ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ!

ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಣೆಯಾಗಿದೆ. ಸಾಮ್ರಾಜ್ಯದಲ್ಲಿ ಬಹಳಾ ಕಾಲದಿಂದ ಸುಪ್ತವಾಗಿ ನಡೆಯುತ್ತಿದ್ದ ಆಂತರಿಕ ಕಲಹ ಕಳೆದ ಕೆಲವು ದಿನಗಳಲ್ಲಿ ತಾರಕಕ್ಕೇರಿದೆ. ಇಡೀ ಸಾಮ್ರಾಜ್ಯವೇ ಎರಡು ಗುಂಪಾಗಿ ಒಡೆದು ಹೋಳಾಗಿ ಪರಸ್ಪರ ಭೀಕರವಾಗಿ ಹೋರಾಡುತ್ತಿವೆ. ಇದರಿಂದ ಸಾಮ್ರಾಟರ ನೆಮ್ಮದಿ ಭಗ್ನವಾಗಿದೆ. ಸಾಮ್ರಾಜ್ಯದೆಲ್ಲೆಡೆ ಅರಾಜಕತೆ ಸ್ಥಾಪಿತವಾಗಿದೆ.

ಸಾಮ್ರಾಟರ ಭಾಗವೇ ಆಗಿರುವ ಸಾಮ್ರಾಜ್ಯದಲ್ಲಿ ಆಂತರಿಕ ಕಲಹ ಸ್ಪೋಟಗೊಂಡು ಸಾಮ್ರಾಟರು ಕಳವಳಗೊಂಡಿದ್ದರು. ಎರಡೂ ಪಾಳಯದವರು ಹೆಚ್ಚು ಹೆಚ್ಚು ಹೋರಾಡಿದಷ್ಟೂ ಸಾಮ್ರಾಟರು ದುರ್ಬಲರಾಗಲು ತೊಡಗಿದ್ದಾರೆ. ಸಮಯವೆಷ್ಟು ಉರುಳಿದರೂ ಯಾವೊಂದು ಪಾಳಯವೂ ಸೋಲುವ ಸಂಭವ ಕಾಣುತ್ತಿಲ್ಲ. ಎರಡೂ ಪಾಳಯಗಳಲ್ಲಿ ಶಕ್ತಿ ಸಂವರ್ಧನೆಯಾಗುತ್ತ ಹೋಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ತಮ್ಮ ಆಪ್ತ ಸಲಹೆಗಾರರ ನಿರ್ದೇಶನದ ಮೇರೆಗೆ ಸಾಮ್ರಾಟರು ನಗೆ ಸಾಮ್ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ತಮ್ಮ ಸಾಮ್ರಾಜ್ಯದ ಪ್ರತಿ ಸದಸ್ಯನ ಸ್ವಾತಂತ್ರ್ಯವನ್ನೂ ಕಸಿದುಕೊಂಡು ಸರ್ವಾಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾರೆ. ತಮ್ಮ ಅಂತರಂಗದ ಭಾಗವೇ ಆಗಿರುವಂತಹ ಪ್ರಜೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು, ಅವರ ಅಭಿವ್ಯಕ್ತಿಯ, ಪ್ರತಿಭಟನೆಯ ಶಕ್ತಿಯನ್ನೇ ದಮನಿಸುವುದು ಸಾಮ್ರಾಟರಿಗೆ ಅತ್ಯಂತ ದುಃಖ ಕೊಡುವ ಕೆಲಸ. ಆದರೂ ಸಾಮ್ರಾಜ್ಯದ ನೆಮ್ಮದಿಯ ರಕ್ಷಣೆಯ ದ್ರುಷ್ಟಿ ಯಿಂದ ಈ ಕ್ರಮ ಅನಿವಾರ್ಯವಾಗಿದೆ.

ಸಾಮ್ರಾಜ್ಯದಲ್ಲಿ ತಾಂಡವವಾಡುತ್ತಿರುವ ಆಂತರಿಕ ಕಲಹ, ಅರಾಜಕತೆ ತಣ್ಣಗಾಗುವವರೆಗೆ ನಗೆ ನಗಾರಿ ಸದ್ದನ್ನು ಸಹ ನಿರ್ಬಂಧಿಸಲಾಗಿದೆ!

ದೊರೆ ನಗುವುದಕ್ಕೆ ಏನು ಮಾಡಬೇಕು?

(ನಗೆ ನಗಾರಿ ನಗದು ಬ್ಯೂರೋ)

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ ತ್ಯಾಗಗಳು ಅಪಾರ. ರಾಜ ಪ್ರಭುತ್ವವಿದ್ದಾಗಲೇ ಈ ಸಂಸ್ಕೃತಿಗೆ ಓನಾಮ ಹಾಕಿದವ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ. ಡ್ರೈ ಕ್ಲೀನರ್ ಒಬ್ಬನ ಮಾತಿಗೆ ಮಡದಿಗೇ ಡೈವೋರ್ಸ್ ನೀಡುವ ಅತಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯದ ಮಾತೇ? ಈ ನಿರ್ಧಾರಕ್ಕೆ ಯಾವ ವಿಧದಲ್ಲೂ ಕನಿಷ್ಠವಲ್ಲದ ನಿರ್ಧಾರವನ್ನು ಕರ್ನಾಟಕವೆಂದ ರಾಜ್ಯದ ದೊರೆಯು ತೆಗೆದುಕೊಂಡಿದ್ದಾನೆ. ಜನತೆಯ ಆಶೋತ್ತರಗಳಿಗಾಗಿ ಹಿಂದೆ ಯಾರೂ ಮಾಡದ ತ್ಯಾಗವನ್ನು ನಾಡಿನ ಅಧಿಪತಿ ಮಾಡಲು ಮುಂದಾಗಿದ್ದಾನೆ.

ತಾನು ಇನ್ನು ಮುಂದೆ ಸಿಡುಕು ಮೋರೆಯನ್ನು ಹೊತ್ತು ತಿರುಗುವುದಿಲ್ಲ. ಯಾರ ಮೇಲೆಯೂ ರೇಗುವುದಿಲ್ಲ. ನಗುಮುಖದಿಂದಲೇ ಇರುವೆ. ಸದಾನಂದ ಗೌಡರಿಗೆ ಪೈಪೋಟಿ ನೀಡುವ ಮಟ್ಟಿಗೆ ಹಲ್ಕಿರಿಯುವೆ. ನಗು ನಗುತ್ತಲೇ ಎಲ್ಲರನ್ನೂ ಮಾತಾಡಿಸುವೆ. ಇದು ಈ ನಾಡಿನಲ್ಲಿ ಹರಿಯುವ ನದಿಗಳಾಣೆಗೂ, ಕಬ್ಬನ್ ಪಾರ್ಕಿನಲ್ಲಿ ಬೆಳೆಯುವ ಹುಲ್ಲಿನ ಕಡ್ಡಿಯ ಆಣೆಗೂ, ದೇವೇಗೌಡರ ತಲೆಯ ಮೇಲಿನ ಕೂದಲ ಆಣೆಗೂ ಸತ್ಯ, ಸತ್ಯ, ಸತ್ಯ” ಎಂದು ಕಲಿಯುಗದ ಭೀಷ್ಮ ಪ್ರತಿಜ್ಞೆಯನ್ನು ಮಾಡುತ್ತಿರುವಾಗ ಆಕಾಶದಲ್ಲಿ ದೇವಾಧಿದೇವತೆಗಳು ಕಲೆತು ಹರ್ಷಿಸಿದರು. ಗಗನಕ್ಕೆ ಏರಿದ್ದು ಹೂವಾಗದೆ, ಅದರ ಬೆಲೆ ಮಾತ್ರವಾಗಿದ್ದರಿಂದ ಪುಷ್ಪ ವೃಷ್ಟಿಯ ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು.

ಭೀಷಣವಾದ ಪ್ರತಿಜ್ಞೆಯನ್ನು ಗೈದದ್ದು ಆಯಿತು ಆದರೆ ನುಡಿದಂತೆ ನಡೆಯುವುದು ಸುಲಭ ಸಾಧ್ಯವೇ? ಏಕೆಂದರೆ ನುಡಿಯುವುದು ಬಾಯಲ್ಲಿ ನಡೆಯಬೇಕಿರುವುದು ಕಾಲ ಮೇಲೆ! ಮೂಳೆಯಿಲ್ಲದ ಅಂಗ ಮಾಡಿದ ನಿರ್ಧಾರಕ್ಕೆ ಮೂಳೆಗಳಿರುವ ಅಂಗಗಳು ಶ್ರಮ ಪಡಬೇಕು.

ದೊರೆಯು ಇಪ್ಪತ್ನಾಲ್ಕು ಗಂಟೆಗಳಲ್ಲದಿದ್ದರೂ ಜನರ ಕಣ್ಣಲ್ಲಿರುವಾಗಲೆಲ್ಲಾ ನಗುಮುಖದಿಂದಲೇ ಕಾಣಬೇಕೆಂದು ಆತನ ಆಪ್ತ ಕಾರ್ಯದರ್ಶಿಗಳೆಲ್ಲ ಭೀಕರವಾದ ಉಪಾಯಗಳನ್ನು ಹೂಡಿದರು. ಕಾಲನ ಹಸ್ತಾಕ್ಷರವನ್ನೇ ಅಳಿಸಿ ಹಾಕಿ ಎಂಭತ್ತರ ಮುದುಕಿಯನ್ನು ಇಪ್ಪತ್ತರ ತರುಣಿಯಾಗಿಸುವ, ಅಡುಗೆ ಒಲೆಯ ಮಸಿಯ ಬಣ್ಣದ ಮುಖವನ್ನು ಚಂದ್ರನ ಬೆಳ್ದಿಂಗಳಲ್ಲಿ ತೊಳೆದು ಹೊಳೆಯಿಸುವ, ಹೆಣ್ಣನ್ನು ಗಂಡಾಗಿಸುವ ಗಂಡನ್ನು ಹೆಣ್ಣಾಗಿಸುವ ಮೇಕಪ್ ಮ್ಯಾಜಿಶಿಯನ್‌ಗಳು ದೊರೆಯ ಮುಖದ ಮೇಲಿನ ಸಿಡುಕನ್ನು ಒರೆಸಿ ತೆಗೆದು ನಗುವನ್ನು ಬಳಿಯಲಾರರೇ? ಮೇಕಪ್ ಮಾಂತ್ರಿಕರು ತಮ್ಮ ಕಾರ್ಯ ಶುರು ಮಾಡಿದರು. ದೊರೆಯ ಮುಖದ ಮೇಲೆ ನಾಲ್ಕಿಂಚು ದಪ್ಪನಾದ ನಗುವಿನ ಪದರವನ್ನು ಹಾಸುವಲ್ಲಿ ಯಶಸ್ವಿಯೂ ಆದರು. ತಮ್ಮ ಮುಖವನ್ನು ಕಂಡು ತಮ್ಮ ಕಣ್ಣುಗಳನ್ನು ತಾವೇ ನಂಬದಾದ ದೊರೆಯು ಪಕ್ಕದಲ್ಲಿದ್ದ ಇಸ್ತ್ರೀ ಸಚಿವೆಯ ಕೈ ಚಿವುಟಿ ನೋಡಿದರು.

ಮುಖದ ಮೇಲಿನ ನಗುವಿನ ಪದರವು ಎದೆಯಲ್ಲೂ ಆತ್ಮವಿಶ್ವಾಸದ ಪದರಗಳನ್ನು ಹಾಸಿದ್ದು ದೊರೆಯ ವರ್ತನೆಯಲ್ಲೇ ಕಾಣುತ್ತಿತ್ತು. ದೊರೆಯುವ ತನ್ನ ನಾಲ್ಕಿಂಚು ನಗುವಿನ ಪದರದಿಂದ ಪ್ರಜೆಗಳ ಹೃದಯಗಳನ್ನು ಸೂರೆ ಮಾಡುತ್ತ ನಡೆಯುತ್ತಿರುವಾಗ ಆ ಅವಘಡ ಸಂಭವಿಸಿಯೇ ಬಿಟ್ಟಿತು. ಬಳ್ಳಾರಿಯ ಮೂಲೆಯೊಂದರಲ್ಲಿ ಮೂಡಣದ ತಂಗಾಳಿ ಹಾಗೂ ಪಡುವಣದ ಬಿರುಗಾಳಿಯ ಸಂಯೋಗದಿಂದ ಹುಟ್ಟು ಪಡೆದ ಸುಂಟರಗಾಳಿಯು ಗಣಿಯ ಕೆಂಧೂಳಿನ ತಂಡವನ್ನು ಕಟ್ಟಿಕೊಂಡು ದೊರೆಯ ಮೇಲೆರಗಿತು. ಯುದ್ಧ ತರಬೇತಿಯಿಲ್ಲದ ದೊರೆಯ ನಗುವಿನಲೆಯ ನಾವಿಕರು ದೋಣಿಗಳೊಂದಿಗೆ ಮುಳುಗಿದರು. ಮೋಡಗಳು ಚದುರಿ ಸೂರ್ಯ ಕಂಡಂತೆ ದೊರೆಯ ಮುಖದ ಮೇಲಿನ ಸಿಡುಕು ಪ್ರಜ್ವಲವಾಗಿ ಹೊಳೆಯಲಾರಂಭಿಸಿತು.

ಮಾಂತ್ರಿಕರ ಕೈಬಿಟ್ಟ ದೊರೆಯ ಬಳಗ ವಿದೂಷಕರ ಕೈ ಹಿಡಿಯಿತು. ದೊರೆಯ ಮುಖದ ಮೇಲೆ ನಗುವರಳಿಸುವಲ್ಲಿ ಯಶಸ್ವಿಯಾಗುವ ವಿದೂಷಕನಿಗೆ ದೊರೆಯ ಅನಧಿಕೃತ ಪತ್ನಿಯ ಸಮಸ್ತ ಸಂಪತ್ತಿನಲ್ಲಿ ಅರ್ಧ ಭಾಗವನ್ನು ಕೊಡಲಾಗುವುದೆಂದು ಘೋಷಿಸಲಾಯ್ತು. ಆದರೆ ವಿದೂಷಕರ ಸಮಸ್ತ ಪ್ರತಿಭೆಯೂ ಗತಕಾಲದ ರಾಜಕುಮಾರಿಯನ್ನು ನಗಿಸುವಲ್ಲೇ ಖರ್ಚಾಗಿ ಹೋಗಿತ್ತು. ಅಲ್ಲದೆ ರಾಜಕುಮಾರಿಯನ್ನು ನಗಿಸುವಲ್ಲಿ ಸಫಲನಾದ ಒಬ್ಬ ವಿದೂಷಕನು ರಾಜಕುಮಾರಿಯನ್ನೇ ಮದುವೆಯಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇಲ್ಲೂ ಯಾವ ಯಶಸ್ಸೂ ಸಿಕ್ಕಲಿಲ್ಲ.

ಕಡೆಗೆ ಮೈಕೆಲ್ ಜಾಕ್ಸನನ ಮೂಗು, ಪೂಜಾ ಗಾಂಧಿಯ ಮಚ್ಚೆ, ರಾಖಿ ಸಾವಂತಳ ‘ಎದೆಗಾರಿಕೆ’ಯನ್ನು ತಿದ್ದಿ ತೀಡಿ ಆಧುನಿಕ ಶಿಲ್ಪಿಗಳಾದ ಪ್ಲಾಸ್ಟಿಕ್, ಪೇಪರ್ ಸರ್ಜನರ ಕಾಲಿಗೆರಗಲಾಯ್ತು. ದೊರೆಯ ಮುಖದಲ್ಲಿರುವ ಸಿಡುಕಿಗೆ ನೆರವಾಗುವ ಭಿನ್ನಮತೀಯ, ಬಂಡಾಯ ಮಾಂಸ ಖಂಡಗಳನ್ನು ರೆಸಾರ್ಟಿನಲ್ಲಿ ಬಂಧಿಸಿ ನಗುವಿನ ಪಕ್ಷಕ್ಕೆ ಎಳೆದುಕೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳಲಾಯ್ತು. ಸತತ ಮೂರು ಸೆಕೆಂಡುಗಳ ಮ್ಯಾರಥಾನ್ ಸರ್ಜರಿ ನಡೆಸಲಾಯ್ತು. ಈ ಆಪರೇಷನ್ ದೊರೆಮುಖ ದೊರೆಯ ಪಕ್ಷದ  ಹಿಂದಿನ ಸಾಧನೆಯಾದ ಆಪರೇಷನ್ ಕಮಲವನ್ನೂ ಬಾಡಿಸಿತು. ಸರ್ಜರಿ ಮುಗಿಸಿ ಕೈತೊಳೆದು ಸರ್ಜನರು ಹೊರಬಂದರು. ಆಪರೇಶನ್ ಥಿಯೇಟರಿನ ಪರದೆಯನ್ನು ಸರಿಸಿದೊಡನೆಯೇ ವಿರೋಧ ಪಕ್ಷದ ಎಪ್ಪತ್ತು ಮೀರಿದ ನಾಯಕರುಗಳು ದಿಡೀರ್ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟರು ಎಂಬುದಷ್ಟೇ ವರದಿಯಾಗಿದೆ.

bsyed 2007101454050401

 

arrow

ಇಗೋ ಇಲ್ಲಿದೆ ನಿಮ್ಮ ಭವಿಷ್ಯ!

