Tag Archives: ಬುಶ್

ಬೂಟು ಎಸೆದ ವೀರನಿಗೆ ತಕ್ಕ ಸಜೆ!

13 ಮಾರ್ಚ್

(ನಗಾರಿ ಅಂತರಾಷ್ಟ್ರೀಯ ಸಮಾಚಾರ ಬ್ಯೂರೊ)

ಅವಧಿ ಮುಗಿಯುವ ಮುನ್ನ ತಾನು ಹಾಳು ಮಾಡಿದ ಇರಾಕಿಗೆ ಪ್ರೀತಿ ಪೂರ್ವಕವಾಗಿ ಗುಡ್ ಬೈ ಹೇಳಲು ಬಂದಿದ್ದ ಬುಶ್ ಮಹಾಶಯನನ್ನು ಏಳು ನಂಬರಿನ ಎರಡು ಬೂಟುಗಳನ್ನು ಎಸೆಯುವುದರ ಮೂಲಕ, ‘ನಾಯಿ’ ಎಂದು ವಿಶ್ ಮಾಡುವುದರ ಮೂಲಕ ಬರಮಾಡಿಕೊಂಡಿದ್ದ ಇರಾಕಿನ ಪತ್ರಕರ್ತ ಜೈದಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಸಜೆ ವಿಧಿಸಿದೆ.ತಾನು ಇರಾಕಿನ ಮುಗ್ಧರನ್ನು ಹತ್ಯೆಗೈದ ಬುಶ್‌ನನ್ನು ಕಂಡಾಗ ಭಾವೋದ್ರೇಕಕ್ಕೊಳಗಾಗಿ ಬೂಟು ಎಸೆದೆ ಎಂದು ತಪ್ಪೊಪ್ಪಿಕೊಂಡರೂ ನ್ಯಾಯಾಲಯ ಆತನಿಗೆ ದಂಡನೆ ನೀಡಿದೆ. eng_shoes_1_BM_Baye_721293g

ಈ ತೀರ್ಪನ್ನು ವಿರೋಧಿಸಿ ಇರಾಕಿನಲ್ಲಿ ಜೈದಿ ಅಭಿಮಾನಿಗಳು ತಮ್ಮ ಆಕ್ರೋಶ ತೋರ್ಪಡಿಸುತ್ತಿದ್ದರೆ ಜಗತ್ತಿನ ಈ ಮೂಲೆಯಲ್ಲಿ ತೀರ್ಪಿನ ಪರವಾಗಿ ಮಾತುಗಳು ಕೇಳಿಬರುತ್ತಿವೆ. ಅಖಿಲ ಕರ್ನಾಟಕ ಕೊರೆತ ವೀರರ, ಭಾಷಣ ಕೋರರ ಸಂಘದ ಅಧ್ಯಕ್ಷರು ನಗೆ ನಗಾರಿಯೊಂದಿಗೆ ಹೀಗೆ ಮಾತನಾಡಿ, “ಈ ಜೈದಿಯಂಥವರನ್ನು ಜೈಲಿಗೆ ಅಟ್ಟುವುದರ ಮೂಲಕ ಆತನ ಕೆಲಸಕ್ಕೆ ಜನ ಮನ್ನಣೆ ದೊರಕದಂತೆ ನೋಡಿಕೊಳ್ಳಬೇಕು. ಈ ಜೈದಿಯಂಥವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಧಕ್ಕೆ ಉಂಟಾಗುತ್ತದೆ. ಜನ ಸಾಮಾನ್ಯರು ಇವನ ಆದರ್ಶವನ್ನೇ ಅನುಕರಿಸಿದರೆ ನಾವು ವಿಪರೀತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಗಡಿಯಾರವನ್ನೇ ಏನು ಕೆಲವೊಮ್ಮೆ ಕ್ಯಾಲಂಡರನ್ನೂ ಮರೆತು ನಾವು ತನ್ಮಯರಾಗಿ ವೇದಿಕೆಯ ಮೇಲೆ ಭಾಷಣದ ಮಳೆಗರೆಯುತ್ತಿರುತ್ತೇವೆ. ಕೇಳುಗರ ಕಿವಿಯ ಆಳ ಅಗಲ, ತಲೆಯೊಳಗಿನ ಮಿದುಳಿನ ವಿಸ್ತಾರ ಅರಿಯದೆ ಮಾತಿನ ಸುನಾಮಿಯನ್ನೇ ಹರಿಸುತ್ತಿರುತ್ತೇವೆ. ಆಗ ಕೇಳುಗರೂ ಸಹ ಗಾಂಧೀಜಿಯವರ ಮೂರು ಮಂಗಗಳಲ್ಲಿ ಒಂದರ ಭಂಗಿಯಲ್ಲಿ – ಕಣ್ಮುಚ್ಚಿಕೊಂಡು ನಿದ್ರೆ ಮಾಡುತ್ತಲೋ, ಕುರುಕಲು ತಿಂಡಿ, ಗುಟಕಾ, ಎಲೆ ಅಡಿಕೆಗಳಿಂದ ಬಾಯಿ ಮುಚ್ಚಿಕೊಂಡೋ, ಐಪಾಡು, ಮೊಬೈಲುಗಳಿಂದ ಕಿವಿ ಮುಚ್ಚಿಕೊಂಡೋ- ಕೂತು ನಮ್ಮನ್ನು ಸಹಿಸಿಕೊಳ್ಳುತ್ತಾರೆ.

“ಇವರಿಗೆಲ್ಲ ಜೈದಿ ಗಾಳಿ ಬೀಸಿದರೆ ಏನಾಗುತ್ತದೆ ಊಹಿಸಿದ್ದೀರಾ? ಭಾಷಣ ಕೇಳಲು ಬಂದವರು ನಮ್ಮ ಮಾತಿನ, ಚಾಟೋಕ್ತಿಗಳ, ಕುಯುಕ್ತಿಯ ಹೇಳಿಕೆಗಳ, ಅಪಹಾಸ್ಯದ, ತರ್ಕದ ದಾಳಿಗೆ ಪ್ರತಿಯಾಗಿ ನಮ್ಮ ಮೇಲೆ ಚಪ್ಪಲಿ, ಬೂಟು, ಕಮಟು ವಾಸನೆ ಹೊಡೆಯುವ ಸಾಕ್ಸುಗಳ ಪ್ರತಿದಾಳಿ ನಡೆಸಿದರೆ ನಾವು ಎಲ್ಲಿಗೆ ಹೋಗೋಣ? ಇರಾಕಿನ ಪ್ರಸಂಗವಾದ ಮೇಲೆ ನಾವು ಎಚ್ಚೆತ್ತುಕೊಂಡು ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬನ್ನಿ ಎಂದು ಬೋರ್ಡು ಹಾಕಿಸಿ ಮುನ್ನಚ್ಚೆರಿಕೆ ತೆಗೆದುಕೊಳ್ಳಲು ಶುರು ಮಾಡಿದ್ದೇವೆ. ಆದರೂ ನಾವು ಸಂಪೂರ್ಣ ಸುರಕ್ಷಿತರಲ್ಲ.

