Tag Archives: ನಗೆಸಾಮ್ರಾಟ್

ನೀವೂ ಜನಪ್ರಿಯ ಅಂಕಣಕಾರರಾಗಬಹುದು!

17 ಮಾರ್ಚ್

(ಮೊದಲ ಭಾಗ)

೪. ಗುರಿಯ ಸ್ಪಷ್ಟತೆಯಿರಲಿ

ಅಂಕಣ ಬರಹಗಾರನಿಗೆ ತನ್ನ ಅಂಕಣವನ್ನು ಓದುವವರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಆ ಸೂರ್ಯನಿಗೇ ಇಡೀ ಜಗತ್ತನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಹುಲುಮಾನವನಾದ ಅಂಕಣಕಾರ ಎಲ್ಲರನ್ನೂ ಮೆಚ್ಚಿಸಬೇಕೆನ್ನುವುದು ಅಸಾಧ್ಯವಾದ ಸಂಗತಿ. ತಾನು ಮೆಚ್ಚಿಸಬೇಕಾದ್ದು ತನ್ನ ಅಂಕಣವನ್ನು ಓದುವ ವರ್ಗವನ್ನು ಎಂಬುದನ್ನು ಅಂಕಣಕಾರ ಬಹುಬೇಗ ಮನದಟ್ಟು ಮಾಡಿಕೊಳ್ಳಬೇಕು.
ನಿಮ್ಮ ಅಂಕಣ ಬರಹಕ್ಕೆ ಯುವಕರೇ ಪ್ರಮುಖವಾದ ಓದುಗರು ಎನ್ನುವುದಾದರೆ ಓಂ ಪ್ರಕಾಶ್ ಸಿನೆಮಾದ ಡೈಲಾಗ್ ಮಾದರಿಯಲ್ಲಿ ಹೆಡ್ಡಿಂಗುಗಳನ್ನೂ ಲೇಖನದಲ್ಲಿ ಪಂಚ್ ಲೈನ್‌ಗಳನ್ನೂ ಬಳಸಬೇಕು. ನಿಮ್ಮ ಓದುಗರು ಹೆಂಗಸರು ಎಂದಾದರೆ ಎಸ್.ನಾರಾಯಣ್ ಧಾರಾವಾಹಿ ಮಾದರಿಯಲ್ಲಿ ಬರೆಯಬೇಕು. ಒಟ್ಟಿನಲ್ಲಿ ನೀವು ಯಾರಿಗಾಗಿ ಬರೆಯುತ್ತಿರುವಿರಿ ಎಂಬುದನ್ನು ಯಾವಾಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿರಬೇಕು.