(ನಗೆ ನಗಾರಿ ಭವಿಷ್ಯ ವಿತರಣಾ ಬ್ಯೂರೋ)

ಕನ್ನಡ ಪತ್ರಿಕೋದ್ಯಮ ಹಿಂದೆಂದೂ ಕಂಡರಿಯದ ಪ್ರಮಾಣದ ಬದ್ಧತೆಯನ್ನು ತೋರಿ ‘ರದ್ದಿಮನೆ’ಯ ಹಿರಿತಲೆಗಳ ಹಳೆಯ ಹೃದಯದ ಸ್ತಂಭನಕ್ಕೆ ನಗೆ ನಗಾರಿ ಡಾಟ್ ಕಾಮ್ ಕಾರಣವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಸರ್ವವೇದ್ಯವಾದ ಸಾಧನೆಯನ್ನು ಪುನರುಚ್ಛರಿಸುವುದಕ್ಕೆ ಕಾರಣವಿದೆ.

ಮನುಷ್ಯ ಬಹುವಾಗಿ ಹೆದರುವ ಮೂರು ಸಂಗತಿಗಳಲ್ಲಿ ಮೂರನೆಯದು ಕಾಲ. ಮೊದಲೆರಡು ಸ್ಥಾನಗಳನ್ನು ಕ್ರಮವಾಗಿ ಹೆಂಡತಿ ಹಾಗೂ ಜಿರಲೆ ದಕ್ಕಿಸಿಕೊಂಡಿವೆ. ಕಾಲಗಳಲ್ಲಿ ಅತಿ ಸರಳವಾದ ಹಾಗೂ ತಿಳಿದುಕೊಳ್ಳಲು ಅತ್ಯಂತ ಸುಲಭ ಎಂದು ಭಾಸವಾಗುವ ಗತಕಾಲದ ಬಗ್ಗೆಯೇ ಮನುಷ್ಯ ಗರಿಷ್ಠ ಪ್ರಮಾಣದಲ್ಲಿ ಹೆದರುತ್ತಾನೆ. ಅದಕ್ಕೆ ಆ ಕಾಲವನ್ನು ‘ಭೂತ’ಕಾಲ ಎಂದು ಕರೆದಿದ್ದಾನೆ. ವರ್ತಮಾನವಂತೂ ಆತನ ಕೈಗೇ ಸಿಕ್ಕುವುದಿಲ್ಲ. ಅದಕ್ಕೆ ಅದು ‘ಭೂತ’ಕ್ಕಿಂತ ಹೆಚ್ಚಿನ ಭಯ ಹುಟ್ಟಿಸುತ್ತದೆ. ಈ ಭಯವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಹುನ್ನಾರದಿಂದಾಗಿಯೇ ದಿನಪತ್ರಿಕೆಗಳು ತಮ್ಮನ್ನು ಆಗಾಗ ವರ್ತಮಾನ ಪತ್ರಿಕೆಗಳೆಂದು ಕರೆದುಕೊಳ್ಳುವುದು. ಈ ಎರಡರಕ್ಕಿಂತ ಭೀಕರವಾದ ಭಯಕ್ಕೆ ಕಾರಣವಾಗುವುದು ಭವಿಷ್ಯ. ಆರು ಅಡಿಯ ಮನುಷ್ಯ ಆರು ಅಡಿಯ ಭಯಪೀಡಿತ ಮನುಷ್ಯನಾಗಿ ಪರಿವರ್ತಿತನಾಗುವುದಕ್ಕೆ ಭವಿಷ್ಯವೆಂಬ ಪದವೇ ಸಾಕು.

ಈ ಭಯವನ್ನು ಮಟ್ಟ ಹಾಕುವುದಕ್ಕಾಗಿ ಹಾಗೂ ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವುದಕ್ಕಾಗಿ ಸಹಜವಾಗಿ ಸಮಾಜ ಸುಧಾರಕರು ಹುಟ್ಟಿಕೊಂಡರು. ಕಂಡವರ ಭವಿಷ್ಯವನ್ನು ಹೇಳುತ್ತ ತಮ್ಮ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳುವ ಜೋತಿಷಿಗಳು ತಾವು ಕಂಡವರಿಗೆ ಸಾವಿನ ಭಯವನ್ನು ಹುಟ್ಟಿಸಿ ತಮ್ಮ ಬದುಕಿಗೆ ‘ಮೌಲ್ಯ’ ಸೇರಿಸುವ ಪಾಲಿಸಿಗಳನ್ನು ಪಡೆಯುವ ವಿಮೆ ಏಜಂಟರಿಗಿಂತ ಶ್ರೇಷ್ಠರು ಎಂದು ವಾದಿಸುತ್ತಾರೆ. ಪ್ರಸ್ತುತ ಈ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿದೆ. ಇದಕ್ಕೂ ಮೊದಲು ಸರದಿಯಲ್ಲಿರುವ ವ್ಯಾಜ್ಯಗಳ ಸಂಖ್ಯೆಯನ್ನು ಎಣಿಸಲು ತೆರಳಿದ ಬಾಲಕನ ಮೊಮ್ಮಗ ಈಗ ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಓದುತ್ತಿದ್ದಾನೆ.

ಭವಿಷ್ಯವನ್ನು ವರ್ತಮಾನದಲ್ಲಿ ನಿಖರವಾಗಿ ಊಹಿಸಿ ಭವಿಷ್ಯವನ್ನು ಭೂತವಾಗಿಸಿದ ಖೋಡಿ ಮಠದ ಸ್ವಾಮೀಜಿಯ ಬಗ್ಗೆ ಹಿಂದೆ ನಾವು ವರದಿ ಮಾಡಿದ್ದೆವು. ಸ್ವಾಮೀಜಿಯವರ ಭವಿಷ್ಯವಾಣಿಯನ್ನು ಬಿತ್ತರಿಸುವುದರಲ್ಲಿ ಮಾಧ್ಯಮದ ಮಂದಿ ತೋರಿದ ಅದ್ಭುತ ಹುಮ್ಮಸ್ಸು ಆ ಭವಿಷ್ಯವಾಣಿ ನಿಜವಾದ ಸಂದರ್ಭದಲ್ಲಿ ತೋರದಿದ್ದುದಕ್ಕೆ ಕಾರಣವೇನಿರಬಹುದೆಂದು ನಾವು ಎರಡು ವರ್ಷದ ಹಿಂದಿನ ಸ್ವಾಮೀಜಿಯವರ ಡೈರಿಯಲ್ಲಿ ಹುಡುಕುತ್ತಿರುವೆವು.

ಸ್ವಾಮೀಜಿ ಭವಿಷ್ಯವಾಣಿಯ ಫಾಲೋ ಅಪ್ ವರದಿಗೆ ಸ್ಪಂದಿಸಿರುವ ಮಹಾಜನತೆಯು ಸ್ವಾಮೀಜಿಯವರಲ್ಲಿ ತಮ್ಮ ಭವಿಷ್ಯವನ್ನು ಕೇಳುವುದಕ್ಕೆ ಉತ್ಸುಕರಾಗಿ ಕಮೆಂಟುಗಳನ್ನು ಹಾಕಿರುವರು. ಒಬ್ಬೊಬ್ಬರ ಕಮೆಂಟಿಗೂ ಉತ್ತರಿಸಲು ಶುರು ಮಾಡಿದರೆ ಎಷ್ಟು ಸಮಯ ತಗುಲಬಹುದು ಎಂಬುದರ ಅಂದಾಜು ಮಾಡಲು ತಾವು ಶಕ್ಯರಲ್ಲ ಎಂದು ಭಾವಿಸಿದ ಸ್ವಾಮೀಜಿಯವರು ಕಮೆಂಟಿಸಿದ ಎಲ್ಲರಿಗೂ ಹಾಗೂ ತಮ್ಮ, ತಮ್ಮ ಮಕ್ಕಳ, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್, ತಮ್ಮ ಮನೆಯ ನಾಯಿ, ಬೆಕ್ಕು, ಕುರಿ, ಕೋಳಿ, ಹೆಗ್ಗಣಗಳ ಭವಿಷ್ಯವನ್ನು ತಿಳಿಯುವ ಕುತೂಹಲವಿರುವ ಸಮಸ್ತರಿಗೂ ಅತಿ ಶೀಘ್ರದಲ್ಲಿ ಹೋಲ್ ಸೇಲ್ ಆಗಿ ಭವಿಷ್ಯವನ್ನು ಅರುಹಲಿದ್ದಾರೆ.

ಸಾಮಾನ್ಯೀಕರಿಸಿದ ಭವಿಷ್ಯವಾಣಿಗಳಲ್ಲಿ ನಂಬಿಕೆಯಿಲ್ಲದ ವಿಚಾರವಾದಿ ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನ, ಆ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಾಹೀರಾತಿನ ಹೆಸರಿನ ಜೊತೆಗೆ ಮನೆಯ ಸುತ್ತ ಎರಡು ಅಡಿ ಜಾಗದಲ್ಲಿ ಎಲ್ಲಾದರೂ ಬೆಳೆದಿರುವ ವಾಸನೆಯಿಲ್ಲದ ಹೂ ಬಿಡುವ ಗಿಡದಲ್ಲಿನ ಹಳದಿ ಎಲೆಗಳ ಸಂಖ್ಯೆಯನ್ನು ಕಳಿಸಿಕೊಟ್ಟರೆ ಪ್ರತ್ಯೇಕವಾಗಿ ಅವರ ನಿಖರ ಭವಿಷ್ಯವನ್ನು ಸ್ವಾಮೀಜಿಯವರು ತಿಳಿಸುವರು.

ಜೊತೆಗೆ ಉತ್ತಮ, ಮಧ್ಯಮ, ಅಧಮ – ಈ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಭಾರಿ ಕೋಲಾಹಲವನ್ನು ಉಂಟು ಮಾಡಿರುವ ಮಾಯನ್ನರ ಕ್ಯಾಲಂಡರಿನ ಬಗ್ಗೆ ಹಾಗೂ ೨೦೧೨ರಲ್ಲಿ ಜರುಗಲಿದೆ ಎನ್ನಲಾಗಿರುವ ಭೀಕರ ಪ್ರಳಯದ ಬಗ್ಗೆ ಸ್ವಾಮೀಜಿಯವರು ವೈಜ್ಞಾನಿಕವಾದ, ತಂತ್ರಜ್ಞಾನಯುತವಾದ, ತಾರ್ಕಿಕವಾದ ಭವಿಷ್ಯವನ್ನು ನುಡಿಯಲಿದ್ದಾರೆ. ಪ್ರಳಯ ನಡೆಯುವುದೋ ಇಲ್ಲವೋ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಲಿದ್ದಾರೆ. ಆ ಕಡ್ಡಿಯು ಎಷ್ಟು ತುಂಡಾಗಬಹುದು ಎಂಬ ವಿಚಾರವಾಗಿ ಸಾಮ್ರಾಟರು ಹಾಗೂ ತೊಣಚಪ್ಪನವರ ನಡುವೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದ ಅಂತ್ಯವಾಗಲು ತೆಗೆದುಕೊಳ್ಳುವ ಸಮಯ ಎಷ್ಟಾಗಬಹುದು ಎಂದು ಕುಚೇಲ ಅಂದಾಜಿಸುವಲ್ಲಿ ಮಗ್ನನಾಗಿರುವನು. ಕುಚೇಲನ ಅಂದಾಜು ನಿಖರವಾಗಿರುತ್ತದೆಯೋ ಇಲ್ಲವೋ ಎಂಬುದರ ಮೇಲೆ ಬೆಟ್ ಕಟ್ಟಿದ ಎದುರು ಮನೆಯ ಲಕ್ಕಿ ವಿಕ್ಕಿ ವಾಗ್ವಾದಕ್ಕೆ ಇಳಿದಿರುವರು.

ವಿ.ಸೂ: ತಮಗೆ ಮಕ್ಕಳಾಗುತ್ತವೆಯೇ ಎಂಬ ಪ್ರಶ್ನೆ ಕೇಳುವವರು ಮೊದಲಿಗೆ ಗಂಡಿಗೆ ಇಪ್ಪತ್ತೊಂದು, ಹೆಣ್ಣಿಗೆ ಹದಿನೆಂಟು ದಾಟಿದೆಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಂಡು ತಮಗೆ ಮದುವೆಯಾಗಿದೆಯೇ ಇಲ್ಲವೇ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು.

ನಗೆ ಸಾಮ್ರಾಜ್ಯದಲ್ಲಿ ಕಾಡುತ್ತಿರುವ ಸಾಮ್ರಾಜ್ಞಿಯ ಕೊರತೆ!

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು ವರದಿಯ ಸಂವಾದ ಮುಂದುವರೆದಿದೆ. ಸನ್ಮಾನ್ಯ ದರಿದ್ರ ನಾರಾಯಣ ಬಟಾಬತ್ತಲ್ ನಮ್ಮ ಅತ್ಯಾಪ್ತ ಚೇಲ ಕುಚೇಲನ ಮೇಲೆ ಗುರುತರವಾದ ಆರೋಪವನ್ನು ಮಾಡುವುದರ ಜೊತೆಗೆ ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯ ಅಗತ್ಯವಿದೆಯೆಂದು ಗಟ್ಟಿ ದನಿಯಲ್ಲಿ ಘೋಷಿಸಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ. ಸಂವಾದಕ್ಕೆ ಹೊಸದಾಗಿ ಮುಖ ತೋರಿದವರು ಇಲ್ಲಿ ಹೋಗಿ ಬಂದರೆ ಇದರ ಹಿನ್ನೆಲೆ ತಿಳಿದೀತೆಂಬ ಧೈರ್ಯವನ್ನು ಹೊಂದಬಹುದು.

ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು ಪ್ರಕಟಿಸುತ್ತಿಲ್ಲ. ಹಾಗೂ ಸಂವಾದದ ಈ ಹಂತದವರೆಗೂ ಎರಡೂ ಪಕ್ಷದವರ ದೈಹಿಕ ಸಂಪನ್ಮೂಲಗಳಿಗೆ ಯಾವ ಹಾನಿಯೂ ಸಂಭವಿಸಿಲ್ಲ. ಒಂದು ಪಾರ್ಟಿಯು ಮುಂಚಿನ ಹಾಗೆ ದಿಗಂಬರವಾಗಿಯೂ, ಮತ್ತೊಂದು ಪಾರ್ಟಿಯು ವಸ್ತ್ರಭೂಷಿತವಾಗಿಯೂ ಇರುವುದೆಂದು ತಿಳಿಸಲು ಇಚ್ಛಿಸುತ್ತೇವೆ.

 

ದರಿದ್ರ ನಾರಾಯಣ ಬಟಾಬತ್ತಲ್:

ನಗೆಸಾಮ್ರಾಜ್ಯದ ಅಧಿಪತಿ, ತ್ರಿಲೋಕಗಳಲ್ಲೂ ನಗುವಿನ ಅಟ್ಟಹಾಸ ಅಪ್ಪಳಿಸುವ ನಗುವೀರ, ಮುಗ್ಧನಗೆಯಲ್ಲೂ ಸ್ವಲ್ಪವಾದರೂ ಸೀರಿಯಸ್ನೆಸ್ ಎಂಬ ಗಾಂಭೀರ್ಯವಿರಬೇಕು ಎಂದು ಬಯಸುವ ನಗೆಸಾಮ್ರಾಟರಿಗೆ ಜಯವಾಗಲಿ!

ತಮ್ಮ ನಗೆಸಾಮ್ರಾಜ್ಯದಲ್ಲಿನ ಸಾಮಾನ್ಯರಲ್ಲಿ ಅತಿಸಾಮಾನ್ಯನಾದಂಥ, ಆರ್ಥಿಕ, ಬೌದ್ಧಿಕ, ಮಾತ್ರವಲ್ಲ ನಗಲೂ ದಾರಿದ್ರ್ಯವಿರುವ ಒಬ್ಬ ಯಃ ಕಶ್ಚಿತ್ ಪ್ರಜೆಯಾದ ಈ ದರಿದ್ರನಾರಾಯಣನು ಮಾಡುವ ಅಹವಾಲು : ಪ್ರಭೋ, ತಮ್ಮ ಅವಗಾಹನೆಗೆ ತರಲೇಬೇಕಾದಂತಹ ವಿಷಯ ಹೀಗಿದೆ: ತಮ್ಮ ಎಡಗೈ ಬಂಟ ಕು-ಚೇಲರ ಕು-ಚೇಷ್ಟೆ ಕುರಿತದ್ದು!

