Tag Archives: ಮನಮೋಹನ್ ಸಿಂಗ್

ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವಿ

29 ಆಗಸ್ಟ್

(ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ)

ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ ತಮ್ಮ ಸ್ವಂತ ಮೆದುಳಿನಿಂದಲೇ ದೇಶವನ್ನು ಮುಂದಕ್ಕೆ ಓಡಿಸುತ್ತಿದ್ದಾರೆ ಎಂಬ ಸಮಾಧಾನ ಸಿಕ್ಕಲು ನಾಲ್ಕು ವರ್ಷ ಬೇಕಾಯಿತು. ಹೀಗಿರುವಾಗ ನಮ್ಮ ನಿಧಾನಿಯವರ ‘ಖಾಸಗಿ ಆರೋಗ್ಯ’ ನೋಡಿಕೊಳ್ಳುವ ವೈದ್ಯರು ನಗೆ ಸಾಮ್ರಾಟರೊಂದಿಗೆ ಮಾತನಾಡಲು ಸಮಯ ಮಾಡಿಕೊಂಡರು.

‘ಯಾವುದೇ ಮನುಷ್ಯನಿಗೆ ದಿನನಿತ್ಯದ ಚಟುವಟಿಕೆಯ ಜೊತೆಗೆ ದೇಹಾರೋಗ್ಯವನ್ನು ಜಬರ್ದಸ್ತಾಗಿ ಇಟ್ಟುಕೊಳ್ಳಲು ಆಗಾಗ ಉಪವಾಸ ಮಾಡುವುದು ಅಗತ್ಯ. ವಯಸ್ಸು ಹೆಚ್ಚಾದಂತೆ ಇದು ಇನ್ನೂ ಅಗತ್ಯ. ಹಾಗೆಯೇ ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ ಮಾಡುವುದರಿಂದ ಇಂದ್ರಿಯಗಳು ಪುನಃಶ್ಚೇತನ ಪಡೆದುಕೊಳ್ಳುತ್ತವೆ. ನಮ್ಮ ನಿಧಾನಿಯವರಿಗೂ ಇದೂ ಕಾಲಕಾಲಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಿಂದೊಬ್ಬರು ನಿಧಾನಿಯಿದ್ದರು ಅವರಿಗೆ ಈ ಆರೋಗ್ಯದ ರಹಸ್ಯವನ್ನು ಕಲಿಸಲು ಹೋಗಿ ನಾನೇ ಪೆಟ್ಟು ತಿಂದಿದ್ದೆ. ಅವರು ಹೊಟ್ಟೆ ತುಂಬಾ ಮುದ್ದೆ ನುಂಗಿ ಕಾರ್ಯಕ್ರಮಗಳ ಮಧ್ಯೆಯೇ ಆರಾಮಾಗಿ ನಿದ್ದೆ ಮಾಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರು. ಅದು ಅವರ ವೈಯಕ್ತಿಕ ಹಿರಿಮೆಯಷ್ಟೇ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನಮ್ಮ ಮೋಹನ ಮನ ಸಿಂಗರು ದೇಶದ ಬಗ್ಗೆ ಅತ್ಯಂತ ಕಾಳಜಿಯಿಂದ ಆಲೋಚಿಸಲು ಈ ಉಪವಾಸ ಹಾಗೂ ಜಾಗರಣೆಗಳು ಅತಿ ಆವಶ್ಯಕ.

