಮ್ಮ ಸಂವಿಧಾನದ ಪ್ರಕಾರ ಒಬ್ಬ ಸಂಸತ್ ಸದಸ್ಯನಾಗುವುದಕ್ಕೆ ಈ ಅರ್ಹತೆಗಳು ಬೇಕು
೧. ೨೫ ಅಥವಾ ೨೫ ವರ್ಷಕ್ಕೆ ಮೇಲ್ಪಟ್ಟವನಾಗಿರಬೇಕು.
೨. ಬುದ್ಧಿ ಸ್ಥಿಮಿತದಲ್ಲಿರಬೇಕು
೩. ದಿವಾಳಿಯಾಗಿರಬಾರದು
೪. ಆತನ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳಿರಬಾರದು
ಆದರೆ ನಮ್ಮ ದೇಶದಲ್ಲಿ ಈ ಅರ್ಹತೆಗಳಿಗೆ ಯಾವ ಬೆಲೆಯನ್ನೂ ಕೊಡಲಾಗುತ್ತಿಲ್ಲ ಎಂಬುದು ತೀರಾ ದುಃಖದ ಸಂಗತಿ. ಕಡೆಯ ಮೂರು ಅರ್ಹತೆಗಳಿಲ್ಲದವರೂ ಸಹ ಈಗ ಎಂಪಿಗಳಾಗಿದ್ದಾರೆ. ನೂರಾರು ಕ್ರಿಮಿನಲ್ ಮೊಕದ್ದಮೆಗಳಿದ್ದರೂ ಚುನಾವಣೆ ಹತ್ತಿರ ಬಂದಾಕ್ಷಣ ಗಂಗೆಯಲ್ಲಿ ಮಿಂದೆದ್ದಾಗ ನಾಶವಾಗಿಬಿಡುವ ಪಾಪಗಳ ಹಾಗೆ ಅವೆಲ್ಲಾ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗಿಬಿಡುತ್ತವೆ. ಸ್ವತಃ ಆ ಚಿತ್ರಗುಪ್ತನೇ ಬಂದರೂ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ಸಾಬೀತು ಮಾಡಲು ನಯಾ ಪೈಸೆ ಸಾಕ್ಷಿಯೂ ಸಿಕ್ಕುವುದಿಲ್ಲ. ಮೂರನೆಯ ಅರ್ಹತೆಯನ್ನು ನಮ್ಮ ದೇಶದ ರಾಜಕಾರಣಿಗಳು ಉಲ್ಟಾ ಅರ್ಥ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವವನಿಗೆ ಎಂಪಿಯಾಗುವ ಅರ್ಹತೆಯಿಲ್ಲ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಕ್ಕೆ ಬಂದೊಡನೆ ತಮ್ಮ ದಾರಿದ್ರ್ಯ, ಹಣಕಾಸಿನ ಮುಗ್ಗಟ್ಟನ್ನೆಲ್ಲಾ ನಿವಾರಿಸಿಕೊಂಡು ದೇಶವನ್ನು ದಿವಾಳಿ ಮಾಡಬೇಕು ಎಂದು ಅವರು ಭಾವಿಸಿದ್ದಾರೆ. ಎರಡನೆಯ ಅರ್ಹತೆಯಂತೂ ಬಹುಪಾಲು ಮಂದಿಗೆ ಇರುವುದೇ ಇಲ್ಲ. ದಿನ ನಿತ್ಯ ಪತ್ರಿಕೆಗಳಲ್ಲಿ ಮುಖ್ಯ ಮಂತ್ರಿ ವಿರೋಶ ಪಕ್ಷದವರಿಗೆ ತಲೆ ಕೆಟ್ಟಿದೆ ಎನ್ನುತ್ತಾರೆ. ಮರುದಿನ ವಿರೋಧ ಪಕ್ಷದವರು ಆಡಳಿತ ಪಕ್ಷದವರಿಗೇ ತಲೆಯೇ ಇಲ್ಲ ಇನ್ನು ಕೆಡುವುದೆಂತು (head less chicken ಪ್ರಕರಣವನ್ನು ನೆನೆಸಿಕೊಳ್ಳಬಹುದು) ಎನ್ನುತ್ತಾರೆ.