“ಭಾಷಣ ಸೇರಲು ಬಂದ, ಕರೆದುಕೊಂಡು ಬಂದ ಜನರು ಚಪ್ಪಲಿಗಳ ಬದಲಾಗಿ ಬೇರೆ ಆಯುಧಗಳನ್ನ ಬಳಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಕೊಳೆತ ಮೊಟ್ಟೆ, ಟೊಮೆಟೊ, ಆಲೂಗಡ್ಡೆ, ಸೌತೇಕಾಯಿ, ಕಿತ್ತಲೆ ಹಣ್ಣು, ಮುದುಡಿದ ಪ್ಲಾಸ್ಟಿಕ್ ಬಾಟಲಿ, ಟೀ ಕಪ್ಪು, ಸಾಸರು, ಹೂವಿನ ಕುಂಡ, ಪೆನ್ನು, ರಟ್ಟು, ಪೆನ್ಸಿಲ್ಲು – ಹೀಗೆ ಯಾವುದರಿಂದಲಾದರೂ ದಾಳಿ ಮಾಡಬಹುದು. ಬುಶ್ ಮಹಾಶಯನೇನೋ ಸ್ಲಿಮ್ಮಾಗಿ, ಸ್ಟಿಫಾಗಿ ಇದಾನೆ ಅದ್ಕೇ ಎರಡೂ ಬೂಟುಗಳಿಂದ ತಪ್ಪಿಸಿಕೊಂಡ, ಇಡೀ ಭೂಗೋಳವನ್ನು ಹೊಟ್ಟೆಯಲ್ಲಿ ಪ್ರತಿಷ್ಠಾಪಿಸಿಕೊಂಡ ನಮ್ಮ ಪಾಡೇನು? ಇದಕ್ಕೆಲ್ಲಾ ನಾವು ಸಿದ್ಧರಾಗಿರಬೇಕು. ಪ್ರಾಣವನ್ನೇ ಒತ್ತೆಯಿಟ್ಟು ಭಾಷಣ ಸಿದ್ಧ ಪಡಿಸಿ, ಪ್ರಾಣದ ಹಂಗನ್ನೇ ಲೆಕ್ಕಿಸದೆ ಗಂಟೆ ಗಟ್ಟಲೆ ವೇದಿಕೆಯ ಮೇಲೆ ಕೊರೆಯುವುದರ ಜೊತೆಗೆ ನಾವು ಪ್ರಾಣವನ್ನೇ ಪಣಕ್ಕೊಡ್ಡಿ ಇಂತಹ ದಾಳಿಗೆ ಸಿದ್ಧರಾಗಬೇಕು. ಜನರು ನಮಗೆ ಯಾವ ಯಾವ ತೊಂದರೆಗಳನ್ನ ಒಡ್ಡುತ್ತಾರೋ ಹೇಳಲು ಬಾರದು. ನಾವು ಲಹರಿಯನ್ನು ಹಿಡಿದು ಯಾವುದೋ ಗಹನವಾದ ವಿಷಯ ಪ್ರವೇಷ ಮಾಡುವಾಗ ಕೆಲವರು ನಮ್ಮನ್ನೇ ನುಂಗುವಷ್ಟಗಲಕ್ಕೆ ಬಾಯಿತೆರೆದು ಆಕಳಿಸುತ್ತಾ ನಮ್ಮನ್ನು ಬೆದರಿಸುತ್ತಾರೆ, ಮಾತು ಅರ್ಧದಲ್ಲೇ ಇರುವಾಗ ಕಿವಿ ಕಿತ್ತು ಹೋಗುವ ಹಾಗೆ ಚಪ್ಪಾಳೆ ತಟ್ಟಿ ಭಯೋತ್ಪಾದನೆಯುಂಟು ಮಾಡುತ್ತಾರೆ. ನಾವು ಮಾತಾಡುವ ಸದ್ದು ಮೈಕಾಸುರನ ಮೂಲಕ ಹಾದು ದೊಡ್ಡ ಧ್ವನಿಯಾದರೂ ಅದನ್ನು ಮೀರಿಸುವ ಜೋರಿನಲ್ಲಿ ಹರಟೆ ಹೊಡೆಯುತ್ತಾ ನಮ್ಮ ತೊಡೆಗಳು ನಡುಗುವಂತೆ ಮಾಡುತ್ತಾರೆ. ಇವೆಲ್ಲಕ್ಕೂ ಜೈದಿಗೆ ವಿಧಿಸಿದ ಹಾಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು.”

ಇನ್ನು ತೀರ್ಪು ಸೂಕ್ತವಾದದ್ದು ಆದರೆ ಅದರ ಜೊತೆಗೆ ಮತ್ತೊಂದು ಕೆಲಸವನ್ನು ನ್ಯಾಯಾಲಯ ಮಾಡಬೇಕು ಎಂದು ಅಖಿಲ ವಿಶ್ವ ಬುಶ್ ವಿರೋಧಿ ಸಂಘದ ಉಪಾಧ್ಯಕ್ಷ ಸಲಹೆ ನೀಡಿದ್ದಾರೆ. “ಎರಡು ಬಾರಿ ಬೂಟ್ ಎಸೆಯುವ ಅವಕಾಶ ಸಿಕ್ಕಿದರೂ ಒಂದೂ ಬೂಟು ಗುರಿಯನ್ನು ತಲುಪುವಲ್ಲಿ ವಿಫಲವಾಯ್ತು. ತನಗೆ ಸಿಕ್ಕ ಅತ್ಯಂತ ಅಮೂಲ್ಯ ಅವಕಾಶವನ್ನು ತನ್ನ ಬೇಜಾವಾಬ್ದಾರಿತನದಿಂದ ಹಾಳುಮಾಡಿಕೊಂಡ ಜೈದಿಗೆ ಶಿಕ್ಷೆ ವಿಧಿಸಿದ್ದು ಸರಿಯಾಗಿಯೇ ಇದೆ. ಇದರ ಜೊತೆಗೆ ಆತನಿಗೆ ಕಾರಾಗೃಹದಲ್ಲಿ ಗುರಿ ತಪ್ಪದ ಹಾಗೆ ಬೂಟು ಎಸೆಯುವ ತರಬೇತಿಯನ್ನು ನೀಡಬೇಕು.”