‘ನಮ್ಮ ಮೋಹನ ಮನ ಸಿಂಗರ ಸುಕೃತವೋ, ಈ ದೇಶದ ಜನರ ಪುಣ್ಯವೋ ಇಲ್ಲವೇ ಮಹಾ ಮಾತೆಯ ಕೃಪೆಯೋ ನಮ್ಮ ನಿಧಾನಿಯವರಿಗೆ ನಿದ್ದೆಗೆಡುವ, ಊಟ ಬಿಡುವ ಅವಕಾಶಗಳು ಆಗಾಗ ಸಿಕ್ಕುತ್ತಲೇ ಇರುತ್ತವೆ. ಇಂಥ ಅವಕಾಶಗಳಿಂದ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಇಲ್ಲದೆ ಹೋದರೆ ಹಿಂದಿನ ನಿಧಾನಿಯ ಹಾಗೆ ದೇಹದ ಪ್ರತಿಯೊಂದು ಸ್ಪೇರ್ ಪಾರ್ಟುಗಳನ್ನೂ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು. ನೂರು ಕೋಟಿ ಮಂದಿಯ ಬಂಡಿಯನ್ನು ಹೊರುವುದು ಎಂದರೆ ಸುಮ್ಮನೆ ಮಾತೇ?

‘ನಿಧಾನಿಯವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ದೇಶದಲ್ಲಿ ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದ ಅಕ್ಕ ಪಕ್ಕದ ತಂಟೆಕೋರ ಮನೆಗಳಿಂದ ಉಗ್ರರ್, ವ್ಯಗ್ರರು ಬಂದು ಮಾರ್ಕೆಟ್ಟುಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ, ಶಾಲೆಗಳಲ್ಲಿ ಕಡೆಗೆ ಆಸ್ಪತ್ರೆಗಳನ್ನೂ ಬಿಡದೆ ಉಡಾಯಿಸಿದರು, ಮರದ ಮೇಲೆ, ಚರಂಡಿಯ ಅಡಿಗೆ, ಕಸದ ಬುಟ್ಟಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಭಾರತೀಯರು ಮೂತ್ರ ಮಾಡಿದ ಹಾಗೆ ಬಾಂಬುಗಳನ್ನು ಇಟ್ಟು ‘ಹೆಸರಾಂತ’ ಪತ್ರಿಕೆ, ಟಿವಿಗಳಿಗೆ ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ…’ ಎಂದು ಸವಾಲೊಡ್ಡಿದರು. ಬಾಂಬಿನ ಆಟಾಟೋಪದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡರು. ಆದರೆ ಇದರಿಂದ ನಿಧಾನಿಯವರಿಗೆ ಉಪವಾಸವೂ ಸಿಕ್ಕಲಿಲ್ಲ, ಜಾಗರಣೆಯೂ ಮಾಡಲಾಗಲಿಲ್ಲ. ಹೊಟ್ಟೆ ತುಂಬಾ ಊಟ ಮಾಡುತ್ತಾ, ಕಣ್ತುಂಬಾ ನಿದ್ದೆ ಮಾಡುತ್ತಾ ಇದ್ದು ಬಿಟ್ಟರು.

‘ಅತ್ತ ಭಾರತದ ಶಿರವಾದ ಕ್ಯಾಶ್ಮೀರದಲ್ಲಿ ನೆರೆಮನೆಯರು ಎರಡೂ ಕಾಲುಗಳನ್ನು ಎರಡೂ ಕೈಗಳ ತಲಾ ಐದು ಉಗುರುಗಳಿಂದ ಪರಪರಪರನೆ ಕೆರೆದುಕೊಂಡು ಬಂದು ಜಗಳ ಮಾಡಿದಾಗಲೂ, ನಮ್ಮ ನಾಡಿನ ರಕ್ಷಣೆಗೆ ನಿಂತ ಯೋಧರ ಪ್ರಾಣ ಹೋದರೂ ನಮ್ಮ ನಿಧಾನಿಯವರ ಆರೋಗ್ಯ ಕಾಪಾಡುವ ಯಾವ ಪರಿಣಾಮವೂ ಆಗಲಿಲ್ಲ.

