Archive | ಸಿನೆಮಾ RSS feed for this section

ವಿವಾದ ಸೃಷ್ಟಿಸದಿದ್ದರೆ ತೀವ್ರ ಪ್ರತಿಭಟನೆ :ಬೆದರಿಕೆ

3 ಮಾರ್ಚ್

ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ

ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ  ಅಬ್ಬೇಪಾರಿಗಳ ಪರಿಷತ್ (ABAP) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರಸ್ತೆಯ ಮಧ್ಯದಲ್ಲಿ ಲಾರಿ ಟೈರಿಗೆ ಬೆಂಕಿ ಹಾಕುವುದರ ಮೂಲಕ ಸುದ್ದಿಗೋಷ್ಟಿ ಉದ್ಘಾಟಿಸಿದ ಮುಸ್ತಫಾ ಮಾಧ್ಯಮಗಳಿಗೆ ಜನರ ಭಾವನೆಗಳ ಬಗ್ಗೆ ಕಾಳಜಿಯಿಲ್ಲ ಎಂದು

ಪತ್ರಿಕೆಗಳು ಹೀಗೆ ಮೌನವಾದರೆ ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು?

ಆರೋಪಿಸಿದರು. “ಸುಮಾರು ಎರಡು ವರ್ಷಗಳಿಂದ ಸಹನೆಯಿಂದ ಕಾದಿದ್ದೇವೆ. ನಮ್ಮ ಧಾರ್ಮಿಕ, ರಾಷ್ಟ್ರೀಯ, ಭಾಷಿಕ ಭಾವನೆಯನ್ನು ಕೆರಳಿಸುವ ಘಟನೆ ನಡೆಯುವುದೆಂದು ನಿರೀಕ್ಷಿಸಿ ನಿರಾಶರಾಗಿದ್ದೇವೆ. ಇಷ್ಟು ದೀರ್ಘಾವಧಿಯಲ್ಲಿ  ಒಬ್ಬ ಕಲಾವಿದನಿಗೂ ನಮ್ಮ ಧಾರ್ಮಿಕ ಭಾವನೆಗಳನ್ನು ಕೆಣಕುವಂತಹ ಕಲಾಕೃತಿಯನ್ನು  ರಚಿಸಲು ಸಾಧ್ಯವಾಗಿಲ್ಲವೇ? ಜಗತ್ತಿನಲ್ಲೇ ವಾರ್ಷಿಕ ಅತ್ಯಧಿಕ ಸಿನೆಮಾಗಳನ್ನು ತಯಾರಿಸುವ ಬಾಲಿವುಡ್ಡಿಗೆ ಕೋಮು ಸಾಮರಸ್ಯ ಕದಡುವ ಒಂದೇ ಒಂದು ಕಥಾವಸ್ತು ನೆನಪಾಗಿಲ್ಲವೇ? ಇಷ್ಟು ಮಂದಿ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು, ಕಲಾವಿದರು, ಬುದ್ಧಿಜೀವಿಗಳು ಒಂದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ಟಿವಿ ಸಂದರ್ಶನದಲ್ಲಿ ಕೊಟ್ಟಿಲ್ಲ, ತಮ್ಮ ಟ್ವಿಟರ್ ಪುಟಗಳಲ್ಲೂ ಎಲ್ಲೂ ಆ ಪ್ರಯತ್ನ ಮಾಡಿಲ್ಲ ಎಂದರೆ ಯಾರಿಗಾದರೂ ಸಂಶಯ ಬರುತ್ತದೆ ತಾನೆ? ದೇಶಕ್ಕೆ ಬೆಂಕಿ ಹಾಕುವಂತಹ ಕೃತಿಗಳನ್ನು ರಚಿಸುತ್ತಿದ್ದ ಲೇಖಕರ ಕುಲ ಎಲ್ಲಿ ಕಾಣೆಯಾಯಿತು? ದೇವರನ್ನು ನಗ್ನವಾಗಿ ಚಿತ್ರಿಸುವ, ದೇವಮಾನವರಿಗೆ ಬಟ್ಟೆ ತೊಡಿಸುವ, ದೈವ ಸಮಾನರ ಹುಟ್ಟು ಪ್ರಶ್ನಿಸುವ, ಪ್ರವಾದಿಗಳ ಚಿತ್ರ ಬಿಡಿಸುವ, ಸ್ತ್ರೀಯರ ಬುರ್ಕಾಗಳಿಗೆ ಬೆಂಕಿ ಹಾಕಿ ಎನ್ನುವವರೆಲ್ಲ ಎಲ್ಲಿ ಹೋದರು? ಈ ವಿದ್ಯಮಾನಗಳ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಕ್ರೂರವಾದ ರಾಜಕಾರಣವಿದೆ.

“ವಿವಾದಗಳು, ಮಾಧ್ಯಮಗಳು ಆಗಾಗ ಧಾರ್ಮಿಕ ಭಾವನೆ ಕೆರಳಿಸುತ್ತಿದ್ದರೆ ಅಲ್ಲವೇ, ತಮ್ಮಲ್ಲೂ ಧಾರ್ಮಿಕ ಭಾವನೆ ಇದೆ ಎಂದು ಜನರಿಗೆ ಮನವರಿಕೆಯಾಗುವುದು? ರೋಗ ಬಂದಾಗಲೇ ಅಲ್ಲವೇ ತನ್ನಲ್ಲಿ ಆರೋಗ್ಯವಿತ್ತು ಎಂದು ನೆನೆಪಾಗುವುದು? ಹೆಂಡತಿ ಬಂದ ಮೇಲೆ ತಾನೆ ತನ್ನ ಜೇಬಲ್ಲೂ ದುಡ್ಡು ಉಳಿಯುತ್ತಿತ್ತು ಎಂಬ  ಅರಿವಾಗುವುದು? ಇತಿಹಾಸಕಾರರು ಹೊಸ ಹೊಸ ವ್ಯಾಖ್ಯಾನ ಕೊಟ್ಟು ಜನರನ್ನು ರೊಚ್ಚಿಗೆಬ್ಬಿಸದಿದ್ದರೆ ನಮ್ಮ ಪರಿಷತ್ತಿನ ಸದಸ್ಯರಿಗೆ ನೌಕರಿ ಯಾರು ಕೊಡುವವರು? ರಸ್ತೆಯಲ್ಲಿ ದಾಂಧಲೆಯೆಬ್ಬಿಸಿ, ಸರ್ಕಾರಿ ಬಸ್ಸುಗಳಿಗೆ ಕಲ್ಲು ಎಸೆದು, ಅಂಗಡಿಗಳ ಗಾಜು ಒಡೆದು, ಲೈಟು ಕಂಬಗಳ ಬಲ್ಬು ಒಡೆದು ,ಕೈಗೆ ಸಿಕ್ಕಿದ್ದನ್ನು ದೋಚಿ ಆರ್ಥಿಕತೆಯ ಗಾಲಿಗಳು ತಿರುಗುವಂತೆ ಮಾಡುವವರು ಯಾರು? ಪತ್ರಿಕೆಗಳು ಹೀಗೆ ಮೌನವಾದರೆ  ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು? ನಮ್ಮ ಹೊಟ್ಟೆ ಮೇಲೆ ಹೊಡೆಯುವ ಈ ಕೆಟ್ಟ ಸಂಪ್ರದಾಯಕ್ಕೆ ಹೊಣೆ ಯಾರು?

“ಸರಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ವಿವಾದಾತ್ಮಕ ಪುಸ್ತಕಗಳಿಗೆ ವಿಶೇಷ ಪ್ರಶಸ್ತಿ ಘೋಷಿಸಬೇಕು. ಅನಾರೋಗ್ಯ ಸಚಿವರು ತಮ್ಮ ಎರಡು ದಿನದ ಶೇವಿಂಗ್ ಖರ್ಚನ್ನು ಕೊಟ್ಟರೂ ಸಾಕು ಅರ್ಧ ಡಜನ್ ಮರಿ ಸಾಹಿತಿಗಳನ್ನು ಸಾಕಬಹುದು. ರೊಚ್ಚಿಗೆಬ್ಬಿಸುವ ಕಾದಂಬರಿ ಬರೆದವರಿಗೆ ಪ್ರೋತ್ಸಾಹ ನೀಡಬೇಕು. ನಾಲ್ಕು ನೂರು ಪುಟಗಳ ಕಾದಂಬರಿಯನ್ನು ಓದಿ ಅದರಲ್ಲಿ ರೊಚ್ಚಿಗೇಳುವ ಅಂಶವೇನಿದೆ ಎಂದು ವಿಮರ್ಶಕರು, ವಿರೋಧಿ ಪಾಳೆಯದ ಬುದ್ಧಿಜೀವಿಗಳು ಎರಡು ಸಾಲಿನಲ್ಲಿ ತಿಳಿಸುವ  ಕಷ್ಟ ತೆಗೆದುಕೊಳ್ಳದಿದ್ದರೆ ನಮಗೆ ಅದು ತಿಳಿಯುವುದಾದರೂ ಹೇಗೆ? ಈ ವಿಮರ್ಶಕರನ್ನೂ ಸರಿಯಾಗಿ ನೋಡಿಕೊಳ್ಳಬೇಕು. ಆರ್ಟ್ ಗ್ಯಾಲರಿಗಳಲ್ಲಿ ನಗ್ನ ಕಲಾಕೃತಿಗಳಿಗೆ ಶಿಷ್ಯವೇತನ ನೀಡಬೇಕು. ಕೋಮು ಭಾವನೆ ಕೆರಳಿಸುವ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿಯನ್ನೂ, ವಿಶೇಷ ಸಬ್ಸಿಡಿಯನ್ನೂ ಸರಕಾರ ನೀಡಬೇಕು.ಇಲ್ಲದಿದ್ದರೆ ರಾಷ್ಟ್ರಾದ್ಯಂತ ಉಗ್ರ  ರೂಪದ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಆಗುವ ಪ್ರಾಣ ಹಾನಿ, ಆಸ್ತಿನಾಶಕ್ಕೆ ಸರಕಾರ, ಮಾಧ್ಯಮಗಳೇ ಹೊಣೆ” ಎಂದು ಬೆದರಿಕೆ ಒಡ್ಡಿದ್ದಾರೆ

ಇಂಗ್ಲೀಷ್ ಸುದ್ದಿ ಮಾಧ್ಯಮಗಳ ಗಮನವನ್ನು  ನಿ.ಮ್ಮ ಪ್ರತಿಭಟನೆಯ ಕಡೆಗೆ ಸೆಳೆಯಲು ಏನು ಮಾಡುತ್ತೀರಿ ಎಂದು  ವರದಿಗಾರ್ತಿ ಕೇಳಿದ ಪ್ರಶ್ನೆಗೆ ಠಾಕರೋಲಿಯವರು ಪತ್ರಿಕಾ ಗೋಷ್ಟಿಗೆ ಆಗಮಿಸಿದ್ದ ಕ್ಯಾಮರಾಮೆನ್ ಗಳನ್ನು ಹಿಡಿದು ಜಗ್ಗಾಡಿದರು. ಎರಡು ಕೆಮಾರಗಳನ್ನು ಕುಟ್ಟಿ ಪುಡಿ ಮಾಡಿದರು. ವರದಿಗಾರ್ತಿಯ ಕೂದಲು ಹಿಡಿದು ಜಗ್ಗಿದರು. ಈ ಸಂದರ್ಭದಲ್ಲೆ ಆಕೆಯ ವಿಗ್ಗು ಕೈಗೆ ಬಂದದ್ದಕ್ಕೆ ನಗಾರಿ ವರದಿಗಾರ ಸಾಕ್ಷಿಯಾದ. ಅನಂತರ ಮುಖಕ್ಕೆ ಮಸಿ ಬಳಿಯಲು ಮುಂದಾದರು. ದಪ್ಪನೆಯ ಮೇಕಪ್ ಮೇಲೆ ಮಸಿಯು ಅಂಟದೆ ವರದಿಗಾರ್ತಿ ತಪ್ಪಿಸಿಕೊಂಡಳು ಎಂದು ಮೂಲಗಳು ತಿಳಿಸಿವೆ.