ಹೀಗೆ ಮೂರು ಅರ್ಹತೆಗಳಿಗೆ ಯಾವ ಬೆಲೆಯೂ ಇರದಿರುವಾಗ ಕನಿಷ್ಠ ಪಕ್ಷ ನಾವು ಒಂದು ಅರ್ಹತೆಗಾದರೂ ಬೆಲೆ ಕೊಡಬೇಕು. ಈ ಮೂರು ಅರ್ಹತೆಗಳಲ್ಲಿ ಲ್ಯಾಪ್ಸ್ ಆದ ಬೆಲೆಯನ್ನೂ ಸೇರಿಸಿ ಮೊದಲನೆಯ ಅರ್ಹತೆಯನ್ನು ರೂಪಿಸಬೇಕು. ಅಂದರೆ ೨೫ ವರ್ಷದ ಅರ್ಹತೆಯ ಮಿತಿಯನ್ನು ತಿರುವುಮುರುವು ಮಾಡಿ ೫೨ ಎಂದು ಮಾಡಿಕೊಂಡು ಪಾಲಿಸಬೇಕು.

ಅಲ್ಲದೇ‘ರಾಜಕೀಯ ಅಯೋಗ್ಯನ ಕಡೆಯ ಆಶ್ರಯ ತಾಣ’ ಎಂಬ ಮಾತಿದೆ. ಹೀಗಾಗಿ ಯುವಕರು ರಾಜಕೀಯಕ್ಕೆ ಬರುವ ಮೊದಲು ತಾವು ಬೇರಾವುದೇ ಕ್ಷೇತ್ರದಲ್ಲಿ ನ್ಯಾಯ, ನೀತಿಗೆ ಅನುಗುಣವಾಗಿ ಕೆಲಸ ಮಾಡಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಇದು ಸರಳವಾದ ಕೆಲಸವಲ್ಲ. ಇದಕ್ಕೆ ಜೀವನದ ಬಹುಪಾಲು ಸಮಯವನ್ನು ಮೀಸಲಿಡಬೇಕು. ಹೀಗೆ ಒಮ್ಮೆ ಅಯೋಗ್ಯನೆಂಬ ಪದವಿಯನ್ನು ಪಡೆದುಕೊಂಡರೆ ಅನಂತರ ದೇಶ ಸೇವೆ ಮಾಡುವ ಅರ್ಹತೆ ದೊರೆಯುತ್ತದೆ.

ಇವನ್ನೆಲ್ಲಾ ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕಣ್ಣು ಸರಿಯಾಗಿ ಕಾಣುವ, ಕಿವಿ ಚೆನ್ನಾಗಿ ಕೇಳುವ, ಬುದ್ಧಿ ಚುರುಕಾಗಿರುವ, ಮೈ ಕೈ ಗಟ್ಟಿ ಮುಟ್ಟಾಗಿರುವ ಸಮಯದಲ್ಲಿ ರಾಜಕೀಯದ ಉಸಾಬರಿ ಅವರಿಗೇಕೆ? ಇದರಿಂದ ಅವರಿಗೂ ಲಾಭವಿಲ್ಲ ರಾಜಕೀಯಕ್ಕೂ ಲಾಭವಿಲ್ಲ. ಏಕೆಂದರೆ ಈ ಯುವಕರಿಗೆ ಮೈತುಂಬ ಆದರ್ಶಗಳು. ಬೆಂಗಳೂರಿನ ಯಾವೊಬ್ಬ ಯುವಕನನ್ನು ಕರೆದು ಶರ್ಟು ಬಿಚ್ಚಿ ನೋಡಿದರೆ ಕಾಣುವುದು ಎರಡೇ ಸಂಗತಿಗಳು. ಒಂದು ಚಿತ್ರ ವಿಚಿತ್ರವಾದ ಹಚ್ಚೆ ಇಲ್ಲವೇ ಅವಕ್ಕಿಂತಲೂ ವಿಚಿತ್ರವಾದ ಆದರ್ಶಗಳು. ಆದರ್ಶವಂತರು