Tag Archives: ನಗೆ ನಗಾರಿ ಡಾಟ್ ಕಾಮ್

ಡುಂ ಡುಂ ಡುಂ ಡುಂ ಡುಂ !

16 ಫೆಬ್ರ

ಪ್ರಜಾ ದರ್ಬಾರ್ 3

 

ತಮ್ಮ ಪತ್ರಿಕೆ, ಬ್ಲಾಗುಗಳ ಹುಟ್ಟು ಹಬ್ಬದ ದಿನ ಅವುಗಳ ಸಂಪಾದಕರು, ಮಾಲೀಕರು ಕಂಡಕಂಡವರಿಂದ ಅಭಿನಂದನೆಗಳನ್ನು ಬೇಡಿ ಪಡೆಯುತ್ತವೆ. ಬ್ಲಾಗನ್ನು ಎಂದೂ ಓದದ ದೊಡ್ಡವರಿಂದ ವಿಮರ್ಶೆಗಳನ್ನು ಸಂಪಾದಿಸಿ ಪ್ರಕಟಿಸುತ್ತವೆ. ನಗೆ ನಗಾರಿ ಡಾಟ್ ಕಾಮ್‌ಗೆ ಎರಡು ವರ್ಷ ತುಂಬಿದ ಸಂತಸದ ಸಂರ್ಭದಲ್ಲಿ ನಾವು ಅದೇ ಸಂಪ್ರದಾಯ ಪಾಲಿಸಲು ಇಚ್ಛಿಸುವುದಿಲ್ಲ.

ನಮ್ಮ ಬ್ಲಾಗಿನ ನಿಯಮಿತ ಓದುಗರಾದ, ಸತ್ರ್ಪಜೆಗಳಾದ ಮಂದಿಯಿಂದ ಅವರ ಪ್ರಾಮಾಣಿಕ ಅನಿಸಿಕೆಯನ್ನ ಕೇಳಿದ್ದೇವೆ. ಅದನ್ನು ಚೂರೂ ಕತ್ತರಿಸದೆ ಪ್ರಕಟಿಸುತ್ತೇವೆ. ನಗೆ ನಗಾರಿ ಡಾಟ್ ಕಾಮ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ನೇರವಾಗಿ ಕಳಿಸಬಹುದು (nagesamrat [at] gmail.com)

– ನಗೆ ಸಾಮ್ರಾಟ್

ಎರಡು ವರ್ಷದ ಹಿಂದೆ ಊಂ … ಎಂದು ಅಳುತ್ತಿದ್ದ ನಗಾರಿಯು ಇಂದು ಎರಡು ವರ್ಷದ ಪೋರನಾಗಿ ಹಾಸ್ಯ ಡಿಂಡಿಮವ ಬಾರಿಸುತ್ತಿದೆ .

ನಗೆ ಸಾಮ್ರಾಜ್ಯದ ರಾಜರ ಅಸ್ತಿತ್ವ – ಗುರುತು ಪರಿಚಯಗಳಿಲ್ಲದೆ ಇದ್ದರೂ ಎಲ್ಲರೂ ಆ ಹಾಸ್ಯ ನಗಾರಿಯ ಶಬ್ದಕ್ಕೆ ಕಾಯುತ್ತಿರುವಂತೆ ಮಾಡಿದ್ದು ಸತ್ಯ .

ಸ್ವಲ್ಪ ಸಿಹಿ , ಸ್ವಲ್ಪ ಕಹಿ , ಸ್ನೇಹಿತರ ಪ್ರಶಂಸೆ , ಕೆಲವರ ಕುಹಕ / ವ್ಯಂಗ್ಯ  ಎಲ್ಲವನ್ನು ಜೀರ್ಣಿಸಿಕೊಂಡು ಇಷ್ಟು ದೊಡ್ದವನಾಗಿರುವ ಈ "ಜೋಕುಮಾರ "   ನಗುತ್ತ ನಗಿಸುತ್ತಾ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ

– ಸುಮಂತ ಶ್ಯಾನುಭಾಗ್ ವಿ .

ಬ್ಲ್ಯಾಕ್ ಮೇಲು!

15 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

f1

 

ಈಕೆ ಕೂದಲು ಉಳೀಬೇಕಂದ್ರೆ ನಮ್ಮ ಬೇಡಿಕೆ ಈಡೇರಿಸಿ!

ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು…

2 ಜನ

ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ sataapakeeya ಅನುಭವದ ಬುತ್ತಿ ನೆರವಿಗೆ ಬರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ನಗೆ ನಗಾರಿ ಹುಟ್ಟಿ ಎರಡು ವರ್ಷಗಳು ಪೂರೈಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ನಮ್ಮ ಆಪ್ತ ಚೇಲ ಕುಚೇಲ ನಮ್ಮ ಬಳಿ ತಂದಾಗ ನಾವು ಬಹಿರ್ದೆಶೆಯ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಕುಚೇಲ ತಂದ ಸುದ್ದಿ ಸರ್ಕಾರಿ ಹೂಡಿಕೆ ಹಿಂತೆಗೆತದಂತಹ ಪರಿಣಾಮವನ್ನು ನಮ್ಮ ಪುಣ್ಯದ ಕಾರ್ಯದ ಮೇಲೆ ಉಂಟುಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದುಕೊಂಡು ನಾವು ಫ್ಲಶ್ ಮಾಡಿ ಹೊರಬಂದೆವು.

ಎರಡು ವರ್ಷಗಳ ಅವಧಿ ಸಾಮಾನ್ಯವಾದದ್ದಲ್ಲ. ಹತ್ತು ಹದಿನೈದು ನಿಮಿಷಕ್ಕೊಂದು ಶಿಶುವು ಸಾವನ್ನಪ್ಪುವ ಈ ಜಗತ್ತಿನಲ್ಲಿ ಇಷ್ಟು ಅವಧಿಯವರೆಗೆ ಬದುಕಿ ಉಳಿದಿರುವುದೇ ಅಸಾಮಾನ್ಯ ಸಾಧನೆ. ಹೀಗಿರುವಾಗ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ಗತಕಾಲದ ಇತಿಹಾಸವನ್ನು ಕೆದಕುತ್ತ ಕೂರದಿರಲು ಸಾಧ್ಯವೇ?

