ಫೆಬ್ರವರಿ ಹದಿನಾಲ್ಕು ೨೦೦೮ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಲೇಖನ `ಪರಮೇಶಿ ನಿದ್ದೆ ಪ್ರಸಂಗ’ದ ತುಣುಕು ಇಲ್ಲಿದೆ:
ನಮ್ಮ ಕ್ಲಾಸಿನಲ್ಲಿ ಪರಮೇಶಿ ಅಂದರೆ ಎಲ್ಲರಿಗೂ ಭಯಮಿಶ್ರಿತ ಗೌರವ. ಏನೋ ಅಭಿಮಾನ. ನಮ್ಮೆಲ್ಲರಿಗೂ ಆತ ದೊಡ್ಡ ಕ್ರಾಂತಿಕಾರಿಯಂತೆ, ಮಹಾ
ಧೈರ್ಯವಂತನಂತೆ ಕಾಣುತ್ತಿದ್ದ. ತರಗತಿಯ ಶಿಕ್ಷಕರಿಗಂತೂ ಅವನೆಂದರೆ ದುಸ್ವಪ್ನ. ಅದು ಯಾವ ಉಪಾಧ್ಯಾಯರ ಕ್ಲಾಸೇ ಇರಲಿ, ಅವರು ಅದೆಷ್ಟೇ ಕಟ್ಟುನಿಟ್ಟಿನವರಾಗಿರಲಿ, ಅವರು ಕೈಲಿ ಬೆತ್ತವನ್ನೇ ಏನು ಚಾಟಿಯನ್ನೇ ಹಿಡಿದುಕೊಂಡುಬರಲಿ, ಅವರು ಮಾಡುವ ಪಾಠ ಅವನಿಗೆ ಹಿಡಿಸಲಿಲ್ಲ, ಅವನ ತಲೆಗೆ ಹತ್ತಲಿಲ್ಲ ಅಂದರೆ ಸಾಕು ತನ್ನೆದುರಿನ ಡೆಸ್ಕ್ಗೆ ತನ್ನೆರೆಡು ಕೈಗಳನ್ನು ಮೊಣಕೈವರೆಗೂ ಊರಿ ಆಸನ ಸಿದ್ಧಪಡಿಸಿಕೊಂಡು ತನ್ನ ತಲೆಯನ್ನು ಅದರ ಮೇಲೆ ಪ್ರತಿಷ್ಠಾಪಿಸಿ ಸೊಂಪಾಗಿ ನಿದ್ದೆ ಮಾಡಲಾರಂಭಿಸುತ್ತಾನೆ. ಉಪಾಧ್ಯಾಯರು ನೋಡಿ ಸನ್ನೆ ಮಾಡಿದಾಗ ಪಕ್ಕದವರು ಅವನ ಬೆನ್ನಿಗೆ ತಿವಿದರೂ ಅವನಿಗೆ ತಿಳಿಯುವುದಿಲ್ಲ. ಉಪಾಧ್ಯಾಯರೇ ಬೆತ್ತದಿಂದ ಅವನ ಬೊಜ್ಜು ಹೊಟ್ಟೆಗೆ ತಿವಿದರೂ ಕೆಲವೊಮ್ಮೆ ಅವನನ್ನು ‘ಸಮಾಧಿ ಸ್ಥಿತಿ’ಯಿಂದ ಹೊರಗೆಳೆಯಲು ಸಾಧ್ಯವಾಗುವುದಿಲ್ಲ.
ಪರಮೇಶಿಗೆ ಜಗತ್ತಿನಲ್ಲಿ ಮಾಡಲಿಕ್ಕಿರುವುದು ಎರಡೇ ಕೆಲಸ. ಒಂದು ಹೊಟ್ಟೆ ತುಂಬಾ ತಿನ್ನುವುದು ಮತ್ತೊಂದು ಕಣ್ಣುತುಂಬಾ ನಿದ್ದೆ ಮಾಡುವುದು. ದೇವರು ಒಬ್ಬೊಬ್ಬರನ್ನು ಒಂದೊಂದು ಕೆಲಸ ಮಾಡುವುದಕ್ಕಾಗಿ ಭೂಮಿಗೆ ಕಳುಹಿಸಿರುತ್ತಾನೆ ಎಂದು ಬಲವಾಗಿ ನಂಬಿರುವ ಈತ ತನ್ನನ್ನು ದೇವರು ಈ ಎರಡು ಮಹತ್ಕಾರ್ಯ ಮಾಡಲಿಕ್ಕಾಗಿಯೇ ಕಳುಹಿಸಿಕೊಟ್ಟಿದ್ದಾನೆ ಎಂದು ಅವರಪ್ಪನ ಮೇಲೆ ಆಣೆ ಹಾಕಿ ಹೇಳುತ್ತಾನೆ. ಊಟಕ್ಕೆ ಕುಳಿತರೆ ಅವನೇ ಭೀಮಸೇನ, ಅವನೇ ಘಟೋತ್ಗಜ. ಮೂರು ಮೂರು ಮಂದಿಯ ಊಟವನ್ನೇ ಒಬ್ಬನೇ ಅನಾಯಾಸವಾಗಿ ಉಂಡು ‘ಈಗೀಗ ನಾನು ಊಟ ಕಡಿಮೆ ಮಾಡಿಬಿಟ್ಟಿದ್ದೇನೆ. ಈ ಹಾಳಾದ್ದು ಬೊಜ್ಜು ಬೆಳೆದುಬಿಟ್ಟಿದೆ. ಕರಗಿಸಬೇಕು.’ ಎಂದು ಶುದ್ಧ ಸಂತನಂತೆ ಮಾತನಾಡುತ್ತಾನೆ. ಅವನ ಭರಪೂರವಾದ ಊಟ, ಸೊಂಪಾದ ನಿದ್ದೆಯನ್ನು ಕಂಡು ಕರುಬಿದವರು ಎಷ್ಟು ಜನ? ಖ್ಯಾತ ಬರಹಗಾರರೊಬ್ಬರು `ಜಗತ್ತಿಗೇ ಹೊಟ್ಟೆ ಕಿಚ್ಚಾಗುವಂತೆ ಬದುಕ್ರೋ’ ಎಂದದ್ದನ್ನು ನಮ್ಮ ಪರಮೇಶಿ ಕಾಯಾ-ವಾಚಾ-ಮನಸಾ ಪಾಲಿಸುತ್ತಿದ್ದಾನೆ.
ಪೂರ್ಣ ಲೇಖನಕ್ಕಾಗಿ ಇಲ್ಲಿ ತಾಕಿ :ಪರಮೇಶಿ ನಿದ್ದೆ ಪ್ರಸಂಗ!
Tags: ಪರಮೇಶಿ ನಿದ್ದೆ ಪ್ರಸಂಗ, ಹಳೆಕಂತೆ


ಇತ್ತೀಚಿನ ಪ್ರಜಾ ಉವಾಚ