ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…

26 Sep

ಇಷ್ಟು ದಿನ ನಗೆ ನಗಾರಿ ಆಫೀಸಿನಲ್ಲಿ ನೆಲೆಸಿದ್ದ ಶಾಂತಿ ಅನೇಕರಲ್ಲಿ ಕೆಟ್ಟ ಕೂತಹಲವನ್ನು, ಕೆಲವರಲ್ಲಿ ಒಳ್ಳೆಯ ಸಂಶವನ್ನೂ sataapakeeya ಮೂಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ. ಅನ್ಯಗ್ರಹವಾಸಿಗಳಾದ ರಾಜ್ಯದ ಗೃಹ ಮಂತ್ರಿಗಳು ನಗಾರಿ ಸದ್ದಡಗಿಸಿದ್ದು ನಮ್ಮ ಸರಕಾರದ ಸಾಧನೆ ಎಂದು ಕೆ.ಎಸ್.ಆರ್.ಟಿ.ಸಿ ಟಿಕೆಟ್ ಹಿಂಭಾಗದ ಸಾಧನೆಗಳ ಪಟ್ಟಿಯಲ್ಲಿ ಸೇರಿಸಲು ಹೊಂಚು ಹಾಕಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡ ಮಹತ್ಕಾರ್ಯಕ್ಕಾಗಿ ಎರಡನೆಯ ಗೌಡಾಗೆ ಯಡ್ಡಿ ಕತ್ತೆತ್ತಿ ಸುತ್ತಲೂ ಕಣ್ಣಾಡಿಸುತ್ತಿದ್ದಾರೆ. ಮಠಗಳ ರೇಷನ್ ಕೊರಕ ಹುಳುಗಳಾಗಿ ಭವ್ಯ ಜೀವನವನ್ನು ದಿವ್ಯವಾಗಿ ಕಳೆಯುತ್ತಿರುವ ಪಾರ್ಟ್ ಟೈಮ್ ಧರ್ಮ ಜಿಜ್ಞಾಸುಗಳು, ಫುಲ್ ಟೈಮ್ ಟಿವಿ ವಾಹಿನಿ ಜೋತಿಷಿಗಳು ತಮ್ಮ ಹೆಸರಿಲ್ಲದ ಶಾಂತಿ ಹೋಮಗಳಿಗೆ ಬ್ಲಾಗ್ ಲೋಕದ ಅತಿ ಕ್ಷುದ್ರ ಜೀವಿಯೇ ತಣ್ಣಗಾಗಿ ಹೋಯಿತು ಎಂದು ಬಯೋಡೇಟಾ ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಕೊಚ್ಚೆಯಲ್ಲಿ ನೆತ್ತಿಯ ಮಟ್ಟಕ್ಕೆ ಮುಳುಗಿ ಅಲ್ಲಿದಂಲೇ ಕೆಸರೆರುಚುತ್ತಾ ಅವರಿವರ ಬಟ್ಟೆಯನ್ನು ಕೊಳೆಯಾಗಿಸಿ, ಮಡಿ ಕೆಡಿಸಿ ಮಡಿವಂತರು ಸ್ನಾನ ಗೃಹಕ್ಕೆ ಪದೇ ಪದೇ ತೆರಳುವಂತೆ ಮಾಡಿದ ಖುಶಿಯಲ್ಲಿ ಇನ್ನೆರಡು ಅಡಿ ಆಳಕ್ಕೆ ಕೊಚ್ಚೆಯಲ್ಲಿ ಮುಳುಗುತ್ತಿರುವ ಅನಾಮಿಕ ಬ್ಲಾಗಿಗರು ಹಾಗೂ ಬೇವಾರ್ಸಿ ಕಮೆಂಟುಗಳ ಸೃಷ್ಟಿಕರ್ತರು ತಮ್ಮ ೨೪/೭ ಕಠಿಣ ಶ್ರಮದಿಂದ ಸಾಮ್ರಾಟರು ಬ್ಲಾಗ್ ಮಂಡಲದಿಂದ ಓಡಿಹೋದರು ಎಂದು ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮನಸ್ಸಿನ ಮಂಡಿಗೆಯಲ್ಲಿ ಸಿಕ್ಕ ಒಂಟಿ ಹರಳಿನ ಹಾಗೆ ನಾವು ಮತ್ತೆ ಹಾಜರಾಗಿದ್ದೇವೆ.

