Archive | ರಾಜಕೀಯ RSS feed for this section

ಮಂತ್ರಿ ಬರ್ತವ್ರೆ ದಾರಿ ಬಿಡಿ…

21 ಆಗಸ್ಟ್

– ಭಾಷಪ್ರಿಯ

ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.

” ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ ‘ಡ್ರಿಂಕ್ಸ್’ ಬೇಕು ಅಂತ ಹೇಳು’ , ಅಂದ ಮಂತ್ರಿ.

“ಸರ್ ದುಡ್ಡು !!” ಅಂದ Gunman. “ಲೇ ಬೋ ….ಮಗನೆ , ನಿಂಗೆ gun ಕೊಟ್ಟಿರದು ಸರ್ಕಾರ ಯಾಕೆ ?, ಅದನ್ನೇ ತೋರ್ಸಿ ಡ್ರಿಂಕ್ಸ್ ಎತ್ಕೊಂಡು ಬಾ” ಅಂದ ಮಂತ್ರಿ.

Gunman, gun ತೋರ್ಸಿ, “ಲೇ ಅ rack ನಲ್ಲಿ ಇರೋ arrack ಕೊಡೊ , ಮಂತ್ರಿ ಬಂದವರೆ ಅವರ್ಗೆ ಡ್ರಿಂಕ್ಸ್ ಬೇಕಂತೆ”.

ಅದಕ್ಕೆ ಮಾಲೀಕ “ಸರ್ ಅವರಿಗೆ ಒಳ್ಳೆ ಫಾರ್ಇನ್ ವ್ಹಿಸ್ಕೆಯ್ ಕೊಡ್ತೀನಿ” ಅಂದ.

Gunman “ಲೇ ಹೇಳದಷ್ಟು ಮಾಡೋ , ಅವರು ಕುಡಿಯೋದೆ arrack ಬೇರೆದು ಕೊಡಿದ್ರೆ ಕಿಕ್ಕ್ ಬರೋಲ್ಲಂತೆ, ಫಾರ್ಇನ್ ವ್ಹಿಸ್ಕೆಯ್ ಅಂದ್ಯಲ್ಲ ಅದನ್ನ ನಂಗು ,ಡ್ರೈವರ್ ಗೆ ಕೊಡು ನಾವು ಕುಡಿಯೋದೆ ಅದು” ಅಂದ.

ಮಂತ್ರಿಗಳು ಕುಡಿದು  ಅಲ್ಲಿಂದ ಮುಂದೆ ಪ್ರಯಾಣ ಮಾಡಿದ್ರು ,ಮಾರ್ಗ ಮಧ್ಯದಲ್ಲಿ ” ಲೇ ಇವನೇ ನನ್ಗೆ ಸೂಸು ಬರ್ತಿದೆ ಗಾಡಿ ಇಲ್ಲೇ ನಿಲ್ಸು”.

ಡ್ರೈವರ್ ” ಸರ್ ಇದು highway ಸರ್ ಇಲ್ಲಿ ನಿಲ್ಸಿದ್ರೆ ತಪ್ಪಾಗೊತ್ತೆ “. ಮಂತ್ರಿ ” ಲೇ ನಾನು ಈ ರಾಜ್ಯದ ಮಂತ್ರಿ , ನಾನು ಎಲ್ಲಿ ಬೇಕಾದ್ರೂ ನಿಂತ್ಗೊತೀನಿ , ಹೆಂಗ್ಬೇಕಾದ್ರು ನಿಂತ್ಗೊತೀನಿ, ನೀನು ಗಾಡಿ ನಿಲ್ಸು” ಅಂದ.

ಮಧ್ಯ ರಸ್ತೇಲಿ ಕಾರ್ ನಿಂತಿತು. ಡ್ರೈವರ್ “ಸರ್ ಇಲ್ ಬೇಡ ಅ ಸೈಡ್ಗೆ ಹೋಗಿ”,ಅಂದ.

ಕುಡಿದ ಅಮಲ್ನಲ್ಲಿ ಮಂತ್ರಿ “ಲೇ ಇವನೇ ನಾನು ಸೂಸು ಮಾಡೋತಂಕ ಯಾವ ಗಾಡಿ ಪಾಸ್ ಆಗದಂತೆ ನೀನು gun ಹಿಡ್ಕೊಂಡು ನಿಂತ್ಕೋ “.

Gunman ಸರ್ಕಾರ ಕೊಟ್ಟ ತುಕ್ಕುಹಿಡಿದ ,ಕೇವಲ ಆಯುಧ ಪೂಜೆಗೆ ಬಳೆಸುವ gun ನನ್ನು ಹಿಡಿದು ನಿಂತ.

ಕತ್ತಲಲ್ಲಿ ಬೆಳಕು ಕಂಡಿತು! ಒಂದು ದೊಡ್ಡ truck ಬರುತ್ತಿತು, Gunmanನನ್ನು  ನೋಡಿದ ಕೂಡಲೇ ಸರ್ರ್ರ್ರ್ರ್ರ್ರ್ರ್ರ್ರ್ರ್………. ಅನ್ತ truck ಡ್ರೈವರ್ ಬ್ರೇಕ್ ಹೊಡೆದ. Gunman ಒಂದು truck ನಿಲ್ಲಿಸಿಬಿಟ್ಟೆ ಅಂತ ಹಿಗ್ಗಿದ.

Truck ನಿಂದ ಒಬ್ಬೊಬ್ಬರಾಗಿ ಸಮವಸ್ತ್ರಧಾರಿಗಳು ಇಳಿಯತೊಡಗಿದರು. Gunman ಬೆವರಿದ, ಅದು Army truck ಆಗಿತ್ತು.

Gunman ಹೆದರಿ,  ಒಬ್ಬ ಸೈನಿಕನಿಗೆ ನಡೆದ ಸಂಗತಿ ತಿಳಿಸಿದ.

ಸೈನಿಕ ಮುಖ್ಯಸ್ತ  ಅ  ಸೈನಿಕನನ್ನು ಕರೆದು , ಅಲ್ಲಿ ಸೂಸು ಮಾಡುತ್ತಿರುವವನು ಯಾರಂತೆ ? ಅಂತ ಕೇಳಿದ.

ಅದಕ್ಕೆ ಅ ಸೈನಿಕ ” ಸರ್ ಜಿ , ಓ ಮಿನಿಸ್ಟರ್ ಹೇಯ್ ” ಅಂದ.  ಮುಖ್ಯಸ್ತ ” ಕ್ಯಾ ನಾಮ್ ಹೇ  ಪೂಚ್ಹೋ” .

ಸೈನಿಕ “ಸರ್ ಜಿ  ಓ ಗೌಡ ಕಾ ಬಚ್ಚಾ ” ಅಂದ.

(ಈ ಬರಹ ಮೊದಲು ಪ್ರಕಟವಾದದ್ದು ‘ಸಂಪದ’ದಲ್ಲಿ)

ವಿವಾದ ಸೃಷ್ಟಿಸದಿದ್ದರೆ ತೀವ್ರ ಪ್ರತಿಭಟನೆ :ಬೆದರಿಕೆ

3 ಮಾರ್ಚ್

ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ

ಬೆಂಗಳೂರು, ಮಾ ೩: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ  ಅಬ್ಬೇಪಾರಿಗಳ ಪರಿಷತ್ (ABAP) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ರಸ್ತೆಯ ಮಧ್ಯದಲ್ಲಿ ಲಾರಿ ಟೈರಿಗೆ ಬೆಂಕಿ ಹಾಕುವುದರ ಮೂಲಕ ಸುದ್ದಿಗೋಷ್ಟಿ ಉದ್ಘಾಟಿಸಿದ ಮುಸ್ತಫಾ ಮಾಧ್ಯಮಗಳಿಗೆ ಜನರ ಭಾವನೆಗಳ ಬಗ್ಗೆ ಕಾಳಜಿಯಿಲ್ಲ ಎಂದು

ಪತ್ರಿಕೆಗಳು ಹೀಗೆ ಮೌನವಾದರೆ ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು?

ಆರೋಪಿಸಿದರು. “ಸುಮಾರು ಎರಡು ವರ್ಷಗಳಿಂದ ಸಹನೆಯಿಂದ ಕಾದಿದ್ದೇವೆ. ನಮ್ಮ ಧಾರ್ಮಿಕ, ರಾಷ್ಟ್ರೀಯ, ಭಾಷಿಕ ಭಾವನೆಯನ್ನು ಕೆರಳಿಸುವ ಘಟನೆ ನಡೆಯುವುದೆಂದು ನಿರೀಕ್ಷಿಸಿ ನಿರಾಶರಾಗಿದ್ದೇವೆ. ಇಷ್ಟು ದೀರ್ಘಾವಧಿಯಲ್ಲಿ  ಒಬ್ಬ ಕಲಾವಿದನಿಗೂ ನಮ್ಮ ಧಾರ್ಮಿಕ ಭಾವನೆಗಳನ್ನು ಕೆಣಕುವಂತಹ ಕಲಾಕೃತಿಯನ್ನು  ರಚಿಸಲು ಸಾಧ್ಯವಾಗಿಲ್ಲವೇ? ಜಗತ್ತಿನಲ್ಲೇ ವಾರ್ಷಿಕ ಅತ್ಯಧಿಕ ಸಿನೆಮಾಗಳನ್ನು ತಯಾರಿಸುವ ಬಾಲಿವುಡ್ಡಿಗೆ ಕೋಮು ಸಾಮರಸ್ಯ ಕದಡುವ ಒಂದೇ ಒಂದು ಕಥಾವಸ್ತು ನೆನಪಾಗಿಲ್ಲವೇ? ಇಷ್ಟು ಮಂದಿ ಬಾಲಿವುಡ್ ನಟ, ನಟಿಯರು, ರಾಜಕಾರಣಿಗಳು, ಕಲಾವಿದರು, ಬುದ್ಧಿಜೀವಿಗಳು ಒಂದೇ ಒಂದು ವಿವಾದಾತ್ಮಕ ಹೇಳಿಕೆಯನ್ನು ಟಿವಿ ಸಂದರ್ಶನದಲ್ಲಿ ಕೊಟ್ಟಿಲ್ಲ, ತಮ್ಮ ಟ್ವಿಟರ್ ಪುಟಗಳಲ್ಲೂ ಎಲ್ಲೂ ಆ ಪ್ರಯತ್ನ ಮಾಡಿಲ್ಲ ಎಂದರೆ ಯಾರಿಗಾದರೂ ಸಂಶಯ ಬರುತ್ತದೆ ತಾನೆ? ದೇಶಕ್ಕೆ ಬೆಂಕಿ ಹಾಕುವಂತಹ ಕೃತಿಗಳನ್ನು ರಚಿಸುತ್ತಿದ್ದ ಲೇಖಕರ ಕುಲ ಎಲ್ಲಿ ಕಾಣೆಯಾಯಿತು? ದೇವರನ್ನು ನಗ್ನವಾಗಿ ಚಿತ್ರಿಸುವ, ದೇವಮಾನವರಿಗೆ ಬಟ್ಟೆ ತೊಡಿಸುವ, ದೈವ ಸಮಾನರ ಹುಟ್ಟು ಪ್ರಶ್ನಿಸುವ, ಪ್ರವಾದಿಗಳ ಚಿತ್ರ ಬಿಡಿಸುವ, ಸ್ತ್ರೀಯರ ಬುರ್ಕಾಗಳಿಗೆ ಬೆಂಕಿ ಹಾಕಿ ಎನ್ನುವವರೆಲ್ಲ ಎಲ್ಲಿ ಹೋದರು? ಈ ವಿದ್ಯಮಾನಗಳ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಕ್ರೂರವಾದ ರಾಜಕಾರಣವಿದೆ.

