Tag Archives: ನಗು

ಚರ್ಚೆ: ನಗುವಿನ ಬಗೆ

12 ಫೆಬ್ರ

ನಗುವಿನಲ್ಲಿರುವ ಬಗೆಗಳೆಷ್ಟು!

ಮುದ್ದು ಕಂದ ತುಟಿ ಅರಳಿಸಿ ನಕ್ಕ ನಗು, ಪುಂಡ ಪೋರನೊಬ್ಬ ತಪ್ಪು ಮಾಡಿ ಕ್ಷಮೆ ಕೋರುವಂತೆ ನಿಂತು ನಕ್ಕ ನಗು, ಬೊಚ್ಚ ಬಾಯಿಯ ಮುದುಕ ಅಪಾನವಾಯುವಿಗೆ ಮುಕ್ತಿ ನೀಡಿ ಮುಖದಲ್ಲಿ ಅರಳಿಸಿದ ನಗು, ಧ್ಯಾನದಲ್ಲಿ ಕುಳಿತವನ ಮುಖದಲ್ಲಿನ ಮಂದಸ್ಮಿತದ ನಗು, ಜೋಕು ಕೇಳಿ ತಡೆಯಲಾಗದು ಪಕ್ಕೆಲುಬು ಹಿಡಿದುಕೊಂಡು ಉರುಳಾಡಿ ನಕ್ಕ ನಗು, ಸಮಸ್ಯೆಗಳೆಲ್ಲಾ ಪರಿಹಾರವಾದಾಗ ನಿಟ್ಟುಸಿರಿನ ಸಂಗಡ ಹೊರಬಂದ ನಗು, ಸವಾಲನ್ನು ಕಂಡು ಸಿನಿಕತೆಯಿಂದ ಹುಟ್ಟಿದ ನಗು, ದೊಡ್ಡ ವರ ಮೂರ್ಖತನವನ್ನು ಕಂಡು ಹುಟ್ಟಿದ ನಗು, ಚಿಕ್ಕವರ ದೊಡ್ಡತನ ಕಂಡು ಹುಟ್ಟಿದ ನಗು, ಇತರರನ್ನು ಲೇವಡಿ ಮಾಡಿ ನಕ್ಕ ನಗು, ಕುಂಟ, ಕುರುಡನ ಅಸಹಾಯಕತೆ ಕಂಡು ನಕ್ಕ ನಗು, ಬಾಳೆ ಹಣ್ಣಿನ ಸಿಪ್ಪೆ ಹುಟ್ಟಿಸಿದ ನಗು, ಅಟ್ಟ ಹಾಸದ ನಗು, ಅಹಂಕಾರದ ಕೇಕೆಯ ನಗು, ವಿಕಾರವಾದ ನಗು!laugh

ಮನುಷ್ಯನಿಗೆ ನಗುವುದಕ್ಕೆ ಅದೆಷ್ಟು ಕಾರಣ ಸಿಕ್ಕುತ್ತವೆ! ಯಾರನ್ನೋ ಲೇವಡಿ ಮಾಡಿ, ಯಾರದೋ ಅಸಹಾಯಕತೆಯನ್ನು ಆಡಿಕೊಂಡು ನಮ್ಮನ್ನು ನಾವು ಸಂಕುಚಿತಗೊಳಿಸಿಕೊಂಡು ನಗುವ ಅಪಹಾಸ್ಯದ ನಗುವಿಗೂ, ನಮ್ಮೊಳಗನ್ನು ವ್ಯಾಪಿಸಿಕೊಂಡು ಎದೆಯನ್ನು ಹಗುರಾಗಿಸಿ ಕಣ್ಣನ್ನು ತೇವಗೊಳಿಸಿ, ಭಾವನೆಗಳನ್ನು ತಣಿಸುವ ವಿಶಾಲವಾದ ನಗುವಿಗೂ ಅದೆಷ್ಟು ವ್ಯತ್ಯಾಸವಿದೆಯಲ್ಲವೇ?

ನಮ್ಮ ಪ್ರೇಮ, ನಮ್ಮ ಗೆಳೆತನ, ನಮ್ಮ ಮಾತೃ ಭಕ್ತಿ, ನಮ್ಮ ಶಿಸ್ತು, ನಮ್ಮ ಸ್ವಚ್ಛತೆ, ನಮ್ಮ ದೇಶ ಪ್ರೇಮಗಳ ಹಾಗೆಯೇ ಹಾಸ್ಯ ಕೂಡ ವಿಶಿಷ್ಟವಾದದ್ದು. ನಾವು ನಮ್ಮ ಪ್ರೇಮಕ್ಕೆ ಮೌಲ್ಯ ಸೇರಿಸುತ್ತಾ ಹೋದ ಹಾಗೆ, ನಮ್ಮ ಪ್ರೇಮ ನಮ್ಮನ್ನು ಬೆಳೆಸುತ್ತಾ ಹೋದ ಹಾಗೆ ನಮ್ಮ ಹಾಸ್ಯವೂ, ಹಾಸ್ಯ ಪ್ರವೃತ್ತಿಯೂ ಸಹ. ನಾವದನ್ನು ಬೆಳೆಸುತ್ತೇವೆ, ಅದು ನಮ್ಮನ್ನು ಬೆಳೆಸುತ್ತದೆ.

ಏನಂತೀರಿ?

