ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಸಾಮ್ರಾಟರ ಬೀಟಿನ ಏಟಿಗೆ ಬಲಿಯಾದ ಮಿಕಗಳ್ಯಾವುವು ನೋಡೋಣ ಬನ್ನಿ…
‘ಕೆಂಡ ಸಂಪಿಗೆ’ಯ ಸುದ್ದಿಕ್ಯಾತ
ಕೃತಕ ಪ್ಲಾಸ್ಟಿಕ್ ಹೂವು ಕೇಳಿದ್ದೀರಿ, ಕೃತಕ ಹಣ್ಣು ಕೇಳಿದ್ದೀರಿ, ಕೃತಕ ಮಗು ಕೇಳಿದ್ದೀರಿ, ಕೃತಕ ಹೃದಯವನ್ನೂ ಕೇಳಿದ್ದೀರಿ ಆದರೆ ಕೃತಕ ಲೇಖಕ ಕಾದಂಬರಿ ಬರೆದದ್ದನ್ನು ಕೇಳಿದ್ದೀರಾ? ಇಂಥದ್ದೊಂದು ಸುದ್ದಿಯನ್ನು ಬೀಟಿನಲ್ಲಿ ಹಿಡಿದು ತಂದಿದ್ದಾನೆ ಸುದ್ದಿ ಕ್ಯಾತ. ಕಾಲ್ಪನಿಕ ಲೇಖಕ ಬರೆದ ಕಾಲ್ಪನಿಕ ಕೃತಿಗಳು ಪಡೆದ ಮನ್ನಣೆ, ಕೊನೆಗೆ ಅಸಲು ಲೇಖಕ ಬೆಳಕಿಗೆ ಬಂದು ತೆರಬೇಕಾದ ದಂಡದ ಬಗ್ಗೆ ಇಲ್ಲಿ ಮಾಹಿತಿಯಿದೆ.
ಆದರೆ ಬಾಟಮ್ ಕೆಳಗಿನ ಲೈನರ್ನಲ್ಲಿ ಕ್ಯಾತ “ಭೈರಪ್ಪನವರ ಆವರಣ ಕಾದಂಬರಿಯ ನಾಯಕಿ ಲಕ್ಷ್ಮಿ/ರಜಿಯಾ ಬರೆದ ಕಾದಂಬರಿ ಪ್ರಕಾಶನಗೊಂಡರೆ ಅದು ಆವರಣಕ್ಕಿಂತ ಹೆಚ್ಚು ಮಾರಾಟವಾಗುವುದೇ?” ಎನ್ನುವ ಮೂಲಕ ಕ್ಯಾತೆ ತೆಗೆಯುವುದನ್ನು ಮಾತ್ರ ಮರೆಯಲಿಲ್ಲ!
ಕೋಮುವಾದದ ಸದ್ದಡಗಿಸುವ ಮಾತನ್ನು ಮಾಡುತ್ತಿದ್ದಾರೆ ಎಲ್ಲರೂ. ಆದರೆ ಕೋಮುವಾದವನ್ನು ಅಳಿಸಿ ಮಾನವೀಯತೆಯನ್ನು ಉಳಿಸುವುದು ಎಷ್ಟು ಸುಲಭ ಎಂದು ಪಂಚಿಸಿದ್ದಾರೆ ಗಣೇಶ್.
ಬೊಗಳೂರು ಚುನಾವಣಾ ಬ್ಯೂರೋ ‘ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ’ಮಾಡಿದೆ. ತನ್ನ ವಿರೋಧಿ ಪತ್ರಿಕೆಯಲ್ಲಿ ಪ್ರಕಟವಾಗಬೇಕಾದ ಜಾಹೀರಾತನ್ನು ಕದ್ದು, ಕೆರೆದು ಪ್ರಕಟಿಸಿದ್ದಾರೆ. ಅವರ ‘ಪ್ರಣಾಳಶಿಶು’ವಿನ ಸ್ಯಾಂಪಲ್ ನೋಡಿ ಇಲ್ಲಿ:
ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.
ಇಂಥ ಪ್ರಣಾಳಶಿಶುವನ್ನು ಕೊಟ್ಟರೆ ಮತದಾರರು ಅನಾಥರನ್ನಾಗಿ ಮಾಡುವುದಿಲ್ಲ ಎಂಬ ನಂಬಿಕೆ ಬರತೊಡಗಿದೆ. ಮರದ ಮೇಲಿನಿಂದ ಆಪಲ್ ಬಿದ್ದು ನ್ಯೂಟನ್ನನಿಗೆ ಗುರುತ್ವಾಕರ್ಷಣೆಯ ಬಗ್ಗೆ ಹೊಳೆದಂತೆ ಮುಂದೊಂದು ದಿನ ನಗೆ ಸಾಮ್ರಾಟರ ತಲೆಯ ಮೇಲೆ ತೆಂಗಿನ ಮರದಿಂದ ತೆಂಗಿನ ಕಾಯಿ ಬಿದ್ದು ಜ್ಞಾನೋದಯವಾಗಿ ಅವರು ಚುನಾವಣೆಯಲ್ಲಿ ನಿಲ್ಲುವ ತೀರ್ಮಾನ ಕೈಗೊಂಡರೆ ಇಂಥ ಭರ್ಜರಿ ‘ಪ್ರಣಾಳಶಿಶು’ಗಳಿಗೆ ಜನ್ಮ ನೀಡಲು ಬೊಗಳೆಯ ಕಿರಿಕಿರಿ ಸಂಪಾದಕನನ್ನು ಎತ್ತಿಹಾಕಿಕೊಂಡು ಬರಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.
“ಅಳತೆ ಮೀರಿದರೆ ಆಪತ್ತು ಅಂತ ತಿಳಿದು ‘ಮದ್ಯಸಾರ’ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!”
ಎಂದು ಹೇಳಿ ನಮ್ಮಂತಹ ಅಸಂಖ್ಯ ಮದ್ಯಾಭಿಮಾನಿಗಳನ್ನು ಸಾರದಿಂದ ಮಂಚಿಸುವ ತೀರ್ಮಾನ ಮಾಡಿರುವ ಅಪಾರ ‘ಮದ್ಯಸಾರ’ ಪುಸ್ತಕವಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ‘ಕಿಕ್’ ಕೊಟ್ಟಿದ್ದಾರೆ.
ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು ಕಮೆಂಟ್ ಮಾಡಿದ್ದಾಳೆ. ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು:
ಇದೇ ವೇಳೆ ಜನರನ್ನು ತಮ್ಮ ಹಾಸ್ಯ’ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!
(ಕಳೆದ ವಾರದ ಬ್ಲಾಗ್ ಬೀಟ್)
0 responses so far ↓
There are no comments yet...Kick things off by filling out the form below.