ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

3 Oct

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)

ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.

ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.

ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.

ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.

“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”

ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:

“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”

ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.

“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”

ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ  ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!

Tags: , , , , , , ,

12 Responses to “ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!”

  1. Inchara October 3, 2009 at 8:03 pm #

    ಅಲ್ರೀ ಸಾಮ್ರಾಟರೇ, ನಟಿಯರ ನಟನೆ ನೋಡಿ ಅಂದ್ರೆ ನೀವ್ಯಾಕ್ರೀ ಅವರ ಲಂಗ ನೋಡೋದಿಕ್ಕೆ ಹೋದ್ರಿ? ಪಾಪದ ಆ ನಟೀಮಣಿಗಳ ಸುದ್ಧಿ ನಿಮಗ್ಯಾಕೆ? ಇದು ಸರಿಯೇ?

    • Nage samrat October 5, 2009 at 8:41 pm #

      ನೋಡಲಿಕ್ಕೆ ಅಟ್ಲೀಸ್ಟ್ ಲಂಗವಾದರೂ ಇದೆಯಲ್ಲ! ಸಂತೋಷ ಪಡಬೇಕು!

      -ನಗೆ ಸಾಮ್ರಾಟ್

  2. cautiousmind October 6, 2009 at 9:42 pm #

    ಬ್ಲಾಗ್ ತುಂಬಾ ಕ್ರಿಯೇಟಿವ್ ಆಗಿದೆ. ಆಲ್ ದಿ ಬೆಸ್ಟ್….ಸುಘೋಷ್ ಎಸ್. ನಿಗಳೆ

    • Nage samrat October 7, 2009 at 3:38 pm #

      ಥ್ಯಾಂಕ್ಸ್ ಸರ.
      ಹೋಗ್ಲಿ ಆ ಹುಡುಗೀರು ಮಾಡಿರೋ ಡಾಕ್ಯುಮೆಂಟರಿ ಹಾಕ್ಬಿಡ್ರಿ ಸರಾ, ನಿಮ್ಗೆ ತ್ರಾಸ ಆದ್ರೆ ನಮ್ಗೆ ಕೊಡ್ರಿ ನಮ್ ಬ್ಲಾಗ್‌ನಾಗೇ ಹಾಕ್ತೀವಿ ;)

      - ನಗೆ ಸಾಮ್ರಾಟ್

      • veresha October 24, 2009 at 10:17 am #

        iiiiiiiiiiiiii love

  3. ದರಿದ್ರನಾರಾಯಣ October 15, 2009 at 8:08 pm #

    ನಗೆಸಾಮ್ರಾಟರೇ, ನಿಮ್ಮ ಮತ್ತು ನಿಮ್ಮ ಕು-ಚೇಲರ ವಿಚಾರಗಳನ್ನು ಓದಿದ ನಮಗೆ ನಿಮ್ಮ ಮೇಲೆ ಅತೀವ ಮರುಕವಾಗುತ್ತಿದೆ.

    ನಟಿಯರ ಲಂಗದ ಕೆಂಪು ಕಂಡ ಗಂಡು ಗೂಳಿಗಳು ಉದ್ರೇಕಗೊಂಡು ರಭಸದ ಧಾಳಿ ಮಾಡುವುದು ಸಹಜಸ್ಥಿತಿ.
    ಅದು ಬಿಟ್ಟು ಕೆಂಪು ನಿಶಾನೆ ಕಂಡ ಭಾ ರತಿಯ ರೈಲಿನಂದದಿ ಅಲ್ಲೇ ನಿಂತು ಬಿಟ್ಟು ವಿಜ್ಞಾನದ ಜಿಜ್ಞಾಸೆಯಲ್ಲಿ ನಿ-ರತ ರಾಗಿ ನಿಸರ್ಗದ ವಿರುದ್ಧ ಹೋಗುವುದ ಕಂಡು ಖೇದವಾಗುತ್ತಿದೆ. ಎಲ್ಲ ಗಂಡಸರೂ ನಿಮ್ಮಂತೆ ನಡೆದರೆ ಮನುಕುಲವು ತನ್ನ ಪರಿಸರ ನಾಶವಾಗುವ ಮೊದಲೇ ನಿರ್ವಂಶವಾಗಿ ಪರಿಸರ ಸರಿಪಟ್ಟು ಭೂ ಭಾರ ಕಡಿಮೆಯಾಗ ಬಲ್ಲುದೆ ಎಂಬ ಚಿಂತೆ ಕೊರೆಯುತ್ತಿದೆ.

