‘‘ಕೆಂಪಾ’ ಪೊಯೆಟ್ಟಾ ಅಂಕಲ್?”

(ನಗೆ ನಗಾರಿ ಭಾಷೆ – ಸಾಹಿತ್ಯ ಬ್ಯೂರೋ)

ಕನ್ನಡ ಸಾಹಿತ್ಯ ಲೋಕವನ್ನು ಸದಾ ಸುದ್ದಿಯಲ್ಲಿಟ್ಟಿರಬೇಕು ಎಂಬುದನ್ನು ಕೆಲವು ಕವಿಗಳು ಮಾಜಿ ಸಾಹಿತಿಗಳು ತಪ್ಪಾಗಿ ಅರ್ಥೈಸಿಕೊಂಡು ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳ ವಾಚಕರ ವಾಣಿ ಎಂಬ ನಿರಪರಾಧಿ ಅಂಕಣವನ್ನು ರಣಾಂಗಣವಾಗಿಸಿಕೊಂಡು ಮುದಿ ಹೋರಿಗಳಂತೆ ಒಬ್ಬರನ್ನೊಬ್ಬರು ಮೊಂಡಾದ ಕೊಂಬಿನೊಂದಿಗೆ ತಿವಿದುಕೊಳ್ಳುತ್ತಾ, ತಾವೇ ಹಾಕಿದ ಸಗಣಿಯನ್ನು ಕೆದರುತ್ತಾ ಹೊಲಸೆಬ್ಬಿಸುತ್ತಾ ಅದನ್ನು ಕನ್ನಡದ ಕಂಪು ಎಂದು ಭ್ರಮಿಸುತ್ತಿರುವುದನ್ನು ಕಂಡು ನಗೆ ಸಾಮ್ರಾಟರಿಗೆ ಎಲ್ಲಿಲ್ಲದ ಕನಿಕರ.

ಮುರುಘ ಸ್ವಾಮಿಗಳು ಆಶೀರ್ವಚನ ಕೊಡುತ್ತಾ ಚಪ್ಪಲಿ ಕೀಳು ಎನ್ನುವ ಭಾವನೆಯ ಹಿಂದೆ ಕಾಲು ಮೆಟ್ಟುವ ವಸ್ತು ಕೀಳು ಮಟ್ಟದ್ದು. ಕಾಲು ಮನ್ನಣೆಗೆ ತಕ್ಕದಾದುದಲ್ಲ. ಹೀಗಾಗಿ ಜಾತಿ ಪದ್ಧತಿ ಹುಟ್ಟಲು ಕಾರಣವೆನ್ನಲಾದ ಪುರುಷ ಸೂಕ್ತದಲ್ಲಿ ಶೂದ್ರರನ್ನು ವಿಷ್ಣುವಿನ ಕಾಲಿನಿಂದ ಹುಟ್ಟಿಬಂದವರು ಎನ್ನಲಾಗಿದೆ. ತಲೆಯಿಂದ ಹುಟ್ಟಿ ಬಂದವರು ಎಂದುಕೊಂಡಿರುವ ಬ್ರಾಹ್ಮಣರು ತಲೆ ಇಡೀ ದೇಹದಲ್ಲಿ ಶ್ರೇಷ್ಠ ಎಂದು ವಾದಿಸುತ್ತಾ, ನಂಬಿಸುತ್ತಾ ಬಂದಿದ್ದಾರೆ. ಕಾಲುಗಳು ನಿಕೃಷ್ಟ. ಈ ಪದ್ಧತಿ ತೊಲಗ ಬೇಕು. ಚಪ್ಪಲಿಗಳು ಅವಜ್ಞೆಗೆ ಒಳಗಾಗಿರುವುದನ್ನು ಕೊಂಚ ಚಿಕಿತ್ಸಿಕ ಮನೋಭಾವದಿಂದ ಎದುರಿಸಬೇಕು ಎಂದರು. ಚಪ್ಪಲಿ ಹಾರ ಹಾಕಿಕೊಳ್ಳುವಂತಹ ಮನೋಭಾವ ಸೃಷ್ಟಿಯಾಗಬೇಕು ಎಂದು ಆಶಿಸಿದರು.

