( ನಗಾರಿ ಅನುಕಂಪ ಬ್ಯೂರೋ)
ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಚುನಾವಣೆಯನ್ನು ನಡೆಸಲು ಸರ್ವ ಸನ್ನದ್ಧರಾಗಿ ನಿಂತಿರುವ ಗೋಪಾಲಸ್ವಾಮಿಯವರ ನೇತೃತ್ವದ ಚುನಾವಣಾ
ಆಯೋಗ ಪ್ರಜಾತಂತ್ರ ವಿರೋಧಿಯಾದದ್ದು ಎಂದು ಸರ್ವಪಕ್ಷಗಳ ನಾಯಕರು ಖಾಸಗಿ ವೇದಿಕೆಯಲ್ಲಿ ಊಳಿಡುತ್ತಿರುವುದು ವರದಿಯಾಗಿದೆ. ನಾಯಕರುಗಳ ಆಲಾಪವನ್ನು ಬೆಂಬಲಿಸಿರುವ ಕೆಲವು ಅನಧಿಕೃತ, ಕೆಲವು ಅಧಿಕೃತ ಬುದ್ಧಿಜೀವಿಗಳು ಮತ್ತು ಕೆಲವು ಸಾರ್ವತ್ರಿಕ ಲದ್ದಿ ಜೀವಿಗಳು ಸಹ ಚುನಾವಣಾ ಆಯೋಗ ಜನರ ವಿರೋಧಿ ಎಂದು ಬೊಬ್ಬಿರಿಯುತ್ತಿವೆ.
Keep reading →
Categories: ಇತರೆ
Tagged: ನೀತಿ ಸಂಹಿತೆ, code of conduct, election commision, gopalaswami
ಭಾರತೀಯ ಜತನ ಪಕ್ಷ
ನಿಮಗೆ ಮಳೆಗಾಲದಲ್ಲಿ ಮಳೆ ಬಂತೇ? ಇಲ್ಲ!
ಬೇಸಿಗೆಯಲ್ಲಿ ಅಕಾಲಿಕ ಮಳೆ ಬಂದು ತೊಂದರೆಯಾಯ್ತೇ? ಹೌದು!
ಇದಕ್ಕೆಲ್ಲಾ ಕಾರಣ ಅರವತ್ತು ವರ್ಷಗಳಿಂದ ನಿಮ್ಮನ್ನಾಳಿದ ಕಾಂಗ್ರೆಸ್…
ಇಷ್ಟು ವರ್ಷಗಳಿಂದ ಅವರು ನಿಮ್ಮನ್ನು ದೋಚಿದ್ದಾರೆ, ನಿಮ್ಮನ್ನು ಮೋಸ ಮಾಡಿದ್ದಾರೆ, ನಿಮ್ಮನ್ನು ಗೋಳು ಹೋಯ್ದುಕೊಂಡಿದ್ದಾರೆ, ನಿಮ್ಮ ನೆಮ್ಮದಿಯನ್ನು ಕಸಿದಿದ್ದಾರೆ…
ನಮಗೂ ಒಂದು ಅವಕಾಶ ಕೊಡಿ!
(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗವನ್ನು ಜೆಟ್ ಲೀ ಹಾಗೂ ಉಳಿದ ಭಾಗದ ಮೂರನೇ ಒಂದು ಭಾಗವನ್ನು ಚೆಡ್ಡಿ, ಕರೆಂಟು ಅಂದಾಜೆ, ಕುಮಾರಾನಂತರು ಕೊಟ್ಟಿದ್ದಾರೆ)
ಕೈ ಎಸ್ಸು
ನಿಮಗೆ ದಿನಾ ನಮ್ಮ ಮುಖಗಳನ್ನು ನೋಡಲು ಸಾಧ್ಯವಾಗುತ್ತದೆಯೇ? ಇಲ್ಲ. ನಾವು ನಿಮಗೆ ಸಿಕ್ಕುವುದಕ್ಕೆ ಸಾಧ್ಯವೇ ಆಗುವುದಿಲ್ಲ (ನಾವು ಯಾವಾಗಲೂ ದೆಹಲಿಯಲ್ಲಿರುತ್ತೇವಲ್ಲಾ?)
ಹೀಗಾಗಿ ನಾವು ನಿಮಗೆಲ್ಲಾ ಉಚಿತವಾಗಿ ಕಲರ್ ಟಿವಿ ಕೊಡ್ತೀವಿ. ಅದರಲ್ಲಿ ದಿನಾ ನಮ್ಮ ಬ್ಲಾಕ್ ಅಂಡ್ ವೈಟ್ ಮುಖವನ್ನು ನೋಡುತ್ತಾ ಕೂರಬಹುದು.
ನಿಮಗೆ ಅಕ್ಕಿ, ಕೊಡ್ತೇವೆ, ನೀವು ಸೋಮಾರಿ ಯುವಕರಾದರೆ ಸ್ಟೈಫಂಡ್ ಕೊಡ್ತೇವೆ….
ಏನೂ ಕೊಡಲಾಗದಿದ್ದರೂ ನಮ್ಮ ಚಿಹ್ನೆಯನ್ನೇ ಕೊಡುತ್ತೇವೆ… ಹೊಸಬರಿಗಿಂತ ಹಳೆಯರು ವಾಸಿ ಅಲ್ಲವೇ?
(ಈ ಜಾಹೀರಾತಿನ ಖರ್ಚು ಭಾಗ ಭಾಗವಾಗಿ ಹತ್ತೆಂಟು ಮಂದಿ ಭರಿಸಿದ್ದು, ಕುರ್ಚಿಯನ್ನು ಕಂಚಿಕೊಳ್ಳಲು ಸಮ್ಮಿಶ್ರ ಸಿ.ಎಂ ಪ್ರಹಸನ ನಡೆಯಬಹುದಾದ ಸಂಭವನೀಯತೆ ಇದೆ)
ತಂದೆ ಮಕ್ಕಳ ಪಕ್ಷ
ನಮ್ಮದು ಮಕ್ಕಳ ಪಕ್ಷ. ನೋಡಿ ನೀವು ಧೃತರಾಷ್ಟ್ರನ ಕಥೆಯನ್ನು ಓದಿಕೊಂಡು ಬಂದವರು. ನಮ್ಮ ಸುಯೋಧನನಂಥ ಮಗನನ್ನು ಬಿಟ್ಟು ರಾಜ್ಯ ನಡೆಸಲು ಸಾಧ್ಯವಾಗುತ್ತದಾ?
