Archive | ಆಧ್ಯಾತ್ಮ RSS feed for this section

ಇಗೋ ಇಲ್ಲಿದೆ ನಿಮ್ಮ ಭವಿಷ್ಯ!

5 ನವೆಂ

(ನಗೆ ನಗಾರಿ ಭವಿಷ್ಯ ವಿತರಣಾ ಬ್ಯೂರೋ)

ಕನ್ನಡ ಪತ್ರಿಕೋದ್ಯಮ ಹಿಂದೆಂದೂ ಕಂಡರಿಯದ ಪ್ರಮಾಣದ ಬದ್ಧತೆಯನ್ನು ತೋರಿ ‘ರದ್ದಿಮನೆ’ಯ ಹಿರಿತಲೆಗಳ ಹಳೆಯ ಹೃದಯದ ಸ್ತಂಭನಕ್ಕೆ ನಗೆ ನಗಾರಿ ಡಾಟ್ ಕಾಮ್ ಕಾರಣವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಸರ್ವವೇದ್ಯವಾದ ಸಾಧನೆಯನ್ನು ಪುನರುಚ್ಛರಿಸುವುದಕ್ಕೆ ಕಾರಣವಿದೆ.

ಮನುಷ್ಯ ಬಹುವಾಗಿ ಹೆದರುವ ಮೂರು ಸಂಗತಿಗಳಲ್ಲಿ ಮೂರನೆಯದು ಕಾಲ. ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಹೆಂಡತಿ ಹಾಗೂ ಜಿರಲೆ ದಕ್ಕಿಸಿಕೊಂಡಿವೆ. ಕಾಲಗಳಲ್ಲಿ ಅತಿ ಸರಳವಾದ ಹಾಗೂ ತಿಳಿದುಕೊಳ್ಳಲು ಅತ್ಯಂತ ಸುಲಭ ಎಂದು ಭಾಸವಾಗುವ ಗತಕಾಲದ ಬಗ್ಗೆಯೇ ಮನುಷ್ಯ ಗರಿಷ್ಠ ಪ್ರಮಾಣದಲ್ಲಿ ಹೆದರುತ್ತಾನೆ. ಅದಕ್ಕೆ ಆ ಕಾಲವನ್ನು ‘ಭೂತ’ಕಾಲ ಎಂದು ಕರೆದಿದ್ದಾನೆ. ವರ್ತಮಾನವಂತೂ ಆತನ ಕೈಗೇ ಸಿಕ್ಕುವುದಿಲ್ಲ. ಅದಕ್ಕೆ ಅದು ‘ಭೂತ’ಕ್ಕಿಂತ ಹೆಚ್ಚಿನ ಭಯ ಹುಟ್ಟಿಸುತ್ತದೆ. ಈ ಭಯವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಹುನ್ನಾರದಿಂದಾಗಿಯೇ ದಿನಪತ್ರಿಕೆಗಳು ತಮ್ಮನ್ನು ಆಗಾಗ ವರ್ತಮಾನ ಪತ್ರಿಕೆಗಳೆಂದು ಕರೆದುಕೊಳ್ಳುವುದು. ಈ ಎರಡರಕ್ಕಿಂತ ಭೀಕರವಾದ ಭಯಕ್ಕೆ ಕಾರಣವಾಗುವುದು ಭವಿಷ್ಯ. ಆರು ಅಡಿಯ ಮನುಷ್ಯ ಆರು ಅಡಿಯ ಭಯಪೀಡಿತ ಮನುಷ್ಯನಾಗಿ ಪರಿವರ್ತಿತನಾಗುವುದಕ್ಕೆ ಭವಿಷ್ಯವೆಂಬ ಪದವೇ ಸಾಕು.

ಈ ಭಯವನ್ನು ಮಟ್ಟ ಹಾಕುವುದಕ್ಕಾಗಿ ಹಾಗೂ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವುದಕ್ಕಾಗಿ ಸಹಜವಾಗಿ ಸಮಾಜ ಸುಧಾರಕರು ಹುಟ್ಟಿಕೊಂಡರು. ಕಂಡವರ ಭವಿಷ್ಯವನ್ನು ಹೇಳುತ್ತ ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವ ಜೋತಿಷಿಗಳು ತಾವು ಕಂಡವರಿಗೆ ಸಾವಿನ ಭಯವನ್ನು ಹುಟ್ಟಿಸಿ ತಮ್ಮ ಬದುಕಿಗೆ ‘ಮೌಲ್ಯ’ ಸೇರಿಸುವ ಪಾಲಿಸಿಗಳನ್ನು ಪಡೆಯುವ ವಿಮೆ ಏಜಂಟರಿಗಿಂತ ಶ್ರೇಷ್ಠರು ಎಂದು ವಾದಿಸುತ್ತಾರೆ. ಪ್ರಸ್ತುತ ಈ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿದೆ. ಇದಕ್ಕೂ ಮೊದಲು ಸರದಿಯಲ್ಲಿರುವ ವ್ಯಾಜ್ಯಗಳ ಸಂಖ್ಯೆಯನ್ನು ಎಣಿಸಲು ತೆರಳಿದ ಬಾಲಕನ ಮೊಮ್ಮಗ ಈಗ ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಓದುತ್ತಿದ್ದಾನೆ.

ಭವಿಷ್ಯವನ್ನು ವರ್ತಮಾನದಲ್ಲಿ ನಿಖರವಾಗಿ ಊಹಿಸಿ ಭವಿಷ್ಯವನ್ನು ಭೂತವಾಗಿಸಿದ ಖೋಡಿ ಮಠದ ಸ್ವಾಮೀಜಿಯ ಬಗ್ಗೆ ಹಿಂದೆ ನಾವು ವರದಿ ಮಾಡಿದ್ದೆವು. ಸ್ವಾಮೀಜಿಯವರ ಭವಿಷ್ಯವಾಣಿಯನ್ನು ಬಿತ್ತರಿಸುವುದರಲ್ಲಿ ಮಾಧ್ಯಮದ ಮಂದಿ ತೋರಿದ ಅದ್ಭುತ ಹುಮ್ಮಸ್ಸು ಆ ಭವಿಷ್ಯವಾಣಿ ನಿಜವಾದ ಸಂದರ್ಭದಲ್ಲಿ ತೋರದಿದ್ದುದಕ್ಕೆ ಕಾರಣವೇನಿರಬಹುದೆಂದು ನಾವು ಎರಡು ವರ್ಷದ ಹಿಂದಿನ ಸ್ವಾಮೀಜಿಯವರ ಡೈರಿಯಲ್ಲಿ ಹುಡುಕುತ್ತಿರುವೆವು.

ಸ್ವಾಮೀಜಿ ಭವಿಷ್ಯವಾಣಿಯ ಫಾಲೋ ಅಪ್ ವರದಿಗೆ ಸ್ಪಂದಿಸಿರುವ ಮಹಾಜನತೆಯು ಸ್ವಾಮೀಜಿಯವರಲ್ಲಿ ತಮ್ಮ ಭವಿಷ್ಯವನ್ನು ಕೇಳುವುದಕ್ಕೆ ಉತ್ಸುಕರಾಗಿ ಕಮೆಂಟುಗಳನ್ನು ಹಾಕಿರುವರು. ಒಬ್ಬೊಬ್ಬರ ಕಮೆಂಟಿಗೂ ಉತ್ತರಿಸಲು ಶುರು ಮಾಡಿದರೆ ಎಷ್ಟು ಸಮಯ ತಗುಲಬಹುದು ಎಂಬುದರ ಅಂದಾಜು ಮಾಡಲು ತಾವು ಶಕ್ಯರಲ್ಲ ಎಂದು ಭಾವಿಸಿದ ಸ್ವಾಮೀಜಿಯವರು ಕಮೆಂಟಿಸಿದ ಎಲ್ಲರಿಗೂ ಹಾಗೂ ತಮ್ಮ, ತಮ್ಮ ಮಕ್ಕಳ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ತಮ್ಮ ಮನೆಯ ನಾಯಿ, ಬೆಕ್ಕು, ಕುರಿ, ಕೋಳಿ, ಹೆಗ್ಗಣಗಳ ಭವಿಷ್ಯವನ್ನು ತಿಳಿಯುವ ಕುತೂಹಲವಿರುವ ಸಮಸ್ತರಿಗೂ ಅತಿ ಶೀಘ್ರದಲ್ಲಿ ಹೋಲ್ ಸೇಲ್ ಆಗಿ ಭವಿಷ್ಯವನ್ನು ಅರುಹಲಿದ್ದಾರೆ.

ಸಾಮಾನ್ಯೀಕರಿಸಿದ ಭವಿಷ್ಯವಾಣಿಗಳಲ್ಲಿ ನಂಬಿಕೆಯಿಲ್ಲದ ವಿಚಾರವಾದಿ ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನ, ಆ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಾಹೀರಾತಿನ ಹೆಸರಿನ ಜೊತೆಗೆ ಮನೆಯ ಸುತ್ತ ಎರಡು ಅಡಿ ಜಾಗದಲ್ಲಿ ಎಲ್ಲಾದರೂ ಬೆಳೆದಿರುವ ವಾಸನೆಯಿಲ್ಲದ ಹೂ ಬಿಡುವ ಗಿಡದಲ್ಲಿನ ಹಳದಿ ಎಲೆಗಳ ಸಂಖ್ಯೆಯನ್ನು ಕಳಿಸಿಕೊಟ್ಟರೆ ಪ್ರತ್ಯೇಕವಾಗಿ ಅವರ ನಿಖರ ಭವಿಷ್ಯವನ್ನು ಸ್ವಾಮೀಜಿಯವರು ತಿಳಿಸುವರು.

ಜೊತೆಗೆ ಉತ್ತಮ, ಮಧ್ಯಮ, ಅಧಮ – ಈ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಭಾರಿ ಕೋಲಾಹಲವನ್ನು ಉಂಟು ಮಾಡಿರುವ ಮಾಯನ್ನರ ಕ್ಯಾಲಂಡರಿನ ಬಗ್ಗೆ ಹಾಗೂ ೨೦೧೨ರಲ್ಲಿ ಜರುಗಲಿದೆ ಎನ್ನಲಾಗಿರುವ ಭೀಕರ ಪ್ರಳಯದ ಬಗ್ಗೆ ಸ್ವಾಮೀಜಿಯವರು ವೈಜ್ಞಾನಿಕವಾದ, ತಂತ್ರಜ್ಞಾನಯುತವಾದ, ತಾರ್ಕಿಕವಾದ ಭವಿಷ್ಯವನ್ನು ನುಡಿಯಲಿದ್ದಾರೆ. ಪ್ರಳಯ ನಡೆಯುವುದೋ ಇಲ್ಲವೋ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಲಿದ್ದಾರೆ. ಆ ಕಡ್ಡಿಯು ಎಷ್ಟು ತುಂಡಾಗಬಹುದು ಎಂಬ ವಿಚಾರವಾಗಿ ಸಾಮ್ರಾಟರು ಹಾಗೂ ತೊಣಚಪ್ಪನವರ ನಡುವೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದ ಅಂತ್ಯವಾಗಲು ತೆಗೆದುಕೊಳ್ಳುವ ಸಮಯ ಎಷ್ಟಾಗಬಹುದು ಎಂದು ಕುಚೇಲ ಅಂದಾಜಿಸುವಲ್ಲಿ ಮಗ್ನನಾಗಿರುವನು. ಕುಚೇಲನ ಅಂದಾಜು ನಿಖರವಾಗಿರುತ್ತದೆಯೋ ಇಲ್ಲವೋ ಎಂಬುದರ ಮೇಲೆ ಬೆಟ್ ಕಟ್ಟಿದ ಎದುರು ಮನೆಯ ಲಕ್ಕಿ ವಿಕ್ಕಿ ವಾಗ್ವಾದಕ್ಕೆ ಇಳಿದಿರುವರು.

