Archive | ಸಂಪಾದಕೀಯ RSS feed for this section

ಸಂತಾಪಕೀಯ :‌ ಇಗೋ, ಮತ್ತೊಮ್ಮೆ ನಾವು ನಿಮ್ಮ ಮುಂದೆ!

15 ಆಗಸ್ಟ್

ಮೊದಲಿಗೆ ನಮ್ಮ ಸಾಮ್ರಾಜ್ಯದ ನಿಷ್ಠ ಪ್ರಜೆಗಳಿಗೆಲ್ಲ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ್ಯ ದಿನವಲ್ಲವೇ? ಎಲ್ಲರೂ ಸಿಹಿ ತಿನ್ನಿ. ತಿನ್ನಿ ಪರವಾಯಿಲ್ಲ. ಎರಡು ಕ್ಷಣ ನಾವು ಕಣ್ಣು ಮುಚ್ಚಿಕೊಂಡು ಕೂರುತ್ತೇವೆ. ನಮ್ಮ ನಿಷ್ಠಾವಂತ ಪ್ರಜೆಗಳು ಎರಡು ನಿಮಿಷದ ಮಟ್ಟಿಗೆ ತಾವು ಸ್ವತಂತ್ರರು ಎಂದು ಸಂಭ್ರಮಿಸಲು ಅವಕಾಶ ಕೊಡದಷ್ಟು ಕ್ರೂರಿಗಳೇ ನಾವು? ಹ್ಹಾ! ತಿಂದು ಬಿಡಿ ನಾವು ಕಣ್ಣು ಬಿಡುವುದರೊಳಗೆ ಕೈ ಬಾಯಿ ಒರೆಸಿಕೊಂಡು ಶ್ರದ್ಧೆಯಿಂದ ಮಂಡಿಯೂರಿ ಕೂತರೆ ಸಾಕು…

ನೋಡಿ, ಸಾಮ್ರಾಟರೆಂಬ ಪಟ್ಟ ನಾವು ಕೇಳಿ ಪಡೆದುದಲ್ಲ. “ತಮ್ಮ ಶಿಲುಬೆಯನ್ನು ತಾವೇ ಹೊರಬೇಕು” ಎನ್ನುವ ಪರಮಾತ್ಮ ಏಸುವಿನ ಜೀವನ ಸಂದೇಶದಂತೆ ನಾವು ನಮ್ಮ ಈ ಶಿಲುಬೆಯನ್ನು ಹೊತ್ತು ಬಂದಿದ್ದೇವೆ (ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋದಾಗ ಮಾತ್ರ ಕ್ಷಣ ಮಾತ್ರಕ್ಕೆ ಅದನ್ನುವೈಕುಂಟಂ ಕ್ಯೂ ಕಾಂಪ್ಲೆಕ್ಸಿನಲ್ಲಿ ಇರಿಸಿಹೋಗುತ್ತೇವೆ). ನಮ್ಮ ಹೆಗಲ ಮೇಲಿನ ಭಾರ ನಮಗಷ್ಟೇ ಗ್ರಾಸವಾಗುವುದು. ಸಾಮ್ರಾಟರೆಂದ ಮಾತ್ರಕ್ಕೆ ನಾವು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ಸಾಧ್ಯವೇ? ನಾವು ಇಷ್ಟು ಕಾಲ ಎಲ್ಲಿದ್ದೆವು, ನಗಾರಿ ಏಕೆ ಮೌನವಾಗಿತ್ತು ಎಂಬೆಲ್ಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ನಮ್ಮದು. ಅದನ್ನು ತಪ್ಪಿಸಿಕೊಳ್ಳಲು, ಪ್ರಶ್ನೆ ಕೇಳಿದವರನ್ನು ಅಟ್ಟಿಸಿಕೊಂಡು ಹೋಗುವುದಕ್ಕೆ ನಾವೇನು ವೇಸ್ಟ್ ಬಂಗಾಲದ ದೊರೆಯೇ?

ಇರಲಿ, ನಿಮ್ಮ ಎಲ್ಲಾ ಸಂಶಯ ಸಂದೇಹಗಳಿಗೆ ಎಂದಿನಂತೆ ಪ್ರಜ್ವಲವಾದ ಸತ್ಯದ ಶುಭ್ರವಾದ ಪರದೆಯನ್ನೇ ಎಳೆಯುತ್ತೇವೆ.

ನಿಮಗೆಲ್ಲ ಆಶ್ಚರ್ಯವಾಗಬಹುದು. ನಿಮ್ಮ ಕಿವಿಗಳ ಮೇಲೆ ನಿಮಗೇ ಸಂಶಯ ಹುಟ್ಟಬಹುದು. ಆದರೂ ಕಿವಿಗೊಟ್ಟು ಕೇಳಿ. ನಾವು ನಗೆ ಸಾಮ್ರಾಟರಾದರೂ ಈ ಗೊಡ್ಡು, ನಗೆಹೀನ ಭರತ ಖಂಡಕ್ಕೆ ಸಾಮಂತರು ಮಾತ್ರ. ಇದನ್ನಾಳುವವರು ನಮಗಿಂತ ದೊಡ್ಡವರು. ಈ ದೊಡ್ಡವರ ದಡ್ಡತನ ತಿದ್ದಲ್ಲು ಮಗದೊಬ್ಬ ದೊಡ್ಡಣ್ಣ ಬೇಕು ಎಂದು ಚಳುವಳಿ ಪ್ರಾರಂಭ ಮಾಡಿದರು ಬಣ್ಣಾ ಮಜಾರೆ. ನೀವು ಗುಹೆಯಲ್ಲಿ ತಪಸ್ಸು ಮಾಡುತ್ತ, ಹೊಲದಲ್ಲಿ ಗೇಯುತ್ತ, ಐಐಟಿ ಎಂಟ್ರೆನ್ಸ್ ಎಗ್ಸಾಮಿಗಾಗಿ ಇರುಳು ದೀಪ ಉರಿಸುತ್ತಾ ಕೂತಿರದಿದ್ದರೆ ಖಂಡಿತವಾಗ್ಯೂ ಈ ಚಳುವಳಿ ಬಗ್ಗೆ ಕೇಳೇ ಇರುತ್ತೀರಿ.

ಬಣ್ಣಾ ಮಜಾರೆ ನಾಯಕತ್ವದಲ್ಲಿ ನಾವೂ ಸಹ ಚಳುವಳಿಯಲ್ಲಿ ಧುಮುಕಿದ್ದೆವು. ಐಸ್ ಕ್ರೀಮಿನಲ್ಲಿ ಸ್ವಾದವಿಲ್ಲ, ಚಹಾದಲ್ಲಿ ರುಚಿಯಿಲ್ಲ, ಕಾಫಿಯಲ್ಲಿ ಕೆಫೀನಿಲ್ಲ, ಅನ್ನದಲ್ಲಿ ಕಲ್ಲೇ ಎಲ್ಲ ಎಂದು ದೊಡ್ಡವರ ಕೊರಳ ಪಟ್ಟಿ ಹಿಡಿದು ಕೇಳುವುದಕ್ಕೆ ನಮಗೂ ಮೋಜು. ಗಂಟಲು ಹರಿಯುವಂತೆ ಕೂಗುತ್ತಿದ್ದೆವು. ಇನ್ನೇನು ನಮ್ಮೆಲ್ಲಾ ಕುಂದು ಕೊರತೆಗೆ ಇಲಾಜು ದೊರೆಯಿತು ಅನ್ನುವಷ್ಟರಲ್ಲಿ ಅಪ್ಪಳಿಸಿತೊಂದು ಸಿಡಿಲಾಘಾತ! ಊಟ, ತಿಂಡಿ ಬಿಟ್ಟು ಚಳುವಳಿ ಕೂತಿದ್ದ ಬಣ್ಣಾ ಮಜಾರೆ ಬೇಲಿಯೇ ಎದ್ದು ಹೊಲ ಮೇಯುವುದ ನೋಡೋಕಾಗಲ್ಲ, ಇದನ್ನ ತಡಿಯೋಕೆ ಹೊಲವೇ ಎದ್ದು ಬೇಲಿಯಾಗಬೇಕು ಎಂದು ಬಿಡಬೇಕೆ? ಶೀರ್ಷಾಸನದಲ್ಲಿದ್ದ ವಾಮದೇವ ಗುರೂಜಿ ಚಂಗನೆ ಧ್ವಜ ಸ್ಥಂಭವಾಗಿ ಬಿಟ್ಟರಲ್ಲ!

ನಾವು ಸಂಪೂರ್ಣವಾಗಿ ಭ್ರಮ ನಿರಸನಗೊಂಡು ರುಚಿಯಿಲ್ಲದ ಚಹಾದಲ್ಲಿ ನಮ್ಮೆಲ್ಲ ಹತಾಶೆಯನ್ನು ಮುಳುಗಿಸಿ ಕೈ ತೊಳೆಯುತ್ತಿರುವಾಗ ಇಬ್ಬನಿಯ ಎದೆಯಿಂಡ ಹೊಮ್ಮಿದ ಪರಿಮಳದಂಥ ಸೂರ್ಯನ ಕಾಂತಿಯಂತೆ ಬೆಳಗುವ ನಗೆ ನಗಾರಿ ಕಣ್ಣ ಮುಂದೆ ಬಂದಿತು. ಯಾರದೋ ಬೇಲಿ ಸರಿ ಮಾಡುವ ಉಮ್ಮೇದಿಯಲ್ಲಿ ನಮ್ಮ ಹೊಲವನ್ನು ತೊರೆದು ಹೋದ ಖೇದ ನಮ್ಮನ್ನಾವರಿಸಿತು. ಝಗ್ಗನೆ ಹೊತ್ತಿಕೊಂಡ ಅರಿವಿನ ಪಂಜು ಹಿಡಿದು ನಾವು ವಾಪಾಸ್ಸಾಗಿದ್ದೇವೆ. ನಿಮ್ಮ ಸೇವೆ ಸವಿಯಲು ಸಿದ್ಧರಾಗಿದ್ದೇವೆ.

ಸಂತಾಪಕೀಯ: ಸಾಮ್ರಾಟರಿಗೆ ಹೇಳಿ ಬಹುಪರಾಖ್!

19 ಆಗಸ್ಟ್

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ… ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್  ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ ಲಂಚ ಹೊಡೆದ ಆರೋಪ ತಲೆಯ ಮೇಲೆ ಕೂತಿದ್ದರೂ, ಲಜ್ಜೆಯಿಲ್ಲದ ಕುಕರ್ಮ ಮಾಡಿ ಸಿಕ್ಕುಬಿದ್ದರೂ ಜನರು ಧೈರ್ಯವಾಗಿ ಎದುಗುಂದದೆ ಬಾಳುವುದಕ್ಕೆ ಈ ಮೇಲಿನ ಬುದ್ಧಿವಂತಿಕೆಯ ಮಾತೇ ಆಧಾರ. ಜನರ ಈ ‘ಗಜನಿ’ ಮಾದರಿಯ ಅತ್ಯದ್ಭುತ ನೆನಪಿನ ಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅನೇಕ ಟಾನಿಕ್ಕುಗಳು ಹಗಲಿರುಳು ಕೆಲಸ ಮಾಡುತ್ತಿದ್ದರೂ ಒಟ್ಟಾರೆಯಾಗಿ ಸಮಾಜಕ್ಕೆ ಮರೆವಿನ ಶಕ್ತಿಯು ಬಲವಾಗಿ ವೃದ್ಧಿಯಾಗುತ್ತಿದೆ.

ಈ ಮರೆವಿನ ಶಕ್ತಿಯ ವಿರುದ್ಧ ಸೆಣೆಸುವುದಕ್ಕಾಗಿಯೇ ರಾಖಿ ಸಾವಂತಳು ಕ್ಯಾಮರಾದೆದುರು ಯಾರಿಂದಲೋ ಕಿಸ್ಸು ಪಡೆಯುತ್ತಾಳೆ, ರಾಹುಲ್ ಮಹಾಜನ್ ಯಾರಿಗೋ ಕೆನ್ನೆಗೆ ಬಿಗಿಯುತ್ತಾನೆ… ನಮ್ಮ ನೇತಾಗಳು ಕಂಡ ಕಂಡ ಮರದ ಕೊಂಬೆ ಹಿಡಿದು ನೇತಾಡುತ್ತಾರೆ. ಮೂರು ಬಿಟ್ಟು ಮಾರಲು ಕೂತ ವ್ಯಾಪಾರಿಗಳು ಕಂಡಲ್ಲಿ ಜಾಹೀರಾತಿನ ಗುಂಡು ಹಾರಿಸುತ್ತಾರೆ. ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಮಗ್ಗಿಯನ್ನು ಉರುಹೊಡೆಸಿ ನೆನಪಿರಿಸಿಕೊಳ್ಳುವಂತೆ ಮಾಡುವ ಶಿಕ್ಷರ ಹಾಗೆ ಎಲ್ಲರೂ ತಮ್ಮ ನೆನಪು ಎಲ್ಲರ ಮೆದುಳುಗಳಲ್ಲಿ ಹಚ್ಚ ಹಸಿರಾಗಿರಬೇಕೆಂದು ಪ್ರಯಾಸ ಪಡುತ್ತಾರೆ.

ಶ್ರೀ ಕೃಷ್ಣನು ಸಹ ತನ್ನನ್ನು ಮರೆತು ಬಿಡಬಾರದೆಂದು ಅಧರ್ಮ ತಲೆಯೆತ್ತಿದಾಗಲೆಲ್ಲಾ ತಾನು ಬಂದೇ ಬರುವೆನ್ ಎನ್ನುವ ಆಶ್ವಾಸನೆಯನ್ನು ನೀಡಿದ್ದಾನೆ. ಆತ ಹೇಗೂ ಬರ್ತೀನಿ ಅಂದಿರುವನಲ್ಲ, ಬಂದಾಗ ನೋಡಿಕೊಳ್ಳೋಣವೆಂದು ಸದ್ಭಕ್ತರು ಆತನ ಆಗಮನಕ್ಕೆ ಪೂರಕವಾದ ‘ಅಧರ್ಮ’ ಸೃಷ್ಟಿಯಲ್ಲಿ ಕಾಯಾ ವಾಚಾ ಮನಸಾ ತೊಡಗಿಸಿಕೊಂಡಿದ್ದಾರೆ.

ನೆನಪು ಹಾಗೂ ಮರೆವಿನ ಬಗ್ಗೆ ಮರೆಯದೆ ಇಷ್ಟು ಗಾಢವಾಗಿ ಯೋಚಿಸುವುದಕ್ಕೆ ಕಾರಣವಿದೆ. ಸತತ ಎರಡು ವರ್ಷಗಳ ಕಾಲ ನಗೆ ಸಾಮ್ರಾಜ್ಯದ ಸಾಮ್ರಾಟರಾಗಿ ಆಳಿದ ನಾವು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ, ನಮಗೇ ಎಣಿಸಲು ಮರೆತು ಹೋದಷ್ಟು ದಿನಗಳ ಕಾಲ ಸದ್ದೇ ಇಲ್ಲದಂತೆ ಕೂತಿದ್ದರೂ ಒಬ್ಬೇ ಒಬ್ಬ ಪ್ರಜೆಯೂ ನಮ್ಮನ್ನು ನೆನಪಿಸಿಕೊಳ್ಳಲಿಲ್ಲ. “ಅಯ್ಯೋ, ನಮ್ಮ ಸಾಮ್ರಾಟರು ಎಲ್ಲಿ? ಅವರಿಗೆ ಏನಾಯಿತು? ಅವರ ಆರೋಗ್ಯ ಹೇಗಿದೆಯೋ?” ಎಂದು ಮಾನಿನಿಯರು ಪರಿತಪಿಸಲಿಲ್ಲ. ಸಿಇಟಿ ಕೌನ್ಸೆಲಿಂಗಿಗೆ ಹೊರಟ ಹುಡುಗ ಹುಡುಗಿಯರು ಸಾಮ್ರಾಟರೇ ಕಣ್ಮರೆಯಾದರೆ ಇನ್ನು ನಮಗ್ಯಾರು ದಿಕ್ಕು ಎಂದು ಗೋಳಿಡಲಿಲ್ಲ. ಅಭಿಮಾನಿಗಳ ಸಂಘದಿಂದ ಒಂದಾದರೂ ಆತ್ಮಹತ್ಯಾ ಯತ್ನ ಪ್ರಹಸನಗಳು ನಡೆಯಲಿಲ್ಲ. ಶನಿವಾರ, ಭಾನುವಾರಗಳಂದು ಕೆಲಸವಿಲ್ಲದೆ ಕಂಡ ಕಂಡಲ್ಲಿ ಅಡ್ವೆಂಚರ್ ಬೆನ್ನಟ್ಟಿ ಅಲೆಯುವ ಟೆಕ್ಕಿಗಳು ನಮ್ಮನ್ನು ಪತ್ತೆ ಹಚ್ಚುವ ಹುಮ್ಮಸ್ಸು ತೋರಲಿಲ್ಲ. ಅಸ್ತಿತ್ವದಲ್ಲೇ ಇಲ್ಲದ ನದಿಗೆ ಕಟ್ಟಿದ ಸೇತುವೆಯ ಫುಟ್ ಪಾತಿನಲ್ಲಿ ಬಿದ್ದ ಲಿಪ್ ಸ್ಟಿಕ್ಕಿನ ಒಡತಿಯ ಗಂಡನ ಗುಪ್ತ ಸಂಬಂಧವನ್ನು ಪತ್ತೆ ಹಚ್ಚುವ ಚಾಣಾಕ್ಷ ಪತ್ರಕರ್ತರು ಸಾಮ್ರಾಟರ ಸ್ಟೇಟಸ್ಸು ಅಲೈವ್ ಅಥವಾ ಒನ್ಸ್ ಅಪಾನ್ ಎ ಟೈಮ್ ಆಗಿದೆಯೋ ಎನ್ನುವುದನ್ನು ಹುಡುಕುವ ಆಸಕ್ತಿ ತೋರಲಿಲ್ಲ.