೫. ಗಾಳಿಯೊಂದಿಗೆ ಗುದ್ದಾಡು

ಒಂದು ವಿಷಯದ ಬಗ್ಗೆ, ಯಾವುದಾದರೊಂದು ಕ್ಷೇತ್ರದಲ್ಲಿ ಅರಿಣಿತಿಯನ್ನು ಗಳಿಸಿ ಟೆಕ್ಸ್ಟ್ ಬುಕ್ ಬರೆದ ಹಾಗೆ ಅಂಕಣ ಬರೆಯುವವರು ಇದ್ದಾರೆ. ಅವರ ಅಂಕಣಗಳನ್ನು ಆಸಕ್ತರು ಹಾಗೂ ನಿರಾಸಕ್ತಿರೂ ಇಬ್ಬರೂ ಟೆಕ್ಸ್ಟ್ ಬುಕ್ ಓದಿದ ಹಾಗೆಯೇ ಓದಿಕೊಳ್ಳುತ್ತಾರೆ. ಅಂಥವರನ್ನು ಜನಪ್ರಿಯ ಅಂಕಣಕಾರ ಎನ್ನಲು ಸಾಧ್ಯವಾಗದು.
ಅಂಕಣಕಾರ ಜನಪ್ರಿಯನಾಗಬೇಕಾದರೆ ಗಾಳಿಯೊಂದಿಗೆ ಗುದ್ದಾಡಬೇಕು, ಹತ್ತಿಯ ಮೂಟೆಯ ಮೇಲೆ ತನ್ನ ಬಾಕ್ಸಿಂಗ್ ಕೌಶಲ್ಯವನ್ನು ತೋರಬೇಕು, ಸಗಣಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು, ಕೊಳಚೆಯ ಅಭಿಮಾನಿಯಾಗಿರಬೇಕು.
ಅರ್ಥವಾಗಲಿಲ್ಲವೇ, ವಿವರಿಸುತ್ತೇವೆ ಕೇಳಿ: ಅಂಕಣಕಾರ ತನ್ನ ಪರಿಣಿತಿಯ ಕ್ಷೇತ್ರದಲ್ಲಿನ ವಿಷಯಗಳ ಬಗ್ಗೆ ಎಷ್ಟೇ ಪ್ರಖರವಾಗಿ ಬರೆದರೂ ಎಲ್ಲರಿಗೂ ಅಪೀಲ್ ಮಾಡಲಾಗುವುದಿಲ್ಲ. ಅದಕ್ಕೆ ಆತ ಗಾಳಿಯ ಹಾಗೆ ಎಲ್ಲರಿಗೂ ಅನುಭವಕ್ಕೆ ಬಂದ, ಎಲ್ಲರಿಗೂ ಲಭ್ಯವಾದ ವಿಷಯ ಆರಿಸಿಕೊಳ್ಳಬೇಕು. ಹಾಗೆಯೇ ಹತ್ತಿಯ ಚೀಲದಂತಹ ಟಾಪಿಕ್ಕುಗಳನ್ನು ಇಟ್ಟುಕೊಳ್ಳಬೇಕು, ತನ್ನ ಪಂಚಿಂಗ್ ಕೌಶಲ್ಯವನ್ನು ತೋರಿಸುತ್ತಾ ಹೋಗಬೇಕು. ಉದಾಹರಣೆಗೆ ಗಾಂಧೀಜಿ, ಧರ್ಮ, ದೇಶಪ್ರೇಮ ಇಂಥವನ್ನೇ ತೆಗೆದುಕೊಳ್ಳಿ. ಇವು ಎಲ್ಲರಿಗೂ ಸಂಬಂಧಿಸಿದವು. ಗಾಂಧೀಜಿಗೆ ನೂರಾ ಎಂಟು ಪ್ರಶ್ನೆಗಳು ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಎಸೆದು ಲೇಖನ ಬರೀರಿ ಉತ್ತರ ಕೊಡೋಕೆ ಗಾಂಧಿ ಇದ್ರೆ ತಾನೆ ಭಯ? ಹಂಗೇ ಧರ್ಮ ಅಂತ ಇಟ್ಕೊಂಡು ನಿಮಗೆ ಸರಿ ಕಂಡಿದ್ದನ್ನು ಕಾಣದ್ದನ್ನೆಲ್ಲಾ ಗೀಚಿ ಹಾಕಿ, ನಿಮಗೆ ನಿಮ್ಮ ಓದುಗರು ಬಹುಸಂಖ್ಯಾತರಾಗಿರುವುದು ಯಾವ ಧರ್ಮದವರು ಎಂಬ ಸ್ಪಷ್ಟತೆ ಇರುತ್ತದಾದ್ದರಿಂದ ತೊಂದರೆಯಾಗುವುದಿಲ್ಲ.
ಸಗಣಿಯೊಂದಿಗೆ ಸಖ್ಯವೆಂದರೆ, ಅತ್ಯಂತ ಜನಪ್ರಿಯ ಅಂಕಣಕಾರನಾದವನಿಗೆ ಸಗಣಿ ಎಸೆಯುವ, ಮುಖಕ್ಕೆ ಮಸಿ ಬಳಿಯುವ ಕಲೆ ಕರಗತವಾಗಿರಲೇ ಬೇಕು. ಅದೆಂತಹ ಒಳ್ಳೆಯ ವ್ಯಕ್ತಿಯನ್ನೇ ಟೀಕಿಸುವುದಿದ್ದರೂ ನೀವು ಬಳಸುವ ಸಗಣಿ, ಮಸಿಯಿಂದ ಖುದ್ದು ಆ ವ್ಯಕ್ತಿಗೇ ತನ್ನ ಬಗ್ಗೆ ತನಗೆ ಸಂಶಯ ಬಂದುಬಿಡಬೇಕು. ಇದಕ್ಕೆ ವಕೀಲಿ ವೃತ್ತಿಯ ಗೆಳೆಯರಿಂದ ವಾದಕ್ಕೆ ತಯಾರಿಯನ್ನೂ, ಬೀದಿಜಗಳ ಪ್ರವೀಣರಿಂದ ವಿತಂಡವಾದದ ಅಭ್ಯಾಸವನ್ನೂ, ನಡೆದಾಡುವ ಅವಾಚ್ಯ ಶಬ್ಧಕೋಶಗಳಿಂದ ಬೈಗುಳ, ಆರೋಪಗಳನ್ನು ಕಡ ತೆಗೆದುಕೊಳ್ಳಬೇಕು.
ಬರ್ನಾಡ್ ಶಾ ಒಮ್ಮೆ ಹೇಳಿದಂತೆ, “ಹಂದಿಯೊಂದಿಗೆ ಕಿತ್ತಾಡಬೇಡ. ಹೆಚ್ಚು ಕಿತಾಡಿದಷ್ಟು ನೀನು ಕೊಳಕಾಗುತ್ತೀ ಆದ್ರೆ ಹಂದಿ ಅದನ್ನ ಎಂಜಾಯ್ ಮಾಡ್ತಾ ಹೋಗುತ್ತೆ” ಅಂತ. ಈ ತತ್ವವನ್ನು ಬಳಸಿದರೆ ನಿಮಗೆ ಸರಿಸಾಟಿಯೇ ಇರರು.