‘ಇಡೀ ಜಗತ್ತೇ ಪ್ರಧಾನಿಯವರಿಗೆ ಉತ್ತಮ ಆರೋಗ್ಯವನ್ನು ಕೊಡಬೇಕು ಎಂದು ಸಂಚು ಮಾಡಿ ಭಾರತದ ಹಣದುಬ್ಬರದಡಿಗೆ ರಾಕೆಟ್ ಇಟ್ಟು ಉಡಾಯಿಸಿಬಿಟ್ಟಿತು. ಆಮ್ ಆದ್ಮೀ ನೇರವಾಗಿ ಸ್ವರ್ಗದಲ್ಲೇ ಚೀಪ್ ಆಗಿ ಬದುಕು ಸಾಗಿಸಬಹುದು ಎಂದು ತೀರ್ಮಾನಿಸುವ ಪರಿಸ್ಥಿತಿ ಬಂದಿತು ಆದರೆ ಪಿತ್ತ ಮಂತ್ರಿಯೂ ಆಗಿದ್ದ ನಿಧಾನಿಯವರಿಗೆ ಇದರಿಂದ ಯಾವ ರೀತಿಯಲ್ಲೂ ನೆರವಾಗಲಿಲ್ಲ. ನಿದ್ದೆ, ಊಟ ಯಥೇಚ್ಚವಾಗಿ ಮುಂದುವರೆದಿತ್ತು.

‘ಹೀಗಿರುವಾಗ ನಮ್ಮ ನಿಧಾನಿಯವರ ಆರೋಗ್ಯದ ಗತಿ ಏನಾಗಬೇಡ? ಅವರಿಗೆ ಆಗಾಗ ಉಪವಾಸ ಹಾಗೂ ನಿದ್ದೆ ಬರದ ರಾತ್ರಿಗಳನ್ನು ಕರುಣಿಸುವುದು ಹೇಗೆ ಅನ್ನುವಾಗಲೇ ನಮ್ಮ ಕಣ್ಣೆದುರು ಪವಾಡವೊಂದು ನಡೆಯಿತು. ಅನ್ಯದೇಶದಲ್ಲಿ ಬಾಂಬು ಉಡಾಯಿಸಿದವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಭಾರತದ ಕುವರ ದೇಶಕ್ಕೆ ಮರಳಿ ಬಂದಾಗ, ಅನ್ಯದೇಶದಲ್ಲಿ ತನಗಾದ ಅವಮಾನ, ತನ್ನ ಮೇಲೆ ನಡೆದ ‘ಶೋಷಣೆ’ಯನ್ನು ಪರಿ ಪರಿಯಾಗಿ ವಿವರಿಸಿ ಟಿವಿ ಕೆಮಾರಗಳ ಮುಂದೆ ಒಂದೇ ಕಣ್ಣಿನಲ್ಲಿ ಗೊಳೋ ಎಂದು ಅತ್ತಾಗ ಪವಾಡ ಸಂಭವಿಸಿಯೇ ಬಿಟ್ಟಿತು. ನಮ್ಮ ನಿಧಾನಿ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಟಿವಿ ಚಾನೆಲ್ಲು ನೋಡುತ್ತಾ ಕುಳಿತರು. ಆ ಕನ್ನಡದ ಕುವರನ ತಾಯಿ ರೋಧಿಸುವುದನ್ನು ನಮ್ಮ ಟಿವಿ ಚಾನೆಲ್ಲುಗಳು ೨೪*೭ ತೋರಿಸುವುದನ್ನು ಕಂಡು ನಿಧಾನಿಯವರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದರು. ಇದರಿಂದ ಅವರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿದೆ.

