Tag Archives: ಪತ್ರಕರ್ತ

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

17 ಮಾರ್ಚ್

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ. ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ, ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ, ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ, “ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್ ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ, ಹೃದಯಕ್ಕೆ” – ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ “ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” – ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು, ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ. ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪. ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬. ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

3 ನವೆಂ

(ನಗೆ ನಗಾರಿ ವ್ಯಕ್ತಿತ್ವ ವಿಕಸನ ಬ್ಯೂರೋ)

ನಾಡಿನ ಹೆಸರಾಂತ ಪತ್ರಿಕೆಯ ಅಂಕಣಕಾರರು ನೀಡಿದ ಭಾರತವನ್ನು ಬೈಯಿರಿ ಬುಕರ್ ಪಡೆಯಿರಿ’ ಎಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ನಗೆ ಸಾಮ್ರಾಟರು ನಿಟ್ಟಿನಲ್ಲಿ ಅಗಾಧವಾದ ಸಂಶೋಧನೆಯನ್ನು ಮಾಡಿ ಬಹುದೊಡ್ಡ ಗ್ರಂಥವನ್ನು ಬರೆಯುವಂತೆ ತಮ್ಮ ಚೇಲ ಕುಚೇಲನಿಗೆ ತಾಕೀತು ಮಾಡಿದ್ದಾರೆ. ತನ್ನ ಶಿಷ್ಯನಿಗೆ ಬುಕರ್ ಬಂದಿತು ಎಂದು ಹೇಳಿಕೊಳ್ಳುವ ಹೆಮ್ಮೆಯಷ್ಟೇ ತನಗೆ ಸಾಕು ಎಂದು ಹೇಳಿರುವ ಸಾಮ್ರಾಟರನ್ನು ಜಗದ್ಗುರುವಿನ ಪಟ್ಟಕ್ಕೆ ಕಟ್ಟಬೇಕು ಎಂದು ಹಲವರು ಯೋಚಿಸುತ್ತಿರುವುದು ಸುಳ್ಳು ಎಂದು ನಮ್ಮ ಮೂಲಗಳು ಸ್ಪಷ್ಟಪಡಿಸಿವೆ.

ನಮ್ಮ ನೆಚ್ಚಿನ ಅಂಕಣಕಾರರ ಸಲಹೆಯನ್ನು ಅನುಸರಿಸಿ ನಗೆ ಸಾಮ್ರಾಟರು ಮತ್ತಷ್ಟು ಸಲಹೆಗಳನ್ನು ಓತಪ್ರೋತವಾಗಿ ನೀಡಲು ಸಿದ್ಧರಾಗಿ ನಿಂತಿದ್ದು ಅವುಗಳಲ್ಲಿ ತೀರಾ ಅಮೂಲ್ಯವಾದ ಒಂದನ್ನು ನಗೆ ನಗಾರಿಯ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸಿದ್ದಾರೆ. ‘ಯಶಸ್ಸಿಗೆ ನೂರು ಮೆಟ್ಟಿಲು’, ‘ಹತ್ತೇ ಮೆಟ್ಟಿಲು’, ‘ಒಂದೇ ಮೆಟ್ಟಿಲು’ ಎಂದೆಲ್ಲಾ ರೀಮುಗಟ್ಟಲೆ ಬರೆದು ಬಿಸಾಕಿರುವ ಸಕ್ಸೆಸ್ ಗುರುಗಳ್ಯಾರಿಗೂ ತಿಳಿಯದ ಯಶಸ್ಸಿನ ಗುಟ್ಟನ್ನು ಸಾಮ್ರಾಟರು ಕಂಡುಕೊಂಡಿದ್ದಾರೆ. ಯಶಸ್ಸಿಗೆ ಎಷ್ಟೇ ಮೆಟ್ಟಿಲಿದ್ದರೂ ಅವುಗಳಿಗಿಂತ ಮುಂಚೆ ಒಂದು ಗೇಟ್ ಇರುತ್ತದೆ, ಅದನ್ನು ತೆರೆದರೆ ಮಾತ್ರ ಮೆಟ್ಟಿಲು ಏರಲು ಸಾಧ್ಯ, ಗೇಟಿಗೆ ಯಾವ ಕೀಲಿ ಕೈಯೂ ಇಲ್ಲ. ಆದರೆ ಅದನ್ನು ಕಾಯಲು ಒಬ್ಬ ಕಾವಲುಗಾರ ಮಾತ್ರನಿದ್ದಾನೆ. ಆತನಿಗೆ ಪ್ರಿಯವಾಗುವ ಹಾಗೆ ನಡೆದುಕೊಂಡುಬಿಟ್ಟರೆ ಸಾಕು ಆತ ಗೇಟಿನ ಬಾಗಿಲು ತೆರೆದು ನಮ್ಮನ್ನು ನಮ್ಮ ನಮ್ಮ ನಂಬಿಕೆಯ ನೂರೋ, ಹತ್ತೋ, ಒಂದೋ ಮೆಟ್ಟಿಲಿನ ಯಶಸ್ಸಿನ ಹಾದಿಯನ್ನು ಕ್ರಮಿಸಲು ಬಿಟ್ಟುಬಿಡುತ್ತಾನೆ.