೬. ಸಂಗ್ರಹ ಬುದ್ಧಿ ಅವಶ್ಯಕ

ಅಂಕಣಕಾರನಿಗಿರುವ ಅತಿ ದೊಡ್ಡ ಸವಲತ್ತು ಎಂದರೆ ಆತ ಕೇವಲ ತನ್ನ ಸ್ವಂತದ್ದನ್ನೇ ಬರೆಯಬೇಕೆಂದಿಲ್ಲ. ಅಥವಾ ಸ್ವಂತದ್ದೆನ್ನುವುದ್ಯಾವುದನ್ನೂ ಬರೆಯಬೇಕೆಂದಿಲ್ಲ. ತನ್ನ ವಾದಕ್ಕೆ ಪೂರಕವಾಗಿ ಅನ್ಯರು ಹೇಳಿದ್ದನ್ನೆಲ್ಲಾ ಸಂಗ್ರಹಿಸಿ ಸೊಗಸಾಗಿ ಒಂದು ಖೌದಿ ಹೊಲಿದು ಬಿಟ್ಟರೆ ಸಾಕು.
ಉದಾಹರಣೆಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಮೈಕ್ರೋಫೋನ್ ಬಳಸಬೇಕೇ ಬೇಡವೇ ಎಂದು ವಿವಾದವೆದ್ದಿದೆ ಎಂದು ಭಾವಿಸಿ. ಆಗ ಅಂಕಣಕಾರನಾದವನು ತನ್ನ ವಾದಕ್ಕೆ ಪೂರಕವಾಗಿ ಕೋಟ್ ಬಳಸಬಹುದು. ಮೈಕ್ರೋಫೋನ್ ಬಳಸುವುದು ನಿಷಿದ್ಧ ಎಂಬ ಅಭಿಪ್ರಾಯ ಬಿಂಬಿಸ ಹೊರಟವ “ದೇವರ ಪಿಸುಮಾತು ತಲುಪಬೇಕಾದ್ದು ಕಿವಿಗಳಿಗಲ್ಲ, ಹೃದಯಕ್ಕೆ” – ವಾಲ್ಮೀಕಿ ಮಹರ್ಷಿ ಎಂದೂ, ಮೈಕ್ರೋಫೋನ್ ಬಳಕೆಯನ್ನು ಅನುಮೋದಿಸುವವ “ಪುರೋಹಿತಶಾಹಿಯ ಸಂಚಿನ ಗುಟ್ಟು ರಟ್ಟಾಗುವುದಕ್ಕೆ ಬೇಕೇ ಬೇಕು ಡಂಗೂರ” – ವಿಶ್ವಾಮಿತ್ರ ಮಹರ್ಷಿ ಎಂದು ಕೋಟ್ ಬಳಸಬೇಕು. ಇದರಿಂದ ನಿಮ್ಮ ವಾದವನ್ನು ಮಂಡಿಸುವುದರ ಜೊತೆಗೆ ನಿಮ್ಮ ವಾದಕ್ಕೆ ಎಂತೆಂಥ ದೊಡ್ಡವರ ಬೆಂಬಲವಿದೆ ಎಂದು ತೋರ್ಪಡಿಸಿದ ಹಾಗೂ ಆಗುತ್ತೆ. ಜೊತೆಗೆ ವಾಲ್ಮೀಕಿಯಾಗಲಿ, ವಿಶ್ವಾಮಿತ್ರರಾಗಲಿ ಹೀಗೆ ಹೇಳಿದ್ದರು, ಮೈಕ್ರೋಫೋನಿನ ಬಗ್ಗೆ ತಿಳಿದಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯೂ ಇರದು.
ಈ ತಂತ್ರದ ಸೂಕ್ತ ಬಳಕೆಗೆ ಅತ್ಯಂತ ಉಪಯುಕ್ತವಾದ ಸಾಧನ ಅಂತರಜಾಲ.