“ವಿವಾದಗಳು, ಮಾಧ್ಯಮಗಳು ಆಗಾಗ ಧಾರ್ಮಿಕ ಭಾವನೆ ಕೆರಳಿಸುತ್ತಿದ್ದರೆ ಅಲ್ಲವೇ, ತಮ್ಮಲ್ಲೂ ಧಾರ್ಮಿಕ ಭಾವನೆ ಇದೆ ಎಂದು ಜನರಿಗೆ ಮನವರಿಕೆಯಾಗುವುದು? ರೋಗ ಬಂದಾಗಲೇ ಅಲ್ಲವೇ ತನ್ನಲ್ಲಿ ಆರೋಗ್ಯವಿತ್ತು ಎಂದು ನೆನೆಪಾಗುವುದು? ಹೆಂಡತಿ ಬಂದ ಮೇಲೆ ತಾನೆ ತನ್ನ ಜೇಬಲ್ಲೂ ದುಡ್ಡು ಉಳಿಯುತ್ತಿತ್ತು ಎಂಬ  ಅರಿವಾಗುವುದು? ಇತಿಹಾಸಕಾರರು ಹೊಸ ಹೊಸ ವ್ಯಾಖ್ಯಾನ ಕೊಟ್ಟು ಜನರನ್ನು ರೊಚ್ಚಿಗೆಬ್ಬಿಸದಿದ್ದರೆ ನಮ್ಮ ಪರಿಷತ್ತಿನ ಸದಸ್ಯರಿಗೆ ನೌಕರಿ ಯಾರು ಕೊಡುವವರು? ರಸ್ತೆಯಲ್ಲಿ ದಾಂಧಲೆಯೆಬ್ಬಿಸಿ, ಸರ್ಕಾರಿ ಬಸ್ಸುಗಳಿಗೆ ಕಲ್ಲು ಎಸೆದು, ಅಂಗಡಿಗಳ ಗಾಜು ಒಡೆದು, ಲೈಟು ಕಂಬಗಳ ಬಲ್ಬು ಒಡೆದು ,ಕೈಗೆ ಸಿಕ್ಕಿದ್ದನ್ನು ದೋಚಿ ಆರ್ಥಿಕತೆಯ ಗಾಲಿಗಳು ತಿರುಗುವಂತೆ ಮಾಡುವವರು ಯಾರು? ಪತ್ರಿಕೆಗಳು ಹೀಗೆ ಮೌನವಾದರೆ  ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು? ನಮ್ಮ ಹೊಟ್ಟೆ ಮೇಲೆ ಹೊಡೆಯುವ ಈ ಕೆಟ್ಟ ಸಂಪ್ರದಾಯಕ್ಕೆ ಹೊಣೆ ಯಾರು?

“ಸರಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ವಿವಾದಾತ್ಮಕ ಪುಸ್ತಕಗಳಿಗೆ ವಿಶೇಷ ಪ್ರಶಸ್ತಿ ಘೋಷಿಸಬೇಕು. ಅನಾರೋಗ್ಯ ಸಚಿವರು ತಮ್ಮ ಎರಡು ದಿನದ ಶೇವಿಂಗ್ ಖರ್ಚನ್ನು ಕೊಟ್ಟರೂ ಸಾಕು ಅರ್ಧ ಡಜನ್ ಮರಿ ಸಾಹಿತಿಗಳನ್ನು ಸಾಕಬಹುದು. ರೊಚ್ಚಿಗೆಬ್ಬಿಸುವ ಕಾದಂಬರಿ ಬರೆದವರಿಗೆ ಪ್ರೋತ್ಸಾಹ ನೀಡಬೇಕು. ನಾಲ್ಕು ನೂರು ಪುಟಗಳ ಕಾದಂಬರಿಯನ್ನು ಓದಿ ಅದರಲ್ಲಿ ರೊಚ್ಚಿಗೇಳುವ ಅಂಶವೇನಿದೆ ಎಂದು ವಿಮರ್ಶಕರು, ವಿರೋಧಿ ಪಾಳೆಯದ ಬುದ್ಧಿಜೀವಿಗಳು ಎರಡು ಸಾಲಿನಲ್ಲಿ ತಿಳಿಸುವ  ಕಷ್ಟ ತೆಗೆದುಕೊಳ್ಳದಿದ್ದರೆ ನಮಗೆ ಅದು ತಿಳಿಯುವುದಾದರೂ ಹೇಗೆ? ಈ ವಿಮರ್ಶಕರನ್ನೂ ಸರಿಯಾಗಿ ನೋಡಿಕೊಳ್ಳಬೇಕು. ಆರ್ಟ್ ಗ್ಯಾಲರಿಗಳಲ್ಲಿ ನಗ್ನ ಕಲಾಕೃತಿಗಳಿಗೆ ಶಿಷ್ಯವೇತನ ನೀಡಬೇಕು. ಕೋಮು ಭಾವನೆ ಕೆರಳಿಸುವ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿಯನ್ನೂ, ವಿಶೇಷ ಸಬ್ಸಿಡಿಯನ್ನೂ ಸರಕಾರ ನೀಡಬೇಕು.ಇಲ್ಲದಿದ್ದರೆ ರಾಷ್ಟ್ರಾದ್ಯಂತ ಉಗ್ರ  ರೂಪದ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಆಗುವ ಪ್ರಾಣ ಹಾನಿ, ಆಸ್ತಿನಾಶಕ್ಕೆ ಸರಕಾರ, ಮಾಧ್ಯಮಗಳೇ ಹೊಣೆ” ಎಂದು ಬೆದರಿಕೆ ಒಡ್ಡಿದ್ದಾರೆ

ಇಂಗ್ಲೀಷ್ ಸುದ್ದಿ ಮಾಧ್ಯಮಗಳ ಗಮನವನ್ನು  ನಿ.ಮ್ಮ ಪ್ರತಿಭಟನೆಯ ಕಡೆಗೆ ಸೆಳೆಯಲು ಏನು ಮಾಡುತ್ತೀರಿ ಎಂದು  ವರದಿಗಾರ್ತಿ ಕೇಳಿದ ಪ್ರಶ್ನೆಗೆ ಠಾಕರೋಲಿಯವರು ಪತ್ರಿಕಾ ಗೋಷ್ಟಿಗೆ ಆಗಮಿಸಿದ್ದ ಕ್ಯಾಮರಾಮೆನ್ ಗಳನ್ನು ಹಿಡಿದು ಜಗ್ಗಾಡಿದರು. ಎರಡು ಕೆಮಾರಗಳನ್ನು ಕುಟ್ಟಿ ಪುಡಿ ಮಾಡಿದರು. ವರದಿಗಾರ್ತಿಯ ಕೂದಲು ಹಿಡಿದು ಜಗ್ಗಿದರು. ಈ ಸಂದರ್ಭದಲ್ಲೆ ಆಕೆಯ ವಿಗ್ಗು ಕೈಗೆ ಬಂದದ್ದಕ್ಕೆ ನಗಾರಿ ವರದಿಗಾರ ಸಾಕ್ಷಿಯಾದ. ಅನಂತರ ಮುಖಕ್ಕೆ ಮಸಿ ಬಳಿಯಲು ಮುಂದಾದರು. ದಪ್ಪನೆಯ ಮೇಕಪ್ ಮೇಲೆ ಮಸಿಯು ಅಂಟದೆ ವರದಿಗಾರ್ತಿ ತಪ್ಪಿಸಿಕೊಂಡಳು ಎಂದು ಮೂಲಗಳು ತಿಳಿಸಿವೆ.

ಪಾಕ್ ಶಾಂತಿಪ್ರಿಯ ದೇಶ ಎನ್ನುವುದಕ್ಕೆ ಪುರಾವೆ ಏನಿದೆ: ಪಾಕ್ ವಿದೇಶಾಂಗ ಕಾರ್ಯದರ್ಶಿ

26 ಫೆಬ್ರ

ಅಭ್ಯಾಸ ಬಲದಿಂದ ಅಪಸವ್ಯದ ಹೇಳಿಕೆ

ನವದೆಹಲಿ: ಮುಂಬೈ ದಾಳಿಯ ನಂತರ ಹದಗೆಟ್ಟಿದ್ದ ಭಾರತ ಪಾಕಿಸ್ತಾನ ನಡುವಿನ ಶಾಂತಿ  ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಪೈಲ್ವಾನ್ ಬಶೀರ್ ವಿವಾದಾತ್ಮಕವಾದ ಹೇಳಿಕೆ ನೀಡಿ ತನ್ನ ದೇಶಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ನಲವತ್ತೈದು ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ದೇಶಗಳ ಕಾರ್ಯದರ್ಶಿಗಳು ಪರಸ್ಪರ ದೋಷಾರೋಪಣೆಯಲ್ಲಿಯೇ ಸಮಯ ಕಳೆದರು. ಭಾರತದ ನಿದೇಶಾಂಗ ಕಾರ್ಯದರ್ಶಿ ನೆಲಸಮ ರಾವ್ ಪಾಕಿಸ್ತಾನದ ಮೇಲೆ ನಂಬಿಕೆ ಬರುವಂತೆ ಅದು ನಡೆದುಕೊಳ್ಳಬೇಕು. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯ ಗಳು ನಡೆಯದಂತೆ  ಕ್ರಮ ಕೈಗೊಳ್ಳಬೇಕು ಎಂದರು. ಪಾಕಿಸ್ತಾನದಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ. ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಪರವಾಗಿ ಮಾತನಾಡಿಯೇ ಶಾರುಖ್ ಖಾನ್ ಏನೆಲ್ಲ ಪಡಿಪಾಟಲು ಪಡಬೇಕಾಯಿತು. ಹೀಗಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ನಮ್ಮ ಸರಕಾರ ಮುಂದಾಗಿರುವುದೇ ನಮ್ಮ ಔದಾರ್ಯವನ್ನು ತೋರುತ್ತದೆ ಎಂದರು.

ಇದರಿಂದ ಕೆರಳಿದ ಪೈಲ್ವಾನ್ ಬಶೀರ್ ನಾವೇನು ಮೇಲೆ ಬಿದ್ದು ಮಾತುಕತೆಗೆ ಬಂದಿಲ್ಲ. ನಮಗೆ ಮಾತುಕತೆಯಲ್ಲಿ ಎಂದಿಗೂ ನಂಬಿಕೆಯಿಲ್ಲ. ದೇಶದ ಪ್ರಧಾನಿಯನ್ನು ಕೆಳಗಿಳಿಸುವಾಗೂ ಸಹ ನಾವು ಮಾತುಕತೆಯಾಡುವುದಿಲ್ಲ. ನಮ್ಮದೇನಿದ್ದರೂ ನೇರವಾದ ಕೆಲಸ. ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಗೋಳುಗರೆಯುತ್ತದೆ. ಪಾಕಿಸ್ತಾನದತ್ತ ಬೆರಳು ಮಾಡುತ್ತದೆ. ಇದು ಎಷ್ಟೋ ಕಾಲದಿಂದ ನಡೆದುಬಂದಿರುವ  ವಿದ್ಯಮಾನ. ಪಾಕಿಸ್ತಾನ ಹೇಗಿರಬೇಕು ಏನು ಮಾಡಬೇಕು ಎನ್ನುವ ಪ್ರವಚನ ಕೊಡುವುದನ್ನು ನವದೆಹಲಿ ನಿಲ್ಲಿಸಬೇಕು. ನಾವೂ ಭಯೋತ್ಪಾದನೆಯ ಬಿಸಿ ಎದುರಿಸುತ್ತಿದ್ದೇವೆ.  ಭಯೋತ್ಪಾದಕರಿಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎನ್ನುವುದಕ್ಕೆ ಭಾರತ ಯಾವ ಪುರಾವೆಯನ್ನೂ ಒದಗಿಸಿಲ್ಲ. ಅದು ಕಂತೆಗಟ್ಟಲೆ ಕಳಿಸಿರುವ `ಸಾಹಿತ್ಯ’ ವನ್ನು ಪುರಾವೆ ಎನ್ನಲಾಗುವುದಿಲ್ಲ.

ತಮ್ಮನ್ನು ಜಂಟಲ್ ಮ್ಯಾನ್ ಎಂದದ್ದಕ್ಕೂ ಅಭ್ಯಾಸ ಬಲದಿಂದ ಪುರಾವೆ ನೀಡಿ ಎಂದು ಹೇಳಿ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.

ನೆಲಸಮ ರಾವ್ ಖಾರವಾಗಿ ಉತ್ತರಿಸುತ್ತ, “ಭಾರತ ಕಳಿಸಿಕೊಟ್ಟಿರುವ ಪುರಾವೆಗಳನ್ನು ಓದುವುದಕ್ಕೆ ಪಾಕಿಸ್ತಾನದಲ್ಲಿ ಓದು ಬಲ್ಲ ಜನರಿದ್ದಾರೆಯೇ ಎಂದು ಮೊದಲು ಪರೀಕ್ಷಿಸಿ. ಇವನ್ನು ಪುರಾವೆಯಲ್ಲ ಕಟ್ಟು ಕತೆ ಎನ್ನುವ ಮೊದಲು ಒಮ್ಮೆ ಓದಿ ನೋಡಿ. ಪಾಕಿಸ್ತಾನ ತನ್ನದೇ ಸೃಷ್ಟಿಯ ಬಲಿಪಶುವಾಗಿರಬಹುದು, ಆದರೆ ಭಾರತ ಪಾಕಿಸ್ತಾನದ ಸೃಷ್ಟಿಯ ಭಯೋತ್ಪಾದನೆಗೆ ಬಲಿಪಶುವಾಗಿದೆ. ನಾನು ಪ್ರಜಾಪ್ರಭುತ್ವವಿರುವ ಸರಕಾರಕ್ಕೆ ಉತ್ತರದಾಯಿ ನಿಮ್ಮಂತೆ ಮಿಲಿಟರಿ ನಾಯಕನ ಆಜ್ಞಾಧಾರಿಯಲ್ಲ.” ಎಂದಾಗ ಬಶೀರ್ ಭಾರತ ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರು.