ಕಾವಲುಗಾರ ಯಾವ ತಕರಾರನ್ನೂ ತೆಗೆಯದೆ ನಿಮ್ಮನ್ನು ಒಳಕ್ಕೆ ಬಿಡಬೇಕೆಂದರೆ ಮಾಡಬೇಕಾಗಿರುವುದು ಇಷ್ಟೇ: ನೀವು ದೊಡ್ಡವರಾಗಬೇಕು. ನಿಮಗೆ ಕೋಟ್ಯಾಧೀಶರು ಆಗುವುದು ಹೇಗೆ, ಆರೋಗ್ಯವಂತರಾಗುವುದು ಹೇಗೆ, ಪರೀಕ್ಷೆಯಲ್ಲಿ ಮಾರ್ಕು ಗಳಿಸುವುದು ಹೇಗೆ, ಹೆಂಡತಿಯನ್ನು ರಮಿಸುವುದು ಹೇಗೆ, ಗಂಡನನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ, ಬಾಸಿನ ತಲೆಗೆ ಬೆಣ್ಣೆ ತಿಕ್ಕುವುದು ಹೇಗೆ, ಕೆಲಸಗಾರರಿಂದ ಚಾಕರಿ ಮಾಡಿಸಿಕೊಳ್ಳುವುದು ಹೇಗೆ, ನಾಯಕರಾಗುವುದು ಹೇಗೆ ಎಂದೆಲ್ಲಾ ಉಪದೇಶ ಮಾಡುವ ಅನೇಕ ಪುಸ್ತಕಗಳು, ಆಡಿಯೋ ಟೇಪುಗಳು, ವಿಡಿಯೋಗಳು, ಬಡಬಡಿಸುವ ಟೀಚರುಗಳು ಸಿಕ್ಕಬಹುದಾದರೂ ದೊಡ್ಡವರಾಗುವುದು ಹೇಗೆ ಎಂದು ತಿಳಿಸುವವರು ಯಾರೂ ಸಿಕ್ಕುವುದಿಲ್ಲ. ತಮ್ಮ ನೆಚ್ಚಿನ ಅಂಕಣಕಾರರ ಸ್ಪೂರ್ತಿಯಿಂದ ಸಾಮ್ರಾಟರು ರಹಸ್ಯವನ್ನು ಬಯಲು ಮಾಡಿದ್ದಾರೆ. ದೊಡ್ಡವರಾಗಲು ನೀವು ಮಾಡಬೇಕಿರುವುದು ಇಷ್ಟೇ: ದೊಡ್ಡವರನ್ನು ಬೈಯಿರಿ. ಹಾಗೂ ನೀವು ಬೈಯ್ದದ್ದು ಗರಿಷ್ಠ ಮಂದಿಯ ಕಿವಿಗೆ ಬೀಳುವಂತೆ ಮಾಡಿ!