ಇಪ್ಪತ್ತು ತಿಂಗಳಲ್ಲಿ ನಾವು ಏನು ಅಂತ ತೋರಿಸಿದ್ವಿ. ಅದನ್ನೇ ಪೂರ್ತಿ ಸಿನೆಮಾ ಅಂದ್ಕೋಬೇಡಿ. ನೀವು ನಂಬಲಿಕ್ಕಾಗದ್ದನ್ನೆಲ್ಲಾ ಮಾಡಲು ನಮಗೆ ಸಾಧ್ಯವಿದೆ. ಒಂದು ಅವಕಾಶ ಕೊಟ್ಟು ನೋಡಿ…
ನಮ್ಮ ಪಕ್ಷದ ಚಿಹ್ನೆ ‘ಹೊರೆ ಹೊತ್ತ ಮಹಿಳೆ’ ಆದರ್ಶವನ್ನು ನಾವು ಜಾರಿಗೆ ತರುವೆವು….
(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗ ಕಸ್ತೂರಿಯಿಂದ ಹರಿದು ಬಂದಿದ್ದರೆ ಮತ್ತರ್ಧ ಅತ್ತ ರಾ..ಅಧಿಕರ ಅನಧಿಕೃತ ಅಕೌಂಟಿನಿಂದ ಬಂದಿದೆ)
ಕೆಂಪು ಪಕ್ಷ
ಕೋಮುವಾದಿ ಜಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕೆ ನಮ್ಮ ಹೋರಾಟ!
ಜಾತಿವಾದಿ ಜೆಡಿಸ್ಸುನ್ನು ಅಧಿಕಾರದಿಂದ ದೂರವಿಡಲು ನಮ್ಮ ಹೋರಾಟ!
ಇನ್ನು ನಾವು ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ನಾವು ಸರಕಾರ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಮಗೆ ಕಾಂ-ಗೆಸ್ಸಿನ ಆಸರೆ ಬೇಕು. ಅವರೊಂದಿಗೆ ಸೇರಿ ಸರಕಾರ ಮಾಡುತ್ತೇವೆ.
ಆಮೇಲೆ ಮತ್ತೆ ನಮ್ಮ ಹೋರಾಟ ಮುಂದುವರೆಸುತ್ತೇವೆ… ಬೆಲೆಯೇರಿಕೆ ವಿರುದ್ಧ, ಸರಕಾರದ ವಿರುದ್ಧ… ಹಾಗಂತ ಸರಕಾರ ಬೀಳಿಸುವ ಅಪಾಯ ಒಡ್ಡುವುದಿಲ್ಲ….
(ಜಾಹೀರಾತಿಗೆ ಹಣ ಹೊಂದಿಸುವುದಕ್ಕೆ ಕಾಡಿಗೆ ಹೋದವರು ಇನ್ನೂ ಹಿಂದಿರುಗಿಲ್ಲ)
(ಉಳಿದ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಜೇಬಲ್ಲಿ ಕಾಸಿಲ್ಲದೆ ಜಾಹೀರಾತು ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. -ನಗೆ ಸಾಮ್ರಾಟ್)
Categories: ರಾಜಕೀಯ
Tagged: adverstisements, political parties
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
Keep reading →
Categories: ಬ್ಲಾಗ್ ಬೀಟ್
Tagged: ಕೆಂಡ ಸಂಪಿಗೆ, ಪಂಚ್ ಲೈನ್, ಬೊಗಳೆ ರಗಳೆ, ಸುದ್ದಿ ಕ್ಯಾತ, blog beat, blogs intro, collection, fun, humor, prakash shetty punch, pun
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
ನಗೆ ಸಾಹಿತಿಗಳ ಹೆಸರಿನಲ್ಲಿ ‘ನಗದು’ ಮಾಡಿಕೊಳ್ಳುವ ‘ನಗಿಸುವ ಏಜೆಂಟ’ರುಗಳು ನಮ್ಮನ್ನು ತಮ್ಮ ರಿಪೀಟಾದ ಜೋಕುಗಳಿಂದ, ಹಳಸಿಹೋದ ಹಾಸ್ಯಪ್ರಸಂಗಗಳು, ಕದ್ದು ತಂದ, ಕೆರೆದು-ಹರಿದು ಹಿಂದಿ, ಇಂಗ್ಲೀಷು ಚಾನಲ್ಲುಗಳಿಂದ ಅಪಹರಿಸಿದ ಹಾಸ್ಯವನ್ನು ನಮ್ಮ ಮುಂದಿಟ್ಟು ಅಳುವಂತೆ ಮಾಡುವಲ್ಲಿ ಸಫಲರಾಗುತ್ತಿರುವಾಗ ಕೆಲವೇ ಕೆಲವರು ನಮ್ಮನ್ನು ನಗಿಸುವಲ್ಲಿ ಸಫಲರಾಗಿದ್ದಾರೆ. ಅಂಥವರಲ್ಲಿ ಪ್ರಮುಖರು ಪ್ರಾಣೇಶ್. ಪ್ರಾಣೇಶ್ ಬೀಚಿ.
Keep reading →
Categories: ಇತರೆ
Tagged: ನಗೆ ಸಾಮ್ರಾಟ್, ಪ್ರಾಣೇಶ್ ಬೀಚಿ, ಬೀಚಿ, ಹಾಸ್ಯ ಕಾರ್ಯಕ್ರಮ, recommandation
………………………………………………………………………………………..
ಜೀವನದಲ್ಲಿ ಆಶಾಭಂಗವನ್ನು
ತಪ್ಪಿಸಬೇಕಾದರೆ ಇರುವ
ಒಂದೇ ಉಪಾಯ: ಯಾವುದನ್ನೂ ಆಶಿಸಲೇಬಾರದು.
-ಬೀchi
………………………………………………………………………………………..
(ಕಳೆದ ವಾರದ ವಾರದ ವಿವೇಕ)
Categories: ವಾರದ ವಿವೇಕ
Tagged: ಬೀಚಿ, ವಾರದ ವಿವೇಕ, beechi, nage nagaari, quote, wisdom, wit
(ನಗಾರಿ ತನಿಖಾ ಬ್ಯೂರೋ)
‘ಉತ್ತಮ ಸಮಾಜಕ್ಕಾಗಿ’ ಎಂಬ ಪಂಚಿಂಗ್ ಹಾಗೂ ಪರಿಣಾಮಕಾರಿ ಸ್ಲೋಗನ್ನನ್ನು ಹೊತ್ತುಕೊಂಡು ಕನ್ನಡದಲ್ಲಿ ಕಣ್ತೆರದದ್ದು ಟಿವಿ ೯ ಸುದ್ದಿ ಚಾನಲ್ಲು. ಇದು ಶುರುವಾಗಿ ಈಗಾಗಲೇ ತುಂಬಾ ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಈ ಚಾನಲ್ಲಿನಿಂದ ಸಮಾಜ ಎಷ್ಟು ‘ಉತ್ತಮ’ವಾಗಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಗೆ ಸಾಮ್ರಾಟರು ತಮ್ಮ ಪತ್ತೇದಾರಿಕೆಯ ಚೇಲ ಕುಚೇಲನನ್ನು ಕಟ್ಟಿಕೊಂಡು ಅಜ್ಞಾತ ಪ್ರದೇಶಕ್ಕೆ ಪಲಾಯನಗೈದಿದ್ದಾರೆ.
