ಬರವಣಿಗೆಯಲ್ಲಿ ಹಾಸ್ಯಮಯವಾದ ಶೈಲಿ, ಸಿನೆಮಾಗಳಲ್ಲಿ ವಿಡಂಬನೆಯ ನಿರೂಪಣೆ ಹೇಳಬೇಕಾದ ವಿಷಯದ ಗಾಂಭೀರ್ಯವನ್ನು ಕೆಡಿಸುತ್ತವೆ ಆ ಮೂಲಕ ಅವುಗಳು ಬೀರಬೇಕಾದ ಪರಿಣಾಮ ಬೀರುವಲ್ಲಿ ವಿಫಲವಾಗುತ್ತವೆ ಎಂಬುದು ಹಲವರ ಆರೋಪ. ಗಂಭೀರವಾದ ವಿಚಾರವನ್ನು ಅಷ್ಟೇ ಒಣಗಾಂಭೀರ್ಯದಲ್ಲಿ ಮಂಡಿಸಿದಾಗಲೇ ಅದು ಪರಿಣಾಮ ಬೀರಲು ಸಾಧ್ಯವಾಗುತ್ತದೆ. ಹಾಸ್ಯ ಓದುಗರ ಇಲ್ಲವೇ ನೋಡುಗರ ಗಮನವನ್ನು ವಿಷಯದಿಂದ ಪಲ್ಲಟಗೊಳ್ಳುವಂತೆ ಮಾಡುತ್ತದೆ ಎನ್ನಲಾಗುತ್ತದೆ.
ಆದರೆ ತಮ್ಮ ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅವರಿಗೇ ವಿಶಿಷ್ಟವಾದ ಹಾಸ್ಯಾತ್ಮಕವಾದ ಶೈಲಿಯನ್ನು ಬೆಳೆಸಿ ಹೆಸರಾದ ಮಲಯಾಳಿ ಲೇಖಕ ವೈಕಂ ಮಹಮದ್ ಬಶೀರ್ ಅಭಿಪ್ರಾಯ ಬೇರೆ ತೆರನಾದದ್ದು:
‘ನಾನು ಉದ್ದೇಶ ಪೂರ್ವಕವಾಗಿ ಸಣ್ಣ ಕಾದಂಬರಿಗಳನ್ನು ಬರೆಯುತ್ತೇನೆ. ದೊಡ್ಡ ಕಾದಂಬರಿಯನ್ನು ಬರೆಯುತ್ತಾ ಹೋದಂತೆ ತೆಳುವಾಗುತ್ತಾ ಹೋಗುತ್ತದೆ. ಜನಗಳ ಮನಸ್ಸಿನಲ್ಲಿ ನಿಲ್ಲುವುದು ಕೆಲವೇ ಕೆಲವು ಪುಟಗಳು ಮಾತ್ರ. ಉಳಿದವು ವೇಸ್ಟ್. ಬೋರ್ ಅನ್ನಿಸಿ ಬಿಡಲೂಬಹುದು. ಹಿಡಿದದ್ದನ್ನು ಬಿಡದಂತೆ ಓದಿಸಿಕೊಂಡು ಹೋಗಬೇಕಾದರೆ ಚಿಕ್ಕ ಕಾದಂಬರಿಯಲ್ಲಿ ವಿಶ್ವವನ್ನೇ ತುಂಬಿಸಿ ಬಿಡಬೇಕು. ಹೀಗಾಗಿ ‘ಎಂಡೆ ಉಪ್ಪಾಪ್ಪಕ್ಕೊರು ಆನೆಯುಂಡಾಯಿರುನ್ನು’ ಕಾದಂಬರಿಯಲ್ಲಿ ಹೇಳ ಬೇಕಾದ್ದನ್ನೆಲ್ಲ ಆನೆಯ ರೂಪದಲ್ಲಿ ಹೇಳಿಬಿಟ್ಟೆ’ ಎಂದರು.
ನಾನು ತಲೆದೂಗಿದೆ. ‘ಹೌದು, ಆನೆ ಈ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳುತ್ತದೆ’ಎಂದೆ. ‘ನೀವು ಬಳಸುವ ಹಾಸ್ಯದಿಂದಾಗಿ ಗಂಭೀರ ವಿಷಯಗಳು ಮರೆಯಾಗುವುದಿಲ್ಲವೇ…?’ ಎಂದು ಕೇಳಿದೆ.
‘ಇಲ್ಲ, ಮನುಷ್ಯನಿಗೆ ತಾಳ್ಮೆ ಇಲ್ಲದಿರುವ ಸಂದರ್ಭಗಳೇ ಹೆಚ್ಚು. ಗಂಭೀರವಾದ್ದನ್ನು ನೇರವಾಗಿ ಹೇಳಿದರೆ ಅವನಿಗೆ ನಾಟುವುದಿಲ್ಲ. ಗಂಭೀರವಾದುದನ್ನು ಮನಸ್ಸು ತೆಗೆದುಕೊಳ್ಳುವುದೂ ಇಲ್ಲ. ತೆಳುವಾದ ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಸೇರಿಸಿ ಓದುಗನ ಮುಂದಿಟ್ಟರೆ ಅವನಿಗೆ ನಾಟುವ ಸಂದರ್ಭ ಹೆಚ್ಚು. ಗಂಭೀರ ವಿಷಯಗಳು ಬಲು ಭಾರ. ಹಾಸ್ಯರಸದೊಳಗೆ ಹುದುಗಿದ ವಿಷಯಗಳು ಮನಸ್ಸಿನಲ್ಲಿ ಸುಲಭವಾಗಿ ಕೂತುಬಿಡುತ್ತದೆ.’
ನಿಮಗೇನನ್ನಿಸುತ್ತೆ? ವಿಷಯದ ನಿರೂಪಣೆಯಲ್ಲಿ ಹದವಾದ ಹಾಸ್ಯ ಬೆರೆತರೆ, ಸಹಜವಾದ ವಿಡಂಬನೆ ಕಲೆತರೆ ಅದು ಬೀರುವ ಪರಿಣಾಮ ಗಾಢವಾಗುತ್ತದೆಯೇ? ಯಾವುದಾದಾರೂ ಪುಸ್ತಕವನ್ನು ಓದುವಾಗ, ಸಿನೆಮಾ ನೋಡುವಾಗ ನಿಮಗೆ ಈ ಅನುಭವವಾಗಿದೆಯೇ?
ಇತ್ತೀಚಿನ ಪ್ರಜಾ ಉವಾಚ