ಶಾಂತಿ ಮಾತುಕತೆ ಒಂದು ಹಂತಕ್ಕೆ ಬಂದಾಗ ನೆಲಸಮ ರಾವ್ ಸ್ನೇಹಪೂರ್ವಕವಾಗಿ ಬಶೀರರ ಕೈ ಕುಲುಕಿ, “ಪಾಕಿಸ್ತಾನವೂ ಸಹ ಶಾಂತಿ ಪ್ರಿಯ ರಾಷ್ಟ್ರ. ಅದು ಭಯೋತ್ಪಾದಕರು ಬೆಳೆಯುವುದಕ್ಕೆ ನೆರವು ನೀಡುವುದಿಲ್ಲ. ನೀವು ಒಳ್ಳೆಯ ಜಂಟಲ್ ಮೆನ್…” ಎಂದರು.

ರಾವ್ ರವರ ಮಾತನ್ನು ಅರ್ಧಕ್ಕೇ ತುಂಡರಿಸಿದ ಪೈಲ್ವಾನ್ ಬಶೀರ್, “ಸುಳ್ಳು, ಕಟ್ಟುಕತೆ. ನೀವು ಮಾಡಿದ ಆರೋಪಗಳಿಗೆ ಪುರಾವೆ ಏನು?” ಎಂದು ಅಬ್ಬರಿಸಿದರು.

ಕೂಡಲೇ ಬಶೀರರ ಆಪ್ತಕಾರ್ಯದರ್ಶಿ ಸಂದರ್ಭವನ್ನು ಕಿವಿಯಲ್ಲಿ  ಪಿಸುಗುಟ್ಟಿದ ಮೇಲೆ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ನಕ್ಕರು ಎಂದು ವರದಿಯಾಗಿದೆ.

ನೂರು ಟನ್ ಉಕ್ಕಿನ ಗುಂಡನ್ನು ಉರುಳಿಸಲಿರುವ ಮೋನಿಯಾ!

23 ಫೆಬ್ರ

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ: ನೋಇಲಿ

ಬೆಂಗಳೂರು, ಫೆ 23: ಹೈಕಮಾಂಡ್ ಶಕ್ತಿಯೇನೆಂದು ತೋರಿಸುವುದಕ್ಕಾಗಿ ಅಧಿನಾಯಕಿ ಮೋನಿಯಾ ಗಾಂಧಿಯವರು ತಮ್ಮ ಮನಸ್ಸಿನ ಶಕ್ತಿಯಿಂದಲೇ ನೂರು ಟನ್ ತೂಕದ ಉಕ್ಕಿನ ಗುಂಡನ್ನು ಉರುಳಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಹೈಕಮಾಂಡ್ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕ್ಷಣಮಾತ್ರದಲ್ಲಿ ಕರ್ನಾಟಕದ ಸರಕಾರವನ್ನು ಉರುಳಿಸಬಹುದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ವೀರಪ್ಪ ನೋಇಲಿಯವರು ಈ ಸುದ್ದಿಯನ್ನು ದೃಢಪಡಿಸಿ ದ್ದಾರೆ.   ವಿಧಾನಸೌಧದ ಎದುರು ಮೆಟ್ರೋ ಕಾಮಗಾರಿಗಾಗಿ ಹಾಕಿದ್ದ ಟೆಂಟಿನ ಬಳಿ ಕೂತು  ಸುದ್ದಿಗಾರರೊಂದಿಗೆ ಮಾತನಾಡಿದ ನೋಇಲಿ ದೇಶದ ಜನತೆಯೆ ಹೈಕಮಾಂಡ್ ಪರಮಾಧಿಕಾರ ಎಂಥದ್ದು ಎಂದು ಸಾಬೀತು ಪಡಿಸುವ ಸಲುವಾಗಿ ಈ ಪವಾಡ ನಡೆಯಲಿದೆ. ನಮ್ಮದು ದುರ್ಗೆ ಆಳಿದ್ದ ಪಕ್ಷ. ಹೈಕಮಾಂಡ್ ಎಂದರೆ ಸಾಮಾನ್ಯವಲ್ಲ. ಚಿಟಕಿಹೊಡೆಯುವುದರಲ್ಲಿ ಸರಕಾರಗಳನ್ನು ಉರುಳಿಸಬಲ್ಲದು, ಕಣ್ಣು ಮಿಟುಕಿಸುವುದರಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಬಲ್ಲದು. ಮನಸ್ಸು ಮಾಡಿದರೆ ಹಿಮಾಲಯವನ್ನೇ ಇಟಲಿಗೆ ರವಾನಿಸಿಬಿಡಬಲ್ಲದು.

ತಮ್ಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದ ವಿರೋಧ ಪಕ್ಷದವರಿಗೆ ಮೋನಿಯಾರ ಈ ಪವಾಡ ಕಣ್ಣು ತೆರೆಸಲಿದೆ ಎಂದರು. “ ನಮ್ಮ ಪಕ್ಷದಲ್ಲಿ ನೇತಾರರೆಲ್ಲ ಅಧಿನಾಯಕಿಯ ಸುತ್ತ ಸುತ್ತುವ ಗ್ರಹಗಳು ಎಂದು ಹಲವರು ಕಟಕಿಯಾಡುತ್ತಾರೆ. ಅವರಿಗೆ ತಿಳಿದಿರಲಿ, ಈ ಇಡಿಯ ಭೂಮಿಯಷ್ಟೇ ಅಲ್ಲ ಸೂರ್ಯ, ಚಂದ್ರ, ಶನಿ, ಗುರು ಗ್ರಹಗಳೂ ಸಹ ಮೇಡಂ ಸುತ್ತಲೇ ಸುತ್ತುವುದು. ನಾಸಾ ಬಿಡುಗಡೆ ಮಾಡಿದ ಯು ಟ್ಯೂಬ್ ವಿಡಿಯೋದಲ್ಲಿ ಈ ಅಂಶ ಸ್ಪಷ್ಟವಾಗಿದೆ. ಲಿಂಕು ಬೇಕಿದ್ದರೆ ತರೂರರ ಟ್ವಿಟರ್ ಪೇಜಿಗೆ ಭೇಟಿ ನೀಡಿ. ಇಂತಹ ಮಹಾಮಹಿಮ ಹೈಕಮಾಂಡ್ ಪಡೆದಿರುವ ನಮ್ಮ ದೇಶವೇ ಧನ್ಯ.ಮೇಡಂ  ಆಣತಿಯಿಲ್ಲದಿದ್ದರೆ ಯಾವ ಚರ್ಚಿನಲ್ಲೂ ಬೆಲ್ಲು ಮೊಳಗುವುದಿಲ್ಲ, ಕ್ಯಾಂಡಲ್ ಹೊತ್ತುವುದಿಲ್ಲ. ಸರಕಾರ ಇದುವರೆಗೆ ಜೀವಂತವಾಗಿದೆ ಎಂದರೆ ಅದಕ್ಕೆ ಮೇಡಂ ಕೃಪೆಯೇ ಕಾರಣ.”

“ಸ್ವಾಮಿ, ಆ ಮಹಾತಾಯಿಗೆ ಅಟೋಂದು ಶಕ್ತಿ ಅದೆ ಅಂತ ನಂಗೂ ಗೊತ್ತು. ಆಯಮ್ಮ ತನ್ನ ಶಕ್ತಿಯನ್ನೆಲ್ಲ ಗುಂಡುಕಲ್ಲು ಉರುಳಿಸಕೆ ಯಾಕೆ ಯೇಸ್ಟ್ ಮಾಡಬೇಕು. ಆವಮ್ಮ ಮನಸ್ಸು ಮಾಡಿದರೆ ಬಗೆಹರೀದ ತೊಂದ್ರೆ ಇಲ್ಲ. ಇಂಗೆ ಬೀಡಿ ಹೊಗೆಯಂಗೆ ಮೇಲ್ಕೇರ್ತಿರೋ ಉಣ್ಣೋ ಸಾಮಗ್ರಿ ರೇಟನ್ನ ಉರುಳ್ಸೋಕೆ ಮೇಡಂಗೆ ಆಗಾಕಿಲ್ವಾ?”   ನೊಯಿಲಿಯವರ ಮಾತನ್ನು ಆಲಿಸುತ್ತಿದ್ದ ಮೆಟ್ರೋ ಕಾಮಗಾರಿಯ ನೌಕರ ಸಾಮಾನ್ಯಪ್ಪ ಕೇಳಿದ  ಪ್ರಶ್ನೆಗೆ  ಉತ್ತರ ತಿಳಿಯದೆ ಸಚಿವರು ಮೌನವಾಗಿದ್ದರು.

ಕೆಲಸಮಯದ ನಂತರ ಸಚಿವರು ಸಾಮಾನ್ಯಪ್ಪನನ್ನು ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲಾ ಸಮಸ್ಯೆಗೂ ಪರಿಹಾರವಿದೆಯೆಂದು ಭರವಸೆ ನೀಡಿದರು. “ಮೇಡಂ ಕೈಲಿ ಸಾಧ್ಯವಾಗದ್ದು ಏನೂ ಇಲ್ಲ. ನೀನು ಅದೇನೋ ಜುಜುಬಿ ಕೆಲಸ ಮಾಡಲಿ ಮೇಡಂ ಅಂದೆಯಲ್ಲ ಅದನ್ನ ನೂರನಲವತ್ತು ಅಕ್ಷರದೊಳಗೆ ಟೈಪ್ ಮಾಡಿ ಟ್ವಿಟರಿನಲ್ಲಿ ಪೋಸ್ಟ್ ಮಾಡು. ನಮ್ ತರೂರ ಗಮನಕ್ಕೆ ತಾ. ಆಮೇಲೆ ಅದನ್ನು ಅವರು ಮೇಡಂ ಮುಂದಿಡುವರು.”

ಸಚಿವರ ಉತ್ತರದಿಂದ ಸಂತೃಪ್ತನಾದ ಸಾಮಾನ್ಯಪ್ಪ ಬೀಡಿಗೆ ಕಾಸು ಪಡೆದು ಟೆಂಟಿನ ಮರೆಗೆ ಸರಿದನು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಟಕಾ ನಿಲುಗಡೆಗೆ ನಿರಾಕರಣೆ

17 ಫೆಬ್ರ

“ವಿಮಾನ ನಿಲ್ದಾಣದ ಗುಣಮಟ್ಟ ಸಮರ್ಪಕವಾಗಿಲ್ಲ”

 

swamiಬೆಂಗಳೂರು,ಫೆ.೧೬: ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ. 

ವಿಮಾನ ನಿಲ್ದಾಣದ ಪಾರ್ಕಿಂಗ್ ಲಾಟ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. “ಬೆಂಗಳೂರು ವಿಮಾನ ನಿಲ್ದಾಣದ ಗುಣಪಟ್ಟ ತೀರಾ ಕಳಪೆಯಾಗಿದೆ. ಇದು ಜಟಕಾ ಗಾಡಿ ನಿಲ್ದಾಣದ ಹಾಗಿದೆ. ಕಟ್ಟಡಗಳು ಬೆಂಕಿಪೊಟ್ಟಣದ ಹಾಗಿವೆ ಎಂದು ಉಚ್ಛ ನ್ಯಾಯಾಲಯವೇ ಮಂಗಳಾರತಿ ಎತ್ತಿದೆ. ಭಾರತದ ಎಲ್ಲಾ ಟಾಂಗಾ ಗಾಡಿ ಚಾಲಕರ ಪರವಾಗಿ ನಾವು ಉಚ್ಛ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳುವುದೇನೆಂದರೆ, ಈ ವಿಮಾನ ನಿಲ್ದಾಣ ಜಟಕಾ ನಿಲ್ದಾಣವಾಗುವುದಕ್ಕೂ ತಕ್ಕ ಗುಣ ಮಟ್ಟವನ್ನು ಹೊಂದಿಲ್ಲ. ಹೀಗಾಗಿ ಮಾನ್ಯ ನ್ಯಾಯಾಧೀಶರು ಜಟಕಾ ಬಂಡಿ ನಿಲ್ದಾಣದ ಹೋಲಿಕೆಯನ್ನು ಕೈಬಿಡಬೇಕು.”