ಉದಾಹರಣೆಯ ಮೂಲಕ ವಿವರಿಸುವುದಾದರೆ, ಪ್ರಖ್ಯಾತ ಪತ್ರಿಕೆಯ ಅಂಕಣವೊಂದನ್ನು ಗಿಟ್ಟಿಸಿಕೊಳ್ಳಿ, ಇಲ್ಲವೇ ತಿಂಗಳು ತಿಂಗಳು ಸೇರುವ ಸಭೆಯೊಂದರಲ್ಲಿ ಮಾತಾಡುವ ಅವಕಾಶ ಸಂಪಾದಿಸಿಕೊಳ್ಳಿ, ಇಲ್ಲವೇ ಮೊದಲೇ ದೊಡ್ಡವರಾದವರ ಹಿಂದೆ ಸುಮ್ಮನೆ ಸುತ್ತುತ್ತಿರಿ. ಅನಂತರ ಒಬ್ಬೊಬ್ಬರನ್ನೇ ಆಯ್ದುಕೊಂಡು ಅವರ ಓರೆಕೋರೆಗಳನ್ನಷ್ಟೇ ಪಟ್ಟಿಮಾಡಿಕೊಂಡು ಮನಸಾರೆ ಬೈಯ್ಯುತ್ತಾ ಹೋಗಿ. ಗಾಂಧಿ ಜಯಂತಿ ಹತ್ತಿರವಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಗಾಂಧೀಜಿಯನ್ನು ಬಯ್ಯಲು ಶುರುಹಚ್ಚಿಕೊಳ್ಳಿ. ಬೈಯಲ್ಲು ಬೇಕಾದ ವಿಷಯದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದು ಬೇಡ ನಿಮಗಿಂತ ಮೊದಲು ಇದೇ ಸೂತ್ರವನ್ನು ಬಳಸಿಕೊಂಡು ದೊಡ್ಡವರಾದರು ಸಾಕಷ್ಟು ಪರಿಶ್ರಮ ಪಟ್ಟು ಮಾಹಿತಿ ಕಲೆ ಹಾಕಿರುತ್ತಾರೆ. ಕೆಲವರು ಕೆಲಸಕ್ಕಾಗಿ ಸಮಾನ ಮನಸ್ಕರ ಸಂಘಟನೆಯನ್ನೇ ಮಾಡಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಿರುತ್ತಾರೆ. ಗಾಂಧೀಜಿಯ ಮಗನನ್ನೇ ಸರಿಯಾಗಿ ನೋಡಿಕೊಳ್ಳಲಿಲ್ಲ, ಮಗನಿಗೇ ಸರಿಯಾದ ಪಿತಾ ಆಗಲಿಲ್ಲ ಇನ್ನು ರಾಷ್ಟ್ರಪಿತಾ ಹೇಗಾದಾರು? ಗಾಂಧೀಜಿ ಬ್ರಹ್ಮಚರ್ಯ ಪರೀಕ್ಷೆಗೆ ಕೈಗೊಂಡ ಪ್ರಯೋಗ ಸಾಧುವೇ? ಅಹಿಂಸೆಯನ್ನು ಬೋಧಿಸಿದ್ದು ಯಾರಿಗೆ? ಹಿಂಸೆ ಮಾಡಿದವರನ್ನು ಹೊಗಳಿದ್ದು ಯಾಕೆ? ಗಾಂಧೀಜಿಗಿದ್ದ ಅಫೇರು ಎಂಥದ್ದು? ಹೀಗೆ ಪ್ರಶ್ನೆಗಳ ಬಾಣಗಳನ್ನು ಪುಂಖಾನುಪುಂಕವಾಗಿ ಒಗೆಯುತ್ತ ಬನ್ನಿ. ಇಂಥ ಪ್ರಶ್ನೆಗಳು ನಿಮಗೆ ಸುಲಭವಾಗಿ ಯಥೇಚ್ಚವಾಗಿ ಅಂತರ್ಜಾಲದಲ್ಲಿ ಸಿಕ್ಕುತ್ತವೆ. ಬೈಗುಳವನ್ನು ಪರಿಣಾಮಕಾರಿಯಾಗಿ ಮಾಡುವ ವಿಧಾನ ಎಂದರೆ ಈಗ ಬದುಕಿಲ್ಲದ ಹಿರಿಯರ ಬಗ್ಗೆ ಅವಹೇಳನಕಾರಿ ಪ್ರಶ್ನೆಗಳನ್ನು ಒಗೆಯಿರಿ. ತಾಕತ್ತಿದ್ದರು ನಮ್ಮ ಆರೋಪ ಸುಳ್ಳು ಎಂದು ಸಾಬೀತು ಪಡಿಸಲಿ ಎನ್ನಿ. ಎಷ್ಟೇ ಪುನರ್ಜನ್ಮ, ಮರುಜನ್ಮ ಎಂದರೂ ಸತ್ತವರು ಎದ್ದು ಬಂದು ತಮ್ಮ ಕ್ಯಾರಕ್ಟರ್ ಸರ್ಟಿಫಿಕೇಟಿನ ಜೆರಾಕ್ಸ್ ಕಾಪಿಯನ್ನು ನಿಮಗೆ ಕಳುಹಿಸಲಾಗದು!