ಹೆಸರಾಂತ ಅಂಕಣಕಾರರಾಗುವುದಕ್ಕೆ ಬೇಕಾದ ರಹಸ್ಯ ಸೂತ್ರಗಳನ್ನು ಕೇಳಿದಿರಿ. ಭಕ್ತಿಯಿಂದ, ಶ್ರದ್ಧೆಯಿಂದ ಇವನ್ನೆಲ್ಲಾ ಪಾಲಿಸಿದರೆ ಅವಶ್ಯಕವಾಗಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಡೆಗೆ ಇವೆಲ್ಲವನ್ನೂ ಸರಳಗೊಳಿಸಿ ಒಂದು ಮೆಥಾಡಲಜಿಯನ್ನು ಹೇಳಲಿ ಬಯಸುತ್ತೇವೆ.

ಒಂದು ವಾರದ ಅಂಕಣವನ್ನು ಸಿದ್ಧ ಪಡಿಸಲು ಪಾಲಿಸಬೇಕಾದ ಅತ್ಯಂತ ಸರಳ ಪದ್ಧತಿ:
೧. ನಾಲ್ಕೂ ದಿಕ್ಕಲ್ಲಿ ಕಣ್ಣು ಹಾಯಿಸಿ ಬಿಸಿ ಬಿಸಿಯಾಗಿರುವ ವಿಷಯ ಆಯ್ದುಕೊಳ್ಳಿ.
೨. ವಿಷಯದ ಪರವಾಗಿ ಇಲ್ಲವೇ ವಿರುದ್ಧವಾಗಿ ಮಾತ್ರ ಬರೆಯಿರಿ. ಅಡ್ಡಗೋಡೆ ಮೇಲಿಟ್ಟ ದೀಪಕ್ಕೆ ಎಣ್ಣೆ ದಂಡ ಎಂಬುದು ನೆನಪಿರಲಿ.
೩. ವಿಷಯದ ಪರ, ವಿರುದ್ಧ ವಹಿಸುವುದು ಕಷ್ಟವಾದರೆ ಒಂದ್ರುಪಾಯಿ ನಾಣ್ಯ ತೂರಿ ನಿರ್ಧರಿಸಿ.
೪. ಅನಂತರ ನಿಮ್ಮ ವಾದಕ್ಕೆ ಪೂರಕವಾಗಿ ಲಭ್ಯವಿರುವ ಮಾಹಿತಿಯನ್ನು ಅಂತರಜಾಲದಿಂದ, ನಿಮ್ಮ ವಾದ ಬೆಂಬಲಿಸುವ ಮೂಲಭೂತವಾದಿಗಳಿಂದ, ಪುಸ್ತಕಗಳಿಂದ ಸಂಗ್ರಹಿಸಿಕೊಳ್ಳಿ.
೫. ಕೆಲವು ಕಡೆ ಕೋಟ್ ಮಾಡುತ್ತಾ ಉಳಿದಂತೆ ಸಂಗ್ರಹಿಸಿದ ಮಾಹಿತಿಯನ್ನೆಲ್ಲಾ ನಿಮ್ಮದೇ ಎನ್ನುವಂತೆ ಬರೀರಿ.
೬. ನಿಮ್ಮನ್ನು ಮೆಚ್ಚಿ, ನಿಮ್ಮ ಪ್ರತಿ ಅಂಕಣವನ್ನು ಕೊಂಡಾಡುವ ಓದುಗರ ಪತ್ರಗಳು ಮಾತ್ರ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಿ. ಅಂಥದ್ದು ಯಾವುದೂ ಬರದಿದ್ದರೆ ನೀವೇ ಓದುಗರ ಹೆಸರಲ್ಲಿ ಬರೆದುಕೊಂಡು ಪ್ರಕಟಿಸಿ.

ಇವನ್ನು ಪಾಲಿಸಿ ಪ್ರತಿಯೊಬ್ಬರೂ ಅತ್ಯುತ್ತಮ ಕಾಲಮಿಸ್ಟರಾಗಿ ಎಂದು ಹಾರೈಸುತ್ತೇವೆ.

ಸಾಮ್ರಾಟರ ಪುನರ್ಜನ್ಮ!

23 ಆಕ್ಟೋ

ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ್ಮಹತ್ಯೆ ಮಾಡಿಕೊಂಡ ಸಾಮ್ರಾಟರಿಗೆ ಮುಂದೇನಾಯಿತು ಎಂಬುದು ಬಹುದೊಡ್ಡ ಥ್ರಿಲ್ಲರ್ ಸಿನೆಮಾದ ಪ್ಲಾಟ್ ಇದ್ದ ಹಾಗಿದೆ. ಆದರೆ ಈ ಹೊತ್ತಿನ ತುರ್ತಿನ ಮಾಹಿತಿಯೆಂದರೆ ಸಾಮ್ರಾಟರು ವಾಪಸ್ಸು ಬದುಕಿ ಬಂದಿದ್ದಾರೆ!

ಹೌದು, ಸಾಮ್ರಾಟರು ಅಕ್ಷರಶಃ ಪುನರ್ಜನ್ಮವನ್ನು ಪಡೆದಿದ್ದಾರೆ. ಸಾವಿನ ದವಡೆಯಷ್ಟೇ ಅಲ್ಲ, ಅದರ ಜಠರ, ಸಣ್ಣ ಕರುಳು, ದೊಡ್ಡ ಕರುಳುಗಳನ್ನೆಲ್ಲಾ ಹೊಕ್ಕು ತಪ್ಪಿಸಿಕೊಂಡು ಹೊರಬಂದಿದ್ದಾರೆ. ನಗೆ ನಗಾರಿಯ ಕಛೇರಿಯನ್ನು ಬಂದು ತಲುಪಿದ್ದಾರೆ. ಸಾಮ್ರಾಟರ ಆಗಮನದಿಂದ ಕಿವುಚಿಕೊಳ್ಳುವ ಹಲವು ಮುಖಗಳ ನಡುವೆ ಕೆಲವು ಮುಖಗಳಾದರೂ ಅರಳುತ್ತವೆ ಎಂಬುದು ನಮ್ಮ ನಂಬಿಕೆ. ಸಾಮ್ರಾಟರ ಪುನರಾಗಮನದಿಂದ ನಗೆ ನಗಾರಿಯ ಏಕಸದಸ್ಯ ಸಿಬ್ಬಂದಿಗೆ ವಿಪರೀತ ಖುಶಿಯಾಗಿದೆ. ದೀಪಾವಳಿ ಹಬ್ಬ ಮೂರು ದಿನ ಮುಂಚಿತವಾಗಿ ಬಂದಿದೆ!

ಇಂದಿನಿಂದ ಎಂದಿನಂತೆ ನಗಾರಿಯ ಸದ್ದು ಪುನರಾರಂಭವಾಗಲಿದೆ. ಸಾಮ್ರಾಟರ ಅಪ್ಪಣೆಯ ಮೇರೆಗೆ ಅವರ ಪುನರ್ಜನ್ಮದ ರಹಸ್ಯ ಕಥಾನಕವನ್ನು ಬರೆಯಲು ಅವರ ಚೇಲ ಕುಚೇಲ ತಯಾರಾಗಿ ಕೂತಿದ್ದಾನೆ. ಸೂಕ್ತ ಸಮಯದಲ್ಲಿ ಅದು ನಗೆ ನಗಾರಿಯಲ್ಲಿ ಬೆಳಕು ಕಾಣುವುದಾಗಿ ತಿಳಿಸಲು ಹರ್ಷಿಸುತ್ತೇವೆ…

ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವಿ

29 ಆಗಸ್ಟ್

(ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ)

ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ ತಮ್ಮ ಸ್ವಂತ ಮೆದುಳಿನಿಂದಲೇ ದೇಶವನ್ನು ಮುಂದಕ್ಕೆ ಓಡಿಸುತ್ತಿದ್ದಾರೆ ಎಂಬ ಸಮಾಧಾನ ಸಿಕ್ಕಲು ನಾಲ್ಕು ವರ್ಷ ಬೇಕಾಯಿತು. ಹೀಗಿರುವಾಗ ನಮ್ಮ ನಿಧಾನಿಯವರ ‘ಖಾಸಗಿ ಆರೋಗ್ಯ’ ನೋಡಿಕೊಳ್ಳುವ ವೈದ್ಯರು ನಗೆ ಸಾಮ್ರಾಟರೊಂದಿಗೆ ಮಾತನಾಡಲು ಸಮಯ ಮಾಡಿಕೊಂಡರು.