ಇದನ್ನೆಲ್ಲಾ ಕಂಡಾಗ ನಮಗೆ ನಖಶಿಖಾಂತ ಕೋಪ ಉಕ್ಕಿ ಬರಬೇಕಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣಗಳು ಎರಡು. ಒಂದು, ತಂದೆ ತಾಯಿ ಕಲಿಸಿದಂತ ಶಿಸ್ತಿನಿಂದಾಗಿ ನಖವು ಹಾಗೂ ಗೆಳೆಯರು ಕಲಿಸಿದಂತಹ ಅಶಿಸ್ತಿನಿಂದಾಗಿ ನಮ್ಮ ಶಿಖೆಯು ಎಂದಿಗೂ ಕೋಪ ಉಕ್ಕಿಸುವ ಮಟ್ಟಕ್ಕೆ ಬೆಳೆಯಲೇ ಇಲ್ಲ. ನಮಗೆ ಸಿಟ್ಟು ಹುಟ್ಟದಿರುವುದಕ್ಕೆ ಮತ್ತೊಂದು ಕಾರಣ, ನಮ್ಮ ಸಾಮ್ರಾಜ್ಯದ ಜನಸ್ತೋಮದ ಮಾನಸಿಕತೆಯ ಬಗ್ಗೆ ಅಪಾರವಾದ ಅರಿವನ್ನು ನಾವು ಗಳಿಸಿಕೊಂಡಿರುವುದು.

ತನ್ನ ಪ್ರೀತಿಯ ಮಡದಿಯ ಹೆಸರನ್ನು ಜನರು ಮರೆಯದಿರುವಂತೆ ಮಾಡಲು ಷಾಹ್ ಜಹಾನ್ ಅಷ್ಟು ಅದ್ಭುತವಾದ ಮಹಲನ್ನೇ ಕಟ್ಟಿಸಬೇಕಾಯ್ತು. ತನ್ನ ಹೆಸರನ್ನು ಜಗತ್ತು ಎಂದಿಗೂ ನೆನಪಿನಿಂದ ಅಳಿಸಲೇಬಾರದೆಂದು ಅಡಾಲ್ಪ್ ಹಿಟ್ಲರ್ ಲಕ್ಷಾಂತರ ಮಂದಿ ಯಹೂದಿಗಳನ್ನು ಕೊಲ್ಲಿಸಬೇಕಾಯ್ತು. ಅಂಬೇಡ್ಕರ್ ಹೆಸರನ್ನು ಜನತೆ ಮರೆತುಬಿಡಬಾರದೆಂದು ಸರಕಾರವು ಒಂದೇ ತರಗತಿಯ ಮೂರು ಭಾಷೆಯ ಪಠ್ಯಗಳಲ್ಲಿ ಪಾಠವನ್ನು ಇಡಬೇಕಾಯಿತು. ಹೀಗಿರುವಾಗ ನಮ್ಮ ನೆನಪು ಪ್ರಜೆಗಳಲ್ಲಿ ಹಸಿರಾಗಿರಬೇಕೆಂದು ಬಯಸುವುದು ಪ್ರವಾಹದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರ ನಿಧಿಯ ಸೂಕ್ತ ವಿನಿಯೋಗವನ್ನು ಬಯಸಿದ ಹಾಗಲ್ಲವೇ? ಹೀಗಾಗಿ ನಾವು ಪ್ರಜೆಗಳು ನಮ್ಮನ್ನು ಮರೆತುಹೋದದ್ದಕ್ಕೆ ವ್ಯಥೆ ಪಡುವುದಿಲ್ಲ.

ಚಲಾವಣೆಯಲ್ಲಿಲ್ಲದ ಕಾರಣದಿಂದಾಗಿ ಮನುಕುಲವು ಬಾಲ, ಮೈಮೇಲಿನ ರೋಮಗಳನ್ನೆಲ್ಲ ಕಳೆದುಕೊಂಡಿದೆ ಎನ್ನುತ್ತದೆ ವಿಕಾಸ ವಾದ. ಹೀಗಿರುವಾಗ ಚಲಾವಣೆಯಿಂದ ತಪ್ಪಿಸಿಕೊಂಡರೆ ನಮ್ಮ ಸಾಮ್ರಾಟ ಪಟ್ಟವೂ ಕಣ್ಮರೆಯಾಗಿಬಿಡುವ ಅಪಾಯವನ್ನು ಮನಗಂಡು ನಾವು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ನೌಕರಿಗೆ ಹಾಜರಾಗಿದ್ದೇವೆ. ಹೇಳಿ ಸಾಮ್ರಾಟರಿಗೆ ಬಹುಪರಾಖ್!

ಸಂತಾಪಕೀಯ: ಐವತ್ತು ಸಾವಿರ ಒದೆ ತಿಂದ ನಗಾರಿಯ ವರ್ಚಸ್ಸು ಎಂಥದ್ದು ನೀವೇ ಹೇಳಿ…

19 ಏಪ್ರಿಲ್

ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು ದೊಡ್ಡ ಹೊಟ್ಟೆಯ ನರ್ಸು ನಮ್ಮ ಪಾದಗಳನ್ನು ಹಿಡಿದಿರುವಾಗ ನಾವು ಮಹಾಮಹಿಮರೇ ಇರಬೇಕು.

ಇಂತಹ ಅಸಾಮಾನ್ಯ ಜನ್ಮವನ್ನು ಪಡೆದ ನಾವು ಸಾಮಾನ್ಯ ಬಾಲಕರ ಹಾಗೆ ಶಾಲೆಗೆ ಹೋಗುವ ಅಪಮಾನವನ್ನು ಅನೇಕ ವರ್ಷಗಳ ಕಾಲ ಸಹಿಸಿಕೊಂಡಿದ್ದೆವು. ಹೀಗೆ ಸಹಿಸಿಕೊಳ್ಳುವುದಕ್ಕೆ ನಮ್ಮ ವಿಶಾಲ ಹೃದಯವಾಗಲಿ, ಅನುಪಮವಾದ ಸಂಯಮವಾಗಲಿ ಕಾರಣವಾಗಿರಲಿಲ್ಲ. ತಾಯ್ತಂದೆಯರ ಕುರಿತ ಭಯ, ಭಕ್ತಿ, ಗುರು ಹಿರಿಯರ ಮೇಲಿನ ಮಮಕಾರಾದಿಯಾಗಿ ಯಾವ ಭಾವನೆಯೂ ಕಾರಣವಲ್ಲ. ಲೋಕದ ದೃಷ್ಟಿಯಲ್ಲಿ ಈ ಕಾರಣಗಳನ್ನು ನಾವು ಒಪ್ಪಿಕೊಂಡಂತೆ ಕಂಡಿರಬಹುದು. ಆದರೆ ನಿಜವಾದ ಕಾರಣ ಬೇರೆಯೇ ಇತ್ತು. ಮುಂದೊಂದು ದಿನ ಗ್ರಹಣ ಬಿಟ್ಟ ಸೂರ್ಯನ ಹಾಗೆ ಪ್ರಜ್ವಲಿಸುತ್ತಾ ಸಾಮ್ರಾಟರಾಗಿ ಬೆಳಗಬೇಕಾದ ನಾವು ಅಂದಿನಿಂದಲೇ ಅದಕ್ಕೆ ಸಿದ್ದತೆ ಪ್ರಾರಂಭಿಸಿದ್ದೆವು. ಸಾಮ್ರಾಟರಾದ ನಮ್ಮ ಆಸ್ಥಾನವನ್ನು ಶೋಭಾಯಮಾನಗೊಳಿಸುವುದಕ್ಕೆ ನಯನ ತಣಿಸುವ ಸುಂದರಿಯರು ಅವಶ್ಯಕವಲ್ಲವೇ? ಬೆಳೆಯುವ ಸಿರಿಯನ್ನು ಸರಿಯಾಗಿ ಅರಿಯುವುದಕ್ಕೆ ಮೊಳಕೆಯಲ್ಲೇ ಕಾಳಜಿ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಹೀಗಾಗಿ ನಾವು ಆ ಸುಂದರಿಯರ ಅನ್ವೇಷಣೆ, ಪಾಲನೆ, ಪೋಷಣೆಗೆ ನಮ್ಮ ಸಮಯ ಮೀಸಲಿರಿಸಿದ್ದೆವು.

ನಾವಿದ್ದ ತರಗತಿಯಲ್ಲಿ ಸಕಲೆಂಟು ವಿದ್ಯೆಗಳನ್ನು ಕಲಿಸುವುದಕ್ಕೆ ಇದ್ದದ್ದು ಒಬ್ಬನೇ ಶಿಕ್ಷಕ. ಆತ ಕನ್ನಡ, ಇಂಗ್ಲೀಷ್, ಹಿಂದಿ ಎಂಬ ಮೂರು ಭಾಷೆಗಳನ್ನೂ, ವಿಜ್ಞಾನ, ಗಣಿತ, ಸಮಾಜ ಎಂಬ ಮೂರು ಮನುಕುಲದ ಕಂಟಕಪ್ರಾಯ ವಿಷಯಗಳನ್ನೂ ಏಕಪ್ರಕಾರವಾಗಿ ಕಲಿಸುತ್ತಿದ್ದ. ಆತನಿಗೆ ತರಬೇತಿ ನೀಡಿದ ಬೃಹಸ್ಪತಿ ಯಾರೋ, ಈ ಆರು ವಿಷಯಗಳಷ್ಟೇ ಅಲ್ಲ, ಜಗತ್ತಿನ ಸಮಸ್ಯ ಜ್ಞಾನ ರಾಶಿಯನ್ನು ಕಲಿಸಲು ತೊಡಗಿದರೂ ಆತನ ಬೋಧನಾ ಪದ್ಧತಿಯಲ್ಲಿ ಇನಿತೂ ವ್ಯತ್ಯಾಸವಾಗುತ್ತಿರಲಿಲ್ಲ. ಆತನ ಕಲಿಕೆಯ ಪದ್ಧತಿ ತೀರಾ ಸರಳವಾಗಿತ್ತು. ತಾನು ನಮಗೆ ಕಲಿಸಬೇಕು ಎನ್ನುವ ವಿಷಯವನ್ನು ಚೊಕ್ಕಟವಾದ ನೋಟ್ ಬುಕ್ಕಿನಲ್ಲಿ ಬರೆದುಕೊಂಡು ಬರುತ್ತಿದ್ದ. ಅದನ್ನು ಅಷ್ಟೇ ಮುತುವರ್ಜಿಯಿಂದ, ಒಂದಕ್ಷರ ಅತ್ತ ಇತ್ತ ಆಗದ ಹಾಗೆ ಕಪ್ಪು ಹಲಗೆಯ ಬೋರ್ಡಿನ ಮೇಲೆ ಇಳಿಸುತ್ತಿದ್ದ. ತನ್ನ ಅಪಾರ ಪ್ರತಿಭೆಯನ್ನು ಬಳಸಿ ಬೋರ್ಡ್ ಮೇಲೆ ಬರೆದಿರುವುದನ್ನು ತಪ್ಪಿಲ್ಲದೆ ಓದುತ್ತಿದ್ದ. ಈ ಸಮಸ್ತ ಪ್ರಕ್ರಿಯೆ ಜರುಗುವಷ್ಟರಲ್ಲಿ ವಿದ್ಯಾರ್ಥಿಗಳು ಆತ ಬೋಧಿಸಿದ ವಿಷಯವನ್ನು ಅರಗಿಸಿಕೊಂಡು ಬಿಡಬೇಕಿತ್ತು.

ಮರುದಿನ ತರಗತಿಗೆ ಕಾಲಿಟ್ಟೊಡನೆ ಆತ ತನ್ನ ಟೇಬಲಿನಿಂದ ಬಾರು ಕೋಲನ್ನು ಹೊರ ತೆಗೆಯುತ್ತಿದ್ದ. ಕಡೇ ಬೆಂಚಿನಿಂದ ಶುರು ಮಾಡಿಕೊಂಡು ತಾನು ಹಿಂದಿನ ದಿನ ‘ಬೋಧಿಸಿದ’ ವಿಷಯವನ್ನು ಒಪ್ಪಿಸುವಂತೆ ಗದರುತ್ತಿದ್ದ. ಎದ್ದು ನಿಂತ ಹುಡುಗ ಏನಾದರೊಂದು ಒದರಿದ್ದರೂ ನಡೆದು ಹೋಗುತ್ತಿತ್ತು. ಏಕೆಂದರೆ ಆ ಶಿಕ್ಷಕನಿಗೆ ತಾನು ಬೋಧಿಸಿದ ವಿಷಯವೇನು ಎನ್ನುವುದೇ ನೆನಪಿರುತ್ತಿರಲಿಲ್ಲ. ಉತ್ತರ ಪರೀಕ್ಷಿಸುವುದಕ್ಕೆಂದು ಎಲ್ಲರೆದುರು ನೋಟ್ ಬುಕ್ ತೆರೆಯುವುದು ಅಪಮಾನ ಎಂದೆಣಿಸಿ, ಉತ್ತರ ಹೇಳುತ್ತಿರುವವನ ಧ್ವನಿಯ ಏರಿಳಿತ, ಹಣೆಯ ಮೇಲಿನ ಬೆವರ ಸಾಲು, ಒಂದೇ ಸಾಲನ್ನು ಪುನರುಚ್ಚಿಸುವಾಗಿನ ಮುಖಭಾವ, ನಿಂತುಕೊಂಡ ಭಂಗಿ ಹೀಗೆ ನಾನಾ ಮೂಲದ ಮಾಹಿತಿ ಸಂಗ್ರಹಿಸಿ ಟಿವಿಯ ಕ್ವಿಜ್ ಕಾರ್ಯಕ್ರಮದಲ್ಲಿ ವಿಚಿತ್ರ ಮುಖ ಮಾಡಿಕೊಂಡು ಉತ್ತರ ಊಹಿಸುವವರ ಹಾಗೆ ಆತ ಊಹೆ ಮಾಡುತ್ತಿದ್ದ. ವಿಭಕ್ತಿ ಪ್ರತ್ಯಯದಿಂದ ಉತ್ತರ ಶುರು ಮಾಡಿ ಪ್ಲಾಸಿ ಕದನದ ವಿವರಣೆಯೊಂದಿಗೆ ಮುಗಿಸಿದರೂ ಆತನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಹೆದರದೆ, ತೊದಲದೆ, ನಿರಂತರವಾಗಿ ಟಿವಿ ನಿರೂಪಕಿಯ ಹಾಗೆ ಉಲಿಯುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ ಎಂಬುದು ಆತನ ಸಿದ್ಧಾಂತವಿದ್ದಂತಿತ್ತು. ಹೀಗಾಗಿ ಸುಂದರ ಮುಖದ, ಟಿವಿ ನಿರೂಪಕಿಯರೋ, ಗಗನ ಸಖಿಯರೋ ಆಗುವ ಉಜ್ವಲ ಭವಿಷ್ಯವಿದ್ದ ವಿದ್ಯಾರ್ಥಿನಿಯರಿಗೆ ಆತನ ಬಾರು ಕೋಲಿನ ಸ್ಪರ್ಶದ ಅನುಭವ ಸಿಕ್ಕುತ್ತಲೇ ಇರಲಿಲ್ಲ!