ದೊಡ್ಡದಾಗಿ ಹೆಸರು ಮಾಡಿದ ಯಾರನ್ನೂ ಬಿಡಬೇಡಿ, ಎಲ್ಲರನ್ನೂ ಬೀದಿಗೆ ಎಳೆದುತಂದು ದೊಡ್ಡದಾಗಿ ನಿಂದನೆ ಮಾಡಿ. ಮರ್ಮಾಘಾತವಾಗುವಂತಹ ಬೌನ್ಸರ್‌ಗಳನ್ನೇ ಎಸೆಯಿರಿ. ಮೂರು ವಿಕೆಟುಗಳು ಎಗರಿ ಹೋಗುವ ಹಾಗೆ ಯಾರ್ಕರ್ ಹಾಕಿ. ಬಸವಣ್ಣನವರ ತಾಯಿಯ ಬಗ್ಗೆ ಶಂಕೆ ವ್ಯಕ್ತಪಡಿಸಿಸುಭಾಷ್ ಚಂದ್ರಬೋಸ್‌ರ ದೇಶಪ್ರೇಮವನ್ನೇ ಶಂಕಿಸಿಅಮೀರ್ ಖಾನ್‌ನನ್ನು ನಂಗಾಗೊಳಿಸಿಮೇಧಾ ಪಾಟ್ಕರ್‌ರನ್ನು ಬಾಯಿಗೆ ಬಂದ ಹಾಗೆ ಬೈದು ಬಿಡಿ, ಸಾವರ್ಕರರು ಹೋಮೊ ಎಂದು ಕಲ್ಲು ಬೀರು ಬಿಡಿ, ರಾಜ್ ಕುಮಾರ್ ಏನೇನೆಲ್ಲಾ’ ಮಾಡಿದ್ದರು ಎಂದು ಬಾಂಬು ಎಸೆದುಬಿಡಿ, ಮಠದ ಸ್ವಾಮಿಯನ್ನು ಮನಸ್ಸಿಗೆ ಬಂದ ಹಾಗೆ ಕಿಂಡಲ್ ಮಾಡಿಬಿಡಿ, ಕಾದಂಬರಿಕಾರನನ್ನು ಡಿಬೇಟರ್ ಎನ್ನಿ, ಸಂಗೀತಗಾರನನ್ನು ಶ್ರೇಷ್ಠ ಭಾಷಣಕಾರ ಎನ್ನಿ, ಪತ್ರಿಕೆಯ ಸಂಪಾದಕನನ್ನು ಪ್ರಾಮಾಣಿಕ ರಾಜಕೀಯ ಕಾರ್ಯಕರ್ತ ಎನ್ನಿ, ಅಂಕಣಕಾರನನ್ನು ಅಮೇರಿಕಾದ ಏಜೆಂಟ್ ಎನ್ನಿ, ತಾಯಿಯಂತಹ ತೆರೆಸಾರನ್ನೂ ಬಿಡಬೇಡಿ ಬೀದಿಗೆ ಎಳೆದು ಬಿಸಾಕಿ. ಕಂಡ ಕಂಡ ದೊಡ್ಡವರನ್ನೆಲ್ಲಾ ಬೈಯ್ಯತೊಡಗಿ ಅನಾಯಾಸವಾಗಿ ನೀವು ದೊಡ್ಡವರಾಗುತ್ತೀರಿ. ಹೀಗೆ ದೊಡ್ಡವರಾಗುವಾಗ ಕೆಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ತುಂಬಾ ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸರಕಾರದ, ಪೊಲೀಸರ ಕಣ್ಣನ್ನೂ ಕೆಂಪಗಾಗಿಸಬೇಕಾಗುತ್ತದೆ. ಆದರೆ ಇದರಿಂದ ಧೃತಿಗೆಡಬೇಡಿ, ಸಾಧನೆಯ ಹಾದಿಯಲ್ಲಿ ರಿಸ್ಕುಗಳೆಲ್ಲಾ ಸಾಮಾನ್ಯ. ಎಂತಹ ಸಂಕಟದ ಸಂದರ್ಭದಲ್ಲೂ ಒಂದನ್ನು ನೆನಪಿಡಿ, ಎಷ್ಟೇ ಜನರು ನಿಮ್ಮ ವಿರುದ್ಧ ತಿರುಗಿ ಬಿದ್ದರೂ, ಬೆದರಿಕೆ ಹಾಕಿದರೂ ನಿಮ್ಮ ಹಾಗೆ ದೊಡ್ದವರಾದವರ ಹಿಂಡು ಸದಾ ನಿಮ್ಮ ಬೆನ್ನ ಹಿಂದಿರುತ್ತದೆ. ಧೈರ್ಯವಾಗಿ ಮುನ್ನುಗ್ಗಿ