    ಈ ರತಿವಿರಕ್ತಿ ನೋಡಿ, ಮುಕ್ತಕಾಮದ ಪ್ರತಿಪಾದಕ (?) ಓಶೋ ಹಕ್ಕಿಯು ಹಾಡುವದನ್ನೇ ಮರೆತು ಬಿಟ್ಟಿತೇ ಎಂಬ ಭಯವಾಗುತ್ತಿದೆ.

    ದಿಗಂಬರ ಪಂಥದತ್ತ ವಾಲಿದ ನಾವು ನಿಮಗಲ್ಲದಿದ್ದರೂ ನಿಮ್ಮ ನಟಿಯರಿಗಾದರೂ ದಿಗಂಬರ ಪಂಥದ ಸಹಜಸ್ತಿತಿಯ ದೀಕ್ಷೆ ಕೊಡಿಸುವತ್ತ ವಿಷಯಾಸಕ್ತರಾಗಿದ್ದೇವೆ.
    – ದರಿದ್ರ ನಾರಾಯಣ ಬಟಾಬತ್ತಲ್

    • Nage samrat October 16, 2009 at 10:53 pm #

      ಬಟಾಬತ್ತಲ್ ದರಿದ್ರ ನಾರಯಣರೇ,
      ನೀವು ಸಲ್ಲಿಸಿದ ಅತೀವ ಮರುಕವನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಮುಂದಿನ ದೀಪಾವಳಿಯಷ್ಟರ ಹೊತ್ತಿಗೆ ನಾವು ಸಂಪೂರ್ಣ ದಿವಾಳಿಯೆದ್ದಿರದಿದ್ದರೆ ಖಂಡಿತವಾಗಿಯೂ ಅದನ್ನು ಹರಾಜು ಹಾಕದೆ ಕಾಪಾಡುತ್ತೇವೆ.

      ಗೂಳಿಯ ಮಾತೆತ್ತಿದಿರಿ ಎಂಬ ಕಾರಣಕ್ಕಾಗಿ ನಮಗೀ ಸಂಶಯ ಉದ್ಭವಿಸಿರುವುದು… ಭಾ-ರತಿಯ ಗಂಡಸರು ನಮ್ಮಂತೆ ನಡೆದರೆ ನಿರ್ವಂಶವಾಗುವುದು ಸರಿ. ಅದರಿಂದ ಭೂಭಾರ ಕಡಿಮೆ ಹೇಗಾದೀತು? ನಿಮ್ಮ ಗಂಡು ಗೂಳಿಗಳು ರಭಸದ ದಾಳಿ ಮಾಡಲು ಉಳಿದೇ ಇರುತ್ತವಲ್ಲ! ಅಲ್ಲದೆ ಈ ವಿಜ್ಞಾನದ ಆರಾಧಕ ಕೆಂಪು ಗೂಳಿಗಳು ದಾಳಿ ಮಾಡುವಾಗಲೆಲ್ಲ ರಬ್ಬರ್ ಮಾಸ್ಕು ಹಾಕಿಕೊಂಡಿರ್ತವಲ್ಲ, ಇದರಿಂದ ನಿಮ್ಮ ನಿಸರ್ಗ ಅದೆಷ್ಟು ನೊಂದುಕೊಳ್ಳುವುದೆಂದು ತಿಳಿಯದೇ? ಕೆಂಪು ಸಿಗ್ನಲ್ ನೋಡಿದೊಡನೆ ನಿಮ್ಮ ಬುದ್ಧಿಯೂ ನಿಂತು ಬಿಡುವುದೇ ಕೆಲಸ ಮಾಡದೆ?