‘ಯಾವುದೇ ಮನುಷ್ಯನಿಗೆ ದಿನನಿತ್ಯದ ಚಟುವಟಿಕೆಯ ಜೊತೆಗೆ ದೇಹಾರೋಗ್ಯವನ್ನು ಜಬರ್ದಸ್ತಾಗಿ ಇಟ್ಟುಕೊಳ್ಳಲು ಆಗಾಗ ಉಪವಾಸ ಮಾಡುವುದು ಅಗತ್ಯ. ವಯಸ್ಸು ಹೆಚ್ಚಾದಂತೆ ಇದು ಇನ್ನೂ ಅಗತ್ಯ. ಹಾಗೆಯೇ ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ ಮಾಡುವುದರಿಂದ ಇಂದ್ರಿಯಗಳು ಪುನಃಶ್ಚೇತನ ಪಡೆದುಕೊಳ್ಳುತ್ತವೆ. ನಮ್ಮ ನಿಧಾನಿಯವರಿಗೂ ಇದೂ ಕಾಲಕಾಲಕ್ಕೆ ಅಗತ್ಯವಾಗಿ ಬೇಕೇ ಬೇಕು. ಹಿಂದೊಬ್ಬರು ನಿಧಾನಿಯಿದ್ದರು ಅವರಿಗೆ ಈ ಆರೋಗ್ಯದ ರಹಸ್ಯವನ್ನು ಕಲಿಸಲು ಹೋಗಿ ನಾನೇ ಪೆಟ್ಟು ತಿಂದಿದ್ದೆ. ಅವರು ಹೊಟ್ಟೆ ತುಂಬಾ ಮುದ್ದೆ ನುಂಗಿ ಕಾರ್ಯಕ್ರಮಗಳ ಮಧ್ಯೆಯೇ ಆರಾಮಾಗಿ ನಿದ್ದೆ ಮಾಡುತ್ತಾ ದೇಶವನ್ನು ಮುನ್ನಡೆಸುತ್ತಿದ್ದರು. ಅದು ಅವರ ವೈಯಕ್ತಿಕ ಹಿರಿಮೆಯಷ್ಟೇ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನಮ್ಮ ಮೋಹನ ಮನ ಸಿಂಗರು ದೇಶದ ಬಗ್ಗೆ ಅತ್ಯಂತ ಕಾಳಜಿಯಿಂದ ಆಲೋಚಿಸಲು ಈ ಉಪವಾಸ ಹಾಗೂ ಜಾಗರಣೆಗಳು ಅತಿ ಆವಶ್ಯಕ.

‘ನಮ್ಮ ಮೋಹನ ಮನ ಸಿಂಗರ ಸುಕೃತವೋ, ಈ ದೇಶದ ಜನರ ಪುಣ್ಯವೋ ಇಲ್ಲವೇ ಮಹಾ ಮಾತೆಯ ಕೃಪೆಯೋ ನಮ್ಮ ನಿಧಾನಿಯವರಿಗೆ ನಿದ್ದೆಗೆಡುವ, ಊಟ ಬಿಡುವ ಅವಕಾಶಗಳು ಆಗಾಗ ಸಿಕ್ಕುತ್ತಲೇ ಇರುತ್ತವೆ. ಇಂಥ ಅವಕಾಶಗಳಿಂದ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಇಲ್ಲದೆ ಹೋದರೆ ಹಿಂದಿನ ನಿಧಾನಿಯ ಹಾಗೆ ದೇಹದ ಪ್ರತಿಯೊಂದು ಸ್ಪೇರ್ ಪಾರ್ಟುಗಳನ್ನೂ ಬದಲಾಯಿಸಿಕೊಳ್ಳಬೇಕಾಗುತ್ತಿತ್ತು. ನೂರು ಕೋಟಿ ಮಂದಿಯ ಬಂಡಿಯನ್ನು ಹೊರುವುದು ಎಂದರೆ ಸುಮ್ಮನೆ ಮಾತೇ?

‘ನಿಧಾನಿಯವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ದೇಶದಲ್ಲಿ ಎಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದೇಶದ ಅಕ್ಕ ಪಕ್ಕದ ತಂಟೆಕೋರ ಮನೆಗಳಿಂದ ಉಗ್ರರ್, ವ್ಯಗ್ರರು ಬಂದು ಮಾರ್ಕೆಟ್ಟುಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ, ಶಾಲೆಗಳಲ್ಲಿ ಕಡೆಗೆ ಆಸ್ಪತ್ರೆಗಳನ್ನೂ ಬಿಡದೆ ಉಡಾಯಿಸಿದರು, ಮರದ ಮೇಲೆ, ಚರಂಡಿಯ ಅಡಿಗೆ, ಕಸದ ಬುಟ್ಟಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಭಾರತೀಯರು ಮೂತ್ರ ಮಾಡಿದ ಹಾಗೆ ಬಾಂಬುಗಳನ್ನು ಇಟ್ಟು ‘ಹೆಸರಾಂತ’ ಪತ್ರಿಕೆ, ಟಿವಿಗಳಿಗೆ ‘ತಾಕತ್ತಿದ್ದರೆ ನಮ್ಮನ್ನು ತಡೆಯಿರಿ…’ ಎಂದು ಸವಾಲೊಡ್ಡಿದರು. ಬಾಂಬಿನ ಆಟಾಟೋಪದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಂಡರು. ಆದರೆ ಇದರಿಂದ ನಿಧಾನಿಯವರಿಗೆ ಉಪವಾಸವೂ ಸಿಕ್ಕಲಿಲ್ಲ, ಜಾಗರಣೆಯೂ ಮಾಡಲಾಗಲಿಲ್ಲ. ಹೊಟ್ಟೆ ತುಂಬಾ ಊಟ ಮಾಡುತ್ತಾ, ಕಣ್ತುಂಬಾ ನಿದ್ದೆ ಮಾಡುತ್ತಾ ಇದ್ದು ಬಿಟ್ಟರು.

‘ಅತ್ತ ಭಾರತದ ಶಿರವಾದ ಕ್ಯಾಶ್ಮೀರದಲ್ಲಿ ನೆರೆಮನೆಯರು ಎರಡೂ ಕಾಲುಗಳನ್ನು ಎರಡೂ ಕೈಗಳ ತಲಾ ಐದು ಉಗುರುಗಳಿಂದ ಪರಪರಪರನೆ ಕೆರೆದುಕೊಂಡು ಬಂದು ಜಗಳ ಮಾಡಿದಾಗಲೂ, ನಮ್ಮ ನಾಡಿನ ರಕ್ಷಣೆಗೆ ನಿಂತ ಯೋಧರ ಪ್ರಾಣ ಹೋದರೂ ನಮ್ಮ ನಿಧಾನಿಯವರ ಆರೋಗ್ಯ ಕಾಪಾಡುವ ಯಾವ ಪರಿಣಾಮವೂ ಆಗಲಿಲ್ಲ.

‘ಇಡೀ ಜಗತ್ತೇ ಪ್ರಧಾನಿಯವರಿಗೆ ಉತ್ತಮ ಆರೋಗ್ಯವನ್ನು ಕೊಡಬೇಕು ಎಂದು ಸಂಚು ಮಾಡಿ ಭಾರತದ ಹಣದುಬ್ಬರದಡಿಗೆ ರಾಕೆಟ್ ಇಟ್ಟು ಉಡಾಯಿಸಿಬಿಟ್ಟಿತು. ಆಮ್ ಆದ್ಮೀ ನೇರವಾಗಿ ಸ್ವರ್ಗದಲ್ಲೇ ಚೀಪ್ ಆಗಿ ಬದುಕು ಸಾಗಿಸಬಹುದು ಎಂದು ತೀರ್ಮಾನಿಸುವ ಪರಿಸ್ಥಿತಿ ಬಂದಿತು ಆದರೆ ಪಿತ್ತ ಮಂತ್ರಿಯೂ ಆಗಿದ್ದ ನಿಧಾನಿಯವರಿಗೆ ಇದರಿಂದ ಯಾವ ರೀತಿಯಲ್ಲೂ ನೆರವಾಗಲಿಲ್ಲ. ನಿದ್ದೆ, ಊಟ ಯಥೇಚ್ಚವಾಗಿ ಮುಂದುವರೆದಿತ್ತು.