ವಿ.ಸೂ: ತಮಗೆ ಮಕ್ಕಳಾಗುತ್ತವೆಯೇ ಎಂಬ ಪ್ರಶ್ನೆ ಕೇಳುವವರು ಮೊದಲಿಗೆ ಗಂಡಿಗೆ ಇಪ್ಪತ್ತೊಂದು, ಹೆಣ್ಣಿಗೆ ಹದಿನೆಂಟು ದಾಟಿದೆಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಂಡು ತಮಗೆ ಮದುವೆಯಾಗಿದೆಯೇ ಇಲ್ಲವೇ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು.

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

2 ಆಕ್ಟೋ

ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು. ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು, ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು. ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಈ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.

– ನಗೆ ಸಾಮ್ರಾಟ್

ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ.

ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬೇಕು ಎಂದು ತೊಣಚಪ್ಪನವರು ಕೇಳಿಕೊಂಡಾಗ ನಾವು ದಿಗ್ಭ್ರಾಂತರಾದೆವು. ಕಾರಣವಿಷ್ಟೆ. ನಾವು ಈ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗಿನ ಹೆಸರನ್ನೇ ಆಲಿಸಿರಲಿಲ್ಲ. ಇದೊಂದು ಬ್ಲಾಗು ಬಿಡಿ, ವಾಸ್ತವವಾಗಿ ನಮಗೆ ಬ್ಲಾಗ್ ಎಂದರೇನೆಂದೇ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಈ ಬ್ಲಾಗ್ ಬಗ್ಗೆ ತಿಳಿಯದಿರುವುದು ಅಂತಹ ಅಪರಾಧವಲ್ಲ ಬಿಡಿ. ಒಬ್ಬನಿಗೆ ಬ್ಲಾಗ್ ಬಗ್ಗೆ ತಿಳಿದಿಲ್ಲ ಎಂದರೆ ಆತ ಕಾಲೇಜು ವಿದ್ಯಾರ್ಥಿಯಲ್ಲ, ಪುಕ್ಕಟೆ ಅಂತರ್ಜಾಲದ ಸಂಪರ್ಕವಿರುವ ಆಫೀಸಿನಲ್ಲಿ ದುಂದಾಗಿ ಕಳೆಯಲು ಹೆಚ್ಚು ಸಮಯವಿರುವ ಉದ್ಯೋಗಿಯಲ್ಲ, ಪತ್ರಿಕಾ ಕಛೇರಿಗಳ ಕಸದ ಬುಟ್ಟಿಯಲ್ಲಿ spirituality ಪ್ರಾಣ ಬಿಡುವ ತಮ್ಮ ಕೃತಿಗಳಿಗೆ ಕೃತಕ ಉಸಿರಾಟ ಕೊಡಬಯಸುವ ಹವ್ಯಾಸಿ ಲೇಖಕನಲ್ಲ, ಪತ್ರಿಕೆಯಲ್ಲಿ ಎರಡು ಕಾಲಂ ವರದಿ ಪ್ರಕಟವಾಗದ ಸಂಪಾದಕೀಯ ಬರೆಯುವ ಹುಮ್ಮಸ್ಸಿರುವ ಪತ್ರಕರ್ತನಲ್ಲ, ಅವರಿವರನ್ನು ಬಯ್ಯುವ, ಅದಕ್ಕಾಗಿ ಸಮಯ ವಿನಿಯೋಗಿಸುವ, ಬೈದವರಿಗೆ ತಾನಿಲ್ಲಿ ಕೀಬೋರ್ಡಿನ ಮೇಲೆ ಕುಟ್ಟಿದ್ದು ತಲುಪಿಯೇ ತಲುಪುತ್ತದೆ ಎಂದು ಬ್ಲಾಗ್ ಅಂಚೆ ಇಲಾಖೆಯ ಮೇಲೆ ಅಪಾರ ವಿಶ್ವಾಸವಿರಿಸುವ ನಾಮವಿಲ್ಲದ,ಲಿಂಗವಿಲ್ಲದ ಜೀವಿಯಲ್ಲ ಎಂದು ನಿರ್ಧರಿಸಬಹುದು.

ಆದರೆ ನಮಗೆ ಈ ಅಂತರಜಾಲ ಎಂದರೇನೆಂಬುದೇ ತಿಳಿದಿರಲಿಲ್ಲ. ನಮ್ಮ ಮಠದ ವಾತಾವರಣದಲ್ಲಿ ನಮಗೆ ವೆಬ್ ಎಂದರೆ ಜೇಡನದ್ದೇ ಎಂದು ಕೇಳುವಷ್ಟರ ಮಟ್ಟಿಗೆ ಮಾತ್ರ ತಿಳುವಳಿಕೆ ಬೆಳೆದಿತ್ತು. ಆದರೆ ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕಲ್ಲವೇ? ಏಕೆ ಬದಲಾಗಬೇಕು ಎಂದು ಜಿಜ್ಞಾಸುಗಳು ಪ್ರಶ್ನಿಸಬಹುದು. ಬದಲಾಗದಿದ್ದರೆ ಚಲಾವಣೆ ಇರುವುದಿಲ್ಲವಾದ್ದರಿಂದ ಬದಲಾಗಲೇ ಬೇಕು.

ಅಂತರಜಾಲದ ಓನಾಮವನ್ನೂ ತಿಳಿಯದ ನಮ್ಮ ಕೈಲಿ ಅಂಕಣವನ್ನು ಬರೆಸುವ ಸಾಹಸವನ್ನು ಮಾಡಲು ಬಂದ ತೊಣಚಪ್ಪನವರನ್ನು ನಾವು ಗದರಿಸಿ ಕಳುಹಿಸಿದೆವು. ತೊಣಚಿ ಬಿಡು ಎಂದರೆ ಬಿಟ್ಟು ಬಿಡುವುದೇ? ನಮ್ಮ ಮಠದಲ್ಲಿ ದಾನ, ಖರ್ಚು ವೆಚ್ಛಗಳನ್ನು ನೆನಪಿಡುವುದಕ್ಕಾಗಿ ತಂದಿಟ್ಟುಕೊಂಡಿದ್ದ ಕಂಪ್ಯೂಟರನ್ನು ಅಂತರಜಾಲದ ಸಂಪರ್ಕಕ್ಕೆ ಒಡ್ಡಿ ನಮಗೆ ನಗೆ ನಗಾರಿ ಬ್ಲಾಗನ್ನು ತೊಣಚಪ್ಪ ತೋರಿದರು. ಸಂಪಾದಕರಾದ ನಗೆ ಸಾಮ್ರಾಟರ ಬರಹಗಳನ್ನು ತೋರಿಸಿದರು. ಅದರಲ್ಲಿ ಸಾಮ್ರಾಟರು ತಮ್ಮನ್ನು ‘ನಾವು’ ಎಂದು ಕರೆದುಕೊಳ್ಳುವುದನ್ನು ನೋಡಿ ನಮಗೆ ಗಾಬರಿಯಾಯಿತು. ಇವರು ಇನ್ನ್ಯಾವುದೋ ಮಠದ ಸ್ವಾಮಿಯೇ ಎಂಬ ಶಂಕೆ ಉಂಟಾಯಿತು. ಆದರೆ ಆ ಬಗೆಯ ಸ್ವಸಂಬೋಧನೆಯ ಹಿಂದಿನ ಕಾರಣವನ್ನು ಅರಿತು ನಾವು ಸಮಾಧಾನ ಹೊಂದಿದೆವು.

ನಮ್ಮ ಈ ಅಂಕಣದ ಮೊದಲ ಲೇಖನವಾಗಿ ನಾವು ಏನನ್ನು ಬರೆಯಬೇಕೆಂದು ಆಲೋಚಿಸುವಾಗ ಅಧ್ಯಾತ್ಮದ ಬಗ್ಗೆ ಬರೆಯುವುದಕ್ಕಾಗಿ ನಮ್ಮನ್ನೇ ಏಕೆ ಸಂಪಾದಕರು ಆರಿಸಿದರು ಎಂಬ ಪ್ರಶ್ನೆಯು ಹುಟ್ಟಿಕೊಂಡಿತು. ಅಧ್ಯಾತ್ಮ ಎಂಬುದು ಮಠದ ಸ್ವಾಮೀಜಿಗಳ, ಸಂನ್ಯಾಸಿಗಳ, ಪೂಜಾರಿಗಳ, ಪಿಂಚಣಿ ಎಣಿಸುತ್ತಿರುವವರ ಸ್ವತ್ತು ಆದದ್ದು ಯಾವಾಗಿನಿಂದ ಎಂಬ ಜಿಜ್ಞಾಸೆ ಮೂಡಿತು. ಆಟೋ ಚಾಲಕನಿಗೆ, ರೈತನಿಗೆ, ಚಮ್ಮಾರನಿಗೆ, ಬಸ್ ಡ್ರೈವರಿಗೆ, ಟೀ ಸ್ಟಾಲ್ ಮಾಣಿಗೆ, ವಾರ್ತಾ ನಿರೂಪಕಿಗೆ ತಿಳಿಯದ ಯಾವ ಅಧ್ಯಾತ್ಮ ಮಠ ಮಂದಿರಗಳಲ್ಲಿ ಕೂತ ಸ್ವಾಮೀಜಿಗಳಿಗೆ ತಿಳಿದೀತು ಎನ್ನಿಸಿತು. ಮದುವೆ, ದಾಂಪತ್ಯದ ಬಗ್ಗೆ, ಕುಟುಂಬದ ಬಗ್ಗೆ, ಸಂಸಾರ ಸಾಗರದ ಬಗ್ಗೆ ಅವ್ಯಾವುಗಳಲ್ಲೂ ತೊಡಗಿಕೊಳ್ಳದವನಿಗೆ ತಿಳಿದಿರಲು ಹೇಗೆ ಸಾಧ್ಯ? ಈಜೇ ಬರದವನ ಬಳಿ ನದಿಯ ಆಳದ ಬಗ್ಗೆ, ಅದರ ಹರಿವಿನ ಬಗ್ಗೆ, ದಾಟುವ ಬಗ್ಗೆ ಸಲಹೆ ಕೇಳುವುದು ವಿವೇಕಯುತವೇ? ಹೆಣ್ಣಿನ ಸಂಗವನ್ನೇ ಅರಿಯದ (ಅಥವಾ ಹಾಗೆ ತೋರ್ಪಡಿಸುವ) ಸಂನ್ಯಾಸಿ ಹೆಣ್ಣು ಮಾಯೆ, ಹೆಣ್ಣು ಬಂಧನ, ಸಂಸಾರ ಸಾಗರ ಎನ್ನದೆ ಇನ್ನೇನು ಅಂದಾನು? ಹೆಣ್ಣು ಗಂಡಿನ ಸಂಯೋಗವನ್ನು ಪಾಪವೆನ್ನದೆ ಮತ್ತೇನು ಅಂದಾನು? ಎಟುಕದ ದ್ರಾಕ್ಷಿ ಹುಳಿಯಲ್ಲವೇ?