ನಿಮಗೆ ಯಶಸ್ಸಿನ ಸೂತ್ರದ ಬಗ್ಗೆ ಸಂಶಯವಿದೆಯೇ? ನಿಮ್ಮ ಸಂಶಯವನ್ನು ಕ್ಷಣಮಾತ್ರದಲ್ಲಿ ಪರಿಹರಿಸಿಕೊಳ್ಳಬಹುದು. ಸಾಮ್ರಾಟರು ವರದಿಯಲ್ಲಿ ತಮಗಿಂತ ದೊಡ್ಡವರು ಹಾಗೂ ಹಿರಿಯರನ್ನೆಲ್ಲಾ ಮನಸಾರೆ ಆಡಿಕೊಂಡಿದ್ದಾರೆ. ನೋಡುತ್ತಿರಿ, ಕೆಲವೇ ದಿನಗಳಲ್ಲಿ ವರದಿ ವಿಪರೀತ ಕೋಲಾಹಲ ಉಂಟು ಮಾಡಿ ಸಾಮ್ರಾಟರು ಅನಾಯಾಸವಾಗಿ ದೊಡ್ಡವರಾಗಿಬಿಡುತ್ತಾರೆ. ಒಂದು ವೇಳೆ ಸಾಮ್ರಾಟರು ದೊಡ್ಡವರಾಗದಿದ್ದರೆ ಅವರು ಬೈದವರು ಯಾರೂ ದೊಡ್ಡವರಲ್ಲ ಎಂಬ ತೀರ್ಮಾನಕ್ಕೆ ಬರಲು ಅಡ್ಡಿಯಿಲ್ಲ!