ಸುದ್ದಿ ಮಾಧ್ಯಮಗಳ ಅತಿರಂಜಿತ ವರದಿಗಳ ಬಗ್ಗೆ, ಕಡ್ಡಿಯನ್ನೇ ತಿರುಚಿ ಗುಡ್ಡ ಮಾಡುವ ಬಗ್ಗೆ, ಪತ್ರಿಕೆ ಎರವಲು ಪಡೆದು ಸುದ್ದಿ ತಿಳಿಯುವ ಬಡ ಓದುಗರಾದ ನಾವು ಬಹಳಷ್ಟು ಕೇಳಿದ್ದೇವೆ, ಕಂಡಿದ್ದೇವೆ. ರಾಜ್ಯಭಾರದಂತಹ ಅತಿಮಹತ್ವದ ಹೊಣೆಗಾರಿಕೆ ಹೊತ್ತಂತಹ ಸಾಮ್ರಾಟರ ಗಮನಕ್ಕೆ ಇಂತಹ ಚಿಲ್ಲರೆ (?) ಸಂಗತಿಗಳು ಬಾರವು ಎಂಬುದಕ್ಕಾಗಿ ಈ ಅವ ಹಾಲು, ಕ್ಷಮಿಸಿ, ಅಹವಾಲು.

ತಮ್ಮ ರಾಜ್ಯದ ಅನ್ ಅಧಿಕೃತ ಏಕೈಕ ವಾರ್ತಾಪತ್ರ ನಗೆನಗಾರಿಯಲ್ಲಿ ದೊಡ್ಡ ಅಕ್ಷರದ ತಲೆಬರಹದಲ್ಲಿ “ದರಿದ್ರನಾರಾಯಣರ ಲಂಗಮೋಹ” ಎಂದು ಘೋಷಿಸಿರುವದು ನಿಮ್ಮ ಪತ್ರಕರ್ತ, ಕು-ಚೇಲರ ಅತಿ ಬುದ್ಧಿವಂತಿಕೆಯೇ? ಅಥವಾ ಸರಿಯಾಗಿ ಕೀಲಿಮಣೆ ಕುಟ್ಟಲಾರದ ಸೋಮಾರಿತನವೇ? ಅಲ್ಲವಾದರೆ ತನ್ನ ವಿಕ್ಷಿಪ್ತ, ವಿಕೃತ ಹಾಸ್ಯದ ಒಂದು ಮಾದರಿಯೇ??

ನಮ್ಮ ದಿಗಂಬರ ಪಂಥಕ್ಕೆ ಮಾಡಿದ ಘೋರ ಅಪಚಾರವಲ್ಲವೇ ಇದು? ಲಂಗ-ಓಟಿಯನ್ನೇ ಕಿತ್ತೊಗೆದ ದಿಗಂಬರ ಪಂಥೀಯರಿಗೆ ಎಲ್ಲಾದರೂ ಲಂಗದ ಮೋಹವಿರಲು ಸಾಧ್ಯವೇ? ದರಿದ್ರನಾರಾಯಣರ ಲಿಂಗಮೋಹ ವೆಂದಾಗಬೇಕಿತ್ತಲ್ಲವೇ? ಚೋಲೀ ಕೇ ಪೀಚೆ ಕ್ಯಾ ಹೈ ಎಂಬ ಅತೀ ಅನ್ ಅರ್ಥಪೂರ್ಣ ಹಾಡು ಹುಟ್ಟಿದ ನಿಮ್ಮ ಈ ನಗೆಗೀಡು ಸಾಮ್ರಾಜ್ಯದಲ್ಲಿ ಕ್ಷುಲ್ಲಕ ಲಂಗದ ಮೇಲೆ ಮೋಹವಿರಲು ನಮಗೆ ಸಾಧ್ಯವೇ?

ತಮ್ಮ ರಾಜ್ಯದಲ್ಲಿ ನ್ಯಾಯ ನೀತಿಗಳು ರಾರಾಜಿಸಬೇಕು ಎಂದಾದರೆ ಈ ತಪ್ಪನ್ನು ತಕ್ಷಣ ಸರಿಪಡಿಸುವಂತೆ ನಿಮ್ಮ ಚೇಲಗಣಕ್ಕೆ ಆಜ್ಞಾಪಿಸಿ ದಿಗಂಬರ ಪಂಥದ ಮೇಲಾಗಿರುವ ಅತ್ಯಾಚಾರಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿ ನಮ್ಮ ಕಳ ಕಳಿಯ ಬೇಡಿಕೆ.

ತಲೆಬರಹವೇ ಹೀಗಿರಬೇಕಾದರೆ, ಇನ್ನು ಲೇಖನದಲ್ಲಿ ಇನ್ನೆಷ್ಟು ದೋಷ, ವಿಕೃತಿಗಳು ಇರಬಹುದು ಎಂಬ ಹೆದರಿಕೆಯಿಂದ ಮುಂದೆ ಓದಲಾರದಾದೆವು. ಕು-ಚೇಲನು ತನ್ನ ತಪ್ಪನ್ನು ಒಪ್ಪಿ ಒಪ್ಪ ಮಾಡಿದ ಮೇಲೆ ಮುಂದುವರೆಯುವ ಧೈರ್ಯವಾಗಬಹುದೇನೋ.

 

ನಗೆ ಸಾಮ್ರಾಟ್:

ತಲೆಬರಹವನ್ನು ಬರೆಯುವುದಕ್ಕೆ ತಲೆಯಿಲ್ಲದವರನ್ನು ಇಟ್ಟರೆ ಆಗುವ ಅನಾಹುತಕ್ಕೆ ಹಸಿ ಸಾಕ್ಷಿ ಇದು. ತಲೆ ಬರಹದಲ್ಲಿ ಆಗಿರುವ ಮಹಾ ಪ್ರಮಾದಕ್ಕೆ ನಾವು ನಮ್ಮ ಅತ್ಯಾಪ್ತ ಚೇಲ ಕುಚೇಲನಿಂದ ಕ್ಷಮಾಪಣೆ ಕಕ್ಕಿಸುತ್ತಿದ್ದೇವೆ. ದಯವಿಟ್ಟು ಸ್ವೀಕರಿಸಿ, ನಿಮ್ಮ ಲಿಂಗ ಮೋಹದ ಬಗ್ಗೆ ಆತನಿಗೆ ಅಪಾರ ಗೌರವವಿರುವುದು. ಇದಕ್ಕೆ ನಾವೇ ಶ್ಯೂರಿಟಿ.

ನಿಮ್ಮ ದಾರಿದ್ರ್ಯಗಳಲ್ಲಿ ಕಡೆಯದು ಹಾಗೂ ಬಹು ಮುಖ್ಯವಾದುದನ್ನು ಪರಿಹರಿಸುವಲ್ಲಿ ನಾವು ವಿಫಲರಾಗಿದ್ದೇವೆಂದರೆ ನಗೆ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನಾವು ಅನರ್ಹರು. ಈ ಕೂಡಲೆ ನಾವು ನಮ್ಮ ರಾಜಿನಾಮೆ ಪತ್ರವನ್ನು ನಮ್ಮ ಸ್ವವಿಳಾಸಕ್ಕೆ ಕಳುಹಿಸಿ ಕೊಡುತ್ತೇವೆ.

ತಲೆಬರಹದಿಂದ ಇಷ್ಟು ಹೆದರಿದಿರಿ ಎಂಬುದು ಜಗಜ್ಜಾಹೀರಾದರೆ ಅಲ್-ಇಲ್-ಎಲ್-ಖೈದಾ ಮಾರ್ಕೆಟಿನಲ್ಲಿ ನಮ್ಮ ಕುಚೇಲನ ರೇಟು ಯಡಿಯೂರಪ್ಪನವರ ಪಿತ್ಥದ ಹಾಗೆ, ಭಾರತದ ಇನ್‌ಫ್ಲೇಷನ್ನಿನ ಹಾಗೆ ಏರುವುದರಲ್ಲಿ ಸಂಶಯವಿಲ್ಲ. ದಯವಿಟ್ಟು ಈ ಗುಟ್ಟನ್ನು ನಿಮ್ಮ ಹೊಟ್ಟೆಯಲ್ಲೇ ಇಟ್ಟುಕೊಂಡಿರಿ.

 

ದರಿದ್ರ ನಾರಾಯಣ ಬಟಾಬತ್ತಲ್:

“ನಗೆ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನಾವು ಅನರ್ಹರು ” ಎಂಬುದಾಗಿ ದಯವಿಟ್ಟು ಕೊರಗಿ ಕರಗದಿರಿ, ಹೇ ಪ್ರಭೋ!

ಅಗಸನೊಬ್ಬನ ಮಾತಿಗೆ ಮರ್ಯಾದೆ ಕೊಟ್ಟು ಗರ್ಭಿಣಿ ಸೀತಾಮಾತೆಯನ್ನು ಮಾತೆಯಾಗುವ ಮೊದಲೇ ಕಾಡಿಗಟ್ಟಿದ ಮರ್ಯಾದಾಪುರುಷೋತ್ತಮನ ಹಾಗೆ ನೀವೂ ನಿಮ್ಮನ್ನೇ ನಗೆಸಾಮ್ರಾಜ್ಯ ದಿಂದ ಗಡೀಪಾರು ಮಾಡಿದರೆ ಈ ಕಲಿಯುಗ ಮತ್ತೆ ಲಕ್ಷಾಂತರ ವರ್ಷ ಹಿನ್ನಡೆಯಾಗಿ ಅ – ಸತ್ಯಯುಗಕ್ಕೆ ಮರಳುವುದು.

ಹೇಗೆ ನಮ್ಮ “ನೆರೆ” ದೇಶ ಬಾ ರಥ ದಲ್ಲಿ ಸರಕಾರಗಳು ಕೋಟ್ಯಾಂತರ ರೂಪಾಯಿಗಳ ಸಹಾಯಧನ, ಮೀಸೆಲಾಠಿ ಇತ್ಯಾದಿಗಳನ್ನು ಕೊಟ್ಟು ಗರೀಬೀ ಹಟಾಯಿಸುತ್ತಿದ್ದಾರೋ ಹಾಗೆಯೇ ಈ ದರಿದ್ರನಾರಾಯಣನ ನಗುದಾರಿದ್ರ್ಯ ಕಳೆದು “ನಗೆಯು ಬರುತಿದೆ ಎನಗೆ ನಗೆಯು ಬರುತಿದೆ” ಎಂದು ಹಾಡುವನ್ತಾಗಲು ಸುಲಭ ಉಪಾಯವೆಂದರೆ ನಗೆನಗಾರಿಯ ಸಂಪಾದಕ ಮಂಡಳಿಯನ್ನು ವಿಸ್ತರಣೆಗೊಳಿಸಿ ಈ- ಪತ್ರಿಕೆಯಲ್ಲಿ ವೈವಿಧ್ಯವನ್ನು ತರುವುದು.
ನಗೆಸಾಮ್ರಾಜ್ಯಕ್ಕೆ ಸಾಮ್ರಾಜ್ನಿಯೊಬ್ಬರನ್ನು ತರುವುದು ಕೂಡ ಇನ್ನೂ ಉತ್ತಮ. ಸಾಮ್ರಾಟರ ರಾಜವಂಶವೂ ಬೆಳೆಯುವುದು. ಸಾಮ್ರಾಟರಿಗೂ ಪುರು ಸೊತ್ತು ಸಿಕ್ಕಿ ತಮ್ಮ ಸಾಮ್ರಾಜ್ಯವಿಸ್ತರಣೆಗೂ ಸಹಾಯವಾಗುವುದು.

ಹುಡುಕಾಟದಲ್ಲಿ ತೊಡಗಲೇ?

ಕೊಸರು: ಹುಡುಕಾಟದಲ್ಲಿ ತೊಡಗಲೇ? ಅಥವಾ ತಾವು ತಮ್ಮ ಹುದುಗಾಟದಲ್ಲೇ ನಗ್ನ, ಕ್ಷಮಿಸಿ ಮಗ್ನವಾಗುವಿರೇ?

 

ನಗೆ ಸಾಮ್ರಾಟ್

ಕಲಿಯುಗಕ್ಕೆ ಭಾರಿ ಹಿನ್ನಡೆಯುನ್ನುಂಟು ಮಾಡಿ ಇದನ್ನು ಸತ್ಯಯುಗಕ್ಕೆ ದಾಟಿಸಿ ಆ ಮೂಲಕ ಪ್ರಗತಿ ವಿರೋಧಿ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳುವುದು, ಕಲಿಯುಗದ ಕಡೆಯ ಪರದೆಯನ್ನು ಎಳೆಯುವುದಕ್ಕಾಗಿ ಅವತರಿಸಿ ಬರಲಿರುವ ಕಲ್ಕಿಗೆ ಕನ್‌ಫ್ಯೂಶನ್ ಉಂಟು ಮಾಡಿ ದೈವನಿಂದನೆಯ ಅಪರಾಧಗೈಯುವುದರಿಂದ ನಮ್ಮನ್ನು ಪಾರು ಮಾಡಿದ ನಿಮಗೆ ನಾವು ಋಣಿ.

ನಗೆ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯನ್ನು ತರುವುದರಿಂದ ‘ಬಟಾಬತ್ತಲ್’ ದರಿದ್ರನಾರಾಯಣರಿಗೆ ಸಂತೋಷ ಉಂಟಾಗಿ, ಲಿಂಗಮೋಹಿ ಆದರ್ಶ ಪ್ರಜೆಯ ನಗೆದಾರಿದ್ರ್ಯ ಕಳೆದುಹೋಗುವುದು ಎನ್ನುವುದು ಕುತೂಹಲಕರವಾದ ಸಂಗತಿ. ಈಗಾಗಲೇ ಕುಚೇಲ, ತೊಣಚಪ್ಪ ಹಾಗೂ ನಮ್ಮ ತಂಡವನ್ನು ಕಂಡು ಹಲವು ಮಹಿಳಾ ಮಣಿಗಳು ಮರೆಯಲಿ ಮುಸಿಮುಸಿ ನಗುತ್ತಿರುವ ವರದಿ ನಮ್ಮನ್ನು ತಲುಪಿದೆ.

ಪ್ರಜೆಗಳ ಒಳಿತಿಗಾಗಿ ಸಾಮ್ರಾಜ್ಞಿಯನ್ನು ತರುವುದು, ರಾಜಕುವರರಿಗಾಗಿ ನರ್ಸರಿಯಲ್ಲಿ ಸೀಟು ರಿಸರ್ವ್ ಮಾಡುವುದು ಹೀಗೆ ಎಲ್ಲಾ ಬಗೆಯ ಸಂಕಷ್ಟಗಳನ್ನು ಭರಿಸಲು ನಾವು ಸಿದ್ಧ.

ಹುಡುಗಾಟವನ್ನು ಬದಿಗಿಟ್ಟು ಶೀಘ್ರವೇ ಹುಡುಕಾಟದಲ್ಲಿ ತೊಡಗಿ. ಆದರೆ ದಯವಿಟ್ಟು ಸಾಮ್ರಾಜ್ಞಿಯ ಪಟ್ಟಕ್ಕೆ ನಿಮ್ಮ ದಿಗಂಬರ ಪಂಥದ ಸದಸ್ಯೆಯನ್ನು ಸೂಚಿಸಬೇಡಿ. ಹೊರ ನೋಟಕ್ಕೆ ನಾವು ಎಷ್ಟೇ ಕಠಿಣವಾಗಿ ಕಂಡರೂ ನಮ್ಮ ಹೃದಯ ಬಹು ಮೃದು, ಅದು ಒಡೆದು ಹೋಗದಂತೆ ಎಚ್ಚರ ವಹಿಸಿ!

ಅನಾಮಿಕ ಬ್ಲಾಗ್ ಜೀವಿಯ ವಿಶೇಷ ಸಂದರ್ಶನ!

(ವಿಶೇಷ ಅತಿಥಿಯೊಂದಿಗಿನ ಈ ವಿಶಿಷ್ಟ ಸಂದರ್ಶನಕ್ಕಾಗಿ ನಗೆ ಸಾಮ್ರಾಟರಾದ ನಾವು ಖುದ್ದು ವಹಿಸಿದ ಕಾಳಜಿಯನ್ನು, ಅನುಭವಿಸಿದ ಕಷ್ಟಗಳನ್ನು ಈಗಾಗಲೇ ನಮ್ಮ ನಾಡಿನ ಪ್ರಜೆಗಳ ಗಮನಕ್ಕೆ ತಂದಿದ್ದೇವೆ. ಈ ಅಪರೂಪದ ಅತಿಥಿ: ಅನಾಮಿಕ ಬ್ಲಾಗ್/ ಕಮೆಂಟ್ ಜೀವಿಯ ಸಂದರ್ಶನ ಇದೋ ನಿಮಗಾಗಿ!)

ನಗೆ ಸಾಮ್ರಾಟ್: ನಮಸ್ಕಾರ.

ಅನಾಮಿಕ: ಹು, ಹೇಳಿ ಏನಾಗ್ಬೇಕು?

ನ.ಸಾ: ನೀವು ಯಾವಾಗಲೂ ಹೀಗೇ ಇರುತ್ತೀರಾ?

ಅನಾಮಿಕ: ಹೇಗೆ?