‘ ಅನಂತರ ಇಲ್ಲಿ ಎಲ್ಲೋ ಪೂರ್ವದ ರಾಜ್ಯದಲ್ಲಿ ಕೋಮುವಾದಿ ಕೋಮಿನ ಕೋಮುವಾದಿ ಮುಖಂಡನನ್ನು ‘ದೇಶ ಭಕ್ತರು’ (ಅವರು ಯಾವ ದೇಶಕ್ಕೆ ಭಕ್ತರು ಎಂದು ಕೇಳಿದ್ದಕ್ಕೆ ಆಫ್ ದಿ ರೆಕಾರ್ಡ್ ಉತ್ತರ ಕೊಟ್ಟಿದ್ದನ್ನು ನಾವಿಲ್ಲಿ ಎಡಿಟ್ ಮಾಡಿದ್ದೇವೆ – ಸಂ) ತೆಗೆದರು. ಇದರಿಂದ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ‘ಮಾರಣ ಹೋಮ’ ನಡೆಸಿದರು. ಇದನ್ನು ಕೆಲವು ತಲೆ ಕೆಟ್ಟ ಮಂದಿ ಹಿಂದೆ ಇಂದಿರಮ್ಮ ಸತ್ತಾಗ ಸಿಖ್ಖರ ಮೇಲೆ ನಡೆಸಿದ ‘ಹೋರಾಟ’ಕ್ಕೆ ಹೋಲಿಸುತ್ತಾರೆ. ಅದೇ ಬೇರೆ ಇದೇ ಬೇರೆ ಅಂತ ಇವರಿಗೆ ಗೊತ್ತಿಲ್ಲ. ಹೀಗೆ ಅಲ್ಪ ಸಂಖ್ಯಾತರ ಮೇಲೆ ಕೋಮುವಾದಿಗಳ ಅಟ್ಟಹಾಸದಿಂದ ನಮ್ಮ ನಿಧಾನಿಗೆ ಹೊಟ್ಟೆಗೆ ಸರಿಯಾಗಿ ಊಟ ಸೇರಲಿಲ್ಲ, ನಿದ್ದೆಯಂತೂ ಮಾರು ದೂರದಲ್ಲಿ ನಿಂತಿತು. ಇಡೀ ದೇಶ ಇದಕ್ಕಾಗಿ ಅವಮಾನ ಪಡಬೇಕು ಎಂದರು.

‘ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ’.

ನಿಧಾನಿಯವರ ಆರೋಗ್ಯ ಎಂದರೆ ಕೈ ಪಕ್ಷದ ಓಟ್ ಬ್ಯಾಂಕೇ ಎಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಂಪರ್ಕ ಕಡಿದುಹೋಗಿತ್ತು.

ವಿಶ್ವಾಸಮತ: ಆನೆಗೆ ಅನ್ಯಾಯ!

24 ಜುಲೈ

(ನಗೆ ನಗಾರಿ ರಾಜಕೀಯ ಬ್ಯೂರೋ)

ಕೇಂದ್ರದಲ್ಲಿ ಅಣುಮಾನ, ಅಣುನಯನ, ಅಣುರಾಗಗಳಿಂದಾಗಿ ಯು.ಪಿ.ಎ ಸರ್ಕಾರದ ಬುಡ ಅಲ್ಲಾಡಿ ಹೋಗಿ ಜಂಗಲ್ ರಾಜ್‌ನಲ್ಲಿನ ಕುರ್ಚಿಯಿಂದ ಸಿಂಗರ್ರು ಕೆಳಕ್ಕೆ ಜಿಗಿಯಬೇಕಾದ ಸಂದರ್ಭ ಬಂದದ್ದೂ, ಅನಂತರ ಅಂಬಾನಿಗಳ ಅಂಬಾರಿಯೂ, ಅಮರ ಸಿಂಗನ ಸಂಗವೂ ಮಾಡಿದ ಮ್ಯಾಜಿಕ್ಕಿನಿಂದ ಕಾಂಗ್ರೆಸ್ ಪಕ್ಷ ಕಾಸು, ಮಂತ್ರಿ ಸ್ಥಾನಗಳು, ಮಾನ – ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ಕಡೆಯ ಪಕ್ಷ ಅಧಿಕಾರವೊಂದನ್ನು ಉಳಿಸಿಕೊಂಡು ಬೀಗುತ್ತಿದ್ದು ಸಾಮ್ರಾಟರು ಅಭಿನಂದಿಸಲು ತೆರಳಿದ್ದಾಗ ಸ್ಯಾಂಪಲ್ಲಿಗೆ ಸ್ವೀಟು ಕೊಡಲು ಕಾಂಗ್ರೆಸ್ಸಿನ ಪಾರ್ಟಿಯಲ್ಲಿ ಫಂಡಿನ ಕೊರತೆ ಉದ್ಭವಿಸಿದ್ದು ಸಾಮ್ರಾಟರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿತು. ಸರಕಾರದ ಡೋಲಾಯಮಾನ ಸ್ಥಿತಿ, ಬೀಳುವುದರಿಂದ ತಪ್ಪಿಸಿಕೊಳ್ಳುವಲ್ಲಿ ಅದು ಮಾಡಿದ ಮಹಾಪಲಾಯನದ ವೃತ್ತಾಂತವನ್ನು ಸಮಸ್ತ ಜನರು ಇತರ ಮಾಧ್ಯಮಗಳಲ್ಲಿ ತಲೆ ಕೊರೆಯುವವರೆಗೂ ಪಡೆದುಕೊಂಡಿರುವುದರಿಂದ ಸಾಮ್ರಾಟರು ಯಾರಿಗೂ ಸಿಕ್ಕದ, ದಕ್ಕದ ಸ್ಕೂಪ್ ಹೊತ್ತು ಬಂದಿದ್ದಾರೆ.