ಪ್ರತಿ ಬಾರಿಯ ಹಾಗೆ ಇಷ್ಟು ದಿನಗಳ ನಮ್ಮ ಗೈರು ಹಾಜರಿಗೆ ಕಾರಣವನ್ನು ನಿವೇದಿಸಿಕೊಳ್ಳಲೇಬೇಕು. ಓದುಗ ಪ್ರಜೆಗಳಾದ ನೀವು ಎಂದಿಗಾದರೂ ನಮ್ಮನ್ನು ಕಾರಣ ಕೇಳಿದ್ದುಂಟೇ? ಆದರೂ ನಮ್ಮ ಪ್ರಜಾ ಸಮೂಹಕ್ಕೆ ಉತ್ತಮ ಉದಾಹರಣೆಯನ್ನು ಹಾಕಿಕೊಡುವ ಮಹೋದ್ದೇಶದಿಂದ ನಾವು ಈ ಅಭ್ಯಾಸವನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದೇವೆ. ನಾವು ಗೈರು ಹಾಜರಾದ ದಿನಗಳಲ್ಲಿ ಎರಡು ಮುಕ್ಕಾಲು ದಿನಗಳನ್ನು ನಾವು ಗೈರು ಹಾಜರಿಯ ಕಾರಣವನ್ನು ಅನ್ವೇಷಿಸುವುದರಲ್ಲಿಯೇ ಕಳೆಯುತ್ತೇವೆ ಎಂದರೆ ನಮ್ಮ ಬದ್ಧತೆ ಎಷ್ಟು ಗಂಭೀರವಾದದ್ದು ಎಂಬುದರ ಕಲ್ಪನೆ ನಿಮಗಾದೀತು.

ಈ ಬಾರಿಯ ನಮ್ಮ ಗೈರು ಹಾಜರಿಗೆ ಗಟ್ಟಿಯಾದ ಕಾರಣವಿಲ್ಲದಿಲ್ಲ. ಹಿಂದಿನ ಸಂಚಿಕೆಯಲ್ಲಿ ನಾವು ಬ್ಲಾಗ್ ಲೋಕದಲ್ಲಿ ಅಲ್ಲೋಲ ಕಲ್ಲೋವನ್ನು ಉಂಟು ಮಾಡಿದ, ಕಾಫಿ ಲೋಟದಲ್ಲಿ (ಕೆಲವರ ವ್ಹಿಸ್ಕಿ ಗಾಜಿನಲ್ಲಿ) ಬಿರುಗಾಳಿ ಎಬ್ಬಿಸಿದ ಬ್ಲಾಗ್ ಪ್ರಜೆಯ ವಿಶೇಷ ಸಂದರ್ಶನವನ್ನು ಪ್ರಕಟಿಸುವುದಾಗಿ ಘೋಷಿಸಿದ್ದೆವು. ಕೆಲಸ ಮುಗಿಯುವವರೆಗೆ ಅದನ್ನು ಯಾರ ಬಳಿಯೂ ಬಾಯಿ ಬಿಡಬೇಡ ಎಂಬ ಹಿರಿಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನೂ ನೀಡದ ನಾವು ಕೆಲಸವನ್ನು ಘೋಷಿಸಿದ ನಂತರವೇ ಅದನ್ನು ಮಾಡಲು ತೊಡಗುವುದು. ಈ ಬಾರಿ ನಾನು ಸೊನ್ನೆ ರನ್ನುಗಳಿಗೇ ಔಟಾಗುವುದು ಎಂದು ಘೋಷಿಸಿ ಮೈದಾನದಲ್ಲಿ ಆ ಘೋಷಣೆಯನ್ನು ಸಾಕಾರಗೊಳಿಸಿದ ನೆಪವನ್ನಿಟ್ಟುಕೊಂಡು ನಮ್ಮನ್ನು ಕಾಲೇಜು ಕ್ರಿಕೆಟ್ ಟೀಮಿನಿಂದ ಹೊರ ಹಾಕಿದ ಪ್ರಕರಣವನ್ನು ನಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆಯಲಿದ್ದೇವೆ.