ನಗೆಯ ಚಿತ್ರ

6 ನವೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆಯ ಒಂದು ಸ್ಯಾಂಪಲ್:

s5

ಈ ಪ್ರಪಂಚದ ಬಗ್ಗೆ ತಲೆ ಕೆಡಿಸ್ಕೊಂಡು ಸಾಕಾಗೋಯ್ತು!

ಚರ್ಚೆ: ನಗುವುದು ಅಷ್ಟು ಕಷ್ಟವೇ!

3 ನವೆಂ

‘ನಗುವುದು ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್ ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್ ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?

ನಮ್ಮ ಬದುಕಿನ ಗತಿಯನ್ನ ಹೇಗೆ ಮಾರ್ಪಾಟುಗೊಳಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಿದರೆ ನಮಗೆ ನಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಅರಿವಾಗುತ್ತದೆ. ಮೂರು ನಾಲ್ಕು ಮಂದಿ ಕಲೆಯಬೇಕು, ಒಬ್ಬರ ಕಾಲನ್ನೊಬ್ಬರು ಎಳೆಯುವ ಕೆಲಸದಲ್ಲಿ ತೊಡಗಿಕೊಳ್ಳಬೇಕು, ಆಗ ಯಾವ ಪ್ರಯಾಸವೂ ಇಲ್ಲದೆಯೇ ಹಾಸ್ಯವು ಹುಟ್ಟಿಕೊಳ್ಳುತ್ತದೆ. ನಕ್ಕು ಹಗುರಾಗುತ್ತೇವೆ. ಸರಿ, ಆದರೆ ನಾಲ್ಕು ಮಂದಿ ಕಲೆಯುವುದೇ ನಮಗೆ ಬಹುದೊಡ್ಡ ಸಾಧನೆಯಾಗಿ ಕಾಣುತ್ತಿದೆಯಲ್ಲ!

ಅದನ್ನು ಪಕ್ಕಕ್ಕಿಡಿ, ನಗುವುದು ನಿಜಕ್ಕೂ ಎಷ್ಟು ಕಷ್ಟ ಎಂಬುದಕ್ಕೆ ಒಂದು ಪ್ರಸಂಗವನ್ನು ಗಮನಿಸಿ. ನೀವು ಟೀಚರ್ ಎಂದುಕೊಳ್ಳಿ ತರಗತಿಯನ್ನು ಪ್ರವೇಶಿಸಿದಾಕ್ಷಣ ಕಪ್ಪು ಹಲಗೆಯ ಮೇಲೆ ಅಕರಾಳ ರೂಪದ ಕಾರ್ಟೂನ್ ಬರೆದು ಅದರ ಕೆಳಗೆ ಯಾರೋ ಕಿಡಿಗೇಡಿ ಹುಡುಗರು ನಿಮ್ಮ ಹೆಸರು ಬರೆದಿರುತ್ತಾರೆ, ಬೈಕಿನಲ್ಲಿ ರಭಸವಾಗಿ ನುಗ್ಗುತ್ತಿರುತ್ತೀರಿ ಸ್ವಲ್ಪ ಮಂದ ಬುದ್ಧಿಯವ ಹುಡುಗ ನಿಮ್ಮ ಬೈಕಿಗೆ ಅಡ್ಡ ಬಂದು ಬಿಡುತ್ತಾನೆ- ಹೇಳಿ ಈಗ ನಿಮ್ಮ ಕೈಲಿ ನಕ್ಕು ಬಿಡಲು ಸಾಧ್ಯವೇ? ಕ್ರಿಕೆಟಿನಲ್ಲಿ ಭಾರತ ಫೈನಲ್ ಓವರಿನಲ್ಲಿ ಎರಡು ವಿಕೆಟ್ ಕಳೆದುಕೊಂಡು  ಸೋತುಬಿಡುತ್ತದೆ, ಮಗ ಪಿಯುಸಿಯಲ್ಲಿ ಫೇಲಾಗಿ ಮನೆಗೆ ಬರುತ್ತಾನೆ, ಪಕ್ಕದ ಮನೆಯಾತ ವಿನಾಕಾರಣದ ಕ್ಯಾತೆ ತೆಗೆದು ನಿಂತಿರುತ್ತಾನೆ- ಪ್ರಮಾಣ ಮಾಡಿ ಹೇಳಿ ನಿಮಗೆ ಈ ಸಂದರ್ಭಗಳಲ್ಲಿ ನಕ್ಕು ಹಗುರಾಗುವುದಕ್ಕೆ ಸಾಧ್ಯವಾ?ಅದಕ್ಕೇ ಮೊದಲಲ್ಲೇ ಕೇಳಿದ್ದು, ನಗುವುದು ಅಷ್ಟು ಸುಲಭವೇ ಎಂದು!