ನಮ್ಮ ಏಕಮೇಜು, ಏಕ ಕುರ್ಚಿ ಕೋಣೆಯಲ್ಲಿ ಕುಚೇಲ, ನಮ್ಮ ಆಲ್ಟರ್ ಈಗೋ, ತೊಣಚಪ್ಪ, ಸ್ವಾಮಿ ಅಧ್ಯಾತ್ಮಾನಂದರನ್ನು ಕಲೆ ಹಾಕಿ ನಾವು ಚರ್ಚೆಯನ್ನು ಪ್ರಾರಂಭಿಸಿದೆವು. “ನಾವು ಇದುವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಪರಿಶೀಲಿಸಿ ಮುಂದೆ ನಡೆಯುವ ಸಮಯವಿದು. ಹೀಗೆ ಪರಿಶೀಲಿಸುವುದರಿಂದ ಮುಂದಿನ ಹಾದಿಯು ಸುಗಮವಾಗುವುದೆಂಬ ವಿಶ್ವಾಸವಿಲ್ಲವಾದರೂ ಹಾದಿಯಲ್ಲಿ ಸಿಕ್ಕಬಹುದಾದ ಶಾರ್ಟ್ ಕಟ್ಟುಗಳ ಬಗ್ಗೆ ಎಚ್ಚರವಹಿಸಬಹುದು.”

ನಮ್ಮ ಕಛೇರಿಯ ಹೈರಾರ್ಖಿಯನ್ನು ಮುರಿದು ಸ್ವಾಮಿ ಅಧ್ಯಾತ್ಮಾನಂದರು ಮಾತಾಡತೊಡಗಿದರು. “ನಗೆ ನಗಾರಿ ಹತ್ತಿರತ್ತಿರ ಎರಡು ವರ್ಷಗಳ ಕಾಲ ಬಡಿದುಕೊಳ್ಳುತ್ತಿದ್ದರೂ ಜನರಿಗೆ ಬೇಕಿರುವುದೇನು ಎಂಬುದು ನಮ್ಮ ಸಾಮ್ರಾಟರಿಗೆ ಅರಿವಾಗಲಿಲ್ಲ. ದಿನದ ರೊಟ್ಟಿಯನ್ನು, ರುಚಿಕಟ್ಟಾದ ಚಟ್ನಿ ಪುಡಿಯನ್ನು ಜೊತೆಗೆ ಕೆನೆ ಮೊಸರನ್ನು, ಊಟದ ಕಷ್ಟ ನಿವಾರಿಸುವುದಕ್ಕಾಗಿ ಹೊಚ್ಚಹೊಸ ಹಿಂದಿ ಸಿನೆಮಾದ ಪೈರೇಟೆಡ್ ಸಿಡಿಯನ್ನು ಸಂಪಾದಿಸುವುದರಲ್ಲೇ ಹೈರಾಣಾಗಿ ಹೋಗುವ ಪ್ರಜೆಗಳ ಅಪೇಕ್ಷೆಯೇನು ಅದು ಅರಿಯದೆಯೇ ಅವರ ಗಂಟಲೊಳಗೆ ಹಾಸ್ಯರಸವನ್ನು ತುರುಕುತ್ತಿದ್ದಾರೆ ಸಾಮ್ರಾಟರು ಎಂಬುದು ನಮ್ಮ ಅಭಿಪ್ರಾಯ.”

ಹೈರಾರ್ಖಿ ಮುರಿದ ಸಿಟ್ಟಿನ ಭರದಲ್ಲಿ ತೊಣಚಪ್ಪ ಅಬ್ಬರಿಸಿದರು, “ಸ್ವಾಮ್ಗಳು ಪ್ರವಚ್ನ ಬುಟ್ಟು ವಿಸ್ಯ ಏನಂತ ಒದರಬೇಕು.”

ಹೆಸರಿನಲ್ಲಿದ್ದ ಆಧ್ಯಾತ್ಮವನ್ನು ನೆನೆಸಿಕೊಂಡು ಕೋಪ ಹತ್ತಿಕ್ಕಿಕೊಂಡ ಅಧ್ಯಾತ್ಮಾನಂದರು ಮುಂದುವರೆದರು, “ ನಗಾರಿ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಜನಪ್ರಿಯವಾದ ವರದಿ ಯಾವುದು ಎಂದು ಅವಲೋಕಿಸಿದರೆ ನಾವು ಹೇಳಲು ಹೊರಟಿದ್ದೇನು ಎಂಬುದು ವೇದ್ಯವಾಗುತ್ತೆ.”

ಸ್ವಾಮಿಗಳ ವಾಕ್ಯ ಪೂರ್ಣಗೊಂಡು ಫುಲ್ ಸ್ಟಾಪ್ ಬೀಳುವ ಮೊದಲೇ ಕುಚೇಲ ವರದಿಯನ್ನು ತಂದಿರಿಸಿದ. ನಾವು ಅತಳ-ಸುತಳ-ಪಾತಾಳಗಳನ್ನು ಬೇಧಿಸಿ, ಗವಿ ಗುಡಾರಗಳನ್ನು ಸ್ಪೋಟಿಸಿ ಮಾಡಿದ ಯಾವ ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ ಬಂದಿತು.

ಆ ವರದಿಗೆ ಬಂದ ಪ್ರಜೆಗಳ ಪ್ರತಿಕ್ರಿಯೆಗಳ ಮಹಾಪೂರ ಕೋಣೆಯೊಳಗಿದ್ದ ಎಲ್ಲರನ್ನೂ ದಿಗ್ಮೂಢರನ್ನಾಗಿಸಿತು- ಅಧ್ಯಾತ್ಮಾನಂದರ ಹೊರತು. “ಜನರು ತಮ್ಮ ಭವಿಷ್ಯತ್ತಿನ ಬಗ್ಗೆ, ಮುಂದಾಗಲಿರುವ ಘಟನೆಗಳ ಬಗ್ಗೆ ಈ ಮಟ್ಟಿಗೆ ವ್ಯಾಕುಲರಾಗಿರುವಾಗ ಸಾಮ್ರಾಟರು ಹೀಗೆ ಇತಿಹಾಸವನ್ನು, ವರ್ತಮಾನ ಪತ್ರಿಕೆಗಳನ್ನು ಅರೆದು ನಗೆ ಗುಳಿಗೆ ತಯಾರಿಸುವುದರಲ್ಲಿ ಮಗ್ನರಾಗುವುದು ಸಮಂಜಸವಲ್ಲ.”