ಚಿಕ್ಕಂದಿನಲ್ಲಿಯೇ ನಮ್ಮ ಅವತಾರದ ಉದ್ದೇಶ ಅರಿತಿದ್ದ ನಾವು, ಮಾತು ಮಿತವಾದಷ್ಟೂ ವ್ಯಕ್ತಿತ್ವಕ್ಕೆ ಹಿತ ಎಂದು ನಂಬಿದ್ದೆವು. ಸಾಮ್ರಾಟರಾದ ನಮ್ಮನ್ನು ಪ್ರಶ್ನಿಸುವ ಹಕ್ಕು ಯಾವ ಹುಲು ಮಾನವನಿಗೂ ಇಲ್ಲ ಎನ್ನುವುದೇ ನಮ್ಮ ನಂಬುಗೆಯಾಗಿತ್ತು. ಹೀಗಾಗಿ ನಮಗೂ ಆ ಶಿಕ್ಷಕನ ಬಾರು ಕೋಲಿಗೂ ಗಳಸ್ಯ-ಕಂಠಸ್ಯ ನಂಟು ಬೆಳೆದಿತ್ತು. ಪ್ರತಿಬಾರಿ ನಮ್ಮ ರಾಜಠೀವಿಯ ಅಂಗೈಗಳ ಮೇಲೆ ಬಾರು ಕೋಲಿನ ಮುದ್ರೆ ಮೂಡಿಸುವಾಗಲೂ ಆ ಶಿಕ್ಷಕ ಒಂದು ಕತೆ ಹೇಳುತ್ತಿದ್ದ.

ಒಂದಾನೊಂದು ಊರಿನಲ್ಲಿ ಎರಡು ಕಲ್ಲು ಬಂಡೆಗಳಿದ್ದವು. ಶಿಲ್ಪಿಯು ಅವರೆಡನ್ನೂ ತಂದು ಉಳಿಯ ಏಟು ಕೊಡಲಾರಂಭಿಸಿದ. ಅಸಂಖ್ಯಾತ ಏಟುಗಳನ್ನು ತಾಳ್ಮೆಯಿಂದ ಸಹಿಸಿಕೊಂಡ ಕಲ್ಲು ದೇವಾಲಯದಲ್ಲಿ ದೇವರ ಮೂರ್ತಿಯಾಗಿ ಪೂಜೆ ಪಡೆಯಿತು, ಏಟು ತಿನ್ನಲು ನಿರಾಕರಿಸಿ ಒಡೆದ ಕಲ್ಲು ಚಪ್ಪಡಿಯು ಮೆಟ್ಟಿಲಿನ ಹಾಸಾಗಿ ಬಂದು ಹೋದುವವರಿಂದ ತುಳಿಸಿಕೊಂಡು ಒದೆಸಿಕೊಂಡು ಕಾಲ ಕಳೆಯುತ್ತಿತ್ತು ಎಂದು.

ಜೀವನದಲ್ಲಿ ಪ್ರತಿಬಾರಿ ಏಟು, ಒದೆತ ತಿನ್ನುವಾಗಲೂ ನಮಗೆ ಈ ಕತೆ ನೆನಪಾಗುತ್ತಿತ್ತು. ಈಗ ಬಿದ್ದ ಏಟು ಮುಂದೆ ನಾವು ಸಮಸ್ತ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನೆರವಾಗುವಂಥದ್ದು ಎಂದೇ ಭಾವಿಸುತ್ತಿದ್ದೆವು. ಅದಕ್ಕೇ ಒಂದು ಏಟು ಬೀಳುವ ಸಂದರ್ಭದಲ್ಲಿ ಕಿತಾಪತಿ ಮಾಡಿ ಎರಡು, ಮೂರು ಏಟು ತಿನ್ನುತ್ತಿದ್ದೆವು. ಬದುಕಿನಲ್ಲಿ ಅಷ್ಟು ಏಟು ತಿಂದಿರುವುದಕ್ಕೇ ನಾವಿಂದು ಹೀಗಿರುವುದು.

ವಾರಪತ್ರಿಯೊಂದರ ಸಾರಥಿ ಸಂಪಾದಕನ ಹಾಗೆ ನಮ್ಮ ಬಗ್ಗೆಯೇ ಇಷ್ಟು ಕೊರೆದುಕೊಳ್ಳುವುದಕ್ಕೆ ಕಾರಣವಿದೆ. ನಗೆ ನಗಾರಿ ಡಾಟ್ ಕಾಮ್ ಎಂಬುದು ನಮ್ಮ ಅಸ್ತಿತ್ವದ ಪ್ರತಿಬಿಂಬವಿದ್ದಂತೆ. ಇಂದಿಗೆ ಈ ಬ್ಲಾಗಿಗೆ ಓದುಗರ ‘ಒದೆ’ಗಳು ಐವತ್ತು ಸಾವಿರದ ಎಣಿಕೆಯನ್ನು ದಾಟಿವೆ. ಕೇವಲ ನೂರಿನ್ನೂರು ಒದೆಗಳ ಪ್ರಭಾವದಿಂದಲೇ ನಾವು ಇಷ್ಟರ ಮಟ್ಟಿಗೆ ಗೌರವಕ್ಕೆ ಭಾಜನರಾಗಿದ್ದೇವೆ, ನಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವ ಹಂತ ತಲುಪಿದ್ದೇವೆ. ಹೀಗಿರುವಾಗ ಐವತ್ತು ಸಾವಿರ ಮಂದಿಯ ಒದೆ ತಿಂದಿರುವ ನಗಾರಿಯ ವರ್ಚಸ್ಸು ಎಂಥದ್ದು , ನೀವೇ ಹೇಳಬೇಕು!

ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು…

2 ಜನ

ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ sataapakeeya ಅನುಭವದ ಬುತ್ತಿ ನೆರವಿಗೆ ಬರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ನಗೆ ನಗಾರಿ ಹುಟ್ಟಿ ಎರಡು ವರ್ಷಗಳು ಪೂರೈಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ನಮ್ಮ ಆಪ್ತ ಚೇಲ ಕುಚೇಲ ನಮ್ಮ ಬಳಿ ತಂದಾಗ ನಾವು ಬಹಿರ್ದೆಶೆಯ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಕುಚೇಲ ತಂದ ಸುದ್ದಿ ಸರ್ಕಾರಿ ಹೂಡಿಕೆ ಹಿಂತೆಗೆತದಂತಹ ಪರಿಣಾಮವನ್ನು ನಮ್ಮ ಪುಣ್ಯದ ಕಾರ್ಯದ ಮೇಲೆ ಉಂಟುಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದುಕೊಂಡು ನಾವು ಫ್ಲಶ್ ಮಾಡಿ ಹೊರಬಂದೆವು.

ಎರಡು ವರ್ಷಗಳ ಅವಧಿ ಸಾಮಾನ್ಯವಾದದ್ದಲ್ಲ. ಹತ್ತು ಹದಿನೈದು ನಿಮಿಷಕ್ಕೊಂದು ಶಿಶುವು ಸಾವನ್ನಪ್ಪುವ ಈ ಜಗತ್ತಿನಲ್ಲಿ ಇಷ್ಟು ಅವಧಿಯವರೆಗೆ ಬದುಕಿ ಉಳಿದಿರುವುದೇ ಅಸಾಮಾನ್ಯ ಸಾಧನೆ. ಹೀಗಿರುವಾಗ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ಗತಕಾಲದ ಇತಿಹಾಸವನ್ನು ಕೆದಕುತ್ತ ಕೂರದಿರಲು ಸಾಧ್ಯವೇ?

ನಮ್ಮ ಏಕಮೇಜು, ಏಕ ಕುರ್ಚಿ ಕೋಣೆಯಲ್ಲಿ ಕುಚೇಲ, ನಮ್ಮ ಆಲ್ಟರ್ ಈಗೋ, ತೊಣಚಪ್ಪ, ಸ್ವಾಮಿ ಅಧ್ಯಾತ್ಮಾನಂದರನ್ನು ಕಲೆ ಹಾಕಿ ನಾವು ಚರ್ಚೆಯನ್ನು ಪ್ರಾರಂಭಿಸಿದೆವು. “ನಾವು ಇದುವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಪರಿಶೀಲಿಸಿ ಮುಂದೆ ನಡೆಯುವ ಸಮಯವಿದು. ಹೀಗೆ ಪರಿಶೀಲಿಸುವುದರಿಂದ ಮುಂದಿನ ಹಾದಿಯು ಸುಗಮವಾಗುವುದೆಂಬ ವಿಶ್ವಾಸವಿಲ್ಲವಾದರೂ ಹಾದಿಯಲ್ಲಿ ಸಿಕ್ಕಬಹುದಾದ ಶಾರ್ಟ್ ಕಟ್ಟುಗಳ ಬಗ್ಗೆ ಎಚ್ಚರವಹಿಸಬಹುದು.”

ನಮ್ಮ ಕಛೇರಿಯ ಹೈರಾರ್ಖಿಯನ್ನು ಮುರಿದು ಸ್ವಾಮಿ ಅಧ್ಯಾತ್ಮಾನಂದರು ಮಾತಾಡತೊಡಗಿದರು. “ನಗೆ ನಗಾರಿ ಹತ್ತಿರತ್ತಿರ ಎರಡು ವರ್ಷಗಳ ಕಾಲ ಬಡಿದುಕೊಳ್ಳುತ್ತಿದ್ದರೂ ಜನರಿಗೆ ಬೇಕಿರುವುದೇನು ಎಂಬುದು ನಮ್ಮ ಸಾಮ್ರಾಟರಿಗೆ ಅರಿವಾಗಲಿಲ್ಲ. ದಿನದ ರೊಟ್ಟಿಯನ್ನು, ರುಚಿಕಟ್ಟಾದ ಚಟ್ನಿ ಪುಡಿಯನ್ನು ಜೊತೆಗೆ ಕೆನೆ ಮೊಸರನ್ನು, ಊಟದ ಕಷ್ಟ ನಿವಾರಿಸುವುದಕ್ಕಾಗಿ ಹೊಚ್ಚಹೊಸ ಹಿಂದಿ ಸಿನೆಮಾದ ಪೈರೇಟೆಡ್ ಸಿಡಿಯನ್ನು ಸಂಪಾದಿಸುವುದರಲ್ಲೇ ಹೈರಾಣಾಗಿ ಹೋಗುವ ಪ್ರಜೆಗಳ ಅಪೇಕ್ಷೆಯೇನು ಅದು ಅರಿಯದೆಯೇ ಅವರ ಗಂಟಲೊಳಗೆ ಹಾಸ್ಯರಸವನ್ನು ತುರುಕುತ್ತಿದ್ದಾರೆ ಸಾಮ್ರಾಟರು ಎಂಬುದು ನಮ್ಮ ಅಭಿಪ್ರಾಯ.”

ಹೈರಾರ್ಖಿ ಮುರಿದ ಸಿಟ್ಟಿನ ಭರದಲ್ಲಿ ತೊಣಚಪ್ಪ ಅಬ್ಬರಿಸಿದರು, “ಸ್ವಾಮ್ಗಳು ಪ್ರವಚ್ನ ಬುಟ್ಟು ವಿಸ್ಯ ಏನಂತ ಒದರಬೇಕು.”

ಹೆಸರಿನಲ್ಲಿದ್ದ ಆಧ್ಯಾತ್ಮವನ್ನು ನೆನೆಸಿಕೊಂಡು ಕೋಪ ಹತ್ತಿಕ್ಕಿಕೊಂಡ ಅಧ್ಯಾತ್ಮಾನಂದರು ಮುಂದುವರೆದರು, “ ನಗಾರಿ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಜನಪ್ರಿಯವಾದ ವರದಿ ಯಾವುದು ಎಂದು ಅವಲೋಕಿಸಿದರೆ ನಾವು ಹೇಳಲು ಹೊರಟಿದ್ದೇನು ಎಂಬುದು ವೇದ್ಯವಾಗುತ್ತೆ.”

ಸ್ವಾಮಿಗಳ ವಾಕ್ಯ ಪೂರ್ಣಗೊಂಡು ಫುಲ್ ಸ್ಟಾಪ್ ಬೀಳುವ ಮೊದಲೇ ಕುಚೇಲ ವರದಿಯನ್ನು ತಂದಿರಿಸಿದ. ನಾವು ಅತಳ-ಸುತಳ-ಪಾತಾಳಗಳನ್ನು ಬೇಧಿಸಿ, ಗವಿ ಗುಡಾರಗಳನ್ನು ಸ್ಪೋಟಿಸಿ ಮಾಡಿದ ಯಾವ ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ ಬಂದಿತು.

ಆ ವರದಿಗೆ ಬಂದ ಪ್ರಜೆಗಳ ಪ್ರತಿಕ್ರಿಯೆಗಳ ಮಹಾಪೂರ ಕೋಣೆಯೊಳಗಿದ್ದ ಎಲ್ಲರನ್ನೂ ದಿಗ್ಮೂಢರನ್ನಾಗಿಸಿತು- ಅಧ್ಯಾತ್ಮಾನಂದರ ಹೊರತು. “ಜನರು ತಮ್ಮ ಭವಿಷ್ಯತ್ತಿನ ಬಗ್ಗೆ, ಮುಂದಾಗಲಿರುವ ಘಟನೆಗಳ ಬಗ್ಗೆ ಈ ಮಟ್ಟಿಗೆ ವ್ಯಾಕುಲರಾಗಿರುವಾಗ ಸಾಮ್ರಾಟರು ಹೀಗೆ ಇತಿಹಾಸವನ್ನು, ವರ್ತಮಾನ ಪತ್ರಿಕೆಗಳನ್ನು ಅರೆದು ನಗೆ ಗುಳಿಗೆ ತಯಾರಿಸುವುದರಲ್ಲಿ ಮಗ್ನರಾಗುವುದು ಸಮಂಜಸವಲ್ಲ.”

ಮರದಿಂದ ಉದುರಿದ ಸೇಬು ನ್ಯೂಟನ್ನಿನನಿಗೆ ಗುರುತ್ವಾಕರ್ಷಣೆಯನ್ನು ಕಾಣಿಸಿದ ಹಾಗೆ ಸ್ವಾಮಿಗಳ ಪ್ರವಚನ ಕೇಳಿ ತೂಕಡಿಸುತ್ತಿದ್ದ ನಮ್ಮ ಆಲ್ಟರ್ ಈಗೋನ ಎಂಜಲು ನಮ್ಮ ನಿದ್ದೆಯನ್ನು ಕೆಡಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ನಾವು ಸೀದಾ ಖೋಡಿ ಹಳ್ಳಿ ಸ್ವಾಮೀಜಿಯ ಪಾದಕ್ಕೆರಗಿದೆವು. ಸ್ವಾಮಿಗಳು ಕೈಲಿದ್ದ ಬ್ಲ್ಯಾಕ್ ಬೆರ್ರಿಯನ್ನು ಬದಿಗಿಟ್ಟು ನೆತ್ತಿ ಮುಟ್ಟಿದೊಡನೆಯೇ ಮಿದುಳಲ್ಲಿ ಮಿಂಚಿನ ಸಂಚಾರವಾಯಿತು. ಪ್ರಳಯಕಾಲದ ಸಿಡಿಲು ಸ್ಪೋಟಿಸಿ ಅದರ ಸದ್ದು ಖಾಲಿ ಬುರುಡೆಯೊಳಗೆ ಮಾರ್ದನಿಸಿತು. ಇನ್ನು ದೇಹದಲ್ಲಿರುವ ಪ್ರತಿ ಕೋಶವನ್ನೂ, ಭಗವಂತ ನೀಡಿರುವ ಪ್ರತಿ ಕ್ಷಣವನ್ನೂ ಜನಸಾಗರದ ಭವಿಷ್ಯವನ್ನು ಸುಭದ್ರಗೊಳಿಸುವ ಕಾಯಕಕ್ಕೆ ವಿನಿಯೋಗಿಸಬೇಕು ಎಂದು ತೀರ್ಮಾನಿಸಿದೆವು. ಕೂಡಲೇ ಎಲ್.ಐ.ಸಿ ಕಛೇರಿ ಹೊಕ್ಕು ಅಲ್ಲಿಂದ ಹೊರದಬ್ಬಿಸಿಕೊಂಡೆವು.