      ಮುಕ್ತಕಾಮದ ಪ್ರತಿಪಾದಕನಾಗಿದ್ದ ಓಶೋ ಮುಕ್ತ ಚಿಂತನೆಯ ಪ್ರತಿಪಾದಕನೂ ಆಗಿದ್ದ ಅನ್ನೋದು ಕೊಂಚ ಮುಂದಕ್ಕೆ ಚಲಿಸುವ ಅಭ್ಯಾಸವಿರುವ ಸಾಮಾನ್ಯ ಮೆದುಳಿಗೂ ತಿಳಿಯುತ್ತದಂತೆ! ಸಿಗ್ನಲ್ ಇನ್ನೂ ಬದಲಾಗಿಲ್ಲವೇ? ಪರೀಕ್ಷಿಸಿ.

      ದಿಗಂಬರ ಪಂಥಕ್ಕೆ ತಾವು ಎಡಗಡೆಯಿಂದ ವಾಲಿದಿರೋ ಇಲ್ಲ ಬಲಗಡೆಯಿಂದ ವಾಲಿದಿರೋ ಎಂಬುದು ಮುಂದೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಅಪರೂಪ ಸಂದರ್ಶನದಲ್ಲಿ ನಿಮ್ಮ ಜಾತಿಯ ಸದಸ್ಯನಿಂದಲೇ ಬಾಯಿ ಬಿಡಿಸುತ್ತೇವೆ. ಅಲ್ಲಿಯವರೆಗೆ ಬಾಯನ್ನ ಮಾತ್ರ (!!) ಮುಚ್ಚಿಕೊಂಡಿರಿ! :)

      - ನಗೆ ಸಾಮ್ರಾಟ್

  4. Santosh November 12, 2009 at 11:21 am #

    Hallo Maryare Nimge yeke E usabri yekendre hinde natiyru my banna hage ne kalige batte suthuthaedru ega ella antha na Ri Swami Egina cinma dalli 1song 1gyangu 1long edre film oduthe……….. Adralli Hinde Cinma dalli Maro sutho Nata Natiyay erthidru ahge samipa barthidda hage namge marada tongya thors thidru adre ega family kunthu nodo film yalli eve swami…………..

  5. Anonymous November 18, 2009 at 5:11 pm #

    ದರಿದ್ರ ನಾರಯಣರೇ,
    ನೀವು ಸಲ್ಲಿಸಿದ ಅತೀವ ಮರುಕವನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಮುಂದಿನ ದೀಪಾವಳಿಯಷ್ಟರ ಹೊತ್ತಿಗೆ ನಾವು ಸಂಪೂರ್ಣ ದಿವಾಳಿಯೆದ್ದಿರದಿದ್ದರೆ ಖಂಡಿತವಾಗಿಯೂ ಅದನ್ನು ಹರಾಜು ಹಾಕದೆ ಕಾಪಾಡುತ್ತೇವೆ.

    ಗೂಳಿಯ ಮಾತೆತ್ತಿದಿರಿ ಎಂಬ ಕಾರಣಕ್ಕಾಗಿ ನಮಗೀ ಸಂಶಯ ಉದ್ಭವಿಸಿರುವುದು… ಭಾ-ರತಿಯ ಗಂಡಸರು ನಮ್ಮಂತೆ ನಡೆದರೆ ನಿರ್ವಂಶವಾಗುವುದು ಸರಿ. ಅದರಿಂದ ಭೂಭಾರ ಕಡಿಮೆ ಹೇಗಾದೀತು? ನಿಮ್ಮ ಗಂಡು ಗೂಳಿಗಳು ರಭಸದ ದಾಳಿ ಮಾಡಲು ಉಳಿದೇ ಇರುತ್ತವಲ್ಲ! ಅಲ್ಲದೆ ಈ ವಿಜ್ಞಾನದ ಆರಾಧಕ ಕೆಂಪು ಗೂಳಿಗಳು ದಾಳಿ ಮಾಡುವಾಗಲೆಲ್ಲ ರಬ್ಬರ್ ಮಾಸ್ಕು ಹಾಕಿಕೊಂಡಿರ್ತವಲ್ಲ, ಇದರಿಂದ ನಿಮ್ಮ ನಿಸರ್ಗ ಅದೆಷ್ಟು ನೊಂದುಕೊಳ್ಳುವುದೆಂದು ತಿಳಿಯದೇ? ಕೆಂಪು ಸಿಗ್ನಲ್ ನೋಡಿದೊಡನೆ ನಿಮ್ಮ ಬುದ್ಧಿಯೂ ನಿಂತು ಬಿಡುವುದೇ ಕೆಲಸ ಮಾಡದೆ?

