Tag Archives: ತೊಣಚಪ್ಪ

ನಗೆ ಸಾಮ್ರಾಜ್ಯದ ಉತ್ತರಾಧಿಪತಿ!

6 ಜನ

ಯಾವ ತಾಂತ್ರಿಕ ಪರಿಣಿತಿಯೂ ಇಲ್ಲದೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನಗೆ ನಗಾರಿಯ ಸಾಮ್ರಾಜ್ಯವನ್ನು ಎರಡು ವರ್ಷಗಳ ಕಾಲ ನಾವು ಆಳಿದ್ದೇವೆ. ಈ ನಡುವೆ ನಮ್ಮ ಕೌಶಲ್ಯರಹಿತ, ಸಂಸ್ಕಾರವಿಲ್ಲದ ಹಸಿ ಹಸಿ ಪ್ರತಿಭೆಯನ್ನು ಬಳಸಿ ರಾಜ್ಯಭಾರ ಮಾಡಿದ್ದೇವೆ. ಪ್ರಜೆಗಳೂ ಸಹ ನಮ್ಮ ದೋಷಗಳನ್ನು ಕಂಡೂ ಕಾಣದವರ ಹಾಗೆ ಜಾಣ ಕುರುಡನ್ನು ನಟಿಸಿ ಸಾಮ್ರಾಟರ ಮರ್ಯಾದೆ ಕಾಪಾಡುತ್ತ ಬಂದಿದ್ದಾರೆ.

ಆದರೆ ಕಾಲ ಬದಲಾಗಿದೆ. ಮಗುವಿನ ನ್ಯಾಪ್‌ಕಿನ್ ಬದಲಾಯಿಸುವುದಕ್ಕೂ ಕಾಲೇಜು ಡಿಗ್ರಿಗಳಿವೆ. ಹೋಟೇಲಿಗೆ ಬಂದ ಗಿರಾಕಿಯೊಂದಿಗೆ ವ್ಯವಹರಿಸುವುದನ್ನು ಕಲಿಸಿಕೊಡುವುದಕ್ಕೆ ಪದವಿಗಳಿವೆ. ಪ್ರೀತಿಸುವುದನ್ನೂ ಹೇಳಿಕೊಡುವ ಕೋರ್ಸುಗಳಿವೆ. ಕಾಲ ಬದಲಾದ ಹಾಗೆ ನಾವೂ ಬದಲಾಗುವ ನಾಟಕವಾಡದಿದ್ದರೆ ಜನ ನಮ್ಮನ್ನು ಮ್ಯೂಸಿಯಂನಲ್ಲಿ ಪುರಾತನ ಅಸ್ಥಿ ಪಂಜರಗಳ ರೂಂ ಮೇಟ್ ಮಾಡಿಬಿಡಬಹುದೆಂಬ ಆತಂಕದಿಂದ ನಾವು ಹಗಲು ನಿದ್ದೆಯನ್ನೂ ರಾತ್ರಿ ಎಚ್ಚರವನ್ನೂ ಕಳೆದುಕೊಂಡಿದ್ದೆವು.

ಇಷ್ಟು ಕಾಲ ನಮ್ಮ ಅತ್ಯಾಪ್ತ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪ ಇವರಿಬ್ಬರನ್ನೇ ನೆಚ್ಚಿಕೊಂಡು ಸಾಮ್ರಾಜ್ಯವಾಳಿದ್ದೇವೆ. ಎರಡೂ ಬದಿಯಲ್ಲಿ ಉರಿಯುವ ಸಿಗರೇಟಿನಂತೆ ಯೌವನವನ್ನು ಸವೆಸಿದ್ದೇವೆ. ಈಗ ನಾವು ಆರಾಮ ಕುರ್ಚಿಯಲ್ಲಿ ನಮಗಿಂತ ಸಾಮರ್ಥ್ಯ ಶಾಲಿಗಳಾದ ಯುವಕರ ದುಡಿಮೆಯ ಯಶಸ್ಸಿನ ಫಲವನ್ನುಣ್ಣುತ್ತ, ಅವರ ದೋಷ, ವೈಫಲ್ಯಗಳನ್ನು ಹೆಕ್ಕುತ್ತ, “ನಮ್ಮ ಕಾಲದಲ್ಲಿ…” ಎಂದು ಬೋರ್ ವೆಲ್ ಕೊರೆಯುತ್ತ ಕೂರುವ ಸಮಯ.