ಮರದಿಂದ ಉದುರಿದ ಸೇಬು ನ್ಯೂಟನ್ನಿನನಿಗೆ ಗುರುತ್ವಾಕರ್ಷಣೆಯನ್ನು ಕಾಣಿಸಿದ ಹಾಗೆ ಸ್ವಾಮಿಗಳ ಪ್ರವಚನ ಕೇಳಿ ತೂಕಡಿಸುತ್ತಿದ್ದ ನಮ್ಮ ಆಲ್ಟರ್ ಈಗೋನ ಎಂಜಲು ನಮ್ಮ ನಿದ್ದೆಯನ್ನು ಕೆಡಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ನಾವು ಸೀದಾ ಖೋಡಿ ಹಳ್ಳಿ ಸ್ವಾಮೀಜಿಯ ಪಾದಕ್ಕೆರಗಿದೆವು. ಸ್ವಾಮಿಗಳು ಕೈಲಿದ್ದ ಬ್ಲ್ಯಾಕ್ ಬೆರ್ರಿಯನ್ನು ಬದಿಗಿಟ್ಟು ನೆತ್ತಿ ಮುಟ್ಟಿದೊಡನೆಯೇ ಮಿದುಳಲ್ಲಿ ಮಿಂಚಿನ ಸಂಚಾರವಾಯಿತು. ಪ್ರಳಯಕಾಲದ ಸಿಡಿಲು ಸ್ಪೋಟಿಸಿ ಅದರ ಸದ್ದು ಖಾಲಿ ಬುರುಡೆಯೊಳಗೆ ಮಾರ್ದನಿಸಿತು. ಇನ್ನು ದೇಹದಲ್ಲಿರುವ ಪ್ರತಿ ಕೋಶವನ್ನೂ, ಭಗವಂತ ನೀಡಿರುವ ಪ್ರತಿ ಕ್ಷಣವನ್ನೂ ಜನಸಾಗರದ ಭವಿಷ್ಯವನ್ನು ಸುಭದ್ರಗೊಳಿಸುವ ಕಾಯಕಕ್ಕೆ ವಿನಿಯೋಗಿಸಬೇಕು ಎಂದು ತೀರ್ಮಾನಿಸಿದೆವು. ಕೂಡಲೇ ಎಲ್.ಐ.ಸಿ ಕಛೇರಿ ಹೊಕ್ಕು ಅಲ್ಲಿಂದ ಹೊರದಬ್ಬಿಸಿಕೊಂಡೆವು.

ಹುಚ್ಚುಖೋಡಿ ಮಠದ ಪರಮಯೋಗ್ಯ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಜನರ ಭವಿಷ್ಯವನ್ನು ಕಾಣುವ ಸಿದ್ಧಿಯನ್ನು ಪಡೆದುಕೊಂಡೆವು. ಈ ದಿವ್ಯಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ ಹೇರಳವಾಗಿ ಧನ ದ್ರವ್ಯಾದಿಗಳನ್ನು ಅರ್ಪಿಸುವ ಟಿವಿ ಚಾನಲು, ಸಿನೆಮಾ ತಾರೆಯರು, ರಾಜಕಾರಣಿಗಳ ಸೇವೆಗೆ ಬಳಸು ಎಂಬ ದಿವ್ಯೋಪದೇಶದೊಂದಿಗೆ ಹಿಂದಿರುಗಿದೆವು.

ಚಿತ್ರ ವಿದೂಷಕ

1 ಜನ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

e3

ಮೂರು ವರ್ಷಕ್ಕೇ ಪ್ರಳಯವಾದ್ರೆ ನನ್ ಮೊಮ್ಮಕ್ಕಳನ್ನು ಕಾಣೋದು ಯಾವಾಗ?

‘ಚಿತ್ರಾ’ನ್ನ ಕಚಗುಳಿ!

16 ಡಿಸೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್:

d4

ಪಾಲಿಗೆ ಬಂದದ್ದು ಪಂಚಾಮೃತ..?

ತುಟಿಯರಳಿಸುವ ಕೆಮರಾ

26 ಸೆಪ್ಟೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

ಈ ಸಂಚಿಕೆ ಸ್ಯಾಂಪಲ್:

b5

ದೇವರನ್ನು ಕಾಣುವ ಸುಲಭ ಉಪಾಯ!

ನಗೆಚಿತ್ರ

5 ಆಗಸ್ಟ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ

ಈ ಸಂಚಿಕೆ ಸ್ಯಾಂಪಲ್:

ಹುಹ್! ಇನ್ನೆಷ್ಟು ಕಾಲ ಈ ಮನುಷ್ಯನನ್ನ ಸಹಿಸಬೇಕೋ…

ಚರ್ಚೆ: ಡರ್ಟಿ ಜೋಕೆಂಬ ಬೇಲಿ ಹಾರುವ ಹುಮ್ಮಸ್ಸು!

25 ಜುಲೈ

 

ಕೆಲವು ಬಗೆಯ ಜೋಕುಗಳಿವೆ. ಅವುಗಳು ಸಾಮಾನ್ಯ ಜೋಕುಗಳಿಗಿಂತ ಹೆಚ್ಚು ಚಲಾವಣೆಯಲ್ಲಿರುತ್ತವೆ. ಮೊಬೈಲುಗಳಲ್ಲಿ ಕ್ಷಣಮಾತ್ರದಲ್ಲಿ ಪ್ರತ್ಯಕ್ಷವಾಗಿ ಮೊಬೈಲಿಗ ಕಣ್ಣಾಡಿಸಿ ಆಸ್ವಾದಿಸಿ, ಅಲ್ಲಿಂದ ನಾಲ್ಕೈದು ವಿಳಾಸದಾರರಿಗೆ ರವಾನೆಯಾದೊಡನೆಯೇ ಪುರ್ರೆಂದು ಮೊಬೈಲ್ ಅಂಗಳದಿಂದ ಅಂತರಿಕ್ಷಕ್ಕೆ ಹಾರಿ ಬಿಡುತ್ತವೆ.

ಅವುಗಳಿಗೆ ಎಲ್ಲೆಡೆಯಲ್ಲೂ ಪ್ರವೇಶವಿಲ್ಲ. ಜೋಕುಗಳ ಸಮಾಜದಲ್ಲಿ ಅವು ಅಸೃಶ್ಯರಿದ್ದಂತೆ. ಅವುಗಳಲ್ಲಿ ಯಾರ ಮೇಲೂ ವೈಯಕ್ತಿಕ ನಂಜು ಕಾರಲಾಗಿರುವುದಿಲ್ಲ. ವ್ಯಕ್ತಿ ಕೇಂದ್ರಿತವಾದ ಹೀಯಾಳಿಕೆಯಿರುವುದಿಲ್ಲ. ಯಾರಿಗೂ ನೋವಾಗುವಂತಹ ಜನಾಂಗೀಯ ನಿಂದನೆಯಾಗಲಿ ಇರುವುದಿಲ್ಲ. ಆದರೂ ಅವುಗಳು ‘ಘೆಟ್ಟೋ’ಗಳಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿರುತ್ತವೆ.

ಅವುಗಳ ಗುಣಮಟ್ಟವನ್ನು ನಿರ್ಲಕ್ಷಿಸಲಾಗುವುದಿಲ್ಲ. ಜೋಕೊಂದರ ಸೃಷ್ಟಿಗೆ, ಅದರ ಉದ್ದೇಶ ಸಾರ್ಥಕವಾಗುವುದಕ್ಕೆ ಬೇಕಾಗುವ ಎಲ್ಲಾ ಬುದ್ಧಿವಂತಿಕೆ, ತಂತ್ರಗಾರಿಕೆ ಅದರಲ್ಲಿರುತ್ತದೆ. ಆದರೆ ಅವು ಗಳು ಮಾಮೂಲಿನ ಜೋಕುಗಳು ಪಡೆಯುವ ಗಾಳಿ ಬೆಳಕನ್ನು ಪಡೆದುಕೊಳ್ಳುವುದಿಲ್ಲ.