‘ರಾಜಕಾರಣಿಗಳೇ ಎಚ್ಚರ..! ಮಾತಾಡುವ ಮುನ್ನ ಯೋಚಿಸಿ’ ಎಂದು ಚುನಾವಣೆಯ ಕಾವು ಜ್ವರದಂತೆ ಏರುತ್ತಿರುವ ಸಂದರ್ಭದಲ್ಲಿ ರೋಫ್ ಹಾಕುತ್ತಿರುವ ಈ ಸುದ್ಧಿ ಮಾಧ್ಯಮ ಆಶ್ವಾಸನೆಗಳನ್ನು ನೀಡುವಂತಹ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ತೋಳು ಮೇಲೇರಿಸುತ್ತಿದೆ. ಅವರ ಈ ಉತ್ಸಾಹ, ಆರ್ಭಟಕ್ಕೆ ಕಾರಣವನ್ನು, ಪ್ರೇರಣೆಯನ್ನೂ ಪತ್ತೆ ಹಚ್ಚಬೇಕೆಂದು ಮೂಲವನ್ನು ಹುಡುಕಿಹೊರಟ ಸಾಮ್ರಾಟ್ ಹಾಗೂ ಕುಚೇಲರಿಗೆ ಅಪಾರ ಶ್ರಮದ ನಂತರ ಉತ್ತರ ಸಿಕ್ಕೇ ಬಿಟ್ಟಿತು. ರಾಜಕಾರಣಿಗಳ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಬರೀ ಆಶ್ವಾಸನೆಗಳನ್ನು ಕೊಟ್ಟಿರೋ ಹುಶಾರ್! ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಮ್ಮ ತಲೆಗಳನ್ನು ಹಾರಿಸಿಯೇವು ಎಂದು ಬೀಗುತ್ತಿರುವುದರ ಹಿಂದಿನ ನೈತಿಕ ಶಕ್ತಿ ದೊರೆತಿರುವುದು ಇವರು ತಮ್ಮ ಆಶ್ವಾಸನೆಯಾದ ‘ಉತ್ತಮ ಸಮಾಜಕ್ಕಾಗಿ ಟಿವಿ ೯’ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿರುವುದೇ ಆಗಿದೆ.
ಸುದ್ದಿ ಎಂದರೆ ಅವರಿವರಿಂದ ಕೇಳಿದ್ದು, ರಾತ್ರಿ ಕಾದು ಮನೋರಂಜನೆಯ ಕಾಂಟ್ರಾಕ್ಟ್ ತೆಗೆದುಕೊಂಡ ಚಾನಲ್ಲುಗಳಲ್ಲಿ ಪ್ರಸಾರವಾಗುವ ಸುದ್ಧಿಯನ್ನು ನೋಡಿ ತಿಳಿಯುವುದು, ರಾತ್ರಿ ನಿರಾಳವಾಗಿ ನಿದ್ದೆ ಮಾಡಿ ಎದ್ದು ಬೆಳಿಗ್ಗೆ ಪೇಪರ್ ಓದುವುದು ಎಂದು ತಿಳಿದಿದ್ದ ಸಾಮಾನ್ಯ ಜನೆತೆಗೆ ಸುದ್ಧಿಯ ಬಗ್ಗೆ ಅರಿವನ್ನು ಮೂಡಿಸಿದ ಆ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಈ ಚಾನಲ್ಲು ತೆಗೆದುಕೊಂಡ ಶ್ರಮವನ್ನು ಇಲ್ಲಿ ನೆನೆಯಲೇ ಬೇಕು. ‘ಗಂಡನಿಗೆ ಹೆಂಡತಿಯ ಮೇಲೆ ಸಂಶಯ… ಕೊಲೆ’, ‘ಕರ್ನಾಟಕದವರು ಕಚಡಾಗಳು: ಮಾನ್ಯ ಮಂತ್ರಿ’, ‘ತಾಕತ್ತಿದ್ದರೆ ಹೀಗೆ ಮಾಡಿ: ಅನಾಮಿಕ’ ಎಂಬಂಥ ಫ್ಲಾಶ್, ಬ್ರೇಕಿಂಗ್ ಸುದ್ದಿಗಳನ್ನು ಅಪಾರ ಆಸಕ್ತಿಯಿಂದ ಜನರು ನೋಡಲು ಶುರುಮಾಡಿರುವುದು ಉತ್ತಮ ಸಮಾಜ ಕಟ್ಟುವ ಕೆಲಸದ ಮೊದಲ ಹಂತ. ಅದನ್ನು ಟಿವಿ ೯ ಯಶಸ್ವಿಯಾಗಿ ನಿರ್ವಹಿಸಿದೆ.
ಹಾಲಿವುಡ್ಡು, ಬಾಲಿವುಡ್ಡು, ಸ್ಯಾಂಡಲ್ವುಡ್ಡು, ಕಾಲಿವುಡ್ಡು ಎಂದು ಏನೇನೋ ಹೊಸ ಪದಗಳನ್ನು ಮೇಲಿಂದ ಮೇಲೆ ಹೇಳುತ್ತಾ, ಬಿಡುಗಡೆಯಾಗುವ(ಎಲ್ಲಿಂದ?) ಸಿನೆಮಾದ ನಾಯಕರನ್ನು, ಹಣ ಕೊಟ್ಟ ನಿರ್ಮಾಪಕರನ್ನು ಕರೆಸಿಕೊಂಡು ಹರಟೆ ಹೊಡೆದು ನಾಲ್ಕೈದು ಹಾಡುಗಳನ್ನು ಹಾಕಿ, ಅಡ್ವರ್ಟೈಸ್ಮೆಂಟಿನ ನಡುವೆ ಸಮಯ ಮಾಡಿಕೊಂಡು ಚಿತ್ರದ ದೃಶ್ಯಗಳನ್ನು ತೋರಿಸಿ ಜನರನ್ನು ರಂಜಿಸುತ್ತಾ ಜನರು ವಾಸ್ತವದ ಕಷ್ಟನಷ್ಟಗಳು, ಬೆಳೆದ ಬೆಲೆಗೆ ಬೆಲೆಯಿಲ್ಲದ ಕಂಗಾಲಾದ ರೈತ ತನ್ನ ಬವಣೆಯನ್ನು, ಹೋರಾಟದ ಯೋಜನೆಯನ್ನೆಲ್ಲಾ ಮರೆತು ಬಣ್ಣದ ಲೋಕದಲ್ಲಿ ವಿಹರಿಸುತ್ತಾ ಪಲಾಯನವಾದಿಯ ಶ್ರೇಷ್ಠ ಸ್ಥಾನವನ್ನೇರಲು ಟಿವಿ ೯ ಕೈಲಾದಷ್ಟು ನೆರವು ನೀಡುತ್ತಿರುವುದು ಅದರ ಎರಡನೆಯ ಹಂತದ ಸಾಧನೆಯ ಫಲ.
