ನಮ್ಮೂರ ಹಿರಿಯ, ಮುದಿಯ ವಾಸನೆ ಗೌಡಪ್ಪನವರ ನೇತೃತ್ವದಲ್ಲಿ ಗಣಪತಿ ಕಲಕ್ಷನ್ ಅಂತೂ ಮಾಡಿದ್ದಾಯಿತು. ನೋಡಿದ್ರೆ 20ಸಾವಿರನೂ ಆಗಿರಲಿಲ್ಲ. ಆದರೆ ಪಾಂಪ್ಲೇಟ್ ನಲ್ಲಿ ಭಾರೀ ಆರ್ಕೆಸ್ಟ್ರಾ ಅಂತಾ

ಹಾಕಿಸಿದೀವಿ. ಏನು ಮಾಡೋದು ಅಂತಾ ಯೋಚನೆ ಮಾಡ್ತಾ ಇದ್ದಾಗೆನೇ. ನಮ್ಮ ಗೌಡಪ್ಪ ನೋಡ್ರಲಾ ಪ್ರತೀ ವರ್ಸ ಗಣಪತಿ ಹಬ್ಬ ಬತ್ತದೆ. ಯಾಕಲಾ ಸುಮ್ನೆ ಆರ್ಕೆಸ್ಟ್ರದೋರಿಗೆ ಅಂತಾ ದುಡ್ಡು ಕೊಡೋದು ನಾವೇ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿದ್ದರೆ ಹೆಂಗಲಾ ಅಂದ. ಮತ್ತೆ ಅದಕ್ಕೆ ಬೇಕಾದ ವಾದ್ಯಗಳು ಅಂದ ಸುಬ್ಬ. ನಾ ಎಲ್ಲಾ ಮಾತ್ತೀನಿ ನೀವು ರೆಡಿಯಾಗಿರಿ ಅಂದು ನಿಂಗನ ಅಂಗಡೀಲಿ ಅರ್ಧ ಚಾ ಕುಡಿದು ತಲೆ ಮ್ಯಾಕೆ ಟವಲ್ ಹಾಕ್ಕಂಡ್ ಹೊಂಟ.
ಸರಿ ಆ ತಂಡದಾಗ ಸುಬ್ಬ, ನಿಂಗ, ಕಟ್ಟಿಗೆ ಕಿಸ್ನ, ದೊನ್ನೆ ಸೀನ, ಸುಬ್ಬಿ (ಲೇಡಿ ಸಿಂಗರ್), ಗೌಡಪ್ಪ (ಆಂಕರ್), ಕೋರಸ್ ಗೆ ಗೌಡಪ್ಪನ ಇಬ್ಬರು ಹೆಂಡರು ಎಲ್ಲಾ ರೆಡಿ ಮಾಡಿಕೊಂಡು ಗೌಡಪ್ಪನ ತೋಟದ ಮನ್ಯಾಗೆ ಪ್ರಾಕ್ಟೀಸ್ ಸುರು ಮಾಡಿದ್ವಿ. ಮೊದಲಿಗೇನೇ ಎಲ್ಲಾ ಒರಿಜಿನಲ್ ಸಾಮಾನು ಬಳಸಿದ್ರೆ ಹಾಳಾಯ್ತದೆ ಅಂತಾ ಬಕ್ಕಿಟ್ಟು, ಚೊಂಬು ಹಿಂಗೆ ಬೇರೆ ಬೇರೆ ವಾದ್ಯಗಳಿಗೆ ಬಾರಿಸೋದನ್ನ ಪ್ರಾಕ್ಟೀಸ್ ಮಾಡಿದ್ವಿ. ಚೊಂಬು ಅನ್ನೋದು ತಟ್ಟೆ ಆದಂಗೆ ಆಗಿತ್ತು. ಮಗಾ ಸುಬ್ಬ ಮಂಚದ ಕಾಲ್ನಾಗೆ ಬಾರಿಸಿದ್ದ. ಇದನ್ನ ಹಳ್ಯಾಗೆ ಮಾಡಿದ್ರೆ ಸವಂಡ್ ಕೇಳಕ್ಕಾಗದೇ ಯಾರಾದರೂ ಬಂದು ಹೊಡೆದಾರು ಅಂತಾ ತೋಟದ ಮನ್ಯಾಗೆ ಮಾಡಿದ್ವಿ. ಹಸು ಎಲ್ಲಾ ಅಂಗೇ ಓಡೋವು. ಹಂಗೇ ಕೆರೆತಾವ ಹೋಗಕ್ಕೂ ಹತ್ತಿರ ಆಯ್ತದೆ ಅಂತಾ. ಸುಬ್ಬಿಗೆ ಹಲ್ಲು ಉಬ್ಬು ಇದ್ದುದರಿಂದ ಒಂದಿಷ್ಟು ಪದಗಳು ಹಂಗೇ ಗಾಳಿಗೆ ಹೋಗೋವು. ಆ ಟೇಮಿಗೆ ಡ್ರಮ್ಸ್ ಸವಂಡ್ ಜಾಸ್ತಿ ಮಾಡ್ತಿದ್ವಿ. ಗೌಡಪ್ಪ ಮಂಡ್ಯಾ ಭಾಸೆಯಾಗೆ ಮಾತಡೋನು. ನೀವು ಹಿಂಗೆ ಮಾತಾಡಿದರೆ ಮಲೆನಾಡಿನವು ಸ್ಟೇಜಿಗೆ ಬಂದು ಒದಿತಾವೆ ಅಂದೆ.
ಸರಿ ಡ್ರಮ್ಸ್ ಒರಿಜಿನಲ್ ತಂದರೆ ಕಾಸು ಜಾಸ್ತಿಯಾಗ್ತದೆ ಅಂತಾ ಮನ್ಯಾಗೆ ಇರೋ ಕುರಿ ಚರ್ಮನ್ನ ಮರದ ಬಾಕ್ಸ್ ಗೆ ಕಟ್ಟಿದ್ದ.ಅವಾಗವಾಗ ಬೆಂಕಿ ಕಾಯಿಸೋದೆ ನಮ್ಮ ಕೆಲಸ. ಕಿಸ್ನ ಒಂದು ಹತ್ತು ಹುಲ್ಲುಪಿಂಡಿ ಹಂಗೇ ಬೆಂಕಿ ಪಟ್ನ ಯಾವಾಗಲೂ ಮಡಿಕ್ಕಂಡು ಇರೋನು.
ಸರಿ ಒಂದು ಸ್ಯಾಂಪಲ್ ಕಾರ್ಯಕ್ರಮ ಮಾಡೋಣ ಅಂತಾ ಪಕ್ಕದ ಹಳ್ಳಿ ಯಲ್ಲಮ್ಮನ ಜಾತ್ರಾಗೆ ಕಮ್ಮಿ ರೇಟಿಗೆ ಅಂದ್ರೆ ಬರೀ ಬೈಟು ಚಾ ಕಾಸಿಗೆ ಒಪ್ಪಿಕೊಂಡು ಪ್ರೋಗ್ರಾಮ್ ಕೊಟ್ವಿ. ನಮ್ಮ ಖರ್ಚು, ಗಾಡಿ ಖರ್ಚು ಎಲ್ಲಾ ಗೌಡಪ್ಪನೇ ನೋಡಿಕೊಂಡಿದ್ದ. ಎಲ್ಲಾರಗೂ ಬಿಳೀ ಷರ್ಟು ಅಂಗೇ ನೀಲಿ ಪ್ಯಾಂಟು ಹಾಕಿಸಿದ್ದ. ಸರೀ ಕಾರ್ಯಕ್ರಮ ಸುರುವಾತು. ಎಂದಿನಂತೆ ನನ್ನ ಪ್ರಾರ್ಥನೆ, ಗಣಪತಿ ಮ್ಯಾಕೆ. ಸುಕ್ಲಾಂ ಭರದರಂ ವಿಷ್ಣುಂ ಸಸಿ ವರ್ಣಂ ಜಾಯೇ ಸರ್ವ ಇಜ್ಞೋಪ ಸಾಂತೇಯೇ.