ಹೈಕೋರ್ಟಿನ ನ್ಯಾಯಾಧೀಶರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯದರ್ಶಿ ಅನುಮಾನ್ ಸಿಂಗ್ ವಿಮಾನ ನಿಲ್ದಾಣವನ್ನು ಜಟಕಾ ಬಂಡಿ ನಿಲ್ದಾಣವಾಗಿಯೂ ಬಳಸಬಹುದು ಎಂಬುದು ಇದರ ವೈವಿಧ್ಯಮಯ ಉಪಯುಕ್ತತೆಯನ್ನು ಸಾರುತ್ತದೆ. ನಮ್ಮ ವಿಮಾನ ನಿಲ್ದಾಣವನ್ನು ದೇಶ, ವಿದೇಶಗಳ ವಿಮಾನಗಳ ಓಡಾಟವನ್ನು ಹೊರತು ಪಡಿಸಿ ಅನೇಕ ಕೆಲಸಗಳಿಗೆ ಬಳಸಬಹುದು. ಹೈಟಿಯಲ್ಲಿ ಆದಂತೆ ಭೂಕಂಪವಾದರೆ ರಾಜ್ಯದ ಮುಖ್ಯಮಂತ್ರಿ ರನ್ ವೇ ಮೇಲೆ ಟೆಂಟ್ ಹಾಕಿಕೊಂಡು ಜೀವ ಉಳಿಸಿಕೊಳ್ಳಬಹುದು. ಬಿಲ್ಡರುಗಳ ಹಾವಳಿಯಿಂದ ಆಟದ ಮೈದಾನ ಕಳೆದುಕೊಂಡ ಶಾಲಾ ಮಕ್ಕಳು ಬೇಕಾದ ಆಟವನ್ನು ಆಡಬಹುದು. ಸಾರ್ವಜನಿಕ ಮೂತ್ರಿಗಳ ವೆಚ್ಚ ಭರಿಸಲಾಗದ ಶ್ರೀಸಾಮಾನ್ಯರು ಬಯಲನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ ಫೇಣಿಗಳು ನೈಸಾದ ರಸ್ತೆಯನ್ನು ಹಾಕಬಹುದು. ಅದರ ಮೇಲೆ ವೇದೇಗೌಡರು ಧರಣಿಯನ್ನು ಹಮ್ಮಿಕೊಳ್ಳಬಹುದು. ಮಾಧ್ಯಮದ ಮಂದಿ ಇಲ್ಲೇ ಕುಳಿತು ಅಂತರರಾಷ್ಟ್ರೀಯ ಸುದ್ದಿಗಳನ್ನು ಸೃಷ್ಟಿಸಬಹುದು. ಗಾಂಧಿನಗರದಲ್ಲಿ ಕತೆ ಖಾಲಿಯಾದ ನಿರ್ದೇಶಕರು, ಪರೀಕ್ಷೆಯಲ್ಲಿ ತಲೆ ಖಾಲಿಯಾದ ವಿದ್ಯಾರ್ಥಿಗಳು ಇಲ್ಲಿನ ನಿರ್ಜನ ಬಯಲುಗಳಲ್ಲಿ ಸ್ಪೂರ್ತಿ ಗಳಿಸಿಕೊಳ್ಳಬಹುದು. ಇಂತಹ ಬಹುಪಯೋಗಿ ವಿಮಾನ ನಿಲ್ದಾಣವನ್ನು ಕಟ್ಟಿರುವ ನಮ್ಮ ಸಾಧನೆಯನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ವಿಮಾನ ಓಡಾಟಕ್ಕೆ ತಕ್ಕ ಗುಣಮಟ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಟೀಕಿಸುವುದು ಸರಿಯಲ್ಲ.

ವಿಮಾನ ನಿಲ್ದಾಣದ ಸುತ್ತ ಹರಡಿಕೊಂಡ ವಿವಾದಗಳು, ಎದ್ದಿರುವ ಅಡ್ಡಿ ಆತಂಕಗಳಿಗೆ ಕಾರಣ ವಾಸ್ತು ದೋಷ ಎಂದು ಗುರುತಿಸಿದ್ದಾರೆ ಖ್ಯಾತ ವಾಸ್ತು ತಜ್ಞ ದೋಷಾನಂದ ಸ್ವಾಮಿಯವರು. “ನೂರಾರು ದಿಕ್ಕುಗಳಿಂದ ಗಾಳಿಯನ್ನು ಒದ್ದುಕೊಂಡು ಚಲಿಸುವ, ಸಾವಿರಾರು ವಿಮಾನಗಳು ಹತ್ತಿ ಇಳಿಯುವ ಜಾಗಕ್ಕೆ ಮೇಲ್ಛಾವಣೆಯನ್ನೇ ಹಾಕಲು ಮರೆತಿದ್ದಾರೆ. ಈ ಲೋಪದಿಂದ ವಿಮಾನ ನಿಲ್ದಾಣದ ಪ್ರಭೆಯು ಬಿಸಿಲಿಗೆ ಆವಿಯಾಗಿ ಆಕಾಶಕ್ಕೆ ಹಾರುತ್ತಿದೆ. ವಿಮಾನಗಳು ಸಮುದ್ರೋಲ್ಲಂಘನ ನಡೆಸುವ ಉಕ್ಕಿನ ಹಕ್ಕಿಗಳಾಗಿರುವುದರಿಂದ ನಿಲ್ದಾಣದ ಗ್ರಹಚಾರ ಯಾವಾಗಲೂ ಕೆಟ್ಟದಾಗೇ ಇರುತ್ತದೆ ಎಂದು ಸಮಯಸಂಹಾರ ಶಾಸ್ತ್ರವು ತಿಳಿಸುತ್ತದೆ. ಈ ದೋಷ ಪರಿಹಾರಕ್ಕಾಗಿ ವಿಮಾನ ನಿಲ್ದಾಣದಲ್ಲಿಯೇ ಸರ್ವಧ್ವಂಸ ಯಾಗವನ್ನು ಮಾಡಿ ವರ್ಷಕ್ಕೊಂದು ವಿಮಾನವನ್ನು ಆಹುತಿಯಾಗಿ ಅರ್ಪಿಸಬೇಕು.” ಎಂದಿದ್ದಾರೆ.

ಆಣೆ ಸವಾಲು ಅಲ್ಪಸಂಖ್ಯಾತರ ಓಲೈಕೆಯ ತಂತ್ರ: ಅಬೋಧ ಕುತಾಲಿಕ್

20 ಜನ

*ನಾರದ
ನಗಾರಿ ವಿಶೇಷ ಪ್ರತಿನಿಧಿ
ಬೆಂಗಳೂರು, ಜ.೨೦

ರಾಜ್ಯ ಕಂಡ ಏಕೈಕ ಮಣ್ಣಿನ ಪ್ರಾಡಕ್ಟ್ ಸೇವೆಗೌಡರ ಮಗ ಜೋಕುಮಾರ ಸ್ವಾಮಿಯವರು ತಮ್ಮ ಮಾಜಿ ಟ್ವೆಂಟಿ ಟ್ವೆಂಟಿ ಪಾರ್ಟನರ್ ಜಡ್ಯುರಪ್ಪನವರು ಧರ್ಮಸ್ಥಳದಲ್ಲಿ ಆಣೆ ಮಾಡಿ ತಮ್ಮ ಸರಕಾರದ ಸಾಚಾತನವನ್ನು ಸಾಬೀತು ಮಾಡಬೇಕು ಎಂದು ಸವಾಲುಹಾಕಿದ್ದಾರೆ. ಇಂದಿನ ಯುವಕರು ದೇವರು, ಧರ್ಮ, ಸರಕಾರ, ರಾಜಕಾರಣಿಗಳಲ್ಲಿ ನಂಬಿಕೆ ಕಳೆದುಕೊಳ್ಳುವ ದುಸ್ಥರ ಸಂದರ್ಭದಲ್ಲಿ ಸರಕಾರದ ಸಾಚಾತನ ಪರೀಕ್ಷಿಸುವುದಕ್ಕೆ ಆಯೋಗಗಳು, ಲೋಕಾಯುಕ್ತ, ನ್ಯಾಯಾಲಯಗಳು, ಶ್ವೇತಪತ್ರ, ಪತ್ರಿಕೆಗಳ ತನಿಖೆ ಇವೇ ಮೊದಲಾದ ಮಾರ್ಗಗಳಿದ್ದರೂ ದೈವಿಕವಾದ ಮಾರ್ಗಕ್ಕೆ ರಾಜಕಾರಣಿಗಳು ಒಲವು ತೋರಿಸಿರುವುದು ಆಶಾದಾಯಕವಾಗಿ ಹಲವರಿಗೆ ಕಂಡಿದೆ. ಇನ್ನೂ ಕೆಲವರು ಪ್ರಜಾಪ್ರಭುತ್ವ, ನ್ಯಾಯಾಲಯದಂತಹ ಇಪ್ಪತ್ತೊಂದನೆಯ ಶತಮಾನದ ನಾಗರೀಕ ವ್ಯವಸ್ಥೆಯಲ್ಲಿದ್ದೂ ಈ ರಾಜಕಾರಣಿಗಳು ಆದಿ ಮಾನವರ ಹಾಗೆ ಆಣೆ ಪ್ರಮಾಣದಲ್ಲಿ ತೊಡಗಿರುವ ಸುಸಂದರ್ಭದಲ್ಲಿ ಅವರಿಗೆ ಆದಿ ಮಾನವರ ವಿಶೇಷ ಸ್ಥಾನ ದೊರಕಿಸಿ ಕೊಟ್ಟು ವಸ್ತ್ರ ರಹಿತವಾಗಿ ನೈಸರ್ಗಿಕ ವಾಸಸ್ಥಾನಗಳಿಗೆ ಅಟ್ಟವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಂತಕ ಬುದ್ಧಿಜೀವಿ ಏನಂದರಾವ್ ರವರು ಸುದ್ದಿ ಪ್ರಕಟವಾಗುತ್ತಲೇ ನಮ್ಮ ಕಛೇರಿಗೆ ಫೋನಾಯಿಸಿ ತಮ್ಮ ಪ್ರತಿಭಟನೆಯನ್ನು praj_muhmad cartoon ದಾಖಲಿಸಿದರು, “ತಮ್ಮ ಅಧಿಕಾರವಾಧಿಯಲ್ಲಿ ಮಾಡಿದ ಸಾಧನೆಗಳ ಲೆಕ್ಕ ಕೊಡುವಾಗ ಈ ರಾಜಕಾರಣಿಗಳು ಅಸ್ತಿತ್ವದಲ್ಲೇ ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದಾಗಿಯೂ, ಇಲ್ಲದ ರಸ್ತೆಗಳ ರಿಪೇರಿ ಮಾಡಿರುವುದಾಗಿಯೂ, ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿಗೆ ಅನುದಾನ ಮಾಡಿರುವುದಾಗಿಯೂ ಘೋಷಿಸುವುದನ್ನು ನಾಡಿನ ಜನತೆ ನೋಡಿದ್ದಾರೆ. ಆದರೆ ಇದು ಹೊಸತು. ತಮ್ಮ ಸಾಚಾತನವನ್ನು ಸಾಬೀತು ಮಾಡುವುದಕ್ಕಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಬಿದ್ದು ಇಲ್ಲದ ದೇವರ ಮೇಲೆ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಈಡಿಯಟ್ಸ್…”

ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಬ್ರಹ್ಮಾಂಡ ಹಿಂದೂ ಮಹಾಸೇನೆಯ ನಾಯಕ ಅಬೋಧ ಕುತಾಲಿಕರು, ‘‘ ಜಾತ್ಯಾತೀತ ದಳ ಎಂದು ತಮ್ಮನ್ನು ಕರೆದುಕೊಳ್ಳುವ ಪಕ್ಷದ ರಾಜಕಾರಣಿ ಆಣೆ ಮಾಡಲು ಹಿಂದೂಗಳ ಆರಾಧ್ಯದೈವವಾದ ಧರ್ಮಸ್ಥಳದ ಮಂಜುನಾಥನನ್ನೇ ಆರಿಸಿಕೊಂಡದ್ದು ಸರ್ವಥಾ ಕೂಡದು. ಒಂದು ವೇಳೆ ಮುಖ್ಯಮಂತ್ರಿ ಸುಳ್ಳಾಡಿ, ಅನಂತರ ಪ್ರಮಾಣ ಮಾಡಿದರೆ ಅಪಾಯವೇನಿದ್ದರೂ ಹಿಂದೂ ದೇವರಿಗೇ ಆಗಲಿ ಎನ್ನುವ ಕುತಂತ್ರ ಇದರ ಹಿಂದಿದೆ. ನಾವು ಎಂದಿನಿಂದ ನೋಡುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದ ತುರ್ಯಾವಸ್ಥೆಯಿದು. ಜೋಕುಮಾರ ಸ್ವಾಮಿಯವರಿಗೆ ದಮ್ಮಿದ್ದರೆ ಅಲ್ಪಸಂಖ್ಯಾತರ ದೇವರ ಮೇಲೆ ಪ್ರಮಾಣ ಮಾಡಿ ತಾವು ಸಾಚಾ ಎಂದು ಸಾಬೀತು ಮಾಡಲಿ.” ಎಂದು ಅಬ್ಬರಿಸಿದರು.

ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹಿರಿಯ ನಾಸ್ತಿಕ ಹೋರಾಟಗಾರರು ಪ್ರಸ್ತುತ ವಿವಾದದಲ್ಲಿ ದೇವರ ಕೈವಾಡವಿದೆ ಎಂದು ಅರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು. “ ದೇವರು ಎನ್ನುವ ಇಲ್ಲದ ಗುಮ್ಮನನ್ನು ತೋರಿಸಿ ಬೆದರಿಸುವ, ಮರುಳು ಮಾಡುವ ತಂತ್ರವಿದು. ದೇವರ ರಕ್ತ ಹಂಚಿಕೊಂಡು ಹಿಟ್ಟಿದ ಬ್ರಾಹ್ಮಣ ಜಾತಿಯವರನ್ನು ಹಿಗ್ಗಾಮುಗ್ಗ ಹಳಿಯುತ್ತ ಓಟು ಬಾಚುವ ಗೌಡರು ಅದೇ ದೇವರ ರಕ್ತ ಸಂಬಂಧಿಯ ಹಿಂದೆ ಊರೂರು ಅಲೆಯುವುದು ಕಂಡಿಲ್ಲವೇ? ಈ ಜೋಕುಮಾರಸ್ವಾಮಿ ಭಲೇ ಚತುರ. ದೇಹವಿಲ್ಲದ, ಆಕಾರವಿಲ್ಲದ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಎನ್ನಬಹುದಿತ್ತು. ಆದರೆ ಪ್ರಮಾಣ ಮಾಡಲಿಕ್ಕೆ ಜಡ್ಡಿ ಕೈ ಎಲ್ಲಿಡಬೇಕು ಎನ್ನುವ ಸಮಸ್ಯೆ ಬರುತ್ತೆ. ಕ್ರೈಸ್ತನ ತಲೆಯಲ್ಲಾಗಲೇ ಮುಳ್ಳಿನ ಕಿರೀಟವಿದೆ ಅಲ್ಲಿ ಕೈ ಇಡಲು ಹೇಳಲಾಗದು. ಹೀಗಾಗಿ ತಲೆಯಷ್ಟನ್ನೇ ಪ್ರಮುಖವಾಗಿ ಹೊಂದಿರುವ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ್ದಾನೆ. ಇದರಿಂದ ನಾಲ್ಕು ತಲೆ ಇರುವ ಬ್ರಹ್ಮನಿಂದ ಹಿಡಿದು ಮುದಿವಯಸ್ಸಿನಲ್ಲೂ  ತಲೆ ತುಂಬಾ ಕರಿ ಕೂದಲು ಕಾಪಾಡಿಕೊಂಡಿರುವ ಸಾಯಿಬಾಬನವರೆಗೆ ಉಳಿದೆಲ್ಲಾ ದೇವರುಗಳಿಗೆ ಹೊಟ್ಟೆ ಕಿಚ್ಚಾಗುವುದಿಲ್ಲವೇ?”

ಪ್ರಸ್ತುತ ವಿವಾದದ ಬಗ್ಗೆ ಅಭಿಪ್ರಾಯ ಕೇಳಿದಾಗ ಸಾಮ್ರಾಟರು, “ಯಾರೇ ಆಣೆ ಪ್ರಮಾಣ ಮಾಡುವುದಿದ್ದರೆ ನಮ್ಮ ಮೇಲೆ ಮಾಡಲಿ. ಏಕೆಂದರೆ ಸಾಮ್ರಾಟರಾದ ನಮಗೆ ತಲೆಯೇ ಇಲ್ಲ, ಇರುವುದು ಹೃದಯ ಮಾತ್ರ!” ಎಂದು ಹೇಳಿದುದಾಗಿ ವರದಿಯಾಗಿದೆ.

ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ

6 ಜನ

ಒಮ್ಮತಕ್ಕೆ ಬಾರದ ಉಭಯ ಒಕ್ಕೂಟಗಳ ನಾಯಕರು

* ನಾರದ
ನಗಾರಿ ಸುದ್ದಿ, ಕೋಪವೇ-ಗನ್, ಜ.೫

ಜಾಗತಿಕ ಭೂತಾಪಮಾನ ಏರಿಕೆಯಿಂದ ತಮ್ಮ ವಿಸ್ಕಿ ಗಾಜಿನಲ್ಲಿನ ಐಸ್ ಕ್ಯೂಬುಗಳು ಬಲುಬೇಗನೆ ಕರಗುತ್ತಿರುವ ವಿದ್ಯಮಾನವನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ಸದಾ‘ಗುಂಡು’ರವರು ಆಗ್ರಹಿಸಿದ್ದಾರೆ. ಡೆನ್ಮಾರ್ಕಿನ ಕೋಪವೇ-ಗನ್‌ನಲ್ಲಿ ಅಂತ್ಯಗೊಂಡ ಜಾಗತಿಕ ಸಮಾವೇಶದಲ್ಲಿ ಮಾತನಾಡುತ್ತ ಅವರು ಈ ಆಗ್ರಹವನ್ನು ಮಾಡಿದರು.

“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸಂಯಮ , ಸಹಿಷ್ಣುತೆ ಹಾಗೂ ಸಹಾನುಭೂತಿಯನ್ನು  ರೂಢಿಸಿಕೊಳ್ಳಬೇಕು. ಇರುವವರನ್ನುice cube ಕಂಡು ಕರುಬುವ ಕೆಲಸ ಮಾಡಬಾರದು. ತಮ್ಮ ದೇಶಗಳಲ್ಲಿ ಜನರಿಗೆ ಕುಡಿಯುವ ನೀರು ಇಲ್ಲ, ಸವಿಯಲು ವಿಸ್ಕಿಯಿಲ್ಲ, ವಿಸ್ಕಿಯಲ್ಲಿ ಮುಳುಗಿಸಲು ಐಸ್ ಕ್ಯೂಬುಗಳಿಲ್ಲ, ಐಸ್ ಮಾಡಲು ಫ್ರಿಜ್ಜಿಲ್ಲ, ಫ್ರಿಜ್ ನಡೆಸಲು ವಿದ್ಯುತ್ ಇಲ್ಲ, ವಿದ್ಯುತ್ ಉತ್ಪಾದನೆಗೆ ಮಳೆಯಿಲ್ಲ, ಸರಿಯಾದ ಸಮಯಕ್ಕೆ ಮಳೆ ಬರಲಿಕ್ಕೆ ಕಾಡುಗಳು ಉಳಿದಿಲ್ಲ, ತಮ್ಮ ಕಾಡುಗಳು ಉಳಿದುಕೊಳ್ಳುವುದಕ್ಕೆ ನಾವು ಬಿಟ್ಟಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸುವುದು ಯಾರಿಗೂ ಹಿತಕರವಲ್ಲ. ತಮ್ಮ ದೇಶದ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ, ತಮ್ಮ ದೇಶಗಳ ಜನರ ಜೀವನ ಸ್ಥಿತಿಯನ್ನು ಸುಧಾರಿಸುವ ಭರದಲ್ಲಿ ಈ ದೇಶಗಳು ತಾಪಮಾನ ಏರಿಕೆ ತಡೆಗಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿಯಲ್ಲಿನ ಐಸ್ ಕ್ಯೂಬು ಕರಗಿಹೋಗುವಂತಹ ಅಮಾನವೀಯ ಪರಿಣಾಮವಾಗುತ್ತಿದೆ. ಇಲ್ಲಿನ ಜನರು ಚಿಲ್ಡ್ ಬಿಯರ್ ಎಂದರೇನೆಂಬುದನ್ನೇ ಮರೆತುಹೋಗುವ ಅಪಾಯವಿದೆ.” ಸದಾ‘ಗುಂಡು’ ಮಾತನಾಡುತ್ತ ವಿಪರೀತ ಭಾವುಕರಾಗಿದ್ದರು ಎಂದು ವರದಿಯಾಗಿದೆ.

ಸದಾ‘ಗುಂಡು’ರವರ ಆರೋಪಗಳನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಅಭಿವೃದ್ಧಿ ಶೀಲ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿ ದರಿದ್ರಯ್ಯರ್, “ಭಾರತವೂ ಸೇರಿದಂತೆ ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳು ಜಾಗತಿಕ ಭೂತಾಪಮಾನ ಏರಿಕೆಗೆ ಕಾರಣರಲ್ಲ. ಇದಕ್ಕೆ ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಚಳಿಯಿಂದಾಗಿ ಸಾವಿರಾರು ಜನರು ಸಾಯುವುದೇ ಸಾಕ್ಷಿ. ಶ್ರೀಮಂತ ರಾಷ್ಟ್ರಗಳಲ್ಲಿ ವಿಸ್ಕಿ ಗ್ಲಾಸಿನಲ್ಲಿ ಐಸ್ ಕ್ಯೂಬ್ ಕರಗಿದರೆ ನಾವು ಹೇಗೆ ಅದಕ್ಕೆ ಹೊಣೆಯಾಗುವೆವು? ಅತಿಯಾಸೆಗೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿದೆ.”

ಕೋಪವೇ-ಗನ್‌ನಲ್ಲಿ ನಡೆದ ಸಮಾವೇಶದ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಉಟ್ಟು ಓರಾಟಗಾರ ಉಗ್ರಣ್ಣನವರು, “ನಮ್ಮ ಸರಕಾರಗಳು ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಶ್ರೀಮಂತ ರಾಷ್ಟ್ರಗಳಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಿವೆ. ತಮ್ಮ ಸುಖಕ್ಕಾಗಿ ಯಾರ ನೆಮ್ಮದಿಯನ್ನೂ ಕೆಡಿಸಲು ಯೋಚಿದ ಅಮೇರಿಕಾ ಒಪ್ಪಂದದಲ್ಲಿ ದೇಶಕ್ಕೆ ಮಾರಕವಾದ ಅಂಶಗಳನ್ನು ಸೇರಿಸಿದೆ. ತಮ್ಮ ದೇಶದ ಜನರಿಗಾಗಿ ಬೇಕಾಗುವ ಐಸ್ ಕ್ಯೂಬ್‌ಗಳ ಉತ್ಪಾದನೆಯನ್ನು ಔಟ್ ಸೋರ್ಸ್ ಮಾಡಿಬಿಡುವ ಭೀಕರ ಹುನ್ನಾರ ನಡೆದಿದೆ. ನಮ್ಮ ದೇಶವನ್ನು ಅದರ ತಣ್ಣನೆಯ ಮಂಜುಗಡ್ಡೆಗಳಿಂದ ವಂಚಿತವಾಗಿಸುವ ಸಂಚು ನಡೆದಿದೆ. ನಾವು ಈಗಲೇ ಎಚ್ಚರವಾಗದಿದ್ದರೆ, ಉಗ್ರ ಹೋರಾಟಕ್ಕೆ ಮುಂದಾಗದಿದ್ದರೆ ಇಡೀ ದೇಶಕ್ಕೆ ದೇಶವೇ ಅಮೇರಿಕಾಗೆ ಮಂಜುಗಡ್ಡೆ  ಸಪ್ಲೈ ಮಾಡುವ ಫ್ರಿಜ್ ಆಗಿಹೋಗುತ್ತದೆ.” ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರದ ಕೈಗಾರಿಕಾ ಮಂತ್ರಿಗಳು ನಿರಾಕರಿಸಿದ್ದಾರೆ. 

ತ್ರಿ-ವಾರಿಯೂ ಆಚಾರ್ಯ ರೇಣುಕರೂ…

4 ಜನ

(ನಗೆನಗಾರಿ ಅರಾಜಕೀಯ ಬ್ಯೂರೊ)

ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದಲೇ ಕಾಮಸೂತ್ರದ ಜನ್ಮಸ್ಥಳವೇ ಎಂದು ಪ್ರಶ್ನಿಸುತ್ತಾರೆ ಎಂದು ಬಿಟ್ಟಿ ವಿದೇಶ ಪ್ರವಾಸ ಮಾಡಿದ  ಸಾಮ್ರಾಟರು ತಮ್ಮನುಭವದಿಂದ ತಿಳಿಸಿದ್ದಾರೆ.

ಜಗತ್ತು ಗುರುತ್ವಾಕರ್ಷಣೆ, ಗ್ರಹಗಳ ಚಲನೆ, ಗ್ರಹಣಗಳಿಗೆ ಸೂತ್ರಗಳನ್ನು ರಚಿಸುವುದರಲ್ಲಿ ಮಗ್ನವಾಗಿದ್ದಾಗ ಆ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ್ದ ಭಾರತೀಯರ ಸಮಯ ಸದುಪಯೋಗಕ್ಕೆ ಕಾರಣವಾದದ್ದೇ ಕಾಮಸೂತ್ರ. ಆದರೆ ಈ ನಾಡು ವಿಚಿತ್ರಗಖ, ವೈರುಧ್ಯಗಳ ನೆಲ. ಕಾಮಸೂತ್ರ ರಚಿಸಿದಾತನನ್ನು ಗೌರವಿಸಿದಂತೆಯೇ ಇವರಿಗೆ ಬಾಣಂತಿ ಹೆಂಡತಿಯನ್ನು ಬಿಟ್ಟು ನಡುರಾತ್ರಿಯಲ್ಲಿ ಕಾಡಿಗೆ ಓಡಿದವರು, ಹಾಡುಹಗಲಲ್ಲೇ ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವರು ಆದರ್ಶ. ಇಂದ್ರಿಯವನ್ನು ಜಯಿಸಿದವ ರೋಜರ್ ಫೆಡರರ್‌ನನ್ನು ಜಯಿಸಿದವನಿಗಿಂತ ಮೇಲು. ಬ್ರಹ್ಮಚಾರಿಗೆ ಗೌರವ ಸಿಕ್ಕುವುದಕ್ಕೆ ಬೇರಾವ ಅರ್ಹತೆಯ ಆವಶ್ಯಕತೆಯೂ ಇಲ್ಲ.