ಹೌದು, ಅವು ಪೋಲಿ ಜೋಕುಗಳು!

ಪೋಲಿ ಎಂಬ ಪದವನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ಒಂದು ಮಾನದಂಡದಲ್ಲಿ ಪೋಲಿಯಾಗಿ ಕಂಡ ಚಟುವಟಿಕೆ ಮಾನದಂಡ ಬದಲಾಯಿಸಿದಾಕ್ಷಣ ರಸಿಕತೆ ಎನ್ನಿಸಿಕೊಳ್ಳುತ್ತದೆ. ತನ್ನ ಮಗ ಮಾಡಿದರೆ ಅದು ರಸಿಕತೆ, ನಿನ್ನ ಮಗ ಮಾಡಿದರದು ವ್ಯಭಿಚಾರ ಎನ್ನುವ ಹಳೆಯ ಮಾತಿನಂತೆ ಮಾನದಂಡಗಳು ಬದಲಾಗುತ್ತವೆ.

ನಿಜಕ್ಕೂ ಪೋಲಿ ಜೋಕುಗಳಲ್ಲಿ ಇರುವುದು ಏನು? ಲೈಂಗಿಕತೆಯನ್ನು ವಿಜೃಂಭಿಸುವ, ಸುಪ್ತವಾಗಿರಿಸಿದ ಲೈಂಗಿಕ ವಾಸನೆಯನ್ನು ಕೆಣಕುವ ಗುಣ. ಕೆಲವು ಜೋಕುಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ, ಭೋಗದ ವಸ್ತುವಿನಂತೆ ಕಾಣುವ ಗುಣವೂ ಇರುತ್ತೆ. ಆದರೆ ನಮ್ಮ ಸಭ್ಯ ಸಮಾಜ ಅಂತಹ ಜೋಕುಗಳನ್ನು ನಿರ್ಬಂಧಿಸುವುದಕ್ಕೆ, ಅವುಗಳನ್ನು ಪೋಲಿ ಎಂದು ಕರೆಯುವುದಕ್ಕೆ ಹೆಣ್ಣಿನ ಗೌರವಕ್ಕೆ ಅವು ಉಂಟು ಮಾಡುವ ಧಕ್ಕೆಯೇ ಪ್ರಮುಖ ಕಾರಣವೇ? ಅಥವಾ ಎಲ್ಲಾ ಸಮಾಜಗಳಿಗೆ, ಎಲ್ಲಾ ಧರ್ಮಗಳಿಗೆ ಟಬೂ ಆಗಿರುವ ಲೈಂಗಿಕತೆಯ ಪ್ರಸ್ತಾಪವೇ ಅಸಾಧು ಎನ್ನುವುದೇ?

ನಗೆ ನಗಾರಿ ಮಾಸಪತ್ರಿಕೆ ಮಾರುಕಟೆಯಲ್ಲಿ!

1 ಏಪ್ರಿಲ್

 

ನಗೆ ನಗಾರಿಯ ಸಾಮ್ರಾಜ್ಯದ ಸಮಸ್ತ ಪ್ರಜೆಗಳಿಗೂ ಸಂತಸದ ಸುದ್ದಿ.

ನಗೆ ನಗಾರಿ ಡಾಟ್ ಕಾಮ್ ತನ್ನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲೇ ಈ ಸವಿ ಸುದ್ದಿಯನ್ನು ಹಂಚಿಕೊಳ್ಳಬೇಕಿತ್ತು. ಆದರೆ ಸಿದ್ಧತೆಯ ಕೊರತೆಯಿಂದ ಪ್ರಕಟಿಸಲು ಹಿಂದುಮುಂದು ನೋಡಿದೆವು. ಆದರೀಗ ಬಹುತೇಕ ನಿಶ್ಚಿತವಾಗಿದೆ. ‘ನಗೆ ನಗಾರಿ’ ಮಾಸಪತ್ರಿಕೆ ಇಂದಿನಿಂದ ನಿಮಗೆ ರಾಜ್ಯದ ಎಲ್ಲಾ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.

ನಗೆ ನಗಾರಿಯ ಬ್ಲಾಗಿನಲ್ಲಿನ ವೈವಿಧ್ಯಮಯ ಹಾಸ್ಯದ ಸರಕನ್ನು ಆನಂದಿಸಿದ ಪ್ರತಿಯೊಬ್ಬರಿಗೂ ಈ ಪತ್ರಿಕೆಯ ನಮ್ಮ ಪ್ರಯತ್ನ ಆವಶ್ಯಕವಾಗಿ ಸಂತೋಷ ನೀಡುತ್ತದೆ ಎಂಬ ನಂಬಿಕೆ ನಮ್ಮದು.

ಪ್ರಥಮ ಸಂಚಿಕೆಯ ವಿಶೇಷತೆಗಳು ಇಂತಿವೆ:

ಮುಖಪುಟ ಲೇಖನ – ಮುಂದಿನ ಪ್ರಧಾನಿ ಯಾರು? ನಗೆ ನಗಾರಿ ವಿಶೇಷ ಸಮೀಕ್ಷಾ ವರದಿ.

ಖ್ಯಾತ ಹಾಸ್ಯ ಕವಿ – ಹನಿಕವಿ ಮಿನಿಕವಿ – ಡುಂಡಿರಾಜರ ಅಂಕಣ

ಹೆಸರಾಂತ ನಿರ್ದೇಶಕ ರಮೇಶ್ ಅರವಿಂದ್ ಬರೆಯುವ ಅಂಕಣ

ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರ ಸಂದರ್ಶನ

ಕೋಕಿಲ ಸಾಧುರವರ ವಿಶೇಷ ಲೇಖನ

ವಿಜಯ ಕರ್ನಾಟಕದ ಉಪ ಸಂಪಾದಕರಾದ ಪ್ರತಾಪ್ ಸಿಂಹರ ಹಾಸ್ಯ ಲೇಖನ ಮಾಲೆ.

ಇನ್ನೂ ಇವೆ…

ಈ ಕೂಡಲೇ ನಿಮ್ಮ ಸಂಚಿಕೆಯನ್ನು ಕಾದಿರಿಸಿ. ಹತ್ತಿರದ ಪುಸ್ತಕದಂಗಡಿಗೆ ಭೇಟಿ ಕೊಡಿ.

ಇಲ್ಲವಾದರೆ ನಿಮ್ಮ ವಿಳಾಸವನ್ನು ತಿಳಿಸಿ ನಮಗೊಂದು (nagesamrat@gmail.com) ಮಿಂಚಂಚೆ ಹಾಕಿ.

ಅಮ್ಮ ಫೋನೂ- ಬೋಂಡಾ ಜಾಮೂನೂ!