(ಚಿತ್ರ: http://www.welt.de/english-news/article2894269/Rival-cobblers-claim-credit-for-shoes-thrown-at-Bush.html)

ಬೂಶ್ ಮಹಾಶಯನ ಆದರ್ಶ ಅನುಕರಣೀಯ

17 ಡಿಸೆ

(ನಗೆ ನಗಾರಿ ಉದ್ಯಮ ವಾರ್ತೆ)


ಜಗತ್ತಿನ ಶ್ರೀಮಂತ ರಾಷ್ಟ್ರಗಳೆಲ್ಲಾ ಆರ್ಥಿಕ ಕುಸಿತದ ಭೂತದಿಂದ ನರಳುತ್ತಿರುವಾಗ, ಎಲ್ಲಾ ಕಂಪೆನಿಗಳು ತಮಗಾಗುತ್ತಿರುವ ನಷ್ಟವನ್ನು ತಪ್ಪಿಸುವುದಕ್ಕಾಗಿ ಒಬ್ಬ ಉದ್ಯೋಗಿ ಒಬ್ಬ ಮನುಷ್ಯನ ಆಹಾರವನ್ನು ಮಾತ್ರ ತಿನ್ನಬೇಕು, ಒಬ್ಬಳು ಕೇವಲ ನಾಲ್ಕು ಪೂರ್ತಿ ಊಟಗಳಿಗಾಗುವಷ್ಟು ಖರ್ಚನ್ನು ತನ್ನ ಮೇಕಪ್‌ಗಳಿಗಾಗಿ ವಿನಿಯೋಗಿಸಬೇಕು, ವಾರಕ್ಕೆ ಒಂದೇ ಬಾರಿ ದುಬಾರಿ ಹೊಟೇಲಿನಲ್ಲಿ ಊಟ ಮಾಡಬೇಕು, ವಾರಕ್ಕೆ ಎರಡೇ ಬಾರಿ ಗುಂಡು ಪಾರ್ಟಿ ಇಟ್ಟುಕೊಳ್ಳಬೇಕು, ಹೆಚ್ಚೆಂದರೆ ವಾರಕ್ಕೆ ಮೂರು ಸಿನೆಮಾಗಳನ್ನು ಮಲ್ಟಿಪ್ಲೆಕ್ಸುಗಳಲ್ಲಿ ನೋಡಬೇಕು, ಮನೆಕೆಲಸಕ್ಕೆ ಗರಿಷ್ಠ ಇಬ್ಬರನ್ನು ನೇಮಿಸಿಕೊಳ್ಳಬಹುದು, ಒಂದಿಡೀ ಮಧ್ಯಮವರ್ಗದ ಒಂದು ತಿಂಗಳ ಬಜೆಟ್ಟನ್ನು ಫರ್ ಫೂಮಿಗಳಿಗಾಗಿ ಖರ್ಚು ಮಾಡುವುದನ್ನು ಹತ್ತಿಕ್ಕಬೇಕು  ಎಂದು ಕಟ್ಟಳೆಯನ್ನು ವಿಧಿಸುತ್ತಿದೆ. ಯುದ್ಧಕಾಲದಲ್ಲಿ ಭೀಕರ ಆಹಾರ ಕೊರತೆ ಸಮಸ್ಯೆ ಉದ್ಭವಿಸಿದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಜನರಿಗೆ ಒಂದು ಹೊತ್ತಿನ ಊಟವನ್ನು ಬಿಡುವಂತೆ ಮನವಿ ಮಾಡಿದಾಗ ದೇಶದ ಜನತೆ ಸ್ಪಂದಿಸಿದ ಹಾಗೆಯೇ ಈ ಮೊದಲು ಉಲ್ಲೇಖಿಸಿರುವ ನಿಬಂಧನೆಗಳಿಗೆ  ಕಂಪೆನಿಗಳ ಉದ್ಯೋಗಿಗಳು ಸ್ಪಂದಿಸುತ್ತಿದ್ದಾರೆ.

ತಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ ಎಂದು ನಂಬಿಕೊಂಡಿದ್ದ ಉದ್ಯಮಪತಿಗಳು, ಬಿಸಿನೆಸ್ ಟೈಕೂನುಗಳು ಕಂಡಕಂಡದ್ದನ್ನೆಲ್ಲಾ ಮುಟ್ಟಿ ಮುಟ್ಟಿ ತಡಕಾಡಿ ಕೈ ನೋವು ಮಾಡಿಕೊಂಡರೂ ಕಿಲುಬು ಕಾಸು ಹುಟ್ಟುತ್ತಿಲ್ಲ. ಇದಕ್ಕೆಲ್ಲಾ ಭಾರತದಂತಹ ಆಸೆಬುರುಕ ದೇಶಗಳ ಜನರು ಹೆಚ್ಚೆಚ್ಚು ಹೊಟ್ಟೆ ಬಾಕರಾಗಿದ್ದೇ ಕಾರಣ ಎಂದು ಅಮೇರಿಕಾದ ಅಧ್ಯಕ್ಷರು ಖಾಸಗಿಯಾಗಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಗಾಗಿ ಬೆಂಗಳೂರು ವಿವಿಗೆ ಅರ್ಜಿಗುಜರಾಯಿಸಿದ್ದು ಹಳೆಯ ಸುದ್ದಿ.