ಜಿಜ್ಞಾಸೆಗಳು ಕೈ ಹಿಡಿದು ಜಗ್ಗುತ್ತಿರುವಾಗ ನಾವು ಸಾಮ್ರಾಟರನ್ನು ಸಂಪರ್ಕಿಸಿದೆವು. ಚಾಟ್ ಕೋಣೆಯಲ್ಲಿ ಕುಳಿತು ನೇರವಾಗಿ ನಮ್ಮ ಗೊಂದಲಗಳನ್ನು ತೋಡಿಕೊಂಡೆವು. “ನೋಡಿ ಸ್ವಾಮಿಗಳೇ, ನಿಮ್ಮ ಈ ಜಿಜ್ಞಾಸೆಗಳು ಹುಟ್ಟುವುದಕ್ಕೆ ನಮ್ಮ ಬ್ಲಾಗಿಗೆ ಬರೆಯುವುದರಿಂದಾವ ಸಂಭಾವನೆಯೂ ದೊರೆಯುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾದರೆ ನಾವು ಅಸಹಾಯಕರು. ನಮ್ಮ ಬ್ಲಾಗಿನ ಅಭಿಮಾನಿಗಳ ಸಂಖ್ಯೆ ಕಡಿಮೆ ಎನ್ನುವುದು ಕಾರಣವಾದರೆ ಅದರ ಬಗ್ಗೆಯೂ ನಾವೇನು ಮಾಡಲು ಸಾಧ್ಯವಿಲ್ಲ, ಬ್ಲಾಗ್ ಹಿಟ್ಟುಗಳನ್ನು ಏರಿಸಿಕೊಳ್ಲುವುದಕ್ಕಾಗಿ ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಸೌಕರ್ಯವಿಲ್ಲ, ಹೆಸರು ಬದಲಿಸಿಕೊಳ್ಳುವ ಅನಿವಾರ್ಯವಿಲ್ಲ.  ಈ ಬರವಣಿಗೆಯಿಂದ ನಿಮ್ಮ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಲಾರದು ಎನ್ನುವುದು ನಿಮ್ಮ ಚಿಂತೆಯಾಗಿದ್ದರೆ ಅದರ ಬಗ್ಗೆ ಏನಾದರೂ ಉಪಾಯ ಹೂಡಬಹುದು. ಆದರೆ ಇದು ನನ್ನ ಪ್ರಾಮಾಣಿಕ ಪ್ರಶ್ನೆ, ಆತ್ಮಸಾಕ್ಷಿಯ ಕಾಟ ಎನ್ನುವುದಾದರೆ ಒಂದು ಮಾತು ನೆನಪಿನಲ್ಲಿಡಿ. ಶಂಖದಿಂದ ಬಂದರಷ್ಟೇ ತೀರ್ಥ. ಆನೆ ನಡೆದದ್ದೇ ದಾರಿ. ಒಂದನೆಯ ತರಗತಿಯ ಹುಡುಗನ ಉತ್ತರ ಪತ್ರಿಕೆಯನ್ನೇ ವೇದಿಕೆಯ ಮೇಲೆ ನಿಂತು ಕವಿ ಎಂದು ಕರೆದುಕೊಳ್ಳುವವನೊಬ್ಬ ಓದಿದರೆ ಅದೇ ಕವಿತಾವಾಚನವಾಗುತ್ತೆ. ಹೀಗಾಗಿ ನೀವು ಯೋಚಿಸಬೇಡಿ, ಸುಮ್ಮನೆ ನನ್ನ ತಲೆ ಕೊರೆಯಬೇಡಿ, ನಿಮ್ಮದೂ ಕೊರೆದುಕೊಳ್ಳಬೇಡಿ. ಕೊರೆಸಿಕೊಳ್ಳಲು ಸಾಲುಗಟ್ಟಿರುವ ಅಸಂಖ್ಯಾತ ಪ್ರಜೆಗಳು ನಮ್ಮ ಸಾಮ್ರಾಜ್ಯದಲ್ಲಿವೆ.” ಎಂದವರು ವಿವರಿಸಿದಾಗ ನಮಗೆ ಧೈರ್ಯ ಬಂದಿತು.

ಹೀಗಾಗಿ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ತಿನ್ನಿಸಿ, ನಗೆ ನಗಾರಿಯೆಂಬ ನೀರನ್ನು ಕುಡಿಸಿ ನೀವು ‘ನಗೆ ಬಾಂಬು’ಗಳನ್ನು ಸಿಡಿಸುವಂತೆ ಮಾಡಿ ನಿಮ್ಮ ವಾತಾವರಣವನ್ನು ಹಾಸ್ಯಮಯ ಮಾಡುವ ಉದ್ದೇಶದಿಂದ ನಾವು ಬರೆಯಲು ಒಪ್ಪಿಕೊಂಡಿದ್ದೇವೆ. ಮುಂದಿನ ಸಂಚಿಕೆಯಿಂದ ನಮ್ಮ ಅಧ್ಯಾತ್ಮ ಪ್ರವಚನವನ್ನು ಶುರು ಮಾಡುವೆವು. ಶಿರಸ್ತ್ರಾಣ, ಕರ್ಣ ಕವಚಗಳನ್ನು, ನೇತ್ರ ಕುಂಡಲಗಳನ್ನು ತಯಾರು ಮಾಡಿಟ್ಟು ಕೊಳ್ಳುವವರಿಗೆ ಸಾಕಷ್ಟು ಸಮಯಾವಕಾಶವಿದ್ದೇ ಇದೆ.

ಬುದ್ಧಿ ಜೀವಿಯಾಗುವುದು ಹೇಗೆ?

6 ನವೆಂ

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)


ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ  ಕರುಣಾಜನಕ ವಿಧಿಯವರು ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ  ನಡೆಸಿಕೊಟ್ಟಿದ್ದಾರೆ. ಈ ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು ಎಂಬುದನ್ನು ಬೋಧಿಸಿದ್ದಾರೆ.


img1081105066_1_1

ಬುದ್ಧಿಜೀವಿಯಾಗಲು ಕೆಲವೇ ಮೆಟ್ಟಿಲು ಎಂದು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಕರುಣಾಜನಕ ವಿಧಿಯವರು ಮೊದಲ ಮೆಟ್ಟಿಲಿನ ಬಗ್ಗೆ ಹೇಳಿದ್ದು ಹೀಗೆ: ತಣ್ಣಗಿರುವ ಕೊಳದ ಪಕ್ಕದಲ್ಲಿ ನೀವು ಸಾವಿರ ವರ್ಷ ತಪಸ್ಸು ಮಾಡುತ್ತಾ ಕುಳಿತರೂ ಪ್ರಪಂಚದ ಗಮನವನ್ನು ಸೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಪ್ರಶಾಂತವಾದ ಕೊಳಕ್ಕೆ ಒಂದೇ ಒಂದು ಕಲ್ಲು ಬೀರಿ ನೋಡಿಅಲೆಗಳ ಮೇಲೆ ಅಲೆಗಳು ಎದ್ದು ಪ್ರಪಂಚದ ಗಮನವೆಲ್ಲಾ ನಿಮ್ಮೆಡೆಗೆ ತಿರುಗುತ್ತದೆ. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಗಮನಿಸಬೇಕಾದ್ದು ಆವಶ್ಯಕ. ಹೀಗೆ ಶಾಂತ ಸರೋವರಕ್ಕೆ ಇಲ್ಲವೇ ತೃಪ್ತ ಹೆಜ್ಜೇನಿನ ಗೂಡಿಗೆ ಕಲ್ಲು ಬೀರುವಾಗ ನೀವು ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಕಚ್ಚಲಾಗದ, ಬೊಗಳಲಾಗದ ನಾಯಿಯನ್ನು ನಿಮ್ಮ ಪರಾಕ್ರಮ ತೋರಲು ಆಯ್ದುಕೊಳ್ಳುವ ಚಾಕಚಕ್ಯತೆಯನ್ನು ಅನುಭವದಿಂದ ಮಾತ್ರ ಸಿದ್ಧಿಸಿಕೊಳ್ಳಲು ಸಾಧ್ಯ.’

ಮೊದಲ ಸೂತ್ರವನ್ನು ಮತ್ತಷ್ಟು ವಿವರವಾಗಿ ಅರ್ಥೈಸುತ್ತಾ, ತಾವು ಬರೆದ ಇತ್ತೀಚಿನ ಕವನವೊಂದನ್ನು ಉದಾಹರಿಸಿದರು.ನನ್ನ ಇತ್ತೀಚಿನ ಕವನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿಹಿಂದೂಗಳು ತಿಲಕ, ವಿಭೂತಿಯನ್ನು ಹಣೆಯಲ್ಲಿ ಧರಿಸುವುದು ತಪ್ಪು ಎಂದು ಉಗ್ರವಾಗಿ ವಾದಿಸಿದ್ದೇನೆ. ಸಮಾನತೆಯ ಆಶಯದಲ್ಲಿ ಹುಟ್ಟಿಕೊಂಡಿರುವ ದೇಶದಲ್ಲಿ ಹೀಗೆ ತಿಲಕ ಹಚ್ಚಿಕೊಂಡು ತಿರುಗುವುದು ಅಸಮಾನತೆಯನ್ನು ಉಂಟು ಮಾಡುತ್ತದೆ ಎಂದು ಕಾವ್ಯಾತ್ಮಕವಾಗಿ ಪ್ರಚುರಪಡಿಸಿದ್ದೇನೆ. ಬ್ರಾಹ್ಮಣರು ಜನಿವಾರವನ್ನು ಹಾಕಿಕೊಳ್ಳುವುದು ಏತಕ್ಕೆ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ವಿದ್ವತ್ ಪೂರ್ಣವಾಗಿ ಪ್ರಶ್ನೆ ಹಾಕಿರುವೆ. ಹೀಗೆ ಸುಮ್ಮನಿದ್ದ ಕೊಳಕ್ಕೆ ಕಲ್ಲನ್ನು ಎಸೆಯಬೇಕು. ಹಿಂದೂಗಳೆಂಬುವವರೆಲ್ಲಾ ಕಣ್ಣು ಕೆಂಪಗೆ ಮಾಡಿಕೊಂಡು ನಿಮ್ಮತ್ತ ನೋಡುತ್ತಾರೆ. ಮಾಧ್ಯಮಗಳು ಉಳಿದೆಲ್ಲಾ ಮುಖ್ಯ ಕೆಲಸ ಬಿಟ್ಟು ಈಗ ನನ್ನ ಮುಂದೆ ಹಲ್ಕಿರಿದು ಕ್ಯಾಮರಾ ತೆಗೆದು ನಿಂತಿಲ್ಲವೇ ಹಾಗೆ ನಿಮ್ಮೆದುರು ಬರುತ್ತಾರೆ.