ಬ್ಲಾಗ್ ಅಂಗಳದ ಆ ಸೆಲೆಬ್ರಿಟಿಯ ಸಂದರ್ಶನಕ್ಕಾಗಿ ನಮ್ಮ ಆಲ್ಟರ್ ಈಗೋವನ್ನು ಅಟ್ಟಿದ್ದೆವು. ಬ್ಲಾಗ್ಲೋಕ ವಿಖ್ಯಾತ ಬ್ಲಾಗಿನ ಅನಾಮಿಕ ಯಜಮಾನರನ್ನು ಹುಡುಕಿಕೊಂಡು ಹೊರಟ ನಮ್ಮ ಆಲ್ಟರ್ ಈಗೋ ಎಷ್ಟು ದಿನಗಳಾದರೂ ಹಿಂದಿರುಗಲಿಲ್ಲ. ಸರಿಯಾದ ವಿಳಾಸ, ಲ್ಯಾಂಡ್ ಮಾರ್ಕು, ಗುರುತಿನ ಚರ್ಯೆ, ಮೊಬೈಲ್ ನಂಬರು  ಇದ್ದರೇನೇ ಈ ನಗರಗಳಲ್ಲಿ ವ್ಯಕ್ತಿಯನ್ನು ಹುಡುಕುವುದು ಕಷ್ಟ ಹೀಗಿರುವಾಗ ಹೆಸರಿಲ್ಲದ ಬ್ಲಾಗ್ ವ್ಯಾಸನನ್ನು ಹುಡುಕಿ ಹೊರಟ ನಮ್ಮ ಆಲ್ಟರ್ ಈಗೋ ಅಂತರಜಾಲದ ಯಾವುದೋ ಎಳೆಯಲ್ಲಿ ಕಾಲು ಸಿಕ್ಕಿಸಿಕೊಂಡು ಖೈದಾಗಿ ಹೋಯಿತು. ಅದನ್ನು ಹುಡುಕಲೆಂದು ಕಳುಹಿಸಿದ ಲೋಕ ವಿಖ್ಯಾತ ಡಿಟೆಕ್ಟೀವ್ ಶೆರ್ಲಾಕ್ ಹೋಮ್ಸನ ಗುರು, ನಮ್ಮ ಅತ್ಯಾಪ್ತ ಚೇಲ ಕುಚೇಲ ಸಹ ಕಣ್ಮರೆಯಾಗಿ ಹೋದ. ಆ ಬ್ಲಾಗಿಗರ ಬಗ್ಗೆ ಈಗಾಗಲೇ ಬ್ಲಾಗ್ಲೋಕದಲ್ಲಿ ಅನೇಕ ವದಂತಿಗಳು, ನಿಗೂಢ ದಂತಕತೆಗಳು ಹರಡಿಕೊಂಡಿದ್ದರಿಂದ ಅಲ್ಲೆಲ್ಲಾದರೂ ಚಾಚಿಕೊಂಡಿರಬಹುದಾದ ಬರ್ಮುಡ ರೆಕ್ಟಾಂಗಲ್, ಸರ್ಕಲ್‌ಗಳ ರಹಸ್ಯ ಬೇಧಿಸಲು ಖುದ್ದಾಗಿ ನಾವೇ ತೆರಳಿದೆವು.

ಕಾಲನೇ ಕೈ ಹಿಡಿದನೆಂದರೆ ಆಗದ ಕೆಲಸ ಯಾವುದಾದರೂ ಉಂಟೇ? ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡಿದರೆಂದರೆ ಸಿಕ್ಕದ ನೌಕರಿ ಯಾವುದಾದರೂ ಉಂಟೆ? ನಾವು ಅನಾಮಿಕ ಬ್ಲಾಗಿಗರ ಬೆನ್ನಟಿ ಹೊರಟ ಕೆಲವೇ ದಿನಗಳಲ್ಲಿ ಆ ಬ್ಲಾಗಿಗರೇ ನಮ್ಮ ಕಾಲಿಗೆ ಕಚ್ಚಿಕೊಂಡರು. ಆದರೆ ಕಾಲಿಗೆ ತೊಡರಿಕೊಂಡ ಆ ವಸ್ತುವಿಗೆ ಮುಖವಾಗಲಿ, ಉಳಿದ ಅವಯವಗಳಾಗಲಿ ಇದ್ದಂತೆ ತೋರಲಿಲ್ಲ. ಉದ್ದನೆಯ ಕೂದಲಿದ್ದ ಮಾತ್ರಕ್ಕೆ ಹೆಣ್ಣೆಂದು ಗುರುತಿಸುವುದು, ಜೇಬಲ್ಲಿ ಪೆನ್ನು ಇಟ್ಟುಕೊಂಡ ಮಾತ್ರಕ್ಕೆ ವಿದ್ಯಾವಂತ ಎಂದು ಭಾವಿಸಿದಷ್ಟೇ ಪ್ರಮಾದಕಾರಿ ಎಂದು ಅನುಭವದಿಂದ ಕಂಡುಕೊಂಡಿದ್ದ ನಾವು ಇನ್ನಿತರ ದೇಹದ ಭಾಗಗಳಿಗಾಗಿ ಹುಡುಕಾಡಿದೆವು. ಗಂಡು, ಹೆಣ್ಣೆಂದು ಪ್ರತ್ಯೇಕಿಸುವುದಕ್ಕೆ ಆ ದೇವರು ಅದೆಷ್ಟು ಸ್ಪಷ್ಟವಾದ ಭಿನ್ನತೆಯನ್ನು ಕೊಟ್ಟಿದ್ದಾಗ್ಯೂ ನಮಗೆ ನಮ್ಮ ಕಾಲಿಗೆ ತೊಡರಿದ ವಸ್ತು ಯಾವ ಲಿಂಗದ್ದು ಎಂದು ನಿರ್ಧರಿಸಲಾಗಲಿಲ್ಲ. ಆದರೂ ಆ ವಸ್ತುವೇ ವಿಖ್ಯಾತ ಬ್ಲಾಗಿನ ವಾರಸುದಾರ ಎಂದು ನಾವು ನಮ್ಮ ಆರನೆಯ ಇಂದ್ರಿಯ ಹಾಗೂ ಏಳನೆಯ ಇಂದ್ರಿಯಗಳ ಸಹಯೋಗದಿಂದ ನಡೆಸಿದ ಕಾರ್ಯಾಚರಣೆಯಿಂದ ಕಂಡುಕೊಂಡೆವು.