ಕೆಲಸ ಮಾಡುತ್ತಾರೆಯೇ ಹೊರತು ರಾಜಕೀಯ ಮಾಡುವುದಿಲ್ಲ. ಒಮ್ಮೆ ಇಂಥ ಆದರ್ಶವಾದಿಗಳು ಅಧಿಕಾರಕ್ಕೆ ಬಂದು ಐದು ವರ್ಷಗಳನ್ನು ರಾಜಕೀಯ ಮಾಡುವುದರಲ್ಲಿ ಕಳೆಯದೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟರೆ, ಗರೀಬಿ ಹಠಾಯಿಸಿಬಿಟ್ಟರೆ, ಎಲ್ಲರಿಗೂ ಮೂಲಭೂತ ಆವಶ್ಯಕತೆ ಕೊಟ್ಟು ಬಿಟ್ಟರೆ, ದುಡಿಮೆಗೆ ತಕ್ಕಂತಹ ಪ್ರತಿಫಲ ಬರುವಂತಹ ವ್ಯವಸ್ಥೆಯನ್ನು ರೂಪಿಸಿಬಿಟ್ಟರೆ, ಭ್ರಷ್ಠಾಚಾರವನ್ನು ಕಿತ್ತೊಗೆದುಬಿಟ್ಟರೆ ಅನಂತರ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಮಾಡಲು ಕೆಲಸವೇ ಇರುವುದಿಲ್ಲ. ಇದರಿಂದ ಪ್ರಜಾಪ್ರಭುತ್ವವೇ ಅಂತ್ಯವಾಗಿಬಿಡುತ್ತದೆ. ಹೀಗಾಗಿ ಯುವಕರು ಎಂದೆಂದಿಗೂ ರಾಜಕೀಯದ ಕಡೆಗೆ ತಲೆ ಹಾಕಿಯೂ ಮಲಗಬಾರದು.

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

28 ಜುಲೈ

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)

ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು ನಗೆ ಸಾಮ್ರಾಟರಾಗಿಯಾಗಿ ನಾಡಿನ ಬಹುತೇಕ ‘ನಗೆ’ಜೀವಿಗಳ ನಾಳಿನ ಬದುಕಿನ ಆಶಾಕಿರಣವಾಗಿತ್ತು. ಮನುಷ್ಯ ಕುಲದ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವ ಏಕೈಕ ನೆಪವಾಗಿತ್ತು. ಆದರೆ ಈಗ ಆ ಒಂದು ಆಸರೆಯೂ ಕೈತಪ್ಪಿ ಹೋಗಿ ವಿಶ್ವಾಸಮತದ ಸಂದರ್ಭದಲ್ಲಿ ಕೈಕೊಟ್ಟ ಸಂಸದರಿಂದಾಗಿ ಡೋಲಾಯಮಾನ ಸ್ಥಿತಿಗೆ ತಲುಪುವ ಸರಕಾರದ ಹಾಗೆ ನಗೆ ಸಾಮ್ರಾಟರು ಕನಲಿಹೋಗಿದ್ದಾರೆ.