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

3 ಆಕ್ಟೋ

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)

ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.

ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.

ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.

ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.

“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”

ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:

“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”

ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.

“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”

ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ  ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!

ನಗೆಸಾಮ್ರಾಟರ ಸಚ್ ಕಾ ಸಾಮ್ನಾ!

29 ಜುಲೈ

 

ಮೊನ್ನೆ "ಸಚ್ ಕಾ ಸಾಮ್ನಾ" ಕಾರ್ಯಕ್ರಮಕ್ಕೆ ನಮ್ಮ ನಗೆಸಾಮ್ರಾಟರೂ ಹೋಗಿದ್ದರು.

ಅವರಿಗೆ ಕೇಳಲಾದ ಮೊದಲ ಪ್ರಶ್ನೆ "ಚಿತ್ರಮಂದಿರದ ಒಳಹೋಗುವ ಮುನ್ನ ನೀವೇನು ಮಾಡುತ್ತೀರಿ?

ಕೊಂಚವೂ ಗೊಂದಲವಿಲ್ಲದೇ ನಗೆಸಾಮ್ರಾಟರು "ನನ್ನ ಲಾಜಿಕ್ಕುಗಳನ್ನು ಜೇಬಿನಲ್ಲಿಡುತ್ತೇನೆ" ಎಂದಾಗ ನಿರೂಪಕ ಗಲಿಬಿಲಿ!

ಸುಧಾರಿಸಿಕೊಂಡು "ನಗೆಸಾಮ್ರಾಟರು ನೀಡಿದ ಉತ್ತರ ಸರಿಯೋ ತಪ್ಪೋ ನೋಡೋಣ" ಅಂತ ಪಾಲಿಗ್ರಾಫ್ ಮೆಶೀನ್ ನಲ್ಲಿ ಬಂದ ಉತ್ತರ ನೋಡಿದರೆ ಅದು ಸತ್ಯ ಎಂದಾಗಿತ್ತು!

ಮುಂದಿನ ಪ್ರಶ್ನೆ," ಶಿವರಾಜ್ ಕುಮಾರ್ ಅಭಿನಯದ "ಓಂ" ಚಿತ್ರಕ್ಕೂ ಅವರದೇ ಅಭಿನಯದ "ತವರಿಗೆ ಬಾ ತಂಗಿ" ಚಿತ್ರಕ್ಕೂ ಇರುವ ಸಾಮ್ಯತೆ ಏನು?"

ಅದರಲ್ಲಿ ಸಾಮ್ಯತೆ ಅಂದರೆ ಎರಡೂ ಚಿತ್ರದ ನಾಯಕನಟ ಶಿವರಾಜ್ ಕುಮಾರ್. ಅದು ಬಿಟ್ಟರೆ ಓಮ್ ಕರುಳು ಕೊಚ್ಚುವ ರೌಡಿಸ್ಮ್ ಕತೆ ಆಗಿದ್ದರೆ, ತವರಿಗೆ ಬಾ ತಂಗಿ ಅಣ್ಣ-ತಂಗಿಯರ ಕರುಳು ಹಿಂಡುವ ಕತೆ ಹೊಂದಿದೆ.

ಆದರೆ ನಗೆಸಾಮ್ರಾಟರು ಮತ್ತೆ ಕೊಂಚವೂ ವಿಚಲಿತರಾಗದೇ, "ಎರಡೂ ಅಣ್ಣ-ತಂಗಿಗೆ ಸಂಬಂಧಪಟ್ಟ ಸಿನೆಮಾ!" ಎಂದಾಗ ಇದರಲ್ಲಿ ಖಂಡಿತಾ ಉತ್ತರ ಸುಳ್ಳಾಗುತ್ತದೆ ಅಂದುಕೊಂಡರೆ ಅದೂ ನಿಜವಾಗಿತ್ತು. 

ಆಗ ಎಲ್ಲರಿಗೂ ಅನುಮಾನ ಮೂಡಿದ್ದು ನಗೆಸಾಮ್ರಾಟರ ಮೇಲಲ್ಲ; ಪಾಲಿಗ್ರಾಫ್ ಮೆಶೀನ್ ಮೇಲೆ!

ಎಲ್ಲರೂ ಆ ಮೆಶೀನೇ ಸುಳ್ಳು ಹೇಳುತಿದೆ ಅಂದುಕೊಂಡರು.

ಆದರೆ ನಗೆಸಾಮ್ರಾಟರು ಮಾತ್ರ "ತಾನು ಹೇಳಿದ್ದೆಲ್ಲಾ ಸತ್ಯ, ಸತ್ಯವಲ್ಲದೇ ಬೇರೇನೂ ಹೇಳಿಲ್ಲ" ಅಂತ ಬೇಕಾದರೆ ಗೀತೆಯ ಮೇಲೇಕೆ, ತನ್ನ ಬ್ಯಾಂಕಿನ ಖಾತೆಯ ಮೇಲೆಯೂ ಪ್ರಮಾಣ ಮಾಡುವುದಾಗಿ ತಿಳಿಸಿದರು. ಯಾವುದಾದರೂ ಸಿನೆಮಾವನ್ನು ಲಾಜಿಕ್ಕನ್ನು ಪಕ್ಕಕ್ಕಿಟ್ಟು ನೋಡದೇ ಹೋದರೆ ತಲೆ ಎಕ್ಕುಟ್ಟಿ ಹೋಗೋಲ್ಲವಾ ಅಂತಲೇ ಕೇಳಿದರು! ಮಚ್ಚನ್ನು ಮದುವೆಯಾಗೋ ಹೀರೋ, ತನಗೆ ಎಂಗೇಜ್ ಮೆಂಟ್ ಆಗಿದ್ದರೂ ಮತ್ತೊಬ್ಬ ಹುಡುಗನಿಗೆ ಫೋನ್ ಮಾಡಿ ಸುಮ್ಮ ಸುಮ್ಮನೆ ’ನನ್ನನ್ನು ಹಾರಿಸ್ಕೊಂಡು ಹೋಗದೇ ಇದ್ದರೆ ನೀನು ಗಂಡಸೇ ಅಲ್ಲ" ಅನ್ನುವ ಹೀರೋಯಿನ್ನು, ಹೀರೋ ಎಂಟ್ರಿ ಸಾಂಗ್- ಒಂದು ಕನ್ನಡ ಭಾಷೆಯ ಮೇಲಿನ ಸಾಂಗ್- ಮರ ಸುತ್ತೋ ಡ್ಯೂಯೆಟ್ಟು ಹೀಗೆ ಚಿತ್ರವನ್ನು ಅರ್ಧ ಅಥವ ಒಂಡು ಘಂಟೆ ಹಾಡಿನಿಂದಲೇ ಮುಗಿಸುವ ಡೈರೆಕ್ಟರ್ರು, ಪರಭಾಷೆ ಚಿತ್ರದಲ್ಲಿ ಬಂದ ಕಾಮಿಡಿ ದೃಶ್ಯಗಳನ್ನು ಒಂದು pause ಕೂಡ ಬಿಡದೇ ಎತ್ತಿಕೊಳ್ಳುವ ಹಾಸ್ಯಗಳು, ಇವನ್ನೆಲ್ಲಾ ಲಾಜಿಕ್ಕಿಟ್ಟು ನೋಡೋಕಾಗ್ತದಾ?

ಸರಿ, ಆದರೆ ಓಂ- ತವರಿಗೆ ಬಾ ತಂಗಿ ಚಿತದಲ್ಲಿ ಅಣ್ಣ-ತಂಗಿ ಸಾಮ್ಯತೆ ಹೇಗೆ?

ನಗೆಸಾಮ್ರಾಟರು ಒಂದೆರಡು ಬಾರಿ ತಲೆಕೆರೆದುಕೊಳ್ಳುವುದರೊಳಗಾಗಿ ನೆನಪಾಗಿತ್ತು, ಅದು ಅವರು ಥಿಯೇಟರ್ ನೊಳಗೆ ಲಾಜಿಕ್ಕನ್ನು ಜೇಬಿನಲ್ಲಿಟ್ಟು ಕೂತಿರದ ಕಾಲ.

ಪೋಸ್ಟರ್ ನೋಡದೇ ಬರಿಯ ಟೈಟಲ್ ನೋಡಿ ದೇವರ ಚಿತ್ರ ಅಂದುಕೊಂಡು ಓಂ ಚಿತ್ರ ನೋಡಲು ಬಂದಿದ್ದರು. ಶಿವರಾಜ್ ಕುಮಾರ್ ಗೆ ಅದರಲ್ಲಿ ಸತ್ಯ ಅನ್ನುವ ರೌಡಿಯ ಪಾತ್ರ. ರೌಡಿಸ್ಮ್ ಚಿತ್ರ ಅಂದರೆ ಒಬ್ಬ ರೌಡಿ ಅವನ ಬಾಲದಂತೆ  ಚೇಲಾಗಳು. ಈ ಚೇಲಾಗಳು ಆ ರೌಡಿ(ಚಿತ್ರದಲ್ಲಿ ನಾಯಕ)ಯನ್ನು ಅಣ್ಣಾ ಅಂತಲೇ ಮಾತಾಡಿಸುತ್ತವೆ, ಅಂದರೆ ನಾಯಕಿ ಅತ್ತಿಗೆಯಾಗಬೇಕು ಅಲ್ಲವೇ?

ಹಾಗಾಗದು, ನಾಯಕಿಯನ್ನೂ ಚೇಲಾಗಳು ಅಕ್ಕಾ ಅಂತಲೇ ಕರೆಯುತ್ತವೆ. ನಾಯಕ-ನಾಯಕಿಯನ್ನು ಅಣ್ಣ-ತಂಗಿ ಸಂಬಂಧವಾಗಿಸುತ್ತದೆ!