ಅದರ ಜೊತೆಗೇ ನಾನು ಪಾಲಿಸಿರುವ ಎಚ್ಚರಿಕೆಯನ್ನೂ ಸಹ ನೀವು ಪಾಲಿಸಬೇಕು. ಕಚ್ಚದ, ಬೊಗಳದ ನಾಯಿಗೆ ಕಲ್ಲೆಸುವ ಎಚ್ಚರಿಕೆಯನ್ನು ಮರೆಯಬಾರದು. ಉದಾಹರಣೆಗೆ, ನಾನು ಮುಸ್ಲೀಮರು ತಲೆಗೆ ಟೊಪ್ಪಿ ಧರಿಸುವುದು, ಹೆಂಗಸರು ಬುರ್ಕಾ ಧರಿಸುವುದು ಯಾಕೆ ಎಂದೋ, ಸಮಾನತೆಯಿರುವ ನಾಡಿನಲ್ಲಿ ಕ್ರಿಸ್ತರು ಶಿಲುಬೆಯ ಚೈನನ್ನು ಕೊರಳಿಗೆ ಹಾಕಿಕೊಳ್ಳುವುದು ಏಕೆ, ಬಿಳಿಯ ಬಟ್ಟೆಯನ್ನೇ ಹೆಚ್ಚಾಗಿ ಧರಿಸುವುದು ಏಕೆ ಎಂದೇನಾದರೂ ಪ್ರಶ್ನಿಸಿ ಕವನ ಬರೆದಿದ್ದರೆ ಟಿವಿ ಚಾನಲ್ಲುಗಳಿಗೆ, ಪತ್ರಿಕೆಗಳಿಗೆ ನನ್ನ ಸಂದರ್ಶನ ಮಾಡುವುದಕ್ಕೆ ಅವಕಾಶವಾಗುತ್ತಿರಲಿಲ್ಲ. ಬದಲಾಗಿ ನನ್ನ ಅಂತ್ಯಸಂಸ್ಕಾರದ ಲೈವ್ ಕವರೇಜ್ ಮಾಡುವ ಅವಕಾಶ ಸಿಕ್ಕುತ್ತಿತ್ತು ಅಷ್ಟೇ. ಆ ಅಪಾಯವನ್ನು ಮನಗಂಡೇ ನಾನು ಹಿಂದೂಗಳ ಬಗ್ಗೆ ಕವನ ಬರೆದದ್ದು.


ಹಿಂದೆಯೂ ನಾನು ಶ್ರೀರಾಮನ ಬಗ್ಗೆ ಕ್ರಾಂತಿಕಾರಿಯಾದ ಸಂಗತಿಗಳನ್ನು ಬಯಲಿಗೆಳೆದು ಪ್ರಸಿದ್ಧನಾದದ್ದರ ಬಗ್ಗೆ ನಿಮಗೆ ತಿಳಿದಿರಬಹುದು. ಈಗ ನೋಡಿ ನಮ್ಮ ದೇಶವೊಂದರಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿನ ಮಾಧ್ಯಮ ಮಿತ್ರರು ನನ್ನನ್ನು ಬುದ್ಧಿಜೀವಿ ರಾಜಕಾರಣಿ ಎಂದೇ ಪರಿಗಣಿಸುತ್ತಾರೆ. ಈ ಸೂತ್ರವನ್ನು ಪರಿಣಾಮಕಾರಿಯಾಗಿ ಬಳಸಿದರೆ ಒಂದೇ ದಿನದಲ್ಲಿ ನೀವೂ ಜಗದ್ವಿಖ್ಯಾತರಾಗಬಹುದು.’


ಬಹು ಯಶಸ್ವಿಯಾಗಿ ಜರುಗಿದ ಕಾರ್ಯಾಗಾರದಲ್ಲಿ ಕರುಣಾ ಜನಕ ವಿಧಿಯವರು ಇನ್ನೂ ಅನೇಕ ಶಕ್ತಿಶಾಲಿ ಯಶಸ್ವಿ ಸೂತ್ರಗಳನ್ನು ಹೇಳಿಕೊಟ್ಟರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮೂರು ಮುಕ್ಕಾಲು ಮಂದಿ ತಮ್ಮ ಭವಿಷ್ಯ ಭದ್ರವಾಯಿತೆಂಬ ನೆಮ್ಮದಿಯಿಂದ ಮನೆಗೆ ತೆರಳಿದರು.

ವಿನಾಯಕನ ಇ-ಮೇಲ್!

2 ಸೆಪ್ಟೆಂ

(ನಗೆ ನಗಾರಿ ವೈಯಕ್ತಿಕ ವಿಭಾಗ)

ಇದೀಗ ತಾನೆ ಬಂದ ಇ-ಮೇಲ್ ಸಂದೇಶವೊಂದರಿಂದ ನಗೆ ನಗಾರಿಯ ಇಡೀ ಕಛೇರಿ ವಿಸ್ಮಿತವಾಗಿದೆ. ನಗೆ ಸಾಮ್ರಾಟರು ತನ್ನ ಹೆಸರಿಸಲು ಇಚ್ಚಿಸದ ಮೂಲಗಳಿಂದ ಕಂಡು ಕೊಂಡ ಸಂಗತಿಯೆಂದರೆ ಈ ಇಮೇಲ್ ಸಂದೇಶವನ್ನು ನಾಡಿನ ಎಲ್ಲಾ ಮಾಧ್ಯಮಗಳ ಕಛೇರಿಗಳಿಗೂ ರವಾನಿಸಲಾಗಿದೆ. ಅದರಲ್ಲೂ ದಿನದ ಇಪ್ಪತ್‌ನಾಲ್ಕೂ ಗಂಟೆ ವಾರ್ತೆಯ ಹೆಸರಿನಲ್ಲಿ ಬೇರೇನೇನನ್ನೆಲ್ಲಾ ಪ್ರಸಾರ ಮಾಡುವ ಸುದ್ದಿ ಸಂಸ್ಥೆಗಳಿಗೆ ಮೊದಲ ಆದ್ಯತೆಯಲ್ಲಿ ಈ ಇ-ಮೇಲ್ ರವಾನೆಯಾಗಿದೆ. ನಗೆ ನಗಾರಿಯ ಕಛೇರಿಯನ್ನು ಕೊನೆಯ ಘಳಿಗೆಯಲ್ಲಿ ಈ ಇ-ಮೇಲ್ ತಲುಪಿದ್ದು ನಮ್ಮ ಸಂಸ್ಥೆಯ ಸರ್ವ ಸದಸ್ಯರಲ್ಲೂ ಏಕಕ್ಷಣದಲ್ಲಿ ಹೆಮ್ಮೆಯನ್ನೂ, ಸಂತೋಷವನ್ನೂ ಮೂಡಿಸಿದೆ. ಇದೇ ಖುಶಿಯಲ್ಲಿ ಒಂದೆರಡು ತಾಸು ಹೆಚ್ಚು ಕೆಲಸ ಮಾಡಲು ನಗೆ ಸಾಮ್ರಾಟರು ಅಪ್ಪಣೆ ಹೊರಡಿಸಿದ್ದು ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ವಿಷಯಕ್ಕೆ ಬರುವುದಾದರೆ ಇಂದು ಸಂಜೆ ಐದು ಗಂಟೆಗೆ ನಗೆ ನಗಾರಿಯ ಕಛೇರಿಯ ಏಕೈಕ ಗಣಕ ಯಂತ್ರದ ಅಂಚೆ ಡಬ್ಬಿಯಲ್ಲಿ ಒಂದು ಸಂದೇಶಬಂದು ಬಿದ್ದಿತು. ಬಹಳ ದಿನಗಳ ಹೆವಿ ಕೆಲಸದಿಂದಾಗಿ ಇ-ಮೇಲ್ ಡಬ್ಬದೊಳಕ್ಕೆ ಕಟ್ಟಿಕೊಂಡಿದ್ದ ಜೇಡರ ಬಲೆಗಳನ್ನು ತೆಗೆದು ಸ್ವಚ್ಛಗೊಳಿಸಲು ಸಾಧ್ಯವಾಗಿರಲಿಲ್ಲ. ಹೇಗೋ ಸಾವರಿಸಿಕೊಂಡು ಇ-ಮೇಲನ್ನು ಬಿಚ್ಚಿದ್ದಾಯ್ತು. ಲಾರ್ಡ್ ವಿನಾಯಕ ಅಲಿಯಾಸ್ ವಿಘ್ನೇಶ್ನರ ಎಂಬ ವ್ಯಕ್ತಿಯಿಂದ ಈ ಮೇಲ್ ಬಂದಿರುವುದಾಗಿ ತಿಳಿಯಿತು. ಆತ ಯಾರು ಎಂದು ಉಪ-ಸಂಪಾದಕರು ತಮ್ಮ ಖಾಸಗಿ ಬಾತ್ಮೀದಾರರನ್ನೂ, ಪೊಲೀಸಿನಲ್ಲಿರುವ ಆತ್ಮೀಯರನ್ನೂ ಸಂಪರ್ಕಿಸಿದರು, ನಗೆ ಸಾಮ್ರಾಟರು ತಮ್ಮ ಗಣಕದಲ್ಲಿನ ನಾಲ್ಕು ಚಿಲ್ಲರೆ ರಹಸ್ಯ ಫೈಲುಗಳನ್ನು ತಡಕಾಡಿದರು. ಆದರೆ ಯಾವುದೇ ಫಲ ಸಿಕ್ಕಲಿಲ್ಲ. ಕಡೆಗೆ ಮೇಲನ್ನು ಬಿಚ್ಚಿ ಓದಿದಾಗ ಅದರಲ್ಲಿ ಇದ್ದ ಫೋಟೊದಿಂದ ಈ ವಿಘ್ನೇಶ ಯಾರು ಎಂಬುದು ಪತ್ತೆಯಾಯಿತು.

ಆ ಮೇಲನ್ನು ಯಥಾವತ್ತಾಗಿ ನಗೆ ನಗಾರಿ ಡಾಟ್ ಕಾಮ್ ಓದುಗರಿಗಾಗಿ ಕೊಡಮಾಡುತ್ತಲಿದೆ.