ಹುಚ್ಚುಖೋಡಿ ಮಠದ ಪರಮಯೋಗ್ಯ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಜನರ ಭವಿಷ್ಯವನ್ನು ಕಾಣುವ ಸಿದ್ಧಿಯನ್ನು ಪಡೆದುಕೊಂಡೆವು. ಈ ದಿವ್ಯಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ ಹೇರಳವಾಗಿ ಧನ ದ್ರವ್ಯಾದಿಗಳನ್ನು ಅರ್ಪಿಸುವ ಟಿವಿ ಚಾನಲು, ಸಿನೆಮಾ ತಾರೆಯರು, ರಾಜಕಾರಣಿಗಳ ಸೇವೆಗೆ ಬಳಸು ಎಂಬ ದಿವ್ಯೋಪದೇಶದೊಂದಿಗೆ ಹಿಂದಿರುಗಿದೆವು.

ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

26 ಸೆಪ್ಟೆಂ

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ sataapakeeya ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ ಟೈಮ್ ಧರ್ಮ ಜಿಜ್ಞಾಸುಗಳು, ಫುಲ್ ಟೈಮ್ ಟಿವಿ ವಾಹಿನಿ ಜೋತಿಷಿಗಳು ತಮ್ಮ ಹೆಸರಿಲ್ಲದ ಶಾಂತಿ ಹೋಮಗಳಿಗೆ ಬ್ಲಾಗ್ ಲೋಕದ ಅತಿ ಕ್ಷುದ್ರ ಜೀವಿಯೇ ತಣ್ಣಗಾಗಿ ಹೋಯಿತು ಎಂದು ಬಯೋಡೇಟಾ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಕೊಚ್ಚೆಯಲ್ಲಿ ನೆತ್ತಿಯ ಮಟ್ಟಕ್ಕೆ ಮುಳುಗಿ ಅಲ್ಲಿದಂಲೇ ಕೆಸರೆರುಚುತ್ತಾ ಅವರಿವರ ಬಟ್ಟೆಯನ್ನು ಕೊಳೆಯಾಗಿಸಿ, ಮಡಿ ಕೆಡಿಸಿ ಮಡಿವಂತರು ಸ್ನಾನ ಗೃಹಕ್ಕೆ ಪದೇ ಪದೇ ತೆರಳುವಂತೆ ಮಾಡಿದ ಖುಶಿಯಲ್ಲಿ ಇನ್ನೆರಡು ಅಡಿ ಆಳಕ್ಕೆ ಕೊಚ್ಚೆಯಲ್ಲಿ ಮುಳುಗುತ್ತಿರುವ ಅನಾಮಿಕ ಬ್ಲಾಗಿಗರು ಹಾಗೂ ಬೇವಾರ್ಸಿ ಕಮೆಂಟುಗಳ ಸೃಷ್ಟಿಕರ್ತರು ತಮ್ಮ ೨೪/೭ ಕಠಿಣ ಶ್ರಮದಿಂದ ಸಾಮ್ರಾಟರು ಬ್ಲಾಗ್ ಮಂಡಲದಿಂದ ಓಡಿಹೋದರು ಎಂದು ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮನಸ್ಸಿನ ಮಂಡಿಗೆಯಲ್ಲಿ ಸಿಕ್ಕ ಒಂಟಿ ಹರಳಿನ ಹಾಗೆ ನಾವು ಮತ್ತೆ ಹಾಜರಾಗಿದ್ದೇವೆ.

ಪ್ರತಿ ಬಾರಿಯ ಹಾಗೆ ಇಷ್ಟು ದಿನಗಳ ನಮ್ಮ ಗೈರು ಹಾಜರಿಗೆ ಕಾರಣವನ್ನು ನಿವೇದಿಸಿಕೊಳ್ಳಲೇಬೇಕು. ಓದುಗ ಪ್ರಜೆಗಳಾದ ನೀವು ಎಂದಿಗಾದರೂ ನಮ್ಮನ್ನು ಕಾರಣ ಕೇಳಿದ್ದುಂಟೇ? ಆದರೂ ನಮ್ಮ ಪ್ರಜಾ ಸಮೂಹಕ್ಕೆ ಉತ್ತಮ ಉದಾಹರಣೆಯನ್ನು ಹಾಕಿಕೊಡುವ ಮಹೋದ್ದೇಶದಿಂದ ನಾವು ಈ ಅಭ್ಯಾಸವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇವೆ. ನಾವು ಗೈರು ಹಾಜರಾದ ದಿನಗಳಲ್ಲಿ ಎರಡು ಮುಕ್ಕಾಲು ದಿನಗಳನ್ನು ನಾವು ಗೈರು ಹಾಜರಿಯ ಕಾರಣವನ್ನು ಅನ್ವೇಷಿಸುವುದರಲ್ಲಿಯೇ ಕಳೆಯುತ್ತೇವೆ ಎಂದರೆ ನಮ್ಮ ಬದ್ಧತೆ ಎಷ್ಟು ಗಂಭೀರವಾದದ್ದು ಎಂಬುದರ ಕಲ್ಪನೆ ನಿಮಗಾದೀತು.

ಈ ಬಾರಿಯ ನಮ್ಮ ಗೈರು ಹಾಜರಿಗೆ ಗಟ್ಟಿಯಾದ ಕಾರಣವಿಲ್ಲದಿಲ್ಲ. ಹಿಂದಿನ ಸಂಚಿಕೆಯಲ್ಲಿ ನಾವು ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋವನ್ನು ಉಂಟು ಮಾಡಿದ, ಕಾಫಿ ಲೋಟದಲ್ಲಿ (ಕೆಲವರ ವ್ಹಿಸ್ಕಿ ಗಾಜಿನಲ್ಲಿ) ಬಿರುಗಾಳಿ ಎಬ್ಬಿಸಿದ ಬ್ಲಾಗ್ ಪ್ರಜೆಯ ವಿಶೇಷ ಸಂದರ್ಶನವನ್ನು ಪ್ರಕಟಿಸುವುದಾಗಿ ಘೋಷಿಸಿದ್ದೆವು. ಕೆಲಸ ಮುಗಿಯುವವರೆಗೆ ಅದನ್ನು ಯಾರ ಬಳಿಯೂ ಬಾಯಿ ಬಿಡಬೇಡ ಎಂಬ ಹಿರಿಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನೂ ನೀಡದ ನಾವು ಕೆಲಸವನ್ನು ಘೋಷಿಸಿದ ನಂತರವೇ ಅದನ್ನು ಮಾಡಲು ತೊಡಗುವುದು. ಈ ಬಾರಿ ನಾನು ಸೊನ್ನೆ ರನ್ನುಗಳಿಗೇ ಔಟಾಗುವುದು ಎಂದು ಘೋಷಿಸಿ ಮೈದಾನದಲ್ಲಿ ಆ ಘೋಷಣೆಯನ್ನು ಸಾಕಾರಗೊಳಿಸಿದ ನೆಪವನ್ನಿಟ್ಟುಕೊಂಡು ನಮ್ಮನ್ನು ಕಾಲೇಜು ಕ್ರಿಕೆಟ್ ಟೀಮಿನಿಂದ ಹೊರ ಹಾಕಿದ ಪ್ರಕರಣವನ್ನು ನಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆಯಲಿದ್ದೇವೆ.

ಬ್ಲಾಗ್ ಅಂಗಳದ ಆ ಸೆಲೆಬ್ರಿಟಿಯ ಸಂದರ್ಶನಕ್ಕಾಗಿ ನಮ್ಮ ಆಲ್ಟರ್ ಈಗೋವನ್ನು ಅಟ್ಟಿದ್ದೆವು. ಬ್ಲಾಗ್ಲೋಕ ವಿಖ್ಯಾತ ಬ್ಲಾಗಿನ ಅನಾಮಿಕ ಯಜಮಾನರನ್ನು ಹುಡುಕಿಕೊಂಡು ಹೊರಟ ನಮ್ಮ ಆಲ್ಟರ್ ಈಗೋ ಎಷ್ಟು ದಿನಗಳಾದರೂ ಹಿಂದಿರುಗಲಿಲ್ಲ. ಸರಿಯಾದ ವಿಳಾಸ, ಲ್ಯಾಂಡ್ ಮಾರ್ಕು, ಗುರುತಿನ ಚರ್ಯೆ, ಮೊಬೈಲ್ ನಂಬರು  ಇದ್ದರೇನೇ ಈ ನಗರಗಳಲ್ಲಿ ವ್ಯಕ್ತಿಯನ್ನು ಹುಡುಕುವುದು ಕಷ್ಟ ಹೀಗಿರುವಾಗ ಹೆಸರಿಲ್ಲದ ಬ್ಲಾಗ್ ವ್ಯಾಸನನ್ನು ಹುಡುಕಿ ಹೊರಟ ನಮ್ಮ ಆಲ್ಟರ್ ಈಗೋ ಅಂತರಜಾಲದ ಯಾವುದೋ ಎಳೆಯಲ್ಲಿ ಕಾಲು ಸಿಕ್ಕಿಸಿಕೊಂಡು ಖೈದಾಗಿ ಹೋಯಿತು. ಅದನ್ನು ಹುಡುಕಲೆಂದು ಕಳುಹಿಸಿದ ಲೋಕ ವಿಖ್ಯಾತ ಡಿಟೆಕ್ಟೀವ್ ಶೆರ್ಲಾಕ್ ಹೋಮ್ಸನ ಗುರು, ನಮ್ಮ ಅತ್ಯಾಪ್ತ ಚೇಲ ಕುಚೇಲ ಸಹ ಕಣ್ಮರೆಯಾಗಿ ಹೋದ. ಆ ಬ್ಲಾಗಿಗರ ಬಗ್ಗೆ ಈಗಾಗಲೇ ಬ್ಲಾಗ್ಲೋಕದಲ್ಲಿ ಅನೇಕ ವದಂತಿಗಳು, ನಿಗೂಢ ದಂತಕತೆಗಳು ಹರಡಿಕೊಂಡಿದ್ದರಿಂದ ಅಲ್ಲೆಲ್ಲಾದರೂ ಚಾಚಿಕೊಂಡಿರಬಹುದಾದ ಬರ್ಮುಡ ರೆಕ್ಟಾಂಗಲ್, ಸರ್ಕಲ್‌ಗಳ ರಹಸ್ಯ ಬೇಧಿಸಲು ಖುದ್ದಾಗಿ ನಾವೇ ತೆರಳಿದೆವು.

ಕಾಲನೇ ಕೈ ಹಿಡಿದನೆಂದರೆ ಆಗದ ಕೆಲಸ ಯಾವುದಾದರೂ ಉಂಟೇ? ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡಿದರೆಂದರೆ ಸಿಕ್ಕದ ನೌಕರಿ ಯಾವುದಾದರೂ ಉಂಟೆ? ನಾವು ಅನಾಮಿಕ ಬ್ಲಾಗಿಗರ ಬೆನ್ನಟಿ ಹೊರಟ ಕೆಲವೇ ದಿನಗಳಲ್ಲಿ ಆ ಬ್ಲಾಗಿಗರೇ ನಮ್ಮ ಕಾಲಿಗೆ ಕಚ್ಚಿಕೊಂಡರು. ಆದರೆ ಕಾಲಿಗೆ ತೊಡರಿಕೊಂಡ ಆ ವಸ್ತುವಿಗೆ ಮುಖವಾಗಲಿ, ಉಳಿದ ಅವಯವಗಳಾಗಲಿ ಇದ್ದಂತೆ ತೋರಲಿಲ್ಲ. ಉದ್ದನೆಯ ಕೂದಲಿದ್ದ ಮಾತ್ರಕ್ಕೆ ಹೆಣ್ಣೆಂದು ಗುರುತಿಸುವುದು, ಜೇಬಲ್ಲಿ ಪೆನ್ನು ಇಟ್ಟುಕೊಂಡ ಮಾತ್ರಕ್ಕೆ ವಿದ್ಯಾವಂತ ಎಂದು ಭಾವಿಸಿದಷ್ಟೇ ಪ್ರಮಾದಕಾರಿ ಎಂದು ಅನುಭವದಿಂದ ಕಂಡುಕೊಂಡಿದ್ದ ನಾವು ಇನ್ನಿತರ ದೇಹದ ಭಾಗಗಳಿಗಾಗಿ ಹುಡುಕಾಡಿದೆವು. ಗಂಡು, ಹೆಣ್ಣೆಂದು ಪ್ರತ್ಯೇಕಿಸುವುದಕ್ಕೆ ಆ ದೇವರು ಅದೆಷ್ಟು ಸ್ಪಷ್ಟವಾದ ಭಿನ್ನತೆಯನ್ನು ಕೊಟ್ಟಿದ್ದಾಗ್ಯೂ ನಮಗೆ ನಮ್ಮ ಕಾಲಿಗೆ ತೊಡರಿದ ವಸ್ತು ಯಾವ ಲಿಂಗದ್ದು ಎಂದು ನಿರ್ಧರಿಸಲಾಗಲಿಲ್ಲ. ಆದರೂ ಆ ವಸ್ತುವೇ ವಿಖ್ಯಾತ ಬ್ಲಾಗಿನ ವಾರಸುದಾರ ಎಂದು ನಾವು ನಮ್ಮ ಆರನೆಯ ಇಂದ್ರಿಯ ಹಾಗೂ ಏಳನೆಯ ಇಂದ್ರಿಯಗಳ ಸಹಯೋಗದಿಂದ ನಡೆಸಿದ ಕಾರ್ಯಾಚರಣೆಯಿಂದ ಕಂಡುಕೊಂಡೆವು.

ಸಂದರ್ಶನ ಶುರು ಮಾಡುವ ಮುನ್ನ, ಅತಿಥಿಯನ್ನು ಹೊಗಳಿ ಅಟ್ಟಕ್ಕೇರಿಸುವುದು ನಮ್ಮ ಎಂದಿನ ಪದ್ಧತಿ. ನಾವು ಈಗಾಗಲೇ ಅಟ್ಟದಲ್ಲಿ ಈಸಿ ಚೇರು ಹಾಕಿಕೊಂಡು ಕೂತಿರುತ್ತೇವಾದ್ದರಿಂದ ಅತಿಥಿಯನ್ನು ಅಲ್ಲಿಗೇ ಕರೆಸಿಕೊಳ್ಳುವುದು ನಮಗೆ ಅನುಕೂಲಕರವಾದ ಸಂಗತಿ. ಈ ವಸ್ತುವನ್ನು ಹೀಗೆ ಅಟ್ಟಕ್ಕೆ ಏರಿಸುವುದಕ್ಕೆ ನಮಗೆ ಬಹು ಪ್ರಯಾಸವಾಯಿತು. ಮುಖವೇ ಇಲ್ಲದ ವಸ್ತುವಿಗೆ ಮುಖ ಸ್ತುತಿ ಮಾಡುವುದಾದರೂ ಹೇಗೆ? ನಿಮ್ಮ ಕಣ್ಣುಗಳು ನೀಳವಾದ ಮೀನಿನ ಕಣ್ಣುಗಳ ಹಾಗಿವೆ, ಮೂಗಿ ಸಂಪಿಗೆಯ ಹಾಗಿದೆ, ಮೀಸೆ  ಬೋರ್ಡು ಒರೆಸುವ ಡಸ್ಟರ್ ಇದ್ದ ಹಾಗಿದೆ, ಮುಂಗುರುಳು ನಮ್ಮ ಕಾರಿನ ವೈಪರ್ ಇದ್ದ ಹಾಗಿದೆ ಎನ್ನಲಿಕ್ಕೆ ಆಯಾ ಅವಯವಗಳ ಜಾಗದಲ್ಲಿ ಏನಾದರೊಂದು ಇರಲೇ ಬೇಕಲ್ಲವೇ? ಮುಖವೇ ಇಲ್ಲದ ಈ ವಸ್ತುವನ್ನಿಟ್ಟುಕೊಂಡು ಅದೆಂತಹ ಕಲ್ಪನಾ ಶಕ್ತಿಯಿರುವ ಕವಿಯಾದರೂ ಒಂದೇ ಒಂದು ಸಾಲು ಬರೆಯಲಾರ!