ಕರ್ನಾಟಕವೆಂಬ ದಕ್ಷಿಣ ಭಾರತದ ಕೋಟೆಯ ಬಾಗಿಲನ್ನು ಗುದ್ದಿ ತೆರೆದುಕೊಂಡು ಒಳಕ್ಕೆ ನುಗ್ಗಿದ ಮಾನ್ಯ ಮುಖ್ಯ ಮಂತ್ರಿ ಎಡಿಯೂರಿಯಪ್ಪನವರ ಹಿಂದೆ ಮುಂದೆ ಅಕ್ಕ ಪಕ್ಕದಲ್ಲಿದ್ದ ಕಾಂತಿಗೆ ಕಾರಣ ನಮ್ಮ ಸದಾ ಆನಂದ ಗೌಡರ ನೀಟಾಗಿ ಉಜ್ಜಿದ ಬಿಳುಪಾದ ಹಲ್ಲುಗಳು. ಕಮಲದ ಪಕ್ಷ ಬಳ್ಳಾರಿಯ ಧಣಿಗಳು ಎಬ್ಬಿಸಿದ ಧೂಳಿನ ನಡುವೆಯೂ ಪ್ರಕಾಶಮಾನವಾಗುವುದಕ್ಕೆ ಗೌಡ್ರ ಕೊಲ್ಗೇಟ್ ನಗುವೇ ಕಾರಣ. ಆದರೆ ಚುನಾವಣೆ ನಡೆದು ಬಿಜೆಪಿ ಅದ್ಯಾವ ಮಾಯದಲ್ಲೋ ಗೆದ್ದು ಬಿಟ್ಟು ಯಡಿಯೂರಿಯಪ್ಪನವರಿಗೆ ತಾವು ಕಾಣುತ್ತಿರುವುದು ಕನಸೋ, ನನಸೋ ತಿಳಿಯದೆ ತಾವು ಮುಖ್ಯಮಂತ್ರಿಯೋ, ವಿರೋಧ ಪಕ್ಷದ ನಾಯಕನೋ ಎಂದು ಗೊಂದಲವಾಗಿ ಮಾತಾಡಲು ಶುರು ಮಾಡಿದ್ದಾರೆ. ಮೊನಾಲಿಸಾ ನಗೆಯ ಹಿಂದಿನ ರಹಸ್ಯಗಳನ್ನು, ನಿಗೂಢತೆಯನ್ನು ಕಂಡು ಬೆಚ್ಚಿದ ಜನರು ಆಕೆಯ ನಗೆಯನ್ನೇ ನಾಶ ಮಾಡಲು ಹೊರಟಂತೆ ಒಂದು ಕಡೆಯಿಂದ ಬಳ್ಳಾರಿಯ ಟಿಪ್ಪರ್‌ಗಳು, ಪದ್ಮನಾಭನಗರದ ಶೋಕ ಗೀತೆಯೂ, ಅನಂತ ಅವಾಂತರಗಳೂ, ಪಕ್ಷ-ಏತಕ್ಕೆ ಎನ್ನುವ ಪಕ್ಷೇತರರು ಅವರ ‘ಮುಗ್ಧ’ ನಗೆಯ ಮೇಲೆ ದಾಳಿ ಮಾಡಿದ್ದಾರೆ. ಅವರ ಮುಖದ ಮೇಲಿನ ನಗೆಯನ್ನು ಹಾಡಹಗಲೇ ಕೊಲೆ ಮಾಡಿದ್ದಾರೆ.

ನಿದ್ದೆಯಲ್ಲಿ ದೇಶದ ಬಗ್ಗೆ ಆಲೋಚಿಸುವ ‘ಕನಸು’ ಕಾಣುವ , ಮಾತಾಡುವಾಗ ಸದ್ದು ಎಲ್ಲೆಂಲ್ಲಿಂದ ಹೊರಡುತ್ತಿದೆ ಎಂದು ವಿಸ್ಮಯ ಚಕಿತರಾಗಿ ಕುಳಿತುಕೊಳ್ಳುವ ‘ನಗದ’ ನಾಯಕರುಗಳ ಕೈಯಲ್ಲಿ ಸಿಕ್ಕು ಕರ್ನಾಟಕದ ನಗೆಯೇ ಕಾಣೆಯಾದಂತಾಗುವ ಸಂದರ್ಭ ಬಂದಾಗ ನಾಡಿನ ಜನರು ಆನಂದ ಗೌಡರ ಮುಖವನ್ನು ಕಂಡು ತಮ್ಮ ಒಂದೆರೆಡಾದರೂ ಹಲ್ಲು ಬಿಡುತ್ತಿದ್ದರು. ಟಿವಿಯಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಜೋಲು ಮುಖಗಳ ನಡುವೆ ಹಸನ್ಮುಖಿಯನ್ನು ಕಂಡು ಜನರು ಹಗುರಾಗುತ್ತಿದ್ದರು. ಆದರೆ ನಾಡಿನ ದ್ರೋಹಿಗಳ ವ್ಯವಸ್ಥಿತ ಪಿತೂರಿಯಿಂದಾಗಿ ಮೊಗದಿಂದ ನಗುವು ಕಾಣೆಯಾಗಿದೆ. ಈ ಬಗ್ಗೆ ನಮ್ಮ ಮುಖ್ಯ ಮಂತ್ರಿಗಳು ಬಹು ಶೀಘ್ರವಾಗಿ ಗಮನ ಹರಿಸಬೇಕು. ಇಲ್ಲವಾದಲ್ಲಿ ಕರೆಂಟಿಲ್ಲದೆ ಕತ್ತಲೆಯಲ್ಲಿ ಹೊರಳಾಡುತ್ತಿರುವ ನಾಡು ನಗುವಿನ ಬೆಳಕಿಲ್ಲದೆ ನರಳಾಡಬೇಕಾದೀತು. ಈ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಕ ಗೊಳಿಸಿ ಆನಂದ ಗೌಡರ ನಗೆಯನ್ನು ಅಪಹರಿಸಿದ ಪಾತಕಿಗಳನ್ನು ಹುಡುಕಿ ತಂದು ಕಂಪ್ಯೂಟರಿನ ಮುಂದೆ ಕೂರಿಸಿ ನಗೆ ನಗಾರಿ ಡಾಟ್ ಕಾಮ್ ತೋರಿಸಿ ನಗುವ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಆನಂದ ಗೌಡರ ಸಾವಿರ ಕ್ಯಾಂಡಲ್ ನಗೆಯನ್ನು ಅವರ ಮುಖದ ಮೇಲೆ ಪುನರ್ ಪ್ರತಿಷ್ಠಾಪಿಸಬೇಕು ಎಂದು ನಗೆ ಸಾಮ್ರಾಟರು ಏಕ ಕಂಠದಲ್ಲಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಸೋಲಿನ ಪತ್ತೆಗಾಗಿ ಸಂಶೋಧನೆ

6 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೊ)

ಚುನಾವಣೆಯೆಂಬ ಗೂಳಿ ನಾಡಿನ ರಾಜಬೀದಿಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ನುಗ್ಗಿ ಧೂಳೆಬ್ಬಿಸಿ ಓಡಿಹೋಗಿದೆ. ಆ ಗೂಳಿಯ ಬೆನ್ನನ್ನೇರಿದ ಅದೃಷ್ಟವಂತರು ಸವಾರಿ ಮಾಡುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಗೂಳಿಗೆ ಕಾಲಿಗೆ ಸಿಕ್ಕು ಗೊರಸಿನಿಂದ ಪಕ್ಕೆಗೆ ಒದೆಸಿಕೊಂಡವರು ಕುಯ್ಯೋ ಮರ್ರೋ ಎನ್ನುತ್ತಾ ಮೂಲೆ ಸೇರಿಕೊಂಡು ಗಾಯಗಳಿಗೆ ಇಲಾಜು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಾಯಗಳಿಗೆ ತಕ್ಕ ಮಟ್ಟಿಗೆ ಇಲಾಜು ಮಾಡಿಕೊಂಡು ರೆಡಿಯಾದ ಪಂಟರುಗಳು ಹೊಸತೊಂದು ಸಂಶೋಶನೆ ಕೈ ಹಾಕಿರುವ ಸುದ್ದಿ ತಡವಾಗಿ ನಗೆ ನಗಾರಿಯನ್ನು ತಲುಪಿದೆ. ಈ ಸುದ್ದಿಯನ್ನು ಬೆನ್ನಟ್ಟಿ ನಗೆ ಸಾಮ್ರಾಟರು ಅನೇಕ ನಿಗೂಢ ಹಾಗೂ ರೋಮಾಂಚನಕಾರಿ ಸಂಗತಿಗಳನ್ನು ಅನ್ವೇಷಿಸಲು ತೊಡಗಿದ್ದಾರೆ.