ನಮಸ್ಕಾರ, ನಮಸ್ಕಾರ, ನಮಸ್ಕಾರ…



ನಾನು ಗಣೇಶ ಅಂದು ಬಿಟ್ರೆ ಮುಂಗಾರು ಮಳೆ ಹೀರೋ ಅಂದುಕೊಂಡು ಬಿಡ್ತೀರಿ ಅಂತ ಭಯವಾಗಿ ನನ್ನ ಹೆಸರನ್ನು ವಿನಾಯಕ ಅಲಿಯಾಸ್ ವಿಘ್ನೇಶ ಎಂದು ಕೊಟ್ಟಿರುವೆ. ಇಲ್ಲೇ ಮೇಲಿರುವ ನನ್ನ ಫೋಟೊ ನೋಡಿದರೆ ನಾನು ಯಾರು ಎಂಬುದು ನಿಮಗೆ ತಿಳಿದುಹೋಗುತ್ತದೆ.

ಮಾಧ್ಯಮ ಮಿತ್ರರಾದ ನಿಮ್ಮೆಲ್ಲರಿಗೆ ನಾನು ಕೆಲವು ವಿಜ್ಞಾಪನೆಗಳನ್ನು ಮಾಡಬೇಕು. ದಯೆ ಇಟ್ಟು ಆಲಿಸಿ…

೧. ಈ ಬಾರಿಯ ಗಣೇಶ ಚೌತಿಯಂದು ನಾನು ಭೂಮಿಗೆ ಬರಲಿದ್ದೇನೆ. ಫ್ಲೈಟ್ ಬುಕ್ಕಿಂಗ್ ಆಗಿದೆ. ನಮ್ಮಮ್ಮ ಇವತ್ತೇ ಬಂದು ಬಿಟ್ಟಿದ್ದಾಳೆ. ನಾನು ನಾಳೆ ಬರುವವನಿದ್ದೇನೆ.

೨. ಭಕ್ತಾದಿಗಳಲ್ಲಿ ಗೊಂದಲವಾಗಬಾರದು ಎಂದು ನಾನು ಕೆಲವು ಸ್ಪಷ್ಟನೆಗಳನ್ನು ನೀಡಲು ಇಚ್ಚಿಸುತ್ತೇನೆ. ನಾನು ಭೂಮಿಗೆ ಬಂದಾಗ ಯಾರ ಮನೆಯಲ್ಲೂ ಕಡುಬು, ಹೋಳಿಗೆ, ಮೋದಕಗಳನ್ನು ತಿನ್ನುವುದಿಲ್ಲ. ನನಗೆ ನೈವೇದ್ಯ ಮಾಡಿದ ಬಳಿಕ ಅದನ್ನು ಏನಾದರೂ ಮಾಡಿಕೊಳ್ಳಿ ಆದರೆ ನಾನು ನಿಮ್ಮ ಭಕ್ತಿಯ ಮೋದಕ, ಭಾವದ ಕಡುಬುಗಳನ್ನು ನುಂಗುವೆನೇ ಹೊರತು ಬೇರೇನನ್ನೂ ತಿನ್ನುವುದಿಲ್ಲ.

೩.ಹಾಗೆಯೇ ನಾನು ಹಾಲು, ಮೊಸರು, ಜೇನು ತುಪ್ಪ ಇತ್ಯಾದಿ ಏನನ್ನೂ ಕುಡಿಯುವುದಿಲ್ಲ. ಹಿಂದೆ ಕೆಲವು ಕಿಡಿಗೇಡಿಗಳು ನಾನು ಹಾಲು ಕುಡಿದೆ ಎಂದು ಗುಲ್ಲೆಬ್ಬಿಸಿದ್ದನ್ನು ನೀವು ಬಲ್ಲಿರಿ. ಹೀಗೇ ಬಿಟ್ಟರೆ ನಾಳೆ ನಾನು ಆಲ್ಕೋಹಾಲು ಕುಡಿದೆ ಎಂದು ಈ ದುಷ್ಟ ಜಂತುಗಳು ವದಂತಿ ಹಬ್ಬಿಸುತ್ತಾರೆ. ಯಾರ್ಯಾರೋ ಏನೇನನ್ನೋ ಕುಡಿದು ನನ್ನ ಮೇಲೆ ಆರೋಪ ಹೊರಿಸಿದರೆ ಕಡೆಗೆ ನಾನು ವಿಷವನ್ನು ಕುಡಿಯಬೇಕಾಗುತ್ತದೆ ಅಷ್ಟೇ!

೪. ನಾನು ಏನನ್ನೂ ತಿನ್ನುವುದಿಲ್ಲ, ಕುಡಿಯುವುದಿಲ್ಲ ಎಂದು ಹೇಳಿದ್ದನ್ನು ಕೇಳಿ ನೀವು ನಾನು ಡಯಟ್ ಮಾಡುತ್ತಿದ್ದೇನೆ ಎಂದು ತಿಳಿಯಬೇಡಿ. ಕೆಲವು ನರಪೇತಲ ದೇಹದ ಡಯಟ್ ಸ್ಪೆಶಲಿಸ್ಟುಗಳು ನಿಮ್ಮ ಟಿವಿ ಚಾನೆಲ್ಲುಗಳಲ್ಲಿ ಇಂಥ ಸುಳ್ಳುಗಳನ್ನು ಹೇಳಬಹುದು. ಎಚ್ಚರವಾಗಿರಿ.

೫. ರಸ್ತೆಯ ಮೇಲೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ, ಬೀದಿಯಲ್ಲಿರುವ ಮನೆಗಳೆಲ್ಲವುಗಳಿಂದ ಸಿಕ್ಕಷ್ಟು ಕಾಸು ಪೀಕಿ, ಮಧ್ಯ ರಾತ್ರಿಯವರೆಗೆ ಎದೆ ಹರಿಯುವಂತೆ ಲೌಡ್ ಸ್ಪೀಕರ್ ಹಚ್ಚಿ, ದೊಡ್ಡ ದೊಡ್ಡ ದೊಂಬಿ ಕಟ್ಟಿಕೊಂಡು ಜಾತ್ರೆ ಎಬ್ಬಿಸುತ್ತಾ, ಅಮಾಯಕರಿಗೆ ಪೀಡನೆ ಕೊಡುತ್ತಾ, ಅನ್ಯ ಕೋಮಿನವರನ್ನು ಕೆಣಕಿ, ತದುಕುವ ಕಿಡಿಗೇಡಿಗಳು ನನ್ನ ಭಕ್ತರಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ. ಅವರು ಮಾಡುವ ಯಾವುದೇ ದುಷ್ಕ್ರತ್ಯಕ್ಕೆ ನಾನು ಹಾಗೂ ನನ್ನ ಪರಿವಾರ ಜವಾಬ್ದಾರರಲ್ಲ.

೬. ಕಡೆಯದಾಗಿ ಮಾಧ್ಯಮದ ಮಿತ್ರರಾದ ನಿಮ್ಮಲ್ಲಿ ನಾನು ಕಳಕಳಿಯಿಂದ ಬೇಡಿಕೊಳ್ಳುವುದು ಇಷ್ಟೇ. ನಾನು ವಿದ್ಯಾಗಣಪತಿ. ವಿದ್ಯೆ-ಬುದ್ಧಿಗೆ ಒಡೆಯ. ನಿಮಗೆ ಅರ್ಥವಾಗುವ ಹಾಗೆ ಹೇಳಬೇಕೆಂದರೆ ನನ್ನದು ಮಾಹಿತಿ, ತಂತ್ರಜ್ಞಾನ, ವಿಜ್ಞಾನದ ಡಿಪಾರ್ಟ್‌ಮೆಂಟು. ಹೀಗಾಗಿ ನನ್ನ ಹಬ್ಬದ ದಿನದಂದಾದರೂ ಜನರಲ್ಲಿ ಅರಿವನ್ನು ಹೆಚ್ಚಿಸುವ, ಮಾಹಿತಿ ನೀಡುವ, ವೈಜ್ಞಾನಿಕ ಮನೋಭಾವನೆಯನ್ನು ಬೆಳೇಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ. ಮೂಢನಂಬಿಕೆಗಳನ್ನು ಪೋಷಿಸುವ, ಮೌಢ್ಯ ಆಚರಣೆಗಳನ್ನು ವೈಭವೀಕರಿಸುವ, ಕಂದಾಚಾರ, ಶೋಷಣೆಗಳನ್ನು ಬೆಂಬಲಿಸುವ, ಜನರನ್ನು ತಪ್ಪು ದಾರಿಗೆಳೆಯುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿಕ್ಕೆ ಇಡೀ ವರ್ಷವೇ ಇದೆ. ಏನಂತೀರಿ? ಇದರ ಬಗ್ಗೆ ಸ್ವಲ್ಪ ಆಲೋಚಿಸಿ. ಆ ಜೋತಿಷಿಗಳನ್ನು ಆ ದಿನ ಸ್ವಲ್ಪ ದೂರವಿರುವುದಕ್ಕೆ ಹೇಳಿ…

ಮತ್ತೇನೂ ಇಲ್ಲ. ಹಬ್ಬಕ್ಕೆ ಬಂದಾಗ ಉಳಿದದ್ದನ್ನು ಮಾತಾಡೋಣ. ಸಾಧ್ಯವಾದರೆ ಆಯ್ದ ಕೆಲವು ಸುದ್ದಿ ಸಂಸ್ಥೆಗಳಿಗೆ ಸಂದರ್ಶನವನ್ನು ನೀಡುತ್ತೇನೆ. ನಿಮ್ಮಲ್ಲರ ಪ್ರೀತಿ ಹೀಗೇ ಇರಲಿ.

ಇಂತಿ,
ನಿಮ್ಮ ವಿನಾಯಕ (vnk.gaja@gmail.com)

[ಈ ಇ-ಮೇಲ್‌ನ್ನು ಓದಿದ ನಗೆ ಸಾಮ್ರಾಟರು ವಿನಾಯಕನೊಂದಿಗೆ ಸಂದರ್ಶನಕ್ಕೆ ಏರ್ಪಾಟು ಮಾಡಲು ಓಡಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ]

ಬಾಬಾ ತೆರೆದದ್ದು ಒಂದೇ ಕಣ್ಣೇ?!

