Archive | December, 2010

ಭಗವಾನ್ ನಿತ್ಯ ಸಾಯಿ ಬಾಬಾ ಸಂದರ್ಶನ!

3 Dec

ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿ ವಿಶ್ವ ಎಂದರೆ ಭೂಮಿಯನ್ನು ಸೇರಿಸಿಕೊಂಡು ಅಸಂಖ್ಯಾತ ತಾರೆ, ಗ್ರಹಗಳು ಸೇರಿವೆ ಎಂದು ಅರ್ಥೈಸಿಕೊಳ್ಳಬೇಕು.

ಇಂತಹ ಅನಂತ ಸೃಷ್ಟಿಯಲ್ಲಿ ತೀರಾ ಕ್ಷುಲ್ಲಕ ಎಂದು ಪರಿಗಣಿಸಬಹುದಾದ ಸೂರ್ಯ ಎಂಬ ನಕ್ಷತ್ರದ ಸುತ್ತ ಪ್ರದಕ್ಷಿಣೆ ಹಾಕುವ ಗ್ರಹ ಭೂಮಿ. ಈ ಗ್ರಹವು ಸೂರ್ಯನಿಂದ ಅತ್ಯಂತ ಹಿತಕರವಾದ ಅಂತರದಲ್ಲಿ ಇರುವುದರಿಂದ ಇದರ ಮೇಲೆ ವಾಯುಪದರ ರೂಪುಗೊಳ್ಳಲು, ನೀರು ಉಕ್ಕಿ ಹರಿಯಲು, ಜೀವ ಅಂಕುರವಾಗಲು ಸಾಧ್ಯವಾಯಿತು. ಸುತ್ತಲಿನ ಎಲ್ಲಾ ಗ್ರಹಗಳು ಬಂಜೆಯಂತೆ ನರಳುತ್ತಿದ್ದರೆ ಭೂಮಿ ಹಸಿರು ಹಾಗೂ ಉಸಿರಿನಿಂದ ನಳನಳಿಸುತ್ತಿತ್ತು.

ಹೀಗೆ ಉತ್ಪನ್ನವಾದ ಜೀವಿಗಳಲ್ಲಿ ಲಕ್ಷಾಂತರ ಪ್ರಬೇಧ. ಇವುಗಳಲ್ಲಿ ಒಂದು ಬಗೆಯ ಜೀವಿ ಮನುಷ್ಯ. ಈ ಮನುಷ್ಯರಲ್ಲಿ ನಾನಾ ವಿಧ. ಇಂತಹ ವ್ಯತ್ಯಾಸಗಳಲ್ಲಿ ಒಂದು ವರ್ಗ ಹಿಂದೂ. ಇವರಲ್ಲಿ ಹಲವು ಪ್ರಬೇಧಗಳಲ್ಲಿ ಒಂದು: ವಿಷ್ಣು ಆರಾಧಕರು.

ಇವರ ಪ್ರಕಾರ ಜಗತ್ತಿನ ಸೃಷ್ಟಿಕರ್ತನಾದ ದೇವನು ಈ ಭೂಮಿಯೆಂಬ ಗ್ರಹದ ಮೇಲಿನ ಮಾನವನ ವ್ಯವಹಾರಗಳಲ್ಲಿ ವಿಪರೀತ ಆಸಕ್ತನು. ಮನುಷ್ಯನು ದುಷ್ಟ ಮಾರ್ಗಕ್ಕೆ ಇಳಿದಾಗಲೆಲ್ಲಾ ತಾನೇ ಅವತರಿಸಿ ಇಲ್ಲವೇ ತನ್ನ ಅಂಶಗಳನ್ನು ಮನುಷ್ಯರಲ್ಲಿ ತುಂಬಿ ಕಳಿಸಿ ಮಾನವ ವ್ಯವಹಾರಗಳಲ್ಲಿ ಋಜುತ್ವವನ್ನು ಏರ್ಪಾಡು ಮಾಡುತ್ತಾನೆ.

ಇಂತಹ ಅವತಾರಗಳಲ್ಲಿ ಒಬ್ಬರಾದ ಭಗವಾನ್ ನಿತ್ಯ ಸಾಯಿ ಬಾಬಾರವರು ತಮ್ಮ ಅವತಾರದ ಎಂಬತ್ತೈದನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ (ಭಕ್ತರು ಆಚರಿಸಿದ್ದಾರೆ ಎನ್ನುವುದು ಸೂಕ್ತ). ಮಾಧ್ಯಮದೊಂದಿಗೆ ಎಂದೂ ಮಾತನಾಡಲು ಇಚ್ಛಿಸಿದ ಭಗವಾನ್ ನಗೆ ನಗಾರಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಅಭೂತಪೂರ್ವ ಸಂದರ್ಶನ ಅತ್ಯಂತ ಶೀಘ್ರದಲ್ಲಿ ನಗೆ ನಗಾರಿಯಲ್ಲಿ ಪ್ರಕಟವಾಗಲಿದೆ! ನಿರೀಕ್ಷಿಸಿ…

Follow

Get every new post delivered to your Inbox.

Join 35 other followers