[ ಸಾಮ್ರಾಟರ ಪ್ರತಿ ಬರಹದ ಮೊದಲ ಹಾಗೂ ಕಡೆಯ ಓದುಗನಾದ ಅವರ ಚೇಲ ಕುಚೇಲ ವರದಿಯನ್ನು ಓದಿ ಬಹು ಪ್ರಭಾವಿತನಾಗಿದ್ದಾನೆ. ತಾನೂ ದೊಡ್ಡವ, ಬಹುದೊಡ್ಡವನಾಗಬೇಕು ಎಂದು ಕನಸು ಕಾಣತೊಡಗಿದ್ದಾನೆ. ಜಗತ್ತಿನಲ್ಲಿ ಎಲ್ಲರಿಗಿಂತ ದೊಡ್ಡವ ಭಗವಂತ. ಆತನಷ್ಟೇ ದೊಡ್ಡವನಾಗಬೇಕು ಎಂದು ತೀರ್ಮಾನಿಸಿ ದೇವರನ್ನೇ ಬೈಯ್ಯಲು ಸಿದ್ಧತೆ ಶುರುಮಾಡಿಕೊಂಡಿದ್ದಾನೆ! ಶೀಘ್ರದಲ್ಲಿ ಆತನ ಸಮಗ್ರ ಸಂಶೋಧನೆಯ ದೇವರು? ಯಾರವರು?’ ಲೇಖನಮಾಲೆ ನಗೆ ನಗಾರಿಯಲ್ಲಿ ಎಕ್ಸ್‌ಕ್ಲೂಸೀವ್ ಆಗಿ ಪ್ರಕಟವಾಗಲಿದೆ! ]

ಚರ್ಚೆ: ನಗದ ಜೀವಿ= ಬುದ್ಧಿ ಜೀವಿ?!

18 ಜುಲೈ

ಸಂಪಾದಕರು ಎಂದೊಡನೆಯೇ ಒಂದು ಚಿತ್ರಣ ನಮ್ಮೆದುರು ಬರುತ್ತದೆ. ಜೋಲು ಮುಖ ಹಾಕಿಕೊಂಡು ಕಣ್ಣುಗಳಲ್ಲಿ ಗಾಢ ಆಲೋಚನೆಯನ್ನು ನಟಿಸುತ್ತಾ ಸಿಗರೇಟನ್ನು ಸುಡುತ್ತಾ ಗಡ್ಡ ನೀವಿಕೊಳ್ಳುವ ವ್ಯಕ್ತಿ ಕಾಣುತ್ತಾನೆ. ಆತನಿಗೆ ಹಾಸ್ಯ, ನಗು ನಿಷಿದ್ಧ ಎಂಬುದು ಅಲಿಖಿತ ಶಾಸನವಾಗಿರುತ್ತದೆ. ಸಂಪಾದಕರುಗಳು, ಅದರಲ್ಲೂ ಬಹುದೊಡ್ಡ ದಿನಪತ್ರಿಕೆಯ ಸಂಪಾದಕರು ಕೇವಲ ‘ಬುದ್ಧಿ’ ಇಲ್ಲವೆ ‘ಸುದ್ದಿ’ ಜೀವಿಯಾಗಿರಬೇಕು ಎಂಬ ಅಭಿಪ್ರಾಯ ಜನಮಾನಸದಲ್ಲಿ ನೆಲೆ ನಿಂತಿದೆ. ಆತ ಹಾಸ್ಯ ಜೀವಿಯೂ, ರಸಿಕ ಜೀವಿಯೂ ಆಗಿರಬಹುದು ಎಂಬ ಸಾಧ್ಯತೆಯೇ ನಮ್ಮಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಗಂಭೀರವಲ್ಲದ ವ್ಯಕ್ತಿ ಕೊಡುವ ಮಾಹಿತಿಗೆ ವಿಶ್ವಾಸಾರ್ಹತೆ ಇರುತ್ತದೆಯೋ ಎಂದು ನಾವು ಯೋಚಿಸುತ್ತೇವೆ. ಬಹುತೇಕ ದಿನ ಪತ್ರಿಕೆಗಳ ಸಂಪಾದಕರು ಸಹ ಹೀಗೇ ಇರುತ್ತಾರೆ. ಜನರೂ ಸಹ ಅವರನ್ನು ಹಾಗೇ ಕಾಣಲು ಇಷ್ಟ ಪಡುತ್ತಾರೆ.