ಇಂತಹ ನಾಡಿನಲ್ಲಿ ತನ್ನ ಎಂಭತ್ತಾರರ ವಯಸ್ಸಿನಲ್ಲಿ ಮೂವರು ಯುವತಿಯರೊಂದಿಗೆ ವಾತ್ಸಾಯನನ ಸೂತ್ರದ ಎಲ್ಲಾ ವೇರಿಯಬಲ್‌ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುತ್ತಿದ್ದ ರಾಜ್ಯಪಾಲ ಟಿವಿ ಕೆಮರಾದಲ್ಲಿ ಸೆರೆಯಾದದ್ದನ್ನು ಹೇಗೆ ಕಾಣಬೇಕು? ತನ್ನ ವಯಸ್ಸಿಗೆ ಸಮವಾಗಿರಲೆಂದು ಇಪ್ಪತ್ತು ವಯಸ್ಸಿನ ಮೂರು ಯುವತಿಯರನ್ನು ಹಾಸಿಗೆಗೆ ಕರೆಸಿಕೊಂಡ ಅಜ್ಜ ಈ ನೆಲದಲ್ಲಿ ಒಂದು ಹತ್ತು ಹದಿನೈದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಾರದಿತ್ತೇ ಎಂದು ಪರಿತಪಿಸುತ್ತಿದ್ದ. ನೀರಿನಿಂದ ಎದ್ದು ಬಂದು ನೀರೋಳಗೇ ಮಾಯವಾಗುವ ಹುಡುಗಿಗೆ ಮಗನನ್ನು ಕರುಣಿಸಿ ಆ ಮಗನು ಮದುವೆಯ ಪ್ರಾಯಕ್ಕೆ ಬರುವಷ್ಟರಲ್ಲಿ ಮತ್ತೊಬ್ಬ ಕನ್ಯೆಗೆ ಲೈನು ಹೊಡೆದು ಮಗನಿಗೆ ಬ್ರಹ್ಮಚರ್ಯದ ಜೀವಾವಧಿ ಶಿಕ್ಷೆ ತಗುಲಿಹಾಕಿ ತನಗೆ ಕನ್ಯೆಯನ್ನು ತಗುಲಿಹಾಕಿಕೊಂಡ ಶಂತನು ಮಹಾರಾಜ ತಾನಾಗಬಹುದಿತ್ತು ಎಂದು ತ್ರಿ-ವಾರಿ ಅಜ್ಜ ಅಧಿಕೃತವಾಗಿ ತನ್ನವನಲ್ಲದ ಮಗನನ್ನು ಕೂರಿಸಿಕೊಂಡು ಕೊರೆಯುತ್ತಿದ್ದಾನೆ. ಈ ಕೊರೆತದ ಹಿಂದೆ ತನಗೂ ಜೀವಮಾನ ಬ್ರಹ್ಮಚರ್ಯದ ಶಿಕ್ಷೆಯ ಸಂಚಿರಬಹುದೆಂದು ಗಾಬರಿಯಾಗಿ ಮಗನು ಹಿಂಬಾಗಿಲಿನಿಂದ ಹೊರಬಿದ್ದಿದ್ದಾನೆ.

ತ್ರಿ-ವಾರಿಯಜ್ಜನ ಕನಸಿನ ಮಹಲಿನ ಪಕ್ಕದಲ್ಲೇ ಫಾರ್ಟಿ ಫಿಫ್ಟಿ ಸೈಟು ಮಾಡಿಕೊಂಡು ಹಲ್ಕಿರಿಯುತ್ತಿರುವ ಆ಼ಚಾರ್ಯ ರೇಣುಕರನ್ನು ನೋಡಿ. ಕ್ಯಾಮರಾಗಳಿಲ್ಲದ ಕಾಲದಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾನು ಅವತರಿಸಿದ್ದರೆ ಋಷಿ ಪುತ್ರಿಯನ್ನು ಕಾಡಿನಲ್ಲೇ ಸುತ್ತಾಡಿಸಿ, ಕಾಸು ಬಿಚ್ಚುವ ಭಯವಿಲ್ಲದೆ ರಮಿಸಿ, ಮುದ್ದಾಡಿ ಮುಂದೊಂದು ದಿನ ಮಾಯವಾಗುವ, ಇಲ್ಲವೇ ನೀರಿಗೆ ಬಿದ್ದು ಹೋಗುವ ಉಂಗುರದಂತಹ ಕಾಣಿಕೆಯನ್ನು ಕೊಟ್ಟು ತನ್ನ ಕ್ಷೇತ್ರವೆಂಬ ಕಾಡಿನಿಂದ ವಿಧಾನಸೌಧವೆಂಬ ಅರಮನೆಗೆ ಕಾಲ್ಕಿತ್ತು ಕೈತೊಳೆದುಕೊಂಡು ಬಿಡಬಹುದಿತ್ತು. ಒಂದೊಮ್ಮೆ ಆಕೆ ವಿಧಾನ ಸೌಧದ ಬಾಗಿಲ ಬಳಿಯೇ ಬಂದು ಬಿಟ್ಟರೂ ಬೈಟೂ ಟೀ ಕೊಡಿಸಿ ಕಳಿಸಿಕೊಡಬಹುದಿತ್ತು. ಆಕೆಯ ಕಳೆದು ಹೋದ ಉಂಗುರವನ್ನು ಮರಳಿಸಿ ಕೊಡುವ ಪತ್ರಕರ್ತರು, ಟಿವಿ ಕ್ಯಾಮರಾಗಳು ಎನ್ನುವ ಮೀನುಗಾರನಿಗೆ ಸಮುದ್ರವನ್ನೇ ಬರೆದುಕೊಟ್ಟು ಬಾಯ್ಮುಚ್ಚಿಸಬಹುದಿತ್ತು.

ಭಾರತೀಯರ ನೈತಿಕ ಹಾಗೂ ಪೌರಾಣಿಕ ಲೋಕಗಳ ನಡುವೆ ತೀವ್ರ ಘರ್ಷಣೆಯನ್ನು ಉಂಟುಮಾಡಿದ ಮಹಾನುಭಾವರು ಕಾಲ ಸರಿಯಿಲ್ಲ ಎಂದು ಹಳಿಯುತ್ತ ಒಬ್ಬರು ತಮ್ಮ ಕನ್ಯಾ-ಮೇಧಯಾಗವನ್ನು ರಾಜ್ಯಪಾಲ ಜವಾಬ್ದಾರಿಯ ಅಡಚಣೆಯಿಲ್ಲದೆ ನೆರವೇರಿಸಲು ಹೊರಟರೆ ಮತ್ತೊಬ್ಬರು ತಮ್ಮ ಸಮುದ್ರ ಮಾರಾಟದ ವಹಿವಾಟವನ್ನು ನಿಭಾಯಿಸುವುದಕ್ಕೋಸ್ಕರ ಅಬಕಾರಿ ಸಚಿವರಾಗಿ ಸೌಧದಲ್ಲೇ ಆಸೀನರಾಗಿದ್ದಾರೆ!

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

10 ಆಕ್ಟೋ

 

(ನಗೆ ನಗಾರಿ ಅಂತರಾಷ್ಟ್ರೀಯ ಕ್ಯಾತೆ ಬ್ಯೂರೋ)

ಶಾಲೆಗೆ ಸೇರಿದ ಹುಡುಗನೊಬ್ಬನ ಮಾತು, ಪ್ರಶ್ನೆಗಳಿಗೆ ಆತ ನೀಡುವ ಉತ್ತರಗಳು ಆಕರ್ಷಕವಾಗಿದ್ದರೆ ಅವನ್ನೆಲ್ಲ ಕಂಡು ಆತ ತುಂಬಾ ಬುದ್ಧಿವಂತ ಇರಬೇಕು ಎಂದೆನ್ನಿಸುವುದು ಸಾಮಾನ್ಯ. ಆದರೆ ಹಾಗಂತ ಪರೀಕ್ಷೆ ನಡೆಸುವ ಮೊದಲೇ ಆತನಿಗೆ ಮೊದಲ ರ್ಯಾಂಕ್ ಕೊಟ್ಟುಬಿಡಲು ಸಾಧ್ಯವೇ?

ಅಧಿಕಾರಕ್ಕೆ ಬಂದು ಒಂದು ವರ್ಷವೂ ಆಗಿರದ, ಬರಾಕ್ ಒಬಾಮರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಕೊಟ್ಟಿರುವುದನ್ನು ಕಂಡು ಅನೇಕರು ಹೀಗೆ ಮೂಗೆಳೆಯುತ್ತಿದ್ದಾರೆ. ಯುದ್ಧ ದಾಹಿ ಅಮೇರಿಕಾ ದೇಶದ ಶಬ್ಧಕೋಶದಲ್ಲಿಯೂ ಸಹ ಶಾಂತಿ ಎಂಬ ಪದದ ಬದಲಾಗಿ ‘ಬಾಂಬು’ ಇರುವುದನ್ನು ಪತ್ತೆ ಮಾಡಿರುವ ಶಾಂತಿಯುತ ರಕ್ತಕ್ರಾಂತಿಯ ಧುರೀಣರು ಜಾಗತಿಕ ಆರ್ಥಿಕ ಕುಸಿತದ ಈ ಕಾಲದಲ್ಲಿ ನೊಬೆಲ್ ಸಂಸ್ಥೆ ಅಗ್ಗದ ಜೋಕ್ ಕಟ್ ಮಾಡಿದೆ ಎಂದು ಹೇಳಿಕೆ ನೀಡಿದೆ. ಕೆಂಪು ಬಣ್ಣದಲ್ಲಿರಬೇಕಾಗಿದ್ದ ಹೇಳಿಕೆಯ ಪಾಂಪ್ಲೆಟುಗಳು ನೀಲಿಗೆ ತಿರುಗಿದುದರ ಹಿಂದೆ ಸಿ.ಐ.ಎ ಕೈವಾಡವಿದೆಯೆಂದು ಹಳದಿ ಬಣ್ಣದ ಮತ್ತೊಂದು ಪಾಂಪ್ಲೆಟಿನಲ್ಲಿ ಹೇಳಲಾಗಿದೆ.

ಒಬಾಮರಿಗೆ ನೊಬೆಲ್ ಕೊಟ್ಟಿರುವುದರ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ, ಇರಾಕ್, ಇರಾನ್ ಹಾಗೂ ಸೌದಿ ಅರೇಬಿಯಾ ಎಂಬ ದುಷ್ಟತ್ರಯ ಮಿತ್ರಕೂಟದಲ್ಲಿ ಅಸಮಾಧಾನದ ಹೊಗೆ ಆಡಿರುವುದು ನಿಜವಾದರೂ ಜಗತ್ತಿನ ಯಾವ ಮೂಲೆಯಲ್ಲೂ ಗಟ್ಟಿ ಧ್ವನಿಯ ಪ್ರತಿಭಟನೆ ವ್ಯಕ್ತವಾಗಿರುವುದು ಯಾವ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ಕಳೆದುಕೊಂಡ ಸುದ್ದಿಯನ್ನು ಹೆಕ್ಕಿ ತೆಗೆಯುವಲ್ಲಿ ಜಗತ್ಪ್ರಸಿದ್ಧವಾಗಿರುವ ನಗೆ ನಗಾರಿಯು ಈ ಸುದ್ದಿಯ ಬೆನ್ನಟ್ಟಿತು. ಒಬಾಮರನ್ನು ನೊಬೆಲ್‌ಗೆ ಆಯ್ಕೆ ಮಾಡಿರುವುದನ್ನು ಉಗ್ರವಾಗಿ ವಿರೋಧಿಸಿರುವ ಸಂಘಟನೆಯೊಂದು ‘ಕೊಲೆಗಾರ ಒಬಾಮಗೆ ಶಾಂತಿ ನೊಬೆಲ್?’ ಎಂಬ ಶೀರ್ಷಿಕೆಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಒಂದು ವೇಳೆ ನೊಬೆಲ್ ಸಮಿತಿಯು ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಉಳಿದೆಲ್ಲ ದೊಡ್ಡ ಮಾಧ್ಯಮ ಸಂಸ್ಥೆಗಳು ಈ ಪುಟ್ಟ ಸಂಘಟನೆಯ ಪತ್ರಿಕಾ ಹೇಳಿಕೆಯನ್ನು ಕಸದ ಬುಟ್ಟಿಗೆ ಎಸೆದಿವೆ. ಆದರೆ ಪತ್ರಿಕಾ ಕಛೇರಿಯ ಕಸದ ಬುಟ್ಟಿಯನ್ನೇ ಅತಿಮುಖ್ಯ ಬಾತ್ಮೀದಾರನನ್ನಾಗಿ ಹೊಂದಿರುವ ನಗೆ ನಗಾರಿಯು ಆ ಬಹುಸಂಖ್ಯಾತ ಮೈನಾರಿಟಿಯ ಒಂಟಿ ಧ್ವನಿಗೆ ಬೆಂಬಲ ನೀಡುತ್ತ ಅವರ ಪ್ರಕಟಣೆಯನ್ನು  ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ:

