ನಗಾರಿಯಲ್ಲಿ ಪ್ರತಿಕ್ರಿಯೆಗಳೇಕಿಲ್ಲ?

ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಗೆ ನಗಾರಿಯ ತಾಣಕ್ಕೆ ದಿನವೊಂದಕ್ಕೆ ಐವತ್ತರಿಂದ ನೂರು ಮಂದಿ ಮೌಸು ಚಿಟುಕಿಸಿ ಹೋಗುತ್ತಾರೆ. ಇಲ್ಲಿನ ಹಾಸ್ಯದ ಅಬ್ಬರಕ್ಕೆ ನವಿರಾಗಿ ನಲುಗಿ ಮನಸಾರೆ ನಗುತ್ತಾರೆ. ಆದರೆ ಕೆಲವೇ ಕೆಲವರು ಬರಹಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆ. ಧ್ವನಿಗೆ ಪ್ರತಿಧ್ವನಿಯನ್ನು ಸೇರಿಸುತ್ತಾರೆ. ಯಾಕೆ ಹೀಗೆ?

ಇದಕ್ಕೆ ಮುಖ್ಯ ಕಾರಣ ನಮ್ಮ ‘ನಗೆ ಸಾಮ್ರಾಟ್’ ಎಂಬ ಅವತಾರ ಎನ್ನುತ್ತಾರೆ ನಮ್ಮ ಹಿತೈಷಿಗಳು. ನಮ್ಮ ಅ‘ನಾಮ’ಧೇಯತೆಯೇ ಓದುಗರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುವಂತೆ ಮಾಡುತ್ತಿದೆ. ನಮ್ಮ ಗುರುತಿಲ್ಲದ, ಪರಿಚಯವಿಲ್ಲದ ವಿವರವೇ ಪ್ರತಿಸ್ಪಂದನೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ ಎಂಬುದು ಅವರ ವಾದ.

ಜನರು ಅಗೋಚರವಾದ ದೇವರಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ತೋರಿಸುತ್ತಾರೆ, ಕೈ ಮುಗಿಯುತ್ತಾರೆ ಆದರೆ ಆತನೊಂದಿಗೆ ಕಷ್ಟ ಸುಖ ಮಾತನಾಡುತ್ತಾ ಹರಟೆಗೆ ಕೂರುವುದಿಲ್ಲ. ಕೆಲವರು ದೆವ್ವ, ಭೂತಗಳಿಗೂ ಮರ್ಯಾದೆ ಕೊಡುತ್ತಾರೆ, ಹೆದರುತ್ತಾರೆ, ಪ್ರಾಣಿ ಬಲಿ ಕೊಟ್ಟು ಉಂಡು ಮಲಗುತ್ತಾರೆ. ಅವುಗಳನ್ನು ಹರಟೆ ಕಟ್ಟೆಗೆ ಎಳೆದುಕೊಂಡು ಬರುವುದಿಲ್ಲ. ಹಾಗೆಯೇ ನಗೆ ಸಾಮ್ರಾಟ್ ಎಂಬ ಮುಖವಿಲ್ಲದ ಗುರುತನ್ನು ಓದುಗರು ಮೆಚ್ಚುತ್ತಾರೆ, ಇಷ್ಟಪಡುತ್ತಾರೆ ಆದರೆ ಅದರೊಂದಿಗೆ ಸಂವಾದಕ್ಕೆ ತೊಡಗುವುದಿಲ್ಲ. ಅವರಿಗೇನಿದ್ದರೂ ತಮ್ಮ ಹಾಗೆ ಗುರುತಿರುವ ಜನರು ಬೇಕು ಮಾತಿಗೆ, ಹರಟೆಗೆ, ಪ್ರತಿಸ್ಪಂದನಕ್ಕೆ. ಹೀಗಾಗಿ ನಗೆ ಸಾಮ್ರಾಟರು ಹರಟಲಾಗದೆ ಒದ್ದಾಡುತ್ತಿದ್ದಾರೆ.