ನಗೆ ನಗಾರಿಯು ಮೂಲತಃ ಸುದ್ದಿ ಮಾಧ್ಯಮ. ಸತ್ಯ ಹಾಗೂ ಸತ್ಯಾಕಾಂಕ್ಷಿಗಳ ನಡುವಿನ ತೂಗು ಸೇತುವೆ. ಸತ್ಯದಿಂದ ಸತ್ಯಾಕಾಂಕ್ಷಿಗಳನ್ನು ಸದಾ ದಿಕ್ಕೆಡಿಸುವ ಮುಖ್ಯವಾಹಿನಿಯ ಮಾಧ್ಯಮಗಳೊಂದಿಗೆ ಸೆಣೆಸುತ್ತ ಸತ್ಯವನ್ನು ಉಳಿಸುವುದು ನಮ್ಮ ಧ್ಯೇಯ. ಸತ್ಯವಲ್ಲದೆ ಬೇರೇನೂ ನಮ್ಮ ವರದಿಗಳಲ್ಲಿ ಸುಳಿಯಬಾರದು ಎಂಬುದು ನಮ್ಮ ಆದರ್ಶ. ಆದರೆ ಸೂಕ್ತ ತಾಂತ್ರಿಕ ಶಿಕ್ಷಣದ ಕೊರತೆಯಿಂದ ನಾವು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗಲಿಲ್ಲ ಎಂಬುದು ಈಗ ನಮ್ಮ ಮುಂದೆ ಕೂತಿರುವ ಯುವಕನ ಮಾತು ಕೇಳಿದಾಗ ಅನ್ನಿಸುತ್ತಿದೆ. ಒಬ್ಬನೇ ವ್ಯಕ್ತಿ ಪ್ರಧಾನ ಸಂಪಾದಕನೂ, ಉಪ ಸಂಪಾದಕನೂ, ಸುದ್ದಿ ಸಂಪಾದಕನೂ, ವರದಿಗಾರನೂ, ಪ್ರೂಫ್ ತಿದ್ದುವವನೂ ಆದರೆ ಆತನೊಬ್ಬನೇ  ಪತ್ರಿಕೆಯ ಓದುಗನೂ ಆಗಬೇಕಾಗುತ್ತದೆ ಎಂಬ ಆಘಾತಕಾರಿ ಸತ್ಯ ನಮ್ಮ ತಿಳಿವಿಗೆ ಬಂದಿತು. ಒಂದೇ ಕ್ಯೂಬಿಕಲ್‌ನಲ್ಲಿ ಕುಳಿತು ದಿನವೊಂದಕ್ಕೆ ಹದಿನೆಂಟು ಇಪ್ಪತ್ತು ತಾಸುಗಳ ಕಾಲ ಅರವತ್ತು ಎಪ್ಪತ್ತು ಪುಟಗಳನ್ನು ಗೀಚುವುದು ಮಹಾನ್ ಸಾಧನೆಯೇ ಸರಿ. ಆದರೆ ಹಾಗೆ ಗೀಚುವುದಕ್ಕೆ ಸರಕು ಎಲ್ಲಿಂದ ಲಭ್ಯವಾಗಬೇಕು? ಸರಕಿನ ಕೊರತೆ ಕಂಡಾಗಲೆಲ್ಲಾ ನಾನಿವತ್ತು ಬೆಳಿಗ್ಗೆ ಎರಡು ಬಾರಿ ಗಡ್ಡ ಮಾಡಿಕೊಂಡೆ, ಒಂದು ವಾರದಿಂದ ನಾನು ಗ್ಯಾಸ್ ಬಿಟ್ಟೇ ಇಲ್ಲ, ನನ್ನ ನಾಯಿಮರಿ ಕಾಲಿಗೆ ಆಗಿದ್ದ ಗಾಯ ಅದೆಷ್ಟು ಬೇಗ ಮಾಯವಾಯಿತು ಗೊತ್ತ ಎಂದು ಕೊರೆಯಬೇಕಾಗುವುದು.