19 ಜುಲೈ

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಬೆಂಗಳೂರಿನ ಬಸವನಗುಡಿಯ ಸಮೀಪದ ಗವಿಗಂಗಾಧರೇಶ್ವರ ನಗರದ ಮನೆಯೊಂದರಲ್ಲಿ ವಿಸ್ಮಯ ನಡೆದಿರುವುದು ವರದಿಯಾಗಿದೆ. ಶಿರಡಿ ಸಾಯಿ ಬಾಬಾರ ಮಣ್ಣಿನ ಮೂರ್ತಿಯೊಂದು ಸರಿಯಾಗಿ ಗುರುವಾರದ ಗುರು ಪೌರ್ಣಮಿಯಂದು ಎಡಗಳನ್ನು ತೆರೆದಿದೆ! ಅದನ್ನು ಸಾಯಿಬಾಬಾ ಕೃಪಾಕಟಾಕ್ಷ ಎಂದುಕೊಂಡು ಭಕ್ತರು ದಾಂಗುಡಿ ಇಡುತ್ತಿದ್ದಾರೆ, ನಾಸ್ತಿಕರು ಉಡಾಫೆಯಿಂದಲಾದರೂ ಒಮ್ಮೆ ನೋಡಿಕೊಂಡು ಬರಲು ಸಾಲು ನಿಂತಿದ್ದಾರೆ. ಟಿವಿ ಚಾನಲ್‌ಗಳು ಸಿಕ್ಕಿತೆಮಗಿಂದು ರಸಗವಳ ಎಂದುಕೊಂಡು ನಾಲ್ಕು-ಐದು ತಾಸು ತಮ್ಮನ್ನು ಹರಾಜು ಹಾಕಿಕೊಂಡಿವೆ. ಪತ್ರಿಕೆಗಳು ಜನಮರುಳೋ, ಜಾತ್ರೆ ಮರುಳೋ ಸಂಪಾದಕರಿಗೆ ಮರುಳೋ ತಿಳಿಯದೆ ಕಂಗಾಲಾಗಿವೆ. ಈ ಮಧ್ಯೆ ಸುದ್ದಿಯ ಆಜುಬಾಜುಗಳನ್ನು ತಡಕಿ ವರದಿ ಮಾಡುವ ನಗೆ ಸಾಮ್ರಾಟರು ಸಾಯಿ ಬಾಬಾ ತೆರೆದದ್ದು ಒಂದೇ ಕಣ್ಣನ್ನೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಯಿಬಾಬಾ ಒಂದೇ ಕಣ್ಣು ತೆರೆದದ್ದು ಏಕೆ ಎಂದು ತಮ್ಮೆರಡು ಕಣ್ಣುಗಳ ಮೇಲೆ ಚಾಳೀಸು ಏರಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ತನಿಖೆಗೆ ಹೊರಟಿದ್ದ ನಗೆ ಸಾಮ್ರಾಟರು ತಮ್ಮ ಎಂದಿನ ಚಾಕಚಕ್ಯತೆಯಿಂದ ತನಿಖೆಗೆ ತಯಾರಿ ಮಾಡಿಕೊಂಡರು. ಉದ್ಗ್ರಂಥಗಳನ್ನು ಓದಿ, ದೊಡ್ಡವರನ್ನು ಮಾತನಾಡಿಸಿ ವಿಷಯ ಸಂಗ್ರಹಿಸುವುದು ಅವರ ವಾಡಿಕೆ. ಹಿಂದೊಮ್ಮೆ ಯಾರೋ ಬುದ್ಧಿವಂತರು ಲಂಕೇಶರ ಬಗ್ಗೆ ಹೇಳಿದ್ದು ಗಮನಕ್ಕೆ ಬಿತ್ತು. ಅಡಿಗರ ಕಾವ್ಯವನ್ನು ಮೆಚ್ಚಿ ಲಂಕೇಶರು ಅಡಿಗರು ನನ್ನ ಕಣ್ಣ ತೆರೆಸಿದರು ಎಂದು ಹೇಳಿಕೊಂಡಿದ್ದರು. ಅದಕ್ಕೆ ಟಾಂಗು ಕೊಟ್ಟ ಮಹಾಶಯರಾರೋ ಅಡಿಗರು ತೆರೆಸಿದ್ದು ಲಂಕೇಶರ ಒಂದೇ ಕಣ್ಣನ್ನೇ ಎಂದು ಗೇಲಿ ಮಾಡಿದ್ದರು, ಡಯಾಬಿಟಿಸ್ ಅವರಿಗೆ ಕರುಣಿಸಿದ ಒಂಟಿ ಕಣ್ಣನ್ನು ಹೀಯಾಳಿಸಿ. ಬಹುಶಃ ಈ ಸಂಗತಿ ತನಿಖೆಯಲ್ಲಿ ಸಹಾಯವಾಗಬಹುದು ಎಂದು ಸಾಮ್ರಾಟರು ನೋಟ್ ಮಾಡಿಟ್ಟುಕೊಂಡರು.

ಸಾಮ್ರಾಟರು ಬ್ಲ್ಯಾಕ್ ಟಿಕೆಟ್ಟು ತೆಗೆದುಕೊಂಡು ಪೊಲೀಸರಿಗೆ ಬೆಚ್ಚಗೆ ಮಾಡಿ ಸಾಲಿನಲ್ಲಿ ಮುಂದಕ್ಕೆ ಹಾರಿ ಬಸವನಗುಡಿಯ ಆ ಮನೆಗೆ ಹೋಗಿ ಶಿರಡಿ ಬಾಬಾರ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತರು. ಒಮ್ಮೆಗೆ ಸಾಯಿ ಬಾಬಾ ಕಣ್ಣು ಮಿಟುಕಿಸಿದಂತೆ ಭಾಸವಾಗಿ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಂತಾಯ್ತು. ಸಾವರಿಸಿಕೊಂಡು ವಿಗ್ರಹದ ಆಜುಬಾಜು ಪರೀಕ್ಷಿಸಲು ಮುಂದಾದರು. ಏನೂ ಕಾಣಲಿಲ್ಲ. ಇನ್ನೂ ಹೆಚ್ಚು ಪ್ರಯತ್ನ ಪಟ್ಟರೆ ಅಲ್ಲಿನ ಭಕ್ತರು-ಆದಿಗಳು ತಮ್ಮನ್ನು ಚಚ್ಚಿ ಬದನೇಕಾಯಿ ಮಾಡುತ್ತಾರೆಂಬ ಎಚ್ಚರದಿಂದ ತಣ್ಣಗೆ ಕುಳಿತು ಯೋಚಿಸಲು ಶುರು ಮಾಡಿದರು. ಥಟ್ಟನೆ ಸಾಮ್ರಾಟರಿಗೆ ಒಕ್ಕಣ್ಣು ಶುಕ್ಲಾಚಾರ್ಯರ ನೆನಪಾಯಿತು. ಕೃಷ್ಣನ ಕೈಲಿ ದರ್ಭೆಯಿಂದ ಚುಚ್ಚಿಸಿಕೊಂಡು ಒಂದು ಕಣ್ಣು ಕುರುಡಾಗಿಸಿಕೊಂಡ ಆ ಆಚಾರ್ಯರನ್ನು ಒಕ್ಕಣ್ಣು ಶುಕ್ಲಾಚಾರ್ಯರು ಎಂದು ಕರೆಯಲು ಶುರುವಾಯಿತು. ಬಹುಶಃ ಈ ಬಾಬಾರಿಗೂ ಎರಡು ಕಣ್ಣುಗಳಿದ್ದು ಒಂದು ಕಣ್ಣನ್ನು ಭಕ್ತರ ಭಕ್ತಿ ಏನಾದರೂ ಮುಚ್ಚಿಸಿಬಿಟ್ಟಿದೆಯಾ ಎಂದು ಸಾಮ್ರಾಟರಿಗೆ ಸಂಶಯ ಬಂತು. ಹತ್ತಿರದಲ್ಲಿ ಅಂಥ ಭಕ್ತರು ಯಾರಾದರೂ ಇದ್ದಾರೆಯಾ ಎಂದು ಹುಡುಕಿಸಿದರು. ಪ್ರಯೋಜನವಾಗಲಿಲ್ಲ. ಆ ಆಯಾಮವನ್ನು ಕೊಂಚ ಬದಿಗಿಟ್ಟು ಯೋಚಿಸಲು ಶುರು ಮಾಡಿದರು.

ಹಿಂದೊಮ್ಮೆ ಗಣೇಶ ಹಾಲು ಕುಡಿದ ಪವಾಡ ಕಾಳ್ಗಿಚ್ಚಿನಂತೆ ವ್ಯಾಪಿಸಿದ್ದಾಗ ನಗೆ ಸಾಮ್ರಾಟರು ತನಿಖೆ ಕೈಗೊಂಡು ಸತ್ಯಾಂಶವನ್ನು ಬಯಲು ಮಾಡಿದ್ದರು. ಗಣೇಶ ಬರೀ ಹಾಲು ಕುಡಿಯುತ್ತಾನೆ ಎಂಬುದು ಭಕ್ತ ಜನರು ಹಬ್ಬಿಸಿರುವ ವದಂತಿ. ಆತ ನೀರನ್ನೂ ಕುಡಿಯುತ್ತಾನೆ, ಪೆಪ್ಸಿ ಕೋಲಗಳನ್ನೂ ಕುಡಿಯುತ್ತಾನೆ, ಒಟ್ಟಿನಲ್ಲಿ ದ್ರವವಾದ ಏನನ್ನಾದರೂ ಕುಡಿಯುತ್ತಾನೆ ಎಂದು ಸಾಮ್ರಾಟರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದರು.(ಆದರೆ ಆ ವರದಿಯ ಲಿಂಕನ್ನು ಕೊಡೋಣವೆಂದರೆ ಭಕ್ತಾದಿಗಳನ್ನು ಅದನ್ನು ಎಗರಿಸಿ ಬಿಟ್ಟಿದ್ದಾರೆ!) ಈಗ ಬಾಬಾ ಪವಾಡದ ಹಿಂದಿನೆ ರಹಸ್ಯವನ್ನು ಬೇಧಿಸಲು ತಿಣುಕಿ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಕರೆಸಿಕೊಂಡರು.

ಕುಚೇಲ ಸಹ ‘ನವಗ್ರಹ’ ಟಿವಿಗಳ ಕಾಟದಿಂದ ಮೂರ್ತಿಯನ್ನು ತಪ್ಪಿಸಿ ಮೂಲೆಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದ. ಅನಂತರ ಏನೋ ಗೂಢವಾದದ್ದನ್ನು ಕಂಡು ಹಿಡಿದವನ ಹಾಗೆ ಮುಖವನ್ನು ಕೆಳಗೆ ಹಾಕಿಕೊಂಡ. ಏನೆಂದು ಕೇಳಿದರು ಸಾಮ್ರಾಟ್. ‘ಬಾಬಾ ಅಳುತ್ತಿದ್ದಾರೆ, ಅದೂ ಒಂದೇ ಕಣ್ಣಲ್ಲಿ’ ಎಂದ ಚೇಲ. ‘ಯಾಕಂತೆ ಕೇಳು’ ಪುಸಲಾಯಿಸಿದರು ಸಾಮ್ರಾಟ್. ‘ತಾನು ಭಕ್ತರ ಪ್ರೀತಿಗೆ ಮೆಚ್ಚಿ ಕೃಪಾಕಟಾಕ್ಷ ಬೀರೋಣ ಅಂದುಕೊಂಡು ಎರಡೂ ಕಣ್ಣು ತೆರೆಯುವವನಿದ್ದೆ. ಒಂದು ಕಣ್ಣು ತೆರೆಯುತ್ತಿದ್ದ ಹಾಗೆಯೇ ಭಕ್ತರು ನನಗೆ ನಮಿಸುವುದನ್ನು ಮರೆತು ಟಿವಿಯವರಿಗೆ ಫೋನ್ ಮಾಡಲು ನುಗ್ಗಿದರು. ನನಗೆ ಗಾಬರಿಯಾಗಿ ಇನ್ನೊಂದು ಕಣ್ಣು ತೆರೆಯದೆ ಹಾಗೇ ಇಟ್ಟುಕೊಂಡಿರುವೆ. ಮೇಲಾಗಿ ಬೆಂಗಳೂರಿನ ಈ ಮಾಲಿನ್ಯಗೊಂಡ ಹವೆಯಲ್ಲಿ ಎರಡೂ ಕಣ್ಣು ತೆರೆದಿಡುವುದು ರಿಸ್ಕು ಅಲ್ಲವಾ?’ ಎಂದರಂತೆ ಬಾಬಾ. ಸಾಮ್ರಾಟರು ಕುತೂಹಲದಿಂದ ಕೇಳಿದ್ದನ್ನೆಲ್ಲಾ ನೋಟ್ ಮಾಡಿಟ್ಟುಕೊಂಡರು.