bush-booted

ಈ ಬಗೆಯ ಭೀಕರ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆಗಳು ನಷ್ಟವನ್ನೇ ಬೋನಸ್ಸಾಗಿ ಪಡೆಯುತ್ತಿರುವಾಗ ಉದ್ಯಮಪತಿಗಳು, ಕಂಟ್ರ್ಯಾಕ್ಟರುಗಳುಗಳಿಂದ ಪ್ರಸಾದವನ್ನು ಪಡೆದು ತಮ್ಮ ಉದರ ಪೋಷಣೆ ಮಾಡುವ ರಾಜಕಾರಣಿಗಳು ತಮ್ಮ ಸ್ವಂತ ವೇತನದಲ್ಲಿಯೇ ಉಂಡು ಉಪವಾಸ ಮಲಗಬೇಕಾದ ಸ್ಥಿತಿ ಬಂದಿದೆ. ತಮ್ಮ ಆರ್ಥಿಕ ಸುಭದ್ರತೆಗಾಗಿ ತಾವು ಕೈಗಾರಿಕೋದ್ಯಮಿಗಳನ್ನು, ಲಾಬಿಕೋರರನ್ನು, ರಿಯಲ್ ಎಸ್ಟೇಟ್ ದಂಧೆಯವರನ್ನು, ಗಣಿ ಧಣಿಗಳನ್ನು, ಚಿಟ್ ಫಂಡ್ಸ್ ಶೂರರನ್ನು, ಲಾಟರಿ ವೀರರನ್ನು, ಲಿಕ್ಕರ್ ದೊರೆಗಳನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು ಎಂದು ರಾಜಕಾರಣಿಗಳಿಗೆ ಮನವರಿಕೆಯಾಗತೊಡಗಿದೆ. ಹೀಗಾಗಿ ದೇಶದ ಎಲ್ಲಾ ರಾಜಕಾರಣಿಗಳು ಭಯೋತ್ಪಾದಕ ದಾಳಿ ನಡೆದಾಗಲೂ ತೋರಿಸಲು ಹಿಂದು ಮುಂದು ನೋಡಿದ ಒಗ್ಗಟ್ಟನ್ನು ತೋರಿ ಪಕ್ಷಭೇದ ಮರೆತು ಸಭೆ ಸೇರಿದರು. ಆ ಸಭೆಯಲ್ಲಿ ತಮ್ಮ ಸ್ವಾವಲಂಬನೆಗೆ ರಾಜಕಾರಣಿಗಳು ಏನು ಮಾಡಬೇಕು, ಯಾವ ವ್ಯಾಪಾರವನ್ನು ಶುರು ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಲಾಭದಾಯಕ ಎಂದು ಸಮಾಲೋಚನೆ ನಡೆಸಿದರು.


ನಕಲಿ ಗುರುತು ಚೀಟಿ ಬಳಸಿ ಸಮಾವೇಶದ ಪ್ರವೇಶ ಗಿಟ್ಟಿಸಿಕೊಂಡಿದ್ದ ನಗೆ ಸಾಮ್ರಾಟರು ಸಭೆಯಲ್ಲಿ ಯಾರೊಬ್ಬರೂ ಒಂದೂ ಐಡಿಯಾ ಕೊಡದೆ ತೆಪ್ಪಗೆ ಕುಳಿತಿದ್ದನ್ನು ಕಂಡು ಬೇಸರ ಗೊಂಡರು. ಇದ್ದುದರಲ್ಲಿ ಒಬ್ಬ ಪ್ರಾಮಾಣಿಕಮಂತ್ರಿಯೊಬ್ಬರು ಮಾತನಾಡಿ, ‘ತಲೆ ಉಪಯೋಗಿಸುವ ಕೆಲಸವನ್ನು ನಾವು ಬಿಟ್ಟು ತುಂಬಾ ವರ್ಷಗಳಾಗಿವೆ. ಮೆದುಳಿನ ಕೆಲಸವನ್ನೆಲ್ಲಾ ನಮ್ಮ ಸೆಕ್ರಟರಿಗಳಿಗೆ ವರ್ಗಾಯಿಸಿರುವುದರಿಂದ ನಮ್ಮ ಮೆದುಳುಗಳು ಕೆಲಸ ಮಾಡುವುದಕ್ಕೆ ಸ್ವಲ್ಪ ಕಷ್ಟ ಪಡುತ್ತಿವೆಎಂದು ಆತ್ಮನಿವೇದನೆ ಮಾಡಿಕೊಂಡರು. ಮತ್ತೊಂದು ಅರ್ಧ ಗಂಟೆ ಕಳೆದರೂ ಎರಡು ಗ್ಯಾಲನ್ ಕಾಫಿ, ಒಂದು ಟನ್ನು ಬಿಸ್ಕೇಟುಗಳು ಕರಗಿದವೇ ವಿನಃ ನಮ್ಮ ಶಾಸಕರ ಮೆದುಳುಗಳು ಸ್ಟಾರ್ಟ್ ಆಗಲಿಲ್ಲ.


ಇದೇ ಸಂದರ್ಭವನ್ನು ಬಳಸಿಕೊಂಡು ನಗೆ ಸಾಮ್ರಾಟರು ತಮ್ಮ ಆಲೋಚನೆಯನ್ನು ಸಭೆಯಲ್ಲಿ ಮಂಡಿಸಿದರು. ‘ನಾನು ಈ ಕ್ಷೇತ್ರಕ್ಕೆ ಹೊಸಬ ಹೀಗಾಗಿ ನನ್ನ ಪರಿಚಯ ನಿಮಗೆ ಇರಲಾರದು. ನಾನಿನ್ನೂ ಈ ಫೀಲ್ಡಿಗೆ ಹೊಸಬನಾದ್ದರಿಂದ ನನ್ನ ಮೆದುಳು ಇನ್ನೂ ಕೆಲಸ ಮಾಡುತ್ತಿದೆ. ನಾನು ನಿಮ್ಮೆಲ್ಲರ ಆದರ್ಶ, ಮಾರ್ಗದರ್ಶನದಿಂದ ಅತಿ ಶೀಘ್ರದಲ್ಲಿ ಅದು ಕೆಲಸ ನಿಲ್ಲಿಸುವಂತೆ ಮಾಡಲು ಪ್ರಯತ್ನಿಸುವೆ. ಸದ್ಯಕ್ಕೆ ಈ ಸಮಸ್ಯೆಗೆ ಒಂದು ಪರಿಹಾರ ನನ್ನ ಬಳಿ ಇದೆ.