ಘನವಾದ ವ್ಯಕ್ತಿತ್ವವಿರುವವರಿಗೆ ಮಾತ್ರ ಎಂಥಾ ಸಂದರ್ಭದಲ್ಲಾದರೂ ನಗುವಿನ ಅಲೆಯನ್ನು ಮೈಮೇಲೆಳೆದುಕೊಂಡು ಅದರ ಮೇಲೆ ಅನಾಯಾಸವಾಗಿ ತೇಲಿ ಮುಂದೆ ಸಾಗಲು ಸಾಧ್ಯ. ಹಾಸ್ಯ ಹುಟ್ಟುವುದು ಅಂಥ ಘನವಾದ ವ್ಯಕ್ತಿತ್ವದ ಸಂಗದಲ್ಲಿ ಮಾತ್ರ. ವಿರಾಮದಲ್ಲಿನ ಪೋಲಿ ಹಾಸ್ಯ, ಅಪಹಾಸ್ಯಗಳೂ ಇವೆ. ಆದರೆ ಹಾಸ್ಯ ಮನೋವೃತ್ತಿಯ ನಿಜವಾದ ಸತ್ವ ಪರೀಕ್ಷೆ ನಡೆಯುವುದು ಸಂಕಟದ, ಆಘಾತದ ಸಂದರ್ಭಗಳಲ್ಲೇ. ಅಂಥ ಪ್ರಸಂಗಗಳಿಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಯಾವ ಕೊರತೆಯೂ ಇರುವುದಿಲ್ಲ!

ನಗುವುದಕ್ಕೆ ಕಾರಣ ಬೇಕಿತ್ತಾ?

11 ಸೆಪ್ಟೆಂ

‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು ಎಂಬುದು ಅರ್ಥವೇ ಆಗದ ಸಂಗತಿ.

ಇವರಿಗೆ ಹೇಳಬೇಕಾದ್ದು ಇಷ್ಟೇ, ‘ಮಹಾ ಸ್ವಾಮಿ ನೀವು ಬಹು ದೊಡ್ಡವರಾಗಿದ್ದೀರಿ. ದೊಡ್ಡ ದೊಡ್ಡದನ್ನು ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮಿಡೀ ಬದುಕನ್ನು ಸವೆಸಿದ್ದೀರಿ. ಅತ್ಯುತೃಷ್ಟವಾದ ಸಿದ್ಧಾಂತಗಳು, ತತ್ವಗಳು, ಬೃಹದ್ಗ್ರಂಥಗಳನ್ನು ಅಧ್ಯಯನ ಮಾಡುವಲ್ಲಿ ನೀವು ಪೂರ್ಣ ಶಕ್ತಿಯನ್ನು ತೊಡಗಿಸಿದ್ದೀರಿ. ಬಹುಶಃ ಈ ಹಂತದಲ್ಲಿ ನೀವು ತುಂಬಾ ಹಿಂದಿನ ಅಂದರೆ ನಿಮ್ಮ ಬಾಲ್ಯದ ಗುಣಗಳನ್ನು ಕೊಂಚ ಮರೆತಿದ್ದೀರಿ. ನೆನಪಿದೆಯೇ ಆಗ ನೀವು ಬಸ್ಸಿನ ಮುಂದಿನ ಸೀಟಿನಲ್ಲಿ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದಿರಿ. ನಿಮ್ಮ ಹಿಂದಿನ ಸೀಟಿನಲ್ಲಿ ಕುಳಿತ ಅಂಕಲ್ಲೊ, ಆಂಟಿಯೋ ನಿಮ್ಮನ್ನು ನೋಡಿ ‘ಐ ಕಳ್ಳಾ…’ ಎಂದು ಕಣ್ಣು ಮಿಟುಕಿಸಿದರೆ ಸಾಕು ನೀವು ಕಿಲಕಿಲನೇ ನಗುತ್ತಿದ್ದಿರಿ. ಪುನಃ ಅವರು ಕಣ್ಣು ಮಿಟುಕಿಸಿದಾಗ ಮತ್ತೆ ಅಷ್ಟೇ ಲವಲವಿಕೆಯಿಂದ ನಗುತ್ತಿದ್ದಿರಿ. ಪುನಃ ಪುನಃ ಎಷ್ಟು ಬಾರಿ ನಕ್ಕರೂ ನಿಮಗೆ ಆಯಾಸವಾಗುತ್ತಿರಲಿಲ್ಲ. ಬೇಸರವಾಗುತ್ತಿರಲಿಲ್ಲ.