31 ಜನ

“ಬೆಂಗಳೂರು ಹುಡುಗೀರಂದ್ರೆ, ತಮ್ಮ ತೂಕ, ತಮ್ಮ ಮೇಕಪ್, ಫ್ಯಾಶನ್ ಮ್ಯಾಗಸೀನ್, ಫಿಲ್ಮಿ ಗಾಸಿಪ್ಸ್ ಗಳಲ್ಲೇ ಕಳೆದು ಹೋಗಿರುವ, ಕನ್ನಡದ ಗಂಧವೇ ಗೊತ್ತಿಲ್ಲದವರಂತೆ ಇಂಗ್ಲಿಷನ್ನೇ ತಮ್ಮ ಮಾತೃ ಭಾಷೆಯನ್ನಾಗಿಸಿಕೊಂಡಿರುವವರು ಎಂಬ ಕಲ್ಪನೆ ದಟ್ಟವಾಗಿರುವಾಗ ಬರೆಯುವ ಸಾಹಸಕ್ಕೆ ಕೈ ಹಾಕಲು ತುಸು ಹಿಂಜರಿಕೆ ಆಗುತ್ತಿದೆ. ಆದರೂ ಇನ್ನು ಬರೆಯದೇ ಇರುವುದಕ್ಕಾಗುವುದಿಲ್ಲವೆನಿಸಿ ಬ್ಲಾಗಿಂಗ್ ಶುರುವಿಟ್ಟುಕೊಂಡಿದ್ದೇನೆ!” ಎಂದೆನ್ನುತ್ತಾ ಹೇಮಾಂತರಂಗ ಬ್ಲಾಗು ತೆರೆದಿರುವ ಮಿಸ್ ಹೇಮಾ ಪವಾರ್ “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ. ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ ಒಡಲಲಿ ತುಂಬುತ್ತಿರುವೆ. ನನ್ನಂತರಂಗಕ್ಕೆ ನಿಮೆಗೆಲ್ಲರಿಗೂ ಸ್ವಾಗತ.” ಎಂದು ಗಾಬರಿ ಪಡಿಸುತ್ತಾರೆ.

ಅವರ ಇತ್ತೀಚಿನ ಬರಹವನ್ನು ಸಾಮ್ರಾಟರು ಇಲ್ಲಿ ಪ್ರಕಟಿಸಲು ಸಂತೋಷ ಪಡುತ್ತಾರೆ.

ಆಫೀಸಿಗೆ ಹೊರಡುತ್ತಿದ್ದವಳು, ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ, ಇತ್ತು ಅವತ್ತು ವಿಶೇಷವಿತ್ತು, ‘ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ, ಆಫೀಸಿಗೋಗ್ತಾಳೆ! ಕಾಲೇಜಿಗೆ ಹೋಗ್ತಾಳೇ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು!’ ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು. ಆಹಾ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು, ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ! (ಅದು ತಿಂಗಳಲ್ಲಿ ಒಂದು ಸಲ)? ಯೋಚಿಸುತ್ತಿದ್ದ ನನಗೆ, ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು.

‘ಹುಡುಗ ಸಾಫ್ಟ್ ವೇರ್ ಎಂಜಿನಿಯರ್ ಅಂತೆ ಕಣ್ರೀ, ಈ ಕಾಲದಲ್ಲಿ ಸ್ವಂತ ಮನೆ ಇಲ್ಲದೋರನ್ನ ಯಾರು ಒಪ್ಕೋತಾರೆ ಹೇಳಿ, ಆದ್ರೂ ಈ ಹುಡ್ಗ ವರದಕ್ಷಿಣೆಯೆಲ್ಲಾ ಬೇಡ ಚೆನ್ನಾಗಿ ಮದ್ವೆ ಮಾಡ್ಕೊಟ್ರೆ ಸಾಕು ಅಂತಾನಂತೆ’ ಅಮ್ಮ ಅಪ್ಪನ ಹತ್ರ ತುಂಬಾ ಖುಷಿಯಿಂದ ಹೇಳುತ್ತಿದ್ದರು.

‘ಇವಾಗ ಕಂಪನಿಗಳೆಲ್ಲ ಕೆಲಸದೋರನ್ನ ಮುಗಿದು ಹೋದ ಬಿಯರ್ ಬಾಟಲ್ ಗಳ ತರಹ ಹೊರಗೆ ಎಸೀತಿವೆ, ಸಾಫ್ಟ್ ವೇರ್ ಎಂಜಿನಿಯರ್ಸ್ ಎಲ್ಲ ಕೆಲಸ ಇಲ್ದೆ ಖಾಲಿ ಕೂತಿದಾರೆ, ಸುಮ್ನೆ ಸಂಬಳ ಜಾಸ್ತಿ ಅಂತ ಮದ್ವೆ ಮಾಡ್ಬಿಟ್ಟು ಆಮೇಲೆ ನಿನ್ನ ಮಗಳಿಗೂ ಅಳಿಯನಿಗೂ ನೀನೆ ಕೂರಿಸಿ ಊಟ ಹಾಕ್ಬೇಕು ಅಷ್ಟೇ!’ ಎಂದು ಅಕ್ಕ ನನ್ನ ಸಪೋರ್ಟಿಗೆ ನಿಂತಳು.
‘ಹೇ ಅದೆಲ್ಲ ನಂಗೂ ಗೊತ್ತು ಕಣೇ, ಬರೀ ಎಂಜಿನಿಯರ್ ಅಂತ ನಾನೂ ಮೊದಲು ಬೇಡ ಅಂದೆ, ಆದ್ರೆ ಕಮಲಮ್ಮ ಹೇಳಿದ್ರು (ಫೋನಲ್ಲಿ!!) ಹುಡುಗನ ಅಪ್ಪ ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದಾರಂತೆ ಅವ್ರು ಇರೋ ಮನೇನ ಬಿಟ್ಟು. (ಅವ್ರಿರೋದು ಕೊಟ್ಬಿಟ್ಟು ಅವ್ರೇನು ಫುಟ್ ಪಾತ್ ಮೇಲೆ ಇರ್ಬೇಕಿತ್ತ?). ನಾನೆಲ್ಲ ವಿಚಾರಿಸಿದೀನಿ, ನೀವ್ಯಾರು ಮಾತಾಡ್ಬೇಡಿ ಅವ್ರು ಭಾನುವಾರ ಬರ್ತೀದಾರೆ ಅಷ್ಟೇ!!’ ಅಮ್ಮ ತಮ್ಮದೇ ಕಡೆಯ ಮಾತೆಂಬಂತೆ ಹೇಳಿದರು.