ಮೊದಲೇ ಹೇಳಿದ ಹಾಗೆ ನಾನಿನ್ನೂ ಅಮೆಚೂರ್ ಆದ್ದರಿಂದ ದಿನ ಪತ್ರಿಕೆಯನ್ನು ಓದುವ ಕೆಟ್ಟ ಅಭ್ಯಾಸವನ್ನಿನ್ನೂ ಇರಿಸಿಕೊಂಡಿದ್ದೇನೆ. ಇರಾಕಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವುದಕ್ಕೆ, ಸಮೂಹ ನಾಶ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವುದಕ್ಕೆ ಸೈನ್ಯವನ್ನು ನುಗ್ಗಿಸಿ ಅವರೆಡನ್ನೂ ಮಾಡುವುದರಲ್ಲಿ ಯಶಸ್ವಿಯಾಗಿ ವಿಫಲರಾಗಿರುವ, ನಿವೃತ್ತಿಯ ಅಂಚಿನಲ್ಲಿರುವ ಅಮೇರಿಕಾದ  ಅಧ್ಯಕ್ಷ ಜಾರ್ಜ್ ಬೂಶ್ ತಮ್ಮ ಅಧಿಕಾರವಧಿ ಮುಗಿಯುವ ಮೊದಲು ತಾವು ಉದ್ಧಾರ ಮಾಡಿದ ದೇಶವನ್ನೊಮ್ಮೆ ನೋಡಿಕೊಂಡು ಹೋಗಲು ಇರಾಕಿಗೆ ಭೇಟಿ ನೀಡಿದ್ದರು. ತಾವು ಮಹದುಪಕಾರ ಮಾಡಿದ ದೇಶದ ಮಧ್ಯಮದ ಎದುರು ಬಡಾಯಿ ಕೊಚ್ಚಿಕೊಳ್ಳುತ್ತಾ ನಿಮ್ಮನ್ನು ಕ್ರೂರ ಸರ್ವಾಧಿಕಾರಿಯಿಂದ ರಕ್ಷಿಸಿದ ನನಗೆ ಏನೆಂದು ಬಿರುದು ಕೊಡುವಿರಿ, ನನಗೆ ಏನು ಬಹುಮಾನ ಕೊಡುವಿರಿ ಎಂದು ಕೇಳಿದಾಗ ಇರಾಕಿ ಪತ್ರಕರ್ತನೊಬ್ಬ ಅತ್ಯಂತ ಕಳಕಳಿಯಿಂದ ಎದ್ದು ನಿಂತು ಬೂಶ್ ಮಹಾಶಯನಿಗೆ ನಾಯಿಎಂಬ ಬಿರುದನ್ನು ನೀಡಿ, ತನ್ನ ಕಾಲುಗಳ ಬೂಟುಗಳನ್ನು ಬಿಚ್ಚಿ ಬಹುಮಾನವಾಗಿ ಅಧ್ಯಕ್ಷರೆಡೆಗೆ ಎಸೆದ. ಚಪ್ಪಲಿ ಹಾರ ಅವಮಾನದ ಸಂಕೇತವಲ್ಲ, ಅದು ಶ್ರಮಿಕನ ಬೆವರಿನ ಸಂಕೇತ ಎಂದು ನಮ್ಮ ನಾಡಿನ ಮಠಾಧೀಶರು ನೀಡಿದ ಹೇಳಿಕೆಯನ್ನು ಕದ್ದು ಕೇಳಿಸಿಕೊಂಡಿದ್ದ ಬೂಶ್ ಬೂಟು ಎಸೆಯುವುದರಿಂದ ನನಗೆ ಅವಮಾನವಾಗಲಿಲ್ಲ. ಅಂದಹಾಗೆ ಬೂಟಿನ ನಂಬರು ಹತ್ತು ಎಂದು ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ವರದಿಯಾಗದ ಅಂಶವೆಂದರೆ ಆ ಬೂಟನ್ನು ಅವರು ಹರಾಜಿಗೆ ಇಟ್ಟು ಹರಾಜಿನಲ್ಲಿ ಬಂದ ಹಣದಿಂದ ಅಮೇರಿಕಾದ ಮತ್ತೊಂದು ಆಟೋ ಮೊಬೈಲ್ ಕಂಪೆನಿಯನ್ನು ಬೇಲ್ ಔಟ್ ಮಾಡಲಿದ್ದಾರೆ. ಇದು ನಮ್ಮ ನಾಡಿನ ಹೆಮ್ಮೆಯ ಪತ್ರಿಕೆ ನಗೆ ನಗಾರಿ ಡಾಟ್ ಕಾಮ್ ಪತ್ತೆ ಹಚ್ಚಿದೆ. (ಇದೀಗ ತಾನೆ ಬಂದ ಸುದ್ದಿಯ ಪ್ರಕಾರ ಸೌದಿಯ ಧನಿಕನೊಬ್ಬ ಆ ಬೂಟಿಗೆ ಹತ್ತು ಮಿಲಿಯನ್ ಡಾಲರ್ ಬಿಡ್ ಮಾಡಿದ್ದಾನೆ)