‘ಯೋಚಿಸಿ, ನಿಮಗೆ ಎದುರಿನ ಅಂಕಲ್ಲೋ ಆಂಟಿಯೋ ಯಾವ ಜೋಕನ್ನೂ ಹೇಳುತ್ತಿರಲಿಲ್ಲ. ಅಸಲಿಗೆ ಅವರ ಪರಿಚಯವೂ ನಿಮಗಿರುತ್ತಿರಲಿಲ್ಲ. ಅವರು ಎಂಥವರು, ಅವರ ಸಂಸ್ಕೃತಿ ಎಂಥದ್ದು, ಜಾತಿ ಯಾವುದು, ಆಸಕ್ತಿಗಳ್ಯಾವುವು ಎಂಬುದೊಂದೂ ಗೊತ್ತಿರಲಿಲ್ಲ. ಆದರೆ ಎದುರಿಗಿದ್ದವರ ಮುಖದಲ್ಲಿನ ನಿಷ್ಕಲ್ಮಶ ನಗೆಯನ್ನು ನೀವು ಗುರುತಿಸಿದ್ರಿ, ನೀವೂ ಅಷ್ಟೇ ನಿಷ್ಕಲ್ಮಶವಾಗಿ ನಗುತ್ತಿದ್ದಿರಿ. ನಿಮ್ಮ ನಗುವನ್ನು ಕಂಡು ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಭಯವಾಗುತ್ತಿರಲಿಲ್ಲ. ನಿಮ್ಮ ನಗುವಿನಲ್ಲಿನ ವಿಶ್ವಾಸದಿಂದಾಗಿ ನೋಡಿದವರೆಲ್ಲರೂ ನಿಮ್ಮನ್ನು ನಗಿಸುತ್ತಿದ್ದರು. ನೀವು ನಗುತ್ತಲೇ ಇದ್ದಿರಿ. ನಿಮಗೆ ಕಾರಣಗಳು ಬೇಕಿರಲಿಲ್ಲ ಆಗ ನಗಲು… ನಗು ನಿಮ್ಮೊಳಗಿತ್ತು, ಹೊರಹಾಕಲು ನೆಪಗಳನ್ನು ಮಾತ್ರ ಅಪೇಕ್ಷಿಸುತ್ತಿದ್ದಿರಿ. ಈಗ ಒಳಗಿನ ನಗುವನ್ನು ಬತ್ತಿಸಿಕೊಂಡಿದ್ದೀರಿ, ಕಾರಣಗಳನ್ನು ಹುಡುಕುತ್ತಿದ್ದೀರಿ. ಹೇಳಿ, ನಾವು ನಿಮ್ಮಷ್ಟು ಬುದ್ಧಿವಂತರಲ್ಲ. ಆದರೆ ನಿಮಗೆ ಇದು ವಿವೇಕ ಅನ್ನಿಸುತ್ತದೆಯೇ?’

ಏನಂತೀರಿ, ನಮ್ಮ ನಗು ಕಳುದು ಹೋದದ್ದು ಎಲ್ಲಿ ಎಂಬುದೇನಾದರೂ ನಿಮಗೆ ತಿಳಿಯಿತೇ?

ಚರ್ಚೆ: ನಮ್ಮ ಹಾಸ್ಯ ಪ್ರಜ್ಞೆ ಎಂಥದ್ದು?

4 ಆಗಸ್ಟ್

ಚರ್ಚೆ

ಅದ್ಯಾವುದೋ ಹಲ್ಪುಡಿಯ ಜಾಹೀರಾತಿನಲ್ಲಿ ತೋರಿಸುತ್ತಾರೆ: ಪುಟ್ಟ ಹುಡುಗಿ ತನ್ನಪ್ಪನ ಬಹುಮುಖ್ಯವಾದ ಕಾಗದ ಪತ್ರವನ್ನು ಮುಲಾಜಿಲ್ಲದೆ ಪರ್ರ್ ಅಂತ ಹರಿದು ಹಾಕಿಬಿಡುತ್ತಾಳೆ. ಅದನ್ನು ಹುಡುಕುತ್ತಿದ್ದ ಅಪ್ಪ ಆಕೆಯನ್ನು ನೋಡುತ್ತಾಳೆ. ಆ ಮಗು ತನ್ನ ಹಾಲು ಹಲ್ಲುಗಳನ್ನು ತೋರಿಸಿ ಮುಗ್ಧವಾಗಿ ನಗುತ್ತದೆ. ಅಪ್ಪನಿಗೆ ಸಿಟ್ಟು ಮರೆವೆಯಾಗುತ್ತದೆ, ದುಗುಡ, ಟೆನ್ಷನ್ ಮಾಯವಾಗಿ ಮುಖದಲ್ಲಿ ಅಂಥದ್ದೇ ನಗೆ ಅರಳುತ್ತದೆ.

ನಗು ಅಂದರೆ ವಿಕಟ ಹಾಸ್ಯ ಮಾತ್ರವಾ? ಜೋಕುಗಳಿಗೆ ಬಿದ್ದು ಬಿದ್ದು ನಗುವುದೇ ಹಾಸ್ಯ ಪ್ರಜ್ಞೆ ಎನ್ನಿಸಿಕೊಳ್ಳುತ್ತದೆಯಾ? ಖಂಡಿತಾ ಇಲ್ಲ. ನಮ್ಮ ವ್ಯಕ್ತಿತ್ವದ ಪ್ರತಿಯೊಂದು ತಿರುವು, ಏರು, ಇಳಿತದಲ್ಲಿ ಬೆರೆತ ನಗು, ಲಘುವಾಗಿ ತೆಗೆದುಕೊಳ್ಳುವ ಗುಣ ನಮ್ಮ ಹಾಸ್ಯ ಪ್ರಜ್ಞೆಯನ್ನು ರೂಪಿಸುತ್ತದೆ. ಬೆಳಗಿನ ಕಾಫಿ ಆರಿ ಹೋದಾಗ ಸಿನೆಮಾ ಸ್ಟೈಲಿನಲ್ಲಿ ಅದನ್ನು ನೆಲಕ್ಕೆ ಕುಕ್ಕಿ ಯಕಃಶ್ಚಿತ್ ಕಾಫಿಗಾಗಿ ಇಡೀ ದಿನದ ಮೂಡನ್ನು ಹಾಳು ಮಾಡಿಕೊಳ್ಳುವುದಕ್ಕೂ, ‘ಇತ್ತೀಚೆಗೆ ನೀನು ನಗೋದೇ ಕಡಿಮೆಯಾಗಿದೆ. ಕಾಫೀಲಿ ಸಕ್ಕರೆ ಕಡಿಮೆಯಾದಾಗ ನಿನ್ನ ನಗಿವನ್ನೇ ಬೆರೆಸಿಕೊಂಡು ಕುಡಿದುಬಿಡುತ್ತಿದ್ದೆ’ ಅಂತ ಕೊಂಚ ರೊಮ್ಯಾಂಟಿಕ್ ಆಗಿ ಹೇಳಿದ್ರೆ ಮಾರನೆಯ ದಿನದಿಂದ ಕಾಫಿಗೆ ಸಕ್ಕರೆಯೂ ಸರಿಯಾಗಿರುತ್ತದೆ, ಹೆಂಡತಿಯ ಮುಖದ ಮೇಲೆ ನಗುವೂ ಅರಳಿರುತ್ತದೆ! ಟ್ರಾಫಿಕ್ಕಿನಲ್ಲಿ ಬೈಕಿಗೆ ತರಚಿಸಿಕೊಂಡು ಹೋದ ಸವಾರನೆಡೆಗೊಂದು ಮುಗುಳ್ನಗೆ ಬೀರುವಷ್ಟು ಸಂಯಮ, ಅನುರಾಗ ನಮ್ಮಲ್ಲಿದ್ದರೆ ಅದು ಹಾಸ್ಯ ಪ್ರಜ್ಞೆ ಅನ್ನಿಸಿಕೊಳ್ಳುತ್ತದೆ.