ಅಂದೆ. ಲೇ ಯಲ್ಲಮ್ಮನ ಮ್ಯಾಕೆ ಹೇಳಲೇ. ಯಲ್ಲಮ್ಮ ನಿನ್ನ ಮೇಲೆ ಆಲು ಕುದೋ, ಆಲು ಕುದೋ ಅಂದೆ. ಅಂಗೇ ಅಲ್ಲಿದ್ದ ಜನರಿಂದ ಕೋರಸ್ ಸುರುವಾಗೇ ಹೋತು. ಅರಿಸಿನ ಎರಚಿದ್ದೇ ಎರಚಿದ್ದು. ಸುಬ್ಬಿ ಸದ್ಯ ನಾನು ಬದುಕೊಂಡೆ ಅಂತು. ಯಾಕವ್ವಾ. ದೇವರು ಬಂದೈತೆ ಅಂತಾ ಬೇವಿನ ಸೊಪ್ಪು ಕಟ್ಟಿ ಮೆರವಣಿಗೆ ಮಾಡಸೋರು ನನ್ನನ್ನ ಅಂತು. ಗೌಡಪ್ಪ ಮೈಕ್ ಹಿಡಕಂಡು ಬಂದೋನೆ. ನಿಮ್ಮೆಲ್ಲರ ಮೆಚ್ಚಿನ ಆರ್ಕೆಸ್ಟ್ರಾ “ಸಿದ್ದೇಸ”, ಈಗ ಕೇಳಿ ಆಟೋ ರಾಜ ಶಂಕರ್ ನಾಗರ ಸಂತೋಷಕ್ಕೆ ಹಾಡು ಅಂದ.

ಆ ಊರ್ನಾಗೂ ಆಟೋದೋನು ಒಬ್ಬ ರಾಜ ಇದ್ನಂತೆ. ಸ್ಟೇಜಿಗೆ ಬಂದು ಮೈಕ್ ಕೊಡ್ರಿ ಅಂದ. ಯಾಕಲಾ. ಹಾಡು ಹೇಳ್ತೀನಿ. ಹೋಗಲಾ ನಾ ಹೇಳಿದ್ದು ಸಂಕರಣ್ಣನ ಬಗ್ಗೆ. ಸರೀ ಸುರುವಾತು. ಮೈಕ್ ಮಧ್ಯ ಮಧ್ಯ ಡೊಯಯಯಯಯಯಯ ಅನ್ನೋದು. ಸುಬ್ಬ ಅಂಗೇ ಹೇಳಿದ್ದೇ ಹೇಳಿದ್ದು. ನಿಂಗ ಗಿಟಾರ್ ಬಾರಿಸಿದ್ದೇ ಬಾರಿಸಿದ್ದು. ಸಾನೇ ದುಡ್ಡು ಕೊಟ್ರು ಜನ.ಅದಕ್ಕೆ ಹೊಡೆದಾಡೋವು.
ಹಾಡು ಮುಗಿದ ಮೇಲೆ ಮೈಕ್ ಸೆಟ್ ರಾಜ ಇಲ್ಲಿ ಎರಡು ಮೀಟರ್ ವೈರ್ ಮಡಗಿದ್ದೆ ಕಾಣಿಸ್ತಾ ಇಲ್ಲಾ ಅಂದ. ನೋಡಿದ್ರೆ ನಿಂಗ ಗಿಟಾರ್್ಗೆ ಚಕ್ಕೆ ತಗೊಂಡು ಬಾರಸವ್ನೆ. ತಂತಿ ಕಟ್ಟಾಗಿದ್ದಕ್ಕೆ. ರಾಜ ತಂದಿರೋ ಎರಡು ಮೀಟರ್ ವೈರನ ಇನ್ಸುಲೇಸನ್ ತೆಗೆದು ತಾಮ್ರದ ತಂತಿನ ಗಿಟಾರ್ ಗೆ ಹಾಕಿದ್ದ. ಬಾರಿಸಿದ್ರೆ ಢಣ್ ಅನ್ನೋದು. ಮಗಾ ಡ್ರಮ್ಸ್ ಬಾರಿಸೋ ದೊನ್ನೆ ಸೀನ ಅವಾಗವಾಗ ತಲೆಗೆ ನೀರು ಹಾಕ್ಕೊಂಡು ಬರೋನು. ಯಾಕಲಾ. ಗೌಡಪ್ಪ ಹೇಳವ್ನೆ. ನೀ ಡ್ರಮ್ಸ್ ಬಾರಿಸೋ ಬೇಕಾದ್ರೆ ತಲೆ ಅಲ್ಲಾಡಿಸಿದಾಗ ನೀರು