ವರ್ಷಾನುಗಟ್ಟಲೆ ಮುಂದಾಳುಗಳ ಗರಡಿಯಲ್ಲಿ ಪಳಗಿ, ಸಿದ್ಧಾಂತ-ಪ್ರತಿ ಸಿದ್ಧಾಂತಗಳನ್ನು ಅರೆದುಕುಡಿದು, ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಹತ್ತಿರ ನೇರವಾಗಿ ಹೋಗಿ ಬೆರೆತು ಅವರ ಸಮಸ್ಯೆಯ ಮೂಲಗಳನ್ನು ಅರಿತು, ಆಳವಾದ ಅಧ್ಯಯನವನ್ನು ಮಾಡಿ, ಬೇರಿನ ಮಟ್ಟದಿಂದ ಸಂಘಟನೆಯನ್ನು ಮಾಡುತ್ತಾ ಬೆಳೆದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ, ಚಳುವಳಿಗಳನ್ನು ಆಯೋಜಿಸುವ ನಾಯಕರು, ಮುತ್ಸದ್ಧಿಗಳಿಂದಾಗಿ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ತುಂಬಾ ದೀರ್ಘಕಾಲವನ್ನು ಅಪೇಕ್ಷಿಸುತ್ತದೆ ಎಂಬುದನ್ನು ತಮ್ಮ ‘ಆಳ’ವಾದ ಅಧ್ಯಯನದಿಂದ ಕಂಡುಕೊಂಡ ಟಿವಿ ೯ರ ನೇತಾರರು ದಿಢೀರ್ ಚಳುವಳಿಗಾರರನ್ನು ಪ್ರೋತ್ಸಾಹಿಸುವ ಕ್ರಾಂತಿಕಾರಕ ಯೋಜನೆಯನ್ನು ಹಮ್ಮಿಕೊಂಡರು. ಫಾಸ್ಟ್ ಫುಡ್, ಫಾಸ್ಟ್ ಲೈಫ್ ಸ್ಟೈಲ್ ಅಲ್ಲದೆ ಕ್ರಿಕೆಟ್ಟಿನಲ್ಲೂ ಫಾಸ್ಟಾದ ಟಿ೨೦ ಬಂದಿರುವಾಗ ಈ ಚಳುವಳಿ, ಪ್ರತಿಭಟನೆಗಳ್ಯಾಕೆ ಗಂಭೀರವಾಗಿರಬೇಕು ಎಂದು ಯೋಚಿಸಿ ಇವರು ನಾಡಿನಾದ್ಯಂತ ಹುಟ್ಟಿಕೊಂಡ ಅಸಂಖ್ಯ ವೇದಿಕೆ, ಸೇನೆ, ಪಡೆ, ದಳಗಳಿಗೆ ವಿಶೇಷ ಆದ್ಯತೆಯನ್ನು ನೀಡಿತು. ಅದರಲ್ಲೂ ಪ್ರತಿಭಟನೆಯೆಂಬುದು ಕೇವಲ ಬಾಯಿ ಮಾತಾಗಬಾರದು ‘ಕಾಯಾ’ ವಾಚಾ ಮನಸಾ ನಡೆಯಬೇಕು. ಹಾಗಾಗಿ ಸುಮ್ಮನೆ ಒಂದೆಡೆ ಕುಳಿತು ಪ್ರತಿಭಟನೆಯನ್ನು ದಾಖಲಿಸುವುದು, ಯಾರದೋ ಸಮಸ್ಯೆಗಾಗಿ ತಾವು ಉಪವಾಸ ಕುಳಿತುಕೊಳ್ಳುವುದು, ಸತ್ಯಕ್ಕಾಗಿ ಆಗ್ರಹಿಸುವುದು ಎಲ್ಲವೂ ‘ಅವೈಜ್ಞಾನಿಕ’ ಹಾಗೂ ‘ಅಪ್ರಾಯೋಗಿಕ’ ಎಂಬುದನ್ನು ಕಂಡುಕೊಂಡ ಇವರು ಮೇಜು, ಕುರ್ಚಿ, ಕಂಪ್ಯೂಟರುಗಳನ್ನು ಪುಡಿಪುಡಿ ಮಾಡುವುದನ್ನೂ, ಕಲ್ಲೆಸೆದು ಅನ್ಯಾಯ ಮಾಡುವವರ ಕೈ, ಕಾಲು, ಕಣ್ಣುಗಳಿಗಾಗಿ ‘ಆಗ್ರಹ’ ಮಾಡುವುದನ್ನು ಬೆಂಬಲಿಸಿ ಆ ‘ಹೋರಾಟ’ಗಳಿಗೆ ಪೂರ್ಣ ಪ್ರಮಾಣದ ಕವರೇಜ್ ಕೊಟ್ಟು ಉತ್ತಮ ಸಮಾಜಕ್ಕಾಗಿ ಈ ವಾಹಿನಿ ನಡೆಸುತ್ತಿರುವ ಪ್ರಯತ್ನ ಗಮನ ಸೆಳೆದಿದೆ.
