ನಗೆ ನಗಾರಿ ಡಾಟ್ ಕಾಮ್ನ ಮೊದಲನೇ ವರ್ಷದ ಹುಟ್ಟುಹಬ್ಬ ಭಾರಿ ಸಂಭ್ರಮ, ಸಡಗರದಿಂದ ನಡೆಯಿತು. ಕಾರ್ಯಕ್ರಮಕ್ಕೆ ಹಾಜರಾಗಿದ್ದ ಎಲ್ಲರೂ ಸಾಮ್ರಾಟರ ಪ್ರತಿಭೆಯನ್ನು ಹಾಡಿ ಹೊಗಳಿ ಅವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದ ನಂತರ ಆಯೋಜಿಸಲಾಗಿದ್ದ ಭೂರಿ ಭೋಜನವನ್ನು ಸಾಂಗವಾಗಿ ಪೂರೈಸಿದ ಗಣ್ಯರು ಅಡುಗೆ ಭಟ್ಟನಾಗಿದ್ದ ಕುಚೇಲನನ್ನೂ ಹೊಗಳಿದ್ದು ಸಾಮ್ರಾಟರನ್ನು ಕೆರಳಿಸಿತು. ಕಾರ್ಯಕ್ರಮದ ಬಗ್ಗೆ ನಮ್ಮ ಚೇಲ ಕುಚೇಲ ಹಾಗೂ ನಮ್ಮ ಗತಕಾಲದ ಗೆಳೆಯ ತೊಣಚಪ್ಪನವರು ಸವಿವರವಾದ ವರದಿಯನ್ನು ನೀಡಲಿದ್ದಾರೆ. ನಾವು ಈಗ ನಮ್ಮ ಸ್ಪರ್ಧೆಗಳ ವಿಜೇತರನ್ನು ಘೋಷಿಸಲಿದ್ದೇವೆ…
ಮೊದಲ ಬಹುಮಾನ
ಜವಾಹರ್ ಲಾಲ್ ಮೋಜುಗಾರ ಯೋಜನೆ
ಸುಟ್ಟಾ ಬಾಯೊಳಗಿರಲು ಪಟ್ಟದಲಿ ಕೂತಿರಲು
ಮೌಂಟ ಬ್ಯಾಟನನ ಪತ್ನಿ ಬದಿಗಿರಲು
ಸಿಗರೇಟಿಗೆ ಕಿಚ್ಚು ಹಚ್ಚೆಂದ –ಜವಾಹರ
ಎರಡನೆಯ ಬಹುಮಾನ
ಮೋಡಗಳು ತೇಲುತಿವೆ ಆಕಾಶದಲ್ಲಿ,
ಕನಸಿನಲ್ಲಿ ಮುಳುಗಿದೆ ಲೊಕವಿಡೀ,
ದೇಶಕ್ಕೋ ಸ್ವಾತಂತ್ರ್ಯದ ಹುಚ್ಚು,
ಗಾಂಧೀಜಿಗೆ ಉಪವಾಸ ಅಚ್ಚುಮೆಚ್ಚು,
ನೀ ತಲೆಕೆಡಿಸಿಕೊಳ್ಳಬೇಡ, ಸಿಮೋನ್ ಳ ಸಿಗರೇಟಿಗೆ ಬೆಂಕಿ ಹಚ್ಚು!!!
ಮೂರನೆಯ ಬಹುಮಾನ
ಸಿಗರೇಟ್ ಸೇದಲು ಆಸೆಯೆ ನಿನಗೆ
ಕಲಿಸುವೆ ನಾನು ಬಾ ಬಳಿಗೆ.ಕಲಿಸುವ Coach ನಾನಿರಲು ಸಂಕೋಚವ ಬಿಡು ನೀನು
ಹ್ಹಾ ಸೇದು, ಏನಾಗದು ನೋಡು ಜೊತೆ ಇರುವೆನು ನಾನು.