ನೀರಲ್ಲಿ ಮುಳುಗುತ್ತಿರುವವನು ಹುಲ್ಲುಕಡ್ಡಿಯನ್ನೂ ಆಸರೆಗೆ ಹಿಡಿದಂತೆ, ದೀನ ಮುಖ ಮಾಡಿ ಅಪ್ಪನ ಕಡೆ ನೋಡಿದೆ, ಅಪ್ಪ ಅರ್ಥ ಮಾಡಿಕೊಂಡವರಂತೆ, ‘ಚಿಕ್ಕುಡುಗಿ ಈಗ್ಲೆ ಯಾಕೆ ಅವ್ಳಿಗೆ ಇದೆಲ್ಲ!’ ಅಂತ ಇನ್ನು ಶುರು ಮಾಡಿದ್ರು, "ನಿಮಗೆ ಇನ್ನು ಹತ್ತು ವರ್ಷ ಹೋದ್ರು ನಿಮ್ಮ ಮಗಳು ಚಿಕ್ಕೋಳೆ, ಮೂರು ಕತ್ತೆಗಾದಷ್ಟು ವಯಸ್ಸಾಗಿದೆ (ಛೆ ಕತ್ತೆಗಳ ಲೆಕ್ಕದಲ್ಲಿ ಅಳೆಯೋದೆ ನನ್ನ ವಯಸ್ಸನ್ನ! ಅವಮಾನ) ಒಂದು ಕೆಲಸ ಬರೋಲ್ಲ, ಕಾರ್ಯ ಬರೋಲ್ಲ, ಮೊನ್ನೆ ಹಾಲು ಕಾಯ್ಸೆ ಅಂದ್ರೆ, ಪಕ್ಕದಲ್ಲಿರೋ ಮೊಸರಿನ ತಪ್ಲೆ ಒಲೆ ಮೇಲಿಟ್ಟಿದಾಳೆ (ಎರಡೂ ಬೆಳ್ಳಗೇ ಇತ್ತು ಕಣ್ರೀ Sad ). ನೀವಿಷ್ಟು ಮುದ್ದು ಮಾಡದೇ ಇದ್ದಿದ್ರೆ ನಾನು ಅವ್ಳಿಗೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ (ಬೆಳಿಗ್ಗೆ ಹೊಗಳಿದ್ದು ಅಡ್ವರ್ಟೈಸ್ ಮೆಂಟು ಮಾತ್ರ ಅಂತ ನನಗೆ ಆಗ ತಿಳೀತು!!). ಈ ಹುಡುಗ ಗೊತ್ತಾಗ್ಲಿ ಎರಡು ಕೊಟ್ಟು ಎಲ್ಲ ಕಲಿಸ್ತೀನಿ, ಇಲ್ಲ ಅಂದ್ರೆ ಹೋದೋರ ಮನೇಲಿ ನಮ್ಮ ಮಾನ ಕಳೀತಾಳೇ. ಈಗ ಯಾರೂ ಮಾತಾಡ್ಬೇಡಿ ನಾನು ಅವ್ರೀಗೆ ಬರೋಕೆ ಹೇಳಿಯಾಗಿದೆ……!" (ಅಮ್ಮ ಇನ್ನು ಏನೇನೋ ನಾಮಾರ್ಚನೆ ಮಾಡುತ್ಲೇ ಇದ್ದರು ನಿಮಗೆ ಬೋರ್ ಆಗ್ಬಾರ್ದು ಅಥವಾ ನನ್ನ ಮರ್ಯಾದೆ ಉಳಿಸಿಕೊಳ್ಳಲು Eye-wink ಅದನ್ನ ಇಲ್ಲಿಗೆ ಎಡಿಟ್ ಮಾಡಿದೀನಿ).

ನಾನೇನು ಮಾಡಲಾರೆ ಮಗಳೇ ಎಂದು ಅಪ್ಪ ಕೈ ಚೆಲ್ಲಿದಂತೆ ನನ್ನ ನೋಡಿದರು. ಇವ್ರನ್ನೆಲ್ಲಾ ನಂಬಿದ್ರೆ ನನ್ನ ಕುತ್ತಿಗೆಗೆ ತರ್ತಾರೆ ಅಂತ ಅಮ್ಮನ ಜೊತೆ ನಾನೇ ಯುದ್ದಕ್ಕೆ ನಿಂತೆ. ‘ನೋಡಮ್ಮ ನಾನು ನಿಂಗಷ್ಟು ಭಾರ ಆದ್ರೆ (ಎಷ್ಟು ಅಂತ ಕೇಳ್ಲಿಲ್ಲ ಸಧ್ಯ), ಬೇರೆ ಊರಿಗೆ ಹೋಗಿ ಪಿ.ಜಿ.ಹೌಸ್ನಲ್ಲಿ ಇದ್ಕೋತೀನಿ, ನೀನು ಇಷ್ಟು ಬೇಗ ಮದ್ವೆ ಗಿದ್ವೆ ಅಂದ್ರೆ ನಾನು ಸುಮ್ನೆ ಇರೋಲ್ಲ ಅಷ್ಟೇ. ನಾನಿನ್ನು ಓದ್ಬೇಕು, ಸೆಟಲ್ ಆಗ್ಬೇಕು…..!’ ಹೀಗೆ ಒಂದು ಫಿಲ್ಮ್ ಡೈಲಾಗ್ ಒಗಾಯಿಸಿದೆ. ನಮ್ ಕನ್ನಡಾ ಫಿಲ್ಮ್ ಡೈಲಾಗ್ ಗಳು ಥೇಟರ್ನಲ್ಲೇ ಓಡೋಲ್ಲ ಇನ್ನ ಮನೇಲಿ ಓಡುತ್ವೆ? ಇಲ್ಲೂ ಫ್ಲಾಪ್ ಆಯ್ತು. ಅಮ್ಮ ಉಪವಾಸದ ಬೆದರಿಕೆ ಒಡ್ಡಿ ಹಾಗೂ ಹೀಗೂ ನನ್ನನ್ನ ಗಂಡು ನೋಡೋಕೆ ಒಪ್ಪಿಸಿಯೇ ಬಿಟ್ರು.