ನ್ಯಾಯ, ನೀತಿಗಾಗಿ, ಅಪರಾಧ-ಶಿಕ್ಷೆ ತೀರ್ಮಾನಕ್ಕಾಗಿ ಪೋಲೀಸು, ಕೋರ್ಟುಗಳನ್ನು ನಂಬಿಕೊಂಡು ವರ್ಷಗಳ ಕಾಲ ಅಲೆದಾಡುವುದರಿಂದ ಸಮಾಜ ಕಷ್ಟ ಅನುಭವಿಸುತ್ತಿದೆ ಎಂಬುದನ್ನು ಗಮನಿಸಿದ ಟಿವಿ ಒಂಭತ್ತು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದೆ. ಮನೆಯಲ್ಲಿ ಸಿಕ್ಕ ಕಳ್ಳನನ್ನು, ವರದಕ್ಷಿಣೆಗಾಗಿ ಪೀಡಿಸಿದ ಗಂಡನ ಮನೆಯವರನ್ನು, ವಂಚನೆ ಮಾಡಿದ ಲೇವಾದೇವಿಗಾರನನ್ನು, ಕಾಮುಕ ಶಿಕ್ಷಕನನ್ನು ಜನರೇ ಬೀದಿಗೆಳೆದು ಹಿಗ್ಗಾಮುಗ್ಗಾ ಬಾರಿಸುವ, ತಾವಾಗಿ ಶಿಕ್ಷೆಯನ್ನು ತೀರ್ಮಾನಿಸುವ ಹೊಸ ಪದ್ಧತಿಯನ್ನು ಅದು ಬೆಂಬಲಿಸುತ್ತಿದೆ. ಇದರಿಂದಾಗಿ ಜನರಿಗೆ ‘ತ್ವರಿತ’ಗತಿಯಲ್ಲಿ ನ್ಯಾಯ ಸಿಕ್ಕುವುದಲ್ಲದೆ ಆರೋಪಿಗೂ ತಕ್ಕ ಶಿಕ್ಷೆ ಸಿಕ್ಕುತ್ತದೆ ಎಂಬುದು ಇವರ ವಿಚಾರ. ಹೀಗಾಗಿ ಎಲ್ಲೋ ಒಂದು ಕಡೆ ಒಬ್ಬನು ವಂಚನೆ ಮಾಡುತ್ತಿದ್ದಾನೆ ಎಂದರೆ ಜನರನ್ನು ಈ ಬಗೆಯ ಹೋರಾಟಕ್ಕೆ ಸಿದ್ಧ ಮಾಡುವಂತೆ, ‘ಇವರಿಗೇನು ಮಾಡಬೇಕು? ಜನರೇ ತೀರ್ಮಾನಿಸಬೇಕು’ ಎಂದು ಪ್ರಚೋದಿಸಿ ಅವರು ವಂಚಕನಿಗೆ ತದಕುವುದನ್ನು ಲೈವ್ ಕವರೇಜ್ ಮಾಡಿ ‘ಜನರ ತೀರ್ಮಾನ’ವನ್ನು ತೋರಿಸಿ ಕೃತಾರ್ತರಾಗುತ್ತಿದ್ದಾರೆ. ಇದೂ ಸಹ ಉತ್ತಮ ಸಮಾಜಕ್ಕಾಗಿ ಟಿವಿ ೯ರ ಕೊಡುಗೆ.
ಆತ್ಮಕಥೆಯೊಂದು ಪ್ರಕಟವಾಗಿ ಅದನ್ನು ಓದುವ ಸಮಯವಿದ್ದವರು ಓದಿ ಅದರಲ್ಲಿನ ಆಕ್ಷೇಪಾರ್ಹ ಸಂಗತಿಗಳನ್ನು ಚರ್ಚಿಸಿ ಅವುಗಳ ವಿರುದ್ಧ ಮಾತನಾಡುವ, ಉದ್ದೇಶ ಪೂರಿತವಾಗಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹಾಕುವ ಕೆಲಸಗಳು ತುಂಬಾ ಸಮಯ ತಿನ್ನುತ್ತವೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ ಎಂಬ ಸಂಗತಿಯನ್ನು ಸೂಕ್ಷವಾಗಿ ಅವಲೋಕಿಸಿದ ಈ ವಾಹಿನಿ ಆತ್ಮಕಥೆಯೊಂದು ಬಿಡುಗಡೆಯಾಗುವ ಮೊದಲೇ ಅದರಲ್ಲೇನಿದೆ ಎಂಬುದನ್ನು ದಿನವಿಡೀ ಪ್ರಸಾರ ಮಾಡಿ, ಆ ಪುಸ್ತಕವನ್ನು ನೋಡಿಯೇ ಇರದ, ಒಂದೇ ಒಂದು ಪುಟವನ್ನೂ ಓದದವರೆಲ್ಲಾ ಕೈಲಿ ಪ್ರತಿಭಟನೆಯ ‘ಅಸ್ತ್ರ’ಗಳನ್ನು ಹಿಡಿದುಕೊಂಡು ಬಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗುವಲ್ಲಿ ಸಹಕರಿಸಿದ ವಾಹಿನಿ ನಿಜಕ್ಕೂ ಉತ್ತಮ ಸಮಾಜ ಕಟ್ಟುವಲ್ಲಿ ಅಪಾರ ಶ್ರಮವಹಿಸುತ್ತಿದೆ.
ಇಷ್ಟು ಸತ್ಯಗಳನ್ನು ಪತ್ತೆ ಮಾಡುವಷ್ಟರಲ್ಲಿ ಸಾಮ್ರಾಟರೂ, ಅವರ ಪತ್ತೇದಾರಿಕೆಯ ಚೇಲ ಕುಚೇಲನೂ ಸುಸ್ತು ಹೊಡೆದು ಹೋದರು. ಆದರೂ ಸುದ್ದಿಯ ಹೆಸರಿನಲ್ಲಿ ಗಲ್ಲಿ ಗಾಸಿಪ್, ‘ಹೀಗೂ, ಈಗೂ ಉಂಟೆ’, ರಸ್ತೆ ಬದಿಯ ಕ್ರಿಕೆಟ್ ಅಭಿಮಾನಿಗಳ ಆಟದ ವಿಶ್ಲೇಷಣೆಗಳು ಮುಂತಾದ ಸಾಧನೆಗಳ ಬಗ್ಗೆ ಹಾಗೂ ಅವು ಉತ್ತಮ ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆಗಳ ಕುರಿತು ಇನ್ನೊಮ್ಮೆ ಪತ್ತೆದಾರಿಕೆ ಮಾಡಬೇಕೆಂದು ತೀರ್ಮಾನಿಸಿದರು.
Categories: ಹಾಸ್ಯ ಲೇಖನ
Tagged: ಟಿವಿ ನೈನ್, journalism, news channel, tabloidism, tv9
(ನಗಾರಿ ಸಂ-ಚೋದನಾ ಬ್ಯೂರೋ)
ಹುಡುಗರು ಹುಡುಗಿಯರು ಒಟ್ಟಾಗಿ ಕಲಿಯುವಂತಹ ಶಾಲೆಗಳಲ್ಲಿ ಹುಡುಗರ ವರ್ತನೆ ಹೆಚ್ಚು ಸಭ್ಯವಾಗಿರುತ್ತದೆ ಹಾಗೂ ಹುಡುಗರು ಚೆನ್ನಾಗಿ ಓದುತ್ತಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು.