ಈ ಮಧ್ಯೆ ಬಾಬಾ ಒಂಟಿ ಕಣ್ಣನ್ನು ತೆರೆದಿರುವುದು ಸಂತೋಷಕ್ಕೋ ದುಃಖಕ್ಕೋ ಎಂದು ಭಕ್ತಾದಿಗಳು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೆಲವು ಲೌಕಿಕರು ಬಾಬಾ ಮೂರ್ತಿ ನೋಡುವುದಕ್ಕೆ ಫೀಸು ಜಾಸ್ತಿಯಾಯ್ತಲ್ಲವಾ ಎಂದು ಗೊಣಗುತ್ತಿದ್ದರು. ಇನ್ನೂ ಕೆಲವು ಉಗ್ರ ವ್ಯಗ್ರ ಭಕ್ತಾದಿಗಳು ಪತ್ರಕರ್ತರು, ಬುದ್ಧಿ ಜೀವಿಗಳು, ನಾಸ್ತಿಕರು, ವಿಚಾರವಾದಿಗಳು ಹಾಗೂ ವಿಜ್ಞಾನಿಗಳಿಗೆ ಪ್ರವೇಶವಿಲ್ಲ ಎಂದು ಒಂದು ಬೋರ್ಡನ್ನು ಬರೆಸುತ್ತಿದ್ದರು. ಕೆಲವೆಡೆ ಮುಗ್ಧ ಭಕ್ತರು ತಮ್ಮ ಮನೆಯ ಮೂರ್ತಿಗಳ ಮುಂದೆ ಕುಳಿತುಕೊಂಡು ‘ಒಂದು ಕಣ್ಣಾದರೂ ತೆರೆದು ಸೇವೆಯನು ಕೊಡು ಪ್ರಭುವೆ…’ ಎಂದು ಭಕ್ತಿರಸವನ್ನು ಹರಿಸಿ ಹಾಡುತ್ತಿದ್ದದ್ದು ಕಂಡು ಬಂದಿತು. ಕೆಲವು ತತ್ವಜ್ಞಾನಿಗಳು ಬಾಬಾ ಒಂದು ಕಣ್ಣು ತೆರೆದರೋ ಅಥವಾ ತೆರೆದಿದ್ದ ಎರಡು ಕಣ್ಣುಗಳಲ್ಲಿ ಒಂದನ್ನು ಮುಚ್ಚಿದರೋ ಎಂದು ಗಾಢವಾಗಿ ಸಮಾಲೋಚಿಸುತ್ತಿದ್ದರು. ಕೆಲವು ತುಂಟ ಪಡ್ಡೆಗಳು ಬಾಬಾ ಯಾರಿಗೆ ಕಣ್ಣು ಹೊಡೆಯುತ್ತಿದ್ದಾರೆ ಅಂತ ತನಿಖೆಗೆ ಇಳಿದುಬಿಟ್ಟಿದ್ದವು. ಇನ್ನೂ ಕೆಲವು ತರ್ಕ ಬುದ್ಧಿಗಳು ‘ಬಾಬಾ ಎರಡು ಕಣ್ಣು ತೆರೆದಿಲ್ಲ. ಇಲ್ಲೇ ಇರೋದು ಲಾಜಿಕ್! ಎರಡೂ ಕಣ್ಣು ತೆರೆದಿರುವ ವಿಗ್ರಹಗಳು ಸಾವಿರಾರು ಸಿಕ್ಕುತ್ತವೆ. ಜನರ್ಯಾರೂ ಅವುಗಳ ಹಿಂದೆ ಬೀಳುವುದಿಲ್ಲ. ಆದರೆ ಒಂದೇ ಕಣ್ಣು ತೆರೆದರೆ ಅಲ್ಲವೇ ಜನರನ್ನು ಸೆಳೆಯುವುದಕ್ಕೆ ಆಗುವುದು?’ ಎಂದು ಮೆಲ್ಲಗೆ ಪಕ್ಕದವನಲ್ಲಿ ಪಿಸುಗುಟ್ಟುತ್ತಿದ್ದ. ದೂರದಲ್ಲಿ ಕುಳಿತಿದ್ದ ವೇದಾಂತಿ, ‘ಪ್ರತಿ ಬೆಳಗು, ಪ್ರತಿ ಇರುಳು, ಸುಯ್ವ ತಂಗಾಳಿ ಎಲ್ಲವೂ ದೇವರ ಪವಾಡ ಅದನ್ನು ನೋಡಿ ಪರವಶವಾಗುವ ಬದಲು ಜನ ಇಲ್ಲಿ ಸಾಲುಗಟ್ಟಿ ತೂಕಡಿಸುತ್ತಿದ್ದಾರೆ’ ಎಂದು ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದ.

ಸಾಮ್ರಾಟರು ತಿಣುಕಿ, ಚಡಪಡಿಸಿ ಕೊನೆಗೂ ರಹಸ್ಯವನ್ನು ಬಯಲು ಮಾಡಿದರು. ಅದನ್ನು ಜಗಜ್ಜಾಹೀರುಗೊಳಿಸಲು ತೀರ್ಮಾನಿಸಿದ್ದಾರೆ. ಭಗವಂತನ ಸಂದೇಶವನ್ನು ಮಾನವ ಕುಲಕ್ಕೆ ತಿಳಿಸಲು ಬಯಸಿದ್ದಾರೆ. ಅವರ ವರದಿ ಹೀಗಿದೆ: ‘ವಿಜ್ಞಾನ ಹಾಗೂ ಆಧ್ಯಾತ್ಮ ಇವೆರಡು ನಿಸರ್ಗದ ಎರಡು ಕಣ್ಣುಗಳು. ಒಂದು ಕಣ್ಣು ಹೊರಗಿನದನ್ನು ನೋಡಲು. ವಿಜ್ಞಾನ ನಮಗೆ ಹೊರಗಿನ ಜಗತ್ತಿನ ಸಂಗತಿಗಳನ್ನು, ವಿಸ್ಮಯಗಳನ್ನು ನೋಡಲು ಸಹಾಯ ಮಾಡುತ್ತದೆ. ಇದರಿಂದ ಲೌಕಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇನ್ನೊಂದು ಕಣ್ಣು ಒಳಗಣ್ಣು. ಇದು ಆಧ್ಯಾತ್ಮದ ಕಣ್ಣು. ಇದು ನಮ್ಮೊಳಗನ್ನು ನಮಗೆ ದರ್ಶಿಸುವ ಕಣ್ಣು. ಇದರಿಂದ ಮನುಷ್ಯ ಮನೋಲೋಕದ ವಿಸ್ಮಯಗಳನ್ನು, ಮನಸ್ಸಿನ ಆಳ ಅಗಲಗಳನ್ನು, ತನ್ನ ಪ್ರಜ್ಞೆಯ ಮಹತ್ತನ್ನು ಕಾಣಬಹುದು. ಬಾಬಾ ಈ ಸಂದೇಶವನ್ನು ಸಾರುವುದಕ್ಕಾಗಿಯೇ ಒಂದು ಕಣ್ಣನ್ನು ತೆರೆದು ಮತ್ತೊಂದು ಕಣ್ಣನ್ನು ಮುಚ್ಚಿಕೊಂಡು ಕುಳಿತಿದ್ದಾರೆ.’

ಮಾನವನಿಗೆ ದೇವನ ಮೊರೆ!

10 ಜುಲೈ

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಜಗತ್ತಿನ ಸಮಸ್ತ ಲೌಕಿಕ ಸಂಗತಿಗಳ ಬಗ್ಗೆ ಹೆಕ್ಕಿ, ಹರಡಿ ವರದಿ ಮಾಡುವ ನಗೆ ಸಾಮ್ರಾಟರಿಗೆ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತು. ಯಾವುದೋ ಅಪರೂಪದ ವರದಿಯಿರಬೇಕೆಂದು ನಗೆ ಸಾಮ್ರಾಟರು ಹಿಗ್ಗಿದರು. ಹೀಗೆ ಅನಾಮಧೇಯ, ಅವಿಶ್ವಾಸನೀಯ, ಅಗೋಚರ ಸುದ್ದಿ ಮೂಲಗಳಿಂದ ಪಡೆದ ಸುದ್ದಿಯನ್ನು ರಸವತ್ತಾಗಿ ಪ್ರಕಟಿಸಿ ಕೊನೆಗೆ ಇದು ನಮ್ಮ ‘ನಂಬಲರ್ಹ’ ಮೂಲಗಳಿಂದ ಬಂದದ್ದು ಎಂದು ಹೇಳುವ ಸಂಪ್ರದಾಯವನ್ನು ಸಾಮ್ರಾಟರು ನಮ್ಮ ಮುಖ್ಯವಾಹಿನಿಯ ಸುದ್ಧಿ ಮಾಧ್ಯಗಳಿಂದ ಕಲಿತುಕೊಂಡಿದ್ದಾರೆ. ಗುರುವಿಲ್ಲದೆಯೇ, ಏಕಲವ್ಯನ ಥರ.


‘ಪ್ರಿಯ ಸಾಮ್ರಾಟ್!’ ಎಂದಿತು ಅತ್ತಲಿನ ದನಿ. ‘ನನ್ನ ದುಃಖ, ಸಂಕಟಗಳು ನಿನಗೆ ಮಾತ್ರ ತಿಳಿಯುತ್ತವೆ ಎಂದು ನಿನಗೆ ಫೋನ್ ಮಾಡಿರುವೆ.’