ನ.ಸಾ: ಹೀಗೆ ಈ ಡಬ್ಬಿಯೊಳಗೆ ಕೂತು, ಬರೀ ನಿಮ್ಮ ಎರಡು ಕೈಗಳು ಹೊರಗೆ ಒಳಗೆ ಆಡುವಷ್ಟು ಸ್ಥಳಾವಕಾಶ ಮಾಡಿಕೊಂಡುvishesha sandarshana ಹೀಗೇ ಕೂರುವಿರಾ? ನಿಮ್ಮ ಜೊತೆ ಮಾತಾಡುವವರಿಗೆ, ನೀವು ಮಾತಾಡಿಸುವವರಿಗೆ ನಿಮ್ಮ ಬಗ್ಗೆ ಏನೂ ತಿಳಿಯದ ಹಾಗೆ…

(ಸಾಮ್ರಾಟರು ತಮ್ಮ ಟೀಪಾಯ್ ಮೇಲಿನ ಇರಡು ಗಾಜಿನ ಕಪ್‌ಗಳಲ್ಲಿ ಒಂದನ್ನು ಡಬ್ಬಿಯತ್ತ ತಳ್ಳುವರು! ಅನಾಮಿಕ ಅತಿಥಿ ಮೆಲ್ಲಗೆ ಅದನ್ನು ಒಳಕ್ಕೆ ಎಳೆದುಕೊಳ್ಳುವುದು)

ಅನಾಮಿಕ: ಹು, ಹೌದು. ನಾನು ಯಾವಾಗಲೂ ಹೀಗೇ ಇರುವೆ. ಆದ್ರೆ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗುವಾಗ ಮಾತ್ರ ಡಬ್ಬಿಯಿಂದ ಹೊರಗೆ ಬರುವೆ. ಇದರಿಂದ ನಿಮಗೇನು ಪ್ರಾಬ್ಲಂ?

ನ.ಸಾ: ಏನಿಲ್ಲ, ನಾವು ಯಾರನ್ನು ಮಾತನಾಡಿಸುತ್ತಿರುವುದು ಎಂತಲೇ ನಮಗೆ ತಿಳಿಯದಿದ್ದರೆ ತುಸು ಗೊಂದಲವಾಗುತ್ತೆ. ಕನಿಷ್ಠ ಪಕ್ಷ ನಾವು ಮಾತನಾಡಿಸುತ್ತಿರುವುದು ಗಂಡನ್ನೋ, ಹೆಣ್ಣನ್ನೋ ಎಂಬುದರ ಸುಳಿವಾದರೂ ಸಿಕ್ಕಿದ್ದರೆ ನಮ್ಮ ಪದಪುಂಜಗಳ ಆಯ್ಕೆಯಲ್ಲಿ ತುಸು ಎಚ್ಚರವಹಿಸಬಹುದು.

ಅನಾಮಿಕ : ಬೇಕಿದ್ರೆ ಮಾತಾಡಿ, ಇಲ್ಲಾಂದ್ರೆ ಎದ್ದೋಗಿ. ನಾನೇನು ನನ್ ಸಂದರ್ಶನ ಮಾಡ್ರಿ ಅಂತ ನಿಮ್ಮುನ್ನ ಕಾಲು ಹಿಡ್ಕಂಡು ಕೇಳಿಕೊಂಡ್ನಾ? ಆ ನಿಮ್ಮ ಆಲ್ಟರ್ ಈಗೋನ, ನಿಮ್ಮ ಚೇಲನ್ನ ಉಗಿದು ಓಡಿಸಿದ್ದೆ ನಾನು. ನೀವು ಬಂದು ಬೇಡಿಕೊಂಡಿದ್ದಕ್ಕೆ ಒಪ್ಪಿಕೊಂಡಿದ್ದು. ಇಷ್ಟಕ್ಕೂ ನೀವೇನು ಸಾಚಾನ? ನಗೆ ಸಾಮ್ರಾಟ್ ನಿಜವಾದ ಮನುಷ್ಯನಾ ಅಥ್ವಾ ಯಾವನೋ ಅಡ್ಡ ಕಸುಬಿಯ ಪೆನ್ ನೇಮೋ ಅಂತ ಯಾರಿಗ್ಗೊತ್ತು? ನಿಮ್ ಫೋಟೊ, ಜಾತಕ, ಜನಿವಾರನ್ನ ಎಲ್ಲಾದ್ರೂ ಹಾಕಿದ್ದೀರಾ?

ನ.ಸಾ: ಹೋಗ್ಲಿ ಬಿಡಿ, ನಾವು ಸುಮ್ನೆ ತಮಾಶೆ ಮಾಡಿದ್ರೆ ನಮ್ ಬುಡಕ್ಕೆ ಕೈ ಹಾಕಿದ್ರಲ್ಲ!

ಅನಾಮಿಕ: ನಾನು ಹಿಂಗೇ ಡೇರ್ ಡೆವಿಲ್!

ನ.ಸಾ: (ಗೊಣಗಿಕೊಳ್ಳುತ್ತಾ) ನೋಡಿದ್ರೇನೇ ಗೊತ್ತಾಗುತ್ತೆ ಬಿಡಿ, ನಾಲ್ಕು ದಿಕ್ಕಿನಲ್ಲಿರುವ ರಟ್ಟಿನ ‘ಡೇರ್ ಡೆವಿಲ್’ ಮುಖ ನೋಡಿದ್ರೆ… (ಗಟ್ಟಿಯಾಗಿ) ಹೌದು, ಅದೇನು ಧೈರ್ಯ ನಿಮ್ಮದು, ಯಾರ್ಯಾರನ್ನೆಲ್ಲ ಉಗಿದು ಉಪ್ಪಿನಕಾಯಿ ಹಾಕಿ ಜಾಡಿ ತುಂಬಿಸಿದ್ದೀರಿ.

11 ಅದೆಲ್ಲ ಇರಲಿ, ನಮಗೊಂದು ಸಂಶಯ. ಮತ್ತೆ ಡಬ್ಬಿಯ ವಿಷಯಕ್ಕೆ ಬರ್ತೀನಿ ಅಂತ ಕೋಪ ಮಾಡ್ಕೋಬೇಡಿ, ನೀವು ಡಬ್ಬಿಯ ಹೊರಗೆ ಇದ್ದಾಗ ಹೇಗಿರುವಿರೋ ಡಬ್ಬಿಯ ಒಳಗೂ ಹಾಗೇ ಇರ್ತೀರಾ? ಡಬ್ಬಿ ನಿಮ್ಮ ಮಾತಿನ ಮೇಲೆ, ವರ್ತನೆಯ ಮೇಲೆ, ನಿರ್ಧಾರಗಳ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲವಾ?

ಅನಾಮಿಕ : ಅದೆಲ್ಲಿಂದ ಹುಟ್ಟುತ್ರೀ ನಿಮಗಿಂತಾ ಪ್ರಶ್ನೆಗಳು? ನಾನು ಈ ‘ಡಬ್ಬಿ’ ಬದುಕಿನ ಬಗ್ಗೆ ಒಂದು ಪುಸ್ತಕವನ್ನೇ ಬರೆದಿಟ್ಟಿದ್ದೀನಿ ಕಣ್ರೀ. ಆದ್ರೆ ಅದನ್ನ ಪ್ರಿಂಟು ಹಾಕಿಸೋಕೆ ಡಬ್ಬಿಯಿಂದ ಹೊರಗೆ ಬರ್ಬೇಕು. ಮೇಲಾಗಿ ನಾನು ಬರೆದಿದ್ದೆಲ್ಲಾ ಡಬ್ಬಿಯಲ್ಲಿ ಕುಳಿತೇ, ಡಬ್ಬಿಯಿಂದ ಹೊರಗೆ ಬಂದು ಪುಸ್ತಕ ಯಾರಿಗಾದ್ರೂ ಕೊಟ್ರೆ, ಡಬ್ಬಿಯಲ್ಲಿದ್ದದ್ದು ನಾನೇ ಅನ್ನಲಿಕ್ಕೆ ಸಾಕ್ಷಿ ಏನು ಎಂದು ಕೇಳ್ತಾರೆ. ಯಾರು ಬೇಕಾದರೂ ಡಬ್ಬಿಯೊಳಗೆ ಕೂತಿದ್ದಿರಬಹುದಲ್ಲವಾ ಅಂತ ಲಾ ಪಾಯಿಂಟ್ ಹಾಕ್ತಾರೆ ಕಣ್ರೀ.

ಈ ಡಬ್ಬಿ ಸಾಮಾನ್ಯವಾದದ್ದಲ್ಲ ಕಣ್ರೀ. ಹೊರಗಿದ್ದಾಗ ನಾನು ಸಭ್ಯ, ಮರ್ಯಾದಸ್ಥ, ಪ್ರಪಂಚ ಸರಿಯಾಗಿಯೇ ಇದೆ, ಬದಲಾಗಬೇಕಾಗಿರುವುದು ನಾನು ಎಂಬ ಧೋರಣೆಯುಳ್ಳ ಮನುಷ್ಯ. ತಪ್ಪು ಪಾಠ ಮಾಡಿದ ಲೆಕ್ಚರನ್ನು, ಲಂಚ ಕೇಳಿದ ಸಬ್ ಇನ್ಸ್‌ಪೆಕ್ಟರನ್ನು, ಐದು ವರ್ಷ ಗೋಳು ಹೋಯ್ದುಕೊಂಡು ಓಟು ಕೇಳೋಕೆ ಬಂದ ಫುಡಾರಿಯನ್ನು, ಯಾರನ್ನೂ ನಾನು ಬಯ್ಯುವುದಿಲ್ಲ. ‘ನಡೀತದೆ ಬಿಡು…’ ಅಂದುಕೊಂಡು ಆರಾಮಾಗಿದ್ದು ಬಿಡ್ತೀನಿ.

ನ.ಸಾ: ಇಂಟರೆಸ್ಟಿಂಗ್, ನಿಮ್ಮ ನಿಜ ವ್ಯಕ್ತಿತ್ವ ಹೀಗಿರುವಾಗ ನಿಮ್ಮ ಬರಹ, ಕಮೆಂಟುಗಳೇಕೆ ಹಾಗಿರುತ್ತವೆ?

ಅನಾಮಿಕ: ಹೇಳ್ತೀನಿ ಇರಿ. ಈ ಡಬ್ಬಿಯೊಳಗೆ ಕೂತಾಗ ಏನಾಗುತ್ತೋ ಗೊತ್ತಿಲ್ಲ. ಕೈಗಳು ಚಕಚಕನೆ ಓಡಾಡತೊಡಗುತ್ತವೆ, ಬಲಗೈ ಬೆರಳು ಎಡಗೈ ಹಸ್ತವನ್ನು ಪರಪರನೆ ಕೆರೆಯಲಾರಂಭಿಸುತ್ತವೆ. ಹೃದಯ ಬಡಿತ ಏರತೊಡಗುತ್ತದೆ. ಪಾಪಿ ಜಗತ್ತು ಜಗದ್ಧೋದ್ಧಾರಕನ ಆಗಮನಕ್ಕಾಗಿ ಕಾಯುತ್ತಾ ಕುಳಿತಿದೆ ಎಂದು ಭಾಸವಾಗುತ್ತದೆ. ಡಬ್ಬಿಯ ನಾಲ್ಕೂ ದಿಕ್ಕಿನಿಂದ ಪಾಂಚಜನ್ಯಗಳು ಮೊಳಗಲು ಶುರು ಮಾಡುತ್ತವೆ. ಜಗತ್ತು ಕಾಯುತ್ತ ಕುಳಿತ ಪ್ರವಾದಿ ನಾನೇ ಎಂದು ಎದೆಯುಬ್ಬುತ್ತದೆ. ಅಧರ್ಮದ ನಾಶಕ್ಕಾಗಿ ನಾನು ಕಟಿಬದ್ಧನಾಗುತ್ತೇನೆ.

ಅನಂತರ ಹಾಲಿನಲ್ಲೂ ಹಾಲಾಹಲ ಕಾಣಲು ಶುರುವಾಗುತ್ತದೆ, ಬಿಳಿಯ ಕಾಗದಲ್ಲಿಯೂ ಕಪ್ಪು ಕಲೆಗಳು ಕಾಣಲಾರಂಭಿಸುತ್ತವೆ. ಡಬ್ಬಿಯೊಳಗಿನ ಅಗೋಚರವಾದ ಕೈಗಳು ಕಣ್ಣ ಎದುರು ಬೂತಗನ್ನಡಿಯನ್ನು ಹಿಡಿದದ್ದು ಗೊತ್ತೇ ಆಗುವುದಿಲ್ಲ. ಇರುವೆಯು ಆನೆಯಾಗಿ ಬಿಟ್ಟಿರುತ್ತದೆ. ಅಡಿಕೆಯು ಬೆಟ್ಟವಾಗಿಬಿಟ್ಟಿರುತ್ತದೆ. ನಾನು ಹಿಂದೆಂದೂ ಕೇಳಿರದ ಬಯ್ಗುಳಗಳು ಸರಾಗವಾಗಿ ಹರಿದು ಬರಲಾರಂಭಿಸುತ್ತವೆ. ಎಂದೂ ನಾನು ಬಳಸಿರದ ಕೆಟ್ಟ ಪದಗಳು ಅದು ಹೇಗೋ ಕೀಲಿಸಲ್ಪಡುತ್ತವೆ. ಡಬ್ಬಿಯ ಒಳಗೆ ಸೃಷ್ಟಿಯಾದ ಈ ಬ್ಲಾಗ್ ಬರಹ, ಕಮೆಂಟನ್ನು ಡಬ್ಬಿಯಿಂದಲೇ ಗುರಿಯಿಟ್ಟು ಹೊರಗಿರುವವರಿಗೆ ಎಸೆಯುತ್ತೇನೆ. ತಗುಲಿದವರು ಉಜ್ಜಿಕೊಳ್ಳುತ್ತಾ ಹಿಂದೆ ನೋಡಿದಾಗ? ಏನಿದೆ, ಬರಿ ಡಬ್ಬಿ! ಡಬ್ಬಿಯೊಳಗೆ ನಾನು ಕೇಕೆ ಹಾಕಿ ನಗುತ್ತಿರುತ್ತೇನೆ!

ನ.ಸಾ: ಕುತೂಹಲಕರವಾಗಿದೆ ನಿಮ್ಮ ಡಬ್ಬಿಯ ಮಹಿಮೆ. ಆದರೆ ಹೀಗೆ ವಿಕೃತ ಆನಂದವನ್ನು ಪಡೆಯುವುದು ತಪ್ಪು ಅನ್ನಿಸುವುದಿಲ್ಲವೇ?

ಅನಾಮಿಕ: ಯಾವುದು ತಪ್ಪು? ತಮ್ಮ ಆರೋಗ್ಯ ಚೆನ್ನಾಗಿರಲಿ ಎಂಬ ಸ್ವಾರ್ಥಕ್ಕಾಗಿ ದಿನಪೂರ್ತಿ ಮುಖ ಗಂಟು ಹಾಕಿಕೊಂಡು ಎಲ್ಲರ ನಗುವನ್ನೂ ಕೊಲ್ಲುವ ಕಿಲ್ಲರ್‌ಗಳು ಪಾರ್ಕುಗಳಲ್ಲಿ ಹೊಕ್ಕಳು ಬಾಯಿಗೆ ಬರುವಂತೆ ಹಲ್ಕಿರಿದು ನಗುವುದು ತಪ್ಪಲ್ಲವಾ?

ನ.ಸಾ: ಇದು ಸರಿ ಉತ್ತರ ಅಲ್ಲ ಇವ್ರೇ, ಯಾರೋ ಮಾಡಿದ್ದು ತಪ್ಪು ಅಂತ ಸಾಬೀತು ಪಡಿಸಿದರೆ ನೀವು ಮಾಡಿದ ತಪ್ಪಿಗೆ ಮಾಫಿ ಸಿಕ್ಕುವುದಿಲ್ಲ. ಮೊರಾರ್ಜಿ ದೇಸಾಯಿ ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಿದ್ದರು ಎಂದು ಸಾಬೀತು ಪಡಿಸಿದರೆ ನಿಮ್ಮ ಬಾಸಿನ ಕಾಫಿ ಲೋಟದಲ್ಲಿ ನಿಮ್ಮ ಮೂತ್ರ ತುಂಬಿದ ಆರೋಪದಿಂದ ನಿಮ್ಮನ್ನು ಖುಲಾಸೆಗೊಳಿಸಲು ಸಾಧ್ಯವೇ?