ಸತ್ಯಸ್ಯ ಸತ್ಯ ವರದಿಗಾರಿಕೆಯನ್ನು ಮಾಡುವುದು ನಗೆನಗಾರಿಯ ಕಾರ್ಯಸೂಚಿಯಲ್ಲಿನ ಮೊದಲ ಆದ್ಯತೆಯಾಗಬೇಕು. ಅದಕ್ಕಾಗಿ ನಾವು ಯಂಗ್ ಮ್ಯಾನ್ ನಾರದನ ಕೈಲಿ ಸಾಮ್ರಾಜ್ಯದ ಕೆಲಸವನ್ನು ಒಪ್ಪಿಸುತ್ತಿದ್ದೇವೆ. ನಾವು ಆತನ ಕೆಲಸವನ್ನು ಗಮನಿಸಿಕೊಳ್ಳುತ್ತ, ಬಿಟ್ಟಿ ಉಪದೇಶಗಳನ್ನು ನೀಡುತ್ತ ಆತ ಕೇಳಿದಾಗ ನಮ್ಮ  ಆರ್ಥ್ರೈಟಿಸ್ ಬಗ್ಗೆಯೂ, ಐವತ್ತು ವರ್ಷಗಳಿಂದ ನಾವು ತ್ಯಜಿಸುತ್ತ ಬಂದಿರುವ ಚಟಗಳ ಬಗ್ಗೆಯೋ ಕೊರೆಯುತ್ತೇವೆ.

ಇಷ್ಟೇ ಅಲ್ಲದೆ ಸಾಮ್ರಾಜ್ಯದ ವಹಿವಾಟು ಗಮನಿಸುವುದಕ್ಕೆ ದೊಡ್ಡದೊಂದು ತಂಡವೇ ಸಿದ್ಧವಾಗುತ್ತಿದೆ. ನಮ್ಮ ಕುಚೇಲ ಹಾಗೂ ತೊಣಚಪ್ಪನವರ ಸಂಗಡ ಸ್ವಾಮಿ ಅಧ್ಯಾತ್ಮಾನಂದ ಸೇರಿಕೊಳ್ಳಲಿದ್ದಾರೆ. ಇವರಲ್ಲದೆ ಮಿಸ್ಟರ್ ನಕ್ಕಣ್ಣ ಹಾಗೂ ನಗಾರಿಯ ಏಕೈಕ ಮಹಿಳಾ ಒದರಿಗಾರ್ತಿ ಹಾಗೂ ಲೇಖಕಿ ಶ್ರೀಮತಿ ಕುಮಾರಿ ಪ್ರಜೆಗಳಿಗಾಗಿ ದುಡಿಯಲಿದ್ದಾರೆ, ನಗಾರಿ ಬಡಿಯಲಿದ್ದಾರೆ!

ತೊಣಚಪ್ಪನ ಡೈರಿ

9 ಫೆಬ್ರ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ

ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ ಕೆಂಗಣ್ಣಿಗೆ ಆತ ಗುರಿಯಾಗೋದನ್ನ ತಪ್ಸಿ.