‘ಹೇಳಿ. ಏನಾಗಬೇಕಿತ್ತು. ನಾನು ಸದಾ ನಿಮ್ಮ ಸೇವೆಗೆ ಸಿದ್ದ, ಸಮರಕ್ಕೂ ಬದ್ಧ (ಅಯ್ಯೋ, ಅದು ಇಲ್ಲಿ ಬಳಸೋದಲ್ಲ, ಬಿಡಿ). ನೀವೇ ನಮ್ಮ ಓದುಗ ಮಹಾಶಯರು.’ ಪೀಟಿಕೆ ಹಾಕಿದರು ಸಾಮ್ರಾಟರು ಸುದ್ದಿಯನ್ನು ಪೀಕಲು.

‘ನಾನು ನಗೆ ನಗಾರಿಯ ಸ್ಕೂಪ್ ವರದಿಗಳನ್ನ ಆಗಾಗ ನಮ್ಮ ಗಣೇಶ್‌ನ ಲ್ಯಾಪ್‌ಟಾಪಿನಲ್ಲಿ ಓದುತ್ತಿರುತ್ತೇನೆ. ಅದಕ್ಕಾಗಿಯೇ ನಿಮ್ಮನ್ನು ಸಂಪರ್ಕಿಸಿದ್ದು. ಬೇರೆಯವರ ಬಳಿಗೆ ನಾನು ಹೋಗಬಹುದಿತ್ತು. ಆದರೆ ಅವರು ನಾನು ಹೇಳಿದ್ದನ್ನು ಇನ್ನು ಹೇಗೋ ತಿರುಚಿ ಬರೆದು ಅದು ಕ್ಯಾತೆಯಾಗಿ ಆಮೇಲೆ ನಾನು ಪತ್ರಿಕೆಗಳಿಗೆ ಮಾತಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಆಮೇಲೆ ಪ್ರಚಾರ ಬೇಕಾದಾಗ ಅದನ್ನು ಮುರಿಯುವುದು… ಇವೆಲ್ಲಾ ಸರಿ ಕಾಣಲಿಲ್ಲ.

‘ಹ್ಹಾ… ವಿಷಯಕ್ಕೆ ಬರುತ್ತೀನಿ. ನಾನು ದೇವರು. ನಾನು ಒಬ್ಬನೇ ಅಂತೆ, ನನಗೆ ನೂರು ನಾಮಗಳು ಎನ್ನುತ್ತಾರೆ ನನ್ನ ಭಕ್ತರು. ಆದರೆ ಒಬ್ಬೊಬ್ಬರೂ ನನಗೆ ನೂರು ನೂರು ‘ನಾಮ’ಗಳನ್ನು ತಿಕ್ಕುತ್ತಿದ್ದಾರೆ. ನನ್ನ ಸಂಕಟಗಳನ್ನು ಕೇಳುವವರು ಗತಿಯಿಲ್ಲ.

‘ನನ್ನ ಗೋಳು ಹೇಳುತ್ತಾ ಹೋದರೆ ಇಲ್ಲಿ ಮೊಬೈಲ್ ಬಿಲ್ಲು ಜಾಸ್ತಿ ಬರಬಹುದು ಎಂದು ಸುಬ್ರಹ್ಮಣ್ಯ ಎಚ್ಚರಿಸುತ್ತಿದ್ದಾನೆ. ಅದಕ್ಕೆ ಒಂದೇ ಒಂದು ಸಂಗತಿಯನ್ನು ಹೇಳುತ್ತೇನೆ. ಈ ಜನರು ನನ್ನ ಮೂರ್ತಿ ಎಂದು ಎಲ್ಲಿಂದಲೇ ತಂದ ಕಲ್ಲನ್ನು ಸಮನಾಗಿ ಕಟೆದು ದೇವಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕೆಲವೊಮ್ಮೆ ಭೂಮಿಯಲ್ಲಿತುವ ಯಾವುದೋ ಕಲ್ಲನ್ನು ದೇವರು ಎಂದು ಉದ್ಭವ ಮೂರ್ತಿಯಾಗಿಸುತ್ತಾರೆ. ಅಸಲಿಗೆ ನಾನು ಬ್ರಹ್ಮಾಂಡದ ಎಲ್ಲಾ ಕಲ್ಲು, ಬಂಡೆ, ಮಣ್ಣು, ಚರಾಚರ ಜೀವಿಗಳಲ್ಲಿ ಇದ್ದೇನೆ. ಆದರೆ ಇವರು ಸಾಂಕೇತಿಕವಾಗಿ ಒಂದು ಕಲ್ಲನ್ನು ದೇವರು ಅಂದಾಗ ನಾನೇನು ಬೇಡ ಅನ್ನಲಿಲ್ಲ. ಕಲ್ಲಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ಸುರಿಯುತ್ತಾರೆ. ನಾನು ಅವರಿಗೆ ಇದೆಲ್ಲಾ ಏನಕ್ಕಯ್ಯಾ? ನಿಮ್ಮ ಮಧ್ಯೆಯೇ ಹಸಿವು, ನೀರಡಿಕೆ ಇರುವಾಗ ಮೊದಲು ಅದನ್ನು ತಣಿಸಿಕೊಳ್ಳಿ ನನಗ್ಯಾಕೆ ಎಂದು ಹೇಳಬೇಕೆನ್ನಿಸಿದರೂ ಸುಮ್ಮನಾದೆ.

‘ಆದರೆ ಈ ಒಂದು ಸಂಗತಿಯ ಬಗ್ಗೆ ಹೇಳಲೇಬೇಕು. ಇದು ನನಗೆ ವಿಪರೀತ ಕಿರಿಕಿರಿ ಮಾಡುತ್ತಿದೆ. ಈ ಜನರಿಗೆ ನನಗೆ ಹೂವಿನ ಮಾಲೆಯನ್ನಾಗಲೀ, ಬಿಡಿಹೂಗಳ ಅಲಂಕಾರವನ್ನಾಗಲೀ, ಚಿನ್ನದ ಬೆಳ್ಳಿಯ ತೊಡುಗೆಗಳನ್ನಾಗಲೀ ಹಾಕಬೇಡಿ ಎಂದು ಆಗ್ರಹಿಸಬೇಕು.

‘ಏಕೆ ಅನ್ನುತ್ತೀರಾ? ನೋಡಪ್ಪಾ, ನೂರಾರು ನಮೂನೆಯ ಹೂಗಳನ್ನು ತಂದು ಕಲ್ಲ ಮೇಲೆ ಜೋಡಿಸಿ ದೇವರಿಗೆ ಅಲಂಕಾರ ಮಾಡಿದೆವು ಅಂದುಕೊಳ್ತಾರೆ. ನಾನೂ ಅವರ ಮೇಲಿನ ಮಮತೆಗೆ ಕಲ್ಲೊಳಗೆ ಬಂದು ಕುಳಿತರೆ ಕಾಣುವುದು ಏನು? ಬರೀ ಹೂಗಳ ತುಂಬುಗಳು! ಚಿನ್ನದ ತೊಡುಗೆ, ಒಡವೆಯ ಹಿಂಬದಿಯನ್ನು ನಾನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು. ಹುಂಡಿಗೆ ದುಡ್ಡು ಹಾಕಲು ಬರುವವರ ಕಣ್ಣುಗಳಿಗೆ ತಂಪು ಕೊಡುವ ಅಲಂಕಾರ. ಈ ದೇವಸ್ಥಾನದವರಿಗೆ ದೇವರಾದ ನನಗಿಂಥಾ ಹುಂಡಿಗೆ ಹಾಕುವ ಭಕ್ತ-ಯ್ಗ್ಗಿಗಳೇ ಮುಖ್ಯವಾದರಾ? ಸರಿ, ಏನೋ ಹುಚ್ಚಾಟ ಮಾಡಿಕೊಳ್ಳಲಿ, ನಾನೇ ಆ ಭಕ್ತರ ಕಣ್ಣುಗಳನ್ನು ಸೇರಿ ನನ್ನ ಅಲಂಕಾರವನ್ನು ನೋಡೋಣ ಎಂದುಕೊಂಡರೆ ಅದೂ ಸಾಧ್ಯವಿಲ್ಲ.

‘ಹೂಂ, ಹೇಳ್ತೇನೆ ಇರು. ಜಗತ್ತಿನ ಬೇರೆಲ್ಲಾ ವಸ್ತು, ಜೀವಿಗಳಲ್ಲಿ ನಾನು ವಾಸವಿದ್ದೇನೆ. ನಾನು ಯಾವುದನ್ನಾದರೂ ಪ್ರವೇಶಿಸಬಹುದು. ಆದರೆ ಈ ಮನುಷ್ಯನನ್ನು ಮಾತ್ರ ನಾನು ಪ್ರವೇಶಿಸಲಾಗದು. ಆತ ತನ್ನ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಅದಕ್ಕೇ ನಾನು ಅವನ ಕಣ್ಣು ಸೇರಿ ನನ್ನ ಅಲಂಕಾರ ನೋಡಲಾಗದು.

‘ನನಗೊಂದು ಸಹಾಯ ಮಾಡಪ್ಪ. ನೀನು ಜನರಿಗೆ ಇನ್ನು ಮುಂದೆ ದೇವರಿಗೆ ಯಾವ ಹೂವು, ಹೂಹಾರ, ಫಲ, ಪತ್ರೆ, ಒಡವೆ, ಕವಚಗಳ ಅಲಂಕಾರ ಬೇಡವಂತೆ ಎಂಬ ಸಂದೇಶವನ್ನು ತಲುಪಿಸಿಬಿಡಪ್ಪ. ನೀನು ನನ್ನ ಆಶಯದ ‘ಆವರಣ’ದಲ್ಲಿ ನಿನ್ನ ಆಶಯವನ್ನು ತುಂಬಿ ಹೂರಣವನ್ನು ಕೆಡಿಸಿ ವರದಿ ಮಾಡುವುದಿಲ್ಲ ಅನ್ನೋ ನಂಬಿಕೆ ನನಗಿದೆ.

‘ಸರಿಯಪ್ಪ, ಸುಬ್ರಹ್ಮಣ್ಯ ಎಚ್ಚರಿಸ್ತಾ ಇದ್ದಾನೆ. ಇಡಲಾ ಫೋನು. ದೇವರು ನಿನಗೆ ಒಳ್ಳೆಯದು ಮಾಡಲಿ’

‘ಫೋನಿ’ಗನ ಮಾತಿನ ಕೊನೆಯ ಸಾಲನ್ನು ಕೇಳಿ ಸಾಮ್ರಾಟರಿಗೆ ದಿಗ್ಧರ್ಶನವಾದ ಹಾಗಾಗಿ ಜ್ಞಾನೋದಯವಾಗಿದೆ. ಮಠ, ಮಂದಿರ, ಬದುಕಿನ ಆರ್ಟು, ‘ಕಾಮ’ರ್ಸು ಕಲಿಸುವ ಶಾಲೆ ತೆರೆಯುವ ಉದ್ದೇಶವಿರುವವರು ಆವಶ್ಯಕವಾಗಿ ಸಂಪರ್ಕಿಸಬಹುದು.