ಹೇಗೋ ನಮ್ಮ ತಪಃಶಕ್ತಿಯನ್ನೆಲ್ಲ ಖರ್ಚು ಮಾಡಿ ಆ ವಸ್ತುವನ್ನು ಅಟ್ಟಕ್ಕೆ ಏರಿಸಿ ನಾವು ಸಂದರ್ಶವನ್ನು ನಡೆಸಿದೆವು. ಆ ಸಂದರ್ಶನದ ಕತೆಯೋ, ಅದು ಮತ್ತೊಂದು ಉದಯ ಟಿವಿ ಧಾರಾವಾಹಿಯ ಸರಕಾಗುವಷ್ಟಿದೆ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಹೇಳುವೆ. ಸರಿ ಸಂದರ್ಶನ ಮುಗಿಸಿಕೊಂಡು, ಬರ್ಮುಡ ಪೆಂಟಗನ್ನಿನಲ್ಲಿ ಲೀನವಾಗಿದ್ದ ನಮ್ಮ ಆಲ್ಟರ್ ಈಗೋ ಹಾಗೂ ಕುಚೇಲನನ್ನು ಪತ್ತೇ ಹಚ್ಚಿ ಎಳೆದುಕೊಂಡು ನಮ್ಮ ಕಛೇರಿಗೆ ಹಿಂದಿರುಗುವಷ್ಟರಲ್ಲಿ ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು.

ನಗೆ ಸಾಮ್ರಾಜ್ಯದ ಸಾಮ್ರಾಟರಾದ ನಮ್ಮನ್ನು ಇಷ್ಟು ಬೆವರಿಳಿಸುವಂತೆ ಮಾಡಿದ ಆ ಸಂದರ್ಶನವನ್ನು ಶೀಘ್ರದಲ್ಲಿಯೇ ನಗೆ ನಗಾರಿಯಲ್ಲಿ ಬೆಳಕು ಕಾಣಿಸುತ್ತೇವೆ. ಇನ್ನು ಮುಂದೆ ತಪ್ಪದೆ ನಗಾರಿಯ ಸದ್ದು ಎಂದಿನ ಕರ್ಕಶ ಶೃತಿಯಲ್ಲಿ ನಿಮ್ಮ ಕಿವಿಗಳನ್ನಪ್ಪಳಿಸಿ ಕಿವಿಯ ಮೇಣವನ್ನು ಕೆಡವಿ ಸ್ವಚ್ಛಗೊಳಿಸುವುದು ಎಂದು ಭರವಸೆ ಕೊಡುತ್ತೇವೆ.

 

ಇಂತಿ ನಿಮ್ಮ
ನಗೆ ಸಾಮ್ರಾಟ್

ಸಂತಾಪಕೀಯ: ಕೈ ತಪ್ಪಿದ ಪ್ರಧಾನಿ ಪಟ್ಟ ಹಾಗೂ ನಮ್ಮ ನಾಪತ್ತೆ ಪ್ರಸಂಗ!

6 ಮೇ

‘ಒಮ್ಮೆ ನಮ್ಮನ್ನು ಗೆಲ್ಲಿಸಿ ನೋಡಿ ನಿಮ್ಮ ಊರಿನ ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯ ಥರ ಆಗುತ್ತವೆ, ನಿಮ್ಮ ಊರು ಸಿಂಗಾಪುರವಾಗುತ್ತದೆ’ ಎನ್ನುವ ರಾಜಕಾರಣಿಗಳ ಆಶ್ವಾಸನೆಯಂತೆ, ‘ಇನ್ನು ಮುಂದೆ ಸ್ವಮೇಕ್ ಸಿನೆಮಾಗಳನ್ನೇ ಮಾಡುತ್ತೇವೆ, ನಮ್ಮ ರಾಜ್ಯದ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ, ವಿದೇಶಿ ಲೊಕೇಶನ್ನು, ಪರಭಾಷಾ ಗಾಯಕಿಯರಿಗೆ ಹಣ ಸುರಿಯದೆ ಎಲ್ಲವನ್ನೂ ಕರ್ನಾಟಕದಲ್ಲಿ ಮಾಡುತ್ತೇವೆ’ ಎನ್ನುವ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕರ ಹೇಳಿಕೆ, ‘ಇವತ್ತೇ ಕೊನೆ ಇನ್ನು ಕುಡಿಯುವುದಿಲ್ಲ, ಎಡಗೈ ಕಿರು ಬೆರಳಲ್ಲೂ ಮದ್ಯದ ಬಾಟಲ್ ಮುಟ್ಟುವುದಿಲ್ಲ’ ಎನ್ನುವ ಗಂಡಂದಿರ ಪ್ರತಿಜ್ಞೆಯ ಹಾಗೆ, ‘ಇವತ್ತೇ ಲಾಸ್ಟ್ ಇನ್ನು ಸೋಮಾರಿತನ ಮಾಡುವುದಿಲ್ಲ. ನಾಳೆಯಿಂದ ನಿಯತ್ತಾಗಿ ಬೆಳೆಗ್ಗೆ ಐದಕ್ಕೆದ್ದು ಓದಲು ಕೂರುವೆ’ ಎಂದು ಭೀಷ್ಮನನ್ನೇ ನಡುಗಿಸುವ ವಿದ್ಯಾರ್ಥಿಯ ಪ್ರತಿಜ್ಞೆಯ ಸಾಲಿಗೆ ನಮ್ಮನ್ನೂ ಸೇರಿಸಿಬಿಡಲು ನಮ್ಮ ವಿರೋಧಿಗಳು ಹೊಂಚು ಹಾಕಿ ಸಂಚು ರೂಪಿಸುತ್ತಿರುವುದು ನಮ್ಮ ತೀಕ್ಷ್ಣ ಮತಿಗೆ ತಡವಾಗಿ ಅರಿವಿಗೆ ಬಂದಿದೆ.

‘ಒಂದು ದಿನವೂ ತಪ್ಪಿಸದಂತೆ ನಗಾರಿ ಸದ್ದು ಮಾಡುತ್ತಿರುತ್ತದೆ’ ಎಂದು ನಗೆ ಸಾಮ್ರಾಟರಾದ ನಮ್ಮಾಣೆ, ನಮ್ಮ ಚೇಲ ಕುಚೇಲ, ನಮ್ಮ ಗತಕಾಲದ ಅತ್ಯಾಪ್ತ ಗೆಳೆಯ ತೊಣಚಪ್ಪನವರ ಮೇಲೆ ಆಣೆ ಮಾಡಿ ಹೇಳಿದ್ದ ನಾವು ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಂಡು ಪರಂಧಾಮ ತಲುಪಿ ಅಲ್ಲಿಂದ ರೋಚಕವಾಗಿ ಹಿಂದಿರುಗಿದ್ದು ನಮ್ಮ ನಿಯಮಿತ ಓದುಗರ ನೆನಪಿನಲ್ಲಿರುತ್ತದೆ ಎಂದುಕೊಂಡಿದ್ದೇವೆ. ಅದನ್ನು ಹೊರತು ಪಡಿಸಿದರೆ ನಾವು ಇಷ್ಟು ಕಾಲ ಅನುಪಸ್ಥಿತರಾಗಿದ್ದು ಅನೇಕರಲ್ಲಿ ಸಂಶಯವನ್ನು ಮೂಡಿಸಿರುವುದು ಸಹಜ. ಕೆಲವರು ಹಿಂದೆ ವಿಫಲವಾದ ಆತ್ಮಹತ್ಯಾ ಪ್ರಯತ್ನವನ್ನು ನೆನೆದು, ಇನ್ಯಾರೋ ಯಶಸ್ವಿಯಾಗಿ ನಮ್ಮ ಕೊಲೆ ಮಾಡಿರಬೇಕು ಎಂದು ಅಂದಾಜಿಸಿ ಅಧಿಕಾರಕ್ಕೆ ಬರುವ ಸರಕಾರ ಯಾವುದು ಎಂದು ಊಹಿಸಿದ ರಾಜಕೀಯ ಪಂಡಿತರ ಹಾಗೆ ಫೋಸ್ ಕೊಡುತ್ತಿದ್ದರು. ಇನ್ನು ಕೆಲವರು ಚುನಾವಣೆಯ ಸಂದರ್ಭದಲ್ಲಿ ಗದ್ದಲವಾಗಬಾರದು ಎಂಬ ಕಾರಣಕ್ಕೆ ನಗಾರಿ ಗಂಟು ಮೂಟೆ ಕಟ್ಟಿ ಬಿಸಾಡಿಸುವ ಸಾಧ್ಯತೆ ಇದೆ ಎಂದು ಅಂಕಿ ಅಂಶಗಳ ಮೂಲಕ ದಾಳಿ ನಡೆಸಿದ್ದರು. ಆದರೆ ನಾವು ಮಾತ್ರ ಸೂಕ್ತ ಸಮಯಕ್ಕೆ ಕಾಯುತ್ತ ಕೂತಿದ್ದೆವು.

ನಾವು ನಾಪತ್ತೆಯಾಗುವುದಕ್ಕೆ ಈ ಬಾರಿ ಸಣ್ಣ ಪುಟ್ಟ ನೆಪ ಕಾರಣವಾಗಿರಲಿಲ್ಲ. ನಮ್ಮ ನಾಪತ್ತೆಯ ಹಿಂದೆ ಬಹುದೊಡ್ಡ ಸಂಚೇ ನಡೆದಿತ್ತು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ದಿನಾಂಕವನ್ನು ಘೋಷಿಸಿದ ತಕ್ಷಣ ನಾಡಿನಾದ್ಯಂತ ಅನಧಿಕೃತವಾಗಿ ಒಂದು ವದಂತಿ ಹರಿದಾಡಲು ಶುರುವಾಯಿತು. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಗೆ ಸವಾಲಾಗಿರುವ ಈ ಚುನಾವಣೆಯಲ್ಲಿ ಬಹುದೊಡ್ಡ ಸ್ಥಿತ್ಯಂತರವಾಗುವ ಗುಲ್ಲು ಎಲ್ಲೆಡೆ ಕೇಳಿಬಂತು. ಮೊದ ಮೊದಲು ಸಾಮಾನ್ಯ ಜನರು, ರಾಜಕೀಯ ಪಂಡಿತರು, ಮಾಧ್ಯಮದ ಪ್ರಭೃತಿಗಳು ಈ ಗುಲ್ಲನ್ನು ನಿರ್ಲಕ್ಷಿಸಿದ ನಾಟಕವಾಡಿದರು. ಆದರೆ ಯಾವಾಗ ಊರಿಗೊಬ್ಬಳೇ ಪದ್ಮಾವತಿ ಮತ್ತವಳ ತಂಗಿ ರೂಪಲಕ್ಷ್ಮಿ ಎಂಬಂತೆ ದೇಶಕ್ಕೆಲ್ಲ ಎರಡೇ ರಾಜಕೀಯ ಪಕ್ಷಗಳು ಎಂಬ ಪರಿಸ್ಥಿತಿ ಇದ್ದದ್ದು ಬದಲಾಗುವ ಸಾಧ್ಯತೆಗಳು ಕಂಡುಬರಲು ಶುರುವಾಯಿತೋ ಗುಲ್ಲನ್ನು ತಳ್ಳಿ ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಮೂರನೆಯ ರಂಗ, ನಾಲ್ಕನೆಯ ರಂಗ, ಐದನೆಯ ರಂಗ ಎಂದು ಭೈರಪ್ಪನವರ ಆವರಣದ ಮುದ್ರಣದ ಹಾಗೆ ರಾಜಕೀಯ ರಂಗಗಳ ಸಂಖ್ಯೆ ಏರುತ್ತಾ ಹೋದಾಗ ಯಾರು ಬೇಕಾದರೂ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗತೊಡಗಿತು. ರಾಜಕಾರಣಿಗಳಿಗೆ, ಪಂಡಿತರುಗಳಿಗೆ ದಿಗಿಲು ಶುರುವಾದದ್ದೇ ಆಗ! ನಗೆ ಸಾಮ್ರಾಟರಾದ ನಾವು ನಿಶ್ಚಿತವಾಗಿ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳನ್ನು ಕಂಡು ದೇಶಕ್ಕೆ ದೇಶವೇ ನಿಬ್ಬೆರಗಾಯಿತು.

‘ನಗೆ ಸಾಮ್ರಾಟ್ ಪ್ರಧಾನಿಯಾಗುವುದು ಕನಸಿನಲ್ಲೂ ಸಾಧ್ಯವಿಲ್ಲ’ ಎನ್ನುವ ಪ್ರಮುಖ ಪಕ್ಷಗಳ ಉಪೇಕ್ಷೆಯ ಹೇಳಿಕೆಗಳಿಗೆ ಉತ್ತರವಾಗಿ ದಿನೇ ದಿನೇ ಬಲಗೊಳ್ಳಲು ತೊಡಗಿದ ನಮ್ಮ ‘ಇನ್ನೊಂದು ರಂಗ’ ದೇಶದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಹಂತವನ್ನು ತಲುಪಿತ್ತು. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರಿ ಅಂತರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಜಯಿಸಿ ಅಭೂತಪೂರ್ವ ದಾಖಲೆ ಬರೆಯ ಹೊರಟ ನಮ್ಮ ಧೈರ್ಯ, ಸಾಹಸ ಮನೋವೃತ್ತಿಗೆ ಭುವಿಯೇ ಥರ ಥರನೇ ನಡುಗಿತು.

ಆಗ ಶುರುವಾಯಿತು ಸಂಚಿನ ಮೊದಲ ಹಂತ. ಇನ್ನು ನಾವೆಲ್ಲ ಪರಸ್ಪರ ಕಿತ್ತಾಡುತ್ತ ಕೂತರೆ ದೇಶಕ್ಕೆ ದೇಶವೇ ನಗೆ ಸಾಮ್ರಾಟನ ಸಾಮ್ರಾಜ್ಯವಾಗಿ ಬಿಡುತ್ತದೆ. ನಮ್ಮ ಗಲ್ಲಿ ಪಾಂಚಾಜನ್ಯಗಳನ್ನು ವಿಕಾರವಾಗಿ ಅರಚಿಸುತ್ತಾ ನಾವು ಹೊಡಿ, ಬಡಿ, ಕಡಿ ಎಂದು ಕೂಗಾಡುತ್ತಿದ್ದರೆ ಅಖಂಡ ಭಾರತದಲ್ಲಿ ನಗೆ ನಗಾರಿಯ ಸದ್ದು ಮಾರ್ದನಿಸತೊಡಗುತ್ತದೆ ಎಂಬುದನ್ನು ಅರಿತ ಸರ್ವ ಪಕ್ಷಗಳು ಈ ಭುವಿಯ ಇತಿಹಾಸದಲ್ಲಿ ಹಿಂದೆಂದೂ ನಡೆದಿರದ ಭಾರಿ ಸಂಚನ್ನು ಹೆಣೆದವು. ಈ ದುಷ್ಟ ಕೂಟದ ದಾಳಿ ಹೇಗಿತ್ತೆಂದರೆ ಚೂರು ಪಾರು ಮಹಾಭಾರತದ ಅರಿವಿರುವವರಿಗೆಲ್ಲಾ ಅಭಿಮನ್ಯುವನ್ನು ಆಹುತಿ ತೆಗೆದುಕೊಂಡ ಚಕ್ರವ್ಯೂಹವನ್ನು ನೆನಪಿಸುವಷ್ಟು!

ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದ ಹಾಗೆ ನಮ್ಮನ್ನು ಎಂಟು ಮತ್ತೆರಡು ದಿಕ್ಕುಗಳಿಂದ ಹಣಿದು ಹಾಕಲಾಯಿತು. ನಮ್ಮನ್ನು ಉಸಿರಾಡುವ ಶವದಂತೆ ನಿಷ್ಕ್ರಿಯ ಮಾಡಲಾಯಿತು. ಒಂದಿಂಚೂ ಕದಲದ ಹಾಗೆ ದಿಗ್ಭಂದನ ಮಾಡಲಾಯಿತು. ಮರಾ ಮೋಸದಿಂದ ನಮ್ಮ ಶಕ್ತಿಯನ್ನೆಲ್ಲ ಕುಗ್ಗಿಸಲಾಯಿತು. ನಮ್ಮ ರೆಕ್ಕೆ ಪುಕ್ಕಗಳನ್ನೆಲ್ಲಾ ಹದವಾದ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು. ಇಷ್ಟು ಸಾಹಸವನ್ನು ಮೆರೆದ ದುಷ್ಟಕೂಟ ನಾವು ಈ ಮಹಾನ್ ದೇಶದ ಮಹಾನ್ ಪ್ರಧಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಯಿತು. ಮುಂದಿನ ಐದು ವರ್ಷ ನೆಮ್ಮದಿಯಾಗಿರಬಹುದು ಎಂದು ಭಾವಿಸಿತು.

ಪ್ರಧಾನಿ ಪಟ್ಟ ತಪ್ಪಿದ ನಿರಾಸೆ, ಮಹಾನ್ ಸಾಧನೆ ಮಾಡುವುದಕ್ಕೆ ಉಂಟಾದ ವಿಘ್ನದ ಬಗೆಗಿನ ಅಸಹನೆ, ರೆಕ್ಕೆ ಪುಕ್ಕ ಕತ್ತರಿಸಲ್ಪಟ್ಟ ಹತಾಶೆ, ಮೈ ಮನಸುಗಳಲ್ಲಿ ಅಪಾರವಾದ ದಣಿವು – ಇವೆಲ್ಲವನ್ನೂ ಇಷ್ಟು ದಿನ ಸಹಿಸಿಕೊಂಡು ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಬಾನಂಗಳಕ್ಕೆ ಚಿಮ್ಮಿದ್ದೇವೆ. ಪ್ರಧಾನಿ ಪಟ್ಟ ಕೈ ತಪ್ಪಿದರೂ ನಮ್ಮ ನಗೆ ಸಾಮ್ರಾಜ್ಯದ ಪಟ್ಟವನ್ನಲಂಕರಿಸಿ ನಗೆ ಸಾಮ್ರಾಟರಾಗಿದ್ದೇವೆ. ನಗೆ ನಗಾರಿಯ ಸದ್ದು ನೂರು ದಿಕ್ಕುಗಳಲ್ಲಿ ಮಾರ್ದನಿಗೊಳ್ಳುವುದನ್ನು ಸಂತೋಷದಿಂದ ಆಲಿಸುತ್ತಿದ್ದೇವೆ. 

– ನಗೆ ಸಾಮ್ರಾಟ್

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

10 ಫೆಬ್ರ

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ್ಕೃತಿಯ ರಕ್ಷಕರು ಎಂದು ವಯ್ಯಕ್ತಿಕ ಬಿರುದು ಪಡೆದು, ಕರ್ನಾಟಕದvalentines_day ತಾಲೀಬಾನಿಕರಣ ಎಂದು ತಮ್ಮ ಕೆಲಸಕ್ಕೆ ದೊಡ್ಡ ಹೆಸರಿನ ಮೊಹರನ್ನು ದೊಡ್ಡವರ ಒಡೆತನದ ದೊಡ್ಡ ಇಂಗ್ಲೀಷ್ ಟಿವಿ ಚಾನಲುಗಳಿಂದ ಪಡೆದು ಜಗತ್ಪ್ರಸಿದ್ಧರಾಗಿರುವ ಶ್ರೀರಾಮ ಸೇನಯ ಸೈನಿಕರು ಫೆಬ್ರವರಿ ಹದಿನಾಲ್ಕರಂದು ಆಚರಿಸುವ ವ್ಯಾಲಂಟೈನ್‌ನ ದಿನದಂದು ಹೊಸ ಪ್ರತಿಭಟನೆಯ ವರಸೆಯನ್ನು ಪ್ರಯೋಗಿಸಲು ಸನ್ನದ್ಧರಾಗಿದ್ದಾರೆ.

ವ್ಯಾಲಂಟೈನ್‌ನ ದಿನದಂದು ಅರಿಶಿಣದ ಕೊಂಬನ್ನು ಹೊತ್ತು ತಿರುಗಾಡುವ ಈ ಸೇನೆಯವರು, ಪ್ರೀತಿಯಲ್ಲಿ ಕಂಠ ಮಟ್ಟ ಮುಳುಗಿ ಉಸಿರಾಗಿ ಪರದಾಡುತ್ತಾ ಒದ್ದಾಡುತ್ತಿರುವವರನ್ನು ಮೇಲಕ್ಕೆತ್ತಿ ಮದುವೆ ಮಾಡಿಸಿ ಸಂಸಾರ ಸಾಗರದಲ್ಲಿ ಪೂರ್ಣವಾಗಿ ಮುಳುಗಿಸಲಿದ್ದಾರೆ. ಪ್ರೀತಿ ಅಂತ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹುಡುಗ ಹುಡುಗಿಯ ಜೊತೆ ಅಲೆಯುವುದು ನಮ್ಮ ಸಂಸ್ಕೃತಿಯಲ್ಲ ಎಂದಿರುವ ಶ್ರೀರಾಮ ಸೇನೆಯವರ ಈ ಯೋಜನೆಯನ್ನು ನಾವು ಬೇಷರತ್ತಾಗಿ ಬೆಂಬಲಿಸುತ್ತೇವೆ. ಪ್ರಮೋದ್ ಮುತಾಲಿಕ್ ಮಾಡುತ್ತಿರುವುದು, ಆಲೋಚಿಸುತ್ತಿರುವುದು ಸರಿ ಎಂದು ಎದೆ ತಟ್ಟಿ ಹೇಳುತ್ತೇವೆ.

ಊಟವಾದ ಮೇಲೆ ಕೈತೊಳೆಯಲೇ ಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಹಾಗೆಯೇ ಪ್ರೀತಿಯನ್ನು ಮಾಡುವ ಧೈರ್ಯವನ್ನು ತೋರಿದವರು ಮದುವೆಯೆಂಬ ಸಿಂಹಸ್ವಪ್ನವನ್ನು ಎದುರಿಸಲೇ ಬೇಕು. ಓದು ಮುಗಿಸಿ ಅಲೆಯುವವರಿಗೆ ಕೆಲಸ ಕೊಡಿಸುವುದು, ಹಸಿದು ಬಾಲ ಕಡಿಯುತ್ತಿರುವ ನಾಯಿಗೆ ಕೊಳೆತ ಮಾಂಸದ ತುಂಡು ಎಸೆಯುವುದು ಹೇಗೆ ಭಗವಂತನಿಗೆ ಪ್ರಿಯವೋ ಹಾಗೆಯೇ ಪ್ರೀತಿಸಿದವರನ್ನು ಮದುವೆ ಮಾಡುವುದು ಭಗವಂತನಿಗೆ ಪ್ರಿಯವಾಗುವ ಕೆಲಸ. ಈ ಅತ್ಯುತ್ತಮ ಆದರ್ಶದ ಕೆಲಸವನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

ಬಸುರಿ ಹೆಂಗಸಿನ ಹೆಸರಲ್ಲಿ ಮನೆಗೆ ವಕ್ಕರಿಸಿ ಪ್ರತಿಷ್ಠಾಪಿತನಾಗುವ ಅಳಿಯನ ಹಾಗೆ ಆಧುನಿಕತೆಯ ಹೆಸರಲ್ಲಿ ವಕ್ಕರಿಸಿರುವ ವಿದೇಶಿ ಕಂಪೆನಿಗಳು, ಲಾಭ ಬಡುಕ ಟಿವಿ ಚಾನಲ್ಲುಗಳು, ಜಾಹೀರಾತನ್ನು ನಂಬಿ ಕೂತ ಪತ್ರಿಕೆಗಳು ಮಾಡುತ್ತಿರುವ ಅನ್ಯಾಯನವನ್ನು ಕಾಣುವವರು ಯಾರೂ ಇಲ್ಲ. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು, ಪ್ರೀತ್ಸೋದು ತಪ್ಪಾ, ಪ್ರೀತ್ಸು ತಪ್ಪೇನಿಲ್ಲ ಎಂದೆಲ್ಲಾ ಪುಗಸಟ್ಟೆ ಉಪದೇಶಗಳನ್ನು ದಯಪಾಲಿಸುವ ಸಿನೆಮಾ ಮಂದಿ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ತಯಾರಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೆಂಟು, ಬಿಡುಗಡೆಯಾಗುವ ನೂರು ಸಿನೆಮಾಗಳಲ್ಲಿ ತೊಂಭತ್ತೊಂಭತ್ತು ವರೆ ಸಿನೆಮಾಗಳು ಪ್ರೀತಿಯನ್ನೇ ಅವಲಂಬಿಸಿವೆ. ಹಾಗೆ ನೋಡಿದರೆ ಈ ಸಿನೆಮಾ ಉದ್ಯಮಕ್ಕೆ ಪ್ರೀತಿ ಎಂಬುದು ಪುಕ್ಕಟೆ ಕಚ್ಚಾ ಪದಾರ್ಥ. ಆದರೆ ಈ ಪ್ರೀತಿ ಎಂಬ ಹಾಲಿಗೆ ಮದುವೆ ಎಂಬ ರುಚಿಕಟ್ಟಾದ, ಹಲ್ಲು ಚುಳ್ಳೆನಿಸುವ ಎರಡು ಹನಿ ನಿಂಬೆ ರಸವನ್ನು ಹಿಂಡಿದರೆ ಏನಾಗುತ್ತೆ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದು. ಪ್ರೀತಿ ಮದುವೆಯಲ್ಲಿ ಅಂತ್ಯವಾದರೆ ಸಿನೆಮಾ ದಿ ಎಂಡ್ ಆಗುತ್ತೆ. ಹೀಗಾಗಿ ಈ ಸಿನೆಮಾ ಮಂದಿಗೆ ಜನರು ಪ್ರೀತಿ ಮಾಡುವುದು ಬೇಕು, ಮದುವೆಯಾಗಬಾರದು. ಇದೊಳ್ಳೆ, ಇಂಜಿನಿಯರಿಂಗು ಓದಬೇಕು- ಕೆಲಸಕ್ಕೆ ಸೇರಬಾರದು ಎಂದು ಆಶಿಸಿದಂತೆ. ಇಂಥ ಹುಲುಮಾನವರು ಶ್ರೀರಾಮ ಸೇನೆಯ ವಿರುದ್ಧ ಮಾತನಾಡುವರು. ಪ್ರೀತಿಯನ್ನು ಬಂಡವಾಳವಾಗಿಸಿಕೊಂಡ ಅವರಿಗೆ ಪ್ರೀತಿಸುವವರ ಬಗ್ಗೆ ಮಾತಾಡುವ ಹಕ್ಕಿಲ್ಲ.

ಇನ್ನು ಮೂರನೇ ಪುಟದಲ್ಲಿನ ಮದ್ಯದ ಅಮಲಲ್ಲಿ ಬಿದ್ದು ಒದ್ದಾಡಿ ದಣಿಯುವ ಪತ್ರಕರ್ತರಿಗೆ ‘ಮನುಷ್ಯ ನಾಯಿಯನ್ನು ಕಚ್ಚುವುದೇ ಸುದ್ದಿ’. ಅವರು ಕಲಹ ಪ್ರಿಯರು. ನೆಮ್ಮದಿಯಾಗಿರುವ ಯಾವ ಮನೆಯೂ ಅವರ ಪತ್ರಿಕೆಗೆ ಸರಕಾಗುವುದಿಲ್ಲ. ತೃಪ್ತನಾದ ಯಾವ ವ್ಯಕ್ತಿಯೂ ಅವರ ಗಮನಕ್ಕೆ ಅರ್ಹನಲ್ಲ. ಅವರನ್ನು ಪೊರೆಯುವ ಜಾಹೀರಾತು ದೊರೆಗಳ ಸುಖಕ್ಕೆ ಅಡ್ಡಿಯಾಗದ ಯಾವುದೂ ಅವರಿಗೆ ರಾಷ್ಟ್ರೀಯ ದುರಂತವಲ್ಲ. ಪ್ರಖ್ಯಾತ ನಟ ಮದುವೆಯಾದರೆ ಇವರಿಗೆ ಬೇಸರವಾಗುತ್ತೆ. ಯಾರಿಗೂ ತಿಳಿಸದೆ ಗುಟ್ಟಾಗಿ ಮದುವೆಯಾದರೆ ಇವರಿಗೆ ಕೊಂಚ ಥ್ರಿಲ್ಲಾಗುತ್ತದೆ. ಮದುವೆಗೆ ಮುಂಚೆ ಹುಡುಗಿಯೊಂದಿಗೆ ಹಾಡು, ಕುಣಿತ, ಫ್ಲಾಷ್ ಬ್ಯಾಕುಗಳಲ್ಲಿ ತೊಡಗಿದರೆ ಹಾಲು ಕುಡಿದಷ್ಟು ಸಂತೋಷವಾಗುತ್ತೆ. ಮದುವೆಯಾದ ಮೇಲೂ ‘ಇರುವುದೆಲ್ಲವ ಬಿಟ್ಟು’ ಹೊರಟರೆ ಸ್ವರ್ಗಕ್ಕೆ ಮೂರೇ ಗೇಣು. ಹೀಗಾಗಿ ಇವರಿಗೆ ಪ್ರೀತಿ ಎಂಬ ಕಬಾಬಿನಲ್ಲಿ ಮೂಳೆಯನ್ನು ಹುಡುಕುವುದೇ ಕೆಲಸ. ಇವರಿಗೆ ಪ್ರೀತಿಯ ಬಗ್ಗೆ ಮಾತಾಡಲು ಯಾರು ಕೊಟ್ಟರು ಹಕ್ಕು?

ಇನ್ನು ಬುದ್ಧಿ ಜೀವಿಗಳ ಬಗ್ಗೆ ಮರುಕ ತೋರಿಸಿ ನಮ್ಮ ಪುಣ್ಯವನ್ನು ಹೆಚ್ಚು ಮಾಡಿಕೊಳ್ಳುವುದು ಲೇಸು.

ಬುಡಕಟ್ಟು ಜನರ ಆಚರಣೆಗಳನ್ನು ಹೈಜ್ಯಾಕ್ ಮಾಡಿ ಹೊಚ್ಚ ಹೊಸ ಹೆಸರಿಟ್ಟು ಚೀನಾದ ಹಾಗೆ ಮಾರ್ಕೆಟಿಂಗ್ ಮಾಡಿ ವಿತರಿಸುವುದರಲ್ಲಿ ದಕ್ಷವಾದ ಕ್ರೈಸ್ತ ಧರ್ಮ ಮದುವೆಯ ಮುಂಚಿನ ಪ್ರೇಮ-ವಿಲಾಸದ ಬಗ್ಗೆ ಯಾವ ಧೋರಣೆ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಸದಾ ಪರದ ಬಗ್ಗೆ, ಅಲೌಕಿಕದ ಕಡೆ ಮುಖಮಾಡಿರುವ ಚರ್ಚುಗಳು, ಬಿಷಪ್ಪು, ಪೋಪುಗಳು ಹೆಚ್ಚು ಮಾತಾಡುವುದು ಬರೀ ಸಂತಾನ ನಿಯಂತ್ರಣ, ಸಲಿಂಗ ಕಾಮದ ಬಗ್ಗೆಯೇ ಆಗಿರುವುದು ಅನೇಕರಲ್ಲಿ ಅಲೌಕಿಕದ ಮೇಲೆ ಆಸಕ್ತಿ ಹುಟ್ಟಿಸಿದೆ. ವ್ಯಾಲಂಟೈನ್ ಆಚರಣೆ ಹುಟ್ಟಿದ್ದು ಹೇಗೆ ಎನ್ನುವುದೇ ಸರಿಯಾಗಿ ಜಗತ್ತಿಗೆ ತಿಳಿದಿಲ್ಲ, ವಿಕಿಪಿಡಿಯಾ ಪುಟ ಸಹ ನಿಮಗೆ ನಿಖರ ಉತ್ತರ ಕೊಡುವುದಿಲ್ಲ.