ರಂಗಸ್ಥಳದಲ್ಲೇ ಪ್ರಾಣ ಬಿಡುವುದು ಕಲಾವಿದ ಶಂಭು ಹೆಗಡೆಯವರ ಇಚ್ಛೆಯಾಗಿತ್ತು: ವರದಿ

ಇದೇ ಆಸೆ ನಮ್ ರಾಜಕೀಯ ನಾಯಕ್ರುಗಳಿಗೆ ಬಂದ್ರೆ ಎಷ್ಟ್ ಚಂದವೋ! ಭಾಷಣ ಬಿಗಿಯುವಾಗ್ಲೇ ಪ್ರಾಣ ಬಿಡೋ ಹಂಗೇನಾದ್ರೂ ಆದ್ರೆ ಈ ದೇಶ್ದ ನಾಸ್ತಿಕ್ರೆಲ್ಲ ಹೋಲ್ಸೇಲಾಗಿ ದೇವ್ರಿಗೆ ಅಡ್ಡ ಬೀಳ್ತಾರೆ!

ಮಾಧ್ಯಮಗಳಿಗೆ ಅಂಕುಶ ಹಾಕಲು ಆಚಾರ್ಯ ಚಿಂತನೆ- ವರದಿ

ನಮ್ ನ್ಯೂಸ್ ಚಾನಲ್ಲು, ಪೇಪರುಗಳ್ನ ಹ್ಯಾಂಡ್ಲ್ ಮಾಡೋಕೆ ಕ್ಲಾಸಲ್ಲಿ ಮಾನಿಟರ್ ಇದ್ಧಂಗೆ ಒಬ್ಬ ಒಂಬುಡ್ಸ್ ಮನ್ (ಮಾಧ್ಯಮ ಧರ್ಮಾಧಿಕಾರಿ)ಯನ್ನು ನೇಮಿಸುವ ಆಲೋಚ್ನೆ ಮಾಡ್ತಿದಾರಂತೆ ನಮ್ ಗೃಹ ಮಂತ್ರಿಗಳು. ಈ ಸಂದರ್ಭದಲ್ಲಿ ಮೊದ್ಲು ರಾಜ್ಯದಾಗೆ ಗಲಾಟೆ ಗದ್ಲ ತಪ್ಸೋ ಒಳ್ಳೆ ಅಧಿಕಾರಿ ನೇಮಕ ಆಗ್ಬೇಕು ಅಂತ ವಿರೋಧ ಪಕ್ಷದೋರಂಗೆ ವಾದ ಮಾಡೋದು ಬಿಟ್ಟು ನಮ್ ನಗೆ ಸಾಮ್ರಾಟ್ರನ್ನ ಒಂಬುಡ್ಸ್ ಮನ್ ಹುದ್ದೆಗೆ ಶಿಫಾರಸ್ಸು ಮಾಡ್ರಿ. ಹಂಗಾದ್ರೂ ಅವ್ರನ್ನ ನಗೆ ನಗಾರಿಯಿಂದ ಒದ್ದೋಡ್ಸೋಕೆ ಸಾಧ್ಯವಾಗುತ್ತೆ!

ನಗಾರಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಸುರಿಮಳೆ!

6 ಫೆಬ್ರ

ನಗೆ ನಗಾರಿ ಡಾಟ್ ಕಾಮ್‌ನ ವಾರ್ಷಿಕೋತ್ಸವ ಸಮಾರಂಭದ ಬಗ್ಗೆ ಸವಿರವಾದ ವರದಿಯನ್ನು ನೀಡಬೇಕಿದ್ದ ತೊಣಚಪ್ಪ ಹಾಗೂ ಕುಚೇಲರು ಪಾರ್ಟಿಯಲ್ಲಿನ ಪ್ರಸಾದ, ತೀರ್ಥದಿಂದ ‘ಸಮಾಧಿ’ ಸ್ಥಿತಿಯನ್ನು ತಲುಪುವುದರಿಂದ ಸಾಮ್ರಾಟರಾದ ನಾವೇ ಕುದುರೆಗಳ ಲಗಾಮು ಹಿಡಿಯಬೇಕಿದೆ. ಹೀಗಾಗಿ ವರದಿ ಕೊಂಚ ತಡವಾಗಲಿದೆ. ಆದರೆ ನಮ್ಮಹಾಗೂ ನಮ್ಮ ಪತ್ರಿಕೆಯ ಹುಟ್ಟು ಹಬ್ಬಕ್ಕೆ ನಮ್ಮ ಭಕ್ತ ವೃಂದವು ಪ್ರತಿಕ್ರಿಯಿಸಿರುವ ರೀತಿಯನ್ನು ನೆನೆಯದಿದ್ದರೆ ನಮಗೆ ಮನಃಶಾಂತಿ ಲಭ್ಯವಾಗುವುದಿಲ್ಲ.