    ಮುಕ್ತಕಾಮದ ಪ್ರತಿಪಾದಕನಾಗಿದ್ದ ಓಶೋ ಮುಕ್ತ ಚಿಂತನೆಯ ಪ್ರತಿಪಾದಕನೂ ಆಗಿದ್ದ ಅನ್ನೋದು ಕೊಂಚ ಮುಂದಕ್ಕೆ ಚಲಿಸುವ ಅಭ್ಯಾಸವಿರುವ ಸಾಮಾನ್ಯ ಮೆದುಳಿಗೂ ತಿಳಿಯುತ್ತದಂತೆ! ಸಿಗ್ನಲ್ ಇನ್ನೂ ಬದಲಾಗಿಲ್ಲವೇ? ಪರೀಕ್ಷಿಸಿ.

    ದಿಗಂಬರ ಪಂಥಕ್ಕೆ ತಾವು ಎಡಗಡೆಯಿಂದ ವಾಲಿದಿರೋ ಇಲ್ಲ ಬಲಗಡೆಯಿಂದ ವಾಲಿದಿರೋ ಎಂಬುದು ಮುಂದೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಅಪರೂಪ ಸಂದರ್ಶನದಲ್ಲಿ ನಿಮ್ಮ ಜಾತಿಯ ಸದಸ್ಯನಿಂದಲೇ ಬಾಯಿ ಬಿಡಿಸುತ್ತೇವೆ

  6. Vishwanath Gudsi April 24, 2010 at 8:46 am #

    ha ha ha….. ನೀವು ಸಿನಿಮಾ ನಟಿಯರ ಬಗ್ಗೆ, ಅವರ ಲಂಗದ ಅಳತೆ ಪ್ರಸ್ತಾಪ ಮಾಡಿದ್ದೀರಿ. ಅದಕ್ಕೆ ನಮ್ಮ ಸಂತಾಪವಿದೆ. ನೀವು ಅವರ ಲಂಗದ ಬಗ್ಗೆ ಅತಿಯಾದ ಕಾಳಜಿ ತೋರಿಸಿದ್ದಿರಿ. ಅವರ ಲಂಗದ ಅಳತೆ ಚಿಕ್ಕದಾಗಿದ್ದಕ್ಕೆ ತಾನೇ ನಾವು ಸಿಕ್ಕಾಪಟ್ಟೆ ಕಾಸು ಖರ್ಚು ಮಾಡಿ ಸಿನಿಮಾ ನೋಡೋದು?

    • Nage samrat April 28, 2010 at 6:11 am #

      ಲಂಗದ ಅಳತೆಯ ಪ್ರಸ್ತಾಪ ಮಾಡುವುದಕ್ಕೆ ಸದ್ಯ ಲಂಗವಾದರೂ ಇದೆಯಲ್ಲ, ಸಂತೋಷ ಪಡಿ.

      - ನಗೆ ಸಾಮ್ರಾಟ್

Trackbacks/Pingbacks

  1. ನಗೆ ಸಾಮ್ರಾಜ್ಯದಲ್ಲಿ ಕಾಡುತ್ತಿರುವ ಸಾಮ್ರಾಜ್ಞಿಯ ಕೊರತೆ! « ನಗೆ ನಗಾರಿ ಡಾಟ್ ಕಾಮ್ - November 4, 2009

    [...] ನಗೆ ಸಾಮ್ರಾಟ್, ನಟಿಯರ ಲಂಗದ ಎತ್ತರ. Leave a Comment ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು ವರದಿಯ ಸಂವಾದ ಮುಂದುವರೆದಿದೆ. ಸನ್ಮಾನ್ಯ [...]

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 36 other followers