ನಮ್ಮ ಬದುಕು ಸಣ್ಣ ಸಣ್ಣ ಘಟನೆಗಳ ಒಟ್ಟು ಮೊತ್ತ. ಮೋಕ್ಷವೆಂಬುದು ಎಲ್ಲೋ ದೂರದಲ್ಲಿಲ್ಲ. ಸತ್ತ ಮೇಲಿನ ಜಡ್ಜ್‌ಮೆಂಟ್ ದಿನದ ಮೇಲೆ ನಮ್ಮ ಬದುಕಿನ ಯಶಸ್ಸು ನಿರ್ಣಿಯಸಲ್ಪಡುವುದಿಲ್ಲ. ಹಾದಿಯನ್ನು ಸವೆಸುವುದರಲ್ಲೇ ಬದುಕು ಇರುವುದು. ಇಂದಿನ ಕ್ಷಣವೇ ನಮ್ಮ ಬದುಕು, ಹಿಂದಿನದು ಕಳೆದು ಹೋದದ್ದು. ಮುಂದಿನದು ಮುಚ್ಚಿದ ಬಾಗಿಲಿನ ಹಿಂದಿರುವಂಥದ್ದು. ಈಗಿರುವ ಕ್ಷಣವೇ ಸತ್ಯ, ನಿತ್ಯ. ಅದನ್ನೇಕೆ ನಾವು ಸಿಟ್ಟು, ಕೋಪ, ಅಶಾಂತಿ, ಅಪನಂಬಿಕೆ, ಅನುಮಾನ, ದ್ವೇಷ, ಕಪಟಗಳಿಂದ ಕಳೆದುಕೊಳ್ಳಬೇಕು?

ಹೌದಲ್ಲವೇ?

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

28 ಜುಲೈ

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)

ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು ನಗೆ ಸಾಮ್ರಾಟರಾಗಿಯಾಗಿ ನಾಡಿನ ಬಹುತೇಕ ‘ನಗೆ’ಜೀವಿಗಳ ನಾಳಿನ ಬದುಕಿನ ಆಶಾಕಿರಣವಾಗಿತ್ತು. ಮನುಷ್ಯ ಕುಲದ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವ ಏಕೈಕ ನೆಪವಾಗಿತ್ತು. ಆದರೆ ಈಗ ಆ ಒಂದು ಆಸರೆಯೂ ಕೈತಪ್ಪಿ ಹೋಗಿ ವಿಶ್ವಾಸಮತದ ಸಂದರ್ಭದಲ್ಲಿ ಕೈಕೊಟ್ಟ ಸಂಸದರಿಂದಾಗಿ ಡೋಲಾಯಮಾನ ಸ್ಥಿತಿಗೆ ತಲುಪುವ ಸರಕಾರದ ಹಾಗೆ ನಗೆ ಸಾಮ್ರಾಟರು ಕನಲಿಹೋಗಿದ್ದಾರೆ.