ಮೊದಲು ದೇವರ ಚಿತ್ರ ಅಂದುಕೊಂಡಿದ್ದ ಸಾಮ್ರಾಟರಿಗೆ ಓಂ ಅಂತಹ ಚಿತ್ರವಾಗದೇ ಒಂದು ಶಾಕ್ ಆಗಲೇ ನೀಡಿದ್ದರು ಚಿತ್ರದ ನಿರ್ದೇಶಕರು. ಚೇಲಾಗಳು ಶಿವರಾಜ್ ಕುಮಾರ್ ರನ್ನು ಅಣ್ಣ ಅಂತಲೂ ನಾಯಕಿ ಪ್ರೇಮಾಳನ್ನು ಅಕ್ಕಾ ಅಂತಲೂ ಕರೆಯುತಿರುವಾಗ ಈ ಚಿತ್ರವನ್ನು ಸಾಯಿಪ್ರಕಾಶ್ ಲೆವೆಲ್ ನ ಅಣ್ಣ-ತಂಗಿ ಚಿತ್ರ ಅಂದುಕೊಂಡು ನೋಡಿ ಸಾಮ್ರಾಟರು ಸುಸ್ತಾದರು ಅಂತ ಬೇರೆ ತಿಳಿಸಿಹೇಳಬೇಕೆ?

ಒಟ್ಟಿನಲ್ಲಿ ಹಾಳು ಲಾಜಿಕ್ಕುಗಳು. ಈ ಲಾಜಿಕ್ಕಿಟ್ಟುಕೊಂಡು ನೋಡಿದರೆ ಸಿನೆಮಾ ಎಲ್ಲಿ ಅರ್ಥವಾಗಬೇಕು ಅಂತ ಸಾಮ್ರಾಟರು ಗೊಣಗಿದರು!

ಕವಿರಾಜರ ಸಾಹಿತ್ಯದಿಂದಾಗಿ ಕಪಾಳಮೋಕ್ಷ!

17 ಜುಲೈ

ಇದು ಹೊಸ ಅಂಕಣ.

ನಮ್ಮ ಮಾಧ್ಯಮ ಲೋಕದಲ್ಲಿ ತುಂಬಿಕೊಂಡಿರುವ ಅದ್ಭುತ ಪ್ರತಿಭೆಗಳನ್ನು, ಎಲೆ ಮರೆಯಲ್ಲಿ ಅಡಗಿರುವ ಕಾಯಿಗಳನ್ನು, ಪೀಚುಗಳನ್ನು ಬಯಲಿಗೆಳೆಯುವ ಪ್ರಯತ್ನ. ಕುಂದಾಪುರದ ರಂಜಿತ್ ಅಡಿಗ ಈ ಅಂಕಣವನ್ನು ನಿರ್ವಹಿಸಲಿದ್ದಾರೆ. ನಮ್ಮ ಸಿನೆಮಾ ಸಾಹಿತ್ಯ, ಪತ್ರಿಕೆಗಳು, ಟಿವಿ ಚಾನಲ್ಲುಗಳು- ಇಲ್ಲೆಲ್ಲಾ ಹರಡಿಕೊಂಡಿರುವ ಈ ಅಪ್ರತಿಮ ಪ್ರತಿಭೆಗಳ ಪೋಷಣೆಗೆ ನಾವು ಕಟಿ ಬದ್ಧರಾಗಿದ್ದೇವೆ.

……………………..

ಅವನಿಗೆ ಸಾರಿ ಸಾರಿ ಹೇಳಿದ್ದೆ. ಪ್ರೇಯಸಿ ಪಕ್ಕದಲ್ಲಿದ್ದಾಗ ಅಥವ ಆಕೆಗಾಗಿ ಹಾಡುವಾಗ ಯಾವುದಾದರೂ ರೋಮ್ಯಾಂಟಿಕ್ ಹಿಂದಿ ಸಾಂಗನ್ನು ಹಾಡು; ಇಲ್ಲವೇ ಚಂದದbad times of media ಭಾವಗೀತೆ ಯನ್ನು ಬಳಸು. ಭಾವಗೀತೆ ಒಗ್ಗದಿದ್ದರೆ ರಾಜ್ ಕುಮಾರ್ ಅದ್ಭುತವಾಗಿ ಹಾಡಿರುವ ನೂರಾರು ಗಾನಗಳಿವೆ. ಆದರೆ ಯಾವುದೇ ಕಾರಣಕ್ಕೂ, ಅಪ್ಪಿ-ತಪ್ಪಿ ಕೂಡ ಹೊಸ ಕನ್ನಡ ಚಿತ್ರಗೀತೆ ಮಾತ್ರ ಬೇಡ.

ಕೇಳಲಿಲ್ಲ. ಎಪ್ಫೆಮ್ ಪ್ರಭಾವವೋ, ಯೂಟು ಮಹಿಮೆಯೋ ಅಥವಾ ಪ್ರೇಯಸಿಯ ಮೊಗದಿಂದಾಗಿಯೋ ಅವನಿಗೆ ನೆನಪಾದದ್ದು, ಆ ಸಮಯದಲ್ಲಿ ಗುನುಗಿದ್ದು ಅಚ್ಚಕನ್ನಡದ ಹೊಸ ಚಿತ್ರವೊಂದರ ಗೀತೆ. ಅದೂ ಪ್ರತಿಭಾನ್ವಿತ ಯುವ ಗೀತರಚನಕಾರ ಕವಿರಾಜರ ಹಾಡು. “ಪರಿಚಯ” ಸಿನೆಮಾದ ಗೀತೆ.

ನಲ್ಲೆಯ ಮೊಗ ನೋಡಿದೊಡೆ ಅತ್ತ-ಇತ್ತ ನೋಡದೇ, ಸುತ್ತ-ಮುತ್ತಲಿನ ಪರಿವಿಲ್ಲದೇ, ಅರ್ಥ-ಗಿರ್ಥ ಕೂಡ ಅರಿವಿಲ್ಲದವನಂತೆ ಹಾಡತೊಡಗಿದ. ರೋಮ್ಯಾಂಟಿಕ್ ಹಾಡೆಂದರೆ ಗೆಳೆಯ ಸಾಕ್ಷಾತ್ ಉಪೇಂದ್ರ; ಹುಬ್ಬು ಮತ್ತು ಕೈ ಮೇಲೆ ಹೋಗೋದು ಬಿಟ್ಟರೆ ಬೇರೇನೂ ಎಕ್ಸ್ ಪ್ರೆಷನ್ಸ್ ಇಲ್ಲ!

ಮೊದಲ ಸಾಲು “ನಡೆದಾಡುವಾ ಕಾಮನಬಿಲ್ಲು…!”  ಅಂತ ಗೆಳೆಯ ಅಂದ ಕೂಡಲೇ ಪ್ರೇಯಸಿ ಮೈ ತುಂಬ ಉಬ್ಬಿ ಪೂರಿ.

“ಉಸಿರಾಡುವಾ ಗೊಂಬೆಯು ಇವಳು!” ಎಂದೊಡನೆ ಅದೇಕೋ ಆಕೆ ಉಸಿರಾಡುವುದು ಅವನಿಗೆ ಗೊತ್ತಾಗುವಂತೆ ಮಾಡಿ ತೋರಿಸಿದಳು.

“ಸಿಗಲಾರಳು ಹೋಲಿಕೆಗಿವಳೂ…!”

ಅರೆ! ಹಾಗಾದರೆ ಮೊದಲೆರಡು ಸಾಲು ಹೋಲಿಕೆಯಲ್ಲವೇ ಅಂತ ಅವನ ಕಾಲರ್ ಹಿಡಿದು ಕೇಳೋಕೆ ಅವಳೇನು ಕನ್ನಡ ಟೀಚರ್ರೇ? ಏನೊ ಇದೂ ಹೊಗಳಿಕೆ ಇರಬೇಕು ಅಂದುಕೊಂಡು ವೈಯಾರಿಸಿಕೊಂಡು ಮುಂದಿನ ಹೊಗಳಿಕೆಗೆ ಉಬ್ಬಲು ಅಣಿಯಾದಳು.

“…..ಏನೆಂದರೂ ಸುಂದರ ಸುಳ್ಳು!”

ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು. ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ?

ನಿಜ (ಸುಂದರ ನಿಜವಲ್ಲ!) ಕಣ್ರೀ. ಕೆನ್ನೆ ಮೇಲೆ ಅವಳ ಕೈಯ ಐದೂ ಬೆಟ್ಟಿನಚ್ಚು. ಹೊಸ ಚಿತ್ರದ ಡ್ಯೂಯೆಟ್ ಹಾಡಲು ಹೊರಟಿದ್ದ ಗೆಳೆಯ ಆಗಿದ್ದ ಪೆಚ್ಚು!

-ರಂಜಿತ್ ಅಡಿಗ, ಕುಂದಾಪುರ

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

6 ಫೆಬ್ರ

ಸಂಪದಿಗಣೇಶರ ಬರಹವನ್ನು ಅಲ್ಲಿಂದ ನೇರವಾಗಿ ಹೈಜ್ಯಾಕ್ ಮಾಡಿ ಇಲ್ಲಿ ಹಾಕಿದ್ದೇವೆ.

– ನಗೆ ಸಾಮ್ರಾಟ್

 

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ.
ನಾಯಕಿ, ಕೋಟ್ಯಾಧೀಶ…(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?..
ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ  ?
-ನಮ್ಮದು ಡಿಫರೆಂಟೂ..
ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ..
‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ..,
ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ)..
ಎಮ್.ಜಿ.ರೋಡಲ್ಲಿ ಬರುತ್ತಾಳೆ..
ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ..
ನಾಯಕ ಡಾಕ್ಟ್ರು?..ಊಹೂಂ
ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ
ಲಾಯರ್? ಪೋಲೀಸ್? ಕಳ್ಳ? .. ಊಹೂಂ..
ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..
ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..

ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ ೩-೪ ಕಾಯಿನ್ ಮೇಲೆ
ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ..
ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್‌ಲ್ ಹಾಕ್ರೀ..)

ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ)
ಹರಿದ ಅಂಗಿ..(ಒಳಗೆ ಮೃದು ಹೃದಯ)
ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..)
ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ..
ಹಾಡಿಗೆ ಆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ)

ಈ ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು,
ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು.
ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್
ಆಗಿ ಬಂದಿದೆ.

ಲವ್ ಸುರು..
ಈಗ ವಿಲನ್ ಎಂಟ್ರಿ ಆಗಬೇಕಲ್ಲ..ಯಾರು ವಿಲನ್?

ಹುಡುಗಿಯ ಅಪ್ಪ..? ಊಹೂಂ.. ಡಿಫರೆಂಟೂ..
ಅಪ್ಪ ಖುಷಿಯಿಂದ ಒಪ್ಪುವನು. ಮದುವೆ ಗ್ರಾಂಡ್ ಆಗಿ ಸ್ವಿಜರ್‌ಲ್ಯಾಂಡ್‌ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.

ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)
‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ.
ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ? ಅಮೆರಿಕಾ ಅಧ್ಯಕ್ಷನ ಬೀಗ ಎಂದು
ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’
ಇಂಟರ್‌ವಲ್

***

ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ.
ಕೇವಲ ನಾಯಕನ ಒಂದೊಂದು ಡ್ರೆಸ್‌ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್‌ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.

ಈಗ ಇಂಟರ್‌ವಲ್ ನಂತರದ ಕತೆ-
ಅಮೆರಿಕಾದ ಫೈಟರ್ ಜೆಟ್‌ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ..
ಡಿಫರೆಂಟೂ..
ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ
ಹೋಗುವನು. ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್‌ಗಳು ವಿಮಾನ ಹೈಜಾಕ್ ಮಾಡುವರು!!
ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’-
ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು..
ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್‌ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ.

ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ.
ಯಾಕೆಂದರೆ ಎಪ್ರಿಲ್ ೧ಕ್ಕೆ ನಮ್ಮ ಸಿನೆಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು. ಅಕ್ಷರಶಃ ಚಿಂದಿ ಉಢಾಯಿಸುವುದು!!

ನಮ್ಮ ಸಂಗೀತವಿರುವುದು ಪ್ರಜೆಗಳಿಗಾಗಿ!

24 ಜನ

 

(ನಗೆ ನಗಾರಿ ಪಾಪ್ ಸಂಗೀತ ಬ್ಯೂರೋ)

 

ಸಂಗೀತದ ನಾನಾ ಉಪಯೋಗಗಳ ಬಗ್ಗೆ ಪ್ರಬಂಧವನ್ನು ಬರೆಯಲು ಹೇಳಿದರೆ, ಇನ್ನು ಮುಂದೆ ನಮ್ಮ ಹೈಸ್ಕೂಲು, ಪ್ರೈಮರಿ ಸ್ಕೂಲುಗಳ ಮಕ್ಕಳು ತಾವು ಉರು ಹೊಡೆದ ಹತ್ತಾರು ಉಪಯೋಗಗಳ ಜೊತೆಗೆ ಇದನ್ನೂ ಸೇರಿಸಬಹುದು. ಸಂಗೀತದ ಸಾಮಾಜಿಕ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿ ತಮ್ಮ ಹೆಸರನ್ನು ಒಂದಕ್ಷರ ಉದ್ದ ಮಾಡಿಕೊಳ್ಳಲಿಚ್ಚಿಸುವವರಿಗೆ(‘ಡಾ’ ಸೇರಿಸಿಕೊಂಡು!) ಬಿಸಿ ಬಿಸಿ ವಿಷಯವಾಗಿಯೂ ಇದು ಬಳಕೆಯಾಗಬಲ್ಲದು. ಹಾಗೆ ನೋಡಿದರೆ ಪಾಪ್, ಹಿಪ್ ಹಾಪ್ ಹಾಗೂ ರಾಕ್ ಸಂಗೀತಗಳಿಂದ ಹಾಗೂ ಕೆಲವು ಸ್ವದೇಶಿ ಪ್ರತಿಭೆಗಳ ಶಾಸ್ತ್ರೀಯ ಸಂಗೀತದಿಂದ ಇಷ್ಟು ದಿನ ಲಭ್ಯವಾದ ಅಸಂಖ್ಯಾತ ಲಾಭಗಳನ್ನು, rock-band 4 ಸಮಾಜಕ್ಕೆ ವರವಾಗಿ ಕಂಡ ಬಹುಸಂಖ್ಯಾತ ಸಂದರ್ಭಗಳನ್ನು ಗಮನಿಸಿದರೆ ಪ್ರಸ್ತುತ ಉಪಯೋಗ ಅವೆಲ್ಲವುಗಳಿಗಿಂತ ಅದೆಷ್ಟು ವಿಭಿನ್ನ ಹಾಗೂ ವಿಶಿಷ್ಟ ಎಂಬುದು ತಿಳಿಯುತ್ತದೆ. ಸಂಗೀತವು ಹಿಂದೆಂದೂ ಇಷ್ಟು ಸ್ಪಷ್ಟವಾಗಿ, ಇಷ್ಟು ಪರಿಣಾಮಕಾರಿಯಾಗಿ ಸಮಾಜಕ್ಕೆ ಉಪಯುಕ್ತವಾಗಿರಲಿಲ್ಲ ಎಂದು ನಮ್ಮ ಬ್ಯೂರೋದ ಸಂಶೋಧನಾ ಪಂಡಿತರು ಫತ್ವಾ ಹೊರಡಿಸಿದ್ದಾರೆ.

ಇಪ್ಪತ್ತೊಂದನೆಯ ಶತಮಾನದ ಸ್ಮರಣೀಯ ವೈಜ್ಞಾನಿಕ ಸಾಧನೆಗಳಲ್ಲಿ ಮೊದಲ ಸ್ಥಾನ ಪಡೆಯದಿದ್ದರೂ, ಕನಿಷ್ಠ ಪಕ್ಷ ನೂರರಲ್ಲಿ ಒಂದು ಸ್ಥಾನವನ್ನಾದರೂ ಪಡೆಯುವ ಅರ್ಹತೆಯಿರುವ ಈ ಸಂಗೀತದ ಬಳಕೆಯ ತಂತ್ರಜ್ಞಾನದ ಬಗ್ಗೆ ತಿಳಿಯುವ ಮೊದಲು ಸಂಗೀತ ಹಿಂದೆಲ್ಲಾ ನಮ್ಮ ಸಮಾಜಕ್ಕೆ ಹೇಗೆ ನೆರವಾಗಿದೆ ಎಂಬುದರ ಬಗ್ಗೆ ಒಂದು ನೇರಳೆ ಕಿರಣ ಬೀರುವ ಪ್ರಯತ್ನ ಇಲ್ಲಿದೆ.

‘ಸಂಗೀತದಿಂದ ಆಗುವ ಪ್ರಯೋಜನಗಳೇನು?’ ಎಂದು ಯಾರಾದರೂ ನೇರವಾಗಿ ಪ್ರಾಮಾಣಿಕವಾಗಿ ಪ್ರಶ್ನಿಸಿದರೆ ಅವರಿಗೆ ಅಷ್ಟೇ ಪ್ರಾಮಾಣಿಕತೆಯಿಂದ, ಅಷ್ಟೇ ನೇರವಾಗಿ ಉತ್ತರ ಕೊಡುವುದಕ್ಕೆ ಅಪಾರ ಧೈರ್ಯದ ಅಗತ್ಯವಿರುತ್ತದೆ. ಒಂದು ವೇಳೆ ಧೈರ್ಯದ ದಾಸ್ತಾನು ಕಡಿಮೆಯಿದ್ದರೆ ಹೆಡ್ಡತನದ ಸರಕಾದರೂ ತಕ್ಕಮಟ್ಟಿಗೆ ಇರಬೇಕಾಗುತ್ತದೆ. ನಗೆ ನಗಾರಿಯಲ್ಲಿ ಎರಡನೆಯದಕ್ಕೆ ಯಾವ ಕೊರತೆಯೂ ಇಲ್ಲ. ಹೀಗಾಗಿ ನಾವು ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಉತ್ತರಿಸಬಹುದು.

ಸಂಗೀತದಿಂದ ಇರುವ ಉಪಯೋಗಗಳ ಬಗ್ಗೆ ಇದುವರೆಗೂ ಬೃಹತ್ ಗ್ರಂಥಗಳನ್ನೆಲ್ಲ ರಚಿಸಿರುವ ಮಹಾನುಭಾವರೆಲ್ಲ ಮರೆತ ಸತ್ಯವೊಂದಿದೆ. ಅದೆಂದರೆ: ಸಂಗೀತದಿಂದ ಸಂಗೀತಗಾರರಿಗೆ ಉಪಯೋಗವಿದೆ! ಹೌದು, ಸಂಗೀತ ಕಲಿತವನಿಗೆ ಸಮಾಜದಲ್ಲಿ ಸಿಕ್ಕುವ ಮನ್ನಣೆ, ಹಣಕಾಸು, ಸ್ಥಾನಮಾನ, ಅಕಾಡೆಮಿಗಳ ಪದವಿ, ಗೌರವ ಡಾಕ್ಟರೇಟು ಮುಂತಾದುವೆಲ್ಲಾ ಒಂದು ತೂಕದ್ದಾದರೆ ಸಂಗೀತ ಸದಾಕಾಲ ಸಂಗೀತಗಾರನ ಕೈಲಿ ಅಸ್ತ್ರದ ಹಾಗೆ ಶೋಭಿಸಿ ಆತನನ್ನು ಪೊರೆಯುತ್ತದೆ ಎಂಬುದು ಬಹುಮುಖ್ಯ ಉಪಯೋಗ. ಜಗತ್ತಿನಲ್ಲಿರಬಹುದಾದ ಅತಿ ಭಯಾನಕ ಹಾಗೂ ಅತಿ ಪರಿಣಾಮಕಾರಿಯಾದ ಎರಡು ಬೆದರಿಕೆಗಳೆಂದರೆ, ‘ನನ್ನ ಕವನ ಓದಲೇ?’ ಎಂಬುದು ಹಾಗೂ ‘ನನ್ನ ಸಂಗೀತ ಕೇಳ್ತೀರಾ?’ ಎಂಬುದು. ಕೆಲವರು ಸರಸ್ವತಿಯನ್ನು ಒಲಿಸಿಕೊಂಡು ಸಂಗೀತವನ್ನು ಬಳಸಿಕೊಂಡು ರಸಿಕರ ಮನಸ್ಸನ್ನು ರಂಜಿಸಿದರೆ ಹಲವರು ಸಂಗೀತವನ್ನು ಬಳಸಿ ಮನುಕುಲದ ಕಷ್ಟದ ಪರಂಪರೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಲವರು ಸಂಗೀತದಿಂದ ಸ್ವರ್ಗವನ್ನೇ ಭೂಲೋಕಕ್ಕೆ ಎಳೆದು ತಂದರೆ ಹಲವರು ತಮ್ಮ ಸಂಗೀತ ಪ್ರತಿಭೆಯಿಂದ ಭೂಲೋಕವನ್ನೇ ನರಕಕ್ಕೆ ತಳ್ಳುತ್ತಿದ್ದಾರೆ. ಆದರೆ ಇಬ್ಬರಿಗೂ ತಮ್ಮ ಸಾಧನೆಗೆ ಸಂಗೀತ ಆವಶ್ಯಕ.