ಆದರೆ ಅಲ್ಲಲ್ಲಿ ಕೆಲವು ಅಪವಾದಗಳು ಬೆಟ್ಟದ ಹಾಗೆ ಬೆಳೆದು ನಿಂತು ಅಚ್ಚರಿಯನ್ನು ಉಂಟು ಮಾಡುತ್ತವೆ. ಕನ್ನಡ ಪ್ರಭಾದ ಸಂಪಾದಕರಾಗಿದ್ದ ವೈ.ಎನ್.ಕೆ ‘ಘಾ’ ಎಂದು ಹೂಂಕರಿಸುತ್ತಿದ್ದುದನ್ನು ನೆನೆಸಿಕೊಂಡರೆ ಸಂಪಾದಕ ಹೀಗೂ ಇರಬಹುದಾ ಎಂದು ಆಶ್ಚರ್ಯವಾಗುತ್ತದೆ. ನಮ್ಮ ನಡುವೆ ಇರುವ ಮತ್ತೊಬ್ಬ ಸಂಪಾದಕ ಸಹ ಇಂಥದ್ದೇ ಅಚ್ಚರಿಯನ್ನು ನಮ್ಮಲ್ಲಿ ಹುಟ್ಟಿಸುತ್ತಾರೆ. ಅವರು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ರು. ಸಂಪಾದಕರ ಅಂಕಣದ ತುಂಬಾ ಜೋಕುಗಳು ತುಂಬಿರಬಹುದು ಎಂದು ಕನಸಿನಲ್ಲೂ ನಾವು ಯೋಚಿಸಲು ಸಾಧ್ಯವಾಗದು. ಅಂಥ ಶಾಕ್ ಕೊಟ್ಟವರು ಭಟ್ಟರು. ಭಾನುವಾರದ ಕಾಲಮ್ಮಿನಲ್ಲೂ ಓದುಗರು ಕಳುಹಿಸಿದ ಜೋಕುಗಳನ್ನು ಹಾಕಿಕೊಂಡು ಕುಶ್ವಂತ್ ಸಿಂಗ್ ಸಂಪ್ರದಾಯ ಪಾಲಿಸುತ್ತಿರುವ ಭಟ್ಟರ ಹಾಗೂ ಅವರ ಪತ್ರಿಕೆಯ ವಿಶ್ವಾಸಾರ್ಹತೆಯ ಮೇಲೆ ಯಾರಿಗೂ ಸಂಶಯವಿಲ್ಲ.

ಹಾಗಾದರೆ ಬುದ್ಧಿ ಜೀವಿಯಾಗುವುದಕ್ಕೂ, ನಗದಿರುವುದಕ್ಕೂ (‘ನಗದು’ ಇಲ್ಲದಿರುವುದು ಎಂದು ಅರ್ಥೈಸಿಕೊಂಡರೆ ನಾವು ಜವಾಬ್ದಾರರಲ್ಲ) ಸಂಬಂಧವಿದೆಯೇ? ಜ್ಞಾನದ ಭಾರ ತಲೆಯಲ್ಲಿ ಹೆಚ್ಚಾದಷ್ಟೂ ನಗು ಮುಖದಲ್ಲಿ ಹೂತು ಹೋಗುತ್ತದೆಯೇ?