ಹುಡುಗಿಯರೆದುರು ಹುಡುಗರು ಸಭ್ಯವಾಗಿ ವರ್ತಿಸುತ್ತಾರೆ. ಹುಡುಗಿಯರ ಮೆಚ್ಚುಗಾಗಿ ಅವರು ಚೆನ್ನಾಗಿ ಓದುತ್ತಾರೆ. ಹುಡುಗಿಯರು ಹುಡುಗರನ್ನು ‘ತಣ್ಣಗೆ’ ಮಾಡುತ್ತಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹುಡುಗ ಹುಡುಗಿಯರು ಒಟ್ಟಾಗಿ ಕಲಿಯುವುದರಿಂದ ಅವರ ನಡುವೆ ಹೆಚ್ಚಿನ ಹೊಂದಾಣಿಕೆ ಸಾಧ್ಯವಾಗುತ್ತದೆ ಹೆಚ್ಚು ಪ್ರಬುದ್ಧತೆ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ತರಗತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದಷ್ಟೂ ಹುಡುಗರು ಪರೀಕ್ಷೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಂಕಗಳಿಸುತ್ತಾರೆ ಎಂದು ಹೇಳಿದ್ದಾರೆ.
ಈ ಸಂಶೋಧನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದ ನಾಡಿನ ಸಮಸ್ತ ಹುಡುಗರು ಈ ಸಂಶೋಧನೆಯನ್ನು ಸಾದ್ಯಂತವಾಗಿ ಪರಿಶೀಲಿಸಿ ಶೀಘ್ರವೇ ಅದರ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
ಈ ಸಂಶೋಧನೆ ನಡೆದಿರುವುದು ಲಂಡನ್ನಿನಲ್ಲಾದರೂ ಅದನ್ನು ನಮ್ಮ ನಾಡಿನ ಹುಡುಗರು ಒಕ್ಕೊರಲಿನಿಂದ ಸ್ವಾಗತಿಸುವುದರ ಹಿಂದಿನ ಮರ್ಮ ಹಾಗೂ ಇದರಿಂದ ಹೇಗೆ ಹುಡುಗರ ಅಂಕ ಹೆಚ್ಚಬಹುದು ಎಂಬುದನ್ನು ಸಂ-ಚೋದಿಸಲು ನಗೆ ಸಾಮ್ರಾಟರು ಹೊರಟರು.
ಕಾಲೇಜುಗಳಲ್ಲಿ ಹುಡುಗರಲ್ಲಿ ಹೆಚ್ಚು ಮಂದಿ ಪರೀಕ್ಷೆಯ ಮುಖವನ್ನೇ ನೋಡಲು ಸಾಧ್ಯವಾಗದಿರುವುದಕ್ಕೆ ಅವರ ಅಟೆಂಡೆನ್ಸ್ ಕೊರತೆಯೇ ಬಹು ಮುಖ್ಯ ಕಾರಣವಾಗಿರುತ್ತದೆ. ಹುಡುಗರು ತರಗತಿಯ ಕ್ಲಾಸು ರೂಮು ಹೇಗಿರುತ್ತದೆ ಎಂಬುದನ್ನೇ ನೋಡಿರದಿದ್ದರೆ ಪರೀಕ್ಷೆಯಲ್ಲಿ ಉತ್ತರ ಹೇಗೆ ಬರೆಯಲು ಸಾಧ್ಯ ಎನ್ನುತ್ತಾರೆ ಉಪನ್ಯಾಸಕರು. ಕನಿಷ್ಠ ಪಕ್ಷ ಹುಡುಗರು ತರಗತಿಗಳಿಗೆ ಬಂದು ಕುಳಿತರೆ ತಾವು ಒದರುವ ಅಸಂಖ್ಯ ಪದಗಳಲ್ಲಿ ಒಂದೆರಡಾದರೂ ಸ್ವಪ್ರಯತ್ನದಿಂದ ಹುಡುಗರ ಕಿವಿಗಳನ್ನು ಹೊಕ್ಕು ಅವರ ಮೆದುಳಿನಲ್ಲಿ ದಾಖಲಾಗಬಹುದು ಎಂಬ ದೂರದ ಆಸೆ ಉಪನ್ಯಾಸಕರದು.
ಆದರೆ ಹುಡುಗರೇಕೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂಬುದನ್ನು ಪತ್ತೆ ಹಚ್ಚಲು ಹೊರಟ ಸಾಮ್ರಾಟರಿಗೆ ಅನೇಕ ಕಾರಣಗಳು ಸಿಕ್ಕವು. ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಸಿನೆಮಾ ಥಿಯೇಟರುಗಳು, ಕಾಫಿ ಡೇಗಳು, ಕಾಲೇಜು ಕ್ಯಾಂಟೀನುಗಳು, ಬೇರೆಯ ತರಗತಿಯ ಕ್ಲಾಸ್ ರೂಮುಗಳ ಬಳಿ ಬೀಟ್ ಹಾಕುವುದಕ್ಕೆ ಬಲವಾದ ಕಾರಣವಿದೆ. ತಮ್ಮ ತರಗತಿಯಲ್ಲಿ ಇಲ್ಲದ ಹುಡುಗಿಯರಿಗಾಗಿ ಇವರು ಕ್ಲಾಸ್ ರೂಮ್ನಿಂದ ತಪ್ಪಿಸಿಕೊಂಡು ಹೊರಗೆ ಅಲೆಯುವ ಕಷ್ಟವನ್ನು ಪಡಬೇಕಾಗುತ್ತದೆ.
ಆದ್ದರಿಂದ ತರಗತಿಯಲ್ಲಿ ಹುಡುಗಿಯರ ಸಂಖ್ಯೆಯನ್ನು ಹೆಚ್ಚು ಮಾಡುವುದರಿಂದ ಹುಡುಗರು ಅವರಿಗಾಗಿ ಹೊರಗೆ ಅಲೆಯುವ ತಾಪತ್ರಯ ತಪ್ಪುತ್ತದೆ. ಅಲ್ಲದೆ ಹುಡುಗರ ಸಂಖ್ಯೆಗಿಂತ ಹೆಚ್ಚು ಹುಡುಗರು ತರಗತಿಯಲ್ಲಿದ್ದರೆ ಎಲ್ಲರಿಗೂ ಆಯ್ಕೆಯ ಸ್ವಾತಂತ್ರವೂ ಸಿಕ್ಕುತ್ತದೆ. ಇದರಿಂದ ಹುಡುಗರು ಕ್ಲಾಸುಗಳನ್ನು ಬಂಕ್ ಮಾಡಿ ಹೊರಗೆ ಬೀಟ್ ಹಾಕುವುದು ತಪ್ಪುತ್ತದೆ. ಆಗ ಅವರು ದಿನ ನಿತ್ಯ ತಪ್ಪದೆ, ಸಮಯಕ್ಕೆ ಸರಿಯಾಗಿ ತರಗತಿಗೆ ಬರುತ್ತಾರೆ. ಇದರಿಂದ ಅವರ ಹಾಜರಾತಿಯೂ ಉತ್ತಮವಾಗುತ್ತದೆ. ಅಪರೂಪಕ್ಕೆ ಅವರ ಕಿವಿಯ ರಕ್ಷಣಾ ಕೋಟೆಯನ್ನು ಬೇಧಿಸಿ ಕೆಲವು ಪಾಠಗಳು ಮೆದುಳನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಅವರು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂಬ ಸಂ-ಚೋಧನೆಯನ್ನು ಮಾಡಿ ವರದಿ ತಯಾರಿಸಿದ್ದಾ ಸಾಮ್ರಾಟರು.