ಸಂಗೀತದಿಂದ ಮನೆ ಕೆಡುವುದು ತಪ್ಪುತ್ತಿದೆ. ತೂತು ಒಲೆ ಕೆಡಿಸಿತು, ಮಾತು ಮನೆ ಕೆಡಿಸಿತು ಎಂಬ ಗಾದೆ ಮಾತು ನಮ್ಮ ಕಡೆ ಭಾರಿ ಫೇಮಸ್ಸು. ಈ ಎರಡನೆಯ ಘನ ಕಾರ್ಯಕ್ಕೆ ನಮ್ಮ ಟಿವಿ ಚಾನೆಲ್ಲಿನ ಧಾರಾವಾಹಿಗಳು ಕೈಲಾದಷ್ಟು ನೆರವನ್ನು ನೀಡುತ್ತಿವೆ. ಆದರೆ ಈ ಘನಕಾರ್ಯಕ್ಕೆ ಕಂಟಕವಾಗಿರುವುದು ಸಂಗೀತ! ಹೌದು, ಸಂಗೀತ ಮನೆಗಳನ್ನು ಉಳಿಸುತ್ತಿದೆ. ಹೇಗೆನ್ನುತ್ತೀರಾ? ಒಂದು ಮನೆಯ ವಾರ್ತಯೆನ್ನು ಇನ್ನೊಂದು ಮನೆಗೆ ಹಬ್ಬಿಸಿ ಗಬ್ಬೆಬ್ಬಿಸುವ ಸಾಧನೆಯ ಕ್ರೆಡಿಟ್ಟು ಹೆಂಗಸರಿಗೆ ಸಲ್ಲಬೇಕು ಎಂಬುದನ್ನು ಎಲ್ಲಾ ಚಿಲ್ಲರೆ ಸಂಶೋಧಕರೂ ಒಪ್ಪುತ್ತಾರೆ. ಆದರೆ ಹೆಚ್ಚೆಚ್ಚು ಮಂದಿ ಮಹಿಳೆಯರು ಸಂಗೀತಾಭ್ಯಾಸ ಶುರು ಮಾಡಿದರೆ, ಅವರ ಬಾಯನ್ನು ಸಂಗೀತ ಆಕ್ರಮಿಸಿಕೊಂಡಿರುತ್ತಾದ್ದರಿಂದ ಗಾಸಿಪ್ಪಿಗೆ ಜಾಗ ಸಿಕ್ಕುವುದಿಲ್ಲ. ಇದರಿಂದ ಎಷ್ಟೋ ಮನೆಗಳು ನೆಮ್ಮದಿಯಿಂದಿರುತ್ತವೆ. ಮನೆಗಳು ನೆಮ್ಮದಿಯಿಂದಿದ್ದರೆ ಸಮಾಜವೂ ನೆಮ್ಮದಿಯಿಂದಿರುತ್ತದೆ. ಆದರೆ ಇದರಲ್ಲಿ ಒಂದು ತೊಡಕಿದೆ, ಸಂಗೀತಾಭ್ಯಾಸಿಗಳು ಹೆಚ್ಚಾದಷ್ಟೂ ಶಬ್ಧ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತದೆ!

ಸಂಗೀತ ರೋಗವನ್ನು ಗುಣ ಮಾಡುತ್ತದೆ, ಸಂಗೀತವನ್ನು ಕೇಳಿದ ಗಿಡಗಳು ಹೆಚ್ಚು ಎತ್ತರ ಬೆಳೆಯುತ್ತವೆ, ಸಂಗೀತವನ್ನು ಕೇಳುತ್ತಿದ್ದರೆ ಹಸು ಹೆಚ್ಚು ಹಾಲು ಕೊಡುತ್ತದೆ, ಸಂಗೀತದಿಂದ ಮಳೆ ಬರುತ್ತದೆ, ಸಂಗೀತದಿಂದ ಕಲ್ಲು ಬಂಡೆ ತೇಲುತ್ತದೆ, ಸಂಗೀತದಿಂದ ಕ್ರೂರ ಪ್ರಾಣಿಗಳು ಮೈಮರೆಯುತ್ತವೆ, ಸಂಗೀತಕ್ಕೆ ಹಾವು ತಲೆದೂಗುತ್ತದೆ ಎಂದೆಲ್ಲಾ ಹಲವರು ಭಾಷಣಗಳನ್ನು ಚಚ್ಚುತ್ತಿದ್ದರೂ ಇವಕ್ಕೆ ತಕ್ಕ ಮಟ್ಟಿಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ನಾವು ಹೇಳುತ್ತೇವೆ ಎಂದ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ವ್ಯಾಪಕ ಸಾಕ್ಷಿಗಳು ಲಭ್ಯವಾಗಿವೆ. ಅಮೇರಿಕಾ ತನ್ನ ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಬಂಧಿಸಿದ ಆರೋಪಿಗಳಿಂದ ಸತ್ಯವನ್ನು ಬಾಯ್ಬಿಡಿಸಲು ಅನೇಕಾನೇಕ ಪದ್ಧತಿಗಳನ್ನು ಬಳಸಿಕೊಳ್ಳುತ್ತದೆ. ಆದರೆ ಒಂದು ಪದ್ಧತಿ ಮಾತ್ರ ಅವರ ಅಪಾರ ವಿಶ್ವಾಸವನ್ನು ಗಳಿಸಿಕೊಂಡಿದೆ. ಅದೆಂದರೆ, ಅಮೇರಿಕಾದ ಪಾಪ್, ರಾಕ್, ಹಿಪ್ ಹಾಪ್ ಗಾಯಕರ ಆಲ್ಬಮುಗಳನ್ನು ಆರೋಪಿಗಳಿಗೆ ಕೇಳಿಸುವುದು! ಆ ಸಂಗೀತದ ವೈಭವವನ್ನು ಕೇಳಲಾಗದೆ ಆರೋಪಿಗಳು ಸತ್ಯವನ್ನು ಬಾಯ್ಬಿಡಬೇಕು!

ತಮ್ಮ ಸಂಗೀತ ದೇಶದ ರಕ್ಷಣೆಗೆ ಬಳಕೆಗೆ ಬರುತ್ತಿರುವುದನ್ನು ಕಂಡು ಹೆಮ್ಮೆ ಪಡಬೇಕಾದ ಸಂಗೀತ ವಿಶಾರದರು ಕುಪಿತರಾಗಿದ್ದಾರಂತೆ! ತಮ್ಮ ಸಂಗೀತವನ್ನು ಅಪರಾಧಿಗಳಿಗೆ ಟಾರ್ಚರ್ ನೀಡಲು ಬಳಸಬಾರದು. ಅವುಗಳಿರುವುದು ದೇಶದ ಪ್ರಜೆಗಳಿಗೆ ಮಾತ್ರ ಎಂದಿದ್ದಾರಂತೆ!

ಹೀಗೂ ಒಂದು ರಿಯಾಲಿಟಿ ಶೋ!

5 ನವೆಂ

(ನಗೆ ನಗಾರಿ ಮನರಂಜನಾ ಬ್ಯೂರೋ)

ತಮ್ಮ ರಿಯಲ್ ಬದುಕಿನ ಕಷ್ಟ ಸಂಕಟಗಳನ್ನು, ಉಪದ್ವಾಪ್ಯಗಳನ್ನು ಮರೆಯುವುದಕ್ಕಾಗಿ ಕ್ಷಣಮಾತ್ರಕ್ಕೆ ತಮ್ಮೆಲ್ಲಾ ದುಃಖಗಳಿಂದ ಬಿಡುವನ್ನು ಪಡೆಯುವುದಕ್ಕಾಗಿ, ಹಗಲಿನ ದುಡಿಮೆಯಿಂದ ಆದ ದಣಿವನ್ನು ತಣಿಸುವುದಕ್ಕಾಗಿ ಮನುಷ್ಯನು ಮನರಂಜನೆಯನ್ನು ಕಂಡುಕೊಂಡ ಎಂದು ಸಣ್ಣ ಮಗುವಾದರೂ ಯೋಚಿಸಿ ಹೇಳಬಹುದು. ಸಣ್ಣಗೆ ತಮಟೆಯನ್ನು ಬಡಿಯುತ್ತಾ, ಬೆಂಕಿಯ ಸುತ್ತ ಕುಣಿಯುತ್ತಾ, ಅಜ್ಜಮುತ್ತಜ್ಜನ ಕಾಲದ ರಾಜ, ರಾಕ್ಷಸ, ರಾಜಕುಮಾರಿಯರ ಕಥೆಯನ್ನು ಕೇಳುತ್ತಾ, ತಾವೇ ಕಟ್ಟಿಕೊಂಡ ಹಾಡು ಹಾಡುತ್ತಾ ಬೆಳೆದವರನ್ನು ಕಂಡು ನಮ್ಮ ವಿಜ್ಞಾನಕ್ಕೆ ಭಾರೀ ಅನುಕಂಪ ಮೂಡಿತು. ಮನರಂಜನೆಯ ಹೆಸರಿನಲ್ಲಿ ಜನರೇ ಕಷ್ಟ ಪಡುವುದು ಎಂಥಾ ಘೋರವಾದ ಸಂಗತಿ ಎಂದು ಆಲೋಚಿಸಿದ ವಿಜ್ಞಾನದ ವಂದಿಗರು ಅದಕ್ಕಾಗಿಯೇ ಎಂದು ಟಿವಿ ಎಂಬ ಮಾಯಾಪೆಟ್ಟಿಗೆಯನ್ನು ಆಕಾಶದಿಂದ ತಂದು ಪ್ರತಿಯೊಬ್ಬರ ಮನೆಯಲ್ಲಿರಿಸಿದರು. ಹಲವು ಮಂದಿಯ ಮನರಂಜನೆಗಾಗಿ ಕೆಲವು ಮಂದಿ ದುಡಿಯುವುದನ್ನು ಬಹುದೊಡ್ಡ ಆದರ್ಶವಾಗಿ ಕಲಿಸಿದರು. ಬೆಳಗೆಲ್ಲಾ ದುಡಿದು ಬಂದವರ ಮನಸ್ಸಮಾಧಾನಕ್ಕಾಗಿ ಮನರಂಜನೆ ನೀಡುವುದು ಅನೇಕರಿಗೆ ಮುಖ್ಯ ದುಡಿಮೆಯಾಯಿತು.


ಯಾವುದೇ ಒಳ್ಳೆಯ ಸಂಗತಿಯೂ ಕ್ರಮೇಣ ಸತ್ವವನ್ನು ಕಳೆದುಕೊಂಡು ಕಾಲಿಗೆ ಕಚ್ಚಿಕೊಂಡ ಕೊಚ್ಚೆಯ ಬಳ್ಳಿಯಾಗುತ್ತದೆ ಎಂಬುದು ಸಾಮ್ರಾಟರ ಅನುಭವದ ತಿಳುವಳಿಕೆ. ಅದರಂತೆಯೇ ಟಿವಿಯ ಮನರಂಜನೆಯೇ ಜನರ ಮನೋವೇದನೆಗೆ ಕಾರಣವಾಗತೊಡಗಿದ್ದು ನಮ್ಮ ಸಂಸ್ಕೃತಿ ಚಿಂತಕರು, ಮನಃಶಾಸ್ತ್ರಜ್ಞರು ಮಾಡಲು ಕೆಲಸವಿಲ್ಲದಾಗ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ. ನಾನಾ ವೇಷಗಳಲ್ಲಿ, ನಾನಾ ಶಕ್ತಿಗಳೊಂದಿಗೆ ಭೂಮಿಯ ಮೇಲೆ ಜನ್ಮವೆತ್ತಿ ಬರುತ್ತಾ ದೇವತೆಗಳ, ಮಾನವರ ನೆಮ್ಮದಿಯನ್ನು ಕೆಡಿಸುತ್ತಿದ್ದ ರಕ್ಕಸರು ಧಾರಾವಾಹಿ’ ಎಂಬ ರೂಪ ಪಡೆದು ದಿನದಿನವೂ ಜನಸಾಗರವನ್ನು ದುಃಖದಲ್ಲಿ ಮುಳುಗಿಸುವ ಕೆಲಸವನ್ನು ನಿರಾಯಾಸವಾಗಿ ಮಾಡಲು ಶುರುಮಾಡಿದರು. ಜನರನ್ನು ಒಂದಿಂಚೂ ಕದಲದ ಹಾಗೆ, ಒಂಚೂರೂ ಸ್ವಂತ ಆಲೋಚನೆ ಮಾಡದ ಹಾಗೆ, ತಾಯಿ ಮಕ್ಕಳ ಕಡೆಗೆ ಗಮನ ಕೊಡದ ಹಾಗೆ, ತಂದೆ ಹೊರಗಿನ ಕೆಲಸಗಳಿಗೆ ಏಕಾಗ್ರತೆ ತಾಳದ ಹಾಗೆ, ಮಕ್ಕಳು ತಮ್ಮ ಕರ್ತವ್ಯವನ್ನು ನೆನೆಯದ ಹಾಗೆ ಮಾಡುವ ಸಮ್ಮೋಹನಾಸ್ತ್ರವನ್ನು ರಕ್ಕಸರು ಕಂಡುಕೊಂಡದ್ದು ಇಡೀ ಪುರಾಣ ಲೋಕದ ವಿಸ್ಮಯ. ಆದರೆ ಯಾವಾಗ ಧರ್ಮಕ್ಕೆ ತೊಂದರೆಯಾಗುತ್ತದೆಯೋ, ಯಾವಾಗ್ಯಾವಾಗ ಮನುಷ್ಯನಿಗೆ ಕಂಟಕ ಬರುತ್ತದೆಯೋ ಆಗ ನಾನು ಅವತರಿಸಿ ಬರುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದು ಸುಳ್ಳಾಗಲಿಲ್ಲ.