ಅದನ್ನು ಎಲ್ಲರೂ ಮರುದಿನದ ಪತ್ರಿಕೆಗಳಲ್ಲಿ ಓದಿದರು. ಕಿಡಿಗೇಡಿಯೊಬ್ಬ ಸ್ವಾಮಿಗಳಿಂದಲೇ ಅದು ಮೊದಲಾಗಬೇಕು ಎಂದು ಮಹಾನ್ ಗುರುಭಕ್ತನ ಹಾಗೆ ಪತ್ರ ಬರೆದ. ಮರುದಿನದಿಂದ ಸಾರಸ್ವತ ಲೋಕದ ಮಾಜಿ ಸಾಹಿತಿಗಳ ಪ್ರತಿನಿಧಿಯಂತಿರುವ ಕಣ್ಣು ‘ಕೆಂಪಾ’ರವರು ಸ್ವಾಮಿಜಿಯವರ ಬೆಂಬಲಕ್ಕೆ ನಿಂತು ಕಿಡಿಗೇಡಿಯ ಪತ್ರಕ್ಕೆ ಉತ್ತರ ಬರೆದು ಅದಕ್ಕೆ ಕಡ ತಂದ ಖಾರ ಬೆರೆಸಿ ಒಗಾಯಿಸಿದರು. ತಮ್ಮ ಬ್ಯಾಗಿನಲ್ಲಿದ್ದ ಹಳೆಯ ಡೈಲಾಗುಗಳನ್ನೆಲ್ಲಾ ಹೊರಕ್ಕೆ ತೆಗೆದು ಮೊಂಡಾಗಿದ್ದವುಗಳನ್ನು ಪಾಲಿಶ್ ಮಾಡತೊಡಗಿದರು. ‘ಓ ನನ್ನ ಚೇತನಾ ಆಗು ನೀ ಅನಿಕೇತನ’ ಎಂದು ವಿಶ್ವ ಮಾನವತೆಯನ್ನು ಸಾರಿದ ಸಾಹಿತಿ ವರೇಣ್ಯರ ವಾರಸುದಾರರು ಎಂದು ಹೇಳಿಕೊಳ್ಳುವವರು ಎಗ್ಗಿಲ್ಲದೆ ಜಾತಿಯನ್ನು ಮುಂದೆ ಮಾಡಿಕೊಂಡು ಕಚ್ಚಾಡಲು ಶುರು ಮಾಡಿದರು. ಜನರಿಗೋ ಸಾಹಿತಿಗಳ ಕಚ್ಚಾಟಗಳನ್ನು, ವಿವಾದಗಳನ್ನು ಎಂಜಾಯ್ ಮಾಡಲು ಎಲ್ಲಿಲ್ಲದ ಆಸಕ್ತಿ. ಎರಡು ಗಂಧದ ಕೊರಡು ಪರಸ್ಪರ ತಿಕ್ಕಿಕೊಂಡಾಗ ಹೊಮ್ಮುವುದು ಶ್ರೀಗಂಧದ ಪರಿಮಳ ಎಂದು ಭ್ರಮಿಸಿಕೊಂಡು ಜನರು ಕೊಚ್ಚೆಯಲ್ಲಿ ಕಲ್ಲು ಹಾಕುತ್ತಿದ್ದಾರೆ. ಮೈಮೇಲೆ ಕೊಳಕು ಸಿಡಿದಾಗಲೇ ಅವರಿಗೆ ಮೈಮೇಲೆ ಜ್ಞಾನ ಬರುವುದು.

ಈ ಮಧ್ಯೆ ನಗೆ ಸಾಮ್ರಾಟರು ಸಾಹಿತಿಗಳ ಸರಸ-ವಿರಸದ ಬಗ್ಗೆ ಇಂದಿನ ಯುವ ಜನತೆಯ ಅಭಿಪ್ರಾಯವನ್ನು ತಿಳಿಯಲು ಮುಂದಾದರು. ಒಬ್ಬ ತಡವರಿಸಿಕೊಂಡು ಇಂಗ್ಲೀಷಿನ ಮಧ್ಯೆ ಕನ್ನಡ ಬೆರೆಸುತ್ತಾ, ‘U know uncle, ನಂಗೇನೋ ಬರಾಕ್ ಒಬಾಮಮನೇ best ಅನ್ನಿಸುತ್ತೆ. Even my friends say so. Sorry, You asked me abt caste know.. um, ದೇಶಕ್ಕೆ ಒಳ್ಳೇದು ಅನ್ನೋದಿದ್ರೆ our poets should ಯೂಸ್ ಇಟ್. ಎನಿವೇ ಈ ‘ಕೆಂಪಾ’ uncle poet ಅಂತೆ ಹೌದಾ? How much does it cost to be poet uncle? ಯಾಕಂದ್ರೆ, I think, if it is affordable, i could give a try. ‘ ಎಂದದ್ದನ್ನು ಕೇಳಿ ಕಛೇರಿಗೆ ಎದ್ದು ಬಿದ್ದು ಓಡಿ ಬಂದು ತಣ್ಣಗೆ ಒಂದು ಲೋಟ ನೀರು ಕುಡಿದಿದ್ದಾರೆ ಎಂಬುದು ಔಟ್ ಆಫ್ ರೆಕಾರ್ಡ್!

6 Responses to this post.

  1. Posted by Tina on July 8, 2008 at 10:43 am

  2. Posted by Nage samrat on July 8, 2008 at 12:11 pm

  3. Posted by hema on July 8, 2008 at 4:33 pm

    jagathalli duddige yella siguvaga poetry sigolve samratare?

    Reply

  4. Posted by Nage samrat on July 8, 2008 at 8:04 pm

    ಪೊಯೆಟ್ರೀನೂ ಸಿಕ್ಕುತ್ತೆ, ಪೊಯೆಟ್ಸೂ ಸಿಕ್ತಾರೆ. ಒಮ್ಮೆ ಪಂಪ ಮಹಾಕವಿ ರಸ್ತೆ ಗುಂಟ ಬೀಟ್ ಹಾಕಿ ನೋಡಿ!!
    :)

    ನಗೆ ಸಾಮ್ರಾಟ್

    Reply

  5. I’ll also try, if it is affordable… ;)

    -Shettaru

    Reply

  6. Posted by Nage samrat on July 9, 2008 at 3:05 pm

Respond to this post