12

ಅನಾಮಿಕ: ಮುಚ್ರೀ ಬಾಯಿ, ಏನೋ ಯಾರೂ ಓದದ ಪತ್ರಿಕೆ ಅಂತ ನಿಮಗೆ ಸಂದರ್ಶನ ಕೊಡೋಕೆ ಒಪ್ಪಿಕೊಂಡ್ರೆ ನನ್ನೆದುರೇ ತಲೆಯೆಲ್ಲಾ ಮಾತಾಡ್ತೀರಾ? ನನ್ನ ಹಾಗೆ ಮುಖವಾಡ ಹಾಕಿಕೊಂಡು ಬರೆಯುವವರು ಮಾತ್ರವೇ ವಿಕೃತ ಆನಂದ ಪಡೀತಾರಾ? ಪ್ರತಿಯೊಬ್ಬರ ಬೆನ್ನ ಹಿಂದೆ ಸೃಷ್ಟಿಯಾಗುವ ಒಬ್ಬೊಬ್ಬ ವಿಮರ್ಶಕ/ ವಿಮರ್ಶಕಿಯೂ ವಿಕೃತ ಆನಂದ ಪಡೆಯುವಂಥವರೇ. ಮುಖಕ್ಕೆ ಮುಖ ಕೊಟ್ಟು ಹೇಳಲಾಗದ್ದನ್ನು ಬೆನ್ನ ಹಿಂದೆ ಆಡಿ ತೋರಿಸುವವರು ಹೇಡಿಗಳು ಆಗಲ್ಲವೇ? ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವಾಗ ಹಲ್ಕಿರಿಯುತ್ತಾ, ನಡುಬಗ್ಗಿಸಿ ಎಂಎಲ್‌ಎ ರೆಕಮಂಡೇಶನ್ ಲೆಟರ್ ಪಡೆದು ಟಿವಿಯಲ್ಲಿ ಆ ಪಕ್ಷದ ರಾಷ್ಟ್ರಾಧ್ಯಕ್ಷೆಯನ್ನು ಕಂಡಾಗಲೆಲ್ಲಾ ದೇಶ ಮಾರೋದಕ್ಕೆ ಹುಟ್ಟಿಬಂದ ಹಡಬೆ ಎಂದು ಬಯ್ಯುವ ಧೀರರಿಲ್ಲವೇ? ಇಂಟರ್ನಲ್ ಮಾರ್ಕಿಗಾಗಿ ವಿನಯವಂತಿಕೆಯ ಸೋಗು ಹಾಕಿಕೊಂಡು ನಟಿಸಿ ಮೇಷ್ಟ್ರು ಮರೆಯಾದಾಗ ‘ಮಗಾ, ಈ ಟಕಲನ ತಲೆ ನೋಡಿದ್ಯಾ ಕ್ಲಾಸಲ್ಲಿ? ಕೇತಾನ್ ಫ್ಯಾನ್ ಕಾಣಿಸ್ತಿತ್ತು, ನಾನು ಅದನ್ನ ನೋಡ್ಕಂಡೇ ಕ್ರಾಪು ಸರಿ ಮಾಡ್ಕಂಡೆ’ ಎಂದು ಡೈಲಾಗ್ ಬಾರಿಸುವ ಕೂಲ್ ಹುಡುಗರಿಲ್ಲವೇ? ಎದುರಲ್ಲಿ ಸಿಕ್ಕಾಗ ‘ಈ ಕಾಲದಲ್ಲಿ ಹೆಣ್ಣು ಸ್ವಂತ ಕಾಲ ಮೇಲೆ ನಿಲ್ಲಬೇಕಮ್ಮ, ಸ್ವಂತ ನೌಕರಿ ಇದ್ದರೇನೆ ಅವಳು ಇಂಡಿಪೆಂಡೆಂಟ್ ಇದ್ದಂಗೆ’ ಎಂದು ಬೆನ್ತಟ್ಟಿ ಆಕೆ ಮರೆಯಾದ ನಂತರ ‘ಗಂಡ ಸರಿ ಇದ್ದಿದ್ರೆ ಇವಳ್ಯಾಕೆ ಹಿಂಗೆ ದನದ ಚಾಕರಿ ಮಾಡ್ತಿದ್ಲು?’ ಎಂದು ಮೂಗುಮುರಿಯುವ ಆಫೀಸ್ ಹಸ್ಬೆಂಡುಗಳ ಹೌಸ್ ವೈಫ್‌‌ಗಳು ಸಾಚಾನ?

ನೋಡ್ರಿ ನಾನ್ ಹೇಳೋದು ಇಷ್ಟೇ, ನನ್ನಂಥವರು ನಾಯಿ ಇದ್ದ ಹಾಗೆ!

ನ.ಸಾ: ದಾಸರು ಗಲ್ಲಿಗೊಂದು ಹಂದಿಯಿರಬೇಕು ಎಂದು ಹೇಳಿದ್ದರು, ಇದೇನು ನಿಮ್ಮನ್ನು ನೀವು ನಾಯಿ ಎಂದು ಕರೆದುಕೊಳ್ಳುವಿರಿ?13

ಅನಾಮಿಕ: ಹೌದು, ನನ್ನಂತಹ ಹೆಸರಿಲ್ಲದ ವಿಮರ್ಶಕರು, ಕ್ರಿಟಿಕ್ಕುಗಳು ನಾಯಿಗಳೇ. ಯಾವ ಮಾಧ್ಯಮ ತಗಂಡ್ರೂ ಮನುಷ್ಯ ಬದಲಾಗಲ್ಲ. ನಾಯಿಯನ್ನ ಪಿಜ್ಜಾ ಹಟ್ಟಿನಲ್ಲಿ ಕೂರಿಸಿದರೂ ಅದು ಅಲ್ಲಿನ ರೆಸ್ಟ್ ರೂಮಿಗೇ ನೆಗೆಯುತ್ತೆ! ಟೀ ಶಾಪಿನ ಚರ್ಚೆಯೇ ಇರ್ಲಿ, ದಿನಪತ್ರಿಕೆಯ ಓದುಗರ ಅಂಕಣವೇ ಇರ್ಲಿ, ಮೊಬೈಲ್ ಬರ್ಲಿ, ಎಸ್.ಎಂ.ಎಸ್ ಬರ್ಲಿ, ಬ್ಲಾಗ್ ಬರ್ಲಿ, ಇಂಟರ್ನೆಟ್ ಡಿಬೇಟ್ ಫಾರಮ್ ಬರ್ಲಿ ಎಲ್ಲಾ ಕಡೆಯೂ ನಾಯಿಗಳು ಇದ್ದೇ ಇರುತ್ತವೆ. ನನ್ನಂತಹ ನಾಯಿಗಳು. ನಮಗೆ ಆನೆಯಂತಹ ಗತ್ತು, ಗಾಂಭೀರ್ಯವಿಲ್ಲ, ಕುದುರೆಯಂತಹ ವಯ್ಯಾರ, ಸೌಂದರ್ಯವಿಲ್ಲ, ಹಸು, ಎಮ್ಮೆಗಳಂತೆ ನಾವು ಉಪಯುಕ್ತರಲ್ಲ ಆದರೆ ಬೀದಿಯಲ್ಲಿ ಇವು ಓಡಾಡಿದರೆ ನಾವು ಮೂರು ಲೋಕ ಒಂದಾಗುವಂತೆ ಬೊಗಳುತ್ತೇವೆ. ಜನರಿಗೆ ರಸ್ತೆಯಲ್ಲಿ ಆನೆ, ಹಸು, ಕುದುರೆ ಇದೆ ಎಂದು ತಿಳಿಯುವುದಕ್ಕೆ ಮುನ್ನ ನಾವು ಬೊಗಳುವುದು ತಲುಪುತ್ತೆ. ಕೆಲವರು ಕಲ್ಲು ಬೀರುತ್ತಾರೆ, ಕೆಲವರು ನಮ್ಮ ಬೊಗಳುವಿಕೆಯಿಂದ ಕಳ್ಳರು ಓಡಿ ಹೋದರು ಎಂದು ಭಾವಿಸುತ್ತಾರೆ.

ನಿಜಕ್ಕೂ ಹೇಳುತ್ತೇವೆ, ನಾವು ಬೀದಿ ನಾಯಿಗಳಿದ್ದ ಹಾಗೆಯೇ. ಕಾರು, ಸ್ಕೂಟರು, ಬಸ್ಸು ಯಾವುದೇ ಚಲಿಸಲು ಬೊಗಳುತ್ತಾ, ರೊಚ್ಚಿನಿಂದ ಅದನ್ನು ಅಟ್ಟಿಸಿಕೊಂಡು ಹೋಗುತ್ತೇವೆ, ಚಲಿಸುತ್ತಿರುವ ವಾಹನ ವೇಗ ಹೆಚ್ಚಿಸಿಕೊಂಡಷ್ಟು ನಮ್ಮ ಹುಮ್ಮಸ್ಸು ಹೆಚ್ಚುತ್ತೆ. ನಾವು ನೆಗೆದು, ಜಿಗಿದು ಅಟ್ಟಿಸಿಕೊಂಡು ಹೋಗುವುದು ಅನೇಕರಿಗೆ ಹೀರೋಯಿಕ್ ಆಗಿ ಕಾಣುತ್ತೆ. ನಮಗೂ ನಾವು ಯಾವುದೋ ಸಿನೆಮಾ ಹೀರೋ ಇರಬೇಕು ಅನ್ನಿಸುತ್ತೆ. ಸಡನ್ನಾಗಿ ಚಲಿಸುತ್ತಿದ್ದ ವಾಹನ ನಿಂತು ಬಿಡುತ್ತೆ ಅಂದುಕೊಳ್ಳಿ. ವೇಗವಾಗಿ ಓಡುತ್ತಿದ್ದ ಬೈಕು ನಿಂತು ಬೈಕಿನ ಚಾಲಕ ಎದುರು ನಿಂತ ಎಂದುಕೊಳ್ಳಿ, ನಾವು ಆಗಸದಿಂದ ಬಿದ್ದ ಉಲ್ಕೆಯಾಗಿಹೋಗುತ್ತೇವೆ. ಏನು ಮಾಡಬೇಕೆಂದು ತೋಚದೆ ಬಾಲವನ್ನು ಬೆನ್ನಟ್ಟಿ ಎರಡು ಸುತ್ತು ತಿರುಗಿ ಹಿಂದಿರುಗಿ ಬಿಡುತ್ತೇವೆ.

ನ.ಸಾ: ಡಬ್ಬಿಯ ಒಳಗೇ ಕೂತು ಇಷ್ಟು ಪ್ರಾಮಾಣಿಕವಾಗಿ ನಿಮ್ಮ ಬಗ್ಗೆ ನೀವೇ ಮಾತಾಡುವುದು ನಿಜಕ್ಕೂ ಆಶ್ಚರ್ಯವಾಗುತ್ತೆ.

ಅನಾಮಿಕ: ನಂಗೂ ತಿಳೀತಿಲ್ಲ, ಅದೇನೋ ಅವಾಗ ಗಾಜಿನ ಲೋಟದಲ್ಲಿ ತಳ್ಳಿದ್ರಲ್ಲ ಅದನ್ನ ಕುಡಿದ ಮೇಲೆ ಹಿಂಗೆಲ್ಲ ಮಾತಾಡೋಕೆ ಶುರು ಮಾಡಿದ್ದು.

ನ.ಸಾ: ಸಂತೋಷ ಸಂತೋಷ, ಅದರಲ್ಲೇನೂ ಇರ್ಲಿಲ್ಲ, ಯೇಸು ಮುಟ್ಟಿದ ಶುದ್ಧವಾದ ನೀರು ಅಷ್ಟೇ. ಸಂದರ್ಶನಕ್ಕೆ ಧನ್ಯವಾದ.

ಉತ್ತರ ಕುಮಾರ: ತಿಳಿದಿಲ್ಲವೇ, ನಾವು ಪತ್ರಕರ್ತರು!

ಸಾಮ್ರಾಟರು ಉತ್ತರ ಕುಮಾರ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಇವರ ಪೌರುಷವೆಲ್ಲಾ ಕೀಬೋರ್ಡ್ ಮುಂದೆ. ಚಿಕ್ಕವರಿದ್ದಾಗ ಇವರು ಕೇಳುತ್ತಿದ್ದ ಪ್ರಶ್ನೆಗಳಿಗೂ ಈಗವರು ಕೊಡುವ ಉತ್ತರಗಳಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಮಂಗಳೂರು ವಿವಿಯ ವಿದ್ಯಾರ್ಥಿಯೊಬ್ಬ ಸಂಶೋಧನಾ ಪ್ರಬಂಧವನ್ನು ಬರೆದು ಅಲ್ಲಿಂದ ಗಡೀಪಾರಾಗಿದ್ದಾನೆ. ನಮ್ಮ ಪತ್ರಿಕೆಯ ಸಂಚಿಕೆಯೊಂದರಲ್ಲಿ ನಗೆ ಸಾಮ್ರಾಟರ ಉತ್ತರ ಪರಾಕ್ರಮವನ್ನು ಬಿಂಬಿಸುವ ಪ್ರತಿಕ್ರಿಯೆಗಳನ್ನು ಆಯ್ದು ಈ ಅಂಕಣದಲ್ಲಿ ಪ್ರಕಟಿಸಲಾಗುವುದು. ಈ ಉತ್ತರ ಕುಮಾರನಿಗೆ ಸಾರಥಿಯಾಗಿ ಯಾವ ಅರ್ಜುನನೂ ಇಲ್ಲವೆಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ!

uttara kumara

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

ranjit adiga:

ನೋಬೆಲ್ ನೋರಿಗೆ “ಒಸಾಮಾ” ಅಂತ ಹಾಕುವ ಬದಲು “ಒಬಾಮಾ” ಅಂತ ಸ್ಪೆಲ್ಲಿಂಗ್ ಮಿಷ್ಟೇಕು ಆಗಿರ್ಬೋದಾ ಸಾಮ್ರಾಟರೇ?

ನಿಮ್ಮನ್ನೂ ಸೇರಿಸಿ ಜನರ ರಿಯಾಕ್ಷನ್ನು , ಇಬ್ಬರಲ್ಲಿ ಯಾರಿಗೆ ದೊರೆತರೂ ಒಂದೇ ರೀತಿ ಆಗಿರಬಹುದು ಅನ್ನಿಸಿತು.

Nage samrat

ಒಸಾಮಾಗೆ ಶಾಂತಿ ನೋಬೆಲ್ ಬಹುಮಾನ ಕೊಡಲೇಬೇಕು ಎಂಬ ನಿಮ್ಮ ಆಗ್ರಹಕ್ಕೆ ನಮ್ಮ ಸಮ್ಮತಿಯಿದೆ. ಬಹುಮಾನವನ್ನು ಸ್ವೀಕರಿಸಲು ವೇದಿಕೆಗೆ ಬಂದಾಗಲಾದರೂ ಅವನನ್ನು ಹಿಡಿಯಲು ಸಾಧ್ಯವಾಗಬಹುದು!

ರಿಯಾಕ್ಷನ್ನು ಕೊಡುವುದೇ ಪತ್ರಿಕೆಯ ಕೆಲಸ. ಗಾಂಧಿಗೆ ನೊಬೆಲ್ ಸಿಕ್ಕದಿರುವಾಗ ‘ಗಾಂಧಿಗೇ ದೊರಕದ ನೊಬೆಲ್ ಅದೆಷ್ಟು ನೊಬೆಲ್?’ ಎಂದು ಮೂಗೆಳೆಯುತ್ತೇವೆ. ಗಾಂಧಿಗೆ ನೊಬೆಲ್ ಸಿಕ್ಕಿದ್ದಿದ್ದರೆ ಹಿಂದೂ ಮುಸ್ಲೀಂ ಗಲಭೆ, ಪಾಕಿಸ್ತಾನದ ಸೃಷ್ಟಿ ಎಲ್ಲವನ್ನೂ ಎಳೆದುತಂದು ಗಾಂಧಿಗೆ ಕೊಟ್ಟ ಮೇಲೆ ಅದೆಷ್ಟು ನೊಬೆಲ್? ಎಂದು ಕೇಳುತ್ತೇವೆ! ನಾವು ಪತ್ರಕರ್ತರು ನಿಮಗೆ ತಿಳಿದಿಲ್ಲವೇ?

ಸ್ವಾಮಿ ಅಧ್ಯಾತ್ಮಾನಂದರ ಅಂಕಣ

Richard shitkins:

Hi Your Holiness Swami Hadhyatmanand,

Pardon me for not writing in your holy tongue as I am yet to get to know it well enough to be able to write in it.

I am visiting your country as part of my research project into
all kinds of shit versus the famous spirituality of your country of holy cows and bullshit which you guys worship.

May I seek to get some enlightenment from your holiness?

Thanks. Different religions and isms of the world have interpreted shit according to the tenets of their own beliefs. For your ready reference, I have reproduced them in a separate mail.

May I seek your indulgence in explaining how you view your own shit?

 

Adhyatmananda swamiji

Dear shitkins,
Accept my blessings.
I wish you all the very best for your research, i hope it goes on very well. you can find too much of shit for free in India. Finding it very easy here. If you do the same in other countries you would be robbed of your precious possessions.

our understanding about shitology is simple. You get what you seek, it may be shit or sat-chit-ananda. Knowing your interest and indulgence , i assure you you`ll get it enough!!

I bow to HIM present in you..

ದರಿದ್ರ ನಾರಾಯಣರ ಲಂಗದ ಮೋಹ!

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚಿನ ಕುರಿತು ನಾವು ಪ್ರಕಟಿಸಿದ ವರದಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪೂರ್ಣ ದಿಗಂಬರರಾಗಿರುವ ದರಿದ್ರ ನಾರಾಯಣರು ತಾವು ಸಂಪೂರ್ಣ ದಿಗಂಬರರು ಎಂದು ತೋರಿಸಿಕೊಡುವುದರ ಜೊತೆಗೆ ನಮ್ಮ ವರದಿಯಲ್ಲಿ ಚರ್ಚಾಸ್ಪದವಾದ ಸಂಗತಿಯಿದೆ ಎಂದು ತೋರಿದರು.