ಅಖಿಲ ಕರ್ನಾಟಕದಲ್ಲಿ ಭೂಗತವಾಗಿ ಅಲೆಯುತ್ತಾ ವಿವಾದಗಳು ಎದ್ದಾಗ ತಲೆ ತೋರಿಸಿ ಮತ್ತೆ ಮರೆಯಾಗುವ ಅನೇಕ ಸಂಘಟನೆಗಳು, ‘ರಾಜಕೀಯ’ ಪಕ್ಷಗಳು ಚುನಾವಣೆಯ ಸಮಯಕ್ಕೆ ಸರಿಯಾಗಿ ಮೇಲೆದ್ದು ನಿಂತು ಕೈ ಕಾಲು, ತಲೆ, ಹೊಟ್ಟೆಗಳನ್ನು, ಅವೆಲ್ಲವುಗಳಿಗಿಂತಲೂ ಮುಖ್ಯವಾಗಿ ಜೇಬನ್ನು ಎಲ್ಲೆಂಲ್ಲಿಂದಲೂ ಸಂಪಾದಿಸಿಕೊಂಡು ವಿಜೃಂಭಿಸುವುದು ಜಗತ್ತಿನ ಅಚ್ಚರಿಗಳಲ್ಲಿ ಒಂದಾಗಿದೆ. ಚುನಾವಣೆಯ ಮುಂಚಿನ ನಾಲ್ಕೈದು ವರ್ಷಗಳಲ್ಲಿ ಜನರು ಕಂಡೇ ಇರದ ಪಕ್ಷಗಳು, ಮುಖವಿಲ್ಲದ ನಾಯಕರ ಹೆಸರುಗಳು ಪತ್ರಿಕೆಗಳಲ್ಲಿ ರಾರಾಜಿಸುವುದನ್ನು ಗಮನಿಸಿರುವ ನಗೆ ಸಾಮ್ರಾಟರು ಈ ವಿಚಿತ್ರ ಆಸಕ್ತಿಕರ ಸಂಗತಿಯ ಬಗ್ಗೆ ಮಾಡಲು ಕೆಲಸವಿಲ್ಲದವರು ಸಂಶೋಧನೆ ನಡೆಸಿ ಪಿ.ಎಚ್.ಡಿ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ವಿಶ್ವದಲ್ಲೇ ಅತ್ಯಂತ ಗಣ್ಯವಾದ ಸ್ಥಾನವನ್ನು ಪಡೆಸಿರುವ ನೊಬೆಲ್ ಪಾರಿತೋಷಕಕ್ಕೆ ಪ್ರತಿಯಾಗಿ ಬುದ್ಧಿವಂತರು, ವಿವೇಕಿಗಳು ಹಾಗೂ ವಾಸ್ತವವಾದಿಗಳು ಸ್ಥಾಪಿಸಿರುವ ಇಗ್ನೊಬೆಲ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಚುನಾವಣೆಯ ವಾಸನೆ ಗಾಳಿಯಲ್ಲಿ ತೇಲುವ ಮೊದಲು ಭೂಮಿಯ ಮೇಲೆ ಯಾವ ಭಾಗದಲ್ಲಿ ಜೀವಿಸಿದ್ದರು ಎಂದು ತಿಳಿಯದ ಮಂದಿ ಸರಿಯಾಗಿ ಎಲಕ್ಷನ್ನಿನ ಸೀಝನ್ನಿನಲ್ಲಿ ಹೋರಾಟಗಳಿಗೆ ಹಾಗೂ ಓರಾಟಗಳಿಗೆ ಧುಮ್ಮಿಕ್ಕುವುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರ ಸಾಧನೆಗೆ ಇಗ್ನೊಬೆಲ್ ಕೊಡಲು ಶಿಫಾರಸ್ಸು ಮಾಡಬಹುದು.