ಇನ್ನೂ ಕೆಲವು ಸುದ್ದಿ ಮೂಲಗಳ ಪ್ರಕಾರ. ನಗೆ ನಗಾರಿ ಡಾಟ್ ಕಾಮಿಗೆ ಬಂದು ನಗುನಗುತ್ತಾ ಜನರು ಎದ್ದು ಹೋಗಿಬಿಡುತ್ತಾರೆ. ಅವರಿಗೆ ನಾಲ್ಕು ಮಾತು ಆಡಬೇಕು ಎನ್ನುವುದೂ ಮರೆತುಹೋಗುವಷ್ಟು ನಗುಬಂದಿರುತ್ತದೆ. ಅವರಿಗೆ ನಗೆ ತರಿಸದ ವಿಚಾರವಿದ್ದರೆ ಅಲ್ಲಿ ಪ್ರತಿಕ್ರಿಯೆ ನೀಡಿರುತ್ತಾರೆ. ಈ ಸುದ್ದಿ ಮೂಲವನ್ನು ನಾವು ಮಾನ್ಯ ಮಾಡಿದ್ದು ಪ್ರತಿಕ್ರಿಯೆಗಳು ಅಷ್ಟಾಗಿ ಸಿಕ್ಕದ ದಿನ ಅದನ್ನು ನಾವು ಪುನಃ ಪುನಃ ಓದಿ ಖುಶಿ ಪಡುತ್ತೇವೆ.

ಒಂದು ವರ್ಗದ ಜನರಿಗೆ ಇಂಥಾ ‘ಸಿಲ್ಲಿ’ ಬ್ಲಾಗ್‌ಗಳಲ್ಲಿ ತಮ್ಮ ಹೆಸರಿನಲ್ಲಿ ಪ್ರತಿಕ್ರಿಯೆ ಹಾಕಿದರೆ ತಮ್ಮ ‘ಇಮೇಜಿಗೆ’ ಘಾಸಿಯಾಗುತ್ತದೆ ಎಂಬ ಭಯವಿರುತ್ತದೆ. ಗಂಭೀರ ಓದುಗರು, ಪ್ರಜ್ಞಾವಂತ ಬ್ಲಾಗಿಗರು ಎಲ್ಲಾದರೂ ಜೋಕು ಹೇಳಿಕೊಂಡು, ಜೋಕು ಓದಿಕೊಂಡು ಕಾಲ ಕಳೆಯಲು ಸಾಧ್ಯವಾಗುತ್ತದೆಯೇ? ಹಾಗೆ ಅಲ್ಲರ ಹಾಗೆ ಸದಾ ನಗುತ್ತಲೇ ಇದ್ದರೆ ನಮ್ಮನ್ನು ಜನ ‘ಗಂಭೀರ ಚಿಂತಕ’ರು ಎಂದು ಪರಿಗಣಿಸುವುದೇ ಇಲ್ಲ ಎಂಬುದು ಅವರ ವಾದ. ಹೀಗಾಗಿ ಅಂಥವರಿಗಾಗಿ ನಾವು ನಗೆ ನಗಾರಿಯಲ್ಲಿ ‘ನಗ ಬಾರದು’ ಅಂಕಣವನ್ನು ಶುರು ಮಾಡುವ ಆಲೋಚನೆ ಮಾಡಿದ್ದೇವೆ. ಆ ಅಂಕಣವನ್ನು ಓದಿ ಯಾರೂ ನಗಬಾರದೆಂದೂ, ಒಂದು ವೇಳೆ ಇಡೀ ಅಂಕಣವನ್ನು ಓದಿಯೂ ಯಾರು ನಗುವುದಿಲ್ಲವೋ ಅವರನ್ನು ‘ಶ್ರೇಷ್ಠ ಗಂಭೀರ ಚಿಂತಕ’ ಎಂದು ಘೋಷಿಸಲಾಗುವುದೆಂದೂ ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ.