ಗಣೇಶ್.ಕೆ

mareyabahudemba bhayadinda eegale abhinandisuttiddene.
aadare neevu nageyanna nandisabedi anta kelikolluttene.

ಪ್ರಸಾದ್

ನೂರ್ಕಾಲ ಬೆಳಗಲಿ ನಗೆಯ ದೀವಿಗೆ
ಅನುಗಾಲವೂ ಹರಿಯಲಿ ಸಾಮ್ರಾಟರ ಕಿರುನಗೆ
ಅಭಿಮಾನಿಗಳ ಎದೆಯಲ್ಲಿ ಸಂಭ್ರಮವು ಬಗೆಬಗೆ.
“ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು”

ಹೇಮಾ ಪವಾರ್

ಸಾಮ್ರಾಟರೇ ವರ್ಷವಿಡೀ ನಗೆ ನಗಾರಿಯ ರಥ ಸುಗಮವಾಗಿ ನಡೆಸಿಕೊಂಡು ಬಂದಿದ್ದೀರಿ. ಅದರ ರಹಸ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನೂ ಮುಗಿಸಿದ್ದೀರಿ. ನಿಮ್ಮ ಚೇಲ ಕುಚೇಲನ ಭಯಂಕರ ವಿರೋಧವಿದ್ದರೂ, ನಮ್ಮೆಲ್ಲರ ಪರವಾಗಿ ನಿಮಗೊಂದು ಸನ್ಮಾನ ಸಮಾರಂಭ ಏರ್ಪಡಿಸಬೇಕೆಂದಿದ್ದೇವೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು??

ವಿ. ಸುಮಂತ ಶ್ಯಾನುಭಾಗ್

ಸಾಮ್ರಾಟರೆ .. ಸನ್ಮಾನವೆಂದರೆ ಯಾರ ಬಳಿ ಏನು ಇಲ್ಲವೋ ಅದನ್ನು ಕೊಡುವುದು ಎಂದರ್ಥ .. ಹೇಮಾ ಅವರಿಗೆ ಎಷ್ಟು ಸೊಕ್ಕು ನೋಡು ನಿಮಗೆ ಮಾನ ಮರ್ಯಾದೆ ಕೊಡುತ್ತೇನೆ ಅಂಥಾ ಇದ್ದಾರೆ