ಎಲ್ಲದರಲ್ಲೂ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅಮೇರಿಕಾ ನಮಗೆ ಈ ವಿಚಾರದಲ್ಲೂ ಮಾದರಿಯಾಗಬೇಕು. ನಾವು ರಾಜಕಾರಣಿಗಳು ಸ್ವಾವಲಂಬಿಗಳಾಗಲು ಬೂಟ್ಸ್, ಚಪ್ಪಲಿಗಳ ವ್ಯಾಪಾರವನ್ನು ಶುರು ಮಾಡಬೇಕು. ಇದು ಅತ್ಯಂತ ಲಾಭದಾಯಕ ಹಾಗೂ ಸುಲಭ ಉದ್ಯಮವಾಗುವ ಎಲ್ಲಾ ಅಂಶಗಳನ್ನೂ ಹೊಂದಿದೆ. ಇದಕ್ಕೆ ಬೇರೆ ಉದ್ಯಮಗಳಿಗೆ ಬೇಕಾದಂತೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಕಾರ್ಖಾನೆ ಸ್ಥಾಪಿಸುವುದಕ್ಕಾಗಿ ಜಾಗ ಕೊಡಿ ಎಂದು ಯಾರ ಮುಂದೂ ಕೈಚಾಚಬೇಕಿಲ್ಲ. ನಾವೆಲ್ಲಾ ರಾಜಕಾರಣಿಗಳು ನಮ್ಮ ನಮ್ಮ ಮತ ಕ್ಷೇತ್ರಕ್ಕೆ ಹೋಗಿ ನಮ್ಮ ಬೂಶ್ ಮಹಾಶಯರು ಹೇಳಿದಂತೆ ನಾವು ನಿಮಗೆ ಮಾಡಿರುವ ಸೇವೆಗೆ ನಮಗೆ ಏನೆಂದು ಬಿರುದು ಕೊಡುವಿರಿ? ಏನು ಬಹುಮಾನ ಕೊಡುವಿರಿ?’ ಎಂದು ಕೇಳಬೇಕು. ಆಗ ಜನರು ಪೂರ್ಣ ಮನಸ್ಸಿನಿಂದ ಕೊಡುವ ಬೂಟು, ಚಪ್ಪಲಿಗಳ ಬಹುಮಾನವನ್ನು ನಾವು ಬಂಡವಾಳವಾಗಿಟ್ಟುಕೊಂಡು ಉದ್ಯಮವನ್ನು ನಡೆಸಬಹುದು. ಏನಂತೀರಿ?’ ಎಂದರು.

ಒಂದು ಕ್ಷಣ ಕಿಕ್ಕಿರಿದ ಸಭಾಂಗಣವನ್ನು ದಿಟ್ಟಿಸಿದ ಸಾಮ್ರಾಟರು ಎದೆಯುಬ್ಬಿಸಿ, ‘ಈ ಸಲಹೆಯನ್ನು ನೀಡಿದ್ದಕ್ಕೆ ನನಗೆ ಯಾವ ಬಹುಮಾನ ಕೊಡುವಿರಿ…’ ಎಂದು ಕೇಳಿದರು ಅಷ್ಟೇ!


ಈಗ ಸಾಮ್ರಾಟರು ಮಾಗಡಿ ರಸ್ತೆಯ ಬದಿಯಲ್ಲಿ ಬಹುದೊಡ್ಡ ಶೂ, ಚಪ್ಪಲಿ ಶೋರೂಂ ಇಟ್ಟುಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು

14 ಮಾರ್ಚ್

ಹಾಸ್ಯಗಾರರು, ಹನಿಗವಿಗಳು, ಹಾಸ್ಯ ಲೇಖಕರು, ಹಾಸ್ಯ ಭಾಷಣಕಾರರು, ಹಾಸ್ಯಾಸ್ಪದ ಮಾತು’ಕೋರರ’ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ನಗಿಸೋದೆ ನಮ್ ಬುಸಿನೆಸ್ಸು ಅಂತ ‘ನಗದ’ ಜನರನ್ನು ನಗ್ಸೋ ಹರಸಾಹಸ ಮಾಡುತ್ತಿರುವವರು ಹಲವರು. ನಗೆಯ ಹಬ್ಬ, ಜಾಗರಣೆ ಮಾಡಿದರು, ಹಾಸ್ಯಕ್ಕೆ ಲಾಸ್ಯವನ್ನು ಬೆರೆಸಿದರು, ಹಾಸ್ಯ ಲೋಕವನ್ನು ತೆರೆದರು.

ಜೀ ಕನ್ನಡ ಚಾನೆಲ್ಲಿನವರು ಹಿಂದಿಯಲ್ಲಿ ಜನಪ್ರಿಯವಾದ laughter challengeನ ತದ್ರೂಪಾಗಿ ಕನ್ನಡದಲ್ಲಿ “ಕಾಮಿಡಿ ಕಿಲಾಡಿಗಳು” ಎಂಬ ಕಾರ್ಯಕ್ರಮ ಆಯೋಜಿಸಿಕೊಂಡಿದೆ. ಎಂಜಲು ಸ್ವೀಕರಿಸಿ ಅಭ್ಯಾಸವಿರುವ ಕನ್ನಡಿಗರಿಗೆ ಸಂತೋಷದ ಸಂಗತಿಯೆಂದರೆ ಈ ಸ್ಪರ್ಧೆಯಲ್ಲಿ ವಿಜೇತರಾದ ‘ಜೋಕ್’ರ್‍ಗೆ ಸಿಗುತ್ತಿರುವುದು ಬರೋಬರಿ ಐದು ಲಕ್ಷ ರೂ ಬಹುಮಾನ.

ಆದರೆ ಈ ಸುದ್ದಿಯನ್ನು ವರದಿ ಮಾಡುವಾಗ ‘ಅದುವೇ ಕನ್ನಡ’ ಪೋರ್ಟಲ್ಲಿನ ಕಿಲಾಡಿ ವರದಿಗಾರ ಹಿಗ್ಗಾಮುಗ್ಗಾ ಜೀ ಟಿವಿಯನ್ನು ಹೊಗಳಿ ಹಾಸ್ಯಾಸ್ಪದವಾಗಿದ್ದಾನೆ.

ವರದಿಯ ಪೂರ್ಣ ಪಾಠ:

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗುವ ವಿನೂತನ ಕಾರ್ಯಕ್ರಮ “ಕಾಮಿಡಿ ಕಿಲಾಡಿಗಳು” ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಹಾಸ್ಯ ಕಾರ್ಯಕ್ರಮವಾಗಿದೆ. ಈ ಸ್ಪರ್ಧೆಗೆ ಕರ್ನಾಟಕದಾದ್ಯಂತದಿಂದ ಸುಮಾರು ನಲವತ್ತಕ್ಕೂ ಹೆಚ್ಚು ಹಾಸ್ಯ ಕಲಾವಿದರನ್ನು ಹಾಸನ, ಮೈಸೂರು, ಗುಲ್ಬರ್ಗ, ಮಂಗಳೂರು, ದಾವಣಗೆರೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದ ಪ್ರಥಮ ಹಂತವಾಗಿ ಈಗ ಕರ್ನಾಟಕದ ಖ್ಯಾತ ಕಲಾವಿದರ ಹಾಸ್ಯ ವಿನೋದಾವಳಿ ಪ್ರಸಾರ ಕಾಣುತ್ತಿದೆ. ಮಾರ್ಚ್15ರಿಂದ ಕರ್ನಾಟಕದಾದ್ಯಂತದಿಂದ ಆಯ್ಕೆಯಾದ ಕಲಾವಿದರ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜಯಶಾಲಿಯಾಗುವ ಕಲಾವಿದರಿಗೆ ಸುಮಾರು ಐದು ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುವುದು.