ಚುನಾವಣೆಯ ಚದುರಂಗದಲ್ಲಿ ಸೋತ ಕಿಲಾಡಿಗಳು ತಮ್ಮ ಸೋಲನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಳ್ಳುವ ಬದಲು ‘ಜನರ ತೀರ್ಪನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇವೆ’ ಎಂಬ ಸವಕಲು ಕನ್‌ಫೆಶನ್‌ ಮೂಲಕ ಜನರು ಮೋಸ ಮಾಡಿದರು ಎಂದು ಹಾರಾಡುತ್ತಿರುವುದು ನಗೆ ಸಾಮ್ರಾಟರಲ್ಲಿ ಕುತೂಹಲ ಕೆರಳಿಸಿದೆ. ಈ ಮಧ್ಯೆ ಮರದಿಂದ ಮರಕ್ಕೆ ಹಾರುವ ವಾನರನ ಹಾಗೆ ಪಕ್ಷದಿಂದ ಪಕ್ಷಕ್ಕೆ ಕಾಲ್ಕಿತ್ತು ಆ ಪಕ್ಷಗಳಿಂದ ಏನೇನನ್ನೋ ಕಿತ್ತುಕೊಂಡು ಸುಸ್ತಾಗಿ ನೆಲಕ್ಕಿಳಿದು ಸೈಕಲ್ಲು ತುಳಿಯತೊಡಗಿದ ಸೊರಬದ ಮುತ್ಸದ್ಧಿ ‘ಗೋಲ್ಡ’ಪ್ಪ ಸೈಕಲ್ಲು ಬ್ಯಾಲೆನ್ಸ್ ಮಾಡಲಾಗದೆ ಚರಂಡಿಗೆ ಬಿದ್ದರು. ತಮ್ಮ ಸೋಲಿಗೆ ಕಾರಣ ಹುಡುಕಿಕೊಂಡು ಸಂಶೋಧನೆ ನಡೆಸಿದ ಅವರು ನನ್ನ ಎದುರಾಳಿಗಳು ( ‘ಗಳು’ ಏನು ಬೇಕಿಲ್ಲ ಬಿಡಿ. ಇದ್ದವರೆಲ್ಲಾ ಎರಡು ಪಕ್ಷದವರು ನನ್ನ ಕುತ್ತಿಗೆಗೇ ಚೆಂಡು ಹೂವಿನ ಮಾಲೆಯನ್ನು ಹಾಕಿ ಕಳಿಸಿದ್ದರು) ಕ್ಷೇತ್ರದಲ್ಲಿ ಹಣವನ್ನು ಹೊಳೆಯಾಗಿ ಹರಿಸಿದ್ದಾರೆ. ಅದಕ್ಕಾಗಿ ಗೆದ್ದು ಬಂದಿದ್ದಾರೆ. ತಾವು ಹರಿಸಿದ್ದು ಬರೀ ಚರಂಡಿಯಾಗಿದ್ದುದರಿಂದ ಹೊಳೆಯ ಎದುರು ತಾವು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಸೂಚಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಟೋಪಿ ಹಾಗೂ ಕಪ್ಪು ಗಾಜಿನ ಪಕ್ಷದ ಏಕೈಕ ಅಭ್ಯರ್ಥಿ ಹಾಗೂ ಅಧ್ಯಕ್ಷರು ವಿಧಾನ ಸಭೆಯ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ದಬ್ಬಾಳಿಕೆಯಿಂದ ವಾಸ ಮಾಡಿಕೊಂಡಿದ್ದ ಮನೆಯನ್ನು ತೊರೆದು ವಿಧಾನ ಪರಿಷತ್ತಿನಲ್ಲೂ ಜೇಬು ಸುಟ್ಟುಕೊಂಡು ಕಂಗಾಲಾಗಿ ಕುಳಿತಿರುವ ದೃಶ್ಯವನ್ನು ನೋಡಿರುವ ಬೆಂಗಳೂರಿನ ಗಾರ್ಧಭ ಪ್ರಮುಖರು, ಎಮ್ಮೆ ಮುಖಂಡರು ಸಂಭ್ರಮದಿಂದ  ಕುಣಿದಾಡಿರುವುದಾಗಿ ವರದಿಯಾಗಿದೆ. ಪೆಟ್ರೋಲಿನ ಬೆಲೆ ಹರ್ ಭಜನ್ ಸಿಂಗಿನ ಸಿಟ್ಟಿನ ಹಾಗೆ ಏರುತ್ತಿರುವ ಹೊತ್ತಿನಲ್ಲಿ ಆ ಯಪ್ಪ ತಮ್ಮ ಮೇಲೆ ಸವಾರಿ ಮಾಡಿ ಪ್ರತಿಭಟನೆ ಮಾಡುವ, ಆ ಮೂಲಕ ತಮ್ಮನ್ನು ಹಿಂಸಿಸುವ ಪರಿಸ್ಥಿತಿ ಇಲ್ಲವಾಗಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.