tv

ಧಾರಾವಾಹಿಯ ರಕ್ಕಸನ ದಾಳಿಯಿಂದ ಮನುಷ್ಯನನ್ನು ರಕ್ಷಿಸಲು ರಿಯಾಲಿಟಿ ಶೋ’ಗಳೆಂಬ ದೇವದೂತರು ಅವತರಿಸಿಬಂದವು. ಪ್ರತಿದಿನ ಒಂದು ಧಾರಾವಾಹಿ ಮುಗಿದಾಗ ನಾಳೆ ಏನಾಗುವುದೋ ಎಂಬ ಆತಂಕದಲ್ಲಿ ಇಡೀ ದಿನವನ್ನು ಕಳೆದು ಮರುದಿನ ಧಾರಾವಾಹಿಯ ಸಮಯಕ್ಕಾಗಿ ಜಾತಕ ಪಕ್ಷಿಯ ಹಾಗೆ ಕಾಯುತ್ತಿದ್ದವರನ್ನು ಸಂಕಟದಿಂದ ಪಾರುಮಾಡಲು ಬಂದಂತೆ ಅವತರಿಸಿದ್ದು ರಿಯಾಲಿಟಿ ಶೋ. ಯಾರೋ ಕೆಲಸವಿಲ್ಲದವರು ಕುಳಿತು ಹೆಣೆದು ಬಿಸಾಕಿದ ಕಾಲ್ಪನಿಕ ಧಾರಾವಾಹಿಗಳನ್ನು ನೋಡುವುದಕ್ಕಿಂತ ನೈಜತೆಯನ್ನು ಉಣಬಡಿಸುವ ಕಾರ್ಯಕ್ರಮಗಳನ್ನು ಜನರೂ ಅಪ್ಪಿಕೊಂಡರು. ಸ್ಟೇಜಿನ ಮೇಲೆ ನಿಜವಾಗಿ ಹಾಡುವುದು, ಕುಣಿಯುವುದು, ಜೋಕು ಮಾಡುವುದು, ಒಂದಷ್ಟು ಜನರನ್ನು ಒಟ್ಟಿಗೇ ಕೂಡಿ ಹಾಕಿ ಅವರ ಚಲನವಲನವನ್ನು ನೈಜ’ ಬಿಹೇವಿಯರನ್ನು ಲಕ್ಷಾಂತರ ಜನರು ನೋಡುವ ಏರ್ಪಾಟು ಮಾಡುವುದು ಇವೆಲ್ಲವನ್ನೂ ಜನರು ಮೆಚ್ಚಿಕೊಳ್ಳತೊಡಗಿದರು. ಇದಕ್ಕೆ ಕಾರಣ, ಪ್ರತಿದಿನವೂ ಬಿಡದೆ ಕಾರ್ಯಕ್ರಮ ನೋಡಬೇಕು ಎಂಬ ಒತ್ತಡ ಇಲ್ಲದಿರುವುದು!

ಆದರೆ ರಕ್ಕಸನ ಶಕ್ತಿಯನ್ನು ಕಡಿಮೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಹಲವರ ಅಭುಪ್ರಾಯ. ಮೂಲೆ ಮನೆ ಮಾಲಮ್ಮನವರ ಪ್ರಕಾರ ಧಾರವಾಹಿಗಳೇ ಇನ್ನೂ ಪ್ರಬಲವಾಗಿವೆಯಂತೆ. ಏಕೆಂದರೆ ಧಾರಾವಾಹಿಯನ್ನು ನಿಯಮಿತವಾಗಿ ನೋಡಬೇಕು ಎಂದೇನಿಲ್ಲ. ನೋಡಲು ಬಿಟ್ಟು ಒಂದು ವರ್ಷವಾದ ನಂತರ ಮತ್ತೆ ನೋಡಲು ಶುರು ಮಾಡಿದರೂ ಕಥೆಯ ಲಿಂಕ್ ತಪ್ಪಿತು ಎನ್ನಲಾಗುವುದಿಲ್ಲ. ಉದಾಹರಣೆಗೆ ಯುವತಿಯೊಬ್ಬಳ ಮದುವೆ ನಿರ್ಧಾರವಾಗುತ್ತದೆ ಎಂದುಕೊಳ್ಳಿ. ನೀವು ಒಂದೆರಡು ವಾರ ನೋಡದಿದ್ದರೆ ಮದುವೆ ನಡೆದು ಹೋಗಿಬಿಡುತ್ತದೆ ಎಂಬ ಆತಂಕ ಪಡುವ ಅಪಾಯವಿಲ್ಲ. ಇನ್ನೇನು ಮದುವೆಗೆ ನಾಲ್ಕು ದಿನ ಇದೆ ಎನ್ನುವಾಗ ಹುಡುಗನ ಕಡೆಯಿಂದ ಒಂದು ತಕರಾರು ಬರುತ್ತದೆ, ಹುಡುಗನ ಮನೆಯಲ್ಲಿ ಯಾರಾದರೊಬ್ಬರು ಕ್ಯಾತೆ ತೆಗೆಯುತ್ತಾರೆ. ಮದುವೆ ಮುಂದೆ ಹೋಗುತ್ತದೆ. ನೀವು ಒಂದುವರ್ಷ ಕಳೆದು ನೋಡಿದರೂ ಹುಡುಗಿಗೆ ಮದುವೆಯಾಗಿರುವುದಿಲ್ಲ. ಮತ್ತೆ ಹೊಸ ಹೊಸ ಸಮಸ್ಯೆಗಳನ್ನು ನಿರ್ದೇಶಕರು ತಮ್ಮ ಮಾಯಾಜಾಲದಿಂದ ಸೃಷ್ಟಿಸಿ ಪಾತ್ರಧಾರಿಗಳನ್ನು ಜೊತೆಗೆ ಧಾರಾವಾಹಿಗಳ ವೀಕ್ಷಕರನ್ನು ಸಿಕ್ಕಿಸಿರುತ್ತಾರೆ. ಆದರೆ ರಿಯಾಲಿಟಿ ಶೋಗಳು ಹಾಗಲ್ಲ ಅವು ಒಂದು ದಿನ ಬಿಟ್ಟರೆ ಅಂದು ಗೆದ್ದದ್ದು ಯಾರು, ಯಾರು ಹೇಗೆ ಫರ್‌ಫಾರ್ಮ್ ಮಾಡಿದರು, ಯಾರು ಒಳ್ಳೆಯ ಅಂಕಗಳಿಸಿದರು ಎಂಬುದು ತಿಳಿಯುವುದೇ ಇಲ್ಲ.


ಏನೇ ಆದರೂ ಇಂದಿನ ಟಿವಿಯ ಯುಗದಲ್ಲಿ ಧಾರಾವಾಹಿ ಎಂಬ ಮಹಾ ಪ್ರಭಾವದಿಂದ ಪ್ರೇಕ್ಷಕರನ್ನು ಪಾರು ಮಾಡಲು ರಿಯಾಲಿಟಿ ಶೋಗಳೆಂಬ ಆಶಾಕಿರಣಗಳು ಕಾಣಿಸಿಕೊಂಡಿರುವುದು ಸಾಮ್ರಾಟರಿಗೆ ಸಮಾಧಾನ ತಂದಿದೆ. ಈ ಬಹುದೊಡ್ಡ ಕ್ರಾಂತಿಯಲ್ಲಿ ತಮ್ಮದೂ ಪಾಲು ಇರಬೇಕೆಂದು ಇಚ್ಚಿಸಿರುವ ಸಾಮ್ರಾಟರು ತಾವೂ ಒಂದಷ್ಟು ರಿಯಾಲಿಟಿ ಶೋಗಳನ್ನು ಮಾಡಿಕೊಟ್ಟು ಜನರನ್ನು ಧಾರಾವಾಹಿ ಗುಮ್ಮನಿಂದ ಪಾರು ಮಾಡುವ ಯೋಚನೆಯಲ್ಲಿದ್ದಾರೆ. ಅವರ ತಲೆಯಲ್ಲಿರುವ ಕೆಲವು ರಿಯಾಲಿಟಿ ಶೋಗಳ ಕಲ್ಪನೆಗಳು ಹೀಗಿವೆ: ‘ದಿ ಗ್ರೇಟ್ ಹಾರರ್ ಶೋಎಂಬ ಭಯಾನಕವಾದ ರಿಯಾಲಿಟಿ ಶೋ. ಇದನ್ನು ಕಂಡು ಬೆಚ್ಚದವರು ಯಾರೂ ಇರಬಾರದು! ಅನೇಕ ಚಾನೆಲ್ಲುಗಳು ಬಳಸಿ ಬಳಸಿ ಸೊರಗಿ ಸೋರಿ ಹೋಗಿರುವ ದೆವ್ವದ ಮಿಸ್ಟರಿ ಕಥೆಗಳು, ಪವಾಡದ ವಿವರಗಳ್ಯಾವೂ ಇದರಲ್ಲಿರುವುದಿಲ್ಲ. ಈ ಶೋನಲ್ಲಿ ಅವರು ತೋರಿಸಬೇಕೆಂದಿರುವುದು ಇಷ್ಟೇ: ಬಾಲಿವುಡ್ಡು, ಸ್ಯಾಂಡಲ್ ವುಡ್ಡಿನ ಎಲ್ಲಾ ನಾಯಕ, ನಾಯಕಿಯರನ್ನು ತೋರಿಸುವುದು. ಅದೂ ಮೇಕಪ್ಪು, ವಿಗ್ಗುಗಳು ಇಲ್ಲದೇ!