ನಮ್ಮ ಸಾಮ್ರಾಜ್ಯದ ಪ್ರಜೆಗಳ ಅನುಕೂಲಕ್ಕಾಗಿ ಅವರ ಪ್ರತಿಕ್ರಿಯೆಯನ್ನು ಅದಕ್ಕೆ ನಾವು ನೀಡಿದ ಸಮಾಧಾನಗಳೆರಡನ್ನೂ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾರ್ವಜನಿಕರ ನೆಮ್ಮದಿಯ ರಕ್ಷಣೆಗಾಗಿ ಮಾನ್ಯ ಬಟಾ ಬೆತ್ತಲು ದರಿದ್ರ ನಾರಾಯಣರ ಭಾವಚಿತ್ರವನ್ನು ಪ್ರಕಟಿಸುತ್ತಿಲ್ಲ. 

 

ನಗೆಸಾಮ್ರಾಟರೇ, ನಿಮ್ಮ ಮತ್ತು ನಿಮ್ಮ ಕು-ಚೇಲರ ವಿಚಾರಗಳನ್ನು ಓದಿದ ನಮಗೆ ನಿಮ್ಮ ಮೇಲೆ ಅತೀವ ಮರುಕವಾಗುತ್ತಿದೆ.

ನಟಿಯರ ಲಂಗದ ಕೆಂಪು ಕಂಡ ಗಂಡು ಗೂಳಿಗಳು ಉದ್ರೇಕಗೊಂಡು ರಭಸದ ಧಾಳಿ ಮಾಡುವುದು ಸಹಜಸ್ಥಿತಿ.
ಅದು ಬಿಟ್ಟು ಕೆಂಪು ನಿಶಾನೆ ಕಂಡ ಭಾ ರತಿಯ ರೈಲಿನಂದದಿ ಅಲ್ಲೇ ನಿಂತು ಬಿಟ್ಟು ವಿಜ್ಞಾನದ ಜಿಜ್ಞಾಸೆಯಲ್ಲಿ ನಿ-ರತ ರಾಗಿ ನಿಸರ್ಗದ ವಿರುದ್ಧ ಹೋಗುವುದ ಕಂಡು ಖೇದವಾಗುತ್ತಿದೆ. ಎಲ್ಲ ಗಂಡಸರೂ ನಿಮ್ಮಂತೆ ನಡೆದರೆ ಮನುಕುಲವು ತನ್ನ ಪರಿಸರ ನಾಶವಾಗುವ ಮೊದಲೇ ನಿರ್ವಂಶವಾಗಿ ಪರಿಸರ ಸರಿಪಟ್ಟು ಭೂ ಭಾರ ಕಡಿಮೆಯಾಗ ಬಲ್ಲುದೆ ಎಂಬ ಚಿಂತೆ ಕೊರೆಯುತ್ತಿದೆ.

ಈ ರತಿವಿರಕ್ತಿ ನೋಡಿ, ಮುಕ್ತಕಾಮದ ಪ್ರತಿಪಾದಕ (?) ಓಶೋ ಹಕ್ಕಿಯು ಹಾಡುವದನ್ನೇ ಮರೆತು ಬಿಟ್ಟಿತೇ ಎಂಬ ಭಯವಾಗುತ್ತಿದೆ.

ದಿಗಂಬರ ಪಂಥದತ್ತ ವಾಲಿದ ನಾವು ನಿಮಗಲ್ಲದಿದ್ದರೂ ನಿಮ್ಮ ನಟಿಯರಿಗಾದರೂ ದಿಗಂಬರ ಪಂಥದ ಸಹಜಸ್ತಿತಿಯ ದೀಕ್ಷೆ ಕೊಡಿಸುವತ್ತ ವಿಷಯಾಸಕ್ತರಾಗಿದ್ದೇವೆ.

– ದರಿದ್ರ ನಾರಾಯಣ ಬಟಾಬತ್ತಲ್

***

ಬಟಾಬತ್ತಲ್ ದರಿದ್ರ ನಾರಯಣರೇ,
ನೀವು ಸಲ್ಲಿಸಿದ ಅತೀವ ಮರುಕವನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಮುಂದಿನ ದೀಪಾವಳಿಯಷ್ಟರ ಹೊತ್ತಿಗೆ ನಾವು ಸಂಪೂರ್ಣ ದಿವಾಳಿಯೆದ್ದಿರದಿದ್ದರೆ ಖಂಡಿತವಾಗಿಯೂ ಅದನ್ನು ಹರಾಜು ಹಾಕದೆ ಕಾಪಾಡುತ್ತೇವೆ.

ಗೂಳಿಯ ಮಾತೆತ್ತಿದಿರಿ ಎಂಬ ಕಾರಣಕ್ಕಾಗಿ ನಮಗೀ ಸಂಶಯ ಉದ್ಭವಿಸಿರುವುದು… ಭಾ-ರತಿಯ ಗಂಡಸರು ನಮ್ಮಂತೆ ನಡೆದರೆ ನಿರ್ವಂಶವಾಗುವುದು ಸರಿ. ಅದರಿಂದ ಭೂಭಾರ ಕಡಿಮೆ ಹೇಗಾದೀತು? ನಿಮ್ಮ ಗಂಡು ಗೂಳಿಗಳು ರಭಸದ ದಾಳಿ ಮಾಡಲು ಉಳಿದೇ ಇರುತ್ತವಲ್ಲ! ಅಲ್ಲದೆ ಈ ವಿಜ್ಞಾನದ ಆರಾಧಕ ಕೆಂಪು ಗೂಳಿಗಳು ದಾಳಿ ಮಾಡುವಾಗಲೆಲ್ಲ ರಬ್ಬರ್ ಮಾಸ್ಕು ಹಾಕಿಕೊಂಡಿರ್ತವಲ್ಲ, ಇದರಿಂದ ನಿಮ್ಮ ನಿಸರ್ಗ ಅದೆಷ್ಟು ನೊಂದುಕೊಳ್ಳುವುದೆಂದು ತಿಳಿಯದೇ? ಕೆಂಪು ಸಿಗ್ನಲ್ ನೋಡಿದೊಡನೆ ನಿಮ್ಮ ಬುದ್ಧಿಯೂ ನಿಂತು ಬಿಡುವುದೇ ಕೆಲಸ ಮಾಡದೆ?

ಮುಕ್ತಕಾಮದ ಪ್ರತಿಪಾದಕನಾಗಿದ್ದ ಓಶೋ ಮುಕ್ತ ಚಿಂತನೆಯ ಪ್ರತಿಪಾದಕನೂ ಆಗಿದ್ದ ಅನ್ನೋದು ಕೊಂಚ ಮುಂದಕ್ಕೆ ಚಲಿಸುವ ಅಭ್ಯಾಸವಿರುವ ಸಾಮಾನ್ಯ ಮೆದುಳಿಗೂ ತಿಳಿಯುತ್ತದಂತೆ! ಸಿಗ್ನಲ್ ಇನ್ನೂ ಬದಲಾಗಿಲ್ಲವೇ? ಪರೀಕ್ಷಿಸಿ.

ದಿಗಂಬರ ಪಂಥಕ್ಕೆ ತಾವು ಎಡಗಡೆಯಿಂದ ವಾಲಿದಿರೋ ಇಲ್ಲ ಬಲಗಡೆಯಿಂದ ವಾಲಿದಿರೋ ಎಂಬುದು ಮುಂದೆ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಲಿರುವ ಅಪರೂಪ ಸಂದರ್ಶನದಲ್ಲಿ ನಿಮ್ಮ ಜಾತಿಯ ಸದಸ್ಯನಿಂದಲೇ ಬಾಯಿ ಬಿಡಿಸುತ್ತೇವೆ. ಅಲ್ಲಿಯವರೆಗೆ ಬಾಯನ್ನ ಮಾತ್ರ (!!) ಮುಚ್ಚಿಕೊಂಡಿರಿ!

:)

- ನಗೆ ಸಾಮ್ರಾಟ್

ಕೊಲೆಗಾರ ಒಬಾಮಾಗೆ ನೋಬೆಲ್, ತೀವ್ರ ಖಂಡನೆ!

 

(ನಗೆ ನಗಾರಿ ಅಂತರಾಷ್ಟ್ರೀಯ ಕ್ಯಾತೆ ಬ್ಯೂರೋ)

ಶಾಲೆಗೆ ಸೇರಿದ ಹುಡುಗನೊಬ್ಬನ ಮಾತು, ಪ್ರಶ್ನೆಗಳಿಗೆ ಆತ ನೀಡುವ ಉತ್ತರಗಳು ಆಕರ್ಷಕವಾಗಿದ್ದರೆ ಅವನ್ನೆಲ್ಲ ಕಂಡು ಆತ ತುಂಬಾ ಬುದ್ಧಿವಂತ ಇರಬೇಕು ಎಂದೆನ್ನಿಸುವುದು ಸಾಮಾನ್ಯ. ಆದರೆ ಹಾಗಂತ ಪರೀಕ್ಷೆ ನಡೆಸುವ ಮೊದಲೇ ಆತನಿಗೆ ಮೊದಲ ರ್ಯಾಂಕ್ ಕೊಟ್ಟುಬಿಡಲು ಸಾಧ್ಯವೇ?

ಅಧಿಕಾರಕ್ಕೆ ಬಂದು ಒಂದು ವರ್ಷವೂ ಆಗಿರದ, ಬರಾಕ್ ಒಬಾಮರಿಗೆ ವಿಶ್ವ ಶಾಂತಿ ನೊಬೆಲ್ ಬಹುಮಾನ ಕೊಟ್ಟಿರುವುದನ್ನು ಕಂಡು ಅನೇಕರು ಹೀಗೆ ಮೂಗೆಳೆಯುತ್ತಿದ್ದಾರೆ. ಯುದ್ಧ ದಾಹಿ ಅಮೇರಿಕಾ ದೇಶದ ಶಬ್ಧಕೋಶದಲ್ಲಿಯೂ ಸಹ ಶಾಂತಿ ಎಂಬ ಪದದ ಬದಲಾಗಿ ‘ಬಾಂಬು’ ಇರುವುದನ್ನು ಪತ್ತೆ ಮಾಡಿರುವ ಶಾಂತಿಯುತ ರಕ್ತಕ್ರಾಂತಿಯ ಧುರೀಣರು ಜಾಗತಿಕ ಆರ್ಥಿಕ ಕುಸಿತದ ಈ ಕಾಲದಲ್ಲಿ ನೊಬೆಲ್ ಸಂಸ್ಥೆ ಅಗ್ಗದ ಜೋಕ್ ಕಟ್ ಮಾಡಿದೆ ಎಂದು ಹೇಳಿಕೆ ನೀಡಿದೆ. ಕೆಂಪು ಬಣ್ಣದಲ್ಲಿರಬೇಕಾಗಿದ್ದ ಹೇಳಿಕೆಯ ಪಾಂಪ್ಲೆಟುಗಳು ನೀಲಿಗೆ ತಿರುಗಿದುದರ ಹಿಂದೆ ಸಿ.ಐ.ಎ ಕೈವಾಡವಿದೆಯೆಂದು ಹಳದಿ ಬಣ್ಣದ ಮತ್ತೊಂದು ಪಾಂಪ್ಲೆಟಿನಲ್ಲಿ ಹೇಳಲಾಗಿದೆ.

ಒಬಾಮರಿಗೆ ನೊಬೆಲ್ ಕೊಟ್ಟಿರುವುದರ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ, ಇರಾಕ್, ಇರಾನ್ ಹಾಗೂ ಸೌದಿ ಅರೇಬಿಯಾ ಎಂಬ ದುಷ್ಟತ್ರಯ ಮಿತ್ರಕೂಟದಲ್ಲಿ ಅಸಮಾಧಾನದ ಹೊಗೆ ಆಡಿರುವುದು ನಿಜವಾದರೂ ಜಗತ್ತಿನ ಯಾವ ಮೂಲೆಯಲ್ಲೂ ಗಟ್ಟಿ ಧ್ವನಿಯ ಪ್ರತಿಭಟನೆ ವ್ಯಕ್ತವಾಗಿರುವುದು ಯಾವ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ಕಳೆದುಕೊಂಡ ಸುದ್ದಿಯನ್ನು ಹೆಕ್ಕಿ ತೆಗೆಯುವಲ್ಲಿ ಜಗತ್ಪ್ರಸಿದ್ಧವಾಗಿರುವ ನಗೆ ನಗಾರಿಯು ಈ ಸುದ್ದಿಯ ಬೆನ್ನಟ್ಟಿತು. ಒಬಾಮರನ್ನು ನೊಬೆಲ್‌ಗೆ ಆಯ್ಕೆ ಮಾಡಿರುವುದನ್ನು ಉಗ್ರವಾಗಿ ವಿರೋಧಿಸಿರುವ ಸಂಘಟನೆಯೊಂದು ‘ಕೊಲೆಗಾರ ಒಬಾಮಗೆ ಶಾಂತಿ ನೊಬೆಲ್?’ ಎಂಬ ಶೀರ್ಷಿಕೆಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಒಂದು ವೇಳೆ ನೊಬೆಲ್ ಸಮಿತಿಯು ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಉಳಿದೆಲ್ಲ ದೊಡ್ಡ ಮಾಧ್ಯಮ ಸಂಸ್ಥೆಗಳು ಈ ಪುಟ್ಟ ಸಂಘಟನೆಯ ಪತ್ರಿಕಾ ಹೇಳಿಕೆಯನ್ನು ಕಸದ ಬುಟ್ಟಿಗೆ ಎಸೆದಿವೆ. ಆದರೆ ಪತ್ರಿಕಾ ಕಛೇರಿಯ ಕಸದ ಬುಟ್ಟಿಯನ್ನೇ ಅತಿಮುಖ್ಯ ಬಾತ್ಮೀದಾರನನ್ನಾಗಿ ಹೊಂದಿರುವ ನಗೆ ನಗಾರಿಯು ಆ ಬಹುಸಂಖ್ಯಾತ ಮೈನಾರಿಟಿಯ ಒಂಟಿ ಧ್ವನಿಗೆ ಬೆಂಬಲ ನೀಡುತ್ತ ಅವರ ಪ್ರಕಟಣೆಯನ್ನು  ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ:

ಮಾನವರ ಕ್ಯಾಲಂಡರಿನ ದಿನಾಂಕ: ೦೯-೧೦-೨೦೦೯
ಮಾನವರ ಭೂಪಟದ ಸ್ಥಳ : ನ್ಯೂಯಾರ್ಕ್

ಅಂತರಾಷ್ಟ್ರೀಯ ಕೀಟ ಪ್ಯಾರಕೀಟ ಸಂಘಟನೆಯ ಅಂಗ ಸಂಸ್ಥೆಯಾದ ಅಂತರಾಷ್ಟ್ರೀಯ ನಿರುದ್ಯೋಗಿ ನೊಣಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನಾನು, ಶ್ರೀಮತಿ ನೊಣಚಮ್ಮ ಈ ಪತ್ರದ ಮೂಲಕ ತಿಳಿಸುವುದೇನೆಂದರೆ…

ಅಮೇರಿಕಾದ ನೂತನ ಅಧ್ಯಕ್ಷರಾದ ಬರಾಕ್ ಹುಸೇನ್ ಒಬಾಮ ಮೇಲ್ನೋಟಕ್ಕೆ ಶಾಂತಿದೂತರಾಗಿ, ಜಗತ್ತಿನ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಮುತ್ಸದ್ಧಿಯಾಗಿ, ದೇವರ ಮಗನಾಗಿ, ಪ್ರವಾದಿಯಾಗಿ ಕಂಡುಬಂದರೂ ಅಂತರಂಗದಲ್ಲಿ ಆತನೂ ರಕ್ತದಾಹಿಯೇ. ಆತನ ದೇಹದಲ್ಲಿ ವರ್ಷವೊಂದಕ್ಕೆ ನಾಶವಾಗುವ ಕೆಂಪು ರಕ್ತ ಕಣಗಳೇ ಇದಕ್ಕೆ ಹಸಿ ಸಾಕ್ಷಿ.

ಒಬಾಮರ ಮೊದಲು ಎರಡು ಅವಧಿಗಳ ಕಾಲ ಅಮೇರಿಕಾದ ಅಧ್ಯಕ್ಷರಾಗಿದ್ದ ಬುಶ್ ನಿಜವಾದ ಅಹಿಂಸಾವಾದಿಯಾಗಿದ್ದರು ಎಂಬುದನ್ನು ನಮ್ಮ ಕೀಟ ಸಂಘಟನೆಯು  ನೆನೆಯಲು ಇಚ್ಛಿಸುತ್ತದೆ. ಅವರ ಕಾಲಾವಧಿಯಲ್ಲಿ ಅಫಘಾನಿಸ್ತಾನ, ಇರಾಕ್ ಮೊದಲಾದೆಡೆ ನೊಣಗಳ ಹಾಗೆ ಜನರು ಕೊಲ್ಲಲ್ಪಟ್ಟರೂ, ಅಬು ಗಾರಿಬ್, ಗ್ವಾಂಟನಮೋ ಸೆರೆಮಮನೆಗಳಲ್ಲಿ ಕೀಟಗಳಂತೆ ಖೈದಿಗಳು ತಿಕ್ಕಲ್ಪಟ್ಟರು. ಆದರೆ ಬುಶ್ ಆಶ್ರಯದಲ್ಲಿ ನಮ್ಮ ಕೀಟ ಜೀವ ಸಂಕುಲಕ್ಕೆ ಯಾವ ಬಾಧೆಯೂ ತಟ್ಟಲಿಲ್ಲ. ಕೀಟ ಪ್ರಪಂಚದ ಅಧಿದೇವತೆಯಂತೆ ಸನ್ಮಾನ್ಯ ಬುಶ್‌ರವರು ಅಧಿಕಾರ ನಡೆಸಿದರು.