ಈ ನಡುನೆ ಲೇಡಿ ಲೆಕ್ಚರರ್ ತೆಗೆದುಕೊಳ್ಳುವ ಸಬ್ಜೆಕ್ಟಿನಲ್ಲಿ ಹುಡುಗರ ಹಾಜರಾತಿ ಅತ್ಯಧಿಕವಾಗಿರುವ ಸತ್ಯಸಂಗತಿಯನ್ನು ಪತ್ತೆ ಹಚ್ಚಿರುವ ಸಾಮ್ರಾಟರ ಚೇಲ ಕುಚೇಲನು ಈ ಸಂಗತಿಯನ್ನೂ ವರದಿಯಲ್ಲಿ ಸೇರಿಸಲು ಸಾಮ್ರಾಟರ ಬೆನ್ನು ಬಿದ್ದಿದ್ದಾನೆ.
Categories: ಇತರೆ
Tagged: ಕಾಲೇಜು, ಹುಡುಗಿಯರು, boys, co education, fake news, girls
(ನಗಾರಿ ಮನೋರಂಜನಾ ಬ್ಯೂರೋ)
ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.
ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, “ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು” ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ. 
ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ ಪ್ರಚಂಡ ಹುಟ್ಟಿಬಿಟ್ಟಿದ್ದಾನೆ. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!
Categories: ಇತರೆ
Tagged: ಕ್ರಿಕೆಟ್, ಧಾರಾವಾಹಿ, IPL, serials, TRP
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
ನಗಾರಿ ಇಷ್ಟು ದಿನ ಅಂತರ್ಜಾಲದ ತಾಣಗಳನ್ನು ರೆಕಮಂಡ್ ಮಾಡುತ್ತಿತ್ತು. ಈ ಬಾರಿ ಕನ್ನಡದ ಒಂದು ಸಿನೆಮಾವನ್ನು ರೆಕಮಂಡ್ ಮಾಡುತ್ತಿದೆ.
ನಗೆ ಸಾಮ್ರಾಟರು ಸಿನೆಮಾ ಬಿಡುಗಡೆಯಾದ ದಿನವೇ ನೋಡಿದ ಮೊದಲ ಸಿನೆಮಾವಿದು. ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾ. ‘ಅರಮನೆ’. ಹೌದು, ಈ ಸಿನೆಮಾದಲ್ಲಿ ನಿಮಗಿಷ್ಟವಾಗುವ ಅನೇಕ ಅಂಶಗಳು ಸಿಕ್ಕಬಹುದು. ಆದರೆ ಸಾಮ್ರಾಟರಿಗೆ ಇಷ್ಟವಾದದ್ದು ಹಾಸ್ಯಕ್ಕೆ ಚಿತ್ರದಲ್ಲಿ ಕೊಟ್ಟಿರುವ ಗೌರವ. ನಾಯಕ ನಟ ನಿಮಗೆ ಹತ್ತಿರವಾಗುವುದು ಆತ ಎಲ್ಲರನ್ನೂ ನಗಿಸುವುದರಿಂದ. ಆತ ಇದ್ದಲ್ಲಿ ಜನರು ಲವಲವಿಕೆಯಿಂದ, ನಗುನಗುತ್ತಾ ಇರುತ್ತಾರೆ ಎಂಬುದೇ ಆತನ ದೊಡ್ಡತನವಾಗುತ್ತದೆ. ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವವರನ್ನು ಜನರು ನಂಬುತ್ತಾರೆ, ಯಾರಲ್ಲೂ ತೆರೆದುಕೊಳ್ಳದವರು ಅಂಥವರಲ್ಲಿ ತಮ್ಮ ಸಮಸ್ತ ವೈಯಕ್ತಿಕ ಬದುಕನ್ನೂ ತೆರೆದುಕೊಳ್ಳುತ್ತಾರೆ.
‘ಅರಮನೆ’ಯ ಒಂದು ಸನ್ನಿವೇಶವನ್ನು ಹೇಳಬೇಕು. ನಾಯಕಿ ಪೊಲೀಸ್ ಕಮಿಶನರ್ ಮಗಳು, ಮೆಡಿಕಲ್ ವಿದ್ಯಾರ್ಥಿ ಬೇರೆ. ನಾಯಕ ಆಕೆಯ ಹುಟ್ಟು ಹಬ್ಬದ ದಿನ ಆಕೆಗೆ ಹೂವಿನ ದೊಡ್ಡ ಸ್ಟ್ಯಾಂಡನ್ನೇ ಕೊಟ್ಟು “ಶ್ರೀಮಂತರು ಹುಟ್ಟುಹಬ್ಬದ ದಿನ ಅನಾಥ ಮಕ್ಕಳಿಗೆ ಊಟ ಹಾಕಿಸ್ತಾರಂತೆ ಹೌದಾ?” ಎನ್ನುತ್ತಾನೆ. ಆಕೆ “ಹೌದು” ಎನ್ನುತ್ತಾಳೆ. ಅದಕ್ಕೀತ, “ಹೇಗಿದ್ರೂ ನಾನೂ ಅನಾಥ, ನಂಗೇ ಊಟ ಕೊಡಿಸಿಬಿಡಿ ಎನ್ನುತ್ತಾನೆ.” ಇಂಥ ಅಪರೂಪದ ಹಾಸ್ಯ ನಿಮಗೆ ಸಿಗುವುದು ಅರಮನೆಯಲ್ಲಿ ಮಾತ್ರ.