ಬಂದವರಿಗೆ ಫಿಲ್ಮ್ ನಲ್ಲಿ ಮಾಡ್ತಾರಲ್ಲ ಹಾಗೆ ಕಾಫೀಲಿ ಭೇಧಿ ಮಾತ್ರೆಗಳು ಹಾಕಿ ಕೊಟ್ಬಿಡ್ಲೇ ಅಂನ್ಕೊಂಡೆ, ಛೆ ಈ ಫಿಲ್ಮಿ ಐಡಿಯಾಗಳೂ ಉಪಯೋಗ ಆಗೋಕಿಂತ ಕೈ ಕೊಡೋದೆ ಜಾಸ್ತಿ ಅಂತ ಸುಮ್ಮನಾದೆ. ಇಷ್ಟೆಲ್ಲಾ ಹೇಳ್ತಿದೀನಿ ನಿಮಗೊಂದು ಸತ್ಯ ಹೇಳ್ದೆ ಇದ್ರೆ ಮೋಸವಾಗುತ್ತೆ ಕಣ್ರೀ, ಒಳೊಗೊಳೊಗೆ ನನಗೂ ಬರೋ ಗಂಡನ್ನ ಒಂದು ಸಾರಿ ನೋಡಬೇಕು ಅನ್ನಿಸ್ತಿತ್ತು. ಮದ್ವೆ ಆಗದಿದ್ರೂ ನೋಡೋದ್ರಲ್ಲಿ ಏನು ತಪ್ಪು ಹೇಳಿ, ಅದು ಮೊದಲ ಸಲ ಹೀಗೆ ನನ್ನನ್ನೂ (!?) ನೋಡೋಕೆ ಯಾರಾದ್ರೂ ಬರ್ತಿರೋದು (ಅಲ್ಲ ನಾನೇನು ಎಕ್ಸಿಭಿಶನ್ನಾ ಹಾಗೆ ಎಲ್ಲಾರು ಬಂದು ಬಂದು ನೋಡೋಕೆ) ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳದೆ, ಅದು ಹೇಗಿರ್ತಾನೋ ಒಂದು ಸಾರಿ ನೋಡಿಯೇ ತೀರೋಣ ಅಂತ ತೀರ್ಮಾನಿಸಿದೆ. ಫೋಟೋದಲ್ಲಂತು ಸುಮಾರಾಗಿದ್ದ, ತೆಗೆದು ಹಾಕೋಹಾಗೇನೂ ಇರ್ಲಿಲ್ಲ (ಎಲ್ಲಿಂದ ಅಂತ ಕೇಳ್ಬೇಡಿ ಮತ್ತೆ).

ಸರಿ ಆ ಹಾಳು ಭಾನುವಾರ ಬಂದೇ ಬಂತು, ಭಾನುವಾರವೆಂದ್ರೆ ಅಷ್ಟು ಖುಷಿಪಡ್ತಿದ್ದೋಳು ಈ ಸಲ ಇಷ್ಟು ಬೇಗ ಬಂತಲ್ಲ ಅಂತ ತಲೆ ಚಚ್ಕೋಳ್ತಿದ್ದೆ. ನನ್ನ ಸುಂದರ ಭಾನುವಾರದ ಖುಷಿಯನ್ನೆಲ್ಲ ಕೆಡೆಸಿದ ಆ ‘ಗಂಡಿಗೆ’ ಹಾಸಿಗೆಯಲ್ಲೇ ಹಿಡಿ ಶಾಪ ಹಾಕಿ ಎದ್ದು ತಯಾರಾದೆ. ಅಮ್ಮ ಆಗ್ಲೇ ಬೋಂಡಾ ಮತ್ತು ಜಾಮೂನ್ ರೆಡಿ ಮಾಡ್ತಿದ್ರು, ಆಹಾ ಅದರ ಸುವಾಸನೆ!! ಬಿಡಿ ಎಷ್ಟುದ್ದ ಬರೆದ್ರೂ ಸುಖವಿಲ್ಲ, ಅದನ್ನ ಅನುಭವಿಸಿಯೇ ತೀರಬೇಕು!! ಅವ್ರು ಬರ್ತಿರೋದಕ್ಕೆ ಆಗ್ತಿರೋ ಲಾಭ ಇದೊಂದೇ, ಎಂದುಕೊಂಡು ಬೋಂಡಾದ ತಟ್ಟೆಗೆ ಕೈ ಹಾಕಿದೆ. ಫಟ್ ಅಂತ ಕೈ ಮೇಲೆ ಒಂದು ಬಿಟ್ಟ ಅಮ್ಮ , ಅವ್ರು ಬಂದು ಹೋಗೋವರ್ಗೂ ಅದನ್ನ ಬಾಯಿಗಿಟ್ಟೆ ಕೈ ಮುರೀತೀನಿ ಅಂತ ಬೆದರಿಸಿದ್ರು. ‘ಅಮ್ಮೌ ಬರೋರಿಗೇನು ಮಡಿ ಬಟ್ಟೆ ಉಟ್ಟು ನೇವೇದ್ಯ ಮಾಡ್ತೀಯ? ಮೊದಲು ನನಗೆ ಕೊಡು, ಆಮೇಲೆ ಉಪ್ಪು ಖಾರ ಹೆಚ್ಚುಕಡಿಮೆ ಇದ್ರೆ ನಿನ್ನ ತಪ್ಪಿಂದ ನನ್ನ ಒಪ್ಪದೆ ಹೋದಾರು’ ಅಂತ ಅಮ್ಮನ್ನ ರೈಲತ್ತಿಸಿ, ಹಾಗೂ ಹೀಗೂ ಬೋಂಡಾ ಜಾಮೂನಿನ ರುಚಿ ನೋಡಿ ಸೇಡು ತೀರಿಸಿಕೊಂಡೆ.