ಮಾನವರ ಕ್ಯಾಲಂಡರಿನ ದಿನಾಂಕ: ೦೯-೧೦-೨೦೦೯
ಮಾನವರ ಭೂಪಟದ ಸ್ಥಳ : ನ್ಯೂಯಾರ್ಕ್

ಅಂತರಾಷ್ಟ್ರೀಯ ಕೀಟ ಪ್ಯಾರಕೀಟ ಸಂಘಟನೆಯ ಅಂಗ ಸಂಸ್ಥೆಯಾದ ಅಂತರಾಷ್ಟ್ರೀಯ ನಿರುದ್ಯೋಗಿ ನೊಣಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನಾನು, ಶ್ರೀಮತಿ ನೊಣಚಮ್ಮ ಈ ಪತ್ರದ ಮೂಲಕ ತಿಳಿಸುವುದೇನೆಂದರೆ…

ಅಮೇರಿಕಾದ ನೂತನ ಅಧ್ಯಕ್ಷರಾದ ಬರಾಕ್ ಹುಸೇನ್ ಒಬಾಮ ಮೇಲ್ನೋಟಕ್ಕೆ ಶಾಂತಿದೂತರಾಗಿ, ಜಗತ್ತಿನ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಮುತ್ಸದ್ಧಿಯಾಗಿ, ದೇವರ ಮಗನಾಗಿ, ಪ್ರವಾದಿಯಾಗಿ ಕಂಡುಬಂದರೂ ಅಂತರಂಗದಲ್ಲಿ ಆತನೂ ರಕ್ತದಾಹಿಯೇ. ಆತನ ದೇಹದಲ್ಲಿ ವರ್ಷವೊಂದಕ್ಕೆ ನಾಶವಾಗುವ ಕೆಂಪು ರಕ್ತ ಕಣಗಳೇ ಇದಕ್ಕೆ ಹಸಿ ಸಾಕ್ಷಿ.

ಒಬಾಮರ ಮೊದಲು ಎರಡು ಅವಧಿಗಳ ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದ ಬುಶ್ ನಿಜವಾದ ಅಹಿಂಸಾವಾದಿಯಾಗಿದ್ದರು ಎಂಬುದನ್ನು ನಮ್ಮ ಕೀಟ ಸಂಘಟನೆಯು  ನೆನೆಯಲು ಇಚ್ಛಿಸುತ್ತದೆ. ಅವರ ಕಾಲಾವಧಿಯಲ್ಲಿ ಅಫಘಾನಿಸ್ತಾನ, ಇರಾಕ್ ಮೊದಲಾದೆಡೆ ನೊಣಗಳ ಹಾಗೆ ಜನರು ಕೊಲ್ಲಲ್ಪಟ್ಟರೂ, ಅಬು ಗಾರಿಬ್, ಗ್ವಾಂಟನಮೋ ಸೆರೆಮಮನೆಗಳಲ್ಲಿ ಕೀಟಗಳಂತೆ ಖೈದಿಗಳು ತಿಕ್ಕಲ್ಪಟ್ಟರು. ಆದರೆ ಬುಶ್ ಆಶ್ರಯದಲ್ಲಿ ನಮ್ಮ ಕೀಟ ಜೀವ ಸಂಕುಲಕ್ಕೆ ಯಾವ ಬಾಧೆಯೂ ತಟ್ಟಲಿಲ್ಲ. ಕೀಟ ಪ್ರಪಂಚದ ಅಧಿದೇವತೆಯಂತೆ ಸನ್ಮಾನ್ಯ ಬುಶ್‌ರವರು ಅಧಿಕಾರ ನಡೆಸಿದರು.

ಇರಾಕ್ ಎಂಬ ದೇಶದ ರಕ್ಕಸ ಸರ್ವಾಧಿಕಾರಿಯನ್ನು ನೇಣಿಗೆ ಹಾಕಿ ಆ ದೇಶಕ್ಕೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟು ಉಡುಗೊರೆಯಾಗಿ ಪತ್ರಕರ್ತನೊಬ್ಬನ ಶೋ ಒಂದು ಗಾಳಿಯಲ್ಲಿ ತೂರಿ ಬಂದಾಗ ಬುಶ್ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ನಡೆಯಿತು. ತೂರಿ ಬಂದ ಶೂ ಸೋಲ್ ಹಾಗೂ ಬುಶ್ ಹಣೆಯ ನಡುವೆ ನಮ್ಮ ಕೀಟ ಸಂಘಟನೆಯ ಅಧ್ಯಕ್ಷರಾದ ಶ್ರೀ ನೊಣಯ್ಯನವರು ಸಿಕ್ಕಿ ಹಾಕಿಕೊಂಡಿದ್ದರು. ಒಂದು ವೇಳೆ ಶೂ ತಮ್ಮ ಹಣೆಗೆ ಅಪ್ಪಳಿಸಲು ಬುಶ್ ಅನುಮತಿಸಿದ್ದಿದ್ದರೆ ಅಂದು ನಮ್ಮ ಸಂಘಟನೆ ನಾಯಕನನ್ನು ಕಳೆದುಕೊಳ್ಳುತ್ತಿತ್ತು. ಪರಮದಯಾಳುವಾದ ಜಾರ್ಜ್ ಬುಶ್ ತಮ್ಮೆಲ್ಲಾ ಆತ್ಮಶಕ್ತಿಯನ್ನು ಒಗ್ಗೂಡಿಸಿ ನಮ್ಮ ನಾಯಕನ ಪ್ರಾಣವನ್ನು ಉಳಿಸಿದರು. ಅಂದೇ ನಾವು ವಿಶ್ವಸಂಸ್ಥೆಗೆ ಪತ್ರವನ್ನು ಬರೆದು ಸನ್ಮಾನ್ಯ ಬುಶ್‌ರಿಗೆ ವಿಶ್ವಶಾಂತಿ ನೊಬೆಲ್ ನೀಡಬೇಕು ಎಂದು ಒತ್ತಾಯಿಸಿದ್ದೆವು. ಪತ್ರವನ್ನು ಹೊತ್ತೊಯ್ದ ನಮ್ಮ ದೂತನು ವಿಮಾನ ನಿಲ್ದಾಣದ ಮಸ್ಕಿಟೊ ರಿಪೆಲೆಂಟ್ ದಾಳಿಗೆ ಬಲಿಯಾಗಿ ಪತ್ರವು ಗುರಿಯನ್ನು ತಲುಪುವಲ್ಲಿ ವಿಫಲವಾಯಿತು.

ಬುಶ್‌ರಂತಹ ಅಪ್ರತಿಮ ಕರುಣಾಮಯಿಯಿಂದ ಅಧಿಕಾರ ಕಸಿದುಕೊಂಡ ಒಬಾಮ ನಮ್ಮ ಸಂಸ್ಥೆಯ ಪಾಲಿಗೆ ಒಸಾಮ ಆದದ್ದು ದುರಂತ. ಜಾರ್ಜ್ ಬುಶ್‌ರಿಂದ ರಕ್ಷಿಸಲ್ಪಟ್ಟ ನಮ್ಮ ಅಧ್ಯಕ್ಷರು ತಮ್ಮ ಕೃತಜ್ಞತಾ ಪತ್ರವನ್ನು ಖುದ್ದಾಗಿ ಅಮೇರಿಕಾದ ಅಧ್ಯಕ್ಷರಿಗೆ ತಲುಪಿಸಲು ವೈಟ್ ಹೌಸ್ ಸೇರಿದ್ದರು. ಆದರೆ ಅಷ್ಟರಲ್ಲಿ ಬುಶ್‌ರನ್ನು ಪಟ್ಟದಿಂದ ಇಳಿಸಿ ಈ ಕರಿದೊರೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೂ ಬುಶ್ ಅಲಂಕರಿಸಿದ್ದ ಅಧ್ಯಕ್ಷ ಸ್ಥಾನದ ಮೇಲಿನ ಗೌರವದಿಂದ ನಮ್ಮ ನೊಣಯ್ಯನವರು ಒಬಾಮರಿಗೆ ಪ್ರೀತಿಯ ಆಲಿಂಗನ ಹಾಗೂ ಕೆನ್ನೆಯ ಮೇಲೆ ಹೂ ಮುತ್ತನ್ನು ನೀಡಲು ಮುಂದಾದರು.

ಆಗ ಸ್ಪೋಟಿಸಿತು ರಕ್ಕಸನ ಅಂತರಂಗದಲ್ಲಿದ್ದ ಕ್ರೋಧಾಗ್ನಿ! ರಾಷ್ಟ್ರೀಯ ಮಾಧ್ಯಮದ ಕೆಮರಾಗಳ ಸಮಕ್ಷಮದಲ್ಲಿಯೇ ಆತನ ರೌದ್ರಾವತಾರ ಅನಾವರಣಗೊಂಡಿತು. ಕಡು ನಿಷ್ಕರುಣಿ ಕೊಲೆಗಾರನ ಹಾಗೆ ಒಬಾಮ ನಮ್ಮ ಅಧ್ಯಕ್ಷರನ್ನು ಪಟ್ ಎಂದು ಹೊಡೆದುರುಳಿಸಿ ಬಿಟ್ಟರು. ಕ್ಷಣ ಮಾತ್ರದಲ್ಲಿ ನೊಣಯ್ಯನವರ ಪ್ರಾಣ ಪಕ್ಷಿ ಅನಂತದಲ್ಲಿ ಲೀನವಾಗಿ ಹೋಯ್ತು. ಇಂತಹ ಘೋರವಾದ ಪಾಪವೆಸಗಿಯೂ ಚೂರೂ ಪಶ್ಚಾತಾಪವಿಲ್ಲದೆ ಹತ ನೊಣಯ್ಯನವರ ಶವವನ್ನು ನ್ಯಾಪ್‌ಕಿನ್ನಿನಲ್ಲಿ ಎತ್ತಿ ಬಿಸಾಕಿ ಕೆಮಾರದವರಿಗೆ ಕವರ್ ಮಾಡಲು ನಗುತ್ತಾ ಹೇಳಿದರು. ಅನಂತರ ಕೈ ಒರೆಸಿಕೊಂಡು ಸಂದರ್ಶನ ಮುಂದುವರೆಸಿದರು.

ಈ ಘಟನೆಗೆ ನಮ್ಮ ಬಳಿ ವಿಡಿಯೋ ದಾಖಲೆಗಳಿವೆ. ಅದನ್ನಿಲ್ಲಿ ಲಗತ್ತಿಸಿದ್ದೇವೆ.

ಪತ್ರಿಕೆಗಳ ವರದಿಗಳ ಆಧಾರಗಳಿವೆ.

ಹೇಳಿ, ಇಂತಹ ನಿಷ್ಕರುಣೆಯ, ಕ್ರೂರ ರಕ್ತದಾಹಿ ಮನುಷ್ಯನಿಗೆ ಶಾಂತಿ ನೊಬೆಲ್ ಬಹುಮಾನ ನೀಡಿದರೆ ನೊಬೆಲ್ ಪ್ರತಿಷ್ಠಾನವನ್ನು ಸ್ಥಾಪಿಸಿದ, ಜಿಲಟಿನ್, ಡೈನಮೈಟ್ ಕಂಡುಹಿಡಿದು, ಬೊಫೊರ್ಸ್ ಕಂಪೆನಿಯ ಒಡೆಯನಾಗಿ ವಿಶ್ವಯುದ್ಧದಲ್ಲಿ ಮಾನವರ ಜೀವಗಳನ್ನು ಸೊಳ್ಳೆ ಜೀವಗಳಿಗೆ ಸಮ ಎಂದು ತೋರಿಸಿಕೊಟ್ಟ ಆಲ್ಫ್ರೆಡ್ ನೊಬೆಲ್ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆಯೇ?