ನಗೆ ನಗಾರಿಗೆ ಪ್ರತಿಕ್ರಿಯೆಗಳು ಏಕಿಲ್ಲ? ಇದಕ್ಕಾದರೂ ಪ್ರತಿಕ್ರಿಯಿಸಿ!

- ನಗೆ ಸಾಮ್ರಾಟ್

6 Responses to this post.

  1. Posted by chetana chaitanya on July 14, 2008 at 5:00 pm

    Ahaa… AAhaaaa…. AAAAhaaaaa!
    Enu hELOdu idakke?

    innadrU ninna `naama’dheya tiLisuvanthavaraagi samraatarE!
    vishaya enu gotta? neevU namma hAgE `blog praje’ agidre samana manaska hondanike irtittu. taavu `blog samrata`ragidde problem agirOdu!
    ;)

    Reply

  2. ಅಹುದಹುದು.
    ನಾನು ಈಗ ಗಂಭೀರ ಚಿಂತಕ ಆಗಲಿಲ್ಲ..!
    :-)

    Reply

  3. Posted by Nage samrat on July 14, 2008 at 9:00 pm

    ಚೇತನಾರವರೇ,
    ಪ್ರತಿಕ್ರಿಯೆಯ ಮೊದಲಲ್ಲೇ ಇಷ್ಟೋಂದು ನಕ್ಕು ಬಿಟ್ಟಿರುವುದರಿಂದ ನಿಮ್ಮನ್ನು ‘ಶ್ರೇಷ್ಠ ಗಂಭೀರ ಚಿಂತಕ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.

    ‘ಬ್ಲಾಗ್ ಸಾಮ್ರಾಟ್’ ಉಪಾದಿಗೆ ರಜೆಯನ್ನು ಕೊಟ್ಟು ಬ್ಲಾಗ್ ಜಗತ್ತಿನ ಪ್ರಜೆಯಾಗಲು ‘ಗಂಭೀರ ಚಿಂತನೆ’ ನಡೆಸಲು ನಗೆ ಸಾಮ್ರಾಟರು ತೀರ್ಮಾನಿಸಿದ್ದಾರೆ, ತಮಾಶೆಗೆ!

    ನಗೆ ಸಾಮ್ರಾಟ್

    Reply

  4. Posted by Nage samrat on July 14, 2008 at 9:01 pm

    ಗಣೇಶ್,
    ಗಂಭೀರ ಚಿಂತಕ ಆಗಲೂ ಪ್ರಯತ್ನಿಸ ಬೇಡಿ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ!
    Thinking is injurious to health!!

    ನಗೆ ಸಾಮ್ರಾಟ್

    Reply

  5. Posted by hema on July 19, 2008 at 2:17 pm

    ನಿಮ್ಮಬ್ಲಾಗ್ ನೋಡಿ ನಗೋದೇ ನಮ್ಮ ಪ್ರತಿಕ್ರಿಯೆ ಸಾಮ್ರಾಟ್ ರೇ ಅದನ್ನ ಹೇಳುವುದೆಂತು? ಸಾಮ್ರಾಟ್ ರಿಗೇ ಕಾಮೆಂಟ್ ಮಾಡಿದ್ರೆ ತಪ್ಪಾಗೋಲ್ವೇ?

    Reply

  6. Posted by Nage samrat on July 19, 2008 at 2:56 pm

    ಸಾಮ್ರಾಟರಿಗೆ ಇಷ್ಟೋಂದು ಗೌರವ ಕೊಟ್ಟು ಮರ ಹತ್ತಿಸುತ್ತಿರುವುದನ್ನು ನೋಡಿದರೆ, ಬಹಳ ದೊಡ್ಡ ಗುಂಡಿಯೇ ಕಾದಿದೆ ತಳ್ಳಲು ಎಂದು ಕಾಣುತ್ತದೆ. ಸಾಮ್ರಾಟರು ತುಂಬಾ ಹುಶಾರಾಗಿದ್ದಾರೆ!

    ನಗೆ ಸಾಮ್ರಾಟ್

    Reply

Respond to this post