ಏನೇ ಇರಲಿ ಸಮಸ್ತ ಕನ್ನಡಿಗರಿಗೆ ದಿನವೂ ಹಾಸ್ಯರಸದ ಭೂರಿಭೋಜನ ಬಡಿಸುತ್ತಿರುವ , ಸ್ವಯಂಘೋಷಿತ ನಗೆಸಾಮ್ರಾಟ್ , ಕಲಿಯುಗದ ಆಸ್ಥಾನ ವಿದೂಷಕ , ಒಂದು ವರುಷದ ಮಗು “ನಗೆನಗಾರಿ ” ಮತ್ತದರ ಚಮಚಾಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ .
ಶ್ರೀ ದೇವರು ತಮಗೆ ದೀರ್ಘಾಯುಷ್ಯ ,ಆರೋಗ್ಯ ,ಸುಖ ಶಾಂತಿ ನೆಮ್ಮದಿಗಳನ್ನು ಕರುಣಿಸಲೆಂದು ಆತನ ಚರಣಕಮಲಗಳಲ್ಲಿ ಪ್ರಾರ್ಥಿಸುತ್ತೇನೆ . ನಿಮ್ಮ ನಗಾರಿಯ ಶಬ್ದ ಕನ್ನಡನಾಡಿನಾದ್ಯಂತ ಮಾರ್ದನಿಸಲಿ ,ನಿಮ್ಮ ನಗೆಗಡಲಲ್ಲಿ ಇನ್ನೊ ದೊಡ್ಡ ದೊಡ್ಡ ನಗುವಿನ ಅಲೆಗಳು ಏಳಲಿ ಹಾಗೋ ನಮ್ಮಂಥ ನಿಮ್ಮ ಅಭಿಮಾನಿಗಳು ಆ ನಗೆಗಡಲಲ್ಲಿ ತೇಲುವಂತಾಗಲಿ ಎಂದು ಹಾರೈಸುತ್ತೇನೆ .

ಮತ್ತೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳೊಂದಿಗೆ

ರಂಜಿತ್ ಅಡಿಗ

“ಸೋಮಾರಿ ಮಿತ್ರ”ನೆಂದು ಉಲ್ಲೇಖಿಸಿ, ನಿಮ್ಮ ಅಸಂಖ್ಯ ಓದುಗರೆದುರು ನನ್ನನ್ನು ನೆನೆದುದ್ದಕ್ಕೆ ಕಣ್ತುಂಬಿ ಬಂತು.

ಅಂದ ಹಾಗೆ ಫೆಬ್ರವರಿ ೧೪ ಹತ್ತಿರ ಬಂತು, ಸಾಮ್ರಾಟರ ಪ್ರೇಮ ಕತೆಗಳನ್ನು ಓದುವ ಸೌಭಾಗ್ಯ ದೊರಕೀತೆ??

ನಗೆ ನಗಾರಿ ಕಛೇರಿಗೆ ಸಿಬಿಐ ದಾಳಿ!

22 ಜನ

ನೂರು ಚಿಲ್ಲರೆ ಕೋಟಿ ಜನಸಂಖ್ಯೆಯ ದೇಶವನ್ನು ಯಾಮಾರಿಸಿದ ಏಕೈಕ ವ್ಯಕ್ತಿ ‘ಸತ್ಯಂ’ ಹರಿಶ್ಚಂದ್ರ ರಾಮಲಿಂಗಾ ರಾಜುರವರನ್ನು ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ತನಿಖೆ ನಡೆಸಿ ಬಲೆ ಬೀಸಿ ಬಂಧಿಸಿರುವ ದೇಶದ ತನಿಖಾ ಸಂಸ್ಥೆಗಳು ಈಗ ಲೈಫ್ ಬಾಯ್ ಸೋಪಿನಲ್ಲಿ ಕೈತೊಳೆದುಕೊಂಡು ವಂಚಕರ ಹಿಂದೆ ಬಿದ್ದಿರುವ ಸುದ್ದಿ ನಗೆ ನಗಾರಿ ಕಛೇರಿಯನ್ನು ತಲುಪುವ ಹೊತ್ತಿಗಾಗಲೇ ಸಿಬಿಐ ಸೇನಾಪಡೆಯ ತುಕಡಿಯೊಂದು ನಗೆ ನಗಾರಿಯ ಏಕಕೊಠಡಿ ಬೃಹತ್ ಮಳಿಗೆಯ ಕಟ್ಟಡದ ಮೇಲೆ ದಾಳಿ ಮಾಡಿ ನಗಾರಿಯ ಏಕಸದಸ್ಯ ಬ್ಯೂರೋದ ಸಮಸ್ತ ನೌಕರರನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ನಗೆ ನಗಾರಿಯ ತಲೆ ಬುರುಡೆ, ಪಕ್ಕೆಲುಬು, ಎದೆಗೂಡುಗಳನ್ನೆಲ್ಲಾ ತಡಕಾಡಿ ಸಂಗ್ರಹಿಸಿದ ದಾಖಲೆಗಳನ್ನು ಹದ್ದಿನ ಕಣ್ಣಿನ ಅಧಿಕಾರಿಗೆ ಕೊಟ್ಟು ಪರೀಕ್ಷಿಸಿದರು. ಸಾಮ್ರಾಟರನ್ನು ಬೋನಿನೊಳಗೆ ಹಾಕಿ ಇಡೀ ಕಛೇರಿಯನ್ನು ಲೂಟಿ ಮಾಡಿದರು. ಕಡೆಗೆ ಸಾಮ್ರಾಟರು ತಮ್ಮಷ್ಟೇ ಶುದ್ಧ ಹಸ್ತರು, ಅವರೂ ಸಹ ಪ್ರತಿ ದಿನ ಆರು ಸಲ ತಮ್ಮ ಹಸ್ತವನ್ನು ಲೈಫ್ ಬಾಯ್ ಸೋಪಲ್ಲಿ ತೊಳೆಯುತ್ತಾರೆ ಎಂದು ತಿಳಿದು ಅವರನ್ನು investigationದೋಷಮುಕ್ತರನ್ನಾಗಿಸಿದರು.