‘ಸುತ್ತಲಿರುವ ಪ್ರಪಂಚವನ್ನು ನೋಡು ಮತ್ತು ನಗು” ಎಂಬ ಉದ್ದೇಶವುಳ್ಳ ಜೀ ಕನ್ನಡದ “ಕಾಮಿಡಿ ಕಿಲಾಡಿಗಳು” ಕರ್ನಾಟಕದ ವೀಕ್ಷಕರಿಗೆ ಮನರಂಜನೆಯನ್ನು ಒದಗಿಸುವುದಲ್ಲದೇ ವಿನೂತನ ಕಾರ್ಯಕ್ರಮಕ್ಕೆ ವೇದಿಕೆಯೊಂದನ್ನು ಕಲ್ಪಿಸಲಿದೆ. ಕನ್ನಡದ ವಾಹಿನಿಗಳು ಧಾರಾವಾಹಿ, ಸುದ್ದಿ, ಸಿನಿಮಾ ಮತ್ತು ಸರಿಗಮಪ ರೀತಿಯ ಸಂಗೀತಮಯ ಕಾರ್ಯಕ್ರಮಗಳಿಗೆ ಮಾತ್ರವೇ ಫೇಮಸ್ಸು ಎಂಬ ಮಾತನ್ನು ಜೀ ಕನ್ನಡ ವಾಹಿನಿಯು ಈಗಾಗಲೇ ತನ್ನ ಕುಣಿಯೋಣು ಬಾರಾ, ಎಸ್ಸೆಲ್ ಶ್ರೇಷ್ಠ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ ಮುಂತಾದ ಕಾರ್ಯಕ್ರಮಗಳ ಮೂಲಕ ಅಲ್ಲಗಳೆದಿದ್ದು, ಈಗ “ಕಾಮಿಡಿ ಕಿಲಾಡಿಗಳು” ಎಂಬ ವಿನೂತನ ಹಾಸ್ಯಮಯ ಪ್ರದರ್ಶನದಿಂದ ಕನ್ನಡದ ಕಿರುತೆರೆ ಏನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಲಿದೆ.

ಸದಾ ಹೊಸತನವನ್ನು ಹುಡುಕುವ ಜೀ ಕನ್ನಡ ಈ ಬಾರಿ ಹಾಸ್ಯವನ್ನೇ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿದ್ದು ‘ಕಾಮೆಡಿ ಕಿಲಾಡಿಗಳು” ಎಂಬ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲಿದೆ, ಕರ್ನಾಟಕದ ವಿವಿದೆಡೆ ಅಡಗಿರುವ ಹಾಸ್ಯ ಕಲಾವಿದರನ್ನು ಬೆಳಕಿಗೆ ತರಲು “ಕಾಮಿಡಿ ಕಿಲಾಡಿಗಳು” ಸಹಕಾರಿಯಾಗಲಿದೆಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

– ನಗೆ ಸಾಮ್ರಾಟ್

ಜಾರು ಬುಸ್ ಹೇಳಿಕೆಯಲ್ಲಿ ವ್ಯಾಕರಣ ದೋಷ

14 ಮಾರ್ಚ್

(ನಗಾರಿ ಅಂತರಾಷ್ಟ್ರೀಯ ಬ್ಯೂರೋ)

“ಭಾರತ ಸರ್ಕಾರ ಸಾಮಾನ್ಯವಾಗಿ ತನ್ನ ಪ್ರಜೆಗಳ ಹಕ್ಕುಗಳಿಗೆ ಗೌರವ ನೀಡುತ್ತಿದ್ದರೂ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ನಡೆಯುತ್ತಿದೆ” ಎಂಬ ಜಾರು ಬುಸ್ ಹೇಳಿಕೆ ತೀವ್ರವಾದ ವಿವಾದಕ್ಕೆ ಕಾರಣವಾಗಿದೆ.

ಕೊರಿಯಾ, ಕ್ಯೂಬಾ, ಇರಾಕ್, ವಿಯೆಟ್ನಾಂ, ಅಫಘಾನಿಸ್ಥಾನದ ಮೇಲೆ ಯುದ್ಧ ಸಾರಿದ ಹಾಗೂ ಕೋಟ್ಯಂತರ ಮಂದಿಯ ಪ್ರಾಣವನ್ನೇ ಕಸಿದುಕೊಂಡ ಅಮೇರಿಕಾ ಸಂಪ್ರದಾಯಕ್ಕಾದರೂ ಒಂದು ಬಾರಿಯೂ ಯಾರೊಬ್ಬರ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋಗದ ಭಾರತಕ್ಕೆ ರಾಜನೀತಿಯ ಪಾಠವನ್ನು ಹೇಳಿಕೊಡಲು ಮುಂದಾಗಿರುವ ಸಂಗತಿ ಅನೇಕ ಪಾರ್ಟ್ ಟೈಂ ಚಿಂತಕರಲ್ಲಿ ತೀವ್ರವಾದ ಆಕ್ರೋಶ ಮೂಡಿಸಿದೆ.