‘ಹೀಗಿರುವಾಗ ನಮ್ಮ ನಿಧಾನಿಯವರ ಆರೋಗ್ಯದ ಗತಿ ಏನಾಗಬೇಡ? ಅವರಿಗೆ ಆಗಾಗ ಉಪವಾಸ ಹಾಗೂ ನಿದ್ದೆ ಬರದ ರಾತ್ರಿಗಳನ್ನು ಕರುಣಿಸುವುದು ಹೇಗೆ ಅನ್ನುವಾಗಲೇ ನಮ್ಮ ಕಣ್ಣೆದುರು ಪವಾಡವೊಂದು ನಡೆಯಿತು. ಅನ್ಯದೇಶದಲ್ಲಿ ಬಾಂಬು ಉಡಾಯಿಸಿದವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಭಾರತದ ಕುವರ ದೇಶಕ್ಕೆ ಮರಳಿ ಬಂದಾಗ, ಅನ್ಯದೇಶದಲ್ಲಿ ತನಗಾದ ಅವಮಾನ, ತನ್ನ ಮೇಲೆ ನಡೆದ ‘ಶೋಷಣೆ’ಯನ್ನು ಪರಿ ಪರಿಯಾಗಿ ವಿವರಿಸಿ ಟಿವಿ ಕೆಮಾರಗಳ ಮುಂದೆ ಒಂದೇ ಕಣ್ಣಿನಲ್ಲಿ ಗೊಳೋ ಎಂದು ಅತ್ತಾಗ ಪವಾಡ ಸಂಭವಿಸಿಯೇ ಬಿಟ್ಟಿತು. ನಮ್ಮ ನಿಧಾನಿ ಮಾಡುವ ಕೆಲಸವನ್ನೆಲ್ಲಾ ಬಿಟ್ಟು ಟಿವಿ ಚಾನೆಲ್ಲು ನೋಡುತ್ತಾ ಕುಳಿತರು. ಆ ಕನ್ನಡದ ಕುವರನ ತಾಯಿ ರೋಧಿಸುವುದನ್ನು ನಮ್ಮ ಟಿವಿ ಚಾನೆಲ್ಲುಗಳು ೨೪*೭ ತೋರಿಸುವುದನ್ನು ಕಂಡು ನಿಧಾನಿಯವರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದರು. ಇದರಿಂದ ಅವರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಕಂಡು ಬಂದಿದೆ.

‘ ಅನಂತರ ಇಲ್ಲಿ ಎಲ್ಲೋ ಪೂರ್ವದ ರಾಜ್ಯದಲ್ಲಿ ಕೋಮುವಾದಿ ಕೋಮಿನ ಕೋಮುವಾದಿ ಮುಖಂಡನನ್ನು ‘ದೇಶ ಭಕ್ತರು’ (ಅವರು ಯಾವ ದೇಶಕ್ಕೆ ಭಕ್ತರು ಎಂದು ಕೇಳಿದ್ದಕ್ಕೆ ಆಫ್ ದಿ ರೆಕಾರ್ಡ್ ಉತ್ತರ ಕೊಟ್ಟಿದ್ದನ್ನು ನಾವಿಲ್ಲಿ ಎಡಿಟ್ ಮಾಡಿದ್ದೇವೆ – ಸಂ) ತೆಗೆದರು. ಇದರಿಂದ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ‘ಮಾರಣ ಹೋಮ’ ನಡೆಸಿದರು. ಇದನ್ನು ಕೆಲವು ತಲೆ ಕೆಟ್ಟ ಮಂದಿ ಹಿಂದೆ ಇಂದಿರಮ್ಮ ಸತ್ತಾಗ ಸಿಖ್ಖರ ಮೇಲೆ ನಡೆಸಿದ ‘ಹೋರಾಟ’ಕ್ಕೆ ಹೋಲಿಸುತ್ತಾರೆ. ಅದೇ ಬೇರೆ ಇದೇ ಬೇರೆ ಅಂತ ಇವರಿಗೆ ಗೊತ್ತಿಲ್ಲ. ಹೀಗೆ ಅಲ್ಪ ಸಂಖ್ಯಾತರ ಮೇಲೆ ಕೋಮುವಾದಿಗಳ ಅಟ್ಟಹಾಸದಿಂದ ನಮ್ಮ ನಿಧಾನಿಗೆ ಹೊಟ್ಟೆಗೆ ಸರಿಯಾಗಿ ಊಟ ಸೇರಲಿಲ್ಲ, ನಿದ್ದೆಯಂತೂ ಮಾರು ದೂರದಲ್ಲಿ ನಿಂತಿತು. ಇಡೀ ದೇಶ ಇದಕ್ಕಾಗಿ ಅವಮಾನ ಪಡಬೇಕು ಎಂದರು.

‘ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ’.

ನಿಧಾನಿಯವರ ಆರೋಗ್ಯ ಎಂದರೆ ಕೈ ಪಕ್ಷದ ಓಟ್ ಬ್ಯಾಂಕೇ ಎಂದು ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಂಪರ್ಕ ಕಡಿದುಹೋಗಿತ್ತು.