ಸಂದರ್ಶನ ಶುರು ಮಾಡುವ ಮುನ್ನ, ಅತಿಥಿಯನ್ನು ಹೊಗಳಿ ಅಟ್ಟಕ್ಕೇರಿಸುವುದು ನಮ್ಮ ಎಂದಿನ ಪದ್ಧತಿ. ನಾವು ಈಗಾಗಲೇ ಅಟ್ಟದಲ್ಲಿ ಈಸಿ ಚೇರು ಹಾಕಿಕೊಂಡು ಕೂತಿರುತ್ತೇವಾದ್ದರಿಂದ ಅತಿಥಿಯನ್ನು ಅಲ್ಲಿಗೇ ಕರೆಸಿಕೊಳ್ಳುವುದು ನಮಗೆ ಅನುಕೂಲಕರವಾದ ಸಂಗತಿ. ಈ ವಸ್ತುವನ್ನು ಹೀಗೆ ಅಟ್ಟಕ್ಕೆ ಏರಿಸುವುದಕ್ಕೆ ನಮಗೆ ಬಹು ಪ್ರಯಾಸವಾಯಿತು. ಮುಖವೇ ಇಲ್ಲದ ವಸ್ತುವಿಗೆ ಮುಖ ಸ್ತುತಿ ಮಾಡುವುದಾದರೂ ಹೇಗೆ? ನಿಮ್ಮ ಕಣ್ಣುಗಳು ನೀಳವಾದ ಮೀನಿನ ಕಣ್ಣುಗಳ ಹಾಗಿವೆ, ಮೂಗಿ ಸಂಪಿಗೆಯ ಹಾಗಿದೆ, ಮೀಸೆ  ಬೋರ್ಡು ಒರೆಸುವ ಡಸ್ಟರ್ ಇದ್ದ ಹಾಗಿದೆ, ಮುಂಗುರುಳು ನಮ್ಮ ಕಾರಿನ ವೈಪರ್ ಇದ್ದ ಹಾಗಿದೆ ಎನ್ನಲಿಕ್ಕೆ ಆಯಾ ಅವಯವಗಳ ಜಾಗದಲ್ಲಿ ಏನಾದರೊಂದು ಇರಲೇ ಬೇಕಲ್ಲವೇ? ಮುಖವೇ ಇಲ್ಲದ ಈ ವಸ್ತುವನ್ನಿಟ್ಟುಕೊಂಡು ಅದೆಂತಹ ಕಲ್ಪನಾ ಶಕ್ತಿಯಿರುವ ಕವಿಯಾದರೂ ಒಂದೇ ಒಂದು ಸಾಲು ಬರೆಯಲಾರ!