ಇರಾಕ್ ಎಂಬ ದೇಶದ ರಕ್ಕಸ ಸರ್ವಾಧಿಕಾರಿಯನ್ನು ನೇಣಿಗೆ ಹಾಕಿ ಆ ದೇಶಕ್ಕೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟು ಉಡುಗೊರೆಯಾಗಿ ಪತ್ರಕರ್ತನೊಬ್ಬನ ಶೋ ಒಂದು ಗಾಳಿಯಲ್ಲಿ ತೂರಿ ಬಂದಾಗ ಬುಶ್ ಕಾರ್ಯಕ್ಷಮತೆಯ ನಿಜವಾದ ಪರೀಕ್ಷೆ ನಡೆಯಿತು. ತೂರಿ ಬಂದ ಶೂ ಸೋಲ್ ಹಾಗೂ ಬುಶ್ ಹಣೆಯ ನಡುವೆ ನಮ್ಮ ಕೀಟ ಸಂಘಟನೆಯ ಅಧ್ಯಕ್ಷರಾದ ಶ್ರೀ ನೊಣಯ್ಯನವರು ಸಿಕ್ಕಿ ಹಾಕಿಕೊಂಡಿದ್ದರು. ಒಂದು ವೇಳೆ ಶೂ ತಮ್ಮ ಹಣೆಗೆ ಅಪ್ಪಳಿಸಲು ಬುಶ್ ಅನುಮತಿಸಿದ್ದಿದ್ದರೆ ಅಂದು ನಮ್ಮ ಸಂಘಟನೆ ನಾಯಕನನ್ನು ಕಳೆದುಕೊಳ್ಳುತ್ತಿತ್ತು. ಪರಮದಯಾಳುವಾದ ಜಾರ್ಜ್ ಬುಶ್ ತಮ್ಮೆಲ್ಲಾ ಆತ್ಮಶಕ್ತಿಯನ್ನು ಒಗ್ಗೂಡಿಸಿ ನಮ್ಮ ನಾಯಕನ ಪ್ರಾಣವನ್ನು ಉಳಿಸಿದರು. ಅಂದೇ ನಾವು ವಿಶ್ವಸಂಸ್ಥೆಗೆ ಪತ್ರವನ್ನು ಬರೆದು ಸನ್ಮಾನ್ಯ ಬುಶ್‌ರಿಗೆ ವಿಶ್ವಶಾಂತಿ ನೊಬೆಲ್ ನೀಡಬೇಕು ಎಂದು ಒತ್ತಾಯಿಸಿದ್ದೆವು. ಪತ್ರವನ್ನು ಹೊತ್ತೊಯ್ದ ನಮ್ಮ ದೂತನು ವಿಮಾನ ನಿಲ್ದಾಣದ ಮಸ್ಕಿಟೊ ರಿಪೆಲೆಂಟ್ ದಾಳಿಗೆ ಬಲಿಯಾಗಿ ಪತ್ರವು ಗುರಿಯನ್ನು ತಲುಪುವಲ್ಲಿ ವಿಫಲವಾಯಿತು.

ಬುಶ್‌ರಂತಹ ಅಪ್ರತಿಮ ಕರುಣಾಮಯಿಯಿಂದ ಅಧಿಕಾರ ಕಸಿದುಕೊಂಡ ಒಬಾಮ ನಮ್ಮ ಸಂಸ್ಥೆಯ ಪಾಲಿಗೆ ಒಸಾಮ ಆದದ್ದು ದುರಂತ. ಜಾರ್ಜ್ ಬುಶ್‌ರಿಂದ ರಕ್ಷಿಸಲ್ಪಟ್ಟ ನಮ್ಮ ಅಧ್ಯಕ್ಷರು ತಮ್ಮ ಕೃತಜ್ಞತಾ ಪತ್ರವನ್ನು ಖುದ್ದಾಗಿ ಅಮೇರಿಕಾದ ಅಧ್ಯಕ್ಷರಿಗೆ ತಲುಪಿಸಲು ವೈಟ್ ಹೌಸ್ ಸೇರಿದ್ದರು. ಆದರೆ ಅಷ್ಟರಲ್ಲಿ ಬುಶ್‌ರನ್ನು ಪಟ್ಟದಿಂದ ಇಳಿಸಿ ಈ ಕರಿದೊರೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೂ ಬುಶ್ ಅಲಂಕರಿಸಿದ್ದ ಅಧ್ಯಕ್ಷ ಸ್ಥಾನದ ಮೇಲಿನ ಗೌರವದಿಂದ ನಮ್ಮ ನೊಣಯ್ಯನವರು ಒಬಾಮರಿಗೆ ಪ್ರೀತಿಯ ಆಲಿಂಗನ ಹಾಗೂ ಕೆನ್ನೆಯ ಮೇಲೆ ಹೂ ಮುತ್ತನ್ನು ನೀಡಲು ಮುಂದಾದರು.

ಆಗ ಸ್ಪೋಟಿಸಿತು ರಕ್ಕಸನ ಅಂತರಂಗದಲ್ಲಿದ್ದ ಕ್ರೋಧಾಗ್ನಿ! ರಾಷ್ಟ್ರೀಯ ಮಾಧ್ಯಮದ ಕೆಮರಾಗಳ ಸಮಕ್ಷಮದಲ್ಲಿಯೇ ಆತನ ರೌದ್ರಾವತಾರ ಅನಾವರಣಗೊಂಡಿತು. ಕಡು ನಿಷ್ಕರುಣಿ ಕೊಲೆಗಾರನ ಹಾಗೆ ಒಬಾಮ ನಮ್ಮ ಅಧ್ಯಕ್ಷರನ್ನು ಪಟ್ ಎಂದು ಹೊಡೆದುರುಳಿಸಿ ಬಿಟ್ಟರು. ಕ್ಷಣ ಮಾತ್ರದಲ್ಲಿ ನೊಣಯ್ಯನವರ ಪ್ರಾಣ ಪಕ್ಷಿ ಅನಂತದಲ್ಲಿ ಲೀನವಾಗಿ ಹೋಯ್ತು. ಇಂತಹ ಘೋರವಾದ ಪಾಪವೆಸಗಿಯೂ ಚೂರೂ ಪಶ್ಚಾತಾಪವಿಲ್ಲದೆ ಹತ ನೊಣಯ್ಯನವರ ಶವವನ್ನು ನ್ಯಾಪ್‌ಕಿನ್ನಿನಲ್ಲಿ ಎತ್ತಿ ಬಿಸಾಕಿ ಕೆಮಾರದವರಿಗೆ ಕವರ್ ಮಾಡಲು ನಗುತ್ತಾ ಹೇಳಿದರು. ಅನಂತರ ಕೈ ಒರೆಸಿಕೊಂಡು ಸಂದರ್ಶನ ಮುಂದುವರೆಸಿದರು.

ಈ ಘಟನೆಗೆ ನಮ್ಮ ಬಳಿ ವಿಡಿಯೋ ದಾಖಲೆಗಳಿವೆ. ಅದನ್ನಿಲ್ಲಿ ಲಗತ್ತಿಸಿದ್ದೇವೆ.

ಪತ್ರಿಕೆಗಳ ವರದಿಗಳ ಆಧಾರಗಳಿವೆ.

ಹೇಳಿ, ಇಂತಹ ನಿಷ್ಕರುಣೆಯ, ಕ್ರೂರ ರಕ್ತದಾಹಿ ಮನುಷ್ಯನಿಗೆ ಶಾಂತಿ ನೊಬೆಲ್ ಬಹುಮಾನ ನೀಡಿದರೆ ನೊಬೆಲ್ ಪ್ರತಿಷ್ಠಾನವನ್ನು ಸ್ಥಾಪಿಸಿದ, ಜಿಲಟಿನ್, ಡೈನಮೈಟ್ ಕಂಡುಹಿಡಿದು, ಬೊಫೊರ್ಸ್ ಕಂಪೆನಿಯ ಒಡೆಯನಾಗಿ ವಿಶ್ವಯುದ್ಧದಲ್ಲಿ ಮಾನವರ ಜೀವಗಳನ್ನು ಸೊಳ್ಳೆ ಜೀವಗಳಿಗೆ ಸಮ ಎಂದು ತೋರಿಸಿಕೊಟ್ಟ ಆಲ್ಫ್ರೆಡ್ ನೊಬೆಲ್ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆಯೇ?

ತಮ್ಮ ಈ ನಿರ್ಧಾರವನ್ನು ನೊಬೆಲ್ ಸಮಿತಿಯು ಹಿಂತೆಗೆದುಕೊಳ್ಳದಿದ್ದರೆ ನಾವು ವಿಶ್ವದಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ. ನಮ್ಮ ಸಂಘಟನೆಯ ಆತ್ಮಾಹುತಿ ದಳದ ಯೋಧರು ಜಗತ್ತಿನೆಲ್ಲ ಟೀ ಕಪ್ಪುಗಳಲ್ಲಿ ಧುಮುಕಿ ಪ್ರಾಣ ತ್ಯಾಗ ಮಾಡಲಿರುವರು. ಮುಂದೆ ಆಗಲಿರುವ ಎಲ್ಲಾ ಅನಾಹುತಗಳಿಗೆ ನೊಬೆಲ್ ಸಮಿತಿಯೇ ಹೊಣೆ! ಎಚ್ಚರ!

ಇಂತಿ,
ಅಂತರಾಷ್ಟ್ರೀಯ
ನಿರುದ್ಯೋಗಿ ನೊಣಗಳ
ಒಕ್ಕೂಟದ
ಪ್ರಧಾನ ಕಾರ್ಯದರ್ಶಿ
ಶ್ರೀಮತಿ ನೊಣಚಮ್ಮ

ತೊಣಪ್ಪನ ಡೈರಿ

ಕಾಪಾಡಿದ್ದು ಯಾರು?

 

ನೀವ್ ಅದೆಷ್ಟೇ ವಿನಯವಂತ್ರಾಗಿರ್ಬೋದು, ಆದ್ರೆ ಕೆಲ್ವೊಂದ್ಸಲ ನೀವ್ ಮಾಡಿದ ಕೆಲ್ಸಕ್ಕೆ ತಕ್ಕ ಕ್ರೆಡಿಟ್ಸು ಪಡೀಲೇಬೇಕಾಗುತ್ತೆ. ‘ಈ tonachi diary ಮಗುವಿನ ತಂದೆ ಯಾರು?’, ‘ಈ ಟೀ ಕಪ್ಪು ಒಡೆದದ್ದು ಯಾರು?’, ‘ನನ್ನ ಮಗಳಿಗೆ ಲವ್ ಲೆಟರ್ ಕೊಟ್ಟಿದ್ದು ಯಾರು?’, `ಬಹುಮಾನ ಬಂದ ಈ ಲಾಟರಿ ಟಿಕೆಟ್ ನಿಮ್ದಾ?’ ಅನ್ನೋ ಪ್ರಶ್ನೆಗಳೆದ್ದಾಗ ನಿಮ್ಮೆಲ್ಲಾ ವಿನಯವಂತಿಕೆ ಬಿಟ್ಟು ನಿಮ್ ಕೆಲ್ಸದ್ ಬಗ್ಗೆ ನೀವು ಕ್ರೆಡಿಟ್ಸ್ ತೆಗ್ದುಕೊಳ್ಳಬೇಕಾಗುತ್ತೆ.

ಪಾಪ ಈ ಸೀಕ್ರೇಟು ಆ ಹೆಲಿಕಾಪ್ಟರಿಗೆ ಗೊತ್ತಿರ್ಲಿಲ್ಲ! ವರ್ಷವಿಡೀ ನದಿ ಅನ್ನೋ ಬೋರ್ಡ್ ಹಾಕ್ಕಂಡಿದ್ದ ಬಯಲು ಮಂದಿರವಾಗಿದ್ದ ತುಂಗಾ ನದಿ ತುಂಬಾ ತುಂಬಿಕೊಂಡು ಮಂತ್ರಾಲಯವನ್ನೇ ಮುಳುಗ್ಸುವಾಗ ಮಂತ್ರಾಲಯ ಸ್ವಾಮಿಯವರ್ನ ಕಾಪಾಡಿದ್ದು ಸರಿಯಾದ್ ಸಮ್ಯಕ್ಕೆ ತಲುಪಿದ ಹೆಲೆಕಾಪ್ಟರು. ಮಾರ್ನೆಯ ದಿನ ಸ್ವಾಮ್ಗೋಳು ನಮ್ಮುನ್ ಕಾಪಾಡಿದ್ದು ಗುರುರಾಯ ಅನ್ವಾಗ ಆ ಹೆಲಿಕಾಪ್ಟರು ಮೋಸ್ಟ್ಲಿ ನನ್ ಪೈಲಟ್ ಹೆಸ್ರು ಗುರ್ರಾಯ ಅಂದ್ಕಂಡು ಸಮಾಧಾನ ಮಾಡ್ಕಂತೇನೋ!

ಹೆಲಿಕಾಪ್ಟರ್ ಬಗ್ಗೆ ನಾವ್ ಮಾತಾಡೋದು ಅವು ರಾಜ್ಯದ ಮುಖ್ಯಮಂತ್ರಿ ಸಮೇತ ಸ್ಪೋಟಗೊಂಡಾಗ್ ಮಾತ್ರ ಅನ್ಸುತ್ತೆ!

 

ಸುಳ್ ಮೆಣ್ಸಿನ್‌ಕಾಯ್!

 

ಪಾರ್ಟ್ ಟೈಮು  ನ್ಯೂಸ್ ಪೇಪರ್‌ , ಫುಲ್ ಟೈಮ್ ಪೊಲಿಟಿಕಲ್ ಆಕ್ಟಿವಿಸ್ಟು ಆಗಿರೋ ವಿಜಯ ಕರ್ನಾಟಕವೆಂಬೋ ನಂಬ್ರ ಒನ್ ಪತ್ರಿಕೆಯಲ್ಲಿ ಬ್ಯಾಡ್ಗಿ ಖಾರದ ಮೆಣ್ಸಿನ್ ಕಾಯಿ ಪ್ರ‘ತಾಪ’ರ ಕಾಲಂ ಪಕ್ಕದಲ್ಲೇ ಕೆಂಪ್ ಮೆಣ್ಸಿನ್ ಕಾಯಿ ಮಿರ್ಚಿ ಮಾಡೋ ಮೋಹನ್‌ರು ತಮ್ ಅಂತರ್ಜಾಲದ ಬಗ್ಗೆ ಸ್ವಲ್ಪ್ ಗಮನ ಕೊಡೋದ್ ವಾಸಿ ಅನ್ನಿಸ್ತದೆ.

ಕಳೆದ ಶನಿವಾರದ ಅಂಕಣದಾಗೆ ಅಲ್ಲಾಡಿಸಿದ್ ಕೆಂಪ್ ಮೆಣಸಿನ್ಕಾಯ್‌ನಾಗೆ ಹೀಗಂತಾರೆ:

gandhi

ಪತ್ರಿಕೋದ್ಯಮದ್ ಪಾಠಗಳಲ್ಲದಿದ್ರೂ ತೀಟೆಗಳನ್ ಸಾಮ್ರಾಟರ್ ತಾವ ಕಲ್ತಿರೋ ನಾನು ಗೂಗಲಿನ ಕೌಂಟರಿಗೆ ‘ಗಾಂಧಿ’ ಪದ ತಳ್ಳಿದ್ದೇ ತಡ ನಮ್ ದೇಶದ ತಂದೆ ಮಹಾತ್ಮ ಗಾಂಧಿಯವ್ರೇ ಕಂಡ್ರು. ಎರಡ್ರಾಗೆ ರಾಜೀವ್ ಕಂಡ್ರು, ಮೂರ್ನೇ ಪೇಜ್‌ನಾಗೆ  ಸೋನಿಯಾ ಅಮ್ಮಾವ್ರು ಬಂದ್ರು.

gandi1

gandi2

gandi3

ಅವ್ರೊಳಗಿನ ಹಾಡು ಕ್ಯೂಬಾ ಕೇಳಿದ್ಮೇಲೆ ಅವ್ರ ಇಂಟರ್ನೆಟ್ ಕನೆಕ್ಸನ್ನು ಕ್ಯೂಬಾದ್ದೇನಾ ಅಂಬೋ ಡೌಟು ನನ್ಗೆ ಬಂತು! ಯಾವ್ದಕ್ಕೂ ಮೊಹನ್ ಸಾಹೇಬ್ರು ವಸಿ ಚೆಕ್ ಮಾಡ್ಕಳದು ಒಳ್ಳೇದು!  