ಬಿದ್ರೆ ಪೆಸೆಲ್ ಎಫೆಕ್ಟ್ ಆಯ್ತದೆ ಅಂತಾ. ಏ ಥೂ ಅಂದೆ. ಒಂದು ಹತ್ತು ಹಾಡು ಆಗೋ ಅಷ್ಟೊತ್ತಿಗೆ ಸೀನ ಯಾಕೋ ಮೈಯೆಲ್ಲಾ ಬಿಸಿ ಆಯ್ತದೆ ಅಂದಾ ನೋಡಿದ್ರೆ ಜ್ವರ ಬಂದಿತ್ತು. ನಿಂಗ ಚಾ ಕುಡಿಯೋಕ್ಕೆ ಅಂತಾ ಹೋದೋನು ಬಂದೇ ಇರ್ಲಿಲ್ಲ. ನೋಡಿದ್ರೆ ಯಾವುದೋ ಇಸ್ಕೂಲಿನ ಡ್ರೆಸ್ ನಮ್ಮ ಬಣ್ಣದ್ದೇ ಅಂತೆ. ಯಾಕೋ ಇವತ್ತು ಸಾಲೆಗೆ ಬಂದಿಲ್ಲಾ ಅಂತಾ ಹೆಡ್ ಮಾಸಟರು ಸರೀ 4ಬಾರಿಸಿದಾರೆ. ಆಮ್ಯಾಕೆ ಗೌಡಪ್ಪ ಏ ಇವನು ನಮ್ಮೋನು ಅಂದ್ ಮೇಲೆ ಬಿಟ್ಟು ಕಳಿಸಿದಾರೆ.
ಮೈಕ್ ರಾಜಂಗೆ ಸ್ಪೀಕರ್ ಬಾಕ್ಸ್ ಇಡಲೇ ಅಂದ್ರೆ. ಒಂದು ಹತ್ತು ಹಾರ್ನ್ ಕಟ್ಟಿದ್ದ. ಅದು ಒಳ್ಳೇ ಬೆಳಗ್ಗೆ ಹೊತ್ತು ಸಿದ್ದೇಸನ ಗುಡೀಲಿ ಭಕ್ತಿ ಗೀತೆ ಹಾಕಿದಂಗೆ ಕೇಳೋದು.
ಈಗ ಮಿನಿ ವಾಣಿ ಜಯರಾಂ ಸುಬ್ಬಿ ಅವರಿಂದ ಸಂದಾದ ಹಾಡು. ಲೇ ಪಿಚ್ಚರ್ ಹೆಸರು ಹೇಳಲೇ ಅಂದ್ವು ಗೌಡಪ್ಪಂಗೆ. ಜೀವನ ಚೈತ್ರ ಅಂದ. ಸರೀ ಸುಬ್ಬಿ ಸುರು ಹಚ್ಕಂತು. “ನೀ ಹಿಂಗೆ ನೋಡಬೇಡ ನನ್ನ, ನೀ ಹಿಂಗ ನೋಡಿದರೆ ನನ್ನ, ತಿರುಗಿ ನಾ ಹಿಂಗೆ ನೋಡುತೀನಿ ನಿನ್ನ” ಅಂತಾ ತಿರುಗಿ ನಿಂತ್ಕಂತು. ಏ ಥು. ಇದಕ್ಕೆ ಗೌಡಪ್ಪನ ಹೆಂಡರು ಕೋರಸ್ “ಆಆಆಆಆಆಆ ಊಊಊಊಊ” ಅಂತಾ. ಏ ಥೂ . ಇದೇನು ಸತ್ತಿರೋ ಮನೇನಾ ಅಂದಾ ಗೌಡಪ್ಪ. ತಂಬಿಟ್ಟು ರಾಮ ಕೀ ಪ್ಯಾಡ್ ನುಡಿಸ್ತಾ ಇದ್ದ. ಅವಾಗವಾಗ ಬಗ್ಗಿ ಏನೋ ಹುಡುಕೋನು. ಏನಲಾ. ಲೇ ಇದರಾಗೆ ಇದ್ದ ಬಟನ್ ಲೂಸ್ ಆಗಿ ಬಿದ್ದು ಹೋಗ್ಬಿಟ್ಟೈತೆ ಅಂದಾ. ಸರೀ ಒಂದು ಚಕ್ಕೆ ಕೊಟ್ವಿ ಅದರಾಗೆ ಒತ್ತು ಅಂತ. ಇನ್ನು ಸೀನ ಡ್ರಮ್ಸ್ ಬಾರಿಸೋಬೇಕಾದ್ರೆ ಕೋಲು ತಿರುಗಿಸಕ್ಕೆ ಹೋಗಿ ಒಂದು ಕೋಲು ಜನರ ಮಧ್ಯೆ ಬಿದ್ದೋತು. ಅವು ಚಾಟಿ ಮಾಡಕ್ಕೆ ಸಂದಾಗೈತೆ ಅಂತಾ ಹಂಗೇ ಮಡಿಕ್ಕಂಡಿದ್ವು. ಕಡೆಗೆ ಮುದ್ದೆ ಮಾಡೋ ಕೋಲು ತರಿಸಿಕೊಟ್ಟಿದ್ದಾತು. ಸೀನ ಡ್ರಮ್ಸ್ ಸವಂಡ್ ಕಮ್ಮಿ ಆಗೈತೆ ಅಂದಾ. ಅಂಗಂತಿದ್ದಂಗೆನೇ ಕಿಸ್ನ ಹುಲ್ಲು ಹಾಕಿ ಕಾಯಿಸಿ ಈಗ ಹೊಡೆಯಲಾ ಅಂದ. ಹೊಡೆದ್ರೆ ಹೆಣದ ಮೆರವಣಿಗೆ ಸವಂಡ್ ಬರೋದು. ಲೇ ಇದು ಕುಲದಲ್ಲಿ ಕೀಳ್ಯಾವುದೋ ಇದಕ್ಕೆ ಮಾತ್ರ ಹೊಂದ್ಕಂತದೆ ಕಲಾ ಅಂದ. ಪಟೇಲ ಲೇ ಗೌಡ ನಿನ್ನ ಹೆಂಡರ ಹತ್ರ ಡ್ಯಾನ್ಸ್ ಮಾಡ್ಸಲೇ ಅಂದ. ಅನಿವಾರ್ಯ, ಜೋಕೆ ಜೋಕೆ ನಾನು ಬಳ್ಳಿಯ ಮಿಂಚು ಅಂತಾ ಸುರು ಹಚ್ಕಂಡ್ವು. ಎಲ್ಡೇ ನಿಮಿಸ ಗೌಡಪ್ಪಂಗೆ ಯಾವನೋ ಬಂದು ದಬು,ದುಬು,ದಬು,ದುಬು ಅಂತಾ ಬಂದು ಹೊಡೆದಿದ್ದ. ಯಾರ್ರೀ ಗೌಡ್ರೆ, ಲೇ ನನ್ನ ಮಾವ ಕಲಾ ಅಂದ. ಗೌಡನ ಹೆಂಡರು ಮನೆಗೆ ಬಾ ಅಂದು ಹೋದ್ವು. ಸುಬ್ಬಿ ಹಾಡು ಹೇಳಿ ಹೇಳಿ ಬಾಯಿ ನೋಯ್ತಾ ಇದೆ ಅಂದ್ಲು. ಗೌಡಪ್ಪ ಒಂದು ಹತ್ತು ಕಟ್ಟು ಬೀಡಿ ಸೇದಿ ಕೆಮ್ತಾ ಕೂತಿದ್ದ . ಮಧ್ಯ ಚಾ ಕೊಟ್ಟಿದ್ದಕ್ಕೆ ಅವನ ದುಡ್ಡು ಲೆಸ್ ಮಾಡಿದ್ರು. ಹೊಗೆ ಕುಡಿದು ಕುಡಿದು ತಂತಿ ಪಕಡು ಸೀತು ಮೂಗು ಕಟ್ಕಂಡೈತೆ ಅನ್ನೋನು. ಸಂಜೆ 6ಕ್ಕೆ ಸುರುವಾಗಿದ್ದು, ಬೆಳಗ್ಗೆ 5ಆದ್ರೂ ಜನ ಅಂಗೇ ಕುಂತಿದ್ವು. ಲೇ ನಾವೇನೂ ಯಕ್ಸಗಾನ ಮಾಡ್ತೀದೀವೇನ್ಲಾ ಅಂದಾ ಸುಬ್ಬ.