ನಗೆ ನಗಾರಿಯ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲೇ ನಮ್ಮ ಕಛೇರಿಯ ಮೇಲೆ ನಡೆದ ಸಿಬಿಐ ದಾಳಿಯು ರಾಜಕೀಯ ಪ್ರೇರಿತವಾದದ್ದು ಎಂಬ ಪ್ರಾಮಾಣಿಕ ಸಂಶಯ ಸಾಮ್ರಾಟರಿಗೆ ಬಂದಿತು. ಸ್ಕಾಟ್ ಯಾರ್ಡಿನಲ್ಲಿ ಅಟೆಂಡೆನ್ಸ್ ಕೊರತೆಯಿಂದ ಸಸ್ಪೆಂಡ್ ಆದ ಪ್ರಪಂಚದ ಅತ್ಯಂತ ತೀಕ್ಷ್ಣಮತಿಯ ಪತ್ತೇದಾರ ಕುಚೇಲನನ್ನು ಸಾಮ್ರಾಟರು ಈ ಹುನ್ನಾರವನ್ನು ಪತ್ತೆ ಮಾಡಲು ಅಟ್ಟಿದರು.

ಕೆಲವೇ ಸೆಕೆಂಡುಗಳ ಕಾಲ ಕಂಪ್ಯೂಟರಿನ ಮುಂದೆ ಕೂತು ಗೂಗಲಿಸಿ ತನ್ನ ತನಿಖಾ ವರದಿಯನ್ನು ಸಿದ್ಧ ಪಡಿಸಿದ ಕುಚೇಲ, ಇದಕ್ಕೆಲ್ಲಾ ವಿರೋಧಿ ಪಾಳಯದ ಬ್ಲಾಗರುಗಳೇ ಕಾರಣ ಎಂದು ಸಾಬೀತು ಮಾಡಿದ. ನಗೆ ನಗಾರಿ ಶುರುವಾಗಿ ಇನ್ನೂ ಒಂದು ವರ್ಷವಾಗಿಲ್ಲ ಆಗಲೇ ಹದಿನೈದು ಸಾವಿರಕ್ಕಿಂತ ಹೆಚ್ಚು ‘ಒದೆತ’ಗಳನ್ನು ಸಂಪಾದಿಸಿರುವುದು ಅನೇಕರ ಕಣ್ಣನ್ನು ಕೆಂಪು ಮಾಡಿತು. ವರ್ಷಕ್ಕೆ ಹನ್ನೆರಡೇ ತಿಂಗಳು, ತಿಂಗಳೊಂದಕ್ಕೆ ಸರಾಸರಿ ಮುವತ್ತು ದಿನ ಎಂದು ಪುನರುಚ್ಚಿಸುವ ಬುದ್ಧಿವಂತರ ಮಾತನ್ನು ನಂಬುವುದಾದರೆ ನಗೆ ನಗಾರಿ ತಿಂಗಳಿಗೆ ಸಾವಿರಕ್ಕಿಂತ ಹೆಚ್ಚು, ಅಂದರೆ ದಿನಕ್ಕೆ ಮುವತ್ತಕ್ಕಿಂತ ಹೆಚ್ಚು ಹಿಟ್ಟುಗಳನ್ನು ಗಳಿಸಿಕೊಂಡಿದೆ. ಈ ಸಾಧನೆಗೆ ಸಾಮ್ರಾಟರ ಸ್ವಾರ್ಥ ರಹಿತ ಪರಿಶ್ರಮವೇ ಕಾರಣ ಎಂಬುದು ಸೂರ್ಯನ ಅಡಿಯಲ್ಲಿರುವ ಪ್ರತಿ ಜೀವಿಗೂ ತಿಳಿದಿರುವ ಸಂಗತಿಯೇ. ಆದರೆ ಅತೀ ಬುದ್ಧಿವಂತರಾದ ಸಾಮ್ರಾಟರು ಹರಿಶ್ಚಂದ್ರ ರಾಜುವಿನ ಹಾಗೆ ಸಾಧನೆಯನ್ನು ಉಬ್ಬಿಸಿ, ಇಲ್ಲದ ಸಂಪತ್ತನ್ನು ತೋರಿದ್ದಾರೆ ಎಂದು ಸರಕಾರದ ಕಿವಿಯೂದಿದ ನಮ್ಮ ವಿರೋಧಿಗಳು ಸಿಬಿಐಯನ್ನು ನಮ್ಮ ಮೇಲೆ ಛೂ ಬಿಟ್ಟರು.
blogspot
ಅಗ್ನಿ ಪರೀಕ್ಷೆಯಲ್ಲಿ ಸೀತಾ ಮಾತೆ ಡಿಸ್ಟಿಂಕ್ಷನ್ ಪಡೆದು ಪಾಸಾದ ಹಾಗೆಯೇ ಸಾಮ್ರಾಟರು ಸಿಬಿಐ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಬಹುಮಾನವನ್ನು ಗಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮೆಲ್ಲಾ ವಿರೋಧಿಗಳಿಗೆ ನಾವು ಒಂದು ವಿಷಯ ಸ್ಪಷ್ಟ ಪಡಿಸಲು ಇಚ್ಚಿಸುತ್ತೇವೆ: ನಮ್ಮಲ್ಲಿಲ್ಲದ ಅಪ್ರಮಾಣಿಕತೆಯನ್ನು, ವಂಚನೆ ಬುದ್ಧಿಯನ್ನು ಇದೆ ಸಾಬೀತು ಮಾಡುವುದಕ್ಕೆ ಸ್ವತಃ ಆ ರಾಮಲಿಂಗ ರಾಜುವಿಗೂ ಸಾಧ್ಯವಿಲ್ಲ!

ನಮ್ಮ ಈ ಧೈರ್ಯಕ್ಕೆ  ನಿಮ್ಮ ಬೆಂಬಲ ಕಾರಣ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ ಎಂದು ಭಾವಿಸಿದ್ದೇವೆ.

– ನಗೆ ಸಾಮ್ರಾಟ್ ಹಾಗೂ ತೊಣಚಪ್ಪ

(ಚಿತ್ರ ಕದ್ದದ್ದು ಇಲ್ಲಿಂದ: http://www.lawyerbrooks.com/investigation.html)