ಹೇಗೋ ನಮ್ಮ ತಪಃಶಕ್ತಿಯನ್ನೆಲ್ಲ ಖರ್ಚು ಮಾಡಿ ಆ ವಸ್ತುವನ್ನು ಅಟ್ಟಕ್ಕೆ ಏರಿಸಿ ನಾವು ಸಂದರ್ಶವನ್ನು ನಡೆಸಿದೆವು. ಆ ಸಂದರ್ಶನದ ಕತೆಯೋ, ಅದು ಮತ್ತೊಂದು ಉದಯ ಟಿವಿ ಧಾರಾವಾಹಿಯ ಸರಕಾಗುವಷ್ಟಿದೆ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಹೇಳುವೆ. ಸರಿ ಸಂದರ್ಶನ ಮುಗಿಸಿಕೊಂಡು, ಬರ್ಮುಡ ಪೆಂಟಗನ್ನಿನಲ್ಲಿ ಲೀನವಾಗಿದ್ದ ನಮ್ಮ ಆಲ್ಟರ್ ಈಗೋ ಹಾಗೂ ಕುಚೇಲನನ್ನು ಪತ್ತೇ ಹಚ್ಚಿ ಎಳೆದುಕೊಂಡು ನಮ್ಮ ಕಛೇರಿಗೆ ಹಿಂದಿರುಗುವಷ್ಟರಲ್ಲಿ ನಮ್ಮ ಜೀವ ಬಾಯಿಗೆ ಬಂದಂತಾಗಿತ್ತು.

ನಗೆ ಸಾಮ್ರಾಜ್ಯದ ಸಾಮ್ರಾಟರಾದ ನಮ್ಮನ್ನು ಇಷ್ಟು ಬೆವರಿಳಿಸುವಂತೆ ಮಾಡಿದ ಆ ಸಂದರ್ಶನವನ್ನು ಶೀಘ್ರದಲ್ಲಿಯೇ ನಗೆ ನಗಾರಿಯಲ್ಲಿ ಬೆಳಕು ಕಾಣಿಸುತ್ತೇವೆ. ಇನ್ನು ಮುಂದೆ ತಪ್ಪದೆ ನಗಾರಿಯ ಸದ್ದು ಎಂದಿನ ಕರ್ಕಶ ಶೃತಿಯಲ್ಲಿ ನಿಮ್ಮ ಕಿವಿಗಳನ್ನಪ್ಪಳಿಸಿ ಕಿವಿಯ ಮೇಣವನ್ನು ಕೆಡವಿ ಸ್ವಚ್ಛಗೊಳಿಸುವುದು ಎಂದು ಭರವಸೆ ಕೊಡುತ್ತೇವೆ.

 

ಇಂತಿ ನಿಮ್ಮ
ನಗೆ ಸಾಮ್ರಾಟ್

Tags: , , , ,

4 Responses to “ಸಂತಾಪಕೀಯ: ಅನಾಮಿಕ ಅತಿಥಿಯ ಬೆನ್ನತ್ತಿ…”

  1. chetana thirthahalli September 26, 2009 at 4:15 pm #

    :) :) :)

  2. Ranjith September 27, 2009 at 12:13 pm #

    ಎಷ್ಟೊಂದು ಸಂದರ್ಶನ ಮಾಡ್ತೀನಿ, ಮಾಡ್ತೀನಿ ಅಂತ ನಮ್ಮ ಕಿವಿ ಮೇಲೆ ಹೂವಿಟ್ಟಿದೀರಿ.

    ಈಗ ಮತ್ತೆ…

    ರೀ ಸಾಮ್ರಾಟರೇ, ಮೊದ್ಲು ಬಾಕಿ ಇರೋ ಸಂದರ್ಶನ ಮುಗ್ಸಿ.. ಇಲ್ಲಾಂದ್ರೆ ನೀವಿರೋ ಅಟ್ಟಕ್ಕೆ ಬಂದು ಗತಿ ಕಾಣಿಸ್ಬೇಕಾಗುತ್ತೆ!:)

    • Nage samrat September 28, 2009 at 12:38 am #

      ಹೊಸ ಹೊಸ ಹೂಗಳನ್ನು ಇಡುವುದಕ್ಕಾಗಿ ಕಿವಿಗಳನ್ನು ರೆಡಿ ಮಾಡಿಟ್ಟುಕೊಳ್ಳುವ ಪ್ರಜೆಗಳಿಂದಾಗಿ ಸಂದರ್ಶನದ ಕೆಲಸಕ್ಕೇ ಸಮಯ ಸಿಗದಂತಾಗಿದೆ!
      ಗತಿ ಕಾಣಿಸುವ ಮತಿಹೀನ ಕೆಲಸಕ್ಕೆ ಕೈ ಹಾಕುವ ಮತಿಹೀನರು ನಮ್ಮ ಸಾಮ್ರಾಜ್ಯದ ಮತಿಹೀನ ಪ್ರಜೆಗಳು ಅಲ್ಲ ಎಂಬುದು ನಮ್ಮ ದೃಢವಾದ ನಂಬಿಕೆ!

      - ನಗೆ ಸಾಮ್ರಾಟ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 38 other followers