ಭಾರತದ ಕಂಠಭಾಗದ ನವ ದೆಹಲಿಯಲ್ಲಿ ಮನಮೋಹನ ಸಿಂಗರ್‌ನ ಕುರ್ಚಿ ಭದ್ರವಾಗುತ್ತಿದ್ದ ಹಾಗೆಯೇ ಇತ್ತ ಭಾರತದ ಸೊಂಟದ ಭಾಗದಲ್ಲಿ ಕೋಲಾಹಲ ಉಂಟಾದದ್ದು ಯಾರ ಗಮನಕ್ಕೂ ಬರಲಿಲ್ಲ. ಮಾಯಾ ಜಾಲ ಪ್ರವೀಣೆ, ಕೆಳ ವರ್ಗದ ಮೇಲ್ಮಟ್ಟದ ಮಹಿಳೆ ಪ್ರಧಾನಿಯಾಗುವ ಕನಸನ್ನು ಕಂಡು, ಕನಸು ಕಂಡ ಮೇಲೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಲಗುವುದನ್ನು ಬಿಟ್ಟು ಕಣ್ಣು ತೆರೆದು ದೊಡ್ಡ ತಪ್ಪನ್ನು ಮಾಡಿದ್ದಾರೆ. ಕಣ್ಣು ತೆರೆದ ನಂತರ ತಮ್ಮದು ತಿರುಕನ ಕನಸು ಎಂಬುದು ಅರಿವಾಗಿ ವಿಪರೀತ ಮನೋವ್ಯಾಕುಲತೆ ಆವರಿಸಿಕೊಂಡಿದೆ. ಅವರನ್ನು ಭೇಟಿ ಮಾಡಿದ ನಗೆ ಸಾಮ್ರಾಟರಿಗೆ ದೇಶದ ಬೇರಾವ ಪತ್ರಕರ್ತನಿಗೂ ಸಿಗದ ಸುಳುಹುಗಳು ಸಿಕ್ಕಿದವು, ಸರಕಾರ ಉಳಿದುಕೊಂಡ ಸಂಗತಿಯ ಬಗ್ಗೆ.

ಸರಕಾರದ ವಿಶ್ವಾಸಮತದ ವಿಷಯದಲ್ಲಿ ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು. ಹಾಗಂತ ಅದನ್ನು ಹೇಳಿದ ಜೋತಿಷಿಯನ್ನು ಹುಡುಕಿಕೊಂಡು ಹೋಗಿಬಿಟ್ಟೀರಿ, ಈ ಭವಿಷ್ಯವನ್ನು ಸೂಚಿಸಿದ್ದು ಜೋತಿಷಿಗಳಲ್ಲ. ಪ್ರಕೃತಿ! ಹೌದು, ಗಾಬರಿಯಾಗಬೇಡಿ. ನಮ್ಮ ಕಾಡು-ಮೇಡಿನ ಪ್ರಕೃತಿಯೇ ಈ ಫಲಿತಾಂಶವನ್ನು ಸೂಚಿಸಿತ್ತು ಎಂದು ಸಾಮ್ರಾಟರು ಪತ್ತೆ ಹಚ್ಚಿದ್ದಾರೆ.