ಈ ಬಗ್ಗೆ ಸ್ಪಷ್ಟನೆಯನ್ನು ಬಯಸಿ ಅಮೇರಿಕಾ ವ್ಯಾಮೋಹಿ, ಮಾನವ ಹಕ್ಕು ಸಂರಕ್ಷಕ ಎನ್.ಜಿ.ಓ ಅಧಕ್ಷರೊಬ್ಬರನ್ನು ಸಂಪರ್ಕಿಸಿದಾಗ, “ಅಮೇರಿಕಾ ಹೇಳೋದು ಸರಿ. ಭಾರತದಲ್ಲಿ ಎಷ್ಟು ಭೀಕರವಾದ ಮಾನವ ಹಕ್ಕುಗಳ ಉಲ್ಲಂಘನೆಯು ನಡೆಯುತ್ತಿದೆ, ನೂರಾರು ಮಂದಿ ಪೋಲೀಸ್ ಸಿಬ್ಬಂದಿಯ ಪ್ರಾಣ ತೆಗೆದುಕೊಂಡು ಅವರನ್ನೇ ಅವಲಂಬಿಸಿದವರನ್ನು ಅನಾಥರನ್ನಾಗಿ ಮಾಡಿದ, ನಾಡಿನ ವರನಟನನ್ನು ಹಣಕ್ಕಾಗಿ ಅಪಹರಣ ಮಾಡಿದ, ನಾಡಿನ ಜನಪ್ರತಿನಿಧಿಯನ್ನು ಹೊತ್ತೊಯ್ದು ಕೊಂದು ಸಾಧನೆ ಗೈದ ಶ್ರೀಯುತ ವೀರಪ್ಪನ್ ಪೋಲೀಸರ ಅಮಾನವೀಯ ಗುಂಡಿಗೆ ಬಲಿಯಾಗಲು ಮಾಡಿದ್ದ ತಪ್ಪಾದರೂ ಏನು? ದೇಶದ ಪಾರ್ಲಿಮೆಂಟಿನ ಮೇಲೆ ದಾಳಿ ಮಾಡಲು ನೆರವಾದ ಮಹಾತ್ಮಾ ಅಫ್ಜಲ್ ಗುರುವಿಗೆ ಮರಣದಂಡನೆಯನ್ನು ವಿಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ? ಎಲ್ಲಾ ಸಂಗತಿಗಳಲ್ಲೂ ಹಿರಿಯಣ್ಣನೆನಿಸಿಕೊಂಡಿರುವ ಅಮೇರಿಕಾ ಎಂದೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಉದಾಹರಣೆಗಳಿಲ್ಲ. ಜಪಾನಿನ ಮೇಲೆ ಅಣು ಬಾಂಬ್ ದಾಳಿಯನ್ನು ಮಾಡಿ ಲಕ್ಷಾಂತರ ಮಂದಿಯ ಪ್ರಾಣವನ್ನು ಆಹುತಿ ತೆಗೆದುಕೊಂಡದ್ದಾಗಲೀ, ಇರಾಕಿನಲ್ಲಿ ಮುಗ್ಧರ ಪ್ರಾಣಹರಣ ಮಾಡಿದ್ದಾಗಲೀ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ. ಕಾರಣ, ಅಮೇರಿಕಾವನ್ನು ಬೆಂಬಲಿಸದ, ಅಮೇರಿಕಾದ ಜಪ ಮಾಡದವರು ಯಾರೂ ಮಾನವರೇ ಅಲ್ಲ. ಹೀಗಿರುವಾಗ ಅವರನ್ನು ಕೊಂದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಾದರೂ ಹೇಗೆ?” ಎಂದು ಕೇಳಿ ನಮ್ಮ ವದರಿಗಾರನನ್ನೇ ಕಕ್ಕಾವಿಕ್ಕಿಯಾಗಿಸಿದರು.

‘ವಿ’ ಬ್ರಾಂಡ್ ಪತ್ರಿಕೆಯ ಫೈರ್ ಬ್ರಾಂಡ್ ಪತ್ರಕರ್ತ ಎಂದು ಹೆಸರು ವಾಸಿಯಾಗಿರುವ ಉಗ್ರ, ವ್ಯಗ್ರ ಉರಿತಾಪ ಸಿಂಹರನ್ನು ಈ ಬಗ್ಗೆ ಸಂದರ್ಶಿಸಿದಾಗ,“ಇದರಲ್ಲಿ ಅಮೇರಿಕಾದ್ದು ಯಾವ ತಪ್ಪೂ ಇಲ್ಲ. ಆ ಬುಸ್ ಮಾಡಿದ್ದೆಲ್ಲವೂ ಸರಿ. ನಮ್ಮ ನರೇಂದ್ರ ಮೋದಿ ಮಾಡಿದ್ದನ್ನೇ ಆತನೂ ಮಾಡಿದ್ದಾನೆ. ‘ಅಭಿವೃದ್ಧಿ’ಯನ್ನು ಸಹಿಸಲಾರದ ಈ ಎಡಬಾಧೆಯ ಮಂದಿಗೆ ಅಮೇರಿಕಾವನ್ನು ಟೀಕಿಸದಿದ್ದರೆ ಉಂಡದ್ದು ಅರಗುವುದೇ ಇಲ್ಲ. ಆದರೂ ಜಾರು ಬುಸ್ಯಾ ಹೇಳಿಕೆಯನ್ನು ಭಾರತದ ಸಾವಿರಾರು ವರ್ಗದ ‘ಅಖಂಡ’ ಹಿಂದೂ ಸಮಾಜ ಉಗ್ರವಾಗಿ, ವ್ಯಗ್ರವಾಗಿ ವಿರೋಧಿಸಬೇಕು. ಮತಾಂತರ ವಿರೋಧಿಸಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿರುವುದರ ಹಿಂದೆ ಕ್ರೈಸ್ತ ಮಶೀನುಗಳ ‘ಕೈ’ವಾಡವಿದೆ.” ಎಂದು ಹೇಳಿದರು.

ಹೇಳಿಕೆ, ಪ್ರತಿ ಹೇಳಿಕೆ ಒಗ್ಗೂಡಿಸಿಕೊಂಡು ನಗಾರಿಯ ಕಛೇರಿಗೆ ಬಂದ ವದರಿಗಾರ ಅದನ್ನು ನಗೆ ಸಾಮ್ರಾಟರಿಗೆ ಓದಲು ಕೊಟ್ಟ. ನಗೆ ಸಾಮ್ರಾಟರು,” ಅಯ್ಯೋ, ಆ ಜಾರು ಬುಸ್ಯಾ ಸ್ಪೆಲ್ಲಿಂಗಿನಲ್ಲಿ ಸ್ವಲ್ಪ ವೀಕು. ಮಾವನ ಹಕ್ಕುಗಳ ಉಲ್ಲಂಘನೆ ಎನ್ನುವುದರ ಬದಲು ‘ಮಾನವ ಹಕ್ಕು’ ಅಂತ ಮಿಸ್ಟೇಕು ಮಾಡಿದ್ದಾನೆ ಅಷ್ಟೇ” ಎಂದರು ಸಂತನ ಸಮಾಧಾನದಿಂದ.