ಕರ್ನಾಟಕವೆಂಬ ದಕ್ಷಿಣ ಭಾರತದ ಕೋಟೆಯ ಬಾಗಿಲನ್ನು ಗುದ್ದಿ ತೆರೆದುಕೊಂಡು ಒಳಕ್ಕೆ ನುಗ್ಗಿದ ಮಾನ್ಯ ಮುಖ್ಯ ಮಂತ್ರಿ ಎಡಿಯೂರಿಯಪ್ಪನವರ ಹಿಂದೆ ಮುಂದೆ ಅಕ್ಕ ಪಕ್ಕದಲ್ಲಿದ್ದ ಕಾಂತಿಗೆ ಕಾರಣ ನಮ್ಮ ಸದಾ ಆನಂದ ಗೌಡರ ನೀಟಾಗಿ ಉಜ್ಜಿದ ಬಿಳುಪಾದ ಹಲ್ಲುಗಳು. ಕಮಲದ ಪಕ್ಷ ಬಳ್ಳಾರಿಯ ಧಣಿಗಳು ಎಬ್ಬಿಸಿದ ಧೂಳಿನ ನಡುವೆಯೂ ಪ್ರಕಾಶಮಾನವಾಗುವುದಕ್ಕೆ ಗೌಡ್ರ ಕೊಲ್ಗೇಟ್ ನಗುವೇ ಕಾರಣ. ಆದರೆ ಚುನಾವಣೆ ನಡೆದು ಬಿಜೆಪಿ ಅದ್ಯಾವ ಮಾಯದಲ್ಲೋ ಗೆದ್ದು ಬಿಟ್ಟು ಯಡಿಯೂರಿಯಪ್ಪನವರಿಗೆ ತಾವು ಕಾಣುತ್ತಿರುವುದು ಕನಸೋ, ನನಸೋ ತಿಳಿಯದೆ ತಾವು ಮುಖ್ಯಮಂತ್ರಿಯೋ, ವಿರೋಧ ಪಕ್ಷದ ನಾಯಕನೋ ಎಂದು ಗೊಂದಲವಾಗಿ ಮಾತಾಡಲು ಶುರು ಮಾಡಿದ್ದಾರೆ. ಮೊನಾಲಿಸಾ ನಗೆಯ ಹಿಂದಿನ ರಹಸ್ಯಗಳನ್ನು, ನಿಗೂಢತೆಯನ್ನು ಕಂಡು ಬೆಚ್ಚಿದ ಜನರು ಆಕೆಯ ನಗೆಯನ್ನೇ ನಾಶ ಮಾಡಲು ಹೊರಟಂತೆ ಒಂದು ಕಡೆಯಿಂದ ಬಳ್ಳಾರಿಯ ಟಿಪ್ಪರ್‌ಗಳು, ಪದ್ಮನಾಭನಗರದ ಶೋಕ ಗೀತೆಯೂ, ಅನಂತ ಅವಾಂತರಗಳೂ, ಪಕ್ಷ-ಏತಕ್ಕೆ ಎನ್ನುವ ಪಕ್ಷೇತರರು ಅವರ ‘ಮುಗ್ಧ’ ನಗೆಯ ಮೇಲೆ ದಾಳಿ ಮಾಡಿದ್ದಾರೆ. ಅವರ ಮುಖದ ಮೇಲಿನ ನಗೆಯನ್ನು ಹಾಡಹಗಲೇ ಕೊಲೆ ಮಾಡಿದ್ದಾರೆ.

ನಿದ್ದೆಯಲ್ಲಿ ದೇಶದ ಬಗ್ಗೆ ಆಲೋಚಿಸುವ ‘ಕನಸು’ ಕಾಣುವ , ಮಾತಾಡುವಾಗ ಸದ್ದು ಎಲ್ಲೆಂಲ್ಲಿಂದ ಹೊರಡುತ್ತಿದೆ ಎಂದು ವಿಸ್ಮಯ ಚಕಿತರಾಗಿ ಕುಳಿತುಕೊಳ್ಳುವ ‘ನಗದ’ ನಾಯಕರುಗಳ ಕೈಯಲ್ಲಿ ಸಿಕ್ಕು ಕರ್ನಾಟಕದ ನಗೆಯೇ ಕಾಣೆಯಾದಂತಾಗುವ ಸಂದರ್ಭ ಬಂದಾಗ ನಾಡಿನ ಜನರು ಆನಂದ ಗೌಡರ ಮುಖವನ್ನು ಕಂಡು ತಮ್ಮ ಒಂದೆರೆಡಾದರೂ ಹಲ್ಲು ಬಿಡುತ್ತಿದ್ದರು. ಟಿವಿಯಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಜೋಲು ಮುಖಗಳ ನಡುವೆ ಹಸನ್ಮುಖಿಯನ್ನು ಕಂಡು ಜನರು ಹಗುರಾಗುತ್ತಿದ್ದರು. ಆದರೆ ನಾಡಿನ ದ್ರೋಹಿಗಳ ವ್ಯವಸ್ಥಿತ ಪಿತೂರಿಯಿಂದಾಗಿ ಮೊಗದಿಂದ ನಗುವು ಕಾಣೆಯಾಗಿದೆ. ಈ ಬಗ್ಗೆ ನಮ್ಮ ಮುಖ್ಯ ಮಂತ್ರಿಗಳು ಬಹು ಶೀಘ್ರವಾಗಿ ಗಮನ ಹರಿಸಬೇಕು. ಇಲ್ಲವಾದಲ್ಲಿ ಕರೆಂಟಿಲ್ಲದೆ ಕತ್ತಲೆಯಲ್ಲಿ ಹೊರಳಾಡುತ್ತಿರುವ ನಾಡು ನಗುವಿನ ಬೆಳಕಿಲ್ಲದೆ ನರಳಾಡಬೇಕಾದೀತು. ಈ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಕ ಗೊಳಿಸಿ ಆನಂದ ಗೌಡರ ನಗೆಯನ್ನು ಅಪಹರಿಸಿದ ಪಾತಕಿಗಳನ್ನು ಹುಡುಕಿ ತಂದು ಕಂಪ್ಯೂಟರಿನ ಮುಂದೆ ಕೂರಿಸಿ ನಗೆ ನಗಾರಿ ಡಾಟ್ ಕಾಮ್ ತೋರಿಸಿ ನಗುವ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಆನಂದ ಗೌಡರ ಸಾವಿರ ಕ್ಯಾಂಡಲ್ ನಗೆಯನ್ನು ಅವರ ಮುಖದ ಮೇಲೆ ಪುನರ್ ಪ್ರತಿಷ್ಠಾಪಿಸಬೇಕು ಎಂದು ನಗೆ ಸಾಮ್ರಾಟರು ಏಕ ಕಂಠದಲ್ಲಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ವಾರದ ವಿವೇಕ 13