ನೋಡಿದ್ರೆ ಯಲ್ಲಮನ ಜಾತ್ರಾಗೆ ಜಾಗರಣೆ ಮಾಡಿದ್ರೆ ಪುಣ್ಯ ಬತ್ತದೆ ಅಂತಾ ಜನ ಅಂಗೇ ಕೂತಿದ್ವು. ಕಿಸ್ನ ಡ್ಯಾನ್ಸ ಮಾಡಿ ಮಾಡಿ ಸ್ಟೇಜ್ ಕೆಳಗೆ ಕಿಸ್ಕಂಡಿದ್ದ. ನಾವು ಪ್ರಾಕಟ್ಈಸ್ ಮಾಡಿದ್ದು ಎಲ್ಲಾ ಹಾಡು ಹೇಳಿ. ಸಿದ್ದೇಸನ ಹಾಡು, ಯಲ್ಲಮ್ಮನ ಹಾಡು ಎಲ್ಲಾ ಹೇಳಿ ಸಾಕಾಗಿ ಹೋಗಿದ್ವಿ. ಬೆಳಕು ಹರಿತು ಎಲ್ಲಾ ಪ್ಯಾಕ್ ಮಾಡಿಕಂಡು ಊರಿಗೆ ಹೊಂಟ್ವಿ. ಪಟೇಲ ಜನನ್ನ ಏಣಿಸಿ 14ರೂಪಾಯಿ ಚಾ ಗೆ ಅಂತಾ ಕೊಟ್ಟ.
ನಮ್ಮೂರ್ನಾಗೆ ಗಣಪತಿ ಮಡಗಿದೀವಿ ನೀವೇ ಬರಬೇಕು ಆರ್ಕೆಸ್ಟ್ರಕ್ಕೆ ಅಂದ ಪಕ್ಕದೂರು ಸಿದ್ದ. ಕಾಸು ಎಷ್ಟು ಕೊತ್ತಿಯಲಾ. ಬೈ ಟು ಚಾ ಜೊತೆಗೆ ತಿಂಡಿ ಕೊತ್ತೀನಿ ಅಂಗೇ ಒಂದು ಪಾಕೇಟ್ ಸಾರಾಯಿ ಅಂದಾ. ಗೌಡಪ್ಪ ನಮ್ಮನೇನು ಬಸ್ಟಾಂಡ್ ನಾಗೆ ಆಡೋ ಬಯಲುನಾಟಕದೋರು ಅಂದ್ಕಂಡೇನ್ಲಾ ಅಂದು ಹೊಡೆಯಕ್ಕೆ ಹೊಂಟ. ಸುಬ್ಬಿ ಯಾರಿಗಾದ್ರೂ ಬಯ್ಯಿರಿ ಬಯಲುನಾಟಕ ಬಯ್ಯಬೇಡಿ ಅಂತು. ಈಗ ನಮ್ಮೂರನಾಗೆ ಮಾತ್ರ ಆರ್ಕೆಸ್ಟ್ರಾ. ಮುಗಿಯೋ ಹೊತ್ತಿಗೆ ನಾವು ಮಾತ್ರ ಇತ್ತೀವಿ. ಅಂಗೈತೆ ನಮ್ಮ ಸ್ಟೈಲು.
Like this:
Be the first to like this post.
ಕೋಮಲ್ ನಿಮ್ಮ ಬರಹಗಳನ್ನು ನಗೆನಗಾರಿಯಲ್ಲಿ ನೋಡಿ ಸಂತೋಷವಾಯಿತು. ಆದರೆ ನಿಮ್ಮ ಹಾಸ್ಯ ಬರಹಗಳಿಗೆ ಹೆಚ್ಚಿನ ಮನ್ನಣೆ ಸಿಗಲಿ ಎನ್ನುವುದೇ ನನ್ನ ಆಶಯ. ಇದೊಂದು ರೀತಿ ವಿಶೇಷ ಬರಹ ಎಂದರೆ ತಪ್ಪಾಗಲಾರದು.