ಸಮಾಧಾನಕರ ಬಹುಮಾನಗಳು:
”ಹಚ್ಚಿಕೊಳ್ಳಮ್ಮಬೇಗ ಗಾಂಧೀಜಿ ಬಂದ್ರೆ ನಮ್ಮನ್ನ ಸುಟ್ಟಾಕ್ತಾರೆ. ಆ ಸ್ವಾಮಿ ಸಿಗರೇಟ್ ಕಂಡ್ರೆ ಉರಿತಾರೆ.”
“ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ನಾವು ನಿರ್ಧಾರ ಮಾಡಬೇಕಿದೆ. ಒಂದು ಕೈ ನೋಡಿಬಿಡೋಣ, ಅಲ್ವೇ ????”
ತಮ್ಮ ಪ್ರತಿಕ್ರಿಯೆಗಳ ಜೊತೆಗೆ ಇ-ಮೇಲ್ ವಿಳಾಸವನ್ನು ನೀಡಿದವರಿಗೆ ಮಾತ್ರ ಬಹುಮಾನಗಳನ್ನು ಕಳುಹಿಸಿಕೊಡಲಾಗುವುದು. ಇ-ಮೇಲ್ ವಿಳಾಸ ನೀಡದಿದ್ದವರು ತಪ್ಪೊಪ್ಪಿಗೆ ಪತ್ರದ ಜೊತೆಗೆ ಸಾಮ್ರಾಟರಿಗೆ ಒಂದು ಪತ್ರ ಬರೆಯ ತಕ್ಕದ್ದು!!
(‘ಜೋಕು’ಮಾರ ಸ್ಪರ್ಧೆಯಲ್ಲಿ ಯಾವ ವೀರರೂ ಭಾಗವಹಿಸದ ಕಾರಣ ಆ ಬಹುಮಾನಗಳೆಲ್ಲವನ್ನೂ ಸಾಮ್ರಾಟರು ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಹಾಗೂ ಪ್ರಪಂಚಕ್ಕೊಬ್ಬನೇ ‘ಜೋಕು’ಮಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ)
** (ಬಹುಮಾನಗಳ ಬಗ್ಗೆ ತಕರಾರು ಇರುವವರು ಮೈರ್ಲೇಸರಪುರ ಕೋರ್ಟಿನ ವ್ಯಾಪ್ತಿಯಲ್ಲಿ ಮಾತ್ರ ಮೊಕದ್ದಮೆ ಹೂಡತಕ್ಕದ್ದು. ಬೇರೆಡೆ ಕೇಸು ಹಾಕಿಕೊಂಡು ಕೂತರೆ ಅದಕ್ಕೆ ನಾವು ಜವಾಬ್ದಾರರಲ್ಲ!)
Posted by ರಂಜಿತ್ on January 29, 2009 at 3:10 pm
ನನ್ನ ಮೌನವನ್ನೂ ಹಾಸ್ಯಸ್ಪರ್ಧೆಯಲಿ ಪರಿಗಣಿಸದೇ ಹೋದದ್ದಕ್ಕೆ ಬಹಳ ಖೇದವಾಗಿದೆ.. ಪ್ರಶಸ್ತಿಯನ್ನು ಕೊಡದಿದ್ದರೂ ತಿರಸ್ಕರಿಸಿದ್ದೇನೆ.
Posted by Nage samrat on January 29, 2009 at 10:23 pm
ನಿಮಗೆ ಪುರಸ್ಕಾರವನ್ನು ತಿರಸ್ಕರಿಸುವ ಮೂಲಕ ನಿಮ್ಮ ತಿರಸ್ಕಾರವನ್ನು ಪುರಸ್ಕರಿಸಿದ್ದೇವೆ!
ನಿಮ್ಮ ಮೌನವನ್ನು ಜೋಪಾನ ಮಾಡಿಟ್ಟು ಕೊಳ್ಳಿ ಮುಂದಿನ ವರ್ಷದ ಸ್ಪರ್ಧೆಗಳಿಗೆ ಬೇಕಾಗಬಹುದು
ನಗೆಸಾಮ್ರಾಟ್