15 ಜುಲೈ

………………………………………………………………

ಕಾರಣವಿರಲಿ,

ಕಾರಣವಿಲ್ಲದೆ ಇರಲಿ,

ನಗಿ, ಆಗ ನಿಮ್ಮನ್ನು ನೋಡಿ

ಇತರರೂ ನಗುತ್ತಾರೆ.

– ಟಿ.ಪಿ.ಕೈಲಾಸಂ

………………………………………………………………

ಚರ್ಚೆ: ಕಲ್ಲು ನಗುವ ಸಮಯ!

3 ಜುಲೈ

ನಮ್ಮ ವೇಗದ ನಗರದ ಬದುಕಿನಲ್ಲಿ ಎಲ್ಲವೂ ಕಮಾಡಿಟಿಗಳಾದ ಹಾಗೆಯೇ ನಗುವೂ ಒಂದು ಪ್ರಾಡಕ್ಟ್ ಆಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ. ಜನರಿಗೆ ನಗುವುದಕ್ಕೆ ಕಾರಣಗಳು ಬೇಕು. ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಜೋಕುಗಳನ್ನು ಹುಡುಕಲು ಶುರು ಮಾಡುತ್ತಾರೆ. ಜೋಕ್ ಪುಸ್ತಕಗಳನ್ನು ಕೊಳ್ಳುತ್ತಾರೆ. ನೂರಾರು ರುಪಾಯಿ ಶುಲ್ಕ ಕಟ್ಟಿ ಲಾಫಿಂಗ್ ಕ್ಲಬ್ಬುಗಳಿಗೆ ಸೇರಿಕೊಂಡು ನಗುತ್ತಾರೆ. ಕೆಲವರು ತುಂಬಾ ಪರಿಶ್ರಮ ವಹಿಸಿ ನಗುವುದರಲ್ಲಿ ಗಂಭೀರವಾದ ಸಾಧನೆ ಮಾಡುತ್ತಾರೆ. ನಗುವುದು ಎಂದರೇನೇ ಎಲ್ಲಾ ಪ್ರಯತ್ನಪೂರ್ವಕ ಕ್ರಿಯೆಗಳನ್ನು ಮರೆಯುವುದು, ಜನರು ನಗುವುದನ್ನೂ ಪ್ರಯತ್ನ ಪೂರ್ವಕವಾದ ಕ್ರಿಯೆಯಾಗಿಸಿಕೊಳ್ಳುತ್ತಿರುವುದನ್ನು ಕಂಡರೆ ಅಪ್ರಯತ್ನ ಪೂರ್ವಕವಾಗಿ ನಗು ಬರುತ್ತದೆ!

ಕಾಮಿಡಿ ಸೀರಿಯಲ್ಲುಗಳು, ಜೋಕುಗಳನ್ನು ಹೇಳಿ ಬಹುಮಾನ ಪಡೆಯಲು ಅದನ್ನೊಂದು ಸ್ಪರ್ಧೆಯಾಗಿಸಿದ ಕಾರ್ಯಕ್ರಮಗಳು ಬಹು ಮಜವಾಗಿರುತ್ತವೆ. ಒಂದೊಂದು ಹಾಸ್ಯ ಪ್ರಸಂಗ ಬಂದಾಗಲೂ, ಸಂಭಾಷಣೆಯಲ್ಲಿ ಒಂದೊಂದು ಪಂಚಿಂಗ್ ಲೈನ್ ಬಂದಾಗಲೂ ಹಿನ್ನೆಲೆಯಲ್ಲಿ ‘ಹ್ಹ..ಹ್ಹ…ಹ್ಹ’ ಎಂಬ ರೆಕಾರ್ಡೆಡ್ ನಗುವನ್ನು ಪ್ಲೇ ಮಾಡುತ್ತಾರೆ. ನಗುವುದಕ್ಕೆಂದೇ ಟಿವಿ ಸೆಟ್‌ಗಳ ಮುಂದೆ ಕುಳಿತ ಜನ ಆ ಎಲ್ಲಿ ನಗಬೇಕು ಎಂದು ಟಿವಿಯವರು ಸೂಚಿಸುವಂತೆ! ನಿಜಕ್ಕೂ ನಾವು ಅಷ್ಟು ಯಾಂತ್ರಿಕವಾಗಿದ್ದೇವೆ. ಮನಃಪೂರ್ವಕವಾಗಿ ನಗುವುದಕ್ಕೂ ಮುಂಚೆ ಇಲ್ಲಿ ನಗಬಹುದಾ, ನಕ್ಕರೆ ಯಾರೇನು ತಿಳಿಯುತ್ತಾರೆ ಎಂದು ಆಲೋಚಿಸಿ ಮುಂದುವರೆಯುವಷ್ಟು ಯಾಂತ್ರಿಕರಾಗಿದ್ದೇವೆ.