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)

ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ. ಪ್ರೇಯಸಿ ಕೈಕೊಟ್ಟ ಕ್ಷಣದಿಂದ ಹಿಡಿದು, ನೂರಾರು ಜನರ ಎದುರು ವೇದಿಕೆಯ ಮೇಲೆ ನಿಂತಾಗ ಪ್ಯಾಂಟಿನ ಜಿಪ್ಪು ಭದ್ರವಾಗಿಲ್ಲ ಎಂಬುದು ಅರಿವಾಗುವ ಕ್ಷಣದವರೆಗೆ ಯಾವುದಾದರೊಂದು ಘಳಿಗೆಯಲ್ಲಿ ಅದು ಸುಳಿದು ಮಾಯವಾಗಬಹುದು.

ಆದರೆ ಇಂತಹ ಸಂಶಯವೊಂದು ನಮ್ಮ ಅತ್ಯಾಪ್ತ ಚೇಲ ಕುಚೇಲನ ತಲೆಯಲ್ಲಿ ಸುಳಿದಾಗ ಆತ ಹತ್ತರಲ್ಲಿ ಹನ್ನೊಂದವನಂತೆ ಸುಮ್ಮಗುಳಿಯಲಿಲ್ಲ.

ನಮ್ಮ ಸಿನೆಮಾಗಳ ನಟಿಯರ ಲಂಗದ ಎತ್ತರ ದಿನೇ ದಿನೇ ಕ್ಷೀಣಿಸುತ್ತಿರುವುದರ ಹಿಂದಿರುವ ಜಾಗತಿಕ ಹುನ್ನಾರವನ್ನು ಬಯಲು ಮಾಡಲು ಆತ ಕಂಕಣ ತೊಟ್ಟೇ ಬಿಟ್ಟ. ಸಂಶಯ-ಚೋದನೆಯಲ್ಲಿ ಆತನ ಪಾಲಿಗೆ ಭೀಷ್ಮರಾದ ಸಾಮ್ರಾಟರಾದ ನಮ್ಮನ್ನು ಕಂಡು ಸಲಹೆ ಪಡೆದು ಆತ ಮೊಣಕಾಲು ಮೆಚ್ಚುವವರೆಗಿನ ಪ್ಯಾಂಟು, ಮೊಣಕೈ ಮುಚ್ಚುವವರೆಗಿನ ಅಂಗಿ ಧರಿಸಿ ರಣಾಂಗಣಕ್ಕೆ ಧುಮುಕಿಯೇ ಬಿಟ್ಟ.

ಮರಗಿಡಗಳನ್ನು ಹೆಚ್ಚಾಗಿ ನಾಶ ಮಾಡುವುದರಿಂದ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿ ಅದರಿಂದ ಭೂಮಿಯ ಮೈ ಬಿಸಿಯು ಅಂತರಿಕ್ಷಕ್ಕೆ ಹಾರಿ ಹೋಗುವುದು ಕಡಿಮೆಯಾಗಿ ಭೂಮಿಯ ತಾಪಮಾನ ಹೆಚ್ಚಾಗಿ, ಭೂತಾಯಿಗೆ ಜ್ವರ ಬಂದು, ಹಿಮ ಪ್ರದೇಶದಲ್ಲಿ ಮಂಜುಗಡ್ಡೆಯು ಕರಗಿ ಬೆವರಿನಂತೆ ಸುರಿದು ಈಗಾಗಲೇ ಮುಕ್ಕಾಲು ಪಾಲು ಭೂಮಿಯನ್ನಾವರಿಸಿರುವ ಜಲರಾಶಿಯನ್ನು ಸೇರಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ತೀರ ಪ್ರದೇಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಿದೆ. ನೀರಿನ ಪ್ರಮಾಣ ಹೆಚ್ಚಿದ ಹಾಗೆ ಬೆಟ್ಟದ ಭೂಭಾಗ ಎತ್ತರ ಎತ್ತರಕ್ಕೆ ಏರುತ್ತಾ ಹೋಗಿ ಕಡೆಗೊಂದು ದಿನ ನೀರೇ ಸಂಪೂರ್ಣ ಆವರಿಸಿಕೊಂಡು ಬಿಡುವ ಜಾಗತಿಕ ತಾಪಮಾನ ಏರಿಕೆಗೂ ನಟಿಯರ ಲಂಗದ ಎತ್ತರ ತೀರಾ ಕಳವಳಕಾರಿಯಾದ ವೇಗದಲ್ಲಿ ಏರುತ್ತಿರುವುದಕ್ಕೂ ಸಂಬಂಧವಿದೆಯೇ ಎಂದು ಖ್ಯಾತ ಪರಿಸರ ತಜ್ಞ, ವಿಜ್ಞಾನಿ ತಂತ್ರೇಶ ಹೆಗಡೆಯವರನ್ನು ಪ್ರಶ್ನಿಸಿದೆವು.

“ಇಲ್ಲ ಖಂಡಿತಾ ಇಲ್ಲ! ನಟಿಯರ ಬಟ್ಟೆಯ ಪ್ರಮಾಣವು ಭಯಾನಕ ರೀತಿಯಲ್ಲಿ ಕಡಿಮೆಯಾಗುವುದಕ್ಕೆ ಭೂತಾಪಮಾನ ಏರಿಕೆ ಯಾವ ರೀತಿಯಲ್ಲೂ ಕಾರಣವಲ್ಲ. ಅಸಲಿಗೆ, ಭೂತಾಪಮಾನ ಏರಿಕೆಗೆ ನಟಿಯರ ತೆರೆದೆದೆ, ತೊಡೆಗಳೇ ಕಾರಣವಾಗಿರುವ ಸಂಭವ ಹೆಚ್ಚಿದೆ. ಹಿಂದೆ ನಟಿಯರ ಮೈ ಮೇಲೆ ನೆತ್ತಿಗಿಂತ ಎತ್ತರಕ್ಕೆ ವ್ಯಾಪಿಸಿಕೊಂಡು, ಕೆಳಗೆ ಅಂಗಾಲಿಗಿಂತ ಕೆಳಗಿನವರೆಗೆ ಹರಡಿಕೊಂಡು ಶ್ರೀಮಂತವಾಗಿದ್ದ ಹತ್ತಿಯ ಎಳೆಗಳು ರಾತ್ರಿಯಲ್ಲಿ ಒಡತಿಯನ್ನು ಕಂಡ ಅಡುಗೆ ಮನೆಯ ಜಿರಲೆಗಳು ಓಡುವಂತೆ ಓಡುತ್ತಿರುವುದು ತಾಪಮಾನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಬರಿದಾದ ನಟಿಯರ ದೇಹವು ಮಂದವಾದ, ಕೆಂಪು ಮಿಶ್ರಿತ ಬೆಳಕಿನಲ್ಲಿ, ಹಾಡ ಹಗಲಿನ ಬೆಳಕಿನಲ್ಲಿ ಯುವಕರು, ಮುದುಕರಾದಿಯಾಗಿ ಎರಡು, ಒಂದು ಅಥವಾ ಒಂದುವರೆ ಕಣ್ಣುಗಳಿರುವ ಯಾವ ಗಂಡು ಪ್ರಾಣಿಯ ಮೇಲಾದರೂ ಹಾನಿಕರಕ ಪರಿಣಾಮವನ್ನುಂಟು ಮಾಡಬಲ್ಲದು. ಇದರಿಂದ ಗಂಡು ಪ್ರಾಣಿಯ ಎದೆ ಬಡಿತವು ಹೆಚ್ಚಾಗುವುದು, ಧಮನಿಗಳಲ್ಲಿ ಹೆಚ್ಚಿನ ಪ್ರಮಾಣದ ರಕ್ತದ ಹರಿಯುವಿಕೆಯಿಂದ ದೇಹದ ತಾಪಮಾನ ಹೆಚ್ಚುವುದು, ಕೆಲವರಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗುವುದು. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಹಜ. ಈ ಹಸಿಬಿಸಿ ನಟಿಯರಿಂದಾಗಿಯೇ ಭೂ ತಾಪಮಾನ ಏರಿಕೆಯಲ್ಲಿ ಈ ಮಟ್ಟಿಗಿನ ಆತಂಕಕಾರಿ ಏರಿಕೆ ಕಂಡಿರುವುದು.”

ಧರ್ಮವಿಲ್ಲದ ವಿಜ್ಞಾನ ಕುರುಡು ಎಂಬುದು ಜನ ಸಾಮಾನ್ಯ ನಂಬಿಕೆಯಾದರೂ ವಿಜ್ಞಾನಿಗೇ ನಟಿಯ ಉಡುಗೆಯಿಲ್ಲದ ದೇಹ ಇಷ್ಟು ಸ್ಪಷ್ಟವಾಗಿ ಕಂಡಿರುವಾಗ ಧರ್ಮದ ಕಣ್ಣಿಗೆ ಕಾಣದಿರುವುದುಂಟೇ? ಸ್ವಾಮಿ ನಿರ್ಬಟ್ಟೆಯಾನಂದರ ಅಭಿಪ್ರಾಯ ಹೀಗಿದೆ:

“ಸಿನೆಮಾ ನಟಿಯರ ಉಡುಪಿನ ಪ್ರಮಾಣದಲ್ಲಿ ಈ ಮಟ್ಟಿಗಿನ ಕಡಿತ ಆಗಿರುವುದರ ಹಿಂದೆ ಧರ್ಮದ ಕೈವಾಡವಿದೆಯೆಂದು ನಾವು ಸುತಾರಾಂ ಒಪ್ಪುವುದಿಲ್ಲ. ಧರ್ಮ ಕಡಿಮೆ ಬಟ್ಟೆ ಧರಿಸಿ, ಸರಳವಾದ ಬಟ್ಟೆ ಧರಿಸಿ ಅಥವಾ ಬಟ್ಟೆಯಾ, ಅದನ್ನು ಕಿತ್ತು ಬಿಸಾಕಿ ಎನ್ನುತ್ತದೆ ನಿಜ. ಆದರೆ ಯಾರಿಗೆ? ಪುರುಷರಿಗೆ ಮಾತ್ರ. ಏಕೆಂದರೆ ಆ ಕಟ್ಟಳೆಯನ್ನು ಬರೆಯುವವನಿಗೆ ಪುರುಷ ಅಂಗಿ ಬಿಚ್ಚಿ ಹಾಕಿ ರಸ್ತೆಯ ಮೇಲೆ ನಡೆದುಕೊಂಡು ಹೋದರೆ ಇನ್ನ್ಯಾವ ಪುರುಷನ ನೆಮ್ಮದಿಗೆ ಭಂಗವಾಗುವುದೋ ಎಂಬ ಆತಂಕ ಇರಲಿಲ್ಲ. ಆದರೇನು ಮಾಡುವುದು, ಈಗ ಈ ನೆಮ್ಮದಿಯೂ ಇಲ್ಲದ ಹಾಗಾಗಿದೆ! ಮಹಿಳೆಯರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಯನ್ನು ಧರಿಸಬೇಕು ಎಂದೇ ಎಲ್ಲಾ ಧರ್ಮಗಳೂ ಹೇಳಿರುವುದು. ಕಾಪಾಡಿಕೊಳ್ಳಲು ಮಾನ, ಮರ್ಯಾದೆ, ಪ್ರಾಮಾಣಿಕತೆ, ಚಾರಿತ್ರ್ಯ ಇಲ್ಲದವನು ಕಾಪಾಡಲು ಹೆಣಗುವುದು ಒಂದನ್ನೇ, ಹೆಂಡತಿಯನ್ನು!”

ಕಾಣದ ದೇವರ ಹೆಸರಿನಲ್ಲಿ ಮಾತಾಡುವ ಅಧ್ಯಾತ್ಮಿಕರಿಗಿಂತ ಕಾಣುವ ಗ್ರಹಗಳ, ಅವುಗಳ ಮನೆಗಳ ಭಾಷೆಯಲ್ಲಿ ಮಾತಾಡುವ ಜೋತಿಷಿಗಳ ಮಾತಿಗೆ ನಮ್ಮ ಸಮಾಜದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಟಿವಿ ಚಾನಲುಗಳಲ್ಲಿ ಮಾತ್ರ ಬೆಲೆ ಹೆಚ್ಚು! ಸಂಭಾವನೆಯೂ ಹೆಚ್ಚು! ನಟಿಯರ ಡ್ರೆಸ್ಸಿಂಗ್ ಸೆನ್ಸು ಇಷ್ಟು ನಾಜೂಕಾಗುತ್ತಾ ಹೋದರೆ ಮುಂದೆ ಏನಾಗಬಹುದು ಎಂದು ಶ್ರೀ ಬ್ರಹ್ಮಾಂಡ ಸ್ವಾಮಿಯವರನ್ನು ಪ್ರಶ್ನಿಸಿದೆವು.

“ಅಜ್ಜಿ ತಾತರೆಂಬ ರಾಹು ಕೇತುಗಳು ಮಕ್ಕಳ ಮನೆಯನ್ನು ಬಿಟ್ಟು ವೃದ್ಧರ ಮನೆಯನ್ನು ಪ್ರವೇಶಿಸಿದಾಗಲೇ ಈ ಪ್ರಕ್ರಿಯೆಯು ಶುರುವಾಯಿತೆನ್ನಬಹುದು. ಬ್ರಹ್ಮಾಂಡ ಸೂಕ್ತಿ ಸೌರಭ ಗ್ರಂಥದಲ್ಲಿ ಈ ಗ್ರಹಗತಿಯ ಉಲ್ಲೇಖವಿದೆ. ಮನೆಯ ಹಿರಿಯರ ಸ್ಥಾನಪಲ್ಲಟವಾಗುವುದರಿಂದ ಮನೆಯಲ್ಲಿ ಅವರ ವಟಗುಟ್ಟುವಿಕೆಯ ಅನುಪಸ್ಥಿತಿ ಉಂಟಾಗುವುದು. ಈ ಸಂದರ್ಭದಲ್ಲಿ ಮನೆಗೆ ಹಣವೆಂಬ ಶನಿಗ್ರಹದ ಪ್ರವೇಶವಾಗುವುದು. ಜಾತಕ ಎಷ್ಟೇ ಗಟ್ಟಿಯಾಗಿದ್ದರೂ ಆಗ ಬುದ್ಧಿ ಎಂಬ ಗುರು ಗ್ರಹವು ಜಾಗ ಖಾಲಿ ಮಾಡುವುದು. ಕಾಲನ ಗುಣದಿಂದ ಎಲ್ಲಾ ಮನೆಗಳಲ್ಲೂ ಹೃದಯವಂತಿಕೆ ಎಂಬ ಸೂರ್ಯ ಕಾಣೆಯಾಗುವನು. ಪ್ರದರ್ಶಿಸಲು ಬುದ್ಧಿ, ಹೃದಯವಂತಿಕೆಯಿಲ್ಲದ ಜನರು ದೇಹ ಪ್ರದರ್ಶನವನ್ನೇ ಬಾಳಿನ ಆದರ್ಶವಾಗಿಸಿಕೊಳ್ಳುವರು. ಚಳಿಗಾಲದಲ್ಲೂ ಹತ್ತಿಯನ್ನು ಧರಿಸುವರು, ಮಳೆಯಲ್ಲಿ ತುಂಡುಡುಗೆ ತೊಡುವರು.”

ಸಂಶಯ ಚೋದನೆಯು ಒಂದು ಹಂತಕ್ಕೆ ಬಂದಿತು ಎನ್ನುವಷ್ಟರಲ್ಲಿ ಹೊಸ ಸಿನೆಮಾದಲ್ಲಿ ತಮ್ಮ ಮಗಳ ಮಯಸ್ಸಿನ ಮೆಚ್ಚಿನ ನಾಯಕಿ ‘ಧೈರ್ಯ’ವಾಗಿ ಮೈಚಳಿಯನ್ನು, ಮೈ ತೊಡುಗೆಯನ್ನು ಬಿಟ್ಟು ನಟಿಸಿದ್ದಾಳೆ ಎಂಬ ಸುದ್ದಿ ತಲುಪಿ ಸಾಮ್ರಾಟರು ಅರ್ಧಕ್ಕೆ ಎದ್ದು ಥಿಯೇಟರಿಗೆ ಓಡಿದ್ದಾರೆ. ಈ ಸಂಶಯ-ಚೋದನೆಯ ಮುಂದಿನ ಭಾಗದಲ್ಲಿ ಇಷ್ಟು ಘೋರವಾದ ಜಾಗತಿಕ ಹುನ್ನಾರದ ಪ್ರಮುಖ ರುವಾರಿಗಳಾದ  ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರು, ಖುದ್ದು ಸಿನೆಮಾ ನಟಿಯರು ಹಾಗೂ ಈ ಜಗತ್ತೆಂಬ ಸಿನೆಮಾದ ನಿರ್ದೇಶಕನಾದ ದೇವರು ಮಾತಾಡಿದ್ದಾರೆ!