ಮತ್ತೊಂದು,‘ ದಿ ಗ್ರೇಟ್ ಗಾಡ್ ಫಾದರ್’! ಇದು ಬಿಗ್ ಬ್ರದರ್ ಶೋನಿಂದ ಪ್ರೇರಿತವಾದದ್ದು ಎಂಬುದು ಸಾಮ್ರಾಟರ ಕಾಲೆಳೆಯುವವರ ಕೀಟಲೆಯಾದರೂ ಇದರಲ್ಲಿ ಹೊಸ ಚಿಂತನೆಯಿದೆ. ಒಂದು ಬಹು ಎತ್ತರದ ಬೇಲಿ ಇರುವ, ಒಮ್ಮೆ ಒಳ ಹೊಕ್ಕವರು ಹೊರಗೆ ಬರದಷ್ಟು ಭದ್ರವಾಗಿರುವ ಕಟ್ಟಡದಲ್ಲಿ ನಾಡಿನ ಹೆಸರಾಂತ ರಾಜಕಾರಣಿಗಳನ್ನೆಲ್ಲಾ ಹಾಕಿಬಿಡುವುದು. ಅರವತ್ತು, ಎಪ್ಪತ್ತು, ಎಂಭತ್ತು ಎಂದು ವಯಸ್ಸು ಹಾಗೂ ತೂಕದಲ್ಲಿ ತೂಗುತ್ತಿರುವವರ ನಾಯಕರನ್ನು ಕೆಮರಾಗಳ ಕಣ್ಗಾವಲಿನಲ್ಲಿ ಸೇರಿಸುವುದು. ಪಕ್ಷ ಬೇಧವಿಲ್ಲದೆ ಅರ್ಹತೆಯಿರುವವರನ್ನೆಲ್ಲಾ ಆರಿಸುವುದು. ಸತತ ಎರಡು ವರ್ಷಗಳ ಕಾಲ ಅವರ ಚಲನವಲನಗಳನ್ನೆಲ್ಲಾ ಗಮನಿಸುತ್ತಿರುವುದು. ಇದರಲ್ಲೇನು ಸ್ಪೆಶಾಲಿಟಿ ಇದೆ ಅಂತೀರಾ? ಇದಕ್ಕೂ ಬಿಗ್ ಬಾಸ್ ನಂತಹ ಶೋಗೂ ವ್ಯತ್ಯಾಸವಿಲ್ಲ ಎನ್ನುತ್ತೀರಾ? ಸಾಮ್ರಾಟರ ಉಪಾಯವನ್ನು ತಾಳ್ಮೆಯಿಂದ ಕೇಳಿ, ಎರಡು ವರ್ಷ ಹೀಗೆ ಕಾರ್ಯಕ್ರಮ ನಡೆಸಿದ ನಂತರ ಸದ್ದಿಲ್ಲದೆ ಎಲ್ಲಾ ಕೆಮರಾಗಳನ್ನು ಆಫ್ ಮಾಡಿ ಆ ಕಟ್ಟಡದ ಕಾಂಪೌಂಡಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಿ ಕೀಲಿಕೈಯನ್ನು ನಾಶ ಮಾಡಿಬಿಡುವುದು! ಆಗ ಅದು ದೇಶವೇ ಕೊಂಡಾಡುವ ರಿಯಾಲಿಟಿ ಶೋ ಆಗಿಬಿಡುತ್ತದೆ!

ತಮ್ಮ ಐಡಿಯಾಗಳನ್ನು ಯಾರೂ ಕದಿಯಬಾರದೆಂದು ಸಾಮ್ರಾಟರು ಅವನ್ನು ಪೇಟೆಂಟ್ ಮಾಡಿಸಲು ಮುಂದಾಗಿದ್ದಾರೆ. ಕಾಪಿ ಮಾಡುವವರೂ ಪೇಟೆಂಟ್ ದಕ್ಕುವ ಮೊದಲೇ ಪ್ರಯತ್ನಿಸಬೇಕಾಗಿ ಸೂಚನೆ!

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

22 ಜುಲೈ

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.

ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.

‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು…’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.

‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ…’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.

‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ… ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.

ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!

ಹಿರಿಯ ನಾಯಕರ ಮೀಸಲಾತಿಗೆ ಆಗ್ರಹ

9 ಜುಲೈ

( ನಗೆ ನಗಾರಿ ಸಿನಿಮಾ ಬ್ಯೂರೋ)

‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ ಮಾಡಲು ಕೆಲಸವಿಲ್ಲದ ‘ಕ್ರಿಯಾಶೀಲ’ರ ಸಂಘಟನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ. ಈ ಪ್ರಕಟಣೆ ಕೇವಲ ನಗೆ ನಗಾರಿಯ ಕಛೇರಿಯನ್ನು ತಲುಪಿರುವುದರ ಹಿಂದಿನ ರಹಸ್ಯದ ಬಗ್ಗೆ ಪ್ರತಿಸ್ಪರ್ಧಿ ಪತ್ರಿಕೆಗಳು ತನಿಖೆ ನಡೆಸಬಹುದು!

‘ಕನ್ನಡದಲ್ಲಿ ಅನಾರೋಗ್ಯಕರವಾದ ಬೆಳವಣಿಗೆಯೊಂದು ನಡೆಯುತ್ತಿದೆ. ಇದರಿಂದ ನಟನೆ ಎಂಬ ಕಲೆಗೇ ಅವಮಾನ ಮಾಡಿದ ಹಾಗಾಗುತ್ತದೆ.’ ಎಂದು ನಗೆ ಸಾಮ್ರಾಟರೊಂದಿಗೆ ಮಾತಿಗಿಳಿದ ನಿರುದ್ಯೋಗಿ ಕ್ರಿಯಾಶೀಲರ ಸಮಿತಿಯ ಕಾರ್ಯದರ್ಶಿ ‘ ಈಗ ನೋಡಿ ಕಲಾವಿದನ ನಿಜವಾದ ಸಾಮರ್ಥ್ಯ ಹಾಗೂ ಪ್ರತಿಭೆಯ ಅನಾವರಣವಾಗುವುದು ಆತ ಪಾತ್ರವೊಂದನ್ನು ಆವಾಹಿಸಿಕೊಂಡು ನಟಿಸಿದಾಗ. ಉದಾಹರಣೆಗೆ ರಾಜನ ಪಾತ್ರವನ್ನು ಮಾಡುವಾಗ ನಾಯಕ ನಟ ಬಡವನಾದರೂ, ಸಿರಿವಂತಿಕೆಯ ಗತ್ತನ್ನು ಒಂದು ದಿನವೂ ಅನುಭವಿಸಿ ಗೊತ್ತಿರದಿದ್ದರೂ ರಾಜನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಬೇಕು. ಪಾತ್ರಕ್ಕೂ, ನಿಜ ವ್ಯಕ್ತಿತ್ವಕ್ಕೂ ನಡುವಿರುವ ಕಂದಕ ಹೆಚ್ಚಿದಷ್ಟೂ ಅದು ಕಲಾವಿದನಿಗೆ ಬಲವಾದ ಸವಾಲನ್ನು ಒಡ್ಡುತ್ತದೆ. ಅದನ್ನು ನಿಭಾಯಿಸುವವನು ಒಳ್ಳೆಯ ನಟ.’ ಎಂದರು.

‘ನಿಮ್ಮ ಫಿಲಾಸಫಿ ಎಲ್ಲಾ ಸರಿ ಸಾರ್. ಅದಕ್ಕೂ ಪ್ರಸ್ತುತ ನೀವು ಮಾಡುತ್ತಿರುವ ಹಕ್ಕೊತ್ತಾಯಕ್ಕೂ ಏನು ಸಂಬಂಧ ಸಾರ್?’ ತಲೆ ಕೆರೆದುಕೊಂಡು ಪ್ರಶ್ನಿಸಿದರು ನಗೆ ಸಾಮ್ರಾಟ್.

‘ಸಂಬಂಧವಿಲ್ಲದೆ ಮಾತನಾಡುವುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಾನಿನ್ನೂ ರಾಜಕೀಯಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಒಂದು ವೇಳೆ ಜನಪ್ರಿಯತೆಯ ಭಾರ ಜಾಸ್ತಿಯಾದರೆ ಅದನ್ನು ಕಳೆದುಕೊಂಡು ಸ್ವಲ್ಪ ನಿರಾಳವಾಗುವುದಕ್ಕೆ ಆ ಯೋಚನೆ ಮಾಡಬಹುದು. ಆಗ ಸಂಬಂಧವಿಲ್ಲದ ಹಾಗೆ ಮಾತನಾಡುವುದಕ್ಕೆ ಪ್ರಯತ್ನ ಪಡುತ್ತೇನೆ.

‘ಈಗ ಪ್ರಸ್ತುತ ಹಕ್ಕೊತ್ತಾಯದ ವಿಷಯಕ್ಕೆ ಬರುತ್ತೇನೆ. ನೋಡಿ ಈಗ ಕಾಲೇಜು ಹುಡುಗ ಪಾತ್ರಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗನನ್ನೇ ಹಾಕಿಕೊಳ್ಳುತ್ತಿದ್ದಾರೆ. ಯುವಕನ ಪಾತ್ರಕ್ಕೆ ಯುವ ನಟನನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪಾತ್ರವನ್ನು ಆವಾಹಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಂತಾಗುವುದಿಲ್ಲ. ಯುವಕರು ಯುವಕರ ಹಾಗೆ ನಟಿಸಲು ಏನು ಮಹಾ ಪ್ರತಿಭೆ ಬೇಕು ಹೇಳಿ? ಪ್ರಾಣಿ ಪ್ರಾಣಿಯಂತಿರುವುದಕ್ಕೆ ಯಾವುದಾದರೂ ಪರಿಶ್ರಮ ಬೇಕೇ? ಪ್ರಾಣಿ ಮನುಷ್ಯನ ಹಾಗೆ ಮಾಡುವುದಕ್ಕೆ ಅಗಾಧವಾದ ಪ್ರತಿಭೆ ಬೇಕು.  ವಯಸ್ಸು ನಲವತ್ತು ದಾಟಿ, ಕ್ರಾಪಿನ ಜಾಗದಲ್ಲಿ ಜಾರುವ ಬುರುಡೆ ಬಂದವರಿಗೆ ಇಪ್ಪತ್ತರ ಹರೆಯದ ನಾಯಕನ ಪಾತ್ರವನ್ನು ಕೊಡಬೇಕು. ಆಗ ನಟನಾ ಸಾಮರ್ಥ್ಯ ಅನಾವರಣ ಗೊಳ್ಳುತ್ತದೆ. ಇಪ್ಪತ್ತರ ತರುಣನಿಗೆ ಹದಿನೆಂಟರ ತರುಣಿಯ ಸೊಂಟ ಬಳಸಿ ಕುಣಿಯುವುದು ಕಷ್ಟವಾಗುವುದಿಲ್ಲ ಅದಕ್ಕೆ ಯಾವ ಸಾಧನೆಯೂ ಬೇಕಿಲ್ಲ. ಆದರೆ ನಲವತ್ತೈದರ ನಟ ತನ್ನ ಮಗಳ ವಯಸ್ಸಿನ ನಟಿಯೊಂದಿಗೆ ಮರ ಸುತ್ತುವುದು ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಅದಕ್ಕಾಗಿಯೇ ನಾವು ಕನ್ನಡದಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಶೇ. ೨೦ರಷ್ಟು ಸಿನೆಮಾಗಳಿಗೆ ನಲವತ್ತು ದಾಟಿದವರನ್ನೇ ಯುವ ನಾಯಕನ ಪಾತ್ರಕ್ಕೆ ಆರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ.’ ಎಂದು ವಿವರಿಸಿದರು.