ಅನೇಕರು ತಿಳಿದಿರುವಂತೆ ರಾಜ್ಯದ ರಾಜನನ್ನು ಎದುರು ಹಾಕಿಕೊಂಡು ಸಂತ ವ್ಯಾಲಂಟೈನ್ ಯುವ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ. ಕಡೆಗೆ ಒಮ್ಮೆ ಆತನನ್ನು ಗೆಲ್ಲಿಗೇರಿಸಲಾಯ್ತು. ಆದಿನವನ್ನೇ ಪ್ರೇಮಿಗಳ ದಿನ ಎನ್ನಲಾಗುತ್ತೆ. ಪ್ರೀತಿಸುವವರನ್ನು ಒಂದು ಮಾಡಲು ರಾಜನನ್ನೇ ಎದುರು ಹಾಕಿಕೊಂಡು ಪ್ರಾಣವನ್ನು ಕೊಟ್ಟು ಹೋರಾಡಿದ ಸಂತನ ನೆನೆಯುವ ದಿನ. ಆದರೆ ಈ ದಿನವನ್ನು ಯಾರು ನಿಜವಾದ ಅರ್ಥದಲ್ಲಿ ಆಚರಿಸುತ್ತಿದ್ದಾರೆ? ಗ್ರೀಟಿಂಗ್ ಕಾರ್ಡು ಮಾಫಿಯಾವಾಗಲಿ, ಗುಲಾಬಿ ಹೂವು ಗ್ಯಾಂಗಾಗಲಿ, ಗಿಫ್ಟ್ ಸೆಂಟರು ಓನರುಗಳಾಗಲಿ, ರೆಸಾರ್ಟು, ರೆಸ್ಟ್ರೋರೆಂಟು, ಪಬ್ಬು ದೊರೆಗಳಾಗಲಿ, ಪತ್ರಕರ್ತ, ಬುದ್ಧಿಜೀವಿಗಳಾಗಲಿ- ಯಾರೆಂದರೆ ಯಾರೂ ಈ ದಿನವನ್ನು ಅದರ ನೈಜ ಅರ್ಥದಲ್ಲಿ ಆಚರಿಸುತ್ತಿಲ್ಲ. ಆದರೆ ಹಾಗೆ ಆಚರಿಸಲು ಯೋಜಿಸುತ್ತಿರುವವರು ಒಬ್ಬರೇ. ಯುವ ಪ್ರೇಮಿಗಳಿಗಾಗಿ ಸರಕಾರವನ್ನೇ, ಸಂವಿಧಾನವನ್ನೇ, ಪೊಲೀಸ್ ವ್ಯವಸ್ಥೆಯನ್ನೇ, ಅಷ್ಟೇಕೆ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಲು ಪಣ ತೊಟ್ಟಿರುವವರು ಒಬ್ಬರೇ… ಅವರೇ ಶ್ರೀರಾಮ ಸೇನೆಯ ವೀರ ಯೋಧರು! ಪ್ರೇಮಿಗಳನ್ನು ಫೆ ೧೪ರಂದು ಮದುವೆ ಮಾಡಿಸಿ ಸಂತ ವ್ಯಾಲಂಟೈನ್ ಹಾಕಿಕೊಟ್ಟ ಆದರ್ಶವನ್ನು ಪಾಲಿಸುತ್ತಿದ್ದಾರೆ. ಅನ್ಯ ಧರ್ಮದ, ಅನ್ಯ ಸಂಸ್ಕೃತಿಯ ಆಚರಣೆಯನ್ನು ಇಷ್ಟು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ಶ್ರೀರಾಮ ಸೇನೆಯ ಪರ ಧರ್ಮ ಸಹಿಷ್ಣುತೆ, ವಿಶಾಲ ಹೃದಯವನ್ನು ಗುರುತಿಸದ ಮೂರ್ಖರಿಗೆ ಧಿಕ್ಕಾರವಿರಲಿ!

ಸಂತ ವ್ಯಾಲಂಟೈನ್ ಹಾಗೂ ಆತನ ಆದರ್ಶದ ತೀವ್ರ ಅಭಿಮಾನಿಯಾದ ನಾವು ಮುತಾಲಿಕ್ ಸಾಹೇಬರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಇವರು ತಮ್ಮ ಉಗ್ರ ಹಿಂದುತ್ವದಿಂದ ಕ್ರೈಸ್ತ ಆಚರಣೆಯನ್ನು ಜೀವಂತವಾಗಿಸುವ ಪ್ರಯತ್ನ ಮಾಡುತ್ತಿರುವುದನ್ನು ಆದರ್ಶವಾಗಿ ಸ್ವೀಕರಿಸಿ ಮತಾಂಧ ಮುಸ್ಲೀಂ ಸಂಘಟನೆಗಳು ಮನು ಹೇಳಿದ ಆದರ್ಶಗಳನ್ನು ಸ್ಥಾಪಿಸಲು ಹಿಂದೂ ಆಚರಣೆಯನ್ನು ಜೀವಂತವಾಗಿರಿಸಲು ಹೋರಾಟ ರೂಪಿಸಬೇಕು. ಹೆಣ್ಣು ಗಂಡಿನ ಅನುಪಾತ ಸಮಾನವಾಗಿರುವಾಗಲೂ ಗಂಡು ನಾಲ್ಕು ಹೆಣ್ಣನ್ನು ಮದುವೆಯಾಗಬಹುದು, ತಲಾಖ್ ನೀಡುವ ಹಕ್ಕಿರುವುದು ಗಂಡಿಗಷ್ಟೇ, ಹೆಣ್ಣಿಗೆ ಬುರ್ಕಾ ಕಲರ್ ಸೆಲೆಕ್ಟ್ ಮಾಡುವ ಹಕ್ಕನ್ನು ನಿಷೇಧಿಸಿರುವುದನ್ನು ಬೆಂಬಲಿಸಿ ಅದನ್ನು ಶೇ ೧೦೦ರಷ್ಟು ಜಾರಿಗೆ ತರಲು ಕ್ರೈಸ್ತ ಉಗ್ರವಾದಿಗಳು ಕಂಕಣ ತೊಡಬೇಕು. ಆಗಲೇ ನಮ್ಮ ದೇಶದಲ್ಲಿ ಜಾತ್ಯಾತೀತ ಮೌಲ್ಯ ಬೆಳಗುವುದು! ದೇಶ ಸರ್ವ ಧರ್ಮ ಸಮನ್ವಯ ಭಾರತವಾಗುವುದು!

– ನಗೆ ಸಾಮ್ರಾಟ್

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ…

29 ಜನ

 

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಗರವನ್ನು ಕಂಡು ಸಾಮ್ರಾಟರು ಹರ್ಷೋದ್ಘಾರದಿಂದ ಕಂಬನಿ ಮಿಡಿದರು. ವೇದಿಕೆಯ ಮೇಲಿನ ಗಣ್ಯರೇ ಹೀಗೆ ಕಂಬನಿ ಮಿಡಿದದ್ದನ್ನು ಕಂಡು ಗೊಂದಲಕ್ಕೊಳಗಾದ ಮಹಾಜನತೆಯು ತಾವೂ ಎರಡು ಸೆಕಂಡು ಮೌನವನ್ನಾಚರಿಸಿ, ತಲೆ ತಗ್ಗಿಸಿ, ಕಷ್ಟ ಪಟ್ಟು ಎರಡು ಹನಿ ಕಣ್ಣೀರು ಹರಿಸಿದರು. ಸಾಮ್ರಾಟರು ಭಯೋತ್ಪಾದಕರ ದಾಳಿಯಲ್ಲಿ ಮಡಿದವರಿಗೋ, ಶ್ರೀಮಂತರ ಕಾರುಗಳಿಗೆ ರಕ್ತ ತರ್ಪಣ ಅರ್ಪಿಸಿದವರಿಗೋ, ದರೋಡೆಕೋರರಿಂದ ಬದುಕುವ ಹಕ್ಕನ್ನು ಕಳೆದುಕೊಂಡವರಿಗೋ ಗೌರವ ಸೂಚಿಸುವುದಕ್ಕಾಗಿ ಕಂಬನಿ ಮಿಡಿದಿದ್ದಾರೆ ಎಂದು ತಿಳಿದಿತ್ತು ಜನತೆ. ಆದರೆ ಸಾಮ್ರಾಟರನ್ನು ಪಕ್ಕಕ್ಕೆಳೆದ ಕುಚೇಲ ಅವರ ಕಣ್ಣಲ್ಲಿ ಬಿದ್ದಿದ್ದ ಧೂಳನ್ನು ಊದಿ ತೆಗೆದು ಅವರ ಹರ್ಷೋದ್ಘಾರದ ಕಣ್ಣೀರ ಧಾರೆಯನ್ನು ಬಂದ್ ಮಾಡಿದ. ಆದರೆ ಮಹಾ ಜನತೆ ಮಾತ್ರ ತಮ್ಮ ಮಾನಸ ಮಂದಿರದಲ್ಲಿ ಪ್ರತಿಷ್ಠಾಪಿಸಿದ ನಗೆ ಸಾಮ್ರಾಟರ ಕಣ್ಣೀರಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ಧಟತನಕ್ಕೆ ಕೈ ಹಾಕಲಿಲ್ಲ. enews_party_hat

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

– ನಗೆ ಸಾಮ್ರಾಟ್

ಸಂಪಾದಕೀಯ: ೨೦೦೮ಕ್ಕೆ ಗುಡ್ ಬೈ

1 ಜನ

 

ಹೆದರಬೇಡಿ.ಮೊದಲೇ ಹೇಳಿಬಿಡುತ್ತೇವೆ, ನಮ್ಮ ದಿನಪತ್ರಿಕೆಗಳ ಘನಗಂಭೀರ ಸಂಪಾದಕರು ಮಾಡುವಂತೆ  ನಾವು ವರ್ಷದ ಕೊನೆಯ ದಿನ ಕುಳಿತು ಚಾರ್ಟೆಡ್ ಅಕೌಂಟೆಂಟ್ ಥರ ಕಳೆದ ಮುನ್ನೂರ ಅರವತ್ನಾಲ್ಕು ದಿನಗಳು ಚಿಲ್ಲರೆ ಘಂಟೆಗಳಲ್ಲಿ ಮಾಡಿದ ಸಾಧನೆಗಳು, ಕಟ್ಟಿದ ಮಹಲುಗಳು, ಬೀಳಿಸಿದ ಮಳಿಗೆಗಳ ಲೆಕ್ಕ ಹಾಕುತ್ತಾ ಕೂರುವುದಿಲ್ಲ. ಇಲ್ಲವೇ ನಮ್ಮ ಹೈ ಫೈ ಟೈಮ್ಸಾಫಿಂಡಿಯಾದಂತೆ ನೀವು ಹೊಸ ವರ್ಷದ ರಾತ್ರಿಯನ್ನು ನಿಶೆಯಲ್ಲಿ ಕಳೆಯಲು ಬೆಂಗಳೂರಿನ ಯಾವ ಯಾವ ಮೂಲೆಯನ್ನು ಸೇರಬೇಕು ಎಂಬುದರ ವಿವರ ಕೊಡಲು ಹೋಗುವುದಿಲ್ಲ. ಬದುಕುವುದನ್ನು ಕಲಿಸುವುದಕ್ಕಾಗಿ ಬದುಕುತ್ತಿರುವ ಗುರುಗಳ ಹಾಗೆ ಹೊಸ ವರ್ಷದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಯಾವ ಎತ್ತರಕ್ಕೆ ಕೊಂಡೊಯ್ದು ಕೆಳಕ್ಕೆ ನೂಕಬಹುದು ಎಂಬುದನ್ನು ಕೊರೆಯಲು ಹೋಗುವುದಿಲ್ಲ. ಇಲ್ಲವೇ ನಮ್ಮ ದೇಶದ ಫುಲ್ ಟೈಮ್ ದೇಶಭಕ್ತರು ಹಾಗೂ ನೈತಿಕ ಪೊಲೀಸರ ಹಾಗೆ ಈ ಹೊಸ ವರ್ಷಾಚರಣೆ ಎಂಬುದು ಪರದೇಶಿ ಸಂಸ್ಕೃತಿ. ಇದು ವಿಕೃತಿ. ಅಮಲು, ನಿಶೆ, ಅಬ್ಬರ, ಹಿಂಸೆಯಲ್ಲಿ ಸಂಭ್ರಮಾಚರಣೆ ಮಾಡುವುದು ಯಾವ ಸೀಮೆ ಸಂಸ್ಕಾರ ಎಂದೆಲ್ಲಾ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳಿ ಗದ್ದಲವೆಬ್ಬಿಸುವುದಿಲ್ಲ. ಅತಿ ಭಾವುಕ, ನಿರಾಶಾವಾದಿ ಬುದ್ಧಿವಂತ ಮೂರ್ಖರ ಹಾಗೆ ಹೊಸ ವರ್ಷ ಬಂದಿತು ಅಂತ ಕುಣಿಯಬೇಡಿ, ನಿಮ್ಮ ಜೀವನದಿಂದ ಒಂದು ವರ್ಷ ಕಳೆದುಹೋಯಿತಲ್ಲ ಎಂದು ಮರುಗಿ ಎಂದು ನಿಮ್ಮನ್ನು ಗಾಬರಿಗೊಳಿಸುವುದಿಲ್ಲ.

londonnewyearbj7

ಸರಿ ನಾವು ಕಮ್ಯುನಿಸ್ಟ್ ಪಕ್ಷದ ಹಾಗೆ ಬರೀ ಏನನ್ನು ಮಾಡಬಾರದು ಎಂದಷ್ಟೇ ಹೇಳುತ್ತಿರುವುದು ಅನೇಕ ಹಿತೈಷಿಗಳಲ್ಲಿ ಗೊಂದಲ ಹುಟ್ಟಿಸುವುದರಿಂದ ಸ್ಪಷ್ಟವಾಗಿ ಹೇಳುವುದೆಂದರೆ ತಣ್ಣಗೆ ಕೂತು ಎರಡು ಸಾವಿರದ ಎಂಟರ ಕ್ಯಾಲಂಡರನ್ನು ಮಗುಚಿ ಹಾಕಿ ಹೊಸ ಕ್ಯಾಲೆಂಡರ್ ತೆಗೆದು ಕುಳಿತುಕೊಳ್ಳುತ್ತೇವೆ ಅಷ್ಟೇ. ನಾವು ನೋಡುತ್ತಿರುವ ಈ ಕ್ಷಣ ನಮಗೆ ಗೋಚರಿಸದ ಹಾಗೆ ಹರಿದು ಹೋಗುವಂತೆ ಈ ವರ್ಷವೂ ಕಳೆದು ಹೋಗುತ್ತದೆ. ನಮಗೆ ಗೊತ್ತಿಲ್ಲದೆ ಕಾಲದ ಹರಿವಿನಲ್ಲಿ ನಾವು ಮುಂದಕ್ಕೆ ಹೋಗುವ ಯಾವ ಪ್ರಯತ್ನ ಮಾಡದಿದ್ದರೂ ಕಾಲ ಹಿಂದಕ್ಕೆ ಹೋಗುತ್ತಿರುತ್ತದೆ. ವೇದಾಂತದಿಂದ ಆಘಾತಗೊಳ್ಳಬೇಡಿ, ಅತಿ ಸಂತೋಷವಾದಾಗ, ಅತೀ ದುಃಖವಾದಾಗ ಹಾಗೂ ಮಾಡಲು ಏನೂ ಕೆಲಸವಿಲ್ಲದಾಗ ನಮಗೆ ಹೀಗೆ ವೇದಾಂತದ ದರ್ಶನವಾಗುತ್ತಿರುತ್ತದೆ.