(ಕಳೆದ ಸಂಚಿಕೆಯ ನಗಾರಿ ರೆಕಮಂಡೇಶನ್)
Categories: ಇತರೆ
Tagged: aramane, ಅರಮನೆ, cinema, ganesh, nage samrat
ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಸಾಮ್ರಾಟರ ಬೀಟಿನ ಏಟಿಗೆ ಬಲಿಯಾದ ಮಿಕಗಳ್ಯಾವುವು ನೋಡೋಣ ಬನ್ನಿ…
‘ಕೆಂಡ ಸಂಪಿಗೆ’ಯ ಸುದ್ದಿಕ್ಯಾತ
ಕೃತಕ ಪ್ಲಾಸ್ಟಿಕ್ ಹೂವು ಕೇಳಿದ್ದೀರಿ, ಕೃತಕ ಹಣ್ಣು ಕೇಳಿದ್ದೀರಿ, ಕೃತಕ ಮಗು ಕೇಳಿದ್ದೀರಿ, ಕೃತಕ ಹೃದಯವನ್ನೂ ಕೇಳಿದ್ದೀರಿ ಆದರೆ ಕೃತಕ ಲೇಖಕ ಕಾದಂಬರಿ ಬರೆದದ್ದನ್ನು ಕೇಳಿದ್ದೀರಾ? ಇಂಥದ್ದೊಂದು ಸುದ್ದಿಯನ್ನು ಬೀಟಿನಲ್ಲಿ ಹಿಡಿದು ತಂದಿದ್ದಾನೆ ಸುದ್ದಿ ಕ್ಯಾತ. ಕಾಲ್ಪನಿಕ ಲೇಖಕ ಬರೆದ ಕಾಲ್ಪನಿಕ ಕೃತಿಗಳು ಪಡೆದ ಮನ್ನಣೆ, ಕೊನೆಗೆ ಅಸಲು ಲೇಖಕ ಬೆಳಕಿಗೆ ಬಂದು ತೆರಬೇಕಾದ ದಂಡದ ಬಗ್ಗೆ ಇಲ್ಲಿ ಮಾಹಿತಿಯಿದೆ.
ಆದರೆ ಬಾಟಮ್ ಕೆಳಗಿನ ಲೈನರ್ನಲ್ಲಿ ಕ್ಯಾತ “ಭೈರಪ್ಪನವರ ಆವರಣ ಕಾದಂಬರಿಯ ನಾಯಕಿ ಲಕ್ಷ್ಮಿ/ರಜಿಯಾ ಬರೆದ ಕಾದಂಬರಿ ಪ್ರಕಾಶನಗೊಂಡರೆ ಅದು ಆವರಣಕ್ಕಿಂತ ಹೆಚ್ಚು ಮಾರಾಟವಾಗುವುದೇ?” ಎನ್ನುವ ಮೂಲಕ ಕ್ಯಾತೆ ತೆಗೆಯುವುದನ್ನು ಮಾತ್ರ ಮರೆಯಲಿಲ್ಲ!
ಪಂಚ್ ಲೈನ್
ಕೋಮುವಾದದ ಸದ್ದಡಗಿಸುವ ಮಾತನ್ನು ಮಾಡುತ್ತಿದ್ದಾರೆ ಎಲ್ಲರೂ. ಆದರೆ ಕೋಮುವಾದವನ್ನು ಅಳಿಸಿ ಮಾನವೀಯತೆಯನ್ನು ಉಳಿಸುವುದು ಎಷ್ಟು ಸುಲಭ ಎಂದು ಪಂಚಿಸಿದ್ದಾರೆ ಗಣೇಶ್.
ಬೊಗಳೆ
ಬೊಗಳೂರು ಚುನಾವಣಾ ಬ್ಯೂರೋ ‘ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ’ಮಾಡಿದೆ. ತನ್ನ ವಿರೋಧಿ ಪತ್ರಿಕೆಯಲ್ಲಿ ಪ್ರಕಟವಾಗಬೇಕಾದ ಜಾಹೀರಾತನ್ನು ಕದ್ದು, ಕೆರೆದು ಪ್ರಕಟಿಸಿದ್ದಾರೆ. ಅವರ ‘ಪ್ರಣಾಳಶಿಶು’ವಿನ ಸ್ಯಾಂಪಲ್ ನೋಡಿ ಇಲ್ಲಿ:
ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.
ಇಂಥ ಪ್ರಣಾಳಶಿಶುವನ್ನು ಕೊಟ್ಟರೆ ಮತದಾರರು ಅನಾಥರನ್ನಾಗಿ ಮಾಡುವುದಿಲ್ಲ ಎಂಬ ನಂಬಿಕೆ ಬರತೊಡಗಿದೆ. ಮರದ ಮೇಲಿನಿಂದ ಆಪಲ್ ಬಿದ್ದು ನ್ಯೂಟನ್ನನಿಗೆ ಗುರುತ್ವಾಕರ್ಷಣೆಯ ಬಗ್ಗೆ ಹೊಳೆದಂತೆ ಮುಂದೊಂದು ದಿನ ನಗೆ ಸಾಮ್ರಾಟರ ತಲೆಯ ಮೇಲೆ ತೆಂಗಿನ ಮರದಿಂದ ತೆಂಗಿನ ಕಾಯಿ ಬಿದ್ದು ಜ್ಞಾನೋದಯವಾಗಿ ಅವರು ಚುನಾವಣೆಯಲ್ಲಿ ನಿಲ್ಲುವ ತೀರ್ಮಾನ ಕೈಗೊಂಡರೆ ಇಂಥ ಭರ್ಜರಿ ‘ಪ್ರಣಾಳಶಿಶು’ಗಳಿಗೆ ಜನ್ಮ ನೀಡಲು ಬೊಗಳೆಯ ಕಿರಿಕಿರಿ ಸಂಪಾದಕನನ್ನು ಎತ್ತಿಹಾಕಿಕೊಂಡು ಬರಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದಾರೆ.
ಅಪಾರ
“ಅಳತೆ ಮೀರಿದರೆ ಆಪತ್ತು ಅಂತ ತಿಳಿದು ‘ಮದ್ಯಸಾರ’ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!”
ಎಂದು ಹೇಳಿ ನಮ್ಮಂತಹ ಅಸಂಖ್ಯ ಮದ್ಯಾಭಿಮಾನಿಗಳನ್ನು ಸಾರದಿಂದ ಮಂಚಿಸುವ ತೀರ್ಮಾನ ಮಾಡಿರುವ ಅಪಾರ ‘ಮದ್ಯಸಾರ’ ಪುಸ್ತಕವಾಗುತ್ತಿದೆ ಎಂದು ಹೇಳುವ ಮೂಲಕ ಹೊಸ ‘ಕಿಕ್’ ಕೊಟ್ಟಿದ್ದಾರೆ.
ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು ಕಮೆಂಟ್ ಮಾಡಿದ್ದಾಳೆ. ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು:
ಇದೇ ವೇಳೆ ಜನರನ್ನು ತಮ್ಮ ಹಾಸ್ಯ’ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!
(ಕಳೆದ ವಾರದ ಬ್ಲಾಗ್ ಬೀಟ್)
Categories: ಬ್ಲಾಗ್ ಬೀಟ್
Tagged: ಕೆಂಡ ಸಂಪಿಗೆ, ಪಂಚ್ ಲೈನ್, ಬೊಗಳೆ ರಗಳೆ, ಮದ್ಯಸಾರ, ಸುದ್ದಿ ಕ್ಯಾತ, blog beat, blogs intro, collection, fun, humor, pun