ಸಂದರ್ಶನ ಮುಗಿಸಿದ ನಗೆ ಸಾಮ್ರಾಟರಿಗೆ, ಹೌದು ಇವರು ಬರೀ ನಾಯಕ ನಟರುಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ನಟೀ ಮಣಿಯರ ವಿಚಾರವೇನು ಎಂದು ಕೇಳುವ ಮನಸ್ಸಾಯಿತು. ಆದರೆ ನಲವತ್ತು ಮೀರಿದ ನಟಿ ಮಣಿಯರು ಹದಿನೆಂಟರ ಹುಡುಗನ ಬೆನ್ನು ತಬ್ಬಿಕೊಂಡು  ಬೈಕಿನಲ್ಲಿ ಕಾಲೇಜಿಗೆ ಬರುವ ದೃಶ್ಯವನ್ನು ಕಲ್ಪಿಸಿಕೊಂಡು ತಮ್ಮ ಪ್ರಶ್ನೆ ಮಹಿಳಾ ಉಟ್ಟು ಓರಾಟಗಾರ್ತಿಯರ್ಯಾರ ಕಿವಿಗೂ ಬೀಳದಂತೆ ಎಚ್ಚರವಹಿಸಿ ಅಲ್ಲಿಂದ ಜಾರಿಕೊಂಡರು!

ಖುಸಿ ಸಿಗದಿದ್ದರೆ ಕಾಸು ವಾಪಸ್!

28 ಮಾರ್ಚ್

(ನಗಾರಿ ಸಿನಿ-ಸಿನಿ ಬ್ಯೂರೋ)

ಅವ್ರನ್ನ ಉದಯ್ ಅಂದರೆ ಯಾರು ಉದಯ್ ಕುಮಾರಾ ಅಂತ ಕೆಲವರು ಕೇಳಬಹುದು. ಆದರೆ ಉದಯ್ ಜಾದೂಗಾರ್ ಅಂದರೆ ಯಾರಿಗೂ ಕನ್ ಫೂಸ್ ಆಗೋದಿಲ್ಲ. ಜಾದೂಗಾರ್ ಮ್ಯಾಜಿಕ್ ಮಾಡಿದ್ರು, ಜನ ಚಪ್ಪಾಳೆ ತಟ್ಟಿದ್ರು. ಮ್ಯಾಜಿಕ್ ಸಾಮಾನುಗಳನ್ನು ತಯಾರಿಸುವ ಕಾರ್ಖಾನೆ ಮಾಡಿದರೆ ಜನ ಹಣ ಸುರಿದು ಮೋಡಿ ಕಲಿತರು. ಅವರು ಸುಡೋಕು ಹಿಡಿದರು, ಅದನ್ನ ಬಿಡಿಸಲಿಕ್ಕೆ ಅಂತಲೇ ಒಂದು ಡಬ್ಬಿ ಮಾಡಿದರು ಜನ ಭಲೇ ಮೆಚ್ಚಿಕೊಂಡರು. ಈಗವರು ಎಲ್ಲಾ ಬಿಟ್ಟು ದರೋಡೆ ಮಾಡೋಕೆ ನಿಂತಿದ್ದಾರೆ, ಬಹುಪಾಲು ಅದು ಮುಗಿದೂ ಆಗಿದೆಯಂತೆ!

ಜಾದೂಗಾರ ದರೋಡೆ ಮಾಡೋಕೆ ನಿಂತರೆ ಸಾಮಾನ್ಯರ ಪಾಡೆನು ಅಂತ ಬುದ್ಧಿಜೀವಿಯ ಫೋಸಿನಲ್ಲಿ ನಾಲ್ಕೈದು ಉದ್ಗಾರ, ಕೊನೆಗೊಂದು ನಿಟ್ಟುಸಿರು ಬಿಟ್ಟು ಎದ್ದುನಿಲ್ಲಲು ರೆಡಿಯಾಗಬೇಕಿಲ್ಲ. ಉದಯ್ ‘ದರೋಡೆ’ ಹೆಸರಿನ ಸಿನೆಮಾವೊಂದನ್ನು ಮಾಡಿ ಪ್ರೇಕ್ಷಕರ ಜಾದೂಗಾಗಿ ಕಾಯುತ್ತಾ ಕುಳಿತಿದ್ದಾರೆ.

ನಮ್ಮ ರೆಗ್ಯುಲರ್ ದಿನಪತ್ರಿಕೆಗಳಿಂದ ಹಿಡಿದು, ಇರ್ರೆಗ್ಯುಲರ್ ಟ್ಯಾಬ್ಲಾಯ್ಡ್‌ಗಳ ವರೆಗೂ ಯಾರೂ ಜಾದೂಗಾರರನ್ನು ಸೀರಿಯಸ್ಸಾಗಿ ನೋಡುತ್ತಲೇ ಇಲ್ಲ. ‘ಪಾಪ ಅವರು ಸಿನೆಮಾ ಮಾಡಿದ್ದಾರಂತೆ, ತುಂಬಾ ಚೆನ್ನಾಗಿದೆ- ಗೆದ್ದೇ ಗೆಲ್ಲುತ್ತೆ ಅಂತ ಅವರೇ ಹೇಳ್ತಿದ್ದಾರೆ. ಪಾಪ ಅವರಿಗ್ಯಾಕೆ ಬೇಜಾರು ಮಾಡ್ತೀರಿ, ಗೆಲ್ಲಿಸಿಬಿಡಿ..’ ಎಂದು ಮಣಗಟ್ಟಲೆ ಸಿಂಪಥಿ ಬೆರೆಸಿ ಗೀಚುತ್ತಿದ್ದಾರೆ. ಯಾರೂ ಜಾದೂಗಾರ್ ಎಂಬ ಹೊಸ ಆಶಾ-ಕೋಶಾ ಕಿರಣ ‘ಉದಯ’ವಾಗ್ತಿದೆ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ.

ಈ ಮಧ್ಯೆ ಜಾದೂಗಾರರು ನಮ್ಮ ನಗೆ ಸಾಮ್ರಾಟರನ್ನು ಯಕ್ಷಿಣಿಯ ಮೂಲಕ ತಮ್ಮ ಸ್ವಸ್ಥಾನದಿಂದ ಎತ್ತಿ ಹಾಕಿಕೊಂಡು ತಮ್ಮಲ್ಲಿಗೆ ಕರೆಸಿಕೊಂಡು ಮೂರು ತಾಸಿನ ಸಿನೆಮಾ ಬಗ್ಗೆ ಕೇವಲ ನಾಲ್ಕು ತಾಸು ಕೊರೆದು ಏನಾದರೂ ಪ್ರಶ್ನೆಗಳಿದ್ದರೆ ಕೇಳುವಂಥವರಾಗಿ ಎಂದರು. ನಾಲ್ಕು ತಾಸು ಭರ್ಜರಿ ನಿದ್ದೆಯಿಂದ ಎದ್ದ ಸಾಮ್ರಾಟರು, ನಾಸ್ತಿಕರು ಸತ್ಯ ಸಾಯಿ ಬಾಬಾಗೆ ಚಾಲೆಂಜ್ ಮಾಡಿದ ಹಾಗೆ, ‘ತಾಕತ್ತಿದ್ದರೆ, ನಿಮ್ಮ ಜಾದೂ ಮೂಲಕ ನನ್ನ ಪ್ರಶ್ನೆ ಏನೆಂದು ನೀವೇ ತಿಳಿದುಕೊಂಡು ಉತ್ತರಿಸಿ’ ಎನ್ನಬೇಕಂದುಕೊಂಡಿದ್ದರಾದರೂ, ಹಾಗಂದರೆ ಇರುವ ಒಂದು ಪ್ರಶ್ನೆಯ ಜಾಗಕ್ಕೆ ನೂರು ಪ್ರಶ್ನೆಗಳನ್ನು ಊಹಿಸಿಕೊಂಡು ಮತ್ತೆ ಕೊರೆಯಲು ಶುರುಮಾಡಿದರೆ ಎಂಬ ಭಯದಿಂದ ‘ಸಿನೆಮಾ ಗೆಲ್ಲುತ್ತಾ?’ ಎಂಬ ಮರ್ಮಾಘಾತದ ಪ್ರಶ್ನೆಯನ್ನೇ ಕೇಳಿಬಿಟ್ಟರು. ಆ ಡೆವಿಲ್ಲು ಲಾಯರ್ ಕರ್ರನೆ ಥಾಪರ್‍ಥರ ಎದುರಿಗೆ ಕುಂಡ್ರಿಸಿಕೊಂಡವರು ಮಾತಾಡೋದಕ್ಕಿಂತ ತಾನೇ ಹೆಚ್ಚು ಮಾತಾಡುವ ವಿಧಾನ ನಗೆ ಸಾಮ್ರಾಟರಿಗೆ ಅಷ್ಟಾಗಿ ಮೆಚ್ಚಿಗೆಯಾಗದು.

ಜಾದೂಗಾರ್ ಉತ್ತರಿಸುತ್ತಾ, ‘ಗ್ಯಾರಂಟಿ ನನ್ನ ಸಿನೆಮಾ ಗೆದ್ದೇ ಗೆಲ್ಲುತ್ತೆ. ಸಿನೆಮಾ ನೋಡಿದ ಮಂದಿಗೆ ಖುಸಿಯಾಗದಿದ್ದರೆ ಥೇಟರ್ ಹೊರಗೆ ನಿಂತು ಅವರ ಕಾಸು ವಾಪಸ್ ಮಡಗ್ತೀನಿ’ ಅಂದ್ರು ಖಡಾಖಂಡಿತವಾಗಿ.

ಮೊದಲೇ ನ್ಯೂಸ್ ಪೇಪರು, ಕಚಡಾ ಸುಟ್ಟು ನೋಟು ತೆಗೆಯುವ ಜಾದೂಗಾರರು ಇವರು, ಥಿಯೇಟರ್ ಮುಂದೆ ನಿಂತು ಇಂಥದ್ದೇ ಜಾದೂ ಮಾಡಲು ಶುರುಮಾಡಿದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಕ್ಕಪಕ್ಕದಿಂದ ಕಥೆ ಕದ್ದು ಕಾದಂಬರಿ ಬರೆಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನೆಮಾ ಸುತ್ತಿದವರು ಕಲಾಸಿಪಾಳ್ಯದ ಫುಟ್ ಪಾತ್ ಮೇಲೆ ದಬಾಕಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ‘ನಗೆ ಸಾಮ್ರಾಟ’ರು ಗಾಂಧೀ ನಗರಕ್ಕೆ ಫೀ-ಮೇಲು, ಅಲ್ಲಲ್ಲ ಇ-ಮೇಲು ಮೂಲಕ ರವಾನಿಸಿದ್ದಾರೆ.