ತಮ್ಮ ಈ ನಿರ್ಧಾರವನ್ನು ನೊಬೆಲ್ ಸಮಿತಿಯು ಹಿಂತೆಗೆದುಕೊಳ್ಳದಿದ್ದರೆ ನಾವು ವಿಶ್ವದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ. ನಮ್ಮ ಸಂಘಟನೆಯ ಆತ್ಮಾಹುತಿ ದಳದ ಯೋಧರು ಜಗತ್ತಿನೆಲ್ಲ ಟೀ ಕಪ್ಪುಗಳಲ್ಲಿ ಧುಮುಕಿ ಪ್ರಾಣ ತ್ಯಾಗ ಮಾಡಲಿರುವರು. ಮುಂದೆ ಆಗಲಿರುವ ಎಲ್ಲಾ ಅನಾಹುತಗಳಿಗೆ ನೊಬೆಲ್ ಸಮಿತಿಯೇ ಹೊಣೆ! ಎಚ್ಚರ!

ಇಂತಿ,
ಅಂತರಾಷ್ಟ್ರೀಯ
ನಿರುದ್ಯೋಗಿ ನೊಣಗಳ
ಒಕ್ಕೂಟದ
ಪ್ರಧಾನ ಕಾರ್ಯದರ್ಶಿ
ಶ್ರೀಮತಿ ನೊಣಚಮ್ಮ

ಸೌಧ ದಿಗ್ಭಂದನದ ತಾಜಾ ವರದಿ!

28 ಸೆಪ್ಟೆಂ

(ನಗೆ ನಗಾರಿ ದಿಗ್ಭಂದನ ನಿಗ್ರಹ ಬ್ಯೂರೊ)

ಕರ್ನಾಟಕದ ಆಡಳಿತ ಶಕ್ತಿ ಕೇಂದ್ರವೆಂದು ವಿಧಾನ ಸೌಧವನ್ನು ಕರೆಯುವುದು ವಾಡಿಕೆ. ಸರಳ ಬಾಯಿಮಾತಿನಲ್ಲಿ ವಿಧಾನ ಸೌಧವು ‘ಶಕ್ತಿ ಕೇಂದ್ರ’. ದೇವಸ್ಥಾನಗಳು ಭಕ್ತಿ ಕೇಂದ್ರವಾದವು ಅಂದ ಮಾತ್ರಕ್ಕೆ ಅದರಲ್ಲಿರುವವರೆಲ್ಲರೂ ಭಕ್ತರೇ ಎನ್ನಲಾಗುತ್ತದೆಯೇ? ಬ್ಯಾಂಕನ್ನು ವಿತ್ತ ಕೇಂದ್ರ ಎಂದ ತಕ್ಷಣ ಬ್ಯಾಂಕಿಗರೆಲ್ಲ ಲಕ್ಷ್ಮಿಪತಿಗಳು ಎಂದು ಭಾವಿಸುವುದು ಸಾಧುವೇ? ಶಕ್ತಿ ಕೇಂದ್ರದಲ್ಲಿ ಇರುವವರು ಎಂದ ಮಾತ್ರಕ್ಕೆ ರಾಜಕಾರಣಿಗಳೆಲ್ಲರೂ ಶಕ್ತಿವಂತರಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ರಸ್ತೆಯ ಮೇಲೆ ಉರುಳಾಡುವ, ನಾಲ್ಕು ಮಂದಿ ಖಾಕಿಧಾರಿಗಳ ಕೈಲಿ ಎತ್ತಿಸಿಕೊಂಡು ಹೊರಕ್ಕೆ ಹಾಕಿಸಿಕೊಳ್ಳುವ, ಕ್ಯಾಮರಾದೆದುರು ರ್ಯಾಸ್ಕಲ್, ಲೋಫರ್ ಎಂದು ನಿಂದನೆಗಿಳಿಯುವ ನಾಯಕರನ್ನು ಕಂಡು ಚಿಕ್ಕ ಮಗುವೂ ನಿರ್ಧರಿಸಬಲ್ಲದು.

ಆಡಳಿತ ನಡೆಸುತ್ತಿರುವ ಸರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಸರಕಾರಿ ಯಂತ್ರವೇ ಸ್ಥಗಿತಗೊಂಡಿದೆ ಎಲ್ಲೂ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷ ವಿಧಾನ ಸೌಧಕ್ಕೇ ದಿಗ್ಭಂದನ ಹಾಕಿಬಿಟ್ಟರೆ ಕೆಲಸ ಚುರುಕುಗೊಳ್ಳಲು ಸಾಧ್ಯವೇ? ಕಾಲೇಜುಗಳಲ್ಲಿ ರಜೆಗಳನ್ನು ಕಡಿತುಗೊಳಿಸಿ ಹೆಚ್ಚು ಸಮಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ವಿನಿಯೋಗಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಎರಡೆರಡು ದಿನ ಮುಷ್ಕರ ಮಾಡಿ ತರಗತಿಗಳನ್ನು ಬಹಿಷ್ಕರಿಸುವಷ್ಟೇ ಬುದ್ಧಿವಂತಿಕೆಯ ಕೆಲಸವಿದು.

ವಿರೋಧ ಪಕ್ಷದ ನಾಯಕರು ವಿಧಾನ ಸೌಧಕ್ಕೆ ದಿಗ್ಭಂದನ ಹಾಕಿಬಿಟ್ಟರೆ ಸರಕಾರವೇ ಬಿದ್ದು ಹೋಗುತ್ತದೆ ಎಂದು ಬೆದರುವ ಆಡಳಿತ ಪಕ್ಷಕ್ಕೆ ತೊಡೆ ಒತ್ತಿ ಉಳಿತ ತಕ್ಷಣ ಹೂಸು ಅಡಗಿ ಹೋಗುತ್ತದೆ ಎನ್ನುವ ಭ್ರಮೆ! ವರ್ಷದ ಬಹುಪಾಲು ವಿಧಾನ ಸೌಧದ ನೆನಪೂ ಬಾರದ ಸಚಿವರ ಕೋಣೆಗೆ ಬೀಗ ಹಾಕಿದ ಮಾತ್ರಕ್ಕೆ ಅವರ ಕಾರ್ಯಕ್ಷಮತೆಗೆ ಚ್ಯುತಿಯಾದೀತೇ? ಸೊನ್ನೆಗೆ ಏನನ್ನಾದರೂ ಕಳೆದುಕೊಂಡೇನೆಂಬ ಭಯವೇ?

ಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಗಾಂಧಿ (ಸೋನಿಯಾ, ರಾಹುಲ್, ಪ್ರಿಯಾಂಕ ಎಂದು ಪ್ರತ್ಯೇಕವಾಗಿ ಹೇಳಬೇಕೆ?)ವಾದಿಗಳನ್ನು ಖಾಕಿ ಧರಿಸಿದ ಪೊಲೀಸರು ತಡೆಗಟ್ಟಿದ್ದು, ಹೋರಾಟಗಾರರು ಒಳಕ್ಕೆ ನುಗ್ಗದ ಹಾಗೆ ತಡೆಯೊಡ್ಡಿದ್ದು, ಬ್ಯಾರಿಕೇಡ್ ಹಾರಿದ ವೀರರಿಗೆ ಲಾಠಿ ಬಾಸುಂಡೆಯ ಸ್ವಯಂವರವನ್ನು ಆಯೋಜಿಸಿದ್ದು, ಖಾದಿ ಧಾರಿ ವಯೋವೃದ್ಧರನ್ನು ಮುದ್ದಾಂ ಎತ್ತಾಕಿಕೊಂಡು ಜೀಪುಗಳಲ್ಲಿ ತುಂಬಿಸಿದ್ದು ಎಲ್ಲವನ್ನು ಸುರಕ್ಷಿತ ಅಂತರದಲ್ಲಿ ನಿಂತು ಕೆಮರಾ ಕಣ್ಣುಗಳಲ್ಲಿ ಕಾಣುತ್ತಿದ್ದ ಯುವಕ ಯುವತಿಯರು ಸ್ವಂತ ಕಣ್ಣುಗಳಲ್ಲಿ ಕಣ್ಣೀರು ಸುರಿಸಿ, ತಾವು ಕಂಡಿರದ ಬ್ರಿಟೀಷರ ದೌರ್ಜನ್ಯವನ್ನು ನೆನೆದು, ಟಿವಿ ನೋಡುವ ಅಮಾಯಕ ವೀಕ್ಷಕರಿಗೆ ನೆನಪಿಸಿ ಟಿಶ್ಯೂ ಕಾಗದಗಳಲ್ಲಿ ಕಣ್ಣೀರು ಇಂಗಿಸುತ್ತಿರುವಾಗ ಗಾಂಧಿ ತಾತ ತುಟಿ ಕೊಂಕಿಸಿದ್ದು ಯಾರಿಗೂ ಕಾಣಲಿಲ್ಲ.

ತಮ್ಮನ್ನು ದಿಗ್ಭಂದನ ಹೋಮವನ್ನು ಹಾಳು ಮಾಡಿದ ರಕ್ಕಸರ ವಿರುದ್ಧ ಸರ್ಕಾರಿ ಊಟ ಬಿಟ್ಟು ಒಂದು ತಾಸು ಪ್ರತಿಭಟಿಸಿದ ಹುರಿಯಾಳುಗಳು ತಮ್ಮನ್ನು ಬಂಧಿಸಿಟ್ಟ ಸ್ಥಳ ನಾಯಿ ಶೆಡ್ಡೆಂದು ತಿಳಿದು ಉಗ್ರವಾಗಿ ಕ್ರುದ್ಧರಾಗಿ ಎರಡು ತಾಸು ಪ್ರತಿಭಟನೆ ನಡೆಸಿದರು. ಕುರಿ ದೊಡ್ಡಿ, ಕತ್ತೆ ದೊಡ್ಡಿಯಲ್ಲಿ ರಾಜಾರೋಷವಾಗಿ ಮೆರೆಯಬೇಕಾದ ತಮ್ಮನ್ನು ನಾಯಿ ಶೆಡ್ಡಿನಲ್ಲಿ ಕೂಡು ಹಾಕಿದ ಪೋಲಿಸರನ್ನು ಏಕಕಂಠದಲ್ಲಿ ನಿಂದಿಸಿದರು. ಪ್ರಾಮಾಣಿಕತೆಗೆ ಕುಖ್ಯಾತವಾದ ನಾಯಿಗಳ ಶೆಡ್ಡಿನಲ್ಲಿ ತಮ್ಮನ್ನು ಕೂಡಿಟ್ಟಿರುವುದು ಇಡೀ ಪ್ರಜಾಪ್ರಭುತ್ವಕ್ಕೇ ಅಪಮಾನ ಎಂದು ವಿರೋಧಪಕ್ಷದ ಮುಖಂಡ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಜಾಪ್ರಭುತ್ವದ ಕಾವಲು ನಾಯಿಗಳಾದ ವಿರೋಧ ಪಕ್ಷಗಳ ನಾಯಕರನ್ನು, ಬೊಗಳು ನಾಯಿಗಳಾದ ಮಾಧ್ಯದ ಹುರಿಯಾಳುಗಳನ್ನು ಕ್ಯಾಮರಾ ಯೋಧರನ್ನು ನಾಯಿ ಶೆಡ್ಡಿನಲ್ಲಿ ಹಾಕುವುದು ಅರ್ಥಪೂರ್ಣವಾದ ಕ್ರಿಯೆ ಎಂದು ಮೊಬೈಲಿನಲ್ಲಿ ಟ್ವೀಟ್ ಎಸೆದ ಯುವಕನು ಅಹಿಂಸಾವಾದಿಗಳ ಬಿಸಿಯುಸಿರಿನ ತಾಪಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂಳೆಗಳ ಎಣಿಕೆಯಲ್ಲಿ ತೊಡಗಿದ್ದಾನೆ.

ಈ ನಡುವೆ ತಮ್ಮ ಶೆಡ್ಡಿನಲ್ಲಿ ರಾಜಕಾರಣಿಗಳನ್ನು ಅಕ್ರಮವಾಗಿ ತುಂಬಿದ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಶ್ವಾನಸಭೆಯು, ಈ ಘಟನೆಯ ತರುವಾಯ ಇಡೀ ಶೆಡ್ಡನ್ನು ಶ್ವಾನ ಮೂತ್ರದಿಂದ ಸ್ವಚ್ಛಗೊಳಿಸುವ ಕಾರ್ಯಕ್ರಮ ನೆರವೇರಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ತಿಳಿಯಲು ತೆರಳಿದ್ದ ನಗೆ ನಗಾರಿಯ ಏಕಮೇವ ವರದಿಗಾರ ತೊಣಚಪ್ಪನವರು ಕಳಿಸಿದ ವರದಿ ಕಛೇರಿ ತಲುಪಿದೆ. ಕಛೇರಿಯ ಕಟ್ಟಡದ ಮೇಲ್ಛಾವಣಿಯಲ್ಲಿ ವರದಿಯುವ ಕಾಲು ಒದ್ದೆಯಾದ ಪ್ಯಾಂಟಿನ ರೂಪದಲ್ಲಿ ಹಾರಾಡುತ್ತಿದೆ!