ಒಂದೂರಲ್ಲಿ ಒಂದು ಕಾಡಿತ್ತು. ಇಡೀ ಕಾಡಿನಲ್ಲಿ ಯಾವ ಪ್ರಾಣಿಯಾದರೂ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಬಹುದು. ಸ್ವಲ್ಪ ‘ಕೌಶಲ್ಯ’ ಇರುವಂಥವು ಹಾರಾಡಬಹುದು, ಮರದಿಂದ ಮರಕ್ಕೆ. ಆದರೆ ಯಾವುದಕ್ಕೂ ವೀಸಾ, ಪಾಸ್ ಪೋರ್ಟ್ ಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ. ಗಾಡಿ ಇನ್‌ಶೂರೆನ್ಸ್ ಬೇಕಿಲ್ಲ. ಆರ್.ಸಿ ಬುಕ್ಕಿನ ಆವಶ್ಯಕತೆಯಿಲ್ಲ. ಇಷ್ಟೆಲ್ಲಾ ಇಲ್ಲದಿರುವಾಗ ಟ್ರಾಫಿಕ್ ಪೋಲೀಸಿನವರ ಉಪಸ್ಥಿತಿಯು ಬೇಕಿಲ್ಲ. ಅವರಿಲ್ಲ ಎಂದ ಮೇಲೆ ರಸ್ತೆಯ ಮೇಲೆ ‘ಎ.ಟಿ.ಎಂ’ಗಳ ಅನಿವಾರ್ಯತೆ ಹುಟ್ಟುವುದಿಲ್ಲ! ಇನ್ನು ರೋಡ್ ಟ್ಯಾಕ್ಸೂ ಇಲ್ಲ. ಇನ್ ಕಮ್ ಟ್ಯಾಕ್ಸೂ ಇಲ್ಲ, ಹೀಗಾಗಿ ಐ.ಟಿ ಡಿಪಾರ್ಟ್ ಮೆಂಟೂ ಬೇಕಿಲ್ಲ. ಆದರೂ ಕಾಡಿಗೆ ಒಬ್ಬ ಪ್ರಧಾನಿ ಅಥವಾ ರಾಜ ಬೇಕೇ ಬೇಕು. ಜವಾಬ್ದಾರಿಯಿಲ್ಲದ ಅಧಿಕಾರವದು ಎನ್ನುವುದು ಅದನ್ನು ಅಲಂಕರಿಸಲು ಸಾಧ್ಯವಾಗದವರ ಕುಹಕದ ನುಡಿ.

ಸರಿ, ಜಂಗಲಿನ ಪ್ರಧಾನಿಯಾಗಲು ಭಾರಿ ಪೈಪೋಟಿ ಇತ್ತು. ಎಲ್ಲಾ ಕಡೆಯೂ ಚುನಾವಣೆ ನಡೆಯಿತು. ಯಥಾಶಕ್ತಿ ಅಕ್ರಮಗಳು ಯಾವ ಅಡತಡೆಯೂ ಇಲ್ಲದೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಕೆಲವು ಕಡೆ ಮಾರಣಹೋಮಗಳು ನಡೆದದ್ದು ಬಿಟ್ಟರೆ ಉಳಿದಂತೆ ಚುನಾವಣೆ ಶಾಂತಿಯುತವಾಗಿಯೇ ಇತ್ತು. ಎಲ್ಲಾ ಹಂತದ ಚುನಾವಣೆ ಮುಗಿದು ಕಡೆಯ ಹಂತಕ್ಕೆ ‘ಬಂಗಾಳ’ದ ಹುಲಿ, ‘ಕೇಸರಿ’ಯನ್ನು ಹೊತ್ತ ಸಿಂಹ ಹಾಗೂ ‘ಮದಿಸಿದ’ ಆನೆ ತಲುಪಿದವು. ಆನೆಗೆ ಹುಲಿ ಹಾಗೂ ಸಿಂಹದ ನೆರವು ಪಡೆದು ಪ್ರಧಾನಿಯಾಗುವ ಆಸೆ. ಬಂಗಾಳ ಹಾಗೂ ಕೇಸರಿ ಸೇರಿಕೊಂಡು ಮಾತಾಡಿ ಆನೆಯನ್ನು ಮುಂದಕ್ಕೆ ಕಳುಹಿಸಿದವು. ಆನೆ ತಾನು ನಡೆದದ್ದೇ ದಾರಿ ಎಂದು ಕೊಂಡು ಮುಂದಕ್ಕೆ ನುಗ್ಗಿತು. ಕಡೆಗೆ ಖೆಡ್ಡಾದಲ್ಲಿ ಬಿತ್ತು. ಈಗ ಸದ್ಯಕ್ಕೆ ಘೀಳಿಡುತ್ತಿದೆ.