ಹೀಗಾಗಿ ನಮ್ಮ ನಗುವೂ, ನಮ್ಮನ್ನು ನಗಿಸಲು ಪ್ರಯತ್ನಿಸುವವರೂ ಇಷ್ಟೇ ಯಾಂತ್ರಿಕವಾಗುತ್ತಿದ್ದಾರೆ.

ಚರ್ಚೆ: ಬುದ್ಧ ನಗಲಿಲ್ಲ…

28 ಮೇ

ನಮ್ಮ ಧರ್ಮಗಳು ಯಾಕೆ ಜೀವ ವಿರೋಧಿಯಾದವು ಎಂಬುದು ತತ್ವಜ್ಞಾನಿಗಳ, ದಾರ್ಶನಿಕರ, ಧರ್ಮ ಭೀರುಗಳ ಅವಗಾಹನೆಗೆ ಬಿಟ್ಟ ವಿಚಾರ. ಆದರೆ ಅವುಗಳು ನಮ್ಮ ಸಹಜವಾದ ಸಂತಸವನ್ನು ಕಿತ್ತುಕೊಳ್ಳುವಷ್ಟು ಕ್ರೂರ ಹಾಗೂ ಕುಟಿಲವಾದದ್ದು ಏಕೆ ಎಂಬುದನ್ನು ನಾವೆಲ್ಲರೂ ಆಲೋಚಿಸಲೇಬೇಕು.

ನಗುವುದನ್ನು ಸಹಿಸಿಕೊಳ್ಳುವುದಕ್ಕೆ ಯಾವ ಧರ್ಮದಿಂದಲೂ ಸಾಧ್ಯವಾಗಿಲ್ಲ. ಮುಗುಳ್ನಗೆಯೇ ತುಂಬಾ ದುಬಾರಿಯಾಗಿರುವ ಸಂದರ್ಭದಲ್ಲಿ ಬಿದ್ದು ಬಿದ್ದು ನಗುವುದು, ಹೊಟ್ಟೆ ಕುಣಿಸಿಕೊಂಡು ನಗುವುದು, ನೆಲದ ಮೇಲೆ ಉರುಳಾಡಿ ನಗುವುದು, ತೊಡೆ ತಟ್ಟಿಕೊಂಡು ಪುಟಿದಾಡುತ್ತಾ ನಗುವುದು, ಹೊಟ್ಟೆ ಹಿಡಿದುಕೊಂಡು ನಗುವುದು ಎಲ್ಲವೂ ನಮಗೆ ದೇವ-ದೇವತೆಯರ ವಿಚಾರದಲ್ಲಿ ಕಂಡು ಬರುವುದಿಲ್ಲ. ನಗುವುದು ದೈವತ್ವಕ್ಕೆ ಅಪವಾದ ಎಂಬಂತೆ ಚರಿತ್ರೆಯಿಡೀ ದಾಖಲಾಗುತ್ತಾ ಬಂದಿದೆ. ಬುದ್ಧ ನಕ್ಕಿದ್ದ ಎಂಬುದನ್ನು ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದು, ಯೇಸು ಕ್ರಿಸ್ತ ಜೋಕು ಹೇಳಿದ್ದ ಎಂದರೆ ಧರ್ಮ-ದ್ರೋಹಿ ಎನಿಸಿಕೊಳ್ಳಬೇಕಾಗುತ್ತದೆ, ಶಂಕರರು ಬಿದ್ದು ಬಿದ್ದು ನಕ್ಕಿದ್ದರೆ ಎಂದರೆ ನಮಗೆ ಗ್ರಹಣ ಬಾಧೆಯಾಗಿದೆಯಾ ಎಂಬ ಗುಮಾನಿ ಏಳುತ್ತದೆ.

ಕಣ್ಣಲ್ಲಿ ನೀರು ಊಟೆ ಒಡೆಯುವ ಹಾಗೆ ನಕ್ಕಾಗ ನಮ್ಮೊಳಗಿನೆ ಗಂಟುಗಳೆಲ್ಲಾ ಸಡಿಲಾಗಿ ನಾವು ತೀರಾ ಸಹಜವಾಗಿಬಿಡುತ್ತೇವೆ, ನಮ್ಮ ಕೃತಕತೆಯನ್ನು ಕಿತ್ತೊಗೆದು ನಮ್ಮ ಕೇಂದ್ರಕ್ಕೆ ನಾವು ಹತ್ತಿರಾಗಿಬಿಡುತ್ತೇವೆ. ಆದರೆ ಮರುಕ್ಷಣವೇ ನಮ್ಮ ಪ್ರಜ್ಞೆ ನಮ್ಮನ್ನು ಚುಚ್ಚಲು ಶುರು ಮಾಡುತ್ತದೆ. ಇಷ್ಟು ನಕ್ಕು ಬಿಟ್ಟಿದ್ದೀಯ, ಮುಂದೆ ಇನ್ನೇನು ಕಾದಿದೆಯೋ ಎಂದು ಹೆದರಿಸುತ್ತದೆ. ಮನಸಾರೆ ನಕ್ಕ ಬಗ್ಗೆ ಒಂದು ಗಿಲ್ಟ್ ಹುಟ್ಟಿಕೊಳ್ಳುತ್ತದೆ.

ಯಾಕೆ ಹೀಗೆ?