ಕಾಲದ ಹರಿವು ಅನಂತವಾದರೂ ನಾವು ತೃಣಮಾತ್ರರಾದ ಮಾನವರು ನಮ್ಮ ನಿಲುಕಿಗೆ ಸಿಕ್ಕಲಿ ಅಂತ ಸಮಯವನ್ನು ಭಾಗಿಸಿ ಗುಣಿಸಿ ನಾನಾ ಹೆಸರು ಕೊಟ್ಟೆವು ಅಲ್ಲವೇ? ಆದರೆ ನಾವು ಅದೆಷ್ಟು ಬುದ್ಧಿವಂತರೆಂದರೆ, ನಾವು ಸೃಷ್ಟಿಸಿಕೊಂಡ ಅನುಕೂಲವನ್ನೇ ಅನಾನಕೂಲವನ್ನಾಗಿಸಿ ಕೊಳ್ಳುತ್ತೇವೆ. ಬೇಕಾದಾಗ ಕೂಡಲೇ ಸಿಕ್ಕಲಿ ಎಂದು ನಾವು ವಸ್ತುವೊಂದನ್ನು ಇರಿಸಿದಾಗ ಜಾಗ ಶೀರ್ಷಾಸನ ಹಾಕಿದರೂ ಹೊಳೆಯುವುದಿಲ್ಲ. ಹಾಗೇ ಕ್ಯಾಲೆಂಡರ್ ಎಂಬ ಉಪಕರಣದಿಂದ ನಾವು ಕಾಲವನ್ನೇ ಗೆದ್ದು ಬಿಟ್ಟೆವು ಎಂದು ಸಂಭ್ರಮಿಸುತ್ತಿರುವಾಗಲೇ ‘ಅಯ್ಯೋ ಸೋಮವಾರ ಬಂತಪ್ಪಾ’ ‘ಅಯ್ಯೋ ಇವತ್ತು ಮಂಗಳವಾರ, ನಾನು ದುಡ್ಡು ಕೊಡಲ್ಲ’ ‘ಹುರ್ರಾ ಇವತ್ತು ಶನಿವಾರ…’ ಎಂದೆಲ್ಲಾ ಹುಚ್ಚರ ಹಾಗೆ ಭ್ರಮಿಸುತ್ತೇವೆ. ಕ್ಯಾಲೆಂಡರ್ ಎಂಬ ಚಿಲ್ಲರೆ ಸಂಗತಿ ಇಲ್ಲದೇ ಹೋಗಿದ್ದರೆ ನಮಗೆ ಶನಿವಾರ ಯಾವುದು ಭಾನುವಾರ ಯಾವುದು ಅಂತಲೇ ತಿಳೀತಿರಲಿಲ್ಲ ಅಲ್ಲವೇ? ಆಗ ಕಾಲೇಜಲ್ಲಿ ಸೋಮವಾರ ಎಕ್ಸಾಮು ಅಂದರೆ ನಾವು ದಿಕ್ಕೆಟ್ಟು ಕಂಗಾಲಾಗಿ ರಾತ್ರಿ ಇಡೀ ಕಣ್ಣೆವೆ ನೋಯಿಸಿ ಓದುವ ಶ್ರಮ ತೆಗೆದುಕೊಳ್ಳದೆ ಸಾವಕಾಶವಾಗಿ ಓದಿ ಮುಗಿದ ದಿನವನ್ನೇ ಸೋಮವಾರವಾಗಿಸಿಕೊಳ್ಳಬಹುದಿತ್ತು. ಮುಂದಿನ ಭಾನುವಾರ ನಿನ್ನ ದುಡ್ಡು ಕೊಟ್ಟು ಬಿಡುತ್ತೇನೆ ಎಂದು ಸಾಲಗಾರ ಜಗತ್ತಿನಲ್ಲಿ ಎಷ್ಟು ಮಂದಿಗೆ ಬೇಕಾದರೂ ಮಾತು ಕೊಡಬಹುದಿತ್ತು!

ವರ್ಷವೊಂದು ಹೇಗೋ ಕಳೆದು ಹೋಯ್ತು. ಬರುತ್ತಿರುವ ಹೊಸ ವರ್ಷವನ್ನು ಹೊಸ ಹೆಂಡತಿಯನ್ನು ನೋಡಿಕೊಳ್ಳುತ್ತೇನೆ ಎಂದು ಕನಸು ಕಾಣುತ್ತಿರುವವರು, ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡುತ್ತಾ ಕುಳಿತವರು, ಹೊಸ ವರ್ಷಕ್ಕೆ ಕುಡಿತ ಬಿಡಬೇಕು, ಸಿಗರೇಟು ಬಿಡಬೇಕು, ಕೈಕೊಟ್ಟು ಹೋದ ಹುಡುಗಿಯ ಮರೀಬೇಕು, ಹಿಂದಿನ ಮನೆಯ ಹುಡುಗನೊಂದಿಗಿನ ಅಫೇರು ಕಡಿದುಕೊಳ್ಳಬೇಕು, ದೇವರನ್ನು ನಂಬಲು ಶುರುಮಾಡಬೇಕು, ಸ್ನಾನ ಮಾಡುವಾಗ ಹಾಡುವುದನ್ನು ನಿಲ್ಲಿಸಬೇಕು, ಪ್ಯಾಂಟಿನ ಜಿಪ್ ಹಾಕಿಕೊಳ್ಳುವುದನ್ನು ಮರೆಯಬಾರದು, ಮೇಕಪ್ ಖರ್ಚು ಕಡಿಮೆ ಮಾಡಿಕೊಳ್ಳಬೇಕು, ಯಾರೊಂದಿಗೂ ಜಗಳ ಮಾಡಬಾರದು, ಸಿಟ್ಟು ಕಡಿಮೆ ಮಾಡಿಕೊಳ್ಳಬೇಕು, ತಲೆಯಲ್ಲಿ ಕೂದಲು ಹೆಚ್ಚು ಬೆಳೆಸಿಕೊಳ್ಳಬೇಕು. ಹೊಟ್ಟೆ ಕರಗಿಸಬೇಕು, ಬ್ಯಾಂಕ್ ಬ್ಯಾಲೆನ್ಸ್ ಬೆಳೆಸಬೇಕು. ಮದುವೆಯಾಗಬೇಕು, ಡಿವೋರ್ಸ್ ಪಡೆಯಬೇಕು- ಎಂದೆಲ್ಲಾ ರೆಸೊಲ್ಯೂಶನ್ ಮಾಡಿಕೊಳ್ಳುತ್ತಿರುವವರು ಪ್ರತಿವರ್ಷದಂತೆ ಈ ವರ್ಷವೂ ಈ ಲೇಖನ ಓದಲಿಕ್ಕಾಗದಷ್ಟು ಬ್ಯುಸಿಯಿರುವುದರಿಂದ ಅವರಿಗೆ ಏನೂ ಹೇಳುವುದಿಲ್ಲ. ಉಳಿದವರಿಗೆ ಹೇಳುವುದಿಷ್ಟೇ, ದೇವರು ಕರುಣಾಮಯಿ, ಹಾಸ್ಯ ಪ್ರಜ್ಞೆ ಇರುವವ, ನಾವು ಎಷ್ಟೇ ವರ್ಷಗಳನ್ನು ಹಡಾಲೆದ್ದು ಹೋಗುವಂತೆ ಬದುಕಿ ತೋರಿಸಿದರೂ, ನಾವು ಹೊಸ ದಿನವನ್ನು, ಹೊಸ ಬೆಳಗನ್ನು ಯಕ್ಕುಟ್ಟಿ ಹೋಗುವಂತೆ ಮಾಡಿ ತೋರಿಸಿದರೂ, ನಮಗೆ ಮತ್ತೆ ಮತ್ತೆ ಹೊಸ ವರ್ಷವನ್ನು ನೀಡುತ್ತಿದ್ದಾನೆ, ಹೊಸ ದಿನವನ್ನು, ಹೊಸ ಕ್ಷಣವನ್ನು ನೀಡುತ್ತಿದ್ದಾನೆ. ನಾವು ತಾಳ್ಮೆ ಕಳೆದುಕೊಳ್ಳುವುದು ಬೇಡ, ಪ್ರಯತ್ನವನ್ನು ಬಿಡುವುದು ಬೇಡ. ನಾವು ಹೀಗೇ ಎಡಬಿಡಂಗಿಗಳ ಹಾಗೆ ೨೦೦೯ರ ವರ್ಷವನ್ನೂ ಉಡಾಯಿಸಿ ಹಾಕುತ್ತೇವೆ ನೋಡುತ್ತಿರು ಎಂದು ದೇವರಿಗೆ ಸವಾಲು ಎಸೆಯಬೇಕು! ಏನಂತೀರಿ?    

ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

4 ಡಿಸೆ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ಉಗ್ರವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ಸಂಯಮಿಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!


ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು. ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ, ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!


ಅವರೆಲ್ಲಾ ಮೂರ್ಖರು. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ. ಭಾರತವೆಂಬ ಪುಣ್ಯ ಭೂಮಿಯಿಂದ ಅವರು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ತಮ್ಮ ದೇಶದ ಬಹುದೊಡ್ಡ ಕಟ್ಟಡಕ್ಕೆ ವಿಮಾನವನ್ನು ನುಗ್ಗಿಸಿ, ಸಾವಿರಾರು ಮಂದಿಯನ್ನು ಒಸಾಮ ಕೊಂದಾಗಆಧುನಿಕ ನಾಗರೀಕತೆಯ ಗಗನ ಚುಂಬಿಗಳ ಎದೆಯೊಳಗೆ ಬಂಡಾಯದ ವಿಮಾನ ನುಗ್ಗಿಸಿ ಆತ ಹರಿಸಿದ ರಕ್ತದಲ್ಲಿ, ಹೊಸ ಮುಂಜಾವಿನ ಬೆಳ್ಳಿ ರೇಖೆಗಳು ಪ್ರತಿಫಲಿಸುತ್ತಿದ್ದವುಎಂದು ಸುಮಧುರವಾದ ಕಾವ್ಯವನ್ನು ರಚಿಸಿ ಅಮರರಾಗುವುದನ್ನು ಬಿಟ್ಟು ಆತನ ಯಕಃಶ್ಚಿತ್ ತಪ್ಪಿಗೆ ಒಸಾಮನ ತಲೆ ತೆಗೆಯ ಹೊರಟು ಬಿಡುತ್ತಾರೆ ಹೆಡ್ಡರು. ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕುರುಡಾಗುತ್ತದೆಯಲ್ಲವೇ? ನಮ್ಮ ಕಣ್ಣು ಹೋದರೂ ಚಿಂತೆಯಿಲ್ಲ ಜಗತ್ತು ಕುರುಡಾಗಬಾರದು. ನಮಗೆ ಕಣ್ಣುಗಳಿದ್ದರೇ ತಾನೆ ಕುರುಡಾಗಲು ಸಾಧ್ಯ? ನಮ್ಮ ಕಣ್ಣುಗಳನ್ನೇ ನಾವು ಕಿತ್ತು ಬಿಟ್ಟರೆ? ಎಂದು ಆಲೋಚಿಸುವ ಮುತ್ಸದ್ಧಿತನ ಆ ಯಹೂದಿ ದೇಶದವರಿಗೆ ಯಾವಾಗ ಬಂದೀತು? ನಮ್ಮಲ್ಲಿ ಸಿರಿ ಸಂಪತ್ತು ಇದ್ದರಲ್ಲವೇ ಕಳ್ಳ ಕಾಕರ ಕಾಟ, ಅದಕ್ಕೆ ಪೊಲೀಸು, ಕಾನೂನಿನ ರಕ್ಷಣೆಯ ಹುಡುಕಾಟ, ಊಟಕ್ಕೆ ಗತಿಯಿಲ್ಲದೆ, ಹಸಿವೆಯಿಂದ ನರಳಿ ನರಳು ಸಾಯುವ ಸ್ಥಿತಿಗೆ ನಾವು ಬಂದುಬಿಟ್ಟರೆ? ಅವ್ಯಾವ ಚಿಂತೆಯೂ ಇರದು. ನಾವು ಶಿಕ್ಷಿತರಾಗಿ ಎಲ್ಲವನ್ನೂ ತಿಳಿಯ ಹೊರಟರೆ ಅಲ್ಲವೇ ಭಿನ್ನಾಭಿಪ್ರಾಯಗಳು ಬರುವುದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಅನ್ನಿಸುವುದುಒಂದಕ್ಷರ ಕಲಿಯದಿರುವ ನಿರ್ಧಾರ ಮಾಡಿ ಗಟ್ಟಿ ಮನಸ್ಸು ಮಾಡಿದರೆ ಇವೆಲ್ಲ ಸಮಸ್ಯೆಗಳೇ ಇರುವುದಿಲ್ಲ. ಇಂತಹ ಸರಳ ಸತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ದೇವರ ನಿಜವಾದ ಪ್ರಜೆಗಳು ನಾವೇ. ಬದುಕು ಇರುವುದು ಈ ಭೂಮಿಯ ಮೇಲೆ ಅಲ್ಲ ಎಂಬುದು ನಮಗಷ್ಟೇ ಗೊತ್ತು ಹೀಗಾಗಿ ನಾವು ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ನಾವೇ ಶಾಶ್ವತವಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳು ಶಾಶ್ವತವೇ?


ಅಮೇರಿಕಾ, ಇಸ್ರೇಲುಗಳು ನಮ್ಮಿಂದ ಕಲಿಯುವಂಥದ್ದು ತುಂಬಾ ಇದೆ. ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದು ಹೊರಡುವುದಾಗಲೀ, ಭಯೋತ್ಪಾದಕರಿಗೆ ಅನ್ನ ನೀರು ಕೊಟ್ಟು ಆಶ್ರಯ ನೀಡುತ್ತಿರುವವರನ್ನು ನಾಶ ಮಾಡುತ್ತೇವೆ ಎಂದಾಗಲೀ ಹೊರಡುವುದು ಮೂರ್ಖತನವಾಗುತ್ತದೆ. ಪಾಪ ಭಯೋತ್ಪಾದಕರೂ ಮನುಷ್ಯರೇ ಅಲ್ಲವೇ? ಪರಿಸ್ಥಿತಿಯಿಂದಾಗಿ ಆತ ಆ ಮಾರ್ಗ ಹಿಡಿದಿದ್ದಾನೆ. ಒಂದು ವೇಳೇ ನಾವೇ ಆ ಸ್ಥಾನದಲ್ಲಿದ್ದರೂ ಹಾಗೇ ಮಾಡುತ್ತಿರಲಿಲ್ಲವೇ? ಭಯೋತ್ಪಾದನೆ ಅಸಲಿಗೆ ಸಮಸ್ಯೆಯೇ ಅಲ್ಲ. ಭಯೋತ್ಪಾದಕ ನಮ್ಮನ್ನು ಕೊಂದರೆ ಏನು ಮಾಡಿದ ಹಾಗಾಯಿತು? ನಮ್ಮ ದೇಹ ನಾಶವಾಯಿತು ಅಷ್ಟೇ! ಅದಕ್ಕಿಂತ ಹೆಚ್ಚಿನದನ್ನೇನೂ ಆತ ಮಾಡಲಾರ. ನಮ್ಮ ಶಾಶ್ವತವಾದ, ಚಿರನೂತನವಾದ ಆತ್ಮವನ್ನು ಆತ ಮುಟ್ಟಲೂ ಸಾಧ್ಯವಾಗದು. ಅಂತಹವರನ್ನು ನಿಗ್ರಹಿಸಬೇಕು, ನಿವಾರಿಸಬೇಕು ಎಂದೆಲ್ಲಾ ಮಾತಾಡುವುದು ಬಾಲಿಶವಲ್ಲವೇ?


ಅದಕ್ಕಾಗಿ ಘಂಟಾಘೋಷವಾಗಿ ಹೇಳೋಣ: ನಾವು ಭಾರತೀಯರು, ನಾವಿನ್ನೂ ಬದುಕಿದ್ದೇವೆ. ಜಗತ್ತು ನಮ್ಮನ್ನು ನೋಡಿ ಬುದ್ಧಿ ಕಲಿಯಲಿ. ದೇವರ ಅಪೂರ್ವ ಸೃಷ್ಟಿಯಾದ ನಾವು ಇಲ್ಲಿಂದ ಖಾಲಿಯಾಗುವುದರೊಳಗೆ ಜಗತ್ತು ನಮ್ಮನ್ನು ಅರಿತುಕೊಳ್ಳಲಿ, ನಮ್ಮನ್ನು ಅನುಕರಿಸಲಿ.