ಬಂದ್ರೂ ಬಂದ್ರೂ ಕಡೇಗೂ 12 ಗಂಟೆ ಅಂತ ಹೇಳಿ 2 ಗಂಟೆಗೆ ಗಂಡು, ಗಂಡಿನ ಚೇಲಾಗಳೆಲ್ಲ ಬಂದ್ರು. ಕಾಯ್ಸಿದಷ್ಟೂ ಹೊತ್ತು ಒಂದು ನಿಮಿಷವೂ ತಪ್ಪಿಸದೇ ಅವ್ರನ್ನೆಲ್ಲ ಬೈದುಕೊಳ್ಳತ್ತಲೇ ಇದ್ದೆ! ಆಹಾ, ಆ ಗಂಡು ನೋಡೋಕೆ ಎರಡು ಕಣ್ಣು ಸಾಲದು! ಇವನ ಫೋಟೋ ಹಿಡಿದ ಆ ಫೋಟೋಗ್ರಾಫರ್ ನಿಜಕ್ಕೂ ಕಲಾವಿದ ಕಣ್ರೀ, ಇವನ ಅಸಲು ರೂಪ ಚೂರು ರಿಫ್ಲೆಕ್ಟ್ ಆಗದಂಗೆ ಎಷ್ಟು ಚೆನ್ನಾಗಿ ಹಿಡ್ದಿದ್ದಾನೆ (ಫೋಟೋನ) ಅನ್ಕೊಂಡೆ. ಅವನ ಕಣ್ಣು ಮೂಗಂತೂ ಬಿಡಿ ಹೋಲಿಕೆಗೆ ಸಿಗದಂತವು. ನಾನಿಲ್ಲಿ ಅಮೀರ್ ಖಾನ್, ಶಾರೂಕ್ ಖಾನರ ಸಿಕ್ಸ್ ಪ್ಯಾಕುಗಳ ಕನಸು ಕಾಣ್ತಿದ್ರೆ, ಈ ‘ಗಂಡು’ ಗುಂಡಗಿರೋ ಸ್ಟೀಲ್ ಬಿಂದಿಗೆಗೆ ಗಿಫ್ಟ್ ಪ್ಯಾಕ್ ಮಾಡಿದಂಗೆ ಇಷ್ಟು ದಪ್ಪದ ಹೊಟ್ಟೆ ಮೇಲೆ ಕಲರ್ ಕಲರ್ ಶರ್ಟು ಹಾಕ್ಕೊಂಡು, ಕನ್ನಡ ಫಿಲ್ಮ್ ಕಾಮೇಡಿಯನ್ ಗಳ ಜೊತೆ ಕಾಂಪೀಟ್ ಮಾಡೋ ಹಾಗಿದ್ದ. ಅಮ್ಮನ್ನ ಒಂದು ಸಲ ಗುರಾಯಿಸಿಕೊಂಡು ನೋಡಿದೆ. ತಮಗೇನು ಗೊತ್ತಿಲ್ಲದ ಹಾಗೆ ಓಡಾಡುತ್ತಿದ್ದರು. ಆ ‘ಗಂಡನ್ನ’ ನೋಡಿಯೂ ಅಮ್ಮನ ಉತ್ಸಾಹ ಕಡಿಮೆಯಾದಂತಿರಲಿಲ್ಲ. ಉಪಚಾರ ಮಾಡುತ್ತಲೇ ಹೋದರು. ಮೊದಲೇ ಕೋಪಗೊಂಡಿದ್ದ ನನಗೆ, ಅವರಿಗೆಲ್ಲ ಹೋಟೇಲ್ ಸರ್ವೆಂಟ್ ನಂತೆ ಅಮ್ಮ ಜಾಮೂನು ಬೋಂಡಾ ಕೊಡಲು ಹೇಳಿದಾಗ ನಿಜಕ್ಕೂ ರೇಗಿತು. ಮನೆಗೆ ಬಂದವರಿಗೆ ಅವಮಾನ ಮಾಡಬಾರದು, ನೀನು ಈ ಹುಡುಗನ್ನ ಮದ್ವೆಯಾಗೋದೇನು ಬೇಡ, ದಯವಿಟ್ಟು ಮರ್ಯಾದೆ ಕಳೀಬೇಡ ಕೊಡಮ್ಮ ಮಗಳೇ ಅಂತ ಅಮ್ಮ ಗೋಗರೆದ ಮೇಲೆ ಕೊಡಲು ಒಪ್ಪಿದ್ದು (ಇಲ್ಲ ಅಂದ್ರೆ ಅವರಿಗೆ ತಲುಪುವಷ್ಟರಲ್ಲಿ ನಾನೇ ಮುಗಿಸಿರುತ್ತಿದ್ದೆ).

‘ಸುಖವಾಗಿ ಬೆಳೆದು ಈಗ ಮದ್ವೆ ಮಾಡ್ಕೊಂಡು ಕಷ್ಟ ಪಡಬೇಕಿದೆ ಪಾಪ!’ ಅಕ್ಕ ಅಡಿಗೆಮನೆಯಲ್ಲಿ ಅಮ್ಮನ ಕಿವಿಯಲ್ಲಿ ಮೆಲ್ಲನಂದಳು, ‘ನೋಡೇ ಅಕ್ಕಾ! ನನ್ನ ನೋಡಿದ್ರೆ ಯಾರಿಗೂ ಅಯ್ಯೋ ಅನ್ಸೋದೆ ಇಲ್ಲ ಇಲ್ಲಿ!’ ಅಳುಮುಖ ಮಾಡಿ ನಾನು ದನಿಗೂಡಿಸಿದೆ, ‘ಅಯ್ಯೋ ನಿನಗಲ್ವೇ, ನಾನು ಹೇಳಿದ್ದು ಆ ಗಂಡಿಗೆ, ನೋಡು ಅಮ್ಮ ಮಾಡಿ ಹಾಕ್ತಾರೆ, ತಿಂದು, ಸುಖವಾಗಿ ಗುಂಡು ಗುಂಡಕ್ಕೆ ಹೇಗೆ ಬೆಳೆದಿದ್ದಾನೆ, ನಿನ್ನ ಮದ್ವೆ ಮಾಡ್ಕೊಳೋಕೆ ಪಾಪ ಅದ್ಯಾವ ಜನುಮದಲ್ಲಿ ಕರ್ಮ ಮಾಡಿದಾನೋ!’ ಎಂದು ಮುಸಿ ಮುಸಿ ನಕ್ಕಳು. ‘ಹ್ಞೂಂ, ಎಲ್ಲಾರು ಉದ್ದಕ್ಕೆ ಬೆಳೆದ್ರೆ ಇವನು ಅಡ್ಡಡ್ಡಕ್ಕೆ ಬೆಳೆದಿದ್ದಾನೆ, ಹೋಗೇ ನಿನಗೆ ತಮಾಶೆ ನನ್ನ ಜೀವ ಹೋಗ್ತಿದ್ರೆ ಇಲ್ಲಿ’ ಅಂತ ಗೊಣಗಿ ಸುಮ್ಮನಾದೆ.

ಅಂತೂ ‘ಗಂಡು’ ಮತ್ತವನ ಚೇಲಾಗಳ ನಿರ್ಗಮನವಾಯಿತು. ಬೋಂಡಾ ಜಾಮೂನು ಖರ್ಚಾಗಿದ್ದು ಬಿಟ್ರೆ ಇನ್ನೇನು ಪ್ರಯೋಜನವಾಗಲಿಲ್ಲ. ನನಗೆ ಒಂದೂ ಉಳಿಯದೆ ಎಲ್ಲಾ ಖಾಲಿಯಾಗಿತ್ತು ಅನ್ನೋದೊಂದು ನಿರಾಶೆ ಬಿಟ್ಟರೆ ಮತ್ತೇನು ಹೆಚ್ಚು ಬೇಜಾರಾಗಲಿಲ್ಲ. ಖುಷಿಯಿಂದ ಪುಟಿಯುತ್ತಿದ್ದ ಅಮ್ಮನಿಗೂ ’ಗಂಡಿನ’ ದರ್ಶನದಿಂದ ಬೇಜಾರಾಗಿತ್ತು.
‘ಅಯ್ಯೋ ಕೆಲಸ ಮಾಡೋಕೆ ನನ್ ಮಗಳು ಮನೇಲಿದ್ರೆ ತಾನೇ! ಇಷ್ಟು ವಯಸ್ಸಾದ್ರೂ ನಾನೇ ಎಲ್ಲ ಮಾಡ್ಬೇಕು, ಮಕ್ಕಳ ಕೈಲಿ ಸೇವೆ ಮಾಡಿಸ್ಕೊಳ್ಳೋಕು ಪುಣ್ಯ ಮಾಡಿರ್ಬೇಕು ಬಿಡಿ…………!’ ಮಾರನೇ ದಿನ ಅಮ್ಮ ಫೋನಿನಲ್ಲಿ ಮಾತಾಡುತ್ತಲೆ ಇದ್ದರು, ನಾನು ನಗುತ್ತಾ ಆಫೀಸಿನ ದಾರಿ ಹಿಡಿದೆ.