ಮಾಂಸಾಹಾರಿಗಳಾದ ಕೇಸರಿ ಸಿಂಹ ಹಾಗೂ ಬಂಗಾಳ ಹುಲಿಗಳಿಗೆ ಅಪ್ಪಟ ಸಸ್ಯಾಹಾರಿ ಹಾಗೂ ಡಯಟ್‌ಗೆ ಯಾವ ಗೌರವವನ್ನು ಕೊಡದ ಆನೆಯನ್ನು ಪ್ರಧಾನಿಯ ಪಟ್ಟಕ್ಕೆ ಕೂರಿಸುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಪ್ರಧಾನಿ ಪಟ್ಟದ ಆಸೆಗೆ ಬಂಗಾಳದ ಹುಲಿ ಹಾಗೂ ಕೇಸರಿ ಸಿಂಹ ಭಾರಿ ಕಾಳಗದಲ್ಲಿ ತೊಡಗಿದವು. ವೀರಾವೇಷದಿಂದ ಹೋರಾಡಿ ದಣಿದು, ಗಾಯಗೊಂಡು, ಬಸವಳಿದು ಮೂಲೆಯಲ್ಲಿ ಕೂತವು. ಪ್ರಧಾನಿ ಯಾರಾಗುವುದು ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವಾಗ ನೂರಾರು ಕುದುರೆಗಳ ಸೈನ್ಯವನ್ನು ಮುನ್ನಡೆಸಿಕೊಂಡು ಬಂದ ‘ಸಿಂಗ್’ಳೀಕ ಪ್ರಧಾನಿಯ ಪಟ್ಟದ ಮೇಲೆ ಸರ ಸರನೇ ಏರಿತು. ಕುದುರೆಗಳು ಹಿಂಡಿ ಮೇಯುತ್ತಾ ಪಟ್ಟದ ಪಕ್ಕ ಪವಡಿಸಿದವು.

ಈ ಈಸೋಪನ ಕಥೆಯನ್ನು ಈಸೋಪನೇ ಮರೆತು ಹೋಗಿದ್ದ ಎನ್ನಲಾಗಿದೆ. ಅದನ್ನು ಸಾಮ್ರಾಟರು ಪುನಃ ನೆನಪಿಸಿ ಅಷ್ಟು ಹಿಂದೇ ವಿಶ್ವಾಸಮತದ ಫಲಿತಾಂಶವನ್ನು ಬಹಳ ನಿಖರವಾಗಿ ವಿವರಿಸಲಾಗಿತ್ತು ಎಂದು ಸಂಶೋಧನೆ ಮಾಡಿದ್ದಾರೆ. ನಾಸ್ಟ್ರಡಮಸ್‌ಗಿಂತ ಈ ‘ಸೋಪ್’ನೇ ಶ್ರೇಷ್ಠ ಜೋತಿಷಿ ಎಂದು ಷರಾ ಬರೆದು ವರದಿ ಮುಗಿಸಿದ್ದಾರೆ.